ದಿನದ ಸುದ್ದಿ
ಕಾರ್ನಾಡ್ ನಡೆ ಒಪ್ಪುವಂತದ್ದಲ್ಲ: ಮಹೇಶ್ ಚಂದ್ರ ಗುರು ವಿರೋಧ

ನಾನು ನಗರದ ನಕ್ಸಲೀಯ ಎಂಬ ಬೋರ್ಡ್ ಹಾಕಿಕೊಂಡು ಗೌರಿದಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಈಗ ವಿವಾದದಲ್ಲಿ ಸಿಕ್ಕಿದ್ದಾರೆ.
ಕಾರ್ನಾಡರ ನಡೆ ಕುರಿತು ಪ್ರಗತಿಪರ ಚಳವಳಿಗಳು, ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಪ್ರೊ. ಮಹೇಶ್ ಚಂದ್ರ ಗುರು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಿಂಸೆಯನ್ನು ಪ್ರತಿಪಾದಿಸುವವರ ಜೊತೆ ವಿಚಾರವಾದಿಗಳು ಗುರುತಿಸಿಕೊಳ್ಳಬಾರದು
ಇತ್ತೀಚೆಗೆ ಕಲಬುರ್ಗಿಯಲ್ಲಿ ಜರುಗಿದ ಗೌರಿ ಲಂಕೇಶರ ಮೊದಲ ವರ್ಷದ ಸ್ಮರಣೆ ಸಂದರ್ಭದಲ್ಲಿ ನಾಡಿನ ಹಿರಿಯ ಕಲಾವಿದ ಹಾಗೂ ಜನಪರ ಚಿಂತಕ ಶ್ರೀ ಗಿರೀಶ್ ಕಾರ್ನಾಡ್ ’ನಾನು ನಗರದ ನಕ್ಸಲೀಯ’ ಎಂಬ ಫಲಕವನ್ನು ಹಾಕಿಕೊಂಡಿರುವುದನ್ನು ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಇವರಿಗೆ ಮತ್ತೊಬ್ಬ ಪ್ರತಿಭಾವಂತ ಚಿಂತಕ ಹಾಗೂ ಕಲಾವಿದ ಈ ಫಲಕವನ್ನು ತೊರಿಸುತ್ತಿರುವ ಚಿತ್ರ ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದು ನಿಜಕ್ಕೂ ಭಾರತೀಯ ಬಹು ಸಂಸ್ಕೃತಿ ಮತ್ತು ಸಂವಿಧಾನಾತ್ಮಕ ಆಶಯಗಳಿಗೆ ವಿರುದ್ಧವಾಗಿದೆ. ಭಾರತದ ಬಹುಜನರು ಬುದ್ಧನ ಮಾರ್ಗದರ್ಶನದಲ್ಲಿ ಪ್ರಜಾಸತ್ತಾತ್ಮಕ ಹಾಗೂ ಅಹಿಂಸಾತ್ಮಕ ಮಾರ್ಗಗಳ ಮೂಲಕ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ.
ಸ್ವಾತಂತ್ರ ಚಳುವಳಿ ಕೂಡ ಅಹಿಂಸಾ ಮಾರ್ಗದಲ್ಲಿ ಅತ್ಯಂತ ಯಶಸ್ವಿಯಾಗಿ ಗಾಂಧಿ ನೇತೃತ್ವದಲ್ಲಿ ಜರುಗಿತು. ’ಬ್ರಿಟೀಷರ ಬಂದೂಕು ಶಕ್ತಿಯನ್ನು ಗಾಂಧಿಯವರ ಅಹಿಂಸಾತ್ಮಕ ಲೇಖನ ಶಕ್ತಿ ಮಣಿಸಿತು’ ಎಂಬ ಅಭಿಮಾನದ ಮಾತುಗಳನ್ನು ಹಿಂದಿನ ಪ್ರಧಾನಿ ಚರ್ಚಿಲ್ ಹೇಳಿದ್ದಾರೆ. ಅಂಬೇಡ್ಕರ್ ತಮ್ಮ ’ಬುದ್ಧ ಮತ್ತು ಮಾರ್ಕ್ಸ್’ ಎಂಬ ಕೃತಿಯಲ್ಲಿ ’ಮಾರ್ಕ್ಸ್ವಾದಿಗಳು ಹಿಂಸಾಮಾರ್ಗದಲ್ಲಿ ಮುನ್ನಡೆದು ಸಮಾನತೆ ಗಳಿಸಬಹುದು, ಆದರೆ ಭ್ರಾತೃತ್ವವನ್ನು ಕೊಂದು ಗಳಿಸುವ ಸಮಾನತೆ ಮೌಲ್ಯರಹಿತವಾಗಿದೆ ಮತ್ತು ಅಸಮರ್ಥನೀಯವಾಗಿದೆ’ ಎಂಬ ಮಾತುಗಳನ್ನು ಹೇಳಿರುವುದು ಸಾರ್ವಕಾಲಿಕ ಪ್ರಸ್ತುತತೆ ಹೊಂದಿದೆ.
ಯುದ್ಧದಿಂದ ಜಗತ್ತನ್ನು ಉಳಿಸಲು ಬುದ್ಧಮಾರ್ಗ ಮತ್ತು ಅನಭಿವೃದ್ಧಿಯಿಂದ ಅಭಿವೃದ್ಧಿಯೆಡೆಗೆ ಜಗತ್ತನ್ನು ಮುನ್ನಡೆಸಲು ಅಂಬೇಡ್ಕರ್ರವರ ಅಂತ್ಯೋದಯ ಮಾದರಿ ಇಂದು ಅನಿವಾರ್ಯವಾಗಿದೆ ಎಂಬ ಸತ್ಯವನ್ನು ವಿಶ್ವಸಂಸ್ಥೆ ಮನಗಂಡಿದೆ. ಮಾನವ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸರ್ವಜನರ ಅಭ್ಯುದಯಗಳಿಗೆ ಪೂರಕವಾದ ವಿಶ್ವಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ನೂತನ ಸಹಸ್ರಮಾನದಲ್ಲಿ ಜಾಗತೀಕರಣವೆಂದರೆ ಮಾನವೀಕರಣವೆಂದೇ ಅರ್ಥೈಸಬೇಕು.
ಸರ್ವಧರ್ಮಗಳು ಮತ್ತು ಜನಾಂಗಗಳು ಶಾಂತಿಯಿಂದ ಸಹಬಾಳ್ವೆ ನಡೆಸಲು ಪ್ರಜಾಪ್ರಭುತ್ವ, ಬಹುತ್ವ, ಬಂಧುತ್ವ, ಧರ್ಮ ನಿರಪೇಕ್ಷತೆ, ರಕ್ತಪಾತ ರಹಿತವಾದ ಪರಿವರ್ತನೆ ಇಂದು ಅತ್ಯವಶ್ಯಕ. ಗೌರಿ ಲಂಕೇಶ್ ಪ್ರಜಾಸತ್ತಾತ್ಮಕ ಹಾಗೂ ಅಹಿಂಸಾತ್ಮಕ ಹೋರಾಟಗಳನ್ನು ಪ್ರಜ್ಞಾಪೂರ್ವಕವಾಗಿ ಬೆಂಬಲಿಸಿ ದೇಶದ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನವನ್ನು ಗಳಿಸಿದ್ದಾರೆ. ಅವರು ನಕ್ಸಲೀಯರನ್ನು ರಕ್ತಪಾತ ಕೇಂದ್ರಿತ ಹೋರಾಟವನ್ನು ಬಿಟ್ಟು ಮುಖ್ಯವಾಹಿನಿಗೆ ಬಂದು ಶಾಂತಿ ಮಾರ್ಗದಲ್ಲಿ ಉದ್ಧಾರವಾಗಿ ಎಂದು ಕರೆ ನೀಡಿದರು.
ಗೌರಿ ಲಂಕೇಶರ ಬಗ್ಗೆ ಅತೀವ ಪ್ರೀತಿ ಮತ್ತು ಅಭಿಮಾನ ಹೊಂದಿರುವ ಗಿರೀಶ್ ಕಾರ್ನಾಡ್ ’ನಾನೂ ನಗರದ ನಕ್ಸಲೀಯ’ ಎಂಬ ಫಲಕವನ್ನು ಇತ್ತೀಚಿನ ಸಭೆಯಲ್ಲಿ ಪ್ರದರ್ಶಿಸಿರುವುದು ಭಾರತದ ಸಂವಿಧಾನ ಮತ್ತು ಬಹುತ್ವಗಳಿಗೆ ನಿಜವಾಗಿಯೂ ಅಪಚಾರವುಂಟಾಗಿದೆ. ಪ್ರಕಾಶ್ರಾಜ್ರವರು ಕೂಡ ನಕ್ಸಲೀಯ ಸಿದ್ಧಾಂತವನ್ನು ಹೀಗೆ ಬಹಿರಂಗವಾಗಿ ಸಮರ್ಥಿಸುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ನಗರದಲ್ಲಿರಲಿ ಅಥವಾ ಹಳ್ಳಿಯಲ್ಲಿರಲಿ ’ನಾವೆಲ್ಲರೂ ಮನುಷ್ಯರು – ಮಾನವತಾವಾದವೇ ಜಗತ್ತನ್ನು ಉಳಿಸುವ ಮಹಾ ಶಕ್ತಿ’ ಎಂಬ ಸಂದೇಶವನ್ನು ವಿಚಾರವಾದಿಗಳು ಮತ್ತು ಜನಪರ ಹೋರಾಟಗಾರರು ಎಲ್ಲೆಡೆ ಎಲ್ಲರಿಗೂ ನೀಡುವುದು ಅತ್ಯವಶ್ಯಕ.
ಬಲಪಂಥೀಯ ರಾಜಕಾರಣ ಮತ್ತು ನಕ್ಸಲೀಯ ಹೋರಾಟಗಳು ದೇಶದ ಶಾಂತಿ, ಸುವ್ಯವಸ್ಥೆ, ಸಾಮರಸ್ಯ ಮತ್ತು ಪ್ರಗತಿಗಳಿಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿವೆ. ಇಂದು ಜಗತ್ತನ್ನು ಉಳಿಸುವ ಮತ್ತು ಉದ್ಧರಿಸುವ ಸಲುವಾಗಿ ನಾವೆಲ್ಲರೂ ಬುದ್ಧನ ಮಧ್ಯಮಾರ್ಗವನ್ನು ಅನುಸರಿಸುವುದು ಅನಿವಾರ್ಯ. ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ನಾರಾಯಣ ಗುರು ಮೊದಲಾದ ದಾರ್ಶನಿಕರು ನಮಗೆ ಇಂದು ಅನುಕರಣೀಯ ವ್ಯಕ್ತಿಗಳು ಮತ್ತು ಶಕ್ತಿಗಳಾಗಬೇಕು.
(ಲೇಖಕರು-
ಡಾ.ಬಿ.ಪಿ.ಮಹೇಶ ಚಂದ್ರ ಗುರು
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಶೈಕ್ಷಣಿಕ ಮಂಡಳಿ ಸದಸ್ಯರು)

ದಿನದ ಸುದ್ದಿ
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ಹಾಗೂ ನಗರ ಪ್ರದೇಶಗಳಲ್ಲಿ 800 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮುಂದಿನ ಮೂರು ತಿಂಗಳಲ್ಲಿ 10 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 2 ಸಾವಿರದ 500 ಮನೆಗಳು ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕೂಡ ಅರ್ಹ ಫಲಾನುಭವಿಗಳಿಗೆ ಹಂಚಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ಸರಿಪಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಗಿತ್ತೆ ಮಾಧವ್ ವಿಠ್ಠಲ್ ರಾವ್ ರವರಿಗೆ ಕರವೇ(ಪ್ರವೀಣ ಶಟ್ಟಿ ಬಣ) ಮನವಿ ಸಲ್ಲಿಸಿತು.
ಜಲ್ಲಾಧ್ಯಕ್ಷ ಜಮ್ನಳ್ಳಿ ನಾಗರಾಜ್ ಮಾತನಾಡಿ, ದಾವಣಗೆರೆ ಜಿಲ್ಲೆಯ ಮೊರಾರ್ಜಿ ವಸತಿ ಶಾಲೆಗಳಲ್ಲಿ ಬಡ ಕುಟುಂಬಗಳ ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸದರಿ ಮಕ್ಕಳಿಗೆ ವಸತಿ ಶಾಲೆಯಲ್ಲಿ ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸದೇ ಇರುವುದರಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ಇರುವುದಿಲ್ಲ. ಅಲ್ಲದೇ ಮಕ್ಕಳಿಗೆ ಸರಿಯಾಗಿ ಊಟದ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ, ಶೌಚಾಲಯ ಸೌಕರ್ಯಗಳಿರುವುದಿಲ್ಲ, ಮಕ್ಕಳ ಮೇಲ್ವಿಚಾರಣೆಗೆ ವಾರ್ಡನ್ಗಳು ರಾತ್ರಿ ಸಮಯದಲ್ಲಿ ಸ್ಥಳದಲ್ಲಿರುವುದಿಲ್ಲ, ಅಲ್ಲದೇ ವಿದ್ಯುತ್ ತೊಂದರೆಯಾದರೆ ಮಕ್ಕಳಿಗೆ ಯು.ಪಿ.ಎಸ್. ಸೌಲಭ್ಯವಿಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಸಿ.ಇ.ಒ ಮಾತನಾಡಿ, ಸಧ್ಯದಲ್ಲೇ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಈ ವಿಷಯದ ಬಗ್ಗೆ ಚರ್ಚೆ ನಡಿಸಿ ಸೂಕ್ತ ತೀರ್ಮಾನ ಕೈಗೂಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಜಮ್ನಳ್ಳಿ ನಾಗರಾಜ್, ಜಿಲ್ಲಾ ಕಾರ್ಯಧ್ಯಕ್ಷ ಸೈಯದ್ ನಜೀರ್, ನಾಗರಾಜ್ ಆದಾಪುರ್, ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಎಂ, ನಗರ ಘಟಕ ಅಧ್ಯಕ್ಷ ಅನೂಪ್ ಇಜಾರಿ, ಮಹಿಳಾ ಗೌರವಾಧ್ಯಕ್ಷೆ ವನಜ ಕರಿಯಪ್ಪ, ಉತ್ತರ ವಲಯದ ಯುವ ಘಟಕದ ಅಧ್ಯಕ್ಷ ಶಿವಕುಮಾರ ಬಿ ಬಿ, ನಾಗರಾಜ ಆಥಪುರ್, ಶಬ್ರಿನ್ ತಾಜ್, ಬಸವರಾಜ ಎಸ್, ಬಸವರಾಜ್ ಪಿ, ಮಂಜುಳಾ ಆರ್, ನಾಗರಾಜ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ದತ್ತಾಂಶ ನಿರ್ವಾಹಕ ಗ್ರೇಡ್ ‘ಎ’ ಪರೀಕ್ಷೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವೆಬೆಸೈಟ್ https://ssc.nic.in ಅಥವಾ https://ssckkr.kar.nic.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 080-2527342, 25502520 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ2 days ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ15 hours ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ2 days ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್
-
ದಿನದ ಸುದ್ದಿ16 hours ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ23 hours ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ23 hours ago
ಉದ್ಯೋಗ | ಜುಲೈ 15 ರಂದದು ನೇರ ಸಂದರ್ಶನ