Connect with us

ದಿನದ ಸುದ್ದಿ

ಕೊರೋನಾ ರೋಗ ನಿರೋಧಕ ಶಕ್ತಿವರ್ಧನೆ ತಂತ್ರಗಳು

Published

on

ಸುದ್ದಿದಿನ,ದಾವಣಗೆರೆ : ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ರೋಗನಿರೋಧಕ ಶಕ್ತಿವರ್ಧನೆ ಮತ್ತು ಸದೃಢ ಆರೋಗ್ಯಕ್ಕಾಗಿ ಆಯುರ್ವೇದ ಸಲಹಾ ಸೂಚಿಯಲ್ಲಿ ತಿಳಿಸಿರುವಂತೆ ಕೋವಿಡ್-19 ವೈರಸ್ ತಡೆಗಟ್ಟುವ ಹಂತ-ಎರಡು ತಂತ್ರವನ್ನು ಅನುಸರಿಸಲು ಸೂಚಿಸಲಾಗಿದೆ.

  • ಹಾಟ್ ಸ್ಪಾಟ್ ಮತ್ತು ಬಫರ್ ಝೋನ್ ವಲಯದಲ್ಲಿ ವಾಸಿಸುವ ಜನರು.
  • 60 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ವೃದ್ಧರು.
  • ಬೇರೆ ಖಾಯಿಲೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತ ಮೇಲ್ಪಟ್ಟವರು.

ಆಗಾಗ್ಗೆ ಉಸಿರಾಟದ ಕಾಯಿಲೆಯ ಇತಿಹಾಸ ಹೊಂದಿರುವ ಯಾವುದೇ ವಯಸ್ಸಿನ ಜನರು, ಸುತ್ತುವರಿದ ಗಾಳಿ ಕಲುಷಿತ ಪ್ರದೇಶದಲ್ಲಿ ವಾಸಿಸುವ ಜನರು ಮತ್ತುಧೂಮಪಾನಿಗಳು (ಸಕ್ರಿಯ ಮತ್ತು ನಿಷ್ಕ್ರಿಯ) ಆರೋಗ್ಯ ಸೇವೆ ಕಾರ್ಯಕರ್ತರು ಈ ಮೇಲ್ಕಂಡ ವರ್ಗದವರು ಈ ಕೆಳಕಂಡ ಕಾರ್ಯತಂತ್ರಗಳನ್ನು ಅನುಸರಿಸಿ ರೋಗನಿರೋಧಕ ಶಕ್ತಿಯನ್ನು ವರ್ಧಿಸಿಕೊಂಡು ಸದೃಢ ಆರೋಗ್ಯವನ್ನು ಉತ್ತೇಜಿಸಿಕೊಳ್ಳಬಹುದಾಗಿರುತ್ತದೆ.

ನಿರೋಧಕ ಕಾರ್ಯತಂತ್ರ – 2ನೇ ಹಂತ
ಗುರಿ

  • ಉತ್ತಮ ಹಸಿವು, ಉತ್ತಮ ನಿದ್ರೆ, ಮಾನಸಿಕ ಶಾಂತಿಯನ್ನು ಕಾಪಾಡಲು ಮತ್ತು ಪೋಷಕಾಂಶವುಳ್ಳ ಆಹಾರವನ್ನು ಒದಗಿಸುವುದರ ಜೊತೆಗೆ ಅಲ್ಪ ಪ್ರಮಾಣದ ಔಷಧಿಯೊಂದಿಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವುದು.
  • ಆರೋಗ್ಯವಂತ ವೃದ್ಧರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತ ಮೇಲ್ಪಟ್ಟವರು ಆರೋಗ್ಯ ಸೇವೆ ಕಾರ್ಯಕರ್ತರು, ಆಗಾಗ್ಗೆ ಉಸಿರಾಟದ ಕಾಯಿಲೆಯ ಇತಿಹಾಸ ಹೊಂದಿರುವ ಯಾವುದೇ ವಯಸ್ಸಿನ ಜನರು, ಸುತ್ತುವರಿದ ಗಾಳಿ ಕಲುಷಿತ ಪ್ರದೇಶದಲ್ಲಿ ವಾಸಿಸುವ ಜನರು ಮತ್ತು ಧೂಮಪಾನಿಗಳು(ಸಕ್ರಿಯ ಮತ್ತು ನಿಷ್ಕ್ರಿಯ), ಆಯುರ್ವೇದದಿಂದ ತಡೆಗಟ್ಟುವ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಸಿದ್ಧರಿರುವವರು.

ಕಾರ್ಯತಂತ್ರಗಳು

  1. ಬೇಗನೆ ಮಲಗುವುದು, ಬೇಗನೆ ಏಳುವುದು.
  2. ಹಲ್ಲುಜ್ಜಿದ ನಂತರ, 2 ಹನಿ ಅಣುತೈಲ ಅಥವಾ ಎಳ್ಳೆಣ್ಣೆಯನ್ನು ಮೂಗಿನ ಎರಡು ಹೊಳ್ಳೆಗಳಲ್ಲಿ ಹಾಕುವುದು (ಪ್ರತಿಮರ್ಷ ನಸ್ಯ)
  3. ತದನಂತರ 50 ಮಿಲೀ ತ್ರಿಫಲಾ ಕಷಾಯವನ್ನು (ನೆಲ್ಲಿಕಾಯಿ, ಅಳಲೆಕಾಯಿ, ತಾರೆಕಾಯಿ) 3-5 ನಿಮಿಷಗಳ ಕಾಲ ಮೌಖಿಕ ಕುಳಿಯಲ್ಲಿ (ಬಾಯಿಯಲ್ಲಿ) ಒಂದು ಚಿಟಿಕೆ ಟಂಕಣ ಭಸ್ಮ (ಶುದ್ಧೀಕರಿಸಿದ ಬೋರಕ್ಸ್) ದೊಂದಿಗೆ ಹಿಡಿದಿಟ್ಟುಕೊಳ್ಳುವುದು ಅಥವಾ 1 ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು 3-5 ನಿಮಿಷಗಳ ಕಾಲ ಬಾಯಲ್ಲಿ ತಿರುಗಾಡಿಸಿ ಉಗಳಬೇಕು ನಂತರ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸುವುದು ಇದನ್ನು ದಿನಕ್ಕೆ ಎರಡು ಬಾರಿ ಮಾಡುವುದು.
  4. ಪುದೀನ ಎಲೆಗಳು ಹಾಗೂ ಅಜವಾಯನದೊಂದಿಗೆ ಕುದಿಸಿದ ನೀರಿನಿಂದ ಹಬೆ ತೆಗೆದುಕೊಳ್ಳುವುದು.
  5. ಮೂವತ್ತು ನಿಮಿಷಗಳ ಕಾಲ ದೇಹ ಸಡಿಲಗೊಳಿಸುವ ವ್ಯಾಯಾಮ, ಸೂರ್ಯ ನಮಸ್ಕಾರ (6 ಸುತ್ತು) ಯಾವುದಾದರೂ ನಾಲ್ಕು ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನ.
  6. 4 ತುಳಸಿ ಎಲೆಗಳು, ನಿಂಬೆರಸ, ಒಣ ದ್ರಾಕ್ಷಿಯೊಂದಿಗೆ ಈ ಕೆಳಗೆ ಹೇಳಿರುವ ಯಾವುದಾದರೊಂದು ಮೂಲಿಕೆಯನ್ನು ಅರ್ಧ ಗ್ರಾಂ ನಂತೆ ಸೇರಿಸಿ(ಪ್ರತಿದಿನ ಒಂದು ಮೂಲಿಕೆ) ಗಿಡಮೂಲಿಕೆ ಚಹಾವನ್ನು ತಯಾರಿಸಿ ದಿನಕ್ಕೆ ಒಂದರಿಂದ ಎರಡು ಭಾರಿ ಸೇವಿಸುವುದು.
    1) ದಾಲ್ಚಿನಿ
    2) ಕರಿಮೆಣಸು
    3) ಶುಂಠಿ
  7. ಅರಿಶಿನ, ಜೀರಿಗೆ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿಯನ್ನು ದಿನನಿತ್ಯದ ಅಡಿಗೆಯಲ್ಲಿ ಉಪಯೋಗಿಸುವುದು.
  8. ಒಂದು ಲೀಟರ್ ಕುದಿಯುವ ನೀರಿಗೆ 8 ತುಳಸಿ ಎಲೆಗಳು ಅಥವಾ ಶುಂಠಿ, ಲಾವಂಚ ಸೇರಿಸಿ 2-3 ನಿಮಿಷಗಳ ಕಾಲ ಮತ್ತೆ ಕುದಿಸಿ ಸೋಸಿ ಕುಡಿಯುವುದು.
  9. ಪ್ರತಿದಿನ ಸಂಜೆ 10 ಗ್ರಾಂ ಅಮೃತಬಳ್ಳಿ ಕಾಂಡ ಅಥವಾ ಷಡಂಗ ಪಾನೀಯ ಕಷಾಯ ಚೂರ್ಣವನ್ನು 640 ಮಿ.ಲೀ. ನೀರಿಗೆ ಸೇರಿಸಿ 320 ಮಿ.ಲೀ. ಆಗುವವರೆಗು ಕುದಿಸಿ ಸೋಸಿ ತಯಾರಿಸಿದ ಅಮೃತಬಳ್ಳಿ ಪಾನೀಯ ಅಥವಾ ಷಡಂಗ ಪಾನೀಯವನ್ನು ಕುಡಿಯುವುದು.
  10. ಸಂಶಮನಿವಟಿ, 2 ಮಾತ್ರೆಗಳು, ದಿನಕ್ಕೆ ಎರಡು ಬಾರಿ, ಊಟದ ನಂತರ, 15 ದಿವಸಗಳ ಕಾಲ.
  11. 2 ಟೀ ಚಮಚ ಅಗಸ್ತ್ಯ ರಸಾಯನವನ್ನು ಬಿಸಿ ನೀರಿನೊಂದಿಗೆ ಸೇವಿಸುವುದು.
  12. ಒಂದು ಲೋಟ ಕುದಿಯುವ ಹಾಲಿಗೆ 1/3 ಟೀ ಚಮಚ ಅರಿಶಿನ ಪುಡಿ, 1/3 ಟೀ ಚಮಚ ಅಶ್ವಗಂಧ ಚೂರ್ಣವನ್ನು ಸೇರಿಸಿ, ನಂತರ ಹಾಲನ್ನು 2 ನಿಮಿಷ ಕುದಿಸಿ, ಸೋಸಿ ತಯಾರಿಸಿದ ಗೋಲ್ಡನ್ ಮಿಲ್ಕ್‍ನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಸೇವಿಸುವುದು.

ನಿಗದಿಪಡಿಸಿದ ಸಮಯ ವೈದ್ಯರ ಹೆಸರು ಮತ್ತು ತಜ್ಞತೆ ಮೊಬೈಲ್ ಸಂಖ್ಯೆ,ಆಯುರ್ವೇದ ವೈದ್ಯಾಧಿಕಾರಿಗಳು

  • ಬೆಳಗ್ಗೆ 08:00 ರಿಂದ ಮಧ್ಯಾಹ್ನ 12:00
  1. ಡಾ|| ಶಾಂತ ಮೂರ್ತಿ.ಎ. ಬಿ.ಎ.ಎಂ.ಎಸ್. 9448346798
  2. ಡಾ|| ಮಲ್ಲಿಕಾರ್ಜುನ.ಬಿ.ಎಸ್. ಬಿ.ಎ.ಎಂ.ಎಸ್. 9448415175
  3. ಡಾ|| ಕಿಶೋರಿ.ಕೆ.ಎಸ್. ಬಿ.ಎ.ಎಂ.ಎಸ್. 8197719498
  4. ಡಾ|| ಅನುರಾಧ.ಎಸ್.ಎಸ್. ಬಿ.ಎ.ಎಂ.ಎಸ್. 9986743079
  5. ಡಾ|| ಸಯ್ಯುದ್ ಶಂಷುದ್ದೀನ್. ಬಿ.ಎ.ಎಂ.ಎಸ್. 9448567574
  6. ಡಾ|| ಸುಧಾ.ಹೆಚ್.ಎಂ. ಬಿ.ಎ.ಎಂ.ಎಸ್., ಎಂ.ಎಸ್. (ಶಲ್ಯತಂತ್ರ). 9880132397
  7. ಡಾ|| ಸಿದ್ದೇಶ್.ಈ.ಬಿಸನಳ್ಳಿ. ಬಿ.ಎ.ಎಂ.ಎಸ್. 9663666426
  • ಮಧ್ಯಾಹ್ನ 12:00 ರಿಂದ ಸಂಜೆ 04:00
  1. ಡಾ|| ರೇವ್ಯಾ ನಾಯ್ಕ.ಟಿ. ಬಿ.ಎ.ಎಂ.ಎಸ್. 9886145132
  2. ಡಾ|| ಸುಚಿತ್ರಾ.ಎಸ್.ಎಸ್. ಬಿ.ಎ.ಎಂ.ಎಸ್., ಎಂ.ಡಿ. (ಕಾಯಚಿಕಿತ್ಸ). 9844428797
  3. ಡಾ|| ಸುರೇಶ್.ಎಂ.ಸಿ. ಬಿ.ಎ.ಎಂ.ಎಸ್. 9448423933
  4. ಡಾ|| ಸದಾಶಿವ.ಕೆ. ಬಿ.ಎ.ಎಂ.ಎಸ್. 9902183131
  5. ಡಾ|| ಶಾಲಿನಿ.ಡಿ. ಬಿ.ಎ.ಎಂ.ಎಸ್. 8762294359
  6. ಡಾ|| ದ್ಯಾವನ್ ಗೌಡ.ಬಿ.ಹೆಚ್. ಬಿ.ಎ.ಎಂ.ಎಸ್. 9448534506
  • ಸಂಜೆ 04:00 ರಿಂದ ರಾತ್ರಿ 08:00
  1. ಡಾ|| ಚಂದ್ರಕಾಂತ್.ಎಸ್.ನಾಗಸಮುದ್ರ. ಬಿ.ಎ.ಎಂ.ಎಸ್. 9449361108
  2. ಡಾ|| ಪ್ರೀತಿ.ಡಿ.ಎಸ್. ಬಿ.ಎ.ಎಂ.ಎಸ್. 9731155440
  3. ಡಾ|| ಲಿಂಗರಾಜೇಂದ್ರ.ಎನ್.ಕೆ. ಬಿ.ಎ.ಎಂ.ಎಸ್. 9448414906
  4. ಡಾ|| ಶಿಲ್ಪ.ಎಸ್.ಟಿ. ಬಿ.ಎ.ಎಂ.ಎಸ್. 9986081977

ಹೆಚ್ಚಿನ ಮಾಹಿತಿಗಾಗಿ ಈ ಮೇಲ್ಕಂಡ ಆಯುರ್ವೇದ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್‌ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಹಿಳೆಯರ ಉಚಿತ ಪ್ರಯಾಣದ ನಡುವೆ ನಿಗಮಗಳಿಗೆ ಹಣಕಾಸಿನ ಸಂಕಷ್ಟ; ವೇತನ, ಡೀಸೆಲ್‌ ಖರೀದಿಗೂ ಎದುರಾಗುತ್ತಿದೆ ಒತ್ತಡ

Published

on

ಶಕ್ತಿ ಯೋಜನೆಗೆ ಸರ್ಕಾರದ ಬೆಂಬಲ, ಸಾರಿಗೆ ನಿಗಮಗಳಿಗೆ ಬಾಕಿ ಹೊರೆ; ₹5,651 ಕೋಟಿ ಟಿಕೆಟ್‌ ಹಣ ಯಾವಾಗ?

ಸುದ್ದಿದಿನ,ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಕಲ್ಪಿಸುವ ಮೂಲಕ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾದ ಶಕ್ತಿ ಯೋಜನೆಯ ಮತ್ತೊಂದು ಮುಖ ಇದೀಗ ಚರ್ಚೆಗೆ ಬಂದಿದೆ. ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ನೀಡಿರುವ ಉಚಿತ ಟಿಕೆಟ್‌ಗಳ ಮೊತ್ತದಲ್ಲಿ ಸರ್ಕಾರವು ನಾಲ್ಕು ಸಾರಿಗೆ ನಿಗಮಗಳಿಗೆ ₹5,651.24 ಕೋಟಿ ಬಾಕಿ ಉಳಿಸಿಕೊಂಡಿರುವುದು ನಿಗಮಗಳ ಆರ್ಥಿಕ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ. ಬಾಕಿ ಮೊತ್ತದ ಮರುಪಾವತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ವೇತನ, ಡೀಸೆಲ್‌, ಬಿಡಿಭಾಗಗಳ ಖರೀದಿ ಸೇರಿದಂತೆ ದೈನಂದಿನ ವೆಚ್ಚಗಳನ್ನು ನಿರ್ವಹಿಸುವ ಒತ್ತಡ ಹೆಚ್ಚಾಗಿದೆ.

ಶಕ್ತಿ ಯೋಜನೆಗೆ ಮೂರು ವರ್ಷಗಳ ಪಯಣ

ಕಾಂಗ್ರೆಸ್‌ ಸರ್ಕಾರ 2023ರ ಜೂನ್‌ 11ರಂದು ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸಾರಿಗೆ ನಿಗಮಗಳ ಮೇಲೆ ಸೇವಾ ಹೊರೆ ಕೂಡ ವಿಸ್ತರಿಸಿದೆ.

2023-24ರಿಂದ 2026ರ ಜುಲೈ ಅಂತ್ಯದವರೆಗೆ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು 797.16 ಕೋಟಿ ಪ್ರಯಾಣ ಕೈಗೊಂಡಿದ್ದಾರೆ. ಈ ಪ್ರಯಾಣಗಳಿಗೆ ನೀಡಲಾದ ಉಚಿತ ಟಿಕೆಟ್‌ಗಳ ಒಟ್ಟು ಮೌಲ್ಯ ₹20,955.99 ಕೋಟಿ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.

₹15,304 ಕೋಟಿ ಪಾವತಿ, ಇನ್ನೂ ₹5,651 ಕೋಟಿ ಬಾಕಿ

ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್‌ ಮೊತ್ತವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಮರುಪಾವತಿ ಮಾಡಬೇಕಿದೆ. ಇದುವರೆಗೆ ₹15,304.76 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ ₹5,651.24 ಕೋಟಿ ಪಾವತಿಯಾಗಬೇಕಿದೆ.

ಈ ಬಾಕಿ ಮೊತ್ತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಪಾಲುದಾರರಾಗಿವೆ.

ನಿಗಮಗಳಿಗೆ ಆರ್ಥಿಕ ಒತ್ತಡ ಏಕೆ?

ಈಗಾಗಲೇ ಹಲವು ವರ್ಷಗಳಿಂದ ಸಾರಿಗೆ ನಿಗಮಗಳು ನಷ್ಟದ ಒತ್ತಡದಲ್ಲಿವೆ. ಶಕ್ತಿ ಯೋಜನೆಯ ಟಿಕೆಟ್‌ ಮೊತ್ತ ಸಕಾಲದಲ್ಲಿ ಪಾವತಿಯಾಗದಿರುವುದು ನಗದು ಹರಿವಿನ ಮೇಲೆ ಪರಿಣಾಮ ಬೀರುತ್ತಿದೆ. ಸಿಬ್ಬಂದಿಯ ವೇತನ, ಡೀಸೆಲ್‌ ಖರೀದಿ, ಬಸ್‌ಗಳ ನಿರ್ವಹಣೆ, ಬಿಡಿಭಾಗಗಳ ಪೂರೈಕೆ ಹಾಗೂ ನಿವೃತ್ತ ನೌಕರರ ಬಾಕಿ ಪಾವತಿ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಗಮಗಳು ನಿರ್ವಹಿಸಬೇಕಿದೆ.

₹18,459 ಕೋಟಿ ನೆರವು ನೀಡಿದರೂ ನಷ್ಟದ ಹೊರೆ

ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರವು ವಿವಿಧ ಕಾರಣಗಳಿಗಾಗಿ ಸಾರಿಗೆ ನಿಗಮಗಳಿಗೆ ₹18,459.37 ಕೋಟಿ ನೆರವು ನೀಡಿದೆ. ಶಕ್ತಿ ಯೋಜನೆ, ವಿದ್ಯಾರ್ಥಿ ಪಾಸ್‌ಗಳ ಸಹಾಯಧನ, ಸಾಲ ಮತ್ತು ಬಡ್ಡಿ ಮರುಪಾವತಿ, ಬಸ್‌ ಖರೀದಿ, ವೇತನ, ಡೀಸೆಲ್‌, ಪಿಎಫ್‌ ಹಾಗೂ ರಜೆ ನಗದೀಕರಣ ಸೇರಿದಂತೆ ಹಲವು ವೆಚ್ಚಗಳಿಗೆ ಈ ನೆರವು ಬಳಕೆಯಾಗಿದೆ.

ಆದರೂ ನಿಗಮಗಳ ಆರ್ಥಿಕ ಸಂಕಷ್ಟ ಸಂಪೂರ್ಣವಾಗಿ ದೂರವಾಗಿಲ್ಲ. ಡೀಸೆಲ್‌ ಬಸ್‌ಗಳ ಜತೆಗೆ ಎಲೆಕ್ಟ್ರಿಕ್‌ ಬಸ್‌ಗಳ ಕಾರ್ಯಾಚರಣೆಯಿಂದಲೂ ನಿರೀಕ್ಷಿತ ಮಟ್ಟದ ಆದಾಯ ಬರುತ್ತಿಲ್ಲ ಎಂಬುದು ಮತ್ತೊಂದು ಸವಾಲಾಗಿದೆ.

ಸಕಾಲಿಕ ಪಾವತಿಯೇ ಪರಿಹಾರವೇ?

ಶಕ್ತಿ ಯೋಜನೆಯ ಸಾಮಾಜಿಕ ಮಹತ್ವವನ್ನು ಪ್ರಶ್ನಿಸುವುದಕ್ಕಿಂತ, ಅದರ ಆರ್ಥಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಸರ್ಕಾರದಿಂದ ಬಾಕಿ ಮೊತ್ತ ಸಕಾಲದಲ್ಲಿ ಬಿಡುಗಡೆಯಾದರೆ ನಿಗಮಗಳ ನಗದು ಹರಿವು ಸುಧಾರಿಸಿ, ವೇತನ, ಇಂಧನ ಮತ್ತು ನಿರ್ವಹಣಾ ವೆಚ್ಚಗಳನ್ನು ನಿರ್ವಹಿಸಲು ಹೆಚ್ಚಿನ ಬಲ ದೊರೆಯಬಹುದು.

Continue Reading

ದಿನದ ಸುದ್ದಿ

ಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ… ಲಕ್ಷಾಂತರ ಜನರ ಬದುಕಿನ ಜಲನಾಡಿ!

Published

on

ನೀರು ತುಂಬಿದರೆ ಹಬ್ಬ, ಬರಿದಾದರೆ ಆತಂಕ; ಕೃಷಿ, ಕುಡಿಯುವ ನೀರು, ವಿದ್ಯುತ್‌ ಹಾಗೂ ಪರಿಸರಕ್ಕೆ ಭದ್ರೆಯೇ ಆಧಾರ

ಸುದ್ದಿದಿನ,ಶಿವಮೊಗ್ಗ: ಭದ್ರಾ ಜಲಾಶಯ ಎಂದರೆ ಕೇವಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅಣೆಕಟ್ಟಲ್ಲ. ಪಶ್ಚಿಮಘಟ್ಟದ ಮಳೆಯನ್ನು ಮಧ್ಯ ಕರ್ನಾಟಕದ ಬರಡು ಭೂಮಿಗೆ ಕೊಂಡೊಯ್ಯುವ ಜೀವನಾಡಿ. ಮಲೆನಾಡಿನ ನದಿಯಿಂದ ಆರಂಭವಾಗುವ ಭದ್ರೆಯ ಪಯಣವು ರೈತರ ಕೃಷಿ, ಜನರ ಕುಡಿಯುವ ನೀರು, ಸ್ಥಳೀಯ ಆರ್ಥಿಕತೆ, ವಿದ್ಯುತ್‌ ಉತ್ಪಾದನೆ ಹಾಗೂ ಪರಿಸರದೊಂದಿಗೆ ನೇರ ಸಂಬಂಧ ಹೊಂದಿದೆ. ಜಲಾಶಯ ತುಂಬಿದರೆ ಹಲವು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿದರೆ, ನೀರಿನ ಕೊರತೆ ಎದುರಾದಾಗ ಇದೇ ಪ್ರದೇಶಗಳಲ್ಲಿ ಆತಂಕ ಹೆಚ್ಚುತ್ತದೆ.

http://Visit : www.suddidina.com

ಪಶ್ಚಿಮಘಟ್ಟದಿಂದ ಬಯಲುಸೀಮೆಯವರೆಗೆ ಭದ್ರೆಯ ಪಯಣ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ–ವರಾಹ ಪರ್ವತ ಶ್ರೇಣಿಗಳ ಗಂಗಾಮೂಲದಲ್ಲಿ ಹುಟ್ಟುವ ಭದ್ರಾ ನದಿ ಕಳಸ, ಕೊಪ್ಪ, ನರಸಿಂಹರಾಜಪುರ, ತರೀಕೆರೆ ಹಾಗೂ ಭದ್ರಾವತಿ ತಾಲೂಕುಗಳಲ್ಲಿ ಹರಿದು ಕೂಡಲಿ ಬಳಿ ತುಂಗಾ ನದಿಯನ್ನು ಸೇರುತ್ತದೆ. ಬಳಿಕ ತುಂಗಾಭದ್ರೆಯಾಗಿ ಮುಂದುವರಿದು ಕೃಷ್ಣಾ ನದಿಯನ್ನು ಸೇರುತ್ತದೆ.

ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿರುವ ಭದ್ರಾ ಜಲಾಶಯ 1,708 ಮೀಟರ್‌ ಉದ್ದ ಹಾಗೂ 59.14 ಮೀಟರ್‌ ಎತ್ತರ ಹೊಂದಿದೆ. ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.50 ಟಿಎಂಸಿ. 1,968.40 ಚದರ ಕಿಲೋಮೀಟರ್‌ ಜಲಾನಯನ ಪ್ರದೇಶ ಹೊಂದಿರುವ ಈ ಯೋಜನೆಗೆ ಸ್ವಾತಂತ್ರ್ಯಾನಂತರ 1947ರಲ್ಲಿ ಚಾಲನೆ ದೊರೆತಿದ್ದು, ಅಣೆಕಟ್ಟು ಕಾಮಗಾರಿ 1959ರಲ್ಲಿ ಹಾಗೂ ನಾಲೆಗಳ ಕಾಮಗಾರಿ 1966ರಲ್ಲಿ ಪೂರ್ಣಗೊಂಡಿತು.

ಒಣಭೂಮಿಗೆ ಹಸಿರು ಹೊದಿಸಿದ ನೀರು

ಭದ್ರಾ ನೀರಾವರಿ ಯೋಜನೆಯು ಮಧ್ಯ ಕರ್ನಾಟಕದ ಕೃಷಿಯ ಚಿತ್ರಣವನ್ನೇ ಬದಲಿಸಿದೆ. ಎಡದಂಡೆ ನಾಲೆ 77.24 ಕಿ.ಮೀ. ಹರಿದು ಸುಮಾರು 8,300 ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸಿದರೆ, ಬಲದಂಡೆ ನಾಲೆ 366.90 ಕಿ.ಮೀ. ಉದ್ದಕ್ಕೆ ಹರಿದು ಸುಮಾರು ಒಂದು ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತದೆ.

ಒಂದು ಕಾಲದಲ್ಲಿ ಭತ್ತ ಮತ್ತು ಕಬ್ಬು ಪ್ರಧಾನವಾಗಿದ್ದ ಪ್ರದೇಶಗಳಲ್ಲಿ ಇದೀಗ ಅಡಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳ ವಿಸ್ತರಣೆ ಕಂಡುಬಂದಿದೆ. ಹೀಗಾಗಿ ಭದ್ರಾ ನೀರು ಕೃಷಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ.

ಕುಡಿಯುವ ನೀರಿಗೂ ಭದ್ರೆಯೇ ಆಸರೆ

ಮಧ್ಯ ಕರ್ನಾಟಕದ ಹಲವು ನಗರಗಳು, ಪಟ್ಟಣಗಳು ಹಾಗೂ ಸಾವಿರಾರು ಹಳ್ಳಿಗಳ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಭದ್ರಾ ಜಲಾಶಯ ಪ್ರಮುಖ ಪಾತ್ರ ವಹಿಸುತ್ತದೆ. ಜಲಾಶಯದಲ್ಲಿ ಕುಡಿಯುವ ನೀರಿಗಾಗಿ 8.50 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಪ್ರದೇಶಗಳ ಜನಜೀವನಕ್ಕೆ ಈ ನೀರು ಆಸರೆಯಾಗಿದೆ.

ಹೂಳು, ಮೇಲ್ದಂಡೆ ಯೋಜನೆ: ಭವಿಷ್ಯದ ಸವಾಲು

ಜಲಾಶಯದ ಸಂಗ್ರಹ ಸಾಮರ್ಥ್ಯದ ಮೇಲೆ ಹೂಳು ಕೂಡ ಪರಿಣಾಮ ಬೀರುತ್ತಿದೆ. ಮೂಲ ಸಂಗ್ರಹಕ್ಕೆ ಹೋಲಿಸಿದರೆ ಸುಮಾರು 95.74 ಮಿಲಿಯನ್‌ ಘನ ಮೀಟರ್‌ ಹೂಳು ಸೇರಿಕೊಂಡಿದೆ ಎನ್ನಲಾಗುತ್ತದೆ. ಸದ್ಯ ಡೆಡ್‌ ಸ್ಟೋರೇಜ್‌ ಇರುವುದರಿಂದ ತಕ್ಷಣದ ಬಳಕೆಗೆ ದೊಡ್ಡ ತೊಂದರೆ ಇಲ್ಲವಾದರೂ, ಭವಿಷ್ಯದ ಜಲಭದ್ರತೆ ದೃಷ್ಟಿಯಿಂದ ಹೂಳು ನಿರ್ವಹಣೆ ಮಹತ್ವದ್ದಾಗಿದೆ.

ಇದರ ನಡುವೆ ಭದ್ರಾ ಮೇಲ್ದಂಡೆ ಯೋಜನೆ ಬರಪೀಡಿತ ಪ್ರದೇಶಗಳಿಗೆ ನೀರೊದಗಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸೂಕ್ಷ್ಮ ನೀರಾವರಿ ಹಾಗೂ ಕೆರೆಗಳ ಭರ್ತಿಗೆ ಯೋಜನೆ ರೂಪಿಸಲಾಗಿದೆ. ಜತೆಗೆ ನಾಲೆಗಳ ಮೂಲಕ 37.2 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯೂ ನಡೆಯುತ್ತಿದೆ. ಮೀನು ಮರಿ ಸಾಕಣೆ ಕೇಂದ್ರವೂ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.

ಭದ್ರೆಯ ಅಂಕಿ-ಅಂಶಗಳು

  • ಜಲಾನಯನ ಪ್ರದೇಶ: 1,968.40 ಚ.ಕಿ.ಮೀ.
  • ಅಣೆಕಟ್ಟು ಎತ್ತರ: 59.14 ಮೀಟರ್‌
  • ಅಣೆಕಟ್ಟು ಉದ್ದ: 1,708 ಮೀಟರ್‌
  • ನೀರು ಸಂಗ್ರಹ ಸಾಮರ್ಥ್ಯ: 71.50 ಟಿಎಂಸಿ
  • ಅಚ್ಚುಕಟ್ಟು ಪ್ರದೇಶ: 1,05,570 ಹೆಕ್ಟೇರ್‌
  • ನಾಲೆಗಳ ಒಟ್ಟು ಉದ್ದ: 444.14 ಕಿ.ಮೀ.
Continue Reading

ದಿನದ ಸುದ್ದಿ

ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ

Published

on

ಜಾತಿಯ ಗೋಡೆ ಒಡೆದು ಮದುವೆಯಾದ ಜೋಡಿಗೆ ಹೊಸ ಸಂಕಷ್ಟ: ಪ್ರೋತ್ಸಾಹಧನಕ್ಕೆ ಅರ್ಜಿ ಹಾಕಿದರೂ ಹಣ ಮಾತ್ರ ಮರೀಚಿಕೆ!

ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.

ಹೈಲೈಟ್ಸ್: 
  • SC/ST ಪುರುಷ–ಬೇರೆ ಜಾತಿಯ ಮಹಿಳೆ ವಿವಾಹಕ್ಕೆ ₹2.50 ಲಕ್ಷ ನೆರವು
  • SC/ST ಮಹಿಳೆ–ಬೇರೆ ಜಾತಿಯ ಪುರುಷ ವಿವಾಹಕ್ಕೆ ₹3 ಲಕ್ಷ ಪ್ರೋತ್ಸಾಹಧನ
  • 2025-26ರಲ್ಲಿ 5,612 ಅರ್ಜಿಗಳ ಪೈಕಿ 3,997 ಅರ್ಜಿಗಳು ಬಾಕಿ
  • 2026-27ರಲ್ಲಿ 2,194 ಅರ್ಜಿಗಳು; 61ಕ್ಕೆ ಅನುಮೋದನೆ, ಆದರೆ ಹಣ ಪಾವತಿ ಶೂನ್ಯ
  • ಅನುದಾನ ಕೊರತೆ ಮತ್ತು ಅಪೂರ್ಣ ದಾಖಲೆಗಳಿಂದ ಯೋಜನೆ ಅನುಷ್ಠಾನಕ್ಕೆ ವಿಳಂಬ

http://Visit : www.suddidina.com

ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?

ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.

ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.

ಹೊಸ ಸಾಲಿನಲ್ಲೂ ಅದೇ ಕಥೆ

2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.

ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ

ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.

2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.

2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ

  • 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
  • ಮೊದಲ ಕಂತಿಗೆ ಅನುಮೋದನೆ: 61
  • ಪ್ರೋತ್ಸಾಹ ಧನ ಪಾವತಿ: 00
  • ಅಪೂರ್ಣ ಅರ್ಜಿಗಳು: 392
  • ತಿರಸ್ಕಾರಗೊಂಡ ಅರ್ಜಿಗಳು: 02

ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ

ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.

ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

Continue Reading

Trending