Connect with us

ಲೈಫ್ ಸ್ಟೈಲ್

ಕಾಡಿನ ರಾಣಿ ‘ಗುಲಗಂಜಿ’ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಹತ್ವದ ಮಾಹಿತಿ..!

Published

on

  • ಸೌಮ್ಯ ಅಶೋಕ್, ಬೆಂಗಳೂರು

ಗುಲಗಂಜಿ ಎಂದರೆ, ಎಲ್ಲರಿಗೂ ನೆನಪಾಗುವುದು ಕೆಂಪು ಮೈ ಹಾಗೂ ಕಪ್ಪು ತುದಿಯುಳ್ಳ ಬೀಜ ಹಾಗೂ ಹಿಂದೇ ಹೇಳುತ್ತಿದ್ದ ಮಾತು “ಗುಲಗಂಜಿ ಪೂರ್ಣ ಕೆಂಪಾದರೆ ಪ್ರಳಯವಾಗುತ್ತದೆ” ಎಂಬುದು. ಇದನ್ನು “ಕಾಡಿನ ರಾಣಿ” ಎಂದು ಕೂಡ ಕರೆಯುತ್ತಾರೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ವಿವಿಧ ಬಣ್ಣದ ಗುಲಗಂಜಿ ಇರುವುದು ಹಾಗೂ ಆಯುರ್ವೇದದಲ್ಲಿ ಕೂಡ ಉಪಯೋಗಿಸುತ್ತಾರೆ ಎಂಬುದು ಸಹ ಹಲವರಿಗೆ ತಿಳಿದಿಲ್ಲ.

ಇದು ಎಷ್ಟು ಉಪಯೋಗ ಇದೆಯೋ ಅಷ್ಟೇ ಅಪಾಯಕಾರಿಯು ಹೌದು. ಇಂಗ್ಲೀಷ್‌ನಲ್ಲಿ ಇದನ್ನು ಕ್ರ್ಯಾಬ್ಸ್ ಐ, ಇಂಡಿಯನ್ ಲಿಕರಿಸ್, ಜೆಕ್ವೈರಿಟಿ ಎಂದು ಕರೆಯುತ್ತಾರೆ. ಇದು ಲೆಗ್ಯೂಮಿನೋಸೀ ಕುಟುಂಬ, ಪ್ಯಾಪಿಲಿಯೋನೇಸೀ ಎಂಬ ಉಪಕುಟುಂಬಕ್ಕೆ ಸೇರಿದ ಒಂದು ಬಳ್ಳಿ. ಇದನ್ನು ಮೊದಲು ಬಂಗಾರದ ಅಂಗಡಿಗಳಲ್ಲಿ ಬಂಗಾರವನ್ನು ತೂಕ ಮಾಡಲು ಬಳಸುತ್ತಿದ್ದರು. ಗುಲಗಂಜಿ ತುಂಬಾ ಮನಮೋಹಕ ಬಣ್ಣವುಳ್ಳದ್ದಾಗಿದ್ದು, ಇದರ ಗಾತ್ರ ತೊಗರಿ/ಅಲಸಂದೆ ಕಾಳಿನಷ್ಟಾಗಿರುತ್ತದೆ.

ಗುಲಗಂಜಿಯ ಬಗ್ಗೆ ಒಂದು ಗಾದೆ ಮಾತು ಕೂಡ ಉಂಟು “ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ” ಬೆಲೆ ಗೊತ್ತಿಲ್ಲದವರ ಕೈಯಲ್ಲಿ ಬೆಲೆಬಾಳುವ ವಸ್ತುವೊಂದನ್ನು ಕೊಟ್ಟರೆ ಏನಾಗಬಹುದು ಎನ್ನುವುದಕ್ಕೆ ಈ ಗಾದೆಯನ್ನು ಬಳಸುತ್ತಾರೆ. ಈಗ ಗುಲಗಂಜಿ ಎಲ್ಲಿ ಬೆಳೆಯುತ್ತದೆ, ವಿವಿಧ ಬಣ್ಣಗಳು , ಉಪಯೋಗ ಮತ್ತು ಅಪಾಯಗಳ ಕುರಿತು ಸಂಕ್ಷಿಪ್ತವಾಗಿ ತಿಳಿಯೋಣ.

ಗುಲಗಂಜಿಯ ವ್ಯಾಪ್ತಿ ಹಾಗೂ ವಿಧಗಳು

ಭಾರತಾದ್ಯಂತ ಗುಲಗಂಜಿಯ ವ್ಯಾಪ್ತಿ ಉಂಟು, ಬಯಲು ಸೀಮೆಗಳಲ್ಲಿ ಇದು ಹೇರಳವಾಗಿದೆ. ಹಿಮಾಲಯದಲ್ಲಿ 1,100ಮೀ.ಎತ್ತರದ ಪ್ರದೇಶದಲ್ಲಿಯೂ ಚನ್ನಾಗಿ ಬೆಳೆಯುತ್ತದೆ. ಇತರ ಆಸರೆ ಸಸ್ಯಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿಯಾದ ಇದು ಸುಮಾರು 8-10 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.

ಗುಲಗಂಜಿಯ ಗಿಡವು ಹಳದಿ ಬಣ್ಣದ್ದಾಗಿದ್ದು, ಕೆಂಪು ಬಣ್ಣದ ಹೂವುಗಳನ್ನು ಹೊಂದಿರುತ್ತದೆ. ಹೂವುಗಳು ಗಾತ್ರದಲ್ಲಿ ಚಿಕ್ಕವು. ಸಾಮಾನ್ಯವಾಗಿ ಅನೇಕ ಫಲಗಳು ಒಂದು ಗೊಂಚಲಿನಲ್ಲಿರುತ್ತವೆ. ಬಲಿತು ಒಣಗಿದ ಅನಂತರ ಕಾಯಿಗಳು ಬಿರಿಯುವುದರಿಂದ ಒಳಗಿನ ಬೀಜಗಳು ಕಾಣಿಸುತ್ತದೆ.

ಗುಲಗಂಜಿಯ ಬೀಜಗಳು 4-5 ಬಣ್ಣಗಳಲ್ಲಿ ಲಭ್ಯವಿದೆ ಕೆಂಪು, ಬಿಳಿ, ನೀಲಿ, ಹಸಿರು ಹಾಗೂ ಕಪ್ಪು. ಹಸಿರು ಹಾಗು ಕಪ್ಪು ಗುಲಗಂಜಿಗಳು ಸಿಗುವುದು ತುಂಬ ವಿರಳ.

ಉಪಯೋಗಗಳು

  1. ಗುಲಗಂಜಿಯನ್ನು ಬಂಗಾರದ ಅಂಗಡಿಯಲ್ಲಿ ಹಾರಗಳು ಮತ್ತು ಜಪಮಾಲೆಗಳನ್ನು ತಯಾರಿಸಲು ಹಾಗು ಮೊದಲು ಚಿನ್ನವನ್ನು ತೂಕ ಮಾಡಲು (ತೂಕದ ಯಂತ್ರ ಬರುವ ಮೊದಲು) ಬಳಸುತ್ತಿದ್ದರು.
  2. ಗುಲಗಂಜಿಯ ಬೇರನ್ನು ಮತ್ತು ಬೀಜವನ್ನು ಚೂರ್ಣ ಮಾಡಿಕೊಂಡು, ಎಮ್ಮೆ ಹಾಲಿಗೆ ಹಾಕಿ ಕಲಸಿ ಮೊಸರು ಮಾಡಿ ಬೆಣ್ಣೆ ತೆಗೆದು ನಿತ್ಯವು ಒಳಕಿವಿಗೆ ಲೇಪಿಸುವುದರಿಂದ ಕಿವಿಯ ತೊಂದರೆ ವಾಸಿಯಾಗುತ್ತದೆ.
  3. ಗುಲಗಂಜಿಯ ಬೇರನ್ನು ಬಾಯಿಯಲ್ಲಿ ಜಗಿದು ರಸವಿಟ್ಟು ಕೊಳ್ಳುವುದರಿಂದ, ಹುಳುಕು ಹಲ್ಲಿನ ತೊಂದರೆ ನಿವಾರಣೆಯಾಗುತ್ತದೆ.
  4. ಗುಲಗಂಜಿ ಎಲೆಯ ರಸ ಅಥವಾ ಬೇರನ್ನು ಅರೆದು ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ಹಾಗೆ ಗಂಟಲು ನೋವು ಮತ್ತು ಒಣಕೆಮ್ಮು ಕಡಿಮೆಯಾಗುತ್ತದೆ.
  5. ಗುಲಗಂಜಿ ಎಲೆಯ ರಸವನ್ನು, ಚರ್ಮದ ಮೇಲಿನ ಕಲೆಗಳಿರುವ ಕಡೆ ಲೇಪಿಸುವುದರಿಂದ ಕಲೆಗಳ ನಿವಾರಣೆಯಾಗುತ್ತದೆ.
  6. ನಾಯಿ ಕಡಿದವರಿಗೆ ಸೊಪ್ಪನ್ನು ಅರೆದು ಎಳ್ಳೆಣೆಯೊಡನೆ ಕುಡಿಸುತ್ತಾರೆ.
  7. ತಲೆ,ಹುಬ್ಬು,ಮೀಸೆಯ ಕೂದಲು ಉದುರುತ್ತಿದ್ದರೆ, ಗುಲಗಂಜಿಯ ಬೇರನ್ನು ನೀರಿನಲ್ಲಿ ತೇದು ಕೂದಲು ಉದುರಿದ ಕಡೆ ಮಂದವಾಗಿ ಲೇಪಿಸುವುದರಿಂದ ಕ್ರಮೇಣ ಕೂದಲು ಬೆಳೆಯುತ್ತದೆ.
  8. ಕಾಲು, ಸೊಂಟ ಮತ್ತು ಯಾವುದೇ ಗಂಟು ನೋವು ಇದ್ದರೆ, ಗುಲಗಂಜಿಯ ಬೀಜದ ಪುಡಿಯನ್ನು ಬಿಸಿನೀರಿನಲ್ಲಿ ಕಲಸಿ ಹಚ್ಚುವುದರಿಂದ ನೋವು ಗಂಟು ಕಡಿಮೆಯಾಗುತ್ತದೆ.
  9. ಬಿಳಿ ಗುಲಗಂಜಿ ಬೇರಿನ ಪುಡಿಯನ್ನು ಸೇವಿಸುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ.
  10. ಗುಲಗಂಜಿಯ ಎಲೆ ತುಂಬಾ ಸಿಹಿ ಇರುತ್ತದೆ. ಅದರೇ ಗುಲಗಂಜಿಯು ಉಷ್ಣಕಾರಕ, ಇದನ್ನು ಗೊಗ್ಗರು ಧ್ವನಿಯನ್ನು ಸರಿಪಡಿಸಿಕೊಳ್ಳಲು ಬಳಸುತ್ತಾರೆ.
  11. ಅತಿ ಮಧುರ ಎಂಬ ಸಸ್ಯದ ಬೇರಿನಲ್ಲಿರುವ ಲಿಕರಿಸ್ ಎಂಬ ವಸ್ತುವಿನ ಮುಖ್ಯ ಸತ್ತ್ವವಾದ ಗ್ಲೈಸಿರೈಸಿನ್ ಎಂಬುದು ಗುಲಗಂಜಿಯ ಬೇರು ಹಾಗೂ ಎಲೆಗಳಿಂದ ತಯಾರಿಸಿದ ಕಷಾಯವನ್ನು ನೆಗಡಿ,ಕೆಮ್ಮು ಮತ್ತು ಹೊಟ್ಟೆ ನುಲಿತಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ.
  12. ಬೇಯಿಸಿದ ಗುಲಗಂಜಿ ಈಜಿಪ್ಟಿನಲ್ಲಿ ಆಹಾರವಾಗಿ ಬಳಸಲ್ಪಡುತ್ತದೆ.

ಸೂಚನೆ

ನಾವು ಗುಲಗಂಜಿಯ ಉಪಯೋಗ ತಿಳಿದ ಕೂಡಲೆ ನಾವೇ ಖುದ್ದಾಗಿ ಅದನ್ನು ಬಳಸಬಾರದು, ಅದನ್ನು ಸರಿಯಾದ ವೈದ್ಯರ ಸಲಹೆ ಪಡೆದು ನಂತರ ಅದನ್ನು ಉಪಯೋಗ ಮಾಡುವುದು ಉತ್ತಮ. ವೈದ್ಯರಿಗೆ ಅದರ ಸರಿಯಾದ ಪ್ರಮಾಣ ತಿಳಿದಿರುತ್ತದೆ.

ಅಪಾಯಗಳು

ಈ ಗುಲಗಂಜಿಯು ಎಷ್ಟು ಉಪಯೋಗವೋ ಅಷ್ಟೇ ಅಪಾಯಕಾರಿಯು ಹೌದು. ಇದು ಮನುಷ್ಯ ಹಾಗೂ ಪ್ರಾಣಿಗಳಿಗೆ ಅಪಾಯಕಾರಿ.

ಗುಲಗಂಜಿಯ ಬೀಜಗಳನ್ನು ‘ ಏಬ್ರಿನ್’ ಎಂಬ ಟಾಕ್ಯಾಲ್ಬ್ಯುಮಿನ್ ಇದೆ. ಇದೊಂದು ಕಟು ವಿಷ. ಈ ವಿಷ ಕಣ್ಣಿನ ರೆಪ್ಪೆಗಳ ಒಳಭಾಗಕ್ಕೆ ಲೇಪಿಸಿದರೆ ರಕ್ತಕ್ಕೆ ಏಬ್ರಿನ್ ಸೇರುವುದರಿಂದ ಪ್ರಾಣಹಾನಿಯಾಗುತ್ತದೆ. ಆದರೆ ಬಾಯಿ,ಅನ್ನನಾಳ ಮತ್ತು ಹೊಟ್ಟೆಯಲ್ಲಿ ಏಬ್ರಿನ್ ಯಾವ ದುಷ್ಪರಿಣಾಮವನ್ನು ಮಾಡುವುದಿಲ್ಲ.

ಗುಲಗಂಜಿ ಸಸ್ಯದ ಬೇರು, ಕಾಂಡ, ಎಲೆ ಎಲ್ಲವೂ ಉಪಯೋಗಕಾರಿ, ಅದರೇ ಬೀಜ ಮಾತ್ರ ನಾಗರಹಾವಿನ ವಿಷಕ್ಕಿಂತಲು ಅಪಾಯ.

ಕಿವಿಮಾತು

  • ಇಂದಿನ ದಿನಗಳಲ್ಲಿ ನಗರದ ಎಷ್ಟೋ ಜನಗಳಿಗೆ, ಗುಲಗಂಜಿ ಎಂದರೆ ಏನು ಎಂಬುದು ಗೊತ್ತಿಲ್ಲ ಹಾಗೂ ನೋಡಿಯೂ ಇರುವುದಿಲ್ಲ.
  • ರೈತರು ಇತ್ತೀಚಿನ ದಿನಗಳಲ್ಲಿ ಇದನ್ನು ತಮ್ಮ ತಮ್ಮ ಹೊಲದಲ್ಲಿ ಬೆಳೆಯನ್ನಾಗಿ . ಬೆಳೆದು ಒಳ್ಳೆಯ ಹಣ ಕೂಡ ಸಂಪಾದಿಸುತ್ತಿದಾರೆ. ಈ ಬಳ್ಳಿಯ ಆಯಸ್ಸು 50 ವರ್ಷ.
  • ಇದನ್ನು ನೀವು ಆರೋಗ್ಯ ದೃಷ್ಟಿಯಿಂದ ಬಳಸದಿದ್ದರೂ, ಸುಂದರವಾಗಿ ಕಾಣಿಸುತ್ತದೆ ಎಂದಾದರೂ ಹೊರಗೆ ಸಿಕ್ಕಾಗ ಶೇಖರಿಸಿಟ್ರಿಟುಕೊಳ್ಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್

Published

on

ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.

ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.

ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.

ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ

Published

on

ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.

ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.

ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.

ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.

ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending