Connect with us

ದಿನದ ಸುದ್ದಿ

ಶ್ರವಣದೋಷವುಳ್ಳ ವಿಶೇಷಚೇತನರ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನದಡಿ ಶ್ರವಣದೋಷವುಳ್ಳ ವ್ಯಕ್ತಿಗಳು ಸ್ವಯಂ ಉದ್ಯೋಗ ನಡೆಸಲು ಹೊಲಿಗೆ ಯಂತ್ರ 80, ಟಾಕಿಂಗ್ ಲ್ಯಾಪ್‍ಟಾಪ್ 1, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ಮಾರ್ಟ್ ಫೆÇೀನ್ 2 ಮತ್ತು ಎಸ್.ಎಸ್.ಎಲ್.ಸಿ ಹಾಗೂ ನಂತರ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ನೀಡಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ಹೊಲಿಗೆ ಯಂತ್ರ ಬಯಸುವವರು : ಟೈಲರಿಂಗ್ ವರ್ಗ ಪ್ರಮಾಣ ಪತ್ರ ಮತ್ತು ಸಾಕ್ಷರತೆ ಪ್ರಮಾಣ ಪತ್ರ, ವಿಕಲಚೇತನರ ಗುರುತಿನ ಚೀಟಿ (ಯು.ಡಿ.ಐ.ಡಿ) & ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಸ್ವಯಂ ಘೋಷಣೆ ಪತ್ರ, ಉದ್ಯೋಗದಲ್ಲಿಲ್ಲದ ಬಗ್ಗೆ ಪ್ರಮಾಣ ಪತ್ರ, ಇತರೆ ಇಲಾಖೆ, ಸಂಸ್ಥಗಳಿಂದ ಹೊಲಿಗೆ ಯಂತ್ರ ಪಡೆದಿಲ್ಲದಿರುವ ಬಗ್ಗೆ ದೃಢೀಕರಣ ಪತ್ರ, ರೂ.20 ಸ್ಟಾಂಪ್ ಪೇಪರ್ ನಲ್ಲಿ ಹೊಲಿಗೆ ಯಂತ್ರ ಮಾರಾಟ ಮಾಡುವುದಿಲ್ಲ ಎಂದು ಸ್ವಯಂ ಘೋಷಣೆ ಪ್ರಮಾಣ ಪತ್ರ, ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ,

ಲ್ಯಾಪ್‍ಟಾಪ್ : ವಿಕಲಚೇತನರ ಗುರುತಿನ ಚೀಟಿ ಯು.ಡಿ.ಐ.ಡಿ, ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದ ಅಂಕಪಟ್ಟಿ (ಪ್ರಸ್ತುತ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 9ನೇ ತರಗತಿ, ಉತ್ತಿರ್ಣರಾದ ಅಂಕ ಪಟ್ಟಿ), ಸಕ್ಷಮ ಪ್ರಾಧಿಕಾರದಿಂದ ನೀಡಿದ ವಾಸಸ್ಥಳ ದೃಢೀಕರಣ ಪತ್ರ, ಇತರೆ ಇಲಾಖೆ, ಸಂಸ್ಥೆ, ವಿಶ್ವವಿದ್ಯಾಲಯಗಳಿಂದ ಟಾಕಿಂಗ್ ಲ್ಯಾಪ್‍ಟಾಪ್ ಪಡೆದಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ ಪತ್ರ, ಶಾಲೆ, ಕಾಲೇಜಿನಿಂದ ಶಿಫಾರಸ್ಸು ಪತ್ರ, ಲ್ಯಾಪ್‍ಟಾಪ್ ಪರಭಾರೆಯಾಗದಿರುವ ಬಗ್ಗೆ ಸ್ವಯಂ ಘೋಷಣೆ ಪ್ರಮಾಣ ಪತ್ರ, ಪಾಸ್‍ಪೋರ್ಟ್ ಸೈಜ್ ಫೋಟೋ.

ಸ್ಮಾರ್ಟ್ ಫೋನ್ ; ವಿಕಲಚೇತನರ ಗುರುತಿನ ಚೀಟಿ ಯು.ಡಿ.ಐ.ಡಿ, ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಿದ ವಾಸಸ್ಥಳ ದೃಢೀಕರಣ ಪತ್ರ, ಇತರೆ ಇಲಾಖೆ, ಸಂಸ್ಥೆ, ವಿಶ್ವವಿದ್ಯಾಲಯಗಳಿಂದ ಸ್ಮಾರ್ಟ್ ಫೋನ್ ಪಡೆದಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ ಪತ್ರ, ಪಾಸ್‍ಪೋರ್ಟ್ ಸೈಜ್ ಫೋಟೋದೊಂದಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರಾದ ನಾಗರಾಜ್ ಡಿಳ್ಳೆಪ್ಪನರ್ 9901738353, ಶೈಲಜಾ ಕೆ.ಎಂ.9482158005 ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹೊನ್ನಾಳಿ, ಕೆ ಸುಬ್ರಮಣ್ಯಂ 9945738141ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಚನ್ನಗಿರಿ,ಎಂ.ಕೆ.ಶಿವನಗೌಡ 9902105734 ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಜಗಳೂರು, ಶಶಿಕಲಾ ಟಿ. 9945458058, ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹರಿಹರ, ಚನ್ನಪ್ಪ.ಬಿ 9590829024 ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ದಾವಣಗೆರೆ ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಧಿಕಾರಿ ಕೆ.ಕೆ.ಪ್ರಕಾಶ್ ತಿಳಿಸಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

Published

on

ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ದಾವಣಗೆರೆಯ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಣ ಕಳೆದುಕೊಂಡಿದ್ದಾರೆ.

ಉಪನ್ಯಾಸಕರು ಮೊದಲಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ವಂಚಕರು ಹೇಳಿದಂತೆ ಹಲವು ಲಿಂಕ್​ಗಳನ್ನು ಕ್ಲಿಕ್ ಮಾಡುತ್ತಾ ಹೋಗಿದ್ದು, ಹಂತಹಂತವಾಗಿ ಹಣ ಕಳೆದುಕೊಂಡಿದ್ದಾರೆ.

ಲಾಭದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ಲಾಭ ಹೋಗಲಿ, ಅಸಲೂ ಬಾರದ ಕಾರಣ ಅನುಮಾನಗೊಂಡು ತಾನು ಹಣ ಕಳೆದುಕೊಂಡಿರುವುದು ದೃಢಪಟ್ಟಿದೆ.‌ ನಂತರ ಸೈಬರ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಮುನ್ನೋಟ: ಜೀವನಕ್ರಮವಾಗಿ ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವವು ಕೇವಲ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲ; ಅದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಒಂದು ಉದಾತ್ತ ಜೀವನಕ್ರಮ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವು ‘ನಿಷ್ಪಕ್ಷಪಾತ’ ಮನೋಭಾವವನ್ನು ಪ್ರತಿಪಾದಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವು ಕೇವಲ ಕಾಗದದ ಮೇಲಿನ ವಾಕ್ಯವಾಗದೆ, ಹುಟ್ಟಿನಿಂದ ಹೇರಲ್ಪಟ್ಟ ಶ್ರೇಣೀಕೃತ ವ್ಯವಸ್ಥೆಯ ಗೋಡೆಗಳನ್ನು ಕೆಡವುವ ಶಕ್ತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಶದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನಕ್ಕೇರಲು ಸಾಧ್ಯವಿರುವುದು ಈ ವ್ಯವಸ್ಥೆಯ ಅತಿದೊಡ್ಡ ಯಶಸ್ಸು.

ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಬಲ

ಸಾಮಾಜಿಕ ನ್ಯಾಯವು ಪ್ರಜಾಪ್ರಭುತ್ವದ ಅಂತರಾತ್ಮವಿದ್ದಂತೆ. ಐತಿಹಾಸಿಕವಾಗಿ ಶೋಷಣೆಗೆ ಒಳಗಾದ ಸಮುದಾಯಗಳಿಂದ ಬಂದ ವ್ಯಕ್ತಿಗಳು ನಾಯಕತ್ವದ ಸ್ಥಾನಕ್ಕೇರುವುದು ಹೊರನೋಟಕ್ಕೆ ಒಂದು ಪವಾಡದಂತೆ ಭಾಸವಾಗಬಹುದು. ಆದರೆ, ವಾಸ್ತವದಲ್ಲಿ ಇದು ಸಂವಿಧಾನ ನೀಡಿರುವ ‘ಮತದಾನದ ಹಕ್ಕು’ ಮತ್ತು ‘ಪ್ರಾತಿನಿಧ್ಯದ ಅವಕಾಶ’ಗಳ ಫಲಶೃತಿಯಾಗಿದೆ. ಪ್ರಜಾಪ್ರಭುತ್ವವು ಕೇವಲ ಬಹುಮತದ ಆಡಳಿತವಲ್ಲ, ಬದಲಿಗೆ ಅಲ್ಪಸಂಖ್ಯಾತ ಮತ್ತು ದಮನಿತ ಧ್ವನಿಗಳಿಗೂ ನೀತಿ ನಿರೂಪಣೆಯಲ್ಲಿ ಸಮಾನ ವೇದಿಕೆ ಕಲ್ಪಿಸುವ ಒಳಗೊಳ್ಳುವಿಕೆಯ (Inclusion) ಪ್ರಕ್ರಿಯೆಯಾಗಿದೆ. ಅಧಿಕಾರವು ಕೆಲವೇ ಜನರ ಕೈಯಲ್ಲಿ ಕೇಂದ್ರಿಕೃತವಾಗದೆ, ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ.

ನಾಯಕತ್ವದ ನೈತಿಕತೆ ಮತ್ತು ಸಾಂವಿಧಾನಿಕ ಬದ್ಧತೆ

ಪ್ರಜಾಪ್ರಭುತ್ವದ ಅತ್ಯಂತ ನಿರ್ಣಾಯಕ ಅಂಶವೆಂದರೆ ಅಧಿಕಾರವನ್ನು ಪಡೆದವರ ನೈತಿಕ ನಡೆ. ಪ್ರಜಾಪ್ರಭುತ್ವದ ಒತ್ತಾಸೆಯಿಂದ ಅವಕಾಶ ಮತ್ತು ಅಧಿಕಾರವನ್ನು ಪಡೆಯುವ ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ನಿಲುವುಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವ ನೈತಿಕತೆಯನ್ನು ಹೊಂದಿರಬೇಕಾಗುತ್ತದೆ. ಅಧಿಕಾರವು ಒಂದು ಸೌಲಭ್ಯವಲ್ಲ, ಅದೊಂದು ಜವಾಬ್ದಾರಿ. ಯಾವ ವ್ಯವಸ್ಥೆಯು ಒಬ್ಬ ವ್ಯಕ್ತಿಯನ್ನು ಸಾಮಾನ್ಯ ಸ್ಥಿತಿಯಿಂದ ನಾಯಕತ್ವದ ಸ್ಥಾನಕ್ಕೆ ಏರಿಸುತ್ತದೆಯೋ, ಅದೇ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಆ ನಾಯಕನ ಪರಮ ಧರ್ಮ. ಸಾಂವಿಧಾನಿಕ ಆಶಯಗಳಿಗೆ ದ್ರೋಹ ಬಗೆಯದೆ, ವೈಯಕ್ತಿಕ ಹಿತಾಸಕ್ತಿಗಿಂತ ಜನಹಿತವೇ ದೊಡ್ಡದು ಎಂಬ ನಿಲುವು ತಳೆದಾಗ ಮಾತ್ರ ಅಧಿಕಾರಕ್ಕೆ ಸಾರ್ಥಕತೆ ದೊರೆಯುತ್ತದೆ.

ಐತಿಹಾಸಿಕ ಪ್ರೇರಣೆ: ಅಬ್ರಹಾಂ ಲಿಂಕನ್ ಎಂಬ ಮಾದರಿ

ಪ್ರಜಾಪ್ರಭುತ್ವದ ಇತಿಹಾಸವನ್ನು ಚರ್ಚಿಸುವಾಗ ಅಬ್ರಹಾಂ ಲಿಂಕನ್ ಅವರ ಹೆಸರು ಅನಿವಾರ್ಯ. “ಜನರಿಗಾಗಿ, ಜನರಿಂದ, ಜನರಿಗೋಸ್ಕರ” ಎಂಬ ಅವರ ಸರಳ ವ್ಯಾಖ್ಯಾನವು ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಭದ್ರ ಬುನಾದಿ ಹಾಕಿತು. ಒಬ್ಬ ಸಾಮಾನ್ಯ ಹಿನ್ನೆಲೆಯ ವ್ಯಕ್ತಿ ಅಮೆರಿಕದ ಅಧ್ಯಕ್ಷನಾಗಿ ಗುಲಾಮಗಿರಿಯ ವಿರುದ್ಧ ಹೋರಾಡಿದ್ದು, ಪ್ರಜಾಪ್ರಭುತ್ವದ ಗುಣಕ್ಕೆ (Flexibility) ಸಾಕ್ಷಿಯಾಗಿದೆ. ಲಿಂಕನ್ ಅವರ ಹೋರಾಟವು ಮಾನವೀಯತೆ ಮತ್ತು ಸಮಾನತೆಯನ್ನು ಪ್ರಜಾಪ್ರಭುತ್ವದ ಅನಿವಾರ್ಯ ಅಂಗವನ್ನಾಗಿಸಿತು, ಇದು ಇಂದಿಗೂ ಜಾಗತಿಕ ರಾಜಕೀಯಕ್ಕೆ ದಾರಿದೀಪವಾಗಿದೆ.

ಸಿನಿಮಾ, ಸಮಾಜ ಮತ್ತು ರಾಜಕೀಯ ನಾಯಕತ್ವದ ಮನ್ವಂತರ

ತಮಿಳುನಾಡಿನಂತಹ ರಾಜ್ಯಗಳಲ್ಲಿ ರಾಜಕೀಯವು ಯಾವಾಗಲೂ ಸಾಮಾಜಿಕ ನ್ಯಾಯದ ಪ್ರಯೋಗಶಾಲೆಯಾಗಿ ಕಾರ್ಯನಿರ್ವಹಿಸಿದೆ. ದ್ರಾವಿಡ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಇಲ್ಲಿನ ರಾಜಕೀಯ ಸಂಸ್ಕೃತಿಯಲ್ಲಿ, ಸಿನಿಮಾ ರಂಗದ ವ್ಯಕ್ತಿಗಳನ್ನು ಕೇವಲ ನಟರನ್ನಾಗಿ ನೋಡದೆ, ತಮ್ಮ ಸಾಮಾಜಿಕ ಆಶೋತ್ತರಗಳನ್ನು ಈಡೇರಿಸುವ ‘ಪ್ರತಿನಿಧಿ’ಗಳಾಗಿ ಜನರು ಸ್ವೀಕರಿಸುತ್ತಾ ಬಂದಿದ್ದಾರೆ. ಇತ್ತೀಚಿನ ವಿದ್ಯಮಾನಗಳಲ್ಲಿ ಸಿ. ಜೋಸೆಫ್ ವಿಜಯ್ (ನಟ ವಿಜಯ್) ಅವರಂತಹ ವ್ಯಕ್ತಿಗಳು ರಾಜಕೀಯ ಪ್ರವೇಶದ ಹಾದಿಯಲ್ಲಿರುವುದು ಈ ಪರಂಪರೆಯ ಮುಂದುವರಿಕೆಯಾಗಿದೆ. ಜನರು ಇಂತಹ ನಾಯಕರಲ್ಲಿ ಒಬ್ಬ ‘ಸ್ಟಾರ್’ಗಿಂತ ಹೆಚ್ಚಾಗಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಮತ್ತು ಅಧಿಕಾರದ ವಿಕೇಂದ್ರೀಕರಣಕ್ಕೆ ಶ್ರಮಿಸುವ ನಾಯಕತ್ವವನ್ನು ನಿರೀಕ್ಷಿಸುತ್ತಾರೆ.

ಭವಿಷ್ಯದ ಆಶಯ

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಜಾಪ್ರಭುತ್ವವು ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಅಧಿಕಾರವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಸಾಧನವಾಗಬೇಕೇ ಹೊರತು, ಅದು ಕೇವಲ ಆಡಳಿತ ನಡೆಸುವ ಅಧಿಕಾರವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಧಿಕಾರಸ್ಥರ ನೈತಿಕ ಬದ್ಧತೆಯ ಮೂಲಕ ಮಾತ್ರ ಒಂದು ಸಮಾಜವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಯಶಸ್ಸನ್ನು ಸಂಭ್ರಮಿಸಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾನಸಿಕ ಆರೋಗ್ಯ ಅರಿವು ಅಗತ್ಯ : ಡಾ. ಪ್ರಭು ಎಂ. ಬಿಸ್ಲೇರಿ

Published

on

ಸುದ್ದಿದಿನ,ದಾವಣಗೆರೆ:ಎ.ವಿ.ಕೆ. ಕಾಲೇಜು ಹಾಗೂ ಹಳೆ ಬಿಸ್ಲೇರಿ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. ವಿಶೇಷ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಅಧಿಕಾರಿಗಳಾದ ಉಪ್ಪಾರ ಮತ್ತು ರಫಿಕ್ ಅವರು ಬೆಂಕಿ ನಂದಿಸುವ ವಿಧಾನಗಳು, ಗ್ಯಾಸ್ ಲೀಕ್ ಆದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಬೆಂಕಿ ಅವಘಡಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ಅಗ್ನಿ ಆಕಸ್ಮಿಕ ನಿರ್ವಹಣೆಯ ಪ್ರಾತ್ಯಕ್ಷಿಕೆ ಶಿಬಿರಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಜಿ ಆಸ್ಪತ್ರೆ, ದಾವಣಗೆರೆ ಉಪಮುಖ್ಯ ವೈದ್ಯಾಧಿಕಾರಿಗಳಾದ ಡಾ. ಪ್ರಭು ಎಂ. ಬಿಸ್ಲೇರಿ ಅವರು ಮಾನಸಿಕ ಆರೋಗ್ಯದ ಮಹತ್ವ, ದುಶ್ಚಟಗಳಿಂದ ದೂರವಿರುವ ಅಗತ್ಯ ಮತ್ತು ಯುವ ಪೀಳಿಗೆ ಉತ್ತಮ ಜೀವನ ರೂಪಿಸಿಕೊಳ್ಳುವ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಬೇಕು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ತಿಪ್ಪೇಸ್ವಾಮಿ ಅವರು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ ವಿವಿಧ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶಗಳ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಸತೀಶ್ ಕಲಹಾಳ್ ಅವರು “ತಂಬಾಕು ಮುಕ್ತ ಯುವ ಅಭಿಯಾನ 2.0” ಕುರಿತು ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಹಾನಿ, ತಂಬಾಕು ಬಿಡುವ ಲಾಭಗಳು ಹಾಗೂ ತಂಬಾಕು ಉತ್ಪಾದನೆಯ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಜೀವಿತ ಎಂ.ಪಿ., ಶ್ರೀಮತಿ ಉಷಾ ಎಂ.ಆರ್., ಡಾ. ಲೋಹಿತ್, ಡಾ. ಸತೀಶ್, ಡಾ. ವೀಣಾ, ಡಾ. ರಾಜಕುಮಾರ, ಸೂರ್ಯಪ್ರಸಾದ್, ಕವಿತಾ ಎಂ.ಎಂ., ವಿಶ್ವನಾಥ ಡಿ.ಆರ್. ಪರಶುರಾಮ್ ಕಟಾವು ಕರ್, ಗ್ರಾಮಸ್ಥರಾದ ಶ್ರೀಮತಿ ರಶ್ಮಿ ಸತೀಶ್, ಶ್ರೀಮತಿ ರತ್ನಮ್ಮ ಮಹೇಶ್, ಶ್ರೀಮತಿ ಮಂಜುಳಾ ಮಲ್ಲೇಶ್, ಶ್ರೀ ಶಾರದ, ಶಿವರಾಧಿಕಾರಿಗಳಾದ ಡಾ. ವಿಶ್ವನಾಥ ಪಿ., ಡಾ. ಕವಿತ ಆರ್.ಜಿ. ಹಾಗೂ ಅನೇಕ ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಕಾರ್ಯಕ್ರಮವು ಆರೋಗ್ಯ ಮತ್ತು ಸುರಕ್ಷತೆ ಕುರಿತ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending