ದಿನದ ಸುದ್ದಿ
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆತ್ಮಸ್ಥೈರ್ಯ ಹೆಚ್ಚಿಸುವಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಲೋಕಸಭಾ ಸದಸ್ಯರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು (ಅ.4) ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿದ್ಯಾನಗರದಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಸಿಇಟಿ ಮತ್ತು ನೀಟ್ ಪರೀಕ್ಷೆ ತರಬೇತಿ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತನ್ನ ಭವಿಷ್ಯದ ಗುರಿಯನ್ನಿಟ್ಟುಕೊಂಡು ಆಶಾವಾದಿಗಳಾಗಬೇಕು. ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡರೆ, ತನ್ನ ಗುರಿ ಸಾಧನೆಯ ಹಾದಿ ಸುಗಮವಾಗುತ್ತದೆ. ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ, ಪೋಷಕರೊಂದಿಗೆ ಹಾಗೂ ಸಮಾಜದೊಂದಿಗೆ ಉತ್ತಮ ಭಾಂದವ್ಯವನ್ನು ಬೆಳೆಸಿಕೊಂಡು ಸಂಬಂಧಗಳ ಮಹತ್ವಗಳನ್ನು ಅರಿತು ಅವುಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಲಿಕೆಯ ಎಲ್ಲ ಹಂತಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಪರಿಪೂರ್ಣ ವಿದ್ಯಾರ್ಥಿ ಎಂದು ಎನಿಸಿಕೊಳ್ಳಲು ಸಾಧ್ಯ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ವಿಷಯಗಳನ್ನು ನಿರ್ಲಕ್ಷ್ಯ ಮಾಡದೇ ಪ್ರತಿಯೊಂದು ವಿಷಯವು ಉಪಯುಕ್ತ ಎನ್ನುವ ಭಾವನೆಯೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಯತ್ನಿಸಬೇಕಿದೆ ಎಂದು ತಿಳಿಸಿ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿμï ಕಲಿಕೆ, ಕಂಪ್ಯೂಟರ್ ಜ್ಞಾನದ ಜೊತೆಗೆ ಶಿಸ್ತು ಬೆಳೆಸಿಕೊಂಡರೆ ಮಾತ್ರ ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಮಾತನಾಡಿ ವಿದ್ಯಾರ್ಥಿಗಳು ಏನು ಓದಬೇಕು, ಯಾವಾಗ ಓದಬೇಕು, ಏನ್ ಮಾಡಬೇಕು ಎಂಬ ಸ್ವಂತ ಚಿಂತನೆಗಳನ್ನು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ತಂದೆ, ತಾಯಿಗಳು ಕಷ್ಟಪಟ್ಟು ದುಡಿದು ನಿಮಗೆ ವಿದ್ಯಾಭ್ಯಾಸ ಕಲಿಯಲು ಕಳುಹಿಸುತ್ತಿರುತ್ತಾರೆ. ಅದರ ಫಲವಾಗಿ ನೀವು ಅವರಿಗೆ ನಿಮ್ಮ ಸಾಧನೆಯ ಮೂಲಕ ಗೌರವ ತರಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ ಈ ತರಬೇತಿಯು 90 ದಿನಗಳ ಕಾಲ ನಡೆಯಲಿದ್ದು. ಪ್ರತಿದಿನ 2 ಗಂಟೆಯಂತೆ ಐದು ದಿನ ತರಗತಿಗಳನ್ನು ನಡೆಸಲಾಗುತ್ತದೆ. ಜೊತೆಗೆ 19 ವರ್ಷ ಹಿಂದಿನ ಪ್ರಶ್ನೋತ್ತರಗಳನ್ನು ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಕಾಲೇಜಿನಲ್ಲಿರುವಂತಹ ಅಧ್ಯಾಪಕರು ಬೋರ್ಡ್ ಪರೀಕ್ಷೆ ಬಗ್ಗೆ ಹೆಚ್ಚು ಅಧ್ಯಯನ ಮಾಡಿಸುತ್ತಾರೆ, ಹಾಗೆಯೇ ಖಾಸಗಿ ಸಂಸ್ಥೆ ಅಧ್ಯಾಪಕರು ಸಿಇಟಿ ಮತ್ತು ನೀಟ್ ಪರೀಕ್ಷೆ ಬಗ್ಗೆ ಉಪನ್ಯಾಸ ನೀಡುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ ಭವಿಷ್ಯ ನಿಮ್ಮ ಕೈಯಲ್ಲಿದೆ, ಆದ್ದರಿಂದ ಕಲಿಯುವ ಸಮಯದಲ್ಲಿ ಗಮನವಿಟ್ಟು ಶ್ರದ್ಧೆಯಿಂದ ಕಲಿತು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಿಗರೇಟ್, ತಂಬಾಕು ಇಂತಹ ದುಶ್ಚಟಗಳಿಂದ ದೂರವಿರಬೇಕು, ಕಾಲೇಜುಗಳಲ್ಲಿ ಯಾರಾದರೂ ಸಿಗರೇಟ್, ತಂಬಾಕು ಬಳಸುವುದು ಕಂಡುಬಂದಲ್ಲಿ ಅಂತವರ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ಪೋಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಇದೆ ವೇಳೆ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಬುಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಚಮನ್ ಸಾಬ್ , ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕರಿಸಿದ್ದಪ್ಪ, ಖಾಸಗಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಸಂಘದ ಅಧ್ಯಕ್ಷರಾದ ಶ್ರೀಧರ್, ಕಾರ್ಯದರ್ಶಿ ಡಾ.ಜಯಂತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಾಯತ್ರಿ ಹಾಗೂ ವಿವಿಧ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ 10:35 ಕ್ಕೆ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಹೊಳಲ್ಕೆರೆ ಸಮೀಪದ ನೆಹರು ಕಾಲೋನಿಯ ಜಮೀನಿನಲ್ಲಿ ಇಂದು (ಭಾನುವಾರ, ಜೂನ್ 07 ರಂದು ಮಧ್ಯಾಹ್ನ 2 ಗಂಟೆಗೆ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಪರ್ಕ ಮೊಬೈಲ್ ಸಂಖ್ಯೆ : 9740114246
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಶ್ರಯ ಯೋಜನೆ – ಆವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ಹಾಗೂ ವಸತಿ ರಹಿತ ಅಂಗವಿಕಲರು, ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ತೃತೀಯ ಲಿಂಗಿಗಳು, ಸ್ವಚ್ಛತಾ ಕಾರ್ಮಿಕರು, PM SVanidhi (ಪಿ ಎಂ -ಸ್ವ ನಿಧಿ )ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಲಸೆ ಬಂದ ಕುಟುಂಬದವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು http://pmayurban.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು ಅಥವಾ ಖುದ್ದಾಗಿ ಮಹಾನಗರ ಪಾಲಿಕೆಯ ಆಶ್ರಯ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗರಿಕೆ ಹುಲ್ಲಿನ ಜ್ಯೂಸ್ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ
ಗಿರೀಶ್ ಮುತ್ತು
ಗರಿಕೆ ಹುಲ್ಲಿನ ರಸದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿನೊಡಾನ್ ಡ್ಯಾಕ್ಟಿಲಾನ್ ಪ್ರೊಟೀನ್ ಎಂಬ ಅಂಶವಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಇದು ಜ್ವರದಂತಹ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಹಾಗಾಗೊ ವಾರಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಗರಿಕೆ ಹುಲ್ಲಿನ ರಸ ಅಥವಾ ಕಷಾಯದ ಸೇವನೆ ಮಾಡಬೇಕು
ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯ ವ್ಯಾಯಾಮ ಮತ್ತು ಡಯಟ್ ಮಾಡುತ್ತೇವೆ. ಈ ಮಳೆಗಾಲದಲ್ಲಿ ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹಲವು ಬಗೆಯ ಜ್ಯೂಸ್ ಕುಡಿಯುತ್ತಾರೆ. ಹಣ್ಣು, ತರಕಾರಿ ರಸ ಕುಡಿದು ಆರೋಗ್ಯವಾಗಿರಲು ಪ್ರಯತ್ನಿಸುತ್ತಾರೆ. ಆದರೆ ಈ ಒಂದು ಜ್ಯೂಸ್ ಅನ್ನು ನೀವು ಕುಡಿದರೆ ನಿಮ್ಮತ್ತ ಕಾಯಿಲೆಗಳು ಸುಳಿಯುವುದೇ ಇಲ್ಲ. ಅದುವೇ ಗರಿಕೆ ಹುಲ್ಲುನ ಜ್ಯೂಸ್.
ಹೌದು… ಆಯುರ್ವೇದ ವೈದ್ಯರು ಈ ಮೂಲಿಕೆಯು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಲ್ಲದೆ ಈ ಹುಲ್ಲಿನ ರಸವನ್ನು ಕುಡಿಯುವುದರಿಂದ ರಕ್ತದಲ್ಲಿರುವ ಕ್ಯಾನ್ಸರ್ ಕೋಶಗಳು ಕಡಿಮೆಯಾಗುವುದು ಮಾತ್ರವಲ್ಲದೆ ರಕ್ತ ಶುದ್ಧವಾಗಿರುತ್ತದೆ.
ಈ ಗರಿಕೆ ಹುಲ್ಲಿನಲ್ಲಿ ವಿಟಮಿನ್ ಎ, ಕೆ, ಸಿ ಮತ್ತು ವಿಟಮಿನ್ ಇ ಗಳು ಸಮೃದ್ಧವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತದೊತ್ತಡ, ರಕ್ತಹೀನತೆ ಮತ್ತು ರಕ್ತ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುತ್ತದೆ. ಹಾಗಾದರೆ ಗರಿಕೆ ಹುಲ್ಲಿನ ಜ್ಯೂಸ್ನ ಇತರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಗರಿಕೆ ರಸದ ಪ್ರಯೋಜನಗಳು
1. ಈ ಗರಿಕೆ ಹುಲ್ಲಿನ ಜ್ಯೂಸ್ ಎಲ್ಲಿಯೂ ಸಿಗುವುದಿಲ್ಲ. ಕೆಲವೆಡೆ ಮಾತ್ರ ಸಿಗುತ್ತದೆ. ಬೇರು ಮತ್ತು ಎಲೆಗಳು ಸೇರಿದಂತೆ ಗರಿಕೆ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿದೆ. ಇದು ಕೆಲವು ಹಾನಿಕಾರಕ ವ್ಯಾಕ್ಸಿನಿಯಾ ವೈರಸ್ ಎಂಬ ಸೂಕ್ಷ್ಮಜೀವಿಯನ್ನು ನಾಶಪಡಿಸುವ ಗುಣವನ್ನು ಹೊಂದಿದೆ. ಹೀಗಾಗಿ ಈ ಜ್ಯೂಸ್ ಕುಡಿಯುವವರೂ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ.
2. ಮೂತ್ರಕೋಶದ ಕಲ್ಲುಗಳು, ದೇಹದ ಊತ, ಮಕ್ಕಳಲ್ಲಿ ದೀರ್ಘಕಾಲದ ನೆಗಡಿ, ಮೂಗು ಸೋರುವಿಕೆ, ನೆಗಡಿ, ಅತಿಸಾರ, ಕಣ್ಣಿನ ದೋಷಗಳು, ಮೆದುಳಿನ ರಕ್ತಸ್ರಾವದಂತಹ ಕಾಯಿಲೆಗಳಿಗೆ ಈ ರಸ ತುಂಬಾ ಒಳ್ಳೆಯದು.
3. ಅಲ್ಲದೆ ತೂಕ ನಷ್ಟ, ಕೊಲೆಸ್ಟ್ರಾಲ್ ಕಡಿತ, ನರರೋಗ, ರಕ್ತದ ಕ್ಯಾನ್ಸರ್ ಚಿಕಿತ್ಸೆ, ಕೆಮ್ಮು, ಹೊಟ್ಟೆ ನೋವು, ರಕ್ತಹೀನತೆ, ಸಂಧಿವಾತ, ಹೃದಯ ಅಸ್ವಸ್ಥತೆ, ಚರ್ಮ ರೋಗಗಳು ಇತ್ಯಾದಿಗಳಿಗೆ ಅತ್ಯುತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತದೆ
4. ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ರಕ್ತದಿಂದ ವಿಷವನ್ನು ತೆಗೆದುಹಾಕುವಲ್ಲಿ ಗರಿಕೆ ರಸವು ಪರಿಣಾಮಕಾರಿಯಾಗಿದೆ.
5. ಗರಿಕೆ ಹುಲ್ಲಿನ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಕುದಿಸಬೇಕು.. ನಂತರ ಚರ್ಮರೋಗಗಳಾದ ರಿಂಗ್ವರ್ಮ್ ಮತ್ತು ಒಣ ಚರ್ಮವನ್ನು ತ್ವರಿತವಾಗಿ ಗುಣ ಪಡಿಸುತ್ತದೆ.
6. ಗರಿಕೆ ಹುಲ್ಲು ಬೇಕಾದಷ್ಟು ಸಂಗ್ರಹಿಸಿ, ಸ್ವಲ್ಪ ಅರಿಶಿನವನ್ನು ಸೇರಿಸಿ ಪೇಸ್ಟ್ ಮಾಡಿ ದೇಹಕ್ಕೆ ಉಜ್ಜಿಕೊಂಡರೆ, ಒಂದು ಗಂಟೆ ಬಿಟ್ಟು ನಂತರ ಸ್ನಾನ ಮಾಡಿ. ಇದರಿಂದ ದೇಹದ ತುರಿಕೆ ನಿವಾರಣೆಯಾಗುತ್ತದೆ.
ಗರಿಕೆ ಹುಲ್ಲಿನ ರಸ ತಯಾರಿಸುವುದು ಹೇಗೆ?
*ತಾಜಾ ಗರಿಕೆ ಹುಲ್ಲು ಒಂದು ಹಿಡಿಯಷ್ಟು ತೆಗೆದುಕೊಂಡು ಸ್ವಚ್ಚವಾಗಿ ತೊಳೆದುಕೊಳ್ಳಿ.
* ಬಳಿಕ ಇದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
* ಬಳಿಕ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.
* ಚೆನ್ನಾಗಿ ಪೇಸ್ಟ್ ಆದ ಬಳಿಕ ಇದನ್ನು ಸೋಸಿಕೊಳ್ಳಬೇಕು.
* ಬಳಿಕ ಇದನ್ನು ಕುಡಿಯಬೇಕು. ಆದರೆ ಇದು ತಕ್ಷಣದ ಮನೆಮದ್ದಾಗಿದೆ. ಆದರೆ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಇದು ಕೊನೆಯ ಮದ್ದು ಅಲ್ಲ. ಹೀಗಾಗಿ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾದಾಗ ಮೊದಲು ವೈದ್ಯರನ್ನು ಸಂಪರ್ಕಿಸುವುದು ತುಂಬಾ ಅವಶ್ಯಕ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲ ಎಲ್.ಎಚ್.ಅರುಣಕುಮಾರ್ ಮನವಿ
-
ದಿನದ ಸುದ್ದಿ4 days agoಮೊದಲ ಸಂಪುಟ ಸಭೆಯಲ್ಲೇ ಮಹತ್ವದ 5 ಘೋಷಣೆ ಮಾಡಿದ ಸಿಎಂ ಡಿಕೆಶಿ
-
ದಿನದ ಸುದ್ದಿ6 days agoದಾವಣಗೆರೆ ವಿಶ್ವವಿದ್ಯಾಲಯ | ಜೂನ್ 2 ರಿಂದ 4 ರವರೆಗೆ ‘ಭಾಷಾಂತರ ಕೌಶಲ್ಯ ತರಬೇತಿ ಶಿಬಿರ’
-
ಅಂಕಣ3 days agoಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
-
ದಿನದ ಸುದ್ದಿ3 days agoಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ
-
ದಿನದ ಸುದ್ದಿ3 days agoಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ
-
ದಿನದ ಸುದ್ದಿ4 days agoಧನ್ಯವಾದಗಳು ಕರ್ನಾಟಕ : ಸಿಎಂ ಡಿಕೆ ಶಿವಕುಮಾರ್
-
ದಿನದ ಸುದ್ದಿ5 days agoಕುಂಬಳಕಾಯಿ ಬೀಜದಲ್ಲಿ ‘ ಜೀವ ಸಂಜೀವಿನಿ’ : ಮಿಸ್ ಮಾಡ್ದೆ ಓದಿ ; ಆರೋಗ್ಯದ ಗುಟ್ಟು ತಿಳಿಯಿರಿ

