Connect with us

ದಿನದ ಸುದ್ದಿ

ದಾವಣಗೆರೆ ದುಗ್ಗಮ್ಮನ ದೇವಸ್ಥಾನದ ಬಳಿ ಸ್ಪೋಟಕ ಪತ್ತೆ ; ಪ್ರಕರಣ ದಾಖಲು : ಎಸ್ ಪಿ ಹನುಮಂತರಾಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ಪಿಪಿಟಿ ಪ್ರದರ್ಶನದ ಮೂಲಕ ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರಿಗೆ ಎಕ್ಸ್‍ಪ್ಲೋಸಿವ್ ಕಾಯ್ದೆ, ಸಬ್ಸ್‍ಟೆನ್ಸ್ ಕಾಯ್ದೆ ಹಾಗೂ ಎಕ್ಸ್‍ಪ್ಲೋಸಿವ್ ರೂಲ್ಸ್ 2008 ರ ಬಗ್ಗೆ ವಿವರವಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ತಿಳಿಸಿದರು.

ಜಿಲ್ಲಾಡಳಿತ ಭವನದ ತುಂಗ ಭದ್ರ ಸಭಾಂಗಣದಲ್ಲಿ ಕಲ್ಲುಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹದ ಅಂಗವಾಗಿ ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮಾಲೀಕರು ಕಡ್ಡಾಯವಾಗಿ ಅನುಸರಿಸಬೇಕಾದ ಸುರಕ್ಷತಾ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ ಅವರು ಶಿವಮೊಗ್ಗದ ಹುಣಸೋಡಿನಲ್ಲಿ ಸ್ಫೋಟ ಸಂಭವಿಸಲು ಕಾರಣ ಇದ್ಯಾವ ನಿಯಮಗಳನ್ನು ಪಾಲಿಸದೇ ಇರುವುದಾಗಿದ್ದು, ಸ್ಪೋಟಕಗಳ ಬಳಕೆಯಲ್ಲಿ ನಿರ್ಲಕ್ಷ್ಯದಿಂದಾಗಿ ಸಾವುನೋವಿಗೆ ಕಾರಣವಾಗಿದ್ದು, ಈ ಪ್ರಕರಣದ ಕುರಿತು ತನಿಖೆ ಜಾರಿಯಲ್ಲಿದೆ ಎಂದರು.

ದಾವಣಗೆರೆ ನಗರದಲ್ಲಿಯೇ ದುಗ್ಗಮ್ಮನ ಜಾತ್ರೆ ತರುವಾಯ ದೇವಸ್ಥಾನದ ಸುಮಾರು 300 ಮೀಟರ್ ಅಂತರದಲ್ಲಿ ಹಂಚಿನ ಗೋದಾಮುವೊಂದರಲ್ಲಿ ದೊಡ್ಡ ಪ್ರಮಾಣದ ಸ್ಪೋಟಕವನ್ನು ಸಂಗ್ರಹಿಸಿರುವುದನ್ನು ಪತ್ತೆ ಹಚ್ಚಿ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗಿದೆ. ಹಾಗೂ ಆಜಾದ್ ನಗರದ ಕಟ್ಟಡದ ಬೇಸ್‍ಮೆಂಟ್‍ನಲ್ಲಿ ಸಂಗ್ರಹಿಸಿಡಲಾಗಿದ್ದ ಸ್ಪೋಟಕವನ್ನು ಸೀಜ್ ಮಾಡಿ ಸಂಬಂಧಿಸಿದವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಲೈಸೆನ್ಸ್‍ನ್ನು ಕೂಡ ನಿಯಮಾನುಸಾರ ನಿಲಂಬನೆಯಲ್ಲಿಡಲಾಗಿದೆ.

ಕಾಡಜ್ಜಿ ಬಳಿ ಕೂಡ ಸ್ಪೋಟಕ ಸೀಜ್ ಮಾಡಿ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ ಎಂದ ಅವರು ಸ್ಪೋಟಕಗಳ ಬಗ್ಗೆ ಅತಿ ಜಾಗರೂಕರಾಗಿ ನಿಯಮ ಪಾಲಿಸದಿದ್ದರೆ ಅವಘಡಕ್ಕೆ ಕಾರಣರಾಗುತ್ತೀರೆಂದು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಬಲ್ಲೂರು ರವಿಕುಮಾರ್ ಮಾತನಾಡಿ ಕ್ರಷರ್‍ಗಳಿಂದ ಬರುವ ಗಾಡಿಗಳು ಅತೀ ತೂಕ ಹೊತ್ತು ಓಡಾಡುತ್ತಿದ್ದು, ಇದರಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ. ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.

ಎಸ್‍ಪಿಯವರು ಪ್ರತಿಕ್ರಿಯಿಸಿ, ಗುತ್ತಿಗೆದಾರರು ವಾಹನಗಳು ಭಾರ ಹೊರುವ ಕುರಿತಂತೆ ಆರ್ ಟಿ ಒ ಕಚೇರಿಯಿಂದ ನೀಡುವ ಪರ್‍ಮಿಟ್ ಹೊಂದಿರಬೇಕು. ಸಾಗಣಿಕೆಯ ವಾಹನದಲ್ಲಿ ಹೆಚ್ಚುವರಿ ಭಾರವನ್ನು ಹೇರುವಂತಿಲ್ಲ. ಈ ರೀತಿ ಮಾಡಿದರೆ ರಸ್ತೆ, ಪಾದಚಾರಿಗಳು, ವಾಹನ ಚಾಲಕರು ಸೇರಿದಂತೆ ಎಲ್ಲರಿಗೆ ತೊಂದರೆಯಾಗುವ ಕಾರಣ ಹೆಚ್ಚುವರಿ ಲೋಡ್ ಹಾಕಬಾರದು ಎಂದರು.


ಗಣಿ ಮಾಡುವ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಕೆ ಕಡ್ಡಾಯ. ಗಣಿಗಾರಿಕೆ ಪ್ರದೇಶದ ಪ್ರವೇಶ, ನಿರ್ಗಮನ, ಗಣಿ ಸ್ಥಳ, ಸ್ಟೋರೇಜ್ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ಸಿಸಿಟಿವಿ ಅಳವಡಿಕೆಯಿಂದ ಸ್ಥಳದಲ್ಲಿ ಏನಾದರೂ ದುರ್ಘಟನೆಗಳು ಸಂಭವಿಸಿದರೆ ಪೊಲೀಸರಿಗೆ ತನಿಖೆ ನಡೆಸಲು ಅನುಕೂಲ. ಕರ್ನಾಟಕ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅನ್ವಯ ಎಲ್ಲೆಡೆ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿಯ ಸಹಾಯದಿಂದ ನಡೆದ ಘಟನೆಗಳ ಬಗ್ಗೆ ಸಂರ್ಪೂಣವಾದ ಮಾಹಿತಿ ಹಾಗೂ ತನಿಖೆಗೆ ಬೇಕಾದ ಮೂಲಗಳನ್ನು ಪಡೆಯಬಹುದು. ಕೇವಲ ಕ್ವಾರಿಯಲ್ಲಿ ಮಾತ್ರವಲ್ಲದೇ, ಆಫೀಸ್, ಮನೆ, ದೇವಸ್ಥಾನಗಳಲ್ಲಿಯೂ ಕೂಡ ಸಿಸಿಟಿವಿಯನ್ನು ಅಳವಡಿಸಿಕೊಳ್ಳಬೇಕು.”

| ಹನುಮಂತರಾಯ, ಎಸ್‍ಪಿ


ಜಿಲ್ಲೆಯಲ್ಲಿ ಬ್ಲಾಸ್ಟಿಂಗ್ ಲೈಸೆನ್ಸ್ ಪಡೆದ 10 ಕ್ವಾರಿಗಳಿಗೆ ಇದುವರೆಗೆ ಕ್ವಾರಿಗಳಲ್ಲಿ ಸ್ಪೋಟಕ್ಕೆ ಮುನ್ನ ಪೊಲೀಸ್ ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆಯೇ ಎಂದು ಎಸ್‍ಪಿಯವರು ಪ್ರಶ್ನಿಸಿ, ಅಧಿಕಾರಿಗಳನ್ನೂ ವಿಚಾರಿಸಿದರು. ಮಾಲೀಕರು ಈ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಉತ್ತರಿಸಿದಾಗ, ನಿಮಗೆ ಎಲ್ಲ ತಿಳಿದಿದೆ. ಆದರೂ ಮನಸ್ಸಿಗೆ ಬಂದ ಹಾಗೆ ಮಾಡ್ತಿದ್ದೀರಿ. ಆದ ಕಾರಣ ನಿಮ್ಮ ಲೈಸೆನ್ಸ್‍ನ್ನು ಏಕೆ ರದ್ದುಪಡಿಸಬಾರದೆಂದು ನೋಟಿಸ್ ನೀಡಲಾಗುವುದು ಎಂದರು.

ಸದ್ಯಕ್ಕೆ ಲೈಸೆನ್ಸ್ ಇಲ್ಲದವರ ಚಟುವಟಿಕೆಯನ್ನು ಗಣಿ ಇಲಾಖೆಯಿಂದ ನಿಲ್ಲಿಸಲಾಗಿದ್ದು, ಲೈಸೆನ್ಸ್ ಪಡೆದ ನಂತರವೇ ತಮ್ಮ ಚಟುವಟಿಕೆ ಆರಂಭಿಸಬೇಕು. ಲೈಸೆನ್ಸ್ ಪಡೆಯಲು ಅಗತ್ಯವಾದ ಎನ್‍ಓಸಿ ಯನ್ನು ಎಸ್‍ಪಿ ಮತ್ತು ಡಿಸಿ ಕಚೇರಿಯಿಂದ ವಿಳಂಬವಿಲ್ಲದೇ ತಕ್ಷಣ ನೀಡಲಾಗುವುದು.

ಹಾಗೂ ಗಣಿ ಇಲಾಖೆ ಲೈಸೆನ್ಸ್ ಪಡೆಯುವ ಕುರಿತು ಮಾರ್ಗದರ್ಶನ ಮಾಡುವುದು. ಮಾಲೀಕರೆಲ್ಲ ಸೇರಿ ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಮಾಹಿತಿ ಹಂಚಿಕೆ ಮತ್ತು ಇತರೆ ಸಹಕಾರ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ಸಂಪರ್ಕದಲ್ಲಿದ್ದು ನಿಯಮಗಳನ್ನು ಅನುಸರಿಸಬೇಕು ಎಂದರು.

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಅವಘಡ ಎಲ್ಲಿಯಾದರೂ ಸಂಭವಿಸಬಹುದು. ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಸ್ಫೋಟಕ ಅವಘಡದಲ್ಲಿ ಎಕ್ಸ್‍ಪ್ಲೋಸಿವ್ ರೂಲ್ಸ್ ಹಾಗೂ ಎಕ್ಸ್‍ಪ್ಲೋಸಿವ್ ಕಾಯ್ದೆಯ ನಿಯಮಾವಳಿಗಳನ್ನು ಎಲ್ಲೂ ಅನುಸರಿಸಿಲ್ಲ.

ಎಲ್ಲ ನಿಯಮಾವಳಿ ಗಾಳಿಗೆ ತೂರಿದ ಕಾರಣ ಆ ದುರಂತ ಸಂಭವಿಸಿದ್ದು, ಸ್ಪೋಟಕ ತುಂಬಿದ ವಾಹನಗಳು ಚಿತ್ರದುರ್ಗ-ದಾವಣಗೆರೆ ಮೂಲಕ ಹೆಬ್ಬಾಳು ಟೋಲ್‍ನಲ್ಲಿ ಹಾದು ಹೋಗಿವೆ. ಸ್ಪೋಟಕ ವಾಹನಗಳ ನಡುವಿನ ಅಂತರ ಕೂಡ ನಿರ್ವಹಿಸಲಾಗಿಲ್ಲ. ಜೊತೆ ಜೊತೆಗೇ ತೆರಳಿವೆ. ಅಕಸ್ಮಾತ್ ಇಲ್ಲಿ ಸ್ಪೋಟ ಆಗಿದ್ದರೂ ಯತೇಚ್ಚವಾಗಿ ಹಾನಿಯಾಗುತ್ತಿತ್ತು.

ಆದ ಕಾರಣ ಯಾವುದೇ ಕ್ವಾರಿ ಮಾಲೀಕರು ಅಧಿಕೃತವಾಗಿ ಲೈಸೆನ್ಸ್ ಪಡೆದು, ಕಾಯ್ದೆಯಲ್ಲಿನ ಎಲ್ಲ ನಿಯಮಾವಳಿಗಳನ್ನು ಅನುಸರಿಸಿ ತಮ್ಮ ಚಟುವಟಿಕೆ ನಡೆಸಬೇಕು. ಲೈಸೆನ್ಸ್ ಪಡೆದ ಮಾಲೀಕರು ಸ್ಫೋಟಕ್ಕೂ ಮುನ್ನ ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಗಮನಕ್ಕೆ ತರಬೇಕು. ಪೊಲೀಸರ ಸಮ್ಮುಖದಲ್ಲಿ ಸ್ಪೋಟ ನಡೆಯಬೇಕು ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ ಮಾತನಾಡಿ, ಈಗಾಗಲೇ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಎರಡು ಬಾರಿ ಕ್ವಾರಿ ಮತ್ತು ಕ್ರಷರ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ತಯಾರಿಸಲಾಗಿದೆ. ಕೆಲಸ ಮಾಡದೇ ಇರುವ ಐಡಲ್ ಕ್ವಾರಿಗಳಿಗೆ 30 ದಿನಗಳ ನೋಟಿಸ್ ನೋಡಿ ಅವಕಾಶ ನೀಡಲಾಗುವುದು.

ಆದಾಗ್ಯೂ ಅವರು ಕ್ವಾರಿ ಕಾರ್ಯಾರಂಭಿಸದಿದ್ದರೆ ಕಲ್ಲುಗಣಿ ಗುತ್ತಿಗೆಯನ್ನು ರದ್ದುಪಡಿಸಲಾಗುವುದು. ಕಲ್ಲುಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹದ ಅಂಗವಾಗಿ ನಮ್ಮ ಭೂವಿಜ್ಞಾನಿಗಳು ಮತ್ತು ಸಿಬ್ಬಂದಿ ಪ್ರತಿದಿನ ಕ್ವಾರಿಗಳಿಗೆ ತೆರಳಿ ಕಲ್ಲುಗಣಿ ಸುರಕ್ಷತೆ, ಗಡಿ ಪ್ರಾಂತ್ಯ, ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರೆ ನಿಯಮಾವಳಿಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ದಾವಣಗೆರೆ ಉಪವಿಭಾಗಾರಿ ಮಮತಾ ಹೊಸಗೌಡರ್, ತಾಲ್ಲೂಕುಗಳ ತಹಶೀಲ್ದಾರರು, ಡಿವೈಎಸ್‍ಪಿಗಳು, ಸಿಪಿಐ ಮತ್ತು ಇತರೆ ಸಿಬ್ಬಂದಿ ಹಾಗೂ ಕ್ರಷರ್ ಮತ್ತು ಕ್ವಾರಿಗಳ ಮಾಲೀಕರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಧ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್: ರಾಜ್ಯದಲ್ಲಿ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತೆರಿಗೆ ಹೆಚ್ಚಳದ ಅನಿವಾರ್ಯತೆಯನ್ನು ಹಾಗೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣವನ್ನು ಕೊಡದೇ ಇರುವುದರಿಂದ ಸೃಷ್ಟಿ ಆಗಿರುವ ಪರಿಸ್ಥಿತಿಯನ್ನು ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ ಎಂದು ಹೇಳಿದರು.

GST ಯಲ್ಲಿ ಕೇಂದ್ರ ಸರ್ಕಾರ ಏಕಸ್ವಾಮ್ಯ ಮಾಡಿಕೊಂಡಿರುವುದರಿಂದ ರಾಜ್ಯಗಳ ಪರಮಾಧಿಕಾರವಾಗಿದ್ದ ತೆರಿಗೆ ಸಂಗ್ರಹದ ಅವಕಾಶಗಳು ಇಲ್ಲವಾಗಿದೆ ಎಂದು ದೂರಿದರು. ರಾಜ್ಯದ ಜನರ ಪಾಲಿನ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದ್ದರೆ ನಮಗೆ ತೆರಿಗೆ ಹೆಚ್ವಿಸುವ ಅಗತ್ಯವೇ ಬೀಳುತ್ತಿರಲಿಲ್ಲ ಎಂದು ಸಮರ್ಥಿಸಿಕೊಂಡರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ

Published

on

  • ಸಂಜಯ್ ಹೊಯ್ಸಳ

ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ ಮೊಸಳೆ ಸಂತತಿಗಳಿವೆ. ಅವುಗಳೆಂದರೆ..

ಉಪ್ಪು ನೀರಿನ ಮೊಸಳೆ (Saltwater crocodile) 
ಮಗ್ಗರ್/ಮಾರ್ಷ್ (Mugger)
ಘಾರಿಯಲ್ (Gharial)

ಇವುಗಳಲ್ಲಿ ಕರ್ನಾಟಕದಲ್ಲಿನ ನದಿಗಳಲ್ಲಿ, ಕೆಲವು ದೊಡ್ಡ ಕೆರೆಗಳಲ್ಲಿ ಕಂಡುಬರುವ ಮೊಸಳೆಗಳು ಮಗ್ಗರ್/ಮಾರ್ಷ್ ಮೊಸಳೆಗಳಾಗಿವೆ. ಕರ್ನಾಟಕದಲ್ಲಿ ಮೊಸಳೆಗಳು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಪಾತ್ರದಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಮೊಸಳೆಯ ದವಣೆಗೆ ಸಿಲುಕಿ‌ ಕೆಲವು ಸಾವು ನೋವಿನ ಪ್ರಕರಣಗಳು ಆ ಭಾಗದಲ್ಲಿ ವರದಿಯಾಗಿವೆ‌.

ಇನ್ನು ಉತ್ತರ ಕರ್ನಾಟಕದ ಭಾಗದ ಕೆಲವು ಪ್ರಮುಖ ನದಿಗಳ ಪಾತ್ರದಲ್ಲೂ ಮೊಸಳೆಗಳು ಆಗಾಗ್ಗೆ ಕಂಡುಬರುತ್ತವೆ. ನಾನು ನೋಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಮೊಸಳೆಗಳ ದಾಳಿ ಪ್ರಕರಣಗಳು ತುಂಬಾ ಕಡಿಮೆ ಎನ್ನಬಹುದು. ಈ‌ ಭಾಗದ ನದಿಗಳಲ್ಲಿ ಮೊಸಳೆಗಳ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರ ಇರಬಹುದು.

ಕಾವೇರಿ ನದಿಯಲ್ಲಿ ಅತಿಹೆಚ್ಚು ಮೊಸಳೆಗಳು‌ ಕಂಡು ಬರುವುದು ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಪಕ್ಷಿ ಧಾಮವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹಿಂದೆ ಪಂಚತಂತ್ರದಲ್ಲಿ ಮೊಸಳೆ ಮತ್ತು ಕೋತಿ‌ಕತೆಯಲ್ಲಿ ಮೊಸಳೆಯ ಹೆಂಡತಿಗೆ ಕೋತಿ‌ ನೇರಳೆ ಹಣ್ಣುಗಳನ್ನು ಹೊತ್ತೊಯ್ಯುವ ಕತೆಯಲ್ಲಿ ಗಂಡ ಮತ್ತು‌ ಹೆಂಡತಿ‌ ಮೊಸಳೆಯನ್ನು ಕಲ್ಪಿಸಿಕೊಂಡು ಮಾತ್ರ ನಾನು ಮೊದಲು ಅವುಗಳ ಸಹಜ ಆವಾಸಸ್ಥಾನದಲ್ಲಿ ಮೊಸಳೆಯನ್ನು ನೋಡಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ. ನಂತರ ಬಂಡೀಪುರ ದಟ್ಟಡವಿಯಲ್ಲಿ ಹರಿಯುವ ಮೂಲೆಹೊಳೆ/ ನುಗು ನದಿಯಲ್ಲಿ…‌ ನಂತರದ ದಿನಗಳಲ್ಲಿ ಕಬಿನಿ, ಪಾಲರ್ ಸೇರಿ ಬಹಳಷ್ಟು ಕಡೆ ಬಹಳಷ್ಟು ಮೊಸಳೆಗಳನ್ನು ನೋಡುವ ಅವಕಾಶ ಸಿಕ್ಕಿತು.

ಘಾರಿಯಲ್ ಗಳು ತುಂಬಾ ಅಪರೂಪದ ಮೊಸಳೆ ಸಂತತಿಗಳಾಗಿದ್ದು, ಸದ್ಯ ಉತ್ತರ ಭಾರತದ ಕೆಲವು ನದಿಗಳು ಹಾಗೂ ನೇಪಾಳದಲ್ಲಿ ಮಾತ್ರ ಇವು ಕಾಣಸಿಗುತ್ತಿವೆ. ಇವುಳನ್ನು IUCN red list ಗೆ ಸೇರಿಸಿದ್ದು, ಇವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಗಿದೆ.

ನಮಗೆಲ್ಲಾ ಗೊತ್ತಿರುವಂತೆ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಎಲ್ಲಾ ಜೀವಿಗಳ‌ ಇರುವಿಕೆ ಬಹಳ ಮುಖ್ಯ. ಜಲಚರಗಳಲ್ಲಿ ಅಗ್ರ ಪರಪಕ್ಷಕಗಳಲ್ಲಿ ಒಂದೆನಿಸಿದ ಮೊಸಳೆ ಜಲಚರ ಜೀವಿಗಳ ಸಮತೋಲನ ಸಾಧಿಸಿ ಅಲ್ಲಿನ ಜೀವವೈವಿಧ್ಯ ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ನಾವು ಮೊಸಳೆಗಳನ್ನು ಕೂಡ ಇತರ ಪ್ರಾಣಿಗಳಂತೆ ರಕ್ಷಿಸಬೇಕು.

ಮುಖ್ಯವಾಗಿ ಅವುಗಳ ಆವಾಸಸ್ಥಾನವಾದ ನದಿ, ಸರೋವರದಂತಹ ಜಲಮೂಲಗಳನ್ನು ಸಂರಕ್ಷಿಸಬೇಕು. ಅಲ್ಲಿ ಅಕ್ರಮ ಮರಳುಗಾರಿಗೆ ತಡೆದು, ಜಲಮಾಲಿನ್ಯ ನಿಯಂತ್ರಣ ಮಾಡಬೇಕು. ಹಾಗೆ ಪ್ಲಾಸ್ಟಿಕ್ ತ್ಯಾಜ್ಯಗಳು ನದಿ, ಸರೋವರಗಳನ್ನು ಸೇರದಂತೆ ಕ್ರಮವಹಿಸಬೇಕು. ಹಾಗೆಯೇ ಎಲ್ಲಾದರೂ ಮೊಸಳೆಗಳು ಕಂಡುಬಂದರೆ ಗಾಬರಿಯಾಗದೆ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. (ಬರಹ:ಸಂಜಯ್ ಹೊಯ್ಸಳ,ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending