Connect with us

ಲೈಫ್ ಸ್ಟೈಲ್

ಹೀಗೊಂದು ಹೆಬ್ಬಾವಿನ ಚಿಕಿತ್ಸೆ..!

Published

on

ಡಾ.ಎನ್.ಬಿ.ಶ್ರೀಧರ್ ಅವರು ಹೆಬ್ಬಾವಿಗೆ ಚಿಕಿತ್ಸೆ ನೀಡುತ್ತಿರುವುದು.
  • ಡಾ.ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು, ವೆಟರ್ನರಿ ಕಾಲೇಜು, ಶಿವಮೊಗ್ಗ

ನೇಕ ಸಲ ನಮಗೆ ಹೊಸ ರೀತಿಯ “ಪೇಶಂಟು”ಗಳು ಬಂದು ಅಚ್ಚರಿಗೊಳಿಸುವುದುಂಟು. ಅದರಲ್ಲೂ ಕಾಡಿನಿಂದ ಬರುವ “ರೋಗಿ” ಗಳ ಚಿಕಿತ್ಸೆ ಒಂದು ಸವಾಲು. ಪಶುವೈದ್ಯಕೀಯ ಓದುವಾಗ ಈ ರೀತಿಯ ಯಕ:ಶ್ಚಿತ್ ಹುಳ ಹುಪ್ಪಟೆಗಳಂತ ಪ್ರಾಣಿಗಳನ್ನು ಚಿಕಿತ್ಸೆ ಮಾಡಬೇಕಾಬಹುದಾದ ಸಂದರ್ಭವೆಂದೂ ಬರದು ಎಂದು “ವೈಲ್ಡ್ ಲೈಫ಼್ ಚಿಕಿತ್ಸೆ”ಯ ಪಾಠ ಮಾಡುವಾಗ ದಿವ್ಯ ನಿರ್ಲಕ್ಷ್ಯದಿಂದಿರುವುದು ನಮ್ಮಲ್ಲಿ ಅನೇಕರಿಗೆ ಸಾಮಾನ್ಯವಾಗಿತ್ತು. ಒಂದಿಬ್ಬರು ಸಹೋದ್ಯೋಗಿ ವಿದ್ಯಾರ್ಥಿಗಳು ಈ ರೀತಿಯ ತರಹೇವಾರಿ ಪ್ರಾಣಿಗಳ ಕ್ರಿಮಿಕೀಟಗಳ ಚಿಕಿತ್ಸೆಯಲ್ಲಿ ಆಸಕ್ತಿ ವಹಿಸುವುದು ಬಿಟ್ಟರೆ ಉಳಿದವರ ಆಸಕ್ತಿ ಅಷ್ಟಕ್ಕಷ್ಟೇ. ನಮ್ಮದೇನಿದ್ದರೂ ದನ, ಎಮ್ಮೆ, ಬೆಕ್ಕು, ನಾಯಿ, ಕುದುರೆ, ಕೋಳಿ, ಹಂದಿ ಎಂಬಿತ್ಯಾದಿ ಹಲವು ಹತ್ತು ಸಾಕು ಪ್ರಾಣಿ ಕುಲಕೋಟಿಗಳ ಚಿಕಿತ್ಸೆ ಬಿಟ್ಟರೆ ಉಳಿದ ಪ್ರಾಣಿಗಳ ಗೊಡವೆ ನಮಗ್ಯಾಕೆ ಎಂಬ ದಿವ್ಯ ನಿರ್ಲಕ್ಷ್ಯವಿತ್ತು.

ಆದರೆ ಕೆಲವೊಮ್ಮೆ ಆಮೆ, ಮೊಸಳೆ, ಉಡ,ಕರಡಿ, ಚಿರತೆ, ಕಾಡುಕೋಣ ಇವುಗಳ ಚಿಕಿತ್ಸೆ ದುತ್ತನೇ ಬಂದು ತಲೆ ಕೆರೆದುಕೊಂಡ ಘಟನೆಗಳು ಅನೇಕ. ಆಮೆಯಂತ ಪ್ರಾಣಿಗಳನ್ನು ಸಾಕಿ “ಡಾಕ್ಟ್ರೇ. ನಮ್ಮನೆ ’ಕಣ್ವ’ (ಆಮೆಯ ಹೆಸರು) ಯಾಕೋ ಫುಡ್ಡೇ ತಿಂತಿಲ್ಲ. ಜ್ವರಾ ಬಂದಿದೆ ಅನ್ಸತ್ತೆ. ಸ್ವಲ್ಪ ನೋಡಿ” ಎಂದಾಗ “ಎಲಾ..ಈ ಆಮೆಗೆ ಹ್ಯಾಗೆ ಜ್ವರ ಪರೀಕ್ಷೆ ಮಾಡೋದು?” ಪಾಠ ಮಾಡುವಾಗ ಸ್ವಲ್ಪ ಆಸಕ್ತಿ ವಹಿಸಬೇಕಿತ್ತು” ಎಂದುಕೊಳ್ಳುತ್ತಾ ಇಂಜೆಕ್ಷನ್ ಕೊಡಬೇಕೆಂದು ಅದರ ಕಾಲನ್ನು ಎಳೆದು ಹಿಡಿದು ಸೂಜಿ ಚುಚ್ಚಬೇಕೆಂದುಕೊಂಡರೆ ಇದ್ದಕ್ಕಿದ್ದಂತೆ ಲಬಕ್ಕೆಂದು ತಲೆ ಕಾಲುಗಳನ್ನು ಒಳಗೆಳೆದುಕೊಂಡು ಕೂರ್ಮಾವತಾರ ತಳೆದು ಪಶುವೈದ್ಯ ಜ್ಞಾನ ಅಣಕಿಸಿದ್ದಿದೆ.

ಬಹುಶ: ತೊಂಬತ್ತರ ದಶಕದ ದಿನಗಳಿರಬಹುದು. ಎಂದಿನಂತೆ ಪಶುಚಿಕಿತ್ಸೆಯಲ್ಲಿ ತೊಡಗಿದ್ದೆ. ಸಾಗರದ ಉರಗತಜ್ಞ ಮನ್ಮಥ ಕುಮಾರ್ ಸ್ಥಿರ ದೂರವಾಣಿಗೆ ಕರೆ ಮಾಡಿ “ಡಾಕ್ಟ್ರೇ. ಹೆಬ್ಬಾವಿಗೊಂದು ಚಿಕಿತ್ಸೆ ಆಗಬೇಕಿತ್ತು. ಆಸ್ಪತ್ರೆಯಲ್ಲಿರ್ತಿಲ್ಲಾ. ಬರ್ತಾ ಇರುವೆ” ಎಂದು ಅರ್ಧ ಘಂಟೆಯಲ್ಲಿ ಪ್ರತ್ಯಕ್ಷರಾದರು. ಜೊತೆಯಲ್ಲಿ ಅರಣ್ಯ ಇಲಾಖೆಯ ಖಾಕಿ ಪಡೆಯ ಸಾತ್ ಬೇರೆ. ನನ್ನ ಪೇಶಂಟ್ ಅವರ ಜೀಪಿನಲ್ಲಿಟ್ಟಿದ್ದ ಗೋಣಿಚೀಲದಲ್ಲಿತ್ತು. ಬೆಳಿಗ್ಗೆ ಸೋಮಾರಿತನದಿಂದ ಏಳುವ ಹುಡುಗರಿಗೆ “ಏಯ್. ಹೆಬ್ಬಾವಿನಂತೆ ಬಿದ್ದುಕೊಂಡಿದ್ದೆಯಲ್ಲೋ.. ಎಂದು ಬಯ್ಯುವವರು ನಿಜವಾಗಲೂ ಹೆಬ್ಬಾವಿನ ಸೋಮಾರಿತನ ಗಮನಿಸಬೇಕು. ಈ ಹೆಬ್ಬಾವು ಯಾರದೋ ಮನೆಯಲ್ಲಿ ದೊಡ್ಡ ಹೆಗ್ಗಣ ನುಂಗಿ ಹೊಟ್ಟೆ ಭಾರ ಆಗಿ ಸ್ವಲ್ಪ ರಿಲ್ಯಾಕ್ಸ್ ಮಾಡೋಣ ಎಂದು ಯಾರದೋ ಮನೆಯ ಒಳಗೆ ಸೇರಿ ಮಂಚದ ಅಡಿಗೆ ಸೇರಿಕೊಂಡು ಬಿಟ್ಟಿತ್ತಂತೆ.

ಮೊದಲೇ ಸೋಮಾರಿ. ಹೆಗ್ಗಣ ಹೊಟ್ಟೆಯಲ್ಲಿರುವುದರಿಂದ ಇನ್ನೂ ಸೋಮಾರಿಯಾಗಿ ಮಂಚದಡಿ ನಿದ್ದೆ ಹೊಡೆದಿದೆ. ಮನೆಯೊಡತಿ ಸೌತೆಕಾಯಿಯ ಜಾತಿಯ ಮೊಗೆ ಕಾಯಿಯ ಜ್ಯೂಸ್ ಮಾಡೋಣ ಎಂದು ಮಂಚದಡಿ ಒಂದೆರಡು ಹಣ್ಣಾದ ಮೊಗೆಕಾಯಿ(?)ಗಳಿಗಾಗಿ ಹುಡುಕಲು ತಡಕಾಡಿದಾಗ ನಿಧಾನವಾಗಿ ಮಿಸುಕಾಡುವ “ತಣ್ಣನೆ”ಯ ಸರೀಸ್ರಪ ಕೈಗೆ ತಾಗಿ ನಂತರ ಅದು ಹೆಬ್ಬಾವು ಎಂದು ಗೊತ್ತಾಗಿ ಗಾಬರಿಗೊಂಡಿದ್ದಾರೆ. ಮನೆಯವರು ಮತ್ತು ಸುತ್ತಲೂ ಇರುವ ಜನ ಈ ವಿಶೇಷ ಅತಿಥಿಯ ಬೀಳ್ಕೊಡುಗೆಯ ಸಮಾರಂಭವೇರ್ಪಡಿಸಲು ಪ್ರಯತ್ನ ಪಟ್ಟಿದ್ದಾರೆ. ಹೆಬ್ಬಾವೂ ಸಹ ಗಾಬರಿಗೊಂಡು ಪೆಟ್ಟಿಗೆಯಾಕಾರದ ಮಂಚದ ಗೂಡಿನಲ್ಲಿ ಸೇರಿಕೊಂಡು ಬಿಟ್ಟಿದೆ.

ಕಿರಿದಾದ ಗ್ಯಾಪಿನಿಂದ ಅದನ್ನು ಹೊರತರಲು ಅದರ ಉದ್ದನೆಯ ಬಾಲ ಹಿಡಿದು ಜನರೆಲ್ಲಾ ಸೇರಿ ಎಳೆದಾಗ ಹೆಗ್ಗಣ ಹೊಟ್ಟೆಯೊಳಗಿರುವುದರಿಂದ “ಹೊಟ್ಟೆ ಡುಮ್ಮಣ್ಣ”ನಾಗಿದ್ದರಿಂದ ಮಂಚದ ಸಣ್ಣ ಗ್ಯಾಪಿನಲ್ಲಿ ಸಿಕ್ಕಿ ಹಾಕಿಕೊಂಡು ಅದರ ಚರ್ಮ ಸುಲಿದು ಬಿಡಿಸಿದ ಹಲಸಿನ ಹಣ್ಣಿನ ಪರಿಸ್ಥಿತಿಯಾಗಿದೆ. ಚೀನಾದಲ್ಲಾದರೆ ನಮಗೆ “ಹೋಳಿಗೆಯೇ ಜಾರಿ ತುಪ್ಪಕ್ಕೆ ಬಿದ್ದಹಾಗೇ” ಎಂಬ ಗಾದೆಯ ಹಾಗೇ “ಹಾವು ಅಡಿಗೆ ಮನೆಗೆ ಬಂದಹಾಗೆ” ಎಂಬ ಗಾಧೆ ಅನ್ವರ್ಥವಾಗಿ ಎಲ್ಲರಿಗೂ ಇದೊಂದು ವಿಶೇಷ “ಹೆಬ್ಬಾವಿನ ಹಬ್ಬ”ವಾಗಿ ಅದಕ್ಕೆ ತರತರದ ಮಸಾಲೆ ಹಾಕಿ ವಿವಿಧ ಖಾದ್ಯ ಮಾಡಿ ಹುರಿದು ಮುಕ್ಕುತ್ತಿದ್ದರೇನೋ?. ಅಷ್ಟೊತ್ತಿಗೆ ಜನ ಮನ್ಮಥಕುಮಾರನ್ನು ಕರೆಸಿದಾಗ ಹೆಬ್ಬಾವಿಗೆ ಆದ ಗಾಯ ನೋಡಿ ಅವರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆ ಮಾಡಿದರು.

ಹೆಬ್ಬಾವು ತುಂಬಾ ಗಾಯಗೊಂಡಿತ್ತು. ಐದಾರು ಜನ ಹಿಡಿದು ಎಳೆದ ಹೊಡೆತಕ್ಕೆ ಹೊಟ್ಟೆಯ ಭಾಗದ ಚರ್ಮದ ಮೇಲ್ಪದರ ಹಿಸಿದು ಹೋಗಿ ಅಂಗಾಂಗಗಳೆಲ್ಲಾ ಹೊರಚೆಲ್ಲಿಕೊಂಡು ವಿಕಾರವಾಗಿ ಕಾಣುತ್ತಿದ್ದವು. ಅವೆಲ್ಲಾ ಕೆಸರುಮಯವಾಗಿ ಮೂಲ ಬಣ್ಣವೇನು ಎಂಬುದೇ ಗೊತ್ತಾಗುತ್ತಿರಲಿಲ್ಲ. ಇಷ್ಟಿದ್ದರೂ ಸಹ ಸಹ ಹೆಬ್ಬಾವು ಪಿಳಿ ಪಿಳಿ ಎಂದು ಉದ್ದನೆಯ ನಾಲಿಗೆಯನ್ನು ಹೊರಹಾಕಿ ಒಳಗೆಳೆದುಕೊಂಡು ತನ್ನ ಬದುಕಿರುವಿಕೆಯನ್ನು ನಿರ್ವಿಕಾರವಾಗಿ ತೋರಿಸುತ್ತಿತ್ತು.

ಇದರ ಚಿಕಿತ್ಸೆಗೆ ಸುಮಾರು ಎರಡು ತಾಸು ಸಮಯ ಬೇಕು. ನಮ್ಮ ಆಸ್ಪತ್ರೆಯಲ್ಲಿ ಆಗ ಅಪರೇಷನ್ ಟೇಬಲ್ಲು ಇರಲಿಲ್ಲ. ಎರಡು ಗಂಟೆಗಳ ಕಾಲ ಕುಳಿತು ಈ ಕೈಂಕರ್ಯ ಮಾಡಿದರೆ ಬೆನ್ನು ಸೊಂಟ ಬಿದ್ದು ಹೋಗುತ್ತಿತ್ತು. ಈ ಜೀವಿಯ ಚಿಕಿತ್ಸೆಗೆ ಯಾರನ್ನೇನು ಕೇಳುವುದು ಎಂದು ನನ್ನ ಮನೆಯಲ್ಲಿದ್ದ ಟೀಪಾಯಿಯನ್ನು ತರಿಸಿ ಅದನ್ನೇ ಅಪರೇಷನ್ ಟೇಬಲ್ ಮಾಡಿಕೊಂಡೆ. ಈಗಿನಂತೆ ಮೊಬೈಲು, ವಾಟ್ಸಾಪ್ಪುಗಳಿರದೇ ಇರುವುದರಿಂದ ಯಾರನ್ನು ಕೇಳುವುದು?.

ನನ್ನ ಬಳಿಯಿರುವ ಪಶುವೈದ್ಯಕೀಯ ಗ್ರಂಥಗಳನ್ನು ಕೆದಕಿ ಅಧ್ಯಯನ ಮಾಡಿ ಅವಶ್ಯವಿರುವ ಅರಿವಳಿಕೆಗಳು, ಜೀವನಿರೋಧಕಗಳು, ಹೊಲಿಗೆ ದಾರ, ಸೂಜಿ ಇವನ್ನೆಲ್ಲ್ಲಾ ಸಾಗರದ ಮೆಡಿಕಲ್ಲಿನಿಂದ ತರಿಸಿದೆ. ಮನ್ಮಥಕುಮಾರ್ ಹೆಬ್ಬಾವಿನ ನಿಯಂತ್ರಣ ಸಾಧಿಸಿಕೊಟ್ಟರು. ಯಾವುದೋ ಕಚೇರಿ ಕೆಲಸಕ್ಕೆಂದು ಕಾರ್ಗಲ್ಲಿನಿಂದ ಬಂದ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಶ್ರೀ ಪ್ರಭಯ್ಯಮಠ (ಅವರು ಈಗಿಲ್ಲ) ಮತ್ತು ಕೆರೆಯಪ್ಪ ಇವರೂ ಕೈಜೋಡಿಸಿದರು. ಅರಿವಳಿಕೆ ನೀಡಿದ ನಂತರ ಹೆಬ್ಬಾವಿನ ಹೊಟ್ಟೆಯಲ್ಲಿನ ವಿವಿಧ ಜೀವಜಠರಸಾಮ್ಲಗಳ ಸ್ನಾನದಿಂದ ಮಿಂದು ಇನ್ನೇನು ಜೀರ್ಣವಾಗಿ ಹಾವಿನ ರಕ್ತ ಸೇರಬೇಕಾಗಿದ್ದ ಅರೆ ಜೀವವಾಗಿದ್ದ ಹೆಗ್ಗಣವನ್ನು ಹೊರತೆಗೆದು, ಕರುಳಿನಂತಿರುವ ಅನೇಕ ಅಂಗಗಳನ್ನು ಸ್ವಚ್ಚಗೊಳಿಸಿ ಒಳಗೆ ಹಾಕಿ ವಿವಿಧ ಪದರಗಳಿಗೆ ಹೊಲಿಗೆ ಹಾಕಿ ಒಂದೆರಡು ಗಂಟೆಗಳ ಕಾಲದ ಪ್ರಯತ್ನದ ನಂತರ ಶಸ್ತ್ರಚಿಕಿತ್ಸೆ ಮುಗಿಯಿತು.

ಇದಾದ ನಂತರವೇ ಬಂದಿದ್ದು ನಿಜವಾದ ಪಜೀತಿ. ಈ ಉರಗಕ್ಕೆ ದಿನಾ ಜೀವ ನಿರೋಧಕ, ನಂಜುನಿವಾರಕ ಚುಚ್ಚು ಮದ್ದು ಒಂದು ವಾರ ನೀಡಬೇಕಲ್ಲ? ಯಾರು ನೀಡುವವರು? ಎಂಬ ಪ್ರಶ್ನೆ ಬಂತು. ಇಲ್ಲದಿದ್ದರೆ ಹೆಬ್ಬಾವು ನಂಜಾಗಿ ಸತ್ತು ಹೋಗುವ ಸಾಧ್ಯತೆ ಇತ್ತು. ಈ ಜೀವ ಜಂತಿಗೆ ಇಂಜೆಕ್ಷನ್ ಕೊಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ದಿನಾಲೂ ನಮ್ಮ ಆಸ್ಪತ್ರೆಯ ದರ್ಶನ ಮಾಡಿಸಲು ಹೇಳಿದೆ. ಅವರು ಅವರಿಗೆ ಇಂತಹ ಸಹಸ್ರ ಕೆಲಸ ಕಾರ್ಯಗಳಿವೆಯೆಂದೂ, ಕಾಡಿನ ಸಮಸ್ಥ ಜೀವಜಲಚರ ರಕ್ಷಣೆಯ ಭಾರ ಅವರ ಮೇಲಿದೆಯೆಂದೂ, ಸಾಗವಾನಿ, ಬೀಟೆ, ಶ್ರಿಗಂಧ ಇತ್ಯಾದಿ ದುಬಾರಿ ಮರಗಳನ್ನು ಮರಗಳ್ಳರಿಂದ ರಕ್ಷಣೆ ಮಾಡಬೇಕಾದ ಗುರುತರ ಜವಾಬ್ಧಾರಿಯಿರುವದರಿಂದ ನಮ್ಮ ಆಸ್ಪತ್ರೆಯಲ್ಲಿಯೇ ಇದನ್ನು “ಒಳರೋಗಿ”ಯಾಗಿ ಸೇರಿಸಿಕೊಂಡು ಚಿಕಿತ್ಸೆ ಮಾಡಬೇಕೆಂದು ಹಾಗೂ ಅವರು ದಿನಾ ಬಂದು ನಮಗೆ ಪೂರ್ಣ ಸಹಕಾರ ಕೊಡುವುದಾಗಿ ಕೋರಿಕೊಂಡರು. ಆಸ್ಪತ್ರೆಗೆ ಹೊಂದಿಕೊಂಡ ಮೊಲ ಸಾಕಣೆ ಕೇಂದ್ರವನ್ನು ಹೆಬ್ಬಾವಿಗೆ “ಒಳರೋಗಿ ಚಿಕಿತ್ಸಾ ಕೇಂದ್ರ” ಮಾಡಿ ಅಲ್ಲೊಂದು ಗೋಣಿಚೀಲ ಹಾಕಿ ಅದರ ಮೇಲಿಟ್ಟೆವು.

ಮೊದ ಮೊದಲು ತಣ್ಣಗೇ ಇರುವ ಈ ಶೀತರಕ್ತದ ಪ್ರಾಣಿಯನ್ನು ಮುಟ್ಟಲೂ ಅಸಹ್ಯಮಾಡಿಕೊಂಡು ಬೇಸರ ಪಟ್ಟುಕೊಂಡ ಕೆರಿಯಪ್ಪ ನಿಧಾನವಾಗಿ ಅದರ ಮೇಲೆ ಮಮತೆ ಬೆಳೆಸಿಕೊಂಡ. ಅದರ ಹಸಿವು ನೀಗಲು ಒಂದೆರಡು ಕಪ್ಪೆಗಳನ್ನು ಹಿಡಿದು ಆ ರೂಮಿನಲ್ಲಿ ಬಿಟ್ಟ. ಈ ಸೋಮಾರಿ ಹೆಬ್ಬಾವು ಚುರುಕಾಗಿರುವ ಕಪ್ಪೆಗಳನ್ನು ಬೆನ್ನು ಹತ್ತಿ ಬೇಟೆ ಮಾಡುವ ಬಗ್ಗೆ ಸಂಪೂರ್ಣ ಸಂಶಯವಿತ್ತು. ಈ ಕಪ್ಪೆಗಳೋ ಅವುಗಳ ಎಂದಿನ ಹುಟ್ಟುಗುಣದಂತೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಎಗರಾಡಿ ಇಡೀ ರೂಮಿನಲ್ಲಿ ಕುಣಿದು ಕುಪ್ಪಳಿಸಿ ಹೆಬ್ಬಾವಿನ ಮೈಮೇಲೆಯೂ ಸವಾರಿ ಮಾಡಿ ಅವು ಅದರ ಆಹಾರವಾಗುವ ನಮ್ಮ ಬಯಕೆಯನ್ನೇ ನಿವಾಳಿಸಿ ಒಗೆದವು.

ಹೆಬ್ಬಾವಿನ ಜಾತಿಯ ಹಾವುಗಳು ಆಹಾರವಿಲ್ಲದೆಯೂ ಅನೇಕ ದಿನ ಬದುಕಬಲ್ಲವು ಮತ್ತು ಇದಕ್ಕೆ ಆಹಾರ ಹಾಕುವ ವ್ಯರ್ಥ ಪ್ರಯತ್ನ ಬೇಡವೆಂದರೂ ಸಹ ಅದರ ನೈಸರ್ಗಿಕ ಅಹಾರವಾದ ಇಲಿಗಳು, ಮೊಟ್ಟೆ ಇತ್ಯಾದಿಗಳನ್ನು ಅದಕ್ಕೆ ತಿನ್ನಿಸುವ ನಿರಂತರ ಪ್ರಯತ್ನ ಕೆರಿಯಪ್ಪನಿಂದ ನಡೆದೇ ಇತ್ತು. ಆಗಾಗ ತನ್ನ ನಾಲಿಗೆಯನ್ನು ಹೊರಚಾಚಿ ಒಳಗೆಳೆದುಕೊಂಡು ತಾನು ಬದುಕಿರುವಿಕೆಯನ್ನು ಹೆಬ್ಬಾವು ಖಚಿತಪಡಿಸುತ್ತಿತ್ತು. ಈಗಾಗಲೇ ಅದು ವಿಷರಹಿತ ಮತ್ತು ಅಪಾಯರಹಿತ ಎಂದು ಗೊತ್ತಾಗಿರುವುದರಿಂದ ಆರಾಮವಾಗಿ ಅದಕ್ಕೆ ಒಂದೈದಾರು ದಿನ ಅವಶ್ಯಕ ಚುಚ್ಚುಮದ್ದು ನೀಡಿದೆವು.

ಚುಚ್ಚು ಮದ್ದಿನ ಮೂಲಕ ಔಷಧಿ ನೀಡದೆಯೇ ಇದಕ್ಕೆ ಗುಳಿಗೆ ತಿನ್ನಿಸಲಾದೀತೇ?. ಹತ್ತು ದಿನಗಳ ನಂತರ ಗಾಯ ವಾಸಿಯಾಗಿದ್ದರಿಂದ ಹಾಕಿದ ಹೊಲಿಗೆಯನ್ನೂ ಬಿಡಿಸಿಯಾಯ್ತು. ಇಷ್ಟಾದರೂ ಕಾಡುಕಾಯುವ ಗುರುತರ ಜವಾಬ್ದಾರಿ ಹೊಂದಿದ ಅರಣ್ಯ ಮತ್ತು ಹೆಬ್ಬಾವು ಹಿಡಿದು ಅದಕ್ಕೆ ಚುಚ್ಚುಮದ್ದು ನೀಡಲು ನಮಗೆ ಸಹಕಾರದ ಮಹಾನ್ ಆಶ್ವಾಸನೆ ನೀಡಿದ ಇಲಾಖೆಯ ಸಿಬ್ಬಂದಿಯ ಪತ್ತೆಯೇ ಇರಲಿಲ್ಲ.

ಹೆಬ್ಬಾವಿಗೆ ಅಪರೇಷನ್ ಮಾಡಿದ ಈ ಸುದ್ಧಿ ಮಾಧ್ಯಮದವರಿಗೆ ಹೇಗೋ ತಿಳಿದು ಅದು ಅನೇಕ ಪೇಪರ್ರುಗಳಲ್ಲಿ ಬಂದು ಸುತ್ತ ಮುತ್ತಲಿನ ಜನ ನಮ್ಮ ವಿಶೇಷ ಒಳರೋಗಿಯನ್ನು ನೋಡಲು ತಂಡೋಪ ತಂಡವಾಗಿ ಬರತೊಡಗಿದರು. ನಮ್ಮ ದಿನ ನಿತ್ಯದ ಕಾಯಕ ಬದಿಗೊತ್ತಿ ಹೆಬ್ಬಾವಿನ ಅಪರೇಶನ್ನಿನ ಕಥೆಯನ್ನೇ ಪ್ರಾರಂಭದಿಂದ ಹೇಳಿ ಹೇಳಿ ಸಾಕಾಗಿ ಹೋಯಿತು. ಶಾಲಾ ಮಕ್ಕಳು ಅಧ್ಯಯನ ಶಿಬಿರದಂತೆ ಬೇಟಿಕೊಡಲಾರಂಭಿಸಿದ್ದರಿಂದ ಹೆಬ್ಬಾವಿಗೂ ಕಿರಿ ಪ್ರಾರಂಭವಾಯಿತೇನೋ?

ಇದು ಪ್ರಾಣ ಬಿಟ್ಟರೆ ಹೆಬ್ಬಾವನ್ನು ಸ್ವರ್ಗಕ್ಕಟ್ಟಿದ ಪಶುವೈದ್ಯ ಸಿಬ್ಬಂದಿ ಇತ್ಯಾದಿ ಚಿತ್ರ ವಿಚಿತ್ರ ತಲೆಬರಹದಲ್ಲಿ ಸುದ್ಧಿ ಬರಬಹುದಾದ ಸಾಧ್ಯತೆ ನೆನೆದು ಅರಣ್ಯ ಇಲಾಖೆಯವರಿಗೆ ಈ ಹೆಬ್ಬಾವನ್ನು ಕೂಡಲೇ ಕಾಡಿಗೆ ಸೇರಿಸಬೇಕೆಂದು ಮೊರೆಯಿಟ್ಟೆ. ನನ್ನ ನಿರಂತರ ಮೊರೆ ಕೇಳಿ ಅವರು ಒಂದು ಶುಭ ದಿನದಂದು ಬಂದು ಅದನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಸಮೀಪದ ಅಭಯಾರಣ್ಯದಲ್ಲಿ ಬಿಟ್ಟ ಕೂಡಲೇ ಒಮ್ಮೆಯೂ ತಿರುಗಿ ನೋಡದೇ ಸರಸರನೇ ಹರಿದು ದಟ್ಟ ಕಾಡಿನಲ್ಲಿ ಕಣ್ಮರೆಯಾಯ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!

Published

on

ರೋಗ್ಯಕರ ಆಹಾರ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ತೆಂಗಿನ ಎಣ್ಣೆಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಗಳಲ್ಲಿ ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ ಅತಿ ಉತ್ತಮ. ಇದನ್ನು ಕೊಬ್ಬರಿ (ಒಣಗಿದ ತೆಂಗಿನಕಾಯಿ) ಯಿಂದ ಮಾಡಲಾಗುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ದೈನಂದಿನ ಜೀವನದಲ್ಲಿ ತೆಂಗಿನ ಎಣ್ಣೆ ಉಪಯೋಗಿಸಿ ಅದರ ಪ್ರಯೋಜನಗಳನ್ನು ಪಡೆಯಿರಿ :

ತೆಂಗಿನೆಣ್ಣೆಯಲ್ಲಿ ಲಾರಿಕ್ ಆಮ್ಲದಂಶವನ್ನು ಹೊಂದಿರುತ್ತದೆ. ತೆಂಗಿನೆಣ್ಣೆಯ ಬಳಕೆಯಿಂದ ಶಕ್ತಿ ದೊರಕುತ್ತದೆ ಮತ್ತು ತೂಕ ನಿರ್ವಹಣೆಯಲೂ ಸಹಾಯಮಾಡುತ್ತದೆ.

ಹೃದಯದ ಆರೋಗ್ಯ: ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ HDL (ಉತ್ತಮ) ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಲಿಪಿಡ್ ಆರೋಗ್ಯವನ್ನು ಸುಧಾರಿಸಬಹುದು ಎಂದು ಕೆಲವು ಅಧ್ಯಯನಗಳು ಸಾಬೀತುಪಡಿಸಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಕಾರಿ ಆರೋಗ್ಯ: ತೆಂಗಿನ ಎಣ್ಣೆಯು ಕೊಬ್ಬು-ಕರಗಬಲ್ಲ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಇರಿಟಬಲ್ ಬೋವೆಲ್ ಸಿಂಡ್ರೋಮ್ (IBS) ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉರಿಯೂತದ ಗುಣಲಕ್ಷಣಗಳು: ತೆಂಗಿನ ಎಣ್ಣೆಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲ ರಕ್ಷಣೆ: ತೆಂಗಿನೆಣ್ಣೆ ತಿನ್ನುವುದರಿಂದ ಆರೋಗ್ಯಕರ ಚರ್ಮ ಮತ್ತು ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಅಗತ್ಯವಾದ ಪೋಷಕಾಂಶಗಳು ಮತ್ತು ತೇವಾಂಶವನ್ನು ಒದಗಿಸುತ್ತದೆ. ತೆಂಗಿನ ಎಣ್ಣೆಯು ನಿಮ್ಮ ಕೂದಲಿಗೆ ಆಳವಾಗಿ ತೂರಿಕೊಂಡು, ಒಳಗಿನಿಂದ ಅವುಗಳನ್ನು ಪೋಷಿಸುತ್ತದೆ ಮತ್ತು ಆರೋಗ್ಯವನ್ನು ಹೊರಸೂಸುವ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆಯ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಅದೇ ಸಮಯದಲ್ಲಿ ಕೂದಲು ಒಡೆಯುವಿಕೆ ಮತ್ತು ವಿಭಜಿತ ತುದಿಗಳನ್ನು ತಡೆಯುತ್ತದೆ.

ರೋಗನಿರೋಧಕ ಬೆಂಬಲ: ತೆಂಗಿನೆಣ್ಣೆಯು ಲಾರಿಕ್ ಆಮ್ಲ ಮತ್ತು ಕ್ಯಾಪ್ರಿಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ದೇಹವು ಸೋಂಕುಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

ತೂಕ ನಿರ್ವಹಣೆ: ತೆಂಗಿನ ಎಣ್ಣೆಯು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಸಮತೋಲಿತ ಆಹಾರದಲ್ಲಿ ಬಳಸಿದಾಗ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು: ತೆಂಗಿನಕಾಯಿಯಲ್ಲಿ ಲಾರಿಕ್ ಆಮ್ಲವಿದೆ ಆದ್ದರಿಂದ ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳಿಂದ ಉಂಟಾಗುವ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ ನಿಮ್ಮ ಅಡಿಗೆ ಮನೆಯ ಸಂಗಾತಿಯಾಗಲಿ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು

Published

on

  • ರುದ್ರಪ್ಪ ಹನಗವಾಡಿ

ದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.

ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.

ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading

ದಿನದ ಸುದ್ದಿ

ಮಕ್ಕಳಿಗೆ ದೈನಂದಿನ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ .ಪಿ ಗಡಾದ್ ಸಲಹೆ

Published

on

ಸುದ್ದಿದಿನ,ಕುಂದಾಪುರ: ದೈನಂದಿನ ಆಹಾರ ಪದ್ಧತಿಯಲ್ಲಿ ತರಕಾರಿ ಹಣ್ಣುಗಳನ್ನು ಸೇರಿಸುವುದು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಲಭ್ಯ ಇರುವ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ತಾಯಂದಿರಿಗೆ ಡಾ. ಐ .ಪಿ ಗಡಾದ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಡುಪಿ ಜಿಲ್ಲೆ ಇವರು ತಮ್ಮ ಉದ್ಘಾಟನಾ ನುಡಿಗಳಿಂದ ಮನವಿ ಮಾಡಿದರು.

ನಮ್ಮ ಪಿ.ಜಿ.ಡಿ.ಎಚ್.ಪಿ.ಇ 7ನೇ ತಂಡದ ಪ್ರಶಿಕ್ಷಣಾರ್ಥಿ ಶ್ರೀಮತಿ ವೃಂದಾ.ಬಿ.ತಾಮಸೆ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದಲ್ಲಿ ಅಪೌಷ್ಟಿಕತೆಯ ಕುರಿತು ಸಂಶೋಧನಾತ್ಮಕ ಅಧ್ಯಯನವನ್ನು ಮಾಡಿ ಗ್ರಾಮದ ಎಲ್ಲಾ ಮಕ್ಕಳು ಮತ್ತು ತಾಯಂದಿರನ್ನು ಬೃಹತ್ ಮಹಾ ಮೇಳದ ಮೂಲಕ ಈ ಸಭಾಂಗಣದ ಕಾರ್ಯಕ್ರಮಕ್ಕೆ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆ ರೋಟರಿ ಕ್ಲಬ್ ಸ್ಥಳೀಯ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಕ್ಷಣ ಇಲಾಖೆ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದ್ದಾರೆ ಇವರೆಲ್ಲರಿಗೂ ತಮ್ಮ ಧನ್ಯವಾದಗಳನ್ನು ಡಾ. ಮಂಜುನಾಥ್ ಜೆ .ಎ .ಉಪನ್ಯಾಸಕರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರು ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶುಭ ಹಾರೈಸಿದರು.

ಮಳೆಗಾಲದಲ್ಲಿ ಮನೆಯ ಅಕ್ಕಪಕ್ಕದಲ್ಲಿ ನೀರು ನಿಲ್ಲುವುದು ಸಹಜ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಮತ್ತು ಮಲೇರಿಯದಂತಹ ಕಾಯಿಲೆಗಳು ಬರುತ್ತವೆ ಹಾಗಾಗಿ ಮಳೆಯ ನೀರು ನಿಲ್ಲದಂತೆ ಹರಿದು ಹೋಗುವ ಹಾಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸುತ್ತಾ ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ನ ಉಪಾಧ್ಯಕ್ಷರು ಶುಭ ಕೋರಿದರು.

ಅಂಗನವಾಡಿಗಳ ಮೂಲಕ ಅಪೌಷ್ಟಿಕ ಮಕ್ಕಳ ದತ್ತು ಪಡೆಯುವ ಯೋಜನೆಯನ್ನು ಅಗತ್ಯತೆ ಇರುವ ಕುಟುಂಬಗಳು ಪಡೆದುಕೊಳ್ಳಬೇಕು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ರಾಷ್ಟ್ರಧ್ವಜದ ತ್ರಿವರಣವುಳ್ಳ ಹಣ್ಣು ಹಂಪಲು ತರಕಾರಿ ಸೊಪ್ಪು ಬೇಳೆ ಕಾಳುಗಳು ಹಾಲು ಮೊಟ್ಟೆ ಮೀನು ಮಾಂಸ ಹೀಗೆ ಸಮತೋಲನ ಆಹಾರವನ್ನು ರೂಡಿಸಿಕೊಳ್ಳುವಂತೆ ಕುಂದಾಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಉಮೇಶ್ ಟಿ ಎಂ ಕರೆ ನೀಡಿದರು.

ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ಡ್ರೈಡೇ ಕಾರ್ಯಕ್ರಮ ಪ್ರಾರಂಭವಾಗಿದ್ದು ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ತುಂಬಿಟ್ಟುಕೊಳ್ಳುವ ಪರಿಕರಗಳನ್ನು ಸಂಪೂರ್ಣ ಖಾಲಿ ಮಾಡಿ ಹೊಸದಾಗಿ ನೀರನ್ನು ತುಂಬಿಸಿಕೊಳ್ಳಬೇಕೆಂದು ಉಡುಪಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಶಶಿಧರ್ ಅವರು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸ್ಥಳೀಯ ಸರ್ಕಾರೇತರ ಸಂಸ್ಥೆ ರೋಟರಿ ಕ್ಲಬ್‌ನ ಅಧ್ಯಕ್ಷ ಶ್ರೀ ಸತೀಶ್ ಎಂ ನಾಯಕ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಆರೋಗ್ಯ ಇಲಾಖೆ ಆಯೋಜಿಸುತ್ತಿರುವ ಹಲವಾರು ಕಾರ್ಯಕ್ರಮಗಳಲ್ಲಿ ರೋಟರಿ ಕ್ಲಬ್ ದೇಶಾದ್ಯಂತ ಸಹಕಾರ ನೀಡುತ್ತಿದೆ ಇದೇ ರೀತಿಯಾಗಿ ನಾವು ಸಹ ಮಕ್ಕಳು ಮತ್ತು ತಾಯಂದಿರಿಗೆ ಲಘುಉಪಹಾರ ವ್ಯವಸ್ಥೆ ಮಾಡಿದ್ದೇವೆ ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಮ್ಮ ಸಹಕಾರ ನೀಡುವುದಾಗಿ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮಕ್ಕಳ ದೈಹಿಕ ಬೆಳವಣಿಗೆಗಾಗಿ ಅಪೌಷ್ಟಿಕತೆ ಪ್ರಮಾಣ ತಿಳಿಯಲು ಮೌಲ್ಯಮಾಪನ ಮಾಡಬೇಕಾಗುತ್ತದೆ ತೋಳಿನ ಮಧ್ಯಭಾಗದ ಸುತ್ತಳತೆ 11.5 cm ಗಿಂತ ಕಡಿಮೆ ಇರುವ ಮಕ್ಕಳನ್ನು ಅಪೌಷ್ಟಿಕ ಮಕ್ಕಳೆಂದು ಗುರುತಿಸಿ ಅವರಿಗೆ ಹೆಚ್ಚಿನ ಪೌಷ್ಟಿಕ ಆಹಾರ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನೀಡುವ ಅವಶ್ಯಕತೆ ಇದೆ. ಅಪೌಷ್ಟಿಕತೆಯು ದೇಹದ ಪ್ರಮುಖ ಅಂಗಗಳ ಕಾರ್ಯಕ್ಕೆ ಹಾನಿ ಉಂಟುಮಾಡುತ್ತದೆ ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಪೌಷ್ಟಿಕ ಸಮತೋಲಿತ ಆಹಾರವನ್ನು ಉಪಯೋಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳುತ್ತಾ ನಮ್ಮ ಜಿಲ್ಲೆಯ ತಾಯಂದಿರಿಗೆ ಆರೋಗ್ಯಕ್ಕೆ ಸಂಬAಧಪಟ್ಟ ಹಾಗೆ ಜ್ಞಾನ ಹೆಚ್ಚಿದ್ದು, ಆದರೆ ಕಾರ್ಯರೂಪಕ್ಕೆ ತರುವಲ್ಲಿ ದೊಡ್ಡ ಪ್ರಮಾಣದ ಯಶಸ್ಸು ಇನ್ನೂ ಆಗಿಲ್ಲ ಅದಕ್ಕಾಗಿ ನಾವೆಲ್ಲರೂ ಅಪೌಷ್ಟಿಕತೆ ವಿರುದ್ಧ ಹೋರಾಡಲು ಇಲ್ಲಿ ಪ್ರಾತ್ಯಕ್ಷಿತೆಯ ಮೂಲಕ ತೋರಿಸಲಾಗಿರುವ ಆಹಾರಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ರೂಡಿಸಿಕೊಳ್ಳುವುದರೊಂದಿಗೆ ಕಾರ್ಯರೂಪಕ್ಕೆ ತರೋಣ ಎಂದು ತಮ್ಮ ಅಮೂಲ್ಯವಾದ ಮಾಹಿತಿಯಲ್ಲಿ ತಿಳಿಸುತ್ತಾ 0-19 ವರ್ಷದ ಒಳಗಿನ ಮಕ್ಕಳಿಗಾಗಿ ಸರ್ಕಾರದಿಂದ ಜಾರಿ ಇರುವ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಡಾ. ಪ್ರೇಮಾನಂದ.ಕೆ ತಾಲೂಕು ಆರೋಗ್ಯ ಅಧಿಕಾರಿಗಳು ಕುಂದಾಪುರ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಒಂದು ಅಥವಾ ಎರಡು ಮಕ್ಕಳ ಪಡೆಯುವವರ ಸಂಖ್ಯೆ ಅಧಿಕವಾಗಿದ್ದು ಈ ಮಕ್ಕಳ ಪಾಲನೆ ಪೋಷಣೆಗೆ ಎಲ್ಲಾ ಇಲಾಖೆಯವರು ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದು ಕೇವಲ ಮಕ್ಕಳಿಗೆ ಮಾತ್ರ ಪೌಷ್ಟಿಕ ಆಹಾರವನ್ನು ನೀಡುವುದಲ್ಲದೆ ತಾಯಂದಿರು ಕೂಡ ಸಮತೋಲಿತ ಪೌಷ್ಟಿಕ ಆಹಾರವನ್ನು ಗರ್ಭಿಣಿ ಅವಧಿಯಲ್ಲಿಯೇ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ನಾಗರತ್ನ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಟೇಶ್ವರ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಆರ್ ಶೇಟ್, ಜಿಲ್ಲಾ ಆರ್ ಸಿ.ಎಚ್ ಅಧಿಕಾರಿಗಳು ಡಾ.ಜೋತ್ನಾ ಸ್ಥಳೀಯ ಗ್ರಾಮ ಪಂಚಾಯತ್‌ನ ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯಕ್, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಶೋಭಾ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ತಾಯಂದಿರು, ಮಕ್ಕಳು ಉಪಸ್ಥಿತರಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಆಭಾಕಾರ್ಡ್ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆಯನ್ನು ಮಾಡಲಾಯಿತು.

ಶ್ರೀಮತಿ ವೃಂದಾ.ಬಿ.ತಾಮಸೆ ಪ್ರಶಿಕ್ಷಣಾರ್ಥಿ ಪಿ.ಪಿ.ಜಿ.ಡಿ.ಎಚ್.ಪಿ.ಇ ವಿಭಾಗ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರು ಸ್ವಾಗತಿಸಿದರು. ಶ್ರೀಮತಿ ಭಾಗ್ಯಲಕ್ಷ್ಮಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕುಂದಾಪುರ ಕಾರ್ಯಕ್ರಮದ ನಿರೂಪಣೆ ಮಾಡಿ ಧನ್ಯವಾದ ಅರ್ಪಿಸಿದರು.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending