ದಿನದ ಸುದ್ದಿ
ಆತ್ಮೀಯ ಮುಸ್ಲಿಂ ಗೆಳೆಯರಿಗಾಗಿ, ಗೌರವಪೂರ್ವಕವಾಗಿ..!
- ವಿವೇಕಾನಂದ. ಹೆಚ್.ಕೆ.
ಹೌದು, ನಿಮಗೆ ತ್ರಿವಳಿ ತಲ್ಲಾಖ್ ವಿಷಯದಲ್ಲಿ, ಬಾಬರಿ ಮಸೀದಿ ವಿವಾದದ ತೀರ್ಪಿನ ವಿಷಯದಲ್ಲಿ, ಗೋ ಮಾಂಸ ನಿಷೇಧದ ವಿಚಾರದಲ್ಲಿ, ಸಿಎಎ – ಎನ್ ಆರ್ ಸಿ ತಿದ್ದುಪಡಿಯಲ್ಲಿ ಒಟ್ಟಾರೆಯಾಗಿ ಭಾರತದ ಈಗಿನ ಸರ್ಕಾರದ ಧೋರಣೆಯ ಬಗ್ಗೆ ಅಸಮಾಧಾನ ಇರಬಹುದು ಅಥವಾ ಇದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅದರ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ಸಹ ಇತ್ತೀಚಿನ ವರೆಗೂ ನಡೆಯುತ್ತಿತ್ತು. ಅದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಹಕ್ಕು.
ಆದರೆ ಈ ನಡುವೆ ಅನಿರೀಕ್ಷಿತವಾಗಿ ಕೊರೋನಾ ವೈರಸ್ ಇಡೀ ದೇಶವನ್ನು ಆಕ್ರಮಿಸಿ ಜೀವ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸಾಹಸವಾಗಿದೆ. ಜಾತಿ ಧರ್ಮ ಭಾಷೆ ಪಕ್ಷ ಪಂಥ ದೇವರು ಎಲ್ಲವೂ ಹಿನ್ನೆಲೆಗೆ ಸರಿದಿದೆ ಮತ್ತು ಸರಿಯಲೇಬೇಕು.
ಮಾಧ್ಯಮಗಳಲ್ಲಿ ಸ್ವಲ್ಪ ಪಕ್ಷಪಾತ, ದುಡುಕುತನ, ಅತಿರಂಜಿತ ವರದಿಗಳು ಇದೆ ಎಂದೇ ಭಾವಿಸಿದರೂ,ಇತರೆ ಧರ್ಮದ ಕೆಲವು ಕಾರ್ಯಕ್ರಮಗಳು ಸಹ ನಡೆದವು ಎಂಬುದು ನಿಜವಾದರೂ ಇಲ್ಲಿ ಯಾವುದೇ ನೆಪ ಹೇಳದೆ, ಯಾವುದೇ ಕಾರಣ ನೀಡದೆ ವೈದ್ಯಕೀಯ ಕ್ಷೇತ್ರದ ಸಲಹೆಯಂತೆ ಸರ್ಕಾರಗಳು ತೆಗೆದುಕೊಳ್ಳುವ ತೀರ್ಮಾನಗಳನ್ನು ಸಂಪೂರ್ಣ ಬೆಂಬಲಿಸುವ ಕರ್ತವ್ಯ ಮತ್ತು ಜವಾಬ್ದಾರಿ ಎಲ್ಲರಿಗೂ ಇದೆ.
ವಿರೋಧಿ ಗುಂಪಿನವರು ಒಂದಷ್ಟು ರಾಜಕೀಯ ಗೊಳಿಸುವುದು, ಪ್ರಚೋದಿಸುವುದು ಇದ್ದರೂ ಅದಕ್ಕೆ ಈಗ ಹೆಚ್ಚಿನ ಮಹತ್ವ ಕೊಡಬಾರದು. ಈ ದೇಶದ ಹಕ್ಕು ಮತ್ತು ಕರ್ತವ್ಯಗಳು ನಿಮಗೂ ಸಹ ಸಮ ಪ್ರಮಾಣದಲ್ಲಿ ಇದೆ. ಇದನ್ನು ಈಗ ಏಕೆ ಹೇಳಬೇಕಾಯಿತೆಂದರೆ ಮಸೀದಿಗಳಲ್ಲಿ ಈಗಲೂ ಸಾಮೂಹಿಕ ಪ್ರಾರ್ಥನೆಯ ವರದಿಗಳು ಅಲ್ಲಲ್ಲಿ ಕೇಳಿ ಬರುತ್ತಿರುವುದರಿಂದ.
ಇದು ಸಾವು ಬದುಕಿನ ಮತ್ತು ಹಸಿವು ಅಸ್ತಿತ್ವದ ಪ್ರಶ್ನೆ. ಇಡೀ ಭಾರತೀಯ ಜನ ಸಮುದಾಯ ಆತಂಕದಿಂದ ಇದ್ದು ಪ್ರತಿ ಕ್ಷಣವನ್ನೂ ತುಂಬಾ ಎಚ್ಚರಿಕೆಯಿಂದ ಗಮನಿಸುತ್ತಿದೆ. ಈಗ ಇಡುವ ಪ್ರತಿ ಹೆಜ್ಜೆಯೂ ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತದೆ ಮತ್ತು ಜನರ ಮನಸ್ಸಿನಲ್ಲಿ ಉಳಿಯುತ್ತದೆ.
ಈಗಾಗಲೇ ಮನಸ್ಸುಗಳು ಒಡೆದಿವೆ. ಎರಡೂ ಕಡೆ ಪ್ರಚೋದನಾತ್ಮಕ ಮಾತುಗಳು ಪರಿಸ್ಥಿತಿ ಕೈ ಮೀರುವಂತೆ ಮಾಡಿದೆ. ಧರ್ಮ, ರಾಜಕೀಯ ಮನೆಯೊಳಗೆ ಮನಸ್ಸುಗಳೊಳಗೆ ಬಂದಾಗಿದೆ. ಧರ್ಮಾಂಧತೆ ದೇಶವನ್ನು ಆಕ್ರಮಿಸಿಕೊಂಡಿದೆ. ಮೊದಲಿನಿಂದಲೂ ಇದ್ದ ಹಿಂದೂ ಮುಸ್ಲಿಂ ವೈಮನಸ್ಯ ಈಗ ಇನ್ನೂ ದೊಡ್ಡದಾಗಿದೆ.
ಮುಸ್ಲಿಂ ಭಾಂಧವರೆ ನಿಮ್ಮ ಆತ್ಮಾವಲೋಕನಕ್ಕಾಗಿ ಇತ್ತೀಚಿನ ಒಂದು ವರದಿ
38.40 ಲಕ್ಷ ಜನರ ಸಾವು. ಕೇವಲ 9 ವರ್ಷಗಳಲ್ಲಿ.2011 ರಿಂದ ಇಲ್ಲಿಯವರೆಗೆ.ಸಿರಿಯಾ ದೇಶದ ಆಂತರಿಕ ಯುದ್ಧದಿಂದಾಗಿ.ಗಂಡಸರೆಷ್ಟೋ, ಹೆಂಗಸರೆಷ್ಟೋ, ಮಕ್ಕಳೆಷ್ಟೋ,.ಯಾವ ಯಾವ ಭೀಕರ ರೀತಿಯಲ್ಲಿ ಯಾತನೆ ಅನುಭವಿಸಿ ಸತ್ತರೋ. ಬಹುತೇಕ ತಮ್ಮ ಅರ್ಧ ಆಯಸ್ಸನ್ನೂ ಮುಗಿಸದೇ ತೀರಿ ಹೋದರು.ಅವರನ್ನು ಅಲ್ಲಾ ಎಂಬ ದೇವರು ಸೃಷ್ಟಿಸಿದ್ದರು, ಇಸ್ಲಾಂ ಎಂಬ ಧರ್ಮ ಬೆಳೆಸಿತ್ತು, ಷಿಯಾ ಸುನ್ನಿ ಖುರ್ದ್ ಎಂಬ ಹೆಸರುಗಳು ವಿಭಜಿಸಿದ್ದವು ಎಂದು ನಂಬಲಾಗುತ್ತದೆ. ಆದರೆ ಯಾವುದೂ ಅವರ ರಕ್ಷಣೆಗೆ ಬರಲಿಲ್ಲ, ಕೇವಲ ಸುಮಾರು 1.80 ಕೋಟಿ ಜನಸಂಖ್ಯೆಯ ದೇಶದಲ್ಲಿ ಘರ್ಷಣೆಗೆ ಸತ್ತವರು 38.40 ಲಕ್ಷ ಜನರು.
ನನಗವರು ಮನುಷ್ಯರು ಮಾತ್ರ
ಸೃಷ್ಟಿಯಲ್ಲಿ ಗಂಡು ಹೆಣ್ಣಿನ ಮಿಲನದಿಂದ ಮತ್ತೊಂದು ಜೀವ ಜನ್ಮ ತಾಳುತ್ತದೆ.ಸಿರಿಯಾದಲ್ಲಿ ಮಗು ಜನಸಿದರೆ ಮುಸ್ಲಿಂ ಎನ್ನುತ್ತಾರೆ. ಇಂಗ್ಲೆಂಡ್ ನಲ್ಲಿ ಜನಸಿದರೆ ಕ್ರಿಶ್ಚಿಯನ್, ಇಸ್ರೇಲ್ ನಲ್ಲಿ ಯಹೂದಿ, ಜಪಾನ್ ನಲ್ಲಿ ಬೌದ್ದ, ಭಾರತದಲ್ಲಿ ಹಿಂದೂ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ .ಈ ವ್ಯತ್ಯಾಸಗಳೇ ಮಾನವ ಕುಲಕ್ಕೆ ಶಾಪವಾಗಿ ಪರಿಣಮಿಸಿದೆ.
ಹಿಂದೆ ಕ್ರಿಶ್ಚಿಯನ್ ಧರ್ಮದ ಯೂರೋಪಿಯನ್ ದೇಶಗಳಲ್ಲೂ ಇದಕ್ಕಿಂತ ಭಯಂಕರ ಮಾನವ ಹತ್ಯಾಕಾಂಡಗಳು ನಡೆದಿವೆ.ಫ್ರೆಂಚ್ ಕ್ರಾಂತಿಯ ರಕ್ತಪಾತ, ಎರಡು ಮಹಾಯುದ್ಧಗಳು, ಇಟಲಿ ದಂಗೆ, ಹಿಟ್ಲರನ ಸಾವಿನ ಶಿಬಿರಗಳು, ರಷ್ಯಾ ದೌರ್ಜನ್ಯ ಎಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ.
ಹಾಗೆಯೇ ಹಿಂದೂ ಜೀವನಶೈಲಿಯ ಭಾರತದಲ್ಲೂ ಹಿಂಸೆಯ ಪ್ರಮಾಣ ಕಡಿಮೆ ಏನಿಲ್ಲ. ಕ್ರಿಸ್ತ ಪೂರ್ವದಲ್ಲೇ ಬುದ್ದ ಮಹಾವೀರರು ಅಹಿಂಸೆಯ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ ಎಂದರೆ ಆಗಲೇ ಹಿಂಸೆಯ ಪ್ರಮಾಣ ಎಷ್ಟಿತ್ತು ಎಂದು ಊಹಿಸಬಹುದು.
ಕಾರಣಗಳು ಏನೇ ಇರಲಿ
ಈ ಕ್ಷಣದಲ್ಲಿ ಪಾಕಿಸ್ತಾನ, ಇರಾನ್, ಇರಾಕ್, ಸಿರಿಯಾ, ಆಪ್ಘನಿಸ್ತಾನ, ಯೆಮೆನ್, ಟರ್ಕಿ ಮುಂತಾದ ಇಸ್ಲಾಮಿಕ್ ದೇಶಗಳೇ ಹೆಚ್ಚು ಸಾವು ನೋವಿಗೆ, ಆಂತರಿಕ ಕಲಹಗಳಿಗೆ ತುತ್ತಾಗುತ್ತಿವೆ.
ಈಗ ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ. ಎಲ್ಲಾ ಧರ್ಮಗಳ ಮೂಲ ಆಶಯ ಮೂಲೆಗುಂಪಾಗಿ ಕೇವಲ ಆಚರಣೆಗಳು ಮಾತ್ರ ಜಾರಿಯಲ್ಲಿವೆ. ಇದಕ್ಕೆ ಇಸ್ಲಾಂ ಸಹ ಹೊರತಲ್ಲ.
ಹೌದು, ಭಾರತೀಯ ಮುಸ್ಲಿಮರಲ್ಲಿ ಬಡತನ ಅಜ್ಞಾನ ಗಾಢ ಧಾರ್ಮಿಕ ನಂಬಿಕೆಗಳು ಮನೆ ಮಾಡಿವೆ. ಧರ್ಮ ಗುರುಗಳ ಮಾತಿಗೆ ಅತಿ ಹೆಚ್ಚಿನ ಮಹತ್ವ ನೀಡುತ್ತಾರೆ. ಪ್ರಚೋದನಕಾರಿಯಾಗಿ ಮಾತನಾಡುವ ಹಿಂದೂಗಳು ಸಹ ಇದನ್ನು ಗಮನಿಸಬೇಕು. ಆತಂಕದಿಂದ ಎಲ್ಲಾ ತಪ್ಪುಗಳನ್ನು ಒಂದು ಸಮುದಾಯದ ತಲೆಗೆ ಕಟ್ಟಬಾರದು. ಸಂಯಮ ಅಗತ್ಯ.
ವಿವೇಚನೆ ಅಗತ್ಯ. ಕರೋನ ಬಂದಿದೆ ಎಂಬ ಒಂದೇ ಕಾರಣದಿಂದ ದಿನ ಬೆಳಗಾಗುವುದರಲ್ಲಿ ಎಲ್ಲರಲ್ಲೂ ದಿಡೀರನೇ ಪ್ರಬುದ್ದತೆ ನಿರೀಕ್ಷಿಸಲಾಗುವುದಿಲ್ಲ. ಸಬ್ ಕಾ ಸಾಥ್ ಸಬ್ ವಿಕಾಸ್ ಕೇವಲ ಘೋಷಣೆಯಾಗಬಾರದು. ಅದು ನಡವಳಿಕೆಯಾಗಬೇಕು. ಮಾಧ್ಯಮಗಳಂತೆ ವಿವೇಚನಾರಹಿತವಾಗಿ ಕೂಗಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಹರಡಬಾರದು. ಅದರಿಂದ ದೇಶಕ್ಕೆ ಅಪಾಯವೇ ಹೆಚ್ಚು.
ಎಲ್ಲಾ ಅಲ್ಪಸಂಖ್ಯಾತರಿಗೆ ಇರುವ ಅಭದ್ರತೆಯ ನಡುವೆಯೂ, ಮುಸ್ಲಿಂ ಸಮುದಾಯದಲ್ಲಿ ಪ್ರಗತಿಪರ ಚಿಂತನೆಗಳು ಸಮೂಹ ಪ್ರಜ್ಞೆಯಾಗಿ ಜಾಗೃತವಾಗಬೇಕು. ಧರ್ಮದ ಮೇಲಿನ ಅವಲಂಬಿನೆ ಕಡಿಮೆಯಾಗಬೇಕಿದೆ. ಅದಕ್ಕೆ ಹಿಂದೂಗಳು ಸಹ ಪ್ರೇರಣೆಯಾಗಬೇಕೆ ಹೊರತು ಪ್ರಚೋದಕರಾಗಬಾರದು. ಸುಮಾರು 18 ಕೋಟಿ ಜನಸಂಖ್ಯೆಯ ಒಂದು ಸಮುದಾಯವನ್ನು ಅಭದ್ರತೆಗೆ ತಳ್ಳಿ ದೇಶದ ಅಭಿವೃದ್ಧಿ ಶಾಂತಿ ಸಾಧ್ಯವೇ ಇಲ್ಲ.
ಎರಡೂ ಧರ್ಮಗಳಲ್ಲಿ ಕ್ರಿಯೆ ಪ್ರತಿಕ್ರಿಯೆಗಳು ಪ್ರಚೋದನಾತ್ಮಕವಾಗಿದ್ದು ಇದೇ ಕಾರಣದಿಂದ ಧೈರ್ಯವಾಗಿ ಮಾತನಾಡುವ ಖಂಡಿಸುವ ಸತ್ಯವನ್ನು ಬಯಲಿಗೆ ಎಳೆಯುವ ಜನರು ಕಡಿಮೆಯಾಗಿದ್ದಾರೆ. ಧರ್ಮ ಒಂದು ಸೂಕ್ಷ್ಮ ವಿಷಯ ಎಂಬ ನೆಪದಿಂದ ಮಾತನಾಡಲು ಹೆದರುತ್ತಾರೆ. ತಮ್ಮ ತಮ್ಮ ಧರ್ಮ ದೇವರು ಗ್ರಂಥಗಳಲ್ಲಿ ಅಡಗಿರುವವರನ್ನು ನಾಗರಿಕ ಪ್ರಜ್ಞೆಗೆ ಎಳೆದು ತರಬೇಕಿದೆ. ಇದು ತುಂಬಾ ಕಷ್ಟ. ಆದರೂ ಮನುಷ್ಯನ ಉಳಿವಿಗಾಗಿ ನಿಂತ ನೀರಾಗಿ ಕೊಳೆತು ನಾರುತ್ತಿರುವ ಧಾರ್ಮಿಕತೆಯನ್ನು ಬಯಲಿಗೆ ಎಳೆಯಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳು ಇನ್ನಷ್ಟು ಭಯಂಕರ ಸ್ಥಿತಿ ತಲುಪುತ್ತದೆ. ಬಲವೇ ನ್ಯಾಯ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್ಕಿಟ್ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.
ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.
ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

