ಭಾವ ಭೈರಾಗಿ
ಕವಯಿತ್ರಿ ಅರುಂಧತಿ ರಮೇಶ್ ರವರ ಕಣ್ಣಲ್ಲಿ ಜಿ ಎಸ್ ಸುಶೀಲಾದೇವಿ ಆರ್ ರಾವ್ ಮತ್ತು ಅವರ ಸಾಹಿತ್ಯ
- ಶ್ರೀಮತಿ ಅರುಂಧತಿ ರಮೇಶ್, ಕವಯಿತ್ರಿ, ದಾವಣಗೆರೆ
ಸ್ತ್ರೀ ವರ್ಗದ ಭಾವನೆ, ತುಮುಲ, ಸಂಕಷ್ಟ ಮತ್ತು ಸ್ವಾಭಿಮಾನ ಕುರಿತಾದ ಸಾಹಿತ್ಯವನ್ನು ಓದುಗರಿಗೆ ದಶಕಗಳಿಂದ ನೀಡಿದ ಲೇಖಕಿಯರಲ್ಲಿ ಶ್ರೀಮತಿ ಜಿ. ಎಸ್. ಸುಶೀಲಾದೇವಿ ಆರ್. ರಾವ್ ಪ್ರಮುಖರು. ಅವರು ‘ಗಟ್ಟಿ ಕಥೆಗಳನ್ನು ಬರೆದೂ ಪ್ರಧಾನ ವಾಹಿನಿಯಲ್ಲಿ ಚರ್ಚೆಗೆ ಬಾರದೇ ಹೋದ ಕಥೆಗಾರ್ತಿ’. ಎಂಬ ನೋವು, ‘ಅಕ್ಯಾಡೆಮಿಕ್ ಅಳತೆ ಪಟ್ಟಿಗೆ ಅರ್ಥವೆ ಅಗಲಾರದ ಬದುಕಿನ ಸೂಕ್ಷ್ಮ ಗಳು ಅವರ ಕಥೆಗಳಲ್ಲಿವೆ’ ಎಂಬ ಮೆಚ್ಚುಗೆ ವಿಮರ್ಶಕ ಶ್ರೀ ಎನ್ ಎಸ್ ಶ್ರೀಧರಮೂರ್ತಿಯವರದು.
1952 ರಲ್ಲಿ ಚಿತ್ರದುರ್ಗ ಜಿಲ್ಲೆಯ ಪುಟ್ಟ ಹಳ್ಳಿ ಗುಂಜಿಗನೂರಿನಲ್ಲಿ ಶ್ಯಾನುಭೋಗ್ ಶ್ರೀನಿವಾಸಯ್ಯ ಮತ್ತು ಜಾನಕಮ್ಮ ದಂಪತಿಗಳ. ಏಳು ಮಕ್ಕಳಲ್ಲಿ ಕಿರಿಯ ಮಗಳು. ತಂದೆ ಓದುತ್ತಿದ್ದ ಕುಮಾರವ್ಯಾಸ ಭಾರತ, ಜೈಮಿನಿ ಭಾರತಗಳು ಸಾಹಿತ್ಯದ ಆರಂಭಿಕ ಪ್ರೇರಣೆಗಳು. ಬಾಲ್ಯದಲ್ಲಿಯೇ ಟೈಫಾಯಿಡ್ನಿಂದ ನರಳುತ್ತ ಕೋಮಾ ಆವರಿಸಿ ‘ಬದುಕಿಲ್ಲ’ ಎಂಬ ಧೃಢವಾದ ನಂಬಿಕೆಯೊಂದಿಗೆ ಅಂತ್ಯ ಸಂಸ್ಕಾರಕ್ಕೇ ಸಿದ್ಧರಾದಾಗ ಒಬ್ಬ ಅಜ್ಜಿ ‘ಇಲ್ರಪಾ ಮಕದಾಗೆ ಜೀವದ ಕಳೆ ಐತೆ ತಡೀರಿ’ ಎಂದು ಬುಡ್ಡಿ ಹಚ್ಚಿ ದಪ್ಪ ಬಳೇಚೂರು ಕಾಸಿ ಚುಟುಕಿ ಇಟ್ಟಾಗ ಅದರ ಬಿಸಿಗೆ ಮೈ ಮಿಸುಕಾಡಿತಂತೆ.
ರಾತ್ರಿ ಇಡೀ ಮಗ್ಗುಲಲ್ಲಿ ಕಾದು ಕೂತ ಅಜ್ಜಿಯ ನಂಬಿಕೆಯಂತೆ ಬೆಳಿಗ್ಗೆ ಕಣ್ತೆರೆದು “ಅಮ್ಮ” ಎಂದು ದನಿ ಹೊರಡಿಸಿದ್ದಾರೆ. ಇದರಿಂದಾದ ಶ್ರವಣ ಸಮಸ್ಯೆಯಿಂದಾಗಿ ಹೊರಗಿನ ಶಬ್ದಲೋಕ ಅವರ ಪಾಲಿಗೆ ಕ್ಷೀಣಿಸಿದರೂ ಸಾಹಿತ್ಯ ಕೃಷಿ ಸಮೃದ್ಧವಾಗುತ್ತ ಬೆಳೆದಿದೆ. ಅವರ ಓದು, ಅನುಭವ, ನೋಟಗಳಿಗೆ ಸಿಕ್ಕಿದ, ದಕ್ಕಿದ ಸಂಭವನೀಯತೆಗಳ ವಿಸ್ತಾರ ಅಪಾರ.
ಇವರು ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕಥೆಗಾರ ಎನ್ ಎಸ್ ಚಿದಂಬರರಾವ್ರ ಪ್ರೋತ್ಸಾಹ. ಸುಶೀಲಾರು ತಮ್ಮ ಬರಹವನ್ನು ಪತ್ರಿಕೆಗಳಿಗೆ ಕಳಿಸಲು ಉತ್ಸಾಹ ತುಂಬಿತು. ಹಾಗೆಂದು ಪ್ರಚಾರದ ವ್ಯಾಮೋಹಕ್ಕೆ ಸಿಕ್ಕದೆ, ಮಾಗಿದ ಅನುಭವಕ್ಕೆ ನಿಲುಕಿದ ನಂತರವೇ ಕಥೆಯಾಗಿಸುವ ಬದ್ಧತೆ ಇವರದು. ಹಾಗಾಗಿ ನಲವತ್ತು ದಶಕಗಳನ್ನು ದಾಟಿದ ಸಾಹಿತ್ಯ ಯಾತ್ರೆಯಲ್ಲಿ ನೂರಾರು ಕಥೆಗಳನ್ನು ಬರೆದರು. ತಮ್ಮಲ್ಲೆ ಇದ್ದ ಒಬ್ಬ ಜಾಗೃತ ವಿಮರ್ಶಕಿಯಿಂದ ಯಾವುದೇ ವಿಷಯಕ್ಕೂ ನ್ಯಾಯ ಒದಗಿಸುವ ಸ್ವತಃ ಪ್ರೇರೇಪಣೆ ಹೊಂದಿದ್ದರು.
ಆರೋಗ್ಯ ಇಲಾಖೆಯ ಪದೇ ಪದೇ ವರ್ಗವಾಗುವ ಸರ್ಕಾರಿ ಹುದ್ದೆಯಲ್ಲಿದ್ದ ಶ್ರೀ ರಾಘವೇಂದ್ರ ರಾವ್ ಅವರೊಂದಿಗೆ ಹದಿನೆಂಟನೇ ವಯಸ್ಸಿಗೆ ವಿವಾಹವಾಯಿತು. ಬಳ್ಳಾರಿಯ ಬಿರು ಬಿಸಿಲು, ಬೆಳೆಯುತ್ತಿದ್ದ ಸಂಸಾರ, ಕುಟುಂಬದ ಸಾಕಷ್ಟು ಜವಾಬ್ದಾರಿ, ಇಂತಹ ಸಮಸ್ಯೆಗಳ ನಡುವೆಯೂ ಅವರ ಕಥಾ ಲೋಕ ಶ್ರೀಮಂತವಾಗುತ್ತಲೇ ಇತ್ತು. ‘ಸ್ವಾಭಿಮಾನಿ’, ‘ಬೆಂಕಿಯ ಒಡಲಲ್ಲಿ ‘ಸಂಬಂಧದ ಸಂಕೋಲೆಗಳು’.. ಇತ್ಯಾದಿ ಕಾದಂಬರಿಗಳು ‘ಕಿಟ್ಟು ಪುಟ್ಟಿಯರ ಸಾಹಸಗಳು’ ಮಕ್ಕಳ ಕಾದಂಬರಿ, ‘ಷೋಕೇಸಿನ ಗೊಂಬೆ’ ಕಥಾ ಸಂಕಲನ ಪ್ರಕಟವಾದವು.
ಪತಿಯ ಅನಿರೀಕ್ಷಿತ ಸಾವು ಅಘಾತಕಾರಿಯಾಗಿ ಸಂಪೂರ್ಣ ಹೊಣೆಗಾರಿಕೆ ಸುಶೀಲಾರವರ ಹೆಗಲೇರಿತು. ಮಗ ಅನಂದ್, ಮಗಳು ಲತಾ ಇವರ ವಿದ್ಯಾಭ್ಯಾಸ ಮತ್ತು ಏಳ್ಗೆ ಸುಶೀಲಾರ ಅತ್ಯಂತ ಜಾಗರೂಕ ಸಮತೂಕದ ನಿರ್ವಹಣೆಯಲ್ಲಿ ನಡೆಯಿತು. ಬಹುಷಃ ಬೆಂಕಿಯ ಮಡಿಲಲ್ಲಿದ್ದೂ ಸ್ವಾಭಿಮಾನಿಯಾಗಿ ಕುಟುಂಬವನ್ನು ಕಾಪಾಡಿ ಒಂದು ನೆಲೆಗೆ ನಿಲ್ಲಿಸಿದ ಹಿರಿಮೆ ಸಾರ್ಥಕತೆ ಸುಶೀಲಾವರದ್ದು.
ಬದುಕಿನಿಂದ ಬರಹ ಬದುಕಿಗಾಗಿ ಬರಹ ಎಂಬ ಸಿದ್ದಾಂತದಿಂದ ಸಾಹಿತ್ಯಕ್ಕೆ ಬದ್ಧರಾದವರು. ಗ್ರಾಮೀಣ ಬದುಕನ್ನು, ಸುತ್ತಣ ಜಗತ್ತನ್ನು ಕಂಡ ಬೆರಗು, ಜನರ ನೋವು, ನಲಿವು, ದ್ವೇಷ, ತುಮುಲಗಳು ಶೋಷಣೆ ಇವುಗಳನ್ನು ಎದುರಿಸುತ್ತ ಬದುಕನ್ನು ಕಟ್ಟಿಕೊಂಡ ಸ್ತ್ರೀಯರು, ಬದುಕಿನ ಬಗ್ಗೆ ಅಪಾರ ಪ್ರೀತಿ ಭರವಸೆ ಇರಿಸಿಕೊಂಡವರು, ವೈವಿಧ್ಯಮಯ ವ್ಯಕ್ತಿತ್ವಗಳ ಕಂಡ ಉಂಡ ಬದುಕೆಲ್ಲ ಕಥೆಯಾಗಿ ಹರಿದು ಬಂದಿದೆ ಎಂಬುದು ಅವರದೇ ಮಾತು.
ಅವರ ತವರಾದ – ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ – ಗುಂಜಿಗನೂರು ಗ್ರಾಮದಲ್ಲಿನ ಕೊಪ್ಪದಮ್ಮನ ಗುಡಿ ದೆವ್ವ ಬಿಡಿಸಲು ಪ್ರಖ್ಯಾತವಾಗಿತ್ತು. ಇದನ್ನು ಕಣ್ಣಾರೆ ಕಂಡ ಲೇಖಕಿ, ದೆವ್ಬದ ನಂಬಿಕೆಯನ್ನು ಬಿಟ್ಟು ಇರಬಹುದಾದ ಮನೋರೋಗಗಳ ಬಗ್ಗೆ ಮನೋವೈಜ್ಞಾನಿಕ ಗ್ರಂಥಗಳನ್ನು ಅಧ್ಯಯನ ಮಾಡಿ ಬರೆದ ಕಥೆಯೇ “ಮನಮಂದಿರ”. ಶಾಲಾ ವಾರ್ಷಿಕೋತ್ಸವದ ದಿನ ಊರ ಹೊರಗಿನ ಹುಣಿಸೇ ಮರದ ಕೆಳಗೆ ಬಕ್ಕತಲೆಯ ವ್ಯಕ್ತಿಯೊಬ್ಬ ಕಥಾ ನಾಯಕಿ ಉಮಾಳ ಮೇಲೆ ಅತ್ಯಾಚಾರ ಕೃತ್ಯವೆಸಗಿದ ಪರಿಣಾಮ ಮನೋವ್ಯಾಧಿಗೆ ಒಳಗಾಗುತ್ತಾಳೆ.
ಹಗಲಿನ ಅವಳ ಚಟುವಟಿಕೆ ರಾತ್ರಿಯ ಮಂಕು ಮುಸುಕಿಗೆ ಬದಲಾಗುತ್ತಿತ್ತು.ಒಂದೊಂದಾಗಿ ಸುಮಿತ್ರಾ ಎಂಬಾಕೆ ಮನೆಯವರ ಕಟ್ಟು ಪಾಡು, ದೌರ್ಜನ್ಯಗಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು ಅವಳ ಕಾಟದಿಂದಲೇ ಉಮಾ ತಲೆ ತಿರುಗಿ ಬೀಳುವ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆಂಬ ನಂಬಿಕೆ ಬಲವಾಗಿ ಬೇರೂರಿತ್ತು. ಮನೋವೈದ್ಯರ ಚಿಕಿತ್ಸೆಯಿಂದಾಗಿ ಕಾರಣ ತಿಳಿಯುವುದು ಮಾತ್ರವಲ್ಲದೆ ವ್ಯಾಧಿಯೂ ಗುಣಮುಖವಾಗುತ್ತದೆ. ಬಾಲ್ಯಸ್ನೇಹಿತ ಆನಂದ್ ವಿಷಯ ತಿಳಿದೂ ಅವಳನ್ನು ಪ್ರೀತಿಯಿಂದ ಒಪ್ಪಿಕೊಂಡು ಸಂಸಾರಿಯಾಗಿರುತ್ತಾನೆ. ಯಾವುದೇ ಅನುಮಾನ ಆತಂಕಗಳಿಲ್ಲದೆ ಬಂಧ ಬೆಸುಗೆಯಾದ ಸುಖಾಂತ.
ಬಲವಂತದ ಮದುವೆಯಿಂದಾಗಿ ಗಂಡನಿಂದ ತಿರಸ್ಕೃತಳಾದರೂ ಸ್ವಾಭಿಮಾನದಿಂದ ಬದುಕನ್ನು ಎದುರಿಸುವ ಕತೆ “ಸ್ವಾಭಿಮಾನಿ”. ಜನಪ್ರಿಯವಾದ ಈ ಕಾದಂಬರಿಯ ವಿಶೇಷವೆಂದರೆ, ಮಾಸಪತ್ರಿಕೆಯಲ್ಲಿ ಈ ಧಾರಾವಾಹಿ ಪ್ರಕಟವಾಗುತ್ತಿದ್ದಾಗ ಕುಮಟಾದ ನರಸಿಂಹ ಗೋವಿಂದ ಶಾನುಭಾಗರು ತುಂಬ ಆಸಕ್ತಿಯಿಂದ ಓದುತ್ತಿದ್ದರು. ಹಠಾತ್ತನೆ ಅವರ ಆರೋಗ್ಯ ಬಿಗಡಾಯಿಸಿ ಮೃತ್ಯುಶಯ್ಯೆಯಲ್ಲಿದ್ದಾಗ, ಧಾರಾವಾಹಿಯ ಸುಮಿತ್ರಳ ಮುಂದಿನ ಬದುಕಿನ ಬಗ್ಗೆ ಹಂಬಲಿಸಿ, ಸಂಪಾದಕರ ಅನುಮತಿ ಪಡೆದು ಮುಂದಿನ ಕಂತುಗಳನ್ನು ತರಿಸಿಕೊಂಡು ಓದಿಸಿಕೊಂಡು ಕೇಳಿದ್ದಾರೆ. ನಂತರ ನಿಧನರಾಗಿದ್ದಾರೆ. ಇದಲ್ಲವೆ ನಿಜವಾದ ಜನಪ್ರಿಯತೆ ಅಂದರೆ?
ಹೆತ್ತವರ ಪ್ರೀತಿ ಕಾಣದೆ ತಿರಸ್ಕೃತಳಾದರೂ ವಿಧವೆ ಅತ್ತೆಯ ಮಡಿಲಲ್ಲಿ ಬೆಳೆದ ವಿಚಾರವಂತ ಹೆಣ್ಣುಮಗಳಾದ ಇಂದಿರಾಳ ಮನೋರಂಗದ ತಲ್ಲಣಗಳ ಸ್ಪಷ್ಟವಾಗಿ ಬಿಂಬಿಸಿದ ಮನೋ ವೈಜ್ಞಾನಿಕ. ಕಾದಂಬರಿ ” ಬೆಂಕಿಯ ಒಡಲಲ್ಲಿ”. ಅಕ್ಕಂದಿರ ಶೋಷಣೆ, ತನ್ನ ಮೇಲಿನ ಅತ್ಯಾಚಾರದ ಪ್ರಯತ್ನ, ಸುತ್ತಲೂ ಆವರಿಸಿದ್ದ ದೇವದಾಸಿ ಪದ್ಧತಿಯ ಆಚರಣೆಗಳು, ಇವೆಲ್ಲ ಹೆಣ್ಣನ್ನು ತುಳಿದು ವಿಜೃಂಭಿಸುವಂತೆ ಕಂಡು ಪುರುಷ ದ್ವೇಷಿಯಾಗುತ್ತಾಳೆ. ಒತ್ತಾಯದಿಂದ ತನ್ನನ್ನು ಮದುವೆಯಾದ ವಿಶ್ವನಾಥ ಈ ಮೊದಲು ಅಮಾಯಕ ಹೆಣ್ಣನ್ನು ವಿಚ್ಛೇದನದಿಂದ ದೂರಮಾಡಿದ್ದು ತಿಳಿದು ತೀವ್ರ ಮನೋರೋಗಕ್ಕೆ ತುತ್ತಾಗುತ್ತಾಳೆ.
ವೈದ್ಯರ ಚಿಕಿತ್ಸೆಯ ಮೂಲಕ ಮನಸಿನ ಒಳಪದರಗಳು ಒಂದೊAದಾಗಿ ಬಿಚ್ಚಿಕೊಳ್ಳುತ್ತ ವೇದನೆಗಳ ಮೂಲಗಳು ಒಂದೊAದಾಗಿ ಹೊರಬರುತ್ತವೆ. ಗರ್ಭ ಕೋಶವಿಲ್ಲದೆ ದಾಂಪತ್ಯ ಅಸಫಲವೆನಿಸಿ ತಾನೆ ಸ್ವಇಚ್ಛೆಯಿಂದ ವಿಚ್ಛೇದನ ನೀಡಿ, ತನ್ನನ್ನು ವಿವಾಹವಾಗಲು ಅವಕಾಶ ಮಾಡಿಕೊಟ್ಟ ಮೊದಲ ಹೆಂಡತಿಯ ಬಗ್ಗೆ ತಿಳಿದಾಗ ಮನೋರೋಗದ ಚಿಕಿತ್ಸೆ ಫಲಪ್ರದವಾಗಿ ಸುಖಾಂತ್ಯವಾಗುವ ಕಾದಂಬರಿ.
ಅಲ್ಪ ವಿದ್ಯಾವಂತ ಹೆಣ್ಣುಮಗಳು ಸಾಂದರ್ಭಿಕ ಬಿಕ್ಕಟ್ಟಿನಲ್ಲಿ ಕೌಟುಂಬಿಕ ವ್ಯವಹಾರಗಳಲ್ಲೇ ಮುಳುಗಿ ತನ್ನ ಓದಿನ ಬಳಕೆಯೇ ಆಗದ ಪರಿಸ್ಥಿತಿ. ಮಗಳು ಅಜ್ಜಿಯ ಮನೆಯಲ್ಲಿ ಸುಂದರ ಯುವತಿಯಾಗಿ ಬೆಳೆಯುತ್ತಾಳೆ. ಅವಳ ತಂದೆಯಿAದ ಪಡೆದ ಋಣಭಾರದ ಕೃತಜ್ಞತೆಯಿಂದಾಗಿ ಡಾ ಸುದರ್ಶನ್ ಅವಳನ್ನೆ ಮದುವೆಯಾಗುತ್ತಾನೆ, ಮಗನನ್ನೂ ಪಡೆಯುತ್ತಾರೆ.
ಆದರೆ ಡಾಕ್ಟರ್ ಶರ್ಮಿಳಾಳ ಭೇಟಿ, ಹೋಲಿಕೆ ಮತ್ತು ಆಕರ್ಷಣೆ ಇವರ ನಡುವೆ ಅಂತರವನ್ನು ಸೃಷ್ಟಿಸುತ್ತದೆ. ಮುಂದೆ ಶರ್ಮಿಳಾಳ ಆಕ್ರಮಣಕಾರಿ ಸ್ವಭಾವ ಆತನ ಕನಿಷ್ಠ ಸ್ವಾತಂತ್ರ್ಯವನ್ನೂ ಕಸಿದು ಪ್ರತಿ ಹೆಜ್ಜೆ ನಿರ್ಬಂಧಿತವಾಗುತ್ತದೆ. ಮೊದಲ ಮಗನನ್ನು ಜೊತೆಗೇ ಉಳಿಸಿಕೊಂಡರೂ, ಅವನ ದುಶ್ಚಟಗಳನ್ನು ದೂರ ಮಾಡುವ ಪ್ರಯತ್ನ ಫಲಿಸದ ಪರಿಸ್ಥಿತಿ. ಸುದರ್ಶನ್ ಅವರ ನಿರ್ಗಮನದ ಸಂದಭದಲ್ಲಿ ಇನ್ನೂ ಗರ್ಭಸ್ಥವಾಗಿದ್ದ ಶಿಶು ದೃಷ್ಟಿ ಸಮಸ್ಯೆ ಪಡೆದೇ ಹುಟ್ಟುತ್ತದೆ.
ಯಾವುದೇ ಆಸ್ತಿ ಅಧಾರವಿಲ್ಲದೆಯೂ ವಸುಮತಿ ಅತ್ಯಂತ ಕಷ್ಟಪಟ್ಟರೂ ಮಗನ ಸಂಗೀತಾಭ್ಯಾಸಕ್ಕೆ ಪುಷ್ಠಿ ಕೊಡುತ್ತಾಳೆ. ತನ್ನ ಮಕ್ಕಳೇ ನಿರ್ಲಕ್ಷಿಸಿದಾಗ, ದೂರವಿಟ್ಟ ಹೆಂಡತಿ ಶರ್ಮಿಳ, ಡಾ|| ಸುದರ್ಶನ್ ಅವರಿಗೆ ಸಂಬಂಧಗಳು ತಿರುಚಿಕೊಂಡು ಸಂಕೋಲೆಗಳಾಗಿ ಅವರು ಸೋತು ಬಳಲಿ ಬಂದಾಗ ವಸುಮತಿಯ ನಿರ್ಧಾರ ಅವಳ ಮಟ್ಟಿಗೆ ಸೂಕ್ತ. ಶ್ರೀಮಂತಿಕೆಗಿಂತ ಪ್ರೀತಿ, ವಿಶ್ವಾಸ, ನಂಬಿಕೆ, ಅನ್ಯೋನ್ಯತೆಗಳು ಸಂಬಂಧಗಳ ಬೆಸುಗೆಗೆ ಅತ್ಯವಶ್ಯ, ಇಲ್ಲವಾದರೆ ಬದುಕಿನ ಸಂಕೋಲೆಗಳಾಗುವುದನ್ನು ಕಾದಂಬರಿ ನೇರವಾಗಿ ಯಾರನ್ನೂ ಕೆಟ್ಟವರನ್ನಾಗಿ ಚಿತ್ರಿಸದೇ ತಿಳಿಸುತ್ತದೆ. ಅನುವಂಶೀಯತೆ ಪ್ರಕಟಗೊಳ್ಳುವ ಸಾಕ್ಷಿಯಾಗಿರುವ ಕಾದಂಬರಿ ಬದುಕಿನ ಮೌಲ್ಯಗಳನ್ನು ಅರ್ಥೈಸುತ್ತದೆ.
ಮಕ್ಕಳಿಗೆ ಖುಷಿ ಕೊಡುವ “ಕಿಟ್ಟು-ಪುಟ್ಟಿಯರ ಸಾಹಸಗಳು” ಮಕ್ಕಳ ಕಾದಂಬರಿ. ನಗರ ಪರಿಸರದಲ್ಲಿ ಬೆಳೆದ ಮಕ್ಕಳು ರಜೆಯಲ್ಲಿ ಅಜ್ಜಿತಾತನ ಊರಿನ ಸ್ವಚ್ಛಂದ ವಿಹಾರದಲ್ಲಿ ಅವರ ಒಳಗಿನ ಶೌರ್ಯ ಸಾಹಸಗಳು ಗರಿಗೆದರಿದಾಗಿನ ತಿಳಿ ಹೊಳೆಯ ಓಟ ನೋಟ. ಹಳ್ಳಿಯ ಮುಗ್ಧ ಜನರೊಂದಿಗೆ ಬೆರೆತು ಕೊಲೆ, ಕಳ್ಳತನ ಕಿಡ್ನಾಪ್ ಕೇಸುಗಳನ್ನು ಪತ್ತೆ ಹಚ್ಚುವ ಪುಟ್ಟ ಪತ್ತೇದಾರರಾಗುತ್ತಾರೆ. ಬಸುರಿ ಹೆಂಗಸನ್ನು ಬದುಕಿಸುವ ಭಾಗ್ಯವಂತರಾಗುತ್ತಾರೆ.
ಪುರಾತನ ದೇವಾಲಯದ ವಿಗ್ರಹ ಚೋರರ ಬಂಧನಕ್ಕೆ ಕಾರಣರಾಗುತ್ತಾರೆ. ಮನೆತನದ ಮರೆಯಾದ ಗ್ರಂಥಗಳನ್ನು ಬೆಳಕಿಗೆ ತರುವ ಕುಲದೀಪಕರಾಗುತ್ತಾರೆ. ಪವಾಡ ಸದೃಶ ಸಾಹಸಗಳನ್ನು ಕೈಗೊಳ್ಳುತ್ತಾರೆ. ಮಕ್ಕಳಿಗಾಗಿಯೇ ಬರೆದ ಈ ಕಾದಂಬರಿ ಅನೇಕ ಆವೃತ್ತಿಗಳನ್ನು ಕಂಡಿದೆ. ತಮ್ಮ ಸ್ವಂತ ಹುಟ್ಟೂರಿನ ಅನೇಕ ವಿಷಯಗಳನ್ನು ಕಲ್ಪನೆಯಲ್ಲಿ ಹೊಸೆದು ಈ ಮೂಲಕ ಕಾದಂಬರಿ ನಮ್ಮೊಳಗೇ ಇರುವ, ಹೊರಬರುವ ಪಾತ್ರ, ಘಟನೆಗಳಾಗಿ ಸಂಭ್ರಮಿಸುತ್ತವೆ.
ಕಥೆಗೆ ಸಂಬಂಧಿಸಿದ, ಕಥೆಯ ಬೆಳವಣಿಗೆಗೆ ಅಗತ್ಯವಾದ ಕಾನೂನು, ವೈದ್ಯಕೀಯ, ಮನೋವೈಜ್ಞಾನಿಕ, ಭೌಗೋಳಿಕ ಕಾರಣ ಪರಿಣಾಮಗಳ ಅಧ್ಯಯನದಿಂದ ಸುಶೀಲಾರ ಕಥೆ, ಕಾದಂಬರಿಗಳು ಗಟ್ಟಿಯಾಗಿ, ನೈಜತೆಯ ಸ್ಪರ್ಶವನ್ನು ಪಡೆಯುತ್ತವೆ. ಸಹಜ ಮತ್ತು ಸರಾಗವಾಗಿ ಮುಂದುವರಿಸುವ ಸಂಭಾಷಣಾ ಪ್ರಕ್ರಿಯೆಯೇ ಪ್ರಧಾನ ಆಕರ್ಷಣೆ. ಯಾವುದೇ ಆಳವಾದ ಚಿಂತನೆಯೂ ಈ ಪರಿಕ್ರಮದಲ್ಲಿ ಹಿಗ್ಗುತ್ತದೆ.
ಒಗ್ಗುತ್ತದೆ ಕೂಡಾ. ಅಪಾರ ಓದು, ಅಧ್ಯಯನ, ಅಗಾಧವಾದ ಜೀವನೋತ್ಸಾಹದ ಹರವು ಮತ್ತು ಹರಿವು ಇವರ ಕಥೆ, ಕಾದಂಬರಿ, ನಾಟಕಗಳು ಎಲ್ಲ ಪ್ರಕಾರಗಳಿಗೂ ಅಮೂಲ್ಯವಾದ ಸ್ಥಿರತೆಯೊಂದಿಗೆ ಪ್ರಾಮಾಣಿಕ ನೆಲೆಯನ್ನು ಕಟ್ಟಿ ಕೊಡುತ್ತದೆ. ಪ್ರತಿ ಪಾತ್ರಗಳು, ಆಯಾ ಸಂಬಂಧಗಳು, ಅವರವರ ಸ್ವಯಂ ಸ್ವಭಾವಗಳೊಂದಿಗೆ ರೂಪಿಸಿ ಬೆಳೆಸಿದ ಬಳಸಿದ ಮೂರ್ತ ಮಾದರಿಗಳು.
ಬಳ್ಳಾರಿಯ ಹತ್ತು ಹಲವು ಊರುಗಳು, ಭಾಷೆ, ಪರಿಭಾಷೆ, ಜನಪದ, ಆಚಾರ ವಿಚಾರಗಳಿಂದ ಪ್ರಭಾವಿತರಾದ ಅವರ ಬರಹ “ಅಡುಗೆ ಮನೆ ಸಾಹಿತ್ಯ” ಎಂಬ ಪರಿಮಿತಿಯನ್ನು ಮೀರಿ ಬೆಳೆದದ್ದು. ಸಾವಿನ ಹಾಸಿಗೆಯ ಮೇಲೆ ಮಲಗಿದ್ದ ತಾಯಿಯ ಎದುರು ತಮ್ಮ ಸ್ವಾರ್ಥ ದುರಾಸೆ ಸಣ್ಣತನಗಳ ಪ್ರದರ್ಶನ ಮಾಡಿದ ಮಕ್ಕಳ ಕಥೆ “ಅವ್ವ”. ಅವರ ಅತ್ಯುತ್ತಮ ಕಥೆಗಳಲ್ಲಿ ಒಂದು. ಗೌಡರ ಚನ್ನವ್ವ, ದಾಕ್ಷಾಯಣಿ, ತುಂಗ… ಇತ್ಯಾದಿ ಕಥೆಗಳು ಜನಪ್ರಿಯವಾದವು.
ಸ್ತ್ರೀಯರ ಹಲವಾರು ವರ್ತನೆಗಳಿಗೆ, ಸಂವೇದನೆಗಳಿಗೆ ಮನೋವೈಜ್ಞಾನಿಕ ನೆಲೆಯನ್ನು ವಿಶಿಷ್ಟ ಆಯಾಮವನ್ನು ಪರಿಚಯಿಸಿದ ತ್ರಿವೇಣಿಯವರಂತೆ ಸುಶೀಲಾದೇವಿಯವರೂ ಕೂಡಾ ಮನೋವೈಜ್ಞಾನಿಕ ನೆಲೆಯಲ್ಲಿಯೇ ಉತ್ತರಗಳನ್ನು ಕಂಡುಕೊಂಡವರು. ‘ಮನಮಂದಿರ’, ‘ಬೆಂಕಿಯ ಒಡಲಲ್ಲಿ, ‘ಸ್ವಾಭಿಮಾನಿ’ ಕಾದಂಬರಿಗಳು ಈ ಹಿನ್ನೆಲೆಯನ್ನು ಹೊಂದಿದ್ದರೆ, ‘ಸೇಡು’, ‘ನಿನ್ನ ದಾರಿಯಲ್ಲೀಗ ನನ್ನ ಹೆಜ್ಜೆಗಳು ತಮ್ಮ ಸ್ವಸಾಮರ್ಥ್ಯದಿಂದಲೇ ಜಿಗಿದೆದ್ದು ನಿಂತು ಧೈರ್ಯವಾಗಿ ಹೋರಾಡುವ ಸ್ತ್ರೀಶಕ್ತಿಯ ಜೀವಂತಿಕೆ ಇದೆ.
‘ಮುಗ್ಧಮನ’, ‘ತುಂಗ-ಉತ್ತುಂಗ’, ‘ತಿರುಗುಬಾಣ’ಗಳಂತಹ ಶ್ರವ್ಯನಾಟಕಗಳು ರಾಷ್ಟ್ರೀಯ ರೇಡಿಯೋ ನಾಟಕಗಳಾಗಿ ನಾಡಿನಾದ್ಯಂತ ಬಿತ್ತರಗೊಂಡಿವೆ. ಪುಸ್ತಕಗಳಾಗಿ ಪ್ರಕಟವಾಗದೇ ಇದ್ದರೂ ಆಕಾಶವಾಣಿಯಿಂದ ಪ್ರಸಾರವಾದ ನಾಲ್ಕಾರು ನಾಟಕಗಳು, ಸಾಂದರ್ಭಿಕವಾಗಿ ಬರೆದ ನೂರಾರು ಬಿಡಿ ಲೇಖನಗಳು ಅವರ ಬರಹದ ವಿಸ್ತಾರ, ವಿಪುಲತೆ ಮತ್ತು ಸಮೃದ್ಧತೆಯನ್ನು ಮುಂದಿಡುತ್ತದೆ.
ಸಾಹಿತ್ಯ ವಲಯದ ಜಂಜಾಟ ಚಳುವಳಿಗಳ ಮುಂದಾಳತ್ವ – ಹಿಂಬಾಲಿಕೆಗಳ ಮೀರಿ, ತಾವು ನಂಬಿದ ನಿಲುವು, ಬದುಕಿನ ಬದ್ಧತೆಯನ್ನು ಬರಹದಲ್ಲಿ ನಿರಂತರವಾಗಿ ಕಟ್ಟಿ ಕೊಡುತ್ತಿದ್ದಾರೆ. ಸಹಜ ಸಂಭಾಷಣೆ ಹೊರ ಆಕರ್ಷಣೆ, ಸೂಕ್ಷö್ಮ ಸಂವೇದನೆ ಅವರ ಒಳ ಹರಿವು. ಓದುಗರ ಪ್ರತಿಕ್ರಿಯೆಯೇ ಬರಹಕ್ಕೆ ಸಲ್ಲುವ ಸನ್ಮಾನ ಎಂಬ ನಿಷ್ಠೆಗೆ ಸಂದವರು.
ಕಥಾದ್ವನಿಯಲ್ಲಿ ಅನುಭವ ಮತ್ತು ಅನುಭೂತಿಗಳನ್ನು ತೆರೆದಿಡುತ್ತ ಐದು ದಶಕಗಳಿಂದ ಸಾಹಿತ್ಯ ಕ್ಷೇತ್ರದ ಸದ್ದಿಲ್ಲದ ಕಥೆಗಾರ್ತಿ ಪ್ರಮುಖ ಸೃಜನಶೀಲ ಮನಸ್ಸುಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟು ಗೌರವಿಸಲ್ಪಟ್ಟಿದ್ದಾರೆ. ಹಾಗಾಗಿಯೇ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕನ್ನಡ ಹಿತರಕ್ಷಣಾ ಸಮಿತಿಯಿಂದ ‘ರಾಜ್ಯೋತ್ಸವ ಪ್ರಶಸ್ತಿ’, ಚಳ್ಳಕೆರೆಯ ಕರುನಾಡು ಸಾಹಿತ್ಯ ಕಲಾವೇದಿಕೆಯ ‘ಮಾಸ್ತಿ ಕಥಾ ಪ್ತಶಸ್ತಿ’. ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯ ‘ವನಿತಾ ಸಾಹಿತ್ಯ ಶ್ರೀ’ ಪ್ರಶಸ್ತಿಗಳು ಲಭಿಸಿವೆ. ಪ್ರಚಾರಕ್ಕಾಗಿ ಪ್ರಶಸ್ತಿಗಾಗಿ ಎಂದೂ ಆಶಿಸದ ಈ ಕಥೆಗಾರ್ತಿಗೆ ಹೊಸತು ಪತ್ರಿಕೆಯವರು ಪ್ರತಿ ವರ್ಷ ಶ್ರೇಷ್ಠ ಮಹಿಳಾ ಬರಹಕ್ಕೆ ಕೊಡಮಾಡುವ ಬಹುಮಾನ ಸುಶೀಲಾರ “ನಡೆವುದೊಂದೇ ಭೂಮಿ” ಮತ್ತು “ಅಪರಿಮಿತ ಕತ್ತಲೊಳಗೆ” ಈ ಎರಡೂ ಕಥೆಗಳಿಗೆ ಸಂದಿದೆ.
‘ಮನೆ ಮನೆಯ ಕಥೆಗಳು’ ಸರಣಿಯ ಹಂದರ ಮತ್ತು ವ್ಯಾಪ್ತಿಯ ಬಹುಮುಖ ಫೇಸ್ ಬುಕ್ ಓದುಗರಿಗೂ ಮನಮುಟ್ಟಿದೆ. ಮಲ್ಲಿಗೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ಕೇಳಿದ್ರಾ ಸಮಾಚಾರ’ ಒಂದು ಬಗೆಯ ನ್ಯೂಸ್ ಚಾನಲ್ನಂತೆ. ನವಿರು ಹಾಸ್ಯ ನೋವು ರಹಿತ ವಿಡಂಬನೆಯ ಮಾದರಿಗಳು. ಹೇಳಿಯೂ ಹೇಳದಂತೆ ದಾಟಿಸುವ, ಹೇಳದೆಯೂ ಹೇಳಿದಂತೆ ಮುಟ್ಟಿಸುವ ನಯಗಾರಿಕೆ ಇವರ ನ್ಯಾನೊ ಕಥೆಗಳ ಸ್ವಾರಸ್ಯಕರ ಅಂತ್ಯ.
ಮೃದು ಸ್ವಭಾವದ, ನೇರ ಮತ್ತು ದಿಟ್ಟ ನುಡಿಯ ಮುಗ್ಧ ಮನಸ್ಸಿನ ನನ್ನ ಗೆಳತಿಯದು ನಿಷ್ಕಲ್ಮಶ ಪ್ರೀತಿ. ಉಳಿದವರ ಭಾವನೆಗಳಿಗೆ ಸ್ಪಂದಿಸುವ ಸ್ಫಟಿಕ ತರಂಗಿಣಿ. ವಾಸ್ತವದ ನೆಲೆಗಟ್ಟನ್ನು ಶೋಧಿಸಿ ಸುಸ್ಪಷ್ಟಗೊಳಿಸುವ ಪ್ರಯೋಗಶೀಲೆ. ಹೆಣ್ಣು ಮಕ್ಕಳು ತಮ್ಮ ಬದುಕಿನ ಸಮಸ್ಯೆಗಳ ಆಳದ ಸುಳಿಯ ಕತ್ತಲಿನಿಂದ ಹೊರಬರುವ ಬೆಳಕಿನ ದಾರಿಗಳು, ತಲುಪುವ ಹೊಳಪಿನ ಗುರಿಗಳು, ಬದುಕಿನ ಸಿರಿ ಸಂಪತ್ತು ಇವರ ಬರಹದ ಮೂಲ ದ್ರವ್ಯಗಳು.
ಬಿಚ್ಚುಗಣ್ಣಿನ ನೋಟ, ಮುಚ್ಚುಗಣ್ಣಿನ ಧ್ಯಾನ, ನಡುವಣ ಎಚ್ಚರ ಇವರ ಕಥಾ ಸಮನ್ವಯದ ಮುಖ್ಯ ಅಂಶಗಳು. ಕಥೆಯ ಪ್ರವೇಶ- ನಿರ್ಗಮನಗಳ ನಡುವಿನ ಪಯಣದ ಸಮಯ, ನಿರ್ದಿಷ್ಟತೆ ಇದೆಲ್ಲದರ ಇತಿಮಿತಿಯನ್ನು ತಮ್ಮದೇ ಶೈಲಿಯಾಗಿಸಿಕೊಂಡು ಕಥಾಲೋಕವನ್ನು ಪ್ರೀತಿಸಿ ಗೌರವಿಸಿದ್ದಾರೆ. ಭೇದ ಭಾವವಿಲ್ಲದ ನಿಷ್ಪಕ್ಷಪಾತವಾಗಿ ಇತರರ ಭಾವನೆಗಳನ್ನು ಅರ್ಥಮಾಡಿಕೊಂಡು ತುಂಬು ಹೃದಯದಿಂದ ಒಪ್ಪಿಕೊಳ್ಳುತ್ತಾರೆ, ಪ್ರೀತಿಯಿಂದ ಸ್ಪಂದಿಸುತ್ತಾರೆ.
ಕಥಾ ಜಗತ್ತು ಸುಶೀಲಾರಿಂದ ಮತ್ತಷ್ಟು ಹೊಸದಾರಿ, ಮಾದರಿ, ಸುಳಿವು-ಹೊಳಹುಗಳನ್ನು ಕಾಣಲಿ ಹಾಗೆಯೇ ಕಥಾಲೋಕ ಅವರ ಗೌರವವನ್ನು ಮತ್ತಷ್ಟು ಎತ್ತರಿಸಲಿ ಎಂಬ ಆಶಯದೊಂದಿಗೆ ನನ್ನ ಸಹೋದರಿ, ಆತ್ಮೀಯ ಗೆಳತಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುವ ಶುಭ ಸಂದರ್ಭದಲ್ಲಿ ಪರಿಚಯ ಮಾಡುವ ಅವಕಾಶ ದೊರೆತದ್ದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ ಸವಿನಯ ವಂದನೆಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ3 days agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ2 days agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ



