Connect with us

ದಿನದ ಸುದ್ದಿ

ಹನಿಗವಿತೆಗಳ ಸರದಾರ – ಜರಗನಹಳ್ಳಿ ಶಿವಶಂಕರ್

Published

on

  • ಕೆ.ರಾಘವೇಂದ್ರ ನಾಯರಿ, ದಾವಣಗೆರೆ

ನಾಡಿನ ಹಿರಿಯ ಸಾಹಿತಿಗಳಾದ ಜರಗನಹಳ್ಳಿ ಶಿವಶಂಕರ್ ಅವರ ನಿಧನ ಸಂದರ್ಭದಲ್ಲಿ ಅವರಿಗೆ ಅಕ್ಷರ ನಮನ

ನ್ನಡದ ನಾಡಿನ ಹಿರಿಯ ಕವಿ, ಚಿಂತಕ, ಖ್ಯಾತ ಹನಿಗವನ ರಚನೆಗಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜರಗನಹಳ್ಳಿ ಶಿವಶಂಕರ್ 05-05-2021 ರಂದು ನಿಧನರಾಗಿರುವುದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕೊರೋನಾ ಇನ್ನೊಬ್ಬ ಪ್ರತಿಭಾವಂತ ಸಾಹಿತಿಯ ಬಲಿ ಪಡೆದಿರುವುದು ಅತ್ಯಂತ ವಿಷಾದನೀಯ.

ನಾಡು ಕಂಡ ಅಪ್ರತಿಮ ಬಹುಮುಖ ಪ್ರತಿಭೆಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಅವರ ಖ್ಯಾತ ಹನಿಗವನವಾದ “ಬಾಳಿಕೆ” ಯಲ್ಲಿ ಅವರು ಬರೆದಿರುವಂತೆ…

ಹತ್ತಾರು ವರುಷ
ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ

ನೂರು ವರುಷ
ಆಳಿದ ಅರಸ
ಹೆಣವಾಗಿ ಉಳಿಯಲಿಲ್ಲ
ಮೂರು ದಿವಸ.‌.. !

ಎಂಥಹ ಅದ್ಭುತವಾದ ಹನಿಗವನವಿದು. ಮನುಷ್ಯನ ಜೀವನದ ಸಾರ್ಥಕ್ಯದ ಕುರಿತಾಗಿ ನೇರವಾಗಿ ಬಾಣ ಹೊಡೆದು ಸಮಾಜವನ್ನು ಚಿಂತನೆಗೆ ದೂಡಿದ ಕವನವಿದು. ಮನುಷ್ಯನ ಕಳೇಬರ ಮೂರು ದಿವಸವೂ ಉಳಿಯುವುದಿಲ್ಲ. ಆದರೆ ಮರಗಿಡಗಳು ತಮ್ಮ ಅಳಿವಿನ ನಂತರವೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮೂಲಕ ಮಾನವ ಸಂಕುಲಕ್ಕೆ ಸಹಕಾರಿಯಾಗಿರುತ್ತವೆ.

ಹಾಗೆಯೇ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಮಾಡಿರುವ ಸಾಧನೆ, ಒಳ್ಳೆಯ ಕೆಲಸಗಳೇ ಆತನ ಹೆಸರನ್ನು ಅಜರಾಮರವಾಗುವಂತೆ ಮಾಡಬಲ್ಲದು ಎನ್ನುವುದು ಈ ಕವಿತೆಯ ಮೂಲಕವಾಗಿ ಕವಿಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಜರಗನಹಳ್ಳಿಯವರು ತನ್ನದೇ ಹನಿಗವನದ ಆಶಯಕ್ಕೆ ತಕ್ಕಂತೆಯೇ ತನ್ನ ಜೀವನವನ್ನು ರೂಪಿಸಿಕೊಂಡವರು. ಅವರು ಬರೆದಿರುವ ಅಸಂಖ್ಯಾತ ಹನಿಗವನಗಳು, ಕವಿತೆಗಳು, ಬರಹಗಳು ಮತ್ತು ಅವರ ಕನ್ನಡದ ಸೇವೆ ಅವರ ಹೆಸರನ್ನು ಅಜರಾಮರವಾಗಿ ಜನರ ಮಧ್ಯೆ ಇಡುವುದರಲ್ಲಿ ಸಂಶಯವಿಲ್ಲ.

ಖ್ಯಾತ ಹನಿಗವನ ರಚನೆಕಾರರಾಗಿದ್ದ ಅವರ ಹನಿಗವನಗಳು ಅತ್ಯಂತ ಜನಪ್ರಿಯವಾಗಿದ್ದವು‌. ನಾನೂ ಸಹ ಎಷ್ಟೋ ಸಮಾರಂಭಗಳಲ್ಲಿ ಭಾಷಣ ಮಾಡುವಾಗ, ನಿರೂಪಣೆ ಮಾಡುವ ಸಂದರ್ಭಗಳಲ್ಲಿ ಅವರ ಹೆಸರನ್ನು ಮತ್ತು ಅವರ ಹನಿಗವನಗಳನ್ನು ಯಾವಾಗಲೂ ಬಳಸಿಕೊಳ್ಳುತ್ತಿದ್ದೆ‌. ಅಷ್ಟರ ಮಟ್ಟಿಗೆ ಅವುಗಳು ವೈಯಕ್ತಿಕವಾಗಿ ನನ್ನನ್ನು ತುಂಬಾ ಆಕರ್ಷಿಸಿದ್ದವು ಎಂದರೂ ತಪ್ಪಿಲ್ಲ.

ಅವರ ಹನಿಗವನಗಳಲ್ಲಿನ ವ್ಯಂಗ್ಯ, ವಿಡಂಬನೆ, ವಿನೋದ, ದಿಟ್ಟತನ, ವೈಚಾರಿಕತೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದ್ದವು. ಅವರನ್ನು ಅವರ ಹನಿಗವನಗಳ ಮೂಲಕ ನನಗೆ ಪರಿಚಯ ಮಾಡಿದವರು ಕೆನರಾಬ್ಯಾಂಕಿನ ವಿಶ್ರಾಂತ ವಿಭಾಗೀಯ ಪ್ರಬಂಧಕರು ಹಾಗೂ ಹಿರಿಯ ಸಾಹಿತಿಗಳಾದ ಎನ್.ಟಿ.ಎರ್ರಿಸ್ವಾಮಿಯವರು.

ಕೆನರಾ ಬ್ಯಾಂಕಿನಲ್ಲಿ 28 ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆ ಮಾಡಿದ್ದ ಜರಗನಗಳ್ಳಿ ಶಿವಶಂಕರ್ ಅವರು ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ (2004-2008 ರ ಅವಧಿಯಲ್ಲಿ) ಕಾರ್ಯ ನಿರ್ವಹಿಸಿ ಕನ್ನಡ ನಾಡು ನುಡಿಗಳ ಕೈಂಕರ್ಯವನ್ನು ಪ್ರಾಮಾಣಿಕವಾಗಿ ಮತ್ತು ಬಲು ಪರಿಣಾಮಾಕಾರಿಯಾಗಿ ನಿರ್ವಹಿಸಿದ್ದರು.

ಕನ್ನಡಪರ ಹೋರಾಟಗಳಲ್ಲಿಯೂ ಸದಾ ಮುಂಚೂಣಿಯಲ್ಲಿದ್ದವರು ಜರಗನಹಳ್ಳಿ ಶಿವಶಂಕರ್ ಅವರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕಾಸರಗೋಡಿನಲ್ಲಿ ನಡೆದ ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಕೋಲಾರ ಜಿಲ್ಲಾ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಆಕಾಶವಾಣಿ, ದೂರದರ್ಶನ, ವಿಶ್ವವಿದ್ಯಾನಿಲಯ, ಅಕಾಡೆಮಿ, ದಸರಾ ಕವಿಗೋಷ್ಠಿಗಳ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಅಧ್ಯಕ್ಷ ಹಾಗೂ ಪ್ರತಿನಿಧಿಯಾಗಿ ಭಾಗಿಯಾಗಿ ಕಾರ್ಯನಿರ್ವಹಿಸಿದ ಅನುಭವ ಅವರದು.

ಕನ್ನಡದ ಹಲವಾರು ಪ್ರಮುಖ ದಿನಪತ್ರಿಕೆಗಳಲ್ಲಿ ಇವರ ಹನಿಗವಿತೆಗಳು, ಲೇಖನಗಳು ಸುಮಾರು 4 ದಶಕಗಳ ಕಾಲ ಪ್ರಕಟಗೊಂಡಿವೆ. ಅವರ ಕೃತಿಗಳಾದ “ಶುಭಾಂಗಿ” (ಕವಿತೆ – 1985 ರಲ್ಲಿ), “ಜೊತೆಯಾದವರು” (ಕವನ ವಿಮರ್ಶೆ – 1987 ರಲ್ಲಿ), “ಬುಗ್ಗೆ” (ಹನಿಗವಿತೆ – 1991 ರಲ್ಲಿ), “ಮಳೆ” (ಹನಿಗವಿತೆ – 2000 ರಲ್ಲಿ), “ಎರೆಹುಳು” (ಕವಿತೆ – 2001 ರಲ್ಲಿ), “ಆಲಿಕಲ್ಲು” (ಹನಿಗವಿತೆ), “ಮರಗಳು” (ಹನಿಗವಿತೆ – 1998 ರಲ್ಲಿ), “ಝರಿ” (ಹನಿಗವಿತೆ – 2002 ರಲ್ಲಿ), “ಭಾವ-ಬದುಕು” (ಅಂಕಣ ಬರಹಗಳು – ತರಂಗ), “ದೇವರ ನೆರಳು” (ದೇವರ ಕವಿತೆಗಳು – 2004 ರಲ್ಲಿ), “ನೆನಪಿನ ನೆಂಟರು” (ಅಂಕಣ ಬರಹಗಳು – ವಿಜಯ ಕರ್ನಾಟಕ 2007 ರಲ್ಲಿ), “ತುಂತುರು” (ಅಭಿನಂದನಾ ಗ್ರಂಥ – 2009 ರಲ್ಲಿ), “ಹೊಳೆ” (ಹನಿಗವಿತೆ – 2011 ರಲ್ಲಿ), “ಜಾತಕ” (ಅಂಕಣ ಬರಹಗಳು – ಕರ್ಮವೀರ 2011 ರಲ್ಲಿ) ಜನಮಾನಸದಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. ಅವರ ಹನಿಗವನಗಳು ಈಗಲೂ ಸಾವಿರಾರು ಜನರ ಬಾಯಲ್ಲಿ ಹರಿದಾಡುತ್ತಿವೆ.

ಅವರ ಪ್ರಸಿದ್ಧ ಹನಿಗವಿತೆಗಳು

1. ಅಂತರ
=========

ಏರಿದರೆ
ಮಂಚ, ಗದ್ದುಗೆ, ಸಿಂಹಾಸನ
ಹೆಚ್ಚೆಂದರೆ
ಎರಡು ಮೂರಡಿ ಮೇಲೆ

ಜಾರಿದರೆ
ಗೋರಿ, ಸಮಾಧಿ, ಬೃಂದಾವನ
ಹೆಚ್ಚೆಂದರೆ
ಎರಡು ಮೂರಡಿ ಕೆಳಗೆ !

2. ದೇಹ
=======

ಈ ದೇಹ
ಹುಟ್ಟಿಗೆ ಮೊದಲು
ಕಣ್ಣಿಗೆ ಕಾಣದ
ಒಂದು ಕಣ

ಸತ್ತ ಮೇಲೆ
ಒಂದು ದಿನವೂ
ಉಳಿಯದ ಹೆಣ

ಬದುಕಿರುವಾಗ
ಬ್ರಹ್ಮಾಂಡವನ್ನೇ
ಬಯಸುವ ಗುಣ !

3. ಮಾತೃಛಾಯ
============

ತೊನೆಯದಿದ್ದರೂ
ಹಣ್ಣು ಕಾಯಿ ಹೂಗಳನ್ನು
ಬಿದಿರು
ತೊಟ್ಟಿಲಾಗಿ ತೂಗುವುದು
ಮಕ್ಕಳನ್ನು
ಬುಟ್ಟಿಯಾಗಿ ಹೊರುವುದು
ಹಣ್ಣು ಕಾಯಿ ಹೂಗಳನ್ನು !

4. ಹಣತೆ
=======

ಕುಂಬಾರರು ಮಾಡಿದ ಹಣತೆಗೆ
ಗಾಣಿಗರ ಎಣ್ಣೆಯ ತುಂಬಿ
ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು
ಬತ್ತಿಯ ಮಾಡಿ ದೀಪವ ಹಚ್ಚಿದರೆ
ಹಲವು ಜಾತಿಗಳು ಕೂಡಿ
ಕುಲಗೆಟ್ಟ ಬೆಳಕು ನೋಡ !

5. ಆಕಾರ
=======

ದೊಡ್ಡ ಆನೆ ಒಂಟೆಯಲ್ಲಿಲ್ಲದ ವಿಷ
ಸಣ್ಣ ಹಾವು ಚೇಳಿನೊಳಗೆ ಬಂತು

ಉದ್ದ ತಾಳೆ ತೆಂಗಿಗಿಲ್ಲದ ಖಾರ
ಗಿಡ್ಡ ಮಣಸಿನ ಗಿಡದೊಳಗೆ ಬಂತು

ಬೆಟ್ಟಕ್ಕೆ ಸಲ್ಲದ ಭಯ ಭೀತಿ
ಅದರ ಸಣ್ಣ ಕವಣೆ ಕಲ್ಲಿಗೆ ಬಂತು !

6. ವಿಪರ್ಯಾಸ
============

ಒಳಗೆ ಬೇಕು ಅನ್ನ
ಹೊರಗೆ ಬೇಕು ಚಿನ್ನ
ಏನು ಇದರ ಮರ್ಮ

ಹೊರಗೆ ಕಿಸಿವ ಹಲ್ಲು
ಒಳಗೆ ಮಸೆವ ಕಲ್ಲು
ಇದು ಯಾವ ಧರ್ಮ

ತಾನೆ ಬೆಳೆದ ಅತ್ತಿಹಣ್ಣ
ನೋಡಿ
ನಾಚಿ ಕುಳಿತ ಬ್ರಹ್ಮ !

ಅವರ ಕವಿತೆಗಳ ಹಿಂದೆ ಭಾಷೆಯನ್ನು ಮತ್ತು ಭಾವನೆಗಳನ್ನು ಆಳವಾಗಿ ಗ್ರಹಿಸುವ ಪ್ರಯತ್ನವಿರುತಿತ್ತು. ಮಾನವೀಯ ಸಂಬಂಧಗಳ ನಡುವಿನ ಮಾನವನ ವಕ್ರ ನಡತೆಗಳ ವ್ಯಂಗ ಚಿತ್ರವನ್ನು ಅತ್ಯಂತ ಸ್ಪಷ್ಟವಾಗಿ ಅಭಿವ್ಯಕ್ತಿಸುತ್ತಿದ್ದರು. ಅವರ ಹನಿಗವನಗಳಲ್ಲಿ ಅವರದೇ ಆದ ದೃಷ್ಟಿಕೋನ, ಮೊನಚಾದ ವೈಚಾರಿಕತೆ, ಚುಚ್ಚುವಂತಹ ವಿಡಂಬನೆ, ಸರಳವಾದ ಭಾಷೆ, ಶುದ್ಧವಾದ ಜಾತ್ಯಾತೀತ ಭಾವನೆ, ಮೊನಚು, ಆಶ್ಚರ್ಯ, ಅನುಕಂಪಗಳನ್ನು ಹೇರಳವಾಗಿ ಕಾಣಬಹುದಾಗಿತ್ತು.

ಒಟ್ಟಿನಲ್ಲಿ ಅವರ ಕೃತಿಗಳು ಪ್ರೀತಿಸಲು ಆತ್ಮೀಯವಾಗಿ ಅನುಭವಿಸಲು ಯೋಗ್ಯವಾಗಿವೆ. ಇವರ ಹನಿಗವನಗಳು ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ‌. ಇವರ ಹನಿಗವನಗಳ ಸಂಕಲನ “ಝರಿ” ಉರ್ದು, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೂ ಅನುವಾದಗೊಂಡಿದೆ‌.

ಜರಗನಹಳ್ಳಿ ಶಿವಶಂಕರ್ ಅವರಿಗೆ ಕರ್ನಾಟಕ ಸರಕಾರದಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2005), ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ (2006) ಸೇರಿದಂತೆ ಚುಟುಕು ರತ್ನ, ಗೊರೂರು ಸಾಹಿತ್ಯ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ದುಬೈ ಧ್ವನಿ ಪ್ರತಿಷ್ಠಾನದ ಧ್ವನಿ ಪುರಸ್ಕಾರ, ಸುವರ್ಣ ಕರ್ನಾಟಕ ಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ. 2004, 2008 ಮತ್ತು 2010 ರಲ್ಲಿ ದುಬೈ ಹಾಗೂ ಶಾರ್ಜಾ ದೇಶಗಳಿಗೆ ಪ್ರವಾಸ ಮಾಡಿ ಉಪನ್ಯಾಸ ನೀಡಿದ ಅನುಭವವೂ ಅವರಿಗಿತ್ತು.

ಇಂತಹ ಕನ್ನಡದ ಮೇರು ಪ್ರತಿಭೆ ಕೊರೋನಾದಿಂದಾಗಿ ನಮ್ಮನ್ನು ಅಗಲಿರುವುದು ಎಲ್ಲ ಕನ್ನಡ ಅಭಿಮಾನಿಗಳಿಗೆ ಅತೀವ ದುಃಖವಾಗಿದೆ. ಅವರ ನೆನಪು ಹಾಗೂ ಹೆಸರು ನಮ್ಮ ಹೃದಯಂಗಳದಲ್ಲಿ ಅಜರಾಮರವಾಗಿ ಉಳಿಯಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending