ರಾಜಕೀಯ
ಸಂವಿಧಾನ ಮತ್ತು ಧರ್ಮ : ಸದ್ಯದ ಅಪವ್ಯಾಖ್ಯಾನ
ಸಮಸ್ಯೆಯೊಂದನ್ನು ನಿರ್ಲಕ್ಷಿಸಿದಾಗ ಅದು ತನ್ನ ಪ್ರಾಬಲ್ಯ ಹಿಗ್ಗಿಸಿಕೊಳ್ಳಲಾರಂಭಿಸುತ್ತದೆ. ಸಕಾಲಿಕ ಪರಿಹಾರೋಪಾಯ ಶೋಧಿಸಿಕೊಂಡು ಎದುರುಗೊಳ್ಳದಿದ್ದರೆ ಅದು ಬೃಹದಾಕಾರ ಪಡೆದುಕೊಳ್ಳುತ್ತದೆ. ಬಿಡಿಸಲಾಗದ ಬಿಕ್ಕಟ್ಟಾಗಿ ಮಾರ್ಪಾಡಾಗಿ ನಾನಾ ಸಂಕಟಗಳನ್ನು ನೆಲೆಗೊಳಿಸಿಬಿಡುತ್ತದೆ. ಪರಿಹಾರದ ಮಾರ್ಗ ಯಾವುದು ಎಂಬುದು ಗೊತ್ತಿದ್ದರೂ ಅದನ್ನು ಅನುಸರಿಸುವುದಕ್ಕೆ ಕಷ್ಟಸಾಧ್ಯ ಎಂಬ ಭಾವವನ್ನು ಸಾರ್ವತ್ರಿಕಗೊಳಿಸುವಷ್ಟರ ಮಟ್ಟಿಗೆ ಆ ಸಂಕಟಗಳು ತೀವ್ರವಾಗಿ ಬಾಧಿಸುತ್ತವೆ. ಹೀಗೆ ಸಂಕಟಗೊಳಪಟ್ಟ ವ್ಯಕ್ತಿಗತ ಸಂಕೀರ್ಣತೆ ಸಾಮೂಹಿಕ ಸ್ವರೂಪ ಆವಾಹಿಸಿಕೊಂಡು ಜನಸಮುದಾಯಗಳನ್ನು ದಿಗ್ಮೂಢರನ್ನಾಗಿಸುತ್ತದೆ. ಆಂತರ್ಯದೊಳಗೆ ಮೂಡುವ ಅಸಮಾಧಾನ ಸಹನೆಯನ್ನು ಕಳೆದಿಡುತ್ತದೆ. ಆ ಸಂದರ್ಭದ ಅಸಹನೆಯು ಹಿಂಸೆಯೊಂದಿಗಿನ ದೃಷ್ಟಿಕೋನಗಳನ್ನು ಚಿಗುರಿಸಿಕೊಳ್ಳಲು ನೆರವಾಗುತ್ತದೆ. ಈ ಹಂತದಲ್ಲಿಯೇ ದ್ವಂದ್ವ, ಅಸ್ಪಷ್ಟತೆ, ಅವಿವೇಕತನ, ಅಸಂಬದ್ಧತೆ ಮತ್ತು ಕ್ರೌರ್ಯದ ನಡವಳಿಕೆಗಳು ದೇಶದ ಸಾಮಾಜಿಕ ಅಸ್ಮಿತೆಯನ್ನೇ ಧ್ವಂಸಗೊಳಿಸುತ್ತವೆ. ಭಾರತ ಅಂಥದ್ದೊಂದು ಅಪಾಯಕಾರಿ ಪ್ರವೃತ್ತಿಯ ಮಿತಿಯೊಂದಿಗೆ ಹೆಜ್ಜೆಯಿರಿಸುತ್ತಿದೆ. ಇದನ್ನು ತಿಳಿದುಕೊಂಡು ಸರಿಹಾದಿ ತೋರುವ ದಾರ್ಶನಿಕತೆಯನ್ನು ನಿರೂಪಿಸಬೇಕಾದ ನಾಯಕರಲ್ಲದ ನಾಯಕರೆನ್ನಿಸಿಕೊಂಡವರು ಸಮಸ್ಯಾತ್ಮಕತೆಯನ್ನು ಸ್ಥಾಯಿಯಾಗಿಸಿ ತಮ್ಮ ಅಸ್ತಿತ್ವವನ್ನು ಶಾಶ್ವತಗೊಳಿಸಿಕೊಳ್ಳುವ ಹಂಬಲಗೊಳೊಂದಿಗೇ ಗುರುತಿಸಿಕೊಂಡಿದ್ದಾರೆ.
ಈ ದೇಶವನ್ನು ಕಾಡುತ್ತಿರುವ ಸಮಸ್ಯೆಗಳು ಯಾವುವು ಎಂಬುದು ಅವುಗಳ ವ್ಯತಿರಿಕ್ತ ಪರಿಣಾಮಗಳಿಗೆ ಈಡಾದವರೂ ಸೇರಿದಂತೆ ಹಲವರಿಗೆ ಗೊತ್ತಿದೆ. ಈ ಸಮಸ್ಯೆಗಳ ಮೂಲ ಎಲ್ಲಿಯದು ಎಂಬುದರ ಅರಿವೂ ಇದೆ. ಇಡೀ ದೇಶದಲ್ಲಿ ಸಮಸ್ಯೆಗಳೇ ಇಲ್ಲ ಎಂಬಂಥ ಪರಮೋಚ್ಛ ಭ್ರಮೆಯ ವರ್ತುಲಕ್ಕೆ ಸಿಲುಕೊಳ್ಳಬಾರದು ಎಂಬ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದಕ್ಕೆ ಅನುಕೂಲ ಒದಗಿಸಿಕೊಡುವ ನಕಾರಾತ್ಮಕತೆಯ ಅನುಭವವು ಪ್ರತಿಯೊಬ್ಬರಿಗೂ ಆಗುತ್ತಲೇ ಇರುತ್ತದೆ. ಆದರೆ, ಅದನ್ನು ಹಲವರು ಅಭಿವ್ಯಕ್ತಿಸುವುದಿಲ್ಲ. ಬದಲಾವಣೆ ಬಯಸುವ ಚಿಂತಕರು ಮತ್ತು ಜನಸಾಮಾನ್ಯ ವಲಯ ಆ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ. ಹಾಗೆ ಅವರು ಮುಕ್ತ ಆಲೋಚನೆಯನ್ನು ಹರಿಬಿಟ್ಟಾಗ ಅದು ಅಪಾಯಕಾರಿ ಎಂದು ತಪ್ಪಾಗಿ ಅರ್ಥೈಸುವ ಜಾಯಮಾನದ ನಡೆಯನ್ನು ರಾಜಕೀಯ ವಲಯ ಈಗೀಗ ನೆಚ್ಚಿಕೊಳ್ಳುತ್ತಿದೆ. ಇಂಥ ನಡೆಯ ಕಾರಣಕ್ಕಾಗಿಯೇ ಸಂವಿಧಾನ ಮತ್ತು ಧರ್ಮ ಪರಸ್ಪರ ಸಂಘರ್ಷಿಸುವ ನೆಲೆಗಳಾಗಿ ಚರ್ಚಿಸಲ್ಪಡುತ್ತಿವೆ. ಇವೆರಡರ ಉದಾತ್ತ ಅರ್ಥವನ್ನು ಒಡೆದು ಸಂಕುಚಿತಗೊಳಿಸಿದ ಅಪವ್ಯಾಖ್ಯಾನವನ್ನೇ ಜನಸಮುದಾಯ ನೆಚ್ಚಿಕೊಳ್ಳುವಂತೆ ಒತ್ತಡ ಹಾಕುತ್ತಿವೆ. ಇದೇ ಬಗೆಯ ಅನುಕೂಲಕರ ಸಮಯಾವಕಾಶವನ್ನು ಕಾಯ್ದುಕುಳಿತಂತೆ ರಾಜಕೀಯ ವಲಯ ತನ್ನ ದಾಳಗಳನ್ನು ಪ್ರಯೋಗಿಸುತ್ತಿದೆ.
ಸದ್ಯದ ವ್ಯತಿರಿಕ್ತ ಸ್ಥಿತಿಗತಿಗಳು ಅತ್ಯಂತ ನಿಖರವಾಗಿ ಬಿಟ್ಟುಕೊಡುತ್ತಿರುವ ಸುಳಿವುಗಳು ಹಲವಿವೆ. ಅವುಗಳಲ್ಲಿ ಧರ್ಮ ಮತ್ತು ದೇವರಿಗೆ ಸಂಬಂಧಿಸಿದಂತೆ ಇರುವ ವ್ಯಕ್ತಿಗತ ಸಂಕುಚಿತತೆಯನ್ನು ಸಾಂಸ್ಥಿಕಗೊಳಿಸಿ ಪ್ರಭಾವವನ್ನು ವ್ಯಾಪಕಗೊಳಿಸುವ ಪ್ರಯತ್ನವೂ ಒಂದು. ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವುದು, ಆಯಾ ಧರ್ಮಗಳವರ ನಂಬಿಕೆಯ ಆವರಣದಲ್ಲಿ ಆದ್ಯತೆ ಪಡೆದಿರುವ ದೇವರುಗಳ ಆರಾಧನೆಯ ಅವಕಾಶಗಳನ್ನು ಸ್ವಾರ್ಥಕ್ಕೆ ತಿರುಗಿಸಿಕೊಳ್ಳುವುದು ಈಗೀಗ ಸಾರ್ವತ್ರಿಕವಾಗಿದೆ. ಸಮಸ್ಯೆಯೊಂದು ವ್ಯಕ್ತಿಯನ್ನು ಭಾಧಿಸುತ್ತಿರುತ್ತದೆ. ವ್ಯಕ್ತಿಗತ, ಕೌಟುಂಬಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಮಸ್ಯಾತ್ಮಕ ಸಂಕೀರ್ಣತೆಗಳೊಂದಿಗಿನ ವಾಸ್ತವಿಕತೆಯೇ ಆ ಸಮಸ್ಯೆಗೆ ಕಾರಣವಾಗಿರುತ್ತದೆ. ಆದರೆ, ಧರ್ಮ ಮತ್ತು ದೇವರನ್ನು ಅಪವ್ಯಾಖ್ಯಾನಕ್ಕೊಳಪಡಿಸಿ ಆ ಬಗ್ಗೆ ಸಂಕುಚಿತವಾಗಿ ಅರ್ಥೈಸಿ ಭಯಹುಟ್ಟಿಸಲಾಗುತ್ತದೆ. ಹೀಗೆ ಭಯವನ್ನು ಹುಟ್ಟಿಸಿ ಸ್ವಾರ್ಥ ಸಾಧಿಸಿಕೊಳ್ಳುವ ಹಿತಾಸಕ್ತಿಗಳ ಅಸ್ತಿತ್ವದಲ್ಲಿಯೇ ಮಹತ್ವದ ಸುಳಿವನ್ನು ಗೊತ್ತುಮಾಡಿಕೊಳ್ಳಬಹುದು. ಈ ಹಿತಾಸಕ್ತಿಗಳು ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ಸ್ಥಾಯಿಯಾಗಿಸಿ ಜನರೊಳಗಿನ ಆಲೋಚಿಸುವ ಶಕ್ತಿಯನ್ನೇ ತಡೆದು ನಿಲ್ಲಿಸುತ್ತವೆ. ಆವರ ಆಲೋಚನೆಯ ಸಾಧ್ಯತೆಗಳನ್ನು ಮೊಟಕುಗೊಳಿಸಿ ಧರ್ಮವಲ್ಲದ ಸಂಗತಿಗಳ ಕಡೆಗೆ ತಿರುಗಿಸುತ್ತವೆ. ಅವರ ಮನಸ್ಸಿನಲ್ಲಿ ದೇವರುಗಳ ಬಗ್ಗೆ ಭಯದ ಭಾವ ಮೂಡಿಸುತ್ತವೆ. ಆರಾಧಿಸದಿದ್ದರೆ ಶಿಕ್ಷೆ ಗ್ಯಾರಂಟಿ, ದೇವರೇ ಮುನಿಸಿಕೊಂಡರೆ ಮುಂದಿದೆ ವ್ಯತಿರಿಕ್ತ ಪರಿಣಾಮ ಎಂಬ ಅತಾರ್ಕಿಕತೆಯನ್ನೇ ಮಂಡಿಸಿ ದಾರಿ ತಪ್ಪಿಸುತ್ತವೆ.
ಮೊದಲೇ ಸಮಸ್ಯೆಗಳ ಮಧ್ಯೆ ನರಳುತ್ತಿರುವವರ ಮುಂದೆ ಧರ್ಮದಲ್ಲಿಲ್ಲದ ಸಂಗತಿಗಳನ್ನು ವೈಭವೀಕರಿಸಿ ಹೇಳಿದರೆ ಸ್ವಾರ್ಥದ ಉದ್ದೇಶಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಕಾರ್ಯಸೂಚಿ ಅತ್ಯಂತ ಎಚ್ಚರದಲ್ಲಿ ಯಶಸ್ವಿಯಾಗಿ ನಿರ್ವಹಿಸಲ್ಪಡುತ್ತದೆ. ಹೀಗಾದರೆ ಹೀಗಾಗುತ್ತದೆ ಎಂದು ತಾರ್ಕಿಕವಾಗಿ ಮಾತನಾಡುವವರಂತೆ ನಟಿಸುವವರೇ ರಂಜನಾಮಾಧ್ಯಮೋದ್ಯಮದ ಮೂಲಗಳಾಗುತ್ತಾರೆ. ಸಮಾಜದ ವಿವಿಧ ಜನವರ್ಗಗಳು ಇಂಥವರನ್ನು ಆರಾಧಿಸಿಕೊಂಡೇ ಇದ್ದರೆ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂಬ ರಾಜಕೀಯ ವಲಯದ ನಿರೀಕ್ಷೆಗಳು ಈ ಹಂತದಲ್ಲಿಯೇ ಈಡೇರಿಬಿಡುತ್ತವೆ. ಸಮಸ್ಯೆಯನ್ನು ಶಾಶ್ವತವಾಗಿ ಉಳಿಯುವಂತೆ ನೋಡಿಕೊಂಡು ಅದು ಬಿಕಟ್ಟಿನ ಸ್ವರೂಪ ಪಡೆದುಕೊಂಡಾಗಲೂ ಪರಿಹಾರದ ನಾಟಕವಾಡಿ ಧರ್ಮ, ದೇವರ ಕುರಿತಾಗಿ ಭಯಭೀತಿ ಸೃಷ್ಟಿಸಿ ಸಾಮಾಜಿಕ ಚಲನೆಯನ್ನು ನಿಲ್ಲಿಸಿಬಿಡುವ ರಾಜಕೀಯ ಉದ್ದೇಶಗಳು ಯಶಸ್ಸು ಪಡೆದುಬಿಡುತ್ತವೆ. ಇದೇ ರಾಜಕೀಯ ಪ್ರವೃತ್ತಿ ಇಂದು ಸಂವಿಧಾನಕ್ಕೆ ಸವಾಲೆಸೆಯುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.
ಇದು ಎಲ್ಲ ಕಾಲದ ಸಮಸ್ಯೆಯೂ ಹೌದು. ಬಹುಷಃ ಈ ಕಾರಣಕ್ಕಾಗಿಯೇ ಇರಬಹುದು; ಈಗಾಗಲೇ ಆಗಿಹೋದ ದಾರ್ಶನಿಕರು ದೇವರು ಮತ್ತು ಧರ್ಮದ ಕುರಿತ ನಂಬಿಕೆಯ ಜಗತ್ತನ್ನು ಆಧರಿಸಿಯೇ ತಾತ್ವಿಕತೆಯನ್ನು ಪ್ರತಿಪಾದಿಸಿದರು. ಭೌತಿಕ ಜಗತ್ತಿನ ಒಳಗೇ ಮನುಷ್ಯಸಹಜ ದೌರ್ಬಲ್ಯಗಳೊಂದಿಗಿನ ಊನಗಳನ್ನು ತಮ್ಮೊಳಗಿನ ದಾರ್ಶನಿಕತೆಯೊಂದಿಗೆ ಎದುರುಗೊಂಡರು. ನಿಜವಾದ ಧರ್ಮ ಏನು ಎಂಬುದನ್ನು ಅರ್ಥೈಸಿದರು. ದೇವರ ಅಸ್ತಿತ್ವವು ಒಳಿತಿನೊಂದಿಗೇ ಇದೆ ಎಂಬ ವಿವೇಕವನ್ನು ಕಟ್ಟಿಕೊಡಲು ಪ್ರಯತ್ನಿಸಿದರು. ನಿಸರ್ಗದ ಅನೇಕ ಕೌತುಕಮಯ ಸಂಗತಿಗಳನ್ನು ಕಾಡಿಸಿಕೊಂಡು ಅವುಗಳನ್ನು ಜೀವಪರ ಅಂತಃಕರಣದೊಂದಿಗೆ ಮನುಷ್ಯ ಬದುಕಿನ ಉದ್ಧಾರಕ್ಕೆ ಬಳಸಿಕೊಳ್ಳಬಹುದಾದ ಒಳನೋಟಗಳ ಮೇಲೆ ಬೆಳಕು ಚೆಲ್ಲಿದರು. ಧರ್ಮ-ದೇವರ ಬಗೆಗಿನ ನಂಬಿಕೆಯ ಜಗತ್ತನ್ನು ಅಲುಗಾಡಿಸದೇ ಅಂತಸ್ಥಗೊಂಡಿರುವ ಮೂಢನಂಬಿಕೆಯ ಬೇರುಗಳನ್ನು ಕಿತ್ತೆಸೆಯಲು ತಾತ್ವಿಕ ಮಾರ್ಗವನ್ನು ಕಂಡುಕೊಂಡರು. ಆ ಮೂಲಕ ಧರ್ಮ ಮತ್ತು ದೇವರನ್ನು ಉದಾತ್ತತೆಯೊಂದಿಗೆ ತಾದಾತ್ಮ್ಯಗೊಳಿಸುವ ಚಲನಾತ್ಮಕ ಆಕೃತಿಗಳನ್ನು ಕೊಡುಗೆಗಳನ್ನಾಗಿ ನೀಡಿದರು. ಈಗ ಈ ಸಾಧ್ಯತೆಯ ತದ್ವಿರುದ್ಧದ ದಿಕ್ಕುಗಳೇ ಪರಮಮಾರ್ಗಗಳಾಗಿ ಪರಿಗಣಿತವಾಗುತ್ತಿವೆ. ಅವೇ ಪರಮೋಚ್ಛ ಎಂಬ ಬಿಂಬಗಳನ್ನು ಅತ್ಯಂತ ಚಾಣಾಕ್ಷಯುತವಾಗಿ ಕಟ್ಟಿಕೊಡಲಾಗುತ್ತಿದೆ. ಅಂಥ ಎಲ್ಲ ಸಂಕುಚಿತತೆಯನ್ನು ರಾಜಕೀಯ ಪೋಷಿಸುತ್ತಿದೆ. ಧರ್ಮ-ದೇವರನ್ನು ನೆಚ್ಚಿಕೊಂಡ ಜನರ ನಂಬಿಕೆಯ ಜಗತ್ತನ್ನು ಮೌಢ್ಯಕ್ಕೆ ತಿರುಗಿಸಿ ಅಪನಂಬಿಕೆಗಳನ್ನು ಮುನ್ನೆಲೆಗೆ ತಂದು ತನ್ನನ್ನು ವಿಜೃಂಭಿಸಿಕೊಳ್ಳುತ್ತಿದೆ.
ಧರ್ಮ ಮತ್ತು ದೇವರು – ಇವೆರಡೂ ಭಾವನಾತ್ಮಕ ಸಾಂಸ್ಥಿಕತೆಯನ್ನು ಅಳವಡಿಸಿಕೊಂಡು ನಿರಂತರವಾಗಿ ಜನರನ್ನು ಶೋಷಿಸಲು ಬಳಕೆಯಾದ ಇತಿಹಾಸವಿದೆ. ಅದನ್ನು ಮರೆಗೆ ಸರಿಸಿ ಅಧಿಕಾರ, ಹಣ ಮತ್ತು ಪ್ರತಿಷ್ಠೆಗಳನ್ನು ಸ್ಥಾಯಿಯಾಗಿಸಿಕೊಳ್ಳಲು ರಾಜಕೀಯ ಕೇಂದ್ರಗಳು ಪ್ರಯತ್ನಿಸಿ ಯಶಸ್ವಿಯಾಗುತ್ತಲೇ ಇವೆ. ಅವುಗಳಿಗೆ ಅನುಗುಣವಾಗಿಯೇ ತಮ್ಮನ್ನು ಪ್ರತಿಷ್ಠಾಪಿಸಿಕೊಂಡ ವಿವಿಧ ಜಾತಿಗಳ ಜನಸಮೂಹ ಅವು ನಿರೀಕ್ಷಿಸುವ ಸಂಕುಚಿತತೆಯ ಮನೋಧರ್ಮಕ್ಕೆ ಪಕ್ಕಾಗುತ್ತಲೇ ಇದೆ. ಬದಲಾವಣೆಯ ಪ್ರಬಲ ಅಸ್ತ್ರ ಎಂದು ಪರಿಗಣಿಸಲ್ಪಟ್ಟ ಶಿಕ್ಷಣ ಮತ್ತು ಅದರ ಮೂಲಕ ವ್ಯಾಪಕಗೊಳ್ಳುತ್ತದೆ ಎಂದುಕೊಂಡಿದ್ದ ಮೌಲ್ಯಾತ್ಮಕ ಪ್ರಭೆಯನ್ನು ಮತ್ತೆ ಮತ್ತೆ ಸೋಲಿಸುತ್ತಿರುವುದು ಇದೇ ಸಂಕುಚಿತತೆಯೇ. ಇದನ್ನೇ ಅಧಿಕಾರ ಕೇಂದ್ರಗಳ ಕಡೆಗೆ ನೋಟ ನೆಟ್ಟ ರಾಜಕೀಯ ವಲಯದ ಪ್ರತಿನಿಧಿಗಳು ತಮ್ಮ ಬಂಡವಾಳವಾಗಿಸಿಕೊಳ್ಳುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಧರ್ಮದಲ್ಲಿ ಇಲ್ಲದೇ ಇರುವ ಜೀವವಿರೋಧಿ ಅಮಾನವೀಯ ಸಾಂಪ್ರದಾಯಿಕತೆಯನ್ನು ಸಂವಿಧಾನಕ್ಕಿಂತಲೂ ಮಿಗಿಲು ಎಂದು ಪ್ರತಿಪಾದಿಸುತ್ತಿದ್ದಾರೆ. ಆ ಪ್ರತಿಪಾದನೆಯನ್ನು ಸಮಾಜದ ವಿವಿಧ ಜನವರ್ಗಗಳು ಒಪ್ಪಿಕೊಳ್ಳಲೇಬೇಕು ಎಂಬ ವಿತಂಡವಾದವನ್ನು ಮುಂದಿಡುತ್ತಿದ್ದಾರೆ.
ಈ ನಕಾರಾತ್ಮಕ ಹೆಜ್ಜೆಗಳಿಗೆ ಪರ್ಯಾಯವಾಗಿ ವಿಶ್ವಾಸಾರ್ಹವಾದ ಸಂವಿಧಾನಬದ್ಧ ರಾಜಕೀಯ ಸಂಸ್ಕøತಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಧರ್ಮವಲ್ಲದ ಸಂಗತಿಗಳನ್ನು ವೈಭವೀಕರಿಸಿ ಮುನ್ನೆಲೆಗೆ ತಂದ ವಲಯದವರೂ ತಾವು ಬದಲಾಗಬೇಕಾದ ಆಲೋಚನೆಗಳನ್ನು ಹರಿಬಿಡುತ್ತಿದ್ದಾರೆ ಎಂಬುದೇನೋ ಸಮಾಧಾನ ತರುವ ಸಂಗತಿ. ಈ ದೇಶದ ಸಾಂಸ್ಕøತಿಕ ವೈವಿಧ್ಯತೆಯ ಮಹತ್ವವನ್ನು ತಡವಾಗಿಯಾದರೂ ಹೇಳುತ್ತಿದ್ದಾರೆ ಎಂದುಕೊಳ್ಳಬಹುದು. ಎಲ್ಲ ಧರ್ಮಗಳವರನ್ನು ಗೌರವಿಸಬೇಕು ಎನ್ನುವ ಭಾವವನ್ನು ಸಂವಹಿಸುತ್ತಿದ್ದಾರೆ ಎಂದು ಖುಷಿಪಡಬಹುದು. ಅಂಥ ಆಶಾದಾಯಕ ನುಡಿಗಳು ನಡೆಯಲ್ಲೂ ಮೇಳೈಸಿಕೊಳ್ಳಬೇಕು.
ಹಾಗಾಗುವುದಕ್ಕೆ ಭಾರತದ ರಾಜಕಾರಣ ಅಷ್ಟು ಸುಲಭವಾಗಿ ಬಿಡುವುದಿಲ್ಲ. ಇಲ್ಲಿಯ ರಾಜಕಾರಣಕ್ಕೆ ಬದಲಾವಣೆಗಿಂತ ಸ್ಥಗಿತತೆಯೇ ಹೆಚ್ಚು ಅಚ್ಚುಮೆಚ್ಚು. ಧರ್ಮ-ದೇವರು ಕೇಂದ್ರಿತ ಸಾಂಪ್ರದಾಯಿಕತೆಯೊಂದಿಗೆ ತಳುಕು ಹಾಕಿಕೊಂಡಿರುವ ಸಮಸ್ಯೆಗಳು ಜಟಿಲವಾದಷ್ಟೂ ಅದಕ್ಕೆ ಎಲ್ಲಿಲ್ಲದ ಖುಷಿ. ಜನರು ಈ ಸಾಂಪ್ರದಾಯಿಕತೆಯ ತೊಳಲಾಟಗಳಲ್ಲೇ ಕಾಲ ಕಳೆದರೆ ನಿಜವಾದ ಬೆಳವಣಿಗೆಗೆ ಸಂಬಂಧಿಸಿದ ಚಿಂತನೆಯೇ ಹುಟ್ಟುವುದಿಲ್ಲ. ಆಗ ಜನರು ಎಚ್ಚೆತ್ತುಕೊಳ್ಳುವ ಪ್ರಮೇಯವೇ ಎದುರಾಗುವುದಿಲ್ಲ. ಇದು ದೇವರು-ಧರ್ಮಗಳ ರಕ್ಷಾಕವಚಗಳನ್ನು ಹಾಕಿಕೊಂಡು ಜನರ ಭಯವಿಹ್ವಲತೆಯನ್ನು ಬೇರೂರಿಸಿ ಮತ್ತಷ್ಟು ಗಟ್ಟಿಯಾಗಿಸಿ ಉಸಿರುಗಟ್ಟಿಸುವ ಆಟ. ತಮ್ಮನ್ನು ಸೋಲಿಸುವ ವೈಚಾರಿಕತೆ ಸನಿಹದಲ್ಲಿಯೇ ಇದೆ ಎನ್ನುವ ಸುಳಿವು ಸಿಕ್ಕ ತಕ್ಷಣವೇ ಧರ್ಮರಕ್ಷಣೆ ಮತ್ತು ದೇವರನ್ನು ಕೃತಾರ್ಥರನ್ನಾಗಿಸುವ ಕೈಂಕರ್ಯಗಳ ನೆಪದಲ್ಲಿ ಭಯವನ್ನು ಸೃಷ್ಟಿಸಿ ವಂಚಿಸುವ ಆಟ. ಇಂಥ ಆಟವನ್ನು ನಿಲ್ಲಿಸಬೇಕಾದರೆ ಪ್ರತಿಕಾಲಘಟ್ಟದಲ್ಲೂ ಸೋಲುತ್ತಲೇ ಇರುವ ಬಹುಸಂಖ್ಯಾತ ಶೋಷಿತ ಸಮುದಾಯದ ಜನರು ಸಂವಿಧಾನದ ಆವರಣಕ್ಕೆ ಮರಳಬೇಕು. ತಮ್ಮ ಸಮಸ್ಯೆಗಳಿಗೆ ಪರಿಹಾರ ತೋರುವ ಪರಿವರ್ತನಾಶೀಲ ಚಿಂತನಶೀಲ ಸದಾಶಯಗಳೊಂದಿಗೆ ಮುಖಾಮುಖಿಯಾಗಬೇಕು. ಧ್ಯಾನಸ್ಥ ಸ್ಥಿತಿಯಲ್ಲಿ ಸಂವಿಧಾನವನ್ನು ಅಂತರ್ಗತಗೊಳಿಸಿಕೊಳ್ಳಬೇಕು.
ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಇಷ್ಟೊತ್ತಿಗಾಗಲೇ ಅತ್ಯಂತ ಚಾಣಾಕ್ಷಯುತವಾಗಿ ಪರೀಕ್ಷೆಗೊಡ್ಡಿ ತನ್ನ ಸಂವಿಧಾನಬದ್ಧ ಶಕ್ತಿಯನ್ನು ವಿಸ್ತರಿಸಿಕೊಳ್ಳಬಹುದಾಗಿದ್ದ ರಾಜಕೀಯ ಪಕ್ಷಗಳು ಮತ್ತೆ ಅಧಾರ್ಮಿಕ ಸಂಕುಚಿತತೆಯೊಂದಿಗಿನ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿರುವ ಸಾಂಪ್ರದಾಯಿಕ ಶಕ್ತಿಗಳ ಜೊತೆಗೇ ಕೈಜೋಡಿಸಿ ತಮ್ಮ ಅಧಿಕಾರ ಪಡೆಯುವ ಹಂಬಲಗಳನ್ನು ಜೀವಂತಗೊಳಿಸಿಕೊಳ್ಳುತ್ತಿವೆ. ಮತ್ತವೇ ಜಾತಿ ವೈರುಧ್ಯಗಳು. ಮತ್ತದೇ ಅಧಾರ್ಮಿಕ ಸಂಘರ್ಷ. ಮೇಲು-ಕೀಳುಗಳ ಅಂತರ್ಯುದ್ಧದ ಕಪಟಕಿರುಕುಳ ಯಾನ. ಸಂವಿಧಾನವನ್ನು ಗೆಲ್ಲಿಸುವ ಇಚ್ಛಾಶಕ್ತಿಯ ಕೊರತೆ. ಅಲ್ಲಲ್ಲಿ ಕಂಡುಬರುವ ಮಾನವೀಯತೆಯ ಒರತೆಗಳನ್ನು ಉದ್ದೇಶಪೂರ್ವಕವಾಗಿ ಇಲ್ಲವಾಗಿಸಿಬಿಡುವ ಹುನ್ನಾರಗಳ ತಕಧಿಮಿಗುಟ್ಟುವ ಕ್ರೂರನರ್ತನ. ಉದಾತ್ತ ತಾತ್ವಿಕತೆಯ ಪರಿಭಾಷೆಗಳನ್ನು ಅಪವ್ಯಾಖ್ಯಾನಗೊಳಿಸುವ ಸಾಂಪ್ರದಾಯಿಕತೆ ಅಸ್ತಿತ್ವ ಇನ್ನೆಷ್ಟು ದಿನ? ಕಾಲವೇ ಉತ್ತರಿಸಬೇಕು ಎಂದು ಸುಮ್ಮನೆ ಕುಳಿತುಕೊಳ್ಳಬೇಕೇ? ಯೋಚಿಸಲಾರಂಭಿಸಬೇಕೇ……?
(-ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ,ಇ-ಮೇಲ್ ವಿಳಾಸ: nkpadmanabh@gmail.com
ಮೊಬೈಲ್: 9972998300)

ದಿನದ ಸುದ್ದಿ
ದಾವಣಗೆರೆ | ಇಂದು ಕರೆಂಟ್ ಇರಲ್ಲ
ಸುದ್ದಿದಿನ,ದಾವಣಗೆರೆ:ಬೆಸ್ಕಾಂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಜಂಗಲ್ ಕಟಿಂಗ್ ಮತ್ತು ಫೀಡರ್ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 09-00 ರಿಂದ ಸಂಜೆ 05-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೊರಚರ ಹಟ್ಟಿ ಸರ್ಕಲ್, ಅಂಜನೆಯ ಬಡಾವಣೆ, ಶಕ್ತಿ ನಗರ, ಭಗೀರಥ ಲೇಔಟ್ ಸರ್ಕಲ್, ಕೊಟ್ಟುರೇಶ್ವರ ಬಡಾವಣೆ, , ಡಿ.ಸಿ.ಎಂ ಎಬಿಸಿ ಬ್ಲಾಕ್, ರಾಜೇಂದ್ರ ಬಡಾವಣೆ, ಭೂಮಿಕಾ ನಗರ, ಎಸ್.ಎಸ್ ಹೈ-ಟೆಕ್ ಮೇನ್ ರೋಡ್, ಶೇಶಾಂ ಲೇಔಟ್, ಹೊಂ ಟೈಲಾರ್ ರೋಡ್, ಬನಶಂಕರಿ ದೇವಸ್ಥಾನ, ಶ್ರೀರಾಮ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ. ಎ ಬ್ಲಾಕ್, ನಿಜಲಿಂಗಪ್ಪ ಲೇಔಟ್, ಅಶ್ವಿನಿ ಆರ್ಯುವೇಧಿಕ್ ಆಸ್ಪತ್ರೆ, ಜೊಲ್ಲಿಗುರು ಕಾಂಪೌಡ್, ಮುದ್ದೊಳ್ಳಿ ತೋಟ, ನರಹರಿಶೇಟ ಕಲ್ಯಾಣ ಮಂದಿರ, ಪೊಲೀಸ್ ಹಳೆಯ ವಸತಿ ಗೃಹಗಳು, ವಿನೋಬ ನಗರ 1ನೇ ಮತ್ತು 2ನೇಯ ಮುಖ್ಯ ರಸ್ತೆ ಚರ್ಚ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಬಿದರಕೆರೆ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಎಫ್- ಕಟ್ಟಿಗೆಹಳ್ಳಿ, ಎನ್ಜೆವೈ (NJY) ಜಗಳೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಅರಿಶಿನಗುಂಡಿ ಹಾಗೂ ಜ್ಯೋತಿಪುರ ಎನ್ಜೆವೈ (NJY) 11ಕೆವಿ ಮಾರ್ಗಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರತಿದಿನದ ಹಾಜರಾತಿಯನ್ನು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಮೂಲಕ ಕಡ್ಡಾಯವಾಗಿ ನಿರ್ವಹಿಸಲು ದಿನಾಂಕ: 12-07-2022 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರು ಸುತ್ತೋಲೆ ಹೊರಡಿಸಿದ್ದಾರೆ.
ಸದರಿ ಸುತ್ತೋಲೆಯಲ್ಲಿ ‘ಎಲ್ಲಾ ನಿಲಯಪಾಲಕರು/ ಮೇಲ್ವಿಚಾರಕರು ಬೆಲಗ್ಗೆ ತಿಂಡಿ ಸಮಯದಲ್ಲಿ ಹಾಗೂ ರಾತ್ರಿ ಊಟದ ಸಮಯದಲ್ಲಿ ವಸತಿ ಶಾಲೆ/ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಪಡೆಯತಕ್ಕದ್ದು’ ಎಂಬುದಾಗಿ ಸೂಚಿಸಲಾಗಿದೆ.
‘ಬಯೋಮೆಟ್ರಿಕ್ ಹಾಜರಾತಿ ಪಡೆಯದೆ ಆಹಾರ ವೆಚ್ಚ ಭರಿಸಿದ್ದಲ್ಲಿ ಸಂಬAಧಪಟ್ಟ ನಿಲಯಪಾಲಕರು, ಅಲ್ಪಸಂಖ್ಯಾತರ ತಾಲ್ಲೂಕು ವಿಸ್ತರಣಾಧಿಕಾರಿಗಳು/ ಪ್ರಾಂಶುಪಾಲರು, ಜಿಲ್ಲಾ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು’ ಎಂಬುದಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿರುತ್ತದೆ.
ಆದರೆ ದಾವಣಗೆರೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಮಾಹಿತಿ ಆಧಾರದಲ್ಲಿ ದಿನಾಂಕ: 28-11-2025 ರಂದು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರಿಗೆ ದಿನಾಂಕ: 28-11-2025 ರಂದು ದೂರು ನೀಡಿ ‘ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆಯನ್ನು ತನಿಖೆಗೆ ಒಳಪಡಿಸುವಂತೆ’ ಕೋರಲಾಗಿತ್ತು.
ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರು ನೀಡಿದ ಹಿಂಬರಹದಲ್ಲಿ ‘ಈ ಸಂಬAಧ ಜಿಲ್ಲೆಯ ಕೆಲವು ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಮತ್ತೆ ಕೆಲವು ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಹೊಸ ಬಯೋಮೆಟ್ರಿಕ್ ಯಂತ್ರವನ್ನು ಪೂರೈಕೆ ಮಾಡುವಂತೆ ಪ್ರಾಂಶುಪಾಲರುಗಳು ಮತ್ತು ತಾಲ್ಲೂಕು ವಿಸ್ತರಣಾಧಿಕಾರಿಗಳು ಕೋರಿರುವ ಪತ್ರವನ್ನು ಲಗತ್ತಿಸಿ’ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶಕರು, ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿದೆ ಎಂಬುದಾಗಿ ತಿಳಿಸಿರುತ್ತಾರೆ.
ಆದ ಕಾರಣ ದಿನಾಂಕ: 17-02-2026 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರಿಗೆ ದೂರು ನೀಡಿ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಕೋರಲಾಗಿತ್ತು. ಆದರೆ ದೂರು ನೀಡಿ 3 ತಿಂಗಳು ಕಳೆದರೂ ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.
ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.
4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ
-
ದಿನದ ಸುದ್ದಿ7 days agoಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
-
ದಿನದ ಸುದ್ದಿ4 days agoಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?
-
ಅಂಕಣ4 days agoಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
-
ದಿನದ ಸುದ್ದಿ3 days agoಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ
-
ದಿನದ ಸುದ್ದಿ5 days agoಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ
-
ದಿನದ ಸುದ್ದಿ3 hours agoದಾವಣಗೆರೆ | ಇಂದು ಕರೆಂಟ್ ಇರಲ್ಲ


