ಲೈಫ್ ಸ್ಟೈಲ್
ವಿಶ್ವ ಭಾಷೆಗಳ ಲಿಪಿಗಳ ರಾಣಿ ಕಸ್ತೂರಿ ಕನ್ನಡ
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿನಿಮಿರುವುದು
ಕಾಮನಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
ಕನ್ನಡದಲಿ ಹರಿ ಬರೆಯುವನು
ಕನ್ನಡದಲಿ ಹರ ತಿರಿಯುವನು
ಕುವೆಂಪುರವರ ಈ ಸಾಲುಗಳು ಅದೆಷ್ಟು ಅದ್ಭುತವಾಗಿವೆ ನೋಡಿ. ಕನ್ನಡ ಭಾಷೆ ಮತ್ತು ನೆಲದ ಬಗ್ಗೆ ಇದಕ್ಕಿಂತ ಇನ್ನೇನ್ ಹೇಳುವುದಕ್ಕೆ ಸಾಧ್ಯ ಜಗತ್ತಿನ ಅತ್ಯಂತ ಪುರಾತನ ಹಾಗೂ ಶ್ರೀಮಂತ ಭಾಷೆಗಳಲ್ಲೊಂದು ಕನ್ನಡ! ಪ್ರಕೃತಿಯ ಸೊಬಗು ನದಿಗಳ ಹರಿವು ಪಶ್ಚಿಮಘಟ್ಟಗಳ ಸೌಂದರ್ಯ,ಆಹ್ಹ್, ಎಷ್ಟು ವರ್ಣಿಸಿದ್ರು ಸಾಕಾಗದ ಏಕೈಕ ನಾಡು,ಕರ್ನಾಟಕ. ಭೂರಮೆಯ ಸ್ವರ್ಗದ ಕೆಲವೇ ಕೆಲವು ವೈಶಿಷ್ಟ್ಯಗಳನ್ನು ನಿಮ್ಮ ಮುಂದಿಡುವ ಚಿಕ್ಕ ಪ್ರಯತ್ನ ನಾನು ಮಾಡುತ್ತಿದ್ದೇನೆ.
ಸ್ನೇಹಿತರೆ,ನೀವು ವಿಕಿಪೀಡಿಯಾದ ಲೋಗೋ ನೋಡಿದಿರಾ? ಅದರಲ್ಲಿರುವ ಕೆಲವೇ ಕೆಲವು ಭಾರತೀಯ ಭಾಷೆಗಳ ಪೈಕಿ ಕನ್ನಡ ಕೂಡ ಒಂದು. ನೀವು ವಿಕಿಪೀಡಿಯಾದ ಲೋಗೋದಲ್ಲಿ ಕನ್ನಡದ ವಿ ಅಕ್ಷರವನ್ನು ಗಮನಿಸಿದಿರಾ? ಗಮನಿಸದಿದ್ದರೆ ಒಂದು ಸರಿ ನೋಡಿ ಕೊಂಡು ಬಿಡಿ. ಜಗತ್ತಿನ ವಿವಿಧ ಭಾಷೆಗಳ ಜೊತೆಗೆ ಭಾರತದ ಕೆಲವು ಭಾಷೆಗಳಿಗೆ ಸಿಕ್ಕಿರುವ ಈ ಗೌರವಕ್ಕೆ ಕನ್ನಡ ಕೂಡ ಪಾತ್ರವಾಗಿರುವುದು ನಮ್ಮ ಹೆಮ್ಮೆಯಲ್ಲವೇ .
ಕನ್ನಡದ ಸಾಹಿತ್ಯ ಕೂಡ ಅದ್ಭುತನೇ ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡುವ ಜ್ಞಾನಪೀಠ ಪ್ರಶಸ್ತಿಗಳ ಪೈಕಿ ಹಿಂದಿ ಭಾಷೆಯನ್ನು ಬಿಟ್ಟರೆ ಅತಿ ಹೆಚ್ಚು ಜ್ಞಾನಪೀಠ ಇರುವುದು ಕೂಡ ನಮ್ಮ ಕನ್ನಡನಾಡಿನಲ್ಲಿ, ಒಟ್ಟು ಎಂಟು ಜ್ಞಾನಪೀಠಗಳನ್ನು ಹೊಂದುವ ಕನ್ನಡ ಭಾಷೆಯ ಬಗ್ಗೆ ನಾವು ಹೆಮ್ಮೆ ಪಡದೆ ಇರುವುದು ಸಾಧ್ಯವೇ?
ಒಬ್ಬ ಪ್ರಖ್ಯಾತ ಚಲನಚಿತ್ರ ನಾಯಕ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವುದು ಕೂಡ ಕರ್ನಾಟಕದಲ್ಲಿ,ಅದು ಬೇರೆ ಯಾರು ಅಲ್ಲ ನಮ್ಮ ವರನಟ ಡಾಕ್ಟರ್ ರಾಜಕುಮಾರ್. ಅವರ ನಾದಮಯ ಎಂಬ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಿಕ್ಕಿವೆ.
ಭಾರತ ರಾಷ್ಟ್ರಧ್ವಜ ಇದೆಯಲ್ಲ ಅದನ್ನ ವಿನ್ಯಾಸಗೊಳಿಸಿದ್ದು ಆಂಧ್ರಪ್ರದೇಶದ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿ ಪಿಂಗಳಿ ವೆಂಕಯ್ಯ ಅನ್ನೋದು ನಿಮಗೆ ಗೊತ್ತು ಆದರೆ ನಮ್ಮ ರಾಷ್ಟ್ರೀಯ ಧ್ವಜವನ್ನು ತಯಾರು ಮಾಡಿ ಇಡೀ ದೇಶಕ್ಕೆ ಸರಬರಾಜು ಮಾಡುವ ಅಧಿಕೃತ ಅನುಮತಿ ಇರೋದು ಕರ್ನಾಟಕದ ಅದರಲ್ಲೂ ನಮ್ಮ ಉತ್ತರಕರ್ನಾಟಕದ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಸಂಘಕ್ಕೆ ಅನ್ನೋದು ಎಷ್ಟು ಜನಕ್ಕೆ ಗೊತ್ತಿದೆ? ರಾಷ್ಟ್ರೀಯ ಧ್ವಜದ ಅಧಿಕೃತ ತಯಾರಿಕೆಯ ನಮ್ಮ ರಾಜ್ಯಕ್ಕೆ ಸಿಕ್ಕಿದೆ ಅನ್ನೋದಕ್ಕಿಂತ ಹೆಮ್ಮೆ ಬೇರೆ ಇನ್ನೇನಿರೋದಕ್ಕೆ ಸಾಧ್ಯ?
ನಿಮಗೆ ತಾಜ್ಮಹಲ್ ಗೊತ್ತಲ್ವಾ, ಷಹಜಹಾನ್ ತನ್ನ ಪತ್ನಿಗಾಗಿ ನೂತನವಾಗಿ ನಿರ್ಮಿಸಿದ ಪ್ರೇಮಸೌಧ. ಅತ್ಯಾಕರ್ಷಕ ಪ್ರೇಕ್ಷಣೀಯ-ಸ್ಥಳ ಅನಿಸಿಕೊಂಡಿರುವುದು ನಿಮಗೆ ಗೊತ್ತಿದೆ. ಆದರೆ ತಾಜ್ಮಹಲ್ ನಂತರ ಅತಿ ಹೆಚ್ಚು ಪ್ರವಾಸಿಗರನ್ನ ಕೈಬೀಸಿ ಕರೀತಿರೋ ಮತ್ತೊಂದು ಪ್ರಖ್ಯಾತ ಸ್ಥಳ ನಮ್ಮ ಕರ್ನಾಟಕದಲ್ಲಿದೆ ಎನ್ನುವುದು ನಿಮ್ಮಲಿ ಎಷ್ಟು ಜನರಿಗೆ ಗೊತ್ತು?ತಾಜ್ಮಹಲ್ ನಂತರ ಅತಿ ಹೆಚ್ಚು ಪ್ರವಾಸಿಗರು ಭೇಟಿ ಕೊಡ್ತಿರೋ ಸ್ಥಳ ಎಂದರೆ ಅದು ನಮ್ಮ ಮೈಸೂರಿನ ಅರಮನೆ!
ಇಡೀ ಭಾರತದಲ್ಲೇ ಮೊಟ್ಟಮೊದಲ ಖಾಸಗಿ ರೇಡಿಯೋ ಸ್ಟೇಷನ್ ಸ್ಥಾಪನೆಯಾಗಿದ್ದು ಎಲ್ಲಿ? ಈ ಪ್ರಶ್ನೆ ಯಾರಾದ್ರೂ ಯಾವತ್ತಾದ್ರೂ ಕೇಳಿದ್ರೆ ಅನುಮಾನ ಇಲ್ಲದೆ ಹಿಂಜರಿಕೆಯಿಲ್ಲದೆ ಹೇಳ್ಬಿಡಿ ಅದನ್ನ ಸ್ಥಾಪಿಸಿದ್ದು ನಮ್ಮ ಕರ್ನಾಟಕದಲ್ಲಿ. 1935, ಗೋಪಾಲಸ್ವಾಮಿ ಮೊಟ್ಟಮೊದಲ ಖಾಸಗಿ ರೇಡಿಯೋ ಸ್ಟೇಷನನ್ನ ಸ್ಥಾಪಿಸಿದರು. ಆ ಹೆಮ್ಮೆಯ ಕಿರೀಟ ಕೂಡ ಕನ್ನಡಿಗರಾದ ನಮ್ಮದೇ .
ಇನ್ನು ನೀವು ಪ್ರತಿ ಎಲೆಕ್ಷನ್ಗೆ ವೋಟ್ ಹಾಕೋದಿಕ್ಕೆ ಹೋಗ್ತೀರಲ್ವಾ, ಆಗ ನಿಮ್ಮ ಕೈ ಬೆರಳಿಗೆ ಇಂಕ್ ಹಚ್ತಾರಲ್ಲ ಅದು ಎಷ್ಟು ಒರೆಸುಕೊಂಡ್ರು,ತೋಳುಕೊಂಡ್ರು ಅಳಸಿ ಹೋಗದ ಇಂಕು. ಅದು ಎಲ್ಲಿ ತಯಾರಾಗುತ್ತೆ ಅಂದುಕೊಂಡಿದೀರಾ? ಅದು ತಯಾರಾಗೋದು ನಮ್ಮ ಮೈಸೂರಿನಲ್ಲೇ. .ಭಾರತದ ಚುನಾವಣಾ ಆಯೋಗಕ್ಕೆ ಇಂಕ್ ಸರಬರಾಜು ಮಾಡುವುದು ನಮ್ಮ ಮೈಸೂರಿಂದ.
ಭಾರತದ ಮೊಟ್ಟಮೊದಲ ಅಂಡರ್ ವಾಟರ್ ಶೂಟಿಂಗ್ ಆದ ಸಿನಿಮಾ ಕೂಡಾ ಕನ್ನಡದಲ್ಲಿ! ಅದರ ಹೆಸರು “ಒಂದು ಮುತ್ತಿನ ಕಥೆ” ಡಾಕ್ಟರ್ ರಾಜಕುಮಾರ್ ಅಭಿನಯಿಸಿರುವ ಚಿತ್ರದ, ನಿರ್ದೇಶಕ ಶಂಕರ್ ನಾಗ್. ಅದಕ್ಕಿಂತ ಮೊದಲು “ಅನ್ಮೋಲ್ ಮೋತಿ” ಎಂಬ ಹಿಂದಿ ಚಿತ್ರ ಬಂದಿತ್ತಾದರೂ, ಅದು ಅಕ್ವೇರಿಯಂ ಅನ್ನು ನಿರ್ಮಾಣ ಮಾಡಿ ಅದರ ಮೂಲಕ ಚಿತ್ರಿಸಲಾಗಿದ್ದ ಸಿನಿಮಾ ಆದರೆ ಚಲನಚಿತ್ರ ಇತಿಹಾಸದಲ್ಲೇ ಮೊದಲ ಬಾರಿಗೆ ನೀರಿನ ಆಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟಮೊದಲ ಭಾರತೀಯ ಸಿನಿಮಾ ಅಂದರೆ ಅದು “ಒಂದು ಮುತ್ತಿನ ಕಥೆ” ಮಾತ್ರ.
ನಿಮಗೆ ಚಾಣಕ್ಯನ ಅರ್ಥಶಾಸ್ತ್ರ ಗೊತ್ತಿದೆ ಅಲ್ವಾ, ಅದರ ಪುಸ್ತಕದ ಹಸ್ತಪ್ರತಿ ಎಲ್ಲಿದೆ ಗೊತ್ತಾ? ಅನುಮಾನವೇ ಬೇಡ ಅದು ಇರೋದು ಕೂಡ ನಮ್ಮ ಕರ್ನಾಟಕದಲ್ಲೆ. ನಮ್ಮ ಹೆಮ್ಮೆಯ ಮೈಸೂರ್ ಇದೆ ಅಲ್ಲ ಅಲ್ಲಿನ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಈ ಅರ್ಥಶಾಸ್ತ್ರದ ಹಸ್ತಪ್ರತಿ ಇದೆ . ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್ ಭಾರತದ ಅತ್ಯಂತ ಪುರಾತನ ಗ್ರಂಥಾಲಯಗಳ ಪೈಕಿ ಒಂದು
ಪ್ರಕೃತಿ ವನ್ಯಜೀವಿಗಳ ವಿಷಯಕ್ಕೆ ಬರ್ತಿರಾ, ಅದರಲ್ಲೂ ಕರ್ನಾಟಕ ತನ್ನದೇ ಆದ ಘನತೆಯನ್ನು ಉಳಿಸಿಕೊಂಡಿದೆ ರಾಷ್ಟ್ರೀಯ ಹುಲಿ ಗಣತಿ ವರದಿ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಹುಲಿಗಳಿರುವ ಏಕೈಕ ರಾಜ್ಯ ಕರ್ನಾಟಕ.
ಅಷ್ಟೇ ಅಲ್ಲ,
- ಸೋಲಾರ್ ತಂತ್ರಜ್ಞಾನದಲ್ಲಿ ದೇಶದ ಮೊದಲ ರಾಜ್ಯ
- 3 ಭಾರತರತ್ನ ರನ್ನು ದೇಶಕ್ಕೆ ನೀಡಿದ ನಾಡು
- ದೇಶದ ಸಿಲಿಕಾನ್ ವ್ಯಾಲಿ ಎಂಬ ರಾಜಧಾನಿಯ ರಾಜ್ಯ
- ಪ್ರಪಂಚದ ಡೈನಾಮಿಕ್ ಸಿಟಿ ಹೊಂದಿರುವ ರಾಜ್ಯ
- ಕವಿ ಸಾಹಿತಿಗಳ ನಾಡು
ಕರ್ನಾಟಕ ಆಹಾರ ಪದ್ಧತಿಗಳನ್ನು ಹಿಂದೆಬಿಟ್ಟಿಲ್ಲ, ಇಡೀ ವಿಶ್ವ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮೈಸೂರುಪಾಕ್ ನಮ್ಮ ಕರ್ನಾಟಕದ ಅದು ಕೂಡ ಮೈಸೂರಿನ ಅರಮನೆಯಲ್ಲಿ ತಯಾರಾದದ್ದು. ಇನ್ನು ರವೆ ಇಡ್ಲಿ, ಅದು ಎಲ್ಲಿಂದ ಬಂತು ಅಂತ ಅನ್ಕೊಂಡಿದೀರಿ? 2ನೇ ವಿಶ್ವಯುದ್ಧದ ಸಮಯದಲ್ಲಿ ಅಕ್ಕಿಗೆ ಬರಾ ಬಂತಲ್ಲಾ ಆಗ ಇಡ್ಲಿ ಮಾಡೋದಕ್ಕೆ ಅಕ್ಕಿ ಇಲ್ಲದ ಕಾರಣ ರವೆ ಬಳಸಿ ಒಂದು ಪ್ರಯೋಗ ಮಾಡಿದರು ಆಗಿನ ಎಂ.ಟಿ.ರ್ ಹೋಟೆಲ್ ನವರು. ಅದು ಹೊಸ ರುಚಿ ಕೊಡ್ತು, ಅದನ್ನೇ ಮುಂದುವರೆಸಿದರು. ಅದೇ ನಾವು ಇವತ್ತು ತಿಂತಿರೋ ರವೆ ಇಡ್ಲಿ , ಮಸಾಲಾ ದೋಸಾ ರಾಗಿಮುದ್ದೆ ಚಿತ್ರನ್ನ ಇದೆಲ್ಲ ನಮ್ಮ ಕರ್ನಾಟಕದ ಹೆಮ್ಮೆ, ಇದೇ ನಮ್ಮ ಕರ್ನಾಟಕ ನಮ್ಮ ಹೆಮ್ಮೆ. ಹರಿ ಬರೆಯುವ ಭಾಷೆ, ಹರ ತಿರಿಯುವ ಭಾಷೆ ಕಸ್ತೂರಿ ಕನ್ನಡ ನಮ್ಮದಾಗಲಿ.
ಕನ್ನಡ ನಾಡಿನ ಲಕ್ಷಾಂತರ ವಿಷಯಗಳ ಪೈಕಿ, ಬೆರಳೆಣಿಕೆಅಷ್ಟು ವಿಶೇಷಗಳನ್ನು ನಾನು ಬರೆದಿದ್ದೀನಿ, ಈ ವಿಷಯವನ್ನ ನಿಮ್ಮವರೊಂದಿಗೆ ಶೇರ್ ಮಾಡಿ.
–ಮನನ್ ಜೈನ
ದಾವಣಗೆರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


