Connect with us

ದಿನದ ಸುದ್ದಿ

ದುಡಿಯುವ ಮಹಿಳೆಯರ ಹೋರಾಟಕ್ಕೆ ಶಕ್ತಿ ತುಂಬಿದ್ದ ಕಾಂII ಹೆಚ್‌ಕೆಆರ್

Published

on

  • ಕೆ.ರಾಘವೇಂದ್ರ ನಾಯರಿ,ಕಾರ್ಮಿಕ ಮುಖಂಡ,& ಪ್ರದಾನ ಕಾರ್ಯದರ್ಶಿ,ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ,ದಾವಣಗೆರೆ

ನಾಡು ಕಂಡ ಅದ್ಭುತ ಕಾರ್ಮಿಕ ನಾಯಕ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ ಅವರು ದಿನಾಂಕ 08-05-2021 ರಂದು ನಿಧನರಾಗಿದ್ದಾರೆ. ಕಳೆದ 17 ವರ್ಷಗಳಿಂದ ಅವರ ಆಪ್ತ ಒಡನಾಡಿಯಾಗಿದ್ದ ಕೆನರಾ ಬ್ಯಾಂಕ್ ಉದ್ಯೋಗಿ ಕಾಂII ಕೆ.ರಾಘವೇಂದ್ರ ನಾಯರಿ ಅವರು ಕಾಂIIಹೆಚ್‌ಕೆಆರ್ ಕುರಿತಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.


  • ದುಡಿಯುವ ವರ್ಗದ ಧೀಮಂತ ನಾಯಕ ಕಾಂII ಹೆಚ್‌ಕೆಆರ್ – ಅಸ್ತಂಗತ
  • ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ಕ್ರಾಂತಿಕಾರಿ ನಾಯಕ – ಕಾಂII ಹೆಚ್‌ಕೆಆರ್
  • ಆರು ದಶಕಗಳ ದಣಿವರಿಯದ ಜೀವ ಚಿರ ವಿಶ್ರಾಂತಿಗೆ

ದಾವಣಗೆರೆ ಎಂದರೆ ಕಾರ್ಮಿಕರ ಹೋರಾಟಕ್ಕೆ ಹೆಸರುವಾಸಿಯಾದ ನೆಲ. ಈ ಮಣ್ಣಿನ ಗುಣವೇ ಸಂಘಟನೆ, ಹೋರಾಟ, ಚಳುವಳಿಗಳಿಗೆ ಪ್ರೇರಣೆ ನೀಡುತ್ತದೆ ಅಂತನಿಸುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಕಾರ್ಮಿಕರ ಹೋರಾಟ ಎಂದೊಡನೆ ತಟ್ಟಂತೆ ನೆನಪಾಗುವುದೇ ದಾವಣಗೆರೆ‌. ಕಾರ್ಮಿಕ ಸಂಘಟನೆ ಮಾತ್ರವಲ್ಲದೇ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಉಚ್ಛ್ರಾಯ ಸ್ಥಿತಿಗೆ ತಂದಂತಹ ಊರು ಕೂಡಾ ದಾವಣಗೆರೆ.

ಇಂತಹ ಕ್ರಾಂತಿಕಾರಿ ಗುಣಗಳನ್ನು ಹೊಂದಿದ್ದಂತಹ ದಾವಣಗೆರೆಯಲ್ಲಿ ದಿವಂಗತ ಕಾಮ್ರೇಡ್ ಪಂಪಾಪತಿಯವರ ಗರಡಿಯಲ್ಲಿ ಬೆಳೆದು ದುಡಿಯುವ ವರ್ಗದ ಧೀಮಂತ ನಾಯಕನಾಗಿ ಬೆಳೆದು ಕಾರ್ಮಿಕರ ಕಷ್ಟ ಸುಖಗಳನ್ನೇ ತನ್ನ ಉಸಿರಾಗಿಸಿಕೊಂಡು ಬೆಳೆದ ಕಾರ್ಮಿಕ ನಾಯಕನೇ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ.

ಭಾರತೀಯ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕನಾಗಿ, ಅಸಂಘಟಿತ ವರ್ಗದ ದುಡಿಯುವ ಜನರ ಹೋರಾಟಗಳಿಗೆ ದೊಡ್ಡ ಶಕ್ತಿಯಾಗಿ ಹಾಗೂ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮಾರ್ಗದರ್ಶಕರಾಗಿದ್ದ ಕಾಂII ಹೆಚ್.ಕೆ.ರಾಮಚಂದ್ರಪ್ಪ ಅವರು 08-05-2021 ರಂದು ನಿಧನರಾದರು.

ಅವರ ನಿಧನ ಕಾರ್ಮಿಕ ವಲಯಕ್ಕೆ ಅದರಲ್ಲೂ ಬಹುಮುಖ್ಯವಾಗಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಬಹುದೊಡ್ಡ ಆಘಾತವನ್ನು ತಂದೊಡ್ಡಿದೆ. ಹೆಚ್.ಕೆ.ರಾಮಚಂದ್ರಪ್ಪ ಅವರು ವಿಶೇಷವಾಗಿ ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತರ ಸಂಘಟನೆ ಹಾಗೂ ಇನ್ನೂ ಹಲವಾರು ಕಾರ್ಮಿಕ ಸಂಘಟನೆಗಳಿಗೆ ಧ್ವನಿಯಾಗಿ ತಮ್ಮ ಜೀವನವನ್ನೇ ಕಾರ್ಮಿಕರ ಪರವಾದ ಹೋರಾಟಗಳಿಗೆ ಸಮರ್ಪಿಸಿಕೊಂಡಿದ್ದರು.

ತಮ್ಮ ಮುಂದಿನ ಹೋರಾಟಗಳಿಗೆ ಮುಂದೆ ನಾಯಕ ಯಾರು ಎನ್ನುವ ಪ್ರಶ್ನೆ ದುಡಿಯುವ ವರ್ಗದ ಮುಂದಿದೆ ಎಂದರೂ ತಪ್ಪಾಗಲಾರದು. ಬಹುಷಃ ಅವರ ಆರು ದಶಕಗಳ ದಣಿವರಿಯದ ಹೋರಾಟದ ಜೀವನದಲ್ಲಿ ಸದಾ ಕಾಲ ಒಡನಾಡಿಯಾಗಿದ್ದ ಕಾಂII ಆನಂದ್ ರಾಜ್ ಅವರ ಮಾರ್ಗದರ್ಶನದಲ್ಲಿ ಕಾಂII ಅವರಗೆರೆ ಉಮೇಶ್ ಹೆಚ್.ಜಿ. ಹಾಗೂ ಕಾಂII ಅವರಗೆರೆ ಚಂದ್ರು ಹಾಗೂ ಮತ್ತಿತರರು ಹೆಚ್‌ಕೆಆರ್ ಅವರು ನಡೆಸಿಕೊಂಡು ಬಂದ ಹೋರಾಟದ ಕ್ರಾಂತಿಕಾರಿ ರಥವನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡುವ ಮೂಲಕ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸಬೇಕಾಗಿದೆ.

ಸೈದ್ಧಾಂತಿಕವಾಗಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಹೆಚ್‌ಕೆಆರ್ ಅವರು ವಿಶಾಲ ದೃಷ್ಟಿ ಕೋನವನ್ನು ಹೊಂದಿದ್ದ ನಾಯಕರಾಗಿದ್ದರು. ದುಡಿಯುವ ವರ್ಗದ ಅದರಲ್ಲೂ ಪ್ರಮುಖವಾಗಿ ಅಂಗನವಾಡಿ, ಬಿಸಿಯೂಟ, ಆಶಾ, ಕಟ್ಟಡ ಕಾರ್ಮಿಕರು, ಕೈಗಾರಿಕಾ ವಲಯದ ಕಾರ್ಮಿಕರು, ಆಟೋ ಚಾಲಕರು, ಸಾ ಮಿಲ್ ಕಾರ್ಮಿಕರು, ಪುಟ್‌ಪಾತ್ ವ್ಯಾಪಾರಸ್ಥರು, ಹೋಟೆಲ್ ಕಾರ್ಮಿಕರು, ಮನೆಗೆಲಸದವರು ಹೀಗೆ ಹತ್ತು ಹಲವು ಕಾರ್ಮಿಕ ಸಂಘಟನೆಗಳಿಗೆ ಇವರೇ ಉಸಿರಾಗಿದ್ದರು, ಶಕ್ತಿಯಾಗಿದ್ದರು.

ಸಂಘಟಿತ ವಲಯದ ಬ್ಯಾಂಕ್ ನೌಕರರು, ವಿಮಾ ನೌಕರರು, ರೈಲ್ವೇ ನೌಕರರು, ದೂರಸಂಪರ್ಕ ನಿಗಮದ ನೌಕರರು, ಅಂಚೆ ನೌಕರರು ಮುಂತಾದವರ ಸಂಘಟನೆಗಳಿಗೆ ಮಾರ್ಗದರ್ಶಕರಾಗಿದ್ದರು ಮತ್ತು ಅವರ ಯಾವತ್ತೂ ಹೋರಾಟಗಳಿಗೆ ಸದಾ ಪ್ರೋತ್ಸಾಹ ನೀಡಿ ನೆರವಾಗುತ್ತಿದ್ದರು. ಅಲ್ಲಿನ ಯುವ ನಾಯಕರುಗಳನ್ನು ಸೈದ್ಧಾಂತಿಕವಾಗಿ ಬೆಳೆಸಲು ಮತ್ತು ಎಡಪಂಥೀಯ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ಪ್ರಬಲ ಹೋರಾಟಗಾರರನ್ನಾಗಿ ರೂಪಿಸಲು ವಿಶೇಷ ಮುತುವರ್ಜಿವಹಿಸುತ್ತಿದ್ದರು.

1943 ರ ಪೆಬ್ರವರಿ 2 ರಂದು ಹರಪನಹಳ್ಳಿ ತಾಲೂಕಿನ ಉಚ್ಛಂಗಿದುರ್ಗದಲ್ಲಿ ಕೆಂಪಣ್ಣ ಮತ್ತು ಕೆಂಪಮ್ಮ ದಂಪತಿಗಳ ಮಗನಾಗಿ ಜನಿಸಿದ ಹೆಚ್‌ಕೆಆರ್ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಉತ್ತಮ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. 1960 ರಲ್ಲಿ ದಾವಣಗೆರೆಯ ಚಂದ್ರೋದಯ ಮಿಲ್‌ನಲ್ಲಿ ಕೆಲಸಕ್ಕೆ ಸೇರಿದರು.

ಆ ಸಂದರ್ಭದಲ್ಲಿ ಅಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯವನ್ನು ಪ್ರತಿಭಟಿಸಿದರು. ಇವರ ಹೋರಾಟದ ಮನೋಭಾವನೆಯನ್ನು ಸೂಕ್ಷ್ಮವಾಗಿ ಗಮನಿಸಿದ ಕಾಂII ಪಂಪಾಪತಿ, ಕಾಂII ಸುರೇಶ್, ಕಾಂIIಶೇಖರಪ್ಪ ಇವರನ್ನು ಕಮ್ಯುನಿಸ್ಟ್ ತೆಕ್ಕೆಗೆ ಸೇರಿಸಿಕೊಂಡರು. ಅಲ್ಲಿಂದ ಅವರ ಹೋರಾಟದ ಜೀವನ ಆರಂಭವಾಯಿತು.

ಎಲ್ಲಿ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತೋ ಅಲ್ಲಿ ಹೆಚ್‌ಕೆಆರ್ ಹಾಜರಿರುತ್ತಿದ್ದರು. ವೈಯಕ್ತಿಕ ಬದುಕಿನ ಹಿತಾಸಕ್ತಿಗಳನ್ನು ಕಡೆಗಣಿಸಿ ಕಾರ್ಮಿಕರ ಹಕ್ಕುಗಳಿಗಾಗಿ, ಕಾರ್ಮಿಕರ ನ್ಯಾಯಬದ್ಧವಾದ ಬೇಡಿಕೆಗಳ ಈಡೇರಿಕೆಗಾಗಿ ಕಟಿಬದ್ಧರಾಗಿ ನಿಂತರು‌. ಚಳುವಳಿ, ಹೋರಾಟ ಇವರ ಜೀವನದ ಅವಿಭಾಜ್ಯ ಅಂಗವಾಯಿತು‌. ಎ.ಐ.ಟಿ.ಯು.ಸಿ. ಸಂಘಟನೆಯ ಕೆಂಪು ಬಾವುಟದ ಆಶ್ರಯದಲ್ಲಿ ಅಸಂಘಟಿತ ಕಾರ್ಮಿಕರ, ದುಡಿಯುವ ಮಹಿಳೆಯರ, ರೈತ ಕಾರ್ಮಿಕರ, ವಿದ್ಯಾರ್ಥಿಗಳ, ದುರ್ಬಲವರ್ಗದವರ, ಕೊಳಚೆ ಪ್ರದೇಶಗಳ ನಿವಾಸಿಗಳ ಪರವಾದ ಹೋರಾಟಕ್ಕೆ ಧುಮುಕಿದರು‌.

ಕಾರ್ಲ್ ಮಾರ್ಕ್ಸ್, ಲೆನಿನ್ ಅವರುಗಳ ತತ್ವ ಸಿದ್ಧಾಂತ ಮೂಲಕ ತಮ್ಮ ಮನಸ್ಸನ್ನು ಹದಗೊಳಿಸಿಕೊಂಡರು‌. ಶೋಷಣೆರಹಿತ ಸಮ ಸಮಾಜದ ನಿರ್ಮಾಣದ ಕನಸು ಕಂಡರು. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿದರು‌. ಈ ಹೋರಾಟದ ಹಾದಿಯಲ್ಲಿ ಅನೇಕ ನೋವು, ಸಂಕಷ್ಟ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು. ಬಂಡವಾಳಷಾಹಿ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸವನ್ನೂ ಅನುಭವಿಸಬೇಕಾಯಿತು‌. ಅವರ ಕುಟುಂಬವರ್ಗ ಇನ್ನಿಲ್ಲದ ಕಷ್ಟಕ್ಕೆ ತುತ್ತಾಗಬೇಕಾಯಿತು.

ಆದರೂ ಅವರು ಎದೆಗುಂದದೇ ಹೋರಾಟದ ಹಾದಿಯಲ್ಲಿ ಮುಂದುವರೆದರು. ಪಂಪಾಪತಿಯವರು 1978, 1983, 1985 ರಲ್ಲಿ ದಾವಣಗೆರೆ ಶಾಸಕರಾಗಿ ಆಯ್ಕೆಯಾಗುವಲ್ಲಿ ಹೆಚ್‌ಕೆಆರ್ ಶ್ರಮ ಬಹಳಷ್ಟಿತ್ತು. ಪಂಪಾಪತಿಯವರ ಜೊತೆ ಜೊತೆಗೆ ರಾಜಕೀಯವಾಗಿ ಇವರೂ ಬೆಳೆದರು. 1974 ರಿಂದ ಸತತವಾಗಿ 21 ವರ್ಷಗಳ ಕಾಲ ದಾವಣಗೆರೆ ನಗರಸಭಾ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಅನೇಕ ಜನಪರವಾದ ಆಡಳಿತವನ್ನು ನೀಡಿದರು.

ಕಮ್ಯುನಿಸ್ಟ್ ಆಡಳಿತದ ವೈಭವವನ್ನು ದಾವಣಗೆರೆಯ ಹಳೆತಲೆಮಾರಿನ ಜನರು ಈಗಲೂ ಹೆಮ್ಮೆಯಿಂದ ನೆನೆಯುತ್ತಾರೆ. ಮೇ 1 ವಿಶ್ವ ಕಾರ್ಮಿಕ ದಿನಾಚರಣೆ ಬಂತೆಂದರೆ ದಾವಣಗೆರೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಹತ್ತಾರು ಸಾವಿರ ಕಾರ್ಮಿಕರ ಮೆರವಣಿಗೆ, ಮುಗಿಲು ಮುಟ್ಟುವಂತಹ ಕಾರ್ಮಿಕರ ಘೋಷಣೆಗಳು ಕಾರ್ಮಿಕರ ದಿನಾಚರಣೆಗೆ ಕೆಳೆಕಟ್ಟುವಂತಿತ್ತು.

ಅದೇ ಮೇ ತಿಂಗಳಿನಲ್ಲಿಯೇ ಕಾಮ್ರೇಡ್ ಹೆಚ್‌.ಕೆ.ರಾಮಚಂದ್ರಪ್ಪ ಅವರು ಅಸ್ತಂಗತರಾಗಿದ್ದು ಕಾಕತಾಳೀಯವೇ ಸರಿ. ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಕಾರ್ಮಿಕರ ಪರವಾದ ಹೋರಾಟದ ಮನೋಭಾವವನ್ನು ಅವರು ತಮ್ಮ ಉಸಿರಿರುವವರೆಗೂ ಬಿಡಲಿಲ್ಲ‌. ಇವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಅನೇಕ ರಾಜಕೀಯ ಪಕ್ಷಗಳು ಇವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದರು. ಇವರ ಕಣ್ಣೆದುರೇ ಅನೇಕ ಕಮ್ಯುನಿಸ್ಟ್ ನಾಯಕರುಗಳು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದರು‌.

ಒಂದು ವೇಳೆ ಇವರು ಕೂಡಾ ಬೇರೆ ಯಾವುದಾದರೂ ಪ್ರಬಲ ರಾಜಕೀಯ ಪಕ್ಷಕ್ಕೆ ಸೇರಿದ್ದೇ ಹೌದಾಗಿದ್ದರೆ ಖಂಡಿತವಾಗಿಯೂ ಸಂಸದರಾಗಿಯೋ ಶಾಸಕರಾಗಿಯೋ ಆಯ್ಕೆಗೊಳ್ಳುವುದು ಶತಸಿದ್ಧವಾಗಿತ್ತು ಎಂದು ಅವರ ಸಮಕಾಲೀನ ಮಿತ್ರರೇ ಹೇಳುತ್ತಾರೆ‌. ಆದರೆ ಹೆಚ್‌ಕೆಆರ್ ಅವರು ಕಲ್ಲುಬಂಡೆಯಂತೆ ಕಮ್ಯುನಿಸ್ಟ್ ಪಕ್ಷದ ಜೊತೆ ನಿಂತರು‌. ತತ್ವ, ಸಿದ್ಧಾಂತಗಳಿಗೆ ಕಟಿಬದ್ಧರಾಗಿದ್ದ ಹೆಚ್‌ಕೆಆರ್ ಅವರು ತಮ್ಮ ಕಮ್ಯುನಿಸ್ಟ್ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲಿಲ್ಲ ಎನ್ನುವುದು ಸೂರ್ಯನಷ್ಟೇ ಸತ್ಯ.

ಇವರ ಹೋರಾಟದ ಜೀವನವನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ, ಅಭಿನಂದಿಸಿ, ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿವೆ‌. ಅದರಲ್ಲಿ ಮುಖ್ಯವಾಗಿ ಚಿತ್ರದುರ್ಗದ ಶ್ರೀ ಮುರುಘಾ ಮಠವು ಪ್ರತೀ ವರ್ಷ ಕೊಡಮಾಡುವ ಪ್ರತಿಷ್ಠಿತ “ಶೂನ್ಯ ಪೀಠ ಚನ್ನಬಸವ ಪ್ರಶಸ್ತಿಯನ್ನು 2015 ರಲ್ಲಿ ಕೊಡಲಾಗಿತ್ತು.

ಪ್ರಶಸ್ತಿಯು ರೂ.25000/- ನಗದು ಹಣವನ್ನೂ ಹೊಂದಿತ್ತು. ಹೆಚ್‌ಕೆಆರ್ ಅವರು ಆ ಪ್ರಶಸ್ತಿಯ ನಗದು ಹಣವನ್ನು ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿಯೇ ಶ್ರೀ ಮಠದ ಸಮಾಜಮುಖಿ ಕಾರ್ಯಗಳಿಗೆ ದೇಣಿಗೆಯಾಗಿ ನೀಡಿದ್ದು ಅವರ ಔದಾರ್ಯತೆಯನ್ನು ತೋರಿಸುತ್ತದೆ ಮತ್ತು ಸೇರಿದ್ದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನು ಕಾಮ್ರೇಡ್ ಹೆಚ್.ಕೆ‌.ರಾಮಚಂದ್ರಪ್ಪನವರನ್ನು ರಾಜ್ಯಾದ್ಯಂತ ಎಲ್ಲರೂ ಪಕ್ಷಾತೀತವಾಗಿ ಗೌರವಿಸುತ್ತಿದ್ದರು. ಯಾವುದೇ ಸರಕಾರಿ ಕಛೇರಿಗಳಿಗೆ ಇವರು ಭೇಟಿ ನೀಡಿದಾಗ ಅಧಿಕಾರಿಗಳು ಎದ್ದು ನಿಂತು ಇವರಿಗೆ ಗೌರವ ಕೊಡುತ್ತಿದ್ದರು. 2015ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದಾವಣಗೆರೆಗೆ ಬರುವ ಕಾರ್ಯಕ್ರಮವಿತ್ತು. ಐ‌ಟಿಐ ಕಾಲೇಜಿನಲ್ಲಿ ಹೆಲಿಕಾಪ್ಟರ್ ಬಂದಿಳಿಯಿತು.

ಸಹಜವಾಗಿಯೇ ಸಾವಿರಾರು ಅಭಿಮಾನಿಗಳು, ರಾಜಕೀಯ ಧುರೀಣರು ನೆರೆದಿದ್ದರು. ಹೆಚ್‌ಕೆಆರ್ ನೇತೃತ್ವದಲ್ಲಿ ಒಂದಿಷ್ಟು ಕಾರ್ಮಿಕರು ಕೂಡಾ ತಮ್ಮ ಮನವಿಯನ್ನು ಸಲ್ಲಿಸಲು ಕಾಯುತ್ತಿದ್ದರು. ಸಿದ್ದರಾಮಯ್ಯನವರು ಹೆಲಿಕಾಪ್ಟರ್ ಇಳಿದು ಎಲ್ಲರ ಕಡೆಗೆ ಒಮ್ಮೆ ದೃಷ್ಟಿಹಾಯಿಸಿದರು. ಸೀದಾ ಅವರು ಬಂದಿದ್ದು ಹೆಚ್‌ಕೆಆರ್ ಬಳಿಗೆ. ಎನ್ರೀ ರಾಮಚಂದ್ರಪ್ಪ ಅವರೇ ಚೆನ್ನಾಗಿದ್ದೀರಾ ಎಂದು ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಮಾತನಾಡಿಸಿ ಮನವಿಪತ್ರವನ್ನು ತೆಗೆದುಕೊಂಡರು.

ಹೆಚ್‌ಕೆಆರ್ ಅವರು ಅಂಗನವಾಡಿ ಕಾರ್ಯಕರ್ತದ ಗೌರವಧನವನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಅದರಂತೆಯೇ ಸಿದ್ದರಾಮಯ್ಯನವರು ಮುಂದಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು ಹೆಚ್ಚಿಸಿದ್ದರು‌. ಹೀಗೆ ಅಜಾತಶತ್ರುವಿನಂತೆ ಎಲ್ಲರ ಗೌರವಕ್ಕೆ ಪಾತ್ರರಾದ ಧೀಮಂತ ವ್ಯಕ್ತಿತ್ವ ಅವರದಾಗಿತ್ತು.

ಅವರು ನಿಧನರಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಅವರ ಬಂಧು ಬಾಂಧವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಬಂಧುಗಳು ಕೊರೋನಾ ಭಯವನ್ನು ಲೆಕ್ಕಿಸದೇ ಧಾವಿಸಿದ್ದು ಅವರ ಜನಪ್ರಿಯತೆಯನ್ನು ಸಾರಿ ಸಾರಿ ಹೇಳುತಿತ್ತು. ಅಂಗನವಾಡಿ ಹಾಗೂ ಬಿಸಿಯೂಟ ಸಂಘಟನೆಗಳ ಮಹಿಳಾ ಕಾರ್ಮಿಕರಂತೂ ತಮ್ಮ ಸ್ವಂತ ಸಹೋದರನನ್ನೋ ತಂದೆಯನ್ನೋ ಕಳೆದುಕೊಂಡಂತೆ ಬಿಕ್ಕಿ ಬಿಕ್ಕಿ ಅಳುತಿದ್ದುದು ಮನಕಲುಕುವಂತಿತ್ತು.

ಹೆಚ್‌ಕೆಆರ್ ಅವರ ಉಸಿರು ನಿಂತಿರಬಹುದು. ಆದರೆ ಅವರ ಹೆಸರು ಲಕ್ಷಾಂತರ ಕಾರ್ಮಿಕರ ಮನದಲ್ಲಿ ಹಚ್ಚಹಸಿರಾಗಿ ಮುಂದಿನ ಹೋರಾಟಗಳಿಗೆ ಸ್ಪೂರ್ತಿಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕಾಂII ಹೆಚ್‌ಕೆಆರ್ ಚಿರಾಯುವಾಗಲಿ..‌.
ಕಾಂII ಹೆಚ್‌ಕೆಆರ್ ಅಮರ ರಹೇ‌…

(ಲೇಖಕರು:ಕೆ.ರಾಘವೇಂದ್ರ ನಾಯರಿ,
ಕಾರ್ಮಿಕ ಮುಖಂಡ,
& ಪ್ರದಾನ ಕಾರ್ಯದರ್ಶಿ,
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ,
ದಾವಣಗೆರೆ
ಮೊ: 9844314543
mail id : krnairycbeu@gmail.com)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

Published

on

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

Published

on

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.

ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

Published

on

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending