Connect with us

ದಿನದ ಸುದ್ದಿ

ಸಂವಿಧಾನ ಪ್ರಜಾತಂತ್ರ ಮತ್ತು ಸಾರ್ವಭೌಮ ಪ್ರಜೆಗಳು

Published

on

  • ನಾ ದಿವಾಕರ

ಸಂವಿಧಾನ ಈ ದೇಶದ ಆತ್ಮ ಪ್ರಜಾತಂತ್ರ ನಮ್ಮ ಉಸಿರು ಎಂದು ಹೇಳುತ್ತಲೇ ಬಂದಿರುವ ನಾವು, ಅಂದರೆ ಈ ದೇಶದ ಸಾರ್ವಭೌಮ ಪ್ರಜೆಗಳು ಈಗ ಉಸಿರುಗಟ್ಟಿ ಕೊನೆಯುಸಿರೆಳೆಯುವ ಹಂತ ತಲುಪುತ್ತಿದ್ದೇವೆ. ಪರಿಶುದ್ಧ ಆತ್ಮ ಇರುವವರೆಗೂ ಜೀವ ನಶಿಸುವುದಿಲ್ಲ ದೇಹ ಕೃಶವಾಗಿ ಅಳಿದರೂ ಆತ್ಮ ಸದಾ ಜೀವಾವಸ್ಥೆಯಲ್ಲಿರುತ್ತದೆ ಎನ್ನುವ ನಂಬಿಕೆಯೂ ನಮ್ಮ ನಡುವೆ ಇದೆ. ಅದಕ್ಕೇ ನಾವು ಆತ್ಮ ಎಂದ ಕೂಡಲೇ ಆಳಕ್ಕಿಳಿದು ನೋಡುವ ಒಂದು ಸೃಷ್ಟಿಕ್ರಿಯೆ ಎಂದು ಭಾವಿಸಿಬಿಡುತ್ತೇವೆ. ವೈಚಾರಿಕ ನೆಲೆಯಲ್ಲಿ, ವೈಜ್ಞಾನಿಕ ತಳಹದಿಯ ಮೇಲೆ ನಿಂತು ನೋಡಿದಾಗ ಆತ್ಮ ಎನ್ನುವುದು ಜೈವಿಕ ಅಸ್ತಿತ್ವವಿಲ್ಲದ ಮಾನವನ ಕಲ್ಪನೆ ಎನ್ನುವುದು ಸ್ಪಷ್ಟವಾಗುತ್ತದೆ.

ಆದರೂ ಒಂದು ಭೌಗೋಳಿಕ ದೇಶವನ್ನು ಮಾನವನ ದೇಹಕ್ಕೆ ಹೋಲಿಸಿದಾಗ ಸಂವಿಧಾನ ಎನ್ನುವುದು ಈ ಕಲ್ಪಿತ ಆತ್ಮ ಎನಿಸಿಕೊಳ್ಳುತ್ತದೆ. ಪ್ರಜಾತಂತ್ರ ಉಸಿರು ಎನಿಸಿಕೊಳ್ಳುತ್ತದೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ದೇಹದ ಅವಯವಗಳಂತೆ ಕಾರ್ಯ ನಿರ್ವಹಿಸುತ್ತವೆ. ಮಾಧ್ಯಮ ಎನ್ನಲಾಗುವ ಸುದ್ದಿ ಪ್ರಸರಣ ಸಂಸ್ಥೆಗಳು ಈ ದೇಹವನ್ನು ಬಾಧಿಸುವ ರೋಗ ರುಜಿನಗಳ ಮೂಲ ಲಕ್ಷಣಗಳನ್ನು ಗ್ರಹಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವಂತೆ ಮಾರ್ಗದರ್ಶನ ನೀಡುವ ಮತ್ತೊಂದು ಆಧಾರಸ್ತಂಭದಂತೆ ಕಾರ್ಯನಿರ್ವಹಿಸುತ್ತದೆ. ಆಂಗ್ಲಭಾಷೆಯಲ್ಲಿ ಇದನ್ನು ಫೋರ್ತ್ ಎಸ್ಟೇಟ್ ಎನ್ನಲಾಗುತ್ತದೆ.

ನಾವು ಸಂವಿಧಾನ ಎಂಬ ಆತ್ಮವನ್ನು ಪೂಜಿಸುತ್ತಾ, ಆರಾಧಿಸುತ್ತಾ, ಗೌರವಿಸುತ್ತಾ ಗ್ರಾಂಥಿಕವಾಗಿ ಕಿಂಚಿತ್ತೂ ಧಕ್ಕೆಯಾಗದಂತೆ ಕಾಪಾಡಿಕೊಂಡು ಬಂದಿದ್ದೇವೆ. ಸಂವಿಧಾನವನ್ನು ಬದಲಿಸುವ ಪ್ರಸ್ತಾಪ ಎದುರಾದ ಕೂಡಲೇ ಪ್ರತಿರೋಧದ ದನಿಗಳು ಮುಗಿಲುಮುಟ್ಟುತ್ತವೆ. ಸಂವಿಧಾನದ ಮೂಲ ಆಶಯಗಳನ್ನು ಸಂರಕ್ಷಿಸಲು ಪಣ ತೊಟ್ಟಿರುವ ಅಸಂಖ್ಯಾತ ದನಿಗಳು ನಮ್ಮ ನಡುವೆ ಇವೆ. ಸಾಮಾಜಿಕ ನ್ಯಾಯ, ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಪ್ರಗತಿ ಈ ಧ್ಯೇಯಗಳನ್ನು ಸಾಧಿಸಲು ಕಳೆದ 73 ವರ್ಷಗಳಲ್ಲಿ ಅನೇಕ ರೀತಿಯ ಹೋರಾಟಗಳೂ ನಡೆದಿವೆ.

ಈ ಆಶಯಗಳನ್ನು ಭಾರತೀಯ ಪ್ರಭುತ್ವ ಸಾಧಿಸಲು ಸಾಧ್ಯವಾಗಿದೆಯೇ? ಈ ಪ್ರಶ್ನೆ ಎದುರಾದ ಕೂಡಲೇ ಅಂಕಿಅಂಶಗಳು ನಮ್ಮೆದುರು ನಿಲ್ಲುತ್ತವೆ. 70 ವರ್ಷಗಳಲ್ಲಿ ಏನೂ ಸಾಧನೆಯಾಗಿಲ್ಲ ಎಂದು ಹೇಳುತ್ತಾ ಆರು ವರ್ಷಗಳ ಕನ್ನಡಿ ಹಿಡಿದರೂ , ಸಾಧನೆಯ ಹೆಜ್ಜೆಗಳು ಮತ್ತು ಮುನ್ನಡೆಯ ಕೋಷ್ಟಕಗಳು ನಮ್ಮೆದುರು ನಿಲ್ಲುತ್ತವೆ. ಈ ಸಾಧನೆಗಳೇನಾದರೂ ಸಾಧ್ಯವಾಗಿದ್ದರೆ ಅದು ಸ್ವಾತಂತ್ರ್ಯೋತ್ತರ ಭಾರತದ ಆರಂಭಿಕ ವರ್ಷಗಳಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಮತ್ತು ಜಾರಿಗೊಳಿಸಿದ ಯೋಜನೆಗಳ ಫಲ ಎಂದಷ್ಟೇ ಹೇಳಬಹುದು.

ಆದರೆ ಸಾಧನೆಯ ಮೆಟ್ಟಿಲುಗಳನ್ನು ಪರಿಶೀಲಿಸುತ್ತಾ ಹೋದಂತೆಲ್ಲಾ ನಮಗೆ ತಾರತಮ್ಯದ ಕಂದಕಗಳು ಕಾಣುತ್ತಲೇ ಹೋಗುತ್ತವೆ. ಸಾಮಾಜಿಕ ನೆಲೆಯಲ್ಲಾಗಲೀ, ಆರ್ಥಿಕ ನೆಲೆಯಲ್ಲಾಗಲೀ ಈ ಕಂದಕಗಳು ಹೆಜ್ಜೆ ಹೆಜ್ಜೆಗೂ ಗೋಚರಿಸುವಷ್ಟು ಮಟ್ಟಿಗೆ ಮುನ್ನಡೆಯ ಹೆಜ್ಜೆಗಳಲ್ಲಿ ಲೋಪಗಳನ್ನು ಗುರುತಿಸಬಹುದು. ನಾವು ಸಾಮಾಜಿಕ ನ್ಯಾಯ ಸಾಧಿಸುವ ಮಾರ್ಗದಲ್ಲಿ ಸಾಕಷ್ಟು ಮುನ್ನಡೆದಿದ್ದೇವೆ.

ಆದರೆ ಜಾತಿ ದೌರ್ಜನ್ಯ , ಜಾತಿ ತಾರತಮ್ಯ , ಜಾತಿ ವೈಷಮ್ಯ ಇಂದಿಗೂ ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದನ್ನೇ ಸಾಮಾಜಿಕ ನ್ಯಾಯದ ಉನ್ನತ ಹಂತ ಎಂಬ ಭಾವನೆ ಆಳುವ ವರ್ಗಗಳಲ್ಲಿದೆ. ಅಲ್ಲಿಯೂ ಸಹ ಶೋಷಿತ ಸಮುದಾಯದ ಒಂದು ವರ್ಗ ಅವಕಾಶವಂಚಿತವಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ.

ಮೀಸಲಾತಿ ಸಾಮಾಜಿಕ ನ್ಯಾಯ ಸಾಧಿಸುವ ಒಂದು ಆಯಾಮವಷ್ಟೇ. ಶೋಷಿತ ಸಮುದಾಯಗಳ ಆರ್ಥಿಕ ಸಬಲೀಕರಣ ಕೇವಲ ಮೀಸಲಾತಿಯಿಂದ ಸಾಧ್ಯವಾಗುವುದಿಲ್ಲ ಎನ್ನುವುದು ಅಂಬೇಡ್ಕರರಿಗೂ ತಿಳಿದಿತ್ತು. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ, ಆರ್ಥಿಕ ಸಬಲೀಕರಣದ ನೀತಿಗಳು ಮತ್ತು ಅರ್ಥವ್ಯವಸ್ಥೆಯಲ್ಲಿ ಸಮಾನ ನೆಲೆಯ ಪ್ರಾತಿನಿಧ್ಯ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪರಿಪೂರ್ಣ ಸಾಮಾಜಿಕ ನ್ಯಾಯ ಸಾಧಿಸುವುದು ಅಸಾಧ್ಯ ಎಂದು ಅರಿತಿದ್ದರಿಂದಲೇ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು, ಭೂ ರಾಷ್ಟ್ರೀಕರಣಕ್ಕಾಗಿ ಆಗ್ರಹಿಸಿದ್ದರು. ಕಾರ್ಮಿಕರ ರಕ್ಷಣೆಗಾಗಿ ಹಲವು ಸುಧಾರಣಾ ಕ್ರಮಗಳನ್ನು ಪ್ರಸ್ತಾಪಿಸಿದ್ದರು. ಇದು ತಾತ್ವಿಕವಾಗಿ ಮಾಕ್ರ್ಸ್ ವಾದಿಗಳ ಆಗ್ರಹಗಳಿಗಿಂತಲೂ ಭಿನ್ನವಾಗಿರಲಿಲ್ಲ.

ಆದರೆ ಭಾರತದ ಪ್ರಭುತ್ವ ಈ ಸಾಂವಿಧಾನಿಕ ಆಶಯಗಳನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಅನುಸರಿಸುತ್ತಿರುವುದನ್ನೂ, ಅಧಿಕಾರ ರಾಜಕಾರಣದ ಒಂದು ಅಸ್ತ್ರದಂತೆ ಬಳಸುತ್ತಿರುವುದನ್ನೂ ಗಮನಿಸುತ್ತಲೇ ಬಂದಿದ್ದೇವೆ. ಹಾಗೆಯೇ ಸಾಮಾಜಿಕ ನ್ಯಾಯ ಸಾಧಿಸುವ ಮೂಲಕ, ಸಮಾಜೋ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲೂ ಭಾರತದ ಪ್ರಭುತ್ವ ಸೋತಿದೆ.

73 ವರ್ಷಗಳ ನಂತರ ಈ ಸಮಾನತೆಯ ಕನಸು ಕನಸಾಗಿಯೇ ಉಳಿದಿರುವುದನ್ನು ಗಮನಿಸಬಹುದು. ಸಾರ್ವಜನಿಕರ ದೃಷ್ಟಿಯಲ್ಲಿ ಇದು ಪ್ರಭುತ್ವದ ಸೋಲು ಎನಿಸಿದರೂ, ಅಧಿಕಾರ ಮತ್ತು ಅಧಿಪತ್ಯ ರಾಜಕಾರಣದ ದೃಷ್ಟಿಯಲ್ಲಿ ಇದು ಭಾರತೀಯ ಪ್ರಭುತ್ವದ ಗೆಲುವು ಎನ್ನಬಹುದು. ಏಕೆಂದರೆ ಈ ದೇಶದ ಪ್ರಭುತ್ವ ಯಾವುದೇ ಕಾಲಘಟ್ಟದಲ್ಲೂ ಶೋಷಿತರ ಪರವಾಗಿ ಇರಲಿಲ್ಲ.

ಪ್ರಭುತ್ವದ ಈ ವೈಫಲ್ಯವನ್ನು ನಾವು ಸರ್ಕಾರಗಳ ವೈಫಲ್ಯವೆಂದೋ, ರಾಜಕೀಯ ಪಕ್ಷಗಳ ವೈಫಲ್ಯವೆಂದೋ ಭಾವಿಸುತ್ತೇವೆ. ವೈಫಲ್ಯದ ಪ್ರತಿಯೊಂದು ಹೆಜ್ಜೆಯಲ್ಲೂ ಸಂವಿಧಾನದ ಉಲ್ಲಂಘನೆಯನ್ನು ಕಾಣಬಹುದಾದರೂ ನಾವು ಅದನ್ನು ಆಡಳಿತಾತ್ಮಕ ಚೌಕಟ್ಟಿನಲ್ಲಿ ವಿಶ್ಲೇಷಿಸುತ್ತಿದ್ದೇವೆಯೇ ಹೊರತು ಸಂವಿಧಾನದ ಚೌಕಟ್ಟಿನಲ್ಲಿ ವಿಶ್ಲೇಷಿಸುತ್ತಿಲ್ಲ.

ಮೂಲ ಸಾಂವಿಧಾನಿಕ ಆಶಯಗಳಾದ ಸಮ ಸಮಾಜ ಮತ್ತು ಶೋಷಣೆ ರಹಿತ ಸಮಾಜದ ನಿರ್ಮಾಣಕ್ಕಾಗಿ ಹಾತೊರೆಯುವ ಮನಸುಗಳು ಈ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ಮಾರ್ಗಗಳನ್ನು ಕಂಡುಕೊಂಡಿವೆ. ಶಾಂತಿಯುತ ಪ್ರತಿಭಟನೆ, ಹಕ್ಕೊತ್ತಾಯಗಳು, ಮುಷ್ಕರಗಳು, ಚಳುವಳಿ, ಆಂದೋಲನ, ತೀವ್ರವಾದಿ ಹೋರಾಟ, ಸಶಸ್ತ್ರ ಹೋರಾಟ ಹೀಗೆ ಹಲವು ಮಾರ್ಗಗಳಲ್ಲಿ ಶೋಷಣೆಯಿಲ್ಲದ ಸಮಾಜಕ್ಕಾಗಿ ಹೋರಾಟಗಳು ನಡೆದಿವೆ, ನಡೆಯುತ್ತಿವೆ.

ದುರಂತ ಎಂದರೆ ಈ ಹೋರಾಟಗಳನ್ನು ನಾವೇ ಹಿಂಸಾತ್ಮಕ ಮತ್ತು ಅಹಿಂಸಾತ್ಮಕ, ಸಾಂವಿಧಾನಿಕ ಮತ್ತು ಅಸಾಂವಿಧಾನಿಕ, ಕಾನೂನುಬದ್ಧ ಮತ್ತು ಕಾನೂನುಬಾಹಿರ ಎಂದು ವಿಂಗಡಿಸಿಬಿಟ್ಟಿದ್ದೇವೆ. ತನ್ನ ಅಧಿಕಾರ ಕೇಂದ್ರವನ್ನು ಅಲುಗಾಡಿಸುವ ಯಾವುದೇ ಚಳುವಳಿ ಅಥವಾ ಹೋರಾಟಗಳು ಪ್ರಭುತ್ವದ ದೃಷ್ಟಿಯಲ್ಲಿ ಸಹನೀಯ ಎನಿಸುವುದಿಲ್ಲ , ಕಾನೂನುಬಾಹಿರ ಎನಿಸಿಬಿಡುತ್ತದೆ.

ಆದರೆ ಶೋಷಿತರ ದೃಷ್ಟಿಯಲ್ಲಿ ಎಲ್ಲ ರೀತಿಯ ಹೋರಾಟಗಳಿಗೂ ಒಂದು ತಾರ್ಕಿಕ ನೆಲೆ ಇರುತ್ತದೆ. ಎಲ್ಲ ಹೋರಾಟಗಳ ಗುರಿ ಸಮಾನತೆ ಮತ್ತು ಸಾಮಾಜಿಕ ಘನತೆಯನ್ನು ಸಾಧಿಸುವುದೇ ಆಗಿರುತ್ತದೆ. ಹಾಗಾಗಿಯೇ ಪ್ರಭುತ್ವ ಸಂವಿಧಾನದ ಚೌಕಟ್ಟಿನಲ್ಲೇ ಸಂವಿಧಾನ ಬಾಹಿರ ಕಾನೂನುಗಳನ್ನು ರಚಿಸುವ ಮೂಲಕ ಈ ಪ್ರಜಾಂದೋಲನಗಳ ವಿಘಟನೆಗೆ ಮಾರ್ಗಗಳನ್ನು ಹುಡುಕುತ್ತಿರುತ್ತದೆ.

1960ರ ದಶಕದಿಂದ ಇವತ್ತಿನವರೆಗೂ ಪ್ರಭುತ್ವ ಈ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಇಂದು ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ಸಿಡಿದೆದ್ದಿರುವ ನಾವು, ಕಳೆದ ನಾಲ್ಕು ದಶಕಗಳಲ್ಲಿ ಭೂ ಸುಧಾರಣೆ ಮತ್ತು ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುವುದನ್ನೇ ಮರೆತಿದ್ದೇವೆ ಎನ್ನುವುದನ್ನೂ ಗಮನಿಸಬೇಕು.

ಭೂ ಹೋರಾಟಗಳಿಗೆ ಅಂತ್ಯ ಹಾಡಲೆಂದೇ ಪ್ರಭುತ್ವ ನಕ್ಸಲ್ ಭೂತವನ್ನೂ ಸೃಷ್ಟಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಆದರೆ ಭೂಮಿ ಇಲ್ಲದವರಿಗೆ ಭೂಮಿ ಹಂಚುವುದು, ಭೂ ಒಡೆತನದ ಮಿತಿಯನ್ನು ಹೇರುವುದು, ಭೂಮಾಲೀಕರ ದೌರ್ಜನ್ಯ ಮತ್ತು ಅಟ್ಟಹಾಸದಿಂದ ಗ್ರಾಮೀಣ ಬಡಜನತೆಯನ್ನು, ಶೋಷಿತ ಸಮುದಾಯಗಳನ್ನು ರಕ್ಷಿಸುವುದು ಕೇವಲ ನಕ್ಸಲರ ಕಾರ್ಯಸೂಚಿಯಾಗಬೇಕಿಲ್ಲ ಅಲ್ಲವೇ ?

ಪ್ರಜಾತಂತ್ರದ ಮಾರ್ಗದಲ್ಲಿಯೇ ಈ ಹೋರಾಟಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ನಾವು ಯೋಚಿಸುವುದನ್ನೇ ಬಿಟ್ಟಿದ್ದೇವೆ ಅಲ್ಲವೇ ? ಭೂ ಸ್ವಾಧೀನ ಒತ್ತಟ್ಟಿಗಿರಲಿ, ಭೂ ಸುಧಾರಣೆಯ ಕ್ರಮಗಳನ್ನು ಚಾಲ್ತಿಯಲ್ಲಿರುವ ಕಾನೂನುಗಳ ಅನ್ವಯವೇ ಜಾರಿಗೊಳಿಸಲೂ ಒತ್ತಾಯಿಸಲಾಗಿಲ್ಲ. ಪರಿಣಾಮಕಾರಿಯಾಗಿ ಅನುಷ್ಟಾನವಾಗಿದ್ದ ಭೂ ಸುಧಾರಣಾ ಕ್ರಮಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲೂ ಸಹ ಯಾವುದೇ ಪರಿಣಾಮಕಾರಿ ಆಂದೋಲನಗಳು ರೂಪುಗೊಂಡಿಲ್ಲ.

ಬಹುಶಃ ಉತ್ಪಾದನಾ ಪ್ರಕ್ರಿಯೆಯಲ್ಲಿನ ಶ್ರಮ ವಿಭಜನೆಯಂತೆ ಇಲ್ಲಿಯೂ ಸಹ ವಿಭಜನೆಯ ಸೂತ್ರಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಹಾಗಾಗಿಯೇ ಭೂಮಾಲೀಕರಿಂದ ಭೂಮಿಯನ್ನು ಕಸಿದುಕೊಳ್ಳುವುದು, ನಕ್ಸಲ್ ಪರಿಕಲ್ಪನೆಯಲ್ಲಿ, ಹಿಂಸಾತ್ಮಕ ಎನಿಸಿಬಿಟ್ಟಿತು. ಅಹಿಂಸಾತ್ಮಕವಾದ ಪ್ರಯತ್ನಗಳು ನಡೆಯಲೂ ಇಲ್ಲ.

ಏಕೆ ನಡೆಯಲಿಲ್ಲ ? ಕಾರಣ ಸ್ಪಷ್ಟ. ಈ ದೇಶದ ಭೂಮಾಲೀಕ ವರ್ಗಗಳು ಅಧಿಪತ್ಯ ರಾಜಕಾರಣದ ಕೇಂದ್ರ ಬಿಂದು ಆಗಿವೆ. ಔದ್ಯಮಿಕ ಬಂಡವಾಳಗಾರರಷ್ಟೇ ಪ್ರಬಲವಾಗಿ ಈ ಭೂಮಾಲೀಕ ವರ್ಗ ಈ ದೇಶದ ಅಧಿಕಾರ ರಾಜಕಾರಣವನ್ನು ಪಕ್ಷಗಳ ಹೆಸರಿನಲ್ಲಿ ನಿರ್ವಹಿಸುತ್ತಿವೆ. ಈ ವರ್ಗಗಳ ಯಥಾಸ್ಥಿತಿವಾದ ಮತ್ತು ಅಧಿಕಾರದಾಹಕ್ಕೆ ಬಲಿಯಾಗಿರುವುದು ಜನಪರ ಹೋರಾಟಗಳು ಮತ್ತು ಈ ಹೋರಾಟಗಳನ್ನು ಪ್ರತಿನಿಧಿಸುವ ಅಸಂಖ್ಯಾತ ಸಂಘಟನೆಗಳು.

ಕಾರ್ಮಿಕ ಸಂಘಟನೆಗಳ ಹೋರಾಟವನ್ನೇ ಗಮನಿಸಿದರೆ, ಮುಷ್ಕರ ಹೋರಾಟಗಳ ಮೂಲಕ ಹಕ್ಕೊತ್ತಾಯಗಳನ್ನು ಮಂಡಿಸುವುದನ್ನು “ ಕಮ್ಯುನಿಸ್ಟ್ ” ಎಂದು ಹೀಗಳೆದು, ರಾಜಿ ಸಂಧಾನಗಳ ಮಾರ್ಗವನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡ ನಿದರ್ಶನಗಳು ಹೇರಳವಾಗಿವೆ. ಈಗ ಒಂದೊಂದೇ ಸಂಸ್ಥೆಗಳು ಖಾಸಗಿ ಪಾಲಾಗುತ್ತಿರುವಾಗ ರಾಜಿ ಸಂಧಾನ ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತವೆ ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಏಕೆಂದರೆ ಹೋರಾಟದ ಮಾರ್ಗಗಳಲ್ಲಿ ನಾವೇ ತಡೆಗೋಡೆಗಳನ್ನು ನಿರ್ಮಿಸಿಬಿಟ್ಟಿದ್ದೇವೆ ಅಥವಾ ಪ್ರಭುತ್ವ ನಿರ್ಮಿಸಿರುವ ದಿಬ್ಬಗಳಿಗೆ ಆಸರೆಯಾಗಿ ನಿಂತಿದ್ದೇವೆ.

ನಾವೇ ನಿರ್ಮಿಸಿರುವ ಬೌದ್ಧಿಕ ತಡೆಗೋಡೆಗಳನ್ನು ಕಿತ್ತೊಗೆಯುವುದು ಕಷ್ಟವೇನಲ್ಲ. ಆದರೆ ನಾಲ್ಕು ದಶಕಗಳ ಅವಧಿಯಲ್ಲಿ ಈ ಪ್ರಕ್ರಿಯೆಗೆ ಪ್ರಭುತ್ವ ತನ್ನದೇ ಆದ ನೆಲೆಗಳನ್ನು ಒದಗಿಸಿದೆ. ಶೋಷಣೆಗೊಳಗಾಗಿರುವ ಕೋಟ್ಯಂತರ ಜನತೆಯನ್ನು ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸಿ, ಜಾತಿ ಧರ್ಮ ಮತ್ತು ಪ್ರಾದೇಶಿಕ ನೆಲೆಗಳಲ್ಲಿ ವಿಭಜಿಸಿರುವ ಪ್ರಭುತ್ವ ಶೋಷಿತ ಸಮುದಾಯಗಳ ಐಕಮತ್ಯ ಅಸಾಧ್ಯ ಎನ್ನುವಷ್ಟು ಮಟ್ಟಿಗೆ ಅಸ್ಮಿತೆಗಳ ಗೋಡೆಗಳನ್ನು ನಿರ್ಮಿಸಿಬಿಟ್ಟಿದೆ.

ಈ ಬೆಳವಣಿಗೆಗಳು ಹಠಾತ್ತನೆ ಸಂಭವಿಸಿದ್ದಲ್ಲ ಎನ್ನುವುದನ್ನೂ ಗಮನಿಸಬೇಕಿದೆ. 1980ರ ದಶಕದ ನವ ಉದಾರವಾದ ಮತ್ತು ಜಾತಿ ರಾಜಕಾರಣ, 1990ರ ದಶಕದ ಮತೀಯವಾದ ಮತ್ತು ಸಾಂಸ್ಕøತಿಕ ರಾಷ್ಟ್ರೀಯತೆ, 2000ದ ನಂತರದ ನಾಲ್ಕನೆಯ ಔದ್ಯಮಿಕ ಕ್ರಾಂತಿ ಮತ್ತು ಡಿಜಿಟಲೀಕರಣ ಈ ಎಲ್ಲ ಪ್ರಕ್ರಿಯೆಯ ಗರ್ಭದಲ್ಲಿ ಶೋಷಿತ ಸಮುದಾಯಗಳ ವಿಘಟನೆಯ ಬೀಜಗಳು ಅಡಗಿವೆ.

ದಲಿತ ಸಮುದಾಯಗಳ ಭೂಮಿಯ ಹಕ್ಕು ಮತ್ತು ಅಲ್ಪ ಪ್ರಮಾಣದಲ್ಲಿ ಹೊಂದಿರುವ ಭೂಮಿಯ ರಕ್ಷಣೆಗಾಗಿ ಈಗ ಒಕ್ಕೊರಲಿನ ದನಿ ಕೇಳಿಬರುತ್ತಿದೆ. ಏಕೆಂದರೆ ಕೇಂದ್ರ ಸರ್ಕಾರದ ಕೃಷಿ ಮಸೂದೆ ಭೂಮಿಯ ಖಾಸಗೀಕರಣಕ್ಕೆ ಹಾದಿಯನ್ನು ಸುಗಮವಾಗಿಸಿದೆ. ಆದರೆ ನವ ಉದಾರವಾದ ಮತ್ತು ಸಾಂಸ್ಕøತಿಕ ರಾಷ್ಟ್ರೀಯತೆಯ ಜಂಟಿ ಕಾರ್ಯಾಚರಣೆಯಲ್ಲಿ ಈ ಎರಡೂ ಅಂಶಗಳನ್ನು ನಾವೇ ನೇಪಥ್ಯಕ್ಕೆ ಸರಿಸಿದ್ದೇವೆ ಎನ್ನುವುದನ್ನೂ ಗಮನಿಸಬೇಕಲ್ಲವೇ ? ಈಗ ಅಲ್ಪಸ್ವಲ್ಪ ಭೂಮಿ ಇರುವವರೂ ತಮ್ಮ ನೆಲೆ ಕಳೆದುಕೊಳ್ಳಲಿದ್ದಾರೆ, ಭೂಮಿ ನಮ್ಮ ಹಕ್ಕು ಎಂದು ಭಾವಿಸುವವರು ಅಸಹಾಯಕ ಸ್ಥಿತಿ ತಲುಪುವಂತಾಗಿದೆ. ಈ ಸಂದಿಗ್ಧತೆಯ ಮೂಲವನ್ನು ಅಯೋಧ್ಯೆಯ ಕಾಲಾಳುಗಳ ಸದ್ದಿನಲ್ಲಿ ಕೇಳಿಸಿಕೊಳ್ಳಲು ಈಗಲಾದರೂ ಸಾಧ್ಯವೇ ? ಯೋಚಿಸೋಣ.

ಬಂಡವಾಳ ವ್ಯವಸ್ಥೆ ಪ್ರಬಲವಾದಂತೆಲ್ಲಾ ಹೋರಾಟದ ನೆಲೆಗಳನ್ನು ನಾಶಪಡಿಸುತ್ತಲೇ ಮುನ್ನಡೆಯುತ್ತದೆ. ಈ ಮುನ್ನಡೆಗೆ ಬಲಪಂಥೀಯ ರಾಜಕಾರಣದ ಹೆಗಲು ದೊರೆತರೆ ಏನಾಗುತ್ತದೆ ಎನ್ನುವುದನ್ನು ಮೂರು ದಶಕಗಳ ಭಾರತದ ರಾಜಕೀಯ ಬೆಳವಣಿಗೆಗಳು ನಿರೂಪಿಸಿವೆ. ಭಾರತದಂತಹ ಜಾತಿವ್ಯವಸ್ಥೆಯಲ್ಲಿ ಈ ವಿಘಟನೆ ಎಷ್ಟು ಸುಲಭಸಾಧ್ಯ ಎನ್ನುವುದನ್ನೂ ಪ್ರಭುತ್ವ ನಿರೂಪಿಸಿದೆ. ಮಂಡಲ-ಕಮಂಡಲ ರಾಜಕಾರಣದ ಕೂಪದಲ್ಲಿ ಎಷ್ಟೋ ಹೋರಾಟಗಳು ಇಂದಿಗೂ ಅಡಗಿ ಕುಳಿತಿವೆ. ಬಂಡವಾಳ ಮತ್ತು ಶ್ರಮಜೀವಿಗಳ ನಡುವಿನ ಸಂಘರ್ಷದ ನೆಲೆಯಲ್ಲಿ ಎಷ್ಟೋ ಜೀವಗಳು ನಲುಗಿಹೋಗಿವೆ. ಈ ಬಲಿಯಾದ ಜೀವಗಳು ಆಳುವ ವರ್ಗಗಳಿಗೆ ಬಂಡವಾಳವಾಗುತ್ತಿವೆ ನಮಗೆ ಕೇವಲ ಸ್ಮಾರಕಗಳಾಗುತ್ತಿವೆ.

ಭೀಮ ಕೊರೆಗಾಂವ್ ಸಂದರ್ಭದಲ್ಲಿ ಈ ದ್ವಂದ್ವವನ್ನು ನಾವು ಸ್ಪಷ್ಟವಾಗಿ ಗಮನಿಸಬಹುದು. ಅಥವಾ ಊನ, ದಾದ್ರಿ , ಜೆ ಎನ್ ಯು ಘಟನೆಗಳ ಸಂದರ್ಭದಲ್ಲಿ ಈ ವಿರೋಧಾಭಾಸಗಳನ್ನು ಗಮನಿಸಬಹುದು. ಮಾನವ ಹಕ್ಕುಗಳಿಗಾಗಿ, ಪರಿಸರ ರಕ್ಷಣೆಗಾಗಿ, ಆದಿವಾಸಿಗಳ ಮೂಲ ಸಂಸ್ಕøತಿ ಮತ್ತು ಜೀವನೆಲೆಗಳ ರಕ್ಷಣೆಗಾಗಿ ನಡೆಯುವ ಹೋರಾಟಗಳಿಗೆ ವಿಮುಖವಾಗುವ ಮೂಲಕ ಅನೇಕಾನೇಕ ಹೋರಾಟಗಳು ಪ್ರಭುತ್ವದ ಕಬಂಧ ಬಾಹುಗಳಿಗೆ ಸಿಲುಕಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಇನ್ನು ಕೆಲವು ತಟಸ್ಥ ನೀತಿ ಅನುಸರಿಸಿ ಯಥಾಸ್ಥಿತಿವಾದಕ್ಕೆ ಶರಣಾಗಿ ನಿಷ್ಕ್ರಿಯವಾಗಿವೆ, ನಿಸ್ತೇಜವಾಗಿವೆ.

ಈ ನಿಷ್ಕ್ರಿಯತೆಯಿಂದ ಹೊರಬರುವ ಕಾಲ ಸನ್ನಿಹಿತವಾಗುತ್ತಿದೆ. ಏಕೆಂದರೆ ಬಂಡವಾಳ ವ್ಯವಸ್ಥೆ ನವ ಉದಾರವಾದದ ಸಂಪೂರ್ಣ ಸಾರ್ಥಕತೆಯತ್ತ ದಾಪುಗಾಲು ಹಾಕುತ್ತಿದೆ. ಭಾರತದ ಪ್ರಭುತ್ವವೂ ಈ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಸಮಸಮಾಜ , ಸಮಾನತೆ, ಸೌಹಾರ್ದತೆಯನ್ನು ಸಾಧಿಸುವ ಮತ್ತು ಶೋಷಣೆ ಹಾಗೂ ದೌರ್ಜನ್ಯರಹಿತ ಸಮಾಜದ ನಿರ್ಮಾಣದ ಕನಸುಗಳು ಸಂಪೂರ್ಣವಾಗಿ ಭಗ್ನವಾಗುವ ಸಂದರ್ಭದಲ್ಲಿ ನಾವಿದ್ದೇವೆ. ಈ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟವೂ ಸಂವಿಧಾನಬಾಹಿರವಾಗಲಾರದು ಎನ್ನುವ ವಾಸ್ತವವನ್ನು ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಿದೆ.

ಏಕೆಂದರೆ ಪ್ರಭುತ್ವ ಸಂವಿಧಾನಬಾಹಿರವಾಗಿಯೇ ಪ್ರಜೆಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ಕೃಷಿ ಕಾಯ್ದೆಗಳ ತಿದ್ದುಪಡಿ, ಹಣಕಾಸು ಮಸೂದೆಗಳು ಈ ದೇಶದ ಶೋಷಿತ ಸಮುದಾಯಗಳನ್ನು ಮತ್ತಷ್ಟು ಶೋಷಣೆಗೊಳಪಡಿಸುವ ನಿಟ್ಟಿನಲ್ಲಿ ಸಾಗುತ್ತಿವೆ. ಹಿತವಲಯದಲ್ಲಿರುವ ಸುಶಿಕ್ಷಿತ-ಸುರಕ್ಷಿತ ವರ್ಗಗಳಿಗೂ ಇದರ ಬಿಸಿ ತಟ್ಟಲಿದೆ. ಆದರೆ ಆ ವೇಳೆಗೆ ಅರ್ಧದೇಹ ಸುಟ್ಟುಹೋಗಿರಬಹುದು. ಏನೇ ಆದರೂ ತಾವು ನಿಂತ ನೆಲೆ ಕುಸಿಯುತ್ತಿದೆ ಎಂದಾಗ ಮನುಕುಲ ಒಮ್ಮೆಲೆ ಚಿಮ್ಮಿ ಹೊರಬರುತ್ತದೆ. ಇದು ಇತಿಹಾಸ ನಿರೂಪಿಸಿರುವ ಸತ್ಯ. ಈ ಸಂದರ್ಭದಲ್ಲೇ ಭಾರತದ ಶೋಷಿತ ಸಮುದಾಯಗಳು, ಅವಕಾಶವಂಚಿತರು, ದೌರ್ಜನ್ಯ ಮತ್ತು ತುಳಿತಕ್ಕೊಳಗಾದವರು ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.

ಅರಣ್ಯ , ಜಲ ಮತ್ತು ಭೂಮಿಯ ಒಡಲಲ್ಲಿರುವ ಸಮಸ್ತ ನೈಸರ್ಗಿಕ ಸಂಪತ್ತು ಕಾರ್ಪೋರೇಟ್ ಮಾರುಕಟ್ಟೆಯ ವಶಕ್ಕೊಳಪಟ್ಟಾಗ ಅಸ್ಮಿತೆಗಳ ಲೋಕವೂ ಕುಸಿಯುತ್ತದೆ. ಏಕೆಂದರೆ ಹಣಕಾಸು ಬಂಡವಾಳ ಯುಗದಲ್ಲಿ ಶೋಷಕರು ಮತ್ತು ಶೋಷಿತರು ಎನ್ನುವ ಎರಡೇ ವರ್ಗಗಳು ಉಳಿಯುತ್ತವೆ. ಇಂದು ಪ್ರತಿರೋಧದ ದನಿಗಳನ್ನು ದಮನಿಸುವ ಕ್ರೌರ್ಯವನ್ನು ಸಮರ್ಥಿಸಲು ಸಾಕಷ್ಟು ದನಿಗಳು ಕೇಳಿಬರುತ್ತಿವೆ. ಏಕೆಂದರೆ ಈ ದನಿಗಳು ಅಸಮಾನತೆಯನ್ನೇ ಪೋಷಿಸುವ ಒಂದು ಕ್ರೂರ ವ್ಯವಸ್ಥೆಯ ಫಲಾನುಭವಿಗಳಾಗಿವೆ. ಈ ಫಲಾನುಭವಿಗಳು ಇರುವ ಹಿತವಲಯಗಳು ಹಂತಹಂತವಾಗಿ ಇದೇ ಕ್ರೌರ್ಯಕ್ಕೆ ಬಲಿಯಾಗುತ್ತವೆ.

ಶೋಷಿತರಲ್ಲಿ ಅಸ್ಮಿತೆಗಳ ಚೌಕಟ್ಟುಗಳಿರುತ್ತವೆ. ಆದರೆ ಶೋಷಕರಿಗೆ ಇರುವುದಿಲ್ಲ. ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆ ಈ ಶೋಷಕ ವರ್ಗದೊಡನೆ ಒಂದಾದಾಗ ಶೋಷಿತರ ದನಿಗಳು ಒಂದಾಗುತ್ತವೆ. ಭೂಮಿಯ ಪ್ರಶ್ನೆ ಈ ದನಿಗಳನ್ನು ಒಂದುಗೂಡಿಸುವ ನೆಲೆಯಾಗಿರುತ್ತದೆ. ನಾವು ಸಂವಿಧಾನವನ್ನು ಗ್ರಾಂಥಿಕವಾಗಿ ಮಾತ್ರ ಸಂರಕ್ಷಿಸುತ್ತಿದ್ದೇವೆ ಎನ್ನುವ ಪ್ರಜ್ಞೆ ನಮ್ಮಲ್ಲಿದ್ದರೆ, ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಲು ಸಾಧ್ಯ . ಪ್ರತಿರೋಧದ ದನಿಗಳೇ ಸಂವಿಧಾನ ವಿರೋಧಿ ಎನ್ನುವಂತಹ ಕಾಯ್ದೆ ಕಾನೂನುಗಳನ್ನು ನಮ್ಮ ಕಣ್ಣೆದುರಿನಲ್ಲೇ ಜಾರಿಗೊಳಿಸಲಾಗುತ್ತಿದೆ. ಈ ಕಾನೂನುಗಳ ವಿರುದ್ಧ ಹೋರಾಡುವುದೇ ಸಂವಿಧಾನ ರಕ್ಷಣೆಯ ಪ್ರಥಮ ಹೆಜ್ಜೆಯಾಗಬೇಕಿದೆ.

ಇದು ಎಡ-ಬಲದ ನಡುವಿನ ಸಂಘರ್ಷ ಮಾತ್ರವಲ್ಲ. ಶೋಷಕರು ಮತ್ತು ಶೋಷಿತರು, ಬಂಡವಾಳ ಮತ್ತು ಶ್ರಮ, ಬಂಡವಾಳಿಗ ಮತ್ತು ಶ್ರಮಿಕ, ಭೂಮಾಲೀಕ ಮತ್ತು ಭೂಹೀನ, ಮೇಲ್ಜಾತಿ ಮತ್ತು ದಲಿತರು, ಪುರುಷ ಪ್ರಧಾನ ವ್ಯವಸ್ಥೆ ಮತ್ತು ಮಹಿಳೆಯರು, ಶ್ರೀಮಂತರು ಮತ್ತು ಬಡಜನತೆ ಹೀಗೆ ಹಲವು ಆಯಾಮಗಳ ಸಂಘರ್ಷ. ಈ ಸಂಘರ್ಷ ತನ್ನ ತಾರ್ಕಿಕ ಅಂತ್ಯ ತಲುಪಬೇಕಾದರೆ ನಾವು ನಮ್ಮ ಹೋರಾಟದ ನೆಲೆಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳಬೇಕು. ಜಾತಿ, ಮತ ಮತ್ತು ಸಮುದಾಯಗಳ ಅಸ್ಮಿತೆಗಳಿಂದಾಚೆಗೆ ಯೋಚಿಸಬೇಕು.

ಅಲ್ಲಿ ನಮಗೆ ಅಂಬೇಡ್ಕರ್ ಮತ್ತು ಮಾಕ್ರ್ಸ್ ಒಂದೇ ನೆಲೆಯಲ್ಲಿ ಕಾಣಲು ಸಾಧ್ಯ. ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣ ನಮಗೆ ಈ ಅವಕಾಶವನ್ನು ಕಲ್ಪಿಸಿದೆ. ಎಲ್ಲವನ್ನೂ ಕಳೆದುಕೊಳ್ಳುವ ಮುನ್ನ ಜಾಗೃತರಾಗಬೇಕಿದೆ. ಭಾರತದ ಸಂವಿಧಾನವನ್ನು ಬದಲಿಸದೆಯೇ ಸಂವಿಧಾನದ ಮೂಲ ಆಶಯಗಳನ್ನು ಕೈಬಿಟ್ಟು ದೇಶದ ಸಾರ್ವಭೌಮ ಪ್ರಜೆಗಳ ಎಲ್ಲ ಹಕ್ಕುಗಳನ್ನೂ ಕಸಿದುಕೊಳ್ಳಲಾಗುತ್ತಿದೆ.

ರೈತಾಪಿಯ ಪರ ದನಿ ಎತ್ತುವ, ಕಾರ್ಮಿಕರೊಡನೆ ದನಿಗೂಡಿಸುವ, ಶೋಷಿತರ ದನಿಗಳಿಗೆ ಒತ್ತಾಸೆಯಾಗಿ ನಿಲ್ಲುವ ಪ್ರತಿರೋಧದ ದನಿಗಳೆಲ್ಲವೂ ಮುಂಬರುವ ದಿನಗಳಲ್ಲಿ ನಗರ ನಕ್ಸಲರ ಅಥವಾ ಭಯೋತ್ಪಾದಕರ ದನಿಗಳಂತೆ ಕಾಣುತ್ತವೆ. ಕೊರೋನಾ ಸೋಂಕು ನಮಗೆ ತಗಲುವುದಿಲ್ಲ ಎಂಬ ಭಂಡ ಧೈರ್ಯ ಇದ್ದವರು ನಂತರ ಸೋಂಕಿಗೆ ಒಳಗಾದಂತೆ ಇಂದಿನ ವಂದಿಮಾಗಧರು, ಭಟ್ಟಂಗಿಗಳು ನಾಳೆ ನಗರ ನಕ್ಸಲರಾಗಿಬಿಡುತ್ತಾರೆ. ಇದು ಪ್ರಭುತ್ವದ ಚಾಣಕ್ಯ ನೀತಿಯ ಫಲ.

ದೇಶಾದ್ಯಂತ ಭುಗಿಲೆದ್ದಿರುವ ಆಕ್ರೋಶದ ಜ್ವಾಲೆಗಳ ಒಂದೊಂದು ಕಿಡಿಯೂ ಈ ವಾಸ್ತವವನ್ನು ಬಿಂಬಿಸುತ್ತಿದೆ. ಈ ಕಿಡಿಗಳಲ್ಲಿರುವ ಸಂದೇಶವನ್ನು ಗ್ರಹಿಸುವುದು ನಮ್ಮ ಆದ್ಯತೆಯೂ ಹೌದು ಕರ್ತವ್ಯವೂ ಹೌದು. ಗ್ರಾಂಥಿಕವಾಗಿ ಸಂವಿಧಾನ ಸುರಕ್ಷಿತವಾಗಿದೆ. ಆದರೆ ಸ್ವತಃ ಅಂಬೇಡ್ಕರರೇ ಹೇಳಿರುವಂತೆ ಈ ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿ ಬರುವಂತಹ ಆಡಳಿತ ನೀತಿಗಳು ಜಾರಿಯಾಗುತ್ತಾ ಹೋದರೆ ಸಂವಿಧಾನ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಸಾರ್ವಭೌಮತ್ವಕ್ಕೇ ಧಕ್ಕೆ ಉಂಟಾಗುವ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಸಂವಿಧಾನದ ರಕ್ಷಣೆಗಾಗಿ ಗ್ರಾಂಥಿಕ ಪರಿಮಿತಿಯನ್ನು ಮೀರಿ ದೃಷ್ಟಿ ಹಾಯಿಸಬೇಕಿದೆ. ಇಲ್ಲವಾದರೆ ಇತಿಹಾಸದ ಪುಟಗಳಲ್ಲಿ ಶಾಶ್ವತ ಅಪರಾಧಿಗಳಾಗಿಯೇ ಉಳಿದುಬಿಡುತ್ತೇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಕೇಸ್‌, ಉಡುಪಿಯಿಂದ ವ್ಯಕ್ತಿಯನ್ನು ಠಾಣೆಗೆ ಕರೆತಂದ ಕ್ರಮಕ್ಕೆ ಹೈಕೋರ್ಟ್‌ ಗರಂ

Published

on

Kunal Kamra Show Row: ‘ವೈಟ್‌ಫೀಲ್ಡ್‌ ಅಲ್ಲ, ಡಾರ್ಕ್‌ಫೀಲ್ಡ್‌ ಮಾಡಿ’! ಪೊಲೀಸರಿಗೆ ಹೈಕೋರ್ಟ್‌ ಫುಲ್ ಕ್ಲಾಸ್

ಸುದ್ದಿದಿನ,ಬೆಂಗಳೂರು: ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಕಾರ್ಯಕ್ರಮ ರದ್ದಾದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನು ವಿಚಾರಣೆ ಹೆಸರಿನಲ್ಲಿ ಠಾಣೆಗೆ ಕರೆತಂದ ವೈಟ್‌ಫೀಲ್ಡ್ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣ ರದ್ದು ಕೋರಿ ಮೋಹನ್‌ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪೊಲೀಸ್ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದೆ.

http://Visit : www.suddidina.com

ನ್ಯಾಯಾಲಯದ ಮುಂದೆ ಡಿಸಿಪಿ ಸೈದುಲು ಅಡಾವತ್‌, ಎಸಿಪಿ ರೀನಾ ಸುವರ್ಣ ಹಾಗೂ ತನಿಖಾಧಿಕಾರಿ ಹಾಜರಾಗಿದ್ದರು. ಈ ವೇಳೆ ಪೊಲೀಸ್ ಠಾಣೆಯ ಕಾರ್ಯವೈಖರಿ, ಬಂಧನದ ಕ್ರಮ ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ ನ್ಯಾಯಪೀಠ ಹಲವು ಪ್ರಶ್ನೆಗಳನ್ನು ಕೇಳಿತು.

‘ವೈಟ್‌ಫೀಲ್ಡ್‌ ಠಾಣೆ ಡಾರ್ಕ್‌ಫೀಲ್ಡ್‌ ಆಗಲಿ’

ವೈಟ್‌ಫೀಲ್ಡ್‌ ಠಾಣೆಯಲ್ಲಿ ವಿದ್ಯುತ್ ಹಾಗೂ ಸಿಸಿಟಿವಿ ವ್ಯವಸ್ಥೆ ಕುರಿತ ವಿಚಾರವನ್ನೂ ನ್ಯಾಯಪೀಠ ಪ್ರಸ್ತಾಪಿಸಿತು. ಠಾಣೆಯ ಚಟುವಟಿಕೆಗಳೇ ಅಂಧಕಾರದಲ್ಲಿವೆ ಎಂದು ವ್ಯಂಗ್ಯವಾಡಿದ ನ್ಯಾಯಮೂರ್ತಿಗಳು, ‘ವೈಟ್‌ಫೀಲ್ಡ್‌ ಠಾಣೆಯನ್ನು ಡಾರ್ಕ್‌ಫೀಲ್ಡ್‌ ಠಾಣೆಯನ್ನಾಗಿ ಬದಲಾಯಿಸಿಕೊಳ್ಳಿ’ ಎಂದು ಕಿಡಿಕಾರಿದರು.

ಉಡುಪಿಗೆ ತೆರಳಿ ಮೋಹನ್‌ಗೌಡರನ್ನು ವಶಕ್ಕೆ ಪಡೆದಿದ್ದೇಕೆ, ಬೆಳಗಿನ ಜಾವ 2 ಗಂಟೆಗೆ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಂಡಿದ್ದೇಕೆ ಎಂಬುದರ ಕುರಿತು ಅಧಿಕಾರಿಗಳಿಂದ ನ್ಯಾಯಪೀಠ ವಿವರಣೆ ಕೇಳಿತು.

ಡಿಸಿಪಿ ಪರವಾಗಿ, ಮೋಹನ್‌ಗೌಡ ಹಲವು ಟ್ವೀಟ್‌ಗಳನ್ನು ಮಾಡಿದ್ದರು. ಅವರನ್ನು ಬಂಧಿಸಿರಲಿಲ್ಲ, ಫೋನ್‌ ಮಾಡಿದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರು ಕಾರಿನಲ್ಲಿ ಬಂದಿದ್ದರು. ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ಉತ್ತರಿಸಲಾಯಿತು.

‘ಯೂನಿಫಾರ್ಮ್ ಇದ್ದರೆ ಏನು ಬೇಕಾದರೂ ಮಾಡಬಹುದೇ?’

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಮಾತ್ರಕ್ಕೆ ಪೊಲೀಸರು ಮನಬಂದಂತೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಯೂನಿಫಾರ್ಮ್‌ ಧರಿಸಿರುವ ಕಾರಣಕ್ಕೆ ನಾಗರಿಕರ ಸ್ವಾತಂತ್ರ್ಯ ಕಸಿಯಲು ಸಾಧ್ಯವಿಲ್ಲ ಎಂದು ಕೋರ್ಟ್‌ ಎಚ್ಚರಿಸಿತು.

ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಕುರಿತು ಕ್ರಮ ಕೈಗೊಳ್ಳುವಾಗ ಸುಪ್ರೀಂಕೋರ್ಟ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೊಲೀಸರು ತಮ್ಮನ್ನು ತಾವೇ ಕಾನೂನು ಎಂದು ಭಾವಿಸಬಾರದು. ಬಂಧನದ ಅಧಿಕಾರವನ್ನು ವಿವೇಚನೆಯಿಲ್ಲದೆ ಬಳಸಬಾರದು ಎಂದು ನ್ಯಾಯಪೀಠ ತಿಳಿಸಿತು.

ಪೊಲೀಸ್ ಠಾಣೆಗಳಲ್ಲಿ CCTV ಆಡಿಟ್‌ಗೆ ಸೂಚನೆ

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ವ್ಯವಸ್ಥೆ ಮತ್ತು ಯುಪಿಎಸ್‌ ಬ್ಯಾಕಪ್‌ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯಮಟ್ಟದ ಆಡಿಟ್‌ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಅಧಿಕಾರ ದುರುಪಯೋಗ ಅಥವಾ ನ್ಯಾಯಾಲಯದ ಆದೇಶ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಬೇಕು. ಪೊಲೀಸ್ ಠಾಣೆಗಳಲ್ಲಿ ಸುಪ್ರೀಂಕೋರ್ಟ್‌ ತೀರ್ಪುಗಳ ಕುರಿತು ಅರಿವು ಮೂಡಿಸಬೇಕು ಎಂದು ಸೂಚಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಸೆಪ್ಟೆಂಬರ್‌ 25ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ

ಕುನಾಲ್‌ ಕಾಮ್ರಾ ಶೋ ವಿರೋಧಿಸಿ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಈ ಬೆಳವಣಿಗೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಮೋಹನ್‌ಗೌಡ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಉಡುಪಿಯಿಂದ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದ ಕ್ರಮ ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

Continue Reading

ದಿನದ ಸುದ್ದಿ

ಗೃಹಲಕ್ಷ್ಮೀ ಯೋಜನೆಯಲ್ಲಿ ಮಹತ್ವದ ಬದಲಾವಣೆ: ಅರ್ಹ ಫಲಾನುಭವಿಗಳ ಖಚಿತತೆಗೆ ಮನೆ-ಮನೆ ಪರಿಶೀಲನೆ

Published

on

Gruha Lakshmi Scheme: ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಯೋಮೆಟ್ರಿಕ್‌, ಫೇಸ್‌ ವೆರಿಫಿಕೇಷನ್ ಕಡ್ಡಾಯ; ಮನೆ-ಮನೆ ಸಮೀಕ್ಷೆಗೆ ಸರ್ಕಾರದ ಆದೇಶ!

ಸುದ್ದಿದಿನ,ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮೀ ಯೋಜನೆಯಲ್ಲಿ ಸರ್ಕಾರ ಮಹತ್ವದ ಪರಿಶೀಲನಾ ಕ್ರಮಕ್ಕೆ ಮುಂದಾಗಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಪ್ರಯೋಜನ ತಲುಪಬೇಕು ಎಂಬ ಉದ್ದೇಶದಿಂದ, ಎಲ್ಲಾ ಫಲಾನುಭವಿಗಳ ಬಯೋಮೆಟ್ರಿಕ್‌ ಮತ್ತು ಮುಖಚಹರೆ ದೃಢೀಕರಣವನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪ್ರಕ್ರಿಯೆಯನ್ನು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (ಇಡಿಸಿಎಸ್‌) ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ಮೊಬೈಲ್‌ ಆ್ಯಪ್‌ ಮೂಲಕ ಕೈಗೊಳ್ಳಲಾಗುತ್ತದೆ.

http://Visit : www.suddidina.com

ಮನೆ-ಮನೆ ಸಮೀಕ್ಷೆಯ ಜತೆಗೆ ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕವೂ ಪರಿಶೀಲನಾ ಪ್ರಕ್ರಿಯೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ನಿಗದಿಪಡಿಸಿರುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಪ್ರಕಾರವೇ ಫಲಾನುಭವಿಗಳ ಮರುಪರಿಶೀಲನೆ ನಡೆಯಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಒಂದು ತಿಂಗಳಲ್ಲಿ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸಲು ಸೂಚನೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಗತ್ಯ ಮಾದರಿ ನಮೂನೆಗಳನ್ನು ಸಿದ್ಧಪಡಿಸಲಿದೆ. ಮಾಸ್ಟರ್‌ ತರಬೇತುದಾರರ ಮೂಲಕ ಕ್ಷೇತ್ರ ಗಣತಿದಾರರಿಗೆ ತರಬೇತಿ ನೀಡಲಾಗುತ್ತದೆ. ಆಗಸ್ಟ್‌ 30ರಿಂದ ಒಂದು ತಿಂಗಳೊಳಗೆ ಕ್ಷೇತ್ರ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಜಿಲ್ಲಾ ಹಾಗೂ ತಾಲೂಕು ಗ್ಯಾರಂಟಿ ಸಮಿತಿಗಳು ಮತ್ತು ಸ್ಥಳೀಯ ಮಟ್ಟದ ಸಮಿತಿಗಳು ನಿಗದಿತ ಅವಧಿಯಲ್ಲಿ ಪರಿಶೀಲನೆ ಪೂರ್ಣಗೊಳಿಸಬೇಕು. ನಗರ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಬಿಲ್‌ ಕಲೆಕ್ಟರ್‌ಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಗಣತಿದಾರರನ್ನಾಗಿ ಬಳಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ.

ಮನೆ ಬಾಗಿಲಿಗೆ ಬರಲಿದೆ ಪರಿಶೀಲನಾ ತಂಡ

ಫಲಾನುಭವಿಗಳ ಮನೆಗಳಿಗೆ ಕಡ್ಡಾಯವಾಗಿ ಭೇಟಿ ನೀಡುವಂತೆ ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿಗೆ ಸೂಚಿಸಲಾಗಿದೆ. ಫಲಾನುಭವಿ ಅಥವಾ ಕುಟುಂಬದ ಸದಸ್ಯರು ಗಣತಿ ನಮೂನೆಯನ್ನು ಭರ್ತಿ ಮಾಡಿ ಹಿಂತಿರುಗಿಸಬೇಕು. ಯಾವುದೇ ಕಾರಣಕ್ಕೂ ಮನೆ ಭೇಟಿ ತಪ್ಪಿಸಬಾರದು ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಗಣತಿದಾರರು ಮೊಬೈಲ್‌ ಆ್ಯಪ್‌ ಮೂಲಕ ಫಲಾನುಭವಿಯ ಭಾವಚಿತ್ರ ಅಥವಾ ಮನೆಯ ಫೋಟೊ, ಜಿಪಿಎಸ್‌ ಮ್ಯಾಪಿಂಗ್‌, ಮುಖಚಹರೆ ದೃಢೀಕರಣ ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ಸ್ಥಳದಲ್ಲಿಯೇ ದಾಖಲಿಸಬೇಕು. ಈ ಮೂಲಕ ಫಲಾನುಭವಿಯ ಗುರುತು ಹಾಗೂ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸುವ ಉದ್ದೇಶ ಹೊಂದಲಾಗಿದೆ.

ಜಿಲ್ಲಾಧಿಕಾರಿಗಳು, ಸಿಇಒಗಳಿಗೆ ಹೊಣೆ

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಾರ್ಡ್‌ ಹಾಗೂ ಗ್ರಾಮವಾರು ಸ್ಪಷ್ಟ ನಿಯೋಜನೆಯೊಂದಿಗೆ ಗಣತಿದಾರರಿಗೆ ಲಿಖಿತ ಆದೇಶ ನೀಡಬೇಕು. ಪರಿಶೀಲನಾ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಮೇಲ್ವಿಚಾರಣೆ ನಡೆಸಬೇಕಿದೆ.

ಒಟ್ಟಿನಲ್ಲಿ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಮತ್ತಷ್ಟು ನಿಖರಗೊಳಿಸಿ, ಅರ್ಹರಿಗೆ ಮಾತ್ರ ಸರ್ಕಾರದ ನೆರವು ತಲುಪಿಸುವುದು ಈ ಮರುಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ. ಮನೆ-ಮನೆ ಸಮೀಕ್ಷೆ ಮತ್ತು ಡಿಜಿಟಲ್‌ ದೃಢೀಕರಣದ ಬಳಿಕ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಲಿವೆಯೇ ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸಿದೆ.

Continue Reading

ದಿನದ ಸುದ್ದಿ

ಬೆಂಗಳೂರು ಮೆಟ್ರೋದಲ್ಲಿ ಸುರಕ್ಷತೆಗೆ ಹೊಸ ಕವಚ: PSD ಕಾಮಗಾರಿ ಯಾವಾಗ?

Published

on

Namma Metro PSD Delay: 3ನೇ ಹಂತದ ಕೇಂದ್ರ ಒಪ್ಪಿಗೆಗೆ ಕಾಯುವ ಬೆಂಗಳೂರು; 177 ನಿಲ್ದಾಣಗಳಲ್ಲಿ ₹1,274 ಕೋಟಿ ವೆಚ್ಚದ ಸುರಕ್ಷತಾ ಯೋಜನೆ!

ಸುದ್ದಿದಿನ,ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರೂಪಿಸಿರುವ ಪ್ಲಾಟ್‌ಫಾರ್ಮ್ ಸ್ಕ್ರೀನ್‌ ಡೋರ್‌ (PSD) ಯೋಜನೆಗೆ ಕೇಂದ್ರದ ಅನುಮೋದನೆಯ ವಿಳಂಬವೇ ದೊಡ್ಡ ಅಡ್ಡಿಯಾಗಿದೆ. ಮೆಟ್ರೋ 3ನೇ ಹಂತದ ಕೆಂಪು ಮಾರ್ಗದ ಡಿಪಿಆರ್‌ಗೆ ಕೇಂದ್ರ ಸರಕಾರದಿಂದ ಒಪ್ಪಿಗೆ ದೊರೆಯುವವರೆಗೆ PSD ಅಳವಡಿಕೆ ಕಾಮಗಾರಿ ಆರಂಭಿಸುವುದು ಕಷ್ಟವಾಗಲಿದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

ಪ್ರಸ್ತುತ ಮತ್ತು ಭವಿಷ್ಯದ ಮೆಟ್ರೋ ಯೋಜನೆಗಳನ್ನು ಪರಿಗಣಿಸಿದರೆ ಬೆಂಗಳೂರಿನಲ್ಲಿ ಒಟ್ಟು 191 ನಿಲ್ದಾಣಗಳು ನಿರ್ಮಾಣವಾಗುವ ನಿರೀಕ್ಷೆಯಿದೆ. ಈ ಪೈಕಿ 177 ನಿಲ್ದಾಣಗಳಲ್ಲಿ PSD ಅಳವಡಿಸಲು ಬಿಎಂಆರ್‌ಸಿಎಲ್‌ ಯೋಜನೆ ರೂಪಿಸಿದೆ. ಇದಕ್ಕಾಗಿ ಅಂದಾಜು ₹1,274 ಕೋಟಿ ವೆಚ್ಚವಾಗಲಿದೆ.

ಹೈಲೈಟ್ಸ್:

  • 177 ಮೆಟ್ರೋ ನಿಲ್ದಾಣಗಳಲ್ಲಿ PSD ಅಳವಡಿಕೆ ಗುರಿ
  • ಯೋಜನೆಗೆ ಅಂದಾಜು ₹1,274 ಕೋಟಿ ವೆಚ್ಚ
  • ಕೇಂದ್ರದ 3ಎ ಹಂತದ ಅನುಮೋದನೆಗೆ PSD ಯೋಜನೆ ಜೋಡಣೆ
  • ಹಾಲಿ ನಿಲ್ದಾಣಗಳಲ್ಲಿ ರಾತ್ರಿ ವೇಳೆ ತಾಂತ್ರಿಕ ಕಾಮಗಾರಿ
  • ಹೆಬ್ಬಾಳ–ಸರ್ಜಾಪುರ 3ಎ ಯೋಜನೆಯ ಪರಿಷ್ಕೃತ ವೆಚ್ಚ ₹25,999 ಕೋಟಿ

http://Visit : www.suddidina.com

₹1,274 ಕೋಟಿ ಯೋಜನೆ: ಎಲ್ಲಿ ಎಷ್ಟು ಖರ್ಚು?

PSD ಯೋಜನೆಯ ಒಟ್ಟು ವೆಚ್ಚದಲ್ಲಿ ಸಾಮಗ್ರಿ ಖರೀದಿಗೆ ಸುಮಾರು ₹747 ಕೋಟಿ, ಸಿವಿಲ್ ಕಾಮಗಾರಿಗಳಿಗೆ ₹317 ಕೋಟಿ ಹಾಗೂ ಸಿಗ್ನಲಿಂಗ್, ಟೆಲಿಕಾಂ ಮತ್ತು ವಿದ್ಯುತ್ ವ್ಯವಸ್ಥೆಗಳ ಮಾರ್ಪಾಡಿಗೆ ₹210 ಕೋಟಿ ಮೀಸಲಿಡುವ ಪ್ರಸ್ತಾವನೆ ಇದೆ.

ಆದರೆ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಪ್ರತ್ಯೇಕವಾಗಿ ಸಲ್ಲಿಸಲಾಗಿಲ್ಲ. ಹೆಬ್ಬಾಳ–ಸರ್ಜಾಪುರ 3ಎ ಹಂತದ ಡಿಪಿಆರ್‌ನ ಭಾಗವಾಗಿಯೇ ಕಳುಹಿಸಲಾಗಿದೆ. ಹೀಗಾಗಿ 3ಎ ಹಂತದ ಯೋಜನೆಗೆ ಕೇಂದ್ರದ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅನುಮೋದನೆ ದೊರೆಯುವವರೆಗೆ PSD ಯೋಜನೆಗೂ ಅಂತಿಮ ಒಪ್ಪಿಗೆ ಸಿಗುವುದಿಲ್ಲ.

ಹಾಲಿ ನಿಲ್ದಾಣಗಳಲ್ಲಿ ಕಾಮಗಾರಿ ಸವಾಲು

ಹೊಸ ನಿಲ್ದಾಣಗಳಲ್ಲಿ PSD ಅಳವಡಿಕೆ ತುಸು ಸುಲಭವಾದರೂ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳ ನಿಲ್ದಾಣಗಳಲ್ಲಿ ಕಾಮಗಾರಿ ನಡೆಸುವುದು ಸವಾಲಿನ ಕೆಲಸವಾಗಿದೆ. ತಾಂತ್ರಿಕ ಕಾಮಗಾರಿಗಳನ್ನು ಮುಖ್ಯವಾಗಿ ರಾತ್ರಿ ವೇಳೆ, ರೈಲು ಸಂಚಾರ ಸ್ಥಗಿತಗೊಂಡ ಬಳಿಕ ನಡೆಸಬೇಕಾಗುತ್ತದೆ. ಅಗತ್ಯವಿದ್ದರೆ ರೈಲುಗಳ ವೇಗ ಕಡಿಮೆ ಮಾಡುವುದು ಅಥವಾ ಸಂಚಾರವನ್ನು ತಾತ್ಕಾಲಿಕವಾಗಿ ನಿಯಂತ್ರಿಸುವ ಪರಿಸ್ಥಿತಿಯೂ ಎದುರಾಗಬಹುದು.

ಟ್ರ್ಯಾಕ್‌ಗೆ ಇಳಿಯುವ ಘಟನೆಗಳು ಆತಂಕ

ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಟ್ರ್ಯಾಕ್‌ಗೆ ಇಳಿಯುವುದನ್ನು ತಡೆಯಲು ಈಗಾಗಲೇ ಭದ್ರತಾ ಸಿಬ್ಬಂದಿ ಹಾಗೂ ಸ್ಟೀಲ್ ಗ್ರಿಲ್‌ಗಳಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಟ್ರ್ಯಾಕ್‌ಗೆ ಇಳಿಯುವ ಘಟನೆಗಳು ಸಂಪೂರ್ಣವಾಗಿ ನಿಂತಿಲ್ಲ. ಈ ಹಿನ್ನೆಲೆಯಲ್ಲಿ PSD ಅಳವಡಿಕೆ ಪ್ರಯಾಣಿಕರ ಸುರಕ್ಷತೆಗೆ ಮಹತ್ವದ ಹೆಚ್ಚುವರಿ ಕವಚವಾಗಬಹುದು.

3ಎ ಹಂತದ ಪರಿಷ್ಕೃತ ಡಿಪಿಆರ್‌

ಹೆಬ್ಬಾಳ–ಸರ್ಜಾಪುರ 37 ಕಿ.ಮೀ. ಕಾರಿಡಾರ್‌ನ ಪರಿಷ್ಕೃತ ಡಿಪಿಆರ್‌ ಕೇಂದ್ರದ ಅನುಮೋದನೆಗಾಗಿ ಕಾಯುತ್ತಿದೆ. ವೆಚ್ಚ ಪರಿಷ್ಕರಣೆಯ ಬಳಿಕ ಯೋಜನೆಯ ಅಂದಾಜು ₹28,405 ಕೋಟಿಯಿಂದ ₹25,999 ಕೋಟಿಗೆ ಇಳಿಕೆಯಾಗಿದೆ. ಕೇಂದ್ರದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯ ಒಪ್ಪಿಗೆ ದೊರೆತ ಬಳಿಕವೇ ಮುಂದಿನ ಹಂತದ ಕಾಮಗಾರಿಗಳಿಗೆ ವೇಗ ಸಿಗಲಿದೆ.

Continue Reading

Trending