Connect with us

ದಿನದ ಸುದ್ದಿ

ಕರೋನ ಬಿಕ್ಕಟ್ಟಿನಲ್ಲಿ ಮಕ್ಕಳಿಗೆ ಶಾಲೆ ಬೇಕೆ ಬೇಡವೇ..?

Published

on

  • ಯೋಗೇಶ್ ಮಾಸ್ಟರ್

ಹಳಷ್ಟು ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣದ ಮುಂದುವರಿಕೆಯ ಬಗ್ಗೆ ಆತಂಕ ಪ್ರಾರಂಭವಾಗಿದೆ. ಕರೋನಾ ಪ್ರಕರಣಗಳು ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಇಳಿಮುಖವಾಗಿಲ್ಲ. ಈಗ ಮಕ್ಕಳ ಶೈಕ್ಷಣಿಕ ವರ್ಷವೂ ಕೂಡಾ ಮುಂದಿದೆ. ಶಾಲೆಗೆ ಹೋಗುವುದರಿಂದ ಸೋಂಕು ತಗಲಬಹುದೆಂಬ ಭೀತಿ ಸಾಂದರ್ಭಿಕವಾಗಿದೆ ಕೂಡಾ.

ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ಶೈಕ್ಷಣಿಕ ವರ್ಷದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುವುದು.
ಎನ್ ಸಿ ಇ ಆರ್ ಟಿ ಈ ಶೈಕ್ಷಣಿಕ ವರ್ಷಕ್ಕೆ ನಿಶಾಂಕ್ ಎಂದು ಕರೆಯಲಾಗುವ ಕ್ಯಾಲೆಂಡರನ್ನು ಒದಗಿಸಿದೆ.

ಮಕ್ಕಳು ಶಾಲೆಗೆ ಹೋಗದೆಯೇ ಆನ್ ಲೈನ್ ಶಿಕ್ಷಣವನ್ನು ಪಡೆಯುವುದರ ಬಗ್ಗೆ ತನ್ನ ಪಠ್ಯಕ್ರಮದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದರ ಬಗ್ಗೆಯೂ ಕೂಡಾ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಶಿಕ್ಷಕರಿಗೆ ಮಾರ್ಗದರ್ಶಿ ಸೂಚನೆಗಳನ್ನು ನೀಡಿದೆ.

ಅದರ ಪ್ರಕಾರ ಆಯಾ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕ ಸಿಬ್ಬಂದಿಯೊಡನೆ ಯೋಜನೆಗಳನ್ನು ರೂಪಿಸಿಕೊಂಡು ತಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.

ನಿಶಾಂಕ್ ಕಲಿಕೆಯ ಪ್ರತಿಫಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿವಾರಕ್ಕೂ ಯಾವ ರೀತಿಯಲ್ಲಿ ಪಠ್ಯಕ್ರಮವನ್ನು ಅನುಸರಿಸಬೇಕು ಮತ್ತು ಪಾಠವನ್ನು ಯೋಜಿಸಬೇಕು ಎಂದು ನಕಾಶೆಯನ್ನು ರೂಪಿಸಿದೆ. ಅದು ಈ ಮೊದಲು ಇದ್ದ ಪಠ್ಯಕ್ರಮವನ್ನು ಆಧರಿಸಿದ್ದು ಅದಕ್ಕೆ ಪೂರಕವಾಗಿರುವಂತಹ ಸವಾಲುಗಳನ್ನು, ವಿವರಗಳನ್ನು, ಅಧ್ಯಯನಕ್ಕೆ ಪೂರಕವಾಗಿರುವ ವಸ್ತುಗಳನ್ನು ಒಳಗೊಂಡಿರುತ್ತದೆ.

ಹಾಗಾಗಿ ಪೋಷಕರು ಕಂಗಾಲು ಪಡುವುದರ ಅಗತ್ಯವಿಲ್ಲ. ಹಾಗೆಯೇ ಮುಖ್ಯವಾಗಿ ಶಾಲೆಗೆ ನೇರವಾಗಿ ಹೋಗದಿದ್ದರೂ ಅಗತ್ಯವಿರುವ ದಾಖಲಾತಿಯನ್ನು ಮಾಡುವುದು, ಮರುದಾಖಲಾತಿ ಮಾಡಿಸುವುದು, ಶಾಲೆಗೆ ಅಗತ್ಯವಿರುವ ಶುಲ್ಕಗಳನ್ನು ಪಾವತಿ ಮಾಡುವುದು; ಇತ್ಯಾದಿ ಅಧಿಕೃತ ಮತ್ತು ಔಪಚಾರಿಕ ಕಛೇರಿಯ ಕರ್ತವ್ಯಗಳನ್ನು ನೆರವೇರಿಸಬೇಕು.

ಹಾಗೆಯೇ ತೀರಾ ಸಣ್ಣ ಮಕ್ಕಳಾಗಿದ್ದು, ಅಂಗನವಾಡಿ ಅಥವಾ ಪ್ರೀಕೆಜಿ, ಎಲ್ ಕೆ ಜಿ, ಯು ಕೆ ಜಿಗೆ ಹೋಗುವಂತಹ ವಯಸ್ಸಿನ ಮಕ್ಕಳಿಗಾದರೆ ಶಾಲೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಧಾರಾಳವಾಗಿ ಬಿಟ್ಟುಬಿಡಿ. ಒಂದನೆಯ ತರಗತಿಯ ಮಕ್ಕಳಿಗಾದರೆ ದಾಖಲಾತಿ, ಅಧಿಕೃತ ನೋಂದಣಿ ಇತ್ಯಾದಿಗಳ ಪ್ರಕ್ರಿಯೆಗಳ ಬಗ್ಗೆ ಗಮನ ಕೊಟ್ಟಿರಿ.

ಆರು ಅಥವಾ ಏಳನೆಯ ವಯಸ್ಸಿನ ಮಕ್ಕಳಿಗೆ ಶಾಲೆಯಲ್ಲಿ ಅಧಿಕೃತ ದಾಖಲು ಮಾಡಿದ್ದರೂ, ಭೌತಿಕವಾಗಿ ಶಾಲೆಗೆ ಹೋಗದಿದ್ದರೂ ಆ ಶಾಲೆಯಲ್ಲಿ ಅನುಸರಿಸುವ ಪಠ್ಯ ಮಾದರಿ ಅಥವಾ ಸಿಲಬಸ್‍ಗಳ ಬಗ್ಗೆ ತಿಳಿದುಕೊಂಡು ಮನೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ. ತಾವೇ ಹೇಳಿಕೊಡುವುದು. ಶಾಲೆಯವರು ಆನ್ ಲೈನ್ ತರಗತಿಗಳನ್ನು ಆ ಮಕ್ಕಳಿಗೂ ಮಾಡಿದ್ದರೆ ಉಪಯೋಗಿಸಿಕೊಳ್ಳುವುದು; ಇತ್ಯಾದಿ.

ಮುಖ್ಯವಾಗಿ ಮಕ್ಕಳಿಗೆ ಒತ್ತಡ ರಹಿತವಾಗಿ ಮತ್ತು ನಲಿ ಕಲಿ ಮಾದರಿಯ ಶಿಕ್ಷಣದ ಅಗತ್ಯವಿರುವುದರಿಂದ ಆಟದ ಮೂಲಕ ಪಾಠವಾಗುವಂತೆ ನಿಗಾ ವಹಿಸಿ. ಮನೆಯವರಿಗೂ ಕೂಡಾ ಮಕ್ಕಳಿಗೆ ಯೋಗ್ಯ ಸಮಯ ಅಥವಾ ಕ್ವಾಲಿಟಿ ಟೈಂ ಕೊಡುವುದಕ್ಕೆ ಸೂಕ್ತವಾದ ಅವಕಾಶವಿದು. ಒಂದು ವೇಳೆ ಉದ್ಯೋಗಸ್ಥ ಪೆÇೀಷಕರಾಗಿದ್ದರೆ ಅವರೂ ಕೂಡಾ ತಮ್ಮಲ್ಲಿ ಕೆಲವು ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿದೆ. ಶಾಲೆಗೆ ಹೋಗುವುದು ನಿಂತರೂ ಶಿಕ್ಷಣ ನಿಲ್ಲಬಾರದು.

ಏಕೆಂದರೆ ಶಿಕ್ಷಣವೆನ್ನುವುದು ಪ್ರಕ್ರಿಯೆಯ ಸ್ವರೂಪದಲ್ಲಿದ್ದು, ಸತತ ರೂಢಿಗೊಳಿಸುವ ಮತ್ತು ತರಬೇತಿ ನೀಡುವ ಸ್ವರೂಪದ್ದಾಗಿರುತ್ತದೆ. ಕಲಿಕೆಯ ರೂಢಿ ಮತ್ತು ಕಲಿಕೆಯ ವಿಷಯಗಳ ಜೊತೆಗೆ ಸಂಪರ್ಕ ತಪ್ಪಬಾರದು. ಶಾಲೆಗೆ ಕಳಿಸುವುದಿಲ್ಲ ಎಂದ ಕೂಡಲೇ ಶಾಲೆಯೊಡನೆ ಸಂಪರ್ಕ ತಪ್ಪಿಸಬಾರದು. ಅಧಿಕೃತವಾದ ದಾಖಲಾತಿ ಅಲ್ಲಿರಬೇಕು.

ಭೌತಿಕವಾಗಿ ಶಾಲೆಗೆ ಹೋಗುವ ಅಗತ್ಯವಿರುವುದಿಲ್ಲ ಅಷ್ಟೇ. ಹಾಗೆಯೇ ಮಕ್ಕಳು ತಮ್ಮ ಕಲಿಕೆಯನ್ನು ತಮ್ಮ ಆಸಕ್ತಿ ಮತ್ತು ಅನುಕೂಲಕರವಾದ ಸಮಯದಲ್ಲಿಯೇ ಮುಂದುವರಿಸಲು ಯೋಜನೆಗಳನ್ನು ರೂಪಿಸಬೇಕು ಮತ್ತು ಆ ದಿನಚರಿಯು ಅಥವಾ ವೇಳಾಪಟ್ಟಿಯು ಸರಿಯಾಗಿ ಅನುಸರಣೆಯಾಗುತ್ತಿದೆ ಎಂಬುದರ ಬಗ್ಗೆ ಗಮನವಿರಬೇಕು.

ಆಚೆ ಈಚೆ ದಿನಚರಿ ಮತ್ತು ವೇಳಾಪಟ್ಟಿಯು ವ್ಯತ್ಯಾಸವಾದರೂ ಪೂರ್ತಿ ನಿರ್ಲಕ್ಷ್ಯಕ್ಕೆ ಒಳಗಾಗುವಂತೆ ಆಗಬಾರದು. ಶಾಲೆಗಳಲ್ಲಿ ಅಸೈನ್ಮೆಂಟ್‍ಗಳನ್ನು ಮತ್ತು ಹೋಂವರ್ಕ್‍ಗಳನ್ನು ಕೂಡಾ ಕೊಡುವುದರಿಂದ ಕಲಿಕೆಯು ಕುಂಠಿತವೇನಾಗುವುದಿಲ್ಲ.
ಎಂಟನೆಯ ತರಗತಿಯ ಮೇಲಾದರೆ, ಆ ಮಕ್ಕಳು ಮುಕ್ತಶಾಲೆಯಲ್ಲಿಯೂ ಕೂಡಾ ಓದಬಹುದು. ಎನ್ ಐ ಓ ಎಸ್ ಮತ್ತು ಖಾನ್ ಅಕಾಡೆಮಿ ಇತ್ಯಾದಿ ಓಪನ್ ಸ್ಕೂಲಿಂಗ್ ಸಿಸ್ಟಮ್ಮುಗಳು ಇವೆ. ಗೂಗಲ್ಲಿನಲ್ಲಿ ವಿವರಗಳನ್ನು ಪಡೆಯಿರಿ.

ಮಕ್ಕಳಿಗೆ ವೇಳಾಪಟ್ಟಿ ತಯಾರಿಸಿ

ನೀವು ನಿಮ್ಮ ಮಕ್ಕಳಿಗೆ ತಯಾರಿಸಿರುವ ವೇಳಾಪಟ್ಟಿಯಲ್ಲಿ ದೈಹಿಕ ವ್ಯಾಯಾಮಕ್ಕೆ ಅವಕಾಶವಾಗುವ ಚಟುವಟಿಕೆಗಳನ್ನು ಸೇರಿಸಿ. ಪ್ಲೇಸ್ಟೋರ್‍ಗಳಲ್ಲಿ ಫಿಟಿಫೈ ನಂತಹ ಸಾಕಷ್ಟು ಆ್ಯಪ್‍ಗಳಿವೆ. ಅರ್ಧ ಗಂಟೆಯಿಂದ ಹಿಡಿದು ಒಂದು ಗಂಟೆಯವರೆಗೂ ಬೇಕಾದಂತೆ ಸಮಯ ನಿಗದಿಪಡಿಸಿಕೊಂಡು ಶಾರೀರಿಕ ವ್ಯಾಯಾಮಗಳನ್ನು ಮಾಡಬಹುದು.
ಭಾಷೆ ಕಲಿಕೆಯ ಬಗ್ಗೆ ಒತ್ತುಕೊಡಿ.

ನಮ್ಮ ಪ್ರಾದೇಶಿಕ ಅಥವಾ ಮಾತೃಭಾಷೆಯ ಕಲಿಕೆಯ ಜೊತೆಗೆ ಅತ್ಯಗತ್ಯವಾಗಿ ಇಂಗ್ಲೀಷ್ ಭಾಷೆಯ ಕಲಿಕೆಗೆ ಹೆಚ್ಚಿನ ಮಹತ್ವ ನೀಡಿ. ಪ್ರತಿದಿನವೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯನ್ನು, ಅಗತ್ಯವಿದ್ದಲ್ಲಿ ಹಿಂದಿಯನ್ನೂ ಪಠ್ಯೇತರವಾಗಿ ಕೂಡಾ ಅಭ್ಯಾಸ ಮಾಡಿಸಿ. ಎರಡು ಪುಟಗಳು ಓದುವುದು, ಒಂದು ಪುಟ ಬರೆಯುವುದು, ಉಕ್ತಲೇಖನ ಅಂದರೆ ಡಿಕ್ಟೇಶನ್ ಕೊಡುವುದು, ವ್ಯಾಕರಣ, ಸ್ವಂತ ವಾಕ್ಯರಚನೆಗಳಿಗೆ ಪ್ರೋತ್ಸಾಹಿಸುವುದು; ಇತ್ಯಾದಿಗಳನ್ನೆಲ್ಲಾ ಮಾಡುವುದು ಸೂಕ್ತ. ಭಾಷೆಯಲ್ಲಿ ಅವರಿಗೆ ಆಸಕ್ತಿ ಮತ್ತು ಸಾಮರ್ಥ್ಯ ಬಂದರೆ ಉಳಿದ ವಿಷಯಗಳನ್ನು ಅವರೇ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ.

ಮೆದುಳಿಗೆ ಕಸರತ್ತು ನೀಡುವಂತಹ ಆಟಗಳನ್ನು ಆಡಿಸಿ. ಸುಡೊಕು, ಅಂಕಿ ಸಂಕಿ ಸ್ವಾರಸ್ಯವಿರುವಂತ ಆಟಗಳು, ಪದಬಂಧ ಇತ್ಯಾದಿಗಳನ್ನು ಆಡಿಸುವುದು. ಬರೆಯುವ ಆಟಗಳನ್ನು, ಓದುವ ಆಟಗಳನ್ನು ಆಡಿಸಿ. ಎಲ್ಲವನ್ನೂ ಒಂದೇ ದಿನ ಮಾಡಬೇಕೆಂದೇನಿಲ್ಲ. ಒಂದೊಂದು ದಿನ ಒಂದೊಂದು ಇರಲಿ. ಆದರೆ ಈ ನಲಿ ಕಲಿ, ಆಟ ಪಾಠ ಕಾರ್ಯಕ್ರಮ ನಿಲ್ಲದೇ ಇರಲಿ.

ಆಕ್ಟೀವ್ ಆನ್ ಲೈನ್ ತರಗತಿಗಳಲ್ಲಿ ಸಂಗೀತ ಗಾಯನ ಮತ್ತು ವಾದ್ಯಗಳನ್ನು ನುಡಿಸುವುದರ ಬಗ್ಗೆಯೂ ಕೂಡಾ ಉಚಿತ ತರಬೇತಿಗಳಿವೆ. ನೃತ್ಯದ ತರಗತಿಗಳಿವೆ. ಹಾಗೆಯೇ ಇತರ ಕರಕುಶಲ ವಸ್ತುಗಳ ಕುರಿತಾದ ತರಗತಿಗಳೂ, ಚಿತ್ರಬಿಡಿಸುವುದು, ಬಣ್ಣ ತುಂಬುವುದು; ಒಂದೆರಡಲ್ಲ, ಮಕ್ಕಳ ಯಾವುದೇ ಬಗೆಯ ಆಸಕ್ತಿಗೂ ಕೂಡಾ ನಮಗೆ ಮಾರ್ಗದರ್ಶನ ಸಿಗುತ್ತದೆ ಮತ್ತು ನೇರವಾಗಿ ತರಗತಿಗಳೇ ದೊರಕುತ್ತವೆ. ಆದರೆ ಅವುಗಳನ್ನು ನಮ್ಮ ವೇಳಾಪಟ್ಟಿಯಲ್ಲಿ ಅಳವಡಿಸಿಕೊಂಡು ಅನುಸರಿವುದು ನಮ್ಮ ಪಾಲಿನ ಬದ್ಧತೆಯಾಗಿರುತ್ತದೆ.

ವ್ಯಸನದಿಂದ ಬಿಡುಗಡೆ

ಫೋನ್ ವ್ಯಸನದಿಂದ ಮಕ್ಕಳನ್ನು ಬಿಡಿಸಬೇಕು ಎಂಬುದು ಬಹಳ ಪೋಷಕರು ಹೇಳುತ್ತಿರುತ್ತಾರೆ. ಮೊದಲು ಅವರು ಫೋನ್‍ಗಳ ವ್ಯಸನದಿಂದ ಹೊರಗೆ ಬಂದು ಮಕ್ಕಳೊಂದಿಗೆ ಜೊತೆ ಚಟುವಟಿಕೆಗಳಲ್ಲಿ ತೊಡಗುವುದನ್ನು ರೂಢಿಸಿಕೊಳ್ಳಬೇಕು. ಫೋನಿನ ಆಟಗಳಿಗಿಂತ ದೈಹಿಕವಾಗಿ ಪಾಲ್ಗೊಳ್ಳುವ ಆಟಗಳು ನಿಜಕ್ಕೂ ಮಕ್ಕಳಿಗೆ ಖುಷಿ ಕೊಡುತ್ತವೆ.

ನಮ್ಮ ಸಾಮಿಪ್ಯ ಮತ್ತು ನಮ್ಮ ಒಡನಾಟ ಹಾಗೂ ಚಟುವಟಿಕೆಗಳು ಫೋನಿಗಿಂದ ಆಕರ್ಷಕವಾಗಿದ್ದರೆ ಅವರು ಏಕೆ ಫೋನಿನ ಕಡೆಗೆ ಮುಖ ಮಾಡುತ್ತಾರೆ. ಮಕ್ಕಳಿಗೆ ಕುತೂಹಲ ಕೆರಳಿಸುವ ಮತ್ತು ಆನಂದ ನೀಡುವ ಯಾವುದೇ ಚಟುವಟಿಕೆಯಾಗಲಿ ಭಾಗವಹಿಸಲು ಆಸಕ್ತಿ ತೋರುತ್ತಾರೆ.

ನಮ್ಮ ಸಾಮಿಪ್ಯದಲ್ಲಿಯೂ ಮಕ್ಕಳು ಫೋನಿನ ಮೊರೆ ಹೋಗುತ್ತಾರೆಂದರೆ ನಮ್ಮ ಸಾಮಿಪ್ಯದ ಗುಣಮಟ್ಟವನ್ನು ನಾವು ಹೆಚ್ಚಿಸಿಕೊಳ್ಳಬೇಕು ಮತ್ತು ನಮ್ಮ ಚಟುವಟಿಕೆಗಳನ್ನು ಆಕರ್ಷಕಗೊಳಿಸಿಕೊಳ್ಳಬೇಕು ಎಂದೇ ಅರ್ಥ. ನಿರ್ಲಕ್ಷ್ಯ ತೋರಿದರೆ ಮಕ್ಕಳು ಸಂಪೂರ್ಣವಾಗಿ ಫೋನಿಗೆ ವ್ಯಸನಿಗಳಾಗುತ್ತಾರೆ. ಇದೂ ಕೂಡಾ ಮಾದಕ ವ್ಯಸನದಷ್ಟೇ ನಕಾರಾತ್ಮಕವಾದ ಪರಿಣಾಮಗಳನ್ನು ಮನಸ್ಸಿನ ಮೇಲೆ, ಸಂಬಂಧಗಳ ಮೇಲೆ, ಶೈಕ್ಷಣಿಕ ಪ್ರಗತಿಯ ಮೇಲೆ, ಕೊನೆಗೆ ದೇಹದ ಮೇಲೂ ಬೀರುತ್ತದೆ.

ಶೈಕ್ಷಣಿಕ ಕಲಿಕೆಯ ಜೊತೆ ಜೊತೆಗೆ ಜೀವನ ಕೌಶಲ್ಯದ ಶಿಕ್ಷಣವೂ ಕೂಡಾ ಮಕ್ಕಳಿಗೆ ಅಗತ್ಯವಾಗಿರುವುದೇ ಆಗಿದೆ. ಕಸುಬುಗಳು ಮತ್ತು ಉಪಕಸುಬುಗಳಾಗಬಹುದಾದಂತಹ ಕೌಶಲ್ಯದ ಚಟುವಟಿಕೆಗಳಲ್ಲಿ ಮಕ್ಕಳಲ್ಲಿ ಆಸಕ್ತಿ ಬೆಳೆಸಬಹುದು. ಬೇಕಿಂಗ್, ಗಾರ್ಡನಿಂಗ್, ಮರಗೆಲಸ, ಕುಂಬಾರಿಕೆ, ಬಣ್ಣ ಬಳಿಯುವುದು, ಹೈನುಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಕೃಷಿಯೇ ಮೊದಲಾದ ಕ್ಷೇತ್ರಗಳ ಬಗ್ಗೆ ಪರಿಚಯಾತ್ಮಕವಾದ ಚಟುವಟಿಕೆಗಳಲ್ಲಿ ತೊಡಗಿಸಿ.

ಆಯಾ ಪ್ರಾದೇಶಿಕ ಮತ್ತು ಕೌಟುಂಬಿಕ ಹಿನ್ನೆಲೆಗಳು ಪೂರಕವಾಗಿರುವಂತಹ ಕ್ಷೇತ್ರಗಳಲ್ಲಿ ಗಮನ ಹರಿಸುವಂತೆ ಪ್ರೋತ್ಸಾಹಿಸಿ. ಕಂಪ್ಯೂಟರ್ ಬಳಗೆಯ ಬಗ್ಗೆ ಸೂಕ್ತವಾದ ತರಬೇತಿ ನೀಡುವುದು ಬಹಳ ಒಳ್ಳೆಯದು. ಡಾಟಾ ಎಂಟ್ರಿ, ಟೈಪಿಂಗ್, ಅಕೌಂಟ್ಸ್, ಡಿಜಿಟಲ್ ಡಿಸೈನ್, ಇತ್ಯಾದಿ ಸಾಫ್ಟ್ ಸ್ಕಿಲ್‍ಗಳಲ್ಲಿ ತರಬೇತಿ ನೀಡಬಹುದು. ಯಾವುದೇ ಮಾಡಿದರೂ ವೇಳಾಪಟ್ಟಿಯಲ್ಲಿ ಅವುಗಳಿಗೆ ಸ್ಥಾನವಿರಲಿ ಮತ್ತು ನಿಯಮಿತವಾಗಿ ಅವುಗಳನ್ನು ಅನುಸರಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇರಲಿ.

ನೈತಿಕ ಶಿಕ್ಷಣ

ಇನ್ನು ನೈತಿಕ ಶಿಕ್ಷಣ ಬಹಳ ಮಹತ್ವದ್ದು. ನಾವು ಯಾವುದೇ ಬಿಕ್ಕಟ್ಟಿನ ಸ್ಥಿತಿಗಳಲ್ಲಿ ನಮ್ಮ ಆತಂಕಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತೇವೆ, ಇತರರೊಂದಿಗೆ ಹೇಗೆ ವರ್ತಿಸುತ್ತೇವೆ, ನಮ್ಮ ಸಂಬಂಧಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬ ಜೀವಂತ ಮಾದರಿಗಳನ್ನು ಮಕ್ಕಳ ಮುಂದಿಡುತ್ತಿರುತ್ತೇವೆ. ಅವರು ತಮಗೇ ಅರಿವಿಲ್ಲದಂತೆ ನಮ್ಮ ಮಾತುಗಳನ್ನು ಪ್ರತಿಧ್ವನಿಸುತ್ತಿರುತ್ತಾರೆ.

ನಮ್ಮ ವರ್ತನೆಗಳಿಗೆ ಪ್ರತಿವರ್ತನೆಗಳನ್ನು ತೋರುತ್ತಿರುತ್ತಾರೆ ಮತ್ತು ನಮ್ಮ ನಡೆ ನುಡಿಗಳನ್ನು ಸೂಕ್ಷ್ಮವಾಗಿ ತಮ್ಮದಾಗಿಸಿಕೊಳ್ಳುತ್ತಿರುತ್ತಾರೆ. ಅವುಗಳು ಸರಿಯಾಗಿದ್ದರೆ ಮುಂದೆ ಅವು ಒಳಿತಾಗಿ ಪರಿಣಮಿಸುತ್ತವೆ. ಸರಿಯಿರದಿದ್ದರೆ ಕೆಟ್ಟದಾಗಿ ಪರಿಣಮಿಸುತ್ತವೆ. ಒಟ್ಟಾರೆ ಅವರ ಮುಂದಿನ ವ್ಯಕ್ತಿತ್ವದ ಪ್ರಕಟಣೆ ಮತ್ತು ವರ್ತನೆಗಳ ಪ್ರದರ್ಶನಕ್ಕೆ ನಾವೇ ಪ್ರೇರಣೆಯಾಗಿರುತ್ತೇವೆ ಎಂಬ ಹೊಣೆಗಾರಿಕೆಯಂತೂ ನಮಗಿರಲಿ.

ಎಲ್ಲರೂ ಮನೆಯಲ್ಲಿ ಇರುವಂತಹ ಈ ಕಾಲದಲ್ಲಿ ದಾಂಪತ್ಯ ಸಂಘರ್ಷಗಳಿಗೆ ಅವಕಾಶವಿಲ್ಲದಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾದ ಅಂಶ. ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಗಬಾರದು. ಈ ಎಚ್ಚರಿಕೆ ಇರಲಿ. ಅಪ್ಪ ಅಮ್ಮನ ಮನೆಯವರ ಬಗ್ಗೆ ನಕರಾತ್ಮಕವಾಗಿ ಮಾತಾಡುವುದು, ಅಮ್ಮ ಅಪ್ಪನ ಸಂಬಂಧಿಗಳ ಬಗ್ಗೆ ಆಡಿಕೊಳ್ಳುವುದು, ಪರಸ್ಪರ ದೋಷಾರೋಪಣೆ ಮಾಡುವುದು, ಅಥವಾ ಯಾವುದೇ ಬಗೆಯ ಸಂಘರ್ಷಗಳು ಮಗುವಿನ ಮನಸ್ಸಿನ ಮೇಲೆ ನಕಾರಾತ್ಮಕವಾದ ಪರಿಣಾಮವನ್ನೇ ಉಂಟುಮಾಡುವುದು. ಈ ಬಗ್ಗೆಯೂ ನಾವು ಎಚ್ಚರಿಕೆ ವಹಿಸಬೇಕಾಗಿದೆ.

ವಾಸ್ತವವಾಗಿ ಗಂಡ ಹೆಂಡತಿ ತಮ್ಮ ಮಕ್ಕಳಿಗೆ ಮಾದರಿಯಾಗುವಂತೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಕುಳಿತು ಸೌಜನ್ಯಪೂರ್ವಕವಾಗಿ ಮಾತಾಡಿಕೊಂಡು, ಚರ್ಚೆ ಮಾಡಿಕೊಂಡು, ಸಂವಾದಗಳನ್ನು ಮಾಡಿಕೊಂಡು ಬಗೆ ಹರಿಸಿಕೊಳ್ಳುವುದರಿಂದ ಮಕ್ಕಳಿಗೆ ಒಂದು ಒಳ್ಳೆಯ ಮಾದರಿ ದೊರಕಿದಂತಾಗುತ್ತದೆ.

ಅಷ್ಟೇ ಅಲ್ಲದೇ ಕ್ಷಮೆ ಕೇಳುವುದು, ಕೃತಜ್ಞತೆಗಳನ್ನು ಅರ್ಪಿಸುವುದು, ಕ್ಷಮಿಸುವುದು, ಪಶ್ಚಾತ್ತಾಪ ಪಡುವುದು; ಇತ್ಯಾದಿ ಸಂಬಂಧಗಳನ್ನು ಜೀವಂತವಾಗಿರಿಸಿಕೊಳ್ಳುವ ಮತ್ತು ಮುಂದುವರಿಸುವಂತಹ ಸಕಾರಾತ್ಮಕ ಗುಣಗಳ ಮಾದರಿಗಳನ್ನು ಮಕ್ಕಳಿಗೆ ಕಟ್ಟಿಕೊಡುವುದು ಅತ್ಯಂತ ಉತ್ತಮವಾದ ಕೆಲಸ.

ಅಂತರ್ಜಾಲದ ಸಂಪೂರ್ಣ ಬಳಕೆಗೆ ಸೂಕ್ತ ಕಾಲ:
ಡಿಜಿಟಲ್ ಕಲಿಕೆಗೆ ಮಿತಿ ಇಲ್ಲ. ವಿಶ್ವದ ಅತ್ಯುತ್ತಮ ತರಗತಿಗಳನ್ನು, ಮಾಹಿತಿಗಳನ್ನು ನಾವು ಪಡೆಯಬಹುದು. ವಿಶ್ವದ ಆಗುಹೋಗುಗಳನ್ನು ಗಮನಿಸುವ, ಉತ್ತಮವಾಗಿರುವ ಅಥವಾ ಅಗತ್ಯವಾಗಿರುವ ಕಾರ್ಯಕ್ರಮಗಳನ್ನು ಅನುಸರಿಸುವ ಮತ್ತು ಅನುಕರಿಸುವ ಪ್ರಯೋಗಗಳಿಗೂ ತೊಡಗಿಸಿಕೊಳ್ಳಬಹುದು.

ಸುಳ್ಳು ಸುದ್ಧಿಗಳು ಮತ್ತು ದ್ವೇಷ ಭಾವನೆಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಮಾದ್ಯಮವಾಗಿರುವ ಈ ಅಂತರ್ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗಿರುವುದೂ ಅಷ್ಟೇ ಅಗತ್ಯ. ಮಕ್ಕಳಿಗೂ ಜೂಮ್ ಅಥವಾ ಗೂಗಲ್ ಮೀಟಿಂಗಲ್ಲಿ ಅವಕಾಶಗಳನ್ನು ಕಲ್ಪಿಸಿ ಒಂದಿಷ್ಟು ಮಾತುಕತೆಯಾಡಿಸುವ, ತಮ್ಮ ವಿಷಯಗಳನ್ನು ಹಂಚಿಕೊಳ್ಳುವ ಚಟುವಟಿಕೆಗಳು ನಡೆದರೆ, ಮಕ್ಕಳು ತಮ್ಮ ತಮ್ಮಲ್ಲಿ ಪ್ರೇರಣೆಗಳನ್ನು ಹಂಚಿಕೊಳ್ಳುವವರಾಗುತ್ತಾರೆ.

ಬಡವರಿಗೆ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ

ಮೇಲೆ ಹೇಳಿರುವಂತಹ ವ್ಯವಸ್ಥೆಯನ್ನು ಒದಗಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎಂಬ ಮಾತು ನಿಜ. ಅನಕ್ಷರಸ್ಥ ಸಮೂಹಗಳಿಗೆ, ಇಂತಹ ಸೌಲಭ್ಯಗಳಿಂದ ವಂಚಿತರಾಗಿರುವವರಿಗೆ ಸಮಾಜಮುಖಿ ಗೆಳೆಯರು ಮತ್ತು ಜೀವಪರ ಕಾಳಜಿಯ ಸಂಘಗಳು ಒಂದಿಷ್ಟು ಸಂಘಟಿತವಾಗಿ ಕೆಲಸ ಮಾಡಬೇಕು.

ಕರೋನಾದ ಬಿಕ್ಕಟ್ಟಿನ ಸಮಯದಲ್ಲಿ ಆಹಾರ ಮತ್ತು ಪ್ರಯಾಣ ಇತ್ಯಾದಿ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದಂತೆ, ಬಡ ಮಕ್ಕಳ ಮತ್ತು ನಿರ್ಲಕ್ಷಿತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಗಮನ ಕೊಡಬೇಕಾದ ಅಗತ್ಯವೂ ಮತ್ತು ಅನಿವಾರ್ಯತೆಯೂ ನಮ್ಮ ಮುಂದಿದೆ.

ಸಮಾನ ಆಶಯವುಳ್ಳ ಗೆಳೆಯರ ಸಣ್ಣ ಸಣ್ಣ ಗುಂಪುಗಳು, ಸಂಘ ಸಂಸ್ಥೆಗಳು ಮನಸ್ಸು ಮಾಡಿ ಕೈ ಜೋಡಿಸಿ ಹೊಣೆಹೊತ್ತರೆ ಅಸಾಧ್ಯವೇನಾಗುವುದಿಲ್ಲ.
ವಾಸ್ತವವಾಗಿ ಅವರು ಎದುರಿಸುತ್ತಿರುವ ಸಮಸ್ಯೆ ಮತ್ತು ಕೊರತೆಯನ್ನು ಅವರ ಮುಂದಿನ ಪೀಳಿಗೆಗಳು ಎದುರಿಸದಂತಹ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಂತೆಯೇ ಆಗುತ್ತದೆ.

ವ್ಯಕ್ತಿಗಳು ಒಗ್ಗೂಡಿದರೆ ಹಲವಾರು ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಯೋಜನೆಗಳನ್ನು ಸಿದ್ಧಪಡಿಸಬಹುದು. ಇಂತಹ ಸಮೂಹದ ಅಥವಾ ವರ್ಗಗಳ ಮಕ್ಕಳಿಗೆ ಶಿಕ್ಷಣವೆಂಬುದು ನಿಜಕ್ಕೂ ಜೀವನ ಭದ್ರತೆ ನೀಡುವಂತದ್ದಾಗಿರುತ್ತದೆ.

ಇಂಗ್ಲೀಷ್ ಕಲಿಕೆ, ಕಂಪ್ಯೂಟರ್ ಬಳಕೆ, ಜೀವನ ಕೌಶಲ್ಯಗಳ ತರಬೇತಿ, ಉತ್ಪಾದಕ ಚಿಂತನೆ ಮತ್ತು ಚಟುವಟಿಕೆಗಳ ಪರಿಚಯ ಮತ್ತು ತರಬೇತಿ ಅವರನ್ನು ಬಹಳಷ್ಟು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಕಾಪಾಡುತ್ತದೆ. ಜೀವನಮಟ್ಟವನ್ನು ಸುಧಾರಿಸಿಕೊಳ್ಳುವುದರಲ್ಲಿ ಈ ತರಬೇತಿಗಳು ಕಾಣ್ಕೆ ನೀಡುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending