ದಿನದ ಸುದ್ದಿ
ಸಂವಿಧಾನ ಪ್ರಜಾತಂತ್ರ ಮತ್ತು ಸಾರ್ವಭೌಮ ಪ್ರಜೆಗಳು
- ನಾ ದಿವಾಕರ
ಸಂವಿಧಾನ ಈ ದೇಶದ ಆತ್ಮ ಪ್ರಜಾತಂತ್ರ ನಮ್ಮ ಉಸಿರು ಎಂದು ಹೇಳುತ್ತಲೇ ಬಂದಿರುವ ನಾವು, ಅಂದರೆ ಈ ದೇಶದ ಸಾರ್ವಭೌಮ ಪ್ರಜೆಗಳು ಈಗ ಉಸಿರುಗಟ್ಟಿ ಕೊನೆಯುಸಿರೆಳೆಯುವ ಹಂತ ತಲುಪುತ್ತಿದ್ದೇವೆ. ಪರಿಶುದ್ಧ ಆತ್ಮ ಇರುವವರೆಗೂ ಜೀವ ನಶಿಸುವುದಿಲ್ಲ ದೇಹ ಕೃಶವಾಗಿ ಅಳಿದರೂ ಆತ್ಮ ಸದಾ ಜೀವಾವಸ್ಥೆಯಲ್ಲಿರುತ್ತದೆ ಎನ್ನುವ ನಂಬಿಕೆಯೂ ನಮ್ಮ ನಡುವೆ ಇದೆ. ಅದಕ್ಕೇ ನಾವು ಆತ್ಮ ಎಂದ ಕೂಡಲೇ ಆಳಕ್ಕಿಳಿದು ನೋಡುವ ಒಂದು ಸೃಷ್ಟಿಕ್ರಿಯೆ ಎಂದು ಭಾವಿಸಿಬಿಡುತ್ತೇವೆ. ವೈಚಾರಿಕ ನೆಲೆಯಲ್ಲಿ, ವೈಜ್ಞಾನಿಕ ತಳಹದಿಯ ಮೇಲೆ ನಿಂತು ನೋಡಿದಾಗ ಆತ್ಮ ಎನ್ನುವುದು ಜೈವಿಕ ಅಸ್ತಿತ್ವವಿಲ್ಲದ ಮಾನವನ ಕಲ್ಪನೆ ಎನ್ನುವುದು ಸ್ಪಷ್ಟವಾಗುತ್ತದೆ.
ಆದರೂ ಒಂದು ಭೌಗೋಳಿಕ ದೇಶವನ್ನು ಮಾನವನ ದೇಹಕ್ಕೆ ಹೋಲಿಸಿದಾಗ ಸಂವಿಧಾನ ಎನ್ನುವುದು ಈ ಕಲ್ಪಿತ ಆತ್ಮ ಎನಿಸಿಕೊಳ್ಳುತ್ತದೆ. ಪ್ರಜಾತಂತ್ರ ಉಸಿರು ಎನಿಸಿಕೊಳ್ಳುತ್ತದೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ದೇಹದ ಅವಯವಗಳಂತೆ ಕಾರ್ಯ ನಿರ್ವಹಿಸುತ್ತವೆ. ಮಾಧ್ಯಮ ಎನ್ನಲಾಗುವ ಸುದ್ದಿ ಪ್ರಸರಣ ಸಂಸ್ಥೆಗಳು ಈ ದೇಹವನ್ನು ಬಾಧಿಸುವ ರೋಗ ರುಜಿನಗಳ ಮೂಲ ಲಕ್ಷಣಗಳನ್ನು ಗ್ರಹಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವಂತೆ ಮಾರ್ಗದರ್ಶನ ನೀಡುವ ಮತ್ತೊಂದು ಆಧಾರಸ್ತಂಭದಂತೆ ಕಾರ್ಯನಿರ್ವಹಿಸುತ್ತದೆ. ಆಂಗ್ಲಭಾಷೆಯಲ್ಲಿ ಇದನ್ನು ಫೋರ್ತ್ ಎಸ್ಟೇಟ್ ಎನ್ನಲಾಗುತ್ತದೆ.
ನಾವು ಸಂವಿಧಾನ ಎಂಬ ಆತ್ಮವನ್ನು ಪೂಜಿಸುತ್ತಾ, ಆರಾಧಿಸುತ್ತಾ, ಗೌರವಿಸುತ್ತಾ ಗ್ರಾಂಥಿಕವಾಗಿ ಕಿಂಚಿತ್ತೂ ಧಕ್ಕೆಯಾಗದಂತೆ ಕಾಪಾಡಿಕೊಂಡು ಬಂದಿದ್ದೇವೆ. ಸಂವಿಧಾನವನ್ನು ಬದಲಿಸುವ ಪ್ರಸ್ತಾಪ ಎದುರಾದ ಕೂಡಲೇ ಪ್ರತಿರೋಧದ ದನಿಗಳು ಮುಗಿಲುಮುಟ್ಟುತ್ತವೆ. ಸಂವಿಧಾನದ ಮೂಲ ಆಶಯಗಳನ್ನು ಸಂರಕ್ಷಿಸಲು ಪಣ ತೊಟ್ಟಿರುವ ಅಸಂಖ್ಯಾತ ದನಿಗಳು ನಮ್ಮ ನಡುವೆ ಇವೆ. ಸಾಮಾಜಿಕ ನ್ಯಾಯ, ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಪ್ರಗತಿ ಈ ಧ್ಯೇಯಗಳನ್ನು ಸಾಧಿಸಲು ಕಳೆದ 73 ವರ್ಷಗಳಲ್ಲಿ ಅನೇಕ ರೀತಿಯ ಹೋರಾಟಗಳೂ ನಡೆದಿವೆ.
ಈ ಆಶಯಗಳನ್ನು ಭಾರತೀಯ ಪ್ರಭುತ್ವ ಸಾಧಿಸಲು ಸಾಧ್ಯವಾಗಿದೆಯೇ? ಈ ಪ್ರಶ್ನೆ ಎದುರಾದ ಕೂಡಲೇ ಅಂಕಿಅಂಶಗಳು ನಮ್ಮೆದುರು ನಿಲ್ಲುತ್ತವೆ. 70 ವರ್ಷಗಳಲ್ಲಿ ಏನೂ ಸಾಧನೆಯಾಗಿಲ್ಲ ಎಂದು ಹೇಳುತ್ತಾ ಆರು ವರ್ಷಗಳ ಕನ್ನಡಿ ಹಿಡಿದರೂ , ಸಾಧನೆಯ ಹೆಜ್ಜೆಗಳು ಮತ್ತು ಮುನ್ನಡೆಯ ಕೋಷ್ಟಕಗಳು ನಮ್ಮೆದುರು ನಿಲ್ಲುತ್ತವೆ. ಈ ಸಾಧನೆಗಳೇನಾದರೂ ಸಾಧ್ಯವಾಗಿದ್ದರೆ ಅದು ಸ್ವಾತಂತ್ರ್ಯೋತ್ತರ ಭಾರತದ ಆರಂಭಿಕ ವರ್ಷಗಳಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಮತ್ತು ಜಾರಿಗೊಳಿಸಿದ ಯೋಜನೆಗಳ ಫಲ ಎಂದಷ್ಟೇ ಹೇಳಬಹುದು.
ಆದರೆ ಸಾಧನೆಯ ಮೆಟ್ಟಿಲುಗಳನ್ನು ಪರಿಶೀಲಿಸುತ್ತಾ ಹೋದಂತೆಲ್ಲಾ ನಮಗೆ ತಾರತಮ್ಯದ ಕಂದಕಗಳು ಕಾಣುತ್ತಲೇ ಹೋಗುತ್ತವೆ. ಸಾಮಾಜಿಕ ನೆಲೆಯಲ್ಲಾಗಲೀ, ಆರ್ಥಿಕ ನೆಲೆಯಲ್ಲಾಗಲೀ ಈ ಕಂದಕಗಳು ಹೆಜ್ಜೆ ಹೆಜ್ಜೆಗೂ ಗೋಚರಿಸುವಷ್ಟು ಮಟ್ಟಿಗೆ ಮುನ್ನಡೆಯ ಹೆಜ್ಜೆಗಳಲ್ಲಿ ಲೋಪಗಳನ್ನು ಗುರುತಿಸಬಹುದು. ನಾವು ಸಾಮಾಜಿಕ ನ್ಯಾಯ ಸಾಧಿಸುವ ಮಾರ್ಗದಲ್ಲಿ ಸಾಕಷ್ಟು ಮುನ್ನಡೆದಿದ್ದೇವೆ.
ಆದರೆ ಜಾತಿ ದೌರ್ಜನ್ಯ , ಜಾತಿ ತಾರತಮ್ಯ , ಜಾತಿ ವೈಷಮ್ಯ ಇಂದಿಗೂ ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದನ್ನೇ ಸಾಮಾಜಿಕ ನ್ಯಾಯದ ಉನ್ನತ ಹಂತ ಎಂಬ ಭಾವನೆ ಆಳುವ ವರ್ಗಗಳಲ್ಲಿದೆ. ಅಲ್ಲಿಯೂ ಸಹ ಶೋಷಿತ ಸಮುದಾಯದ ಒಂದು ವರ್ಗ ಅವಕಾಶವಂಚಿತವಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ.
ಮೀಸಲಾತಿ ಸಾಮಾಜಿಕ ನ್ಯಾಯ ಸಾಧಿಸುವ ಒಂದು ಆಯಾಮವಷ್ಟೇ. ಶೋಷಿತ ಸಮುದಾಯಗಳ ಆರ್ಥಿಕ ಸಬಲೀಕರಣ ಕೇವಲ ಮೀಸಲಾತಿಯಿಂದ ಸಾಧ್ಯವಾಗುವುದಿಲ್ಲ ಎನ್ನುವುದು ಅಂಬೇಡ್ಕರರಿಗೂ ತಿಳಿದಿತ್ತು. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ, ಆರ್ಥಿಕ ಸಬಲೀಕರಣದ ನೀತಿಗಳು ಮತ್ತು ಅರ್ಥವ್ಯವಸ್ಥೆಯಲ್ಲಿ ಸಮಾನ ನೆಲೆಯ ಪ್ರಾತಿನಿಧ್ಯ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪರಿಪೂರ್ಣ ಸಾಮಾಜಿಕ ನ್ಯಾಯ ಸಾಧಿಸುವುದು ಅಸಾಧ್ಯ ಎಂದು ಅರಿತಿದ್ದರಿಂದಲೇ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು, ಭೂ ರಾಷ್ಟ್ರೀಕರಣಕ್ಕಾಗಿ ಆಗ್ರಹಿಸಿದ್ದರು. ಕಾರ್ಮಿಕರ ರಕ್ಷಣೆಗಾಗಿ ಹಲವು ಸುಧಾರಣಾ ಕ್ರಮಗಳನ್ನು ಪ್ರಸ್ತಾಪಿಸಿದ್ದರು. ಇದು ತಾತ್ವಿಕವಾಗಿ ಮಾಕ್ರ್ಸ್ ವಾದಿಗಳ ಆಗ್ರಹಗಳಿಗಿಂತಲೂ ಭಿನ್ನವಾಗಿರಲಿಲ್ಲ.
ಆದರೆ ಭಾರತದ ಪ್ರಭುತ್ವ ಈ ಸಾಂವಿಧಾನಿಕ ಆಶಯಗಳನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಅನುಸರಿಸುತ್ತಿರುವುದನ್ನೂ, ಅಧಿಕಾರ ರಾಜಕಾರಣದ ಒಂದು ಅಸ್ತ್ರದಂತೆ ಬಳಸುತ್ತಿರುವುದನ್ನೂ ಗಮನಿಸುತ್ತಲೇ ಬಂದಿದ್ದೇವೆ. ಹಾಗೆಯೇ ಸಾಮಾಜಿಕ ನ್ಯಾಯ ಸಾಧಿಸುವ ಮೂಲಕ, ಸಮಾಜೋ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲೂ ಭಾರತದ ಪ್ರಭುತ್ವ ಸೋತಿದೆ.
73 ವರ್ಷಗಳ ನಂತರ ಈ ಸಮಾನತೆಯ ಕನಸು ಕನಸಾಗಿಯೇ ಉಳಿದಿರುವುದನ್ನು ಗಮನಿಸಬಹುದು. ಸಾರ್ವಜನಿಕರ ದೃಷ್ಟಿಯಲ್ಲಿ ಇದು ಪ್ರಭುತ್ವದ ಸೋಲು ಎನಿಸಿದರೂ, ಅಧಿಕಾರ ಮತ್ತು ಅಧಿಪತ್ಯ ರಾಜಕಾರಣದ ದೃಷ್ಟಿಯಲ್ಲಿ ಇದು ಭಾರತೀಯ ಪ್ರಭುತ್ವದ ಗೆಲುವು ಎನ್ನಬಹುದು. ಏಕೆಂದರೆ ಈ ದೇಶದ ಪ್ರಭುತ್ವ ಯಾವುದೇ ಕಾಲಘಟ್ಟದಲ್ಲೂ ಶೋಷಿತರ ಪರವಾಗಿ ಇರಲಿಲ್ಲ.
ಪ್ರಭುತ್ವದ ಈ ವೈಫಲ್ಯವನ್ನು ನಾವು ಸರ್ಕಾರಗಳ ವೈಫಲ್ಯವೆಂದೋ, ರಾಜಕೀಯ ಪಕ್ಷಗಳ ವೈಫಲ್ಯವೆಂದೋ ಭಾವಿಸುತ್ತೇವೆ. ವೈಫಲ್ಯದ ಪ್ರತಿಯೊಂದು ಹೆಜ್ಜೆಯಲ್ಲೂ ಸಂವಿಧಾನದ ಉಲ್ಲಂಘನೆಯನ್ನು ಕಾಣಬಹುದಾದರೂ ನಾವು ಅದನ್ನು ಆಡಳಿತಾತ್ಮಕ ಚೌಕಟ್ಟಿನಲ್ಲಿ ವಿಶ್ಲೇಷಿಸುತ್ತಿದ್ದೇವೆಯೇ ಹೊರತು ಸಂವಿಧಾನದ ಚೌಕಟ್ಟಿನಲ್ಲಿ ವಿಶ್ಲೇಷಿಸುತ್ತಿಲ್ಲ.
ಮೂಲ ಸಾಂವಿಧಾನಿಕ ಆಶಯಗಳಾದ ಸಮ ಸಮಾಜ ಮತ್ತು ಶೋಷಣೆ ರಹಿತ ಸಮಾಜದ ನಿರ್ಮಾಣಕ್ಕಾಗಿ ಹಾತೊರೆಯುವ ಮನಸುಗಳು ಈ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ಮಾರ್ಗಗಳನ್ನು ಕಂಡುಕೊಂಡಿವೆ. ಶಾಂತಿಯುತ ಪ್ರತಿಭಟನೆ, ಹಕ್ಕೊತ್ತಾಯಗಳು, ಮುಷ್ಕರಗಳು, ಚಳುವಳಿ, ಆಂದೋಲನ, ತೀವ್ರವಾದಿ ಹೋರಾಟ, ಸಶಸ್ತ್ರ ಹೋರಾಟ ಹೀಗೆ ಹಲವು ಮಾರ್ಗಗಳಲ್ಲಿ ಶೋಷಣೆಯಿಲ್ಲದ ಸಮಾಜಕ್ಕಾಗಿ ಹೋರಾಟಗಳು ನಡೆದಿವೆ, ನಡೆಯುತ್ತಿವೆ.
ದುರಂತ ಎಂದರೆ ಈ ಹೋರಾಟಗಳನ್ನು ನಾವೇ ಹಿಂಸಾತ್ಮಕ ಮತ್ತು ಅಹಿಂಸಾತ್ಮಕ, ಸಾಂವಿಧಾನಿಕ ಮತ್ತು ಅಸಾಂವಿಧಾನಿಕ, ಕಾನೂನುಬದ್ಧ ಮತ್ತು ಕಾನೂನುಬಾಹಿರ ಎಂದು ವಿಂಗಡಿಸಿಬಿಟ್ಟಿದ್ದೇವೆ. ತನ್ನ ಅಧಿಕಾರ ಕೇಂದ್ರವನ್ನು ಅಲುಗಾಡಿಸುವ ಯಾವುದೇ ಚಳುವಳಿ ಅಥವಾ ಹೋರಾಟಗಳು ಪ್ರಭುತ್ವದ ದೃಷ್ಟಿಯಲ್ಲಿ ಸಹನೀಯ ಎನಿಸುವುದಿಲ್ಲ , ಕಾನೂನುಬಾಹಿರ ಎನಿಸಿಬಿಡುತ್ತದೆ.
ಆದರೆ ಶೋಷಿತರ ದೃಷ್ಟಿಯಲ್ಲಿ ಎಲ್ಲ ರೀತಿಯ ಹೋರಾಟಗಳಿಗೂ ಒಂದು ತಾರ್ಕಿಕ ನೆಲೆ ಇರುತ್ತದೆ. ಎಲ್ಲ ಹೋರಾಟಗಳ ಗುರಿ ಸಮಾನತೆ ಮತ್ತು ಸಾಮಾಜಿಕ ಘನತೆಯನ್ನು ಸಾಧಿಸುವುದೇ ಆಗಿರುತ್ತದೆ. ಹಾಗಾಗಿಯೇ ಪ್ರಭುತ್ವ ಸಂವಿಧಾನದ ಚೌಕಟ್ಟಿನಲ್ಲೇ ಸಂವಿಧಾನ ಬಾಹಿರ ಕಾನೂನುಗಳನ್ನು ರಚಿಸುವ ಮೂಲಕ ಈ ಪ್ರಜಾಂದೋಲನಗಳ ವಿಘಟನೆಗೆ ಮಾರ್ಗಗಳನ್ನು ಹುಡುಕುತ್ತಿರುತ್ತದೆ.
1960ರ ದಶಕದಿಂದ ಇವತ್ತಿನವರೆಗೂ ಪ್ರಭುತ್ವ ಈ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಇಂದು ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ಸಿಡಿದೆದ್ದಿರುವ ನಾವು, ಕಳೆದ ನಾಲ್ಕು ದಶಕಗಳಲ್ಲಿ ಭೂ ಸುಧಾರಣೆ ಮತ್ತು ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುವುದನ್ನೇ ಮರೆತಿದ್ದೇವೆ ಎನ್ನುವುದನ್ನೂ ಗಮನಿಸಬೇಕು.
ಭೂ ಹೋರಾಟಗಳಿಗೆ ಅಂತ್ಯ ಹಾಡಲೆಂದೇ ಪ್ರಭುತ್ವ ನಕ್ಸಲ್ ಭೂತವನ್ನೂ ಸೃಷ್ಟಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಆದರೆ ಭೂಮಿ ಇಲ್ಲದವರಿಗೆ ಭೂಮಿ ಹಂಚುವುದು, ಭೂ ಒಡೆತನದ ಮಿತಿಯನ್ನು ಹೇರುವುದು, ಭೂಮಾಲೀಕರ ದೌರ್ಜನ್ಯ ಮತ್ತು ಅಟ್ಟಹಾಸದಿಂದ ಗ್ರಾಮೀಣ ಬಡಜನತೆಯನ್ನು, ಶೋಷಿತ ಸಮುದಾಯಗಳನ್ನು ರಕ್ಷಿಸುವುದು ಕೇವಲ ನಕ್ಸಲರ ಕಾರ್ಯಸೂಚಿಯಾಗಬೇಕಿಲ್ಲ ಅಲ್ಲವೇ ?
ಪ್ರಜಾತಂತ್ರದ ಮಾರ್ಗದಲ್ಲಿಯೇ ಈ ಹೋರಾಟಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ನಾವು ಯೋಚಿಸುವುದನ್ನೇ ಬಿಟ್ಟಿದ್ದೇವೆ ಅಲ್ಲವೇ ? ಭೂ ಸ್ವಾಧೀನ ಒತ್ತಟ್ಟಿಗಿರಲಿ, ಭೂ ಸುಧಾರಣೆಯ ಕ್ರಮಗಳನ್ನು ಚಾಲ್ತಿಯಲ್ಲಿರುವ ಕಾನೂನುಗಳ ಅನ್ವಯವೇ ಜಾರಿಗೊಳಿಸಲೂ ಒತ್ತಾಯಿಸಲಾಗಿಲ್ಲ. ಪರಿಣಾಮಕಾರಿಯಾಗಿ ಅನುಷ್ಟಾನವಾಗಿದ್ದ ಭೂ ಸುಧಾರಣಾ ಕ್ರಮಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲೂ ಸಹ ಯಾವುದೇ ಪರಿಣಾಮಕಾರಿ ಆಂದೋಲನಗಳು ರೂಪುಗೊಂಡಿಲ್ಲ.
ಬಹುಶಃ ಉತ್ಪಾದನಾ ಪ್ರಕ್ರಿಯೆಯಲ್ಲಿನ ಶ್ರಮ ವಿಭಜನೆಯಂತೆ ಇಲ್ಲಿಯೂ ಸಹ ವಿಭಜನೆಯ ಸೂತ್ರಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಹಾಗಾಗಿಯೇ ಭೂಮಾಲೀಕರಿಂದ ಭೂಮಿಯನ್ನು ಕಸಿದುಕೊಳ್ಳುವುದು, ನಕ್ಸಲ್ ಪರಿಕಲ್ಪನೆಯಲ್ಲಿ, ಹಿಂಸಾತ್ಮಕ ಎನಿಸಿಬಿಟ್ಟಿತು. ಅಹಿಂಸಾತ್ಮಕವಾದ ಪ್ರಯತ್ನಗಳು ನಡೆಯಲೂ ಇಲ್ಲ.
ಏಕೆ ನಡೆಯಲಿಲ್ಲ ? ಕಾರಣ ಸ್ಪಷ್ಟ. ಈ ದೇಶದ ಭೂಮಾಲೀಕ ವರ್ಗಗಳು ಅಧಿಪತ್ಯ ರಾಜಕಾರಣದ ಕೇಂದ್ರ ಬಿಂದು ಆಗಿವೆ. ಔದ್ಯಮಿಕ ಬಂಡವಾಳಗಾರರಷ್ಟೇ ಪ್ರಬಲವಾಗಿ ಈ ಭೂಮಾಲೀಕ ವರ್ಗ ಈ ದೇಶದ ಅಧಿಕಾರ ರಾಜಕಾರಣವನ್ನು ಪಕ್ಷಗಳ ಹೆಸರಿನಲ್ಲಿ ನಿರ್ವಹಿಸುತ್ತಿವೆ. ಈ ವರ್ಗಗಳ ಯಥಾಸ್ಥಿತಿವಾದ ಮತ್ತು ಅಧಿಕಾರದಾಹಕ್ಕೆ ಬಲಿಯಾಗಿರುವುದು ಜನಪರ ಹೋರಾಟಗಳು ಮತ್ತು ಈ ಹೋರಾಟಗಳನ್ನು ಪ್ರತಿನಿಧಿಸುವ ಅಸಂಖ್ಯಾತ ಸಂಘಟನೆಗಳು.
ಕಾರ್ಮಿಕ ಸಂಘಟನೆಗಳ ಹೋರಾಟವನ್ನೇ ಗಮನಿಸಿದರೆ, ಮುಷ್ಕರ ಹೋರಾಟಗಳ ಮೂಲಕ ಹಕ್ಕೊತ್ತಾಯಗಳನ್ನು ಮಂಡಿಸುವುದನ್ನು “ ಕಮ್ಯುನಿಸ್ಟ್ ” ಎಂದು ಹೀಗಳೆದು, ರಾಜಿ ಸಂಧಾನಗಳ ಮಾರ್ಗವನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡ ನಿದರ್ಶನಗಳು ಹೇರಳವಾಗಿವೆ. ಈಗ ಒಂದೊಂದೇ ಸಂಸ್ಥೆಗಳು ಖಾಸಗಿ ಪಾಲಾಗುತ್ತಿರುವಾಗ ರಾಜಿ ಸಂಧಾನ ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತವೆ ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಏಕೆಂದರೆ ಹೋರಾಟದ ಮಾರ್ಗಗಳಲ್ಲಿ ನಾವೇ ತಡೆಗೋಡೆಗಳನ್ನು ನಿರ್ಮಿಸಿಬಿಟ್ಟಿದ್ದೇವೆ ಅಥವಾ ಪ್ರಭುತ್ವ ನಿರ್ಮಿಸಿರುವ ದಿಬ್ಬಗಳಿಗೆ ಆಸರೆಯಾಗಿ ನಿಂತಿದ್ದೇವೆ.
ನಾವೇ ನಿರ್ಮಿಸಿರುವ ಬೌದ್ಧಿಕ ತಡೆಗೋಡೆಗಳನ್ನು ಕಿತ್ತೊಗೆಯುವುದು ಕಷ್ಟವೇನಲ್ಲ. ಆದರೆ ನಾಲ್ಕು ದಶಕಗಳ ಅವಧಿಯಲ್ಲಿ ಈ ಪ್ರಕ್ರಿಯೆಗೆ ಪ್ರಭುತ್ವ ತನ್ನದೇ ಆದ ನೆಲೆಗಳನ್ನು ಒದಗಿಸಿದೆ. ಶೋಷಣೆಗೊಳಗಾಗಿರುವ ಕೋಟ್ಯಂತರ ಜನತೆಯನ್ನು ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸಿ, ಜಾತಿ ಧರ್ಮ ಮತ್ತು ಪ್ರಾದೇಶಿಕ ನೆಲೆಗಳಲ್ಲಿ ವಿಭಜಿಸಿರುವ ಪ್ರಭುತ್ವ ಶೋಷಿತ ಸಮುದಾಯಗಳ ಐಕಮತ್ಯ ಅಸಾಧ್ಯ ಎನ್ನುವಷ್ಟು ಮಟ್ಟಿಗೆ ಅಸ್ಮಿತೆಗಳ ಗೋಡೆಗಳನ್ನು ನಿರ್ಮಿಸಿಬಿಟ್ಟಿದೆ.
ಈ ಬೆಳವಣಿಗೆಗಳು ಹಠಾತ್ತನೆ ಸಂಭವಿಸಿದ್ದಲ್ಲ ಎನ್ನುವುದನ್ನೂ ಗಮನಿಸಬೇಕಿದೆ. 1980ರ ದಶಕದ ನವ ಉದಾರವಾದ ಮತ್ತು ಜಾತಿ ರಾಜಕಾರಣ, 1990ರ ದಶಕದ ಮತೀಯವಾದ ಮತ್ತು ಸಾಂಸ್ಕøತಿಕ ರಾಷ್ಟ್ರೀಯತೆ, 2000ದ ನಂತರದ ನಾಲ್ಕನೆಯ ಔದ್ಯಮಿಕ ಕ್ರಾಂತಿ ಮತ್ತು ಡಿಜಿಟಲೀಕರಣ ಈ ಎಲ್ಲ ಪ್ರಕ್ರಿಯೆಯ ಗರ್ಭದಲ್ಲಿ ಶೋಷಿತ ಸಮುದಾಯಗಳ ವಿಘಟನೆಯ ಬೀಜಗಳು ಅಡಗಿವೆ.
ದಲಿತ ಸಮುದಾಯಗಳ ಭೂಮಿಯ ಹಕ್ಕು ಮತ್ತು ಅಲ್ಪ ಪ್ರಮಾಣದಲ್ಲಿ ಹೊಂದಿರುವ ಭೂಮಿಯ ರಕ್ಷಣೆಗಾಗಿ ಈಗ ಒಕ್ಕೊರಲಿನ ದನಿ ಕೇಳಿಬರುತ್ತಿದೆ. ಏಕೆಂದರೆ ಕೇಂದ್ರ ಸರ್ಕಾರದ ಕೃಷಿ ಮಸೂದೆ ಭೂಮಿಯ ಖಾಸಗೀಕರಣಕ್ಕೆ ಹಾದಿಯನ್ನು ಸುಗಮವಾಗಿಸಿದೆ. ಆದರೆ ನವ ಉದಾರವಾದ ಮತ್ತು ಸಾಂಸ್ಕøತಿಕ ರಾಷ್ಟ್ರೀಯತೆಯ ಜಂಟಿ ಕಾರ್ಯಾಚರಣೆಯಲ್ಲಿ ಈ ಎರಡೂ ಅಂಶಗಳನ್ನು ನಾವೇ ನೇಪಥ್ಯಕ್ಕೆ ಸರಿಸಿದ್ದೇವೆ ಎನ್ನುವುದನ್ನೂ ಗಮನಿಸಬೇಕಲ್ಲವೇ ? ಈಗ ಅಲ್ಪಸ್ವಲ್ಪ ಭೂಮಿ ಇರುವವರೂ ತಮ್ಮ ನೆಲೆ ಕಳೆದುಕೊಳ್ಳಲಿದ್ದಾರೆ, ಭೂಮಿ ನಮ್ಮ ಹಕ್ಕು ಎಂದು ಭಾವಿಸುವವರು ಅಸಹಾಯಕ ಸ್ಥಿತಿ ತಲುಪುವಂತಾಗಿದೆ. ಈ ಸಂದಿಗ್ಧತೆಯ ಮೂಲವನ್ನು ಅಯೋಧ್ಯೆಯ ಕಾಲಾಳುಗಳ ಸದ್ದಿನಲ್ಲಿ ಕೇಳಿಸಿಕೊಳ್ಳಲು ಈಗಲಾದರೂ ಸಾಧ್ಯವೇ ? ಯೋಚಿಸೋಣ.
ಬಂಡವಾಳ ವ್ಯವಸ್ಥೆ ಪ್ರಬಲವಾದಂತೆಲ್ಲಾ ಹೋರಾಟದ ನೆಲೆಗಳನ್ನು ನಾಶಪಡಿಸುತ್ತಲೇ ಮುನ್ನಡೆಯುತ್ತದೆ. ಈ ಮುನ್ನಡೆಗೆ ಬಲಪಂಥೀಯ ರಾಜಕಾರಣದ ಹೆಗಲು ದೊರೆತರೆ ಏನಾಗುತ್ತದೆ ಎನ್ನುವುದನ್ನು ಮೂರು ದಶಕಗಳ ಭಾರತದ ರಾಜಕೀಯ ಬೆಳವಣಿಗೆಗಳು ನಿರೂಪಿಸಿವೆ. ಭಾರತದಂತಹ ಜಾತಿವ್ಯವಸ್ಥೆಯಲ್ಲಿ ಈ ವಿಘಟನೆ ಎಷ್ಟು ಸುಲಭಸಾಧ್ಯ ಎನ್ನುವುದನ್ನೂ ಪ್ರಭುತ್ವ ನಿರೂಪಿಸಿದೆ. ಮಂಡಲ-ಕಮಂಡಲ ರಾಜಕಾರಣದ ಕೂಪದಲ್ಲಿ ಎಷ್ಟೋ ಹೋರಾಟಗಳು ಇಂದಿಗೂ ಅಡಗಿ ಕುಳಿತಿವೆ. ಬಂಡವಾಳ ಮತ್ತು ಶ್ರಮಜೀವಿಗಳ ನಡುವಿನ ಸಂಘರ್ಷದ ನೆಲೆಯಲ್ಲಿ ಎಷ್ಟೋ ಜೀವಗಳು ನಲುಗಿಹೋಗಿವೆ. ಈ ಬಲಿಯಾದ ಜೀವಗಳು ಆಳುವ ವರ್ಗಗಳಿಗೆ ಬಂಡವಾಳವಾಗುತ್ತಿವೆ ನಮಗೆ ಕೇವಲ ಸ್ಮಾರಕಗಳಾಗುತ್ತಿವೆ.
ಭೀಮ ಕೊರೆಗಾಂವ್ ಸಂದರ್ಭದಲ್ಲಿ ಈ ದ್ವಂದ್ವವನ್ನು ನಾವು ಸ್ಪಷ್ಟವಾಗಿ ಗಮನಿಸಬಹುದು. ಅಥವಾ ಊನ, ದಾದ್ರಿ , ಜೆ ಎನ್ ಯು ಘಟನೆಗಳ ಸಂದರ್ಭದಲ್ಲಿ ಈ ವಿರೋಧಾಭಾಸಗಳನ್ನು ಗಮನಿಸಬಹುದು. ಮಾನವ ಹಕ್ಕುಗಳಿಗಾಗಿ, ಪರಿಸರ ರಕ್ಷಣೆಗಾಗಿ, ಆದಿವಾಸಿಗಳ ಮೂಲ ಸಂಸ್ಕøತಿ ಮತ್ತು ಜೀವನೆಲೆಗಳ ರಕ್ಷಣೆಗಾಗಿ ನಡೆಯುವ ಹೋರಾಟಗಳಿಗೆ ವಿಮುಖವಾಗುವ ಮೂಲಕ ಅನೇಕಾನೇಕ ಹೋರಾಟಗಳು ಪ್ರಭುತ್ವದ ಕಬಂಧ ಬಾಹುಗಳಿಗೆ ಸಿಲುಕಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಇನ್ನು ಕೆಲವು ತಟಸ್ಥ ನೀತಿ ಅನುಸರಿಸಿ ಯಥಾಸ್ಥಿತಿವಾದಕ್ಕೆ ಶರಣಾಗಿ ನಿಷ್ಕ್ರಿಯವಾಗಿವೆ, ನಿಸ್ತೇಜವಾಗಿವೆ.
ಈ ನಿಷ್ಕ್ರಿಯತೆಯಿಂದ ಹೊರಬರುವ ಕಾಲ ಸನ್ನಿಹಿತವಾಗುತ್ತಿದೆ. ಏಕೆಂದರೆ ಬಂಡವಾಳ ವ್ಯವಸ್ಥೆ ನವ ಉದಾರವಾದದ ಸಂಪೂರ್ಣ ಸಾರ್ಥಕತೆಯತ್ತ ದಾಪುಗಾಲು ಹಾಕುತ್ತಿದೆ. ಭಾರತದ ಪ್ರಭುತ್ವವೂ ಈ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಸಮಸಮಾಜ , ಸಮಾನತೆ, ಸೌಹಾರ್ದತೆಯನ್ನು ಸಾಧಿಸುವ ಮತ್ತು ಶೋಷಣೆ ಹಾಗೂ ದೌರ್ಜನ್ಯರಹಿತ ಸಮಾಜದ ನಿರ್ಮಾಣದ ಕನಸುಗಳು ಸಂಪೂರ್ಣವಾಗಿ ಭಗ್ನವಾಗುವ ಸಂದರ್ಭದಲ್ಲಿ ನಾವಿದ್ದೇವೆ. ಈ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟವೂ ಸಂವಿಧಾನಬಾಹಿರವಾಗಲಾರದು ಎನ್ನುವ ವಾಸ್ತವವನ್ನು ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಿದೆ.
ಏಕೆಂದರೆ ಪ್ರಭುತ್ವ ಸಂವಿಧಾನಬಾಹಿರವಾಗಿಯೇ ಪ್ರಜೆಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ಕೃಷಿ ಕಾಯ್ದೆಗಳ ತಿದ್ದುಪಡಿ, ಹಣಕಾಸು ಮಸೂದೆಗಳು ಈ ದೇಶದ ಶೋಷಿತ ಸಮುದಾಯಗಳನ್ನು ಮತ್ತಷ್ಟು ಶೋಷಣೆಗೊಳಪಡಿಸುವ ನಿಟ್ಟಿನಲ್ಲಿ ಸಾಗುತ್ತಿವೆ. ಹಿತವಲಯದಲ್ಲಿರುವ ಸುಶಿಕ್ಷಿತ-ಸುರಕ್ಷಿತ ವರ್ಗಗಳಿಗೂ ಇದರ ಬಿಸಿ ತಟ್ಟಲಿದೆ. ಆದರೆ ಆ ವೇಳೆಗೆ ಅರ್ಧದೇಹ ಸುಟ್ಟುಹೋಗಿರಬಹುದು. ಏನೇ ಆದರೂ ತಾವು ನಿಂತ ನೆಲೆ ಕುಸಿಯುತ್ತಿದೆ ಎಂದಾಗ ಮನುಕುಲ ಒಮ್ಮೆಲೆ ಚಿಮ್ಮಿ ಹೊರಬರುತ್ತದೆ. ಇದು ಇತಿಹಾಸ ನಿರೂಪಿಸಿರುವ ಸತ್ಯ. ಈ ಸಂದರ್ಭದಲ್ಲೇ ಭಾರತದ ಶೋಷಿತ ಸಮುದಾಯಗಳು, ಅವಕಾಶವಂಚಿತರು, ದೌರ್ಜನ್ಯ ಮತ್ತು ತುಳಿತಕ್ಕೊಳಗಾದವರು ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.
ಅರಣ್ಯ , ಜಲ ಮತ್ತು ಭೂಮಿಯ ಒಡಲಲ್ಲಿರುವ ಸಮಸ್ತ ನೈಸರ್ಗಿಕ ಸಂಪತ್ತು ಕಾರ್ಪೋರೇಟ್ ಮಾರುಕಟ್ಟೆಯ ವಶಕ್ಕೊಳಪಟ್ಟಾಗ ಅಸ್ಮಿತೆಗಳ ಲೋಕವೂ ಕುಸಿಯುತ್ತದೆ. ಏಕೆಂದರೆ ಹಣಕಾಸು ಬಂಡವಾಳ ಯುಗದಲ್ಲಿ ಶೋಷಕರು ಮತ್ತು ಶೋಷಿತರು ಎನ್ನುವ ಎರಡೇ ವರ್ಗಗಳು ಉಳಿಯುತ್ತವೆ. ಇಂದು ಪ್ರತಿರೋಧದ ದನಿಗಳನ್ನು ದಮನಿಸುವ ಕ್ರೌರ್ಯವನ್ನು ಸಮರ್ಥಿಸಲು ಸಾಕಷ್ಟು ದನಿಗಳು ಕೇಳಿಬರುತ್ತಿವೆ. ಏಕೆಂದರೆ ಈ ದನಿಗಳು ಅಸಮಾನತೆಯನ್ನೇ ಪೋಷಿಸುವ ಒಂದು ಕ್ರೂರ ವ್ಯವಸ್ಥೆಯ ಫಲಾನುಭವಿಗಳಾಗಿವೆ. ಈ ಫಲಾನುಭವಿಗಳು ಇರುವ ಹಿತವಲಯಗಳು ಹಂತಹಂತವಾಗಿ ಇದೇ ಕ್ರೌರ್ಯಕ್ಕೆ ಬಲಿಯಾಗುತ್ತವೆ.
ಶೋಷಿತರಲ್ಲಿ ಅಸ್ಮಿತೆಗಳ ಚೌಕಟ್ಟುಗಳಿರುತ್ತವೆ. ಆದರೆ ಶೋಷಕರಿಗೆ ಇರುವುದಿಲ್ಲ. ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆ ಈ ಶೋಷಕ ವರ್ಗದೊಡನೆ ಒಂದಾದಾಗ ಶೋಷಿತರ ದನಿಗಳು ಒಂದಾಗುತ್ತವೆ. ಭೂಮಿಯ ಪ್ರಶ್ನೆ ಈ ದನಿಗಳನ್ನು ಒಂದುಗೂಡಿಸುವ ನೆಲೆಯಾಗಿರುತ್ತದೆ. ನಾವು ಸಂವಿಧಾನವನ್ನು ಗ್ರಾಂಥಿಕವಾಗಿ ಮಾತ್ರ ಸಂರಕ್ಷಿಸುತ್ತಿದ್ದೇವೆ ಎನ್ನುವ ಪ್ರಜ್ಞೆ ನಮ್ಮಲ್ಲಿದ್ದರೆ, ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಲು ಸಾಧ್ಯ . ಪ್ರತಿರೋಧದ ದನಿಗಳೇ ಸಂವಿಧಾನ ವಿರೋಧಿ ಎನ್ನುವಂತಹ ಕಾಯ್ದೆ ಕಾನೂನುಗಳನ್ನು ನಮ್ಮ ಕಣ್ಣೆದುರಿನಲ್ಲೇ ಜಾರಿಗೊಳಿಸಲಾಗುತ್ತಿದೆ. ಈ ಕಾನೂನುಗಳ ವಿರುದ್ಧ ಹೋರಾಡುವುದೇ ಸಂವಿಧಾನ ರಕ್ಷಣೆಯ ಪ್ರಥಮ ಹೆಜ್ಜೆಯಾಗಬೇಕಿದೆ.
ಇದು ಎಡ-ಬಲದ ನಡುವಿನ ಸಂಘರ್ಷ ಮಾತ್ರವಲ್ಲ. ಶೋಷಕರು ಮತ್ತು ಶೋಷಿತರು, ಬಂಡವಾಳ ಮತ್ತು ಶ್ರಮ, ಬಂಡವಾಳಿಗ ಮತ್ತು ಶ್ರಮಿಕ, ಭೂಮಾಲೀಕ ಮತ್ತು ಭೂಹೀನ, ಮೇಲ್ಜಾತಿ ಮತ್ತು ದಲಿತರು, ಪುರುಷ ಪ್ರಧಾನ ವ್ಯವಸ್ಥೆ ಮತ್ತು ಮಹಿಳೆಯರು, ಶ್ರೀಮಂತರು ಮತ್ತು ಬಡಜನತೆ ಹೀಗೆ ಹಲವು ಆಯಾಮಗಳ ಸಂಘರ್ಷ. ಈ ಸಂಘರ್ಷ ತನ್ನ ತಾರ್ಕಿಕ ಅಂತ್ಯ ತಲುಪಬೇಕಾದರೆ ನಾವು ನಮ್ಮ ಹೋರಾಟದ ನೆಲೆಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳಬೇಕು. ಜಾತಿ, ಮತ ಮತ್ತು ಸಮುದಾಯಗಳ ಅಸ್ಮಿತೆಗಳಿಂದಾಚೆಗೆ ಯೋಚಿಸಬೇಕು.
ಅಲ್ಲಿ ನಮಗೆ ಅಂಬೇಡ್ಕರ್ ಮತ್ತು ಮಾಕ್ರ್ಸ್ ಒಂದೇ ನೆಲೆಯಲ್ಲಿ ಕಾಣಲು ಸಾಧ್ಯ. ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣ ನಮಗೆ ಈ ಅವಕಾಶವನ್ನು ಕಲ್ಪಿಸಿದೆ. ಎಲ್ಲವನ್ನೂ ಕಳೆದುಕೊಳ್ಳುವ ಮುನ್ನ ಜಾಗೃತರಾಗಬೇಕಿದೆ. ಭಾರತದ ಸಂವಿಧಾನವನ್ನು ಬದಲಿಸದೆಯೇ ಸಂವಿಧಾನದ ಮೂಲ ಆಶಯಗಳನ್ನು ಕೈಬಿಟ್ಟು ದೇಶದ ಸಾರ್ವಭೌಮ ಪ್ರಜೆಗಳ ಎಲ್ಲ ಹಕ್ಕುಗಳನ್ನೂ ಕಸಿದುಕೊಳ್ಳಲಾಗುತ್ತಿದೆ.
ರೈತಾಪಿಯ ಪರ ದನಿ ಎತ್ತುವ, ಕಾರ್ಮಿಕರೊಡನೆ ದನಿಗೂಡಿಸುವ, ಶೋಷಿತರ ದನಿಗಳಿಗೆ ಒತ್ತಾಸೆಯಾಗಿ ನಿಲ್ಲುವ ಪ್ರತಿರೋಧದ ದನಿಗಳೆಲ್ಲವೂ ಮುಂಬರುವ ದಿನಗಳಲ್ಲಿ ನಗರ ನಕ್ಸಲರ ಅಥವಾ ಭಯೋತ್ಪಾದಕರ ದನಿಗಳಂತೆ ಕಾಣುತ್ತವೆ. ಕೊರೋನಾ ಸೋಂಕು ನಮಗೆ ತಗಲುವುದಿಲ್ಲ ಎಂಬ ಭಂಡ ಧೈರ್ಯ ಇದ್ದವರು ನಂತರ ಸೋಂಕಿಗೆ ಒಳಗಾದಂತೆ ಇಂದಿನ ವಂದಿಮಾಗಧರು, ಭಟ್ಟಂಗಿಗಳು ನಾಳೆ ನಗರ ನಕ್ಸಲರಾಗಿಬಿಡುತ್ತಾರೆ. ಇದು ಪ್ರಭುತ್ವದ ಚಾಣಕ್ಯ ನೀತಿಯ ಫಲ.
ದೇಶಾದ್ಯಂತ ಭುಗಿಲೆದ್ದಿರುವ ಆಕ್ರೋಶದ ಜ್ವಾಲೆಗಳ ಒಂದೊಂದು ಕಿಡಿಯೂ ಈ ವಾಸ್ತವವನ್ನು ಬಿಂಬಿಸುತ್ತಿದೆ. ಈ ಕಿಡಿಗಳಲ್ಲಿರುವ ಸಂದೇಶವನ್ನು ಗ್ರಹಿಸುವುದು ನಮ್ಮ ಆದ್ಯತೆಯೂ ಹೌದು ಕರ್ತವ್ಯವೂ ಹೌದು. ಗ್ರಾಂಥಿಕವಾಗಿ ಸಂವಿಧಾನ ಸುರಕ್ಷಿತವಾಗಿದೆ. ಆದರೆ ಸ್ವತಃ ಅಂಬೇಡ್ಕರರೇ ಹೇಳಿರುವಂತೆ ಈ ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿ ಬರುವಂತಹ ಆಡಳಿತ ನೀತಿಗಳು ಜಾರಿಯಾಗುತ್ತಾ ಹೋದರೆ ಸಂವಿಧಾನ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಸಾರ್ವಭೌಮತ್ವಕ್ಕೇ ಧಕ್ಕೆ ಉಂಟಾಗುವ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಸಂವಿಧಾನದ ರಕ್ಷಣೆಗಾಗಿ ಗ್ರಾಂಥಿಕ ಪರಿಮಿತಿಯನ್ನು ಮೀರಿ ದೃಷ್ಟಿ ಹಾಯಿಸಬೇಕಿದೆ. ಇಲ್ಲವಾದರೆ ಇತಿಹಾಸದ ಪುಟಗಳಲ್ಲಿ ಶಾಶ್ವತ ಅಪರಾಧಿಗಳಾಗಿಯೇ ಉಳಿದುಬಿಡುತ್ತೇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ
ಸುದ್ದಿದಿನ,ದಾವಣಗೆರೆ:ವಯೋಸಹಜವಾಗಿ ಕಂಡುಬರುವ ಮೊಣಕಾಲು, ಸೊಂಟ, ಭುಜ ಮತ್ತು ಕ್ರೀಡಾ ಸಂಬಂಧಿತ ಸಂಧಿ ಸಮಸ್ಯೆಗಳಿಗೆ ಸಮಯೋಚಿತ ಚಿಕಿತ್ಸೆ ಮತ್ತು ನೂತನ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳು ಹೇಗೆ ಸಹಾಯವಾಗುತ್ತಿವೆ ಹಾಗೂ ಈ ಚಿಕಿತ್ಸೆಗಳು ನೋವು ಕಡಿಮೆ ಮಾಡುವುದರ ಜೊತೆಗೆ, ರೋಗಿಗಳು ಮತ್ತೆ ಸ್ವತಂತ್ರವಾಗಿ ನಡೆಯಲು, ದಿನನಿತ್ಯದ ಚಟುವಟಿಕೆಗಳಿಗೆ ಮರಳಲು ಮತ್ತು ಆತ್ಮವಿಶ್ವಾಸದಿಂದ ಬದುಕಲು ನೆರವಾಗುತ್ತಿವೆ ಎಂದು ಮಣಿಪಾಲ್ ಆಸ್ಪತ್ರೆಯ ಮೂಳೆ ಮತ್ತು ಕೀಲು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಲೋಕೇಶ್ ಎ. ವೀರಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು
‘ಆರೋಗ್ಯಕರ ವಯೋವೃದ್ಧತೆ: ಅಸ್ತಿ ಸಮಸ್ಯೆಗಳ ನಿರ್ವಹಣೆ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು ಕುರಿತು ಮೂಳೆ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದರು.
ಇಂದಿನ ದಿನಗಳಲ್ಲಿ ಮೊಣಕಾಲು, ಸೊಂಟ ಮತ್ತು ಭುಜ ಸಂಧಿ ಸಮಸ್ಯೆಗಳು, ವಿಶೇಷವಾಗಿ ವಯೋವೃದ್ಧರಲ್ಲಿ ಹೆಚ್ಚುತ್ತಿವೆ. ‘ಇಂದು ಜನರು ಕೇವಲ ನೋವು ನಿವಾರಣೆಯನ್ನು ಮಾತ್ರ ಬಯಸುವುದಿಲ್ಲ. ಅವರು ಸುಲಭವಾಗಿ ನಡೆಯಲು, ಮೆಟ್ಟಿಲೇರಲು, ಮತ್ತೆ ಕೆಲಸಕ್ಕೆ ಹೋಗಲು, ಪ್ರವಾಸ ಮಾಡಲು ಮತ್ತು ಚುರುಕಿನ ಜೀವನವನ್ನು ಮುಂದುವರಿಸಲು ಬಯಸುತ್ತಾರೆ,” ಎಂದು ಹೇಳಿದರು.
“ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರಚಿಕಿತ್ಸೆ ಅಸ್ತಿ ಚಿಕಿತ್ಸೆಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ರೋಗಿಯ ದೇಹರಚನೆಗೆ ಅನುಗುಣವಾಗಿ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ಯೋಜಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ಇದರಿಂದ ಇಂಪ್ಲಾಂಟ್ಗಳ ಸರಿಯಾದ ಅಳವಡಿಕೆ, ಉತ್ತಮ ಜಾಯಿಂಟ್ ಅಲೈನ್ಮೆಂಟ್ ಮತ್ತು ಸಹಜ ಚಲನೆಯ ಸಾಧ್ಯತೆ ಹೆಚ್ಚುತ್ತದೆ. ರೋಗಿಗಳಿಗೆ ಕಡಿಮೆ ರಕ್ತಸ್ರಾವ, ಕಡಿಮೆ ಶಸ್ತ್ರಚಿಕಿತ್ಸೆತರ ನೋವು, ವೇಗವಾದ ಚೇತರಿಕೆ ಹಾಗೂ ಬೇಗನೆ ಸಾಮಾನ್ಯ ಜೀವನಕ್ಕೆ ಮರಳುವ ಅವಕಾಶ ದೊರೆಯುತ್ತದೆ. ಮೊಣಕಾಲು ಮತ್ತು ಸೊಂಟದ ಸಂಪೂರ್ಣ ಅಥವಾ ಭಾಗಶಃ ಜಾಯಿಂಟ್ ಬದಲಾವಣೆ (TKR/PKR) ಶಸ್ತ್ರ ಚಿಕಿತ್ಸೆಗಳಲ್ಲಿ ಈ ತಂತ್ರಜ್ಞಾನ ಉತ್ತಮ ಫಲಿತಾಂಶ ನೀಡುತ್ತಿದೆ,” ಎಂದರು.
“ಇದರ ಜೊತೆಗೆ ಭುಜದ ಆರ್ಥೋಸ್ಕೋಪಿ ಅಥವಾ ‘ಕೀಹೋಲ್ ಸರ್ಜರಿ’ಯಂತಹ ಅತ್ಯಾಧುನಿಕ ಚಿಕಿತ್ಸೆಗಳಲ್ಲಿಯೂ ಉತ್ತಮ ಫಲಿತಾಂಶಗಳನ್ನು ಕಾಣುತ್ತಿದ್ದೇವೆ. ಭುಜದ ಡಿಪ್ಲೊಕೇಶನ್ (ಭುಜದ ಕೀಲಿನ ಸರಿತ) ರೋಟೇಟರ್ ಕಫ್ (ಹರಿದ ಭುಜದ ಮಾಂಸ ಖಂಡ) ಗಾಯಗಳು, ಫೋಜನ್ ಶೋಲ್ಡರ್ (ಭುಜದ ಬಿಗಿತ) ಮೊದಲಾದ ಸಮಸ್ಯೆಗಳು ಬಹಳ ಸಾಮಾನ್ಯವಾಗಿದ್ದು, ಸಮಯಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ದೈನಂದಿನ ಚಟುವಟಿಕೆಗಳ ಮೇಲೆಯೇ ಪರಿಣಾಮ ಬೀರುತ್ತವೆ. ಈಗ ಮಿನಿಮಲ್ಲಿ ಇನ್ನೇಸಿವ್ ಸರ್ಜರಿಸ್ ಅಂದರೆ ಅತಿ ಸಣ್ಣ ಕಟ್ ಮೂಲಕ ಮಾಡುವ ಈ ಶಸ್ತ್ರಚಿಕಿತ್ಸೆಗಳು ರೋಗಿಗಳಿಗೆ ಕಡಿಮೆ ನೋವು ಹಾಗೂ ವೇಗವಾದ ಚೇತರಿಕೆಯನ್ನು ನೀಡುತ್ತಿವೆ, ಎಂದು ತಿಳಿಸಿದರು.
ಇದೇ ವೇಳೆ, ಸಂಕೀರ್ಣ ಪೆಲ್ವಿಕ್ ಟ್ರಾಮಾ ಶಸ್ತ್ರಚಿಕಿತ್ಸೆಗಳು, ‘ಕಪ್ ಅಂಡ್ ಬಾಲ್’ ಜಾಯಿಂಟ್ ಸಂಬಂಧಿತ ಪ್ರೊಸೀಜರ್ಗಳು, ಹಾಗು ಮೊಣಕಾಲು, ಅಂಕಲ್ ಮತ್ತು ಮೊಣಕೈಗೆ ಸಂಬಂಧಿಸಿದ ಮಿನಿಮಲಿ ಇನ್ನೇಸಿವ್ ಕೀಹೋಲ್ ಶಸ್ತ್ರಚಿಕಿತ್ಸೆಗಳ ಕುರಿತು ಕೂಡ ಅವರು ಮಾಹಿತಿ ಹಂಚಿಕೊಂಡರು.
ಇವುಗಳ ಪ್ರಮುಖ ಉದ್ದೇಶ ರೋಗಿಗಳ ಚಲನವಲನವನ್ನು ಪುನಃಸ್ಥಾಪಿಸಿ, ಅವರನ್ನು ಆತ್ಮವಿಶ್ವಾಸದಿಂದ ದಿನನಿತ್ಯದ ಬದುಕಿಗೆ ಮರಳಿಸುವುದಾಗಿದೆ ಎಂದು ಹೇಳಿದರು.
ಸಂವಾದದ ವೇಳೆ ವೈದ್ಯರು, ದಾವಣಗೆರೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಅನೇಕ ರೋಗಿಗಳು ಸಂಕೀರ್ಣ ಅಸ್ಥಿ ಚಿಕಿತ್ಸೆಗಳು ಹಾಗೂ ಅತ್ಯಾಧುನಿಕ ಜಾಯಿಂಟ್ ಕೇರ್ಗಾಗಿ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ನಿರಂತರವಾಗಿ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.
ಈ ದೀರ್ಘಕಾಲದ ವಿಶ್ವಾಸವನ್ನು ಗುರುತಿಸಿಕೊಂಡಿರುವ ಆಸ್ಪತ್ರೆ, ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳು, ವಿಶೇಷ ಅಸ್ಥಿ ತಜ್ಞರ ಸೇವೆಗಳು ಮತ್ತು ಪುನಶ್ವೇತನ ಚಿಕಿತ್ಸೆಯನ್ನು ಮಧ್ಯ ಕರ್ನಾಟಕದ ಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಪುನರುಚ್ಛರಿಸಿತು. “ನಮ್ಮ ಉದ್ದೇಶ ಕೇವಲ ಶಸ್ತ್ರಚಿಕಿತ್ಸೆ ನಡೆಸುವುದಲ್ಲ; ಜನರು ಮತ್ತೆ ಸ್ವತಂತ್ರವಾಗಿ ನಡೆಯಲು, ತಮ್ಮ ಜೀವನಶೈಲಿಗೆ ಮರಳಲು ಮತ್ತು ಸುಖಕರ ವಯೋವೃದ್ಧತೆಯನ್ನು ಅನುಭವಿಸಲು ಸಹಾಯ ಮಾಡುವುದಾಗಿದೆ,” ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಜಿಎಂಕೆ ಎಡು ಟೆಕ್ ರಾಜ್ಯದ ಸಮಸ್ತ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಣ ಕ್ಷೇತ್ರದ ಆಸಕ್ತರಿಗಾಗಿ ನಾಳೆ (ಮೇ22) ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ “ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026″ ಎಂಬ ವಿಶಿಷ್ಟ ಮತ್ತು ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಕೊಟ್ರೇಶ್ ಅವರು ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳು ಹಾಗೂ ಆಡಳಿತಾತ್ಮಕ ಸವಾಲುಗಳಿಗೆ ಪರಿಹಾರ ಮತ್ತು ಕಾನೂನುಬದ್ದ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಕಡ್ಡಾಯ ಭೂ-ಪರಿವರ್ತನೆ, ಕಟ್ಟಡ ಮತ್ತು ಅಗ್ನಿ ಸುರಕ್ಷತಾ ನಿಯಮಗಳು, RTE ಸಂಬಂಧಿತ ವಿಷಯಗಳು, ಶಾಲಾ ಕಟ್ಟಡಗಳಿಗೆ ಆಸ್ತಿ ತೆರಿಗೆ, ESI, PF, GRATUITY, LWF ಹಾಗೂ ಕಾರ್ಮಿಕ ಕಾನೂನುಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತದೆ ಎಂದರು.
ಇದಲ್ಲದೆ, ರಾಜ್ಯದಲ್ಲಿ ಯಶಸ್ವಿಯಾಗಿ 10 ವರ್ಷ ಹಾಗೂ 25 ವರ್ಷ ಪೂರೈಸಿರುವ ಖಾಸಗಿ ಶಾಲೆಗಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದ ಹೊಸ ತಂತ್ರಜ್ಞಾನಗಳು, ಆಡಳಿತಾತ್ಮಕ ಪರಿಹಾರಗಳು, ಕಾನೂನು ಸಲಹೆಗಳು ಹಾಗೂ ಶಿಕ್ಷಣ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದ್ದು, ರಾಜ್ಯದ ಎಲ್ಲಾ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಣಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ Ours ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.
ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.
4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
-
ಅಂಕಣ5 days agoನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
-
ದಿನದ ಸುದ್ದಿ5 days agoಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?
-
ದಿನದ ಸುದ್ದಿ7 days ago‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
-
ದಿನದ ಸುದ್ದಿ5 days agoಕೆ. ಶಿವರಾಜಕುಮಾರ್ ಅವರಿಗೆ ಪಿಎಚ್ ಡಿ ಪದವಿ
-
ದಿನದ ಸುದ್ದಿ4 days agoಶಿಕ್ಷಕರು, ವಾರ್ಡನ್ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ
-
ದಿನದ ಸುದ್ದಿ3 days agoಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

