Connect with us

ಬಹಿರಂಗ

ಮಕ್ಕಳು-ಮಾಧ್ಯಮ ಪ್ರಜ್ಞೆ ಮತ್ತು ಪ್ರಜ್ಞಾವಂತ ಮಾಧ್ಯಮ

Published

on

  • ನಾ ದಿವಾಕರ

ಡಾ. ಎಚ್. ಕೆ. ರಂಗನಾಥ್ ಅವರ ಕರ್ನಾಟಕ ರಂಗಭೂಮಿ ಕೃತಿಯ, ವಿಲಾಸಿ ರಂಗಭೂಮಿ ಅಧ್ಯಾಯದ ಒಂದೆಡೆ ಕೃತಿಕಾರರು ಹೀಗೆ ಹೇಳುತ್ತಾರೆ : “ ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸಿ ವಿಕಾಸಗೊಳಿಸುವ ಪ್ರಯತ್ನವನ್ನು ಕನ್ನಡ ರಂಗಭೂಮಿ ಇತ್ತೀಚಿನವರೆಗೆ ಮಾಡಲಿಲ್ಲ ಅಂದರೆ ಸಲ್ಲುತ್ತದೆ,,,,,,,,ಮಕ್ಕಳ ರಂಗಭೂಮಿಯನ್ನು ನಿರ್ಮಿಸುವಲ್ಲಿ ಕರ್ನಾಟಕ ಹಿಂದೆಯೇ ಉಳಿಯಿತು.

ದೊಡ್ಡವರು ಆಡುತ್ತಿದ್ದ ನಾಟಕಗಳನ್ನೇ ಮಕ್ಕಳೂ ನೋಡಿಕೊಂಡು ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ದೊಡ್ಡವರಿಗಾಗಿ ಸಣ್ಣ ಅಕ್ಷರದಲ್ಲಿ ಅಚ್ಚು ಮಾಡಿದ ದಿನಪತ್ರಿಕೆಯನ್ನು ಒಲ್ಲದ ಮಕ್ಕಳೂ ಓದಬೇಕಲ್ಲವೇ ? ಹಾಗೆ ! ಮಕ್ಕಳಿಗಾಗಿಯೇ ಮೀಸಲುಗೊಂಡ ದಿನಪತ್ರಿಕೆ ಚಿತ್ರಗಳೊಡನೆ ದೊಡ್ಡ ಅಕ್ಷರದಲ್ಲಿ ಅಚ್ಚು ಆಗುವವರೆಗೆ “ ನಮ್ಮ ಮಕ್ಕಳಿಗೆ ಪ್ರಪಂಚದ ವಿದ್ಯಮಾನಗಳೇ ಗೊತ್ತಿಲ್ಲ ” ಎಂದುತಪ್ಪು ಹೊರಿಸುವುದು ಅಪರಾಧ ತಾನೇ ? ” (ಪುಟ 393 ಕರ್ನಾಟಕ ರಂಗಭೂಮಿ 1978 ಸುರುಚಿ ಪ್ರಕಾಶನ)

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ನಾ. ಡಿಸೋಜ

ಇಲ್ಲಿ ರಂಗಭೂಮಿಯ ಪ್ರಶ್ನೆಯನ್ನು ಪಕ್ಕಕ್ಕಿಡೋಣ. ಏಕೆಂದರೆ 1978ರ ನಂತರದಲ್ಲಿ ಮಕ್ಕಳಿಗಾಗಿಯೇ ನಾಟಕಗಳನ್ನು ರಚಿಸುವಲ್ಲಿ ಯಶಸ್ವಿ ಪ್ರಯತ್ನಗಳು ನಡೆದಿವೆ. ಈ ಮಾತುಗಳಲ್ಲಿ ನಾವು ಗಮನಿಸಬೇಕಿರುವುದು ದಿನಪತ್ರಿಕೆಗಳ ಬಗ್ಗೆ ರಂಗನಾಥ್ ಅವರು ಹೇಳಿರುವ ಮಾತುಗಳನ್ನು.

ಈ ಪ್ರಶ್ನೆ ಇಂದಿಗೂ ಪ್ರಶ್ನೆಯಾಗೇ ಉಳಿದಿದ್ದರೆ ಅಥವಾ ಉತ್ತರಗಳು ದೊರೆತು ಮತ್ತದೇ ಪ್ರಶ್ನೆಯ ಪುನರಾರ್ತನೆಯಾಗುವ ಪರಿಸ್ಥಿತಿ ಉಂಟಾಗಿದ್ದರೆ ಇದು ಖಂಡಿತವಾಗಿಯೂ ಯೋಚಿಸಬೇಕಾದ ವಿಚಾರ. 1978ರ ಸಂದರ್ಭದ ಮಕ್ಕಳು ಎನ್ನುವ ಪರಿಕಲ್ಪನೆಗೂ ಇಂದಿನ ಪರಿಕಲ್ಪನೆಗೂ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ. ನವ ಶತಮಾನದ ಮಕ್ಕಳ ಮನಸ್ಸು ಹೊರ ಪ್ರಪಂಚಕ್ಕೆ ಬೇಗನೆ ತೆರೆದುಕೊಳ್ಳುತ್ತದೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ಮಕ್ಕಳು ಹಾಗೆಯೇ ಇರಲಿಕ್ಕೆ ಸಾಧ್ಯ.

ನಾವೂ ದಶಕಗಳ ಕಾಲ ದಿನಪತ್ರಿಕೆಗಳನ್ನು ಓದುತ್ತಲೇ ಬಂದಿದ್ದೇವೆ. ಬಹುಶಃ 1970ರ ದಶಕದ ಉತ್ತರಾರ್ಧದಲ್ಲಿ ಮತ್ತು 1980ರ ದಶಕದಲ್ಲಿ ಶಾಲೆಗಳಲ್ಲಿ ದಿನಪತ್ರಿಕೆಗಳ ಮುಖ್ಯ ಸುದ್ದಿ ಓದುವ ಒಂದು ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ಇದೂ ಸಹ ಪ್ರೌಢಶಾಲೆಯ ಹಂತದಿಂದ ಆರಂಭವಾಯಿತು ಎನಿಸುತ್ತದೆ. ಪ್ರಾಥಮಿಕ ಶಾಲೆಯ ಹಂತದಲ್ಲಿ ಇತ್ತೀಚೆಗೆ ಇದು ಚಾಲ್ತಿಯಲ್ಲಿರಬಹುದು.

ಇಲ್ಲಿ ರಂಗನಾಥ್ ಅವರು ಎತ್ತಿರುವ ಪ್ರಶ್ನೆ ನಮ್ಮಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂದಿನ ಮಕ್ಕಳು ಪತ್ರಿಕೆಗಳನ್ನು ಓದುವುದಿಲ್ಲ, ನಿತ್ಯ ಸುದ್ದಿಗಳನ್ನು ತಿಳಿದುಕೊಳ್ಳುವುದಿಲ್ಲ, ತಮ್ಮ ಸುತ್ತಲಿನ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಪರಿವೆ ಇರುವುದಿಲ್ಲ ಎಂಬ ಆರೋಪ ಕೇಳಿಬರುತ್ತಲೇ ಇದೆ.

ಇಲ್ಲಿ ಮಕ್ಕಳು ಎಂದರೆ ಯಾವ ಓರಿಗೆಯವರು ? ಪ್ರಾತಮಿಕ ಶಾಲೆಯ ಮಕ್ಕಳಿಗೆ ಈ ತಿಳುವಳಿಕೆ ಬೇಕೋ ಬೇಡವೋ ಎನ್ನುವ ಜಿಜ್ಞಾಸೆಯನ್ನು ಬದಿಗಿಟ್ಟು ಯೋಚಿಸಿದಾಗ ಆಧುನಿಕ ಜಗತ್ತಿನ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು, ವಿಕಸನದ ಹಂತದಲ್ಲಿರುವ ಮಕ್ಕಳನ್ನು ತಲುಪುತ್ತಿವೆಯೇ ಎಂಬ ಪ್ರಶ್ನೆ ಹೆಚ್ಚು ಪ್ರಸ್ತುತ ಎನಿಸುತ್ತದೆ.

ಇಂದಿನ ವಿದ್ಯುನ್ಮಾನ ತಂತ್ರಜ್ಞಾನ ಯುಗದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಅಂತರ್ಜಾಲ ಕೇಂದ್ರಿತ ಮಾಹಿತಿ ಕಣಜ ಇರುವುದನ್ನು ಕಾಣಬಹುದು. ಗೂಗಲ್ ಇಂದು ಸಕಲ ಜ್ಞಾನದ ಆಕರದಂತೆ ಕಾಣುತ್ತಿದ್ದು ಎಂಟು ಹತ್ತು ವರ್ಷದ ಮಕ್ಕಳೂ ಸಹ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಗೂಗಲ್ ಹುಡುಕಾಟದಲ್ಲಿ ತೊಡಗಿರುತ್ತಾರೆ.

ತಮ್ಮ ಅಥವಾ ತಮ್ಮ ಪೋಷಕರ, ಕುಟುಂಬದ ಹಿರಿಯ ಕೈಯ್ಯಲ್ಲಿನ ಮೊಬೈಲ್ ಅಥವಾ ಲ್ಯಾಪ್‍ಟಾಪ್ ಈ ಮಕ್ಕಳಿಗೆ ಹೊರ ಜಗತ್ತನ್ನು ಕಂಡುಕೊಳ್ಳುವ ಮಹಾದ್ವಾರದಂತೆ ಕಾಣುತ್ತದೆ. ಕೊರೋನಾ ಸಂದರ್ಭದ ಆನ್ ಲೈನ್ ಶಿಕ್ಷಣದಿಂದ ಈಗ ಮಧ್ಯಮ ವರ್ಗಗಳ ಎಳೆಯ ಮಕ್ಕಳ ಬಳಿಯೂ ಒಂದು ಸ್ಮಾರ್ಟ್ ಫೋನ್ ಇರುವುದು ಸಾಮಾನ್ಯ ಸಂಗತಿಯಾಗಿದೆ.

ಆದರೆ ಈ ಮಕ್ಕಳಲ್ಲಿನ ಪ್ರಾಪಂಚಿಕ ತಿಳುವಳಿಕೆ ಅಥವಾ ಸುತ್ತಲಿನ ನಿತ್ಯದ ವಿದ್ಯಮಾನಗಳ ಬಗ್ಗೆ ಅರಿವು ಮತ್ತು ತಾವು ಬದುಕುತ್ತಿರುವ ಒಂದು ಸಮಾಜದ ಪರಿವೆ ಇವುಗಳನ್ನು ಪರೀಕ್ಷಿಸಲು ಹೋದಾಗ ನಿರಾಸೆಯಾಗುವುದೇ ಹೆಚ್ಚು. ಏಕೆಂದರೆ ಬಹುತೇಕ ಮಕ್ಕಳನ್ನು ಪೋಷಕರು ಶಿಕ್ಷಣ ಬಂಧಿಗಳನ್ನಾಗಿ ಮಾಡಿರುತ್ತಾರೆ.

ಶಾಲೆ-ಟ್ಯೂಷನ್-ಶಾಲೆ ವ್ಯೂಹದಿಂದ ಹೊರಬರಲು ಸಮಯ ಸಿಕ್ಕಾಗಲೆಲ್ಲಾ ಈ ಮಕ್ಕಳು ಪರದೆಯ ಮೊರೆ ಹೋಗುತ್ತಾರೆ. ಟಿವಿ, ಲ್ಯಾಪ್‍ಟಾಪ್ ಅಥವಾ ಸ್ಮಾರ್ಟ್‍ಫೋನ್ ಅವರ ಮತ್ತೊಂದು ಪ್ರಪಂಚವಾಗಿ ಪರಿಣಮಿಸುತ್ತದೆ. ಈ ಪ್ರವೃತ್ತಿಯನ್ನು ನಗರ ಪ್ರದೇಶಗಳ ಕೆಳಮಧ್ಯಮ ವರ್ಗಗಳಲ್ಲೂ ಕಾಣಬಹುದು, ಕೆಲವೆಡೆ ಗ್ರಾಮೀಣ ಪ್ರದೇಶಗಳಲ್ಲೂ ಕಾಣಬಹುದು.

ಇಲ್ಲಿ ಬಲಿಯಾಗುತ್ತಿರುವುದು ಓದು ಮತ್ತು ಓದಿನ ಹವ್ಯಾಸ. ಪಠ್ಯೇತರ ಓದು ಎನ್ನುವುದನ್ನು ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆ ಹಂತಹಂತವಾಗಿ ಕೊಲ್ಲುತ್ತಲೇ ಬಂದಿದ್ದು ಸ್ಮಾರ್ಟ್ ಫೋನ್ ಯುಗದಲ್ಲಿ ಮಕ್ಕಳಿಗೆ ದಿನಪತ್ರಿಕೆಗಳೂ ಸಹ ಓದಿಗೆ ಸಹ್ಯ ಎನಿಸುವುದಿಲ್ಲ. ಈ ಸಂದರ್ಭದಲ್ಲೇ ಡಾ ರಂಗನಾಥ್ ಅವರ ಪ್ರಶ್ನೆ ಮಹತ್ವ ಪಡೆಯುತ್ತದೆ.

ಮಕ್ಕಳ ಚಂಚಲ ಮನಸಿಗೆ ನಿಲುಕುವಂತೆ ದಿನನಿತ್ಯದ ಸುದ್ದಿಗಳನ್ನು ನೀಡುವಂತಹ ಪತ್ರಿಕೆಗಳು ಸಾಧ್ಯವಿಲ್ಲವೇ ? ಮಕ್ಕಳಿಗಾಗಿ ಒಂದು ಪುರವಣಿಯನ್ನೋ ಅಥವಾ ವಾರಪತ್ರಿಕೆಗಳಲ್ಲಿ ಒಂದೆರಡು ಪುಟಗಳನ್ನೋ ಮೀಸಲಿಡುವ ಮೂಲಕ ಮಕ್ಕಳ ಹಾಡು, ಕಥೆ, ವಿನೋದ ಇತ್ಯಾದಿಗಳನ್ನು ನೋಡುತ್ತಿದ್ದೇವೆ.

ಆದರೆ ಇವು ಮನರಂಜನೆಯ ಸರಕುಗಳಷ್ಟೇ. ತಮ್ಮ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಮಕ್ಕಳ ಗ್ರಹಿಕೆಗೆ ನಿಲುಕುವಂತೆ ಪತ್ರಿಕೆಯನ್ನು ರೂಪಿಸಲು ಸಾಧ್ಯವೇ ? ಇದಕ್ಕೆ ನೇರ ಉತ್ತರ ಕಷ್ಟವಾಗಬಹುದು. ಆದರೆ ಚರ್ಚೆ ಮಾಡಲು ಅಡ್ಡಿಯಿಲ್ಲ.

ಆದರೆ ಸಮಸ್ಯೆಯಿಂದ ಅಥವಾ ಪ್ರಶ್ನೆಯಿಂದ ನಾವು ವಿಮುಖರಾಗುವಂತಿಲ್ಲ. ರಾಜಕೀಯ ಎಂದರೆ ಹೊಲಸು ಎಂದು ಮೂಗುಮುರಿಯುವ ಸಂದರ್ಭದಲ್ಲಿ ನಾವಿರುವಾಗಲೇ ಹೊಲಸು ರಾಜಕಾರಣ ಮನೆಮನೆಯನ್ನೂ ತಲುಪುತ್ತಿದೆ. ಮಕ್ಕಳಿಗೇಕೆ ರಾಜಕೀಯ ಎನ್ನುವ ಕಾಲವೂ ಒಂದಿತ್ತು ಆದರೆ ಇಂದಿನ ಸಾಂಸ್ಕೃತಿಕ-ಮತೀಯ ರಾಜಕಾರಣ ಮಕ್ಕಳ ಮನಸುಗಳನ್ನೂ ಹೊಕ್ಕಿದೆ.

ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಅಸ್ಮಿತೆಗಳ ಲೋಕ ತಾಂಡವಾಡುತ್ತಿದೆ. ‘ ನಮ್ಮವರು ’ ಮತ್ತು ‘ ಅನ್ಯ ’ರನ್ನು ಗುರುತಿಸುವಷ್ಟು ಮಟ್ಟಿಗೆ ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಮತಾಂಧತೆ, ಜಾತೀಯತೆಯ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಈ ವಿಷಬೀಜಗಳಿಂದಲೇ ಮುಗಿಲೆತ್ತರಕೆ ಬೆಳೆದಿರುವ ವಿಷವೃಕ್ಷಗಳೇ ಆಡಳಿತ ವ್ಯವಸ್ಥೆಯ ಮೇಲೆ ಅಧಿಪತ್ಯ ಸಾಧಿಸುತ್ತಿದೆ. ಅಂದರೆ ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎನ್ನುತ್ತಿದ್ದವರೇ ಈಗ ಆ ಪ್ರಜೆಗಳನ್ನು ಅಸ್ಮಿತೆಗಳ ಮೂಲಕ ಗುರುತಿಸಲು ಸಜ್ಜಾಗಬೇಕಿದೆ.

ಈ ಅಸ್ಮಿತೆಗಳ ವಿಷವರ್ತುಲದಿಂದ ಮಕ್ಕಳನ್ನು ಹೊರತರಬೇಕಾದರೆ ಎಳೆಯ ಮಕ್ಕಳಿಗೂ ತಮ್ಮ ಸುತ್ತಲಿನ ಸಾಮಾಜಿಕ, ಸಾಂಸ್ಕೃತಿಕ , ರಾಜಕೀಯ ವಿದ್ಯಮಾನಗಳು ಅರ್ಥವಾಗುವಂತೆ ತಿಳಿಸಬೇಕಾಗುತ್ತದೆ. ಸಾಂಸ್ಕೃತಿಕ ನೆಲೆಯಲ್ಲಿ, ಮತಧಾರ್ಮಿಕ ಚೌಕಟ್ಟಿನಲ್ಲಿ ಇದು ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಕ್ರಮೇಣ ಸಾಮಾಜಿಕ ಮತ್ತು ರಾಜಕೀಯ ಫಲ ನೀಡುವಷ್ಟರಲ್ಲಿ ವಿಷಬೇರುಗಳು ಮತ್ತಷ್ಟು ವ್ಯಾಪಕವಾಗಿ ಹರಡಿರುತ್ತವೆ.

ಆದರೆ ಇದಕ್ಕೆ ಪ್ರತಿಯಾಗಿ ಸಂವೇದನಾಶೀಲ ಸಾಂಸ್ಕೃತಿಕ ನೆಲೆಗಳನ್ನು ಮಕ್ಕಳ ನಡುವೆ ಸ್ಥಾಪಿಸುವಲ್ಲಿ ಬಹುಶಃ ನಾವು ಎಡವಿದ್ದೇವೆ ಎನಿಸುತ್ತದೆ. ಈ ವೈಫಲ್ಯದ ಪರಿಣಾಮವನ್ನು ಶತಮಾನದ ಮಕ್ಕಳ ಸಮೂಹ ಸಾಂಸ್ಕೃತಿಕ ವಲಸೆಯಲ್ಲಿ ಕಾಣುತ್ತಿದ್ದೇವೆ. ಇಂದಿನ ಎಳೆಯ ಮಕ್ಕಳು ಒಂದು ದಶಕದ ನಂತರ ಇದೇ ವಲಸೆಯ ಮುಂದುವರೆದ ಭಾಗವಾಗಿ ಕಂಡರೆ ಅಚ್ಚರಿಯೇನಿಲ್ಲ ಅಲ್ಲವೇ ?

ಇಲ್ಲಿ ನಮಗೆ ಪ್ರಜಾತಂತ್ರ ವ್ಯವಸ್ಥೆಯ ಮತ್ತು ಪ್ರಜ್ಞಾವಂತ ಸಮಾಜದ ನಾಲ್ಕನೆಯ ಸ್ತಂಭ, ಮಾಧ್ಯಮ ಲೋಕ ಮುಖ್ಯವಾಗುತ್ತದೆ. ಸ್ಮಾರ್ಟ್ ಫೋನ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ಇಂದು ಪ್ರತಿಯೊಬ್ಬ ವ್ಯಕ್ತಿಗೂ ನೇರವಾಗಿ ತಲುಪುವ ಸುಲಭ ಸಾಧನಗಳಾಗಿವೆ. ಮಕ್ಕಳೂ ಸಹ ಇದನ್ನೇ ಬಳಸಿಕೊಳ್ಳುತ್ತಿದ್ದಾರೆ. ಇಡೀ ಪ್ರಪಂಚದ ವಿದ್ಯಮಾನಗಳನ್ನು ಒಂದು ಪರದೆಯಲ್ಲಿ ಸೆರೆಹಿಡಿದು ಮಕ್ಕಳ ಮುಂದಿಟ್ಟರೂ ಅವರ ಗಮನ ಹರಿಯುವುದು ಆಕರ್ಷಣೀಯ ಆಟಗಳ ಕಡೆಗೆ.

ಈ ಆಟಗಳೂ ಸಹ ಮಕ್ಕಳಿಗಾಗಿ ದೊಡ್ಡವರ ಮನಸ್ಥಿತಿಯಲ್ಲಿ ರೂಪಿಸಲಾಗಿರುತ್ತದೆ. ಹೊಡೆದುರುಳಿಸುವುದು, ತೊಡೆದುಹಾಕುವುದು, ಗೆಲ್ಲುವ ಹಪಹಪಿ , ಸಾಫಲ್ಯ ಮತ್ತು ವೈಫಲ್ಯ ಹೀಗೆ ವಯಸ್ಕ ಬದುಕಿನ ವಿದ್ಯಮಾನಗಳನ್ನೇ ಮಕ್ಕಳ ಆಟಗಳ ರೂಪದಲ್ಲಿ ಅಳವಡಿಸಲಾಗಿರುತ್ತದೆ. ಮಕ್ಕಳು ಇಡೀ ದಿನ ಇಂತಹ ಆಟಗಳ ನಡುವೆಯೇ ಕಾಲ ಕಳೆಯುತ್ತಾರೆ.

ಕರ್ನಾಟಕದ ಮಟ್ಟಿಗೇ ಹೇಳುವುದಾದರೆ ಮುದ್ರಣ ಮಾಧ್ಯಮದ ಯಾವುದೇ ಪತ್ರಿಕೆಗಳೂ ಮಕ್ಕಳ ಮನಸನ್ನು ತಲುಪುವಂತಹ ಪುಟಗಳನ್ನು ಹೊಂದಿರುವುದಿಲ್ಲ. ಭಾನುವಾರದ ಪುರವಣಿಗಳಲ್ಲಿನ ಹಳೆಯ ವಿನ್ಯಾಸದ ಹಾಡು, ಪದ್ಯ, ಸಣ್ಣ ಕಥೆ ಮತ್ತು ಮನರಂಜನೆಯ ಸರಕುಗಳನ್ನು ಬಿಟ್ಟರೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾದಂತಹ ಸರಕುಗಳು ಇರುವುದಿಲ್ಲ.

ಕೋವಿದ್ 19 ಸಂದರ್ಭದಲ್ಲಿ ಬಹುಪಾಲು ಎಲ್ಲ ಪತ್ರಿಕೆಗಳ ಪುರವಣಿಗಳೇ ತಮ್ಮ ಮೂಲ ಅಸ್ತಿತ್ವ ಕಳೆದುಕೊಂಡಿದ್ದು, ಮಕ್ಕಳ ಅವಶ್ಯಕತೆಗಳು ನಿರ್ಲಕ್ಷಿತವಾಗಿವೆ. ಮಕ್ಕಳಿಗಾಗಿಯೇ ವರುಷಕ್ಕೊಮ್ಮೆ ಹೊರತರುವ ವಿಶೇಷ ಸಂಚಿಕೆಗಳು ಇದ್ದುದರಲ್ಲಿ ಕೊಂಚ ಆಶಾಭಾವನೆ ಮೂಡಿಸುವಂತಿವೆ.

ಆದರೆ ಮುದ್ರಣ ಮಾಧ್ಯಮದಿಂದ ಬಹುಪಾಲು ವಿಮುಖವಾಗಿರುವ ಮಕ್ಕಳಿಗೆ ವಿದ್ಯುನ್ಮಾನ ಮಾಧ್ಯಮಗಳು ಕನಿಷ್ಟ ಮಟ್ಟದಲ್ಲಿ ತಲುಪುವ ಪ್ರಯತ್ನಗಳನ್ನೂ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟ. ಅನ್ಯ ಭಾಷೆಯ ಮತ್ತು ಕನ್ನಡದಲ್ಲಿ ಡಬ್ ಆದ ಕಾರ್ಟೂನ್ ವಾಹಿನಿಗಳ ಪುನರಾವರ್ತಿತ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ, ಬೌದ್ಧಿಕ ವಿಕಸನಕ್ಕೆ ಮತ್ತು ಮಕ್ಕಳ ಪಠ್ಯೇತರ ಜ್ಞಾನಾರ್ಜನೆಗೆ ಪೂರಕವಾದಂತಹ ಕಾರ್ಯಕ್ರಮಗಳು ಯಾವುದೇ ಕಾರ್ಟೂನ್ ವಾಹಿನಿಗಳಲ್ಲೂ ಕಾಣುವುದಿಲ್ಲ. ಸಾಂಪ್ರದಾಯಿಕ ಕಲೆಗಳಾದ ಸೂತ್ರದ ಬೊಂಬೆ, ತೊಗಲು ಬೊಂಬೆ, ಛಾಯಾ ಬೊಂಬೆಯಾಟ ಮುಂತಾದವುಗಳಿಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅವಕಾಶವೇ ಇಲ್ಲದಿರುವುದು ದುರಂತ.

ಶೈಕ್ಷಣಿಕ ನೋಡಿದಾಗಲೂ, ಶಾಲಾ ಪಠ್ಯಗಳಲ್ಲಿ ಈಗಲೂ ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸುವ ವಿಜ್ಞಾನ ಮತ್ತು ಗಣಿತವನ್ನು, ಮಕ್ಕಳು ಅನವಶ್ಯಕ ಎಂದು ಭಾವಿಸುವ ಚರಿತ್ರೆಯ ಮಜಲುಗಳನ್ನು, ಅವರ ವಯೋಮಿತಿಗೆ ಅನುಗುಣವಾಗಿ ಮನಮುಟ್ಟುವಂತೆ ತಿಳಿಸಿಕೊಡುವ ಕಾರ್ಯಕ್ರಮಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಂಡುಬರುವುದಿಲ್ಲ.

ಮಕ್ಕಳು ತಮ್ಮದೇ ಆದ ಬೌದ್ಧಿಕ ನೆಲೆಯಲ್ಲಿ ಗ್ರಹಣ ಶಕ್ತಿಯನ್ನು ಹೊಂದಿರುತ್ತಾರೆ. ಈ ಗ್ರಹಿಕೆಯ ಸಾಮಥ್ರ್ಯಕ್ಕೆ ಪೂರಕವಾದ ಬೌದ್ಧಿಕ, ಶೈಕ್ಷಣಿಕ ಸರಕುಗಳನ್ನು ಒದಗಿಸುವುದು ಒಂದು ಸ್ವಸ್ಥ ಸಮಾಜದ ಆದ್ಯತೆಯಾಗಿರಬೇಕಲ್ಲವೇ ? ತಂತ್ರಜ್ಞಾನ ಯುಗದ ನಾಗಾಲೋಟದಲ್ಲಿ ಇದನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ.

ಒಂದೆಡೆ ಬೈಜೂದಂತಹ ಶೈಕ್ಷಣಿಕ ವೆಬ್ ಸಾಧನಗಳು ಮಕ್ಕಳಿಗೆ ಅವರ ವಯೋಸಹಜ ಇತಿಮಿತಿಗಳನ್ನೂ ಮೀರಿದಂತೆ ಸರಕುಗಳನ್ನು ಉಣಬಡಿಸುತ್ತಿವೆ, ಮಧ್ಯಮ ವರ್ಗದ ಮಕ್ಕಳ ಮಿದುಳಿನಲ್ಲಿ ಅವಶ್ಯಕತೆಗಿಂತಲೂ ಹೆಚ್ಚು ಸರಕುಗಳನ್ನು ತುಂಬುತ್ತಿವೆ. ಮತ್ತೊಂದೆಡೆ ಮಕ್ಕಳು ತಮ್ಮ ಸಹಜ ವಿಕಸನಕ್ಕೆ ಅತ್ಯವಶ್ಯವಾದ ವಸ್ತುಗಳಿಂದ ವಂಚಿತರಾಗುತ್ತಿದ್ದಾರೆ.

ಕನ್ನಡದ ಹತ್ತಾರು ವಾಹಿನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನೇ ಮರೆತು ಮಾರುಕಟ್ಟೆಯ ಗುಲಾಮಗಿರಿಗೆ ಒಳಗಾಗಿರುವುದರಿಂದ ಮಕ್ಕಳ ಮನೋವಿಕಾಸಕ್ಕೆ ಪೂರಕವಾದಂತಹ ಯಾವುದೇ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲದಂತಾಗಿದೆ.

ಮುಂಜಾನೆಯಲ್ಲಿ ಜ್ಯೋತಿಷ್ಯ, ಆಗಮ, ಆರಾಧನೆ ಮತ್ತು ವಾಸ್ತು ಮುಂತಾದ ಮೌಢ್ಯ ಬಿತ್ತನೆ ಪ್ರಧಾನವಾಗಿದ್ದರೆ ರಾತ್ರಿ ವೇಳೆ ಕದನ ಕುತೂಹಲ ಕೆರಳಿಸುವ ಯುದ್ಧ, ಮಹಾಸಮರ, ಪ್ರವಾಹ, ವಿಶ್ವ ವಿನಾಶ ಹೀಗೆ ಭೀತಿ ಬಿತ್ತನೆಯ ಕಾರ್ಯಕ್ರಮಗಳು ಪ್ರಧಾನವಾಗಿರುತ್ತವೆ. ಈ ನಡುವೆ ಪ್ರಸಾರವಾಗುವ ಧಾರಾವಾಹಿಗಳು ಮಕ್ಕಳಿಗೆ ತಲುಪುವುದಕ್ಕಿಂತಲೂ ಹೆಚ್ಚಾಗಿ ಅವರಲ್ಲಿನ ಸೂಕ್ಷ್ಮತೆಯನ್ನೂ ನಾಶಪಡಿಸುವಂತಿರುತ್ತವೆ.

ಕನ್ನಡದ ಸುದ್ದಿಮನೆಗಳಿಂದ ಮಕ್ಕಳನ್ನು ದೂರ ಇರಿಸುವುದೇ ಕ್ಷೇಮ ಎನ್ನುವ ರೀತಿಯಲ್ಲಿ ಸುದ್ದಿ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ವಾಹಿನಿಯಲ್ಲಿ ಮಕ್ಕಳಿಗಾಗಿ ದಿನಕ್ಕೆ ಕನಿಷ್ಟ ಅರ್ಧಗಂಟೆಯಷ್ಟು ಅವಧಿಯನ್ನೂ ಒದಗಿಸಲು ಕನ್ನಡ ವಾಹಿನಿಗಳಿಗೆ ಸಾಧ್ಯವಾಗದಿರುವುದು ದುರಂತ.

ಚಲನ ಚಿತ್ರ ಕ್ಷೇತ್ರದಲ್ಲಿ ಬಹುಶಃ ಮಕ್ಕಳ ಕಲ್ಪನೆಯೇ ಮಾಯವಾಗಿದೆ. ಕನ್ನಡದಲ್ಲಿ ಒಂದು ಸುಂದರ ಮಕ್ಕಳ ಚಿತ್ರವನ್ನು ಕಂಡು ದಶಕಗಳೇ ಕಳೆದಿರಬಹುದು. ವಯಸ್ಕರಿಗಾಗಿ ಹೆಣೆಯುವ ಕತೆಗಳು, ಹೊಡಿಬಡಿ ದೃಶ್ಯಗಳು, ಅತಿಮಾನುಷ ಶಕ್ತಿಯ ನಾಯಕ ಮತ್ತು ಸತ್ವಹೀನ ನಾಯಕಿ ಹೀಗೆ ಹಳಸಲು ಸೂತ್ರಗಳನ್ನೇ ಬಳಸುತ್ತಿರುವ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಕೆಲವೇ ಚಿತ್ರಗಳು ಮಕ್ಕಳಿಗೆ ತಲುಪುವಂತಿರುವುದು ದುರಂತ.

ಮಕ್ಕಳಿಗಾಗಿಯೇ ಮನರಂಜನೆಯನ್ನೊಳಗೊಂಡ ಮನೋವಿಕಾಸ ಭೂಮಿಕೆಯ ಚಿತ್ರಗಳು ಕಾಣುತ್ತಲೇ ಇಲ್ಲ. ಇಲ್ಲಿ ಮತ್ತೊಮ್ಮೆ ಡಾ ರಂಗನಾಥ್ ನಾಟಕವನ್ನು ಕುರಿತು ಹೇಳಿದ ಮಾತುಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ. ನಮ್ಮಲ್ಲಿ ಪ್ರತಿಭೆಗಳ ಕೊರತೆ ಇಲ್ಲ, ಅವಕಾಶಗಳ ಕೊರತೆ ಇದೆ. ಟಿ ಆರ್ ಪಿ ಮತ್ತು ಮಾರುಕಟ್ಟೆಯ ಚೌಕಟ್ಟಿನಿಂದಾಚೆಗೆ ಒಂದು ಉತ್ತಮ ಕೌಟುಂಬಿಕ ಧಾರಾವಾಹಿಯನ್ನೂ ತಯಾರಿಸಲು ಸಾಧ್ಯವಾಗದ ಪರಿಸ್ಥಿತಿ ಇರುವುದು ದುರಂತ.

ವಿಕಸಿಸುವ ಕುಸುಮಗಳ ಪಕಳೆಗಳಿಗೆ ವಿಷದ ಲೇಪನ ಮಾಡುವ ಬೌದ್ಧಿಕ ಪ್ರಕ್ರಿಯೆಯಲ್ಲಿ ಸಾಂಸ್ಕೃತಿಕ ರಾಜಕಾರಣದ ಮತಾಂಧ ಶಕ್ತಿಗಳು ಸಕ್ರಿಯವಾಗಿರುವ ಈ ಸಂದರ್ಭದಲ್ಲಿ ನಮ್ಮ ಆದ್ಯತೆಗಳಿಗೆ ಎರಡು ಆಯಾಮಗಳಿರಬೇಕಾಗುತ್ತದೆ. ಮೊದಲನೆಯದು ಇಂದಿನ ಎಳೆ ಮಕ್ಕಳ ಮಿದುಳಿನಲ್ಲಿ ಸಮ ಸಮಾಜದ ಕಲ್ಪನೆಯನ್ನು ಜೀವಂತವಾಗಿರಿಸುವುದು ಮತ್ತು ವೈಜ್ಞಾನಿಕ-ವೈಚಾರಿಕ ಚಿಂತನೆಯ ನೆಲೆಯನ್ನು ಭವಿಷ್ಯಕ್ಕಾಗಿ ಕಾಪಾಡುವುದು.

ಈ ನಿಟ್ಟಿನಲ್ಲಿ ನಾವು ಯೋಚಿಸದೆ ಹೋದರೆ ಇಡೀ ಪೀಳಿಗೆಯನ್ನೇ ತಮ್ಮ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳಲು ಮತಾಂಧ, ಜಾತಿವಾದಿ ಶಕ್ತಿಗಳು ಆವರಿಸುತ್ತವೆ. ಈ ಬೌದ್ಧಿಕ ವಿಕಸನದ ಮಾರ್ಗಗಳನ್ನು ಮರುಶೋಧಿಸುವ ಪ್ರಯತ್ನ ನಮ್ಮದಾಗಬೇಕಿದೆ. ಮಾಧ್ಯಮಗಳು ಪ್ರಜ್ಞೆ ಕಳೆದುಕೊಂಡಿವೆ ಆದರೆ ನಾಗರಿಕ ಸಮಾಜದ ಪ್ರಜ್ಞೆ ಜೀವಂತವಾಗಿದೆ ಅಲ್ಲವೇ ?

ಕೃಪೆ : ಬೆವರಹನಿ ಪತ್ರಿಕೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

Trending