Connect with us

ದಿನದ ಸುದ್ದಿ

ಭಕ್ತ ಕನಕದಾಸ: ಚಲನಚಿತ್ರದಲ್ಲಿ ವಾಸ್ತವ ಮತ್ತು ಉತ್ಪ್ರೇಕ್ಷೆ

Published

on

  • ರಂಗನಾಥ ಕಂಟನಕುಂಟೆ

ಭಕ್ತ ಕನಕದಾಸ’(1960) ಆರು ದಶಕಗಳ ಹಿಂದೆ ನಿರ್ಮಾಣವಾಗಿರುವ ಚಲನಚಿತ್ರ. ಇದು ವೈ. ಆರ್. ಸ್ವಾಮಿ ನಿರ್ದೇಶನದ ಕನಕದಾಸರ ಜೀವನ ಕುರಿತಾದ ಕಪ್ಪು ಬಿಳುಪಿನ ಕನ್ನಡದ ಚಿತ್ರ. ಈ ಚಿತ್ರದಲ್ಲಿ ಕನಕದಾಸರ ಪಾತ್ರವನ್ನು ಡಾ. ರಾಜಕುಮಾರ್ ಅವರು ಅಭಿನಯಿಸಿದ್ದು ಚಿತ್ರ ಅದ್ಭುತವಾಗಿದೆ. ಕನಕನ ಭಕ್ತಿ ಬದುಕಿನ ವ್ಯಕ್ತಿತ್ವವನ್ನು ಕಟ್ಟಿಕೊಡಲು ಚಿತ್ರದಲ್ಲಿ ಯತ್ನಿಸಲಾಗಿದೆ.

ಕನ್ನಡದ ಆರಂಭ ಕಾಲದ ಚಿತ್ರಗಳ ‘ಯುಗಧರ್ಮ’ವನ್ನು ಅವಲೋಕಿಸಿದರೆ ಆ ಕಾಲಘಟ್ಟದಲ್ಲಿ ಪೌರಾಣಿಕ ಕಥೆಗಳು, ಐತಿಹಾಸಿಕ ಘಟನೆಗಳು ಮತ್ತು ವ್ಯಕ್ತಿಗಳನ್ನು ಕುರಿತು ಹೆಚ್ಚು ಭಕ್ತಿಪ್ರಧಾನ ಚಿತ್ರಗಳನ್ನು ನಿರ್ಮಿಸಲಾಗಿದೆ. ಉದಾಹರಣೆಗೆ ಬೇಡರ ಕಣ್ಣಪ್ಪ, ಓಹಿಲೇಶ್ವರ, ಸತ್ಯ ಹರೀಶ್ಚಂದ್ರ, ಭೂಕೈಲಾಸ, ಭಕ್ತ ಸಿರಿಯಾಳ, ಭಕ್ತ ಪ್ರಹ್ಲಾದ, ರೇಣುಕಾ ದೇವಿಮಹಾತ್ಮೆ ಹೀಗೆ ಅನೇಕ ಪೌರಾಣಿಕ ಕಥೆಗಳನ್ನು ಆಧರಿಸಿದ ಚಿತ್ರಗಳನ್ನು ನಿರ್ಮಿಸಲಾಗಿದೆ. ಈ ಚಿತ್ರಗಳಲ್ಲಿ ಹರಿದಿರುವುದು ‘ಭಕ್ತಿ’ಯ ತೊರೆಯೇ ಆಗಿದೆ.

ಹಾಗೆಯೇ ಮಯೂರ, ಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ, ರಣಧೀರ ಕಂಠೀರವ ಮುಂತಾದ ಐತಿಹಾಸಿಕ ಚಿತ್ರಗಳನ್ನು ನಿರ್ಮಿಸಲಾಗಿದೆ. ಈ ಐತಿಹಾಸಿಕ ಚಿತ್ರಗಳಲ್ಲಿ ಕನ್ನಡ ನಾಡು ನುಡಿಗಳ ಬಗೆಗಿನ ‘ಅಭಿಮಾನ’ದ ಹೊಳೆಯೇ ಹರಿದಿದೆ. ಈ ಚಿತ್ರಗಳಲ್ಲಿ ವ್ಯಕ್ತವಾಗಿರುವ ಕನ್ನಡ ರಾಷ್ಟ್ರೀಯತೆಯ ವಿಚಾರಗಳು ಕೆಲವು ಭಾಷಿಕ ಮತ್ತು ಧಾರ್ಮಿಕ ಮೂಲಭೂತವಾದಿ ಮೇಲುಜಾತಿಗಳ ದೃಶ್ಟಿಯಿಂದ ಕೂಡಿವೆ. ಇದು ಬೇರೆಯದೇ ಚರ್ಚೆ.

ಇದಲ್ಲದೆ ಬಸವಣ್ಣ, ಪುರಂದರದಾಸ, ಕನಕದಾಸ ಮುಂತಾದ ಐತಿಹಾಸಿಕ ವ್ಯಕ್ತಿಗಳನ್ನು ಕೇಂದ್ರವಾಗಿಸಿಕೊಂಡು ಚಿತ್ರಗಳನ್ನು ನಿರ್ಮಿಸಲಾಗಿದೆ. ಇವು ಪ್ರಧಾನವಾಗಿ ಶೈವ ಮತ್ತು ವೈಶ್ಣವ ಭಕ್ತಿ ಪಂಥಗಳ ವಿವಿಧ ಧಾರೆಗಳ ಭಕ್ತರನ್ನು ಆಧರಿಸಿ ಚಿತ್ರಗಳನ್ನು ತಯಾರಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಐತಿಹಾಸಿಕ ವ್ಯಕ್ತಿಗಳನ್ನು ಪುರಾಣದ ಪಾತ್ರದಂತೆ ಚಿತ್ರಿಸಲು ಪ್ರಯತ್ನಿಸಲಾಗಿದೆ. ಆ ಮೂಲಕ ಯಕ್ಷಗಾನ ಮತ್ತು ಪೌರಾಣಿಕ ನಾಟಕಗಳ ನಂತರ ದೇವರನ್ನು ಬಹಳ ಪರಿಣಾಮಕಾರಿಯಾಗಿ ಜನರ ಕಣ್ಣೆದುರು ನಿಲ್ಲಿಸಲು ಚಲನಚಿತ್ರಗಳ ಮೂಲಕ ಪ್ರಯತ್ನಿಸಲಾಗಿದೆ.

ಅಂದರೆ ಹಲವು ಚಿತ್ರಗಳಲ್ಲಿ ಪುರಾಣದ ವಸ್ತುಗಳನ್ನು ಚಿತ್ರವಾಗಿಸುವ ಮೂಲಕ ದೇವರನ್ನು ಜನರ ಕಣ್ಣಿಗಿಳಿಸುವ ಕೆಲಸ ಮಾಡಲಾಗಿದೆ. ಹಾಗೆ ಕಣ್ಣಿಗಿಳಿದ ಪಾತ್ರಗಳಲ್ಲಿ ರಾಮ ಕೃಷ್ಣ ಮತ್ತು ಶಿವ ಮುಖ್ಯರು. ನಂತರ ಬಸವಣ್ಣ, ಪುರಂದರದಾಸ ಮತ್ತು ಇತರೆ ಅನೇಕ ಶರಣರು ಸಂತರೂ ಸೇರಿದ್ದಾರೆ. ಅಂತಹ ಭಕ್ತರಲ್ಲಿ ಕನಕನೂ ಒಬ್ಬ.

ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಕನಕನಿಗೆ ಕವಿಯಾಗಿ ಸ್ಥಾನವಿದ್ದರೂ ಅದಕ್ಕಿಂತ ಮಿಗಿಲಾಗಿ ಆದಿಕೇಶವನ ಭಕ್ತನಾಗಿ ಅವನನ್ನು ಸ್ತುತಿಸುತ್ತ ಕೀರ್ತನೆಗಳನ್ನು ರಚಿಸಿದ್ದರಿಂದ ‘ಭಕ್ತ ಕನಕದಾಸ’ನಾಗಿ ಹೆಚ್ಚು ಜನಜನಿತನಾಗಿದ್ದಾನೆ. ಅವನ ನಂತರದಲ್ಲಿ ಅದೆಶ್ಟೋ ಜನರು ಆತನ ಕೀರ್ತನೆಗಳನ್ನು ಹಾಡುತ್ತ ಅವನನ್ನು ಜೀವಂತವಾಗಿರಿಸುತ್ತ ಬಂದಿದ್ದಾರೆ. ಈ ಚಲನಚಿತ್ರವೂ ಕೂಡ ಕನಕನ ವ್ಯಕ್ತಿತ್ವವನ್ನು ಜೀವಂತವಾಗಿರಿಸುವ ಕೆಲಸವನ್ನೇ ಮಾಡಿದೆ.

ಹಾಗೆ ಜೀವಂತವಾಗಿಸುವ ಪ್ರಯತ್ನದಲ್ಲಿ ಕನಕನ ಜೀವನದ ಕೆಲವು ಘಟನೆಗಳನ್ನು ಐತಿಹ್ಯಗಳನ್ನು ಆಧಾರವಾಗಿಸಿಕೊಂಡು ಚಿತ್ರವನ್ನು ನಿರ್ಮಿಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಚಿತ್ರದಲ್ಲಿ ಐತಿಹಾಸಿಕ ಅಂಶಗಳಿಗಿಂತ ಐತಿಹ್ಯಗಳಿಗೆ ದಂತಕತೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಆ ಮೂಲಕ ಕನಕನನ್ನು ಮಹಾಜ್ಞಾನಿ ಮತ್ತು ಪವಾಡ ಪುರುಷನನ್ನಾಗಿ ಚಿತ್ರಿಸಲಾಗಿದೆ. ಮಾನವರೂ ತಮ್ಮ ಜೀವಿತ ಕಾಲದಲ್ಲಿ ಪವಾಡಗಳನ್ನು ಎಂದಿಗೂ ಮಾಡಲು ಬರುವುದಿಲ್ಲ. ಅದು ಕನಕನ ವಿಚಾರದಲ್ಲಿಯೂ ನಿಜ.

ಇಂದು ಜೀವಿಸುತ್ತಿರುವ ಯಾವುದೇ ಮಾನವರ ವಿಚಾರದಲ್ಲಿಯೂ ನಿಜ. ಆದರೆ ಕನಕನ ದೈವಭಕ್ತಿಯನ್ನು ಲೋಕಕ್ಕೆ ಸಾರುವ ಉತ್ಸಾಹದಲ್ಲಿ ದೇವರನ್ನು ಬೇಕೆಂದಾಗ ಧರೆಗಿಳಿಸುವ ಮಾಂತ್ರಿಕನಂತೆ ಚಿತ್ರಿಸಲಾಗಿದೆ. ಕನಕನು ವ್ಯಾಸರಾಯರ ಶಿಶ್ಯತ್ವದಲ್ಲಿದ್ದಾಗ ಇತರ ಶಿಶ್ಯರಿಗಿಂತ ಬಹಳ ಭಿನ್ನವೆಂದು ತೋರಿಸಲು ಒಡ್ಡಿದ ಎಲ್ಲ ಪರೀಕ್ಷೆಗಳು ಇದಕ್ಕೆ ಉದಾಹರಣೆಯಾಗಿವೆ. ಹಾಗೆಯೇ ಕನಕನಿಗೆ ಕಿಂಡಿಯ ಮೂಲಕ ದರ್ಶನ ನೀಡಿದ ಕೃಷ್ಣನ ಕತೆಯೂ ಇದೆ ಆಗಿದೆ. ವಾಸ್ತವದಲ್ಲಿ ಎಂದಿಗೂ ಅಸಾಧ್ಯವಾದ ದಂತಕತೆಗಳನ್ನು ಕನಕನ ಸುತ್ತ ಸೃಶ್ಟಿಸಲಾಗಿದೆ. ಈ ಜನಪ್ರಿಯ ಸಂಗತಿಗಳನ್ನೇ ಚಿತ್ರವೂ ಒಪ್ಪಿ ಅದನ್ನು ಪ್ರೇಕ್ಷಕರ ಮುಂದಿಟ್ಟಿದೆ. ಇದರ ಪರಿಣಾಮವಾಗಿ ಇಡೀ ಚಿತ್ರದಲ್ಲಿ ಕನಕನ ಬಗೆಗಿನ ಚಾರಿತ್ರಿಕ ಸಂಗತಿಗಳೇ ಕಳೆದುಹೋಗಿವೆ.

ಯಾವುದೇ ಸಂತ ಶರಣ ಭಕ್ತರ ಸುತ್ತ ಅತಿಮಾನುಶ ಕತೆಗಳನ್ನು ಪವಾಡ ಪ್ರಸಂಗಗಳನ್ನು, ದಂತಕತೆ ಐತಿಹ್ಯಗಳನ್ನು ಕಟ್ಟಲಾಗುತ್ತದೆ. ಆ ಮೂಲಕ ಸಂತರ ಶರಣ ವ್ಯಕ್ತಿತ್ವವನ್ನು ಔನ್ನತ್ಯಕ್ಕೇರಿಸುವ ಪ್ರಯತ್ನ ನಡೆಸಲಾಗುತ್ತದೆ. ಜನಸಮುದಾಯಗಳಿಗೆ ತಮ್ಮ ನಾಯಕನನ್ನು ಅಸಾಮಾನ್ಯನಾಗಿಸುವ ಉಮೇದಿನಲ್ಲಿ ಇಂತಹ ಕತೆಗಳನ್ನು ಸೃಶ್ಟಿಸಲಾಗುತ್ತದೆ. ಆದರೆ ಇದು ವಾಸ್ತವದಲ್ಲಿ ಅಸಾಧ್ಯ ಎಂದಾದ ಮೇಲೆ ಅವುಗಳ ಅಥೆಂಟಿಸಿಟಿಯೇ ಪ್ರಶ್ನಾರ್ಹವಾಗುತ್ತದೆ. ಹಾಗಾಗಿ ‘ಭಕ್ತ ಕನಕದಾಸ’ ಚಲನಚಿತ್ರ ಒಂದು ಚಿತ್ರವಾಗಿ ಉತ್ತಮವಾಗಿದೆ ಎಂದರೆ ಏನರ್ಥ? ಕನಕನ ವ್ಯಕ್ತಿತ್ವವನ್ನು ಚಾರಿತ್ರಿಕ ವಿಶಯಗಳಿಗೆ ಬದಲಾಗಿ ದಂತಕತೆಗಳ ಮೂಲಕ ಮರುಕಟ್ಟಿಕೊಳ್ಳಲು ಪ್ರಯತ್ನಿಸಿರುವುದರಲ್ಲಿಯೇ ಚಿತ್ರದ ಸಮಸ್ಯೆಯಿದೆ.

ಯಾಕೆಂದರೆ ದಂತಕತೆಗಳನ್ನು ಪ್ರಾಮಾಣಿಕವಾಗಿ ನಂಬುವುದರಲ್ಲಿ ಅಂತಹ ಸಮಸ್ಯೆ ಇರುವುದಿಲ್ಲ. ಬದಲಿಗೆ ಆ ದಂತಕತೆಗಳನ್ನೇ ಚಾರಿತ್ರಿಕ ಆಕರಗಳಾಗಿ ಮುಂದಿಡುತ್ತ ಹಲವು ವಾದಗಳ ಸಮರ್ಥನೆಗೆ ಇಳಿಯುವುದು ಬಹಳ ಮುಖ್ಯ ಸಮಸ್ಯೆ. ಅದರಲ್ಲಿಯೂ ಒಂದು ಇಡೀ ಸಮುದಾಯ ಅಂತಹ ದಂತಕತೆಗಳನ್ನೇ ನಿಜವೆಂದು ನಂಬಿ ಅದರ ಮೂಲಕ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಯತ್ನಿಸುವುದು ಅಪಾಯಕಾರಿ ಕೂಡ. ಉದಾಹರಣೆಗೆ ಕನಕನ ಕೀರ್ತನೆಗಳನ್ನು ಗಮನಿಸಿದರೆ ಅವನೊಬ್ಬ ಜಾತ್ಯತೀತ ವ್ಯಕ್ತಿಯೆಂದು ಕಂಡುಬರುತ್ತದೆ.

ಆದರೆ ಇಂದು ಅವನನ್ನು ಕುರುಬ ಜಾತಿಗೆ ಮಾತ್ರ ಸೀಮಿತಗೊಳಿಸುವ ಪ್ರಯತ್ನವನ್ನು ಚುನಾವಣಾ ರಾಜಕಾರಣ ಮಾಡುತ್ತಿದೆ. ಇಂತಹ ರಾಜಕೀಯ ಪ್ರೇರಿತ ಜಾತಿ ಸಂಘಟನೆಗಳು ಕೂಡ ಒಂದು ಜಾತಿಗೆ ಸೀಮಿತಗೊಳಿಸಲು ಯತ್ನಿಸುತ್ತವೆ. ಕುರುಬಾಸ್.ಕೊ.ಇನ್ ಎಂಬ ಒಂದು ಯುಟೂಬ್ ಚಾನಲ್ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಕನಕನ ಜೀವನವನ್ನು ಪರಿಚಯಿಸುವ ಒಂದು ಆಡಿಯೋ ಇದ್ದು ಅದು ಕನಕನ ಜೀವನದ ಪರಿಚಯ ಮಾಡುತ್ತದೆ.

ಆದರೆ ಇಲ್ಲಿ ಕನಕನ ಐತಿಹಾಸಿಕ ವಿವರಗಳು ನೆಪಮಾತ್ರಕ್ಕೆ ಮಾತ್ರ ಇದ್ದು ಉಳಿದಂತೆ ಸಿನಿಮಾದ ದೃಶ್ಯಕತೆಗಳಲ್ಲಿ ಬಿಂಬಿತವಾಗಿರುವ ವಿಚಾರಗಳೇ ಕನಕನ ನೈಜ ಐತಿಹಾಸಿಕ ವಿವರಗಳು ಎಂದು ನಿರೂಪಿಸಲಾಗಿದೆ. ಯಾರೋ ಎಂದೋ ಎಲ್ಲೋ ಕಟ್ಟಿದ ದಂತಕತೆಗಳು ತಲೆಮಾರಿನಿಂದ ತಲೆಮಾರಿಗೆ ಹಬ್ಬಿ ಅವೇ ಐತಿಹಾಸಿಕ ಸಂಗತಿಗಳು ಎಂಬಂತೆ ಬಿಂಬಿತವಾಗುವುದು ಚರಿತ್ರೆಗೆ ಮಾಡುವ ಅಪಮಾನ. ಇಂದು ಕನಕನ ಕುರಿತಾದ ದಂತಕತೆಗಳೇ ಅವನ ಚರಿತ್ರೆಯಾಗಿ ಪ್ರಚಾರದಲ್ಲಿವೆ.

ಹಾಗಾಗಿ ಕನಕನ ವ್ಯಕ್ತಿತ್ವ ಮತ್ತು ಅಲ್ಲಿನ ಸಮಸ್ಯೆಗಳ ಬಿರುಕುಗಳನ್ನು ವರ್ತಮಾನ ಕಣ್ಣೋಟದಲ್ಲಿ ಅರಿಯಬೇಕಿದೆ. ಐತಿಹಾಸಿಕ ವ್ಯಕ್ತಿಯಾಗಿದ್ದ ಕನಕನನ್ನು ಪವಾಡ ಪುರುಷನನ್ನಾಗಿಸುವುದರ ಸಮಸ್ಯೆಯನ್ನು ನಾವಿಂದು ತಿಳಿಯಬೇಕಿದೆ. ಮೊದಲಿಗೆ, ಕನಕನನ್ನು ಪುರಾಣೀಕರಣ ಮಾಡಿರುವುದೇ ಒಂದು ಸಮಸ್ಯೆ. ಹೀಗೆ ಪುರಾಣೀಕರಣ ಮಾಡುವ ಪ್ರಯತ್ನವನ್ನು ಶತಮಾನಗಳಿಂದಲೂ ಮಾಡಿಕೊಂಡು ಬಂದಿದೆ. ಅಂದರೆ ಸಿನಿಮಾದಲ್ಲಿ ಮಾತ್ರ ಮೊದಲಿಗೆ ಸಂಭವಿಸಿರುವ ಘಟನೆಯಲ್ಲ.

ಈಗಾಗಲೇ ಕನಕನ ಸುತ್ತ ಹಲವು ಐತಿಹ್ಯಗಳು ಕಳೆದ ಅರ್ಧ ಸಹಸ್ರಮಾನದಲ್ಲಿ ಯಾವ ಯಾವುದೋ ಹಂತದಲ್ಲಿ ಹುಟ್ಟಿ ಬೆಳೆದು ಜನಜನಿತವಾಗಿದ್ದ ಸಂಗತಿಗಳನ್ನು ಜೋಡಿಸಿ ಚಿತ್ರೀಕರಿಸಲಾಗಿದೆ. ಹಾಗಾಗಿ ಕನಕನ ಬಗೆಗೆ ಇಂತಹ ಐತಿಹ್ಯಗಳೇ ಹೆಚ್ಚು ಜನಪ್ರಿಯವಾಗಿದ್ದು ಚಾರಿತ್ರಿಕ ಸಂಗತಿಗಳೇ ಅತ್ಯಂತ ಕಡಿಮೆಯಿವೆ. ದೈವೀಕರಣ ಇಲ್ಲವೇ ಪುರಾಣೀಕರಣದಲ್ಲಿ ಚರಿತ್ರೆಯ ವಸ್ತುಸ್ಥಿತಿಯನ್ನು ತಿರುಚಲಾಗುತ್ತದೆ. ಮತ್ತು ಸಮಾಜದಲ್ಲಿ ತಿರುಚಿದ ಸಂಗತಿಗಳೇ ಚರಿತ್ರೆಯ ಕಥನಗಳಾಗಿ ಸಂಘರ್ಶಗಳಿಗೂ ಕಾರಣವಾಗಬಹುದು.

ಒಬ್ಬ ಭಕ್ತನನ್ನು ಭಕ್ತನನ್ನಾಗಿ ನೋಡುವುದರಿಂದ ಹಲವು ಪ್ರಯೋಜನಗಳಿವೆ. ಬದಲಿಗೆ ಭಕ್ತನನ್ನು ಅತಿಮಾನುಶೀಕರಿಸಿದರೆ, ದೈವೀಕರಿಸಿದರೆ ಅದರಿಂದ ಹಲವು ಅಪಾಯಗಳಿವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಚಾರಿತ್ರಿಕ ಸಂಗತಿಗಳು ಎಂದಿಗೂ ಪವಿತ್ರವಲ್ಲ. ಆದರೆ ಪುರಾಣದ ವಿಚಾರಗಳು ಪಾವಿತ್ರೀಕರಣಗೊಂಡು ಭಾವನಾತ್ಮಕ ಸಂಗತಿಗಳಾಗಿಬಿಟ್ಟರೆ ಅವು ಅಪಾಯವನ್ನು ಸೃಷ್ಟಿಸುತ್ತವೆ. ಒಮ್ಮೆ ಅವು ಪವೀತ್ರೀಕರಣಗೊಂಡು ಪ್ರಶ್ನಾತೀತ ಸಂಗತಿಗಳಾಗಿ ಬದಲಾದರೆ ಅವು ಮೂಲಭೂತವಾದಿ ವಿಚಾರಗಳಾಗಿ ಬದಲಾಗಿ ಯಾರೂ ವಿಮರ್ಶೆಗೆ ಒಳಪಡಿಸದಂತೆ ನಿರ್ಬಂಧ ವಿಧಿಸುತ್ತವೆ.

ಕುರಾನ್ ಬೈಬಲ್ ಭಗವದ್ಗೀತೆಗಳು ಹೀಗೆ ಪವಿತ್ರೀಕರಣಕ್ಕೆ ಒಳಗಾಗಿ ಪ್ರಶ್ನಾತೀತವಾಗಿಬಿಡುತ್ತಿವೆ. ಆದರೆ ಚಾರಿತ್ರಿಕ ಸಂಗತಿಗಳಾದರೆ ಅವು ಸದಾ ಸಂಶೋಧನೆಗೆ ಮರುವಿಮರ್ಶೆಗೆ ಒಳಪಡಬೇಕಾದ ಸಂಗತಿಗಳಾಗಿರುತ್ತವೆ. ಮತ್ತು ಮಾನವರು ತಮ್ಮ ಪ್ರಯತ್ನದಿಂದ ಅತ್ಯುತ್ತಮವಾದುದನ್ನು ಸಾಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಡಲು ಸಾಧ್ಯವಿರುತ್ತದೆ.

ಯಾವುದೇ ವ್ಯಕ್ತಿಯನ್ನು ಅತಿಮಾನುಶ ಇಲ್ಲವೇ ಕಾರಣಪುರುಶರಂತೆ ಬಿಂಬಿಸಿದರೆ ಅದು ಮಾನವಾತೀತ ಸಾಹಸವಾಗಿ ಅದು ಯಾವುದಕ್ಕೂ ಮಾದರಿಯಾಗಲಾರದು. ಹಾಗಾಗಿ ಚಾರಿತ್ರಿಕ ಸಂಗತಿಗಳು ಬದಿಗೆ ಸರಿದು ಪೌರಾಣಿಕರಣಗೊಂಡರೆ ಬದಲಾದ ಕಾಲಘಟ್ಟಗಳಲ್ಲಿ ಅಪಾಯಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ.

ಇಲ್ಲಿ ಇದನ್ನು ಇನ್ನಶ್ಟು ವಿವರಿಸಿಕೊಳ್ಳಬಹುದೆನಿಸುತ್ತದೆ. ಉದಾಹರಣೆಗೆ, ರಾಮಾಯಣದ ತಿರುಳಿನ ಮತ್ತು ಅಲ್ಲಿನ ಹಲವು ಪ್ರಸಂಗಗಳ ಬಗೆಗೆ ಪ್ರಶ್ನೆಯೆತ್ತಿದರೆ ಇಂದು ಅವು ನ್ಯಾಯಾಲಯದ ಕಟಕಟೆಯೇರುವ ಸನ್ನಿವೇಶಗಳೂ ಆಗಿ ಬದಲಾಗಿವೆ. ದೇಶದಲ್ಲಿ ಎಶ್ಟೋ ಅಂತಹ ಪ್ರಕರಣಗಳಿವೆ. ಯಾಕೆಂದರೆ ರಾಮಾಯಣ ಒಂದು ಪೌರಾಣಿಕ ಕೃತಿ. ಅದು ಒಂದು ಧರ್ಮದವರಿಗೆ ಇಂದು ಬಹಳ ಪವಿತ್ರವಾದ ಕಥನವಾಗಿ ಮಾರ್ಪಟ್ಟಿದೆ. ಅಲ್ಲಿರುವ ಎಲ್ಲ ಸಂಗತಿಗಳನ್ನು ಚಾರಿತ್ರಿಕ ಸಂಗತಿಗಳಂತೆ ಬಿಂಬಿಸಲಾಗುತ್ತಿದೆ. ಆದರೆ ಪುರಾಣಕೃತಿಯಲ್ಲಿನ ಎಲ್ಲ ಘಟನೆಗಳು ನಡೆದಿರಲೇಬೇಕೆಂದೇನಿಲ್ಲ.

ಅಲ್ಲಿ ಕಾಲ್ಪನಿಕ ಸಂಗತಿಗಳಿಗೂ ಅವಕಾಶವಿದೆ. ಇಲ್ಲವೇ ಎಲ್ಲವೂ ಕಾಲ್ಪನಿಕವೇ ಇರಬಹುದು. ಆದರೆ ಚರಿತ್ರೆಯ ಸಂಗತಿಗಳು ಹಾಗಲ್ಲ. ಅಲ್ಲಿ ಕಲ್ಪನೆಗೆ ಅವಕಾಶವಿಲ್ಲ. ಅವು ಘಟಿಸಿದ್ದು ಆದಶ್ಟು ವಾಸ್ತವಕ್ಕೆ ಹತ್ತಿರವಾಗಿ ಅವನ್ನು ಕಥಿಸುವ ಅಪೇಕ್ಷೆ ಇರುತ್ತದೆ. ಇವೆಲ್ಲ ಪುರಾಣದ ಪವೀತ್ರೀಕರಣದ ಅಪಾಯಗಳು. ಅಂದರೆ ದೀರ್ಘಕಾಲದಲ್ಲಿ ನಡೆಯುವ ಈ ಪ್ರಕ್ರಿಯೆ ಚರಿತ್ರೆಯ ಯಾವುದೋ ಒಂದು ದುಶ್ಟ ಕಾಲಘಟ್ಟದಲ್ಲಿ ವಿಪರೀತದ ಮತ್ತು ತಿರುಚಿದ ವಿಚಾರಗಳು ರಾಜಕೀಯಕ್ಕೆ ಬಳಕೆಯಾದರೆ ಸಮಾಜದಲ್ಲಿ ಸಂಘಶರ್Àಕ್ಕೆ ಕಾರಣವಾಗುತ್ತದೆ. ಇದು ಕೆಲವು ಸಾಂಸ್ಕøತಿಕ ನಾಯಕರ ವಿಚಾರದಲ್ಲಿ ನಿಜವಾಗುತ್ತಿದೆ. ಬಸವಣ್ಣ, ಕನಕದಾಸ ಮುಂತಾದವರ ವಿಚಾರದಲ್ಲಿ ಇದು ನಡೆಯುತ್ತಿದೆ.

ಬಸವಣ್ಣ ಶರಣರ ನೇತಾರನಾಗಿದ್ದವನು. ವಚನ ಚಳವಳಿಗೆ ನಾಯಕತ್ವ ನೀಡಿ ಅದನ್ನು ಮುನ್ನಡೆಸಿದ ಚಾರಿತ್ರಿಕ ವ್ಯಕ್ತಿ. ಆದರೆ ಇಂದು ಬಸವಣ್ಣ ದೇವರಾಗಿ ಪ್ರಶ್ನಾತೀತನಾಗಿಬಿಟ್ಟಿದ್ದಾನೆ. ಆತನ ಸುತ್ತ ನೂರಾರು ಮಠಾಧೀಶರು ಗರುಡ ಪಡೆಯಂತೆ ಕಾವಲಿದ್ದಾರೆ. ಇದು ಬಸವಣ್ಣನನ್ನು ಚಾರಿತ್ರಿಕ ವ್ಯಕ್ತಿಯಾಗಿದ್ದು ಆತನೂ ಎಲ್ಲರಂತೆ ಮಾನವನಾಗಿ ಬಾಳಿದವನು. ಅವನೂ ಹಲವು ತಪ್ಪು ವಿಚಾರಗಳನ್ನು ಮಂಡಿಸಿ ನಂತರ ತನ್ನನ್ನು ತಾನು ತಿದ್ದಿಕೊಂಡವನು. ಆದರೆ ಇದನ್ನು ಒಪ್ಪಲು ಸಿದ್ದರಿಲ್ಲದ ಪಡೆ ಬಸವಣ್ಣನ ಬಗೆಗೆ ಪ್ರಶ್ನೆಯೆತ್ತಿದರೆ ಅದು ಮುಗಿ ಬೀಳುತ್ತದೆ.

ಈಗಾಗಲೇ ಬಸವಣ್ಣನ ಸುತ್ತ ಎದ್ದಿದ್ದ ಹಲವು ವಿವಾದಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ.(ಧರ್ಮಕಾರಣ, ಮಹಾಚೈತ್ರ, ಚಿಕವೀರರಾಜೇಂದ್ರ, ಆನುದೇವ ಹೊರಗಣವನು ಇತ್ಯಾದಿ ಕೃತಿಗಳು ಪ್ರಕಟವಾದ ಸಂದರ್ಭದಲ್ಲಿ ಸೃಶ್ಟಿಯಾದ ವಿವಾದಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಇಂತಹ ವಿವಾದಗಳು ಕನಕನ ಸುತ್ತ ಇನ್ನೂ ಸೃಶ್ಟಿಯಾಗಿಲ್ಲವಾದರೂ ಮುಂದೆ ಸೃಶ್ಟಿಯಾಗುವುದಿಲ್ಲ ಎಂದೇನಿಲ್ಲ. ಹಾಗಾಗಿ ಈ ಹಿಂದಿನ ವಿದ್ಯಮಾನಗಳಿಂದ ಸಮುದಾಯಗಳು ಪಾಠ ಕಲಿತು ಬಹಳ ಎಚ್ಚರಿಕೆಯಿಂದಲೇ ಹೆಜ್ಜೆಯಿಡಬೇಕಾಗುತ್ತದೆ.

ಸದ್ಯದ ಪರಿಸ್ಥಿತಿ ಕೊಂಚ ಬದಲಾದರೆ ಕನಕನ ವಿಚಾರದಲ್ಲಿಯೂ ನಿಜವಾಗಿಬಿಡುವ ಅಪಾಯವಿದೆ. ಹಾಗಾಗಿ ಸಮುದಾಯಗಳು ಓರ್ವ ಸಾಂಸ್ಕøತಿಕ ನಾಯಕನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಹೊತ್ತಿನಲ್ಲಿ ಬಹಳ ಎಚ್ಚರಿಕೆಯಿಂದ ಕಟ್ಟಿಕೊಳ್ಳಬೇಕಾಗುತ್ತದೆ. ಬಹಳ ಮುಕ್ತವಾದ ಮನಸ್ಸಿನ ಮತ್ತು ಆಧುನಿಕ ಜಗತ್ತಿನ ಆಲೋಚನೆಗಳಿಗೆ ಅನುಗುಣವಾಗಿ ವಿಚಾರಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಚರಿತ್ರೆಯನ್ನು ಪುನರ್ ರಚಿಸುವುದು ಎಂದರೆ ಗತವನ್ನು ಮತ್ತೆ ಕಟ್ಟಿಕೊಳ್ಳುವುದಲ್ಲ. ಬದಲಿಗೆ ಗತವನ್ನು ವರ್ತಮಾನದ ಮತ್ತುಭವಿಷ್ಯ ಬದುಕಿನ ಜೀವನ ಮೌಲ್ಯಗಳಿಗೆ ಅನುಗುಣವಾಗಿ ಕಟ್ಟಿಕೊಳ್ಳಬೇಕು.

ಅದಿಲ್ಲದೆ ನಿರ್ಬಂಧಿತ ಜಾತಿ ಸಮಾಜದ ಕಟ್ಟುಪಾಡುಗಳಿಗೆ ತಕ್ಕಂತೆ ಯಾವುದೇ ನಾಯಕರ ವ್ಯಕ್ತಿತ್ವವನ್ನು ಕಟ್ಟಿದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ವಿಸ್ತಾರವಾಗಿ ಹಬ್ಬಬಹುದಾದ ಮರದ ಕೊಂಬೆಗಳನ್ನು ಕತ್ತರಿಸಿ ಗಿಡ್ಡವಾಗಿ ಬೆಳೆಸುವ ಬೊನ್ಸಾಯಿ ಮರಗಳಂತೆ ಸಮುದಾಯದ ಆಲೋಚನೆಗಳು ಕುಬ್ಜಗೊಳ್ಳುತ್ತವೆ. ಈಚಿನ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಸಮುದಾಯಗಳನ್ನು ಮತ್ತಶ್ಟು ಸಂಕುಚಿತಗೊಂಡು ಕುಬ್ಜಗೊಳ್ಳುತ್ತಿರುವುದು ಕಾಣುತ್ತಿದೆ.

ಜಾತಿ ಕಟ್ಟುಪಾಡುಗಳನ್ನು ಮೀರಿ ಸಮುದಾಯಗಳು ಯೋಚಿಸುವುದನ್ನೇ ಮರೆತು ಅತ್ಯಂತ ಉಗ್ರ ಜಾತಿವಾದಿ ಸಮುದಾಯಗಳಾಗಿ ಬದಲಾಗುತ್ತಿವೆ. ಅಂತಹ ಹೊತ್ತಿನಲ್ಲಿ ಕನಕನ ವ್ಯಕ್ತಿತ್ವನ್ನು ಮತ್ತೆ ಕಟ್ಟಿಕೊಳ್ಳುವ ಸಮಾಜವು ಕನಕನಿಂದ ಕಲಿತು ಬಹಳ ಮುಕ್ತವಾಗಿ ಯೋಚಿಸುವುದನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕಿದೆ. ಆದ್ದರಿಂದ ಕನಕನಂತಹವರ ವ್ಯಕ್ತಿತ್ವನ್ನು ಆಧುನಿಕ ಕಾಲದಲ್ಲಿ ಮರು ಕಟ್ಟುವ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.

ಪ್ರಸ್ತುತ ಚಲನಚಿತ್ರದಲ್ಲಿ ಕನಕನ ವ್ಯಕ್ತಿತ್ವವನ್ನು ಗತದ ನೆಲೆಯಲ್ಲಿಯೇ ನಿಲ್ಲಿಸಲಾಗಿದೆ. ಆತನನ್ನು ಪರಮ ಭಕ್ತ ಎಂದು ಬಿಂಬಿಸುವ ಉತ್ಸಾಹದಲ್ಲಿ ಆತನ ಸುತ್ತ ಹಲವು ಐತಿಹ್ಯ ಮತ್ತು ದಂತಕತೆಗಳನ್ನು ಕಟ್ಟಲಾಗಿದೆ. ಆ ಕತೆಗಳನ್ನು ದಿಟವೆಂಬಂತೆ ನಂಬಿ ಅವುಗಳ ಮೂಲಕ ಕನಕನ ವ್ಯಕ್ತಿತ್ವವನ್ನು ಹಿಗ್ಗಿಸಲು ಪ್ರಯತ್ನಿಸಲಾಗಿದೆ. ಅಂತಹ ಐತಿಹ್ಯಗಳೇ ಚಿತ್ರದ ವಸ್ತು. ಉದಾಹರಣೆಗೆ ಕನಕನ ಹುಟ್ಟು, ತಿರುಪತಿ ತಿಮ್ಮಪ್ಪನ ವರ, ತಿಮ್ಮಪ್ಪನಾಯಕ ಕನಕನಾಗುವ ನಿಧಿಯ ಕತೆ, ಕೋಣ ಮಂತ್ರ ಪ್ರಸಂಗ, ಬಾಳೆ ಹಣ್ಣಿನ ಪ್ರಸಂಗ, ‘ನಾನು ಹೋದರೆ ಹೋದೆನು’, ಕನಕನ ಕಿಂಡಿ, ಸಾಲಿಗ್ರಾಮ ಪ್ರಸಂಗ ಹೀಗೆ ಹಲವು ಪ್ರಸಂಗಳು ಕನಕನ ಸುತ್ತ ಹೆಣೆದುಕೊಂಡಿವೆ.

ಇವನ್ನು ತಾರ್ಕಿಕವಾಗಿ ಮತ್ತು ಚಾರಿತ್ರಿಕವಾಗಿ ನಿಜ ಎಂದು ಸಾಬೀತು ಪಡಿಸಲು ಯಾವುದೇ ಆಕರಗಳಿಲ್ಲ. ಐತಿಹ್ಯಗಳೇ ಆಗಿವೆ. ಅವುಗಳಿಗೆ ಭಾವನಾತ್ಮಕ ನೆಲೆಯಿರುತ್ತದೆಯೇ ಹೊರತು ಯಾವುದೇ ನೈಜ ವಾಸ್ತವದ ನೆಲೆಯಿರುವುದಿಲ್ಲ. ಹಾಗಾಗಿ ಇವನ್ನು ಒಪ್ಪುವುದು ಕಷ್ಟ. ಅದರಲ್ಲಿಯೂ ಎಲ್ಲ ಪ್ರಸಂಗಳಲ್ಲಿಯೂ ದೇವರು ಪ್ರತ್ಯಕ್ಷವಾಗಿ ಭಕ್ತರಿಗೆ ದರ್ಶನ ನೀಡುತ್ತಾನೆ. ಇದು ಸಿನಿಮಾದಲ್ಲಿ ಮತ್ತು ಕಲ್ಪನೆಯಲ್ಲಿ ಮಾತ್ರ ಸಾಧ್ಯ. ವಿಶೇಶವೆಂದರೆ ಕನಕನ ಕೃತಿಗಳಲ್ಲಿ ಎಲ್ಲಿಯೂ ದೈವ ಪ್ರತ್ಯಕ್ಷವಾದ ಬಗೆಗೆ ವಿವರಗಳಿಲ್ಲ.

ಬದಲಿಗೆ ನಿರಂತರ ಧ್ಯಾನ, ಹುಡುಕಾಟಗಳು ಮತ್ತು ದೇವರನ್ನು ಕಾಣಬೇಕೆಂಬ ಹಂಬಲ ಇದೆಯೇ ಹೊರತು ಅಲ್ಲಿ ದೇವರ ದರ್ಶನದ ಆತ್ಯಂತಿಕ ಅನುಭವನದ ವಿವರಗಳಿಲ್ಲ. ಆದರೆ ಸಿನಿಮಾ ದೇವರೇ ದರ್ಶನ ನೀಡಿ ಕನಕನನ್ನು ಎಲ್ಲ ಕ್ಷಣಗಳಲ್ಲಿಯೂ ಕಾಪಾಡಿ ದೊಡ್ಡವನನ್ನಾಗಿ ಮಾಡುತ್ತದೆ. ಇವು ಜನರಲ್ಲಿ ಭಕ್ತಿ ರಸವನ್ನು ಪ್ರಚೋದಿಸಲು ನೆರವಾಗಬಹುದೇ ಹೊರತು ಜನರು ಅಂತಹ ಪ್ರಯೋಗ ಮಾಡಿ ದೇವರನ್ನು ಧರೆಗಳಿಸಲು ಸಾಧ್ಯವೇ ಇಲ್ಲ.

ಹಾಗಾಗಿ ಚಲನಚಿತ್ರ ಕಟ್ಟಿಕೊಡುವ ಕನಕನ ವ್ಯಕ್ತಿತ್ವ ಕಾಲ್ಪನಿಕ ಇಲ್ಲವೇ ಪವಾಡಮಯ ಪ್ರಸಂಗಗಳ ಕಟ್ಟುಕತೆಗಳ ಅನಾವರಣ ಎನ್ನಿಸುತ್ತದೆಯೇ ಹೊರತು ಅದು ಚಾರಿತ್ರಿಕ ಸತ್ಯವಂತೂ ಅಲ್ಲ. ಅಂದರೆ ಕನಕ ಚಾರಿತ್ರಿಕವಾಗಿ ಇದ್ದದ್ದು ನಿಜ. ಆದರೆ ಚಾರಿತ್ರಿಕ ವ್ಯಕ್ತಿಯಾಗಿದ್ದ ಕನಕನ ಸುತ್ತ ಕಟ್ಟಿಕೊಂಡಿರುವ ಕಥನಗಳು ಚಾರಿತ್ರಿಕವಲ್ಲ. ಹಲವು ಸಂತರ ಶರಣರ ಸುತ್ತ ಜನಸಮುದಾಯಗಳು ಕಟ್ಟಿಕೊಂಡಿರುವ ದಂತಕತೆಗಳಂತೆ ಕನಕನ ಸುತ್ತಲೂ ಕಟ್ಟಿಕೊಂಡಿವೆ. ಹಾಗೆ ಕಟ್ಟುವುದರ ಮೂಲಕ ಚರಿತ್ರಾತೀತನಾಗಿ ಕಲ್ಪಿಸಿಕೊಳ್ಳುವ ಪ್ರಯತ್ನ ಮಾಡಿವೆ.

ಇದು ನಮ್ಮ ದೇಶದ ಜಾಯಮಾನ ಕೂಡ. ಇಲ್ಲಿ ಚಾರಿತ್ರಿಕ ಸಂಗತಿಗಳನ್ನು ಚಾರಿತ್ರಿಕ ಸಂಗತಿಗಳಂತೆ ನೋಡದೆ ಅವನ್ನು ಪೌರಾಣೀಕರಿಸುವ ಪ್ರಯತ್ನ ಮಾಡಲಾಗಿರುತ್ತದೆ. ಅದು ಕನಕನ ವಿಚಾರದಲ್ಲಿಯೂ ನಿಜವಾಗಿದೆ. ಆಧುನಿಕ ಸಂವಹನ ಮಾಧ್ಯಮವಾದ ಚಲನಚಿತ್ರವೂ ಅದೇ ಕೆಲಸವನ್ನು ಮಾಡಿದೆ. ಇಂತಹ ಆಲೋಚನೆಯ ಕ್ರಮಗಳನ್ನು ಬದಲಿಸಿಕೊಂಡು ಸಾಧ್ಯವಾದಶ್ಟು ವಾಸ್ತವಕ್ಕೆ ಹತ್ತಿರವಾದ ರೀತಿಯಲ್ಲಿ ಸಾಧಕರ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಇಂತಹ ಸಿನಿಮಾಗಳನ್ನು ಲಕ್ಶಾಂತರ ಜನರು ನೋಡಿದ್ದಾರೆ. ಅವರ ಮನಸ್ಸಿನಲ್ಲಿ ಕನಕನ ವ್ಯಕ್ತಿತ್ವ ಅಚ್ಚೊತ್ತಿದೆ.

ಅದರಲ್ಲಿ ಬಹುತೇಕರಿಗೆ ಚಿತ್ರ ಬಿಂಬಿಸುವ ಕನಕನ ಪವಾಡಮಯ ಬದುಕು ನೆನಪಿನಲ್ಲಿ ಉಳಿದಿರುತ್ತದೆಯೇ ಹೊರತು ಅದರಾಚೆಗೆ ಕನಕ ಚಿಂತಿಸಿದ ವಿಚಾರಗಳು ಅವರಿಗೆ ಪರಿಚಯವಾಗುವುದೇ ಇಲ್ಲ. ಮುಖ್ಯವಾಗಿ ಜಾತಿ-ಕುಲಗಳ ಸುತ್ತ ಆತನೆತ್ತಿದ್ದ ಪ್ರಶ್ನೆಗಳು ಜನರ ಮನಸ್ಸಿಗೆ ಇಳಿದು ಜಾತ್ಯತೀತವಾಗಿ ಯೋಚಿಸುವುದನ್ನೇ ಮಾಡುವುದಿಲ್ಲ. ಬದಲಿಗೆ ದೈವಾಂಶ ಸಂಭೂತ ಭಕ್ತ ಕನಕ ಕಲ್ಪಿತ ವ್ಯಕ್ತಿತ್ವ ಪರಿಚಯವಾಗುತ್ತದೆಯೇ ಹೊರತು ನೈಜ ಮತ್ತು ವಾಸ್ತವದ ಚಾರಿತ್ರಿಕ ಕನಕನ ವ್ಯಕ್ತಿತ್ವ ಅವರಲ್ಲಿ ಉಳಿಯುವುದೇ ಇಲ್ಲ.

ಹಾಗೆ ಚಾರಿತ್ರಿಕ ಕನಕನ ವ್ಯಕ್ತಿತ್ವ ಉಳಿಯದೇ ಹೋದರೆ, ವೈಚಾರಿಕತೆಯ ಬೀಜಗಳು ಮೊಳೆಯದೇ ಹೋದರೆ, ಅಲ್ಲಿ ಮೌಢ್ಯಗಳ ಬಿತ್ತನೆಯಾಗಿ ಅವೇ ಬೆಳೆದು ಪೊದೆಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಇಂದು ವೈಚಾರಿಕ ಸಂಗತಿಗಳ ಮೇಲೆ ಹರಡಿಕೊಂಡಿರುವ ಮುಸುಕನ್ನು ತೆರೆದು ಕನಕನನ್ನು ಅರಿಯಬೇಕಾಗುತ್ತದೆ. ಈ ದಿಸೆಯಲ್ಲಿ ಚಿತ್ರಬಿತ್ತುವ ವೈಚಾರಿಕ ಪ್ರಭಾವ ಅತ್ಯಂತ ಕಡಿಮೆಯೆಂದೇ ಹೇಳಬೇಕಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ದಿನದ ಸುದ್ದಿ

ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

Published

on

ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.

ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್‌ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್

Published

on

ಜಿಲ್ಲೆಯಲ್ಲಿ 1.37 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಡಿಎಚ್ಒ ಡಾ. ಷಣ್ಮುಖಪ್ಪ

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ವಿಶೇಷ ಅಭಿಯಾನದಲ್ಲಿ ಯಾವುದೇ ಒಂದು ಮಗುವೂ ಸಹ ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಸೂಚಿಸಿದರು.

ಅವರು ಭಾನುವಾರ ಪಾಷನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಬ್ದುಲ್ ರೆಹಮಾನ್ ಎಂಬ 4 ತಿಂಗಳ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಎಲ್ಲಾ ಭಾಗಗಳ ಅರ್ಹ ಮಕ್ಕಳಿಗೂ ಲಸಿಕೆ ತಲುಪಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಎಸ್. ಅವರು ಮಾತನಾಡಿ, ಜಿಲ್ಲೆಯನ್ನು ಸಂಪೂರ್ಣ ಪೋಲಿಯೋ ಮುಕ್ತವಾಗಿಸಲು ಆರೋಗ್ಯ ಇಲಾಖೆ ಪಣತೊಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 18,28,153 ಜನಸಂಖ್ಯೆಯಿದ್ದು, 3,79,338 ಮನೆಗಳಿವೆ. ಇವುಗಳಲ್ಲಿ ಗುರುತಿಸಲಾಗಿರುವ 5 ವರ್ಷದ ಒಳಗಿನ 1,37,339 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.

ಇದಕ್ಕಾಗಿ ಜಿಲ್ಲಾದ್ಯಂತ 1,090 ಲಸಿಕಾ ಬೂತ್ಗಳನ್ನು ಸ್ಥಾಪಿಸಲಾಗಿದೆ. ಬೂತ್ಗಳಲ್ಲಿ ಲಸಿಕೆ ಹಾಕುವುದರ ಜೊತೆಗೆ, ಜೂನ್ 29 ರಿಂದ ಜುಲೈ 1 ರವರೆಗೆ ಒಟ್ಟು 3 ದಿನಗಳ ಕಾಲ ಜಿಲ್ಲೆಯ ಎಲ್ಲಾ ಮನೆ-ಮನೆಗೆ ತೆರಳಿ 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮವನ್ನು 2 ಹಂತಗಳಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಲಸಿಕಾ ಅಭಿಯಾನದ ಯಶಸ್ಸಿಗಾಗಿ ಮನೆ-ಮನೆ ಭೇಟಿ ತಂಡ, ಟ್ರಾನ್ಸಿಸ್ಟ್ (ಸಾರಿಗೆ ನಿಲ್ದಾಣಗಳ ತಂಡ) ಮತ್ತು ಸಂಚಾರಿ (ಮೊಬೈಲ್) ತಂಡ ಹೀಗೆ ಮೂರು ಪ್ರಮುಖ ವಿಭಾಗಗಳ ತಂಡಗಳನ್ನು ರಚಿಸಲಾಗಿದೆ. ನಿಯೋಜಿತ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ವಲಸೆ ಕಾರ್ಮಿಕರ ಮಕ್ಕಳು, ಹರವಿಗಿ ಹೋಗುವ ಕುಟುಂಬಗಳ ಮಕ್ಕಳು ಸೇರಿದಂತೆ ಒಂದೂ ಮಗುವು ಲಸಿಕೆಯಿಂದ ವಂಚಿತವಾಗದಂತೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ತಿಳಿಸಿದರು.

ಡಾ. ರೇಣುಕಾರಾಧ್ಯ ಆರ್.ಸಿ.ಹೆಚ್.ಒ ಅವರು ಮಾತನಾಡಿ, ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲಾಗಿದೆ ಆದರೆ ಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ 5 ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿನ ನಾಗರಿಕರು ಭಾರತಕ್ಕೆ ಬಂದು ಹೋಗುವ ಸಾಧ್ಯತೆ ಇರುವುದರಿಂದ, ವೈರಸ್ ಮತ್ತೆ ಇಲ್ಲಿ ಹರಡಬಾರದು ಎಂಬ ಮುಂದಾಲೋಚನೆಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಈ ಪಲ್ಸ್ ಪೋಲಿಯೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಲ್ಸ್ ಪೋಲಿಯೋ ನೊಡೆಲ್ ಅಧಿಕಾರಿ ಡಾ.ಚಂದ್ರಶೇಖರ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆÉ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ.ಬಿ : ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ , ಬಿ.ಐ.ಇ.ಟಿ. ಕಾಲೇಜು ಹಾಗೂ ಸುತ್ತ ಮುತ್ತ ಪ್ರದೇಶಗಳು.

ಮಂಡಿಪೇಟೆ, ಬೆನ್ನೆ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಬೆಲ್ಲೌಡಿಹಲ್ಲಿ, ಮಹಾವೀರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಬಿ.ಟಿ.: ಮಂಡಕ್ಕಿ ಬಟ್ಟಿ, 1 ರಿಂದ 10 ನೇ ಕ್ರಾಸ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಮೌನೇಶ್ವರ : ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್ ರಸ್ತೆ, ಜಯನಗರ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ.

ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಇ.ಎಸ್.ಐ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ, ಪಿ.ಬಿ. ರಸ್ತೆ., ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಕೆಟಿಜೆ: ಶ್ರೀ ಮುರಘ ರಾಜೇಂದ್ರ ಸ್ವಾಮಿಗಳ ಮಠ, ಜಾಧವ್ ಕ್ಲಿನಿಕ್ ಸುತ್ತ ಮುತ್ತ , ಶಿವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ ಹಾಗು ಸುತ್ತಮುತ್ತ ಪ್ರದೇಶಗಳು, ಪಿಜೆ: ಪೋಲೀಸ್ ಕ್ವಾಟ್ರಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸಿಜಿಹೆಚ್: ಎಮ್.ಸಿ.ಸಿ. ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೊಗಟವೀರ ಕಲ್ಯಾಣ ಮಂದಿರ, ವಿನೋಬ ನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿ ನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗು ಸುತ್ತಮುತ್ತ ಪ್ರದೇಶಗಳು.

ಕರೂರು ಇಂಡಸ್ಟ್ರಿಯಲ್ ಏರಿಯಾ, ಡಿ.ಸಿ. ಕಛೇರಿ, ಜಿ.ಎಂ.ಐ.ಟಿ. ಬಸವೇಶ್ವರ ನಗರ, ರಶ್ಮೀ, ಹರಿಹರ ರಸ್ತೆ, ವಿಜಯ ನಗರ, ಅಶೋಕ ನಗರ, ಆರ್.ಟಿ.ಓ. ಕಛೇರಿ, ಎಸ್.ಪಿ. ಕಛೇರಿ, ರಿಂಗ್ ರಸ್ತೆ, ಶಿಬಾರ, ಎಸ್.ಎಂ.ಕೆ. ನಗರ, ಹಾಗೂ ಚಿತ್ತನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೇವರಹಟ್ಟಿ, ದೊಡ್ಡಬಾತಿ, ಹಳೆಬಾತಿ, ನಾರಾಯಣ ಕ್ಯಾಂಪ್, ಯರಗುಂಟಾ, ಕೋಡಿಹಳ್ಳಿ, ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮಾಗಾನಹಳ್ಳಿ, ಮಾಗಾನಹಳ್ಳಿ ಕ್ಯಾಂಪ್, ಓಬಜ್ಜಿಹಳ್ಳಿ, ಓಬಜ್ಜಿಹಳ್ಳಿ ಕ್ಯಾಂಪ್, ಕಡ್ಲೇಬಾಳು, ಹಳೆಕಡ್ಲೆಬಾಳು, ಮಾಳಗೊಂಡನಹಳ್ಳಿ, ಅರಸಾಪುರ, ಬದುನಾಯಕನತಾಂಡ, ಚಿಕ್ಕಓಬಜ್ಜೀಹಳ್ಳಿ, ದೊಡ್ಡಓಬಜ್ಜೀಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮ್ಯಾಸರಹಳ್ಳಿ, ಗುಮ್ಮನೂರು, ಹುಣಸೆಕಟ್ಟೆ, ಮುಡೇನಹಳ್ಳಿ, ಕೆಂಚಮ್ಮನಹಳ್ಳಿ, ಹೊಸಹಳ್ಳಿ, ಕಾಟಿಹಳ್ಳಿ.

ಮಂಡಲೂರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹನುಮನಹಳ್ಳಿ, ಕೊಗ್ಗÀನೂರು, ಹನುಮನಹಳ್ಳಿ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆರ್.ಎಂ.ಸಿ. ಲಿಂಕ್ ರಸ್ತೆ, ಬಿ.ಟಿ. ಲೇಔಟ್, ಗುಜರಿ ಲೈನ್, ಬಂಬೂ ಬಜಾರ್, ಮಟ್ಟಿಕಲ್, ಬಿಡಿಓ ಕಛೇರಿ, ಇಮಾಮ್ ನಗರ, ಅಮರಪ್ಪನ ತೋಟ.

ಆನೆಕೊಂಡ, ಎಲ್.ಬಿ.ಎಸ್. ನಗರ.ಟಿ.ಸಿ. ಲೇಔಟ್, ಬಿಟಿ ಲೇಔಟ್, ಕೆ.ಆರ್. ರಸ್ತೆ, ಇಮಾಮ್ ನಗರ, ಆನೆಕೊಂಡ, ಐನಳ್ಳಿ ಕಾಂಪೌಂಡ್, ಎಪಿಎಂಸಿ, ಭಾರತ್ ಕಾಲೋನಿ, ಶೇಖ್ರಪ್ಪ ನಗರ ಹೆಚ್.ಕೆ.ಆರ್. ನಗರ, ಕಬ್ಬೂರು ಬಸಾಪುರ ನಗರ, ಆಣ್ಣಾ ನಗರ, ಬಸಾಪುರ ರಸ್ತೆ, ಗೋಶಾಲೆ, ಪಿ.ಬಿ. ರಸ್ತೆ, ರವಿ ಮಿಲ್ ಹಾಗೂ ಆವರಗೆರೆ, ಹೊನ್ನೂರು, ಐಗೂರು, ಮಲ್ಲಶೆಟ್ಟಿಹಳ್ಳಿ, ತೊಳಹುಣಸೆ, ದಾವಣಗೆರೆ ವಿಶ್ವವಿದ್ಯಾಲಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending