Connect with us

ರಾಜಕೀಯ

ಅಹಿಂಸೆ : ಎಂದಿಗೂ ಬತ್ತದ ನದಿಯ ನಿನಾದ

Published

on

ಸಂಘರ್ಷವನ್ನು ಸ್ಥಾಯಿಯಾಗಿಸಿ ಪ್ರಯೋಜನ ಪಡೆದುಕೊಳ್ಳುವ ಪ್ರಯತ್ನಗಳು ನಿರಂತರವಾಗಿ ಯಶಸ್ಸು ಕಾಣುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಹಿಂಸೆಯ ಮೌಲ್ಯದ ಆಧಾರದಲ್ಲಿ ಪರ್ಯಾಯ ರಾಜಕಾರಣ ರಾಷ್ಟ್ರದಾದ್ಯಂತ ರೂಪುಗೊಳ್ಳಬೇಕಾದ ಅನಿವಾರ್ಯತೆಯನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಡಿಸಿಕೊಳ್ಳಬೇಕಿದೆ. ದೇಶವೊಂದು ಇನ್ನೊಂದು ರಾಷ್ಟ್ರದ ಕುರಿತು ಸಿಟ್ಟಿಗೇಳುವಿಕೆ ಜಾಗತಿಕ ಮಟ್ಟದ ಸಂಘರ್ಷವನ್ನು ಸಂಕೇತಿಸಿದರೆ, ಜನರ ನಡುವೆಯೇ ನಡೆಯುವ ಜಗಳಗಳು ಆಂತರಿಕ ವ್ಯಗ್ರತೆಗೆ ಸಾಕ್ಷಿಯಾಗುತ್ತವೆ. ವಿವಿಧ ಸ್ತರಗಳಲ್ಲಿ ವ್ಯಗ್ರತೆಯು ವ್ಯಕ್ತಿಯೊಳಗೆ ಮೇಳೈಸಿಕೊಳ್ಳುತ್ತದೆ. ಅದು ವಿವಿಧ ವರ್ತನೆಗಳಲ್ಲಿ ವ್ಯಕ್ತವಾಗುತ್ತದೆ. ಆ ವರ್ತನೆಗಳು ಉಂಟುಮಾಡುವ ಪರಿಣಾಮಗಳು ವ್ಯಕ್ತಿಗತ ಹಾಗೂ ಸಾಮೂಹಿಕ ಸಂಘರ್ಷಗಳ ರೂಪದಲ್ಲಿ ಕಂಡುಬರುತ್ತವೆ. ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಅಧಿಕಾರ ಕೇಂದ್ರಗಳು ಈ ರೂಪಗಳನ್ನು ತಮ್ಮ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅತ್ಯಂತ ಚಾಣಾಕ್ಷಯುತವಾಗಿ ಬಳಸಿಕೊಳ್ಳುತ್ತವೆ. ದೇಶ, ಧರ್ಮ ಮತ್ತು ಜಾತಿಯ ಅಸ್ಮಿತೆಯ ಪ್ರಶ್ನೆಗಳನ್ನು ಮುನ್ನೆಲೆಗೆ ತಂದು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ರಾಜಕಾರಣ ಅತ್ಯಂತ ಯಶಸ್ವಿಯಾಗಿ ನಿಭಾಯಿಸಲ್ಪಡುತ್ತದೆ.

ಪ್ರಜಾಪ್ರಭುತ್ವವಾದಿ ಆಡಳಿತ ವಿನ್ಯಾಸಗೊಳಿಸಗೊಳಿಸಿಕೊಂಡಿರುವ ಅಭಿವೃದ್ಧಿ ಮತ್ತು ಅದಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ಅಂಥ ರಾಜಕಾರಣಕ್ಕೆ ಪೂರಕವಾಗಿರುವಂತೆಯೇ ಪಾತ್ರವನ್ನು ನಿರ್ವಹಿಸುತ್ತಿವೆ. ಟೊಳ್ಳುತನದ ಸಂಗತಿಗಳೊಂದಿಗೆ ಅಭಿವೃದ್ದಿಯನ್ನು ವ್ಯಾಖ್ಯಾನಿಸುವ ಪ್ರವೃತ್ತಿಯನ್ನು ಸಾರ್ವತ್ರಿಕಗೊಳಿಸುವ ಈ ಅಭಿವೃದ್ಧಿಯು ಅದಕ್ಕೆ ಸಹಕಾರಿಯಾಗಿರುತ್ತದೆ. ಪ್ರಶ್ನಿಸುವ ಬದಲಾಗಿ ಆ ಸಂಕುಚಿತ ರಾಜಕಾರಣವು ಅಧಿಕಾರ ಮತ್ತು ಪ್ರಭಾವವನ್ನು ಸ್ಥಿರವಾಗಿರಿಸಿಕೊಂಡು ಬಹುದೊಡ್ಡ ಸಾಮಾಜಿಕ ಪಲ್ಲಟದ ಸಾಧ್ಯತೆಗಳನ್ನು ಒಡೆಯುವುದರ ಕಡೆಗೆ ನಡೆದುಬಿಡುತ್ತದೆ. ಅಡ್ಡ ಎದುರಾಗುವವರನ್ನು ತಮ್ಮ ಪ್ರಭಾವೀ ಪ್ರಾಬಲ್ಯದ ಬಲದೊಂದಿಗೆ ಹತ್ತಿಕ್ಕಿಬಿಡುತ್ತದೆ. ಅಧಿಕಾರ ಕೇಂದ್ರಗಳ ಮೂಲಕ ದಾಟಿಕೊಂಡ ಶಿಕ್ಷಣವು ವ್ಯಕ್ತಿಗತ ಪ್ರಯೋಜನವಾದಿ ಯೋಚನೆಗಳನ್ನೇ ಬಿತ್ತುವುದರ ಕಡೆಗೆ ಆಸಕ್ತಿ ವಹಿಸುವುದರಿಂದ ಶಿಕ್ಷಿತ-ಸುಶಿಕ್ಷಿತ ವಲಯವೂ ಅನಕ್ಷರಸ್ತ ಸಮುದಾಯಗಳಲ್ಲಿರುವ ಮೌಢ್ಯವನ್ನೇ ಅಂತರ್ಗತ ಗುಣಲಕ್ಷಣವಾಗಿಸಿಕೊಳ್ಳುತ್ತದೆ. ಅದನ್ನು ಜನರೊಳಗೂ ವ್ಯಾಪಕವಾಗಿಸಲು ಪ್ರಯತ್ನಿಸುತ್ತದೆ. ಹೀಗಾದಾಗ ಹೊಸ ಪೀಳಿಗೆಯು ಅದರ ರಹಸ್ಯ ಕಾರ್ಯಸೂಚಿಯ ಭಾಗವಾಗಿರುವ ಅಪಮೌಲ್ಯೀಕೃತ ಅಂಶಗಳು ರೂಪಿಸುವ ಚೌಕಟ್ಟುಗಳಲ್ಲಿ ಬಂಧಿಯಾಗಿ ಯೋಚಿಸಲಾರಂಭಿಸುತ್ತದೆ.

ಸಾರ್ವಕಾಲಿಕ ಮೌಲಿಕ ರಾಜಕೀಯ ಆಂದೋಲನದ ಹೊಳಹುಗಳು

ಈ ಹಂತದಲ್ಲಿಯೇ ಸಂಘರ್ಷದ ಪರ ನಿಲ್ಲುವ ದೃಷ್ಟಿಕೋನಗಳನ್ನೇ ಮುಖ್ಯವಾಗಿಸಿಕೊಳ್ಳುತ್ತದೆ. ಅಹಿಂಸೆಯ ಮೌಲ್ಯದ ಸಕಾರಾತ್ಮಕತೆಯು ಹಿಂಸೆಯ ಪರವಾದ ವಿತಂಡವಾದಿ ಆಲೋಚನೆಗಳ ಭರಾಟೆಯಲ್ಲಿ ಹಿನ್ನೆಲೆಗೆ ಸರಿಯುತ್ತದೆ. ಇಂಥ ಸಂದರ್ಭದಲ್ಲಿ ಅಹಿಂಸಾತ್ಮಕ ಮನೋಧರ್ಮವನ್ನು ಮುನ್ನೆಲೆಗೆ ತಂದು ಅಧಿಕೃತಗೊಳಿಸುವ ಅಪ್ಪಟ ಪ್ರಯೋಗಶೀಲ ರಾಜಕಾರಣ ಮೊಳಕೆಯೊಡೆಯಬೇಕು. ಹಾಗಾಗುತ್ತಿಲ್ಲ. ಹಾಗಾಗುವುದಕ್ಕೆ ಸಾಮಾಜಿಕ, ರಾಜಕೀಯ, ಧಾರ್ಮಿಕ ಕೇಂದ್ರಗಳ ಮುಂಚೂಣಿ ಮುಖಂಡತ್ವ ಬಿಡುತ್ತಿಲ್ಲ. ತಾವು ಸಮಸ್ಯೆ ಎಂದು ಪರಿಭಾವಿಸಿಕೊಂಡಿರುವ ಜಟಿಲತೆಗೆ ಪ್ರಾಮಾಣಿಕವಾಗಿ ಪರಿಹಾರ ಹುಡುಕಿಕೊಳ್ಳುವ ಪ್ರಯತ್ನಗಳನ್ನೂ ನಡೆಸುತ್ತಿಲ್ಲ. ಅಂಥ ಪ್ರಾಮಾಣಿಕ ಹೆಜ್ಜೆಗಳು ಅಹಿಂಸೆಯ ಪರವಾದ ಅಲೆಯನ್ನು ಸೃಷ್ಟಿಸುವ ಸಾರ್ವಕಾಲಿಕ ಮೌಲಿಕ ರಾಜಕೀಯ ಆಂದೋಲನದ ಹೊಳಹುಗಳನ್ನು ಹೊಳೆಸುತ್ತವೆ. ಇದರ ಬದಲಾಗಿ ಮತ್ತೆ ಜಾತಿನಿಷ್ಠ ಮಿತಿಗಳನ್ನು ವಿಸ್ತರಿಸುವ, ಧರ್ಮದೊಳಗೆ ಇಲ್ಲದೇ ಇರುವ ಸಂಗತಿಗಳನ್ನು ಇತಿಹಾಸದೊಂದಿಗೆ ತಳುಕುಹಾಕುವ ಮತ್ತು ಅಂಥ ಸಂಕುಚಿತ ಪಠ್ಯಗಳ ಆಧಾರದಲ್ಲಿಯೇ ಅಧಿಕಾರ ರಾಜಕಾರಣವನ್ನು ಬದುಕಿಸಿಬಿಡುವ ಹುನ್ನಾರಗಳನ್ನು ಹೊಳೆಸಿಕೊಳ್ಳುವುದರ ಕಡೆಗೇ ಅತ್ಯುತ್ಸಾಹ ವ್ಯಕ್ತವಾಗುತ್ತಿದೆ. ಒಳ್ಳೆಯದನ್ನು ಹೇಳಿದರೆ ಸುಲಭಕ್ಕೆ ಒಪ್ಪಿಕೊಳ್ಳದ ಹಠಮಾರಿತನ ಅದರದ್ದು. ಗಾಂಧಿ ಜೀವಂತಗೊಳಿಸಿದ ಅಹಿಂಸೆಯ ಮಾದರಿಯ ಬಗ್ಗೆ ಪ್ರಸ್ತಾಪಿಸಿದರೆ ಅದು ದಿಢೀರನೆ ಅವಿವೇಕತನದ ಅತಿರೇಕವನ್ನು ಪ್ರದರ್ಶಿಸಿಬಿಡುತ್ತದೆ. ‘ಗಾಂಧಿ ಏನಿದ್ದರೂ ಆ ಕಾಲಕ್ಕೆ, ಈಗಲ್ಲ’ ಎಂದು ಉಡಾಫೆಯ ಮನೋಭಾವವನ್ನು ತೂರಿಬಿಡುತ್ತದೆ.
ಗಾಂಧಿಯ ವ್ಯಕ್ತಿತ್ವದೊಂದಿಗೇ ಬೆರೆತುಹೋಗಿದ್ದ ಅಹಿಂಸೆಯ ಮೌಲ್ಯವು ವರ್ತಮಾನದಲ್ಲಷ್ಟೇ ಅಲ್ಲ, ಭವಿಷ್ಯದ ಜಗತ್ತಿನ ಎಲ್ಲ ಬಗೆಯ ಸಂಘರ್ಷಗಳನ್ನು ಕೊನೆಗಾಣಿಸುವ ಪ್ರಾಕೃತಿಕ ದಿವ್ಯೌಷಧ ಎಂಬುದನ್ನು ಮನಗಾಣಲೇಬೇಕು. ಗಾಂಧಿಯನ್ನು ಅರ್ಥೈಸಿಕೊಳ್ಳದ ಮನಸ್ಸುಗಳು ಈ ಕ್ಷಣಕ್ಕೆ ತಮ್ಮ ಮೂಗಿನ ನೇರಕ್ಕೆ ತೀರ್ಮಾನವನ್ನು ಕೈಗೊಂಡುಬಿಡುತ್ತವೆ. ಸಂಪೂರ್ಣ ತಿಳುವಳಿಕೆ ಇಲ್ಲದೇ ರೂಪುಗೊಳ್ಳುವ ಅಂಥ ವ್ಯಕ್ತಿಗತ ನಿಲುವುಗಳು ಸಮೂಹಕ್ಕೂ ದಾಟಿಕೊಳ್ಳುತ್ತವೆ. ಗಾಂಧಿ ಮತ್ತು ಅವರು ಪ್ರತಿಪಾದಿಸಿದ ಅಹಿಂಸಾವಾದ ಅಪ್ರಸ್ತುತ ಎಂದು ಹೇಳುವ ಕಾಲಕ್ಕೆ ಅಹಿಂಸೆಯ ತಾತ್ವಿಕತೆಯೊಂದಿಗಿನ ಗಾಂಧಿ ವ್ಯಕ್ತಿತ್ವವನ್ನು ಸಮಗ್ರವಾಗಿ ತಿಳಿದುಕೊಳ್ಳುವ ಪ್ರಯತ್ನಗಳನ್ನೇ ನಡೆಸುವುದಿಲ್ಲ. ಆ ತಾತ್ವಿಕ ಆದರ್ಶವನ್ನು ವರ್ತಮಾನದ ಸ್ಥಿತಿಗತಿಗಳಿಗೆ ತಕ್ಕಂತೆ ಅನ್ವಯಿಸಿಕೊಳ್ಳುವ ನಮ್ಯತೆಯ ಹೆಜ್ಜೆಗಳನ್ನೇ ಅನುಸರಿಸದೇ ಸಾರಾಸಗಟಾಗಿ ತಿರಸ್ಕಾರದ ಭಾವನೆಗಳು ನೆಲೆಗೊಂಡರೆ ಪ್ರಯೋಜನವಿಲ್ಲ.

ಅಹಿಂಸೆ : ಫಿಫ್ಟಿ-ಫಿಪ್ಟಿ ಲೆಕ್ಕಾಚಾರದ ನೆಲೆಗಟ್ಟಿನ ಪರಿಭಾಷೆ..?

ಈಗಿನ ರಾಜಕೀಯ ಹೇಳಿಕೆಗಳು ಇಂಥ ತಿರಸ್ಕಾರದ ಭಾವನೆಗಳ ಆಧಾರದಲ್ಲಿಯೇ ರೂಪುಗೊಳ್ಳುತ್ತಿವೆ. ಅವುಗಳು ಜನರ ಅಭಿಪ್ರಾಯಗಳನ್ನೂ ನಿಯಂತ್ರಿಸುತ್ತಿವೆ. ಗಾಂಧಿ ಮತ್ತು ಅಹಿಂಸಾ ತಾತ್ವಿಕತೆಯ ಬಗ್ಗೆ ಹೊಸ ಪೀಳಿಗೆಯು ಅರ್ಧಂಬರ್ಧ ತಿಳಿದುಕೊಂಡ ಸಂದರ್ಭದಲ್ಲಿ ಪ್ರಬಲ ಕೇಂದ್ರಗಳು ಹಿಂಸೆಯೊಂದಿಗಿನ ಕಾರ್ಯತಂತ್ರಗಳನ್ನು ಪ್ರಯೋಗಿಸಿ ಯಶಸ್ಸು ಕಂಡುಕೊಳ್ಳುತ್ತವೆ. ಈ ಕಾರ್ಯತಂತ್ರಗಳನ್ನು ಅಧಿಕಾರ ಕೇಂದ್ರಗಳು ಸಂಘಟನೆಗಳ ನೆರವಿನೊಂದಿಗೆ ಪ್ರಯೋಗಿಸುತ್ತವೆ. ಈಗಾಗಲೇ ಆಗಿಹೋದ ಇತಿಹಾಸ, ಗಾಂಧಿಯೂ ಸೇರಿದಂತೆ ವಿವಿಧ ದಾರ್ಶನಿಕರ ಕುರಿತಾದ ಸಮಗ್ರ ವಿವರಗಳು ಮತ್ತು ತಾತ್ವಿಕತೆಯ ಶಕ್ತಿಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿರದ ಜನಸಮೂಹದ ಅಜ್ಞಾನವನ್ನು ತಮ್ಮ ರಹಸ್ಯ ಕಾರ್ಯಸೂಚಿಗಳ ಯಶಸ್ವಿಗೆ ಪೂರಕವಾಗಿ ಬಳಸಿಕೊಳ್ಳುತ್ತವೆ. ಇಂದು ಬಹುತೇಕ ಯುವಕರು ಹಿಂಸೆ ಮತ್ತು ಅಹಿಂಸೆಯನ್ನು ಫಿಫ್ಟಿ-ಫಿಪ್ಟಿ ಲೆಕ್ಕಾಚಾರದ ನೆಲೆಗಟ್ಟಿನ ಪರಿಭಾಷೆಯಲ್ಲಿ ಚರ್ಚೆಗೊಳಪಡಿಸುತ್ತಿದ್ದಾರೆ. ಇದರರ್ಥ ಐವತ್ತು ಪರ್ಸೆಂಟ್ ಹಿಂಸೆ, ಐವತ್ತು ಪರ್ಸೆಂಟ್ ಅಹಿಂಸೆ ಇರಬೇಕು, ಅಂದಾಗಲೇ ಬ್ಯಾಲೆನ್ಸ್ ಆಗುತ್ತದೆ ಎಂಬ ಸಂಕುಚಿತತೆಯ ವಾದಗಳನ್ನು ಮುಂದಿಡುತ್ತಿದ್ದಾರೆ. ಹಿಂಸಿಸುವ ಪ್ರಾಬಲ್ಯ ನಮ್ಮ ಜೊತೆಗಿದ್ದರೆ ಉಳಿದವರು ಭಯಪಡುತ್ತಾರೆ ಎಂದು ಹಿರಿಯರ ಮುಂದೆ ಅಪ್ರಬುದ್ಧ ಮಾತುಗಳನ್ನಾಡುತ್ತಿದ್ದಾರೆ. ಅವರೊಂದಿಗೆ ಚರ್ಚಿಸುವ ಉತ್ಸಾಹದಲ್ಲಿ ಗಾಂಧಿ ವ್ಯಕ್ತಿತ್ವ, ಅವರು ಪ್ರತಿಪಾದಿಸಿದ ಅಹಿಂಸಾ ಮೌಲ್ಯ, ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಅದು ನಿರ್ವಹಿಸಿದ ಮೌಲಿಕ ಪಾತ್ರ, ವರ್ತಮಾನದಲ್ಲಿ ಅದು ಅನ್ವಯಗೊಳ್ಳಬೇಕಾದ ಅವಶ್ಯಕತೆಗಳ ಬಗ್ಗೆ ಮಾತನಾಡಿದರೆ ಆ ಅಂಶಗಳನ್ನು ಆ ಕ್ಷಣಕ್ಕೆ ಸಂಕುಚಿತವಾಗಿ ಅರ್ಥೈಸಿಕೊಂಡು ಅಪ್ರಸ್ತುತವೆನ್ನಿಸುವ, ಅವಿವೇಕತನದ ವಾದವನ್ನು ಮುಂದಿಡುತ್ತಿದ್ದಾರೆ. ಮುಖ್ಯವಾಹಿನಿಯ ಮಾಧ್ಯಮಗಳ ಒಳಗೂ ಇಂಥ ವಾದಗಳನ್ನು ನೆಚ್ಚಿಕೊಂಡವರು ಇರುವುದರಿಂದ ಗಾಂಧಿ ಕುರಿತಾದ ಸಮಗ್ರ ಅರ್ಥೈಸಿಕೊಳ್ಳುವಿಕೆಯ ಜವಾಬ್ದಾರಿಯುತ ನಡೆಗಳು ಹಿನ್ನಡೆ ಅನುಭವಿಸುವಂಥ ಸ್ಥಿತಿ ನಿರ್ಮಾಣವಾಗಿದೆ.

ಅಹಿಂಸೆಯ ಸಾರ್ವಕಾಲಿಕತೆಯ ನಿದರ್ಶನಗಳು

ಇತಿಹಾಸದ ಪುಟಗಳಲ್ಲಿ ಅಹಿಂಸೆಯ ಸಾರ್ವಕಾಲಿಕತೆಯ ಶ್ರೇಷ್ಠ ನಿದರ್ಶನಗಳು ದಾಖಲಾಗಿವೆ. ಅವುಗಳು ವರ್ತಮಾನದ ಪೀಳಿಗೆಯ ಪ್ರಜ್ಞೆಯ ಅಂತಸತ್ವವನ್ನು ಮತ್ತಷ್ಟು ಪ್ರಖರಗೊಳಿಸುವ ರೀತಿಯಲ್ಲಿ ಮೇಳೈಸಿಕೊಳ್ಳಬೇಕು. ಆದರೆ, ಮೌಲಿಕ ಆದರ್ಶ ಹೆಜ್ಜೆಗಳು ಮತ್ತು ಅವುಗಳೊಂದಿಗಿನ ಇತಿಹಾಸದ ಅರಿವು ತಂದುಕೊಳ್ಳುವ ಯಾವುದೇ ಪ್ರಯತ್ನಗಳಲ್ಲಿ ತೊಡಗಿಕೊಳ್ಳದೇ ಅಗ್ರೆಸ್ಸಿವ್ ನಡವಳಿಕೆಗಳನ್ನೇ ಬಂಡವಾಳವಾಗಿಸಿಕೊಳ್ಳುತ್ತಿರುವ ಯುವ ಸಮೂಹವು ಪ್ರಬಲ ಶಕ್ತಿಗಳು ಸಾಕಿಕೊಳ್ಳುವ ರಾಜಕೀಯ ಪಕ್ಷಗಳ
ಕಾರ್ಯಕರ್ತರಾಗುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದೆ. ಹಿಂದಿನದ್ದನ್ನು ಅರಿತುಕೊಳ್ಳುವ ಸಂಯಮ, ಯಾರು ಯಾರನ್ನು ದಾರಿ ತಪ್ಪಿಸಿ ತಮ್ಮ ಶಕ್ತಿ ಸಂಪನ್ಮೂಲವನ್ನು ಯಾವ ಬಗೆಯ ಸಂಘರ್ಷಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತಾದ ಸ್ಪಷ್ಟ ತಿಳುವಳಿಕೆ, ಆ ಮೂಲಕ ಅಹಿಂಸೆಯೊಂದಿಗಿನ ಗಾಂಧಿವಾದವನ್ನು ಮುನ್ನೆಲೆಗೆ ತರುವಂಥ ಆದರ್ಶಯುತ ಹೆಜ್ಜೆಗಳೊಂದಿಗೆ ಗುರುತಿಸಿಕೊಳ್ಳಬಹುದಾದ ಅವಕಾಶವನ್ನೇ ಬಿಟ್ಟುಕೊಟ್ಟಿದೆ. ಈ ಕಾರಣಕ್ಕಾಗಿಯೇ ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆಯ ಬದಲು ಅಧಿಕಾರ ಸಂರಚನೆಯ ಕೇಂದ್ರಗಳನ್ನು ಬಲಪಡಿಸಿ ತಮ್ಮ ತಾತ್ಪೂರ್ತಿಕ ಆಸೆಗಳನ್ನು ಅವರು ಈಡೇರಿಸಿಕೊಳ್ಳುತ್ತಿದ್ದಾರೆ. ಬೈಕ್ ಕೊಳ್ಳಬೇಕು, ಕಾರ್ ಜೊತೆಗಿರಿಸಿಕೊಂಡು ಪ್ರತಿಷ್ಠೆ ಮೆರೆಯಬೇಕು, ಸುಸಜ್ಜಿತ ಮನೆ ಹೊಂದಬೇಕು, ಐಷಾರಾಮಿ ಬದುಕು ತಮ್ಮದಾಗಿಸಿಕೊಳ್ಳಬೇಕು – ಇಂಥವೇ ತಾತ್ಪೂರ್ತಿಕ ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಕಾರ್ಯಕರ್ತರಿಗೆ ಹಂತಹಂತವಾಗಿ ರಾಜಕೀಯ ಪಕ್ಷಗಳು ನೆರವಾಗುತ್ತವೆ. ಅಧಿಕಾರದ ಗಮ್ಯ ತಲುಪಿಕೊಳ್ಳಲು ಇವು ಸಂಘರ್ಷ ಸೃಷ್ಟಿಗೆ ಇಂಥ ಯುವ ಸಮೂಹವನ್ನೇ ಬಳಸಿಕೊಳ್ಳುತ್ತವೆ. ಆಗ ಹಿಂಸೆಯೇ ವ್ಯಾಪಕವಾಗುತ್ತದೆ. ಅಹಿಂಸೆಯ ತಾರ್ಕಿಕವಾದವನ್ನೇ ಅಲ್ಲಗಳೆಯುವಂಥ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತದೆ.

ಸಾಂಪ್ರದಾಯಿಕ ಸಂಕುಚಿತ ಮೂಲಭೂತವಾದಿ ಅಣೆಕಟ್ಟುಗಳು

ನಾವು ಎಷ್ಟೇ ಕೃತಿಗಳನ್ನು ಓದಿಕೊಂಡರೂ, ತಜ್ಞರ ಬರಹಗಳನ್ನು ಗೊತ್ತುಮಾಡಿಕೊಂಡರೂ ಗಾಂಧೀಜಿಯವರ ಅಹಿಂಸೆಯ ತಾತ್ವಿಕ ದಾರ್ಶನಿಕ ನದಿಯ ಜೀವಜಲದ ಬೊಗಸೆಯಷ್ಟು ಹನಿಗಳನ್ನಷ್ಟೇ ದಕ್ಕಿಸಿಕೊಂಡಿರುತ್ತೇವೆ. ಅದರ ಜೀವಂತಿಕೆಯ ಸಮಗ್ರ ಅಮೃತಧಾರೆಯನ್ನು ನಮ್ಮೊಳಗಿಳಿಸಿಕೊಳ್ಳುವ ನಿರಂತರ ಪ್ರಯತ್ನಗಳ ಮೂಲಕವೇ ಆ ತಾತ್ವಿಕತೆಯ ಹೊಳೆಯು ಮನುಷ್ಯಸಮೂಹದೊಳಗೆ ನೆಲೆಗೊಳ್ಳುತ್ತಾ ತನ್ನ ನಡಿಗೆಯನ್ನು ಮೂಡಿಸುತ್ತಾ ಸಾಗುತ್ತದೆ. ಅದು ಸಾಗಿದಲ್ಲೆಲ್ಲಾ ಮನುಷ್ಯತ್ವ ಮತ್ತು ಜೀವಪರ ನಿಲುವುಗಳ ಫಲವತ್ತತೆಯು ವ್ಯಾಪಕವಾಗುತ್ತಿರುತ್ತದೆ. ಆದರೆ, ಇಂಥ ತಾತ್ವಿಕ ನದಿಯ ಹರಿವನ್ನು ಅರ್ಧಕ್ಕೆ ತಡೆಗಟ್ಟಿ ಸಾಂಪ್ರದಾಯಿಕ ಸಂಕುಚಿತ ಮೂಲಭೂತವಾದಿ ಅಣೆಕಟ್ಟುಗಳನ್ನು ಕಟ್ಟಲಾಗುತ್ತಿದೆ. ಈ ಅಣೆಕಟ್ಟುಗಳೇ ಸುಖ, ಶಾಂತಿ, ನೆಮ್ಮದಿಯೊಂದಿಗಿನ ಅಭ್ಯುದಯದ ಬೆಳೆ ಬೆಳೆಯುವುದಕ್ಕೆ ಸಹಕಾರಿಯಾಗುತ್ತವೆ ಎಂಬ ತಪ್ಪುಕಲ್ಪನೆಯನ್ನೇ ಬಿತ್ತಿ ನಂಬಿಸಲಾಗುತ್ತಿದೆ. ಇಂಥ ಸಂಕೀರ್ಣತೆಯ ಮಧ್ಯೆ ಅಹಿಂಸೆಯ ಜೀವನದಿ ಬತ್ತದಂತೆ, ಅದು ಕಾಲದಿಂದ ಕಾಲಕ್ಕೆ ಅತ್ಯಂತ ಎಚ್ಚರದೊಂದಿಗೆ ದಾಟಿಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸುವ ಹೊಸದೊಂದು ಪರ್ಯಾಯ ರಾಜಕಾರಣದ ಮಾದರಿ ರೂಪುಗೊಳ್ಳಬೇಕಾಗಿದೆ. ಅದಕ್ಕಿಂತ ಮುಂಚೆ ಅಹಿಂಸೆಯ ತಾತ್ವಿಕ ನದಿಯ ಹರಿವು ನಿಲ್ಲಿಸುತ್ತಿರುವ ಶಕ್ತಿಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಆ ಶಕ್ತಿಗಳು ಈ ನದಿಯನ್ನು ಬತ್ತಿಸುವ ಪ್ರಯತ್ನದಲ್ಲಿ ತೊಡಗಿವೆ. ಅದರ ಚಲನೆಯ ಹರಿವಿನೊಳಗೆ ರಕ್ತಪಾತ ನಡೆಸಿ ಭಯ ಹುಟ್ಟಿಸಿ ತಾವು ಪ್ರಬಲರಾಗುವ ಸ್ವಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಿವೆ. ಜನರನ್ನು ಮರಳು ಮಾಡುವ ಮರಳುಗಾರಿಕೆಯನ್ನು ಇದೇ ಆವರಣದಲ್ಲಿಯೇ ಅತ್ಯಂತ ಚಾಣಾಕ್ಷತನದಿಂದ ನಿರ್ವಹಿಸುತ್ತಿವೆ. ಇದಕ್ಕೆ ಪರ್ಯಾಯವಾಗಿ ಅಪ್ಪಟ ಸಾತ್ವಿಕತೆಯೊಂದಿಗಿನ ರಾಜಕಾರಣ ರೂಪುಗೊಳ್ಳಬೇಕು. ಅಹಿಂಸೆಯು ಸಾರ್ವಕಾಲಿಕ ಸತ್ಯ. ಹಾಗಾಗಿಯೇ ಎಲ್ಲ ಕಾಲದ ಕೊಳಕುಗಳೊಂದಿಗೆ ಎದುರುಗೊಳ್ಳುತ್ತಲೇ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಅದು ಎಂದಿಗೂ ಬತ್ತದ ನದಿಯ ನಿನಾದದ ಹಾಗೆ. ಪ್ರಾಕೃತಿಕ ವಿಕೋಪಗಳಾದಾಗ ಅದರ ನಡಿಗೆಗೆ ಅಡ್ಡಿ-ಆತಂಕಗಳು ಎದುರಾಗುವ ಹಾಗೆ ಇದೀಗ ಪ್ರಬಲ ಶಕ್ತಿಗಳ ಉದ್ದೇಶಪೂರ್ವಕ ನಕಾರಾತ್ಮಕತೆಯ ಕಾರಣಕ್ಕಾಗಿ ಹಿಂಸೆಯೇ ಸರಿಯಾದದ್ದು ಎಂಬ ಸಂಕುಚಿತ ಅಭಿಪ್ರಾಯ ಮುನ್ನೆಲೆಗೆ ಬಂದಿದೆ. ಇದನ್ನು ಅಲ್ಲಗಳೆದು ಅಹಿಂಸೆಯೇ ನಿರ್ಣಾಯಕ, ಅದರ ಆಧಾರದಲ್ಲಿಯೇ ನವಭಾರತದ ನಿರ್ಮಾಣ ಎಂಬ ದೃಢಸಂಕಲ್ಪದೊಂದಿಗಿನ ಸನ್ಮತಿಯ ರಾಜಕಾರಣ ಶುರುವಾಗಬೇಕಿದೆ. ಅಹಿಂಸೆಯ ನಿನಾದದ ಮಾಧುರ್ಯದ ಮಾದರಿ ಜಗತ್ತನ್ನು ಸ್ವಚ್ಛಗೊಳಿಸಬೇಕಿದೆ.

-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ

ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ:ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ಮೇ.20 ರಂದು ನಡೆಯಲಿರುವ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆದುಕೊಂಡು ಹೋಗಲು ವಿಭಾಗದ ವತಿಯಿಂದ ಸುಮಾರು 200 ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ.

ಈ ದಿನದಂದು ಸಂಸ್ಥೆಯ ಬಸ್ಸುಗಳ ಸೇವೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲದ ಕಾರಣ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನುಡಿದಂತೆ ನಡೆದ ಸರ್ಕಾರಕ್ಕೆ 2 ವರ್ಷ | ಮೇ 20 ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ; 1.03 ಲಕ್ಷ ಹಕ್ಕುಪತ್ರ ವಿತರಣೆ : ಸಿಎಂ ಸಿದ್ದರಾಮಯ್ಯ

Published

on

1.03 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಂದ ಸ್ಥಳ ಪರಿಶೀಲನೆ

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಸುದ್ದಿದಿನ,ಬಳ್ಳಾರಿ:ರಾಜ್ಯ ಸರ್ಕಾರವು 2 ವ಼ರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇದೇ ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಕಾರ್ಯಕ್ರಮ ಆಯೋಜನೆ ಕುರಿತಂತೆ, ಶುಕ್ರವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

2023 ರ ಮೇ 20 ರಂದು ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದು ಈಗ ಎರಡು ವರ್ಷ ಪೂರೈಸುತ್ತಿದೆ. ಅಂದೇ ಕ್ಯಾಬಿನೆಟ್ ಸಭೆಯಲ್ಲಿ ಪಂಚ ಗ್ಯಾರಂಟಿ ಜಾರಿಗೆ ಕುರಿತಂತೆ ಚರ್ಚಿಸಲಾಗಿತ್ತು. ಪ್ರಥಮವಾಗಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷಿö್ಮ ಮತ್ತು ಯುವನಿಧಿ ಸೇರಿದಂತೆ ಹಂತ-ಹAತವಾಗಿ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಅವರು ಹೇಳಿದರು.

ಕಳೆದ ವಿಧಾನಸಭೆ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಬಹುಮತದಿಂದ ಆರಿಸಿ ಗೆಲ್ಲಿಸಿದಂತಹ ಪ್ರಜಾಪ್ರಭುತ್ವದ ಮತದಾರರಿಗೆ ನಮ್ಮ ಸರ್ಕಾರವು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ. ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 2024-25 ನೇ ಸಾಲಿನಲ್ಲಿ 51 ಸಾವಿರ ಕೋಟಿ ರೂ. ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಕಳೆದ ವಷÀð ಗ್ಯಾರಂಟಿ ಯೋಜನೆಗಳಿಗಾಗಿಯೇ 52.9 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಈ ವರ್ಷ 50.18 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ, ಅಗತ್ಯಬಿದ್ದಲ್ಲಿ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು.

2024-25 ನೇ ಸಾಲಿನಲ್ಲಿ 3,71,000 ಕೋಟಿ ರೂ. ಬಜೆಟ್ ಗಾತ್ರವಿತ್ತು. 2025-26 ನೇ ಸಾಲಿನಲ್ಲಿ ಬಜೆಟ್ ನ ಗಾತ್ರವನ್ನು 4,09,000 ಕೋಟಿ ರೂ. ಗೆ ಹೆಚ್ಚಿಸಲಾಗಿದೆ. ಅಂದರೆ ಸುಮಾರು 38,000 ಕೋಟಿ ರೂ. ಹೆಚ್ಚಳವಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ನುಡಿದಂತೆ ನಡೆದ ಸರ್ಕಾರ ನಮ್ಮದು ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲ. ನಮ್ಮ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಕೆಆರ್‌ಡಿಬಿ ಗೆ 5 ಸಾವಿರ ಕೋಟಿ ರೂ

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗೆ ನಮ್ಮ ರಾಜ್ಯ ಸರ್ಕಾರವು 5 ಸಾವಿರ ಕೋಟಿ ರೂ. ನೀಡಿದೆ. ಈ ಭಾಗದ 371 (ಜೆ) ವಿಶೇಷ ಸ್ಥಾನಮಾನವನ್ನು ನಮ್ಮ ಸರ್ಕಾರವೇ ಜಾರಿಗೊಳಿಸಿದ್ದು ಎಂದು ಮನನ ಮಾಡಿದ ಅವರು, ಕೇಂದ್ರ ಸರ್ಕಾರವು ತಿದ್ದುಪಡಿ ಬಳಿಕ ವಿಶೇಷ ಸ್ಥಾನಮಾನ ನೀಡಲು ಪ್ರತಿಬಿಂಬಿಸಿತ್ತು, ಆದರೆ ಈವರೆಗೆ ಒಂದು ರೂ. ಕೂಡ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಸರ್ಕಾರವು ವಸತಿ ಯೋಜನೆಯಡಿ ಒಂದೇ ಒಂದು ಮನೆ ನೀಡಲಾಗಲಿಲ್ಲ, ಈ ಬಾರಿ ವಸತಿ ಯೋಜನೆಯಡಿ ಮನೆ ವಿತರಿಸುವ ಕುರಿತಂತೆ ವಸತಿ ಸಚಿವರು ಪ್ರಸ್ತಾಪಿಸಿದ್ದಾರೆ ಎಂದರು.

1.03 ಲಕ್ಷ ಹಕ್ಕುಪತ್ರ ವಿತರಣೆ

ನಮ್ಮ ಸರ್ಕಾರವು ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದ್ದು, ಇನ್ನುಮುಂದೆಯೂ ನಡೆಯುತ್ತೇವೆ ಎಂದು ಜನರಿಗೆ ತಿಳಿಯಪಡಿಸಲು ಮೇ 20 ರಂದು ನಡೆಯುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಹಾಡಿ, ಹಟ್ಟಿ ಮತ್ತು ತಾಂಡಾ ಪ್ರದೇಶದ ಕನಿಷ್ಠ 1.03 ಲಕ್ಷ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಇದರಿಂದ ಜನರಿಗೆ ಸೌಲಭ್ಯ ಸಮರ್ಪಿಸುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಕಾರ್ಯಕ್ರಮಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು, ಶಾಸಕರುಗಳನ್ನು ಸಹ ಆಹ್ವಾನಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರಲಾಗುವುದು. ಕನಿಷ್ಠ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ. ಝೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಡಾ.ಹೆಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಣ್ಣನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಸಂಸದ ಈ.ತುಕಾರಾಮ್, ಶಾಸಕರಾದ ಹೆಚ್.ಆರ್.ಗವಿಯಪ್ಪ, ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಎಂ.ಪಿ.ಲತಾ, ಶ್ರೀನಿವಾಸ ನಾಯ್ಕ ಮತ್ತು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಮೊಹಮದ್ ನೊಂಗ್ಜಾಯ್ ಅಕ್ರಂ ಅಲಿ ಪಾಷಾ, ಎಸ್ಪಿಗಳಾದ ಡಾ.ಶೋಭರಾಣಿ.ವಿ.ಜೆ., ಶ್ರೀಹರಿಬಾಬು ಸೇರಿದಂತೆ ಅನೇಕರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ಯಾರಂಟಿಗೆ 90 ಸಾವಿರ ಕೋಟಿ ರೂ ಖರ್ಚು, ಗ್ಯಾರಂಟಿಯಿ0ದ ಸರ್ಕಾರ ದಿವಾಳಿಯಾಗಿಲ್ಲ : ಸಿಎಂ ಸಿದ್ದರಾಮಯ್ಯ

Published

on

  • ಗಿರೀಶ್ ಕುಮಾರ್ ಗೌಡ

ಸುದ್ದಿದಿನ,ವಿಜಯನಗರ:ಚುನಾವಣೆ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದು ಕಳೆದೆರಡು ವರ್ಷಗಳಿಂದ 90 ಸಾವಿರ ಕೋಟಿಗೂ ಹೆಚ್ಚು ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಿದೆ. ಇದರಿಂದ ರಾಜ್ಯದ ಆರ್ಥಿಕ ಅಭಿವೃದ್ದಿಯಲ್ಲಿ ಗಣನೀಯ ಸಾಧನೆ ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.

ಅವರು ಶುಕ್ರವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ, ಪ್ರಗತಿಯತ್ತ ಕರ್ನಾಟಕ ಸಮರ್ಪಣೆ ಸಂಕಲ್ಪ ಕಾರ್ಯಕ್ರಮವನ್ನು ಮೇ.20 ರಂದು ಸರ್ಕಾರದಿಂದ ಏರ್ಪಡಿಸಲಾಗಿದ್ದು, ಇದರ ಪೂರ್ವಸಿದ್ದತೆ ಪರಿಶೀಲನೆಗೆ ಆಗಮಿಸಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು, 2023 ರ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಪಕ್ಷ ಸರ್ಕಾರ ರಚನೆ ಮಾಡಿತು. ಮೊದಲ ಸಂಪುಟ ಸಭೆಯಲ್ಲಿಯೇ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತೀರ್ಮಾನಿಸಲಾಯಿತು. ಆದರೆ ವಿರೋಧ ಪಕ್ಷದವರು ಇದರಿಂದ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಅನೇಕ ಟೀಕೆಯನ್ನು ಮಾಡಿದವು. ಅಂದು ಟೀಕೆ ಮಾಡಿದವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಇಂದು ನಕಲು ಮಾಡುವಂತಾಗಿದೆ. ಈಗ ಕರ್ನಾಟಕದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವಾಗಿದೆ. ಇದಕ್ಕೆ ನಿದರ್ಶನ 2024-25 ರಲ್ಲಿ ಸರ್ಕಾರದ ಬಜೆಟ್ ಗಾತ್ರ ರೂ.3,71,000 ಕೋಟಿ, 2025-26 ರಲ್ಲಿ ಇದು ರೂ.4,09,000 ಕೋಟಿರೂಗಳಿಗೆ ಏರಿಕೆಯಾಗಿರುವುದು ಒಂದು ವರ್ಷದಲ್ಲಿ 38,000 ಸಾವಿರ ಕೋಟಿ ರೂಗಳು ಸರ್ಕಾರದ ಹೆಚ್ಚುವರಿ ಆದಾಯವಾಗಿದೆ. ಬಜೆಟ್ ಮಂಡನೆಯನ್ನು ಸಂಗ್ರಹವಾಗುವ ತೆರಿಗೆ ಮತ್ತು ಆದಾಯವನ್ನು ಆಧರಿಸಿ ಬಜೆಟ್ ಸಿದ್ದಪಡಿಸಲಾಗುತ್ತದೆ. ಆದಾಯ ಇಲ್ಲದೇ ಬಜೆಟ್ ಗಾತ್ರ ಹೆಚ್ಚುತ್ತಿರಲಿಲ್ಲ ಎಂದರು.

ಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿ ಕೆಲಸಗಳು ಕುಂಠಿತವಾಗಿವೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ ಗ್ಯಾರಂಟಿ ಜೊತೆಗೆ ಅಭಿವೃದ್ದಿಗೂ ಅನುದಾನ ನೀಡಿದ್ದು ಅನೇಕ ಕ್ಷೇತ್ರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇನ್ನೂರು, ಮುನ್ನೂರು ಮತ್ತು ಏಳುನೂರು ಕೋಟಿವರೆಗೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇಲ್ಲಿಯವರೆಗೆ ಗ್ಯಾರಂಟಿ ಯೋಜನೆಗಳಿಗಾಗಿ ರೂ.90,000 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ. ವಿರೋಧ ಪಕ್ಷದವರು ಅಭಿವೃದ್ದಿಗೆ ಹಣವಿಲ್ಲ ಎಂದು ಹೇಳುತ್ತಿದ್ದು, 2024-25 ರಲ್ಲಿ ಆಸ್ತಿ ಸೃಜನೆಗಾಗಿ ರೂ.51,000 ಕೋಟಿ ವೆಚ್ಚ ಮಾಡಲಾಗಿದೆ. 2025-26 ರಲ್ಲಿ ಆಸ್ತಿ ಸೃಜನೆಗಾಗಿ ರೂ.83,000 ಕೋಟಿ ವರೆಗೆ ವೆಚ್ಚ ಮಾಡುತ್ತಿದ್ದು ಗ್ಯಾರಂಟಿಗೆ ರೂ.50,018 ಕೋಟಿ ಮೀಸಲಿರಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನವನ್ನೂ ಸಹ ಪೂರಕ ಬಜೆಟ್‌ಲ್ಲಿ ನೀಡಲಾಗುತ್ತದೆ. ಆದರೆ ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದೆ ಎಂದರು.

ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ ಬದ್ದ

ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ ಕೆಕೆಆರ್‌ಡಿಬಿಗೆ ಕಳೆದ ಬಜೆಟ್‌ನಲ್ಲಿ ರೂ.5,000 ಕೋಟಿ ರೂಗಳು ನೀಡಿದ್ದು, ಈ ವರ್ಷವೂ ಅಷ್ಟೇ ಅನುದಾನ ನೀಡಲಾಗಿದೆ. ಆದರೆ ಹಿಂದಿನ ಸರ್ಕಾರ ಕೊನೆ ವರ್ಷ ರೂ.3,000 ಕೋಟಿ ರೂಗಳನ್ನು ಕೆಕೆಆರ್‌ಡಿಬಿಗೆ ನೀಡಿತ್ತು. 371ಜೆ ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು ಇದರ ಅಭಿವೃದ್ದಿಗೆ ಕೇಂದ್ರ ಅನುದಾನ ನೀಡಬೇಕಿತ್ತು. ಆದರೆ ಒಂದು ಬಿಡಿಗಾಸು, ಒಂದೇ ಒಂದು ರೂಪಾಯಿಯನ್ನು ನೀಡಿಲ್ಲ ಎಂದರು. ಮೇ.20 ರಂದು ಹೊಸಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ 1,03,000 ಜನರಿಗೆ ಕಂದಾಯ ಇಲಾಖೆಯಿಂದ ಆಸ್ತಿಯ ಹಕ್ಕುಪತ್ರಗಳನ್ನು ನೀಡಲಾಗುತ್ತದೆ. ಕಳೆದೆರಡು ವರ್ಷಗಳಲ್ಲಿ ಸರ್ಕಾರ ಜನರಿಗಾಗಿ ಮಾಡಿದ ಕೆಲಸಗಳನ್ನು ಜನರಿಗೆ ಸಮರ್ಪಣೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜನರು ಬರಲಿದ್ದಾರೆ. ಅಂದಾಜು ಮೂರು ಲಕ್ಷಕ್ಕಿಂತ ಹೆಚ್ಚಿನ ಜನರು ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಂಪುಟದ ಸಚಿವರು, ಶಾಸಕರು ಭಾಗವಹಿಸುತ್ತಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮವಾಗಿದ್ದು ವಿರೋಧ ಪಕ್ಷದ ನಾಯಕರನ್ನು ಸಹ ಅಹ್ವಾನಿಸಲಾಗಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳ ಸಮನ್ವಯತೆಯಿಂದ ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಕ್ಫ್, ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್‌ಖಾನ್, ಪ್ರವಾಸೋದ್ಯಮ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಣ್ಣನೀರಾವರಿ ಸಚಿವ ಎನ್.ಎಸ್.ಭೋಸರಾಜು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಯೋಜನಾ ಸಚಿವರಾದ ಡಿ.ಸುಧಾಕರ್, ಸಂಸದ ಈ.ತುಕಾರಾಂ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶೀನಿವಾಸ್, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಕಂಪ್ಲಿ ಶಾಸಕ ಗಣೇಶ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ, ಮೊಣಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಬಳ್ಳಾರಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ಮೊಹಮ್ಮದ್ ನೋಂಗ್ಜಾಯ್ ಅಕ್ರಮ್ ಷಾ ಅಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶ್ರೀಹರಿಬಾಬು.ಬಿ.ಎಲ್, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಇತರರಿದ್ದರು.

www.suddidina.com | contact : watsapp 9980346243
Continue Reading

Trending