Connect with us

ನೆಲದನಿ

‘ಶರಣ ಶ್ರೇಷ್ಠ ಅಂಬಿಗರ ಚೌಡಯ್ಯ’ ರ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು..!

Published

on

ತೀಕ್ಷ್ಣವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ. ಬಸವ ಬಾನಂಗಳದಲ್ಲಿ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳು ಮಿನುಗಿದವು. ಈ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಮಿನುಗಿದವರು ಚೌಡಯ್ಯ. ನ್ಯಾಯನಿಷ್ಠುರಿ, ಖಂಡಿತವಾದಿ ಎನಿಸಿದ ಅವರ ಜಯಂತಿಯನ್ನು ಇದೇ ಜ. 21 ಮಂಗಳವಾರದಂದು ರಾಜ್ಯಾದ್ಯಂತ ಆಚರಿಸಲಾಯಿತು.

ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಮಾರು ಏಳು ಶತಮಾನಗಳಷ್ಟು ಮೊದಲೇ ಮುನ್ನುಡಿ ಬರೆದವರು 12ನೇ ಶತಮಾನದ ಶಿವಶರಣರು. ಪ್ರಜೆಗಳಿಗೆ ಪರಮಾಧಿಕಾರ, ವ್ಯಕ್ತಿಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಸರ್ವಸಮಾನತೆಯೆಂಬ ಕನ್ನಡಿ ಹಿಡಿದವರೇ ಅವರು. ತಮ್ಮ ವಚನಗಳ ಮೂಲಕ ಶರಣರು ಅಂದು ಸಾರಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಶಿವಪುರದಲ್ಲಿ (ಇಂದಿನ ಚೌಡದಾನಪುರ) ಜನಿಸಿದ ಈ ಮಹಾಶಿವಶರಣರಿಗೆ ಉದ್ದಾಲಕರೆಂಬ ಗುರುಗಳು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ವಚನಕ್ಕೆ ತಕ್ಕಂತೆ ಇರುವ ಧರ್ಮಪತ್ನಿ ಮತ್ತು ಪುರವಂತ ಎಂಬ ಪುತ್ರ. ಸದ್ಗುರುವಿನ ಕೃಪಾಕಟಾಕ್ಷದಿಂದ ಶ್ರೇಷ್ಠ ತತ್ವಜ್ಞಾನಿಯಾದ ಇವರು ವಚನಗಳನ್ನು ರಚಿಸಿ ಶಿವಶರಣರ ಪಂಕ್ತಿಯಲ್ಲಿ ಅಗ್ರಸ್ಥಾನಕ್ಕೇರಿದರು.

ಚೌಡದಾನಪುರದಲ್ಲಿ ಪೂರ್ವ ಪಶ್ಚಿಮವಾಹಿನಿಯಾಗಿ ಹರಿಯುತ್ತಿರುವ ತುಂಗಭದ್ರಾನದಿಯಲ್ಲಿ ದೋಣಿ ಮೂಲಕ ನದಿ ದಾಟಿಸುವ ಕಾಯಕ ಮಾಡುತ್ತ ವಚನಗಳನ್ನು ರಚಿಸಿದ್ದಾರೆ. ಗುರುವಿನ ಘನಕೃಪೆಗೆ ಪಾತ್ರರಾಗಿ ಅವರ ಮೂಲಕ ಲಿಂಗಾಂಗ ಸಾಮರಸ್ಯವನ್ನರಿತು ಅಪಾರ ಪಾಂಡಿತ್ಯವನ್ನು ಗಳಿಸಿದರು. ಕಲ್ಯಾಣದ ಕೀರ್ತಿಯನ್ನು ಕೇಳಿ ಅನುಭವಮಂಟಪಕ್ಕೆ ಬಂದ ಈ ಶರಣದಂಪತಿಯನ್ನು ಶರಣ ಪ್ರಮಥರೆಲ್ಲ ಆದರದಿಂದ ಬರಮಾಡಿಕೊಂಡರಂತೆ. ಬಸವಪ್ರಭುವನ್ನು ಕಂಡು ಆನಂದಪರವಶರಾಗಿ ಭಕ್ತಿಯಿಂದ ಕೈ ಮುಗಿದ ಚೌಡಯ್ಯನವರು;

‘ಬಸವಣ್ಣನೇ ಭಕ್ತ ಪ್ರಭುದೇವರೇ ಜಂಗಮರು
ಇಂತೆಂಬ ಭೇದವಿಲ್ಲಯ್ಯ, ಅರಿವೇ ಗುರು,
ಗುರುವೇ ಪರಶಿವನು ಇದು ತಿಳಿದವನೇ
ಪರಂಜ್ಯೋತಿಯೆಂದ ಅಂಬಿಗರ ಚೌಡಯ್ಯ’

ಎಂಬ ವಚನದ ಮೂಲಕ ಮನಸಾರೆ ಹೊಗಳಿದ್ದಾರೆ. ಶಿವಶರಣರ ಸಂಗದಲ್ಲಿ ಕಾಲಕಳೆದು ಪರಿಪಕ್ವರಾದ ಇವರು ರಚಿಸಿದ ವಚನಗಳು ಹಸಿಗೋಡೆಯಲ್ಲಿ ಹರಳು ಎಸೆದಂತಿವೆ. ಇವರ ವಚನಗಳನ್ನು ಕಂಡ ಕವಿ ಕಾವ್ಯಾನಂದರು ‘ನಿಜದ ನಗಾರಿ ನಿರ್ಭಯತೆಯ ಭೇರಿ ಈ ಅಂಬಿಗರ ಚೌಡಯ್ಯ’ ಎಂದಿದ್ದಾರೆ. ಮುಪ್ಪಿನ ಷಡಕ್ಷರಿಯವರು ತಮ್ಮ ಸುಬೋಧ ಸಾಗರದಲ್ಲಿ ‘ಅಂಬಿಗರ ಚೌಡಯ್ಯನ ಮುಂಬಾಗಿಲನ್ನು ಕಾಯುವ ನಂಬಿಗೆಯ ಸೇವಕರು ಕುಂಭಿನಿಯೊಳಗಿನ್ನು ಸರಿಯದಾರು?’ ಎಂದು ಹಾಡಿ ಹರಸಿದ್ದಾರೆ.

ಘನಲಿಂಗದೇವನು (1480) ‘ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯಯಿಂತಿಪ್ಪ ಶಿವಶರಣರ ಮನೆ ಬಾಗಿಲನಿಕ್ಕುವ ಸೊಣಗನ ಮಾಡಿ ಎನ್ನಿರಿಸಯ್ಯ ಎಂದು ತಮ್ಮ ವಚನವೊಂದರಲ್ಲಿ ಹೇಳಿರುವುದೇ ಇದಕ್ಕೆ ನಿದರ್ಶನವಾಗಿದೆ. ಮಹಾಕವಿ ಷಡಕ್ಷರಿಯವರು ತಮ್ಮ ‘ಬಸವರಾಜ ವಿಜಯ’ದಲ್ಲಿ ‘ನಿಡುಗುಡಿಮಾರನಂಬಿಗರ ಚೌಡಯ್ಯ’ ಎಂದು ಸ್ಮರಿಸಿದ್ದರೆ, ಮಹಾಲಿಂಗ ವಿರಚಿತ ಗುರುಬೋಧಾಮೃತದ ‘ಕುಂಬಾರ ಗುಂಡಯ್ಯ, ಅಂಬಿಗರ ಚೌಡಯ್ಯ, ಕೆಂಭಾವಿಯೊಳಗೆ ಮೆರೆವ ಬೋಗಣ್ಣನಿಗೆ ಸಂಭ್ರಮದೊಳೆರಗಿ ನಮಿಸುವೆ’ ಎಂಬ ಪದಗಳು ಹೃದಯರ್ಸಯಾಗಿವೆ.

ಮಹಾಶಕ್ತಿಸಂಪನ್ನರಾದ ಅಂಬಿಗರ ಚೌಡಯ್ಯನವರ ಮಹಿಮೆಯಿಂದ ಸರ್ಪ ಕಚ್ಚಿ ಮೃತಪಟ್ಟ ಸೈನಿಕನು ಮರುಜೀವ ಪಡೆದ. ಕ್ಷಯ, ಕುಷ್ಠರೋಗಿಗಳು ಗುಣಮುಖರಾದರು. ಅವರು ನುಡಿದ ವಾಣಿಯಿಂದ ಭಕ್ತರ ಸಕಲ ಬೇಡಿಕೆಗಳು ಈಡೇರಿದವು. ಚೌಡಯ್ಯನವರ ಪಾರಮಾರ್ಥ ಸಾಧನೆಯನ್ನು ಕಂಡು ಮಾರುಹೋದ ಗುತ್ತಲ ಅರಸನು ಅವರಿಗೆ ದಾಸೋಹಕ್ಕೆಂದು ಶಿವಪುರಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಕಾಣಿಕೆಯಾಗಿ ನೀಡಿದನು.

ತಮಗೆ ನೀಡಿದ ಈ ಭೂಮಿಯನ್ನು ಚೌಡಯ್ಯನವರು ತಮ್ಮ ಮಗ ಪುರವಂತ ಹಾಗೂ ಶಿವದೇವರಿಗೆ ದಾನವಾಗಿ ನೀಡಿದರು. ಅದೇ ಕಾರಣಕ್ಕಾಗಿ ಶಿವಪುರಕ್ಕೆ ‘ಚೌಡಯ್ಯ ದಾನಪುರ’ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತಿದ್ದು, ಅದೇ ಇಂದು ಚೌಡದಾನಪುರವಾಗಿದೆ. ಬಸವಣ್ಣನವರ ಗರಡಿಯಲ್ಲಿ ಪಳಗಿದ ಇವರ ಅನುಭವವು ಅಮೃತಧಾರೆಯಾಗಿ ವಚನಗಳ ರೂಪದಲ್ಲಿ ಹರಿದುಬಂದಿವೆ. ನಿಜವಾದ ಭಕ್ತನಾರು? ಎಂಬುದನ್ನು ಕುರಿತು ತಮ್ಮ ವಚನದಲ್ಲಿ

‘ಓಡುವಾತ ಲೆಂಕನಲ್ಲ ಬೇಡುವಾತ ಭಕ್ತನಲ್ಲ
ಓಡಲಾಗದು ಲೆಂಕನು, ಬೇಡಲಾಗದು ಭಕ್ತನು
ಓಡೆನಯ್ಯ, ಬೇಡೆನಯ್ಯ ಎಂದ ಅಂಬಿಗರ ಚೌಡಯ್ಯ’ಎಂದು ಸಾರಿದ್ದು ಅಮೋಘವಾಗಿದೆ.

ಪರಮಾತ್ಮನ ನಿಜಸ್ವರೂಪವನ್ನು ಕುರಿತು

ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ
ಬ್ರಹ್ಮಕಪಾಲವಿಲ್ಲ ಭಸ್ಮಭೂಷಣನಲ್ಲ
ವೃಷಭ ವಾಹನನಲ್ಲ, ಋಷಿಯ ಮಗಳೊಡನಿರ್ದಾತನಲ್ಲ
ಎಸಗುವ ಸಂಸಾರದ ಕುರುಹಿಲ್ಲದಾತಂಗೆ
ಹೆಸರಾವುದೆಂದಾತ ಅಂಬಿಗರ ಚೌಡಯ್ಯ’
ಎಂದಿದ್ದಾರೆ.

ಸ್ಥಿತಪ್ರಜ್ಞರಾದ ಅವರು ಕೊನೆಯಲ್ಲಿ ಚೌಡದಾನಪುರದ ನದಿಯ ದಡದಲ್ಲಿ ಸಮಾಧಿಸ್ಥರಾದರೆಂದು ತಿಳಿದುಬರುತ್ತದೆ. ಆದ್ದರಿಂದ ಈ ನದಿದಡದಲ್ಲಿರುವ ದಿಬ್ಬದ ಮೇಲಿರುವ ಸಮಾಧಿಯನ್ನು ‘ಅಂಬಿಗರ ಚೌಡಯ್ಯನವರ ಸಮಾಧಿ’ ಎಂದು ಗುರುತಿಸಲಾಗಿದೆ. ಪ್ರತಿವರ್ಷ ಅಂಬಿಗರ ಚೌಡಯ್ಯನವರ ಜಯಂತಿಯ ನಿಮಿತ್ಯ ಸಂಕ್ರಮಣದ ಪರ್ವ ಕಾಲದಲ್ಲಿ ಬಹು ಸಡಗರ ಸಂಭ್ರಮದಿಂದ ಇಲ್ಲಿ ಜಾತ್ರಾಮಹೋತ್ಸವವು ಜರಗುತ್ತಲಿತ್ತು. ಈಗ ಪ್ರತಿವರ್ಷ ಜನವರಿ 21ರಂದು ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಗುತ್ತದೆ.

ಹನ್ನೆರಡನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕೃತಿಯಲ್ಲಿ ಬೆಳೆದಿದ್ದ ವರ್ಣಕಳೆಯನ್ನು ಅಂದು ವಚನ ಸಂಸ್ಕೃತಿಯೆಂಬ ಧಾರ್ಮಿಕ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ಮಿಳಿತವಾಗಿ ಎಲ್ಲ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಅದು ಪರಿಣಾಮಕಾರಿಯಾಗಿ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಅದಕ್ಕಿತ್ತು.

ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ! ಹತ್ತಾರು ಶಿವಶರಣರು ವರ್ಣತಂತುಗಳನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ:ಸತ್ವವನ್ನು ಬಡಿದೆಬ್ಬಿಸಿದ್ದರು. ವಚನ ಸಂಸ್ಕೃತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಸಂದೇಹ ಮತ್ತು ಹರವಿಟ್ಟ ಅವಿಚ್ಛಿನ್ನ ದೃಢತೆಯ ಅಭಿವ್ಯಕ್ತಿ ಇಂದಿಗೂ ಆದರ್ಶಯುತವೇ ಆಗಿ ಉಳಿದಿದೆಯೆಂದರೆ ಅದು ನಮ್ಮ ಭಾಷೆಯ, ಸಂಸ್ಕೃತಿಯ ಉತ್ಕೃಷ್ಟತೆಯನ್ನು ಆ ದಿನಗಳಲ್ಲಿಯೇ ಸ್ಪರ್ಶಿಸಿದ್ದಲ್ಲಿ ಯಾವುದೇ ಸಂದೇಹ ಇಲ್ಲ.

ಇಂತಹ ಶರಣ ಸಂಸ್ಕೃತಿಯಲ್ಲಿ ಸಾಗಿಹೋದ ಮಹಾಚೇತನಗಳ ಕುರಿತು ಸ್ವಲ್ಪ ಸಂಯಮದೊಂದಿಗೆ ಅವಲೋಕಿಸಿದಾಗ ಒಬ್ಬ ವ್ಯಕ್ತಿ ನಮ್ಮನ್ನು ಬಿಟ್ಟೂಬಿಡದ ರೀತಿಯಲ್ಲಿ ಆವರಿಸಿಕೊಂಡು ಅಂತರಂಗವನ್ನು ತಟ್ಟುತ್ತಾನೆ. ರಭಸ ನೀರಿನ ವಿರುದ್ಧ ಈಜುವ ಹಾಯಿದೋಣಿ, ತೆಪ್ಪದಲ್ಲಿ ಕುಳಿತ ಅಮಾಯಕ ಜನ, ಧೀರನಂತೆ ನಿಂತ ಹರಿಗೋಲು ಕೈಯಲ್ಲಿ ಹಿಡಿದ ಆ ಅಂಬಿಗ- ಹೀಗೆಯೇ ಆತನನ್ನು ನಾವು ಕಲ್ಪಿಸಿಕೊಳ್ಳಬೇಕು. ಆ ಅಂಬಿಗನ ಕೈಯಲ್ಲಿದ್ದದ್ದು ಅಂತಿಂತಹ ಹರಿಗೋಲಲ್ಲ. ಅದು ತನ್ನ ಜೊತೆಗಿದ್ದವರನ್ನು ಮನೋಸ್ವಾತಂತ್ರ್ಯದ ನೆಲೆಗೆ ಕರೆದೊಯ್ಯುವ ಭರವಸೆಯ, ಬಂಡಾಯದ ಹರಿಗೋಲು ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

ಅಂಬಿಗರ ಚೌಡಯ್ಯ ವಚನಕಾರರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಆತ ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದ. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕೃತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಆತ, ಮುನ್ನೂರರ ಆಸುಪಾಸಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾನೆ. ಒಂದೆರಡನ್ನು ಓದಿಕೊಳ್ಳಿ. ಆತನ ಆಶಯ, ಧಾಟಿ ನಿಮಗೆ ಅರ್ಥವಾದೀತು.

ಉಚ್ಚೆಯ ಬಚ್ಚಲಲ್ಲಿ ಹುಟ್ಟಿ, ನಾ ಹೆಚ್ಚು
ನೀ ಹೆಚ್ಚು ಎಂಬುವವರನ್ನು ಮಚ್ಚಿಲೇ ಹೊಡೆಯೆಂದಾನಂಬಿಗರ ಚೌಡಯ್ಯ

ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ

ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ
ಎಂದು ಹೊಡೆದಾಡುವಂತಹ ಅಣ್ಣಗಳನ್ನು
ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು
ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ
ವಾಮ ಪಾದುಕೆಯಿಂದ ಫಡಫಡನೆ ಹೊಡೆಯಬೇಕೆಂದ
ನಮ್ಮ ಅಂಬಿಗರ ಚೌಡಯ್ಯ

ಮೊಲೆ ಮೂಡಿ ಬಂದರೆ ಆ ಪಿಂಡವನು ಹೆಣ್ಣೆಂಬರು
ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು
ಆ ಇಬ್ಬರ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ
ನೋಡಿರೆಂದನಮ್ಮಂಬಿಗರ ಚೌಡಯ್ಯ

ಈಶ್ವರನನ್ನು ಕಾಂಬುದೊಂದಾಶೆಯುಳ್ಳೊಡೆ
ಪರದೇಶಕ್ಕೆ ಹೋಗಿ ಬಳಲದಿರು!
ಕಾಶಿಯಲ್ಲಿ ಕಾಯುವ ವಿನಾಶ ಮಾಡಬೇಡ!
ನಿನ್ನಲ್ಲಿ ನೀ ತಿಳಿದು ನೋಡಾ, ಜಗವು ನಿನ್ನೊಳಗೆಂತಾದ ಅಂಬಿಗರ ಚೌಡಯ್ಯ

ಅಂತರಂಗದ ಬೇಗುದಿಯನ್ನು, ಕಳಕಳಿಯನ್ನು ನಿರ್ಭಿಡೆಯಿಂದ ಪ್ರಕಟಿಸಿದ ಅಂಬಿಗರ ಚೌಡಯ್ಯನ ಧಾಟಿ ಓದುಗನಿಗೆ ತೀವ್ರ ಒರಟೆನಿಸುವುದು ಸಹಜ. ಆದರೆ ಪ್ರಮುಖವಾಗಿ ನಾವು ಗಮನಿಸಬೇಕಾದ್ದು ಆ ಸಂವೇದನಾಶೀಲ ವಿಡಂಬನೆಯ ವಿಚಾರ ಸಿರಿವಂತಿಕೆ ಶತಮಾನಗಳು ಕಳೆದರೂ ಪ್ರಸ್ತುತವೇ ಆಗಿ ಉಳಿಯಬೇಕಿರುವ ಅವಶ್ಯಕತೆ.ಒಂದು ಕ್ಷಣ ನಿಲ್ಲಿ! ಇಲ್ಲಿ ನಾನು ವಿವರಿಸಹೊರಟಿರುವುದು, ಅಂಬಿಗರ ಚೌಡಯ್ಯನ ಬಂಡಾಯ ಮನೋಧರ್ಮದ ಕ್ರಾಂತಿ ಹಾದಿಯ ವೈಭವವನ್ನಲ್ಲ. ದುಷ್ಟ ಸಮಾಜದೆಡೆಗಿನ ಆತನ ತಾರ್ಕಿಕ ವಿಚಾರಣೆಯ ದಿಟ್ಟ ಧಾಟಿಯೂ ಅಲ್ಲ. ಮನೋದಾಸ್ಯದ ವಿರುದ್ಧ, ಜಾತಿ ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಃಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶವನ್ನು ಬಿತ್ತಿ ಹೋದ ಛಡಿ ಏಟಿನ ಚೌಡಯ್ಯ ಇಂದಿನ ವ್ಯವಸ್ಥೆಗೆ ಅಪ್ರಸ್ತುತನಾಗುತ್ತಿದ್ದಾನೆಯೇ? ಇಂದಿನ ಅಂಬಿಗರ ಚೌಡಯ್ಯ, ಕಾಲಘಟ್ಟವೊಂದರ ಸಮಾಜವನ್ನು ಹೊಸಸ್ತರಕ್ಕೆ ಕರೆದೊಯ್ದಿದ್ದ ವಚನ ಸಂಸ್ಕೃತಿಯ ವೈಫಲ್ಯದ ಒಂದು ಪಾರ್ಶ್ವವನ್ನು ಬಿಂಬಿಸುತ್ತಿದ್ದಾನೆಯೇ? ಜಗತ್ತಿನ ಮುನ್ನಡೆಯೂ ಕಾಲದ ದೃಷ್ಟಿಯಿಂದ ಹಿನ್ನೆಡೆಯನ್ನು ಕಾಣುತ್ತದೆಯೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಕಾಲ ಇದು ಎನ್ನಿಸುತ್ತದೆ.

ಅಂಬಿಗರ ಚೌಡಯ್ಯನಂಥಹ ನಿಜಶರಣನ ಆ ಅಪೂರ್ವ ಸಂದೇಶಗಳು ಶತಮಾನಗಳು ಕಳೆಯುತ್ತಾ ಹೋದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗುತ್ತಾ ಸಾಗಬೇಕಿತ್ತು. ಶೋಷಣೆಗೆ ಒಳಗಾದ ಸಮಾಜ ವರ್ಗದ ಅಂತಃಶಕ್ತಿ ಸ್ವಾವಲಂಬನೆಯಿಂದ ಸುಭದ್ರವಾಗಬೇಕಿತ್ತು. ವ್ಯವಸ್ಥೆಯಲ್ಲಿ ರೂಪಿತವಾದ ಜನಪರ ಕಲ್ಯಾಣ ಕಾರ್ಯಕ್ರಮಗಳು ಆ ವರ್ಗಗಳ ಅಂತರಂಗದಲ್ಲಿದ್ದ ಬೇಗುದಿಯನ್ನು ಭಸ್ಮ ಮಾಡಬೇಕಿತ್ತು. ಮತ್ತು ಇಡೀ ಸಮಾಜ, ಜಾತಿ-ವರ್ಗಗಳನ್ನು ಮೀರಿ ವಿಶ್ವಮಾನವ ಪ್ರಜ್ಞೆಯ ಉದಾರತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದಾಗ ಇಡೀ ವಚನ ಸಂಸ್ಕೃತಿಯ ಪರಿಣಾಮಗಳ ಬಗ್ಗೆ ವಿಷಾದವೆನಿಸುವ ಸಿನಿಕತೆ ಮೂಡುತ್ತದೆ.

ಚೌಡಯ್ಯ ಈಗ ಒಂದು ಜಾತಿಯ ಸ್ವತ್ತಾಗಿ ಸೊರಗಿದ್ದಾನೆ ಮತ್ತು ಆತನಷ್ಟೇ ಅಲ್ಲ, ಎಲ್ಲ ಶರಣರೂ ಒಂದೊಂದು ಜಾತಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆಯಾ ಜಾತಿಯ ಇಂದಿನ ಜನಸಂಖ್ಯೆಯ ಪ್ರಾಬಲ್ಯದ ಮೇಲೆ ಆಯಾ ಶರಣರ ಸಂದೇಶಗಳು ಪ್ರಸ್ತುತತೆಯ ಕೀರ್ತಿಯನ್ನು ಗಳಿಸಿಕೊಳ್ಳುತ್ತಿರುವುದೂ ವಿಷಾದದ ಸತ್ಯ. ಅಂಬಿಗರ ಚೌಡಯ್ಯನ ವಿಷಯದಲ್ಲಿಯಂತೂ, ಶರಣನಾಗಲು ಆತ ದೀಕ್ಷೆ ನೀಡಿದ ಒಂದು ಜಾತಿ ಅವನನ್ನು ಒಂದೆಡೆಗೆ ಎಳೆಯುತ್ತಿದ್ದರೆ ಅವನು ಜನಿಸಿದ ಮೂಲಜಾತಿಯ ಮತಸ್ಥರು ಆತನನ್ನು ತಮ್ಮ ಸಾಮಾಜಿಕ ಅಸ್ತಿತ್ವದ ಕುರುಹಾಗಿ ಸ್ವೀಕರಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆತ, ಇಂದು ರಾಜಕಾರಣಿಗಳಿಗೆ ಮತಬ್ಯಾಂಕನ್ನು ಸೃಷ್ಟಿಸುವ ಮೋಡಿಗಾರ.

ಇಂದು ಆತನ ಹೆಸರಿನಲ್ಲಿ ಎರಡು ವಿಶ್ವ ವಿದ್ಯಾಲಯಗಳಲ್ಲಿ ‘ಪೀಠ’ ಎನ್ನುವ ಗದ್ದುಗೆಗಳನ್ನು ಸ್ಥಾಪಿಸಲಾಗಿದೆ. ರಾಜಕೀಯ ಪ್ರಾಬಲ್ಯದ ಕಾರಣ ಆತನ ಜಯಂತಿಯ ಆಚರಣೆಗೆ ಸರ್ಕಾರದ ಅಧಿಕೃತ ಮುದ್ರೆಯೂ ಬಿದ್ದಿದೆ. ಆತನ ವಚನಗಳಲ್ಲಿದ್ದ ಧರ್ಮ ನಿರ್ಭಿಡತೆಯ, ಜೀವನ ಪ್ರೀತಿಯ ಆಶಯ ಅವನತಿಯೆಡೆಗೆ ಮುಖ ಮಾಡಿ ನಿಲ್ಲುತ್ತಿದೆ. ಜಾತಿಯೆಂಬ ವಿಹೀನ ಆಚರಣೆ ಸಂಸ್ಕೃತಿಯೆಂಬ ಜೀವನತತ್ವವನ್ನೇ ಬುಡಮೇಲು ಮಾಡಲು ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು, ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಆತನ ತಾತ್ವಿಕ ಸಂದೇಶಗಳನ್ನು, ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸಿ ಇಡೀ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆಯೇ? ಈ ಜಾಡಿನಲ್ಲಿ ಸಿಗುವ ಕೆಲವು ಸತ್ಯಗಳು ಇಂದಿನ ಮಟ್ಟಿಗಂತೂ ನಿರಾಶೆಯನ್ನೇ ಮೂಡಿಸುತ್ತವೆ.

1. ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿಯೇ ವಿಶಾಲವಾಗಿ ಹರಿಯುವ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ ಇದೆ. ಪ್ರತಿ ಮಳೆಗಾಲದಲ್ಲಿನ ನೆರೆಗೆ ಅದಕ್ಕೆ ಮುಳುಗುವ ಭಾಗ್ಯವೂ, ದೌರ್ಭಾಗ್ಯವೂ ಇದೆ. ಅಂಬಿಗನ ಆತ್ಮವಾದ ಕಾರಣ, ಮುಳುಗದೇ ಉಳಿದೆನೆನ್ನುವ ಹಾಗೆ ದರ್ಶನ ನೀಡುವ ಸೌಭಾಗ್ಯವೂ ಅದಕ್ಕಿದೆ. ಈ ಚೌಡಯ್ಯದಾನಪುರದ ಜಾಗವನ್ನು ಅಂಬಿಗರ ಚೌಡಯ್ಯ ತನ್ನ ಗುರುವಾದ ಶಿವದೇವಮುನಿಗಳಿಗೆ ದಾನವಾಗಿ ಕೊಟ್ಟಿರುವ ಬಗ್ಗೆ ಶಿಶುನಾಳ ಷರೀಫರು ರಚಿಸಿದ ‘ಶಿವದೇವ ವಿಜಯಂ’ ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ. ಹಾಗಾಗಿಯೇ ಊರಿಗೆ ಆ ಹೆಸರು ರೂಢಿಗೆ ಬಂದಿತೆಂದೂ ಅದರಲ್ಲಿ ವಿವರಿಸಲಾಗಿದೆ.

ವೀರಶೈವ ಸಮುದಾಯದ ಶಿವದೇವಮುನಿಗಳು ಆತನಿಗೆ ಲಿಂಗದೀಕ್ಷೆ ನೀಡಿದರೆಂಬ ಕಾರಣಕ್ಕೆ, ಅನುಜನೆಂಬ ಮಮತೆಗೆ ಶ್ರೀ ಶಿವದೇವ ಒಡೆಯರ ಎಂಬ ವಕೀಲರು ಚೌಡಯ್ಯ ಲಿಂಗೈಕ್ಯನಾದ ಸ್ಥಳದಲ್ಲಿ ಗದ್ದುಗೆಯ ಜೀರ್ಣೋದ್ಧಾರ ಮಾಡಿ ೧೯೬೮ರಷ್ಟು ಹಿಂದೆಯೇ ಪುಟ್ಟದಾದ ಐಕ್ಯ ಮಂಟಪವನ್ನು ನಿರ್ಮಿಸಿದ್ದಾರೆ. ಕಾಲಾನುಕ್ರಮದಲ್ಲಿ ಸಾಮಾಜಿಕ ಪರಿಸ್ಥಿತಿಗಳ ಮನ್ವಂತರದ ಹಿನ್ನೆಲೆಯಲ್ಲಿ ರಾಜಕೀಯ ಪ್ರಾಬಲ್ಯಗಳು ಹೆಚ್ಚಿದಂತೆಲ್ಲಾ ಅಂಬಿಗರ ಚೌಡಯ್ಯನ ಮೂಲ ಸಮಾಜಸ್ಥರು ‘ಸಬಲತೆ’ಯನ್ನು ಗಳಿಸಿಕೊಂಡಿದ್ದಾರೆ. ಅದು ಸಹಜವೂ ಹೌದು. ಈ ಕಾರಣಕ್ಕೆ ಅಂಬಿಗರ ಚೌಡಯ್ಯ ತಮ್ಮವನೆಂದು ಹೇಳಿಕೊಳ್ಳುವ ಕಸುವು ಅವರಲ್ಲಿ ವೃದ್ಧಿಯಾಗಿ ಎರಡೂ ವರ್ಗಗಳಲ್ಲಿ ಹಬ್ಬಿದ ವಿಚಾರಭೇದಗಳು ಚೌಡಯ್ಯನ ಆತ್ಮವನ್ನು ಅನಾಥನನ್ನಾಗಿ ಮಾಡಿವೆ! ಇಂದು ಅಂಬಿಗರ ಚೌಡಯ್ಯನ ಐಕ್ಯಮಂಟಪದ ಸುತ್ತಲೂ, ಒಳಗೂ ಕಸ, ಕಡ್ಡಿ, ಕೊಳಚೆಗಳು ನಾರುತ್ತಿವೆ.

ಪಕ್ಕದಲ್ಲಿಯೇ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೆ ಸುತ್ತಮುತ್ತಲಿನ ಜಾಗ ಗ್ರಾಮಸ್ಥರ ಬಹಿರ್ದೆಸೆಯ ನಿರಾಳತೆಗೂ ಸಾಕ್ಷಿಯಾಗಿ ನಿಂತಿದೆ. ಪಕ್ಕದಲ್ಲಿಯೇ, ಮೇಲ್ಮಟ್ಟದಲ್ಲಿ ಇದ್ದುದರಲ್ಲಿ ಸುರಕ್ಷಿತವಾಗಿರುವ ಚಾಲುಕ್ಯರ ಕಾಲದ ಮುಕ್ತೇಶ್ವರ ದೇವಸ್ಥಾನ ಪಾರಂಪರಿಕ ಪಟ್ಟ ಗಿಟ್ಟಿಸಿಕೊಂಡು ಅದನ್ನು ಅಣಕಿಸುವಂತೆ ತೋರುತ್ತದೆ.ಒಡೆಯರ ಮತದ ಇಂದಿನ ಮಠಾಧೀಶರು ಅಂಬಿಗರ ಚೌಡಯ್ಯನನ್ನು ಆತನ ಮೂಲ ಸಮುದಾಯ ರಾಜಕೀಯವಾಗಿ ಅಪಹರಿಸಿಕೊಂಡಿರುವ ವಿಷಯದ ಬಗ್ಗೆ ಖಿನ್ನತೆಯ ಉಪೇಕ್ಷೆಯನ್ನು ತೋರಿದಂತೆ ಕಂಡರೆ, ಚೌಡಯ್ಯನ ಮೂಲ ಮತಸ್ಥರು ರಾಜಕೀಯ ನಾಯಕರ ಸಹಕಾರದೊಂದಿಗೆ ಹೊಸದಾಗಿ ಬೇರೊಂದು ಸ್ಥಳದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ವನ್ನು ನಿರ್ಮಿಸುವ ಬೃಹತ್ ಕಾರ್ಯದಲ್ಲಿ ತೊಡಗಿದ್ದಾರೆ. ಐಕ್ಯ ಮಂಟಪ ಅನಾಥವಾಗಿದೆ. ತುಂಗಭದ್ರೆಯೂ ಸಹನೆಯಿಂದ ಸೊರಗಿದ್ದಾಳೆ.

2. ಕಳೆದ ಎಂಟು ವರ್ಷಗಳ ಹಿಂದೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ ಸ್ಥಾಪನೆಯಾಗಿದೆ. ಸರ್ಕಾರ ನೀಡಿದ ಎರಡು ಕೋಟಿ ಅನುದಾನದಲ್ಲಿ ಒಂದೂವರೆ ಕೋಟಿಯಷ್ಟು ಹಣವನ್ನು ಸ್ಮಾರಕ ಭವನ ನಿರ್ಮಿಸಿ ಅದರೊಳಗೆ ಮೌನ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಉಳಿದ ಐವತ್ತು ಲಕ್ಷವನ್ನು ಬ್ಯಾಂಕಿನಲ್ಲಿ ಸ್ಥಿರಠೇವಣಿ ಇಟ್ಟು ಅದರಿಂದ ಬರುವ ಸಣ್ಣ ಮೊತ್ತದ ಬಡ್ಡಿಯ ಮೂಲಕ ವರ್ಷಕ್ಕೊಮ್ಮೆ ‘ಅಂಬಿಗರ ಚೌಡಯ್ಯ ಜಯಂತಿ’ಯನ್ನು ಆಚರಿಸಲಾಗುತ್ತದೆ. ಆಗಾಗ್ಗೆ ಒಂದೆರಡು ವಿಚಾರ ಸಂಕಿರಣಗಳನ್ನೂ ನಡೆಸಿ ಖರ್ಚು ಭರಿಸುವ ಶಾಸ್ತ್ರ ಮಾಡಲಾಗುತ್ತದೆ.

ವಿಶ್ವವಿದ್ಯಾಲಯದಲ್ಲಿ ದೈನಂದಿನ ಪಾಠ ಮಾಡಲೂ ಲಭ್ಯವಿಲ್ಲದ ಹಾಗಿರುವ ಪ್ರೊಫೆಸರ್ ಗಳ ಕೊರತೆ ಪೀಠ ನಿರ್ವಹಣೆಗೂ ವ್ಯಾಪಿಸಿದೆ. ಆ ಸ್ಥಳಕ್ಕೆ ಆಗಾಗ್ಗೆ ಎಡತಾಕುವ ಅಂಬಿಗರ ಚೌಡಯ್ಯನ ‘ಸಮಾಜ’ದ ವ್ಯಕ್ತಿಗಳು ತಮ್ಮ ಜಾತಿಯವರನ್ನೇ ಪೀಠದ ನಿರ್ದೇಶಕರನಾಗಿ ಮಾಡಬೇಕೆಂದು ಆಗ್ರಹಿಸುತ್ತಾರೆ. ಅಲ್ಲಿರುವ ಪ್ರತಿಕೂಲ ಪರಿಸ್ಥಿತಿಯ ಕಾರಣ ಉತ್ತರ ದೊರಕದೇ ಇನ್ನೊಮ್ಮೆ ಬರುತ್ತೇವೆಂದು ಗಡುವು ನೀಡಿ ಹೋಗುತ್ತಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲೂ ಅಂಬಿಗರ ಚೌಡಯ್ಯನ ಪೀಠ ೨೦೧೨ರಿಂದ ಇದ್ದು ಅಲ್ಲಿಯೂ ಪರಿಸ್ಥಿತಿ ಭಿನ್ನವಿಲ್ಲ. ವಿಚಾರ ಸಂಕಿರಣ, ಜಯಂತಿಗಳನ್ನು ಹೊರತು ಪಡಿಸಿದರೆ ಚೌಡಯ್ಯನ ತತ್ವ, ಜೀವನ, ಸಿದ್ಧಾಂತಗಳನ್ನು, ಜನಸಾಮಾನ್ಯರ ಮನಸ್ಸುಗಳಲ್ಲಿ ಬಿತ್ತುವ ವಿಶಿಷ್ಟ ಪ್ರಯತ್ನಗಳೇನೂ ಆಗಿಲ್ಲ. ಒಂದು ಪುಸ್ತಕ ಪ್ರಕಟವಾಗಿದ್ದರೂ ಸಾಮಾನ್ಯ ಜನರ ಮನಸ್ಸುಗಳನ್ನೂ ಹೇಗೆ ಮುಟ್ಟಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಂಬಿಗರ ಚೌಡಯ್ಯನ ಮತಸ್ಥರೆನ್ನುವ ಮೊಗವೀರರು ಈ ಪೀಠದ ಕಾರಣ ಎಷ್ಟು ಲಾಭ ಪಡೆದಿದ್ದಾರೆ? ತಿಳಿಯುವುದಿಲ್ಲ. ಅಲ್ಲಿಗೂ ಸರ್ಕಾರ ನೀಡಿರುವ ಐವತ್ತೇ ಲಕ್ಷದ ಅನುದಾನದಲ್ಲಿ ಬೇರೇನಾದರೂ ಹೇಗೆ ಮಾಡಲು ಸಾಧ್ಯ?ಅಂಬಿಗರ ಚೌಡಯ್ಯ ನಮ್ಮನ್ನು ಬಿಟ್ಟೂ ಬಿಡದೇ, ಶಿಲುಬೆಯೇರಿದ ಏಸುಕ್ರಿಸ್ತನನ್ನು ನೆನಪಿಸುತ್ತಾನೆ.

ಒಂಟಿಯಾಗಿ ನಡೆದು ಹೋದ ಬುದ್ಧನನ್ನೂ ಜ್ಞಾಪಿಸುತ್ತಾನೆ. ಏಸು ಕ್ರಿಸ್ತ ಯಹೂದಿಯಾಗಿಯೇ ಶಿಲುಬೆಗೇರಿದ. ತದನಂತರ ಕ್ರೈಸ್ತಧರ್ಮ ಉದಯವಾಯಿತು. ಗೌತಮ ಬುದ್ಧ ಸಾಗಿಹೋದ ಬಳಿಕವೇ ಬೌದ್ಧ ಧರ್ಮ ಚಿಗುರೊಡೆಯಿತು. ಅವರಿಬ್ಬರಿಗೂ, ಮಾನವಪ್ರೀತಿಯ ಹೊರತು ಹೊಸದೊಂದು ಧರ್ಮ ಸ್ಥಾಪನೆಯ ಕನಸಿರಲಿಲ್ಲ. ಅಂಬಿಗರ ಚೌಡಯ್ಯನೂ ಸನಾತನ ಧರ್ಮದ ಓರೆಕೋರೆಗಳನ್ನು ಖಂಡಿಸಿದ್ದಷ್ಟೇ ಅಲ್ಲ, ಜಾತಿ ಪದ್ಧತಿಯನ್ನು ನಿರಾಕರಿಸಿದ. ತನ್ನದೇ ರೀತಿಯಲ್ಲಿ ವಿಶ್ವ ಮಾನವತಾವಾದವನ್ನು ಪ್ರತಿಪಾದಿಸಿ ಸಾಗಿಹೋದ. ಆದರೆ, ಆತನ ಆತ್ಮವನ್ನು ಇಂದು ಜಾತಿಯ ಸಂಕೋಲೆಗಳಿಂದ ಬಿಗಿದು ಬಂಧಿಸಲಾಗಿದೆ. ಮಗ್ಗುಲು ಬದಲಿಸಲು ಆತನ ಚೇತನ ಇನ್ನೆಷ್ಟು ದಿನ ಕಾಯಬೇಕೋ?

ಕುವೆಂಪುರವರು ಭಾರತೀಯತೆಯ ಹೆಸರಿನಲ್ಲಿ ಎಲ್ಲಾ ಜಾತಿ ಮತಗಳನ್ನು ಉಳಿಸಿಕೊಳ್ಳುವುದಾದರೆ ಅಂತಹ ಭಾರತೀಯತೆ ಎಂದಿಗೂ ಪ್ರಸ್ತುತವಾಗುವುದಿಲ್ಲ. ವಿಶ್ವಮಾನವ ತತ್ವದ ಹೊರತು ಬದುಕಿಗೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಈ ಪ್ರಸ್ತುತತೆ ಎಂಬ ಪದದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕೇ ಎನ್ನುವ ಪ್ರಶ್ನೆಗೆ ಮನಸ್ಸು ಮೌನವನ್ನು ಮುರಿಯುವುದಿಲ್ಲ.

ಅಂದಹಾಗೆ ಅಂಬಿಗರ ಚೌಡಯ್ಯನ ಜಯಂತಿಯನ್ನು ಸರ್ಕಾರ ಅಧಿಕೃತವಾಗಿ ಜನವರಿ 21ರಂದು ಆಚರಿಸುತ್ತದೆ. ಅಂದು, ಚೌಡಯ್ಯನ ಸಮುದಾಯಕ್ಕೆ ಇನ್ನೂ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಕ್ಕಬೇಕು, ಮತ್ತು ರಾಜಕೀಯ ಪ್ರಾತಿನಿಧ್ಯ ಸಿಕ್ಕಾಗಲೇ ಸಮುದಾಯದ ಬೇಡಿಕೆಗಳಿಗೆ ಬಲ ದಕ್ಕುತ್ತದೆ ಎಂದು ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಆತನ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತ ಎಂದು ಸಾಹಿತಿಗಳು ತಮ್ಮ ಮಾತುಗಳನ್ನು ಪುನರಾವರ್ತಿಸುತ್ತಾರೆ. ಜನಸಾಮಾನ್ಯರ ಬದುಕು ತುಂಗಭದ್ರೆಯ ತಿಳಿನೀರಿನಂತೆಯೇ ಎಲ್ಲವನ್ನೂ ಉಪೇಕ್ಷಿಸುತ್ತಾ, ಮರೆಯುತ್ತಾ ಮುಂದೆ ಸಾಗುತ್ತದೆ.

ಯಲ್ಲಾಲಿಂಗ ದಂಡಿನ್
ಚಿಮ್ಮಾಇದಲ್ಲಾಯಿ
ಚಿಂಚೋಳಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

Published

on

  • ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ

ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು

ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.

ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.

ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.

ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ

ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.

ಮಹಿಳಾ ದಿನಾಚರಣೆಯ ಇತಿಹಾಸ

ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:

1. 1908 – ಮಹಿಳಾ ಹಕ್ಕುಗಳ ಹೋರಾಟ:

ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.

2. 1909 – ಮೊದಲ ಮಹಿಳಾ ದಿನಾಚರಣೆ:

ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.

3. 1910 – ಅಂತಾರಾಷ್ಟ್ರೀಯ ಹೋರಾಟ:

ಡೆನ್ಮಾರ್ಕ್‌ನ ಕೊಪನ್‌ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.

4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:

ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.

5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:

1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.

6. 1975 – ವಿಶ್ವ ಮಹಿಳಾ ವರ್ಷ:

UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು

7. 2011 – 100ನೇ ವಾರ್ಷಿಕೋತ್ಸವ:

2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.

ಮಹಿಳಾ ದಿನಾಚರಣೆಯ ಉದ್ದೇಶ

ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.

ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ

ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್‌ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.

ಮಹಿಳೆಯರು ಬದುಕಿನ ಉತ್ಸಾಹ

ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಾಧನೆಗಳ ಬೆಳಕು

1. ಶಿಕ್ಷಣ ಮತ್ತು ಸಶಕ್ತೀಕರಣ:

ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.

2. ಉದ್ಯೋಗ ಹಾಗೂ ಉದ್ಯಮಶೀಲತೆ:

ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.

3. ಕ್ರೀಡೆ ಮತ್ತು ಸಾಹಸ:

ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.

4. ಸಮಾಜಸೇವೆ ಮತ್ತು ಪ್ರಭಾವ:

ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.

ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ

ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.

ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್

ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.

“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಮ್ಮ‌ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

Published

on

  • ಹರ್ಷಕುಮಾರ್ ಕುಗ್ವೆ

ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.

ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ.‌ ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.

ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು..‌. ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.

‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು.‌.. ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತ‌ವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.

ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು.‌ ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು.‌ ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.

ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!

– ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅತ್ಮಕತೆ | ನೀರು ಸಾಬರೂ – ಎಸಿ ಮದನಗೋಪಾಲರೂ..

Published

on

  • ರುದ್ರಪ್ಪ ಹನಗವಾಡಿ

ಮಧ್ಯೆ ನಂಜನಗೂಡು ಪಕ್ಕದ ತಾಲ್ಲೂಕಾದ ಗುಂಡ್ಲುಪೇಟೆಯಿಂದ ರಾಜಕಾರಣಿಯಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಬೋರ್‌ವೆಲ್ ತೆಗೆಸಿ ಗ್ರಾಮೀಣ ಜನರಿಗೆ ಸ್ವಚ್ಛ ಕುಡಿಯುವ ನೀರು ಕೊಡುವಲ್ಲಿ ಯಶಸ್ವಿಯಾಗಿದ್ದರು. ಜನಪರ ಮಂತ್ರಿಗಳೂ ಆಗಿದ್ದರು.

ಗುಂಡ್ಲುಪೇಟೆಯಲ್ಲಿ ಭೂಸ್ವಾಧೀನ ಪ್ರಕರಣದಲ್ಲಿ ತಮ್ಮ ಸಂಬಂಧಿಕರೊಬ್ಬರ ಜಮೀನಿಗೆ ತಿರುಗಾಡಲು ದಾರಿಗಾಗಿ ಭೂಸ್ವಾಧೀನಪಡಿಸಲು ಹಿಂದಿನ ಎಸಿ ಅವರ ಅಳಿಯಂದಿರೇ ಆಗಿದ್ದ ಎಸ್.ಎ. ಸಾದಿಕ್ ಅವರು ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಯನ್ನು ರ‍್ಕಾರಕ್ಕೆ ಸಲ್ಲಿಸಿದ್ದರು. ಆದರೆ ಪುನಃ ಅದು ವಿಚಾರಣೆಗೆ ಬಂದಾಗ ಈ ಭೂಸ್ವಾಧೀನವು ಸಾರ‍್ವಜನಿಕರ ಹಿತ ಕಾಯುತ್ತಿಲ್ಲವೆಂದು ಮದನ್ ಗೋಪಾಲ್ ಅವರು ಆ ಪ್ರಸ್ತಾವನೆಯನ್ನು ರದ್ದುಗೊಳಿಸಲು ಸರ‍್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಭೂಸ್ವಾಧೀನ ಪ್ರಕರಣವನ್ನು ಮಂತ್ರಿಗಳ ಸಲಹೆ ಮೇರೆಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ನಂತರ ಅದನ್ನು ಕೈಬಿಟ್ಟ ಬಗ್ಗೆ ನಜೀರ್ ಸಾಬ್ ಅವರು ಎಸಿ ಮದನ್ ಗೋಪಾಲ್ ಮೇಲೆ ಕೆಂಡಾಮಂಡಲವಾಗಿದ್ದರು. ಎಷ್ಟೇ ಅನುಭವೀ, ನಿಸ್ಪೃಹ ರಾಜಕಾರಣಿಯಾಗಿದ್ದರೂ ನಜೀರ್ ಸಾಬ್ ಅವರು ತಾವು ಹೇಳಿದ ಕೆಲಸ ಮಾಡದ ನೌಕರ ಎಸಿ ಮದನ್ ಗೋಪಾಲ್ ಮೇಲೆ ಕಂದಾಯ ಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿ ಕೂಗಾಡಿದ್ದರು.

ಇದೇ ಕಾರಣಕ್ಕಾಗಿ ಮದನ್ ಗೋಪಾಲ್ ಅವರನ್ನು ಕೆಲವೇ ದಿನಗಳಲ್ಲಿ ನಂಜನಗೂಡು ಉಪ ವಿಭಾಗದಿಂದ ಬೇರೆಡೆಗೆ ರ‍್ಗಾವಣೆ ಕೂಡ ಮಾಡಲಾಗಿತ್ತು. ಅವರ ವರ್ಗಾವಣೆಯನ್ನು ವಿರೋಧಿಸಿ ಸರ‍್ವಜನಿಕರು, ನಂಜಗೂಡು, ಗುಂಡ್ಲುಪೇಟೆಗಳಲ್ಲಿ ಯಶಸ್ವಿ ಬಂದ್ ಮಾಡಿ ಪ್ರತಿಭಟಿಸಿದ್ದರು. ಅವರ ವರ‍್ಗಾವಣೆ ಆಗಿ ನಂತರ ಮೂರು ತಿಂಗಳಲ್ಲಿ ಯೋಗೇಂದ್ರ ತ್ರಿಪಾಠಿ ಬಂದರು. ಈ ನಡುವೆ ನಾನು, ನಂತರ ಮಂಜುನಾಥ್ ನಾಯಕ್ ಹಾಗೂ ಶಿಕ್ಷಣರ‍್ಥಿ ಎಸಿಯಾಗಿದ್ದ ಕೆ. ಶಿವರಾಂ ಅವರು ಸುಮಾರು ಮೂರು ತಿಂಗಳ ಕಾಲ ಚಾರ್ಜ್ನಲ್ಲಿದ್ದೆವು. ಮದನ್ ಗೋಪಾಲ್ ಅವರು ವೈಯಕ್ತಿಕವಾಗಿ ಕಷ್ಟಪಟ್ಟು ದುಡಿಯುವ ವ್ಯಕ್ತಿಯಾಗಿದ್ದರು. ಆದರೆ ಚುನಾಯಿತ ಪ್ರತಿನಿಧಿಗಳ ಜೊತೆ ಅತಿರೇಕದ ನೇರ ನೇರ ಹಣಾಹಣಿ ಮಾಡಿಕೊಂಡು ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳು ಹಿನ್ನೆಲೆಗೆ ಸರಿಯುತ್ತಿದ್ದವು.

ಯೋಗೇಂದ್ರ ತ್ರಿಪಾಠಿಯವರು ಬರುವ ವೇಳೆಗಾಗಲೇ ನನ್ನ ನಂಜನಗೂಡು ತಾಲ್ಲೂಕ್ ಆಡಳಿತದಲ್ಲಿ ಒಂದು ವರ‍್ಷಕ್ಕೂ ಹೆಚ್ಚು ಸಮಯ ಕಳೆದಿದ್ದೆ. ಹಾಗಾಗಿ ತ್ರಿಪಾಠಿಯವರ ಜೊತೆ ಕೆಲಸ ಕಾರ‍್ಯಗಳು ಸಲೀಸಾಗಿ ಸಾಗುತ್ತಿದ್ದವು. ಈ ಮೊದಲು ಎಸಿ ಶಿಕ್ಷಣರ‍್ಥಿಯಾಗಿದ್ದ ಕೆ. ಶಿವರಾಂ ಅವರು ಅನೇಕ ಮೌಖಿಕ ಆದೇಶಗಳನ್ನು ಹೇಳಿ ಮಾಡುವಂತೆ ನನಗೆ ನಿರ‍್ದೇಶನ ನೀಡುತ್ತಿದ್ದರು. ನಾನು ಖುದ್ದು ಭೇಟಿ ಮಾಡಿ ಅವರು ಹೇಳಿದ ಕೆಲಸಗಳನ್ನು ಮಾಡಲಿಕ್ಕಾಗದ ಕಾರಣದ ವಿವರ ನೀಡಿದರೂ ಸಮಾಧಾನಗೊಳ್ಳದೆ, ಜನರೆದುರಿಗೆ ಎಸಿ ಮಾಡಲು ಹೇಳಿದರೂ ತಹಸೀಲ್ದಾರ್ ಮಾಡದೆ ತಮ್ಮ ವಿರುದ್ಧವಿದ್ದಾರೆಂಬ ಆಭಾವನೆ ಬರುವಂತೆ ನಡೆದುಕೊಳ್ಳುತಿದ್ದರು. ಅವರಿನ್ನೂ ಶಿಕ್ಷಣರ‍್ಥಿಗಳಾಗಿದ್ದರೂ ಆಗಲೇ ತನಗೆಲ್ಲ ಗೊತ್ತು ಎಂಬ ಅಹಂನಿಂದ ವರ‍್ತಿಸುತ್ತಿದ್ದ ಕಾರಣ ಬಹುಬೇಗ ನನ್ನ ಅವರ ನಡುವೆ ವಿಶ್ವಾಸದ ಕೊರತೆಯಾಗಿ, ಏನಾದರೂ ಮಾಡಬೇಕೆಂದರೆ ಲಿಖಿತ ಆದೇಶ ಕಳಿಸಲು ಅವರ ಮ್ಯಾನೇಜರ್ ಅವರಿಗೆ ನಾನು ದೂರವಾಣಿ ಮುಖಾಂತರ ಹೇಳುತ್ತಿದ್ದೆ. ಆ ನಂತರ ಮತ್ತೆ ಕೆಲವು ದಿನಗಳಲ್ಲಿ ಅವರನ್ನು ಬೇರೆ ತಾಲ್ಲೂಕಿಗೆ ತರಬೇತಿಗಾಗಿ ಕಳಿಸಿದ ಕಾರಣ ನನ್ನ ಮನಸ್ತಾಪ ಅಲ್ಲಿಗೆ ಮುಗಿದಿತ್ತು. ಆದರೆ ಮುಂದೆ ಅನೇಕ ಬಾರಿ ಅವರೊಡನೆ ಒಡನಾಡುವ ಸಂರ‍್ಭದಲ್ಲಿ ಇದ್ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸರಳವಾಗಿ ನಡೆಸಿಕೊಂಡ ಕಾರಣದಿಂದಾಗಿ ಅವರ ಬಗ್ಗೆ ನನ್ನಲ್ಲಿದ್ದ ಕಹಿ ಕರಗಿ ಸಹಜತೆ ಮೂಡಿದೆ.

ನನ್ನ ಕಛೇರಿ ಕೆಲಸಗಳ ಜೊತೆ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ನಮ್ಮ ಮೈಸೂರಿನ ಸಮಾಜವಾದಿ ಗೆಳೆಯರ ಜೊತೆ ಚರ್ಚಿಸಿ ಡಾ. ಎಲ್. ಬಸವರಾಜ್, ಸುಜನಾ, ಕೆ.ಎಸ್. ಭಗವಾನ್, ಕೆ. ರಾಮದಾಸ್ ಅವರನ್ನು ಕರೆಸಿ ನಮ್ಮ ತಾಲ್ಲೂಕಿನಲ್ಲಿ ಭಾಷಣ ಮಾಡಿಸುತ್ತಿದ್ದೆ. ಡಿಎಸ್‌ಎಸ್, ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಅನೇಕ ಮಿತ್ರರು ನನ್ನ ಒಡನಾಟದಲ್ಲಿದ್ದರು.

ಈಗ ಹೆಸರಾಂತ ಸಾಹಿತಿ ಮತ್ತು ನನ್ನ ಮಿತ್ರನಾಗಿದ್ದ ಮಾದೇವನ ಊರಾದ ದೇವನೂರಿಗೂ ಹೋದಾಗ ಅವರ ಮನೆಗೂ ಹೋಗಿ ಬಂದಿದ್ದೆ. ಕೃಷ್ಣಪ್ಪ – ಇಂದಿರಾ ಅವರು ಮಕ್ಕಳಾದ ಶಾಲಿನಿ, ಸೀಮಾ ಅವರುಗಳ ಜೊತೆ ನಂಜನಗೂಡಿಗೆ ಬಂದು ಉಳಿದು ನಂಜುಂಡೇಶ್ವರ ದೇವಸ್ಥಾನದ ಹಬ್ಬದಲ್ಲಿ ಭಾಗವಹಿಸಿದ ನೆನಪು ಈಗಲೂ ಹಸಿರಾಗಿದೆ.

ಡಿಎಸ್‌ಎಸ್‌ನ ರಾಜ್ಯ ಮಟ್ಟದ ಕಲಿಕಾ ಸಮಾವೇಶವನ್ನು (study camp ) ನಂಜನಗೂಡು ತಾಲ್ಲೂಕಿನಲ್ಲಿನ ವಿದ್ಯಾಪೀಠದಲ್ಲಿ ಕೃಷ್ಣಪ್ಪನವರು ಸುಮಾರು ಒಂದು ವಾರದ ಕಾಲ ನಡೆಸಿದ್ದರು. ಆಗ ರಾಜ್ಯದ ಮೂಲೆಮೂಲೆಗಳಿಂದ ಬಂದು ಡಿಎಸ್‌ಎಸ್‌ನ ಹೋರಾಟದ ರೂಪುರೇಷೆಗಳನ್ನು ಚರ್ಚಿಸುತ್ತಿದ್ದುದನ್ನು ನಾನು ಭಾಗವಹಿಸದಿದ್ದರೂ ತಿಳಿದುಕೊಳ್ಳುತ್ತಿದ್ದೆ.

ಡಿಎಸ್‌ಎಸ್‌ನ ಅಂದಿನ ಬಹುತೇಕ ರ‍್ಚೆಗಳು ರ‍್ಕಾರದ ನಿಷ್ಕಿçಯತೆ, ದಲಿತ ಶಾಸಕರುಗಳ ಗುಲಾಮಿತನ, ದಲಿತರ ಮೇಲಿನ ದರ‍್ಜನ್ಯ, ದಲಿತರ ಕರ‍್ಯಕ್ರಮಗಳಲ್ಲಿನ ನಿಧಾನಗತಿ ಅನುಷ್ಠಾನ, ಇಂತಹವೇ ರ‍್ಚೆಯಾಗುತ್ತಿದ್ದವು. ಅಂತಹ ಸಂಘಟನೆಗೆ ತಹಸೀಲ್ದಾರನಾಗಿ ಭಾಗಿಯಾಗುವುದು, ಸಹಕಾರ ನೀಡುವುದು ಸರಿಯಲ್ಲವೆಂದು ನನಗೆ ನಮ್ಮ ಹಿರಿಯ ಸಿಬ್ಬಂದಿ ಹೇಳುತ್ತಿದ್ದರೂ ನಾನು ನನ್ನ ಇತರೆ ಸಾಮಾನ್ಯ ಕೆಲಸಗಳಲ್ಲಿ ಹಿಂದೆ ಬೀಳದೆ ಮತ್ತು ಇತರೆ ಸಾರ‍್ವಜನಿಕರಲ್ಲೂ ಯಾವುದೇ ತಗಾದೆ ಬಾರದಂತೆ ಕೆಲಸ ನಿರ‍್ವಹಿಸಿದ್ದರಿಂದ ಬೇರಾರೂ ಆಕ್ಷೇಪಿಸುತ್ತಿರಲಿಲ್ಲ. ಆದರೆ ಆಗ ನಂಜನಗೂಡಿನವರೇ ಆಗಿದ್ದ ಡಿಎಸ್‌ಎಸ್‌ನಲ್ಲಿ ಇದ್ದವನೊಬ್ಬ ಮಾದೇವ, ಕೃಷ್ಣಪ್ಪನವರನ್ನು ವೈಯಕ್ತಿಕವಾಗಿ ದ್ವೇಷಿಸುವ ಮನಸ್ಸಿನ ವ್ಯಕ್ತಿ. ನಮ್ಮ ಕಛೇರಿಯ ಸರ‍್ವೆಯರ್ ನೌಕರನನ್ನು ಸಹಾಯ ಪಡೆದು, ನಮ್ಮ ಕಛೇರಿಯ ಬಗ್ಗೆ ಕರಪತ್ರ ಹಾಕಿ `ಭ್ರಷ್ಟಾಚಾರದ ಕೂಪ ತಾಲ್ಲೂಕು ಕಛೇರಿ’ ಎಂದೆಲ್ಲ ದೂರಿದ್ದರು. ಆದರೆ ಅದಕ್ಕೆಲ್ಲ ಕುಮ್ಮಕ್ಕು ಕೊಟ್ಟವನು ನನ್ನ ಕಛೇರಿಯ ಸರ‍್ವೆಯರ್ ಸಂಬಂಧಿ ಡಿ.ಎಸ್.ಎಸ್.ನಲ್ಲಿಯೇ ಇದ್ದವನೊಬ್ಬ ಎಂದು ನನಗೆ ತಿಳಿದು ಬಂತು.

ಜೊತೆಗೆ ನಮ್ಮ ಕಚೇರಿಯ ರ‍್ವೇಯರ್ ದೈನಂದಿನ ಕೆಲಸದಲ್ಲಿ ನಿರ‍್ಲಕ್ಷ್ಯ ತೋರುತ್ತಿದ್ದ ಕಾರಣದಿಂದ ನಾನು ಮೊದಲೇ ಅವನನ್ನು ಅಮಾನತ್ತುಗೊಳಿಸಿದ್ದೆ. ಆ ಕಾರಣ ಅವನು ನನ್ನ ಬಗ್ಗೆ ಮೊದಲೇ ಅಸಮಾಧಾನಗೊಂಡಿದ್ದ. ನಂತರದ ದಿನಗಳಲ್ಲಿ ನಾನೇನೂ ಹೇಳದಿದ್ದರೂ ಕರಪತ್ರ ಹಾಕಿದ ಬಗ್ಗೆ ಬಂದು ತನ್ನ ನಡವಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ. ಇದಕ್ಕೆಲ್ಲ ತನ್ನ ಭಾವ ಡಿಎಸ್‌ಎಸ್‌ನಲ್ಲಿರುವವನು ಕಾರಣ ಎಂದು ಹೇಳಿ ನನಗೆ ದಂಗುಬಡಿಸಿದ್ದ. ಇಂತಹ ವಿಷಯಗಳನ್ನೆಲ್ಲ ನಿಭಾಯಿಸುವ ಅನುಭವ ನನಗೆ ಇದ್ದುದರಿಂದ ಮತ್ತೇನು ಅದು ಬೆಳೆಯಲಿಲ್ಲ.

ನಂಜನಗೂಡಿನಲ್ಲಿ ನಾನಿರುವಾಗ ಪೋಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಪಿ.ಹೆಚ್. ರಾಣೆ, ಇಬ್ಬರು ಇನ್ಸ್ಪೆಕ್ಟರ್ ಮತ್ತು ನಾಲ್ಕು-ಐದು ಜನ ಸಬ್ ಇನ್ಸ್ಪೆಕ್ಟರ್‌ಗಳು ಇದ್ದರು. ನಾವೆಲ್ಲ ಊರಿನಲ್ಲಿರುವ ಯಾವುದೇ ಪ್ರತಿಷ್ಠಿತ ಮನರಂಜನೆಯ ಕ್ಲಬ್‌ಗಳಿಗೆ ಹೋಗುತ್ತಿರಲಿಲ್ಲ. ಅದರ ಬದಲು, ಪೋಲೀಸ್ ಸ್ಟೇಷನ್ ಬಳಿ ಇದ್ದ ವಿಶಾಲವಾದ ಮೈದಾನದಲ್ಲಿ ಬೆಳಗಿನ ಜಾವದಲ್ಲಿ ಬ್ಯಾಟ್‌ಮಿಂಟನ್, ಷಟಲ್ ಕಾಕ್ ಆಟ ಪ್ರಾರಂಭಿಸಿದ್ದೆವು. ಅಲ್ಲಿಗೆ ಕಂದಾಯ ಇಲಾಖೆಯಲ್ಲಿನ ವಿಎ, RI & ಸಬ್ ಇನ್ಸ್ಸ್ಪೆಕ್ರ‍್ಸ್ ಮತ್ತು ನನ್ನ ಬಿ.ಎ. ತರಗತಿಯ ಕ್ಲಾಸ್ ಮೇಟ್ ಆಗಿದ್ದ ನರಸಿಂಹಸ್ವಾಮಿ ಸೇರಿ ಒಂದೆರಡು ಘಂಟೆಗಳ ಕಾಲ ಆಟದಲ್ಲಿ ಕಳೆಯುತ್ತಿದ್ದೆವು. ಆಗಲೇ ತಾಲ್ಲೂಕಿನಲ್ಲಿನ ಸಮಸ್ಯೆಗಳನ್ನು ಸಾಂಧರ‍್ಭಿಕವಾಗಿ ಚರ‍್ಚಿಸಿ, ಶಾಂತಿ ಕಾಪಾಡಲು ಬೇಕಾದ ಕ್ರಮವಾಗಿ ಕೆಲವರನ್ನು ಒಂದೆರಡು ವಾರಗಳ ಕಾಲ ಸಬ್ ಜೈಲಿಗೆ ಕಳಿಸಲು ಕೋರುತ್ತಿದ್ದರು. ಇಲ್ಲವೇ ಪ್ರತಿ ವಾರವೂ ಹಾಜರಿರಲು ನೋಟಿಸ್ ನೀಡಿ ಬಾರದಿದ್ದಾಗ ದಸ್ತಗಿರಿ ಮಾಡಿ ತರಲು ನನ್ನಿಂದ ಅದೇಶ ಪಡೆದು ಕರೆತರುತ್ತಿದ್ದರು. ನಂತರ ವಿಚಾರಣೆ ಮಾಡಿ, ಒಳ್ಳೆಯ ನಡೆವಳಿಕೆಯ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುತ್ತಿದ್ದೆವು. ಇನ್ನು ಕೆಲವು ಭಾರಿ ಈ ಎಲ್ಲ ಅಖPಅ 107 ಪ್ರಕರಣದಲ್ಲಿದ್ದ ಆಪಾದಿತರನ್ನು, ಗ್ರಾಮ ಸಹಾಯಕರನ್ನು ಒಟ್ಟುಗೂಡಿಸಿ ನಮ್ಮ ಕಛೇರಿಯ ಆವರಣದಲ್ಲಿದ್ದ ಜಾಗದಲ್ಲಿ ಗಿಡ ನೆಡಲು ಬೇಕಾದ ಗುಂಡಿ ತೆಗೆಯಲು ತೊಡಗಿಸಿ ದಿನದ ಕೊನೆಯಲ್ಲಿ ಕೇಸು ಕರೆದು ಕೇಸನ್ನು ಮುಂದೂಡುತ್ತಿದ್ದೆನು. ಹೀಗಾಗಿ ತಾಲ್ಲೂಕಿನಲ್ಲಿ, ಜಾತಿ ಜಗಳಗಳಾಗಲೀ, ದೊಂಬಿಗಳಾಗಲೀ ಮಾಡಲು ಪುಂಡ ಪೋಕರಿಗಳಿಗೆ ಅವಕಾಶವಿರುತ್ತಿರಲಿಲ್ಲ.

ತಾಲ್ಲೂಕು ಮಟ್ಟದ ನಾಯಕರು

1986ರ ನಂತರ ಶಾಸಕರುಗಳ ಜೊತೆ ಜಿಲ್ಲಾ ಪರಿಷತ್ ಚುನಾವಣೆಗಳು ಮುಕ್ತಾಯಗೊಂಡು ತಾಲ್ಲೂಕುಮಟ್ಟದಲ್ಲಿ ಹೆಜ್ಜಿಗೆ ರಾಮಯ್ಯ, ದೇವನೂರ ಸಿದ್ದಪ್ಪ, ಬಸವರಾಜ್, ಕಳಲೆ ಸಿದ್ದ ನಾಯಕ್, ಶಶಿಕಲಾ ನಾಗರಾಜ್ ಮತ್ತು ಶಶಿಕಲಾ ಬಾಲರಾಜ್ ಜೊತೆಗೆ ನಂಜನಗೂಡು ಟೌನ್‌ನಲ್ಲಿ ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರೂ ಇರುತ್ತಿದ್ದರು. ಇವರೆಲ್ಲ ಸಣ್ಣಪುಟ್ಟ ಕೆಲಸಗಳಿಗೆ ಶಿಫಾರಸ್ಸು ಮಾಡಲು ತಾಲ್ಲೂಕು ಕಛೇರಿಗೆ ಬರುತ್ತಿದ್ದರು. ಆಗುವ ಕೆಲಸ ಮಾಡುವುದರಲ್ಲಿ ವಿಳಂಬವಾಗದಂತೆ, ಆಗದಿರುವ ಕೆಲಸಗಳಿಗೂ ನನ್ನ ಮಟ್ಟದಲ್ಲೇ ಅವರಿಗೆ ವಿವರಿಸಿ ಹೇಳುತ್ತಿದ್ದೆ. ಅವರುಗಳು ಒಮ್ಮೊಮ್ಮೆ ಅದೇ ವಿಷಯಗಳನ್ನು ಶಾಸಕರುಗಳ ಹತ್ತಿರವೂ ಪ್ರಸ್ತಾಪಿಸಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ನನ್ನ ವಿವರಣೆ ಶಾಸಕರುಗಳಿಗೂ ಅದೇ ಆಗಿರುತ್ತಿತ್ತು. ಹಾಗಾಗಿ ಆಗುವ ಕೆಲಸಗಳಿಗೆ ಯಾವ ಶಿಫಾರಸ್ಸು ತಂದರೂ ಆಗುವುದಿಲ್ಲ ಎಂಬ ನಂಬಿಕೆ ಅವರಿಗೆಲ್ಲ ತಿಳಿದು ಬಂದಿತ್ತು.

ಗೃಹಮಂತ್ರಿಯಾಗಿದ್ದ ರಾಚಯ್ಯನವರು ಕರ‍್ನಾಟಕ ಕಂಡ ಹಿರಿಯ ಸಜ್ಜನ ರಾಜಕಾರಣಿ. ಅವರು ತಾಲ್ಲೂಕಿನಲ್ಲಿ ಪ್ರವಾಸ ಇರುವಾಗ, `ಇತರೆ ಇಬ್ಬರು ಶಾಸಕರುಗಳು ಯುವಕರಾಗಿದ್ದ ಕಾರಣ ಏನಾದರೂ ನಿನ್ನಿಂದ ತಪ್ಪು ಮಾಡಿಸಿ, ಮುಂದೆ ನೀನಿನ್ನು ಎಸಿ, ಡಿಸಿ ಆಗಬೇಕಾದವನು, ಎಚ್ಚರದಿಂದ ಕೆಲಸ ನರ‍್ವಹಿಸಬೇಕೆಂದು’ ಸಲಹೆ ನೀಡುತ್ತಿದ್ದರು. ನನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಸುಮಾರು 20 ವರ‍್ಷಗಳ ಅಂತರವಿದ್ದ ಅವರ ಮಾತು ನನಗೆ ನಿಜವಾದ ಕಳಕಳಿಯಿಂದ ಕೂಡಿದ ಮಾತಾಗಿತ್ತು. ಅವರಿಗೆ ಜನರಿಗೆ ಒಳ್ಳೆಯ ಆಡಳಿತ ನೀಡಿದರೆ ಸಾಕಾಗಿತ್ತು. ಮತ್ತಾವ ಒಳ ಒಪ್ಪಂದಗಳ ಮಾತು ಅವರ ಆಡಳಿತದಲ್ಲಿ ಸುಳಿಯುತ್ತಿರಲಿಲ್ಲ.

ಕಂದಾಯ ನೌಕರರ ದಿನಾಚರಣೆ

ವಿಧಾನಸಭೆ ಚುನಾವಣೆ ಆಗಿ ಮೂರು ರ‍್ಷವಾಗಿತ್ತು. ಜಿಲ್ಲಾ ಪರಿಷತ್ ಆಗತಾನೆ ಚುನಾವಣೆಗಳಾಗಿ ಹೊಸ ಸದಸ್ಯರುಗಳು ಆಯ್ಕೆಯಾಗಿದ್ದರು. ಮಾಮೂಲಿ ಕಂದಾಯ ಮತ್ತು ತಾಲ್ಲೂಕು ದಂಡಾಧಿಕಾರಿಯ ಕೆಲಸಗಳನ್ನು ಬಿಟ್ಟರೆ ಮತ್ತಾವ ಒತ್ತಡದ ಕೆಲಸಗಳು ಇರಲಿಲ್ಲ. ಹೀಗಿರುವಾಗ ಕಂದಾಯ ಅಧಿಕಾರಿಗಳು ರ‍್ಷಪರ‍್ತಿ ದುಡಿತದಲ್ಲೇ ಇದ್ದು, ಕಲೆ ಸಂಸ್ಕೃತಿ, ಸಂಗೀತದ ಬಗ್ಗೆ ಮುಖ ಮಾಡುವುದೇ ಇಲ್ಲ. ಈ ಬಗ್ಗೆ ನಾವ್ಯಾಕೆ ಇಡೀ ಜಿಲ್ಲೆಯ ನೌಕರರನ್ನು ಒಳಗೊಂಡಂತೆ 1-2ದಿನ ನಮ್ಮ ಕಂದಾಯ ನೌಕರರ ದಿನಾಚರಣೆ ಆಚರಿಸಬಾರದು ಎಂದು ನಮ್ಮ ಎಸಿ ತ್ರಿಪಾಠಿಯವರ ಜೊತೆ ಚರ‍್ಚಿಸಿ, ನಂತರ ಡಿಸಿಗೂ ಹೇಳಿದೆ.

ಎಲ್ಲ ತಹಸೀಲ್ದಾರ್ ಮಿತ್ರರೊಡನೆ ಕೂಡ ಮೌಖಿಕವಾಗಿ ಚರ‍್ಚಿಸಿ ಅವರ ಸಹಕಾರವನ್ನು ಕೋರಿದೆ. ಅದರಂತೆ, ವಿವಿಧ ಆಟಗಳ ಸ್ಪರ್ಧೆ, ಹಾಡುಗಾರಿಕೆ, ಕೊನೆಯ ದಿನದಲ್ಲಿ ಮಹಾಭಾರತದ ಕುರುಕ್ಷೇತ್ರದ ನಾಟಕ ಎಂದೆಲ್ಲ ತಯಾರಿಗಳು ನಡೆದವು. ಹುಣಸೂರು, ಮೈಸೂರು ಮತ್ತು ನಂಜನಗೂಡು ಉಪ ವಿಭಾಗಗಳ ಉಪ ವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕು ತಹಸೀಲ್ದಾರರು, ವಿಎ, ಆರ್‌ಐ ಹಾಗೂ ಕಛೇರಿ ಸಿಬ್ಬಂದಿ ಎಲ್ಲರೂ ಎಲ್ಲ ಆಟ ಪಾಠಗಳಲ್ಲಿ ಭಾಗವಹಿಸಿದ್ದರು. ಆಟಗಳಲ್ಲಿ ಕಬಡ್ಡಿ, ಬ್ಯಾಟ್ ಮಿಂಟನ್, ಷಟಲ್ ಕಾಕ್, ವಾಲಿಬಾಲ್, ಚೆಸ್ ಹೀಗೆಲ್ಲ ಸ್ರ‍್ಧೆಗಳನ್ನು ನರ‍್ವಹಿಸಲು ಎಇಓ ಅವರನ್ನು ಸಂರ‍್ಕಿಸಿ ಒಬ್ಬ ಕ್ರೀಡಾ ಅಧಿಕಾರಿಯನ್ನು ಕೋರಿದ್ದೆ. ಅವರು ಎಲ್ಲಾ ಕ್ರೀಡೆಗಳನ್ನು ವ್ಯವಸ್ಥೆಗೊಳಿಸಿ, ಆಡಿಸಿ ಬಹುಮಾನಿತರ ಪಟ್ಟಿ ನೀಡಿದ್ದರು. ನಿಯಮಿತ ಅಭ್ಯಾಸಗಳು ಇಲ್ಲದ ಆಟಗಾರರೊಬ್ಬರು ಕಬ್ಬಡಿ ಆಟದಲ್ಲಿ ಬಿದ್ದು ಅವರ ಕೈ ಮುರಿದಿತ್ತು. ಸದ್ಯ ಅವರನ್ನು ನಂಜನಗೂಡಿನಲ್ಲಿಯೇ ಉಪಚರಿಸಿ ಸುಧಾರಿಸುವಂತಾಯಿತು.

ಈ ಸಮಾರಂಭಕ್ಕೆ ಮೊದಲ ದಿನ ಎಲ್ಲಾ ಸ್ಪರ್ಧೆಗಳನ್ನು ನಡೆಸಿ ಎರಡನೇ ದಿನ ಸಮಾರೋಪ ಸಮಾರಂಭ ಮತ್ತು ನಾಟಕವಿತ್ತು. ಆಗ ಮೈಸೂರು ವಿಭಾಗಕ್ಕೆ ವಿಭಾಗಾಧಿಕಾರಿಗಳಾಗಿದ್ದ ನೀಲಕಂಠರಾಜು, ಡಿಸಿ ವಿ.ಪಿ. ಬಳಿಗಾರ್, ಹುಣಸೂರು ಎಸಿಯಾಗಿದ್ದ ಶಿವಲಿಂಗಮರ‍್ತಿ, ಮೈಸೂರು ಎಸಿ ಈಶ್ವರ್ ನಮ್ಮ ಎಸಿ ಯೋಗೇಂದ್ರ ತ್ರಿಪಾಠಿ ಎಲ್ಲ ಸಂತೋಷದಿಂದ ಭಾಗವಹಿಸಿದ್ದರು. ನಮ್ಮಲ್ಲಿದ್ದ 80 ಜನ ಗ್ರಾಮ ಸಹಾಯಕರಿಗೆ ವಿಶೇಷವಾದ ಸಮವಸ್ತ್ರ ಹೊಲಿಸಿ ಹೊಸ ಬೂಟುಗಳನ್ನು ಕೊಡಿಸಿ, ಅವರಿಗೆ ಪೋಲೀಸ್ ಪೇದೆಗಳಂತೆ ತರಬೇತಿಯನ್ನು ನೀಡಲು ನಮಲ್ಲಿಯೇ ಇದ್ದ ಕಸಬಾ ವಿಎ – ರಾಧಾಕೃಷ್ಣನಿಗೆ ಜವಾಬ್ದಾರಿ ನೀಡಿದ್ದೆ. ರಾಧಾಕೃಷ್ಣ VA ಆಗಿದ್ದರೂ ಒಬ್ಬ DSPಯಂತೆ ಪೊಲೀಸ್ ನಡವಳಿಕೆಗಳನ್ನು ರೂಢಿಸಿಕೊಂಡಿದ್ದ. ಅವನ ಕೆಳಗೆ ತರಬೇತಿಗೊಂಡ ನಮ್ಮ ಗ್ರಾಮ ಸಹಾಯಕರು ಶಿಸ್ತಿನ ಪೊಲೀಸ್ ಪೇದೆಗಳಂತೆ ನಡೆದುಕೊಳ್ಳುತ್ತಿದ್ದರು.

ಸಮಾರಂಭ ಪ್ರಾರಂಭವಾಗುವ ಮುನ್ನ ನಮ್ಮ ಗ್ರಾಮ ಸಹಾಯಕರೆಲ್ಲ ಒಟ್ಟಿಗೆ ಸಮವಸ್ತ್ರದಲ್ಲಿದ್ದು, ಪೋಲೀಸ್ ಇಲಾಖೆ ನೀಡುವ ‘ಗಾರ್ಡ್ ಆಫ್ ಆನರ್’ನಂತೆ ಎಲ್ಲ ಅತಿಥಿಗಳಿಗೂ ಗೌರವ ವಂದನೆ ನೀಡಿದಾಗ ‘you have summoned police personnel also here’ ಎಂದು ಡಿವಿಸಿ ಉದ್ಘಾರ ತೆಗೆದರು. ‘ನೋ ಸರ್, ಇವರೆಲ್ಲ ನಮ್ಮ ತಾಲ್ಲೂಕಿನ ಗ್ರಾಮ ಸಹಾಯಕರು’ ಎಂದಾಗ ಅವರು ಅಚ್ಚರಿ ವ್ಯಕ್ತಪಡಿಸಿ, ಪ್ರಶಂಸೆ ಕೂಡ ಮಾಡಿದ್ದರು. ಇಂತಹ ಕಂದಾಯ ದಿನಾಚರಣೆಯನ್ನು ನಾನು ಆಯೋಜಿಸಲು ಮುಂದಾಗಿದ್ದಕ್ಕೆ, ನರ‍್ವಹಿಸಿದ್ದಕ್ಕೆ ಡಿವಿಸಿ ಮೊದಲ್ಗೊಂಡು ಎಲ್ಲರೂ ಆಗ ನನ್ನನ್ನು ಪ್ರಶಂಸಿದರು.

ಎಲ್ಲರಿಗಿಂತಲೂ ಹೆಚ್ಚಾಗಿ ನಮ್ಮ ಎಸಿ ಯಾಗಿದ್ದ ತ್ರಿಪಾಠಿ ಅವರು ತುಂಬಾ ಖುಷಿಯಲ್ಲಿದ್ದರು. ಜೊತೆಗೆ ನಮ್ಮ ತಾಲ್ಲೂಕಿನ ಎಲ್ಲಾ ಸಿಬ್ಬಂದಿ ನಾವೆಲ್ಲ ಒಂದು ಕುಟುಂಬ ಎಂಬ ಭಾವನೆ ಮತ್ತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂಬ ಸದ್ಭಾವನೆ ಮೂಡುವಂತಾಗಿತ್ತು. ಕೊನೆಯಲ್ಲಿ ಕಲಿತು ಪ್ರರ‍್ಶಿಸಿದ ನಾಟಕದ ಪ್ರಥಮ ದೃಶ್ಯದಲ್ಲಿ ನಾನು ಕೃಷ್ಣನ ಪಾತ್ರಧಾರಿಯಾಗಿ ಹಾಡೊಂದನ್ನು ಹಾಡಿ ಪ್ರಾರಂಭವಾಗುವಂತೆ ನಾಟಕದ ನರ‍್ದೇಶನ ಮಾಡಿದ್ದ ಮೇಷ್ಟರು ವ್ಯವಸ್ಥೆ ಮಾಡಿದ್ದರು. ನಾನು ಕೃಷ್ಣನ ಪಾತ್ರದ ಪೋಷಾಕಿನಲ್ಲಿ ಹಾಡಿ ಸಂತೋಷಪಟ್ಟಿದ್ದು ಈಗ 35 ವರ‍್ಷಗಳ ನಂತರವೂ ಹಸಿರಾಗಿದೆ.(ಬರಹ:ರುದ್ರಪ್ಪ ಹನಗವಾಡಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending