Connect with us

ದಿನದ ಸುದ್ದಿ

ಬಸವಕಂಪು ಪಸರಿಸಿದ ವಿ.ಸಿದ್ಧರಾಮಣ್ಣ ಶರಣರು

Published

on

ಫೋಟೋ : ವಿ. ಸಿದ್ದರಾಮಣ್ಣ

 

  • ಡಾ.ಗೀತಾ ಬಸವರಾಜು, ಉಪನ್ಯಾಸಕರು,
    ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ರ್ನಾಟಕದ ಇತಿಹಾಸದ ಪುಟಗಳಲ್ಲಿ 12ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿರುವಂತಹದ್ದು, ಸಮಾಜದಲ್ಲಿನ ಅಂಧಕಾರವನ್ನು ಕಿತ್ತೆಸೆಯಲು ಜನ್ಮತಾಳಿದ ಶರಣರು ಬಹು ದೊಡ್ಡದೊಂದು ಕ್ರಾಂತಿಯನ್ನು ಮಾಡಿದರು.

ಈ ಕ್ರಾಂತಿ ಕೇವಲ ಕರ್ನಾಟಕಕ್ಕೆ ಅಷ್ಟೆ ಮೀಸಲಾಗದೆ ಇಡೀ ವಿಶ್ವಕ್ಕೆ ಕಣ್ಣುಕೊಟ್ಟಿತು ಎಂದರೆ, ಅತಿಶಯೋಕ್ತಿಯಾಗಲಾರದು. ವಿಶ್ವಗುರು ಬಸವಣ್ಣನವರು ವಿಶ್ವಕಲ್ಯಾಣದ ಮಹಾಸಾಧನೆಯನ್ನು ನಿರ್ಮಿಸಿ ಇವನಾರವ ಇವನಾರವ ಎಂದೆನಿಸದೆ ಸಕಲರನ್ನು ಒಗ್ಗೂಡಿಸಿದ ವಿಭೂತಿ ಪುರುಷರು. ಸಕಲ ಜೀವರಾಶಿಗೆ ಒಳಿತಾಗುವ ಅನುಭವ ಮಂಟಪವನ್ನು ಕಟ್ಟಿ ಸಮಾಜದಲ್ಲಿದ್ದ ಜಾಡ್ಯವನ್ನು ದೂರಮಾಡಿ ಸಮಸಮಾಜವನ್ನು ನಿರ್ಮಿಸಿದರು.

900 ವರ್ಷಗಳ ಹಿಂದೆ ನಡೆದ ಈ ಕ್ರಾಂತಿಯ ಪರಿಣಾಮ 21ನೇ ಶತಮಾನದಲ್ಲಿಯೂ ಅಚ್ಚ ಹಸಿರಾಗಿ ಉಳಿದಿರುವುದು ವಿಶೇಷ. ಬಸವತತ್ವವನ್ನೇ ಹಾಸಿ ಬಸವತತ್ವವನ್ನೇ ಹೊದ್ದು ಬಸವತತ್ವವನ್ನೇ ಉಸಿರಾಗಿಸಿಕೊಂಡು, ಬಸವತತ್ವವನ್ನು ಮಂತ್ರವಾಗಿಸಿಕೊಂಡು ನಡೆದಾಡುವ ವಚನ ಭಂಡಾರವಾಗಿ ಕಂಗೊಳಿಸುತ್ತಿರುವವರು ಪೂಜ್ಯರಾದ ವಿ.ಸಿದ್ದರಾಮಣ್ಣ ಶರಣರು.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ 1922ಜನವರಿ 14 ರಂದು ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯಂದು ಜನಿಸಿದ ಶಿವರಾಮಣ್ಣನವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಂದೆಯವರಿಂದ ಕರ್ನಾಟಕ ಸಂಗೀತದ ಆಸಕ್ತಿ ಮೂಡಿಸಿಕೊಂಡರು. ಬಾಲ್ಯದಿಂದಲೇ ಉತ್ತಮ ವಿಚಾರಗಳನ್ನು ಒಳಗೊಂಡು ಒಳ್ಳೆಯ ನಡೆ-ನುಡಿಗಳನ್ನು ಅಳವಡಿಸಿಕೊಂಡು ಉತ್ತಮರ ಸಂಗದಲ್ಲಿಯೇ ಬೆಳೆದು ಮೆಟ್ಟಿಲು ಮೆಟ್ಟಿಲಾಗಿ ಮೇಲೇರಿ ಬಂದವರು.

ತಂದೆಯವರಿಂದ ಸಂಗೀತ, ನಾಟಕ ಕಲೆಯನ್ನು ಕಲಿತು ತಮ್ಮ ಪ್ರತಿಭೆಯಿಂದ ನಟರಾಗಿ, ನಾಟಕ ನಿರ್ದೇಶಕರಾಗಿ, ರಚನೆಕಾರರಾಗಿ, ಸಂಗೀತಗಾರರಾಗಿ ಬೆಳೆದು ಬಂದ ಇವರು ಪ್ರವಚನ ಪಿತಾಮಹರೆಂದೇ ಹೆಸರಾದ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಪ್ರವಚನ ಧಾರೆಗೆ ಆಕರ್ಷಿತರಾಗಿ ಅವರಿಂದ ಇಷ್ಟಲಿಂಗ ದೀಕ್ಷೆ ಪಡೆದು ಬಸವತತ್ವ ಪ್ರಸಾರಕ್ಕೆ ಅಣಿಯಾಗಿ ವಿಶ್ವಕಲ್ಯಾಣದ ಸಿದ್ಧರಾಮಣ್ಣ ಶರಣ ಎಂಬ ನೂತನ ಅಭಿದಾನವನ್ನು ಪಡೆದರು.

ಕೇವಲ ಐದನೇ ತರಗತಿ ಕಲಿತಿರುವ ವಿ.ಸಿದ್ಧರಾಮಣ್ಣನವರು ಬಸವ ಗ್ರಂಥಭಂಡಾರವೇ ಆಗಿದ್ದಾರೆ. ಪದವೀಧರರಾಗಬಹುದು ಆದರೆ ಪ್ರತಿಭಾವಂತರಾಗುವುದು ತುಂಬಾ ಕಷ್ಟ. ಕುರಿತೋದದೆಯಂ ಕಾವ್ಯಪ್ರಯೋಗ ಪರಿಣಿತರ ಸಾಲಿಗೆ ಪೂಜ್ಯ ಶರಣರು ಸೇರುತ್ತಾರೆ. ಸಾವಿರಾರು ವಚನಗಳು ಇವರಿಗೆ ಕಂಠಪಾಠವಾಗಿವೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ
ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,
ಜ್ಞಾನದಲ್ಲಿ ಪರಮಾನಂದ ನೆಲೆಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರ ಲಿಂಗವು ಬೇರಿಲ್ಲ ಕಾಣಿರೋ

ಎಂಬ ಶರಣ ಆದಯ್ಯನವರ ವಚನದಂತೆ ಪರಿಶುದ್ಧ ಜೀವನವನ್ನು ನಡೆಸುತ್ತಿದ್ದಾರೆ. ಶುಭ್ರ ಶ್ವೇತಧಾರಿಯಾದ ಇವರ ಮುಖದಲ್ಲಿ ಬಸವ ಕಳೆಯಿದೆ. ಬಾಗಿದ ತಲೆ ಮುಗಿದ ಕೈಯ ಗುಣ ಪೂಜ್ಯರದ್ದು, 100ರ ತುಂಬು ಜೀವನದಲ್ಲಿ ಯುವಕರೇ ನಾಚುವಂತೆ ಕಂಚಿನ ಕಂಠದಲ್ಲಿ ವಚನ ಗಾಯನ ಮತ್ತು ವಚನ ವಿಶ್ಲೇಷಣೆಯನ್ನು ಪುಂಖಾನುಪುಂಖವಾಗಿ ಹೇಳುವ ಶೈಲಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ವಿಭೂತಿ ಪುರುಷರ ಮಧ್ಯೆ ದಿವ್ಯಜ್ಯೋತಿಯಂತೆ ಕಂಗೊಳಿಸುತ್ತಿರುವ ಪೂಜ್ಯರು ಬಸವ ಪ್ರಸಾದ ನಿಲಯದ ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ತಾತನಾಗಿದ್ದಾರೆ. ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿರುವ ಇವರು ದೈನಂದಿನ ಕಾರ್ಯಕ್ರಮಗಳನ್ನು ಚಾಚೂ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಸಮಯಕ್ಕೆ ಸರಿಯಾಗಿ ವಚನ ಪ್ರಾರ್ಥನೆ, ಶಿವಾನುಭವ ಚಿಂತನೆ, ಬಂದ ಭಕ್ತರಿಗೆ ಬಸವತತ್ವದ ಪರಿಕಲ್ಪನೆಯನ್ನು ವಿವರಿಸಿ ಮನ ಮುಟ್ಟುವಂತೆ ಹೇಳಿ ಅವರ ಹೃದಯವನ್ನು ಪರಿವರ್ತಿಸುವ ಹರಿಕಾರರಿವರು.

ಇವರು ಕೈ ಎತ್ತಿದರೆ ಕಾಯಕ, ಕಾಲಿಟ್ಟರೆ ಪಾವಿತ್ರ್ಯಂ ಸರಳ ಸಜ್ಜನಿಕೆಯ ಜೀವನಕ್ರಮವನ್ನು ಒಳಗೊಂಡು ಶಿವಶರಣರ ಜೀವನವನ್ನು ಆದರ್ಶವಾಗಿರಿಸಿಕೊಂಡು ನಿಂತ ನೀರಾಗಿ ನಿಲ್ಲದೆ ಚರಜಂಗಮರಾಗಿ ಸತ್ಯ ಶರಣರ ಪಥದಲ್ಲಿ ನಡೆ ನುಡಿಗಳನ್ನು ಒಗ್ಗೂಡಿಸಿಕೊಂಡು ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟç, ಆಂಧ್ರಪ್ರದೇಶ, ದೆಹಲಿ ಇಲ್ಲೆಲ್ಲ ಬಸವತತ್ವದ ಜ್ಞಾನಜ್ಯೋತಿಯ ಪ್ರಕಾಶದ ಬೆಳಗನ್ನು ಬಿಂಬಿಸಿದ್ದಾರೆ.

ಶರಣರ ಸಾಹಿತ್ಯ ಸೇವೆ

ಬಾಲ್ಯದಿಂದಲೆ ನಾಟಕ, ಕತೆ, ಕಾದಂಬರಿ, ಚರಿತ್ರೆ, ಕವಿತೆ, ಜಾನಪದ ಪದ್ಯಗಳನ್ನು ಓದುತ್ತಿದ್ದುದರಿಂದ ಅವರಲ್ಲಿ ಒಬ್ಬ ನಟ, ಸಂಗೀತ ಕಲಾವಿದ, ಸಾಹಿತಿ, ಕವಿ ಬೆಳೆದಿದ್ದನು. ಈ ಶರಣರು ಸುಮಾರು 20ಕ್ಕೂ ಹೆಚ್ಚು ನಾಟಕಗಳು, 11 ತಾತ್ವಿಕ ಗ್ರಂಥಗಳು, 2 ಕಾವ್ಯಗಳು, ಹಲವಾರು ಕವನಗಳು, ಹಾಗೂ ಆಧುನಿಕ ವಚನಗಳನ್ನು ಕನ್ನಡ ಸಾಹಿತ್ಯದ ಮಡಿಲಿಗೆ ನೀಡಿದ್ದಾರೆ.

ಅನುಭಾವ ದಾಸೋಹಕ್ಕಾಗಿ
ಅನ್ನದಾಸೋಹ ನಡೆಯಲಿ
ಅನ್ನ ದಾಸೋಹ ಹೊಟ್ಟೆಗಾದರೆ
ಅನುಭಾವ ದಾಸೋಹ ಆತ್ಮಕ್ಕೆ
ಕೇವಲ ಅನ್ನಕ್ಕಾಗಿ ಹಾತೊರೆಯುವುದು ಭವಿಯ ಲಕ್ಷಣ.
ಆತ್ಮದ ಹಸಿವಿಗಾಗಿ ಹಾತೊರೆಯುವುದು ಭಕ್ತನ ಲಕ್ಷಣ ನೋಡಾ ಲೋಕಗುರು ಬಸವ ಪ್ರಭುವೆ.

ಇಂತಹ ಸಾಕಷ್ಟು ಆಧುನಿಕ ವಚನಗಳನ್ನು ರಚಿಸಿದ್ದಾರೆ.

ಪೂಜ್ಯರಿಗೆ ಸಂದ ಪ್ರಶಸ್ತಿಗಳು

‘ಬಯಸಿ ಬಂದುದು ಅಂಗಭೋಗ, ಬಯಸದೆ ಬಂದುದು ಲಿಂಗ ಪ್ರಸಾದ’ ಎಂಬ ಗುರುಬಸವಣ್ಣನವರ ವಚನದಂತೆ ಪೂಜ್ಯರಿಗೆ ಶರಣ ಕಕ್ಕಯ್ಯ ಪ್ರಶಸ್ತಿ, ಬಸವಗುರು ಕಾರುಣ್ಯ ಪ್ರಶಸ್ತಿ, ಚೆನ್ನಬಸವ ಪ್ರಶಸ್ತಿ, ಬಸವತತ್ವ ಶ್ರೀ ಪ್ರಶಸ್ತಿ, ಬಸವಾನುಭಾವಿ ಗೌರವ ಪ್ರಶಸ್ತಿ, ಅನುಭವ ಮಂಟಪ ಪ್ರಶಸ್ತಿ ಗಣಾಚಾರ ಪ್ರಶಸ್ತಿಗಳು ದೊರಕಿವೆ.

ಅಲ್ಲದೆ ಇವರ ಜೀವನ ಸಾಧನೆ ಕುರಿತು ಸುಮಾರು 9 ಪುಸಕ್ತಗಳು, 70ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿರುವುದು. ಇವರ ವ್ಯಕ್ತಿತ್ವಕ್ಕಿಡಿದ ಕೈಗನ್ನಡಿಯಾಗಿದೆ.

ಕಲ್ಯಾಣ ನಾಡಿನ ಶರಣ ಸಮ್ಮೇಳನಗಳಲ್ಲೆಲ್ಲ ಪೂಜ್ಯ ವಿ ಸಿದ್ಧರಾಮಣ್ಣನವರ ರಚಿಸಿರುವ ಷಟ್‌ಸ್ಥಲ ಧ್ವಜಗೀತೆ, ಬಸವಗುರು ಮಂಗಲ ಪದಗಳು ಕೇಳಿ ಬರುತ್ತಿರುವುದು ವಿಶೇಷ. ಶರಣರದ್ದು ವೈಚಾರಿಕ ನಿಲುವು ಪ್ರಾಸಾದಿಕ ಗುಣ. ಅಷ್ಟಾವರಣ, ಪಂಚಾಚಾರಗಳ ತತ್ವ ನಿಷ್ಟರಾದ ಇವರು ಭಕ್ತರಿಗೆ ಶರಣಧರ್ಮದ ನಡವಳಿಕೆಗಳನ್ನು ಆಚಾರ ಸಹಿತ ತಿಳಿಸುತ್ತಾರೆ.

12ನೇ ಶತಮಾನದ ಬಸವೇಶ್ವರರ ತಾತ್ವಿಕಬದ್ಧತೆ ೨೧ನೇ ಶತಮಾನದ ಪೂಜ್ಯ ವಿ. ಸಿದ್ಧರಾಮಣ್ಣನವರ ಮುಖದಲ್ಲಿ ಕಂಗೊಳಿಸುತ್ತಿದೆ. ಅವರ ಮುಗ್ಧ ಮಗುವಿನ ಮಾತು ಮಾತೃಹೃದಯದ ಮಮತೆ ಶತೃಗಳನ್ನು ಮಿತ್ರರನ್ನಾಗಿಸುವ ಶಕ್ತಿಯುಳ್ಳದ್ದು.

ಅರಿವಿನ ವಚನಗಳ ಬೀಜವ ಬಿತ್ತಿ
ಆಚಾರದ ಭಕ್ತಿಜಲವನೆರೆದು
ಸಂಗೀತದ ಸುಳಿಗಾಳಿ ಬೀಸಿ
ಸಮತೆಯ ದವಸಧಾನ್ಯಂಗಳ ಬೆಳೆದು
ಬಸವತತ್ವದ ರಾಶಿಯ ಮಾಡಿ
ಲೋಕಕ್ಕೆ ಪ್ರಸಾದವನೆಡೆ ಮಾಡುತಿಹ
ವಿ.ಸಿದ್ಧರಾಮಣ್ಣಪ್ಪಗಳು ನಿಜರೈತರು ನೋಡಾ
ಎನ್ನಯ್ಯ ಬಚ್ಚಬರಿಯ ಬಸವನಲ್ಲಿ-
ಎಂಬ ಡಾ: ಕಲ್ಯಾಣಮ್ಮ ಲಂಗೋಟಿಯವರ ವಚನವು ಸಿದ್ಧರಾಮಣ್ಣ ಶರಣರ ಜೀವನಾದರ್ಶಗಳನ್ನು ತಿಳಿಸುತ್ತದೆ.

ಇಂತಹ ಪೂಜ್ಯರಿಗೆ ಇಂದು ನೂರು ವರ್ಷದ ಸಂಭ್ರಮ. ದಾವಣಗೆರೆ ಸರಸ್ವತಿ ನಗರದ ಬಸವಬಳಗದ ವತಿಯಿಂದ ಅವರಿಗೆ ಇಂದು ಗೌರವ ಸಮರ್ಪಣೆ ಸಲ್ಲಿಸಲಾಗುತ್ತದೆ.

ಹಣ್ಣು ಮಾಗಿ ಪಕ್ವವಾಗುವಂತೆ ಪೂಜ್ಯಶರಣರು ಜ್ಞಾನದಲ್ಲಿ ಮಾಗಿ ಸಮಾಜಕ್ಕೆ ವಚನದ ಸಿಹಿಯನ್ನು ಹಂಚುವ ಜ್ಞಾನವೃದ್ಧರಾಗಿ, ವಯೋವೃದ್ಧರಾಗಿ ಸಂತೃಪ್ತಿ, ಸತ್ಯನಿಷ್ಠೆ, ಸಮಾನತೆ ,ಸಮಚಿತ್ತತೆ ಕಾಯಕ-ದಾಸೋಹ ಮುಂತಾದವುಗಳನ್ನು ರೂಢಿಸಿಕೊಂಡಿರುವ ಪೂಜ್ಯರ ಬದುಕು ಇಂದಿನ ಯುವ ಸಮೂಹಕ್ಕೆ ದಾರಿದೀಪವಾಗಲಿ.

(ಲೇಖಕರು : ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

Published

on

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್‍ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.

ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್‍, ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಒಂದು ಮೊಬೈಲ್‍ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್‍ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

Published

on

ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.

ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್‌ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್

Published

on

ಜಿಲ್ಲೆಯಲ್ಲಿ 1.37 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಡಿಎಚ್ಒ ಡಾ. ಷಣ್ಮುಖಪ್ಪ

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ವಿಶೇಷ ಅಭಿಯಾನದಲ್ಲಿ ಯಾವುದೇ ಒಂದು ಮಗುವೂ ಸಹ ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಸೂಚಿಸಿದರು.

ಅವರು ಭಾನುವಾರ ಪಾಷನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಬ್ದುಲ್ ರೆಹಮಾನ್ ಎಂಬ 4 ತಿಂಗಳ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಎಲ್ಲಾ ಭಾಗಗಳ ಅರ್ಹ ಮಕ್ಕಳಿಗೂ ಲಸಿಕೆ ತಲುಪಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಎಸ್. ಅವರು ಮಾತನಾಡಿ, ಜಿಲ್ಲೆಯನ್ನು ಸಂಪೂರ್ಣ ಪೋಲಿಯೋ ಮುಕ್ತವಾಗಿಸಲು ಆರೋಗ್ಯ ಇಲಾಖೆ ಪಣತೊಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 18,28,153 ಜನಸಂಖ್ಯೆಯಿದ್ದು, 3,79,338 ಮನೆಗಳಿವೆ. ಇವುಗಳಲ್ಲಿ ಗುರುತಿಸಲಾಗಿರುವ 5 ವರ್ಷದ ಒಳಗಿನ 1,37,339 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.

ಇದಕ್ಕಾಗಿ ಜಿಲ್ಲಾದ್ಯಂತ 1,090 ಲಸಿಕಾ ಬೂತ್ಗಳನ್ನು ಸ್ಥಾಪಿಸಲಾಗಿದೆ. ಬೂತ್ಗಳಲ್ಲಿ ಲಸಿಕೆ ಹಾಕುವುದರ ಜೊತೆಗೆ, ಜೂನ್ 29 ರಿಂದ ಜುಲೈ 1 ರವರೆಗೆ ಒಟ್ಟು 3 ದಿನಗಳ ಕಾಲ ಜಿಲ್ಲೆಯ ಎಲ್ಲಾ ಮನೆ-ಮನೆಗೆ ತೆರಳಿ 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮವನ್ನು 2 ಹಂತಗಳಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಲಸಿಕಾ ಅಭಿಯಾನದ ಯಶಸ್ಸಿಗಾಗಿ ಮನೆ-ಮನೆ ಭೇಟಿ ತಂಡ, ಟ್ರಾನ್ಸಿಸ್ಟ್ (ಸಾರಿಗೆ ನಿಲ್ದಾಣಗಳ ತಂಡ) ಮತ್ತು ಸಂಚಾರಿ (ಮೊಬೈಲ್) ತಂಡ ಹೀಗೆ ಮೂರು ಪ್ರಮುಖ ವಿಭಾಗಗಳ ತಂಡಗಳನ್ನು ರಚಿಸಲಾಗಿದೆ. ನಿಯೋಜಿತ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ವಲಸೆ ಕಾರ್ಮಿಕರ ಮಕ್ಕಳು, ಹರವಿಗಿ ಹೋಗುವ ಕುಟುಂಬಗಳ ಮಕ್ಕಳು ಸೇರಿದಂತೆ ಒಂದೂ ಮಗುವು ಲಸಿಕೆಯಿಂದ ವಂಚಿತವಾಗದಂತೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ತಿಳಿಸಿದರು.

ಡಾ. ರೇಣುಕಾರಾಧ್ಯ ಆರ್.ಸಿ.ಹೆಚ್.ಒ ಅವರು ಮಾತನಾಡಿ, ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲಾಗಿದೆ ಆದರೆ ಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ 5 ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿನ ನಾಗರಿಕರು ಭಾರತಕ್ಕೆ ಬಂದು ಹೋಗುವ ಸಾಧ್ಯತೆ ಇರುವುದರಿಂದ, ವೈರಸ್ ಮತ್ತೆ ಇಲ್ಲಿ ಹರಡಬಾರದು ಎಂಬ ಮುಂದಾಲೋಚನೆಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಈ ಪಲ್ಸ್ ಪೋಲಿಯೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಲ್ಸ್ ಪೋಲಿಯೋ ನೊಡೆಲ್ ಅಧಿಕಾರಿ ಡಾ.ಚಂದ್ರಶೇಖರ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending