Connect with us

ದಿನದ ಸುದ್ದಿ

ಮಾನವೀಯತೆ ಇಲ್ಲದ ಪ್ರಜಾತಂತ್ರದಲ್ಲಿ ನಾವು..?

Published

on

  • ನಾ ದಿವಾಕರ

73 ವರ್ಷದ ಸ್ವತಂತ್ರ ಆಡಳಿತದಲ್ಲಿ ಭಾರತ ಬಹುತೇಕ ಎರಡು ವರ್ಷಗಳ ಸರ್ವಾಧಿಕಾರವನ್ನು ಕಂಡಿದೆ, 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ. ತುರ್ತುಪರಿಸ್ಥಿತಿಯ ನಂತರದ 45 ವರ್ಷಗಳಲ್ಲಿ ಭಾರತ ಮತ್ತೊಮ್ಮೆ ಸರ್ವಾಧಿಕಾರವನ್ನು ಕಂಡಿಲ್ಲವಾದರೂ, ಪ್ರಜಾತಂತ್ರದ ಮೂಲ ಮೌಲ್ಯಗಳನ್ನು ಕಳೆದುಕೊಳ್ಳುತ್ತಲೇ ಬರುತ್ತಿದೆ.

ಭಾರತದ ಸಂವಿಧಾನ ಪ್ರಜೆಗಳಿಗೆ ನೀಡುವ ಹಕ್ಕುಗಳನ್ನು ಪ್ರಜಾತಂತ್ರದ ಚೌಕಟ್ಟಿನಲ್ಲಿಯೇ ದಮನಿಸುವ, ಹತ್ತಿಕ್ಕುವ ಮತ್ತು ನಿರಾಕರಿಸುವ ಪ್ರವೃತ್ತಿಯನ್ನು ಈ 45 ವರ್ಷಗಳಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಕಳೆದ ಐದು ವರ್ಷಗಳಲ್ಲಿ ಇದು ಸಾಂವಿಧಾನಿಕವಾಗಿ ಸ್ವೀಕೃತ ಎನಿಸುವಷ್ಟು ಮಟ್ಟಿಗೆ ಹೆಚ್ಚಾಗುತ್ತಿದೆ.

1980ರ ದಶಕದಲ್ಲಿ ಮಾನವ ಹಕ್ಕು ಚಳುವಳಿಗಳು ಪ್ರವರ್ಧಮಾನಕ್ಕೆ ಬಂದ ನಂತರ ಭಾರತದ ಆಳುವ ವರ್ಗಗಳಲ್ಲಿ ಸಂಚಲನ ಉಂಟಾಗಿತ್ತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಹೆಚ್ಚಿನ ಪ್ರಜ್ಞೆ ಮೂಡಿತ್ತು. ನಂತರದ ದಿನಗಳಲ್ಲಿ ಪ್ರಜಾತಂತ್ರದ ರಕ್ಷಣೆಗೆ ಮೂಲ ಮಂತ್ರ ಇರುವುದೇ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಎನ್ನುವ ಜಾಗೃತಿ ಮೂಡಿತ್ತು. ಈ ಸಂದರ್ಭದಲ್ಲಿ ಅಧಿಕಾರ ಕೇಂದ್ರಗಳು ಮತ್ತು ಆಡಳಿತ ವ್ಯವಸ್ಥೆ ಮಾನವ ಹಕ್ಕುಗಳ ಕಾರ್ಯಕರ್ತರನ್ನು, ಸಂಘಟನೆಗಳನ್ನು ಅಮೆರಿಕದ ಏಜೆಂಟರು ಎಂದೇ ಪರಿಗಣಿಸುತ್ತಿದ್ದವು.

ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿಹಿಡಿಯುವ ದನಿಗಳೂ ಇದೇ ಸಂದರ್ಭದಲ್ಲೇ ಜಾಗೃತವಾಗಿದ್ದವು. ದೇಶಾದ್ಯಂತ ರಾಜಕೀಯ ಆಂದೋಲನಗಳಷ್ಟೇ ಅಲ್ಲದೆ, ಸಾಂಸ್ಕೃತಿಕ ಲೋಕದಲ್ಲಿ, ಸಾಹಿತ್ಯ , ನಾಟಕ, ಸಿನಿಮಾ, ಕಾವ್ಯ ಹೀಗೆ ಎಲ್ಲ ವಲಯಗಳಲ್ಲೂ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಬೃಹತ್ ಜನಾಂದೋಲನಕ್ಕೆ ಭಾರತ ಸಾಕ್ಷಿಯಾಗಿತ್ತು. 1970 ಮತ್ತು 80ರ ದಶಕದಲ್ಲಿ , ತುರ್ತುಪರಿಸ್ಥಿತಿಯ ನಂತರದ ಬದಲಾದ ಆಡಳಿತ ಧೋರಣೆಯ ಹಿನ್ನೆಲೆಯಲ್ಲೇ, ಮಾನವ ಹಕ್ಕುಗಳ ಹೋರಾಟವೂ ಹೊಸ ಆಯಾಮ ಪಡೆದುಕೊಂಡಿದ್ದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಏಕೆಂದರೆ ಮಾನವ ಹಕ್ಕುಗಳ ರಕ್ಷಣೆ ಒಂದು ಬೃಹತ್ ಜನಾಂದೋಲನವಾಗಿ ರೂಪುಗೊಳ್ಳಲಿಲ್ಲ. ಪಿಯುಸಿಎಲ್, ಪಿಯುಡಿಆರ್ ಮುಂತಾದ ಸಂಘಟನೆಗಳು ದೇಶಾದ್ಯಂತ ತಮ್ಮ ನೆಲೆ ಕಂಡುಕೊಂಡರೂ, ಎಲ್ಲ ರಾಜ್ಯಗಳಲ್ಲಿ ಪ್ರಾತಿನಿಧ್ಯ ಹೊಂದಿದ್ದರೂ, ಒಂದು ಸಮೂಹ ಚಳುವಳಿಯಂತೆ ರೂಪುಗೊಳ್ಳಲು ಸಾಧ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ರೂಪುಗೊಂಡ ದಲಿತ ಚಳುವಳಿಗಳು, ಮಹಿಳಾ ಅಂದೋಲನಗಳು ಮತ್ತು ರಾಜಕೀಯ ಹೋರಾಟಗಳು ಮಾನವ ಹಕ್ಕುಗಳನ್ನು ತಮ್ಮ ಹೋರಾಟದ ಒಂದು ಭಾಗವಾಗಿ ಪರಿಗಣಿಸಿದ್ದರೂ, ಮಾನವ ಹಕ್ಕು ರಕ್ಷಣೆಗೆ ಒಂದು ರಾಜಕೀಯ ಸ್ವರೂಪ ನೀಡಲು ಮುಂದಾಗಲಿಲ್ಲ.

ಹಾಗಾಗಿ ಎಲ್ಲ ಚಳುವಳಿಗಳಲ್ಲೂ ಮಾನವ ಹಕ್ಕು ರಕ್ಷಣೆ ಒಂದು ಕಾರ್ಯಸೂಚಿಯಾಗಿ ಬಳಕೆಯಾಗಿತ್ತೇ ಹೊರತು, ಸೈದ್ಧಾಂತಿಕ ತಳಹದಿಯಾಗಿ ರೂಪುಗೊಳ್ಳಲಿಲ್ಲ. ಮಾನವ ಹಕ್ಕುಗಳ ಪರಿಕಲ್ಪನೆ ಎಲ್ಲ ರಾಜಕೀಯ ಮತ್ತು ಸಾಮಾಜಿಕ ಆಂದೋಲನಗಳಲ್ಲಿ ಅಂತರ್ಗತವಾಗಿದ್ದರೂ, ಅಧಿಕಾರ ರಾಜಕಾರಣದ ನೆಲೆಯಲ್ಲಿ ಈ ಪರಿಕಲ್ಪನೆಯೇ ಸಾಪೇಕ್ಷ ನೆಲೆ ಪಡೆಯುವುದನ್ನೂ ಕಂಡಿದ್ದೇವೆ.

ಇಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕವಿ, ಲೇಖಕ, ಸಾಮಾಜಿಕ ಕಾರ್ಯಕರ್ತ ವರವರರಾವ್ ಈ ಸಾಪೇಕ್ಷತೆಗೆ ಬಲಿಯಾಗುತ್ತಿರುವವರಲ್ಲಿ ಒಬ್ಬರು. ಈ ನಿಟ್ಟಿನಲ್ಲಿ ನೋಡಿದಾಗ ವರವರರಾವ್ ಏಕಾಂಗಿಯಾಗಿ ಕಾಣುವುದಿಲ್ಲ. ಅವರೊಂದಿಗೆ ಪ್ರೊಫೆಸರ್ ಸಾಯಿಬಾಬಾ ಇದ್ದಾರೆ.

ಬದಲಾದ ಭಾರತದಲ್ಲಿ ಇನ್ನೂ ಹೆಚ್ಚು ಕಾರ್ಯಕರ್ತರು ಇವರುಗಳೊಡನೆ ಅನುಭವಿಸುವ ಸಾಧ್ಯತೆಗಳೂ ಇವೆ. ಪ್ರಭುತ್ವ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಬಳಸಬಹುದಾದ ಎಲ್ಲ ಅಸ್ತ್ರಗಳನ್ನೂ ಇಂದು ಭಾರತದಲ್ಲಿ ಪ್ರಯೋಗಿಸಲಾಗುತ್ತಿದೆ. ಅಧಿಕಾರ ರಾಜಕಾರಣ ಮತ್ತು ಅಧಿಪತ್ಯ ರಾಜಕಾರಣದಲ್ಲಿ ಇಂತಹ ಕ್ರೌರ್ಯಗಳೂ ಸ್ವೀಕೃತವಾಗುವಂತೆ ಸಮೂಹ ಸನ್ನಿ ಸೃಷ್ಟಿಸಲಾಗುತ್ತದೆ.

ಈ ಸಮೂಹ ಸನ್ನಿಗೆ ಮತೀಯವಾದ, ಜಾತಿವಾದ, ಪ್ರಾದೇಶಿಕತೆ, ಭೌಗೋಳಿಕ ದೇಶದ ಪರಿಕಲ್ಪನೆ ಮತ್ತು ದೇಶಭಕ್ತಿ-ಪ್ರೇಮ ಮುಂತಾದ ಅತಿ ಭಾವುಕ ಕಲ್ಪನೆಗಳು ಇವೆಲ್ಲವೂ ನೆರವಾಗುತ್ತವೆ. ಕಳೆದ 50 ವರ್ಷದಲ್ಲಿ ಭಾರತದ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದ ಪ್ರಭುತ್ವ ಮಾನವ ಹಕ್ಕುಗಳಿಗೆ ಎಂದೂ ಸಹ ಮಾನ್ಯತೆ ನೀಡಿಲ್ಲ.

ಸರ್ಕಾರಗಳು ಬದಲಾಗಿವೆ. ಪಕ್ಷಗಳು ಬದಲಾಗಿವೆ. ಹೊಸ ಪಕ್ಷಗಳು ಉದಯಿಸಿವೆ ಆದರೆ ಪ್ರಭುತ್ವದ ಧೋರಣೆಯನ್ನು ಪ್ರಶ್ನಿಸುವ ಯಾವುದೇ ರಾಜಕೀಯ ಪಕ್ಷವನ್ನು ಗುರುತಿಸಲಾಗುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಕಾರ್ಯಕರ್ತರ, ನಾಯಕರ ಹಿತಾಸಕ್ತಿಗಾಗಿ ಮಾನವ ಹಕ್ಕುಗಳ ಸಂಹಿತೆಗಳನ್ನು ಬಳಸಿಕೊಳ್ಳುತ್ತವೆಯೇ ಹೊರತು, ದೇಶದ ಸಾಮಾನ್ಯ ಜನತೆಯ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಕಟಿಬದ್ಧವಾಗಿಲ್ಲ ಎನ್ನುವುದು ಸ್ಪಷ್ಟ.

ಭಾರತದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ಆಡಳಿತಾರೂಢ ಪಕ್ಷವೂ ಸಹ ಮಾನವ ಹಕ್ಕು ಉಲ್ಲಂಘನೆಯ ಆರೋಪದಿಂದ ಮುಕ್ತವಾಗಿಲ್ಲ ಎನ್ನುವುದೂ ಗಮನಾರ್ಹ ಸಂಗತಿ. ಮಾನವ ಹಕ್ಕುಗಳ ಪರಿಕಲ್ಪನೆ ಮೂಲತಃ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದ್ದು ಮತ್ತು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ಹಕ್ಕುಗಳು ಮತ್ತಷ್ಟು ಮಾನ್ಯತೆ ಪಡೆಯುತ್ತವೆ.

ಅಂತಾರಾಷ್ಟ್ರೀಯ ಸಂಹಿತೆಗಳ ಅನುಸಾರ ಪ್ರತಿಯೊಬ್ಬ ಪ್ರಜೆಯ ಜೀವಿಸುವ ಹಕ್ಕನ್ನು ರಕ್ಷಿಸುವುದು ಪ್ರಭುತ್ವದ ಕರ್ತವ್ಯವಾಗಿರುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಬದುಕುವ ಹಕ್ಕು ಕಸಿದುಕೊಳ್ಳುವ ಹಕ್ಕು ಪ್ರಭುತ್ವಕ್ಕೆ ಇರುವುದಿಲ್ಲ. ಹಾಗಾಗಿಯೇ ವಿಶ್ವದ ಬಹುಪಾಲು ರಾಷ್ಟ್ರಗಳು ಮರಣದಂಡನೆಯಂತಹ ಜೀವ ವಿರೋಧಿ ಶಿಕ್ಷೆಯನ್ನು ಬಹಿಷ್ಕರಿಸಿವೆ. ಆದರೆ ಭಾರತ ಇದಕ್ಕೆ ಹೊರತಾಗಿದೆ.

ದುರಂತ ಎಂದರೆ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷವೂ ಈ ಕುರಿತು ಯೋಚಿಸಿಯೂ ಇಲ್ಲ. ಅಪರಾಧ, ದಂಡನೆ ಮತ್ತು ಶಿಕ್ಷೆ ಈ ಮೂರು ವಿದ್ಯಮಾನಗಳ ನಡುವೆ ಮಾನವ ಹಕ್ಕುಗಳನ್ನು ರಕ್ಷಿಸುವ ನೈತಿಕ ಹೊಣೆಗಾರಿಗೆ ಆಡಳಿತ ವ್ಯವಸ್ಥೆಯ ಮೇಲಿರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಶಾಹಿಗಳಿಂದ ಉಂಟಾಗಬಹುದಾದ ಕಾರ್ಯಾಂಗದ ಪ್ರಮಾದಗಳನ್ನು ಶಾಸಕಾಂಗವು ಸರಿಪಡಿಸಬೇಕಾಗುತ್ತದೆ.

ಒಂದು ವೇಳೆ ಶಾಸಕಾಂಗವೂ ಪ್ರಜೆಗಳ ಹಕ್ಕುಗಳನ್ನು ಕಸಿಯಲು ವಾಮ ಮಾರ್ಗಗಳನ್ನು ಅನುಸರಿಸಿದರೆ ನ್ಯಾಯಾಂಗ ತನ್ನ ಸಾಂವಿಧಾನಿಕ ಹೊಣೆಯನ್ನು ನಿಭಾಯಿಸಬೇಕಾಗುತ್ತದೆ. ಇದು ಭಾರತದ ಸಂವಿಧಾನದ ಮೂಲ ಮಂತ್ರವೂ ಆಗಿದೆ. ಸರ್ವೋಚ್ಚ ನ್ಯಾಯಾಲಯ ಈ ನಿಟ್ಟಿನಲ್ಲಿ ಹಲವಾರು ಸಂದರ್ಭಗಳಲ್ಲಿ ತನ್ನ ಮೇರು ಸ್ಥಾನವನ್ನು ಸಾರ್ಥಕಪಡಿಸಿಕೊಂಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಶೋಷಣೆಗೊಳಗಾದ, ನ್ಯಾಯವಂಚಿತರಾದ, ಅವಕಾಶವಂಚಿತರಾದ ಜನಸಮುದಾಯಗಳಿಗೆ ನ್ಯಾಯ ದೊರಕಿಸುವಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಯಶಸ್ವಿಯಾಗಿದೆ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಇವೆಲ್ಲವೂ ಗತ ಇತಿಹಾಸದಂತೆ ಕಾಣುತ್ತಿದೆ. 1975ರ ತುರ್ತುಪರಿಸ್ಥಿಯ ನಂತರ ಭಾರತೀಯ ಪ್ರಭುತ್ವದಲ್ಲಿ ಉಂಟಾದ ಮನ್ವಂತರ ಪ್ರಕ್ರಿಯೆಯನ್ನು ಈ ಹಿನ್ನೆಲೆಯಲ್ಲೇ ನಿಷ್ಕರ್ಷೆ ಮಾಡಬೇಕಾಗುತ್ತದೆ. ಜನಾಂದೋಲನಗಳನ್ನು ಹತ್ತಿಕ್ಕಲು, ಪ್ರಜೆಗಳ ಆಕ್ರೋಶದ ದನಿಗಳನ್ನು ದಮನಿಸಲು, ನಾಗರಿಕ ಸಮಾಜದ ಪ್ರತಿರೋಧವನ್ನು ಮಣಿಸಲು ಪ್ರಭುತ್ವ ಬಳಸುತ್ತಿರುವ ಎಲ್ಲ ಕರಾಳ ಶಾಸನಗಳಿಗೂ ಶಿಲಾನ್ಯಾಸ ಮಾಡಿದ್ದು ಶ್ರೀಮತಿ ಇಂದಿರಾಗಾಂಧಿ ಮತ್ತು ಅವರು ಹೇರಿದ ತುರ್ತುಪರಿಸ್ಥಿತಿ ಎನ್ನುವುದು ಚಾರಿತ್ರಿಕ ಸತ್ಯ. ಇಂದು ಭಾರತದ ಸಾರ್ವಭೌಮ ಪ್ರಜೆಗಳು ಉಸಿರುಗಟ್ಟುವ ವಾತಾವರಣದಲ್ಲಿ ಬದುಕವಂತಾಗಿದ್ದರೆ, ಪ್ರತಿರೋಧ ವ್ಯಕ್ತಪಡಿಸಲೂ ಹಿಂಜರಿಯುವಂತಹ ಸನ್ನಿವೇಶ ಉಂಟಾಗಿದ್ದರೆ ಇದರ ಮೂಲವನ್ನು ತುರ್ತುಪರಿಸ್ಥಿತಿಯಲ್ಲಿ ಗುರುತಿಸಬಹುದು.

45 ವರ್ಷಗಳ ಹಿಂದಿನ ತುರ್ತುಪರಿಸ್ಥಿತಿಯನ್ನು ನೆನೆಯುತ್ತಾ, ಅಂದಿನ ತಮ್ಮ ಹೋರಾಟ, ಸೆರೆವಾಸ, ಚಿತ್ರಹಿಂಸೆಗೊಳಪಟ್ಟ ಸನ್ನಿವೇಶಗಳನ್ನು ರಸವತ್ತಾಗಿ ಬಣ್ಣಿಸುತ್ತಾ, ಪ್ರಜಾತಂತ್ರ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡುವ ಪ್ರತಿಯೊಂದು ರಾಜಕೀಯ ಪಕ್ಷವೂ, ಪ್ರತಿಯೊಬ್ಬ ರಾಜಕೀಯ ನಾಯಕನೂ ಒಮ್ಮೆ ಈ 45 ವರ್ಷಗಳಲ್ಲಿ ಭಾರತದ ಶ್ರೇಷ್ಠ ಸಂವಿಧಾನದ ಚೌಕಟ್ಟಿನಲ್ಲೇ ಜಾರಿಗೊಳಿಸುವ ಕರಾಳ ಶಾಸನಗಳತ್ತ ಗಮನಹರಿಸಿದರೆ ನಾಚಿ ತಲೆತಗ್ಗಿಸಬೇಕಾಗುತ್ತದೆ.

ತುರ್ತುಪರಿಸ್ಥಿತಿಯಲ್ಲಿ ಜಾರ್ಜ್ ಫರ್ನಾಂಡಿಸ್ ಮುಂತಾದ ನಾಯಕರು ಅನುಭವಿಸಿದ ಚಿತ್ರಹಿಂಸೆಯನ್ನು ಇಂದಿನ ವರವರರಾವ್ ಅವರ ಪರಿಸ್ಥಿತಿಗೆ ಮುಖಾಮುಖಿಯಾಗಿಸಿ ನೋಡಲು ಆತ್ಮಸಾಕ್ಷಿಯೂ ಇರಬೇಕು, ಆತ್ಮಸ್ಥೈರ್ಯವೂ ಬೇಕಲ್ಲವೇ ? ಬಹುಶಃ ನ್ಯಾಯಾಂಗವೂ ಇಲ್ಲಿ ನಿಷ್ಕರ್ಷೆಗೊಳಗಾಗಬೇಕಿದೆ.

1980ರ ನಂತರ ಭಾರತ ತನ್ನ ಸಮಾಜವಾದಿ ಧೋರಣೆಯನ್ನು ಕೈಬಿಟ್ಟು ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅನುಸರಿಸಲು ಆರಂಭಿಸಿದ ನಂತರ, ಭಾರತದ ಪ್ರಭುತ್ವದ ಧೋರಣೆಯೂ ಹಂತಹಂತವಾಗಿ ಬದಲಾಗುತ್ತಿರುವುದನ್ನು ಗಮನಿಸಬೇಕಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಉಲ್ಬಣಿಸಿದ ಸಿಖ್ ಪ್ರತ್ಯೇಕತಾವಾದ, ಕಾಶ್ಮೀರದ ಉಗ್ರವಾದ ಮತ್ತು ಪ್ರತ್ಯೇಕತಾವಾದ, ಹಿಂದೂ ಮೂಲಭೂತವಾದ ಮತ್ತು ಈ ಮೂರೂ ವಿದ್ಯಮಾನಗಳ ನಡುವೆ ದೇಶದಲ್ಲಿ ತಾರಕಕ್ಕೇರಿದ ಮತೀಯ ಮೂಲಭೂತವಾದ ಆಡಳಿತ ವ್ಯವಸ್ಥೆಯ ಕರಾಳ ಶಾಸನಗಳಿಗೆ ಮಾನ್ಯತೆ ದೊರೆಯಲು ನೆರವಾಗಿದ್ದನ್ನೂ ಅಲ್ಲಗಳೆಯುವಂತಿಲ್ಲ. ಈ ಸಂದರ್ಭದಲ್ಲೇ “ ಅನ್ಯರ ” ಪರಿಕಲ್ಪನೆಗೂ ಸಾರ್ವತ್ರಿಕ ಮಾನ್ಯತೆ ದೊರೆತಿತ್ತು. ಪ್ರಭುತ್ವದ ದಮನಕಾರಿ ನೀತಿಗಳಿಗೆ ಈ ಪರಿಕಲ್ಪನೆ ಪುಷ್ಟಿ ನೀಡಿತ್ತು. ಸಾವು, ಚಿತ್ರಹಿಂಸೆ ಮತ್ತು ಶಿಕ್ಷೆ ಮೂರೂ ಸಹ ಸಾಪೇಕ್ಷ ನೆಲೆಯಲ್ಲಿ ಮಾನ್ಯತೆ ಪಡೆದುಬಿಟ್ಟವು.

ಈ ಮಾನ್ಯತೆಗಾಗಿಯೇ ಭಾರತದ ಪ್ರಭುತ್ವ ಮತ್ತು ಆಡಳಿತಾರೂಢ ರಾಜಕೀಯ ಪಕ್ಷಗಳು ಹಲವಾರು ಭೂತದ ನೆಲೆಗಳನ್ನೂ ಸೃಷ್ಟಿಸಿವೆ. ಈ ನೆಲೆಗಳಲ್ಲಿ ಪ್ರಧಾನವಾಗಿ ಕಾಣುವುದು 1967ರ ನಕ್ಸಲ್‍ಬಾರಿ ಚಳುವಳಿ ಮತ್ತು ಅದರಿಂದ ದೇಶಾದ್ಯಂತ ಉಗಮಿಸಿದ ನೂರಾರು ಹೋರಾಟಗಳು.

ನವ ಉದಾರವಾದ- ಮತೀಯವಾದ ಮತ್ತು ಅಧಿಪತ್ಯ ರಾಜಕಾರಣವನ್ನು ಪ್ರಶ್ನಿಸುವ, ದೇಶದ ಶ್ರಮಜೀವಿಗಳ, ಅವಕಾಶವಂಚಿತರ, ಶೋಷಿತ ಸಮುದಾಯಗಳ ಮತ್ತು ದುರ್ಬಲ ವರ್ಗಗಳ ಮೂಲಭೂತ ಹಕ್ಕುಗಳಿಗಾಗಿ, ಜೀವಿಸುವ ಹಕ್ಕುಗಳಿಗಾಗಿ ಹೋರಾಡುವ ಮತ್ತು ಆಡಳಿತವ್ಯವಸ್ಥೆಯ ಜನವಿರೋಧಿ ನೀತಿಗಳಿಗೆ ಪ್ರತಿರೋಧ ವ್ಯಕ್ತಪಡಿಸುವ ಎಲ್ಲ ದನಿಗಳನ್ನೂ ಈ ಒಂದು ಚಳುವಳಿಯ ಚೌಕಟ್ಟಿನಲ್ಲೇ ನಿಷ್ಕರ್ಷೆ ಮಾಡುವ ಮೂಲಕ, ದನಿಗಳನ್ನು ದಮನಿಸುವ ನೀತಿಗಳಿಗೆ ಸಾರ್ವಜನಿಕ ಮಾನ್ಯತೆ ಪಡೆಯುವಲ್ಲಿ ಆಳುವ ವರ್ಗಗಳು ಯಶಸ್ವಿಯಾಗಿದ್ದವು. ಈ ಸಮೂಹ ಸನ್ನಿಯನ್ನು ಸೃಷ್ಟಿಸಲು ಕಾಶ್ಮೀರದ ಉಗ್ರವಾದ, ಭಯೋತ್ಪಾದನೆ ಮತ್ತು ಹಿಂದುತ್ವ ರಾಜಕಾರಣ ನೆರವಾಗಿದ್ದವು.

1990ರ ನಂತರದಲ್ಲಿ ಭಾರತದ ಜನತಂತ್ರದಲ್ಲಿ ಎರಡು ಚಿಂತನಾವಾಹಿನಿಗಳು ಸ್ಪಷ್ಟವಾಗಿ ಉಗಮಿಸಿದವು. ನವ ಉದಾರವಾದ, ಜಾಗತೀಕರಣ, ಹಣಕಾಸು ಬಂಡವಾಳದ ಅಧಿಪತ್ಯ , ಸಾಂಸ್ಕೃತಿಕ ಮತೀಯ ರಾಜಕಾರಣ ಮತ್ತು ಪ್ರಾದೇಶಿಕ ಹಾಗೂ ಜಾತಿ ರಾಜಕಾರಣ ಈ ಎಲ್ಲವನ್ನೂ ಪ್ರತಿನಿಧಿಸುವ ಒಂದು ವರ್ಗ ಅಧಿಕಾರ ರಾಜಕಾರಣಕ್ಕೆ ಸ್ಪಷ್ಟ ತಳಪಾಯ ನಿರ್ಮಿಸುವಲ್ಲಿ ಯಶಸ್ವಿಯಾದವು.

ಈ ಆಳುವ ವರ್ಗಗಳಿಗೆ ಒತ್ತಾಸೆಯಾಗಿ ನಿಂತಿದ್ದು ಮಾರುಕಟ್ಟೆ ಶಕ್ತಿಗಳು ಮತ್ತು ಭಾರತದ ಕಾರ್ಪೋರೇಟ್ ವಲಯ. 1998ರ ನಂತರದ ಎಲ್ಲ ಚುನಾವಣೆಗಳಲ್ಲೂ ಕಾರ್ಪೋರೇಟ್-ಮಾರುಕಟ್ಟೆ ಶಕ್ತಿಗಳ ಪ್ರಭಾವವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದು. ಬಂಡವಾಳ ವ್ಯವಸ್ಥೆಯ ಶೋಷಕ ನೆಲೆಗಳನ್ನು ಗಟ್ಟಿಗೊಳಿಸಲು ಜನಾಂದೋಲನಗಳನ್ನು ಹತ್ತಿಕ್ಕುವ ಕರಾಳ ಶಾಸನಗಳೂ ಆಳುವ ವರ್ಗಗಳ ಪ್ರತಿನಿಧಿಗಳಲ್ಲಿ ಮಾನ್ಯತೆ ಪಡೆದಿದ್ದವು.

1970-80ರ ದಶಕದಲ್ಲಿ ದೇಶದ ದುಡಿಯುವ ವರ್ಗಗಳೊಡನೆ, ಶ್ರಮಜೀವಿಗಳೊಡನೆ, ಶೋಷಿತ-ಅವಕಾಶವಂಚಿತ ಜನಸಮುದಾಯಗಳೊಡನೆ ಗುರುತಿಸಿಕೊಳ್ಳುತ್ತಿದ್ದ ರಾಜಕೀಯ ಪಕ್ಷಗಳು ಕ್ರಮೇಣ ಈ ಜನಸಮುದಾಯಗಳನ್ನು ತಮ್ಮ ಅಧಿಕಾರ ರಾಜಕಾರಣದ ವಿಸ್ತರಣೆಯ ಕಾಲಾಳುಗಳನ್ನಾಗಿ ಬಳಸಿಕೊಂಡಿದ್ದನ್ನೂ ಗಮನಿಸಬಹುದು. ಈ ಸಂದರ್ಭದಲ್ಲೇ ಅಸಂಖ್ಯಾತ ಜನಾಂದೋಲನಗಳು ನಿಷ್ಕ್ರಿಯವಾಗತೊಡಗಿದವು.

ದಲಿತ ಸಂಘಟನೆಗಳನ್ನೂ ಸೇರಿದಂತೆ ಹಲವು ಚಳುವಳಿಗಳು ಯಾವುದೋ ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಾದವು. ಕಾರ್ಮಿಕ ಸಂಘಟನೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ಸ್ವ ಹಿತಾಸಕ್ತಿ ರಕ್ಷಣೆಯ ಗುಂಪುಗಳಾದವು. ರಾಜಕೀಯೇತರ ಚಳುವಳಿಗಳ ಮೂಲಕ ಶೋಷಿತರ ಪರ ದನಿ ಎತ್ತಿದ್ದ ಹಲವಾರು ಸಂಘಟನೆಗಳು ಆಡಳಿತ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾದವು.
ಈ ವಿಘಟನೆಯ ಫಲವನ್ನು ಜನಾಂದೋಲನಗಳ ನಿಷ್ಕ್ರಿಯತೆಯಲ್ಲಿ ಕಾಣುತ್ತಿದ್ದೇವೆ.

ಕಳೆದ ಆರು ವರ್ಷಗಳಲ್ಲಿ ಕಾರ್ಪೋರೇಟ್-ಮಾರುಕಟ್ಟೆಯ ಶಕ್ತಿಗಳು ದೇಶದ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವಂತೆಯೇ, ಭಾರತದ ಆಳುವ ವರ್ಗಗಳು ಜನಸಾಮಾನ್ಯರ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಸಂವಿಧಾನದ ಚೌಕಟ್ಟಿನಲ್ಲೇ ಕರಾಳ ಶಾಸನಗಳನ್ನು ರೂಪಿಸುತ್ತಿವೆ. ಈ ಜನವಿರೋಧಿ ನೀತಿಗಳನ್ನು ವಿರೋಧಿಸುವ ದನಿಗಳನ್ನು ಶಾಶ್ವತವಾಗಿ ಅಡಗಿಸುವ ದುಷ್ಟ ಧೋರಣೆಯನ್ನೂ ಕಾಣುತ್ತಿದ್ದೇವೆ. ಆನಂದ್ ತೇಲ್ತುಂಬ್ಡೆ, ಸುಧಾ ಭರದ್ವಾಜ್, ಸಾಯಿಬಾಬಾ, ಗೌತಮ್ ನವಲಖಾ ಮತ್ತು ವರವರರಾವ್ ಮತ್ತು ಅಸಂಖ್ಯಾತ ಹೋರಾಟಗಾರರು ಈ ದುಷ್ಟ ನೀತಿಗೆ ಬಲಿಯಾಗುತ್ತಿದ್ದಾರೆ.

ರಾಜಕೀಯ ವಲಯದಲ್ಲಿ ಜಾಗೃತವಾಗಿದ್ದ ತಾತ್ವಿಕ-ಸೈದ್ಧಾಂತಿಕ ನೆಲೆಗಳೆಲ್ಲವೂ ಪ್ರಭುತ್ವದ ಚೌಕಟ್ಟಿನಲ್ಲಿ ಬಂದಿಯಾಗಿರುವ ಸಂದರ್ಭದಲ್ಲಿ ಇಂದು ದೇಶದ ಬಹುಸಂಖ್ಯಾತ ಜನತೆ ತಮ್ಮ ಹಕ್ಕುಗಳಿಗಾಗಿ, ಜೀವನೋಪಾಯಕ್ಕಾಗಿ, ಬದುಕುವ ಅವಕಾಶಕ್ಕಾಗಿ ನಿರಂತರ ಹೋರಾಟ ನಡೆಸಬೇಕಾದ ಸನ್ನಿವೇಶವನ್ನು ಎದುರಿಸುತ್ತಿದೆ.

ಹೋರಾಟದ ನೆಲೆಗಳ ಪುನರುತ್ಥಾನದೊಂದಿಗೇ ಅಧಿಕಾರ ರಾಜಕಾರಣದ ಕಾಲಾಳುಗಳಾಗಿರುವ ಅಸಂಖ್ಯಾತ ಶೋಷಿತರನ್ನು ಮತ್ತೊಮ್ಮೆ ಪ್ರತಿರೋಧದ ನೆಲೆಯಲ್ಲಿ ಸಂಘಟಿಸುವ ಹೊಣೆಗಾರಿಕೆ ಜನಾಂದೋಲನಗಳ ಮೇಲಿದೆ. ಶೋಷಣೆಯ ವಿಭಿನ್ನ ಆಯಾಮಗಳನ್ನು ಸಾಪೇಕ್ಷ ನೆಲೆಯಲ್ಲಿ ನೋಡುವ ಧೋರಣೆಯಿಂದ ಜನಾಂದೋಲನಗಳು ಹೊರಬರಬೇಕಿದೆ.

ಸಾವು ಬದುಕಿನ ನಡುವೆ ಸೆಣಸುತ್ತಿರುವ ಕವಿ ವರವರರಾವ್ ಈ ಸಂದರ್ಭದಲ್ಲಿ ಪ್ರಭುತ್ವ ವಿರೋಧಿ ನೆಲೆಯ ಸಂಕೇತವಾಗಿ ಕಾಣುತ್ತಾರೆ. ತೇಲ್ತುಂಬ್ಡೆ , ಸಾಯಿಬಾಬಾ ಮತ್ತಿತರರು ಈ ಸಾಂಕೇತಿಕ ನೆಲೆಯ ಪ್ರತಿನಿಧಿಗಳಾಗಿ ಕಾಣುತ್ತಾರೆ. ಹೋರಾಟದ ನೆಲೆಗಳು ಕರಾಳ ಶಾಸನಗಳ ದಾಳಿಯಿಂದ ನಿಷ್ಕ್ರಿಯವಾಗುತ್ತಿರುವ ದುರಂತ ಸನ್ನಿವೇಶವನ್ನು ಕಾಣುತ್ತಿದ್ದೇವೆ.

ಹಾಗಾಗಿಯೇ ದೇಶದ ಕೈಗಾರಿಕಾ ನೀತಿ, ಕಾರ್ಮಿಕ ನೀತಿ, ಕೃಷಿ ನೀತಿ ಮತ್ತು ಹಣಕಾಸು ನೀತಿ ಎಲ್ಲವೂ ಕಾರ್ಪೋರೇಟ್-ಮಾರುಕಟ್ಟೆ ಶಕ್ತಿಗಳ ಅಣತಿಯಂತೆ ಬದಲಾಗುತ್ತಿವೆ. ಸಮಸ್ತ ರಾಜಕೀಯ ವರ್ಗ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಶ್ರಮಜೀವಿ ವರ್ಗಗಳು ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡು ಗತಕಾಲದ ಜೀತಪದ್ಧತಿಗೆ ಒಳಗಾಗುವ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ.

ಕೃಷಿ ಭೂಮಿ, ಬ್ಯಾಂಕಿಂಗ್ ವ್ಯವಸ್ಥೆ, ವಿಮಾ ವಲಯ, ಕಲ್ಲಿದ್ದಲು ನಿಕ್ಷೇಪಗಳು, ವಿಮಾನಯಾನ, ರೈಲು ಮಾರ್ಗಗಳು, ಗಣಿಗಾರಿಕೆ, ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಉದ್ದಿಮೆಗಳು, ಕೈಗಾರಿಕಾ ವಲಯ , ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರ ಎಲ್ಲವೂ ಖಾಸಗೀಕರಣಕ್ಕೊಳಗಾಗುತ್ತಿರುವ ಸಂದರ್ಭದಲ್ಲೂ ರಾಜಕೀಯ ಪಕ್ಷಗಳು ಅಧಿಕಾರ ರಾಜಕಾರಣದ ಚೌಕಟ್ಟಿನಿಂದ ಹೊರಬರಲಾಗದೆ, ಪ್ರಭುತ್ವದ ದಮನಕಾರಿ ಆಡಳಿತ ನೀತಿಗಳಿಗೆ ಪೂರಕವಾಗಿ ವರ್ತಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ವರವರರಾವ್, ತೇಲ್ತುಂಬ್ಡೆ ಮುಂತಾದ ಸಾಮಾಜಿಕ ಕಳಕಳಿಯುಳ್ಳ ಹೋರಾಟಗಾರರು ಅನಾಥರಂತೆ ಕಾಣುತ್ತಿದ್ದರೆ ಅದಕ್ಕೆ ಕಾರಣ ರಾಜಕೀಯ ಪಕ್ಷಗಳು ಈ ನೆಲೆಯಲ್ಲಿ ಪ್ರಜ್ಞಾಶೂನ್ಯವಾಗಿರುವುದು.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂದು ಭಾರತದ ಶೋಷಿತ ದುಡಿಯುವ ವರ್ಗಗಳು ತಮ್ಮ ಅಳಿವು ಉಳಿವಿನ ಸಂಘರ್ಷಕ್ಕೆ ಸಜ್ಜಾಗಬೇಕಿದೆ. ಕಾರ್ಪೋರೇಟ್ ಅಧಿಪತ್ಯಕ್ಕೆ ಶರಣಾಗುತ್ತಿರುವ ರಾಜಕೀಯ ನೆಲೆಗಳಿಂದ ಭಿನ್ನವಾದ ಜನಾಂದೋಲನದ ನೆಲೆಯನ್ನು ಬಲಪಡಿಸುವ ತುರ್ತು ನಮ್ಮ ಮುಂದಿದೆ. ಮಾನವೀಯ ಮೌಲ್ಯಗಳನ್ನೇ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆಯಲ್ಲಿ ಈ ದೇಶದ ಬಹುಸಂಖ್ಯಾತ ಜನತೆ ತಮ್ಮ ಬದುಕು ರೂಪಿಸಿಕೊಳ್ಳಬೇಕಿದೆ.

ಪ್ರತಿಯೊಂದು ಪ್ರತಿರೋಧದ ದನಿಯನ್ನೂ ಶಾಶ್ವತವಾಗಿ ದಮನಿಸುವ ಪ್ರಭುತ್ವದ ನೀತಿಯ ನಡುವೆಯೇ, ಶೋಷಿತರ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಒಂದು ಕಾಲಘಟ್ಟದಲ್ಲಿ ಶೋಷಿತರ ಬೆಂಗಾವಲಿನಂತಿದ್ದ ಕೆಲವು ರಾಜಕೀಯ ನೆಲೆಗಳು ಇಂದು ಮರೆಯಾಗಿವೆ. ಶೋಷಿತರ ದನಿಗೆ ದನಿಯಾಗುವ ಬದಲು, ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಶೋಷಿತರ ದನಿಯನ್ನು ಅಸ್ತ್ರದಂತೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳ ಮತ್ತು ನಾಯಕರ ವಿಶ್ವಾಸ ದ್ರೋಹದ ವಿರುದ್ಧ ಶೋಷಿತ ಸಮುದಾಯಗಳು ಹೋರಾಡಬೇಕಿದೆ.

ಜನತಂತ್ರದ ಉಳಿವಿಗಾಗಿ, ಗಣತಂತ್ರದ ಉಳಿವಿಗಾಗಿ ಮತ್ತು ಪ್ರಜಾಸತ್ತಾತ್ಮಕ ಸಾಂವಿಧಾನಿಕ ಮೌಲ್ಯಗಳ ಉಳಿವಿಗಾಗಿ ಹೊಸ ನೆಲೆಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವರವರರಾವ್ ಈ ಅನಿವಾರ್ಯತೆಯನ್ನು ಪ್ರತಿನಿಧಿಸುವ ಒಂದು ಕ್ಷೀಣ ದನಿಯಾಗಿ ನಮ್ಮ ನಡುವೆ ಉಸಿರಾಡುತ್ತಿದ್ದಾರೆ. “ ದೇಶವೆಂದರೆ ಮಣ್ಣಲ್ಲವೋ ಮನುಜರು ” ಈ ಘೋಷ ವಾಕ್ಯ ನಮ್ಮೊಳಗಿನ ಮಾನವೀಯತೆಯನ್ನು ಜಾಗೃತಿಗೊಳಿಸಿದರೆ ಬಹುಶಃ ನಾವು ವಿಶ್ವಮಾನವತೆಯನ್ನು ಸಾಧಿಸಲು, ಕಾರ್ಪೋರೇಟ್-ಮಾರುಕಟ್ಟೆ ರಾಜಕಾರಣದ ಅಮಾನುಷ ವ್ಯವಸ್ಥೆಯ ವಿರುದ್ಧ ಹೋರಾಡಲು ಸಜ್ಜಾಗಬಹುದು. ಇದು ಜನಾಂದೋಲನಗಳ ಮುಂದಿರುವ ಬೃಹತ್ ಸವಾಲು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಕೇಸ್‌, ಉಡುಪಿಯಿಂದ ವ್ಯಕ್ತಿಯನ್ನು ಠಾಣೆಗೆ ಕರೆತಂದ ಕ್ರಮಕ್ಕೆ ಹೈಕೋರ್ಟ್‌ ಗರಂ

Published

on

Kunal Kamra Show Row: ‘ವೈಟ್‌ಫೀಲ್ಡ್‌ ಅಲ್ಲ, ಡಾರ್ಕ್‌ಫೀಲ್ಡ್‌ ಮಾಡಿ’! ಪೊಲೀಸರಿಗೆ ಹೈಕೋರ್ಟ್‌ ಫುಲ್ ಕ್ಲಾಸ್

ಸುದ್ದಿದಿನ,ಬೆಂಗಳೂರು: ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಕಾರ್ಯಕ್ರಮ ರದ್ದಾದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನು ವಿಚಾರಣೆ ಹೆಸರಿನಲ್ಲಿ ಠಾಣೆಗೆ ಕರೆತಂದ ವೈಟ್‌ಫೀಲ್ಡ್ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣ ರದ್ದು ಕೋರಿ ಮೋಹನ್‌ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪೊಲೀಸ್ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದೆ.

http://Visit : www.suddidina.com

ನ್ಯಾಯಾಲಯದ ಮುಂದೆ ಡಿಸಿಪಿ ಸೈದುಲು ಅಡಾವತ್‌, ಎಸಿಪಿ ರೀನಾ ಸುವರ್ಣ ಹಾಗೂ ತನಿಖಾಧಿಕಾರಿ ಹಾಜರಾಗಿದ್ದರು. ಈ ವೇಳೆ ಪೊಲೀಸ್ ಠಾಣೆಯ ಕಾರ್ಯವೈಖರಿ, ಬಂಧನದ ಕ್ರಮ ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ ನ್ಯಾಯಪೀಠ ಹಲವು ಪ್ರಶ್ನೆಗಳನ್ನು ಕೇಳಿತು.

‘ವೈಟ್‌ಫೀಲ್ಡ್‌ ಠಾಣೆ ಡಾರ್ಕ್‌ಫೀಲ್ಡ್‌ ಆಗಲಿ’

ವೈಟ್‌ಫೀಲ್ಡ್‌ ಠಾಣೆಯಲ್ಲಿ ವಿದ್ಯುತ್ ಹಾಗೂ ಸಿಸಿಟಿವಿ ವ್ಯವಸ್ಥೆ ಕುರಿತ ವಿಚಾರವನ್ನೂ ನ್ಯಾಯಪೀಠ ಪ್ರಸ್ತಾಪಿಸಿತು. ಠಾಣೆಯ ಚಟುವಟಿಕೆಗಳೇ ಅಂಧಕಾರದಲ್ಲಿವೆ ಎಂದು ವ್ಯಂಗ್ಯವಾಡಿದ ನ್ಯಾಯಮೂರ್ತಿಗಳು, ‘ವೈಟ್‌ಫೀಲ್ಡ್‌ ಠಾಣೆಯನ್ನು ಡಾರ್ಕ್‌ಫೀಲ್ಡ್‌ ಠಾಣೆಯನ್ನಾಗಿ ಬದಲಾಯಿಸಿಕೊಳ್ಳಿ’ ಎಂದು ಕಿಡಿಕಾರಿದರು.

ಉಡುಪಿಗೆ ತೆರಳಿ ಮೋಹನ್‌ಗೌಡರನ್ನು ವಶಕ್ಕೆ ಪಡೆದಿದ್ದೇಕೆ, ಬೆಳಗಿನ ಜಾವ 2 ಗಂಟೆಗೆ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಂಡಿದ್ದೇಕೆ ಎಂಬುದರ ಕುರಿತು ಅಧಿಕಾರಿಗಳಿಂದ ನ್ಯಾಯಪೀಠ ವಿವರಣೆ ಕೇಳಿತು.

ಡಿಸಿಪಿ ಪರವಾಗಿ, ಮೋಹನ್‌ಗೌಡ ಹಲವು ಟ್ವೀಟ್‌ಗಳನ್ನು ಮಾಡಿದ್ದರು. ಅವರನ್ನು ಬಂಧಿಸಿರಲಿಲ್ಲ, ಫೋನ್‌ ಮಾಡಿದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರು ಕಾರಿನಲ್ಲಿ ಬಂದಿದ್ದರು. ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ಉತ್ತರಿಸಲಾಯಿತು.

‘ಯೂನಿಫಾರ್ಮ್ ಇದ್ದರೆ ಏನು ಬೇಕಾದರೂ ಮಾಡಬಹುದೇ?’

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಮಾತ್ರಕ್ಕೆ ಪೊಲೀಸರು ಮನಬಂದಂತೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಯೂನಿಫಾರ್ಮ್‌ ಧರಿಸಿರುವ ಕಾರಣಕ್ಕೆ ನಾಗರಿಕರ ಸ್ವಾತಂತ್ರ್ಯ ಕಸಿಯಲು ಸಾಧ್ಯವಿಲ್ಲ ಎಂದು ಕೋರ್ಟ್‌ ಎಚ್ಚರಿಸಿತು.

ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಕುರಿತು ಕ್ರಮ ಕೈಗೊಳ್ಳುವಾಗ ಸುಪ್ರೀಂಕೋರ್ಟ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೊಲೀಸರು ತಮ್ಮನ್ನು ತಾವೇ ಕಾನೂನು ಎಂದು ಭಾವಿಸಬಾರದು. ಬಂಧನದ ಅಧಿಕಾರವನ್ನು ವಿವೇಚನೆಯಿಲ್ಲದೆ ಬಳಸಬಾರದು ಎಂದು ನ್ಯಾಯಪೀಠ ತಿಳಿಸಿತು.

ಪೊಲೀಸ್ ಠಾಣೆಗಳಲ್ಲಿ CCTV ಆಡಿಟ್‌ಗೆ ಸೂಚನೆ

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ವ್ಯವಸ್ಥೆ ಮತ್ತು ಯುಪಿಎಸ್‌ ಬ್ಯಾಕಪ್‌ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯಮಟ್ಟದ ಆಡಿಟ್‌ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಅಧಿಕಾರ ದುರುಪಯೋಗ ಅಥವಾ ನ್ಯಾಯಾಲಯದ ಆದೇಶ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಬೇಕು. ಪೊಲೀಸ್ ಠಾಣೆಗಳಲ್ಲಿ ಸುಪ್ರೀಂಕೋರ್ಟ್‌ ತೀರ್ಪುಗಳ ಕುರಿತು ಅರಿವು ಮೂಡಿಸಬೇಕು ಎಂದು ಸೂಚಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಸೆಪ್ಟೆಂಬರ್‌ 25ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ

ಕುನಾಲ್‌ ಕಾಮ್ರಾ ಶೋ ವಿರೋಧಿಸಿ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಈ ಬೆಳವಣಿಗೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಮೋಹನ್‌ಗೌಡ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಉಡುಪಿಯಿಂದ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದ ಕ್ರಮ ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

Continue Reading

ದಿನದ ಸುದ್ದಿ

ಗೃಹಲಕ್ಷ್ಮೀ ಯೋಜನೆಯಲ್ಲಿ ಮಹತ್ವದ ಬದಲಾವಣೆ: ಅರ್ಹ ಫಲಾನುಭವಿಗಳ ಖಚಿತತೆಗೆ ಮನೆ-ಮನೆ ಪರಿಶೀಲನೆ

Published

on

Gruha Lakshmi Scheme: ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಯೋಮೆಟ್ರಿಕ್‌, ಫೇಸ್‌ ವೆರಿಫಿಕೇಷನ್ ಕಡ್ಡಾಯ; ಮನೆ-ಮನೆ ಸಮೀಕ್ಷೆಗೆ ಸರ್ಕಾರದ ಆದೇಶ!

ಸುದ್ದಿದಿನ,ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮೀ ಯೋಜನೆಯಲ್ಲಿ ಸರ್ಕಾರ ಮಹತ್ವದ ಪರಿಶೀಲನಾ ಕ್ರಮಕ್ಕೆ ಮುಂದಾಗಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಪ್ರಯೋಜನ ತಲುಪಬೇಕು ಎಂಬ ಉದ್ದೇಶದಿಂದ, ಎಲ್ಲಾ ಫಲಾನುಭವಿಗಳ ಬಯೋಮೆಟ್ರಿಕ್‌ ಮತ್ತು ಮುಖಚಹರೆ ದೃಢೀಕರಣವನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪ್ರಕ್ರಿಯೆಯನ್ನು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (ಇಡಿಸಿಎಸ್‌) ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ಮೊಬೈಲ್‌ ಆ್ಯಪ್‌ ಮೂಲಕ ಕೈಗೊಳ್ಳಲಾಗುತ್ತದೆ.

http://Visit : www.suddidina.com

ಮನೆ-ಮನೆ ಸಮೀಕ್ಷೆಯ ಜತೆಗೆ ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕವೂ ಪರಿಶೀಲನಾ ಪ್ರಕ್ರಿಯೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ನಿಗದಿಪಡಿಸಿರುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಪ್ರಕಾರವೇ ಫಲಾನುಭವಿಗಳ ಮರುಪರಿಶೀಲನೆ ನಡೆಯಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಒಂದು ತಿಂಗಳಲ್ಲಿ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸಲು ಸೂಚನೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಗತ್ಯ ಮಾದರಿ ನಮೂನೆಗಳನ್ನು ಸಿದ್ಧಪಡಿಸಲಿದೆ. ಮಾಸ್ಟರ್‌ ತರಬೇತುದಾರರ ಮೂಲಕ ಕ್ಷೇತ್ರ ಗಣತಿದಾರರಿಗೆ ತರಬೇತಿ ನೀಡಲಾಗುತ್ತದೆ. ಆಗಸ್ಟ್‌ 30ರಿಂದ ಒಂದು ತಿಂಗಳೊಳಗೆ ಕ್ಷೇತ್ರ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಜಿಲ್ಲಾ ಹಾಗೂ ತಾಲೂಕು ಗ್ಯಾರಂಟಿ ಸಮಿತಿಗಳು ಮತ್ತು ಸ್ಥಳೀಯ ಮಟ್ಟದ ಸಮಿತಿಗಳು ನಿಗದಿತ ಅವಧಿಯಲ್ಲಿ ಪರಿಶೀಲನೆ ಪೂರ್ಣಗೊಳಿಸಬೇಕು. ನಗರ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಬಿಲ್‌ ಕಲೆಕ್ಟರ್‌ಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಗಣತಿದಾರರನ್ನಾಗಿ ಬಳಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ.

ಮನೆ ಬಾಗಿಲಿಗೆ ಬರಲಿದೆ ಪರಿಶೀಲನಾ ತಂಡ

ಫಲಾನುಭವಿಗಳ ಮನೆಗಳಿಗೆ ಕಡ್ಡಾಯವಾಗಿ ಭೇಟಿ ನೀಡುವಂತೆ ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿಗೆ ಸೂಚಿಸಲಾಗಿದೆ. ಫಲಾನುಭವಿ ಅಥವಾ ಕುಟುಂಬದ ಸದಸ್ಯರು ಗಣತಿ ನಮೂನೆಯನ್ನು ಭರ್ತಿ ಮಾಡಿ ಹಿಂತಿರುಗಿಸಬೇಕು. ಯಾವುದೇ ಕಾರಣಕ್ಕೂ ಮನೆ ಭೇಟಿ ತಪ್ಪಿಸಬಾರದು ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಗಣತಿದಾರರು ಮೊಬೈಲ್‌ ಆ್ಯಪ್‌ ಮೂಲಕ ಫಲಾನುಭವಿಯ ಭಾವಚಿತ್ರ ಅಥವಾ ಮನೆಯ ಫೋಟೊ, ಜಿಪಿಎಸ್‌ ಮ್ಯಾಪಿಂಗ್‌, ಮುಖಚಹರೆ ದೃಢೀಕರಣ ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ಸ್ಥಳದಲ್ಲಿಯೇ ದಾಖಲಿಸಬೇಕು. ಈ ಮೂಲಕ ಫಲಾನುಭವಿಯ ಗುರುತು ಹಾಗೂ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸುವ ಉದ್ದೇಶ ಹೊಂದಲಾಗಿದೆ.

ಜಿಲ್ಲಾಧಿಕಾರಿಗಳು, ಸಿಇಒಗಳಿಗೆ ಹೊಣೆ

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಾರ್ಡ್‌ ಹಾಗೂ ಗ್ರಾಮವಾರು ಸ್ಪಷ್ಟ ನಿಯೋಜನೆಯೊಂದಿಗೆ ಗಣತಿದಾರರಿಗೆ ಲಿಖಿತ ಆದೇಶ ನೀಡಬೇಕು. ಪರಿಶೀಲನಾ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಮೇಲ್ವಿಚಾರಣೆ ನಡೆಸಬೇಕಿದೆ.

ಒಟ್ಟಿನಲ್ಲಿ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಮತ್ತಷ್ಟು ನಿಖರಗೊಳಿಸಿ, ಅರ್ಹರಿಗೆ ಮಾತ್ರ ಸರ್ಕಾರದ ನೆರವು ತಲುಪಿಸುವುದು ಈ ಮರುಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ. ಮನೆ-ಮನೆ ಸಮೀಕ್ಷೆ ಮತ್ತು ಡಿಜಿಟಲ್‌ ದೃಢೀಕರಣದ ಬಳಿಕ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಲಿವೆಯೇ ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸಿದೆ.

Continue Reading

ದಿನದ ಸುದ್ದಿ

ಬೆಂಗಳೂರು ಮೆಟ್ರೋದಲ್ಲಿ ಸುರಕ್ಷತೆಗೆ ಹೊಸ ಕವಚ: PSD ಕಾಮಗಾರಿ ಯಾವಾಗ?

Published

on

Namma Metro PSD Delay: 3ನೇ ಹಂತದ ಕೇಂದ್ರ ಒಪ್ಪಿಗೆಗೆ ಕಾಯುವ ಬೆಂಗಳೂರು; 177 ನಿಲ್ದಾಣಗಳಲ್ಲಿ ₹1,274 ಕೋಟಿ ವೆಚ್ಚದ ಸುರಕ್ಷತಾ ಯೋಜನೆ!

ಸುದ್ದಿದಿನ,ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರೂಪಿಸಿರುವ ಪ್ಲಾಟ್‌ಫಾರ್ಮ್ ಸ್ಕ್ರೀನ್‌ ಡೋರ್‌ (PSD) ಯೋಜನೆಗೆ ಕೇಂದ್ರದ ಅನುಮೋದನೆಯ ವಿಳಂಬವೇ ದೊಡ್ಡ ಅಡ್ಡಿಯಾಗಿದೆ. ಮೆಟ್ರೋ 3ನೇ ಹಂತದ ಕೆಂಪು ಮಾರ್ಗದ ಡಿಪಿಆರ್‌ಗೆ ಕೇಂದ್ರ ಸರಕಾರದಿಂದ ಒಪ್ಪಿಗೆ ದೊರೆಯುವವರೆಗೆ PSD ಅಳವಡಿಕೆ ಕಾಮಗಾರಿ ಆರಂಭಿಸುವುದು ಕಷ್ಟವಾಗಲಿದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

ಪ್ರಸ್ತುತ ಮತ್ತು ಭವಿಷ್ಯದ ಮೆಟ್ರೋ ಯೋಜನೆಗಳನ್ನು ಪರಿಗಣಿಸಿದರೆ ಬೆಂಗಳೂರಿನಲ್ಲಿ ಒಟ್ಟು 191 ನಿಲ್ದಾಣಗಳು ನಿರ್ಮಾಣವಾಗುವ ನಿರೀಕ್ಷೆಯಿದೆ. ಈ ಪೈಕಿ 177 ನಿಲ್ದಾಣಗಳಲ್ಲಿ PSD ಅಳವಡಿಸಲು ಬಿಎಂಆರ್‌ಸಿಎಲ್‌ ಯೋಜನೆ ರೂಪಿಸಿದೆ. ಇದಕ್ಕಾಗಿ ಅಂದಾಜು ₹1,274 ಕೋಟಿ ವೆಚ್ಚವಾಗಲಿದೆ.

ಹೈಲೈಟ್ಸ್:

  • 177 ಮೆಟ್ರೋ ನಿಲ್ದಾಣಗಳಲ್ಲಿ PSD ಅಳವಡಿಕೆ ಗುರಿ
  • ಯೋಜನೆಗೆ ಅಂದಾಜು ₹1,274 ಕೋಟಿ ವೆಚ್ಚ
  • ಕೇಂದ್ರದ 3ಎ ಹಂತದ ಅನುಮೋದನೆಗೆ PSD ಯೋಜನೆ ಜೋಡಣೆ
  • ಹಾಲಿ ನಿಲ್ದಾಣಗಳಲ್ಲಿ ರಾತ್ರಿ ವೇಳೆ ತಾಂತ್ರಿಕ ಕಾಮಗಾರಿ
  • ಹೆಬ್ಬಾಳ–ಸರ್ಜಾಪುರ 3ಎ ಯೋಜನೆಯ ಪರಿಷ್ಕೃತ ವೆಚ್ಚ ₹25,999 ಕೋಟಿ

http://Visit : www.suddidina.com

₹1,274 ಕೋಟಿ ಯೋಜನೆ: ಎಲ್ಲಿ ಎಷ್ಟು ಖರ್ಚು?

PSD ಯೋಜನೆಯ ಒಟ್ಟು ವೆಚ್ಚದಲ್ಲಿ ಸಾಮಗ್ರಿ ಖರೀದಿಗೆ ಸುಮಾರು ₹747 ಕೋಟಿ, ಸಿವಿಲ್ ಕಾಮಗಾರಿಗಳಿಗೆ ₹317 ಕೋಟಿ ಹಾಗೂ ಸಿಗ್ನಲಿಂಗ್, ಟೆಲಿಕಾಂ ಮತ್ತು ವಿದ್ಯುತ್ ವ್ಯವಸ್ಥೆಗಳ ಮಾರ್ಪಾಡಿಗೆ ₹210 ಕೋಟಿ ಮೀಸಲಿಡುವ ಪ್ರಸ್ತಾವನೆ ಇದೆ.

ಆದರೆ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಪ್ರತ್ಯೇಕವಾಗಿ ಸಲ್ಲಿಸಲಾಗಿಲ್ಲ. ಹೆಬ್ಬಾಳ–ಸರ್ಜಾಪುರ 3ಎ ಹಂತದ ಡಿಪಿಆರ್‌ನ ಭಾಗವಾಗಿಯೇ ಕಳುಹಿಸಲಾಗಿದೆ. ಹೀಗಾಗಿ 3ಎ ಹಂತದ ಯೋಜನೆಗೆ ಕೇಂದ್ರದ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅನುಮೋದನೆ ದೊರೆಯುವವರೆಗೆ PSD ಯೋಜನೆಗೂ ಅಂತಿಮ ಒಪ್ಪಿಗೆ ಸಿಗುವುದಿಲ್ಲ.

ಹಾಲಿ ನಿಲ್ದಾಣಗಳಲ್ಲಿ ಕಾಮಗಾರಿ ಸವಾಲು

ಹೊಸ ನಿಲ್ದಾಣಗಳಲ್ಲಿ PSD ಅಳವಡಿಕೆ ತುಸು ಸುಲಭವಾದರೂ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳ ನಿಲ್ದಾಣಗಳಲ್ಲಿ ಕಾಮಗಾರಿ ನಡೆಸುವುದು ಸವಾಲಿನ ಕೆಲಸವಾಗಿದೆ. ತಾಂತ್ರಿಕ ಕಾಮಗಾರಿಗಳನ್ನು ಮುಖ್ಯವಾಗಿ ರಾತ್ರಿ ವೇಳೆ, ರೈಲು ಸಂಚಾರ ಸ್ಥಗಿತಗೊಂಡ ಬಳಿಕ ನಡೆಸಬೇಕಾಗುತ್ತದೆ. ಅಗತ್ಯವಿದ್ದರೆ ರೈಲುಗಳ ವೇಗ ಕಡಿಮೆ ಮಾಡುವುದು ಅಥವಾ ಸಂಚಾರವನ್ನು ತಾತ್ಕಾಲಿಕವಾಗಿ ನಿಯಂತ್ರಿಸುವ ಪರಿಸ್ಥಿತಿಯೂ ಎದುರಾಗಬಹುದು.

ಟ್ರ್ಯಾಕ್‌ಗೆ ಇಳಿಯುವ ಘಟನೆಗಳು ಆತಂಕ

ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಟ್ರ್ಯಾಕ್‌ಗೆ ಇಳಿಯುವುದನ್ನು ತಡೆಯಲು ಈಗಾಗಲೇ ಭದ್ರತಾ ಸಿಬ್ಬಂದಿ ಹಾಗೂ ಸ್ಟೀಲ್ ಗ್ರಿಲ್‌ಗಳಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಟ್ರ್ಯಾಕ್‌ಗೆ ಇಳಿಯುವ ಘಟನೆಗಳು ಸಂಪೂರ್ಣವಾಗಿ ನಿಂತಿಲ್ಲ. ಈ ಹಿನ್ನೆಲೆಯಲ್ಲಿ PSD ಅಳವಡಿಕೆ ಪ್ರಯಾಣಿಕರ ಸುರಕ್ಷತೆಗೆ ಮಹತ್ವದ ಹೆಚ್ಚುವರಿ ಕವಚವಾಗಬಹುದು.

3ಎ ಹಂತದ ಪರಿಷ್ಕೃತ ಡಿಪಿಆರ್‌

ಹೆಬ್ಬಾಳ–ಸರ್ಜಾಪುರ 37 ಕಿ.ಮೀ. ಕಾರಿಡಾರ್‌ನ ಪರಿಷ್ಕೃತ ಡಿಪಿಆರ್‌ ಕೇಂದ್ರದ ಅನುಮೋದನೆಗಾಗಿ ಕಾಯುತ್ತಿದೆ. ವೆಚ್ಚ ಪರಿಷ್ಕರಣೆಯ ಬಳಿಕ ಯೋಜನೆಯ ಅಂದಾಜು ₹28,405 ಕೋಟಿಯಿಂದ ₹25,999 ಕೋಟಿಗೆ ಇಳಿಕೆಯಾಗಿದೆ. ಕೇಂದ್ರದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯ ಒಪ್ಪಿಗೆ ದೊರೆತ ಬಳಿಕವೇ ಮುಂದಿನ ಹಂತದ ಕಾಮಗಾರಿಗಳಿಗೆ ವೇಗ ಸಿಗಲಿದೆ.

Continue Reading

Trending