Connect with us

ದಿನದ ಸುದ್ದಿ

ಕರೋನ ಬಿಕ್ಕಟ್ಟಿನಲ್ಲಿ ಮಕ್ಕಳಿಗೆ ಶಾಲೆ ಬೇಕೆ ಬೇಡವೇ..?

Published

on

  • ಯೋಗೇಶ್ ಮಾಸ್ಟರ್

ಹಳಷ್ಟು ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣದ ಮುಂದುವರಿಕೆಯ ಬಗ್ಗೆ ಆತಂಕ ಪ್ರಾರಂಭವಾಗಿದೆ. ಕರೋನಾ ಪ್ರಕರಣಗಳು ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಇಳಿಮುಖವಾಗಿಲ್ಲ. ಈಗ ಮಕ್ಕಳ ಶೈಕ್ಷಣಿಕ ವರ್ಷವೂ ಕೂಡಾ ಮುಂದಿದೆ. ಶಾಲೆಗೆ ಹೋಗುವುದರಿಂದ ಸೋಂಕು ತಗಲಬಹುದೆಂಬ ಭೀತಿ ಸಾಂದರ್ಭಿಕವಾಗಿದೆ ಕೂಡಾ.

ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ಶೈಕ್ಷಣಿಕ ವರ್ಷದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುವುದು.
ಎನ್ ಸಿ ಇ ಆರ್ ಟಿ ಈ ಶೈಕ್ಷಣಿಕ ವರ್ಷಕ್ಕೆ ನಿಶಾಂಕ್ ಎಂದು ಕರೆಯಲಾಗುವ ಕ್ಯಾಲೆಂಡರನ್ನು ಒದಗಿಸಿದೆ.

ಮಕ್ಕಳು ಶಾಲೆಗೆ ಹೋಗದೆಯೇ ಆನ್ ಲೈನ್ ಶಿಕ್ಷಣವನ್ನು ಪಡೆಯುವುದರ ಬಗ್ಗೆ ತನ್ನ ಪಠ್ಯಕ್ರಮದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದರ ಬಗ್ಗೆಯೂ ಕೂಡಾ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಶಿಕ್ಷಕರಿಗೆ ಮಾರ್ಗದರ್ಶಿ ಸೂಚನೆಗಳನ್ನು ನೀಡಿದೆ.

ಅದರ ಪ್ರಕಾರ ಆಯಾ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕ ಸಿಬ್ಬಂದಿಯೊಡನೆ ಯೋಜನೆಗಳನ್ನು ರೂಪಿಸಿಕೊಂಡು ತಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.

ನಿಶಾಂಕ್ ಕಲಿಕೆಯ ಪ್ರತಿಫಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿವಾರಕ್ಕೂ ಯಾವ ರೀತಿಯಲ್ಲಿ ಪಠ್ಯಕ್ರಮವನ್ನು ಅನುಸರಿಸಬೇಕು ಮತ್ತು ಪಾಠವನ್ನು ಯೋಜಿಸಬೇಕು ಎಂದು ನಕಾಶೆಯನ್ನು ರೂಪಿಸಿದೆ. ಅದು ಈ ಮೊದಲು ಇದ್ದ ಪಠ್ಯಕ್ರಮವನ್ನು ಆಧರಿಸಿದ್ದು ಅದಕ್ಕೆ ಪೂರಕವಾಗಿರುವಂತಹ ಸವಾಲುಗಳನ್ನು, ವಿವರಗಳನ್ನು, ಅಧ್ಯಯನಕ್ಕೆ ಪೂರಕವಾಗಿರುವ ವಸ್ತುಗಳನ್ನು ಒಳಗೊಂಡಿರುತ್ತದೆ.

ಹಾಗಾಗಿ ಪೋಷಕರು ಕಂಗಾಲು ಪಡುವುದರ ಅಗತ್ಯವಿಲ್ಲ. ಹಾಗೆಯೇ ಮುಖ್ಯವಾಗಿ ಶಾಲೆಗೆ ನೇರವಾಗಿ ಹೋಗದಿದ್ದರೂ ಅಗತ್ಯವಿರುವ ದಾಖಲಾತಿಯನ್ನು ಮಾಡುವುದು, ಮರುದಾಖಲಾತಿ ಮಾಡಿಸುವುದು, ಶಾಲೆಗೆ ಅಗತ್ಯವಿರುವ ಶುಲ್ಕಗಳನ್ನು ಪಾವತಿ ಮಾಡುವುದು; ಇತ್ಯಾದಿ ಅಧಿಕೃತ ಮತ್ತು ಔಪಚಾರಿಕ ಕಛೇರಿಯ ಕರ್ತವ್ಯಗಳನ್ನು ನೆರವೇರಿಸಬೇಕು.

ಹಾಗೆಯೇ ತೀರಾ ಸಣ್ಣ ಮಕ್ಕಳಾಗಿದ್ದು, ಅಂಗನವಾಡಿ ಅಥವಾ ಪ್ರೀಕೆಜಿ, ಎಲ್ ಕೆ ಜಿ, ಯು ಕೆ ಜಿಗೆ ಹೋಗುವಂತಹ ವಯಸ್ಸಿನ ಮಕ್ಕಳಿಗಾದರೆ ಶಾಲೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಧಾರಾಳವಾಗಿ ಬಿಟ್ಟುಬಿಡಿ. ಒಂದನೆಯ ತರಗತಿಯ ಮಕ್ಕಳಿಗಾದರೆ ದಾಖಲಾತಿ, ಅಧಿಕೃತ ನೋಂದಣಿ ಇತ್ಯಾದಿಗಳ ಪ್ರಕ್ರಿಯೆಗಳ ಬಗ್ಗೆ ಗಮನ ಕೊಟ್ಟಿರಿ.

ಆರು ಅಥವಾ ಏಳನೆಯ ವಯಸ್ಸಿನ ಮಕ್ಕಳಿಗೆ ಶಾಲೆಯಲ್ಲಿ ಅಧಿಕೃತ ದಾಖಲು ಮಾಡಿದ್ದರೂ, ಭೌತಿಕವಾಗಿ ಶಾಲೆಗೆ ಹೋಗದಿದ್ದರೂ ಆ ಶಾಲೆಯಲ್ಲಿ ಅನುಸರಿಸುವ ಪಠ್ಯ ಮಾದರಿ ಅಥವಾ ಸಿಲಬಸ್‍ಗಳ ಬಗ್ಗೆ ತಿಳಿದುಕೊಂಡು ಮನೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ. ತಾವೇ ಹೇಳಿಕೊಡುವುದು. ಶಾಲೆಯವರು ಆನ್ ಲೈನ್ ತರಗತಿಗಳನ್ನು ಆ ಮಕ್ಕಳಿಗೂ ಮಾಡಿದ್ದರೆ ಉಪಯೋಗಿಸಿಕೊಳ್ಳುವುದು; ಇತ್ಯಾದಿ.

ಮುಖ್ಯವಾಗಿ ಮಕ್ಕಳಿಗೆ ಒತ್ತಡ ರಹಿತವಾಗಿ ಮತ್ತು ನಲಿ ಕಲಿ ಮಾದರಿಯ ಶಿಕ್ಷಣದ ಅಗತ್ಯವಿರುವುದರಿಂದ ಆಟದ ಮೂಲಕ ಪಾಠವಾಗುವಂತೆ ನಿಗಾ ವಹಿಸಿ. ಮನೆಯವರಿಗೂ ಕೂಡಾ ಮಕ್ಕಳಿಗೆ ಯೋಗ್ಯ ಸಮಯ ಅಥವಾ ಕ್ವಾಲಿಟಿ ಟೈಂ ಕೊಡುವುದಕ್ಕೆ ಸೂಕ್ತವಾದ ಅವಕಾಶವಿದು. ಒಂದು ವೇಳೆ ಉದ್ಯೋಗಸ್ಥ ಪೆÇೀಷಕರಾಗಿದ್ದರೆ ಅವರೂ ಕೂಡಾ ತಮ್ಮಲ್ಲಿ ಕೆಲವು ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿದೆ. ಶಾಲೆಗೆ ಹೋಗುವುದು ನಿಂತರೂ ಶಿಕ್ಷಣ ನಿಲ್ಲಬಾರದು.

ಏಕೆಂದರೆ ಶಿಕ್ಷಣವೆನ್ನುವುದು ಪ್ರಕ್ರಿಯೆಯ ಸ್ವರೂಪದಲ್ಲಿದ್ದು, ಸತತ ರೂಢಿಗೊಳಿಸುವ ಮತ್ತು ತರಬೇತಿ ನೀಡುವ ಸ್ವರೂಪದ್ದಾಗಿರುತ್ತದೆ. ಕಲಿಕೆಯ ರೂಢಿ ಮತ್ತು ಕಲಿಕೆಯ ವಿಷಯಗಳ ಜೊತೆಗೆ ಸಂಪರ್ಕ ತಪ್ಪಬಾರದು. ಶಾಲೆಗೆ ಕಳಿಸುವುದಿಲ್ಲ ಎಂದ ಕೂಡಲೇ ಶಾಲೆಯೊಡನೆ ಸಂಪರ್ಕ ತಪ್ಪಿಸಬಾರದು. ಅಧಿಕೃತವಾದ ದಾಖಲಾತಿ ಅಲ್ಲಿರಬೇಕು.

ಭೌತಿಕವಾಗಿ ಶಾಲೆಗೆ ಹೋಗುವ ಅಗತ್ಯವಿರುವುದಿಲ್ಲ ಅಷ್ಟೇ. ಹಾಗೆಯೇ ಮಕ್ಕಳು ತಮ್ಮ ಕಲಿಕೆಯನ್ನು ತಮ್ಮ ಆಸಕ್ತಿ ಮತ್ತು ಅನುಕೂಲಕರವಾದ ಸಮಯದಲ್ಲಿಯೇ ಮುಂದುವರಿಸಲು ಯೋಜನೆಗಳನ್ನು ರೂಪಿಸಬೇಕು ಮತ್ತು ಆ ದಿನಚರಿಯು ಅಥವಾ ವೇಳಾಪಟ್ಟಿಯು ಸರಿಯಾಗಿ ಅನುಸರಣೆಯಾಗುತ್ತಿದೆ ಎಂಬುದರ ಬಗ್ಗೆ ಗಮನವಿರಬೇಕು.

ಆಚೆ ಈಚೆ ದಿನಚರಿ ಮತ್ತು ವೇಳಾಪಟ್ಟಿಯು ವ್ಯತ್ಯಾಸವಾದರೂ ಪೂರ್ತಿ ನಿರ್ಲಕ್ಷ್ಯಕ್ಕೆ ಒಳಗಾಗುವಂತೆ ಆಗಬಾರದು. ಶಾಲೆಗಳಲ್ಲಿ ಅಸೈನ್ಮೆಂಟ್‍ಗಳನ್ನು ಮತ್ತು ಹೋಂವರ್ಕ್‍ಗಳನ್ನು ಕೂಡಾ ಕೊಡುವುದರಿಂದ ಕಲಿಕೆಯು ಕುಂಠಿತವೇನಾಗುವುದಿಲ್ಲ.
ಎಂಟನೆಯ ತರಗತಿಯ ಮೇಲಾದರೆ, ಆ ಮಕ್ಕಳು ಮುಕ್ತಶಾಲೆಯಲ್ಲಿಯೂ ಕೂಡಾ ಓದಬಹುದು. ಎನ್ ಐ ಓ ಎಸ್ ಮತ್ತು ಖಾನ್ ಅಕಾಡೆಮಿ ಇತ್ಯಾದಿ ಓಪನ್ ಸ್ಕೂಲಿಂಗ್ ಸಿಸ್ಟಮ್ಮುಗಳು ಇವೆ. ಗೂಗಲ್ಲಿನಲ್ಲಿ ವಿವರಗಳನ್ನು ಪಡೆಯಿರಿ.

ಮಕ್ಕಳಿಗೆ ವೇಳಾಪಟ್ಟಿ ತಯಾರಿಸಿ

ನೀವು ನಿಮ್ಮ ಮಕ್ಕಳಿಗೆ ತಯಾರಿಸಿರುವ ವೇಳಾಪಟ್ಟಿಯಲ್ಲಿ ದೈಹಿಕ ವ್ಯಾಯಾಮಕ್ಕೆ ಅವಕಾಶವಾಗುವ ಚಟುವಟಿಕೆಗಳನ್ನು ಸೇರಿಸಿ. ಪ್ಲೇಸ್ಟೋರ್‍ಗಳಲ್ಲಿ ಫಿಟಿಫೈ ನಂತಹ ಸಾಕಷ್ಟು ಆ್ಯಪ್‍ಗಳಿವೆ. ಅರ್ಧ ಗಂಟೆಯಿಂದ ಹಿಡಿದು ಒಂದು ಗಂಟೆಯವರೆಗೂ ಬೇಕಾದಂತೆ ಸಮಯ ನಿಗದಿಪಡಿಸಿಕೊಂಡು ಶಾರೀರಿಕ ವ್ಯಾಯಾಮಗಳನ್ನು ಮಾಡಬಹುದು.
ಭಾಷೆ ಕಲಿಕೆಯ ಬಗ್ಗೆ ಒತ್ತುಕೊಡಿ.

ನಮ್ಮ ಪ್ರಾದೇಶಿಕ ಅಥವಾ ಮಾತೃಭಾಷೆಯ ಕಲಿಕೆಯ ಜೊತೆಗೆ ಅತ್ಯಗತ್ಯವಾಗಿ ಇಂಗ್ಲೀಷ್ ಭಾಷೆಯ ಕಲಿಕೆಗೆ ಹೆಚ್ಚಿನ ಮಹತ್ವ ನೀಡಿ. ಪ್ರತಿದಿನವೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯನ್ನು, ಅಗತ್ಯವಿದ್ದಲ್ಲಿ ಹಿಂದಿಯನ್ನೂ ಪಠ್ಯೇತರವಾಗಿ ಕೂಡಾ ಅಭ್ಯಾಸ ಮಾಡಿಸಿ. ಎರಡು ಪುಟಗಳು ಓದುವುದು, ಒಂದು ಪುಟ ಬರೆಯುವುದು, ಉಕ್ತಲೇಖನ ಅಂದರೆ ಡಿಕ್ಟೇಶನ್ ಕೊಡುವುದು, ವ್ಯಾಕರಣ, ಸ್ವಂತ ವಾಕ್ಯರಚನೆಗಳಿಗೆ ಪ್ರೋತ್ಸಾಹಿಸುವುದು; ಇತ್ಯಾದಿಗಳನ್ನೆಲ್ಲಾ ಮಾಡುವುದು ಸೂಕ್ತ. ಭಾಷೆಯಲ್ಲಿ ಅವರಿಗೆ ಆಸಕ್ತಿ ಮತ್ತು ಸಾಮರ್ಥ್ಯ ಬಂದರೆ ಉಳಿದ ವಿಷಯಗಳನ್ನು ಅವರೇ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ.

ಮೆದುಳಿಗೆ ಕಸರತ್ತು ನೀಡುವಂತಹ ಆಟಗಳನ್ನು ಆಡಿಸಿ. ಸುಡೊಕು, ಅಂಕಿ ಸಂಕಿ ಸ್ವಾರಸ್ಯವಿರುವಂತ ಆಟಗಳು, ಪದಬಂಧ ಇತ್ಯಾದಿಗಳನ್ನು ಆಡಿಸುವುದು. ಬರೆಯುವ ಆಟಗಳನ್ನು, ಓದುವ ಆಟಗಳನ್ನು ಆಡಿಸಿ. ಎಲ್ಲವನ್ನೂ ಒಂದೇ ದಿನ ಮಾಡಬೇಕೆಂದೇನಿಲ್ಲ. ಒಂದೊಂದು ದಿನ ಒಂದೊಂದು ಇರಲಿ. ಆದರೆ ಈ ನಲಿ ಕಲಿ, ಆಟ ಪಾಠ ಕಾರ್ಯಕ್ರಮ ನಿಲ್ಲದೇ ಇರಲಿ.

ಆಕ್ಟೀವ್ ಆನ್ ಲೈನ್ ತರಗತಿಗಳಲ್ಲಿ ಸಂಗೀತ ಗಾಯನ ಮತ್ತು ವಾದ್ಯಗಳನ್ನು ನುಡಿಸುವುದರ ಬಗ್ಗೆಯೂ ಕೂಡಾ ಉಚಿತ ತರಬೇತಿಗಳಿವೆ. ನೃತ್ಯದ ತರಗತಿಗಳಿವೆ. ಹಾಗೆಯೇ ಇತರ ಕರಕುಶಲ ವಸ್ತುಗಳ ಕುರಿತಾದ ತರಗತಿಗಳೂ, ಚಿತ್ರಬಿಡಿಸುವುದು, ಬಣ್ಣ ತುಂಬುವುದು; ಒಂದೆರಡಲ್ಲ, ಮಕ್ಕಳ ಯಾವುದೇ ಬಗೆಯ ಆಸಕ್ತಿಗೂ ಕೂಡಾ ನಮಗೆ ಮಾರ್ಗದರ್ಶನ ಸಿಗುತ್ತದೆ ಮತ್ತು ನೇರವಾಗಿ ತರಗತಿಗಳೇ ದೊರಕುತ್ತವೆ. ಆದರೆ ಅವುಗಳನ್ನು ನಮ್ಮ ವೇಳಾಪಟ್ಟಿಯಲ್ಲಿ ಅಳವಡಿಸಿಕೊಂಡು ಅನುಸರಿವುದು ನಮ್ಮ ಪಾಲಿನ ಬದ್ಧತೆಯಾಗಿರುತ್ತದೆ.

ವ್ಯಸನದಿಂದ ಬಿಡುಗಡೆ

ಫೋನ್ ವ್ಯಸನದಿಂದ ಮಕ್ಕಳನ್ನು ಬಿಡಿಸಬೇಕು ಎಂಬುದು ಬಹಳ ಪೋಷಕರು ಹೇಳುತ್ತಿರುತ್ತಾರೆ. ಮೊದಲು ಅವರು ಫೋನ್‍ಗಳ ವ್ಯಸನದಿಂದ ಹೊರಗೆ ಬಂದು ಮಕ್ಕಳೊಂದಿಗೆ ಜೊತೆ ಚಟುವಟಿಕೆಗಳಲ್ಲಿ ತೊಡಗುವುದನ್ನು ರೂಢಿಸಿಕೊಳ್ಳಬೇಕು. ಫೋನಿನ ಆಟಗಳಿಗಿಂತ ದೈಹಿಕವಾಗಿ ಪಾಲ್ಗೊಳ್ಳುವ ಆಟಗಳು ನಿಜಕ್ಕೂ ಮಕ್ಕಳಿಗೆ ಖುಷಿ ಕೊಡುತ್ತವೆ.

ನಮ್ಮ ಸಾಮಿಪ್ಯ ಮತ್ತು ನಮ್ಮ ಒಡನಾಟ ಹಾಗೂ ಚಟುವಟಿಕೆಗಳು ಫೋನಿಗಿಂದ ಆಕರ್ಷಕವಾಗಿದ್ದರೆ ಅವರು ಏಕೆ ಫೋನಿನ ಕಡೆಗೆ ಮುಖ ಮಾಡುತ್ತಾರೆ. ಮಕ್ಕಳಿಗೆ ಕುತೂಹಲ ಕೆರಳಿಸುವ ಮತ್ತು ಆನಂದ ನೀಡುವ ಯಾವುದೇ ಚಟುವಟಿಕೆಯಾಗಲಿ ಭಾಗವಹಿಸಲು ಆಸಕ್ತಿ ತೋರುತ್ತಾರೆ.

ನಮ್ಮ ಸಾಮಿಪ್ಯದಲ್ಲಿಯೂ ಮಕ್ಕಳು ಫೋನಿನ ಮೊರೆ ಹೋಗುತ್ತಾರೆಂದರೆ ನಮ್ಮ ಸಾಮಿಪ್ಯದ ಗುಣಮಟ್ಟವನ್ನು ನಾವು ಹೆಚ್ಚಿಸಿಕೊಳ್ಳಬೇಕು ಮತ್ತು ನಮ್ಮ ಚಟುವಟಿಕೆಗಳನ್ನು ಆಕರ್ಷಕಗೊಳಿಸಿಕೊಳ್ಳಬೇಕು ಎಂದೇ ಅರ್ಥ. ನಿರ್ಲಕ್ಷ್ಯ ತೋರಿದರೆ ಮಕ್ಕಳು ಸಂಪೂರ್ಣವಾಗಿ ಫೋನಿಗೆ ವ್ಯಸನಿಗಳಾಗುತ್ತಾರೆ. ಇದೂ ಕೂಡಾ ಮಾದಕ ವ್ಯಸನದಷ್ಟೇ ನಕಾರಾತ್ಮಕವಾದ ಪರಿಣಾಮಗಳನ್ನು ಮನಸ್ಸಿನ ಮೇಲೆ, ಸಂಬಂಧಗಳ ಮೇಲೆ, ಶೈಕ್ಷಣಿಕ ಪ್ರಗತಿಯ ಮೇಲೆ, ಕೊನೆಗೆ ದೇಹದ ಮೇಲೂ ಬೀರುತ್ತದೆ.

ಶೈಕ್ಷಣಿಕ ಕಲಿಕೆಯ ಜೊತೆ ಜೊತೆಗೆ ಜೀವನ ಕೌಶಲ್ಯದ ಶಿಕ್ಷಣವೂ ಕೂಡಾ ಮಕ್ಕಳಿಗೆ ಅಗತ್ಯವಾಗಿರುವುದೇ ಆಗಿದೆ. ಕಸುಬುಗಳು ಮತ್ತು ಉಪಕಸುಬುಗಳಾಗಬಹುದಾದಂತಹ ಕೌಶಲ್ಯದ ಚಟುವಟಿಕೆಗಳಲ್ಲಿ ಮಕ್ಕಳಲ್ಲಿ ಆಸಕ್ತಿ ಬೆಳೆಸಬಹುದು. ಬೇಕಿಂಗ್, ಗಾರ್ಡನಿಂಗ್, ಮರಗೆಲಸ, ಕುಂಬಾರಿಕೆ, ಬಣ್ಣ ಬಳಿಯುವುದು, ಹೈನುಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಕೃಷಿಯೇ ಮೊದಲಾದ ಕ್ಷೇತ್ರಗಳ ಬಗ್ಗೆ ಪರಿಚಯಾತ್ಮಕವಾದ ಚಟುವಟಿಕೆಗಳಲ್ಲಿ ತೊಡಗಿಸಿ.

ಆಯಾ ಪ್ರಾದೇಶಿಕ ಮತ್ತು ಕೌಟುಂಬಿಕ ಹಿನ್ನೆಲೆಗಳು ಪೂರಕವಾಗಿರುವಂತಹ ಕ್ಷೇತ್ರಗಳಲ್ಲಿ ಗಮನ ಹರಿಸುವಂತೆ ಪ್ರೋತ್ಸಾಹಿಸಿ. ಕಂಪ್ಯೂಟರ್ ಬಳಗೆಯ ಬಗ್ಗೆ ಸೂಕ್ತವಾದ ತರಬೇತಿ ನೀಡುವುದು ಬಹಳ ಒಳ್ಳೆಯದು. ಡಾಟಾ ಎಂಟ್ರಿ, ಟೈಪಿಂಗ್, ಅಕೌಂಟ್ಸ್, ಡಿಜಿಟಲ್ ಡಿಸೈನ್, ಇತ್ಯಾದಿ ಸಾಫ್ಟ್ ಸ್ಕಿಲ್‍ಗಳಲ್ಲಿ ತರಬೇತಿ ನೀಡಬಹುದು. ಯಾವುದೇ ಮಾಡಿದರೂ ವೇಳಾಪಟ್ಟಿಯಲ್ಲಿ ಅವುಗಳಿಗೆ ಸ್ಥಾನವಿರಲಿ ಮತ್ತು ನಿಯಮಿತವಾಗಿ ಅವುಗಳನ್ನು ಅನುಸರಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇರಲಿ.

ನೈತಿಕ ಶಿಕ್ಷಣ

ಇನ್ನು ನೈತಿಕ ಶಿಕ್ಷಣ ಬಹಳ ಮಹತ್ವದ್ದು. ನಾವು ಯಾವುದೇ ಬಿಕ್ಕಟ್ಟಿನ ಸ್ಥಿತಿಗಳಲ್ಲಿ ನಮ್ಮ ಆತಂಕಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತೇವೆ, ಇತರರೊಂದಿಗೆ ಹೇಗೆ ವರ್ತಿಸುತ್ತೇವೆ, ನಮ್ಮ ಸಂಬಂಧಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬ ಜೀವಂತ ಮಾದರಿಗಳನ್ನು ಮಕ್ಕಳ ಮುಂದಿಡುತ್ತಿರುತ್ತೇವೆ. ಅವರು ತಮಗೇ ಅರಿವಿಲ್ಲದಂತೆ ನಮ್ಮ ಮಾತುಗಳನ್ನು ಪ್ರತಿಧ್ವನಿಸುತ್ತಿರುತ್ತಾರೆ.

ನಮ್ಮ ವರ್ತನೆಗಳಿಗೆ ಪ್ರತಿವರ್ತನೆಗಳನ್ನು ತೋರುತ್ತಿರುತ್ತಾರೆ ಮತ್ತು ನಮ್ಮ ನಡೆ ನುಡಿಗಳನ್ನು ಸೂಕ್ಷ್ಮವಾಗಿ ತಮ್ಮದಾಗಿಸಿಕೊಳ್ಳುತ್ತಿರುತ್ತಾರೆ. ಅವುಗಳು ಸರಿಯಾಗಿದ್ದರೆ ಮುಂದೆ ಅವು ಒಳಿತಾಗಿ ಪರಿಣಮಿಸುತ್ತವೆ. ಸರಿಯಿರದಿದ್ದರೆ ಕೆಟ್ಟದಾಗಿ ಪರಿಣಮಿಸುತ್ತವೆ. ಒಟ್ಟಾರೆ ಅವರ ಮುಂದಿನ ವ್ಯಕ್ತಿತ್ವದ ಪ್ರಕಟಣೆ ಮತ್ತು ವರ್ತನೆಗಳ ಪ್ರದರ್ಶನಕ್ಕೆ ನಾವೇ ಪ್ರೇರಣೆಯಾಗಿರುತ್ತೇವೆ ಎಂಬ ಹೊಣೆಗಾರಿಕೆಯಂತೂ ನಮಗಿರಲಿ.

ಎಲ್ಲರೂ ಮನೆಯಲ್ಲಿ ಇರುವಂತಹ ಈ ಕಾಲದಲ್ಲಿ ದಾಂಪತ್ಯ ಸಂಘರ್ಷಗಳಿಗೆ ಅವಕಾಶವಿಲ್ಲದಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾದ ಅಂಶ. ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಗಬಾರದು. ಈ ಎಚ್ಚರಿಕೆ ಇರಲಿ. ಅಪ್ಪ ಅಮ್ಮನ ಮನೆಯವರ ಬಗ್ಗೆ ನಕರಾತ್ಮಕವಾಗಿ ಮಾತಾಡುವುದು, ಅಮ್ಮ ಅಪ್ಪನ ಸಂಬಂಧಿಗಳ ಬಗ್ಗೆ ಆಡಿಕೊಳ್ಳುವುದು, ಪರಸ್ಪರ ದೋಷಾರೋಪಣೆ ಮಾಡುವುದು, ಅಥವಾ ಯಾವುದೇ ಬಗೆಯ ಸಂಘರ್ಷಗಳು ಮಗುವಿನ ಮನಸ್ಸಿನ ಮೇಲೆ ನಕಾರಾತ್ಮಕವಾದ ಪರಿಣಾಮವನ್ನೇ ಉಂಟುಮಾಡುವುದು. ಈ ಬಗ್ಗೆಯೂ ನಾವು ಎಚ್ಚರಿಕೆ ವಹಿಸಬೇಕಾಗಿದೆ.

ವಾಸ್ತವವಾಗಿ ಗಂಡ ಹೆಂಡತಿ ತಮ್ಮ ಮಕ್ಕಳಿಗೆ ಮಾದರಿಯಾಗುವಂತೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಕುಳಿತು ಸೌಜನ್ಯಪೂರ್ವಕವಾಗಿ ಮಾತಾಡಿಕೊಂಡು, ಚರ್ಚೆ ಮಾಡಿಕೊಂಡು, ಸಂವಾದಗಳನ್ನು ಮಾಡಿಕೊಂಡು ಬಗೆ ಹರಿಸಿಕೊಳ್ಳುವುದರಿಂದ ಮಕ್ಕಳಿಗೆ ಒಂದು ಒಳ್ಳೆಯ ಮಾದರಿ ದೊರಕಿದಂತಾಗುತ್ತದೆ.

ಅಷ್ಟೇ ಅಲ್ಲದೇ ಕ್ಷಮೆ ಕೇಳುವುದು, ಕೃತಜ್ಞತೆಗಳನ್ನು ಅರ್ಪಿಸುವುದು, ಕ್ಷಮಿಸುವುದು, ಪಶ್ಚಾತ್ತಾಪ ಪಡುವುದು; ಇತ್ಯಾದಿ ಸಂಬಂಧಗಳನ್ನು ಜೀವಂತವಾಗಿರಿಸಿಕೊಳ್ಳುವ ಮತ್ತು ಮುಂದುವರಿಸುವಂತಹ ಸಕಾರಾತ್ಮಕ ಗುಣಗಳ ಮಾದರಿಗಳನ್ನು ಮಕ್ಕಳಿಗೆ ಕಟ್ಟಿಕೊಡುವುದು ಅತ್ಯಂತ ಉತ್ತಮವಾದ ಕೆಲಸ.

ಅಂತರ್ಜಾಲದ ಸಂಪೂರ್ಣ ಬಳಕೆಗೆ ಸೂಕ್ತ ಕಾಲ:
ಡಿಜಿಟಲ್ ಕಲಿಕೆಗೆ ಮಿತಿ ಇಲ್ಲ. ವಿಶ್ವದ ಅತ್ಯುತ್ತಮ ತರಗತಿಗಳನ್ನು, ಮಾಹಿತಿಗಳನ್ನು ನಾವು ಪಡೆಯಬಹುದು. ವಿಶ್ವದ ಆಗುಹೋಗುಗಳನ್ನು ಗಮನಿಸುವ, ಉತ್ತಮವಾಗಿರುವ ಅಥವಾ ಅಗತ್ಯವಾಗಿರುವ ಕಾರ್ಯಕ್ರಮಗಳನ್ನು ಅನುಸರಿಸುವ ಮತ್ತು ಅನುಕರಿಸುವ ಪ್ರಯೋಗಗಳಿಗೂ ತೊಡಗಿಸಿಕೊಳ್ಳಬಹುದು.

ಸುಳ್ಳು ಸುದ್ಧಿಗಳು ಮತ್ತು ದ್ವೇಷ ಭಾವನೆಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಮಾದ್ಯಮವಾಗಿರುವ ಈ ಅಂತರ್ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗಿರುವುದೂ ಅಷ್ಟೇ ಅಗತ್ಯ. ಮಕ್ಕಳಿಗೂ ಜೂಮ್ ಅಥವಾ ಗೂಗಲ್ ಮೀಟಿಂಗಲ್ಲಿ ಅವಕಾಶಗಳನ್ನು ಕಲ್ಪಿಸಿ ಒಂದಿಷ್ಟು ಮಾತುಕತೆಯಾಡಿಸುವ, ತಮ್ಮ ವಿಷಯಗಳನ್ನು ಹಂಚಿಕೊಳ್ಳುವ ಚಟುವಟಿಕೆಗಳು ನಡೆದರೆ, ಮಕ್ಕಳು ತಮ್ಮ ತಮ್ಮಲ್ಲಿ ಪ್ರೇರಣೆಗಳನ್ನು ಹಂಚಿಕೊಳ್ಳುವವರಾಗುತ್ತಾರೆ.

ಬಡವರಿಗೆ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ

ಮೇಲೆ ಹೇಳಿರುವಂತಹ ವ್ಯವಸ್ಥೆಯನ್ನು ಒದಗಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎಂಬ ಮಾತು ನಿಜ. ಅನಕ್ಷರಸ್ಥ ಸಮೂಹಗಳಿಗೆ, ಇಂತಹ ಸೌಲಭ್ಯಗಳಿಂದ ವಂಚಿತರಾಗಿರುವವರಿಗೆ ಸಮಾಜಮುಖಿ ಗೆಳೆಯರು ಮತ್ತು ಜೀವಪರ ಕಾಳಜಿಯ ಸಂಘಗಳು ಒಂದಿಷ್ಟು ಸಂಘಟಿತವಾಗಿ ಕೆಲಸ ಮಾಡಬೇಕು.

ಕರೋನಾದ ಬಿಕ್ಕಟ್ಟಿನ ಸಮಯದಲ್ಲಿ ಆಹಾರ ಮತ್ತು ಪ್ರಯಾಣ ಇತ್ಯಾದಿ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದಂತೆ, ಬಡ ಮಕ್ಕಳ ಮತ್ತು ನಿರ್ಲಕ್ಷಿತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಗಮನ ಕೊಡಬೇಕಾದ ಅಗತ್ಯವೂ ಮತ್ತು ಅನಿವಾರ್ಯತೆಯೂ ನಮ್ಮ ಮುಂದಿದೆ.

ಸಮಾನ ಆಶಯವುಳ್ಳ ಗೆಳೆಯರ ಸಣ್ಣ ಸಣ್ಣ ಗುಂಪುಗಳು, ಸಂಘ ಸಂಸ್ಥೆಗಳು ಮನಸ್ಸು ಮಾಡಿ ಕೈ ಜೋಡಿಸಿ ಹೊಣೆಹೊತ್ತರೆ ಅಸಾಧ್ಯವೇನಾಗುವುದಿಲ್ಲ.
ವಾಸ್ತವವಾಗಿ ಅವರು ಎದುರಿಸುತ್ತಿರುವ ಸಮಸ್ಯೆ ಮತ್ತು ಕೊರತೆಯನ್ನು ಅವರ ಮುಂದಿನ ಪೀಳಿಗೆಗಳು ಎದುರಿಸದಂತಹ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಂತೆಯೇ ಆಗುತ್ತದೆ.

ವ್ಯಕ್ತಿಗಳು ಒಗ್ಗೂಡಿದರೆ ಹಲವಾರು ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಯೋಜನೆಗಳನ್ನು ಸಿದ್ಧಪಡಿಸಬಹುದು. ಇಂತಹ ಸಮೂಹದ ಅಥವಾ ವರ್ಗಗಳ ಮಕ್ಕಳಿಗೆ ಶಿಕ್ಷಣವೆಂಬುದು ನಿಜಕ್ಕೂ ಜೀವನ ಭದ್ರತೆ ನೀಡುವಂತದ್ದಾಗಿರುತ್ತದೆ.

ಇಂಗ್ಲೀಷ್ ಕಲಿಕೆ, ಕಂಪ್ಯೂಟರ್ ಬಳಕೆ, ಜೀವನ ಕೌಶಲ್ಯಗಳ ತರಬೇತಿ, ಉತ್ಪಾದಕ ಚಿಂತನೆ ಮತ್ತು ಚಟುವಟಿಕೆಗಳ ಪರಿಚಯ ಮತ್ತು ತರಬೇತಿ ಅವರನ್ನು ಬಹಳಷ್ಟು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಕಾಪಾಡುತ್ತದೆ. ಜೀವನಮಟ್ಟವನ್ನು ಸುಧಾರಿಸಿಕೊಳ್ಳುವುದರಲ್ಲಿ ಈ ತರಬೇತಿಗಳು ಕಾಣ್ಕೆ ನೀಡುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

Published

on

ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.

ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)

AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.

ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.

ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.

ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.

ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ

Published

on

ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.

ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.

ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.

ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.

ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending