Connect with us

ಲೈಫ್ ಸ್ಟೈಲ್

ನಮ್ಮನೆಗೂ ಕರೆಂಟ್ ಬಂತು..!

Published

on

  • ಡಾ.ಎನ್.ಬಿ.ಶ್ರೀಧರ

ಭಾಗ -01

“ಅಯ್ಯಯ್ಯೋ.ಕರೆಂಟಾ…ನಮ್ ಮನೇಗಂತೂ ಬ್ಯಾಡವೇ ಬ್ಯಾಡ… ಸ್ವಿಚ್ ಆಫ಼್ ಮಾಡದೇ ಮುಟ್ಟಿದ್ದ್ರೆ …ಸರ್ …ಅಂತ ಮೈಯಲ್ಲಿನ ರಕ್ತ ಎಲ್ಲಾ ಎಳ್ಕಳತ್ತೆ..ಮೈಯಲ್ಲಿನ ನರಗಳಲ್ಲಿ ಹರಿದು ಶಕ್ತಿಯನ್ನೆಲ್ಲಾ ಹಿಂಡಿ ಹಿಪ್ಪೆ ಮಾಡುತ್ತೆ.. ಪಂಪಿನಿಂದ ಎತ್ತಿದ ನೀರಲ್ಲಿ ಸತ್ವಾನೇ ಇರಲ್ಲ.. ಬರಿ ಸಪ್ಪೆ…. ಅದರ ಸಹವಾಸ ಸಾಕು”… ಇದು ವಿದ್ಯುಚ್ಚಕ್ತಿ (ಇನ್ಮುಂದೆ ಕರೆಂಟು) ಬಗ್ಗೆ 1985 ರ ಕಾಲದಲ್ಲಿನ ಹಿರಿಯರೊಬ್ಬರ ಅಂಬೋಣ.

ಉತ್ತರ ಕನ್ನಡದ ಅನೇಕ ಹಳ್ಳಿಗಳಂತೇ ನಮ್ಮೂರಿಗೂ ಸಹ 1985 ರವರೆಗೂ ಸಹ ಕರೆಂಟೇ ಇರಲಿಲ್ಲ. ನಾವೆಲ್ಲಾ ಗದ್ದೆಗಳಲ್ಲಿ ಕಾಡು ಹಂದಿಗಳು ಬಂದು ಬೆಳೆ ಹಾಳು ಮಾಡದಂತೆ ಕಾಯಲು ಗದ್ದೆ ತೋಟಗಳ ಮಧ್ಯೆ ಮಾಳಗಳಲ್ಲಿ ಲಾಟೀನು ದೀಪದಲ್ಲಿ ಓದಿದ್ದೇ ಜಾಸ್ತಿ. ಈ ಮಾಳ ಎಂದರೇನು ಎಂಬುದು ಮಲೆನಾಡಿಗರನ್ನು ಬಿಟ್ಟು ಬೇರೆ ಕೆಲವರಿಗೆ ಅರ್ಥವಾಗಲಿಕ್ಕಿಲ್ಲ.

ಗದ್ದೆಯನ್ನು ಕಾಡು ಹಂದಿಗಳಿಂದ ಕಾಯಲು ಅವುಗಳಿಗೆ ಮನುಷ್ಯರ ಭಯ ಇರಲಿ ಎಂದು ರಚಿಸಿದ ಸುಮಾರು 10 ಅಡಿ ಎತ್ತರದಲ್ಲಿ, ಹಾವು, ಕಪ್ಪೆ, ಇಲಿಗಳ ಕಾಟದಿಂದ ರಕ್ಷಣೆ ಪಡೆಯಲು ಮರದ ಕಂಬಗಳನ್ನು ಉಪಯೋಗಿಸಿ, ಅಡಿಕೆ ಸೋಗೆಗಳನ್ನು ಹಾಕಿ ಮಳೆಗೆ ಸೋರದಂತೆ ಕಟ್ಟಿದ ಆಕಾಶ ಚಪ್ಪರ ಎನ್ನಬಹುದೇನೋ.

ರಾತ್ರಿ ಊಟವಾದ ಮೇಲೆ ಸುರಿಯುತ್ತಿರುವ ಮಳೆಯಲ್ಲಿ ಗದ್ದೆ ಬದುಗಳಲ್ಲಿ ನಡೆದು ಹೋಗಿ ಲಾಟೀನುಗಳ ಸಹಾಯದಿಂದ ತಡರಾತ್ರಿಯವರೆಗೆ ಓದುವುದು ನನಗೆ ರೂಢಿಯಾಗಿತ್ತು. ಕೆಲವೊಮ್ಮೆ ಈ ಮಾಳದ ಮಾಡಿನಲ್ಲಿ ನಮ್ಮ ಹಾಗೇ ಬೆಚ್ಚನೆ ವಾಸಸ್ಥಳಕ್ಕಾಗಿ ಅಥವಾ ಅವುಗಳ ಅಹಾರವಾದ ಇಲಿ ಬೇಟೆಗಾಗಿ ಬಂದು ಕೆಲವು ನಾಗಸ್ನೇಹಿತರು ತಲೆ ಹೊರಹಾಕಿ, ಸೀಳಿದ ನಾಲಿಗೆಯನ್ನು ಲೊಚ ಲೊಚನೇ ಚಮಕಿಸಿ ನಮ್ಮ ಜೀವ ಬಾಯಿಗೆ ಬರುವ ಹಾಗೇ ಮಾಡಿದ್ದಿದೆ.

ಲಾಟೀನಿನ ಬೆಳಕಿಗೆ ಆಕರ್ಷಿತವಾದ ವಿವಿಧ ಬಣ್ಣದ ಮಿಡತೆಗಳನ್ನೋ ಅಥವಾ ಕಾಡು ಹುಳಗಳನ್ನೋ ತಿನ್ನಲೆಂದೋ ಬಂದ ಅಸಹ್ಯ ರೂಪದ ಹಲ್ಲಿಗಳು ಪಿಷ್ಟಿ ಹಾಕಿ ಹಾಸಿಕೆಯನ್ನೆಲ್ಲಾ ಅಸಹ್ಯ ಮಾಡುತ್ತಿದ್ದವು. ಒಮ್ಮೊಮ್ಮೆ ತಲೆಯ ಮೇಲೆಯೇ ಬಿದ್ದು ಬಗ್ಗೋಣ ಪಂಚಾಂಗದ ಹಲ್ಲಿ ಶಕುನದ “ತಲೆಯ ಮೇಲೆ ಬಿದ್ದರೆ ಮರಣ” ಬೆನ್ನಿನ ಮೇಲೆ ಬಿದ್ದರೆ ಅಪಘಾತ” ಎಂಬಿತ್ಯಾದಿಗಳನ್ನು ಅಪರಾತ್ರಿಯಲ್ಲಿ ನೆನಪಿಸಿದ್ದಿದೆ.

ಹಾಳಾಗಿ ಹೋಗಲಿ.. ಅವುಗಳು ಪುತ ಪುತನೇ ಉದುರಿಸುವ ಬುಳಿ ಕಂದು ಮಿಶ್ರಿತ ಇಕ್ಕೆಗಳು ಪುಸ್ತಕದ ಮೇಲೆ ಬಿದ್ದು ಪುಸ್ತಕದ ಅಂದ ಕೆಡಿಸುವುದಲ್ಲದೇ, ಅವುಗಳ ಗಬ್ಬು ಅಸಹ್ಯ ವಾಸನೆಯಿಂದ ವ್ಯಾಕ್.. ಎನಿಸುತ್ತಿದ್ದವು.

ಕುಂಬ್ಳಜ್ಜಿ ಎಂದು ಹಳ್ಳಿ ಭಾಷೆಯಲ್ಲಿ ಕರೆಯುವ ವಾಸನಾಯುಕ್ತ ಜೀರುಂಡೆ ಲಾಟಿನಿನ್ ಬೆಳಕಿಗೆ ಆಕರ್ಷಿತವಾಗಿ ಮೈತಾಕಿದಾಗ ದಿನವಾದರೂ ಉಳಿಯುವ ಅದರ ಅಸಹ್ಯ ಗಬ್ಬು ವಾಸನೆ, ಸಂಜೆಯಾದೊಣೆ ರೆಂವ್, ರೆಂವ್ ಅಂತ ಶಬ್ಧ ಮಾಡಿ ತಲೆ ಚಿಟ್ಟು ಹಿಡಿಸುವ ಹುಳ ಹುಪ್ಪಟೆಗಳು, ಇವುಗಳನ್ನು ತಿಂದು ಹೊಟ್ಟೆ ಡುಮ್ಮಣ್ಣನಾಗಲು ಬರುವ ಕಪ್ಪೆಗಳು, ಈ ಕಪ್ಪೆಗಳನ್ನು ಬೆನ್ನಟ್ಟಿ ಬರುವ ನಾನಾ ತರದ ಹಾವುಗಳು, ಈ ಹಾವುಗಳನ್ನು ಹೇಗಾದರೂ ಹೊಂಚುಹಾಕಿ ಹಿಡಿದು ಮುಕ್ಕಲು ಕಾದು ಕುಳಿತ ಗಿಡುಗಗಳು ಪರಿಸರದ ಆಹಾರ ಸರಪಳಿಗೆ ಅತ್ಯುತ್ತಮ ಜೀವಂತ ನೈಜ ಉದಾಹರಣೆಗಳಾಗಿದ್ದವು.

ಈ ಮಾಳವಿದ್ದ ಮೇಲೆ ಅದಕ್ಕೊಂದು ಜೋಡಿ ಜೀವವಾಗಿ ಒಂದು ಹೊಡಸಲು ಇರಲೇ ಬೇಕು. ಹೊಡಸಲು ಅಂದರೆ ಮಳೆಗಾಲದಲ್ಲಿ ಕಂಬಳಿಗಳನ್ನು ಒಣಹಾಕಲು ಬಳಸುವ ನೇತಾಡುವ ಮಂಚದಂತಿರುವ ಆಕೃತಿ. ಮಳೆಯ ರಭಸಕ್ಕೆ ಎಲ್ಲರೂ ಈ ಹೊಡಸಲಿನ ಸುತ್ತಮುತ್ತ ಗಟ್ಟಿಯಾಗಿ ತಳವೂರಿ ಹಲಸಿನ ಬೀಜ, ಗೇರು ಬೀಜಗಳನ್ನು ಅಡಿಯ ಬೆಂಕಿಯ ಕೆಂಡದಲ್ಲಿ ಬೇಯಿಸಿ ತಿನ್ನುತ್ತಾ ಡರ್ರ್ ಎಂದು ತೇಗಿ ಹಳೆಯ ರೈಲು ಇಂಜಿನ್ನಿನಂತೆ “ಟುಸ್.. ಟುಸ್ ಡ್ರುಸ್.. ಎಂದು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಯಥಾನುಶಕ್ತಿ ವಾಯುಪ್ರಕೋಪಗಳನ್ನು ನೀಗಿಸಿಕೊಳ್ಳುವುದು ಮಲೆನಾಡಿಗರಿಗೆ ಸಾಮಾನ್ಯ.

ಹಲಸಿನ ಬೀಜಗಳು ಒಮ್ಮೊಮ್ಮೆ ಸ್ವಲ್ಪ ಹಸಿಯಾಗಿದ್ದರೆ “ಡಂ” ಎಂದು ಸಶಬ್ಧವಾಗಿ ಸಿಡಿದು ಕೆಂಡದುಂಡೆಗಳನ್ನು ಬೂಧಿಯ ಸಮೇತ ಅಕ್ಕ ಪಕ್ಕಕ್ಕೆ ಚಲ್ಲುತ್ತಿದ್ದವು. ಅದಕ್ಕೆ ಹಲಸಿನ ಬೀಜಗಳಿಗೆ ಕಬ್ಬಿಣದ ತಂತಿಯಿಂದ ತೂತು ಮಾಡಿ ಒಳಗೆ ಗ್ಯಾಸು ಸೇರದಂತೆ ಮಾಡಿ ನಿಗಿ ನಿಗಿ ಕೆಂಡದಲ್ಲಿ ಬೇಯಿಸುತ್ತಿದ್ದರು.

ಹಲಸಿನ ಕಾಯಿಯ ಹಪ್ಪಳವನ್ನು ಈ ಕೆಂಡದ ಮೇಲೆ ಇಟ್ಟು ಅದು ಹಿತ ಮಿತವಾಗಿ ಅರಳಿದೊಡನೆ ಅದಕ್ಕೊಂದಿಷ್ಟು ಕೊಬ್ಬರಿ ಎಣ್ಣೆ ಸವರಿ ಕರಂ.. ಕುರುಂ ಎನ್ನುತ್ತಾ ತಿಂದು ಒಂದು ಕುಡತೆ ಸಕ್ಕರೆ ಹಾಕದ ಚಪ್ಪೆ ಚಾ ಕುಡಿದರೆ ಅದೆಂತದೋ ತೃಪ್ತಿ. ಇನ್ನು ಗೇರುಬೀಜಗಳನ್ನು ಈ ಹೊಡಸಲಿನ ಬೆಂಕಿಯಲ್ಲಿ ಹಾಕಿ ಅದು ಬಿಡುವ ಎಣ್ಣೆಯಿಂದ ಅಗ್ನಿಯ ಕೆನ್ನಾಲಿಗೆ ಆಕಡೆ ಈ ಕಡೆ ಟಾಸ್ ಪುಸ್ ಎನ್ನುತ್ತಾ ಚಾಚುತ್ತಿದ್ದರೆ ಅದನ್ನು ಜಡಿಮಳೆಯಲ್ಲಿ ನೋಡುವುದೇ ಚಂದ.

ಆ ಕಾಲಕ್ಕೆ ಆಗಷ್ಟೇ ಪ್ರಾರಂಭವಾಗಿದ್ದ ರಮಾನಂದ ಸಾಗರರ ರಾಮಾಯಣ ಧಾರಾವಾಹಿಯನ್ನು ವಿದ್ಯುತ್ ಇರುವ ನೆಂಟರ ಮನೆಗೆ ಹೋಗಿ ಅಲ್ಲಿರುವ ಟಿವಿಯಲ್ಲಿ ಮಸುಕು ಮಸುಕಾಗಿ ಬರುತ್ತಿರುವ ರಾಮಾಯಣದ ಪಾತ್ರಗಳನ್ನು ನೋಡುವುದಕ್ಕೆ ಏನೆಲ್ಲಾ ನೆಪಗಳು !!.ಕರೆಂಟನ್ನು ನಮ್ಮ ಮನೆಗೂ ಹಾಕಿಸಬೇಕೆಂಬ ಉತ್ಕಟ ಆಸೆಗೆ ಇದೂ ಒಂದು ಕಾರಣವಿರಬಹುದು.

ನಮ್ಮೂರಿಗಿಂತ ದೂರದ ಅನೇಕ ಹಳ್ಳಿಗೆಲ್ಲಾ ಕರೆಂಟು ಹರಿದಾಗ ನಮ್ಮೂರಿಗೂ ಯಾಕೆ ಕರೆಂಟು ಬರಬಾರದು ಅನಿಸಿತು. ಸಾತೊಡ್ಡಿ, ದೇಹಳ್ಳಿ, ಬಳಗಾರು, ಬೀರಗದ್ದೆಗಳೆಂಬ ಊರುಗಳಿಗೆ ದಿನಕ್ಕೆ ಒಮ್ಮೆ ಮಾತ್ರ ಒಂದು ಬಸ್ಸು ಇದ್ದು ಅಲ್ಲಿಯ ಜನರೆಲ್ಲಾ ಬೇಸಿಗೆಯಲ್ಲೇ ಮಳೆಗಾಲಕ್ಕೆ ಅವಶ್ಯವಿರುವ ಎಲ್ಲಾ ವಸ್ತುಗಳನ್ನು ತಲೆಹೊರೆಯ ಮೇಲೆಯೇ ಸಾಗಿಸಬೇಕಿತ್ತು.

ಈ ಎಲ್ಲಾ ಹಳ್ಳಿಗಳಿಗೆ ಯಾವುದೋ ಸ್ಕೀಮಿನಲ್ಲಿ ವಿದ್ಯುತ್ ನೀಡಿ ಬಿಟ್ಟಿದ್ದರು. ವಿದ್ಯುತ್ ವೈರುಗಳು ಕರೆಂಟು ಕಂಬಗಳ ತಲೆಯ ಮೇಲೆ ನೇತಾಡುತ್ತಾ ಆ ಹಳ್ಳಿಗಳನ್ನು ಸೇರಿ ಅಲ್ಲಿ ಸ್ವಿಚ್ಚು ಹಾಕಿದ ಕೂಡಲೇ ಟಕ್ಕನೇ ಹತ್ತಿಕೊಂಡು ಮಹದಾಶ್ಚರ್ಯ ಮೂಡುತ್ತಿತ್ತು.

ನೂರಾರು ಅಡಿ ಆಳದ ಬಾವಿಯಿಂದ ಗುರ್ರೆಂದು ಶಬ್ಧ ಮಾಡುತ್ತಾ ನೀರೆತ್ತುವ ಪಂಪುಸೆಟ್ಟುಗಳು, ಕೇಜಿಗಟ್ಟಲೆ ಅಕ್ಕಿಯನ್ನು ಅನಾಯಾಸವಾಗಿ ಗರ ಗರನೇ ರುಬ್ಬಿ ಬಿಸಾಕುವ ಗ್ರೈಂಡರುಗಳು, ಐದಾರು ಗೆರಟೆ ತುಂಬಾ ಇರುವ ತೆಂಗಿನ ಕಾಯಿಯ ತಿರುಳನ್ನು ಕ್ಷಣ ಮಾತ್ರದಲ್ಲಿ ರೊಂಯ್ ಎಂದು ಚಟ್ನಿ ಮಾಡಿ ಹಾಕುವ ಮಿಕ್ಸಿಗಳು, ಗುಡಾಣ ಹೊಟ್ಟೆಯ ಸದಾ “ಗುಂಯ್” ಎನ್ನುತ್ತಿರುವ ಟ್ರಾನ್ಸ್‍ಫಾರ್ಮರುಗಳು ಪ್ರಶ್ನಾರ್ಥಕವಾಗಿ ಸೋಜಿಗದ ವಸ್ತುಗಳಾಗಿ ಆಶ್ಚರ್ಯ ಹುಟ್ಟಿಸುತ್ತಿದ್ದವು.

ಆದರೆ ಈ ವಿದ್ಯುತ್ತಿನ ಆಯಸ್ಸು ಮಳೆಗಾಲ ಬರುವ ವರೆಗೆ ಮಾತ್ರ ಎನ್ನುವುದನ್ನು ಅಲ್ಲಿನ ಜನ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು ಬಿಟ್ಟಿದ್ದರು. ಧೋ.. ಧೋ.. ಎಂದು ಎಡೆಬಿಡದೇ ಸುರಿಯುವ ಮಳೆಗಾಲದಲ್ಲಿ ಮರಗಳೆಲ್ಲಾ ಕರೆಂಟು ಕಂಬಗಳ ತಂತಿಗಳ ಮೇಲಾ ಲಗಾಟಿ ಹೊಡೆದು ಒಮ್ಮೆಯೇ ಹತ್ತು ಹದಿನೈದು ಕಂಬಗಳು ಧರಾಶಾಯಿಯಾದವು ಎಂದರೆ ಆ ವರ್ಷ ಮಳೆಗಾಲದಲ್ಲಿ ಪುನ: ಚಿಮಣಿ ಬುರುಡೆ ಲಾಟೀನುಗಳೇ ಗತಿ.

ಪಿಯುಸಿ ಸಮಯದಲ್ಲಿ ಕೊಟ್ಟಿಗೆಯ ಕೆಲಸ ಮುಗಿಸಿಯೇ ಕಾಲೇಜಿಗೆ ಹೋಗುವ ವೇಳೆಗೆ ಕೆಲ ಸಮಯ ತಡವಾಗುತ್ತಿತ್ತು. ಈಗಿನಂತೆ ಕೊಟ್ಟಿಗೆಗೆ ಚಪ್ಪಡಿ ಏನೂ ಇರಲಿಲ್ಲ. ದೊಡ್ಡ ಹೊಂಡ ಗುಂಡಿಗಳ ಮೇಲೆ ಮರಗಿಡಗಳಿಂದ ಸೊಪ್ಪಿನ ಬೆಟ್ಟದಿಂದ ತಂದ ಸೊಪ್ಪುಗಳನ್ನು ಹಾಸಿ ಜಾನುವಾರು ಮಲಗಲು ಅನುವು ಮಾಡಲಾಗುತ್ತಿತ್ತು. ಅವುಗಳ ಸಗಣಿ, ಮೂತ್ರ ಈ ಹೊಂಡಗಳಲ್ಲಿ ಸಂಗ್ರಹವಾಗುತ್ತಿತ್ತು.

ಈ ಹೊಂಡಗಳಲ್ಲಿರುವ ಕೊಳೆದ ಸೊಪ್ಪು ಸದೆ ಸೇರಿ ವಿಚಿತ್ರ “ಪರಿಮಳ” ಹೊರಹೊಮ್ಮುತ್ತಿತ್ತು. ಇದನ್ನು ಸ್ವಚ್ಚ ಮಾಡಿ, ಸ್ನಾನ ಮುಗಿಸಿ, ಪಿಟಿ ಕ್ಲಾಸಿಗೆ ಹೋಗಬೇಕಾದರೆ ಏನಾದರೂ ತಡವಾದರೆ ಪಿಟಿ ಮಾಸ್ತರ್ ಶೀಟಿ ಬೆಲ್ಟ್ ಏಟು ಖಚಿತ. ಎಮ್ಮೆಗಳು ಅವುಗಳ ಮೂತ್ರದಲ್ಲಿ ಬಾಲ ಅದ್ದಿ ರಫ಼್ ಅಂತ ಬೀಸಿದರೆ ಮೈಯೆಲ್ಲಾ ಒಂದು ರೀತಿಯ ಗಮಲು ವಾಸನೆಯಿಂದ ಅಸಹ್ಯವಾಗುತ್ತಿತ್ತು. ಆಗ ಮೇಷ್ಟ್ರು “ಏ ದನಾ ಕಾಯವ್ನೇ.. ಈವತ್ತೂ ಲೇಟೇನೋ?!! ಅಂತ ತರಾಟೆಗೆ ತೆಗೆದು ಕೊಳ್ಳೋದು ಗ್ಯಾರಂಟಿ ಅಂತ ಭಯ. ಈ ಪಿಟಿ ಮೇಷ್ಟ ’ಹೊಡೆತ” ತಾಳಲಾರದೇ ಕೆಲವು ಹುಡುಗರು ಶಾಲೆಯನ್ನೇ ಬಿಟ್ಟಿದ್ದಾರೆ ಎನ್ನುವುದೂ ಒಂದು ಸುದ್ಧಿ.

ಎಲ್ಲರ ಮನೆಯಲ್ಲಿರುವ ಕರೆಂಟೆಂಬ ಮಾಯೆ ನಮ್ಮಲ್ಲಿರಬೇಕಾಗಿತ್ತು ಎಂಬ ಹಪ ಹಪಿ ಪ್ರಾರಂಭವಾದೊಡನೆ ಸಿಕ್ಕ ಸಿಕ್ಕ ಕರೆಂಟು ಕಂಬಗಳೆಲ್ಲಾ ರವಿವರ್ಮನ ಕುಂಚದ ಕಲೆಯ ಅದ್ಭುತ ಕಲಾಕೃತಿಗಳ ಗೋಚರಿಸತೊಡಗಿದವು. ಅದಕ್ಕೆ ನೇತಾಕಿದ ಆಗಾಗ ಅಕ್ಕ ಪಕ್ಕದ ಮರಗಳಿಗೆ ತಾಗಿ ಜೊರ್ ಎಂದು ಶಬ್ಧ ಮಾಡುವ ಅಲ್ಯುಮಿನಿಯಂ ವೈರುಗಳು ಹರಿಪ್ರಿಯಾಳ ಮುಂಗುರಳಂತೆ ಮೋಹಕವಾಗಿ ಮನಸೂರೆ ಮಾಡುತ್ತಿದ್ದವು.

ಬೇಕಾದೊಡನೆ ಬಂದು ಬಿಡಲು ಕರೆಂಟು ಅಷ್ಟು ಸುಲಭಕ್ಕೆ ಸಿಗುವ ವಸ್ತುವೇ? ಸೀದಾ ಕರೆಂಟಾಫೀಸಿಗೆ ನಡೆಯಿತು ನನ್ನ ಆಕೃತಿ. ಅಲ್ಲೊಬ್ಬ ದಢೂತಿ ಕೆಂಪನೇ ಮನುಷ್ಯ ಕೆಂಪು ಮಾನವರ ತರ ಆಗ ತಾನೆ ಸಮುದ್ರ ಸ್ನಾನ ಮಾಡಿ ಬಂದ ವ್ಯಕ್ತಿ ಕೂತಿದ್ದ. ನಮಗೂ ಕರೆಂಟು ಬೇಕೆಂಬ ನನ್ನ ಅದ್ಭುತ ಅಹವಾಲನ್ನು ಹೇಳಿಕೊಂಡೆ.

ಕಿವಿಯಲ್ಲಿ ಕಡ್ಡಿಯೊಂದಕ್ಕೆ ಸ್ವಲ್ಪ ಹತ್ತಿಯನ್ನು ಹಾಕಿ ಮೀಟಿ ಮೀಟಿ ಅದೇನೋ ವಸ್ತುವನ್ನು ತೆಗೆದು ಮೂಸಿ ಮೂಸಿ ಬಿಸಾಕುತ್ತಿದ್ದ ಆ ವ್ಯಕ್ತಿಯ ಮುಂದಿನ ಬೋರ್ಡು ನೋಡಿದೆ. ಅದರಲ್ಲಿ ಅದೆಂತದೋ ಹೆಸರು ಬರೆದು ಸೆಕ್ಷನ್ ಆಫೀಸರ್ ಎಂದು ಪೇಂಟಿನಲ್ಲಿ ಬರೆದಿತ್ತು. ಅತ್ಯಂತ ಅಸಡ್ಡೆಯಿಂದ ಆ ವ್ಯಕ್ತಿ “ನಿಮ್ಮೂರಿಗೆ ಕರೆಂಟಾ? ಇನ್ನೈದು ವರ್ಷ ಬಿಟ್ಕಂಡ್ ಬನ್ನಿ. ನಿಮ್ಮ ಕ್ಯೂ ಬರಕ್ಕೆ ಇನ್ನೂ ಅಷ್ಟು ವರ್ಷ ಆಗ್ತದೆ” ಎಂದು ಈಗೆಲ್ಲಾ ಆನ್ಲೈನ್ ಬಹಳ ಕಷ್ಟ ಎಂದೊರಲುವ ಕಛೇರಿ ಗುಮಾಸ್ತರ ತರ ಉಡಾಪೆಯಿಂದ ಉತ್ತರಿಸಿದ.

ಛಲಬಿಡದ ತ್ರಿವಿಕ್ರಮನಂತೆ ದಿನಾ ಕಾಲೇಜಿಗೆ ಹೋಗಿ ವಾಪಸ್ಸು ಬರುತ್ತಾ ಕರೆಂಟು ಕಛೇರಿಗೆ ಪೆನ್ಶನ್ನು ಬರದ ತಬರನಂತೆ ಎಡತಾಕತೊಡಗಿದೆ. ಕೊನೆಗೂ ನನ್ನ ಕಾಟ ತಡೆಯಲಾರದೇ ಆ ಸೆಕ್ಷನ್ನು ಆಫೀಸರ್ರು ಹತ್ತು ಹಲವು ಪುಟಗಳ ಒಂದು ಅರ್ಜಿ ಫಾರಮ್ಮನ್ನು ಹಲವು ಕಡೆ ಇಂಟು ಮಾರ್ಕು ಹಾಕಿ ನಮ್ಮಪ್ಪನ ಹತ್ತಿರ ಸಹಿ ಮಾಡುವಂತೆಯೂ ಹಾಗೂ ಒಂದಿಷ್ಟು ದುಡ್ಡನ್ನು ಕರೆಂಟು ಇಲಾಖೆಗೆ ಕಟ್ಟುವಂತೆ ಆಜ್ಞೆ ಹೊರಡಿಸಿದ.

ನಾನು ಅರ್ಜಿಯನ್ನು ಶಬರಿಯು ರಾಮನು ಕಚ್ಚಿ ಬಿಸಾಕಿದ ಹಣ್ಣನ್ನು ಜತನದಿಂದ ಎತ್ತಿಕೊಂಡಂತೆ ಎತ್ತಿಕೊಂಡು ಬಂದು ಮನೆಗೆ ತಂದೆ. ಘನಘೋರ ಚರ್ಚೆಯ ನಂತರ ಕರೆಂಟಿನ ಸಾಧಕ ಬಾಧಕಗಳನ್ನು ವಿಚಾರಿಸಿದ ನಂತರ ಕರೆಂಟೊಂದು ಅತ್ಯವಶ್ಯಕ ವಸ್ತುವೆಂದು ಅದು ಮನೆಯಲ್ಲಿದ್ದರೆ ಅನುಕೂಲವೆಂಬ ತೀರ್ಮಾನವಾಗಿ ಅಪ್ಪನ ಸಹಿ ಬಿದ್ದ ನಂತರ ಪುನ: ಅರ್ಜಿಯು ಕರೆಂಟಾಫಿಸಿಗೆ ಬಂದು ದುಡ್ಡು ತುಂಬಿಸಿಕೊಂಡು ಸೆಕ್ಷನ್ನಾಫಿಸರಿನ ಮುಂದೆ ಮಂಡಿಯೂರಿತು.

ಅದರ ತಲೆಯ ಮೇಲೆ ಗೆಜ಼ೆಟಡ್ ಅಧಿಕಾರಿಯಾದ ಆತ ಹಸಿರಿಂಕಿನಲ್ಲಿ ದಸ್ಕತ್ತು ಹಾಕಿ ಪಕ್ಕದ ಗುಮಾಸ್ಥನಿಗೆ ರವಾನಿಸಿದ. ನಾನು ಅಳುಕುತ್ತಲೇ ಮತ್ತೊಮ್ಮೆ ಹೋಗಿ ಕರೆಂಟು ಕೊಡಲು ಇನ್ನೆಷ್ಟು ದಿನಗಳಾಗಬಹುದೆಂದು ಕೇಳಿಕೊಂಡೆ. ಆತ ಸರ್ರನೇ ರೇಗಿ “ ಈಗಷ್ಟೇ ಅರ್ಜಿ ಕೊಟ್ಟಿದ್ದಿಯಾ.. ಆಗ್ಲೇ ಕರೆಂಟು ಬೇಕೋ ನಿಂಗೆ. ಪೇಟೆಂದ ಒಂದು ಹತ್ತು ಕೆಜಿ ತಗೊಂಡು ಹೋಗು. ಇನ್ನೈದು ವರ್ಷ ಬಿಟ್ಟು ಬಾ” ಎನ್ನುತ್ತಾ ನನ್ನ ಅರ್ಜಿಯ ಮೇಲೆ ನನ್ನ ವೇಟಿಂಗ್ ಸಂಖ್ಯೆ ಹಾಕಿ ಕೊಟ್ಟ.

ಈ ಕರೆಂಟು ಆಸೆ ಯಾಕೆ ಹುಟ್ಟಿಕೊಂಡ್ತೋ ಗೊತ್ತಿಲ್ಲ. ನಾನು ಸಂಪೂರ್ಣ ಪರಧ್ಯಾನಿಯಾದೆ. ಕಾಲೇಜಿಗೆ ಸೈಕಲ್ಲಿನಲ್ಲಿ ಹೋಗುವಾಗ ದೇಹಳ್ಳಿ ರಸ್ತೆಯ ಬದಿಯಲ್ಲೇ ಹಾದು ಹೋಗುವ ಹೊಸ ಕರೆಂಟು ಕಂಬಗಳು ಆಸೆ ಉಕ್ಕಿಸುತ್ತಿದ್ದವು. ರಾತ್ರಿ ಕನಸಿನಲ್ಲಿ ನಮ್ಮನೆಗೂ ಕರೆಂಟು ಬಂದಾಂಗೆ, ಸ್ವಿಚ್ಚು ಹಾಕಿದ ಕೂಡಲೇ ಟಕ್ಕನೆ ಹೊಸ ಟ್ಯೂಬು ಲೈಟು ಹತ್ತಿದ ಹಾಗೇ ತರಾವರಿ ಕನಸು ಬೀಳತೊಡಗಿದವು. ಸೆಕ್ಷನ್ನಾಫೀಸರು ಏನೇ ಬಯ್ದರೂ ಸಹ ಈ ಕರೆಂಟಿನಾಸೆ ನನ್ನನ್ನು ಕರೆಂಟಾಫೀಸಿನ ಕಡೆ ಪದೇಪದೇ ಕರೆದುಕೊಂಡು ಹೋಗುತ್ತಿತ್ತು. ಹೀಗೆಯೇ ಪಾದಯಾತ್ರೆ ನಡೆದಾಗ ನನ ಕಾಟ ತಡೆಯದೇ ಆತ ಒಂದು ಎಸ್ಟಿಮೇಟ್ ತಯಾರಿಸಿಯೇ ಬಿಟ್ಟ.

ಅದರಲ್ಲಿ ನಮ್ಮ ಮನೆಯಿಂದ ನಾಲ್ಕು ಕಿಲೋಮಿಟರ್ ದೂರದಿಂದ ಇರುವ ಟ್ರಾನ್ಸ್‍ಫಾರ್ಮರಿನಿಂದ ವೈರುಗಳನ್ನು ಎಳೆದು ತರಬೇಕೆಂದೂ ಕಂಬ, ವೈರು, ತಂತಿ ಕೂಲಿ ಸೇರಿ ಅನೇಕ ಲಕ್ಷಗಳಾಗುತ್ತವೆಯೆಂದೂ, ಅಲ್ಲಿ ವರೆಗೆ ಲೈನು ಬರುವುದರಿಂದ ವೋಲ್ಟೇಜು ಕಡಿಮೆಯಾಗಿ ದೀಪ ಕುರುಡು ಕೆರೋಸಿನ್ನು ದೀಪದಂತೆ ಉರಿಯುವುದೆಂದೂ, ಇದಕ್ಕೆಲ್ಲಾ ಸುಮಾರು ೫ ಲಕ್ಷಗಳ ಖರ್ಚು ಬರುವುದೆಂದೂ, ಒಂದೇ ಮನೆಯಿರುವುದರಿಂದ ಇಷ್ಟೆಲ್ಲಾ ಖರ್ಚು ಮಾಡುವುದು ವ್ಯರ್ಥವೆಂಬ ರೀತಿಯಲ್ಲಿ ಹಸಿರು ಇಂಕಿನ ಶರಾ ಬರೆದು ಇಟ್ಟಿದ್ದ.

ಅಯ್ಯೋ ದೇವ್ರೆ? ಇದೇನಿದು? ಕರೆಂಟನ್ನು ಅಷ್ಟು ದೂರದಿಂದ ತರಬೇಕೇ? ತಂದರೂ ಸಹ ನಮ್ಮನೆಲಿ ಬೆಳಕು ಡಿಮ್ಮೇ? ಪಂಪಿನ ಮೋಟರ್ರು ತಿರುಗಲ್ವೇ? ನಮ್ಮನೆಗೆ ಕರೆಂಟು ಬರಲು ಇಷ್ಟೆಲ್ಲಾ ಕಸರತ್ತು ಇದೆಯೇ? ಎಂಬೆಲ್ಲಾ ಯಕ್ಷಪ್ರಶ್ನೆಗಳು ಕಾಡತೊಡಗಿದವು. ನಮ್ಮನೆಯ ಹತ್ತಿರದಲ್ಲೇ ದೊಡ್ಡ ದೊಡ್ಡ ಕಂಬಗಳ ಮೇಲೆ ಹಾದು ಹೋದ ತಂತಿಯ ಮೂಲಕ ಹಾದುಹೋಗುವ ತಂತಿಗಳಿಂದ ನಮ್ಮನೆಗೆ ಕರೆಂಟು ಯಾಕೆ ಕೊಡಬಾರದು ಎಂಬುದು ನನಗೆ ಚಿದಂಬರ ರಹಸ್ಯವಾಗಿತ್ತು.
ಇದಕ್ಕೆ ಸೆಕ್ಷನ್ನಾಫೀಸರ್ರು ಚೆನ್ನಾಗಿ ಉತ್ತರ ನೀಡಿದ್ದ.

ನಮ್ಮನೆ ಪಕ್ಕದಲ್ಲಿ ಹಾದು ಹೋಗುವುದು 11 ಕೆವಿಯ ಭಯಂಕರ ವೋಲ್ಟೆಜು ಇರುವ ಲೈನಾಗಿದ್ದು ಅದರಿಂದೆಲ್ಲಾ ಕರೆಂಟು ತಗಳ್ಳಕ್ಕೆ ಆಗಲ್ವಂತೆ.ಅದು ಜೋಗದಿಂದ ಸೀದಾ ಬಂದ ಲೈನಾಗಿದ್ದರಿಂದ ಅದು ಬೆಂಗಳೂರಿಗೇ ಸೇರಿಯೇ ನಿಲ್ಲುವುದಂತೆ. ಅದಕ್ಕೆ ಅಲ್ಲಿ ದೊಡ್ಡ ದೊಡ್ಡ ಟ್ರಾನ್ಸ್‍ ಫಾರ್ರ್ಮರುಗಳನ್ನು ಹಾಕಿ ಕರೆಂಟನ್ನು ಕಡಿಮೆ ಗೊಳಿಸಿ ಹಂಚುತ್ತಾರಂತೆ ಎಂದೆಲ್ಲಾ ತಲೆ ಬುಡ ಗೊತ್ತಾಗದ ತಾಂತ್ರಿಕ ವಿಷಯದಿಂದ ಆ ಲೈನಿನಿಂದ ನಮಗೆ ಕರೆಂಟು ಬರಲ್ಲ. ಅದಕ್ಕೆ ಪ್ರತ್ಯೇಕ ಟ್ರಾನ್ಸಫಾರ್ಮರು ಹಾಕಿ ತರಬೇಕು ಎನ್ನುವ ಮಹತ್ವದ ವಿಷಯದ ಅರಿವಾಯ್ತು. ಇಲ್ಲಿಂದ ಶುರುವಾಗಿದ್ದು ಮಹಾ ಭಗೀರಥ ಪ್ರಯತ್ನ..

ಮುಂದುವರೆಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Published

on

  • ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ

90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು.

ಜನಸಾಮಾನ್ಯರ ಅರಿವಿನ-ಪರಿಧಿ ತಿಳಿಗೊಳ್ಳುವುದರ ಮೊದಲೇ ಊಹಿಸಲಾರದಷ್ಟು ಮಟ್ಟಿಗೆ ಇಂದು, ಸ್ವಚ್ಛಂದ ಹಳ್ಳಿ-ಸೊಬಗಿನ ಕೂಡು-ಕುಟುಂಬದ, ಮೈ-ಮನಸ್ಸು ತುಂಬಿದ, ಪರಿಶುದ್ಧ ಜೀವನ ಪ್ರೀತಿ, ಉತ್ಸಾಹ, ಮಮತೆಯನ್ನು ಇನ್ನಿಲ್ಲವಾಗಿಸಿದೆ ಎನಿಸುತ್ತದೆಯಲ್ಲವೆ?

ಹೇಗೆಂದರೆ, ಕಲ್ಪಿಸಿಕೊಂಡರೂ ಕಣ್ಣೆದುರಿಗೆ ತೆರೆದಿಡುವ ಅಮೂಲ್ಯ ಬದುಕು, ಅದೆಷ್ಟು ಬೇಗ ದಿಕ್ಕು-ದೆಸೆಯಿಲ್ಲದೆ ಕಣ್ಣು-ಕಟ್ಟಿದ ಸ್ಪರ್ಧೆಗಿಳಿದ ಕುದುರೆಯಂತೆ ಅಲೆಯುವಂತಾಗಿದೆ! ಅರೆಕ್ಷಣ, ಮೈಮನ ಕಸಿವಿಸಿಗೊಳ್ಳುತ್ತೆ! ಜೀವ ಮರುಗುತ್ತೆ. ಮತ್ತೆ ಮತ್ತೆ ಆ ಬಾಲ್ಯ, ಹಳ್ಳಿ ಬದುಕನ್ನ ಅರಸಿ ಬಯಸುತ್ತೆ! ಜನತೆ, ಹಳ್ಳಿಯಲ್ಲಿನ ಗಿಡ-ಮರ, ಪಶು-ಪಕ್ಷಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ ಮುಂತಾದ ಪರಿಸರದ ಸಕಲ ಜೀವಿಗಳೊಂದಿಗೆ ಒಂದಾಗಿ ನಲ್ಮೆಯಿಂದ ಪರಿಶುದ್ಧ ಮನದಿ, ಭೂ ತಾಯಿ, ತಿಳಿ-ನೀಲಿ ಆಗಸ, ಮಳೆ, ಗಾಳಿ, ಬೆಳಕನ್ನ ಇನ್ನಿಲ್ಲದೆ ಅಪ್ಪಿ, ಅತ್ಯಂತ ಸಂತಸ-ಖುಷಿಯಿಂದ, ಇರುವ ಪರಿಸ್ಥಿತಿಗೆ ಒಗ್ಗಿ , ಬದುಕು ರೂಪಿಸಿಕೊಂಡು ಜೀವನೋತ್ಸಾಹ ತಳೆಯುತ್ತಿದ್ದರು.

ನಿಜ ಹೇಳಬೇಕೆಂದರೆ, ಪರಿಸರವೇ ಪಾಠ; ಭೂ ತಾಯಿಯೇ ಹಾಸಿಗೆ; ಆಗಸವೇ ಹೊದಿಕೆಯಾಗಿ, ದುಡಿದ, ದಣಿವರಿದ ಮನದಿ, ಕಣ್ತುಂಬಿ ನೆಮ್ಮದಿಯ ನಿಟ್ಟುಸಿರುಗೈವ ಕ್ಷಣಗಳು ಅದಾಗಿತ್ತು!

ಹಳ್ಳಿಯಲ್ಲಿನ ಆಟೋಟಗಳು, ತಮಾಷೆಯ ಕ್ಷಣಗಳು, ಆಟಿಕೆಗಳು, ಸಾಮಾನುಗಳು, ಹಬ್ಬ-ಹರಿದಿನಗಳು, ಜಾತ್ರೆ-ಸಂತೆಗಳು, ಒಕ್ಕಲು ಸಮಯದ ಸುಗ್ಗಿಯ ಮಧುರ ಕ್ಷಣಗಳು ಇತ್ಯಾದಿ ಜನತೆಯ ಮುಗ್ಧ -ಮನಸ್ಸು ಮತ್ತು ಹೊಳೆವ ಮುಖದಲ್ಲಿ, ನಿಷ್ಕಲ್ಮಶ ಮಂದಹಾಸ ಮೂಡಿಸಿ, ಬೆಲೆ ಕಟ್ಟಲಾಗದ ಖುಷಿಯ ಕ್ಷಣಗಳನ್ನು ಸದಾ ಅವರಲ್ಲಿ ಕಂಗೊಳಿಸುತ್ತಿದ್ದವು.

ಎಲ್ಲರೂ ದುಡಿವವರು; ಎಲ್ಲರೂ ಭಾಗಿಯಾಗುವವರು; ಎಲ್ಲರೊಳಗೊಂದಾಗಿ ಬಾಳುವವರು; ಎಲ್ಲರಲ್ಲೂ ಧನ್ಯತಾ ಭಾವ; ಆದರಣೀಯತೆ, ಪೂಜ್ಯತಾ-ಭಾವ ತುಂಬಿತ್ತು! ಅಂತಃಕರಣೆ, ಕರುಣೆ, ಪ್ರೀತಿ-ವಿಶ್ವಾಸ, ತಕ್ಕಮಟ್ಟಿಗೆ ಮಾನವೀಯತೆ ಬದುಕ-ಪ್ರೀತಿ ಹೆಚ್ಚಿಸಿತ್ತು!

ಈಗಾಗಲೇ, ನಾವು ಯಾವ ಸ್ಥಿತಿ ತಲುಪಿದ್ದೇವೆಂದರೆ: ಶಾಲಾ ರಜೆಯ ದಿನಗಳಲ್ಲಿ, ಈಗಿನ ಮಕ್ಕಳಿಗೆ ಆ ಕಾಲದ ಹಳ್ಳಿಗಳ ಜೀವನ ಪರಿಚಯಿಸಲು ಗೊಟಗೋಡಿಯ ರಾಕ್ ಗಾರ್ಡನ್ – ಹಾವೇರಿ, ಹೆರಿಟೇಜ್ ವಿಲೇಜ್ – ಮಣಿಪಾಲ, ಅಲ್ಲಲ್ಲಿ ಸಾರ್ವಜನಿಕ ಉದ್ಯಾನವನ, ಹಾಗೂ ಇತರೆ ಕೆಲವು ಮ್ಯೂಸಿಯಮ್ ಗಳತ್ತ ಮುಖ ಮಾಡಿಬೇಕೆ ಹೊರತು ನೈಜ ಚಿತ್ರಣ ಪ್ರಸ್ತುತ ಹಳ್ಳಿಗಾಡಿನಲ್ಲೂ ಕಾಣಸಿಗದು! ಸ್ವತಃ ಹಳ್ಳಿಗರೇ ಪರಿತಪಿಸುವ ಸ್ಥಿತಿ.

ಕಾರಣ ಇಷ್ಟೆ: ತಂತ್ರಜ್ಞಾನದ ಆವಿಷ್ಕಾರ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಹೊಕ್ಕಿರುವ ಅದರ ಗಾಢವಾದ ಛಾಯೆ. ಇಡೀ ‘ಪ್ರಪಂಚವೇ ಒಂದು ಹಳ್ಳಿ’ (Global Village) ಯಾಗಿ ಮಾರ್ಪಟ್ಟಿರುವ ಭಾವನೆ. ವಿಶೇಷವಾಗಿ, ದೂರವಾಣಿ, ಇಂಟರ್ನೆಟ್, ಯುಟ್ಯೂಬ್, ನೇರ ಮೆದುಳಿಗೆ ಕೈ ಹಾಕಿರುವ ಸಾಮಾಜಿಕ ಜಾಲತಾಣಗಳ ಡ್ರಗ್ಸ್ ರೀತಿಯ ಮಾನಸಿಕ ಮೋಹ ಬೆಂಬಿಡದೆ ಇಂದಿನ ಆಧುನಿಕ ಜನತೆಯ ಚಿಂತನಾರ್ಹ ಯೋಚನಾ ಶಕ್ತಿ, ಆರೋಗ್ಯ , ಕೌಟುಂಬಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಒಟ್ಟಾರೆ ಜೀವನ ಶೈಲಿಯನ್ನೇ ಅಕ್ಷರಸಃ ನುಂಗಿಹಾಕಿವೆ! ಅಲ್ಲದೆ, ಇದು ಇಂದಿನ ಅನಿವಾರ್ಯವೆಂಬಂತೆ ಕಠೋರ ಸನ್ನಿವೇಶ ಹುಟ್ಟುಹಾಕಿವೆ.

ಒಂದೆಡೆ, ‘ಅತೀಯಾದ ಅಮೃತವೂ ವಿಷ’ವೆನ್ನುವಂತೆ, ಹಾಗೂ ಊಟದಲ್ಲಿ ‘ರುಚಿಗೆ ತಕ್ಕಷ್ಟು ಉಪ್ಪಿ’ರುವಂತೆ ಹಲವು ಒಳಿತು-ಕೆಡುಕಗಳ ನಡುವೆ ಎಲ್ಲವೂ ಹಿತಮಿತವಾಗಿ ಬಳಕೆಯಲ್ಲಿದ್ದರೆ ಚೆನ್ನ. ಅಲ್ವೇ? ಮೈ ಮನ ಆರೋಗ್ಯಕರವಾಗಿರುತ್ತೆ; ಜೀವನ ಉತ್ಸಾಹದಿಂದ ಕೂಡಿರುತ್ತೆ.
ಜೊತೆಗೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿರುವ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಹಾಗೂ ‘ಬಯೋಚಿಪ್’ ತಂತ್ರಜ್ಞಾನಗಳು. ಈ ಎರಡೂ ತಂತ್ರಜ್ಞಾನಗಳು ಬಹುತೇಕ ಮನುಷ್ಯನನ್ನ ಸಹ ಒಂದು ಸರಕಾಗಿ ನೋಡುವ ದೂರದೃಷ್ಟಿ ಹೊಂದಿವೆ ಎಂದರೆ ತಪ್ಪಾಗಲಿಕ್ಕಿಲ್ಲ! ತೀರ ಇತ್ತೀಚೆಗೆ, ತಂತ್ರಜ್ಞಾನ ಜಗತ್ತಿನ ಹೆಸರಾಂತ ಉದ್ಯಮಿ: ಎಲಾನ್ ಮಸ್ಕ್ ತಮ್ಮ ‘ನ್ಯೂರಾಲಿಂಕ್’ (Neuralink) ಸಂಸ್ಥೆಯ ಮೂಲಕ ಪ್ರಪಂಚದ ಮೊಟ್ಟ ಮೊದಲ ಪ್ರಯತ್ನವಾಗಿ ಆರೋಗ್ಯವಂತ ವ್ಯಕ್ತಿಯೊಬ್ಬರ ಮೆದುಳಿನಲ್ಲಿ ಪ್ರಾಯೋಗಿಕ – ‘ಮೊದಲ ಬಯೋಚಿಪ್’ ಅಳವಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ! ಇದುವರೆಗೂ, ಮೊಬೈಲ್ ನಲ್ಲಿ ಕೇವಲ ‘ಮೆಮೊರಿ ಕಾರ್ಡ್’ ಬಳಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಆಲಿಸುವ, ನೋಡುವ ಪರಿಪಾಠದ ಪರಿಚಯವಿದ್ದ ನಮಗೆ, AI ಹಾಗೂ Biochip ತಂತ್ರಜ್ಞಾನಗಳ ಅವತಾರಗಳು ಊಹೆಗೂ ಮೀರಿದ್ದು ಅನ್ಸುತ್ತೆ ಕೂಡ.

ಆಗ, ಜಗತ್ತು ಹೇಗಿರಬೇಡ? ತಂತ್ರಜ್ಞಾನ ತೊರೆದು ಮನುಷ್ಯ, ಜೀವನ ಕಲ್ಪಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೇವಲ ಮನುಷ್ಯನ ಅವಶ್ಯಕತೆಗಳಿಗೆ ಪೂರಕವಾಗಿರಬೇಕೆ ಹೊರತು; ಆತನನ್ನ ಆಳುವ ಸ್ಥಿತಿ ತಲುಪಬಾರದು! ಮುಂದಿನ ದಿನಗಳಲ್ಲಿ, ಮನುಷ್ಯ ಎದುರಿಸಬಹುದಾದ ಭಯಾನಕ ತಂತ್ರಜ್ಞಾನ ಸಂಕೋಲೆಗಳನ್ನು ಕುರಿತು ಚರ್ಚಿಸುವ ಅಗತ್ಯ ಇಂದಿನ ತುರ್ತು ಅನಿವಾರ್ಯ. ಆದರೆ, ಎಲ್ಲವೂ ಸಲೀಸಾಗಿ ಕೈಗೆಟುಕುವ ಇಂದಿನ ದಿನಗಳಲಿ, ಅತಿಯಾಗಿ ಮಿತಿಮೀರಿರುವ ಅನುಕೂಲಗಳು ಅಮೂಲ್ಯ ಖುಷಿಯ ಕ್ಷಣಗಳನ್ನು ಎಂದಿಗೂ ನೀಡಲಾರವು.

ಬದಲಿಗೆ, ಪ್ರತಿಷ್ಠೆಯ ಹೆಮ್ಮರಗಳಾಗಿ, ಜನತೆ ನಾಲ್ಕು ದಿನದ ಈ ಬಾಳಲಿ ಏನೋ ಬಹುದೊಡ್ಡ ಸಾಧನೆಗೈದವರಂತೆ, ಯಂತ್ರಮಾನವರಂತೆ ಬೀಗುವವರೆ!!? ಮೂಲಭೂತವಾಗಿ, ಮಾನವ ಸಹಿತ ಸಕಲ ಜೀವ-ಸಂಕುಲವೂ ವಾಸಯೋಗ್ಯ ಸ್ವಚ್ಛಂದ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿಯಲ್ಲಿ, ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಿಸದೆ; ಗಿಡ-ಮರ ಬೆಳೆಸದೆ; ಹಸಿರು ಹೆಚ್ಚಿಸದೆ, ಮತ್ತು ಪರಿಸರ ಸಮತೋಲನ ಕಾಪಾಡದೆ; ಕೇವಲ ತಂತ್ರಜ್ಞಾನ ತಲೆಯಲಿ ಹೊತ್ತು, ಮನುಷ್ಯ ಉತ್ತಮ ಆಹಾರ, ಆರೋಗ್ಯ ಮತ್ತು ಜೀವನ ಕಟ್ಟಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಸಮರೋಪಾದಿಯಲ್ಲಿ, ಜನತೆ ಸ್ವ ಇಚ್ಛೆಯಿಂದ ಹಳ್ಳಿ-ಹಳ್ಳಿಗಳಿಂದ, ನಗರಗಳು, ಬೆಟ್ಟ-ಗುಡ್ಡಗಳಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಸಸಿಗಳನ್ನ ನೆಟ್ಟು, ಪಾಲನೆ-ಪೋಷಣೆಗೈಯ್ಯುವ ಚಳುವಳಿ ರೂಪದ ಆಂದೋಲನ ದೇಶಾದ್ಯಂತ ಅತ್ಯಂತ ತ್ವರಿತವಾಗಿ ಕೈಗೂಡಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ಕೈಜೋಡಿಸಬೇಕು.

(ಲೇಖಕರು : ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

Published

on

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್‌ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.

ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್‌ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೇಳಿಕೆ


  • ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

            | ಸಚಿವ ದಿನೇಶ್ ಗುಂಡೂರಾವ್


ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ

Published

on

Unidentified miscreants torch two houses belonging to a particular community to retaliate the killing of nine civilians by Kukis in Manipur. (Photo: PTI)
  • ಡಾ. ಸಿದ್ದಯ್ಯ ರೆಡ್ಡಿಹಳ್ಳಿ

ಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.

ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.

ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.

ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.

ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.

ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್‌ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.

ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.

ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.

ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.

ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.

ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್‌ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.

ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.

ಮಣಿಪುರ ಮತ್ತು ನಾಗಾಲ್ಯಾಂಡ್‌ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.

ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.

ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.

ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.

(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending