ದಿನದ ಸುದ್ದಿ
ಜೋ ಬೈಡೆನ್ ಗೆಲುವು : ಅಮೆರಿಕದ ಆತ್ಮಕ್ಕಾಗಿ ನಡೆದ ಚಾರಿತ್ರಿಕ ಹೋರಾಟ
- ರವಿ ಕೃಷ್ಣಾರೆಡ್ಡಿ
ನಾನು ಸುಮಾರು ಹತ್ತು ವರ್ಷ ಅಮೆರಿಕದಲ್ಲಿ ಬೇರೆಬೇರೆ ರಾಜ್ಯಗಳಲ್ಲಿ ಇದ್ದೆ; 3 ತಿಂಗಳು ಇಲಿನಾಯ್ ರಾಜ್ಯದ ಶಿಕಾಗೋ, ಸುಮಾರು ಒಂದು ವರ್ಷ ಕಾಲ ಮಿನಿಯಾಪೊಲಿಸ್ ಪಕ್ಕದ ಆದರೆ ವಿಸ್ಕಾನ್ಸಿನ್ ರಾಜ್ಯಕ್ಕೆ ಸೇರಿದ ಹಡ್ಸನ್, ಮತ್ತು 8-9 ವರ್ಷಗಳ ಕಾಲ ಕ್ಯಾಲಿಫೋರ್ನಿಯಾದ ಬೇ ಏರಿಯಾ. ಹಡ್ಸನ್’ನಲ್ಲಿ ಇದ್ದಾಗ ಆರೇಳು ತಿಂಗಳ ಕಾಲ ಮಾರ್ಮನ್ ಮತಾಚರಣೆಯ ಸಹೋದ್ಯೋಗಿಯ ಮನೆಯಲ್ಲಿ, ಆತನ ಕುಟುಂಬದ ಪೇಯಿಂಗ್ ಗೆಸ್ಟ್ ಆಗಿ ವಾಸವಿದ್ದೆ. ಅಮೆರಿಕದ ಉದ್ದಗಲಕ್ಕೆ ಅಲ್ಲದಿದ್ದರೂ ಹತ್ತುಹದಿನೈದು ರಾಜ್ಯಗಳಲ್ಲಿ ಹತ್ತಾರು ಸಾವಿರ ಮೈಲು ಪ್ರವಾಸ ಮಾಡಿದ್ದೆ ಮತ್ತು ವಿವಿಧ ಹಿನ್ನೆಲೆಯ ಜನರೊಂದಿಗೆ ಸಂವಾದಿಸಿದ್ದೆ.
ಅಮೆರಿಕದ ನನ್ನ ಇಂತಹ ಅನುಭವದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅಂತಹ ವ್ಯಕ್ತಿ ಅಲ್ಲಿಯ ರಾಷ್ಟ್ರಾಧ್ಯಕ್ಷನಾಗಿ ಚುನಾಯಿತನಾದಾಗ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಗಾಬರಿ ಆಗಿತ್ತು. ತಮ್ಮ ವೈಯಕ್ತಿಕ ಜೀವನದಲ್ಲಿ ಅಮೆರಿಕನ್ನರು ಹೇಗೇ ಇರಲಿ, ಅವರು ತಮ್ಮ ರಾಜಕಾರಣಿಗಳಿಂದ ಮಾತ್ರ ವಿನಯ, ಪ್ರಾಮಾಣಿಕತೆ ಮತ್ತು ಶೀಲವನ್ನು ಹಾಗೂ ಉನ್ನತ ಸ್ಥಾನಗಳ ನಾಯಕರಿಂದ ದಕ್ಷತೆ ಮತ್ತು ದೊಡ್ಡತನವನ್ನು ನಿರೀಕ್ಷಿಸುತ್ತಾರೆ.
ಚುನಾವಣಾ ಪ್ರಚಾರ ಸಮಯದ ಪರಸ್ಪರ ವಿರೋಧ, ನಿಂದನೆ, ಆರೋಪಗಳು ಏನೇ ಇದ್ದರೂ ಫಲಿತಾಂಶದ ನಂತರ ಘನತೆಯಿಂದ ನಡೆದುಕೊಳ್ಳುತ್ತಾರೆ. ಎರಡನೇ ಜಾರ್ಜ್ ಬುಷ್ ಅಮೆರಿಕದ ಅಧ್ಯಕ್ಷರಾದಾಗಲೂ ಆತನ ವಿಚಾರದಲ್ಲಿ ಜನರಿಗೆ ಕೆಲವೊಂದು ಆತಂಕಗಳಿದ್ದವು. ಆದರೆ ಕಾಲಾಂತರದಲ್ಲಿ ಅವರೂ ತನ್ನ ಸ್ಥಾನದ ಮಹತ್ವವನ್ನು ಅರಿತು ಜವಾಬ್ದಾರಿಯಿಂದ ವರ್ತಿಸಿದರು. ಆತನ ಹೆಂಡತಿ ಲಾರಾ ಬುಷ್”ರದೂ ಬಹಳ ಸಂಯಮ, ವಿನಯ ಮತ್ತು ಘನತೆಯ ವ್ಯಕ್ತಿತ್ವ.
ಆದರೆ ಇದೆಲ್ಲ ಡೊನಾಲ್ಡ್ ಟ್ರಂಪ್ ವಿಚಾರದಲ್ಲಿ ಬದಲಾಗಿತ್ತು. ಈ ವ್ಯಕ್ತಿಯ ದುರಹಂಕಾರ, ಸುಳ್ಳು ಹೇಳುವುದು, ವಿವೇಚನೆಯಿಲ್ಲದೆ ಮಾಡುವ ಅಧಿಕಾರಮದದ ಮಾತಿನ ದಾಳಿ (ಗೂಳಿಪ್ರವೃತ್ತಿ / Bullying), ರಾತ್ರಿ ಹಗಲುಗಳ ಪರಿವೆ ಇಲ್ಲದೆ ಮನಸ್ಸಿಗೆ ಬಂದದ್ದನ್ನು ಟ್ವೀಟ್ ಮಾಡುವುದು; ಇಂತಹ ಹಲವು ಪ್ರವೃತ್ತಿಗಳು ಅಧ್ಯಕ್ಷನಾದ ಮೇಲೂ ಮುಂದುವರೆದಿತ್ತು. ಇವರ ಅಧ್ಯಕ್ಷಾವಧಿಯಲ್ಲಿ ಅಮೆರಿಕದಲ್ಲಿ ಆರ್ಥಿಕ ಮತ್ತು ಔದ್ಯೋಗಿಕ ಅವಕಾಶಗಳು ಹೆಚ್ಚಿದವು ಎನ್ನುವುದನ್ನು ಬಿಟ್ಟರೆ ಮಿಕ್ಕ ಬಹುತೇಕ ವಿಷಯಗಳಲ್ಲಿ ಅಮೆರಿಕ ತನ್ನ ಗೌರವಯುತ ಸ್ಥಾನವನ್ನು ಕಳೆದುಕೊಂಡಿತು ಮತ್ತು ಆಂತರಿಕವಾಗಿ ನೆಮ್ಮದಿ ಕದಡಿತು.
ಬಣ್ಣಶ್ರೇಷ್ಟತೆಯ ಮದ, ಅಲ್ಪಸಂಖ್ಯಾತರೆಡೆಗಿನ ತಿರಸ್ಕಾರ, ಜನಾಂಗೀಯ ಭೇದ, ವಿರೋಧಿಗಳನ್ನು ಕ್ಷುಲ್ಲಕವಾಗಿ ಕಾಣುವುದು, ಸುಳ್ಳುಸುದ್ದಿ ಮತ್ತು ಅಸತ್ಯ ಪಿತೂರಿಕಥನಗಳನ್ನು ಎಗ್ಗುಸಿಗ್ಗಿಲ್ಲದೆ ಹರಡುವುದು; ಹೀಗೆ ಹಲವು ವಿಚಾರಗಳಲ್ಲಿ ಅಮೆರಿಕದ ಸಾರ್ವಜನಿಕ ಜೀವನದ ಇತ್ತೀಚಿನ ದಶಕಗಳಲ್ಲಿ ಊಹಿಸಲಾಗದ್ದನ್ನು ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕ ಮತ್ತು ಜಗತ್ತು ಕಂಡಿತು.
ಇಂತಹ ಬದಲಾದ ಸ್ಥಿತಿಗೆ ಅಲ್ಲಿಯ Fox News ಅಂತಹ ಮಾಧ್ಯಮಗಳ ಅತಿರೇಕವೂ ಕಾಣಿಕೆ ನೀಡಿತು. ಹಾಗೆಯೇ ಅಂತಹ ಅತಿರೇಕಕ್ಕೆ ವಿರೋಧವಾಗಿ ಇನ್ನೊಂದು ಬದಿಯ ಮಾಧ್ಯಮಗಳಿಂದ ಮತ್ತು ಜನರಿಂದ ಅಮೆರಿಕದ ಆತ್ಮಕ್ಕಾಗಿಯ ಹೋರಾಟವೂ ಚಾರಿತ್ರಿಕ ಮತ್ತು ಅನುಕರಣೀಯ. ಡೊನಾಲ್ಡ್ ಟ್ರಂಪ್’ರ ಸಾಕ್ಷ್ಯಾಧಾರಗಳಿಲ್ಲದ ಆರೋಪ ಮತ್ತು ಸುಳ್ಳುಗಳನ್ನು ಟ್ವಿಟರ್ ಇತ್ತೀಚಿನ ದಿನಗಳಲ್ಲಿ Fact Check ಮಾಡಿ ಯಾವುದೇ ಮುಲಾಜಿಲ್ಲದೆ ತನ್ನ ಬಳಕೆದಾರರನ್ನು ಎಚ್ಚರಿಸಿತು.
ಮೂರ್ನಾಲ್ಕು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದಲೇ ಚುನಾವಣಾ ಫಲಿತಾಂಶದ ಕುರಿತು ಪತ್ರಿಕಾಹೇಳಿಕೆ ನೀಡುತ್ತಿದ್ದಾಗ, ಅದರಲ್ಲಿ ಮಿಥ್ಯಾರೋಪಗಳು ಮತ್ತು ಅಸತ್ಯದ ಅಂಶಗಳು ಕಂಡು ಬರುತ್ತಿದ್ದಂತೆ ಅಮೆರಿಕದ NBC ಮತ್ತು ABC News ಮಾಧ್ಯಮ ಸಂಸ್ಥೆಗಳು ಆ ಕಾರ್ಯಕ್ರಮದ ನೇರ ಪ್ರಸಾರವನ್ನು ಒಂದೆರಡು ನಿಮಿಷಗಳಲ್ಲಿಯೇ ರದ್ದು ಮಾಡಿದವು. ವ್ಯಾವಹಾರಿಕ ಹಿತಾಸಕ್ತಿಗಳಿರುವ ಸಂಸ್ಥೆಗಳೂ ಸಹ ಸತ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಕೆಚ್ಚು ಮತ್ತು ಸ್ಥೈರ್ಯದಿಂದ ಬಡಿದಾಡುವ ಈ ಪರಿ ಭಾರತದ ಇಂದಿನ ಸಂದರ್ಭದಲ್ಲಿ ಊಹೆಗೂ ನಿಲುಕದ ವಿಚಾರ.
ಆದರೆ ಇದೇ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಈಗಲೂ ಅಮೆರಿಕದಲ್ಲಿ ಜನಪ್ರಿಯ ಎನ್ನುವುದನ್ನು ನಾವು ಮರೆಯಬಾರದು. ಆ ಮಟ್ಟಿಗೆ ಅಮೆರಿಕ ಎರಡು ವೈರುಧ್ಯಗಳಲ್ಲಿ ಧ್ರುವೀಕೃತಗೊಂಡಿದೆ. (7.4 ಕೋಟಿ ಜನ ಜೋ ಬೈಡೆನ್’ರನ್ನು ಬೆಂಬಲಿಸಿದ್ದರೆ, 7+ ಕೋಟಿ ಜನ ಟ್ರಂಪ್’ರನ್ನು ಬೆಂಬಲಿಸಿದ್ದಾರೆ.) ಕಳೆದ ನಾಲ್ಕು ವರ್ಷಗಳಲ್ಲಿ ಅಲ್ಲಿಯ ಸ್ಥಳೀಯರಿಗೆ ಹೆಚ್ಚಿದ ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಭದ್ರತೆ ಹಾಗೂ ಸಮಾಜವಾದ/ಕಮ್ಯುನಿಸಂ ಬಗೆಗಿನ ಭಯ ಅಲ್ಲಿಯ ಇತ್ತೀಚಿನ ವಲಸಿಗ ಮತ್ತು ಅಲ್ಪಸಂಖ್ಯಾತ ಲ್ಯಾಟಿನೋ ಸಮುದಾಯವನ್ನು ಟ್ರಂಪ್ ಬೆಂಬಲಿಗರನ್ನಾಗಿ ಪರಿವರ್ತಿಸಿದೆ. ಮುಂದಿನ ದಿನಗಳಲ್ಲಿ ಅಲ್ಲಿಯ ರಿಪಬ್ಲಿಕನ್ ಪಕ್ಷ ಬೇರೆಯೇ ರೀತಿ ರೂಪಾಂತರವಾಗಲಿದೆ. ಈ ಬೆಳವಣಿಗೆಯಲ್ಲಿ ಅವಕಾಶ ಮತ್ತು ಅಪಾಯಗಳು ಸಮಾನವಾಗಿ ಕಾಣಿಸುತ್ತಿವೆ.
ಜೋ ಬೈಡೆನ್ ಕುರಿತು ನಾನು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದೇನೆ ಮತ್ತು ಬರೆದಿದ್ದೇನೆ. ಈ ವ್ಯಕ್ತಿಯ ಕುರಿತು ನನಗೆ ಗೌರವವಿದೆ. ಹಾಗೆಯೇ ಕಮಲಾ ಹ್ಯಾರಿಸ್ ಅಪಾರ ಆತ್ಮವಿಶ್ವಾಸದ ಹಾಗೂ ನಿಷ್ಠುರತೆಯ ವ್ಯಕ್ತಿ ಮತ್ತು ಅಮೆರಿಕದ ಮುಂದಿನ ವರ್ಷಗಳ/ದಶಕದ ಪ್ರಬಲ ಶಕ್ತಿ. ಭಾರತಕ್ಕೆ ಈಗ ಅವಕಾಶವೂ ಇದೆ, ಎಚ್ಚರಿಕೆಯೂ ಇದೆ. “ಅಬ್ ಕಿ ಬಾರ್ ಟ್ರಂಪ್ ಸರ್ಕಾರ್” ಎಂದು ತಮ್ಮ ವ್ಯಾಪ್ತಿಯನ್ನು ಮೀರಿ ಅಮೆರಿಕದ ನೆಲದಲ್ಲಿ ಅವಿವೇಕದಿಂದ ನುಡಿದ ನಮ್ಮ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ನಾಯಕರುಗಳು ಮುಂದಕ್ಕೆ ಹೇಗೆ ವರ್ತಿಸುತ್ತಾರೆ ಎನ್ನುವುದರ ಮೇಲೆ ಪರಸ್ಪರ ಸಂಬಂಧಗಳು ನಿಂತಿವೆ.
ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ರಿಗೆ ಶುಭಾಶಯಗಳು. ಇವರ ಮುಂದಿರುವ ಅತಿದೊಡ್ಡ ಸವಾಲು ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸುವುದು ಮತ್ತು ಆ ವಿಚಾರದಲ್ಲಿ ವಿಶ್ವಕ್ಕೆ ನಾಯಕತ್ವ ನೀಡುವುದು. ಅವರ ಯಶಸ್ಸಿನ ಮೇಲೆ ಜಗತ್ತಿನ ಯಶಸ್ಸು ಮತ್ತು ಭವಿಷ್ಯ ನಿಂತಿದೆ ಎಂದರೆ ಸದ್ಯಕ್ಕೆ ಅದು ಅತಿಶಯೋಕ್ತಿ ಅಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243