ರಾಜಕೀಯ
ನೀತಿ ನಿರೂಪಣೆಯ ಹೆದ್ದಾರಿ
![](https://suddidina.com/wp-content/uploads/2018/10/Politics-suddidina1648.jpg)
ಸರ್ಕಾರವನ್ನು ಪ್ರತಿನಿಧಿಸುವವರು ನೀತಿ ನಿರೂಪಣೆ ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದರ ಆಧಾರದಲ್ಲಿ ಚುನಾವಣೆಯ ಸಂವಾದಗಳು ನಡೆಯಬೇಕು. ಲೋಕಸಭೆ ಅಥವಾ ವಿಧಾನಸಭೆ ಸೇರಿದಂತೆ ಯಾವುದೇ ಸಂವಿಧಾನಿಕ ಸಂಸ್ಥೆಗಳ ಚುನಾವಣೆ ನಡೆದಾಗ ಅಧಿಕಾರಾವಧಿಯಲ್ಲಿ ರೂಪಿತವಾದ ನೀತಿಗಳು ಎಂಥವು ಮತ್ತು ಅವುಗಳನ್ನು ಅನುಷ್ಠಾನಗೊಳಿಸಿದಾಗ ಉಂಟಾದ ಪರಿಣಾಮಗಳೇನೇನು ಎಂಬ ಆಯಾಮದಲ್ಲಿ ಚರ್ಚೆಗಳಾಗಬೇಕು. ಆ ತರಹದ ಚರ್ಚೆಗಳಾದಾಗ ಅಧಿಕಾರರೂಢರು ಮತ್ತು ಪ್ರತಿಪಕ್ಷಗಳನ್ನು ಪ್ರತಿನಿಧಿಸುವವರು ಪ್ರಜಾಪ್ರಭುತ್ವ ನಿರೀಕ್ಷಿಸುವ ಗುರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅಂಥ ಗುರಿಯನ್ನೇ ಕೇಂದ್ರೀಕರಿಸಿಕೊಂಡು ಮುನ್ನಡೆಯುವ ಅವರ ನಿಲುವುಗಳ ತಾತ್ವಿಕತೆಯು ಸರಿಯಾದ ಮಾರ್ಗದಲ್ಲಿಯೇ ಅವರು ಹೆಜ್ಜೆಯಿರಿಸುವಂತೆ ಪ್ರೇರಣೆ ನೀಡುತ್ತದೆ. ಈ ರೀತಿಯ ಅವಲೋಕನ ಮತ್ತು ವಿಮರ್ಶಾತ್ಮಕ ಮಾದರಿಯ ನೋಟಗಳು ಚುನಾವಣಾಪೂರ್ವ, ಚುನಾವಣಾ ನಂತರ ಮತ್ತು ಸರ್ಕಾರದ ಅಧಿಕಾರಾವಧಿಯ ಅಷ್ಟೂ ದಿನಗಳ ಕಾಲ ವ್ಯಕ್ತವಾಗುತ್ತಲೇ ಇರಬೇಕಾಗುತ್ತದೆ. ಇವುಗಳನ್ನು ನಿರಂತರವಾಗಿರಿಸುವಂಥ ಬದ್ಧತೆಯನ್ನು ಸರ್ಕಾರವನ್ನು ಪ್ರತಿನಿಧಿಸುವವರು ಮತ್ತು ಪ್ರತಿಪಕ್ಷಗಳಲ್ಲಿರುವವರು ತೋರಬೇಕಾಗುತ್ತದೆ.
ಬದ್ಧತೆಗೆ ತದ್ವಿರುದ್ಧದ ವಾತಾವರಣ
ಭಾರತದಲ್ಲಿ ಚುನಾವಣಾ ರಾಜಕಾರಣವು ಅಂಥ ಬದ್ಧತೆಗೆ ತದ್ವಿರುದ್ಧವಾದ ವಾತಾವರಣವನ್ನು ಸೃಷ್ಟಿಸಿದೆ. ಸಂವಾದವನ್ನು ಕಟ್ಟುವುದರ ಬದಲು ಅತಾರ್ಕಿಕ ವಾಗ್ವಾದಗಳನ್ನು ಹುಟ್ಟುಹಾಕುವುದರ ಕಡೆಗೇ ಅದರ ಗಮನವಿದೆ. ಅಧಿಕಾರ ಪಡೆಯಲೇಬೇಕು ಎಂಬ ಹಂಬಲ ಮತ್ತು ಹಠಗಳು ಸಂವಾದದ ಸಾಧ್ಯತೆಗಳನ್ನೇ ಮೊಟಕುಗೊಳಿಸುತ್ತವೆ. ಜನಪರ ನೀತಿ ನಿರೂಪಣೆಯ ಜವಾಬ್ದಾರಿಯುತ ಐಡೆಂಟಿಟಿಗಿಂತಲೂ ಕೀಳು ಅಭಿಪ್ರಾಯಗಳೊಂದಿಗಿನ ಮನಸ್ಥಿತಿಯನ್ನು ಸೃಷ್ಟಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತವೆ. ಹಾಗಾಗಿ ಸದ್ಯದ ಅಗತ್ಯಗಳಿಗೆ ಸ್ಪಂದಿಸುವಂಥ ಮತ್ತು ಆ ಮೂಲಕ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ನೆರವಾಗುವ ನೀತಿಗಳು ರೂಪುಗೊಳ್ಳುವುದೇ ಇಲ್ಲ. ಅಂಥ ನೀತಿಗಳು ರೂಪುಗೊಳ್ಳುವುದಕ್ಕೆ ಬೇಕಾದ ಒತ್ತಡವನ್ನು ಹಾಕಬೇಕಾದ ಜನಸಮೂಹವೂ ಅದೇ ನಿರೀಕ್ಷೆಗಳೊಂದಿಗೆ ಯೋಚಿಸುವುದೇ ಇಲ್ಲ. ಒಂದು ವೇಳೆ ಜನಸಮೂಹ ಯೋಚನೆಯ ಹಾದಿ ತುಳಿದರೂ ರಾಜಕಾರಣ ಎಚ್ಚೆತ್ತುಕೊಂಡು ಅದರ ದಿಕ್ಕನ್ನೇ ಬದಲಿಸಿ ನಿರ್ದಿಷ್ಟ ವಿದ್ಯಮಾನಕೇಂದ್ರಿತ ಅಂಶವನ್ನು ಮುನ್ನೆಲೆಗೆ ತಂದು ತನ್ನ ಸಂಕುಚಿತ ಉದ್ದೇಶವನ್ನು ಈಡೇರಿಸಿಕೊಂಡುಬಿಡುತ್ತದೆ.
ನೀತಿಯ ನಿಖರ ವ್ಯಾಖ್ಯಾನ
ಅಧಿಕಾರರೂಢ ರಾಜಕಾರಣ ಮತ್ತು ಪ್ರತಿಪಕ್ಷಗಳ ರಾಜಕಾರಣ ಇಂಥ ಸಂಕುಚಿತ ಉದ್ದೇಶಗಳನ್ನೇಮುಖ್ಯವಾಗಿಸಿಕೊಳ್ಳುವುದರಿಂದ ದೇಶದ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡ ನೀತಿಯ ಕುರಿತಾದ ಸ್ಪಷ್ಟತೆಯನ್ನು ಹೊಂದಿರುವುದಿಲ್ಲ. ನೀತಿಯ ನಿಖರ ವ್ಯಾಖ್ಯಾನವನ್ನು ನೆಚ್ಚಿಕೊಳ್ಳುವುದಿಲ್ಲ. ಯಾವುದೇ ಆಡಳಿತವು ವರ್ತಮಾನಕ್ಕೆ ಸ್ಪಂದಿಸಿ ಭವಿಷ್ಯವನ್ನೂ ಉಜ್ವಲಗೊಳಿಸುವುದಕ್ಕೆ ತನ್ನದೇ ಆದ ನೀತಿ ಮಾದರಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ನೀತಿ ರೂಪಿಸುವ ಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸುವ ಆಡಳಿತ ಮತ್ತು ಮೌಲಿಕ ರಾಜಕಾರಣ ಅಸ್ತಿತ್ವದಲ್ಲಿರುವ ಸಮಾಜವು ಸ್ಥಗಿತಗೊಳ್ಳುವುದಿಲ್ಲ. ಅದು ಬದಲಾಗುತ್ತಲೇ ಸಕಾಲಿಕ ನೀತಿಗಳಿಗೆ ಅವಕಾಶಯವೀಯುತ್ತದೆ. ಹೊಸ ಪೀಳಿಗೆಯೂ ನೀತಿನಿರೂಪಣೆಯ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ಚಿಂತನೆಯ ಒರೆಗಲ್ಲಿಗೆ ಹಚ್ಚಿ ಯೋಚಿಸುತ್ತದೆ. ಅದೇ ಚಿಂತನೆಯು ಆಡಳಿತದ್ದೂ ಆಗಬೇಕು ಎಂಬ ನಿರೀಕ್ಷೆಯಲ್ಲಿ ದೇಶದ ಉಜ್ವಲ ಭವಿಷ್ಯಕ್ಕೆ ಬೇಕಾಗುವ ಸಂವಾದದ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತದೆ. ಹಾಗಾದಾಗಲೇ ಸರ್ಕಾರ ಮತ್ತು ಪ್ರತಿಪಕ್ಷಗಳವರು ಭಿನ್ನವಾಗಿ ಯೋಚಿಸಲಾರಂಭಿಸುತ್ತಾರೆ. ಬದಲಾವಣೆಯ ಕಡೆಗಿನ ಪ್ರಯಾಣ ಅಧಿಕೃತತೆಯನ್ನು ಪಡೆಯುತ್ತದೆ.
ಹೊಸ ಹಾದಿಯ ನೀತಿಯ ಅಗತ್ಯತೆ
ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣೆ ವೇಳೆ ನಡೆಯುವ ವಿದ್ಯಮಾನಗಳು ಮತ್ತು ಅದನ್ನು ದೃಷ್ಟಿಯಲ್ಲಿರಿಸಿಕೊಂಡು ಏರ್ಪಡುವ ಜಗಳ, ಸಂಘರ್ಷಗಳು ಪ್ರಜಾಸತ್ತಾತ್ಮಕವಾದ ನೀತಿ ರೂಪುಗೊಳ್ಳಬಹುದಾದ ಸಂಭಾವ್ಯತೆಯನ್ನೇ ಇಲ್ಲವಾಗಿಸಿಬಿಡುತ್ತವೆ. ದೇಶದ ವಿವಿಧ ವಲಯಗಳಲ್ಲಿ ಆಗಬೇಕಾದ ಬದಲಾವಣೆಗಳೇನೇನು? ಆ ಬದಲಾವಣೆಯು ಯಾವ ಸ್ವರೂಪದ್ದಾಗಿರಬೇಕು? ಮುಂದಿನ ಐವತ್ತು ವರ್ಷಗಳಲ್ಲಿ ಸಮಾಜದ ಗತಿಶೀಲತೆಯ ಸಾಧ್ಯತೆಗಳಿಗೆ ತಕ್ಕಂತೆ ಹೊಸ ಕಾಯ್ದೆಗಳು ರೂಪುಗೊಳ್ಳಬೇಕೇ? ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯವ್ಯಾಪ್ತಿ ಮತ್ತು ಅವುಗಳ ಕಾರ್ಯವೈಖರಿ ಯಾವ ರೀತಿಯಲ್ಲಿ ವಿಮರ್ಶೆಗೊಳಪಡಬೇಕು? ಹೇಗೆ ಅವುಗಳನ್ನು ಬದಲಾವಣೆಯ ಪರಸ್ಪರ ಪೂರಕ ಸಾಂಸ್ಥಿಕ ಶಕ್ತಿಗಳನ್ನಾಗಿ ಮಾರ್ಪಡಿಸಬೇಕು ಎಂಬ ಪ್ರಶ್ನೆಗಳು ಆದ್ಯತಾನುಸಾರ ಚರ್ಚಿಸಲ್ಪಡಬೇಕು. ಹಾಗಾಗುವುದಿಲ್ಲ. ಅದರ ಬದಲು ತಾತ್ಪೂರ್ತಿಕವಾದ, ಸವಕಲು ಎನ್ನಿಸಿರುವ, ಅಪ್ರಸ್ತುತ ಅಭಿಪ್ರಾಯಗಳನ್ನು ರೂಪಿಸುವುದಕ್ಕೇ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತದೆ. ದೇಶದ ಆರ್ಥಿಕತೆ, ಸಾಮಾಜಿಕತೆ, ಶೈಕ್ಷಣಿಕ ವಾಸ್ತವಿಕತೆ, ಮಾನವ ಸಂಪನ್ಮೂಲದ ಆರೋಗ್ಯಕರ ಅಸ್ಮಿತೆ, ಭೌಗೋಳಿಕ ನೈಸರ್ಗಿಕ ವೈಶಿಷ್ಟ್ಯತೆ – ಇವೆಲ್ಲವುಗಳನ್ನು ಸಂವಿಧಾನಿಕ ಆಡಳಿತಾತ್ಮಕ ಅಂಗಗಳು ಗಣನೆಗೆ ತೆಗೆದುಕೊಂಡು ಹೊಸ ಹೆಜ್ಜೆಗಳನ್ನು ಕ್ರಮಿಸುವುದಕ್ಕೆ ಪೂರಕವಾಗುವ ನೀತಿಗಳನ್ನು ರೂಪಿಸಿಕೊಳ್ಳಬೇಕು. ಅಂಥ ವಾತಾವರಣದ ನಿರ್ಮಾಣಕ್ಕೆ ಚುನಾವಣಾಪೂರ್ವ, ಚುನಾವಣಾ ನಂತರದ ಆಡಳಿತಾತ್ಮಕ ಅಧಿಕಾರಾವಧಿಯು ವಿನಿಯೋಗಿಸಲ್ಪಡಬೇಕು.
ರಾಜಕಾರಣದ ನಿರ್ದಯಿ ದಾಹ
ನಿರ್ದಿಷ್ಟ ಆಡಳಿತ ನೀತಿಯು ಅಧಿಕಾರ ರಾಜಕಾರಣದ ನಿರ್ದಯಿ ದಾಹಗಳ ಸೋಂಕನ್ನು ಅಂಟಿಸಿಕೊಳ್ಳಬಾರದು. ಸದ್ಯದಲ್ಲಷ್ಟೇ ಅಲ್ಲದೇ ಯಾವತ್ತೂ ತಾವೇ ಅಧಿಕಾರದಲ್ಲಿರಬೇಕು ಎಂಬ ಹಸಿವು ಸಕಾರಾತ್ಮಕ ಆಲೋಚನಾಕ್ರಮಗಳೊಂದಿಗಿದ್ದರೆ ಸರಿ. ಇಲ್ಲದಿದ್ದರೆ ಆ ಹಸಿವಿಗೆ ಪ್ರಜಾಸತ್ತಾತ್ಮಕ ಅಧಿಕೃತತೆ ದೊರಕುವುದಿಲ್ಲ. ಬದಲಾಗಿ ಆ ಹಸಿವು ಕಂಡವರ ಬದುಕನ್ನು ನಲುಗಿಸುವ, ಎದುರಾಳಿಗಳನ್ನು ಸೃಷ್ಟಿಸಿಕೊಳ್ಳುವ, ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ವಿಕಾರದದ ಆಯಾಮವನ್ನು ಪಡೆದುಕೊಂಡುಬಿಡುತ್ತದೆ. ಈ ಹಂತದಲ್ಲಿಯೇ ಆಡಳಿತಾತ್ಮಕವಾದ ಸಕಾರತಾತ್ಮಕ ನೀತಿಯೊಂದು ಹುಟ್ಟಿಕೊಳ್ಳುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಪ್ರಭುತ್ವವು ಯಾವುದನ್ನು ಆಡಳಿತ ನೀತಿ ಎಂದುಕೊಳ್ಳುತ್ತದೋ ಅದು ವಾಸ್ತವದಲ್ಲಿ ಕವಲು ಹಾದಿಯನ್ನು ಸಂಕೇತಿಸಿರುತ್ತದೆ. ಇದನ್ನು ಪ್ರಭುತ್ವಕ್ಕೆ ಅರ್ಥಮಾಡಿಸುವ ಪ್ರಯತ್ನಗಳು ಸಾರ್ವಜನಿಕ ಅಭಿಪ್ರಾಯ ರೂಪಿಸುವ ಪ್ರತಿಪಕ್ಷ ನಾಯಕರು, ತಜ್ಞರು ಮತ್ತು ಮಾಧ್ಯಮ ಪರಿಣಿತರಿಂದ ಆಗಬೇಕು. ಸಕಾರಾತ್ಮಕವಾದ ನೀತಿಯ ವಿಶಾಲ ಆವರಣವನ್ನು ತೋರ್ಪಡಿಸಬೇಕು.
ಉದ್ದೇಶಪೂರ್ವಕ ತಾಟಸ್ಥ್ಯ
ಆಡಳಿತಾತ್ಮಕ ನೀತಿಯನ್ನು ನಿರ್ದೇಶಿಸುವ ಸ್ಪಷ್ಟ ಮಾನದಂಡಗಳನ್ನು ವಿನ್ಯಾಸಗೊಳಿಸಿಕೊಳ್ಳುವುದರ ಕಡೆಗೆ ಬಹುಮತ ಪಡೆದ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಹಾಗೆ ಆದ್ಯತೆ ನೀಡುವಂಥ ರಚನಾತ್ಮಕ ಸಂವಾದಿ ಆಂದೋಲನವನ್ನು ಪ್ರತಿಪಕ್ಷಗಳೂ ರೂಪಿಸುವುದಿಲ್ಲ. ಉದ್ದೇಶಪೂರ್ವಕವಾಗಿ ಅವು ಈ ವಿಷಯದಲ್ಲಿ ತಟಸ್ಥಗೊಳ್ಳುತ್ತವೆ. ಈ ಕಾರಣಕ್ಕಾಗಿಯೇ ದೇಶದ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಸ್ವರೂಪವನ್ನು ಪಡೆದುಕೊಂಡು ಬಿಡಿಸಲಾರದಷ್ಟು ಸಂಕೀರ್ಣಗೊಳ್ಳುತ್ತವೆ. ಒಂದು ಪಕ್ಷ ಅಥವಾ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದ ತಕ್ಷಣ ಸಮಸ್ಯೆಯೊಂದು ಚಿಗುರೊಡೆಯುವ ಕಾಲಕ್ಕೆ ಅದರ ಮುಂದಿನ ಸ್ವರೂಪವನ್ನು ಊಹಿಸಿ ಪರಿಹಾರೋಪಾಯವನ್ನು ನೆಚ್ಚಿಕೊಂಡ ಸಾಂದರ್ಭಿಕವಾದ ಪರ್ಯಾಯ ಚಿಂತನೆ ರೂಪುಗೊಳ್ಳಬೇಕು. ಅದರ ಆಧಾರದಲ್ಲಿಯೇ ಪರಿಹಾರಸೂತ್ರಗಳನ್ನು ಕಂಡುಕೊಳ್ಳಬೇಕು. ಜನಪರ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು. ಅವು ಸದ್ಯಕ್ಕಷ್ಟೇ ಅಲ್ಲದೇ ಭವಿಷ್ಯದ ದಿನಗಳಲ್ಲಿಯೂ ಅನುಕೂಲಕರ ಎನ್ನಿಸುವ ಹಾಗೆ ಫ್ಲೆಕ್ಸಿಬಲ್ ಆಗಿರಬೇಕು. ಈ ಸಾಧ್ಯತೆಗಳ ದೂರಗಾಮಿ ಪರಿಣಾಮ ಲೆಕ್ಕಿಸಿಯೇ ಆಡಳಿತ ಕೇಂದ್ರಗಳು ಸಾರ್ವಜನಿಕ ನೀತಿಯನ್ನು ರಚಿಸಿಕೊಳ್ಳಬೇಕಾಗುತ್ತದೆ. ಈಗ ಇದರ ಗೈರು ಹಾಜರಿ ಎದ್ದುಕಾಣುತ್ತಿದೆ. ಇದರಿಂದಾಗಿ ಭಾರತೀಯ ಸಾಮಾಜಿಕತೆಯು ವಿವಿಧ ಸವಾಲುಗಳನ್ನು ಎದುರಿಸುವುದಕ್ಕಾಗಿಯೇ ತನ್ನ ಶಕ್ತಿಯನ್ನು ವ್ಯಯ ಮಾಡಿಕೊಳ್ಳುತ್ತಿದೆ. ಪ್ರಜೆಗಳ ಸಾಮಾಜಿಕತೆ ಮತ್ತು ಮಾನವ ಸಂಪನ್ಮೂಲದ ಸಶಕ್ತತೆಯು ಸಾರ್ವಜನಿಕ ನೀತಿಯ ವ್ಯಾಪ್ತಿಯ ಒಳಗೆ ಅಧಿಕೃತ ಸ್ಥಾನವನ್ನು ಪಡೆಯುತ್ತಲೇ ಇಲ್ಲ. ಈ ದೃಷ್ಟಿಯಿಂದ ಭಾರತದ ಆಡಳಿತಾತ್ಮಕತೆಯು ರಚನಾತ್ಮಕ ಕಾರ್ಯಸೂಚಿಯ ಕಾಯಕಲ್ಪದಿಂದ ವಂಚಿತವಾಗಿದೆ.
ದಿವ್ಯನಿರ್ಲಕ್ಷ್ಯ ಸೃಷ್ಟಿಸುವ ಬಿಕ್ಕಟ್ಟು
ಈ ಕಾರಣಕ್ಕಾಗಿಯೇ ಕೃಷಿ, ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ, ಕಾಣಿಸಿಕೊಳ್ಳುತ್ತಲೇ ಇರುವ ಸಮಸ್ಯೆಗಳಿಗೆ ಪರಿಹಾರವೇ ಸಾಧ್ಯ ಇಲ್ಲ ಎಂಬ ತಪ್ಪು ಅಭಿಪ್ರಾಯಗಳ ವರ್ತುಲ ಸೃಷ್ಟಿಯಾಗಿದೆ. ಸಮಸ್ಯೆಯೊಂದು ಸೃಷ್ಟಿಯಾದ ತಕ್ಷಣವೇ ಆಡಳಿತವು ಅದರೆಡೆಗಿನ ದಿವ್ಯನಿರ್ಲಕ್ಷ್ಯವನ್ನೇ ತನ್ನ ಅಸ್ತಿತ್ವದ ಮಹತ್ವದ ಗುಣಲಕ್ಷಣವಾಗಿಸಿಕೊಳ್ಳುತ್ತದೆ. ತತ್ಪರಿಣಾಮ ನಿರ್ಲಕ್ಷ್ಯಕ್ಕೀಡಾಗುವ ಸಮಸ್ಯೆಯು ಹಲವು ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ. ಕ್ರಮೇಣ ಜನಸಮುದಾಯವನ್ನು, ತನ್ಮೂಲಕ ಆಡಳಿತದ ವಿವಿಧ ಹಂತಗಳ ಸಹಜ ಕ್ರಿಯೆಯನ್ನು ಮತ್ತಷ್ಟು ಜಡಗೊಳಿಸಿಬಿಡುತ್ತದೆ. ಆಗ ರೈತರ ಆತ್ಮಹತ್ಯೆಯ ಪ್ರಮಾಣ ಹೆಚ್ಚಾದಾಗಲೂ ಆಡಳಿತ ನಿರ್ಲಿಪ್ತತೆಯನ್ನೇ ತನ್ನ ಬಹುದೊಡ್ಡ ಗುಣವಾಗಿಸಿಕೊಳ್ಳುತ್ತದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ನ್ಯಾಯಯುತ ಬೆಲೆ ನಿಗದಿಗೊಳಿಸದೇ ಇದ್ದಾಗ ರೈತ ಸಮುದಾಯ ನಲುಗಿದರೂ ಅದು ನಿರ್ಲಕ್ಷ್ಯ ಧೋರಣೆಯೊಂದಿಗಿನ ಮೌನವನ್ನೇ ಅನುಸರಿಸುತ್ತದೆ. ಜಾತಿ-ಧರ್ಮಗಳ ಸಾಂಪ್ರದಾಯಿಕತೆಯ ಜೊತೆಗೆ ಇಡೀ ಸಮಾಜ ತಳಮಳಕ್ಕೀಡಾದಾಗ ಅದರ ಪ್ರಯೋಜನ ಪಡೆಯುವ ಹುನ್ನಾರದ ಪ್ರಬಲರಿಗೆ ದಾರಿ ಮಾಡಿಕೊಡುತ್ತದೆ. ಹೊಸದೇನನ್ನೂ ಕಲಿಸದೇ ಹಳೆಯದ್ದರ ಆಶ್ರಯದಲ್ಲಿಯೇ ಅಸ್ತಿತ್ವ ಕಂಡುಕೊಳ್ಳಲು ಶಿಕ್ಷಣ ರಂಗವು ಹೆಣಗಾಡುತ್ತಿರುವಾಗಲೂ ಅದನ್ನು ಮತ್ತಷ್ಟು ದುರ್ಬಲಗೊಳಿಸುವುದರ ಕಡೆಗೆ ಅತ್ಯುತ್ಸಾಹ ತೋರುತ್ತದೆ. ಆರೋಗ್ಯ ಕಾಯ್ದುಕೊಳ್ಳಲು ಜನಸಮೂಹಕ್ಕೆ ನೆರವಾಗುವ ಜಾಗೃತಿ ಹೆಜ್ಜೆಗಳ ಬದಲು ದೇಹಗಳನ್ನು ಮತ್ತಷ್ಟು ಜಡಗೊಳಿಸಿ ಮೆಡಿಸಿನ್ಗಳಿಗೆ ಒಗ್ಗಿಕೊಳ್ಳುವಂಥ ಮನಸ್ಥಿತಿ ರೂಪಿಸುವ ಔದ್ಯಮಿಕ ಒತ್ತಡಗಳಿಗೆ ಈಡಾಗುತ್ತದೆ. ಈ ಹಂತದಲ್ಲಿಯೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ತಮ್ಮ ಸಾಂಸ್ಥಿಕ ಶಕ್ತಿಯನ್ನು ವಿಸ್ತರಿಸಿಕೊಳ್ಳುವ ಬದಲು ಯಥಾಸ್ಥಿತಿಗಳನ್ನು ಖಾಯಂ ಆಗಿರಿಸುವ ದೌರ್ಬಲ್ಯದ ಮಿತಿಗಳನ್ನು ತಮ್ಮ ಗುಣಗಳನ್ನಾಗಿಸಿಕೊಳ್ಳುತ್ತವೆ.
ಸಮಗ್ರ ನೀತಿಯ ಅಲೆಯ ಪ್ರಾಧಾನ್ಯತೆ
ಆ ದೌರ್ಬಲ್ಯವು ದೇಶದ ಉಜ್ವಲ ಭವಿಷ್ಯದ ಸಂಭಾವ್ಯತೆಯನ್ನು ತಡೆದುಬಿಡುತ್ತದೆ. ಅಲ್ಲದೇ ಪೀಳಿಗೆಗಳನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಮುಂದಿನ ಹೆಜ್ಜೆಗಳ ಬದಲು ಹಿಂದಿನ ಜಡತೆಗೇ ಜೋತುಬೀಳುವ ಅವಲಂಬನೆಯ ಸ್ವಭಾವವನ್ನು ಸಾಮಾಜಿಕವಾಗಿ ನೆಲೆಗೊಳಿಸಿಬಿಡುತ್ತದೆ. ಇಂಥ ಅಪಾಯದಿಂದ ಪಾರಾಗಬೇಕಾದರೆ ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಸ್ಥೆಗಳು, ವಿವಿಧ ಜನವರ್ಗಗಳು ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಪ್ರತಿಸ್ಪಂದಿಸುವ ಆಡಳಿತಾತ್ಮಕ ಸಮಗ್ರ ನೀತಿಗಳ ಅವಶ್ಯಕತೆಯನ್ನು ಮನಗಂಡು ಅವುಗಳ ಪರವಾದ ವ್ಯಾಪಕ ಅಲೆಯನ್ನು ನಿರ್ಮಿಸಬೇಕು. ಹಾಗಾದಾಗ ಮಾತ್ರ ಚುನಾವಣೆ ಇರಲಿ, ಇಲ್ಲದಿರಲಿ ಎಲ್ಲರೂ ರಚನಾತ್ಮಕ ನೀತಿಗಳನ್ನು ಗಮನದಲ್ಲಿರಿಸಿಕೊಂಡು ಮೌಲಿಕ ಸಂವಾದ ಏರ್ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅನಗತ್ಯ ವಿವಾದಗಳ ವೈಭವೀಕರಣ ತಾನಾಗಿಯೇ ನಿಂತು ಸಾರ್ವಜನಿಕ ಆಡಳಿತವು ಸಂವಿಧಾನಾತ್ಮಕ ಮೌಲ್ಯವನ್ನು ತಂದುಕೊಳ್ಳುತ್ತದೆ.
-ಡಾ.ಎನ್.ಕೆ.ಪದ್ಮನಾಭ
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ
![](https://suddidina.com/wp-content/uploads/2024/07/kargil_vijay_divas_suddidina.jpg)
ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ವೀರ ಯೋಧರಿಗೆ ಪ್ರಧಾನಿ ಗೌರವ ಸಮರ್ಪಣೆ ಮಾಡಲಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಂಕುನ್ ಲಾ ಸುರಂಗ ಮಾರ್ಗ ಯೋಜನೆಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.
ಈ ಯೋಜನೆಯಡಿ ನಿಮು-ಪದುಮ್-ಡಾರ್ಚಾ ರಸ್ತೆಯಿಂದ ಲೇಹ್ಗೆ ಎಲ್ಲಾ ಹವಾಮಾನಗಳಲ್ಲೂ ಸಂಪರ್ಕ ಕಲ್ಪಿಸಲು ಸುಮಾರು 15 ಸಾವಿರದ 800 ಅಡಿ ಎತ್ತರದಲ್ಲಿ 4.1 ಕಿಲೋಮೀಟರ್ ಉದ್ದದ ಜೋಡಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ವಿಶ್ವದಲ್ಲೇ ಇದು ಅತಿ ಎತ್ತರದ ಸುರಂಗ ಮಾರ್ಗವಾಗಲಿದೆ. ಸಶಸ್ತ್ರ ಪಡೆಗಳ ಸುಗಮ ಪ್ರಯಾಣಕ್ಕಷ್ಟೇ ಅಲ್ಲದೇ ಲಡಾಕ್ನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಈ ಸುರಂಗ ಮಾರ್ಗವು ಸಹಕಾರಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಕೇಂದ್ರ ಬಜೆಟ್ : ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ
![](https://suddidina.com/wp-content/uploads/2024/07/union_budget_2024_suddidina.jpg)
ಸುದ್ದಿದಿನಡೆಸ್ಕ್:ಕೇಂದ್ರದ ಮುಂಗಡ ಪತ್ರ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತೆಲುಗು ದೇಶಂ ನಾಯಕ ಕೇಂದ್ರ ಸಚಿವ ಕಿಂಜರಪು ರಾಮಮೋಹನ ನಾಯ್ಡು ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಬಜೆಟ್ ಎಲ್ಲರ ಕನಸಾಗಿದೆ ಎಂದು ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಬೆಳವಣಿಗೆಗೆ ಆಯ-ವ್ಯಯ ಪೂರಕವಾಗಿದೆ ಎಂದು ಹೇಳಿದರು.
ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಉದ್ಯೋಗ ಹೆಚ್ಚಿಸುವ ಕಾರ್ಯಕ್ರಮವನ್ನು ಹಣಕಾಸು ಸಚಿವರು ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಜೆಡಿಯು ಮುಖಂಡ ರಾಜೀವ್ ರಂಜನ್ ಸಿಂಗ್, ಆಯ-ವ್ಯಯ ಬಿಹಾರ ಜನತೆಗೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ ಎಂದರು.
ಕಾಂಗ್ರೆಸ್ ಮುಖಂಡ ಶಶಿತರೂರ್ ಪ್ರತಿಕ್ರಿಯೆಸಿ, ಉದ್ಯೋಗ ಖಾತರಿ ಯೋಜನೆಯ ರಾಜ್ಯಗಳ ತಾರತಮ್ಯವನ್ನು ನಿಭಾಯಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ನಾಯಕ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ರಾಜ್ಯಕ್ಕೆ ನಿರ್ಧಿಷ್ಟವಾದ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಎಂಕೆ ನಾಯಕ ಟಿ.ಆರ್.ಬಾಲು, ಟಿಎಂಸಿ ನಾಯಕಿ ಕಲ್ಯಾಣ ಬ್ಯಾನರ್ಜಿ ಅವರು, ಆಯ-ವ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಗದೀಶ್ ಶೆಟ್ಟರ್, ಜನಪರ ಸಾಮಾನ್ಯವರ್ಗದವರ ಆಯ-ವ್ಯಯವಾಗಿದೆ ಎಂದರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರ್ಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರುಗಳು ಆಯ-ವ್ಯಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅನಿಶ್ ಶಹಾ ಪ್ರತಿಕ್ರಿಯಿಸಿ, ದೇಶದ ಬೆಳವಣಿಗೆಗೆ ಪೂರಕ ಆಯ-ವ್ಯಯ ರೈತರು, ಯುವಕರು, ಮಹಿಳೆಯರಿಗೆ ಸಹಕಾರಿ ಎಂದು ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಅನುದಾನವನ್ನು ಗಣನೀಯವಾಗಿ ಖಡಿತ ಮಾಡಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ಯೋಜನೆಗಳ ಅನುಷ್ಠಾನಕ್ಕೆ ನೆರವು ಕೋರಿದ್ದೆವು. ಮಾಹಿತಿ ತಂತ್ರಜ್ಞಾನಕ್ಕೆ ನೀಡಿದ್ದ ಅನುದಾನವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಪರಿಶಿಷ್ಟ ಸಮುದಾಯ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುದಾನವನ್ನು ಖಡಿತ ಮಾಡಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೂಲ ಸೌಕರ್ಯ ಅನ್ವೇಷಣೆ ಹಾಗೂ ಅಭಿವೃದ್ಧಿಗೆ ಆಯ-ವ್ಯಯ ಪೂರಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಯ-ವ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇಶದ ಉತ್ಪಾದನೆ ಹಾಗೂ ಬೆಳವಣಿಗೆಯ ಪ್ರಮಾಣದಲ್ಲಿ ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!