ದಿನದ ಸುದ್ದಿ
ಹೆಚ್ಚು ಬೆಳೆದು ಹೆಚ್ಚೆಚ್ಚು ಜನರಿಗೆ ‘ಇಬ್ಬಡ್ಲ’ದ ಹುಚ್ಚು ಹಿಡಿಸಿಬಿಡಬಹುದು
- ಹರೀಶ್ ಬಿ ಎಸ್, ಸಹಾಯಕ ಪ್ರಾಧ್ಯಾಪಕರು,ತೋಟಗಾರಿಕೆ ಮಹಾವಿದ್ಯಾಲಯ,ಮೈಸೂರು
ಕ್ಯಾಕ್ರಿಕೆ, ಕೆಕ್ಕರಿಕೆ, ಇಬ್ಬಡ್ಲ, ಬನಸ್ಪತೆ…… ಕೇಳಿದ್ದೀರಾ ಈ ಹೆಸರುಗಳನ್ನು? ಕೇರಳಿಗರು ಇದಕ್ಕೆ ಕಕ್ಕರಿ ಅಥವಾ ಪೊಟ್ಟು ವಳ್ಳರಿ ಎನ್ನುವರು. ಸವಿದವರಿಗಷ್ಟೇ ಗೊತ್ತು ಇದರ ರುಚಿ, ಅದೂ ಬಿರುಬೇಸಿಗೆಯಲ್ಲಿ. ದಾಹ ತಣಿಸುವ ಯಾವುದೇ ಹಣ್ಣಿನ ರಸ ಅಥವಾ ತಂಪು ಪಾನೀಯಗಳಿಗೆ ಸಾಟಿಯಾಗಿ ನಿಲ್ಲಬಲ್ಲದು ಈ ದೇಸೀ ಹಣ್ಣು. ಉತ್ತರ ಕನ್ನಡ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಯ ಕೆಲವೆಡೆ ಕಾಣಸಿಗುತ್ತದೆ. ಬಿರುಬೇಸಿಗೆಯಲ್ಲಿ ಬಿರಿದ ಈ ಹಣ್ಣಿನ ಮಂದರಸ ಅದೆಷ್ಟು ಸೊಗಸು.
ಈಗ ನೆನೆದರೂ ಮತ್ತೆ ಮತ್ತೆ ಬೇಕೆನಿಸುತ್ತದೆ. ಕರ್ನಾಟಕದಲ್ಲಿ ಇದರ ಪಾನಕ, ಪಾಯಸ ಹೆಚ್ಚೆಂದರೆ ಬಿರಿದ ಹಣ್ಣಿನ ತಿರುಳಿಗೆ ಬೆಲ್ಲ ತೆಂಗಿನ ಕಾಯಿ ತುರಿ ಸೇರಿಸಿ ಸವಿಯುವುದು ವಾಡಿಕೆ. ಬೆಳೆಯುವ ರೈತರು ವಿರಳವಾಗಿರುವುದರಿಂದ ಹಾಗೂ ಒಮ್ಮೆ ರುಚಿ ಹತ್ತಿದವರು ಮತ್ತೆ ಮತ್ತೆ ಕೊಳ್ಳಲು ಮನಸು ಮಾಡುವುದರಿಂದ ತಹಸೀಲು/ಜಿಲ್ಲಾ ಕೆಂದ್ರಗಳು ಹಾಗೂ ನಗರಗಳಲ್ಲಿ ಹಳ್ಳಿಗಾಡಿನ ಈ ಅಪ್ಪಟ ದೇಸೀ ಹಣ್ಣಿಗೆ ಬೇಡಿಕೆ ನಿರಂತರ ಹೆಚ್ಚುತ್ತಿದೆ. ಕೇರಳದ ಕೆಲ ಹೆದ್ದಾರಿಗಳ ಇಕ್ಕೆಲಗಳಲ್ಲೂ ಇದರ ಜ್ಯೂಸ್ ಮಾರುವ ಸಾಲು ಸಾಲು ಮಳಿಗೆಗಳು. ಇದರ ಕೀರ್ತಿ ಬೆಳೆದ ಅಲ್ಲಿನ ಕೆಲ ಕೃಷಿಕರಿಗೆ ಸಲ್ಲಬೇಕು.
ಬಿರಿದ ಹಣ್ಣಿನ ಪರಿಮಳಕ್ಕೆ ಮನಸೋತವರೇ ಹೆಚ್ಚು. ಇದರ ಕಾಯಿಯನ್ನು ಕೂಡ ತರಕಾರಿಯಾಗಿ, ಸಲಾಡಾಗಿ, ಉಪ್ಪಿನಕಾಯಿಯಾಗಿ ಬಳಸಬಹುದು ಜೊತೆಗೆ ಹಣ್ಣಿನ ತಿರುಳು ಬಳಸಿ ಹೆಚ್ಚು ದಿನ ಶೇಖರಿಸಿಡಬಹುದಾದ ಸಿದ್ಧ ಪೇಯ, ಸ್ಕ್ವಾಷ್, ಜಾಮ್, ಸಾಬೂನು ಮುಂತಾದ ಸಿದ್ಧ ಉತ್ಪನ್ನಗಳನ್ನು ತಯಾರಿಸಿ ಕಾಸು ಮಾಡಬಹುದೆಂಬುದು ಹೆಚ್ಚು ಜನರಿಗೆ ತಿಳಿದಿರುವುದು ಅನುಮಾನದ ವಿಚಾರ.
ನಮ್ಮ ಅರಸೀಕೆರೆಯ ಸುತ್ತ-ಮುತ್ತ ಸಾಮಾನ್ಯವಾಗಿ ಇದನ್ನು ಮಳೆಗಾಲದ ಆರಂಭದಲ್ಲಿ ಬಿತ್ತಿ ಗೌರಿಹಬ್ಬದ ಹೊತ್ತಿಗೆ ಕೊಯಿಲು ಮಾಡಿ ಮಾರುವುದು ಸಂಪ್ರದಾಯ. ಬೇಡಿಕೆ ಗಣನೀಯವಾಗಿರುವುದರಿಂದ ಬೆಳೆದವರು ತುಸು ಹೆಚ್ಚೇ ಲಾಭ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ
ಡಿಸೆಂಬರ್ ನಲ್ಲಿ ಬಿತ್ತಿ ಬೇಸಿಗೆಗೆ ಹಣ್ಣು ಬರುವಂತೆ ಬೆಳೆದು ಮಾರುತ್ತಾರೆ.
ಇದರ ವ್ಯವಸ್ಥಿತ ಕೃಷಿ, ಸಂಸ್ಕರಣೆ ಹಾಗೂ ಮಾರಾಟಕ್ಕೆ ವಿಪುಲ ಅವಕಾಶವಿರುವುದರಿಂದ ವಾಣಿಜ್ಯ ಮಟ್ಟದಲ್ಲಿ ಬೆಳೆಯಲೂಬಹುದು; ಕಿಸೆ ತುಂಬ ಕಾಸೂ ಮಾಡಬಹುದು. ನಾವು ತಡ ಮಾಡಿದರೆ ಕೇರಳಿಗರೇ ನಮ್ಮಲ್ಲೂ ಮಳಿಗೆ ಹಾಕಿ ಮಾರಿಬಿಡುವ ಸಾಧ್ಯತೆಯಿದೆ. ಅವರಿಗೆ ಈ ಅವಕಾಶ ಕೊಡುವ ಬದಲು ನಮ್ಮ ಕೃಷಿಕರೇ ಬೆಳೆದು ಬಳಸಿ ತಮ್ಮ ಹಾಗೂ ಗ್ರಾಹಕರ ಉದರ ತಂಪು ಮಾಡುವುದರ ಜೊತೆಗೆ ಒಂದಷ್ಟು ಲಾಭಮಾಡಿಕೊಳ್ಳಬಹುದಾಗಿದೆ. ಕಲ್ಲಂಗಡಿ, ಕರಬೂಜ, ಸೌತೆ ಇತ್ಯಾದಿ ಬೆಳೆಗಳನ್ನು ನಿಖರ ಕೃಷಿ ಪದ್ಧತಿಯಲ್ಲಿ ದಶಕದಿಂದ ಬೆಳೆಯುತ್ತಿರುವ ನಮ್ಮ ಕೃಷಿಕರಿಗೆ ಇದರ ಕೃಷಿ ಖಂಡಿತ ಕಷ್ಟವಾಗಲಾರದು.
ಮಾಗಿದಾಗ ಬಿರುಕು ಬಿಟ್ಟು ಅದಿರುವ ಪರಿಸರದ ತುಂಬೆಲ್ಲ ಪರಿಮಳ ಪಸರಿಸುವುದು ಇದರ ವಿಶೇಷವಾದಾರೂ ದಿನಾರ್ಧದಲ್ಲಿ ಇದರ ಆಯಸ್ಸು ಮುಗಿಯುವುದೇ ಇದರ ಕೃಷಿಯ ವಿಸ್ತರಣೆ ಮತ್ತು ಮಾರಾಟಕ್ಕಿರುವ ದೊಡ್ಡ ತೊಡಕು. ಹಣ್ಣನ್ನು ರೆಫ್ರಿಜರೇಟಿರನಲ್ಲಿ ಇಟ್ಟರೂ ಇದರ ಮೂಲ ಗುಣಮಟ್ಟ ಕಾಯ್ದುಕೊಳ್ಳಲಾಗದು.
ಹೆಚ್ಚು ಬೆಳೆದು ಹೆಚ್ಚೆಚ್ಚು ಜನರಿಗೆ ಇದರ ಹುಚ್ಚು ಹಿಡಿಸಬಹುದು. ಬೆಳೆದ ಹಣ್ಣು ಇನ್ನೂ ಉಳಿದರೆ ನಮ್ಮ ಶಹರಗಳ ರಸ್ತೆ ಬದಿಗಳಲ್ಲಿ, ಹೋಟೆಲುಗಳಲ್ಲಿ, ಹಾಸ್ಟೆಲುಗಳಲ್ಲಿ…… ಎಲ್ಲೆಂದರಲ್ಲಿ ಮಂದರಸ ಮಾಡಿ ಮಾರಿಬಿಡಬಹುದು. ಬೆಳೆದ ಉತ್ಪನ್ನದ ಪ್ರಮಾಣ ಇನ್ನೂ ಹೆಚ್ಚಾದಲ್ಲಿ ಜಾಮು, ಸ್ಕ್ವಾಷು, ಸಾಬೂನು……ಇನ್ನೂ ಏನೇನನ್ನೋ ಮಾಡಲು ಅವಕಾಶ ಇದ್ದೇ ಇದೆ. ಇದರ ಕೃಷಿ ಹಾಗೂ ಬಳಕೆಯ ಬಗೆಗೆ ತಿಳುವಳಿಕೆ ಇರುವವರು ಹುಡುಕಿದರೆ ಖಂಡಿತ ನಮ್ಮಲ್ಲೇ ಸಿಗುವರು. ಅವರ ಜ್ಞಾನದ ದಾಖಲೆ ಮತ್ತು ಅದರ ಬಳಕೆ ಮಾಡುವ ಜಾಣ್ಮೆ ನಮ್ಮದಾಗಬೇಕಷ್ಟೆ. ಬೆಳೆಯುವುದರಲ್ಲಿ ಮುಂದಿರುವ ನಾವು ಮಾರುವುದರಲ್ಲಿ ಮುಂದಾಗಬೇಕಾದ ಅನಿವಾರ್ಯತೆಯಿದೆ. ಆಗಷ್ಟೇ ಇಬ್ಬಡ್ಲದ ಕೃಷಿಯಿಂದ ಹೆಚ್ಚಿನ ಲಾಭವಾದೀತು.
ಸದ್ಯಕ್ಕೆ ಬಹುತೇಕ ಬೆಳೆಯುವವರೆ ಮುಂದಿನ ಬೆಳೆಗೆ ಇದರ ಬೀಜ ಉಳಿಸಿಕೊಳ್ಳುತ್ತಿರುವುದು ವಾಡಿಕೆ. ಹೆಚ್ಚು ಜನ ಬೆಳೆಯಲು ಪ್ರಾರಂಭಿಸಿದರೆ ಉತ್ತಮ ಗುಣಮಟ್ಟದ ಬೀಜಕ್ಕೂ ಬೇಡಿಕೆ ಬಂದೀತು. ಆಗಲೇ ಬೆಳೆದ ಅನುಭವ ಉಳ್ಳವರು ಬೀಜೋತ್ಪಾದನೆಯನ್ನೇ ಮಾಡಲು ಅವಕಾಶವಿದೆ; ಜೊತೆಗೆ ಹೆಚ್ಚಿನ ಲಾಭವನ್ನೂ ಕೂಡ.
ನಮ್ಮ ವಿವಿಗಳು ಅದೇಕೋ ಇದರ ಬಗೆಗಿನ ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಹಿಂದೆ ಬಿದ್ದುಬಿಟ್ಟಿವೆ. ಇನ್ನಾದರೂ ಎಚ್ಚೆತ್ತುಕೊಂಡು ಇದರ ಹಿಂದೆ ಅವು ಬೀಳಲಿ ಎಂಬುದು ನಮ್ಮ ಕೃಷಿಕರ ಆಶಯ.
ಸ್ಥಳೀಯ ಬೇಡಿಕೆ, ರುಚಿ ತೋರಿಸಿದರೆ ನಗರಿಗರಿಗೂ ಇಷ್ಟವಾಗುವ ಇಬ್ಬಡ್ಲ, ಕೆಕ್ಕರಿಕೆ, ಬನಸ್ಪತ್ರೆಯ ತಾಜಾ ಹಣ್ಣು ಹಾಗೂ ಸಂಸ್ಕರಿಸಿದ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ರಾರಾಜಿಸಬಹುದು. ಏನಂತೀರಿ? ಮಾರುಕಟ್ಟೆಯಲ್ಲಿ ಸಿಕ್ಕರೆ ಮರೆಯದೆ ರುಚಿ ನೋಡಿ. ಇವುಗಳ ಕೃಷಿ ಮಾಡುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಲೇಖಕರನ್ನು 0821 2970411 /9480557634 ನಂಬರಿನಲ್ಲಿ ಸಂಪರ್ಕಿಸಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಯಶಸ್ವಿ ಬೃಹತ್ ಉದ್ಯೋಗ ಮೇಳಕ್ಕೆ ಕ್ರಮವಹಿಸಿ: ಡಿಸಿ ಗಂಗಾಧರ್ ಸ್ವಾಮಿ
ಸುದ್ದಿದಿನ,ದಾವಣಗೆರೆ:ನಗರದ ಎಂಸಿಸಿ ಬ್ಲಾಕ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆಬ್ರವರಿ 23 ರಂದು ಉದ್ಯೋಗ ಮೇಳ ನಡೆಯಲಿದೆ, ಮೇಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ತಿಳಿಸಿದರು .
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು .
ಬೃಹತ್ ಉದ್ಯೋಗ ಮೇಳಕ್ಕಾಗಿ ಈಗಾಗಲೇ ಪೋರ್ಟಲ್ ಮೂಲಕ ನೋಂದಣಿ ಆರಂಭವಾಗಿದ್ದು, 45ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಿಕೊಂಡಿವೆ. ಇನ್ನು ಸುಮಾರು 20 ಕಂಪನಿಗಳು ಬರುವ ಸಾಧ್ಯತೆ ಇದೇ, ಇದರಲ್ಲಿ ಐಟಿ, ಮಾಸ್ಟರ್ ಡಿಗ್ರಿ, ಐಟಿಐ ಮತ್ತು ಎಸ್ಎಸ್ಎಲ್ಸಿ, ಪಿಯುಸಿ ಅಭ್ಯರ್ಥಿಗಳಿಗೆ ಐಟಿ ವಲಯ ಬ್ಯಾಂಕ್ ಕ್ಷೇತ್ರ, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಫಾರ್ಮಸಿಟಿಕಲ್ ಸೇರಿದಂತೆ ಇನ್ನು ಅನೇಕ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ನೀಡುವ ವಿವಿಧ ಕಂಪನಿಗಳು ಸೇರಿವೆ. ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಕಾಲೇಜುಗಳಿಗೆ ಪತ್ರ ವ್ಯವಹಾರ ಮಾಡಿದ್ದು ಪ್ಲೇಸ್ಮೆಂಟ್ ಆಫೀಸರ್ಗಳ ಭೇಟಿ ಮಾಡಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ, ಪೋಸ್ಟರ್ಗಳು, ಜಿಂಗಲ್ಸ್ ಮತ್ತು ಸ್ವಚ್ಛ ಭಾರತ್ ವಾಹನಗಳ ಮೂಲಕ ವ್ಯಾಪಕ ಪ್ರಚಾರ ಮಾಡಲು ಕೈಗೊಳ್ಳಬೇಕು, ಸುಮಾರು 4,000 ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಸಾಧ್ಯತೆ ಇದೆ, ಆದುದರಿಂದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು,
ವಿದ್ಯಾರ್ಥಿಗಳಿಗೆ ಲಘು ಉಪಹಾರ, ನೀರು, ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ವ್ಯವಸ್ಥೆ, ವಿಶೇಷ ಬಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಸುಮಾರು 1,200 ಅಭ್ಯರ್ಥಿಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಗೆ ಸಚಿವರು, ಗಣ್ಯರನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೃಹತ್ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಯೋಜನಾ ನಿರ್ದೇಶಕ ಮಹಾಂತೇಶ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ್ವಾಮಿ.ಜಿ.ಎಂ.ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ6 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ4 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ1 day agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ
-
ದಿನದ ಸುದ್ದಿ8 hours agoಯಶಸ್ವಿ ಬೃಹತ್ ಉದ್ಯೋಗ ಮೇಳಕ್ಕೆ ಕ್ರಮವಹಿಸಿ: ಡಿಸಿ ಗಂಗಾಧರ್ ಸ್ವಾಮಿ

