ರಾಜಕೀಯ
ನೀತಿ ನಿರೂಪಣೆಯ ಹೆದ್ದಾರಿ

ಸರ್ಕಾರವನ್ನು ಪ್ರತಿನಿಧಿಸುವವರು ನೀತಿ ನಿರೂಪಣೆ ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದರ ಆಧಾರದಲ್ಲಿ ಚುನಾವಣೆಯ ಸಂವಾದಗಳು ನಡೆಯಬೇಕು. ಲೋಕಸಭೆ ಅಥವಾ ವಿಧಾನಸಭೆ ಸೇರಿದಂತೆ ಯಾವುದೇ ಸಂವಿಧಾನಿಕ ಸಂಸ್ಥೆಗಳ ಚುನಾವಣೆ ನಡೆದಾಗ ಅಧಿಕಾರಾವಧಿಯಲ್ಲಿ ರೂಪಿತವಾದ ನೀತಿಗಳು ಎಂಥವು ಮತ್ತು ಅವುಗಳನ್ನು ಅನುಷ್ಠಾನಗೊಳಿಸಿದಾಗ ಉಂಟಾದ ಪರಿಣಾಮಗಳೇನೇನು ಎಂಬ ಆಯಾಮದಲ್ಲಿ ಚರ್ಚೆಗಳಾಗಬೇಕು. ಆ ತರಹದ ಚರ್ಚೆಗಳಾದಾಗ ಅಧಿಕಾರರೂಢರು ಮತ್ತು ಪ್ರತಿಪಕ್ಷಗಳನ್ನು ಪ್ರತಿನಿಧಿಸುವವರು ಪ್ರಜಾಪ್ರಭುತ್ವ ನಿರೀಕ್ಷಿಸುವ ಗುರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅಂಥ ಗುರಿಯನ್ನೇ ಕೇಂದ್ರೀಕರಿಸಿಕೊಂಡು ಮುನ್ನಡೆಯುವ ಅವರ ನಿಲುವುಗಳ ತಾತ್ವಿಕತೆಯು ಸರಿಯಾದ ಮಾರ್ಗದಲ್ಲಿಯೇ ಅವರು ಹೆಜ್ಜೆಯಿರಿಸುವಂತೆ ಪ್ರೇರಣೆ ನೀಡುತ್ತದೆ. ಈ ರೀತಿಯ ಅವಲೋಕನ ಮತ್ತು ವಿಮರ್ಶಾತ್ಮಕ ಮಾದರಿಯ ನೋಟಗಳು ಚುನಾವಣಾಪೂರ್ವ, ಚುನಾವಣಾ ನಂತರ ಮತ್ತು ಸರ್ಕಾರದ ಅಧಿಕಾರಾವಧಿಯ ಅಷ್ಟೂ ದಿನಗಳ ಕಾಲ ವ್ಯಕ್ತವಾಗುತ್ತಲೇ ಇರಬೇಕಾಗುತ್ತದೆ. ಇವುಗಳನ್ನು ನಿರಂತರವಾಗಿರಿಸುವಂಥ ಬದ್ಧತೆಯನ್ನು ಸರ್ಕಾರವನ್ನು ಪ್ರತಿನಿಧಿಸುವವರು ಮತ್ತು ಪ್ರತಿಪಕ್ಷಗಳಲ್ಲಿರುವವರು ತೋರಬೇಕಾಗುತ್ತದೆ.
ಬದ್ಧತೆಗೆ ತದ್ವಿರುದ್ಧದ ವಾತಾವರಣ
ಭಾರತದಲ್ಲಿ ಚುನಾವಣಾ ರಾಜಕಾರಣವು ಅಂಥ ಬದ್ಧತೆಗೆ ತದ್ವಿರುದ್ಧವಾದ ವಾತಾವರಣವನ್ನು ಸೃಷ್ಟಿಸಿದೆ. ಸಂವಾದವನ್ನು ಕಟ್ಟುವುದರ ಬದಲು ಅತಾರ್ಕಿಕ ವಾಗ್ವಾದಗಳನ್ನು ಹುಟ್ಟುಹಾಕುವುದರ ಕಡೆಗೇ ಅದರ ಗಮನವಿದೆ. ಅಧಿಕಾರ ಪಡೆಯಲೇಬೇಕು ಎಂಬ ಹಂಬಲ ಮತ್ತು ಹಠಗಳು ಸಂವಾದದ ಸಾಧ್ಯತೆಗಳನ್ನೇ ಮೊಟಕುಗೊಳಿಸುತ್ತವೆ. ಜನಪರ ನೀತಿ ನಿರೂಪಣೆಯ ಜವಾಬ್ದಾರಿಯುತ ಐಡೆಂಟಿಟಿಗಿಂತಲೂ ಕೀಳು ಅಭಿಪ್ರಾಯಗಳೊಂದಿಗಿನ ಮನಸ್ಥಿತಿಯನ್ನು ಸೃಷ್ಟಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತವೆ. ಹಾಗಾಗಿ ಸದ್ಯದ ಅಗತ್ಯಗಳಿಗೆ ಸ್ಪಂದಿಸುವಂಥ ಮತ್ತು ಆ ಮೂಲಕ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ನೆರವಾಗುವ ನೀತಿಗಳು ರೂಪುಗೊಳ್ಳುವುದೇ ಇಲ್ಲ. ಅಂಥ ನೀತಿಗಳು ರೂಪುಗೊಳ್ಳುವುದಕ್ಕೆ ಬೇಕಾದ ಒತ್ತಡವನ್ನು ಹಾಕಬೇಕಾದ ಜನಸಮೂಹವೂ ಅದೇ ನಿರೀಕ್ಷೆಗಳೊಂದಿಗೆ ಯೋಚಿಸುವುದೇ ಇಲ್ಲ. ಒಂದು ವೇಳೆ ಜನಸಮೂಹ ಯೋಚನೆಯ ಹಾದಿ ತುಳಿದರೂ ರಾಜಕಾರಣ ಎಚ್ಚೆತ್ತುಕೊಂಡು ಅದರ ದಿಕ್ಕನ್ನೇ ಬದಲಿಸಿ ನಿರ್ದಿಷ್ಟ ವಿದ್ಯಮಾನಕೇಂದ್ರಿತ ಅಂಶವನ್ನು ಮುನ್ನೆಲೆಗೆ ತಂದು ತನ್ನ ಸಂಕುಚಿತ ಉದ್ದೇಶವನ್ನು ಈಡೇರಿಸಿಕೊಂಡುಬಿಡುತ್ತದೆ.
ನೀತಿಯ ನಿಖರ ವ್ಯಾಖ್ಯಾನ
ಅಧಿಕಾರರೂಢ ರಾಜಕಾರಣ ಮತ್ತು ಪ್ರತಿಪಕ್ಷಗಳ ರಾಜಕಾರಣ ಇಂಥ ಸಂಕುಚಿತ ಉದ್ದೇಶಗಳನ್ನೇಮುಖ್ಯವಾಗಿಸಿಕೊಳ್ಳುವುದರಿಂದ ದೇಶದ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡ ನೀತಿಯ ಕುರಿತಾದ ಸ್ಪಷ್ಟತೆಯನ್ನು ಹೊಂದಿರುವುದಿಲ್ಲ. ನೀತಿಯ ನಿಖರ ವ್ಯಾಖ್ಯಾನವನ್ನು ನೆಚ್ಚಿಕೊಳ್ಳುವುದಿಲ್ಲ. ಯಾವುದೇ ಆಡಳಿತವು ವರ್ತಮಾನಕ್ಕೆ ಸ್ಪಂದಿಸಿ ಭವಿಷ್ಯವನ್ನೂ ಉಜ್ವಲಗೊಳಿಸುವುದಕ್ಕೆ ತನ್ನದೇ ಆದ ನೀತಿ ಮಾದರಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ನೀತಿ ರೂಪಿಸುವ ಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸುವ ಆಡಳಿತ ಮತ್ತು ಮೌಲಿಕ ರಾಜಕಾರಣ ಅಸ್ತಿತ್ವದಲ್ಲಿರುವ ಸಮಾಜವು ಸ್ಥಗಿತಗೊಳ್ಳುವುದಿಲ್ಲ. ಅದು ಬದಲಾಗುತ್ತಲೇ ಸಕಾಲಿಕ ನೀತಿಗಳಿಗೆ ಅವಕಾಶಯವೀಯುತ್ತದೆ. ಹೊಸ ಪೀಳಿಗೆಯೂ ನೀತಿನಿರೂಪಣೆಯ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ಚಿಂತನೆಯ ಒರೆಗಲ್ಲಿಗೆ ಹಚ್ಚಿ ಯೋಚಿಸುತ್ತದೆ. ಅದೇ ಚಿಂತನೆಯು ಆಡಳಿತದ್ದೂ ಆಗಬೇಕು ಎಂಬ ನಿರೀಕ್ಷೆಯಲ್ಲಿ ದೇಶದ ಉಜ್ವಲ ಭವಿಷ್ಯಕ್ಕೆ ಬೇಕಾಗುವ ಸಂವಾದದ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತದೆ. ಹಾಗಾದಾಗಲೇ ಸರ್ಕಾರ ಮತ್ತು ಪ್ರತಿಪಕ್ಷಗಳವರು ಭಿನ್ನವಾಗಿ ಯೋಚಿಸಲಾರಂಭಿಸುತ್ತಾರೆ. ಬದಲಾವಣೆಯ ಕಡೆಗಿನ ಪ್ರಯಾಣ ಅಧಿಕೃತತೆಯನ್ನು ಪಡೆಯುತ್ತದೆ.
ಹೊಸ ಹಾದಿಯ ನೀತಿಯ ಅಗತ್ಯತೆ
ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣೆ ವೇಳೆ ನಡೆಯುವ ವಿದ್ಯಮಾನಗಳು ಮತ್ತು ಅದನ್ನು ದೃಷ್ಟಿಯಲ್ಲಿರಿಸಿಕೊಂಡು ಏರ್ಪಡುವ ಜಗಳ, ಸಂಘರ್ಷಗಳು ಪ್ರಜಾಸತ್ತಾತ್ಮಕವಾದ ನೀತಿ ರೂಪುಗೊಳ್ಳಬಹುದಾದ ಸಂಭಾವ್ಯತೆಯನ್ನೇ ಇಲ್ಲವಾಗಿಸಿಬಿಡುತ್ತವೆ. ದೇಶದ ವಿವಿಧ ವಲಯಗಳಲ್ಲಿ ಆಗಬೇಕಾದ ಬದಲಾವಣೆಗಳೇನೇನು? ಆ ಬದಲಾವಣೆಯು ಯಾವ ಸ್ವರೂಪದ್ದಾಗಿರಬೇಕು? ಮುಂದಿನ ಐವತ್ತು ವರ್ಷಗಳಲ್ಲಿ ಸಮಾಜದ ಗತಿಶೀಲತೆಯ ಸಾಧ್ಯತೆಗಳಿಗೆ ತಕ್ಕಂತೆ ಹೊಸ ಕಾಯ್ದೆಗಳು ರೂಪುಗೊಳ್ಳಬೇಕೇ? ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯವ್ಯಾಪ್ತಿ ಮತ್ತು ಅವುಗಳ ಕಾರ್ಯವೈಖರಿ ಯಾವ ರೀತಿಯಲ್ಲಿ ವಿಮರ್ಶೆಗೊಳಪಡಬೇಕು? ಹೇಗೆ ಅವುಗಳನ್ನು ಬದಲಾವಣೆಯ ಪರಸ್ಪರ ಪೂರಕ ಸಾಂಸ್ಥಿಕ ಶಕ್ತಿಗಳನ್ನಾಗಿ ಮಾರ್ಪಡಿಸಬೇಕು ಎಂಬ ಪ್ರಶ್ನೆಗಳು ಆದ್ಯತಾನುಸಾರ ಚರ್ಚಿಸಲ್ಪಡಬೇಕು. ಹಾಗಾಗುವುದಿಲ್ಲ. ಅದರ ಬದಲು ತಾತ್ಪೂರ್ತಿಕವಾದ, ಸವಕಲು ಎನ್ನಿಸಿರುವ, ಅಪ್ರಸ್ತುತ ಅಭಿಪ್ರಾಯಗಳನ್ನು ರೂಪಿಸುವುದಕ್ಕೇ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತದೆ. ದೇಶದ ಆರ್ಥಿಕತೆ, ಸಾಮಾಜಿಕತೆ, ಶೈಕ್ಷಣಿಕ ವಾಸ್ತವಿಕತೆ, ಮಾನವ ಸಂಪನ್ಮೂಲದ ಆರೋಗ್ಯಕರ ಅಸ್ಮಿತೆ, ಭೌಗೋಳಿಕ ನೈಸರ್ಗಿಕ ವೈಶಿಷ್ಟ್ಯತೆ – ಇವೆಲ್ಲವುಗಳನ್ನು ಸಂವಿಧಾನಿಕ ಆಡಳಿತಾತ್ಮಕ ಅಂಗಗಳು ಗಣನೆಗೆ ತೆಗೆದುಕೊಂಡು ಹೊಸ ಹೆಜ್ಜೆಗಳನ್ನು ಕ್ರಮಿಸುವುದಕ್ಕೆ ಪೂರಕವಾಗುವ ನೀತಿಗಳನ್ನು ರೂಪಿಸಿಕೊಳ್ಳಬೇಕು. ಅಂಥ ವಾತಾವರಣದ ನಿರ್ಮಾಣಕ್ಕೆ ಚುನಾವಣಾಪೂರ್ವ, ಚುನಾವಣಾ ನಂತರದ ಆಡಳಿತಾತ್ಮಕ ಅಧಿಕಾರಾವಧಿಯು ವಿನಿಯೋಗಿಸಲ್ಪಡಬೇಕು.
ರಾಜಕಾರಣದ ನಿರ್ದಯಿ ದಾಹ
ನಿರ್ದಿಷ್ಟ ಆಡಳಿತ ನೀತಿಯು ಅಧಿಕಾರ ರಾಜಕಾರಣದ ನಿರ್ದಯಿ ದಾಹಗಳ ಸೋಂಕನ್ನು ಅಂಟಿಸಿಕೊಳ್ಳಬಾರದು. ಸದ್ಯದಲ್ಲಷ್ಟೇ ಅಲ್ಲದೇ ಯಾವತ್ತೂ ತಾವೇ ಅಧಿಕಾರದಲ್ಲಿರಬೇಕು ಎಂಬ ಹಸಿವು ಸಕಾರಾತ್ಮಕ ಆಲೋಚನಾಕ್ರಮಗಳೊಂದಿಗಿದ್ದರೆ ಸರಿ. ಇಲ್ಲದಿದ್ದರೆ ಆ ಹಸಿವಿಗೆ ಪ್ರಜಾಸತ್ತಾತ್ಮಕ ಅಧಿಕೃತತೆ ದೊರಕುವುದಿಲ್ಲ. ಬದಲಾಗಿ ಆ ಹಸಿವು ಕಂಡವರ ಬದುಕನ್ನು ನಲುಗಿಸುವ, ಎದುರಾಳಿಗಳನ್ನು ಸೃಷ್ಟಿಸಿಕೊಳ್ಳುವ, ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ವಿಕಾರದದ ಆಯಾಮವನ್ನು ಪಡೆದುಕೊಂಡುಬಿಡುತ್ತದೆ. ಈ ಹಂತದಲ್ಲಿಯೇ ಆಡಳಿತಾತ್ಮಕವಾದ ಸಕಾರತಾತ್ಮಕ ನೀತಿಯೊಂದು ಹುಟ್ಟಿಕೊಳ್ಳುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಪ್ರಭುತ್ವವು ಯಾವುದನ್ನು ಆಡಳಿತ ನೀತಿ ಎಂದುಕೊಳ್ಳುತ್ತದೋ ಅದು ವಾಸ್ತವದಲ್ಲಿ ಕವಲು ಹಾದಿಯನ್ನು ಸಂಕೇತಿಸಿರುತ್ತದೆ. ಇದನ್ನು ಪ್ರಭುತ್ವಕ್ಕೆ ಅರ್ಥಮಾಡಿಸುವ ಪ್ರಯತ್ನಗಳು ಸಾರ್ವಜನಿಕ ಅಭಿಪ್ರಾಯ ರೂಪಿಸುವ ಪ್ರತಿಪಕ್ಷ ನಾಯಕರು, ತಜ್ಞರು ಮತ್ತು ಮಾಧ್ಯಮ ಪರಿಣಿತರಿಂದ ಆಗಬೇಕು. ಸಕಾರಾತ್ಮಕವಾದ ನೀತಿಯ ವಿಶಾಲ ಆವರಣವನ್ನು ತೋರ್ಪಡಿಸಬೇಕು.
ಉದ್ದೇಶಪೂರ್ವಕ ತಾಟಸ್ಥ್ಯ
ಆಡಳಿತಾತ್ಮಕ ನೀತಿಯನ್ನು ನಿರ್ದೇಶಿಸುವ ಸ್ಪಷ್ಟ ಮಾನದಂಡಗಳನ್ನು ವಿನ್ಯಾಸಗೊಳಿಸಿಕೊಳ್ಳುವುದರ ಕಡೆಗೆ ಬಹುಮತ ಪಡೆದ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಹಾಗೆ ಆದ್ಯತೆ ನೀಡುವಂಥ ರಚನಾತ್ಮಕ ಸಂವಾದಿ ಆಂದೋಲನವನ್ನು ಪ್ರತಿಪಕ್ಷಗಳೂ ರೂಪಿಸುವುದಿಲ್ಲ. ಉದ್ದೇಶಪೂರ್ವಕವಾಗಿ ಅವು ಈ ವಿಷಯದಲ್ಲಿ ತಟಸ್ಥಗೊಳ್ಳುತ್ತವೆ. ಈ ಕಾರಣಕ್ಕಾಗಿಯೇ ದೇಶದ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಸ್ವರೂಪವನ್ನು ಪಡೆದುಕೊಂಡು ಬಿಡಿಸಲಾರದಷ್ಟು ಸಂಕೀರ್ಣಗೊಳ್ಳುತ್ತವೆ. ಒಂದು ಪಕ್ಷ ಅಥವಾ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದ ತಕ್ಷಣ ಸಮಸ್ಯೆಯೊಂದು ಚಿಗುರೊಡೆಯುವ ಕಾಲಕ್ಕೆ ಅದರ ಮುಂದಿನ ಸ್ವರೂಪವನ್ನು ಊಹಿಸಿ ಪರಿಹಾರೋಪಾಯವನ್ನು ನೆಚ್ಚಿಕೊಂಡ ಸಾಂದರ್ಭಿಕವಾದ ಪರ್ಯಾಯ ಚಿಂತನೆ ರೂಪುಗೊಳ್ಳಬೇಕು. ಅದರ ಆಧಾರದಲ್ಲಿಯೇ ಪರಿಹಾರಸೂತ್ರಗಳನ್ನು ಕಂಡುಕೊಳ್ಳಬೇಕು. ಜನಪರ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು. ಅವು ಸದ್ಯಕ್ಕಷ್ಟೇ ಅಲ್ಲದೇ ಭವಿಷ್ಯದ ದಿನಗಳಲ್ಲಿಯೂ ಅನುಕೂಲಕರ ಎನ್ನಿಸುವ ಹಾಗೆ ಫ್ಲೆಕ್ಸಿಬಲ್ ಆಗಿರಬೇಕು. ಈ ಸಾಧ್ಯತೆಗಳ ದೂರಗಾಮಿ ಪರಿಣಾಮ ಲೆಕ್ಕಿಸಿಯೇ ಆಡಳಿತ ಕೇಂದ್ರಗಳು ಸಾರ್ವಜನಿಕ ನೀತಿಯನ್ನು ರಚಿಸಿಕೊಳ್ಳಬೇಕಾಗುತ್ತದೆ. ಈಗ ಇದರ ಗೈರು ಹಾಜರಿ ಎದ್ದುಕಾಣುತ್ತಿದೆ. ಇದರಿಂದಾಗಿ ಭಾರತೀಯ ಸಾಮಾಜಿಕತೆಯು ವಿವಿಧ ಸವಾಲುಗಳನ್ನು ಎದುರಿಸುವುದಕ್ಕಾಗಿಯೇ ತನ್ನ ಶಕ್ತಿಯನ್ನು ವ್ಯಯ ಮಾಡಿಕೊಳ್ಳುತ್ತಿದೆ. ಪ್ರಜೆಗಳ ಸಾಮಾಜಿಕತೆ ಮತ್ತು ಮಾನವ ಸಂಪನ್ಮೂಲದ ಸಶಕ್ತತೆಯು ಸಾರ್ವಜನಿಕ ನೀತಿಯ ವ್ಯಾಪ್ತಿಯ ಒಳಗೆ ಅಧಿಕೃತ ಸ್ಥಾನವನ್ನು ಪಡೆಯುತ್ತಲೇ ಇಲ್ಲ. ಈ ದೃಷ್ಟಿಯಿಂದ ಭಾರತದ ಆಡಳಿತಾತ್ಮಕತೆಯು ರಚನಾತ್ಮಕ ಕಾರ್ಯಸೂಚಿಯ ಕಾಯಕಲ್ಪದಿಂದ ವಂಚಿತವಾಗಿದೆ.
ದಿವ್ಯನಿರ್ಲಕ್ಷ್ಯ ಸೃಷ್ಟಿಸುವ ಬಿಕ್ಕಟ್ಟು
ಈ ಕಾರಣಕ್ಕಾಗಿಯೇ ಕೃಷಿ, ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ, ಕಾಣಿಸಿಕೊಳ್ಳುತ್ತಲೇ ಇರುವ ಸಮಸ್ಯೆಗಳಿಗೆ ಪರಿಹಾರವೇ ಸಾಧ್ಯ ಇಲ್ಲ ಎಂಬ ತಪ್ಪು ಅಭಿಪ್ರಾಯಗಳ ವರ್ತುಲ ಸೃಷ್ಟಿಯಾಗಿದೆ. ಸಮಸ್ಯೆಯೊಂದು ಸೃಷ್ಟಿಯಾದ ತಕ್ಷಣವೇ ಆಡಳಿತವು ಅದರೆಡೆಗಿನ ದಿವ್ಯನಿರ್ಲಕ್ಷ್ಯವನ್ನೇ ತನ್ನ ಅಸ್ತಿತ್ವದ ಮಹತ್ವದ ಗುಣಲಕ್ಷಣವಾಗಿಸಿಕೊಳ್ಳುತ್ತದೆ. ತತ್ಪರಿಣಾಮ ನಿರ್ಲಕ್ಷ್ಯಕ್ಕೀಡಾಗುವ ಸಮಸ್ಯೆಯು ಹಲವು ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ. ಕ್ರಮೇಣ ಜನಸಮುದಾಯವನ್ನು, ತನ್ಮೂಲಕ ಆಡಳಿತದ ವಿವಿಧ ಹಂತಗಳ ಸಹಜ ಕ್ರಿಯೆಯನ್ನು ಮತ್ತಷ್ಟು ಜಡಗೊಳಿಸಿಬಿಡುತ್ತದೆ. ಆಗ ರೈತರ ಆತ್ಮಹತ್ಯೆಯ ಪ್ರಮಾಣ ಹೆಚ್ಚಾದಾಗಲೂ ಆಡಳಿತ ನಿರ್ಲಿಪ್ತತೆಯನ್ನೇ ತನ್ನ ಬಹುದೊಡ್ಡ ಗುಣವಾಗಿಸಿಕೊಳ್ಳುತ್ತದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ನ್ಯಾಯಯುತ ಬೆಲೆ ನಿಗದಿಗೊಳಿಸದೇ ಇದ್ದಾಗ ರೈತ ಸಮುದಾಯ ನಲುಗಿದರೂ ಅದು ನಿರ್ಲಕ್ಷ್ಯ ಧೋರಣೆಯೊಂದಿಗಿನ ಮೌನವನ್ನೇ ಅನುಸರಿಸುತ್ತದೆ. ಜಾತಿ-ಧರ್ಮಗಳ ಸಾಂಪ್ರದಾಯಿಕತೆಯ ಜೊತೆಗೆ ಇಡೀ ಸಮಾಜ ತಳಮಳಕ್ಕೀಡಾದಾಗ ಅದರ ಪ್ರಯೋಜನ ಪಡೆಯುವ ಹುನ್ನಾರದ ಪ್ರಬಲರಿಗೆ ದಾರಿ ಮಾಡಿಕೊಡುತ್ತದೆ. ಹೊಸದೇನನ್ನೂ ಕಲಿಸದೇ ಹಳೆಯದ್ದರ ಆಶ್ರಯದಲ್ಲಿಯೇ ಅಸ್ತಿತ್ವ ಕಂಡುಕೊಳ್ಳಲು ಶಿಕ್ಷಣ ರಂಗವು ಹೆಣಗಾಡುತ್ತಿರುವಾಗಲೂ ಅದನ್ನು ಮತ್ತಷ್ಟು ದುರ್ಬಲಗೊಳಿಸುವುದರ ಕಡೆಗೆ ಅತ್ಯುತ್ಸಾಹ ತೋರುತ್ತದೆ. ಆರೋಗ್ಯ ಕಾಯ್ದುಕೊಳ್ಳಲು ಜನಸಮೂಹಕ್ಕೆ ನೆರವಾಗುವ ಜಾಗೃತಿ ಹೆಜ್ಜೆಗಳ ಬದಲು ದೇಹಗಳನ್ನು ಮತ್ತಷ್ಟು ಜಡಗೊಳಿಸಿ ಮೆಡಿಸಿನ್ಗಳಿಗೆ ಒಗ್ಗಿಕೊಳ್ಳುವಂಥ ಮನಸ್ಥಿತಿ ರೂಪಿಸುವ ಔದ್ಯಮಿಕ ಒತ್ತಡಗಳಿಗೆ ಈಡಾಗುತ್ತದೆ. ಈ ಹಂತದಲ್ಲಿಯೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ತಮ್ಮ ಸಾಂಸ್ಥಿಕ ಶಕ್ತಿಯನ್ನು ವಿಸ್ತರಿಸಿಕೊಳ್ಳುವ ಬದಲು ಯಥಾಸ್ಥಿತಿಗಳನ್ನು ಖಾಯಂ ಆಗಿರಿಸುವ ದೌರ್ಬಲ್ಯದ ಮಿತಿಗಳನ್ನು ತಮ್ಮ ಗುಣಗಳನ್ನಾಗಿಸಿಕೊಳ್ಳುತ್ತವೆ.
ಸಮಗ್ರ ನೀತಿಯ ಅಲೆಯ ಪ್ರಾಧಾನ್ಯತೆ
ಆ ದೌರ್ಬಲ್ಯವು ದೇಶದ ಉಜ್ವಲ ಭವಿಷ್ಯದ ಸಂಭಾವ್ಯತೆಯನ್ನು ತಡೆದುಬಿಡುತ್ತದೆ. ಅಲ್ಲದೇ ಪೀಳಿಗೆಗಳನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಮುಂದಿನ ಹೆಜ್ಜೆಗಳ ಬದಲು ಹಿಂದಿನ ಜಡತೆಗೇ ಜೋತುಬೀಳುವ ಅವಲಂಬನೆಯ ಸ್ವಭಾವವನ್ನು ಸಾಮಾಜಿಕವಾಗಿ ನೆಲೆಗೊಳಿಸಿಬಿಡುತ್ತದೆ. ಇಂಥ ಅಪಾಯದಿಂದ ಪಾರಾಗಬೇಕಾದರೆ ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಸ್ಥೆಗಳು, ವಿವಿಧ ಜನವರ್ಗಗಳು ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಪ್ರತಿಸ್ಪಂದಿಸುವ ಆಡಳಿತಾತ್ಮಕ ಸಮಗ್ರ ನೀತಿಗಳ ಅವಶ್ಯಕತೆಯನ್ನು ಮನಗಂಡು ಅವುಗಳ ಪರವಾದ ವ್ಯಾಪಕ ಅಲೆಯನ್ನು ನಿರ್ಮಿಸಬೇಕು. ಹಾಗಾದಾಗ ಮಾತ್ರ ಚುನಾವಣೆ ಇರಲಿ, ಇಲ್ಲದಿರಲಿ ಎಲ್ಲರೂ ರಚನಾತ್ಮಕ ನೀತಿಗಳನ್ನು ಗಮನದಲ್ಲಿರಿಸಿಕೊಂಡು ಮೌಲಿಕ ಸಂವಾದ ಏರ್ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅನಗತ್ಯ ವಿವಾದಗಳ ವೈಭವೀಕರಣ ತಾನಾಗಿಯೇ ನಿಂತು ಸಾರ್ವಜನಿಕ ಆಡಳಿತವು ಸಂವಿಧಾನಾತ್ಮಕ ಮೌಲ್ಯವನ್ನು ತಂದುಕೊಳ್ಳುತ್ತದೆ.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.
ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ4 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ3 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ
-
ದಿನದ ಸುದ್ದಿ6 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು