Connect with us

ಅಂತರಂಗ

ಹೋಳಿ ಎಂಬ ಬಯಲು ಲೈಂಗಿಕತೆಯ ಪಳಿಯುಳಿಕೆ

Published

on

  • ಆರಡಿಮಲ್ಲಯ್ಯ ಕಟ್ಟೇರ

ಹೋಳಿ ಆಟವು ಫಲವಂತಿಕೆಯ ಬಯಲು ಲೈಂಗಿಕಕ್ರಿಯೆಯ ರೂಪವೆಂಬುದನ್ನು ಈ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ವಿಲ್ ಡ್ಯೂರಾಂಟ್ ಕೂಡ ಹೋಳಿಯನ್ನು ಮುಕ್ತ ಲೈಂಗಿಕಕ್ರಿಯೆಯೆಂದು ಬರೆಯುತ್ತಾನೆ. ‘ವಾಸಂತಿದೇವಿಯ ಗೌರವಾರ್ಥ ಆಚರಿಸುವ ಹೋಲಿ ಹಚ್ಚುವ ಸ್ವೇಚ್ಚಾರದ ಲಕ್ಷಣವನ್ನು ತಳೆಯುತ್ತಿತ್ತು. ಲಾಂಛನಗಳನ್ನು ಮೆರವಣಿಗೆಗಳಲ್ಲಿ ಗೆದ್ದುಕೊಂಡು ಹೋಗುತ್ತಿದ್ದರು. ಅವುಗಳಿಂದ ಮೈಥುನದ ಚಲನೆಗಳನ್ನು ಅಭಿನಯಿಸಿ ತೋರಿಸುತ್ತಿದ್ದರು.

ಛೋಟಾನಾಗಪುರದಲ್ಲಿ ಸುಗ್ಗಿಯ ಕಾಲವು ಸಾರ್ವತ್ರಿಕ ಸ್ವೇಚ್ಛಾಚಾರಕ್ಕೆ ಸಂಕೇತವಾಗುತ್ತಿತ್ತು. ಪುರುಷರು ಎಲ್ಲಾ ರೀತಿಯ ರಿವಾಜುಗಳನ್ನು ಪಕ್ಕಕ್ಕಿಡುತ್ತಿದ್ದರು. ಮಹಿಳೆಯರು ಎಲ್ಲಾ ಲಜ್ಜೆಯನ್ನು ತೊರೆಯುತ್ತಿದ್ದರು. ತರುಣಿಯರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡಲಾಗುತ್ತಿತ್ತು’ ಎನ್ನುತ್ತಾನೆ.

ಚೀನಾದೇಶದಲ್ಲಿಯೂ ನಾಟಕವು ಧಾರ್ಮಿಕ ಫಲವಂತಿಕೆಯ ಆಚರಣೆಯಾಗಿಯೇ ನಡೆಸಲ್ಪಡುತ್ತಿತ್ತೆಂದು ಡ್ಯೂರಾಂಟ್ ಬರೆಯುತ್ತಾನೆ. ‘ಚೌ’ ರಾಜವಂಶದ ಅವಧಿಯಲ್ಲಿ, ನಾಟಕ ಸ್ವಚಂದತೆ, ಅಶ್ಲೀಲಗಳು ಮುಜುಗರ ಉಂಟು ಮಾಡುತ್ತವೆ ಎಂಬ ಕಾರಣದಿಂದ ನಾಟಕವನ್ನು ನಿಷೇಧಿಸಲಾಯಿತು. ಬುದ್ಧನು ಭಿಕ್ಕುಗಳು ನಾಟಕವನ್ನು ಯಾವುದೇ ಕಾರಣಕ್ಕೆ ನೋಡಬಾರದೆಂದು ಎಚ್ಚರಿಕೆ ವಿಧಿಸಿದ್ದ.

ಬೇಟೆಯೆಂದರೆ ಸಂಭೋಗವೆಂಬ ಅರ್ಥವೂ ಇದೆ; ಬೇಟ ಎಂದರೂ ಪ್ರಣಯವೇ. ಆಹಾರ ಸಂಚಯದ ಬೇಟೆಗೂ ಬೇಟಕ್ಕೂ ಅವಿನಾಭಾವ ಸಂಬಂಧವಿದೆ. ನಿರ್ಧಿಷ್ಟ ಅವಶ್ಯಕ ಸಂದರ್ಭದ ಕ್ರಿಯಾತ್ಮಕ ರೂಪುರೇಷೆಯೇ ಅನುಕರಣೆಯ ಒತ್ತಡವಾಗಿರುತ್ತದೆ. ಮಾನವನ ಜೀವವಿಕಾಸದ ಹಂತಗಳ ಪ್ರತಿಯೊಂದು ನಡೆಯಲ್ಲೂ ಸಂದರ್ಭದ ಸ್ಥಿರ ಅನುಕರಣೆಯನ್ನು ಮೀರಿ ನಡೆಯುವುದು ಬಹುಮುಖ್ಯ ಹಂತವಾಗಿದೆ. ಆದಿ ಮಾನವನ ಬದುಕು ಮತ್ತು ವೈಜ್ಞಾನಿಕ ಅನ್ವೇಷಣೆ ಶುರುವಾಗುವುದು ಬೇಟೆಯಿಂದ.

ಬೇಟೆಯು ಆರಾಧನೆಯಲ್ಲವಾದರೂ, ಅನುಕರಣೆಯ ಅರ್ಧಭಾಗದ ಔಪಚಾರಿಕ ಶಿಕ್ಷಣವೆಂದರೆ ಸರಿಯಾದೀತು. ಇಂಥ ಸಂದರ್ಭದಲ್ಲಿ ಬೇಟೆಗೂ ಬೇಟಕ್ಕೂ ಪ್ರತ್ಯೇಕಿಸಲಾಗದ ತಳಾದಿಯ ಸಂಬಂಧಗಳಿವೆ. ಪ್ರಾಣಿಗಳ ಬೇಟೆಯ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದ ವ್ಯಕ್ತಿಯು ಅನುಕರಿಸಿಯೇ ಬೇಟೆ ಮತ್ತು ಲೈಂಗಿಕ ಶಿಕ್ಷಣವನ್ನು ಪಡೆದದ್ದು. ಮನುಷ್ಯನ ಬೌದ್ಧಿಕ ವಿಕಾಸದ ಹಾದಿಯಲ್ಲಿ ಬೇಟೆಯ ಕ್ರಮ ಸಂಭ್ರಮದ ವಾತಾವರಣವನ್ನು ನಿರ್ಮಿಸಿರಬೇಕು.
ಬೇಟೆಯನ್ನು ನೇರ ಪ್ರಾಣಿಗಳಿಂದ ಕಲಿಯಲಾಗದ ಕೆಲವರಿಗೆ ಅದು ಬೇಟೆಯಾಡುವ ಸಹಜಾಭಿನಯದ ಪ್ರಸ್ತುತಪಡಿಸುವಿಕೆಯಾಗಿರಬಹುದು.

ಇದರಿಂದಾಗಿ ಬೇಟೆಯ ಪ್ರಮಾಣ ಹೆಚ್ಚಿ ಆ ಸಮಾರಾಧನೆಯೇ ಮುಂದೆ ಆಚರಣೆಯ ರೂಪಕ್ಕೆ ತಿರುಗಿ ಬಯಲಾಟ ಆಗಿರಬಹುದಾದ ಸಾಧ್ಯತೆಗಳಿವೆ. ಬೆಂಕಿಯ ಮುಂದೆ ಸೇರಿದ ಗುಂಪು ಆಹಾರ, ಮೈಥುನ, ನಿದ್ದೆಯನ್ನೂ ಸಹಜವೆಂಬಂತೆ ಬೆಂಕಿಯ ಬಯಲಲ್ಲಿಯೇ ಸಾಂಗವಾಗಿ ಸಾಗಿಸಿಕೊಂಡು ಬಂದಿರಲೂ ಸಾಧ್ಯ. ಬಯಲಾಟದ ಸಂದರ್ಭದಲ್ಲಿ ಹಿಡಿಯುವ ದೀವಟಿಗೆಗಳ ಕ್ರಮವೂ ಅದನ್ನೇ ಸಂಕೇತಿಸುತ್ತದೆ. ಇಂದಿಗೂ ನಡೆಯುವ ಕಾಮದಹನ ಹೋಳಿಯಲ್ಲಿ ಬೆಂಕಿಯನ್ನು ಕಾಮಾಗ್ನಿಯಾಗಿ ಪರಿಭಾವಿಸುತ್ತಿರುವುದು ಕಂಡುಬರುತ್ತದೆ.

ಕಾಡುಪ್ರಾಣಿಗಳ ದೇಹಗಳನ್ನು ಸುಟ್ಟು ತಿನ್ನಲು, ಅವುಗಳಿಂದ ರಕ್ಷೆ ಪಡೆಯಲು, ಕತ್ತಲನ್ನು ನೀಗಿಸಿದ ಬೆಳಕಾಗಿ ಮಾತ್ರ ದ್ರಾವಿಡ ಆಚರಣೆಗಳಲ್ಲಿ ಬೆಂಕಿಗೆ ಸ್ಥಾನವಿದೆ. ವಿಶೇಷವೆಂದರೆ ಆಚರಣೆಯ ಸಂದರ್ಭಗಳಲ್ಲಿ ಬೆಂಕಿಯ ಪ್ರಸ್ತುತತೆಯು ನಿಷೇಧಾತ್ಮಕ ಹಾಗೂ ಸಂಘರ್ಷಾತ್ಮಕ ನೆಲೆಗಳಲ್ಲಿಯೇ ನೆಲವಾಸಿ ದ್ರಾವಿಡ ಮತಗಳಲ್ಲಿ ಕಂಡುಬರುತ್ತದೆ. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧ ವರ್ತನಾತ್ಮಕ ಹಾಗೂ ಆಹಾರ, ಮೈಥುನ ಮುಂತಾದ ವೈಲಕ್ಷಣಗಳ ಮೂಲಕ ಈ ಕ್ರಮವನ್ನು ಗುರುತಿಸಲಾಗುತ್ತದೆ.

ಕಾಡುನಾಗರಿಕ ವ್ಯವಸ್ಥೆಯನ್ನು ದಾಟಿ ನಗರನಾಗರಿಕತೆಯ ಹೊಸ್ತಿಲನ್ನು ಮುಟ್ಟಿದ ಮೇಲೂ ಬಹಳ ಕಾಲದವರೆಗೆ ಮನುಷ್ಯ ಭೂತಕಾಲದ ಅನೇಕ ಅಭ್ಯಾಸಗಳನ್ನು ಪೂರ್ಣವಾಗಿ ಬಿಡಲಾರ. ನಾಗರಿಕ ಸಮಾಜದ ಮನುಷ್ಯನ ಗ್ರಹಿಕೆಗಳು ಹಾಗೂ ನಂಬಿಕೆಗಳಲ್ಲಿ ಆದಿಮಕಾಲದ ನಂಬಿಕೆಗಳು ಹಾಗೇ ಅಂಟಿಕೊಂಡಿವೆ.

ಆದುದರಿಂದಲೆ ನಾಗರಿಕತೆಯ ಪ್ರಾರಂಭದ ದೆಸೆಯ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಲು ಕಾಡುನಾಗರಿಕ ಅವಸ್ಥೆಯ ಸನ್ನಿವೇಶಗಳನ್ನು ವಿಶೇಷವಾಗಿ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಒಂದು ಆಚರಣೆಯನ್ನು ಹೊರಗಿನಿಂದ ನೋಡಿ ಅದರ ಆಶಯವನ್ನು ಗ್ರಹಿಸುವುದು ಕಷ್ಟವಾದಾಗ ಒಳಗಿನಿಂದಲೇ ಸೀಳಿನೋಡಬೇಕಾಗುತ್ತದೆ. ಅರ್ಥಾತ್ ಅದರಲ್ಲಿ ಬಳಕೆಯಾಗುವ ವಿವಿಧ ಸಾಧನ ಸಲಕರಣೆಗಳ ಸಾಂಕೇತಿಕತೆ ಮೂಲಕ ಅದರ ಆಶಯ ಗ್ರಹಿಸಬೇಕಾಗುತ್ತದೆ.

ನಾವು ಹೋಳಿಯನ್ನು ಇಂದಿನ ರೂಪದಲ್ಲಿ ನೋಡುವ ಮೊದಲು ಗತದ ಚಾರಿತ್ರಿಕ ಮಹತ್ವವನ್ನು ಗುರುತಿಸಬೇಕಾಗಿದೆ.
ಹೋಳಿ ಆಚರಣೆಯನ್ನು ಕುರಿತು ಎಸ್.ಎಸ್. ಹಿರೇಮಠರು, ಡಿ.ಲಿಂಗಯ್ಯನವರ ಲೇಖನದಲ್ಲಿ ಪ್ರಸ್ತಾಪವಾಗಿರುವುದನ್ನು ಉದ್ಧರಿಸುತ್ತಾರೆ. ‘ವೃಕ್ಷಾರಾಧನೆಯ ಪ್ರಾಚೀನ ಜನಾಂಗವೊಂದು ಕಾಮನಹಬ್ಬದ ಆಚರಣೆಗೆ ಕಾರಣವಾಗಿರುವ ಸಾಧ್ಯತೆಯಿದೆ. ಮಾವಿನಮರ ಅಥವಾ ಬೇವಿನಮರವನ್ನು ಪೂಜಿಸುತ್ತಿದ್ದ ಜನಪದ ಜನಾಂಗದ ಸಾಂಕೇತಿಕ ಆಚರಣೆ ಕಾಮನಹಬ್ಬ ಎಂದು ಊಹಿಸಲು ಅವಕಾಶವಿದೆ.

ಮೂಲದಲ್ಲಿ ಇದು ಶಿಶ್ನಪೂಜೆ, ಫಲವಂತಿಕೆಯ ಆರಾಧನೆ, ಕೃಷಿಕರ ಹಬ್ಬ ಶೂದ್ರ ಉತ್ಸವ. ಬೇವಿನ ಸೊಪ್ಪಿಗೆ ಕಾಮನ ಹೂವ್ವು ಎನ್ನುವ ಹೆಸರಿದೆ. ಎಸ್.ಎಸ್. ಹಿರೇಮಠರು ಹೊಸಪೇಟೆಯ ಕ್ಷೇತ್ರಕಾರ್ಯದ ಮಾಹಿತಿಯೊಂದನ್ನು ಹೇಳುತ್ತಾ ಹೋಳಿಯ ಸಂದರ್ಭದಲ್ಲಿ ಮಾಂಸಹಾರ ಭೋಜನ ಸಾಮೂಹಿಕವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಲೈಂಗಿಕ ಸ್ವಚ್ಛಂದತೆಯಿರುತ್ತದೆ ಎಂದು ಮುದುಕರೊಬ್ಬರು ಹೇಳಿದ್ದನ್ನು ದಾಖಲಿಸಿದ್ದಾರೆ.

ಹೋಳಿ ಪ್ರಾದಿಮಕಾಲದ ಸಮುದಾಯದ ಸ್ಥಿರತೆ ಮತ್ತು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಫಲವಂತಿಕೆಯೇ ಮೂಲ ಉದ್ದೇಶವಾಗಿದ್ದ ಬಯಲು ಆಟವೇ ಆಗಿತ್ತೆನ್ನುವುದನ್ನು ಅನೇಕರು ಪ್ರಸ್ತಾಪಿಸಿದ್ದಾರೆ. ‘ಈ ಪ್ರಾಚೀನ ಆಚರಣೆಗಳು ಬೇರೆಯದೆ ಉದ್ದೇಶಗಳಿಗಾಗಿ ಹುಟ್ಟಿಕೊಂಡವು ಎಂಬುದಂತೂ ನಿಜ. ಇದನ್ನು ಅರ್ಥಮಾಡಿಕೊಳ್ಳದೆ ಹೋಗಿರುವುದು ಈಗ ನಿಜವಾಗಿಯೂ ಸಮಸ್ಯೆಯಾಗಿದೆ.

ಉದಾಹರಣೆಗೆ: ವಸಂತನ ಹೋಳಿಹಬ್ಬವು ಇಂದು ಸಾರ್ವಜನಿಕರು ಮತ್ತು ಕಾನೂನುಗಳೆರಡರ ದೃಷ್ಠಿಯಲ್ಲಿಯೂ ಒಂದು ಅಶ್ಲೀಲ ಕಾಮುಕ ಹಾಗೂ ಅಸಹ್ಯಕರ ಹಬ್ಬ. ಈ ಹಬ್ಬ ಹುಟ್ಟಿಕೊಂಡದ್ದು ಅತ್ಯಂತ ಪ್ರಾಚೀನ ಅನಾಗರಿಕ ಕೃಷಿಪೂರ್ವ ಕಾಲದಲ್ಲಿ. ಆಗ ಆಹಾರದ ಕೊರತೆಯಿತ್ತು, ಅದರ ಪೂರೈಕೆಯೂ ಕೂಡ ಅನಿರ್ದಿಷ್ಟವಾಗಿತ್ತು. ಹೀಗೆ ಆಹಾರದ ಸಂಗ್ರಹಣೆಯೇ ಜೀವನೋಪಾಯವಾಗಿದ್ದ ಕಾಲದಲ್ಲಿ ಸಂತಾನಾಭಿವೃದ್ಧಿಗೆ ತೀವ್ರ ಪ್ರಚೋದನೆಯ ಅವಶ್ಯಕತೆಯಿತ್ತು. ಇಲ್ಲವಾದಲ್ಲಿ ಒಡಲಿನ ಹಸಿವು ಸಂತನೋತ್ಪತ್ತಿಗೆ ಮಾರಕವಾಗಿ ಬಿಡಬಹುದಿತ್ತು. ಹಾಗಾಗಿ ಮೂಲದಲ್ಲಿ ಹೋಳಿ ಒಂದು ಅಶ್ಲೀಲ ಹಬ್ಬವಾಗಿರಲೆ ಇಲ್ಲ’ ಎಂದು ದೇವಿಪ್ರಸಾದ್ ಚಟ್ಟೋಪಧ್ಯಾಯರು ಬರೆಯುತ್ತಾರೆ.

ಹೋಳಿಹಬ್ಬದ ಮೂಲ ಆಶಯವು ಮಾನವರ ಪ್ರಾಣಿಗಳ ಮತ್ತು ಬೆಳೆಗಳ ಫಲವತ್ತತೆಯನ್ನು ಹೆಚ್ಚಿಸುವುದೇ ಆಗಿತ್ತೆಂದು ಅನೇಕ ವಿದ್ವಾಂಸರು ವಿವರಿಸಿದ್ದಾರೆ. ಅದರ ಮೂಲರೂಪದಲ್ಲಿ ಹಾಗೂ ಲೈಂಗಿಕ ಸ್ವಚ್ಛಂದತೆಯೂ ಸೇರಿತ್ತು. ರಾಜಮಹಲ್ ಬೆಟ್ಟಗಳಲ್ಲಿ ಪರ್ಗಣ ಉತ್ಸವದ ವೇಳೆ ಅವಿವಾಹಿತರು ಲೈಂಗಿಕಕ್ರಿಯೆಯಲ್ಲಿ ತೊಡಗುತ್ತಿದ್ದರು. ಒರಿಸ್ಸಾದ ಭೂಮಿಯಾಗಳು ತಮ್ಮ ವಸಂತೋತ್ಸವದ ವೇಳೆ ರಕ್ತಸಂಬಂಧ ಪತಿ-ಪತ್ನಿ ಸಂಬಂಧ ಎಂಬುದಕ್ಕೆಲ್ಲಾ ಬೆಲೆ ಕೊಡುವುದಿಲ್ಲ. ನೀಲಗಿರಿ ಬೆಟ್ಟದ ಕೊತರಲ್ಲೂ ಇದೇ ಪದ್ಧತಿಯಿದೆ.

ಅಸ್ಸಾಮಿನ ಬುಡಕಟ್ಟುಗಳು ಬೊಂಬೆಗಳು ಮಣಿಪುರದ ಬುಡಕಟ್ಟುಗಳು ಇತ್ಯಾದಿಗಳು ಸಹ ಇದಕ್ಕೆ ಹೊರತಲ್ಲ. ಮೇಲೆ ಹೇಳಲಾದ ವಿದ್ವಾಂಸರ ಮಾತುಗಳನ್ನು ಒಪ್ಪಿಕೊಂಡು ಮುಂದುವರಿದರೆ ಬಯಲಾಟವು ಫಲವಂತಿಕೆಯ ಲೋಕವಾದಿ ಆಚರಣೆಯಾಗಿತ್ತೆಂದು; ಅದೇ ಆಚರಣೆ ಬಯಲಾಟವಾಯ್ತೆಂದು ತಿಳಿಯಲು ಸುಲಭವಾಗುತ್ತದೆ.
ಪ್ರಾಚೀನ ಇಂಡಿಯಾದ ಉತ್ಪಾದನಾ ವಿಧಿ ಆಚರಣೆಗಳ ಯಾವುದೋ ರೀತಿಯಲ್ಲಿ ಸಮಾಜಗಳ ಸೃಷ್ಟಿ ಹಾಗೂ ಪುನರುತ್ಪಾಧನೆಯನ್ನು ನಡೆಸುತ್ತವೆಂಬ ಸಹಜಜ್ಞಾನವು ಪ್ರಾಚೀನರು ಹಾಗೂ ಆಧುನಿಕರಿಬ್ಬರಿಗೂ ಇದೆಯೆಂದಾದಲ್ಲಿ ಈ ಸಹಜಜ್ಞಾನವನ್ನು ವಿವರಿಸುವುದು ನಮ್ಮ ಸಮಸ್ಯೆಯಾಗಿದೆ.

ಪ್ರಾರಂಭಕ್ಕೆ ಅತಿಮಾನವನ ಅಥವಾ ನಿಸರ್ಗದಾಚೆಗಿನ ಒಂದು ಶಕ್ತಿ ಎಂಬುದರ ಕಲ್ಪನೆ ಇಲ್ಲ. ಏಕೆಂದರೆ ಈ ಆದಿ ಬುಡಕಟ್ಟಿನ ಜನರಿಗೆ ಒಂದು ಮತವಿದೆ. ಆದರೆ ಅವರಿಗೆ ದೈವವೆಂಬುದರ ಕಲ್ಪನೆ ಇಲ್ಲ…. ಹಾಗೆ ಮತಧರ್ಮಕ್ಕೆ ದೈವದ ಕಲ್ಪನೆ ಇರಲೇಬೇಕೆಂದು ಭಾವಿಸುವುದಾದರೆ ಬೌದ್ಧಮತವು ಕೂಡ ಒಂದು ಧರ್ಮವಾಗಿ ಪರಿಗಣಿತವಾಗುವಂತಿಲ್ಲ. ಏಕೆಂದರೆ ಅಲ್ಲಿ ದೈವಕ್ಕೆ ಸ್ಥಾನವಿಲ್ಲ. ಅತಿ ಪ್ರಾಚೀನವಾದ ಮಾನವನ ಸಮುದಾಯಗಳಲ್ಲಿ ಮತಧರ್ಮವೆಂಬುದು ಇರಲು ಸಾಧ್ಯವಿರಲಿಲ್ಲವೆಂದು ಜಾನ್‌ಲುಬಾಕ್‌ನ ಅಭಿಪ್ರಾಯವಾಗಿದೆ.

ಹದಿನಾಲ್ಕನೆಯ ಶತಮಾನದ ನಂತರ ಭಕ್ತಿಪಂಥದ ಪ್ರಭಾವದಿಂದ ಭಾರತೀಯ ಬಹುಮುಖ್ಯ ಆಚರಣೆಗಳೆಲ್ಲವೂ ಲೌಕಿಕವನ್ನು ನಿರ್ಲಕ್ಷಿಸುವ ಪ್ರಯತ್ನ ಮಾಡಿದವು. ಭವವನ್ನು ನೀಗಿಸಿಕೊಳ್ಳುವ ಮೂಲಕ ಮೋಕ್ಷಕ್ಕೆ ಸಾಧನವೆಂಬಂತೆ ಭಕ್ತಿಯು ಮೂಲಸ್ಥಾಯಿಯಾಯಿತು. ಆಶಯವು ಏನೇ ಇದ್ದರೂ ಪರಿಣಾಮ ನೆಲಮೂಲ ಲೋಕವಾದಕ್ಕೆ ದೊಡ್ಡ ಪೆಟ್ಟು ನೀಡಿತು. ಒಳಿತೆಲ್ಲವೂ ದೈವಾನುಗ್ರಹವೆಂಬ ಮನೋಭಾವ ಪ್ರಬಲವಾದಂತೆ ನಾಟಕದ ಮೂಲವನ್ನೂ ದೈವತ್ವದ ಕೇಂದ್ರಕ್ಕೆ ಒಯ್ಯಲು ಸುಲಭವಾಯಿತು.

ನಂತರದ ದಿನಮಾನಗಳಲ್ಲಿ ನಾಟಕವನ್ನು ಅಧ್ಯಯನ ಮಾಡಿದವರೂ ಸಂಪ್ರದಾಯವಾದಿಗಳಾಗಿರದಿದ್ದರೂ ದೈವತ್ವವನ್ನು ನಿರಾಕರಿಸದವರಾದ ಕಾರಣ ದೈವಮೂಲ ಪ್ರಬಲವಾಗಿ ಸಂಶೋಧನೆಯಲ್ಲೂ ಮಹತ್ತರ ಸ್ಥಾನಪಡೆಯಿತು. ‘ಜನತಾ ರಂಗಭೂಮಿಯ ಹುಟ್ಟು ದೇವಪೂಜೆಯ ಮೂಲ ಮನೋಭಾವದಲ್ಲಿಯೇ ಅಡಗಿದೆ. ಕನ್ನಡನಾಡಿನ ಜಾನಪದ ರಂಗಭೂಮಿಯಾದರೂ ಈ ಮಾತಿಗೆ ಹೊರತಾದುದಲ್ಲ. ಆಹಾರ, ನಿದ್ರಾ, ಭಯ, ಮೈಥುನಗಳ ಕಾರಣದಿಂದಾಗಿ ದೇವರನ್ನೂ ದೆವ್ವಗಳನ್ನೂ ಆರಾಧಿಸುವ ಸಾಮಾನ್ಯ ಸಂಪ್ರದಾಯಗಳ ಆಚರಣೆಯಲ್ಲಿ ಹಳ್ಳಿಯ ನಾಟಕದ ಹುಟ್ಟನ್ನು ಕಾಣಬಹುದಾಗಿದೆ.

ಮಳೆ, ಗುಡುಗು, ಮಹಾಪೂರ, ಕ್ಷಾಮ, ರೋಗ, ಮರಣ ಈ ಎಲ್ಲವೂ ನೈಸರ್ಗಿಕ ಶಕ್ತಿಗಳ ಕೈವಾಡದ ಕಾರಣವೆಂದು ನೆರೆನಂಬಿದ್ದ ಪ್ರಾಚೀನ ಕನ್ನಡಿಗರು, ಆ ಶಕ್ತಿಗಳನ್ನು ಒಲಿಸಿಕೊಳ್ಳುವ ಸಲುವಾಗಿ ಮಾಡುತ್ತಿದ್ದ ಉಪಾಸನೆಗಳಲ್ಲಿ ಅಂತಹ ಶಕ್ತಿಗಳ ಅನುಕರಣವೂ ಅಡಗಿ ನಾಟಕ ಹುಟ್ಟಿತು’ ಎಂದು ಭಾವಿಸಿ ಪ್ರಾಚೀನಕಾಲದಲ್ಲಿ ನಡೆಯುತ್ತಿದ್ದ ಲೋಕಕ್ರಿಯೆಗಳನ್ನು ಸಾಂಕೇತಿಕಾರ್ಥದಲ್ಲಿ ಆಚರಿಸುವ ವಿಧಿಯಾಚರಣೆಗಳನ್ನು ಅಧ್ಯಯನಕಾರರು ದೈವಪೂಜೆ ವಿಧಿವಿಧಾನಗಳೆಂದು ಅರ್ಥೈಸಿಕೊಂಡಿದ್ದಾರೆ.

ದೈವಾರಾಧನೆಯೇ ಬಯಲಾಟದ ಮೂಲ ಎಂದು ಸಾಕ್ಷ್ಯ ಒದಗಿಸುವ ಸಂಶೋಧಕರು ಗ್ರೀಕ್‌ದೇಶದಲ್ಲೂ ದೈವಾರಾಧನೆಯಿಂದಲೇ ಬಯಲಾಟವು ಆರಂಭವಾಯಿತೆಂದು ಡಯೋನಿಸಿಯಸ್ ದೇವತೆಯ ಆಚರಣೆಯನ್ನು ಸಾಕ್ಷ್ಯವಾಗಿ ನೀಡುತ್ತಾರೆ. ಗ್ರೀಕ್ ರಂಗಭೂಮಿಯ ಮೂಲ ಡಯೋನಿಸಿಯಸ್ ಎಂಬ ಫಲಕೊಡುವ ದೇವರ ಪ್ರೀತ್ಯರ್ಥವಾಗಿ ನಡೆಯುತ್ತಿದ್ದ ಧಾರ್ಮಿಕ ಆಚರಣೆ. ಕ್ರಿ.ಪೂ. 13ನೆಯ ಶತಮಾನದಲ್ಲೇ ಪ್ರಚಲಿತವಾಗಿದ್ದ ಈ ಆಚರಣೆಯಲ್ಲಿ, ಮೆರವಣಿಗೆಯಲ್ಲಿ ಹೋತ ಬಲಿಕೊಡುವ ಸಂಪ್ರದಾಯವೂ ಮತ್ತು ಡಿಥಿರ್ಯಾಂಬ್ ಎಂಬ ಹೆಸರಿನ ಮೇಳ ಭಜನೆಯೂ ಇರುತ್ತಿತ್ತು. ಮೊದಲು ಈ ಆಚರಣೆ ಬಹುಶಃ ಒಂದು ಉನ್ಮತ್ತ ಕ್ರಿಯಾವಿಧಿಯಾಗಿತ್ತು; ನರಬಲಿಯೂ ಕೂಡಾ ಈ ಆಚರಣೆಯ ಅಂಗವಾಗಿತ್ತು.

ಆದರೆ, ಆಮೇಲೆ ಗ್ರೀಕ್ ನಾಗರಿಕತೆ ವಿಕಾಸಗೊಂಡಂತೆ ಈ ಆಚರಣೆಯೂ ನಾಗರಿಕವಾಗತೊಡಗಿತು. ಕ್ರಿ.ಪೂ. ಏಳನೆಯ ಶತಮಾನದ ಹೊತ್ತಿಗೆ ಗ್ರೀಕ್ ವೀರರ ಕಥೆಗಳು ಈ ಭಜನೆಯ ಪಠ್ಯವಾಗಿ ಸೇರಿಕೊಂಡವು. ಹೀಗೆ ಮಾರ್ಪಾಟುಗೊಂಡ ಈ ಆಚರಣೆಯೇ ಗ್ರೀಕ್ ಬುಡಕಟ್ಟುಗಳನ್ನು ಒಂದುಗೂಡಿಸುವ ಸಾಧನವೂ ಆಗಿದ್ದರಿಂದ ಇದಕ್ಕೆ ಕ್ರಿ.ಪೂ ಆರನೆಯ ಶತಮಾನದಲ್ಲಿ ರಾಜ್ಯದ ಮಾನ್ಯತೆಯೂ ದೊರಕಿತು. ಡಯೋನಿಸಿಯಸ್ ದೇವತಾಚರಣೆಯೂ ಬಯಲು ಲೈಂಗಿಕಕ್ರಿಯೆ ಆಗಿತ್ತೆಂಬುದನ್ನು ಮುಂದೆ ಆಧಾರ ಸಮೇತ ವಿವರಿಸಲಾಗುತ್ತದೆ.

ಪ್ರಾಚೀನ ಕಾಲದ ಕ್ರಿ.ಪೂ. ಶತಮಾನಗಳಲ್ಲಿ ‘ಅಥೆನ್ಸಿನಲ್ಲಿ ಸಮೃದ್ಧಿ ಇತ್ತು. ಆಲೀವ್ ಎಣ್ಣೆಯ ರಫ್ತು ವ್ಯವಹಾರ ಚೆನ್ನಾಗಿ ನಡೆಯುತ್ತಿತ್ತು. ಆ ಕಾರಣದಿಂದಲೇ ಮಣ್ಣಿನ ಜಾಡಿಗಳನ್ನು ಮಾಡುವ ಉಧ್ಯಮ ಬೆಳೆಯಿತು. ಮಣ್ಣಿನ ಹೂಜಿಯ ಮೇಲೆ ಕೆಂಪುಬಣ್ಣದ ಚಿತ್ರಗಳನ್ನು ಬಿಡಿಸುವ ಕಲೆ ಕ್ರಿ.ಪೂ. ೫೩೫ರ ಸುಮಾರಿಗೆ ಸಿದ್ದಿಸಿತು. ಇಡೀ ಜಾಡಿಯನ್ನು ಕಪ್ಪಾಗಿಸಿ ಅದರ ಮೇಲೆ ಸಹಜ ಕೆಂಪುಬಣ್ಣದಲ್ಲಿ ವಾಸ್ತವವೆಂಬಂತೆ ಕಾಣುವ ಚಿತ್ರಗಳನ್ನು ಮೂಡಿಸುತ್ತಿದ್ದರು.

ಎಣ್ಣೆಯ ವ್ಯಾಪಾರ ಒಳನಾಡಿನಲ್ಲೂ ನಡೆಯುತ್ತಾ ಜನಸಾಮಾನ್ಯರ ಆಚರಣೆ, ಸಮೂಹಗಾನ, ಅಣಕುನೃತ್ಯ, ಮದ್ಯ ದೇವತೆಯಾದ ಡಯೊನೀಸಿಯಸ್‌ನ ಆರಾಧನೆ, ಇವು ವ್ಯಾಪಕವಾಗಿ ನಗರಕ್ಕೂ ತಲುಪಿ ಈ ಆಚರಣೆಗಳೇ ರಂಗಭೂಮಿಯ ತಳಹದಿಗಳಾದವು. ಆಚರಣೆಯ ಸಮಯದಲ್ಲಿ ಹೋತದ ಬಲಿ ಕೊಡುತ್ತಿದ್ದರು. ಹಾಗಾಗಿ ಆ ಆಚರಣೆ ಟ್ರಾಗ್ ಓಡಿಯಾ ಅಥವಾ ಹೋತಗೀತೆ ಎಂಬ ಹೆಸರಿತ್ತು. ಅಂದರೆ ಬಲಿ ಮತ್ತು ಟ್ರಾಜಿಡಿಗಳ ನಡುವೆ ನೇರ ಸಂಬಂಧವಿದೆ. ಈ ಆದಿಮ ಬಲಿ ಆಚರಣೆಯೇ ಅತ್ಯಂತ ಶಕ್ತ ರಂಗಭೂಮಿ ಪ್ರತಿಮೆಯಾಗಿದೆ.

ಗ್ರೀಕ್‌ಮೂಲದಿಂದ ನಾಟಕಗಳ ಉಗಮವನ್ನು ಅನ್ವಯಿಕವಾಗಿ ಗುರುತಿಸುವುದೂ ಕನ್ನಡ ಸಂಶೋಧನೆಯ ಬಹುಮುಖ್ಯ ಲಕ್ಷಣಗಳಲ್ಲಿ ಒಂದು. ಪಾಶ್ಚಾತ್ಯ ಮಾದರಿಗಳ ಮೂಲಮಾನದಿಂದ ಕನ್ನಡದ ಅಸ್ಮಿತೆಗಳ ಆಂತರ್ಯವನ್ನು ಅರಿಯುವುದು ನಷ್ಟವಲ್ಲದಿದ್ದರೂ ನೆಲಮೂಲದ ಸತುವನ್ನು ಕಡೆಗಣಿಸದಿದ್ದರೆ ಆಯಿತು. ಎಲ್ಲವೂ ಗ್ರೀಕ್‌ನಿಂದಲೇ ಬಂದುವು ಎಂಬ ಪೂರ್ವ ತೀರ್ಮಾನವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಂಶೋಧನೆ ತೊಡಗುವುದು ಮಾತ್ರ ಅಪಾಯ. ಗ್ರೀಕ್ ಮೂಲದಿಂದ ಬಯಲಾಟದ ಸ್ವರೂಪ ಇತಿಹಾಸವನ್ನು ಹುಡುಕುವ ಸಂಶೋಧಕರು ಡಯೋನಿಸಸ್ ದೇವತೆಯ ಆಚರಣೆಯನ್ನು ಉದಾಹರಣೆ ನೀಡಿ ಇದರಿಂದ ಪ್ರಭಾವಿತಗೊಂಡ ಆಚರಣೆಗಳು ಕರ್ನಾಟಕದಲ್ಲೂ ಇದ್ದವು ಎಂದು ಬರೆಯುತ್ತಾರೆ.

‘ಡಯೋನಿಸಸ್‌ನ ಉತ್ಸವದಲ್ಲಿ ಲಿಂಗಪೂಜೆಯಿತ್ತು. ನೃತ್ಯಾದಿಗಳಿದ್ದವು. ಇವುಗಳ ವರ್ಣನೆಯನ್ನು ಓದಿದರೆ ಕಾಮದಹನದ ಉತ್ಸವ, ಮೆರವಣಿಗೆ, ವೇಷಭೂಷಣ, ಓಕುಳಿ, ಕುಣಿತ, ಸಂಭ್ರಮ, ಸ್ವಚ್ಛಂಧ ಮುಂತಾದವುಗಳ ಜ್ಞಾಪಕ ಬರುತ್ತದೆ. ಶಿವನು ಪ್ರಾಚೀನ ದೇವತೆ. ಲಿಂಗಪೂಜೆ ೫೦೦೦ ವರ್ಷಗಳ ಕೆಳಗೆ ಸಿಂಧೂ ಪ್ರಾಂತ್ಯದಲ್ಲಿತ್ತು. ಡಯೋನಿಸ್‌ಸನು ಗ್ರೀಸಿಗೆ ಪೂರ್ವದೇಶದಿಂದ ಬಂದ ದೇವತೆಯೆಂದು ಪಾಶ್ಚಾತ್ಯ ವಿದ್ವಾಂಸರೇ ಹೇಳುತ್ತಾರೆ’. ಸಂಸ್ಕೃತ ನಾಟಕಕಾರರು ಗುರುತಿಸುವಂತೆ ಡಯೋನಿಸಸ್ ದೇವತೆ ಪುರುಷದೇವತೆಯಾಗಿರದೆ ಸ್ತ್ರೀದೇವತೆಯಾಗಿದ್ದು ಮುಕ್ತ ಲೈಂಗಿಕತೆಯೇ ಅದರ ಮಾಂತ್ರಿಕ ಆಚರಣೆಯೂ ಆಗಿತ್ತು. ಮಾಂತ್ರಿಕ ಆಚರಣೆಗಳು ನೇರವಾಗಿ ಮಾತೃದೇವತೆಗಳಿಗೆ ಸಂಬಂಧಿಸುತ್ತವೆ.

‘ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅದರ ಆಳ ತಿಳಿದುಕೊಳ್ಳಬೇಕೆಂದರೆ ದೃಷ್ಟಿಯನ್ನು ಹಿಂದಕ್ಕೋಡಿಸಬೇಕು. ಪಕ್ಷಪಾತವೆಂಬುದಿರಕೂಡದು. ಅಭಿಮಾನ ಎಂಬ ಮಾತನ್ನೇ ಕೈಬಿಡಬೇಕು. ಸತ್ಯವನ್ನು ಗ್ರಹಿಸಬೇಕೆಂಬ ಬುದ್ಧಿಮಾತ್ರ ಪ್ರಧಾನವಾಗಿರಬೇಕು. ಆ ಸತ್ಯ ಅವಮಾನಕರವಾಗಿದ್ದರೂ ಸರಿ, ಅಸಹ್ಯವಾಗಿ ಕಂಡರೂ ಸರಿ. ಇಷ್ಟಕ್ಕೂ ಇಂದು ನಮಗೆ ಅಸಹ್ಯ ಎನಿಸುವ ವಸ್ತುವನ್ನು ಅಂದು ಎಲ್ಲರೂ ಆಧರಿಸಿರಬಹುದಲ್ಲವೆ? ಇಂದು ನಮಗೆ ಅವಮಾನಕರವಾಗಿ ಕಂಡ ಸಂಗತಿ ಆ ದಿನಗಳಲ್ಲಿ ದೊಡ್ಡ ಗೌರವದ ವಿಷಯವಾಗಿರಬಹುದು.

ಆದ್ದರಿಂದ ಸತ್ಯವನ್ನೊಪ್ಪಿಕೊಂಡರೆ ಯಾವ ಪ್ರಮಾದವೂ ಇಲ್ಲ’ ಎಂಬ ತಾಪಿ ಧರ್ಮರಾವ್ ಅವರ ಮಾತು ಇಲ್ಲಿ ನೆನೆಸಿಕೊಳ್ಳುವಂಥಾಹದ್ದು. ಹೋಲಿಯನ್ನು ಕುರಿತೂ ಈ ಮಾತು ಅತ್ಯಂತ ಪ್ರಸ್ತುತ. ಬೇರೆ ದೇಶಗಳಲ್ಲಿ ಆಚರಿಸುವ ಹಬ್ಬಗಳನ್ನು ನೀಡಲಾಗಿದೆ. ಅವು ಭಾರತದಲ್ಲಿ ಹೋಳಿ ಎಂದು ಕರೆಯಲ್ಪಡುವ ಆಚರಣೆಯ ಪರ್ಯಾಯ ಹೆಸರುಗಳು.

(ಬಯಲಾಟವೆಂದರೆ ಮುಕ್ತ ಲೈಂಗಿಕಕ್ರಿಯೆಯೆಂಬುದರ ಪರಿಕಲ್ಪನಾತ್ಮಕ ಸಂಶೋಧನೆಯ ಪುಸ್ತಕವೊಂದನ್ನು ಕಳೆದ ಎರಡುವರ್ಷಗಳ ಹಿಂದೆ ಬರೆದು ಮುಗಿಸಿದ್ದೆ. ಅದು ಮತ್ತಷ್ಟು ಪರಿಷ್ಕರಣೆಗೊಂದು ಸೈಂಧವ_ಸಂಕಥನ ಎಂಬ ಹೆಸರಿನಲ್ಲಿ ಪ್ರಕಟವಾಗಲಿದೆ. ಕೆಲವೇ ದಿನಗಳಲ್ಲಿ ಪಲ್ಲವ ಪ್ರಕಾಶನ ಪ್ರಕಟಿಸಲಿದೆ. ಸಂಶೋಧನಾಕೃತಿಯಲ್ಲಿ ಪ್ರಸ್ತುತ ಲೇಖನವು ಇದೆ. ಕೃತಿಯಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಒಂದು ಸಣ್ಣ ಟಿಪ್ಪಣಿ ನಿಮ್ಮ ಓದಿಗೆ.) – ಆರಡಿಮಲ್ಲಯ್ಯ ಕಟ್ಟೇರ.

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

Trending