Connect with us

ನೆಲದನಿ

ಅಪರೂಪಕ್ಕೊಮ್ಮೆ,ಅಪರೂಪದ ವ್ಯಕ್ತಿ ‘ಶೋಭಾ ಗುನ್ನಾಪೂರ’..!

Published

on

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿರವರು,ತವರುಮನೆ ಶಿರಶ್ಯಾಡ.ಗಂಡ ತುಕಾರಾಮ್ ಗುನ್ನಾಪೂರ ರೈತರಾಗಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು,ಓದುವ ಹವ್ಯಾಸ ಉಳ್ಳವರು ಎಲ್ಲಿದ್ದರೂ,ಸುಖಿಯಾಗಿರಬಲ್ಲರು ಎಂಬ ಮಾತೊಂದಿದೆ,ಆ ಮಾತಿಗೆ ಕೈಗನ್ನಡಿ ಹಾಗೂ ಅಲ್ಪ‌ ವಿದ್ಯೆ ಮಹಾಗರ್ವಿ ಎಂಬ ಮಾತಿಗೆ ತದ್ವೀರುದ್ಧವಾಗಿದ್ದಾರೆ ಈ ಶೋಭಾ ಅಮ್ಮನವರು.

ಓದಿದ್ದು ಕೇವಲ ಒಂಬತ್ತನೇ ತರಗತಿಯವರೆಗೆ ಮಾತ್ರ ಆದರೆ ಕನ್ನಡ ಸಾಹಿತ್ಯವನ್ನು ಓದುವ ಅಪಾರ ಆಸಕ್ತಿ ಇರಿಸಿಕೊಂಡಿದ್ದಾರೆ.ಮುಂದೆ ಕಲಿಯಲು ಹಳ್ಳಿಯಲ್ಲಿ ಹೆಣ್ಮಕ್ಕಳಿಗೆ ಆಸ್ಪಾದವಿರಲಿಲ್ಲ.ನಮ್ಮ ತಂದೆಯವರು ನಾವು ದೊಡ್ಡವರಾದ ಬಳಿಕ ನೀವು ಶಾಲೆಗೆ ಹೋಗೋದು ಬೇಡ ಅಂತ್ಹೇಳಿ ನಮ್ಮನ್ನು ಮದುವೆ ಮಾಡಿಕೊಟ್ಟರು.ನಮಗಿನ್ನೂ ಕಲಿಯಬೇಕೆಂಬ ಆಸಕ್ತಿ ಇನ್ನೂ ಇತ್ತು.ಆದರೆ ಹಳ್ಳಿಯಲ್ಲಿ ದೊಡ್ಡವರಾದ ಬಳಿಕ ಮತ್ತೆಲ್ಲಿ ಶಾಲೆಗೆ ಕಳಿಸಬೇಕಂತ ಹೇಳಿ ಕೊಟ್ಟು ಮದುವೆ ಮಾಡಿದರು.

ಆದರೆ ನಾವು ಕಲಿಯಲೇಬೇಕೆಂಬ ಛಲವಿರುವುದರಿಂದ ಬರೆಯಲು,ಓದಲು ರೂಢಿಸಿಕೊಂಡೆವು.ಕಸದಾಗಿನ ಯಾವುದಾದರೂ ಪೇಪರ್ ಬಿದ್ದಿತ್ತೆಂದರೆ ನನಗೆ ಅದು ಓದದೇ ಇದ್ರೆ ಸಮಾಧಾನನೇ ಆಗುತ್ತಿರಲಿಲ್ಲ.ನಮ್ಮದು ಕೂಡುತುಂಬು ಕುಟುಂಬ ಏಳು ಮಂದಿ ಅಣ್ಣ-ತಮ್ಮದಿಂರು ಏಳು ಮಂದಿ ಹೆಣ್ಣುಮಕ್ಕಳು ಅತ್ತೆ,ಮಾವ ಅಷ್ಟಿದ್ದರೂ ಅವರ ಜೊತೆ ನಾನು ಕೆಲಸ ಮಾಡಿ ಓದು-ಬರಹದ ಕಡೆ ಲಕ್ಷ್ಯ,ಸಮಯವೂ ಕೊಟ್ಟಿದ್ದೆ. ಬೇಕಾದಷ್ಟೂ ಕೆಲಸವಿರಲದು ಓದು ಬರಹಕ್ಕೆ ಎರಡು ಗಂಟೆ ಕಡ್ಡಾಯವಾಗಿ ಸಮಯ ಮೀಸಲು ಮಾಡಿ ಓದುತ್ತಿದ್ದೆ,ಬರೆಯುತ್ತಿದ್ದೆ.ಈಗ ಅದು ಪ್ರಸ್ತುತ ಓದಿ-ಓದಿ ಅಭ್ಯಾಸವಾಗಿ ಕಥೆ,ಕಾದಂಬರಿ ಬರೆಯಲು ತೊಡಗಿದೆ.

ಮುಂದೆ ಬರುಬರುತ್ತಾ ನನ್ನ ಮಕ್ಕಳು ನನಗೆ ಬುದ್ಧಿ ಹೇಳತೋಡಗಿದರು.ಅಮ್ಮ ನೀನು ಇಷ್ಟೇಲ್ಲಾ ಕಥೆ,ಕಾದಂಬರಿ ಓದುತ್ತಿಯಾ,ಬರೆಯುತ್ತೀಯಾ ಏನಾದರೂ ನೀನು ಬರೆ ಎಂದರು.ಮಕ್ಕಳ ಪರಿಣಾಮವೇ ಇರಬಹುದು, ಇವರ ಎರಡು ಪುಸ್ತಕಗಳು (ಕಥಾ-ಸಂಕಲನ,ಆತ್ಮಚರಿತ್ರೆ) ಮುದ್ರಣದ ಹಂತದಲ್ಲಿವೆ.ಇವರು ಬರೆದ ಕವಿತೆಗಳು ಪಂಜಾಬಿ ಭಾಷೆಗೆ ಅನುವಾದಗೊಂಡಿವೆ ಹಾಗೂ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.(ಬದುಕಿನ ಪಯಣವನ್ನು ಎಳೆ-ಎಳೆಯಾಗಿ ಖುಷಿಯಿಂದ ಬಿಚ್ಚಿಟ್ಟುತ್ತಾರೆ.)

ಬಾಲ್ಯದಲ್ಲಿಯೂ ಸಾಕಷ್ಟು ಕಷ್ಟ ಅನುಭವಿಸಿ,ಸದಾ ಸಂಸಾರದ ಜಂಜಾಟದಲ್ಲಿದ್ದರೂ,ದಿನಕ್ಕೆರಡು ಗಂಟೆ ಕಡ್ಡಾಯವಾಗಿ ಚಾಚೂ-ತಪ್ಪದೇ ಓದಲು ಸಮಯವಿರುಸುತ್ತಿದ್ದರಿವರು,ಆದರೆ ನನಗನ್ನಿಸಿದ್ದು ಈಗ ಅರ್ಧದಿನ,ಒಮ್ಮೊಮ್ಮೆ ದಿನಪೂರ್ತಿಯೂ ಓದಬಹುದೆಂದು ನಂಬಿಕೆಯಿದೆ,ಕಾರಣ‌ ತುಂಬಾ ಕಷ್ಟದಿಂದ,ಹಳ್ಳಿಯ ಮಹಿಳೆ ಹೊಲ-ಮನೆ ಕೆಲಸ ತಾನೇನೂ,ತನ್ನ ಕುಟುಂಬದ ಜಗತ್ತೇನೂ ಎನ್ನುತ್ತಿದ್ದರಿವರು. *ಮಕ್ಕಳಿಗೆ ಅಕ್ಕ-ಪಕ್ಕದ ಮಕ್ಕಳಿಗೂ ಶುದ್ಧಬರಹ ಹಾಕಿಕೊಟ್ಟು,ದಿನಾಲೂ ಶಾಲೆಯ ಮನೆಕೆಲಸ ಮಾಡಿಸುತ್ತಿದ್ದರು.ಇಂದು ಆ ಮಕ್ಕಳು ಒಳ್ಳೆಯಸ್ಥಾನದಲ್ಲಿ,ಸ್ಥಿತಿಯಲ್ಲಿದ್ದಾರೆ.

ಇಂದು ಇವರ ಕುಟುಂಬ ಸುಸ್ಥಿರವಾಗಿದೆ,ಮಕ್ಕಳೂ ಸಹ ಉತ್ತಮವಾದ ಉದ್ಯೋಗದಲ್ಲಿದ್ದಾರೆ.ಈಗಲೂ ಸಹ ಹೊಲ-ಮನೆ ಕೆಲಸ ಮಾಡುತ್ತಾ ಅತಿಹೆಚ್ಚು ಸಮಯ ಓದುತ್ತಾರೆ.ಬದುಕಿನ ಒತ್ತಡದ ನಡುವೆ ಪುಸ್ತಕಗಳನ್ನು ಓದುವುದು ಬಿಟ್ಟಿರಲಿಲ್ಲ.ಅದರ ಪರಿಣಾಮವಾಗಿಯೇ ಇವರಿಂದ ಇತ್ತಿಚೀಗೆ ಕಥೆ,ಕವಿತೆಗಳು ಹತ್ತಾರು ಸೃಷ್ಟಿ ಆಗಿದ್ದಾವೆ,ಆಗುತ್ತವೆಯೂ ಕೂಡ ಅದು ಹೀಗೆಯೇ,ಇವರು ಕನ್ನಡ ಸಾಹಿತ್ಯ ಸೇವೆಯನ್ನು ಮಾಡಲಿಕ್ಕೆ ಇನ್ನೂ ಆ ಅಕ್ಷರಾಂಬೆ ಶಕ್ತಿ ನೀಡಲೆಂದು ಆಶಿಸೋಣ.!

ಸಾಮಾನ್ಯ ಹಳ್ಳಿಯ ಹೆಣ್ಣುಮಗಳಾದ ಶೋಭಾ ಗುನ್ನಾಪೂರ ಅಮ್ಮನವರು.ತಮ್ಮ ಬದುಕಿನ ಇಚ್ಛಾಶಕ್ತಿಯಿಂದ ನೋವು ನಲಿವುಗಳಿಂದ ಆಚೆ ಬಂದು ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಪ್ರತಿನಿಧಿಯಾಗಿ ಅನೇಕ ಹೆಣ್ಣುಮಕ್ಕಳ ಬದುಕಿಗೆ ಸ್ಪೂರ್ತಿಯಾಗಿದ್ದಾರೆ. ಪ್ರಗತಿಪರ ರೈತರಾಗಿರಾಗಿದ್ದಾರೆ.ಹಿರೇಮಸಳಿಯಲ್ಲಿ ಕುಡಿತ ಬಿಡಿಸಲು,ಮಕ್ಕಳಿಗೆ ವಿಧ್ಯಾಭ್ಯಾಸ ನೀಡಲು, ನೊಂದ ಮಹಿಳೆಯರಿಗೆ ಸಾಂತ್ವಾನ ನೀಡಿ ಆಸರೆಯಾಗಿ ನಿಲ್ಲಲು ಶ್ರಮಿಸಿದ್ದಾರೆ.

ಇವರು ಮಕ್ಕಳಿಗಾಗಿ ಆಸ್ತಿ ಮಾಡಲಿಲ್ಲ,ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದ್ದಾರೆ.!

ಇವರ ಮಕ್ಕಳು ಬೇರೆ ಬೇರೆ ಊರಲ್ಲಿ ನೌಕ್ರಿ(ಉದ್ಯೋಗ) ಹಿಡಿದು ಹೆಮ್ಮೆ ತರುವ ಕೆಲಸ ಮಾಡಿದ್ದಾರೆ,ಮಾಡುತ್ತಿದ್ದಾರೆಯೂ ಕೂಡ ಬೆಂಗಳೂರಲ್ಲಿ ಸುನಿಲ್ ಕುಮಾರ್ ಗುನ್ನಾಪೂರ ಎನ್ನುವವರು ಲಾಯಾರ್ ಆಗಿ,ಬಾಗಲಕೋಟೆಯಲ್ಲಿ ಅನಿಲ್ ಕುಮಾರ್ ಗುನ್ನಾಪೂರರವರು ಸರ್ವೆಯರ್ ಕೆಲಸದಲ್ಲಿದ್ದು ಮತ್ತು ಕವಿಗಳಾಗಿದ್ದಾರೆ.

ಇನ್ನೊಬ್ಬರು ಭೀಮರಾವ್ ಧಾರವಾಡದಲ್ಲಿ ಪ್ರಸ್ತುತ ಕೆ.ಎ.ಎಸ್ ಪರೀಕ್ಷೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಇನ್ನೊಬ್ಬ ಹೆಣ್ಣುಮಗಳು ಅನಿತಾ ಗಂಡನ ಮನೆಯಲ್ಲಿ ಸುಖ ಸಾಂಸರೀಕವಾದ ಜೀವನವನ್ನು ಸಾಗಿಸುತ್ತಿದ್ದಾರೆ.

ಪ್ರೀಯ ಓದುಗರೇ,

ಶೋಭಾ ಅಮ್ಮನವರು ಮಹಿಳೆಯರಿಗೆ ಒಂದು ಸಲಹೆನ ನೀಡುತ್ತಾರೆ ಬನ್ನಿ,ಅವರ ಮಾತಿನಲ್ಲೇ ಕೇಳೋಣ..

ಹೆಣ್ಣುಮಕ್ಕಳು ಸದಾ ಕೆಲಸ-ಕೆಲಸ ಅಂತ ಆರೋಗ್ಯದ ಕಡೆ ಗಮನವೇ ಹರಿಸುವುದಿಲ್ಲ.ಸದಾ ಗಂಡ,ಮಕ್ಕಳು,ಸಂಸಾರದಲ್ಲಿಯೇ ಅವರ ಸಮಯ ಕಳೆದು ಹೋಗುತ್ತದೆ.

ಆರೋಗ್ಯದ ಬಗೆಯಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ,ಸಮಯಕ್ಕೆ ಹೊಂದುವಂತೆ ನಿದ್ದೆಯೇ ಬರುವುದಿಲ್ಲ,ಬರೀ ಸಂಸಾರದಲ್ಲಿಯೇ ಹೋಗುತ್ತದೆ.ಅದಕ್ಕೆ ಇದೆಲ್ಲದರ ಒತ್ತಡದ ಕೆಲಸದ ಜೊತೆಯೂ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.ಜೊತೆಗೆ ಸರಿಯಾಗಿ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸೋಣ,ಆ ಮಕ್ಕಳನ್ನೇ ನಾವು ಆಸ್ತಿ ಮಾಡಿಕೊಳ್ಳೋಣ. “ನಾವು ಆಸ್ತಿ ಮಾಡುವುದು ಬೇಕಾಗಿಲ್ಲ.ಮಕ್ಕಳೇ ನಮಗೊಂದು ಆಸ್ತಿ”.

ಆದರೆ ಸರಿಯಾಗಿ ಅಭ್ಯಾಸ ಕೊಟ್ಟು ಮಕ್ಕಳಿಗೆ ಮಾರ್ಗದಾಳುಗಳಾಗೋಣ.ನಮಗೆಷ್ಟೇ ಬರಲಿ,ತಿಳಿದಿರಲಿ ಮಕ್ಕಳಿಗೆ ಹೇಳಬೇಕು.ಉದಾಹರಣೆಗೆ ನಾವೇ ಒಂದು ಪುಸ್ತಕವನ್ನು ತೆಗೆದುಕೊಂಡು ಕೂತರೇ,ಮಕ್ಕಳೂ ಸಹ ಪುಸ್ತಕ ತೆಗೆದುಕೊಂಡು ಕುಳಿತುಕೊಳ್ಳುತ್ತಾರೆ.ಟಿವಿ ನೋಡಿದರೆ,ಅವರೂ ಟಿವಿ ನೋಡುತ್ತಾ ಕೂರುತ್ತಾರೆ.ಅದು ಪ್ರತಿಯೊಬ್ಬ ತಾಯಿಯ ಅನುಕರಣೆಯಲ್ಲಿ ಅಡಗಿರುತ್ತದೆ.ಪುರುಷರು(ಗಂಡ) ಏನೂ ಮಾಡುವುದಿಲ್ಲ.ಅವರು ತಂದು ಹಾಕಿ ಹೊರಗಡೆ ಹೋಗಿ ಬಿಡುತ್ತಾರಷ್ಟೇ,(ತುಸು-ನಸುನಕ್ಕು) ಅದು ಅನುಕರಣೆ ತಾಯಿಕಡೆ ಇರುತ್ತದೆ.

ತಾಯಿಯಾಗಿ ಸುಸಜ್ಜಿತವಾಗಿ ವಿದ್ಯೆ-ಬುದ್ಧಿ,ಸಂಸ್ಕೃತಿ ಮಕ್ಕಳಿಗೆ ಕಲಿಸಿದೇವೆಂದರೆ,ಮಕ್ಕಳು ತಮ್ಮಿಂದ ಅಚಾನಕವಾಗಿ ಕಲಿಯುತ್ತಾರೆ.ತಾಯಿಗಳಾದ ನಾವೇ ಏನೂ ಕಲಿಸದೇ ಬರೀ ಟಿವಿ ನೋಡೋದು,ನೌಕರಸ್ಥ ತಾಯಿಯವರು ಉದ್ಯೋಗಕ್ಕೇನೆ ಸೀಮಿತವಾಗಿ ಮಕ್ಕಳಿಗೆ ನಮಗೆ ಆಗುವುದಿಲ್ಲ,ಓದಿರಿ,ಬರೆಯಿರಿ ಅಂದರೆ ಪಾಪ ಮಕ್ಕಳು ಏನೂ ಮಾಡಲಸಾಧ್ಯ.ಸಣ್ಣ ಮಕ್ಕಳಿಗೆ ನಾವು ಒತ್ತಡದ ಜೀವನದಲ್ಲಿಯೂ ಸ್ವಲ್ಪ ಹೇಳಬೇಕು.ತಳಪಾಯ ದುರಸ್ತಿ ಮಾಡಿ,ಒಳ್ಳೆಯ ಮಾರ್ಗದರ್ಶನ ನಾವು ನೀಡಿದರೆ ಮಕ್ಕಳ ಕೈ ಹಿಡಿಯುವವರೇ ಯಾರಿಲ್ಲ ಅದಕ್ಕೆ ನಮ್ಮ ಮಕ್ಕಳಿಗೆ ಸರಿಯಾಗಿ ಕಲಿಸಬೇಕು.

ಈ ಹೆಣ್ಣುಮಕ್ಕಳು(ಪ್ರೌಢಶಾಲಾ-ಮಕ್ಕಳು) ಇದಾರಲ್ಲ,ಈ ದೇಶದ ಪ್ರಜೆಗಳು.ತೊಟ್ಟಿಲು ತೂಗುವ ಇವರ ಕೈಗಳು,ಜಗತ್ತನೇ ತೂಗುತ್ತದೆ. ಏನೋ ಒಂದು ತಾರತಮ್ಯಕ್ಕೆ ಹೆಣ್ಣು ಹುಟ್ಟಬಾರದೆಂದು ಹೇಳುತ್ತಾರೆ.ಮೊದಲು ಹೆಣ್ಣಾಗಬೇಕು.ಹೆಣ್ಣಿನಿಂದಲೇ ಜಗತ್ತು,ಹೆಣ್ಣಿನಿಂದಲೇ ಸರ್ವಸ್ವ.ಆ ಹೆಣ್ಣು ನಮಗೆ ಎಷ್ಟು ಮಹತ್ವವೆಂದರೆ,ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿರಬೇಕು.ಒಂದು ಮಾದರಿಯಾಗುತ್ತಾರೆ.ಕಷ್ಟಕ್ಕೂ-ಸುಖಕ್ಕೂ ಹೆಣ್ಮಕ್ಕಳು ಆಗುತ್ತಾರೆ,ಗಂಡುಮಕ್ಕಳು ಆಗುವುದಿಲ್ಲ.ಸತ್ತರೆ ಗಂಡು ಮಕ್ಕಳು ದೂರಹೋಗಿ ಕೂರುತ್ತಾರೆ,ಹೆಣ್ಮಕ್ಕಳು ಕೂಡುತ್ತಾರೇನೂ.?

ಅದಕ್ಕೆ ಹೆಣ್ಣು-ಗಂಡೆಂಬ ತಾರತಮ್ಯ ಮಾಡದಿರಿ.ನಮಗೆ ಹೆಣ್ಣುಮಕ್ಕಳು-ಗಂಡುಮಕ್ಕಳೂ ಬೇಕು.ಅಷ್ಟೇ ಚಿಕ್ಕ-ಚೊಕ್ಕ ಸಂಸಾರದ ಜೀವನ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಪದವಿ,ಸರ್ಟಿಫೀಕೇಟ್ ಇಲ್ಲದ ಮಹಿಳೆಯೂ ಸಾಧಿಸಬಹುದೆಂದು ಹೆಣ್ಣು ಅಬಲೆಯಲ್ಲ ಸಬಲೆ ಎಂದು ತೋರಿಸಿ ಇಂದು ನಮ್ಮ ಮುಂದೆ ಮಾದರಿಯಾಗಿ ನಿಂತಿದ್ದಾರೆ.ಪ್ರಚಾರದಿಂದ ದೂರ ಇರುವ ಶೋಭಾ ಗುನ್ನಾಪೂರ ಅಮ್ಮನವರು ಎಲೆ ಮರೆಯ ಕಾಯಿಯಂತೆ ತಮ್ಮ ಕೆಲಸ ಪ್ರೀತಿಯಿಂದ ಮಾಡುತ್ತಾ ಸಾಗಿದ್ದಾರೆ,ಸಾಗುತ್ತಿದ್ದಾರೆಯೂ ಕೂಡ..ಅವರ ಸೇವೆಯೂ,ಹೀಗೆಯೇ ಸಾಗುತ್ತಾ ಅವಿಸ್ಮರಣೀಯವಾಗಿ ಇತಿಹಾಸದ ಪುಟಗಳಲ್ಲಿ ಸೇರಲಿ ಎನ್ನುತ್ತಾ..!

ಶಿವರಾಜ್ ಮೋತಿ
ಪದವಿ ವಿಧ್ಯಾರ್ಥಿ
ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಲೇಖಕಿ ಬಾನು ಮುಸ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ; ಗಣ್ಯರ ಅಭಿನಂದನೆ

Published

on

ಸುದ್ದಿದಿನಡೆಸ್ಕ್:ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.

ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ.

ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ.

ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಎದೆಯ ಹಣತೆ’ಯನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ

ಹಾಗೇ ನಾಡಿನ ಸಾಹಿತ್ಯ ಪ್ರೇಮಿಗಳು, ಹೋರಾಟಗಾರರು ಸೇರಿದಂತೆ ಕನ್ನಡಿಗರು ಸಂಭ್ರಮಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

Published

on

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.

ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.

ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.

ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.

ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.

ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿ‌ಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.

ವಸ್ತು ಪ್ರದರ್ಶನ

ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.

ದೇಸೀ ಆಟಗಳು

ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.

ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮ‌ಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ‌ಉತ್ಸವ’-2025.
| ಡಾ.ಬಿ‌.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

Continue Reading

ಅಂತರಂಗ

ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

Published

on

  • ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ

ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು

ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.

ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.

ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.

ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ

ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.

ಮಹಿಳಾ ದಿನಾಚರಣೆಯ ಇತಿಹಾಸ

ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:

1. 1908 – ಮಹಿಳಾ ಹಕ್ಕುಗಳ ಹೋರಾಟ:

ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.

2. 1909 – ಮೊದಲ ಮಹಿಳಾ ದಿನಾಚರಣೆ:

ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.

3. 1910 – ಅಂತಾರಾಷ್ಟ್ರೀಯ ಹೋರಾಟ:

ಡೆನ್ಮಾರ್ಕ್‌ನ ಕೊಪನ್‌ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.

4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:

ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.

5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:

1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.

6. 1975 – ವಿಶ್ವ ಮಹಿಳಾ ವರ್ಷ:

UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು

7. 2011 – 100ನೇ ವಾರ್ಷಿಕೋತ್ಸವ:

2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.

ಮಹಿಳಾ ದಿನಾಚರಣೆಯ ಉದ್ದೇಶ

ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.

ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ

ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್‌ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.

ಮಹಿಳೆಯರು ಬದುಕಿನ ಉತ್ಸಾಹ

ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಾಧನೆಗಳ ಬೆಳಕು

1. ಶಿಕ್ಷಣ ಮತ್ತು ಸಶಕ್ತೀಕರಣ:

ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.

2. ಉದ್ಯೋಗ ಹಾಗೂ ಉದ್ಯಮಶೀಲತೆ:

ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.

3. ಕ್ರೀಡೆ ಮತ್ತು ಸಾಹಸ:

ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.

4. ಸಮಾಜಸೇವೆ ಮತ್ತು ಪ್ರಭಾವ:

ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.

ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ

ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.

ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್

ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.

“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending