Connect with us

ಭಾವ ಭೈರಾಗಿ

ಕವಿತೆ | ಅಪ್ಪ

Published

on

ಚಿತ್ರಕಲೆ : ಸಚಿನ್ ಅಕಲೇಕರ್
  • ಎನ್ಕೆ ಹನುಮಂತಯ್ಯ

ಜಮಾನರ ಗದ್ದೆಯೊಳಗೆ
ಗೊಬ್ಬರವಾದವನು.
ನಾವು ಹಸಿದು ಹಲ್ಲು ಕಿಸಿದರೂ
ಹೆಂಡವ ಹೀರಿ
ಹಣೆಬರಹ ಜರಿದವನು.

ಪ್ರತಿದಿನ ಊರೊಳ್ಳ ಕಸ ಗುಡಿಸಿ
ಬೀಳುಗಳ ಹೊತ್ತು
ಮಡಕೆಗಟ್ಟಲೆ ಬಾಡ ಕೂಡಿಟ್ಟವನು
ಎಕ್ಕಡದೊಳಗೇ ಬುದ್ಧನ ಹಾಗೆ ಕೂತು
ಅವರಿವರಿತ್ತ ತುತ್ತ ತಿಂದವನು.

ಉತ್ತಮರ ಪರುಸೆಗೆ ಬೆದರಿ
ನಮಗೆ ಹರುಕು ಚೆಡ್ಡಿಯ ಸಿಗಾಕಿ
ದೂರದಿಂದಲೇ
ಹೊಳೆವ ತೇರ ತೋರಿದವನು.

ಹಾಳೆಯೊಳಗಿನ ಹಕ್ಕಿಗಳು
ನಮ್ಮ ಮುದಿಗಣ್ಣ
ಹಣ್ಣ ತೋಟದಲಿ ಹಾರಾಡದಂತೆ
ಯಾರ ಸೇವೆಗೋ
ಕವಣೆಯ ಬೀಸಿ ಕಾದವನು.

ಅವನ ಸೆರಗಿನಲಿ ಮೀಸೆಗಳ ಹುಡುಕಿ
ಒನಕೆ ಹಿಟ್ಟಿನ ಕೋಲಿನಲೆ
ಹೊಡೆದೊಡೆದು ಅತ್ತವನು.
ಇರುಳ ಉರುಳಿಗೆ ಶಿರವಿಟ್ಟು ಸತ್ತವನು.

ಈಗಲೂ ನನ್ನೊಡಲ
ಗೋಳ ಗುಮ್ಮಟದೊಳಗೆ
ಗಳಗಳ ಅಳುತ್ತಾನೆ
ಪೌರ್ಣಮಿಗೆ ಮುಖ ಮಾಡಿ
ಏನನೋ.. ಕಾಯುತ್ತಾನೆ.

( ಕವಿ‌ ಎನ್ಕೆ ಹನುಮಂತಯ್ಯ ಅವರ ‘ ಮಾಂಸದಂಗಡಿಯ ನವಿಲು’ ಕವನ ಸಂಕಲನದಿಂದ ‘ ಅಪ್ಪ ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪುಸ್ತಕವನ್ನು ನಾಡಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಯಾದ ಲಡಾಯಿ ಪ್ರಕಾಶನ ಹೊರತಂದಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

Published

on

~ವಿಜಯ್ ನವಿಲೇಹಾಳು

ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ

ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು

ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?

ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ

ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ

ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.

ಇತರೆ ಕವಿತೆಗಳು

೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ

Published

on

  • ಅನಿತ ಮಂಜುನಾಥ

ಪ್ರೀತಿ,
ಅಜ್ಞಾತ ಅನೂಹ್ಯ.
ಭಾವಯಾನದ
ಬಾನ ಕೆಳಗೆ.

…….

ಸುರಿಯುವ ಮಳೆಯಲ್ಲಿ
ಕೊಡೆ ಮರೆತೆ,
ಆಗ ನೀ ನೆನಪಾದೆ.

…….

ನನ್ನ
ವಿರಹಗಳಿಗೆ,
ಕಾವ್ಯವೇ ಮದ್ದು ನನಗೆ,
ಮನದೊಳಗೊಂದು
ಸುಖ ಸದ್ದು !

…….

ಮಾತು ವಚನಗಳು,
ಮನ ಕಲಹಗಳಾಗದಿರಲಿ,
ಆಗಲಿ ಬಾಳಿನ ಆಶಾಕಿರಣ.

(ಅನಿತ ಮಂಜುನಾಥ ಅವರ ‘ ಬೆಳಕಿನ ಬೆನ್ನ ಹಿಂದೆ – ಹನಿಗವಿತೆಗಳ ಕವನ ಸಂಕಲನದಿಂದ ಈ ಮೇಲಿನ ಹನಿಗಳನ್ನು ಆಯ್ದುಕೊಳ್ಳಲಾಗಿದೆ‌.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಯಾವ ಕಾಲದ ಶಾಸ್ತ್ರವೇನು ಹೇಳಿದರೇನು..?

Published

on

  • ಕುವೆಂಪು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !

ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ?

ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮಿಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?

ಅಂತು ಮನು ತಾನು ಹೆಲಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ,
ಸ್ವರ್ಗ ಹೋಗಲಿ, ಮತ್ತೆ ನರಕ ಬಂದರು ಬರಲಿ,
ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ!

ಸ್ವರ್ಗ ಹೋಗುವುದಿಲ್ಲ, ನರಕ ಬರುವುದು ಇಲ್ಲ;
ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ .
ಎದೆಯ ದನಿ ಧರ್ಮನಿಧಿ ! ಕರ್ತವ್ಯವದುವೆ ವಿಧಿ !
ನಂಬದನು; ಅದನುಳಿದು ಋಷಿಯು ಬೇರಿಲ್ಲ!

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;
ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ,
ನಮ್ಮ ಹೃದಯವೆ ನಮೆಗೆ ಶ್ರೀಧರ್ಮಸೂತ್ರ !(ರಾಷ್ಟ್ರಕವಿ ಕುವೆಂಪು ಅವರ ‘ಕೋಗಿಲೆ ಮತ್ತು ಸೋವಿಯಟ್ ರಷ್ಯ’ ಕವನಸಂಕಲನದಿಂದ )

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending