Connect with us

ದಿನದ ಸುದ್ದಿ

ತೊಗೋಳಿ, ಇವನದೊಂದು ನೆನಪು ಬರೆಯುವ ಸರದಿ ಬಂದಿದೆ

Published

on

  • ಕೇಸರಿ ಹರವೂ

ಕೃಷ್ಣ ನಾಡಿಗ ನನಗಿಂತ ಎಂಟೊಭತ್ತು ವರ್ಷಕ್ಕೆ ದೊಡ್ಡವ. ಆದರೂ ‘ಹೋಗೋಲೋ, ಬಾರೋಲೋ’ ಗೆಳೆಯರಾಗಿದ್ವಿ. ನಾನು ಇವನನ್ನು ಮೊದಲು ಕಂಡಿದ್ದು 1983ರಲ್ಲಿ. ಆಗತಾನೇ ಕಾಲೇಜು ಮುಗಿಸಿ, ಕಲಾಕ್ಷೇತ್ರದಲ್ಲೂ ಒಂದಷ್ಟು ಮೊಳೆ ಹೊಡೆದು ಚಿತ್ರನಿರ್ದೇಶನವನ್ನು ಪ್ರಾತ್ಯಕ್ಷಿಕವಾಗಿ ಕಲಿಯುವ ದೆಸೆಯಿಂದ ಗಾಂಧೀನಗರ ಅಲೆಯುತ್ತಿದ್ದೆ. ಹಾಗೊಮ್ಮೆ ಆನಂದರಾವ್ ವೃತ್ತದ ಸಂಗೀತಾ ಹೋಟೆಲಿನ ರೂಮೊಂದರಲ್ಲಿ ನಿರ್ದೇಶಕ ಕೆ.ವಿ. ಜಯರಾಂ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದರು. ಅಲ್ಲಿ ನಾಡಿಗ ಪ್ರೊಡಕ್ಷನ್ ಮ್ಯಾನೇಜರ್.

ಜಯರಾಂ ‘ತಮ್ಮಲ್ಲಿ ಈಗಾಗಲೇ ನಾಲ್ಕು ಜನ ಸಹಾಯಕರಿದ್ದಾರೆ, ಮುಂದಿನ ಚಿತ್ರದಲ್ಲಿ ನೋಡೋಣ’ ಎಂದು ಹೇಳಿದ್ದರು. ಸರಿ, ಎಂದು ನಾನು ಹೊರಗೆ ಕಾರಿಡಾರಿನಲ್ಲಿ ನಡೆಯುತ್ತಿದ್ದಾಗ ಒಳಗೆ ಕುಳಿತಿದ್ದ ನಾಡಿಗ ಅದೇ ರೂಮಿಂದ ಹೊರಬಂದು ‘ಲೇ, ತಡಿಯೋ’ ಎನ್ನುತ್ತಾ ನನ್ನನ್ನು ಸೇರಿಕೊಂಡ.

‘ಈತ ಪರಿಚಯವೇ ಇಲ್ಲ, ಈಗಲೇ ಏಕವಚನವೇ? ಇದೆಂಥಾ ಚಿತ್ರರಂಗವಯ್ಯಾ!’ ಎಂದು ನನ್ನ ಈಗೋನೋ, ಸ್ವಾಭಿಮಾನವೋ ಕೆಣಕಿತ್ತು. ಹತ್ತಿರ ಬಂದವನೇ ಹಠಾತ್ತನೆ ನನ್ನ ಹೆಗಲ ಮೇಲೆ ಕೈಹಾಕಿ ‘ಬಾ, ಕೆಳಗಡೆ ಕಾಫಿ ಕುಡಿಯೋಣ’ ಎಂದು ನನ್ನನ್ನು ಎಳೆದುಕೊಂಡು ನಡೆಯತೊಡಗಿದ. ನನ್ನ ಮುಖಭಾವದಿಂದ ಅವನಿಗೆ ನನ್ನೊಳಗೆ ಏನೇನೆಲ್ಲಾ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದಿತ್ತೆಂದು ಕಾಣುತ್ತದೆ.

ಕಾಫಿ ಕುಡಿಯುವಾಗ ಹೇಳಿದ, ‘ಹಂಗೆ ಮಾತಾಡಿಸಿದ್ದು ನಿನಗೆ ಗುರ್ ಅಂದಿರಬೇಕು, ಅಲ್ವಾ? ನಾನು ನೀನೂ ಇದೇ ಚಿತ್ರರಂಗದಲ್ಲಿ ಕೆಲವು ದಶಕಗಳ ಕಾಲ ಒಳ್ಳೇ ಗೆಳೆಯರಾಗಿ ಜೊತೆಗಿರ್ತೀವಿ ಕಣೋ, ತುಂಬಾ ಜನರ ಜೊತೆ ಹಂಗನಿಸಲ್ಲ, ಅದಿಕ್ಕೆ ಹಂಗನ್ದೇ…” ಎಂದು ಅಜ್ಜಂಪುರದ ಜವಾರೀ ಬ್ರಾಹ್ಮಣ ಭಾಷೆಯಲ್ಲಿ, ದೊಡ್ಡ ಗಂಟಲಿನಲ್ಲಿ ಗಹಗಹಿಸಿದ್ದ. ಸಿಗರೇಟು ಸೇದುವಾಗ ನಾನೂ ಅವನನ್ನು ಆಗಿನಿಂದಲೇ ಏಕವಚನದಲ್ಲೇ ಕರೆಯುವಂತೆ ಮಾಡಿದ್ದ.
ಅನಂತರದ ಹತ್ತಾರು ವರ್ಷ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವಾದರೂ ಒಂದೇ ಚಿತ್ರದಲ್ಲಿ ಕೆಲಸ ಮಾಡಲೇ ಇಲ್ಲ.

ಮಾತಿಗೆ ಸಿಕ್ಕಾಗಲೆಲ್ಲಾ ‘ನಿನ್ನ ಅಂತಃಶಕ್ತಿ ನಿನಗೇ ಗೊತ್ತಿಲ್ಲ ಕಣೋ’ ಎಂದು ಹೇಳುತ್ತಲೇ ಇರುತ್ತಿದ್ದ. ‘ಯಾರಿಗೂ ಗೊತ್ತಿರಲ್ಲ ಬಿಡೋ, ನಿನಗೆ ನಿನ್ನ ಶಕ್ತಿ ಗೊತ್ತಿದೆಯಾ?’ ಎನ್ನುತ್ತಿದ್ದೆ ನಾನು. ಇನ್ನೂ ಕೆಲವೊಮ್ಮೆ ‘ನನಗೆ ಚೆನ್ನಾಗಿ ಗೊತ್ತಿದೆ, ಬೇರೇಯವರಿಗೆ ಅದನ್ನು ಅರಗಿಸಿಕೊಳ್ಳೋ ವೈಶಾಲ್ಯ ಇಲ್ಲ’ ಎನ್ನುತ್ತಿದ್ದೆ. ‘ಬಡ್ಡೀಮಗನೇ, ಅದಿಕ್ಕೇ ನೀನು ನೀನೇ…’ ಎನ್ನುತ್ತಿದ್ದ. ಹೊಗಳಿಕೆ ಮಾತುಗಳು ಅವನಿಂದ ಹೊರಕ್ಕೆ ಸಹಜವಾಗಿ ಹರಿಯುತ್ತಿದ್ದವು. ನನಗೆ ಬಹಳ ಕಷ್ಟ.
ಕೆಲವು ಬಾರಿ ‘ಮನೇಲಿ ನನ್ನ ಹೆಂಡತಿ ಅಡಿಗೆಮನೆ ಡಬ್ಬೀನೆಲ್ಲಾ ನೀಟಾಗಿ ತೊಳೆದು ಹೊರಗೆ ಬಿಸಿಲಿಗೆ ಒಣ ಹಾಕಿದಾಳೆ’ ಎನ್ನುತ್ತಿದ್ದ. ಚಿತ್ರರಂಗದ ಕೆಲವರು ‘ಇದು ಇವನ ಮಾಮೂಲಿ ಡೈಲಾಗು’ ಎಂದು ಹಿಂದೆ ಆಡಿಕೊಳ್ಳುತ್ತಿದ್ದರು ಕೂಡಾ.

ಆದರೆ ಅವರ ಪರಿಸ್ಥಿತಿಯೂ ಇವನಿಗಿಂತ ಒಂದಿಂಚೂ ಉತ್ತಮವಾಗಿರಲಿಲ್ಲ. ಹೇಳಿಕೊಳ್ಳಲು ಅವರಿಗೆ ಸಂಕೋಚವಿತ್ತೋ ಏನೋ!
ಕೆಲವು ವರ್ಷ್ಗಳ ನಂತರ ಅದ್ಯಾವಾಗಲೋ ಅವನು ಮ್ಯಾನೇಜರ್ ಕೆಲಸ ಬಿಟ್ಟು ಸ್ಕ್ರಿಪ್ಟ್ ರೈಟರ್ ಆಗಿದ್ದ. ಅವನು ಬರೆದ ಅನೇಕ ಸ್ಕ್ರಿಪ್ಟುಗಳು ಆ ಚಿತ್ರದ ನಿರ್ದೇಶಕನ ಹೆಸರಲ್ಲಿ ಟೈಟಲ್ ಕಾರ್ಡಿನಲ್ಲಿ ಇರುತ್ತಿದ್ದವು. ಅದೇ ಕಾಲದಲ್ಲಿ ಮಗಳ ಮದುವೆಯನ್ನು ಬಹಳ ಕಷ್ಟಪಟ್ಟು ಸರಳವಾಗಿ, ಆದರೆ ಸಾಂಪ್ರದಾಯಿಕವಾಗಿ ಮಾಡಿದ್ದ. ನನಗೂ ಆಹ್ವಾನಿಸಿದ್ದ. ನನಗೆ ಕೂಡಾ ಆಗ ಆರ್ಥಿಕವಾಗಿ ಅನನುಕೂಲ ಇದ್ದಿದ್ದು, ಬೇಕೆಂದೇ ಮದುವೆಗೆ ಹೋಗಿರಲಿಲ್ಲ.

ಫೇಸ್ಬುಕ್ಕಿನಲ್ಲಿ ನಾನು ಬಲಪಂಥೀಯತೆಯ ಬಗ್ಗೆ ಅಸಹನೆಯಿಂದ ಬರೆಯುತ್ತಿದ್ದಾಗಲೆಲ್ಲಾ ಅವನಿಗೆ ನನ್ನ ಮೇಲೆ ಸಿಟ್ಟು ಬರುತ್ತಿತ್ತೇನೋ! ಅಮೇಲಾಮೇಲೆ ಅವನು ಬಹುಶಃ ನನ್ನ ಪೋಸ್ಟುಗಳನ್ನು ನೋಡುವುದನ್ನೇ ಬಿಟ್ಟಿದ್ದನೇನೋ. ಆ ನಂತರ ನಾವು ಭೇಟಿ ಮಾಡಿದ್ದು ಬಹಳ ಕಡಿಮೆ. ಆಗಾಗ ಫೋನು ಮಾಡುತ್ತಿದ್ದವನು ಅದನ್ನೂ ಬಿಟ್ಟಿದ್ದ. ಬಿಡುವಿಲ್ಲವೆಂದೋ, ಅಥವಾ ಮೇಲಿನ ಕಾರಣಕ್ಕೋ ಗೊತ್ತಿಲ್ಲ.

ಆಮೇಲೆ ಮತ್ಯಾವಾಗಲೋ ಟಿವಿ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದ. ಬಹುಶಃ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವೀ) ಅವರು ತೀರಿಕೊಂಡ ನಂತರ ಅವರ ಜಾಗವನ್ನು ಸೀರಿಯಲ್ಲಿನವರು ಇವನ ಮೂಲಕ ತುಂಬಿಕೊಂಡಿದ್ದರೆಂದು ಅನಿಸುತ್ತದೆ. ಒಟ್ಟಲ್ಲಿ ಅವನ ಕೊನೆಯ ವರ್ಷಗಳಲ್ಲಿ ಸ್ವಲ್ಪ ಆರ್ಥಿಕವಾಗಿ ನೆಮ್ಮದಿಯಿಂದ ಇದ್ದನೇನೋ!
ಚಿತ್ರರಂಗಕ್ಕೆ ಬರುವಾಗ ಯಾರು ಯಾರು ತಮ್ಮ ಇಡೀ ಓದು, ಅನುಭವ, ಕಾಣ್ಕೆ ಮತ್ತು ಮಹತ್ವಾಕಾಂಕ್ಷೆ ಇಟ್ಟುಕೊಂಡು ಬರುತ್ತಾರೋ ಅಂಥವರನ್ನು ತನ್ನ ಜಿಗುಟಿಗೆ, ಜಿಡ್ಡಿಗೆ ಒಗ್ಗಿಸಿಕೊಂಡುಬಿಡುತ್ತೆ. ಬಂದಾದ ಮೇಲೆ ಅನಿವಾರ್ಯವಾಗಿ ಕೆಲವರು ಒಗ್ಗಿಯೂ ಬಿಡುತ್ತಾರೆ.

ಅಲ್ಲೋ ಅಥವಾ ಟಿವಿ ಮಾಧ್ಯಮದಲ್ಲೋ ಹಣ ಸಿಕ್ಕುವ ಕಸುಬನ್ನು ‘ಅವರಿಗೇನು ಬೇಕೋ ಅದನ್ನು ಕೊಡುತ್ತೇನೆ’ ಎಂದು ಬದುಕಿ ಹೀಗೆ ಕೊನೆಯಾಗುತ್ತಾರೆ. ಇಂತಹ ನೂರು ನಟನಟಿಯರು, ತಂತ್ರಜ್ಞರು, ಕಲಾವಿದರನ್ನು ನಾನು ತೋರಿಸುತ್ತೇನೆ ಬೇಕಾದರೆ. ನನ್ನಂತೆ ಕೆಲವೇ ಕೆಲವರು ಸೆಡ್ಡು ಹೊಡೆಯುತ್ತೇವೆ. ಹೊರಗೆ ಬರುತ್ತೇವೆ. ಪರ್ಯಾಯ ಕಟ್ಟುವ ಆಲೋಚನೆ ಮಾಡುತ್ತೇವೆ. ಸೋಲೋ ಗೆಲುವೋ ಮುಖ್ಯವಲ್ಲ, ಪ್ರಯತ್ನ ಮುಖ್ಯ ಎನ್ನುತ್ತೇವೆ. ನಾಡಿಗನಲ್ಲೂ ಆ ಶಕ್ತಿಯಿತ್ತು. ಆದರೆ ಅವನ ಬದುಕಿನ ಅನಿವಾರ್ಯಕ್ಕೋ, ಸಂಪ್ರದಾಯಸ್ಥ ಮನಸ್ಥಿತಿಗೋ ಅವನಲ್ಲಿ ಅದು ಸಾಧ್ಯವಾಗಲಿಲ್ಲ.
ಹೋಗೋ ಗೆಳೆಯಾ, ನಿನ್ನ ನೆನಪು ಸದಾ ಇರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ

Published

on

  • ಸಂಜಯ್ ಹೊಯ್ಸಳ

ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ ಮೊಸಳೆ ಸಂತತಿಗಳಿವೆ. ಅವುಗಳೆಂದರೆ..

ಉಪ್ಪು ನೀರಿನ ಮೊಸಳೆ (Saltwater crocodile) 
ಮಗ್ಗರ್/ಮಾರ್ಷ್ (Mugger)
ಘಾರಿಯಲ್ (Gharial)

ಇವುಗಳಲ್ಲಿ ಕರ್ನಾಟಕದಲ್ಲಿನ ನದಿಗಳಲ್ಲಿ, ಕೆಲವು ದೊಡ್ಡ ಕೆರೆಗಳಲ್ಲಿ ಕಂಡುಬರುವ ಮೊಸಳೆಗಳು ಮಗ್ಗರ್/ಮಾರ್ಷ್ ಮೊಸಳೆಗಳಾಗಿವೆ. ಕರ್ನಾಟಕದಲ್ಲಿ ಮೊಸಳೆಗಳು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಪಾತ್ರದಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಮೊಸಳೆಯ ದವಣೆಗೆ ಸಿಲುಕಿ‌ ಕೆಲವು ಸಾವು ನೋವಿನ ಪ್ರಕರಣಗಳು ಆ ಭಾಗದಲ್ಲಿ ವರದಿಯಾಗಿವೆ‌.

ಇನ್ನು ಉತ್ತರ ಕರ್ನಾಟಕದ ಭಾಗದ ಕೆಲವು ಪ್ರಮುಖ ನದಿಗಳ ಪಾತ್ರದಲ್ಲೂ ಮೊಸಳೆಗಳು ಆಗಾಗ್ಗೆ ಕಂಡುಬರುತ್ತವೆ. ನಾನು ನೋಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಮೊಸಳೆಗಳ ದಾಳಿ ಪ್ರಕರಣಗಳು ತುಂಬಾ ಕಡಿಮೆ ಎನ್ನಬಹುದು. ಈ‌ ಭಾಗದ ನದಿಗಳಲ್ಲಿ ಮೊಸಳೆಗಳ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರ ಇರಬಹುದು.

ಕಾವೇರಿ ನದಿಯಲ್ಲಿ ಅತಿಹೆಚ್ಚು ಮೊಸಳೆಗಳು‌ ಕಂಡು ಬರುವುದು ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಪಕ್ಷಿ ಧಾಮವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹಿಂದೆ ಪಂಚತಂತ್ರದಲ್ಲಿ ಮೊಸಳೆ ಮತ್ತು ಕೋತಿ‌ಕತೆಯಲ್ಲಿ ಮೊಸಳೆಯ ಹೆಂಡತಿಗೆ ಕೋತಿ‌ ನೇರಳೆ ಹಣ್ಣುಗಳನ್ನು ಹೊತ್ತೊಯ್ಯುವ ಕತೆಯಲ್ಲಿ ಗಂಡ ಮತ್ತು‌ ಹೆಂಡತಿ‌ ಮೊಸಳೆಯನ್ನು ಕಲ್ಪಿಸಿಕೊಂಡು ಮಾತ್ರ ನಾನು ಮೊದಲು ಅವುಗಳ ಸಹಜ ಆವಾಸಸ್ಥಾನದಲ್ಲಿ ಮೊಸಳೆಯನ್ನು ನೋಡಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ. ನಂತರ ಬಂಡೀಪುರ ದಟ್ಟಡವಿಯಲ್ಲಿ ಹರಿಯುವ ಮೂಲೆಹೊಳೆ/ ನುಗು ನದಿಯಲ್ಲಿ…‌ ನಂತರದ ದಿನಗಳಲ್ಲಿ ಕಬಿನಿ, ಪಾಲರ್ ಸೇರಿ ಬಹಳಷ್ಟು ಕಡೆ ಬಹಳಷ್ಟು ಮೊಸಳೆಗಳನ್ನು ನೋಡುವ ಅವಕಾಶ ಸಿಕ್ಕಿತು.

ಘಾರಿಯಲ್ ಗಳು ತುಂಬಾ ಅಪರೂಪದ ಮೊಸಳೆ ಸಂತತಿಗಳಾಗಿದ್ದು, ಸದ್ಯ ಉತ್ತರ ಭಾರತದ ಕೆಲವು ನದಿಗಳು ಹಾಗೂ ನೇಪಾಳದಲ್ಲಿ ಮಾತ್ರ ಇವು ಕಾಣಸಿಗುತ್ತಿವೆ. ಇವುಳನ್ನು IUCN red list ಗೆ ಸೇರಿಸಿದ್ದು, ಇವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಗಿದೆ.

ನಮಗೆಲ್ಲಾ ಗೊತ್ತಿರುವಂತೆ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಎಲ್ಲಾ ಜೀವಿಗಳ‌ ಇರುವಿಕೆ ಬಹಳ ಮುಖ್ಯ. ಜಲಚರಗಳಲ್ಲಿ ಅಗ್ರ ಪರಪಕ್ಷಕಗಳಲ್ಲಿ ಒಂದೆನಿಸಿದ ಮೊಸಳೆ ಜಲಚರ ಜೀವಿಗಳ ಸಮತೋಲನ ಸಾಧಿಸಿ ಅಲ್ಲಿನ ಜೀವವೈವಿಧ್ಯ ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ನಾವು ಮೊಸಳೆಗಳನ್ನು ಕೂಡ ಇತರ ಪ್ರಾಣಿಗಳಂತೆ ರಕ್ಷಿಸಬೇಕು.

ಮುಖ್ಯವಾಗಿ ಅವುಗಳ ಆವಾಸಸ್ಥಾನವಾದ ನದಿ, ಸರೋವರದಂತಹ ಜಲಮೂಲಗಳನ್ನು ಸಂರಕ್ಷಿಸಬೇಕು. ಅಲ್ಲಿ ಅಕ್ರಮ ಮರಳುಗಾರಿಗೆ ತಡೆದು, ಜಲಮಾಲಿನ್ಯ ನಿಯಂತ್ರಣ ಮಾಡಬೇಕು. ಹಾಗೆ ಪ್ಲಾಸ್ಟಿಕ್ ತ್ಯಾಜ್ಯಗಳು ನದಿ, ಸರೋವರಗಳನ್ನು ಸೇರದಂತೆ ಕ್ರಮವಹಿಸಬೇಕು. ಹಾಗೆಯೇ ಎಲ್ಲಾದರೂ ಮೊಸಳೆಗಳು ಕಂಡುಬಂದರೆ ಗಾಬರಿಯಾಗದೆ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. (ಬರಹ:ಸಂಜಯ್ ಹೊಯ್ಸಳ,ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending