ದಿನದ ಸುದ್ದಿ
ಕಾರ್ನಾಡ್ ನಡೆ ಒಪ್ಪುವಂತದ್ದಲ್ಲ: ಮಹೇಶ್ ಚಂದ್ರ ಗುರು ವಿರೋಧ
ನಾನು ನಗರದ ನಕ್ಸಲೀಯ ಎಂಬ ಬೋರ್ಡ್ ಹಾಕಿಕೊಂಡು ಗೌರಿದಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಈಗ ವಿವಾದದಲ್ಲಿ ಸಿಕ್ಕಿದ್ದಾರೆ.
ಕಾರ್ನಾಡರ ನಡೆ ಕುರಿತು ಪ್ರಗತಿಪರ ಚಳವಳಿಗಳು, ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಪ್ರೊ. ಮಹೇಶ್ ಚಂದ್ರ ಗುರು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಿಂಸೆಯನ್ನು ಪ್ರತಿಪಾದಿಸುವವರ ಜೊತೆ ವಿಚಾರವಾದಿಗಳು ಗುರುತಿಸಿಕೊಳ್ಳಬಾರದು
ಇತ್ತೀಚೆಗೆ ಕಲಬುರ್ಗಿಯಲ್ಲಿ ಜರುಗಿದ ಗೌರಿ ಲಂಕೇಶರ ಮೊದಲ ವರ್ಷದ ಸ್ಮರಣೆ ಸಂದರ್ಭದಲ್ಲಿ ನಾಡಿನ ಹಿರಿಯ ಕಲಾವಿದ ಹಾಗೂ ಜನಪರ ಚಿಂತಕ ಶ್ರೀ ಗಿರೀಶ್ ಕಾರ್ನಾಡ್ ’ನಾನು ನಗರದ ನಕ್ಸಲೀಯ’ ಎಂಬ ಫಲಕವನ್ನು ಹಾಕಿಕೊಂಡಿರುವುದನ್ನು ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಇವರಿಗೆ ಮತ್ತೊಬ್ಬ ಪ್ರತಿಭಾವಂತ ಚಿಂತಕ ಹಾಗೂ ಕಲಾವಿದ ಈ ಫಲಕವನ್ನು ತೊರಿಸುತ್ತಿರುವ ಚಿತ್ರ ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದು ನಿಜಕ್ಕೂ ಭಾರತೀಯ ಬಹು ಸಂಸ್ಕೃತಿ ಮತ್ತು ಸಂವಿಧಾನಾತ್ಮಕ ಆಶಯಗಳಿಗೆ ವಿರುದ್ಧವಾಗಿದೆ. ಭಾರತದ ಬಹುಜನರು ಬುದ್ಧನ ಮಾರ್ಗದರ್ಶನದಲ್ಲಿ ಪ್ರಜಾಸತ್ತಾತ್ಮಕ ಹಾಗೂ ಅಹಿಂಸಾತ್ಮಕ ಮಾರ್ಗಗಳ ಮೂಲಕ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ.
ಸ್ವಾತಂತ್ರ ಚಳುವಳಿ ಕೂಡ ಅಹಿಂಸಾ ಮಾರ್ಗದಲ್ಲಿ ಅತ್ಯಂತ ಯಶಸ್ವಿಯಾಗಿ ಗಾಂಧಿ ನೇತೃತ್ವದಲ್ಲಿ ಜರುಗಿತು. ’ಬ್ರಿಟೀಷರ ಬಂದೂಕು ಶಕ್ತಿಯನ್ನು ಗಾಂಧಿಯವರ ಅಹಿಂಸಾತ್ಮಕ ಲೇಖನ ಶಕ್ತಿ ಮಣಿಸಿತು’ ಎಂಬ ಅಭಿಮಾನದ ಮಾತುಗಳನ್ನು ಹಿಂದಿನ ಪ್ರಧಾನಿ ಚರ್ಚಿಲ್ ಹೇಳಿದ್ದಾರೆ. ಅಂಬೇಡ್ಕರ್ ತಮ್ಮ ’ಬುದ್ಧ ಮತ್ತು ಮಾರ್ಕ್ಸ್’ ಎಂಬ ಕೃತಿಯಲ್ಲಿ ’ಮಾರ್ಕ್ಸ್ವಾದಿಗಳು ಹಿಂಸಾಮಾರ್ಗದಲ್ಲಿ ಮುನ್ನಡೆದು ಸಮಾನತೆ ಗಳಿಸಬಹುದು, ಆದರೆ ಭ್ರಾತೃತ್ವವನ್ನು ಕೊಂದು ಗಳಿಸುವ ಸಮಾನತೆ ಮೌಲ್ಯರಹಿತವಾಗಿದೆ ಮತ್ತು ಅಸಮರ್ಥನೀಯವಾಗಿದೆ’ ಎಂಬ ಮಾತುಗಳನ್ನು ಹೇಳಿರುವುದು ಸಾರ್ವಕಾಲಿಕ ಪ್ರಸ್ತುತತೆ ಹೊಂದಿದೆ.
ಯುದ್ಧದಿಂದ ಜಗತ್ತನ್ನು ಉಳಿಸಲು ಬುದ್ಧಮಾರ್ಗ ಮತ್ತು ಅನಭಿವೃದ್ಧಿಯಿಂದ ಅಭಿವೃದ್ಧಿಯೆಡೆಗೆ ಜಗತ್ತನ್ನು ಮುನ್ನಡೆಸಲು ಅಂಬೇಡ್ಕರ್ರವರ ಅಂತ್ಯೋದಯ ಮಾದರಿ ಇಂದು ಅನಿವಾರ್ಯವಾಗಿದೆ ಎಂಬ ಸತ್ಯವನ್ನು ವಿಶ್ವಸಂಸ್ಥೆ ಮನಗಂಡಿದೆ. ಮಾನವ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸರ್ವಜನರ ಅಭ್ಯುದಯಗಳಿಗೆ ಪೂರಕವಾದ ವಿಶ್ವಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ನೂತನ ಸಹಸ್ರಮಾನದಲ್ಲಿ ಜಾಗತೀಕರಣವೆಂದರೆ ಮಾನವೀಕರಣವೆಂದೇ ಅರ್ಥೈಸಬೇಕು.
ಸರ್ವಧರ್ಮಗಳು ಮತ್ತು ಜನಾಂಗಗಳು ಶಾಂತಿಯಿಂದ ಸಹಬಾಳ್ವೆ ನಡೆಸಲು ಪ್ರಜಾಪ್ರಭುತ್ವ, ಬಹುತ್ವ, ಬಂಧುತ್ವ, ಧರ್ಮ ನಿರಪೇಕ್ಷತೆ, ರಕ್ತಪಾತ ರಹಿತವಾದ ಪರಿವರ್ತನೆ ಇಂದು ಅತ್ಯವಶ್ಯಕ. ಗೌರಿ ಲಂಕೇಶ್ ಪ್ರಜಾಸತ್ತಾತ್ಮಕ ಹಾಗೂ ಅಹಿಂಸಾತ್ಮಕ ಹೋರಾಟಗಳನ್ನು ಪ್ರಜ್ಞಾಪೂರ್ವಕವಾಗಿ ಬೆಂಬಲಿಸಿ ದೇಶದ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನವನ್ನು ಗಳಿಸಿದ್ದಾರೆ. ಅವರು ನಕ್ಸಲೀಯರನ್ನು ರಕ್ತಪಾತ ಕೇಂದ್ರಿತ ಹೋರಾಟವನ್ನು ಬಿಟ್ಟು ಮುಖ್ಯವಾಹಿನಿಗೆ ಬಂದು ಶಾಂತಿ ಮಾರ್ಗದಲ್ಲಿ ಉದ್ಧಾರವಾಗಿ ಎಂದು ಕರೆ ನೀಡಿದರು.
ಗೌರಿ ಲಂಕೇಶರ ಬಗ್ಗೆ ಅತೀವ ಪ್ರೀತಿ ಮತ್ತು ಅಭಿಮಾನ ಹೊಂದಿರುವ ಗಿರೀಶ್ ಕಾರ್ನಾಡ್ ’ನಾನೂ ನಗರದ ನಕ್ಸಲೀಯ’ ಎಂಬ ಫಲಕವನ್ನು ಇತ್ತೀಚಿನ ಸಭೆಯಲ್ಲಿ ಪ್ರದರ್ಶಿಸಿರುವುದು ಭಾರತದ ಸಂವಿಧಾನ ಮತ್ತು ಬಹುತ್ವಗಳಿಗೆ ನಿಜವಾಗಿಯೂ ಅಪಚಾರವುಂಟಾಗಿದೆ. ಪ್ರಕಾಶ್ರಾಜ್ರವರು ಕೂಡ ನಕ್ಸಲೀಯ ಸಿದ್ಧಾಂತವನ್ನು ಹೀಗೆ ಬಹಿರಂಗವಾಗಿ ಸಮರ್ಥಿಸುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ನಗರದಲ್ಲಿರಲಿ ಅಥವಾ ಹಳ್ಳಿಯಲ್ಲಿರಲಿ ’ನಾವೆಲ್ಲರೂ ಮನುಷ್ಯರು – ಮಾನವತಾವಾದವೇ ಜಗತ್ತನ್ನು ಉಳಿಸುವ ಮಹಾ ಶಕ್ತಿ’ ಎಂಬ ಸಂದೇಶವನ್ನು ವಿಚಾರವಾದಿಗಳು ಮತ್ತು ಜನಪರ ಹೋರಾಟಗಾರರು ಎಲ್ಲೆಡೆ ಎಲ್ಲರಿಗೂ ನೀಡುವುದು ಅತ್ಯವಶ್ಯಕ.
ಬಲಪಂಥೀಯ ರಾಜಕಾರಣ ಮತ್ತು ನಕ್ಸಲೀಯ ಹೋರಾಟಗಳು ದೇಶದ ಶಾಂತಿ, ಸುವ್ಯವಸ್ಥೆ, ಸಾಮರಸ್ಯ ಮತ್ತು ಪ್ರಗತಿಗಳಿಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿವೆ. ಇಂದು ಜಗತ್ತನ್ನು ಉಳಿಸುವ ಮತ್ತು ಉದ್ಧರಿಸುವ ಸಲುವಾಗಿ ನಾವೆಲ್ಲರೂ ಬುದ್ಧನ ಮಧ್ಯಮಾರ್ಗವನ್ನು ಅನುಸರಿಸುವುದು ಅನಿವಾರ್ಯ. ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ನಾರಾಯಣ ಗುರು ಮೊದಲಾದ ದಾರ್ಶನಿಕರು ನಮಗೆ ಇಂದು ಅನುಕರಣೀಯ ವ್ಯಕ್ತಿಗಳು ಮತ್ತು ಶಕ್ತಿಗಳಾಗಬೇಕು.
(ಲೇಖಕರು-
ಡಾ.ಬಿ.ಪಿ.ಮಹೇಶ ಚಂದ್ರ ಗುರು
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಶೈಕ್ಷಣಿಕ ಮಂಡಳಿ ಸದಸ್ಯರು)
ದಿನದ ಸುದ್ದಿ
ನೂತನ ಸಂಸದರನ್ನು ಸ್ವಾಗತಿಸಲು ಲೋಕಸಭಾ ಕಾರ್ಯಾಲಯ ಸಜ್ಜು ; ಸಂಸದರಿಗೆ ಇಷ್ಟೆಲ್ಲಾ ಸವಲತ್ತುಗಳು..!
ಸುದ್ದಿದಿನ ಡೆಸ್ಕ್ : ಲೋಕಸಭೆಯ ಅಂತಿಮ ಚರಣದ ಮತದಾನ ದಿನ ಹಾಗೂ ನಂತರ ಚುನಾವಣಾ ಫಲಿತಾಂಶವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸಂಸದರನ್ನು ಬರ ಮಾಡಿಕೊಳ್ಳಲು ಲೋಕಸಭಾ ಕಾರ್ಯಾಲಯ ವ್ಯಾಪಕ ವ್ಯವಸ್ಥೆಯಿಂದ ಸಜ್ಜುಗೊಳ್ಳುತ್ತಿದೆ. ಇದಕ್ಕಾಗಿ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಚುನಾಯಿತ ಅಭ್ಯರ್ಥಿಗಳ ಬಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ನೂತನ ಅಭ್ಯರ್ಥಿಗಳ ಆಗಮನ ಪ್ರಕ್ರಿಯೆ ಆರಂಭವಾಗುತ್ತದೆ. ಅವರ ಪ್ರಯಾಣಕ್ಕೆ ಮುನ್ನವೇ ಲೋಕಸಭೆ ಕಾರ್ಯಾಲಯದ ನೋಡಲ್ ಅಧಿಕಾರಿಗಳು ಅವರನ್ನು ಸಂಪರ್ಕಿಸುತ್ತಾರೆ. ಐಜಿಐ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ವಿವಿಧ ಟರ್ಮಿನಲ್ಗಳಲ್ಲಿ ವಿಶೇಷ ಸ್ವಾಗತ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸಂಸದರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಿಗದಿತ ಕೇಂದ್ರಗಳಲ್ಲಿ ಬರ ಮಾಡಿಕೊಳ್ಳಲಾಗುತ್ತದೆ.
ಸಂಸತ್ತಿನ ಅನೆಕ್ಸೆ ವಿಸ್ತೃತ ಕಟ್ಟಡದ ಸ್ವಾಗತ ಕೇಂದ್ರಕ್ಕೆ ಆಗಮಿಸಿದ ನಂತರ ಅವರಿಗೆ ದೂರವಾಣಿ ಸಂಪರ್ಕ, ಹೊಸಬ್ಯಾಂಕ್ ಖಾತೆ, ಸಂಸತ್ ಕಟ್ಟಡಕ್ಕೆ ಪ್ರವೇಶ ಪಡೆಯಲು ಸ್ಮಾರ್ಟ್ ಆಕ್ಸೆಸ್ ಕಾರ್ಡ್, ಅವರ ವಾಹನಗಳಿಗಾಗಿ ಫಾಸ್ಟ್ ಟ್ಯಾಗ್ ಸ್ಟಿಕರ್ ಮತ್ತು ರಾಜತಾಂತ್ರಿಕ ಪಾಸ್ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಿ ಅತಿಥಿ ಭವನ ಹಾಗೂ ಪಶ್ಚಿಮ ನ್ಯಾಯಾಲಯ ಹಾಸ್ಟೇಲ್ ಸಂಕೀರ್ಣದಲ್ಲಿ ಅವರಿಗೆ ತಂಗಲು ಅವಕಾಶ ಕಲ್ಪಿಸಲಾಗುತ್ತದೆ. ಹೊಸ ಸದಸ್ಯರಿಗೆ ಸಂವಿಧಾನದ ಪ್ರತಿ ನೀತಿ ಮತ್ತು ಕಲಾಪ, ಪ್ರಕ್ರಿಯೆ, ನಿಯಮಾವಳಿ ಕೈಪಿಡಿಗಳನ್ನು ಅನುಸರಿಸಲು ನೀಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕ್ಯಾನ್ಸ್ ಚಲನಚಿತ್ರೋತ್ಸವ | ಭಾರತದ ನಿರ್ಮಾಪಕಿ ಪಾಯಾಲ್ ಕಪಾಡಿಯಾಗೆ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ
ಸುದ್ದಿದಿನ ಡೆಸ್ಕ್ : ಫ್ರಾನ್ಸ್ನಲ್ಲಿ ನಡೆದಿರುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಗ್ರಾಂಡ್ ಪ್ರಿಕ್ಸ್, ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಬ್ಬರು ನರ್ಸ್ಗಳ ಜೀವನ ಸುತ್ತಲಿನ ಕಥಾವಸ್ತು ಹೊಂದಿರುವ ’ಆಲ್ ವಿ ಇಮ್ಯಾಜಿನ್ ಆಜ್ ಲೈಟ್’ ಚಿತ್ರ ಪಾಮೆ ಡೋರ್ ವರ್ಗದಲ್ಲಿ ನಾಮನಿರ್ದೇಶಿತಗೊಂಡಿದ್ದು, ಈ ವರ್ಗದ 2ನೇ ಸ್ಥಾನವಾದ ಗ್ರಾಂಡ್ ಪ್ರಿಕ್ಸ್ಗೆ ಪಾತ್ರವಾಯಿತು.
ಇದರೊಂದಿಗೆ ಭಾರತ ಈ ಉತ್ಸವದಲ್ಲಿ ಚಿತ್ರ ನಿರ್ಮಾಣಕ್ಕಾಗಿ 2, ನಟನೆಗಾಗಿ 1, ಹಾಗೂ ಛಾಯಾಗ್ರಹಣಕ್ಕಾಗಿ 1ಹೀಗೆ ಒಟ್ಟು 4 ಗೌರವಗಳನ್ನು ಪಡೆದಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಾಧನೆಗಾಗಿ ಪಾಯಲ್ ಕಪಾಡಿಯಾ ಅವರನ್ನು ಅಭಿನಂದಿಸಿದ್ದಾರೆ.
ಎಫ್ಟಿಐಐನ ಹಳೆಯ ವಿದ್ಯಾರ್ಥಿ ಪಾಯಲ್ ಕಪಾಡಿಯಾ ಅವರ ವಿಶೇಷವಾದ ಕೌಶಲ್ಯ ಭಾರತೀಯ ಹೊಸ ತಲೆಮಾರಿನ ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಒಂದು ಕಪ್ ಕಾಫಿ
- ಲಕ್ಕೂರು ಆನಂದ್
ಕೊನೆಯ ಸಾರಿ
ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ನಾನು ತಪ್ಪು ಮಾಡಿದೆನೊ,
ನೀನು ತಪ್ಪು ಮಾಡಿದೆಯೊ,
ಬಿಟ್ಟು ಬಿಡೋಣ:
ಕೊನೆಯ ಸಾರಿ
ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ
ಯಾರಿಗೆ ಗೊತ್ತು?
ಅದು ಇಲ್ಲೇ ತಿರುವು ಪಡೆಯಬಹುದು !
ಇಲ್ಲ ನಾವಿಬ್ಬರು ಬೇರೆಯಾಗಬಹುದು!
ಯಾರು ಊಹಿಸಿರುತ್ತಾರೆ?
ನಾನೊಂದು ಹೇಳುವುದು
ನೀನೊಂದು ಹೇಳುವುದು
ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
ಯಾರಿಗೆ ಗೊತ್ತು
ನಮ್ಮೆದುರಿಗೆ ವಿಶಾಲ ವನಗಳಿರಬಹುದು,
ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
ನೆಲಕ್ಕೆ ಬಾಗಿದ ಮೋಡಗಳಾಗಬಹುದು.
ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
ಆದರೆ ಏನು ಲಾಭ?
ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ…
ಇಬ್ಬರ ಗುಂಡಿಗೆಯ ಮೂಲೆಯಲ್ಲೂ
ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
ದ್ವೇಷವಿಲ್ಲ,
ಅಸೂಯೆಯಿಲ್ಲ, ಕೋಪವಿಲ್ಲ;
ಅಲ್ಲಿರುವುದು ಬರೀ ಪ್ರೀತಿಯೇ
ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
ಈಗಲೂ ಕೂಡಾ
ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
ನಾವಿಬ್ಬರೂ ಕಾಯಬೇಕಷ್ಟೆ!
ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.
ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
ಕರಗಿಹೋಗಿವೆ
ರೆಕ್ಕೆಮುರಿದ ಹಕ್ಕಿಗಳೆರೆಡು
ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.
ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
ಮೆತ್ತಗೆ ನನ್ನನ್ನು ತಾಕುತ್ತಿದೆ
ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?
ಶವಯಾತ್ರೆಯೂ ಕೂಡಾ
ಇಷ್ಟು ನಿಶಬ್ದವಾಗಿರುವುದಿಲ್ಲ!
ಇದು ನಮ್ಮಿಬ್ಬರ ಕೊನೆಯ ಭೇಟಿ
ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
ಈ ಹಿಂದೆ ಇವೇ ಒನ್ ಬೈ ಟೂಗಳು,
ಅವೇ ಈಗ ಎರಡು ಅನಾಮಿಕ ಕಾಫೀ ಕಪ್ಗಳು
ಈ ಕಾಫಿ ಕಪ್ನೊಳಗೆ ಇಣುಕಿ ನೋಡಿದರೆ
ನೆನ್ನೆಯೆಂಬ ಚೂರು,
ನಮ್ಮಿಬ್ಬರ ಪರಿಚಯಗಳು
ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಕವಿ ಆನಂದ ಲಕ್ಕೂರು ನಿಧನ ; ಉದಯ ಇಟಗಿ ನುಡಿನಮನ
-
ಕ್ರೀಡೆ7 days ago
ಬೆಳಗಿನ ಸುದ್ದಿ ಮುಖ್ಯಾಂಶಗಳು
-
ದಿನದ ಸುದ್ದಿ6 days ago
ಇರಾನ್ ಅಧ್ಯಕ್ಷ ಹೆಲಿಕಾಪ್ಟರ್ ದುರಂತದಲ್ಲಿ ಸಾವು | ಅಘಾತಕಾರಿ ಸುದ್ದಿ ಕೇಳಿ ದುಃಖವಾಗಿದೆ : ಪ್ರಧಾನಿ ಮೋದಿ
-
ದಿನದ ಸುದ್ದಿ6 days ago
ರಾಜ್ಯ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ | ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ಆರು ಮತ್ತು ಏಳನೇ ಹಂತದ ಲೋಕಸಭಾ ಚುನಾವಣೆಗೆ ರಾಜಕೀಯ ನಾಯಕರಿಂದ ಬಿರುಸಿನ ಪ್ರಚಾರ
-
ದಿನದ ಸುದ್ದಿ6 days ago
5ನೇ ಹಂತದ ಲೋಕಸಭೆ ಚುನಾವಣೆ; ಶೇಕಡ 60.09ರಷ್ಟು ಮತದಾನ
-
ದಿನದ ಸುದ್ದಿ3 days ago
ಪ್ರಜ್ವಲ್ ಪೋಲಿಸರಿಗೆ ಶರಣಾಗಿ ವಿಚಾರಣೆ ಎದುರಿಸಬೇಕು : ಮೊಮ್ಮಗನಿಗೆ ಮಾಜಿ ಪ್ರಧಾನಿ ದೇವೇಗೌಡ ಎಚ್ಚರಿಕೆ
-
ದಿನದ ಸುದ್ದಿ6 days ago
ದಾವಣಗೆರೆ | ಒಂದೇ ಕುಟುಂಬದ ಮೂವರು ನಾಪತ್ತೆ