Connect with us

ದಿನದ ಸುದ್ದಿ

ಲಾಕ್ ಡೌನ್ ತೀರದ ಸಂಕಷ್ಟ ; ಮಂಗಳಮುಖಿಯರ ಸಮಸ್ಯೆಗೆ ಜಿ.ಪಂ ಸದಸ್ಯ ಬಸವಂತಪ್ಪ ಸ್ಪಂದನೆ

Published

on

ಶುಗರ್ ಮಾತ್ರೆ ವಿತರಣೆ ಮಾಡಿದ ಜಿಲ್ಲಾ ಪಂಚಾಯತ್‌ ಸದಸ್ಯ ಬಸವಂತಪ್ಪ.

ಸುದ್ದಿದಿನ,ದಾವಣಗೆರೆ : “ನನಗೆ ವಯಸ್ಸಾಗಿದೆ, ಶುಗರ್‌ ಇದೆ, ಕೈ,ಕಾಲು ನೋವು ಹೊರಹೋಗಲು ಆಗುತ್ತಿಲ್ಲ, ಅಂಗಡಿಗಳು ಲಾಕ್‌ಡೌನ್‌ ಆಗಿರುವುದರಿಂದ ಕಲೆಕ್ಷನ್‌ ಕೂಡ ಇಲ್ಲ. ಶುಭ ಕಾರ್ಯಗಳಲ್ಲಿ ಚೂರು-ಪಾರು ಹಣ ಸಿಗುತ್ತಿತ್ತು. ಆ ದುಡಿಮೆಯೋ ಇಲ್ಲ. ಹೇಗೋ ಹಸಿವು ನೀಗಿಸಿಕೊಳ್ಳುತ್ತೇವೆ. ಆದರೆ ಮಾತ್ರೆ ತೆಗೆದುಕೊಳ್ಳಲು ಹಣವೂ ನಮ್ಮಲ್ಲಿ ಇಲ್ಲದ ಕಾರಣ ಪರದಾಡಬೇಕಾದ ಸ್ಥಿತಿ ಇದೆ“. ಹೌದು, ಇಂತಹ ಮಾತುಗಳನ್ನು ನಗರದಿಂದ ಆರೇಳು-ಕಿಲೋ ಮೀಟರ್‌ ದೂರದಲ್ಲಿನ ಮಲ್ಲಶೆಟ್ಟಿಹಳ್ಳಿ ಹೋಗುವ ದಾರಿಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವ ಮಂಗಳಮುಖಿ ನಂದನಮ್ಮ ನೋವಿನಿಂದ ನುಡಿಯುತ್ತಾರೆ.

ಲಾಕ್‌ ಡೌನ್‌ ಒಂದು ಕಡೆ ಕೂಲಿ ಕಾರ್ಮಿಕರು, ಅಸಂಘಟಿತರ ವಲಯದ ಆರ್ಥಿಕತೆಯನ್ನು ಮಕಾಡೆ ಮಲಗಿಸಿದೆ. ಆದರೆ ಈ ವಲಯವನ್ನೇ ನಂಬಿಕೊಂಡು ಬದುಕುತ್ತಿದ್ದ ಮಂಗಳಮುಖಿಯರ ಪಾಡು ಹೇಳತೀರದ್ದಾಗಿದೆ. ಕೆಲವರಿಗೆ ಬಿಪಿ ಇದ್ದರೆ, ಇನ್ನೂ ಕೆಲವರಿಗೆ ಶುಗರ್‌ ಸೇರಿದಂತೆ ದೇಹಕ್ಕೆ ಸಂಬಂಧಿಸಿದ ಕಾಯಿಲೆಗಳು ಇದೆ. ಆದರೆ ಅವುಗಳನ್ನು ಗುಣಪಡಿಸಿಕೊಳ್ಳಲು ಅವರ ಬಳಿ ಹಣ ಇಲ್ಲ.
ನಮಗೆ ಅಂಗಡಿ ಮಾಲೀಕರೇ ಧಣಿಗಳು. ಆ ಧಣಿಗಳೇ ಈಗ ಅಂಗಡಿ ಬಾಗಿಲು ಹಾಕಿದ್ದಾರೆ.ಅವರೇ ಈಗ ಕಷ್ಟದಲ್ಲಿದ್ದಾರೆ. ಇಂತದ್ದರಲ್ಲಿ ನಮ್ಮ ಕಷ್ಟ ಯಾವ ಲೆಕ್ಕ. ಅವರು ಚೆನ್ನಾಗಿ ಇದ್ದರೇ, ನಾವು ಚೆನ್ನಾಗಿ ಇರುತ್ತೇವೆ.

ಆದರೀಗ ಅವರೂ ಚೆನ್ನಾಗಿಲ್ಲ, ನಾವೂ ಚೆನ್ನಾಗಿಲ್ಲ. ನಾವು ಕೂಡ ಮನುಷ್ಯರು, ಹೊಟ್ಟೆಪಾಡಿಗಾಗಿ ಜನರ ಬಳಿ ಭಿಕ್ಷೆ ಬೇಡುತ್ತೇವೆ. ಆದರೀಗ ಅದು ಇಲ್ಲ. ನ್ಯಾಯದ ಮೂಲಕ ದುಡಿಯುತ್ತಿದ್ದೇವೆ. ಕೆಲವರು ನಮ್ಮನ್ನು ಕೆಟ್ಟದಾಗಿ ನೋಡುತ್ತಾರೆ. ಆದ್ದರಿಂದ ಸರಕಾರ ನಮ್ಮ ಧ್ವನಿ ಕೇಳಿಸಿಕೊಂಡು ನಮಗೆ ಸೂರು, ಪಡಿತರ, ಆರೋಗ್ಯ ಕಾರ್ಡ್‌ ನೀಡಬೇಕು ಎಂದು ಮಂಗಳಮುಖಿಯರು ಒತ್ತಾಯಿಸುತ್ತಾರೆ.

ಜಿಲ್ಲೆಯಲ್ಲಿ ಅಂದಾಜು 200ಕ್ಕೂ ಹೆಚ್ಚು ಮಂಗಳಮುಖಿಯರು ಇದ್ದು, ಹಲವರು ಉಚ್ಚಂಗಿ ದುರ್ಗ, ಬಾಡಾಕ್ರಾಸ್‌, ಮಂಡಿಪೇಟೆ,ಹಳೆಪೇಟೆ, ಜಯದೇವಸರ್ಕಲ್‌, ಜನದಟ್ಟಣೆ ಪ್ರದೇಶದಲ್ಲಿ ಹೋಗಿ ಜನರು ಕೊಟ್ಟ ಹಣವನ್ನು ತೆಗೆದುಕೊಳ್ಳುತ್ತಿದ್ದರು. ಆದರೀಗ ಕೊರೊನಾ ಸೊಂಕು ಹಿನ್ನೆಲೆಯಲ್ಲಿ ಯಾರು ಕೂಡ ಹೊರಗೆ ಬರುತ್ತಿಲ್ಲದ ಕಾರಣ ಅವರ ಬಳಿ ಹಣವೇ ಇಲ್ಲವಾಗಿದೆ.

ಅಂಗಡಿಗಳು ಬಾಗಿಲು ತೆಗೆದಿದ್ದ ವೇಳೆ ಪ್ರತಿ ದಿನ 200 ರೂ. ನಿಂದ 300 ರೂ. ಸಂಪಾದಿಸುತ್ತಿದ್ದರು. ಅಲ್ಲದೇ ಶುಭಸಮಾರಂಭಗಳಲ್ಲಿಯೂ ಅವರಿಗೆ ಹೆಚ್ಚು ಹಣ ಬರುತ್ತಿತ್ತು. ಎಲ್ಲರೂ ಒಟ್ಟುಗೂಡಿ ಜೀವನ ನಡೆಸುತ್ತಿದ್ದರು. ಆದರೀಗ ಕೈಯಲ್ಲಿ ಹಣವಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಅವರ ರೋಧನೆ ಹೇಳತೀರದ್ದಾಗಿದೆ.

ಗೋಡೌನ್‌ ರೀತಿಯಲ್ಲಿ ಇರುವ ಮನೆಯಲ್ಲಿ ಏಳರಿಂದ-ಎಂಟು ಜನ ಒಟ್ಟಿಗೆ ಇದ್ದಾರೆ. ಶೌಚಾಲಯ ಒಂದೇ ಇದೆ. ಓಡಾಡುವುದಕ್ಕೆ ಸಾರಿಗೆ ಸೌಲಭ್ಯವೂ ಇಲ್ಲ. ಬಿಪಿಎಲ್‌ ಕಾರ್ಡ್‌ ಸೌಲಭ್ಯವು ಇಲ್ಲದ ಕಾರಣ ಪಡಿತರ ಸಿಗುವುದು ಕಷ್ಟವಾಗಿದೆ. ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಕೊಡುವ ಆಹಾರವನ್ನೇ ಸದ್ಯ ಉಪಯೋಗಿಸುತ್ತಿದ್ದಾರೆ. ಇದು ಕೂಡ ಕೆಲವೇ ದಿನಗಳಲ್ಲಿ ಖಾಲಿಯಾಗಲಿದ್ದು, ಮುಂದೇನೂ ಎಂಬ ಪ್ರಶ್ನೆ ಸದ್ಯ ಉಳಿದಿದೆ.

  • ನಾವು ಮಂಗಳಮುಖಿಯರು, ಭಿಕ್ಷೆ ಬೇಡುತ್ತಿದ್ದ ನಮಗೆ ಈಗ ಕೆಲಸವಿಲ್ಲ. ನನಗೆ ಶುಗರ್‌ ಇದೆ. ಶುಗರ್‌ ಮಾತ್ರೆ ತರೋದಕ್ಕೆ ಸಾರಿಗೆ ಸೌಲಭ್ಯವೂ ಇಲ್ಲ, ಹಣವೂ ಇಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ ತಂದುಕೊಟ್ಟಿದ್ದಾರೆ. ಆದರೆ ನನ್ನಂತೆಯೇ ಅನೇಕರು ಕಾಯಿಲೆಯಿಂದ ಬಳಲುತ್ತಿದ್ದು, ಅವರ ನೆರವಿಗೆ ಸರಕಾರ ಬರಲಿ.

| ನಂದನಮ್ಮ, ಮಂಗಳಮುಖಿ

  • ಮಂಗಳಮುಖಿಯರು ಹಸಿವಿನಿಂದ ಬಳಲುತ್ತಿದ್ದ ಕಾರಣ ಅವರಿಗೆ ಆಹಾರದ ಕಿಟ್‌ ನೀಡಲಾಗಿದೆ. ಮಂಗಳಮುಖಿಯೊಬ್ಬರು ಶುಗರ್‌ದಿಂದ ಬಳಲುತ್ತಿದ್ದು , ಅವರಿಗೆ ಸಿಟಿಯಿಂದ ತಂದು ಕೊಡಲಾಗಿದೆ.

| ಬಸವಂತಪ್ಪ, ಜಿಲ್ಲಾ ಪಂಚಾಯತ್‌ ಸದಸ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನೂತನ ಸಂಸದರನ್ನು ಸ್ವಾಗತಿಸಲು ಲೋಕಸಭಾ ಕಾರ್ಯಾಲಯ ಸಜ್ಜು ; ಸಂಸದರಿಗೆ ಇಷ್ಟೆಲ್ಲಾ ಸವಲತ್ತುಗಳು..!

Published

on

ಸುದ್ದಿದಿನ ಡೆಸ್ಕ್ : ಲೋಕಸಭೆಯ ಅಂತಿಮ ಚರಣದ ಮತದಾನ ದಿನ ಹಾಗೂ ನಂತರ ಚುನಾವಣಾ ಫಲಿತಾಂಶವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸಂಸದರನ್ನು ಬರ ಮಾಡಿಕೊಳ್ಳಲು ಲೋಕಸಭಾ ಕಾರ್ಯಾಲಯ ವ್ಯಾಪಕ ವ್ಯವಸ್ಥೆಯಿಂದ ಸಜ್ಜುಗೊಳ್ಳುತ್ತಿದೆ. ಇದಕ್ಕಾಗಿ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಚುನಾಯಿತ ಅಭ್ಯರ್ಥಿಗಳ ಬಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ನೂತನ ಅಭ್ಯರ್ಥಿಗಳ ಆಗಮನ ಪ್ರಕ್ರಿಯೆ ಆರಂಭವಾಗುತ್ತದೆ. ಅವರ ಪ್ರಯಾಣಕ್ಕೆ ಮುನ್ನವೇ ಲೋಕಸಭೆ ಕಾರ್ಯಾಲಯದ ನೋಡಲ್ ಅಧಿಕಾರಿಗಳು ಅವರನ್ನು ಸಂಪರ್ಕಿಸುತ್ತಾರೆ. ಐಜಿಐ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ವಿವಿಧ ಟರ್ಮಿನಲ್‌ಗಳಲ್ಲಿ ವಿಶೇಷ ಸ್ವಾಗತ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸಂಸದರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಿಗದಿತ ಕೇಂದ್ರಗಳಲ್ಲಿ ಬರ ಮಾಡಿಕೊಳ್ಳಲಾಗುತ್ತದೆ.

ಸಂಸತ್ತಿನ ಅನೆಕ್ಸೆ ವಿಸ್ತೃತ ಕಟ್ಟಡದ ಸ್ವಾಗತ ಕೇಂದ್ರಕ್ಕೆ ಆಗಮಿಸಿದ ನಂತರ ಅವರಿಗೆ ದೂರವಾಣಿ ಸಂಪರ್ಕ, ಹೊಸಬ್ಯಾಂಕ್ ಖಾತೆ, ಸಂಸತ್ ಕಟ್ಟಡಕ್ಕೆ ಪ್ರವೇಶ ಪಡೆಯಲು ಸ್ಮಾರ್ಟ್ ಆಕ್ಸೆಸ್ ಕಾರ್ಡ್, ಅವರ ವಾಹನಗಳಿಗಾಗಿ ಫಾಸ್ಟ್ ಟ್ಯಾಗ್ ಸ್ಟಿಕರ್ ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಿ ಅತಿಥಿ ಭವನ ಹಾಗೂ ಪಶ್ಚಿಮ ನ್ಯಾಯಾಲಯ ಹಾಸ್ಟೇಲ್ ಸಂಕೀರ್ಣದಲ್ಲಿ ಅವರಿಗೆ ತಂಗಲು ಅವಕಾಶ ಕಲ್ಪಿಸಲಾಗುತ್ತದೆ. ಹೊಸ ಸದಸ್ಯರಿಗೆ ಸಂವಿಧಾನದ ಪ್ರತಿ ನೀತಿ ಮತ್ತು ಕಲಾಪ, ಪ್ರಕ್ರಿಯೆ, ನಿಯಮಾವಳಿ ಕೈಪಿಡಿಗಳನ್ನು ಅನುಸರಿಸಲು ನೀಡಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ಯಾನ್ಸ್ ಚಲನಚಿತ್ರೋತ್ಸವ | ಭಾರತದ ನಿರ್ಮಾಪಕಿ ಪಾಯಾಲ್ ಕಪಾಡಿಯಾಗೆ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಫ್ರಾನ್ಸ್‌ನಲ್ಲಿ ನಡೆದಿರುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಗ್ರಾಂಡ್ ಪ್ರಿಕ್ಸ್, ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇಬ್ಬರು ನರ್ಸ್‌ಗಳ ಜೀವನ ಸುತ್ತಲಿನ ಕಥಾವಸ್ತು ಹೊಂದಿರುವ ’ಆಲ್ ವಿ ಇಮ್ಯಾಜಿನ್ ಆಜ್ ಲೈಟ್’ ಚಿತ್ರ ಪಾಮೆ ಡೋರ್ ವರ್ಗದಲ್ಲಿ ನಾಮನಿರ್ದೇಶಿತಗೊಂಡಿದ್ದು, ಈ ವರ್ಗದ 2ನೇ ಸ್ಥಾನವಾದ ಗ್ರಾಂಡ್ ಪ್ರಿಕ್ಸ್‌ಗೆ ಪಾತ್ರವಾಯಿತು.

ಇದರೊಂದಿಗೆ ಭಾರತ ಈ ಉತ್ಸವದಲ್ಲಿ ಚಿತ್ರ ನಿರ್ಮಾಣಕ್ಕಾಗಿ 2, ನಟನೆಗಾಗಿ 1, ಹಾಗೂ ಛಾಯಾಗ್ರಹಣಕ್ಕಾಗಿ 1ಹೀಗೆ ಒಟ್ಟು 4 ಗೌರವಗಳನ್ನು ಪಡೆದಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಾಧನೆಗಾಗಿ ಪಾಯಲ್ ಕಪಾಡಿಯಾ ಅವರನ್ನು ಅಭಿನಂದಿಸಿದ್ದಾರೆ.

ಎಫ್‌ಟಿಐಐನ ಹಳೆಯ ವಿದ್ಯಾರ್ಥಿ ಪಾಯಲ್ ಕಪಾಡಿಯಾ ಅವರ ವಿಶೇಷವಾದ ಕೌಶಲ್ಯ ಭಾರತೀಯ ಹೊಸ ತಲೆಮಾರಿನ ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಕವಿತೆ | ಒಂದು ಕಪ್ ಕಾಫಿ

Published

on

  • ಲಕ್ಕೂರು ಆನಂದ್

ಕೊನೆಯ ಸಾರಿ
ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ನಾನು ತಪ್ಪು ಮಾಡಿದೆನೊ,
ನೀನು ತಪ್ಪು ಮಾಡಿದೆಯೊ,
ಬಿಟ್ಟು ಬಿಡೋಣ:

ಕೊನೆಯ ಸಾರಿ
ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ

ಯಾರಿಗೆ ಗೊತ್ತು?
ಅದು ಇಲ್ಲೇ ತಿರುವು ಪಡೆಯಬಹುದು !
ಇಲ್ಲ ನಾವಿಬ್ಬರು ಬೇರೆಯಾಗಬಹುದು!
ಯಾರು ಊಹಿಸಿರುತ್ತಾರೆ?
ನಾನೊಂದು ಹೇಳುವುದು
ನೀನೊಂದು ಹೇಳುವುದು
ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
ಯಾರಿಗೆ ಗೊತ್ತು
ನಮ್ಮೆದುರಿಗೆ ವಿಶಾಲ ವನಗಳಿರಬಹುದು,
ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
ನೆಲಕ್ಕೆ ಬಾಗಿದ ಮೋಡಗಳಾಗಬಹುದು.
ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
ಆದರೆ ಏನು ಲಾಭ?
ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ…

ಇಬ್ಬರ ಗುಂಡಿಗೆಯ ಮೂಲೆಯಲ್ಲೂ
ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
ದ್ವೇಷವಿಲ್ಲ,
ಅಸೂಯೆಯಿಲ್ಲ, ಕೋಪವಿಲ್ಲ;
ಅಲ್ಲಿರುವುದು ಬರೀ ಪ್ರೀತಿಯೇ
ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
ಈಗಲೂ ಕೂಡಾ
ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
ನಾವಿಬ್ಬರೂ ಕಾಯಬೇಕಷ್ಟೆ!

ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.
ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
ಕರಗಿಹೋಗಿವೆ
ರೆಕ್ಕೆಮುರಿದ ಹಕ್ಕಿಗಳೆರೆಡು
ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.
ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
ಮೆತ್ತಗೆ ನನ್ನನ್ನು ತಾಕುತ್ತಿದೆ
ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?

ಶವಯಾತ್ರೆಯೂ ಕೂಡಾ
ಇಷ್ಟು ನಿಶಬ್ದವಾಗಿರುವುದಿಲ್ಲ!
ಇದು ನಮ್ಮಿಬ್ಬರ ಕೊನೆಯ ಭೇಟಿ
ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
ಈ ಹಿಂದೆ ಇವೇ ಒನ್ ಬೈ ಟೂಗಳು,
ಅವೇ ಈಗ ಎರಡು ಅನಾಮಿಕ ಕಾಫೀ ಕಪ್‌ಗಳು
ಈ ಕಾಫಿ ಕಪ್‌ನೊಳಗೆ ಇಣುಕಿ ನೋಡಿದರೆ
ನೆನ್ನೆಯೆಂಬ ಚೂರು,
ನಮ್ಮಿಬ್ಬರ ಪರಿಚಯಗಳು
ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending