Connect with us

ನೆಲದನಿ

ಕಂದಗಲ್ಲು ಓಬಕ್ಕನ ಸೋಬಾನೆ ಪದಗಳಲ್ಲಿ ಬಸವದರ್ಶನ

Published

on

ಭಾರತದ ಚರಿತ್ರೆಯನ್ನು ತಿಳಿಯುವುದಕ್ಕೆ ಶಿಷ್ಟ ಸಾಹಿತ್ಯದಷ್ಟೆ ಮೌಖಿಕ ಸಾಹಿತ್ಯವೂ ಮಹತ್ವದ ದಾಖಲೆಯನ್ನು ಒದಗಿಸುತ್ತದೆ. ಈ ಮೌಖಿಕ ಚರಿತ್ರೆಯು ನೆಲಮೂಲ ಬದುಕಿನ ಪ್ರತಿದನಿಯಾಗಿದೆ. ಇಂತಹ ಮೌಖಿಕ ಚರಿತ್ರೆಯು ನೆಲದನಿಯಾಗಿ ತನ್ನ ಸಂವೇದನೆಗಳನ್ನು ಅನಾವರಣಗೊಳಿಸುತ್ತ ಬಂದಿದೆ. ಆದರೆ ನಾವು ನಮ್ಮ ಚರಿತ್ರೆಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ನಮ್ಮ ಮನೆಯಲ್ಲಿಯೇ ಇರುವ ಚರಿತ್ರೆಯನ್ನು ಅರಿಯದೆ ಯಾರೋ ತಮ್ಮಿಚ್ಚೆಯಂತೆ ಬರೆದು ಸಿದ್ಧಪಡಿಸಿದ ದಾಖಲೆಯೆ ನಿಜವಾದ ಚರಿತ್ರೆಯೆಂದು ಭಾವಿಸಿ, ನಮ್ಮ ನಡುವೆ ಇರಬಹುದಾದ ವಾಸ್ತವ ಚರಿತ್ರೆಯನ್ನು ಲೆಕ್ಕಿಸದೆ ತಿರಸ್ಕಾರಕ್ಕೆ ಗುರಿಪಡಿಸಿದ್ದೇವೆ.

‘ಹಿತ್ತಲಗಿಡ ಮದ್ದಲ್ಲ’ ಎಂಬ ಮನಸ್ಥಿತಿಯು ಒಂದು ಕಾಲದಲ್ಲಿ ಮನೆ ಮಾಡಿಕೊಂಡಿತ್ತು. ಇದಕ್ಕೆ ಕಾರಣವೆಂದರೆ, ಈ ಪ್ರಕಾರದ ಸಾಹಿತ್ಯಕ್ಕೆ ಯಾವುದೇ ಮನ್ನಣೆ ಇಲ್ಲ ಎಂಬುದು ಬಹುತೇಕರ ನಂಬಿಕೆಯಾಗಿತ್ತು. ಆದರೆ ಇಂದು ಪಾಶ್ಚಿಮಾತ್ಯ ವಿಚಾರಧಾರೆಗಳ ಪ್ರಭಾವ ಹಾಗೂ ಕೆಲವು ವಿಶ್ವವಿದ್ಯಾಲಯಗಳು ಕೈಗೊಂಡಿರುವ ಅಲಕ್ಷಿತ ಸಮುದಾಯ ಕೇಂದ್ರಿತ (ಸಬಾಲ್ಟ್ರನ್) ಅಧ್ಯಯನದ ಫಲವಾಗಿ ಇಂದು ಗ್ರಾಮೀಣ ಬದುಕಿನಲ್ಲಿರುವ ಮೌಖಿಕ ಸಾಹಿತ್ಯದ ಬಗ್ಗೆ ಹೆಚ್ಚು ಒಲವುಗಳು ಬೆಳೆಯಲಾರಂಭಿಸಿವೆ. ಇದರಿಂದಾಗಿ ಮೌಖಿಕ ಚರಿತ್ರೆಯನ್ನು ಪ್ರಮುಖ ನೆಲೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ.

ಗ್ರಾಮೀಣ ಜನತೆಯು ತಮ್ಮದೆ ಆದ ಬದುಕನ್ನು ಕಟ್ಟಿಕೊಂಡು, ತಮ್ಮ ಬದುಕಿನ ಬವಣೆಗಳನ್ನು ಮೌಖಿಕ ಸಾಹಿತ್ಯದಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ. ಇಂತಹ ಗ್ರಾಮೀಣ ಬದುಕಿನಲ್ಲಿ ಅಂತರ್ಗತವಾಗಿರುವ ಚರಿತ್ರೆಯೊಂದನ್ನು ತಮ್ಮ ಸಾಹಿತ್ಯದಲ್ಲಿ ವ್ಯಕ್ತಪಡಿಸುವ ಜಾನಪದ ಹಾಡುಗಾರ್ತಿಯರಲ್ಲಿ ಕಂದಗಲ್ಲು ಓಬಕ್ಕನವರು ಒಬ್ಬರಾಗಿದ್ದಾರೆ.

ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದಲ್ಲಿ ನೆಲೆಸಿರುವ ಓಬಕ್ಕ ಸುಮಾರು ನೂರು ವರ್ಷಗಳ ಗಡಿಯಲ್ಲಿದ್ದಾರೆ. ತಮ್ಮ ಬದುಕಿನ ಒಂದು ಭಾಗವಾಗಿ ಸೋಬಾನೆ ಪದಗಳನ್ನು ಮೌಖಿಕವಾಗಿ ಹಾಡಿಕೊಂಡು ಬಂದ ಇವರು, ಜನಪದ ಸಾಹಿತ್ಯದ ಗಣ ಯನ್ನು ತಮಗರಿವಿಲ್ಲದಂತೆ ಕಾಪಾಡಿಕೊಂಡು ಬಂದಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಮುಂದುವರೆದುಕೊಂಡು ಬಂದಿರುವ ಈ ಪ್ರಕಾರವು ಇಂದಿನ ಜಾಗತಿಕ ಭರಾಟೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳುವ ಹಂತಕ್ಕೆ ಬಂದು ನಿಂತಿದೆ.

ಓಬಕ್ಕನಿಗೆ ತಾನು ಕಾಪಾಡಿಕೊಂಡು ಬಂದಿರುವ ಈ ಸಾಹಿತ್ಯದ ಸೊಬಗನ್ನು ತನ್ನ ಮುಂದಿನ ಪೀಳಿಗೆಗೂ ಕಲಿಸಬೇಕೆಂಬ ಹಂಬಲವಿದೆ. ಆದರೆ ಇಂದಿನ ಜಾಯಮಾನದ ಮನಸುಗಳಿಗೆ ಇದು ವಲ್ಲದ ತುತ್ತಾಗಿದ್ದು, ನಮ್ಮ ಹೆಣ್ಣು ಮಕ್ಕಳು ಸಿನಿಮಾ ಧಾರಾವಾಹಿಗೆ ಜೋತುಬಿದ್ದಿರುವುದರ ಫಲವಾಗಿ ಸತ್ವಯುತವಾದ ತಮ್ಮ ಮನೆಯ ಸಾಹಿತ್ಯದ ಸೊಬಗನ್ನು ಹೊರಹಾಕಿ, ಅನ್ಯ ಸಂಸ್ಕಕೃತಿಯ ಅನುಕರಣೆ ಮತ್ತು ಸ್ವೀಕಾರದ ಕಾಲಘಟ್ಟದಲ್ಲಿದ್ದೇವೆ. ಇದಕ್ಕೆ ಪ್ರಮುಖವಾದ ಕಾರಣ ನಮ್ಮ ಸಂಸ್ಕಕೃತಿ, ಆಚಾರ, ವಿಚಾರಗಳಲ್ಲಿರುವ ಮೌಲ್ಯಗಳ ತಿಳುವಳಿಕೆಯ ಕೊರತೆಯು ಒಂದಾಗಿದೆ.

ಓಬಕ್ಕನಲ್ಲಿ ನೆಲೆಯೂರಿರುವ ಮೌಖಿಕ ಸಾಹಿತ್ಯದ ಸಾಮಥ್ರ್ಯವನ್ನು ಕುರಿತು ವಿಚಾರಿಸಿದಾಗ ನನಗೆ ದನಿಗೆ ಜೊತೆಗೂಡಿಸುವವರು ಸಿಕ್ಕರೆ ರಾತ್ರಿಯಿಡಿ ನಿರಂತರವಾಗಿ ತಾನು ಕಲಿತಿರುವ ಪದಗಳನ್ನು ಹಾಡುವುದಾಗಿ ಧೈರ್ಯದಿಂದ ಸವಾಲು ಹಾಕುತ್ತಿದ್ದರು. ಓಬಕ್ಕ ನೂರು ವರ್ಷದ ಆಜುಭಾಜಿನಲ್ಲಿದ್ದರೂ ತುಂಬು ಕ್ರಿಯಾಶೀಲತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ, ಇಂದಿನ ಮಹಿಳೆಯರು ತಮ್ಮ ಮನೆಯಲ್ಲಿ ಮಾಡುವಂತಹ ಸಣ್ಣಪುಟ್ಟ ಕಸೂತಿಯಂತಹ ಕೆಲಸಗಳನ್ನು ಅನುಕರಣೆಯಿಂದ ಕಲಿತು ವಿವಿಧ ಬಗೆಯ ಕಸೂತಿಯ ವಸ್ತುಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.

ಸುಮಾರು ಮೂವತ್ತನೇ ವಯಸ್ಸಿನಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಓಬಕ್ಕ ಬದುಕನ್ನು ಧೈರ್ಯವಾಗಿ ಎದುರಿಸುವ ಎದೆಗಾರಿಕೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಓಬಕ್ಕನಿಗೆ ತಾನು ಕಲಿತಿರುವ ಪದಗಳನ್ನು ಇಂದು ಪ್ರದರ್ಶಿಸುವುದಕ್ಕೆ ಹಲವಾರು ಅಡೆತಡೆಗಳಿವೆ. ಅವುಗಳಲ್ಲಿ ಒಂದು, ತಾನು ವಂಶಪಾರಂಪರ್ಯವಾಗಿ ಉಳಿಸಿಕೊಂಡು ಬಂದಿರುವ ಪದಗಳನ್ನು ಹಾಡುವುದಕ್ಕೆ ದನಿಗೂಡಿಸುವಂತಹ ಸಮಾನ ಮನಸ್ಕರ ಕೊರತೆಯು ಒಂದಾಗಿದೆ. ಎರಡು, ನೂರರ ಗಡಿಯಲ್ಲಿರುವ ಇವರು ದನಿ ಎತ್ತಿ ಹಾಡುವಷ್ಟು ಸಾಮಥ್ರ್ಯವನ್ನು ಕಳೆದುಕೊಂಡಿದ್ದು, ಹೆಚ್ಚು ಸಮಯ ಹಾಡುವುದಕ್ಕೆ ಇವರ ದನಿಯಲ್ಲಿ ಸಾಮಥ್ರ್ಯವಿಲ್ಲ. ಹೀಗಾಗಿ ಇವರ ದನಿಯಲ್ಲಿ ನಡುಕವಿದೆ.

ಇದರಿಂದ ಇಂದು ಈ ಪದಗಳನ್ನು ಹಾಡುವುದಕ್ಕೆ ಅಡಚಣೆ ಉಂಟಾಗುತ್ತದೆ. ಮೂರು, ಇವರಿಗೆ ಪ್ರೊತ್ಸಾಹ ನೀಡಿ ಇವರ ಪದಗಳ ಮಹತ್ವವನ್ನು ಗುರುತಿಸುವವರ ಕೊರತೆಯಿದೆ. ನಾಲ್ಕು, ಇವರಲ್ಲಿನ ಈ ಸಾಹಿತ್ಯವನ್ನು ಆಸಕ್ತಿಯಿಂದ ತಿಳಿಯಬೇಕೆಂಬ ಹಂಬಲವುಳ್ಳವರ ಎದುರು ಹಾಡುವುದಕ್ಕೆ ಇವರಿಗೆ ಮುಜುಗರವಿದೆ. ಇದಕ್ಕೆ ಕಾರಣ ಇಂದಿನ ಕಾಲದಲ್ಲಿ ನಾವು ಹಾಡಿಕೊಂಡು ಬಂದಿರುವ ಹಾಡು (ಪದ)ಗಳಿಗೆ ಬೆಲೆಯಿಲ್ಲ ಎಂಬ ಕೀಳರಿಮೆಯ ಭಾವವನ್ನು ತಮ್ಮಲ್ಲಿ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಈ ಪದಗಳನ್ನು ಸಂಗ್ರಹಿಸುವುದು ಹಾಗೂ ಇವರಿಗೆ ಸಂಗ್ರಹದ ಅಗತ್ಯತೆಯ ಅರಿವು ಮೂಡಿಸುವುದು ಕೂಡ ತ್ರಾಸದಾಯಕವಾದ ಕೆಲಸವಾಗಿದೆ.

ಇದು ಇಂದು ಈ ಮೌಖಿಕ ಸಾಹಿತ್ಯವನ್ನು ಕಡೆಗಣಿಸಿ ಆಧುನಿಕ ಸಂಗೀತ ಪ್ರಕಾರಕ್ಕೆ ಹೆಚ್ಚು ಜೋತುಬಿದ್ದಿರುವ ಪರಿಣಾಮದಿಂದಾಗಿ ಇಂತಹ ಸಾಹಿತ್ಯ ಪ್ರಕಾರವು ಇಂದು ಅವನತಿಯ ಅಂಚಿನಲ್ಲಿದೆ. ಓಬಕ್ಕನಂತಹ ಎಷ್ಟೋ ಜನಪದರಲ್ಲಿ ಕರಗತವಾಗಿರುವ ಸಾಹಿತ್ಯದ ಸೊಬಗು ಅಳಿವಿನಂಚಿನಲ್ಲಿದೆ.

ನಾನು ನನ್ನ ಬಾಲ್ಯದ ದಿನಗಳಿಂದಲೂ ಓಬಕ್ಕನನ್ನು ಹತ್ತಿರದಿಂದ ನೋಡಿದವನು. ಆದರೆ ನನಗೆ ಓಬಕ್ಕನ ಸಾಹಿತ್ಯದ ಮಹತ್ವ ದರ್ಶನವಾಗಿದ್ದು ನಾನು ಸಂಶೋಧನೆಗೆ ತೊಡಗಿಕೊಂಡ ಬಹುದಿನಗಳ ನಂತರ. ನನಗೆ ಓಬಕ್ಕ ಸಂಬಂಧದಲ್ಲಿ ಅಜ್ಜಿಯಾಗಬೇಕು ಎಂದುಕೊಂಡಿದ್ದೆ. ಆದರೆ ಓಬಕ್ಕನ ಪ್ರಕಾರ ನಾನು ಓಬಕ್ಕನಿಗೆ ತಮ್ಮನಾಗಿದ್ದೆ.

ನೂರು ವರ್ಷದ ಗಡಿಯಲ್ಲಿರು ಓಬಕ್ಕನಿಗೂ ಮೂವತ್ತರ ಗಡಿಯಲ್ಲಿರುವ ನನಗೂ ಅಕ್ಕ-ತಮ್ಮನ ಸಂಬಂಧ ಹೇಗೆ ಸಾಧ್ಯ ಎಂಬುದು ನನಲ್ಲಿ ಗೊಂದಲವನ್ನು ಮೂಡಿಸಿತ್ತು. ಆದರೆ ಓಬಕ್ಕ ಕಟ್ಟಿಕೊಡುವ ವಂಶವೃಕ್ಷದ ಪ್ರಕಾರ ಆಕೆಗೆ ನಾನು ತಮ್ಮನೆ ಆಗಿದ್ದೆ. ಈ ಕಾರಣದಿಂದಾಗಿ ನೂರರ ಪ್ರಾಯದ ಓಬಜ್ಜಿಯನ್ನು ಇಲ್ಲಿ ಓಬಕ್ಕ ಎಂಬುದಾಗಿಯೇ ಸಂಬೋಧಿಸುತ್ತಿದ್ದೇನೆ. ಓಬಕ್ಕನಲ್ಲಿ ಕರಗತವಾಗಿರುವ ಪದಗಳನ್ನು ಸಂಗ್ರಹ ಮಾಡುವಾಗ ನಾನು ಸಂಶೋಧನೆ ಮಾಡುತ್ತಿದ್ದೇನೆ. ನೀನು ಕಲಿತಿರುವ ಪದಗಳನ್ನು ಹಾಡು ಎಂದರೆ ಓಬಕ್ಕ ಹೇಳುವಂತಿರಲಿಲ್ಲ. ಇದಕ್ಕೆ ಕಾರಣ ತನ್ನ ಕಾಲದ ಪದಗಳು (ಸಾಹಿತ್ಯ) ಮಹತ್ವ ಕಳೆದುಕೊಂಡಿದೆ ಎಂಬ ಆತಂಕದಿಂದಲೊ ಅಥವಾ ಬದಲಾದ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮಾನವ ಸಹಜ ಗುಣದಿಂದಲೊ ಓಬಕ್ಕ ಆಧುನಿಕ ಬದುಕಿನಲ್ಲಿ ಬೆರೆತುಕೊಂಡಿರುವ ಸಿನಿಮಾ ಮತ್ತು ಧಾರವಾಹಿ ಪ್ರಪಂಚಕ್ಕೆ ತನ್ನನ್ನು ತೆರೆದುಕೊಂಡಿದ್ದಳು.

ಇಂತಹ ಸಂದರ್ಭದಲ್ಲಿ ಓಬಕ್ಕನನ್ನು ಆಕೆಯ ಸಾಹಿತ್ಯ ಜಗತ್ತಿಗೆ ಕೊಂಡೊಯ್ಯಲು ವಿವಿಧ ತೆರನಾದ ಕಸರತ್ತುಗಳನ್ನು ಪ್ರದರ್ಶಿಸಬೇಕಾಯಿತು. ಕೊನೆಗೆ ನಿನಗೆ ವಯಸ್ಸಾಗಿದೆ, ನಿನ್ನ ಕಾಲದಲ್ಲಿ ಹಾಡುತ್ತಿದ್ದ ಪದಗಳನ್ನೆಲ್ಲ ಮರೆತಿರುವೆ. ನಿನಗೆ ‘ಅರವುಮರುವು’ ಎಂದಾಗ ತನ್ನ ಸಾಮಥ್ರ್ಯವನ್ನು ಪ್ರದರ್ಶಿಸುವ ನೆಲೆಯಲ್ಲಿ ಒಂದೊಂದಾಗಿಯೇ ತನ್ನ ಮನದ ಮೂಲೆಯಲ್ಲಿ ಕೇಂದ್ರಿಕರಿಸಿಕೊಂಡಿದ್ದ ಪದಗಳನ್ನು ಹಾಡುವ ಪ್ರಯತ್ನ ಮಾಡಿದರು.

ಓಬಕ್ಕನ ದನಿಯ ಸಮಸ್ಯೆಯನ್ನರಿತ ನಾನು ಅವರ ಬಳಿ ಒಂದೊಂದೆ ಸಾಲುಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಬರೆಯಲು ಪ್ರಾರಂಭಿಸಿದೆ. ಒಂದು ಪದವನ್ನು ಸಂಪೂರ್ಣವಾಗಿ ಸಂಗ್ರಹಿಸಿದ ತರುವಾಯ ಅದರ ರಾಗ ಮತ್ತು ಲಯವನ್ನು ತಿಳಿಯುವ ಕಾತುರದಿಂದ ನಿಧಾನವಾಗಿ ಅವರಿಂದಲೇ ಪದಗಳನ್ನು ಹಾಡಿಸಿ, ಅವರ ಹಾಡಿನ ರಾಗವನ್ನು ಆಧುನಿಕ ವಿದ್ಯುನ್ಮಾನಗಳಲ್ಲಿ ಸಂಗ್ರಹಿಸಲು ಪ್ರಾರಂಭಿಸಿದೆ.

ಹೀಗೆ ಸಂಗ್ರಹಿಸಿದ ಪದಗಳಲ್ಲಿ ಬಸವಣ್ಣನ ಬದುಕಿಗೆ ಸಂಬಂಧಿಸಿದ ಕೆಲವು ಪದಗಳನ್ನು ಓಬಕ್ಕ ಹಾಡಿದ್ದರು. ನಾವು ಈಗಾಗಲೇ ಚರಿತ್ರೆಯ ಪಠ್ಯಗಳಲ್ಲಿ ಓದಿರುವುದಕ್ಕಿಂತ ಭಿನ್ನವಾದ ದರ್ಶನವೊಂದು ಓಬಕ್ಕನ ಪದಗಳಲ್ಲಿ ಕಂಡುಬಂದಿತು. ಆದ್ದರಿಂದ ಈ ನೆಲೆಯ ಜಾಡುಹಿಡಿದು ಜನಪದರ ಬದುಕಲ್ಲಿ ಕಂಡುಬರುವ ಸಮಾಜ ಸುಧಾರಕನಾದ ಬಸವಣ್ಣನ ಬದುಕನ್ನು ಅನಾವರಣಗೊಳಿಸುವ ನೆಲೆಯಲ್ಲಿ ‘ಓಬಕ್ಕನ ಬಸವದರ್ಶನ’ ಎಂಬ ಈ ಲೇಖನವನ್ನು ರಚಿಸುವ ಪ್ರಯತ್ನವನ್ನು ಇಲ್ಲಿ ಕೈಗೊಳ್ಳಲಾಗಿದೆ.

–2–

ಪ್ರಸ್ತುತ ಲೇಖನದಲ್ಲಿ ಓಬಕ್ಕ ಹಾಡಿದ ಸೋಬಾನೆ ಪದಗಳ (ಹಾಡು) ಮೂಲಕ ಜನಪದರು ಅಥವಾ ಸಾಮಾನ್ಯ ಜನತೆಯು ಸಮಾಜ ಸುಧಾರಕನಾದ ಬಸವಣ್ಣನನ್ನು ಕಾಣುವ ಬಗೆಯನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗುವುದು. ನಮ್ಮ ಜನಪದ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ತಳವರ್ಗದ ಜನತೆಯ ಪರವಾಗಿ ಹೋರಾಡಿದ ಬಸವಣ್ಣನನ್ನು ಶಿವನ ಪ್ರತಿರೂಪವಾಗಿ ಸ್ವೀಕರಿಸಲಾಗಿದೆ.

ಇಲ್ಲಿ ಶಿವ ಬೇರೆಯಲ್ಲ, ಬಸವಣ್ಣ ಬೇರೆಯಲ್ಲ. ಇದಕ್ಕೆ ಕಾರಣ ಈ ನಾಡಿನ ಮೂಲ ಸಂಸ್ಕೃತಿಯು ಶೈವ ನೆಲೆಯದಾಗಿರುವುದು. ಹೀಗಾಗಿ ನಮ್ಮ ಜನಪದರು ಶಿವನ ಆರಾಧಕರಾಗಿ ಕಂಡುಬರುತ್ತಾರೆ. ತಮ್ಮ ಸಮುದಾಯದ ಜನತೆಯ ಪರವಾಗಿ ಹೋರಾಟ ನಡೆಸಿದ ಕ್ರಾಂತಿಕಾರರನ್ನು ಶಿವನ ಪ್ರತಿರೂಪವಾಗಿ ಕಾಣುತ್ತಾರೆ. ಆದ್ದರಿಂದ ಇಲ್ಲಿ ಶಿವ ಮತ್ತು ಬಸವಣ್ಣ ಒಂದೆಯಾಗಿ ಕಂಡುಬರುತ್ತಾರೆ. ತಳಸಮುದಾಯದ ಪ್ರಗತಿಗಾಗಿ ಬಸವಣ್ಣ ತನ್ನ ಹೋರಾಟವನ್ನು ನಡೆಸಿದ್ದು ಕ್ರಿ.ಶ 12ನೇ ಶತಮಾನದಲ್ಲಿ. ಆದರೆ ಬಸವಣ್ಣನ ಮೂಲ ಆಶಯಗಳನ್ನು ಸ್ಥಾಪಿತ ಹಿತಾಸಕ್ತಿಗಳು ಅವರ ಇಚ್ಚಾನುಸಾರವಾಗಿ ಬಳಸಿಕೊಂಡು, ಆತನ ವಿಚಾರಗಳ ಅಡಿಯಲ್ಲಿ ಮೂಲಭೂತವಾದ ಧರ್ಮವೊಂದನ್ನು ಸ್ಥಾಪಿಸಿಕೊಂಡು ಬಂದಿವೆ.

ಈ ಸ್ಥಾಪಿತ ಮೌಲ್ಯಗಳಿಂದಾಗಿ ಬಸವಣ್ಣನ ಉದಾರವಾದಿ ನಿಲುವುಗಳನ್ನು ಇಂದು ಹುಡುಕುವುದು ಕೂಡ ಸಾಧ್ಯವಾಗದಷ್ಟು ದೂರ ಸರಿದಿವೆ. ಆದರೆ ತನ್ನ ಹಿತಕ್ಕಾಗಿ ಹೊರಾಡಿದ ಗುರುವನ್ನು ನಿಜದ ನೆಲೆಯಲ್ಲಿ ಆರಾಧಿಸಿಕೊಂಡು ಬಂದಿರುವುದನ್ನು ಜನಪದ ಪರಂಪರೆಯಲ್ಲಿ ಇಂದಿಗೂ ಗುರುತಿಸಬಹುದಾಗಿದೆ.
ಜನಪದರು ಬಸವಣ್ಣನನ್ನು ತಮ್ಮ ವಿಮೋಚನೆಗಾಗಿ ಹೋರಾಡಿದ ದೇವರೆಂದು ಆರಾಧಿಸುವುದು ಮಾತ್ರವಲ್ಲ, ಬಸವಣ್ಣನ ಸಂಕಷ್ಟಗಳನ್ನು ತಮ್ಮ ನೋವುಗಳೆಂಬಂತೆ ಆತನ ನೋವುಗಳಿಗೆ ಮಿಡಿಯುತ್ತಾ ಬಂದಿದ್ದಾರೆ. ಈ ಮನೋಭಾವವು ಜನಪದರಲ್ಲಿನ ಹೃದಯ ವೈಶಾಲ್ಯವನ್ನು ಕಟ್ಟಿಕೊಡುತ್ತದೆ. ಇವರ ಈ ತುಡಿತ ಯಾವುದೇ ಸ್ವಾರ್ಥದಿಂದ ಕೂಡಿದ್ದಲ್ಲ, ಬದಲಾಗಿ ಇಲ್ಲಿ ಸಾಮಾಜಿಕ ಕಳಕಳಿ ಕಂಡುಬರುತ್ತದೆ.

ಶಿಷ್ಟ ಪರಂಪರೆಯು ಬಸವಣ್ಣನ ಮಹಿಮೆಯನ್ನು ತಮ್ಮ ಇಚ್ಚಾನುಸಾರ ವರ್ಣನಾತ್ಮಕ ನೆಲೆಯಲ್ಲಿ ಚಿತ್ರಿಸಿಕೊಂಡು, ಹಲವಾರು ಕಡೆಗಳಲ್ಲಿ ಪ್ರಕ್ಷಿಪ್ತಗಳನ್ನು ಉಂಟುಮಾಡಿದೆ. ಇದಕ್ಕೆ ಕಾರಣ ಸ್ಥಾಪಿತ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಕಾಪಾಡುವ ಮೂಲಕ ಅಸಮಾನತೆಯ ಸಾಮಾಜಿಕ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಂದಿರುವುದಾಗಿದೆ.

ಇಂತಹ ಪ್ರಕ್ಷಿಪ್ತ ಮಾದರಿಗಳನ್ನು ಹಲವಾರು ಶಿಷ್ಟ ಸಾಹಿತ್ಯ ಕೃತಿಗಳಲ್ಲಿ ಗುರುತಿಸಬಹುದಾಗಿದೆ. ಆದರೆ ಇದಕ್ಕೆ ಪರ್ಯಾಯ ನೆಲೆಯಲ್ಲಿ ಸಾಮಾನ್ಯ ಜನರ ಬದುಕಿಗಾಗಿ ಹೋರಾಡಿದ ಬಸವಣ್ಣನ ನೋವಿಗೆ ಜನಪದರು ತುಡಿಯುತ್ತ ಬಂದಿರುವ ಕೆಲವು ಸೋಬಾನೆ ಪದಗಳು ಈ ಮುಂದಿನಂತಿವೆ.

ಯಾರೇನೆಂದರು ನಿನಗೆ ಸದ್ಗುರು ದೇವ ||
ಬಾರ ದ್ರೋಹಿರಿ ಮನಗೆ
ಸದ್ಗರು ದೇವ | ನಿನಗ್ಯಾರೇನೆಂದರು ||
ಸಣ್ಣನಾಗಲಿ ಬಾಲ | ಲೋಲನಾಗಲಿ ಗುಣ
ಶೀಲನಾಗಲಿ ಮುಕ್ತಿ | ಕೀಲು ತೋರಿದೆ ಗುರುವೆ
ಸದ್ಗುರು ದೇವ | ನಿನಗ್ಯಾರೇನೆಂದರು ||
ಚಾರನೆಂಬುವರೇನು | ಸೂರನೆಂಬುವರೇನು
ಪರಮಾತ್ಮಕ ಸುವ್ವಿ
ಸದ್ಗುರು ದೇವ | ಯಾರೇನೆಂದರು ನಿನಗೆ ||
ಧರೆಯೊಳು ಕೂಡಲಿ | ಪುರದೊಳು ನೆಲೆಸಿರುವ
ವರಶ್ರೀಸಂಗಮ ಬಸವೇಸ್ಪುರಗೆ | ಯಾರೇನೆಂದರು
ಸದ್ಗುರು ದೇವ | ಯಾರೇನೆಂದರು ನಿನಗೆ ||

ಈ ಜನಪದ ಸಾಹಿತ್ಯವು ಬಸವಣ್ಣನ ಅಂತಿಮ ದಿನದ ಬದುಕಿನ ಸಂಕಷ್ಟಗಳನ್ನು ಅನಾವರಣಗೊಳಿಸುತ್ತದೆ. ಇಲ್ಲಿ ಬಸವಣ್ಣ ಮೌನ ತಾಳಿರುವುದಕ್ಕೆ ಹಲವಾರು ಕಾರಣಗಳಿವೆ. ತನ್ನ ಹೋರಾಟದ ಭಕ್ತಿಯ ಮಾರ್ಗವನ್ನು ಕುರಿತು ಬಸವಣ್ಣ ಹೇಳುವ ‘ಭಕ್ತಿಯೆಂಬುದು ಮಾಡಬಾರದು ಕಾಣ| ಗರಗಸವಿದ್ದಂತೆ’ ಎಂಬ ಮಾತು ಆತನ ಬದುಕಿನ ಸಂಕಷ್ಟಗಳನ್ನು ಕಟ್ಟಿಕೊಡುತ್ತದೆ.

ಇಲ್ಲಿ ತನ್ನ ಹೋರಾಟದ ಹಾದಿಯಲ್ಲಿ ಈತನು ಹಲವಾರು ಬಗೆಯ ನೋವನ್ನು ಅನುಭವಿಸಿರುತ್ತಾನೆ. ಒಂದೆಡೆ ಬ್ರಾಹ್ಮಣ್ಯವನ್ನು ಧಿಕ್ಕರಿಸುವ ಮೂಲಕ ಶೂದ್ರ ಸಮುದಾಯದ ಸಮಾನತೆಗಾಗಿ ಹೋರಾಟ ನಡೆಸುತ್ತಾನೆ. ಮತ್ತೊಂದೆಡೆ ಸಮಾಜದ ಪ್ರಬಲ ವರ್ಗವಾದ ಪುರೋಹಿತಶಾಹಿಯನ್ನು ಎದುರು ಹಾಕಿಕೊಳ್ಳುತ್ತಾನೆ.

ಈ ಸಂದರ್ಭದಲ್ಲಿ ರಾಜಾಶ್ರಯದಲ್ಲಿದ್ದ ಬಸವಣ್ಣನಿಗೆ ತಳಸಮುದಾಯದ ಪರವಾದ ಹೋರಾಟ ಮಾಡುವುದಕ್ಕೆ ಸ್ವತಂತ್ರ ಅಸ್ತಿತ್ವ ಇರಲಿಲ್ಲ. ಇಲ್ಲಿ ರಾಜನ ಆಜ್ಞೆಯನ್ನು ತಿರಸ್ಕರಿಸಿದರೆ ತನ್ನ ಪದವಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಕಠಿಣ ಶಿಕ್ಷೆಗೂ ಗುರಿಯಾಗಬೇಕಾದ ಸಂಕಷ್ಟದ ದಿನಗಳು ಬಸವಣ್ಣನ ಮುಂದಿದ್ದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಾನು ಕಟ್ಟಿದ ಸಮಾನತೆಯ ಆಶಯಹೊತ್ತ ಅನುಭವ ಮಂಟಪವನ್ನು ಸಮಾನ ನೆಲೆಯಲ್ಲಿ ಮುನ್ನಡೆಸಬೇಕಾಗಿತ್ತು. ಇಂತಹ ಚಾರಿತ್ರಿಕ ಒತ್ತಡದ ಪರಿಸ್ಥಿತಿಯಲ್ಲಿನ ಬಸವಣ್ಣನ ಬದುಕನ್ನು ಕುರಿತು ಜನಪದರು ಆತನ ನೋವಿಗೆ ಮಿಡಿಯುತ್ತ ಬಂದಿದ್ದಾರೆ.

ಜಾನಪದವು ಶಿಷ್ಟ ಸಾಹಿತ್ಯ ಪರಂಪರೆಯಂತೆ ಬಸವಣ್ಣನ ಬದುಕನ್ನು ಹಾಗೂ ಆತನ ಹೋರಾಟದ ನೆಲೆಗಳನ್ನು ದೈವಾಂಶ ಸಂಭೂತ ನೆಲೆಯಲ್ಲಿ ವೈಭವಿಕರಿಸುವುದಿಲ್ಲ. ಜನಪದ ಪರಂಪರೆಯಲ್ಲಿ ಯಾವುದೇ ವೈಭವವಿಲ್ಲದೆ ಆತನ ವಾಸ್ತವ ಬದುಕನ್ನು ತಮ್ಮ ಮೌಖಿಕ ಸಾಹಿತ್ಯದಲ್ಲಿ ಅನಾವರಣಗೊಳಿಸುತ್ತಾರೆ. ಜನಪದರು ಬಸವಣ್ಣನನ್ನು ಶಿಷ್ಟ ಸಾಹಿತ್ಯದಿಂದ ರಚನೆಯಾದ ಚರಿತ್ರೆಯ ಮೂಲಕ ಅಧ್ಯಯನ ಮಾಡಿ ಕಂಡುಕೊಂಡವರಲ್ಲ. ಬದಲಾಗಿ ಕಾಲದಿಂದ ಕಾಲಕ್ಕೆ ಹರಿದುಬಂದ ಮೌಖಿಕ ಪರಂಪರೆಯಿಂದ ಆತನನ್ನು ಕಂಡುಕೊಂಡವರು.

ಹೀಗಾಗಿ ಇಲ್ಲಿ ಆತನ ನೋವು ನಲಿವುಗಳನ್ನು ಯಥಾ ಪ್ರಕಾರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ‘ಯಾರೇನೆಂದರು ನಿನಗೆ ಸದ್ಗುರು ದೇವ’ ಮತ್ತು ‘ಬಾರ ದ್ರೋಹಿರಿ ಮನಗೆ’ ಎಂಬ ನುಡಿಗಳು ಜನಪದರು ಕಂಡುಕೊಂಡಿರುವ ಬಸವ ದರ್ಶನವನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಶಿಷ್ಟ ಸಾಹಿತ್ಯವು ಕಟ್ಟಿಕೊಡುವ ಚರಿತ್ರೆಗಿಂತ ಭಿನ್ನವಾದ ಚರಿತ್ರೆಯೊಂದು ನಮ್ಮ ಜಾನಪದರ ಬದುಕಿನೊಳಗೆ ಅಂತರ್ಗತವಾಗಿದೆ.

ಜನಪದರು ಬಸವಣ್ಣನ ನೋವು ನಲಿವುಗಳನ್ನು ಸಮಾನ ನೆಲೆಯಲ್ಲಿ ಚಿತ್ರಿಸಿಕೊಂಡು ಬಂದಿದ್ದಾರೆ. ಇಲ್ಲಿ ಆತನ ಕಲ್ಯಾಣ ಹಾಗೂ ಸರಸ ಸಲ್ಲಾಪಗಳು ಮಾನವ ಸಹಜ ನೆಲೆಯಲ್ಲಿ ವ್ಯಕ್ತವಾಗುತ್ತವೆ. ಬಸವಣ್ಣ ಮತ್ತು ಗಂಗಾಭಿಕೆಯ ಕಲ್ಯಾಣದ ಸಂದರ್ಭವನ್ನು ಹಾಗೂ ಅಲ್ಲಿನ ಸಲ್ಲಾಪದ ಕ್ಷಣಗಳನ್ನು ತಮ್ಮ ಬದುಕಿನೊಂದಿಗೆ ಸಮೀಕರಿಸಿಕೊಂಡು ಬಂದಿರುವುದನ್ನು ನಾವು ಜಾನಪದ ಪರಂಪರೆಯಲ್ಲಿ ಮಾತ್ರ ಗುರುತಿಸಬಹುದಾಗಿದೆ.

ಜನಪದರು ನಿರಂತರವಾಗಿ ಕಾಲದಿಂದ ಕಾಲಕ್ಕೆ ತಾವು ಆಚರಿಸಿಕೊಂಡು ಬಂದಿರುವ ಸಂಪ್ರದಾಯ, ಆಚರಣೆ, ಹಾಸ್ಯ, ವಿನೋದವನ್ನು ಬಸವಣ್ಣನ ಕಲ್ಯಾಣದೊಂದಿಗೆ ಸಮೀಕರಿಸಿಕೊಂಡು ಪದ ಕಟ್ಟಿ ಹಾಡುತ್ತಾ ಬಂದಿದ್ದಾರೆ. ಅದು ಓಬಕ್ಕನ ಸೋಬಾನೆ ಪದಗಳಲ್ಲಿ ಹೀಗೆ ವ್ಯಕ್ತವಾಗಿದೆ.

ಗುರುವಿನ ಮನೆಯಾಗೆ
ಅರುವಿನ ಲಯದಾಗೆ
ಅರುವಿನ ಮಂಟಪದ ಮನೆಯಾಗೆ
ಕರುಣ ಕನೆಂದುಕರೆವರು ಸೋಬಾನೆ||
ಬಸವಯ್ಯ ಶ್ರೀಗಂಗೆ
ಕುಶಲದಿಂ ಕರವಿಡಿದು | ಬಸವಣ್ಣ
ಬಂದು ಹಸೆಯಲ್ಲಿ ಕುಳಿತರು ಸೋಬಾನೆ||
ಪದ್ಮಲೋಚನೆ ಗಂಗೆ
ಎದ್ದು ಸೆರಗ ಬಿಗಿದು | ಮುದ್ದು ಬಸವಯ್ಯಗೆ
ಅರಿಶಿಣವ ಧರಿಸ್ಯಾಳೆ ಸೋಬಾನೆ ||
ಗಂಧ ಹಾಕುಸ್ತಿ ಹಿಡುಲಾಗ ಸೋಬಾನೆ
ಗಂಧ ಮೇಲಕ್ಕೆ ಎಳವುತ ಸೋಬಾನೆ
ಅಂದು ಆರುತಿಯಾ ಬೆಳಗುತ ಸೋಬಾನೆ
ಗಂಧ ಮೇಲಕ್ಕೆ ಎಳವುತ ಶ್ರೀಗಂಗೆ
ಬಂದು ಹಸೆಯಲ್ಲಿ ಕುಳಿತಳು ಸೋಬಾನೆ ||
ಬಸವಯ್ಯ ನೀನೊಮ್ಮೆ
ಎಣ್ಣೆ ಅರಿಶಿಣವ ಧರಿಸಪ್ಪ ಸೋಬಾನೆ
ಬಸವಯ್ಯ ಗಂಧ ಹಾಕುಸ್ತಿ ಹಿಡುಲಾಗ
ಅಂದು ಆರುತಿಯಾ ಬೆಳಗುತ
ಬಂದು ಹಸೆಯಲ್ಲಿ ಕುಳಿತರು ಸೋಬಾನೆ ||
ಬಂದು ಹಸೆಯಲ್ಲಿ ಕುಳಿತರು ಬಸವಣ್ಣ
ಸಸಿಮುಖಿಯರೆಲ್ಲ ನಗುತಾರೆ ಸೋಬಾನೆ ||
ಶರ್ತೆಶ ಕೋಟಿಗೆ ವರ್ಕಾಳ ಸಲಹುತ
ನಿತ್ಯಗೆ ಪರಮ ವಿರಕ್ತನಿಗೆ | ಭೂಗಳಿಯ ಕರ್ತನಿಗೆ
ಜೀವ ಕಮ್ಯಾರ್ತನಿಗೆ ಸೋಬಾನೆ
ಇವ ಸದ್ಗುರು ಬಸವದೇವನಿಗೆ ಸೋಬಾನೆ ||
ಅಂತರಂಗನ ಪೇಟೆ ಸಂತೆಗೊಗನ ತಂಗಿ
ಸಿಂತಿಸುತ ಕೊಂಡೆ ರತುನಾವ ಸೋಬಾನೆ ||
ಸಿಂತುಸುತ ಕೊಂಡೆ ರತುನಾದ ಬೆಳಕಿಲಿ
ಕಾಂತೆ ಕೇಳಮ್ಮ ಕೌತುಕವ ಸೋಬಾನೆ ||
ರತುನಾದ ಬೆಳಕಲಿ ಕಾಂತೆ ಕೇಳಮ್ಮ
ಕೌತುಕವ ಶ್ರೀಗುರು ಬಸವಂಗೆ | ಶಿವನ ಕುಮಾರಂಗೆ
ನಾಗಭೂಷಣ ನಮಿತನಿಗೆ ಸೋಬಾನೆ ||
ಸದ್ಗುರು ಬಸವಯ್ಯ ದೇವನಿಗೆ
ಸತ್ಯ ಸದ್ಗುರುವಂಗೆ | ನಿತ್ಯಸುಳ್ಳಾಡಿ ದಿನಗಳಿದೆ
ಮತ್ತುಟ್ಟೊ ಬಾದೆ ಬಿಡದಮ್ಮ ಸೋಬಾನೆ ||

ಪ್ರಸ್ತುತ ದಿನಗಳಲ್ಲಿ ಸ್ಥಾಪಿತ ನೆಲೆಗೆ ತಳ್ಳಿರುವ ಬಸವಣ್ಣನನ್ನು ಒಂದು ಜಾತಿಯ ನಾಯಕನೆಂದು ಬಿಂಬಿಸುವ ಮೂಲಕ ಉಳಿದಂತ ಸಮುದಾಯಗಳು ‘ಇವ ನಮ್ಮವನಲ್ಲ’ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಬಸವಣ್ಣನ ಸುತ್ತ ಸುತ್ತುವರೆದಿರುವ ಮೂಲಭೂತವಾದ ಧೋರಣೆಯು ಪ್ರಮುಖ ಕಾರಣವಾಗಿದೆ. ಈ ಮೂಲಭೂತವಾದಿ ನೆಲೆಗಳು ಜೀವ ತಳೆಯುವುದು ಶಿಷ್ಟ ಸಮುದಾಯದಲ್ಲಿ ಮತ್ತು ಆಧುನಿಕ ಸಂದರ್ಭದ ಶಿಕ್ಷಿತ ಸಮುದಾಯದಲ್ಲಿ. ಆದರೆ ಈ ಅಸಮಾನತೆಯ ಧೋರಣೆಗಳು ಜನಪದರಲ್ಲಿ ವ್ಯಕ್ತವಾಗಿರುವುದು ಕಂಡುಬರುವುದಿಲ್ಲ. ಇದು ಜನಪದರಲ್ಲಿರುವ ವಿಶ್ವಮಾನವ ಪ್ರಜ್ಞೆಯನ್ನು ಅನಾವರಣಗೊಳಿಸುತ್ತದೆ. ಸಮಾಜದ ಒಳಿತಿಗಾಗಿ ನಿಸ್ವಾರ್ಥದಿಂದ ಹೋರಾಡಿದವರು ಯಾರೇ ಆಗಿರಲಿ, ಅವನು ಯಾವುದೇ ಜಾತಿ, ಸಮುದಾಯಕ್ಕೆ ಸೇರಿದ್ದರು ಸಹ ಅವನನ್ನು ತಮ್ಮ ನಾಯಕನೆಂದು, ದೈವವೆಂದು ಆರಾಧಿಸುತ್ತಾರೆ. ಈ ಕಾರಣದಿಂದ ಮೂಲತಃ ಬ್ರಾಹ್ಮಣನಾದ ಶಿವಶರಣ ಬಸವಣ್ಣನನ್ನು ಕೂಡ ಶಿವ ಸ್ವರೂಪಿಯಾಗಿ ಕಂಡುಕೊಡಿದ್ದಾರೆ. ಆತನ ನೋವು ನಲಿವುಗಳನ್ನು ತಮ್ಮ ನೋವು ನಲಿವುಗಳೊಂದಿಗೆ ಸಮೀಕರಿಸಿಕೊಂಡು ಪದಕಟ್ಟಿ ಹಾಡುತ್ತ ಬಂದಿದ್ದಾರೆ.
ಜಾನಪದರು ಸೃಷ್ಟಿಸಿಕೊಂಡು ಬಂದಿರುವ ಈ ಮೇಲಿನ ಹಾಡಿನಲ್ಲಿ ಬಸವಣ್ಣ ಎಲ್ಲಿಯೂ ರಾಜಪ್ರಭುತ್ವದ ಪ್ರತಿನಿಧಿಯಾಗಿ ಕಂಡುಬರುವುದಿಲ್ಲ.

ಜಾನಪದರ ಬದುಕಿನೊಳಗಿನ ಸಾಮಾನ್ಯ ವ್ಯಕ್ತಿಯಾಗಿ ಪ್ರತಿನಿಧಿಸುತ್ತಾನೆ. ಇಲ್ಲಿ ಬಸವಣ್ಣ ಮತ್ತು ಗಂಗಾಬಿಕೆಯರ ಕಲ್ಯಾಣವನ್ನು ಶಿವ ಮತ್ತು ಗಂಗೆಯರೊಂದಿಗೆ ಸಮೀಕರಿಸಿಕೊಂಡು ಬಂದಿದ್ದಾರೆ. ಇದು ಜನಪದ ಪರಂಪರೆಯಲ್ಲಿನ ವಿಶಿಷ್ಟ ದರ್ಶನವಾಗಿ ಕಂಡುಬರುತ್ತದೆ. ಶಿಷ್ಟ ಪರಂಪರೆಯು ಎಲ್ಲವನ್ನು ಹೊಡೆದು ನೋಡುವಂತಹ ಮೂಲಭೂತವಾದಿ ಗುಣಗಳನ್ನು ಸೃಷ್ಟಿಸುತ್ತ ಬಂದಿರುವ ಸಂದರ್ಭದಲ್ಲಿ, ಇದಕ್ಕೆ ಪರ್ಯಾಯವೆಂಬಂತೆ ಜನಪದ ಪರಂಪರೆಯು ಎಲ್ಲವನ್ನು ಸಮೀಕರಿಸಿಕೊಂಡು ಬಂದಿರುವುದನ್ನು ಈ ಪದಗಳಲ್ಲಿ ಗುರುತಿಸಬಹುದಾಗಿದೆ. ಇದು ಶಿಷ್ಟ ಪರಂಪರೆಗೆ ಜನಪದ ಪರಂಪರೆಯು ಒಡ್ಡುತ್ತ ಬಂದಿರುವ ಪ್ರತಿರೋಧದ ನೆಲೆಯೂ ಹೌದು. ಶಿಷ್ಟರು ಅಸಮಾನತೆಯ ವಿರುದ್ಧ ಹೋರಾಡಿದ ಬಸವಣ್ಣನ್ನು ಒಂದು ಜಾತಿ, ಸಮುದಾಯಕ್ಕೆ ಕೇಂದ್ರಿಕರಿಸುವ ಮೂಲಕ ಅನಾರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುತ್ತ ಬಂದಿದ್ದಾರೆ. ಆದರೆ ಜನಪದರು ಸಮಾಜ ಸುಧಾರಕ ಬಸವಣ್ಣನನ್ನು ಶಿವನೊಂದಿಗೆ ಸಮೀಕರಿಸುವ ಮೂಲಕ ಗುಪ್ತಗಾಮಿನಿಯಂತೆ ಆರೋಗ್ಯಕರವಾದ ಸಮಾಜವನ್ನು ಕಟ್ಟುತ್ತ ಬಂದಿದ್ದಾರೆ. ಹೀಗಾಗಿಯೆ ಇಂದಿಗೂ ಬಸವಣ್ಣ ತಳಸಮುದಾಯದ ಜನತೆಯ ಅಂತರಾಳದಲ್ಲಿ ನೆಲೆಯೂರಿದ್ದಾನೆ.

ಇದೇ ಪದ (ಹಾಡು) ದಲ್ಲಿ ಕೊನೆಯದಾಗಿ ಕಂಡುಬರುವ ಸಾಲು ಜನಪದರ ಸ್ವಾಮಿ ನಿಷ್ಠೆಯನ್ನು ಎತ್ತಿಹಿಡಿಯುತ್ತದೆ. ‘ಸತ್ಯ ಸದ್ಗುರುವಂಗೆ ನಿತ್ಯಸುಳ್ಳಾಡಿ ದಿನಗಳಿದೆ ಮತ್ತುಟ್ಟೊ ಬಾದೆ ಬಿಡದಮ್ಮ ಸೋಬಾನೆ’ ಎಂಬುದು ಇವರ ಸ್ವಾಮಿನಿಷ್ಠೆಯ ಪ್ರತೀಕವಾಗಿದೆ. ಈ ನಿಷ್ಠೆಯಿಂದಾಗಿಯೇ ತಳಸಮುದಾಯವು ಮೂಲಭೂತವಾದಿಗಳು ತಮ್ಮ ಅನುಕೂಲಕ್ಕಾಗಿ ಸೃಷ್ಠಿಸಿರುವ ಕಪಟ ತಂತ್ರಗಳನ್ನು ತಮ್ಮ ಬದುಕಿನ ಭಾಗವೆಂಬಂತೆ ಅನಿವಾರ್ಯವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.

ಬಸವಣ್ಣನ ವಿಚಾರಗಳನ್ನು ಮೀರಿದರೆ, ಆತನ ತತ್ವ ಚಿಂತನೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಮುಂದಿನ ಜನ್ಮದಲ್ಲೂ ಇದೇ ನರಕವನ್ನು ಅನುಭವಿಸಬೇಕಾಗುತ್ತದೆ ಎಂಬುದು ಇವರ ನಂಬಿಕೆಯಾಗಿದೆ. ಹೀಗಾಗಿಯೇ ಬಸವಣ್ಣನ ಮೂಲ ತತ್ವ ಸಿದ್ಧಾಂತಗಳು ಇಂದಿಗೂ ಜೀವಂತಿಕೆಯನ್ನು ಪಡೆದುಕೊಂಡಿದ್ದು, ಇವನ್ನು ತಮ್ಮ ಬದುಕಿನ ಒಂದು ಭಾಗವೆಂಬಂತೆ ಮುಂದುವರೆಸಿಕೊಂಡು ಬಂದಿದ್ದಾರೆ.

ಆದರೆ ಮೂಲಭೂತವಾದಿ ಮನಸ್ಥಿತಿಗಳು ಬಸವಣ್ಣನ ವಿಚಾರಧಾರೆಗಳನ್ನು ತೊಡೆದುಹಾಕಿ, ಆತನ ಪ್ರತಿಮೆಯ ಮೂಲಕವೇ ಮೂಲಭೂತವಾದ ಧರ್ಮವೊಂದನ್ನು ಪ್ರತಿಷ್ಠಾಪಿಸಿಕೊಂಡು ರಾಜರೋಷವಾಗಿ ವೈಚಾರಿಕತೆಯ ಹರಿಕಾರನಾದ ಬಸವಣ್ಣನಿಗೆ ಅಪಮಾನವೆಸಗುತ್ತಿದ್ದಾರೆ. ಇಲ್ಲಿ ಜನಪದರು ಬಸವನಿಗೆ ಸುಳ್ಳಾಡಿದರೆ, ತಪ್ಪಾಗಿ ನಡೆದುಕೊಂಡರೆ ನಮಗೆ ಶಿಕ್ಷೆ ತಪ್ಪಿದ್ದಲ್ಲ ಎಂಬುದಾಗಿ ತಮ್ಮೆಲ್ಲ ಕಾರ್ಯಗಳನ್ನು ಆತ್ಮವಿಮರ್ಶೆ ಮಾಡಿಕೊಂಡರೆ, ಶಿಷ್ಟ ಸಮುದಾಯವು ತಾವು ಮಾಡುತ್ತಿರುವ ಕಾರ್ಯ ಬಸವನಿಗೆ ಸಂಪೂರ್ಣ ವಿರುದ್ಧವಾದುದೆಂದು ತಿಳಿದಿದ್ದರೂ ಇವರೆಲ್ಲಿಯೂ ಇಂತಹ ಆತ್ಮವಿಮರ್ಶೆಗೆ ಮುಂದಾಗಿರುವ ನಿದರ್ಶನಗಳು ಚರಿತ್ರೆಯಲ್ಲಾಗಲಿ, ಇವರ ಧರ್ಮಗ್ರಂಥ, ಪುರಾಣಗಳಲ್ಲಾಗಲಿ ಕಂಡುಬರುವುದಿಲ್ಲ. ಇದು ಜನಪದರು ಕಂಡುಕೊಂಡಿರುವ ಬಸವದರ್ಶನ, ಹಾಗೆಯೇ ಅವರ ಜೀವನ ದರ್ಶನವಾಗಿದೆ.

ಜನಪದರು ಅಕ್ಷರ ವಂಚಿರಾದರೂ ಲೋಕಜ್ಞಾನವನ್ನು ದಾರ್ಶನಿಕ ನೆಲೆಯಲ್ಲಿ ಅರಿತುಕೊಂಡವರು. ಇಲ್ಲಿನ ಹಾಡಿನಲ್ಲಿ ಕಂಡುಬರುವಂತೆ ಬಸವಣ್ಣನು ಬಿಜ್ಜಳನ ಆಸ್ಥಾನದಲ್ಲಿ ಆರ್ಥಿಕ ಮಂತ್ರಿಯಾಗಿದ್ದ ವಾಸ್ತವವನ್ನು ಅರಿತುಕೊಂಡಿದ್ದಾರೆ. ಆದರೆ ಈ ಸತ್ಯ ಜನಪದರಿಗೆ ತಿಳಿದಿದ್ದಾದರೂ ಹೇಗೆ ಎಂಬ ಅನುಮಾನ ಕಾಡುತ್ತದೆ. ಅಷ್ಟೇ ಅಲ್ಲದೆ ಇವರು ಬಸವಣ್ಣನನ್ನು ಕೇವಲ ಮಂತ್ರಿಯಾಗಿ ನೋಡುವುದಿಲ್ಲ. ಬಸವಣ್ಣನನ್ನು ಅಧಿಕಾರದ ನೆಲೆಯಲ್ಲಿ ನೋಡದೆ ಸಮಾನತೆಯನ್ನು ಸಾರಿದ ಕ್ರಾಂತಿ ಪುರುಷನಾಗಿ ನೋಡುತ್ತಾರೆ. ಹೀಗಾಗಿಯೇ ಇಲ್ಲಿ ಬಸವಣ್ಣನನ್ನು ಕುರಿತು ವಣ ್ಸುವಾಗ ‘ಗುರುವಿನ ಮನೆಯಾಗೆ ಅರುವಿನ ಲಯದಾಗೆ, ಅರುವಿ ಮಂಟಪದ ಮನೆಯಾಗೆ ಕರುಣ ಕನೆಂದು ಕರೆವರು’ ಎಂಬುದಾಗಿ ಆತನ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಈ ಮಂತ್ರಿಯಾದ ಬಸವಣ್ಣನನ್ನು ತಮ್ಮ ಬದುಕಿಗೆ ಹತ್ತಿರವಾದ ನೆಲೆಯಲ್ಲಿ ಜನಪದರು ಸೃಷ್ಟಿಸಿಕೊಂಡಿದ್ದಾರೆ. ಗುರುವಿನ ಮನೆ ಮತ್ತು ಅರುವಿನ ಲಯ ಎಂಬ ಜನಪದರ ಪರಿಕಲ್ಪನೆಯು ಅನುಭವ ಮಂಟಪದ ಕುರಿತಾಗಿದೆ. ಜನಪದರಿಗೆ ಅನುಭವ ಮಂಟಪವು ಗುರುವಿನ ಮನೆಯಷ್ಟೆ ಅಲ್ಲದೆ ಅರಿವಿನ ತಾಣವು ಹೌದು. ಈ ಸೃಷ್ಟಿಯು ನಾವು ಲಿಖಿತ ಚಾರಿತ್ರಿಕ ದಾಖಲೆಗಳಾದ ವಚನಗಳು ಹಾಗೂ ಶಾಸನಗಳಲ್ಲಿ ಬಸವಣ್ಣನನ್ನು ನೋಡಿರುವುದಕ್ಕಿಂತ ಭಿನ್ನವಾದ ಬಸವ ದರ್ಶನವು ಜನಪದರಲ್ಲಿ ಕಂಡುಬರುತ್ತದೆ.

ಚಿನ್ನದ ಸಿಂಬೆಯ ಸುತ್ತಿ ರನ್ನದ ಕೊಡವ ತಗುದೆ
ಜಲದಿ ಲಗ್ಣಿಯ ಮಗುವಳೆ ಸೋಬಾನೆ ||
ಜಲದಿ ಲಗ್ಣಿಯ ಮಗುವ ಶರಣ ಯ ಕಂಡೆ
ಶಿವಶರಣರು ಜಪವ ಮರೆತಾರೆ ಸೋಬಾನೆ ||
ಶಿವಶರಣರು ಜಪವಿನ್ನು ಮರೆತು ಕೇಳ್ಯಾರೆ
ಯಾವ ಜಂಗಮರ ಮಗಳಮ್ಮ ಸೋಬಾನೆ ||
ಜಂಗಮರ ಸೊಸಿಯಯ್ಯ ಲಿಂಗ ಉಳ್ಳರು ಮಗಳು
ಬಿಂಗಿಬ್ರಹ್ಮನ ಕಿರಿ ತಂಗಿ ಸೋಬಾನೆ ||
ಬಿಂಗಿನೇ ಬ್ರಹ್ಮರ ಕಿರಿ ತಂಗಿ ಗುರುಗಳೇ
ನೀವ್ ಬನ್ನಿರಿ ನಮ್ಮ ಅರಮನೀಗೆ ಸೋಬಾನೆ ||
ಲಿಂಗೇನ ಉಳ್ಳರೇ ನಿಜವುಳ್ಳ ಭಕ್ತರೇ
ಸಂಗಮನಯ್ಯ ಬಸವಣ್ಣ ಸೋಬಾನೆ ||
ಸಂಗುಮನಯ್ಯ ಬಸವಣ್ಣ ಮೂವರೇ
ಬಂದಾರು ಗಿರಿರಾಜರ ಅರಮನೆಗೆ ಸೋಬಾನೆ ||
ಎಂದು ಬರದ ಬಸವಣ್ಣ ಈಗ್ಯಾಕೆ ಬಂದ್ಯಪ್ಪ
ಕುಂದಾರಗೊಳ್ಳ ಮಣ ಗೊಳ್ಳ ಸೋಬಾನೆ ||
ಕುಂದ್ರಾಕೆ ಬಂದಿಲ್ಲ ನಿದ್ರಾಕೆ ಬಂದಿಲ್ಲ
ಸಣ್ಣಳು ಗಿರಿಜಮ್ಮನ ಕೇಳಾ ಬಂದೆ ಸೋಬಾನೆ ||
ತುಪ್ಪನ್ನ ಉಣ್ಣವಳೆ ಪಟ್ಟೆಸೀರೆ ಉಡುವೋಳೆ
ಪಟ್ಟೆ ಮಂಚುದುಲೆ ಮಲಗೋಳೆ ಸೋಬಾನೆ ||
ಪಟ್ಟೇನೆ ಮಂಚುದುಲೇ ಮಲಗುವಳೆ ಗಿರಿಜಮ್ಮ
ಚಿಕ್ಕೊಳು ಗಿರಿಜಮುನ ಕೊಡುಲಾರೆ ಸೋಬಾನೆ ||
ಹಾಲನ್ನ ಉಣ್ಣವಳೇ ಸಾಗಿಸೀರುಡುವೋಳೆ
ಸಾಮ ಮಂಚುದುಲೆ ಮಲಗೋಳೆ ಸೋಬಾನೆ ||
ಸಾಮೇನೆ ಮಂಚುದುಲೆ ಮಲಗೋಳೆ ಗಿರಿಜಮ್ಮ
ಸಣ್ಣಳು ಗಿರಿಜಮುನ ಕೊಡುಲಾರೆ ಸೋಬಾನೆ ||
ಹಟ್ಯಾಗೆ ಗಿರಿಜಮ್ಮ ಕುಟ್ಟುತೇನ್ ಪಾಡ್ಯಾಳೆ
ಅಪ್ಪೋಜಿ ನನ್ನ ಕೊಡುತಾರೆ ಸೋಬಾನೆ ||
ಅಪ್ಪೋಜಿ ನನ್ನ ಕೊಡುತಾರೆ ಕೈಲಾಸದ
ಎಪ್ಪತ್ತೊಂದ್ ಜಡಿಯ ತ್ರಬಸಿಗೆ ಸೋಬಾನೆ ||
ಒಣ್ಯಾಗೆ ಗಿರಿಜಮ್ಮ ಹಾಡುತೇನ್ ಪಾಡ್ಯಾಳೆ
ಅಣ್ಣೋಜಿ ನನ್ನ ಕೊಡುತಾರೆ ಸೋಬಾನೆ ||
ಅಣ್ಣೋಜಿ ನನ್ನ ಕೊಡುತಾರೆ ಕೈಲಾಸದ
ಹನ್ನೊಂದೇ ಜಡೆಯ ತ್ರಬಸಿಗೆ ಸೋಬಾನೆ ||
ಊರಾಗೆ ಮನೆಯಿಲ್ಲ ಅಡುವ್ಯಾಗೆ ಹೊಲವಿಲ್ಲ
ಎತ್ತ ಕಟ್ಟುವರ ಅರಮನೆ ಸೋಬಾನೆ ||
ಎತ್ತೇನೆ ಕಟ್ಟುವ್ರ ಅರಮನೆ ಗಿರಿಜಮ್ಮ
ಅವ್ರನ ನೀನು ಭ್ರಮಿಸಿದ ಸೋಬಾನೆ ||
ಹೋಳಿಗೆ ಕರ್ಜಿಕಾಯಿ ಜೋಳಿ ತುಂಬೈದಾವೆ
ಹೋಳಿಗೆ ಮೂರುಲೋಕ ಸಲುವೈದಾವೆ ಸೋಬಾನೆ ||
ಹೋಳಿಗೆ ಮೂರುಲೋಕ ಸಲುವ್ಯಾವೆ ಕೈಲಾಸದ
ಮುಕ್ಕಣ್ಣ ನೀನು ಜರುದಿಯೋ ಸೋಬಾನೆ ||
ಚಕ್ಕುಲಿ ಕರ್ಜಿಕಾಯಿ ಕಕ್ಕುಸುತುಂಬೈದಾವೆ
ಕಕ್ಕುಸು ಮೂರುಲೋಕ ಸಲಿವ್ಯಾವೆ ಸೋಬಾನೆ ||
ಕಕ್ಕಸ ಮೂರುಲೋಕ ಸಲುವ್ಯಾವೆ ಕೈಲಾಸದ
ಮಾದೇವ್ರು ನೀನು ಜರುದಿಯೋ ಸೋಬಾನೆ ||
ಚಿನ್ನದ ಸರ ಹರಿದಿರಿ ಕೆನ್ನೆಮೇಲ್ ಹೊಡದೀರಿ
ಬಿಟ್ಟು ಬನ್ನಿ ಗಿರಿಜೆ ಗಿರಿದೂರ ಸೋಬಾನೆ ||
ಮುತ್ತಿನ ಸರ ಹರಿದಿರಿ ನೆತ್ತಿಮ್ಯಾಲ್ ಹೊಡದೀರಿ
ಬಿಟ್ಟು ಬನ್ನಿ ಗಿರಿಜೆ ಗಿರಿದೂರ ಸೋಬಾನೆ ||

ಈ ಹಿಂದೆ ತಿಳಿಸಿದಂತೆ ಜಾನಪದರು ಶಿವ ಮತ್ತು ಬಸವಣ್ಣನನ್ನು ಬೇರೆ ಬೇರೆಯಾಗಿ ನೋಡುವುದಿಲ್ಲ. ಇವರಿಬ್ಬರನ್ನು ಒಂದೆಯಾಗಿ ಸ್ವೀಕರಿಸಿದ್ದಾರೆ. ಶಿವ, ಬಸವಣ್ಣ ಹಾಗೂ ಗಿರಿಜೆಯ ಪ್ರಸ್ತಾಪವಿರುವ ಈ ಹಾಡಿನಲ್ಲಿ ಶಿವಶರಣನಾದ ಬಸವಣ್ಣನನ್ನು ಶಿವ ಸ್ವರೂಪಿಯಾಗಿಸಿರುವುದನ್ನು ಕಾಣಬಹುದಾಗಿದೆ. ಮಾನವನ ಸಹಜ ಬದುಕಿನ ನೆಲೆಯಲ್ಲಿ ಚಿತ್ರಿತವಾಗಿರುವ ಬಸವನನ್ನು ಜಾನಪದ ಪರಂಪರೆಯಲ್ಲಿ ಗುರುತಿಸಬಹುದಾಗಿದೆ. ಶಿವ ಮತ್ತು ದಕ್ಷಬ್ರಹ್ಮರ ಕಥೆಯನ್ನು ಹೋಲುವ ಈ ಜಾನಪದ ಹಾಡಿನಲ್ಲಿ ಬಸವನನ್ನು ಸಮೀಕರಿಸಿಕೊಂಡು ಬಂದಿದ್ದಾರೆ. ಇಲ್ಲಿ ಶಿವ ಪಾರ್ವತಿಯರ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಚಿತ್ರಣಗಳನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಬಸವಣ್ಣನ್ನು ಸಮೀಕರಿಸಿಕೊಂಡಿರುವ ಬಗೆಯು ವಿಶೇಷವಾಗಿ ಕಂಡುಬರುತ್ತದೆ. ಇದು ಜಾನಪದ ಬದುಕಿನ ದಾರ್ಶನಿಕ ಆಯಾಮವಾಗಿ ಕಂಡುಬರುತ್ತದೆ.
ಜಾನಪದ ಬದುಕಿನಲ್ಲಿ ದರ್ಶನಗೊಳ್ಳುವ ಬಸವಣ್ಣ ಯಾವುದೇ ಜಾತಿ, ಮತ, ಪಂಥಕ್ಕೆ ಸೀಮಿತವಾಗುವುದಿಲ್ಲ. ಇಲ್ಲಿ ಇವನೊಬ್ಬ ವಿಶ್ವಮಾನವನಾಗಿ ಮುಖಾಮುಖಿಯಾಗುತ್ತಾನೆ. ನಾವು ಹೀಗಾಗಲೇ ಓದಿ ತಿಳಿದಿರುವ ಬಸವಣ್ಣನಿಗಿಂತ ಭಿನ್ನವಾದ ಬಸವಣ್ಣ ನಮ್ಮ ಮೌಖಿಕ ಪರಂಪರೆಯಲ್ಲಿ ಕಂಡುಬರುತ್ತಾನೆ. ನಮ್ಮ ಲಿಖಿತ ಪಠ್ಯ, ಶಾಸನ ಹಾಗೂ ಚರಿತ್ರೆಯ ಗ್ರಂಥಗಳು ಬಸವಣ್ಣನನ್ನು ಒಬ್ಬ ಮಂತ್ರಿಯಾಗಿ, ಯುದ್ದ, ಹೋರಾಟದ ಭಾಗವಾಗಿ ಮಾತ್ರ ಪರಿಚಯಿಸುತ್ತವೆ. ಆದರೆ ಅದರಾಚೆಗಿನ ಮಾನವ ಸಹಜವಾದ ಬಸವಣ್ಣನನ್ನು ನಾವು ಈ ಪ್ರಕಾರಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಆದರೆ ಮೌಖಿಕ ಪ್ರಕಾರದಲ್ಲಿ ಬಸವಣ್ಣ ರಾಜಪ್ರಭುತ್ವದಿಂದ ಹೊರಬಂದು ಮಾನವ ಸಹಜ ನೆಲೆಯಲ್ಲಿ ಕಂಡುಬರುತ್ತಾನೆ. ಜನಪದ ಪರಂಪರೆಯಲ್ಲಿ ಕಂಡುಬರುವ ಈ ಮಾನವ ಸಹಜ ಬಸವ ದರ್ಶನಕ್ಕೆ ಕಾರಣವೂ ಇದೆ. ಜನಪದ ಬದುಕು ಪ್ರಕೃತಿ ಸಹಜವಾಗಿರುವಂತದ್ದು. ಇಲ್ಲಿ ಯಾರು ರಾಜನಾದರೇನು ಸಾಮಾನ್ಯ ಜನತೆಗೆ ಇದರಿಂದ ಯಾವುದೇ ಪ್ರಯೋಜನವಾಗಿರುವುದು ಕಂಡುಬರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಒಂದು ಗಾದೆ ಮಾತಿದೆ; ‘ಯಾರು ಮಂತ್ರಿಯಾದರೇನು ರಾಗಿ ಬೀಸುವುದು ತಪ್ಪುವುದಿಲ್ಲ’, ಹಾಗೆಯೇ ‘ರಾಮರಾಜ್ಯದಲ್ಲೂ ರಾಗಿ ಬೀಸುವುದು ತಪ್ಪಿದ್ದಲ್ಲ’ ಎಂಬ ಗಾದೆಮಾತುಗಳು ಸಾಮಾನ್ಯ ಜನತೆಯ ಬದುಕಿನ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಅದರಂತೆ ಜಾನಪದರಿಗೆ ರಾಜಪ್ರಭುತ್ವ ಮುಖ್ಯವಾಗುವುದಿಲ್ಲ. ಸಾಮಾನ್ಯ ಜನತೆಯ ಪರವಾಗಿ ಹೋರಾಡಿದ ಸಾಂಸ್ಕøತಿಕ ನಾಯಕ ಮುಖ್ಯವಾಗುತ್ತಾನೆ. ಈ ಕಾರಣದಿಂದಾಗಿಯೇ ನಮ್ಮ ಜನಪದರು ಮಲೆಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಗಾದ್ರಿಪಾಲನಾಯಕ, ಕುಮಾರ ರಾಮರಂತಹ ಸಾಂಸ್ಕøತಿಕ ನಾಯಕರನ್ನು ಸ್ಮರಿಸುತ್ತ ಬಂದಿದ್ದಾರೆಯೇ ಹೊರತು ರಾಜ್ಯಭಾರ ಮಾಡಿದ ಬಿಜ್ಜಳ, ಕೃಷ್ಣದೇವರಾಯರಂತಹ ರಾಜರನ್ನು ಮುಖ್ಯವೆಂದು ಪರಿಗಣ ಸಿರುವುದು ಕಂಡುಬರುವುದಿಲ್ಲ. ಈ ಕಾರಣದಿಂದಾಗಿಯೇ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನಿಗಿಂತ ಮುಖ್ಯವಾಗಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಮಾನವ ಸಹಜ ವ್ಯಕ್ತಿಯಾದ ಬಸವಣ್ಣನನ್ನು ಆರಾಧಿಸುತ್ತ ಬಂದಿದ್ದಾರೆ.
ಶಿಷ್ಟ ಪರಂಪರೆಯು ಬಸವಣ್ಣನನ್ನು ರಾಜಪ್ರಭುತ್ವದ ಒಂದು ಭಾಗವಾಗಿಯೇ ಚಿತ್ರಿಸಿಕೊಂಡು ಬಂದಿದೆ. ಇವರಿಗೆ ಮಾನವ ಸಹಜವಾದ ಬಸವ ಮುಖ್ಯವಾಗುವುದಿಲ್ಲ.

ಅಷ್ಟೇ ಅಲ್ಲದೇ ಈ ಶಿಷ್ಟ ಪ್ರಕಾರವು ಬಸವನನ್ನು ಜಾತಿ, ಮತ, ಪಂಥಗಳಾಚೆ ಹೋಗಲು ಬಿಡುವುದಿಲ್ಲ. ಜಾತಿ, ಮತ, ಪಂಥಗಳನ್ನು ಮೀರಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಬಸವನನ್ನು ಬಲವಂತವಾಗಿ ಸ್ಥಾಪಿತ ವ್ಯವಸ್ಥೆಯ ಅಡಿಯಲ್ಲಿ ಬಂಧಿಸುವ ತಂತ್ರಗಾರಿಕೆ ಶಿಷ್ಟ ಸಾಹಿತ್ಯದ ಒಂದು ಭಾಗವಾಗಿ ಕಂಡುಬರುತ್ತದೆ. ಆದರೆ ಬಸವಣ್ಣನ ಮೂಲ ಆಶಯಗಳು ಮಾತ್ರ ಜಾನಪದ ಬದುಕಿನೊಳಗೆ ಯಥಾ ಪ್ರಕಾರವಾಗಿ ಮುಂದುವರೆದಿವೆ. ಬಸವ ಇನ್ನು ಜೀವಂತವಾಗಿರುವುದಾದರೆ ಅದು ಜಾನಪದರ ಬದುಕಿನಲ್ಲಿ ಮಾತ್ರ ಎಂಬುದನ್ನು ಈ ಮೇಲೆ ಉಲ್ಲೇಖಿಸಿರುವ ಸೋಬಾನೆ ಹಾಡುಗಳಲ್ಲಿ ಗುರುತಿಸಬಹುದಾಗಿದೆ.

( ಲೇಖಕರು: ಕೆ.ಎ.ಓಬಳೆಶ್, ಸಂಶೋಧನ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ)

ದಿನದ ಸುದ್ದಿ

ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು

Published

on

  • ರುದ್ರಪ್ಪ ಹನಗವಾಡಿ

ದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.

ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.

ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading

ಅಂತರಂಗ

ಆತ್ಮಕತೆ | ಮದುವೆಯ ಬಂಧ-ಸ್ನೇಹಿತರ ಮನೆಯಲ್ಲಿ ಔತಣ

Published

on

  • ರುದ್ರಪ್ಪ ಹನಗವಾಡಿ

ನನ್ನ ಹೆಂಡತಿ ಗಾಯತ್ರಿ 1979ನೇ ಬ್ಯಾಚಿನ ನನ್ನ ವಿಭಾಗದಲ್ಲಿಯೇ ವಿದ್ಯಾರ್ಥಿಯಾಗಿದ್ದವಳು. ವಿದ್ಯಾರ್ಥಿನಿಯಾಗಿ ಅವಳ ಶೈಕ್ಷಣಿಕ ಓದಿನ ಜೊತೆ ನಾಟಕ, ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿಯುಳ್ಳವಳಾಗಿದ್ದಳು. ಅವಳಿಗಿದ್ದ ತಮ್ಮ ಹಿರಿಯ/ಕಿರಿಯ ವಿದ್ಯಾರ್ಥಿನಿಗಳ ಜೊತೆಗಿನ ಸ್ನೇಹ ಸಂಬಂಧದ ಜೊತೆ, ಕೇಂದ್ರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.

ನಮ್ಮ ಕೇಂದ್ರದಿಂದ 1978ರಲ್ಲಿ ಎಂ.ಎ. ಮುಗಿಸಿದ್ದ ಯಶೋಧ ಮತ್ತು ಶಾರದ ಎಂಬ ಇಬ್ಬರು ವಿದ್ಯಾರ್ಥಿನಿಯರು ಎಂ.ಎ., ಮುಗಿಸಿದ ನಂತರ, ಬೆಂಗಳೂರಿನಲ್ಲಿ ಯಶೋಧ ವಿ.ಕೆ.ಆರ್.ವಿ. ರಾವ್ ಇನ್ಸಿಟಿಟ್ಯೂಟ್‌ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದಳು. ಶಾರದ ತನ್ನ ಸೋದರ ಸಂಬಂಧಿ ಡಾಕ್ಟರ್‌ರೊಬ್ಬರನ್ನು ಮದುವೆಯಾಗಿ ಗೃಹಿಣಿ ಯಾಗಿದ್ದಳು. ಇವರಿಬ್ಬರೂ ಮೊದಲು ಶಿವಮೊಗ್ಗದಿಂದ ದಿನವೂ ಬೆಳಿಗ್ಗೆ ಬರುತ್ತಿದ್ದ ಗಜಾನನ ಬಸ್ಸಿಗೆ ಗಾಯತ್ರಿ ಮತ್ತು ಇತರರೊಡನೆ ಕ್ಲಾಸಿಗೆ ಬರುತ್ತಿದ್ದರು. ಹಾಗಾಗಿ ಅವರಿಬ್ಬರ ಎಂ.ಎ., ಮುಗಿದ ನಂತರವೂ ಕೇಂದ್ರಕ್ಕೆ ಬಂದಾಗ ಗಾಯತ್ರಿಯನ್ನು ಜೊತೆಗೆ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಹೋಗುತ್ತಿದ್ದರು. ಹೀಗೆ ಹೋಗುವಾಗ ನಮ್ಮ ಜ್ಞಾನೇಂದ್ರ ಪ್ರಭು ಜೊತೆ ನಾನು ಶಿವಮೊಗ್ಗಕ್ಕೂ ಜೊತೆಗೆ ಹೋಗಿ ಅಲ್ಲಿನ ಮನೋಹರ ಕೆಫೆಯಲ್ಲಿ ಕಾಫಿ ಕುಡಿದು, ಹರಟೆ ಹೊಡೆದು ಹಿಂತಿರುಗುತ್ತಿದ್ದೆವು. ಆ ದಿನಗಳಲ್ಲಿಯೇ ನನಗೆ ಗಾಯತ್ರಿಯ ಪರಿಚಯವಾಗಿ ಒಬ್ಬರಿಗೊಬ್ಬರು ಆಸಕ್ತರಾಗಿದ್ದೆವು. ಅದೆಲ್ಲ ಪ್ರಭು, ದೇವರಾಜು ಮತ್ತು ಕೇಶವಮೂರ್ತಿಗಳ ನಮ್ಮ ಸ್ನೇಹ ವಲಯಕ್ಕೂ ತಿಳಿದಿತ್ತು.

ಗ್ರಾಮೀಣ ಪ್ರದೇಶಗಳಿಂದ ಬಹಳ ಹುಡುಗರು ಏನೆಲ್ಲ ಓದಿದ್ದರೂ ಹುಡುಗಿಯರೊಡನೆ ಸರಳವಾಗಿ ಮಾತಾಡಿಕೊಂಡು ಇರುವುದು ವಿರಳವಾಗಿದ್ದ ದಿನಗಳು. ನಾನಾದರೂ ಎಂ.ಎ. ಮುಗಿಸಿ 4-5 ವರ್ಷಗಳ ಪಾಠ ಮಾಡಿದ ಅನುಭವವಿದ್ದರೂ ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಹಿಂಜರಿಕೆ ಮತ್ತು ಸಂಕೋಚದ ಕಾರಣ ಹುಡುಗಿಯರಿಂದ ದೂರವೇ ಉಳಿಯುತ್ತಿದ್ದೆ.
ಓದಿನ ಜೊತೆಗೆ ಎಸ್‌ವೈಎಸ್, ಡಿ.ಎಸ್.ಎಸ್.ಗಳ ಹೋರಾಟಗಳಲ್ಲಿ ಭಾಗವಹಿಸಿ, ಬೀದಿ ಬೀದಿಗಳಲ್ಲಿ ಭಾಷಣ, ಮೆರವಣಿಗೆ ಅನೇಕ ಸಂದರ್ಭಗಳಲ್ಲಿ ಪೋಲೀಸ್ ಸ್ಟೇಷನ್‌ನಲ್ಲಿ ಬಂಧಿಯಾಗಿ ಹೊರಬಂದಿದ್ದರೂ ಪ್ರೀತಿಯ ಪ್ರೇಮಗಳ ವಿಷಯದಲ್ಲಿ ಹಿಂಜರಿಕೆ ಮತ್ತು ಸಂಕೋಚಗಳು ನನ್ನಲ್ಲಿ ಮನೆ ಮಾಡಿದ್ದವು. ನಾನು ಈ ಹಿಂದೆ ಸೋಷಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಮೂರು ಜನ ಹುಡುಗಿಯರಲ್ಲಿ ಒಬ್ಬಳು ತೋರಿದ ವಿಶೇಷ ಆಸಕ್ತಿ ಮತ್ತು ಮಾತುಕತೆಗೆ ಮಾರುಹೋಗಿ, ಅವಳು ವಿಶೇಷವಾಗಿ ತಂದು ಕೊಡುತ್ತಿದ್ದ ತಿಂಡಿ ಮತ್ತು ಪ್ರಸೆಂಟೇಷನ್‌ಗಳನ್ನು ನನ್ನ ಮೇಲಿನ ವಿಶೇಷ ಪ್ರೀತಿಯಿಂದಲೇ ಕೊಟ್ಟಿರಬೇಕೆಂದು ಭಾವಿಸಿಕೊಂಡಿದ್ದೆ. ಅದನ್ನೆಲ್ಲ ಆಗ ನನ್ನ ಜೊತೆಗಿದ್ದ ಬಸವಣ್ಯಪ್ಪನಿಗೆ ಹೇಳಿದಾಗ ಅವನು, `ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ, ನಿನಗೆ ಇಷ್ಟವಾದರೆ-ನೀನೆ ಅವಳಿಗೆ ಮದುವೆಯಾಗುವಂತೆ ಕೇಳು’ ಎಂದು ಹುರಿದುಂಬಿಸುತ್ತಿದ್ದ. ಏರು ಯೌವನದ ಸೆಳೆವಿನಲ್ಲಿದ್ದ ನಾನು ಒಂದು ದಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಸಂಜೆಯ ವಿಹಾರದಲ್ಲಿದ್ದಾಗ ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿಯೇ ಬಿಟ್ಟೆ. ನನಗಿಂತಲೂ ವಯಸ್ಸಿನಲ್ಲಿ ಮತ್ತು ಬುದ್ದಿಯಲ್ಲಿ ಮುಂದಿದ್ದ ಅವಳು ನನ್ನ ಪ್ರೇಮ ಭಿಕ್ಷೆಯನ್ನು ನಯವಾಗಿ ತಿರಸ್ಕರಿಸಿದ್ದಳು. ನಂತರ ನಾನು ನನ್ನ ವೃತ್ತಿಯನ್ನೇ ಬದಲಾಯಿಸಿದ ಕಾರಣ ಆ ಪ್ರೇಮ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿ ಬಿಆರ್‌ಪಿಗೆ ವರ್ಗವಾಗಿ ಬಂದಿದ್ದೆ.

ಈ ಹಿನ್ನೆಲೆಯಲ್ಲಿದ್ದ ನನಗೆ ತಕ್ಷಣದಲ್ಲಿ ಪ್ರೀತಿಯ ಪ್ರಸ್ತಾಪವನ್ನು ಮಾಡುವಾಗ ಅನೇಕ ರೀತಿಯ ಹಿಂಜರಿಕೆಯಲ್ಲಿ ಮುಳುಗಿ ಬಿಡುತ್ತಿದ್ದೆ. ಆದರೆ ಪ್ರಭು ಮತ್ತು ಕೇಶವಮೂರ್ತಿಯವರೊಡನೆ ನಂತರ ನನ್ನ ಹಳೆ ವಿದ್ಯಾರ್ಥಿನಿಯರಾದ ಯಶೋಧ ಮತ್ತು ಶಾರದಾ ಅವರ ಮುಖಾಂತರ ಗಾಯತ್ರಿಯ ಬಗ್ಗೆ ನನಗಿರುವ ಆಸಕ್ತಿ ತಿಳಿಸಿದೆ. ಅವಳು ಎಂ.ಎ. ಪರೀಕ್ಷೆ ಮುಗಿದಿದ್ದರಿಂದ ಊರಿಗೆ ಹೋಗಿದ್ದಳು. ಅವಳು ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಅವಳಿಗೆ ಒಂದು ಕೆಲಸ ಪಡೆದ ನಂತರ ದಿನಗಳಲ್ಲಿ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿ ನಾನಿದ್ದೆ. ಗಾಯತ್ರಿಯೂ ರಜೆಯಿದ್ದ ಕಾರಣ ತನ್ನ ಊರಾದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಹೋಗಿದ್ದಳು. ನನ್ನ ಜೊತೆ ಮನೆತನ, ಜಾತಕಗಳ ವಿವರಗಳ ಗೊಡವೆ ಇಲ್ಲದೆ, ನನ್ನನ್ನು ಮದುವೆಯಾಗಲು ಒಪ್ಪಿಸುವಲ್ಲಿ ಗಾಯತ್ರಿಯ ಗೆಳತಿಯರು, ನನ್ನ ಮಿತ್ರ ಪ್ರಭು ಎಲ್ಲ ಕಾರಣರಾಗಿದ್ದರು. ನಾನಾವ ಜಾತಿ ಮತ್ತು ಆರ್ಥಿಕ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಏನೂ ಕೆದಕದೆ ನನ್ನನ್ನು ಮಾತ್ರ ನೋಡಿ ಒಪ್ಪಿದ ಗಾಯತ್ರಿಯ ಬಗ್ಗೆ ಅಭಿಮಾನದ ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದೆ. ಹೀಗಿರುವಾಗ ಮೇ ತಿಂಗಳ ಕೊನೆ ವಾರದಲ್ಲಿ ತನ್ನ ಗೆಳತಿಯ ಜೊತೆ ಬಿ.ಆರ್.ಪಿ.ಗೆ ಬಂದ ಗಾಯತ್ರಿ ಹೊಸ ಸುದ್ದಿಯನ್ನು ತಂದಿದ್ದಳು. ರಜೆಯಲ್ಲಿ ಅವರ ಮನೆಗೆ ಬಂದಿದ್ದ ಹುಡುಗನೊಬ್ಬ ಗಾಯತ್ರಿಯನ್ನು ನೋಡಿ ಮದುವೆಯಾಗಲು ಒಪ್ಪಿರುವುದಾಗಿಯೂ, ಇಷ್ಟರಲ್ಲೇ ಮದುವೆ ಮಾತು ಆಗಬಹುದೆಂಬ ಆತಂಕದ ಸುದ್ದಿಯನ್ನು ತಿಳಿಸಿದಳು.

ಗಾಯತ್ರಿಯ ಎಂ.ಎ. ಮುಗಿದು ನೌಕರಿ ಹಿಡಿದ ನಂತರ ಎಲ್ಲರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ನಮಗೆ ನಂತರದ ಬೆಳವಣಿಗೆಗಳು ನಮ್ಮಿಬ್ಬರ ಕೈತಪ್ಪಿ ಹೋಗುವ ಆತಂಕವಾಯಿತು. ಈ ನನ್ನ ಎಲ್ಲ ಅಂತರಂಗದ ವಿಷಯಗಳನ್ನು ಚರ್ಚಿಸಲು ಪ್ರಭು ಜೊತೆ ಭದ್ರಾವತಿಗೆ ಕೃಷ್ಣಪ್ಪನವರನ್ನು ಕಂಡು ಚರ್ಚಿಸಿಕೊಂಡು ಬರಲು ಹೋದೆವು. ಕೃಷ್ಣಪ್ಪ ಮತ್ತು ಇಂದಿರಾ ಅವರ ಜೊತೆ ಎಲ್ಲ ವಿಷಯಗಳನ್ನು ಚರ್ಚಿಸಿ ದಿನಾಂಕ 4-6-1979ರಂದು ರಿಜಿಸ್ಟರ್ ಮದುವೆಯ ಕಾರ್ಯ ಮುಗಿಸಲು ತೀರ್ಮಾನಿಸಿದೆವು. ಅದಕ್ಕೂ ಮುಂಚೆ ಗಾಯತ್ರಿಯನ್ನು ಕರೆದುಕೊಂಡು ಬರಲು ತಿಳಿಸಿದರು. ಅದರಂತೆ ಹೋದಾಗ ಇಂದಿರಾ ಕೂಡ ಇದ್ದು ಗಾಯತ್ರಿಗೆ ಸಮಾಧಾನ, ಧೈರ್ಯ ಹೇಳಿ ಮದುವೆಯ ಆತಂಕವನ್ನು ಹಗುರ ಮಾಡಿದ್ದರು. ತುರ್ತಾಗಿ ಇದ್ದ ಪರಿಸ್ಥಿತಿಯಲ್ಲೇ ಮದುವೆಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ. ನಮ್ಮ ಊರ ಮನೆಯಲ್ಲಿ ಈ ವಿಷಯಗಳನ್ನು ತಿಳಿಸಿ ಚರ್ಚಿಸಿ ಒಪ್ಪಿಸುವುದು ಸಾಧ್ಯವಿರಲಿಲ್ಲ. ಏಕೆಂದರೆ ಅವ್ವ ನನ್ನ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದಳು. ಆ ರೀತಿ ಅಕ್ಕನ ಮಗಳನ್ನು ಮದುವೆಯಾಗುವುದು, ಅವರು ನನ್ನನ್ನು ಅವರ ಸಾಗರದ ಮನೆಯಲ್ಲಿಟ್ಟುಕೊಂಡು ಓದಿಸಿದ ಬಗ್ಗೆ ಋಣ ತೀರಿಸುವ ಜವಾಬ್ದಾರಿ ಎಂದು ಎಲ್ಲರ ನಂಬಿಕೆಯಾಗಿತ್ತು. ಇದನ್ನೆಲ್ಲ ತಿಳಿಗೊಳಿಸಿ ಪ್ರಸ್ತುತ ಮದುವೆ ವಿಷಯಕ್ಕೆ ಒಪ್ಪಿಸಿ ಕರೆತರುವುದು ಆ ಕ್ಷಣದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು.

ಇನ್ನು ಗಾಯತ್ರಿ ಮನೆಯವರು ಶೃಂಗೇರಿ ಮಠದ ಅನುಯಾಯಿಗಳು. ಪ್ರಥಮದಲ್ಲಿ ನಾನು ಅಬ್ರಾಹ್ಮಣನಾದ ಕಾರಣ ಈ ಮುದುವೆಯ ಪ್ರಸ್ತಾಪವೇ ಸಾಧ್ಯವಿಲ್ಲದ ಮಾತಾಗಿತ್ತು. ಅದರಲ್ಲೂ ನನ್ನ ಜಾತಿ ದಲಿತ ಗುಂಪಿಗೆ ಸೇರಿದ್ದೆಂಬುದು ತಿಳಿಸಿದರೆ ಇನ್ನು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುವುದರಲ್ಲಿತ್ತು. ಹಾಗಾಗಿ ಅವರಿಗೂ ಈ ಮದುವೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ಮದುವೆಯಾಗುವುದು ಸಾಧ್ಯವಿರಲಿಲ್ಲ. ಈ ವಿಷಯಗಳೇನಾದರೂ ಮೊದಲೇ ಗೊತ್ತಾದರೆ, ಮದುವೆಯಾಗಲು ಖಂಡಿತ ಬಿಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಕಾರಣದಿಂದಾಗಿ ಎಲ್ಲದನ್ನು ಗೌಪ್ಯವಾಗಿಟ್ಟು ಮದುವೆಯ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕೃಷ್ಣಪ್ಪ – ಇಂದಿರಾ ಅವರ ಮದುವೆ 1975ರಲ್ಲಿಯೇ ನಡೆದು ಆ ನಂತರ ಅನೇಕ ಅಂತರ್ಜಾತೀಯ, ಧರ್ಮೀಯ ಮತ್ತು ಸರಳ ಮದುವೆಗಳನ್ನು ಮಾಡಿಸಿ ಹೆಸರಾಗಿದ್ದರು. ಸಮಾಜವಾದಿ ಚಳುವಳಿ, ದಲಿತ ಚಳುವಳಿಯ ಅನೇಕ ಯುವಕ, ಯುವತಿಯರು ಇಂದಿರಾ ಕೃಷ್ಣಪ್ಪನವರ ನೇತೃತ್ವದಲ್ಲಿ ಅಂತರ್‌ಜಾತಿ ಮದುವೆಯಾಗಿದ್ದರು. ಕೃಷ್ಣಪ್ಪನವರ ಅಭಿಮಾನಿ ಬಳಗ – ಭದ್ರಾವತಿ, ಶಿವಮೊಗ್ಗದಲ್ಲಿ ಸದಾ ಇಂತಹ ಸಂದರ್ಭದಲ್ಲಿ ಬೇಕಾದ ನೆರವು ನೀಡಲು ಮುಂದಾಗಿರುತ್ತಿತ್ತು.
ಈ ತಯಾರಿಯ ಸಮಯದಲ್ಲಿಯೇ ನನ್ನ ಹಳೆಯ ವಿದ್ಯಾರ್ಥಿನಿಯರಾಗಿದ್ದ ಯಶೋಧ ಮತ್ತು ಶಾರದ ಅವರು ನೀವು ಹೇಗೂ ಲಿಂಗಾಯತರಂತೆ ಕಾಣುತ್ತೀರಿ, ಸದ್ಯದ ಸಮಯದಲ್ಲಿ ನೀವು ನಿಮ್ಮ ಜಾತಿಯನ್ನು ಲಿಂಗಾಯತರೆಂದು ಹೇಳಿ ಮದುವೆಗೆ ಗಾಯತ್ರಿ ಮನೆಯವರನ್ನು ಒಪ್ಪಿಸುವ ಸಲಹೆ ನೀಡಿದರು. ಆದರೆ ಅದೆಲ್ಲ ಆಗದ ಮಾತು ಎಂದು ನಾನು ಅವರಿಗೆ ಆಗಲೇ ತಿಳಿ ಹೇಳಿದೆ. ಮದುವೆಯ ದಿನಕ್ಕೆ ಬೇಕಾದ ಸೀರೆ, ಒಂದು ತಾಳಿ ಚೈನು ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ನನಗೆ ಒಂದು ಜೊತೆ ಷರ್ಟ್ ಪ್ಯಾಂಟ್ ಹೊಲಿಯಲು ಹಾಕಿದ್ದೆ. ಆದರೆ ನನಗೆ ಆ ಟೈಲರ್ ಮದುವೆ ದಿನಕ್ಕೆ ಕೊಡಲೇ ಇಲ್ಲ. ಗಾಯತ್ರಿಯನ್ನು ಭದ್ರಾವತಿಯ ಕೃಷ್ಣಪ್ಪನವರ ಮನೆಗೆ ಬರಲು ಹೇಳಿ ನಂತರ ಎಲ್ಲರೂ ಸೇರಿ ಸಬ್ ರಿಜಿಸ್ಟಾçರ್ ಆಫೀಸಿಗೆ ಹೋದೆವು. ಆಗ ಚಿತ್ರದುರ್ಗದಲ್ಲಿದ್ದ ಬಸವಣ್ಯಪ್ಪ ಕಟ್ಟಲು ತಾಳಿಯೊಂದನ್ನು ಕೊಂಡು ತಂದಿದ್ದ. ಸಬ್‌ರಿಜಿಸ್ಟರ್ ಆಫೀಸಿನಲ್ಲಿ ಫೀಸಾಗಿ 14ರೂ.ಗಳ ಖರ್ಚಿನಲ್ಲಿ ಭದ್ರಾವತಿಯಲ್ಲಿ ಸಮಾಜವಾದಿ ಮತ್ತು ದಲಿತ ಗೆಳೆಯರ ಸಮಕ್ಷಮದಲ್ಲಿ ಕೃಷ್ಣಪ್ಪ-ಇಂದಿರಾ ದಂಪತಿಗಳ ನೇತೃತ್ವದಲ್ಲಿ ಮದುವೆಯಾಗಿತ್ತು. ಉಟ್ಟ ಸೀರೆಯಲ್ಲಿ ನರಸಿಂಹರಾಜಪುರದಿಂದ ಬಂದಿದ್ದ ಗಾಯತ್ರಿ ಅವರ ಮನೆಯವರಿಗೆ ಪ್ರಭು ಮತ್ತು ಕೇಶವಮೂರ್ತಿಗಳು ಮಾರನೆದಿನ ಹೋಗಿ ನಮ್ಮ ವಿವಾಹ ಆಗಿರುವ ಬಗ್ಗೆ ತಿಳಿಸಿ ಬರಬೇಕೆಂಬ ಮಾತಿಗೆ ಇಬ್ಬರೂ ಮಾರನೇ ದಿನ ಗಾಯತ್ರಿಯ ಮನೆಗೆ ಹೋಗಿ ಮದುವೆಯಾದ ಸುದ್ದಿ ತಿಳಿಸಿದ್ದರು. `ಗಾಯತ್ರಿಯು ಅವಳಿಗೆ ಅಧ್ಯಾಪಕರಾಗಿದ್ದ ರುದ್ರಪ್ಪ ಎನ್ನುವವರನ್ನು ಮದುವೆಯಾಗಿದ್ದಾಳೆ, ಅವರಿಬ್ಬರೂ ಚೆನ್ನಾಗಿರುತ್ತಾರೆ, ನೀವೇನು ಚಿಂತಿಸುವ ಅಗತ್ಯವಿಲ್ಲ’ ಎಂಬುದನ್ನು ಬಾಯಿಪಾಠ ಮಾಡಿದಂತೆ ಒಪ್ಪಿಸಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ ಬಂದಿದ್ದರು. ಅದರಿಂದಾಗಿ ಅವರ ಮನೆಯವರಿಗೆ ಗಾಯತ್ರಿ ಎಲ್ಲಿ ಹೋಗಿದ್ದಾಳೆ ಮತ್ತು ಏನಾಗಿದೆ ಎಂಬುದರ ಬಗ್ಗೆ ತಕ್ಷಣ ತಿಳಿದಂತಾಗಿತ್ತು.

ನನ್ನ ಮದುವೆ ದಿನ ಕೃಷ್ಣಪ್ಪನವರ ಮನೆಯಲ್ಲಿದ್ದ ನಾವು ಅಲ್ಲಿದ್ದರೆ ಗಾಯತ್ರಿ ಮನೆ ಕಡೆಯವರು ಬಂದು ಗಲಾಟೆ ಮಾಡಬಹುದೆಂದು ಭಾವಿಸಿ ಇಂದಿರಾ ಕೃಷ್ಣಪ್ಪನವರ ಹಿತೈಷಿ ಆಧ್ಯಾಪಕ ಶಿವಮೊಗ್ಗ ಮುನೀರ್ ಮತ್ತು ಅವರ ತಾಯಿ (ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ) ಬಚ್ಚಿಮ್ಮಾ ಮನೆಗೆ ಹೋಗಿ ಉಳಿಯಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಮೊದಲ ರಾತ್ರಿ ಬಚ್ಚಿಮ್ಮಾ ಸಿಹಿ ಅಡುಗೆ ಮಾಡಿ ಔತಣ ಏರ್ಪಡಿಸಿದ್ದರು. ಊಟದ ಶಾಸ್ತç ಮಾಡಿ ಮಲಗಿದರೆ ನಿದ್ದೆ ಬಾರದೇ ಇಡೀ ರಾತ್ರಿ ಆತಂಕ ಮತ್ತು ಚಿಂತೆಗಳಲ್ಲಿ ಕಳೆದೆವು. ಮದುವೆಯಾಗಿ ಒಂದು ವಾರದಲ್ಲಿ ಅಂದರೆ 10-6-1979ರಂದು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಒಂದು ಸಂತೋಷಕೂಟ ವ್ಯವಸ್ಥೆ ಮಾಡಿದ್ದೆವು. ಅದಕ್ಕೆಲ್ಲಾ ಶಿವಮೊಗ್ಗದವನೇ ಆಗಿದ್ದ ಪ್ರಭು ಮತ್ತು ಅವನ ಅಲ್ಲಿನ ಗೆಳೆಯರಾದ ರೈತಸಂಘದ ಚಟ್ನಳ್ಳಿ ಮಂಜಪ್ಪ, ಅರ್ಚನ ಟ್ರೇರ‍್ಸ್ ಕಾಂತರಾಜ್ ಓಡಾಡಿ ನಿಗದಿಗೊಳಿಸಿದ್ದರು. ಸುಮಾರು 300-400 ಜನರಿಗೆ ಲಘು ಉಪಹಾರದೊಡನೆ ಈ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅದಕ್ಕಾಗಿ ಒಂದು ಸಾಮಾನ್ಯ ಕರೆಯೋಲೆಯನ್ನು ಸಹ ಮುದ್ರಿಸಿ ಬೇಕಾದ ಸ್ನೇಹಿತರಿಗೆ ಮತ್ತು ನನ್ನ ಊರಿನ ಸಂಬಂಧಿಕರಿಗೆ ಹಂಚಲು ನಮ್ಮ ಊರಿನ ಮಾಂತೇಶಿಗೆ ಜವಾಬ್ದಾರಿ ನೀಡಿದ್ದೆನು. ಅವನ ಮುಖಾಂತರ ಊರಿಗೆ ಕಳಿಸಿಕೊಟ್ಟಿದ್ದೆ. ಅವ್ವ ಮತ್ತು ಎಲ್ಲ ಸಂಬಂಧಿತ ಬಳಗ ಮತ್ತು ಊರಿನವರು ಹೇಳಿ ಕೇಳಿ ಮದುವೆಯಾಗದೆ ದಿಢೀರ್ ಆಗಿ ಈ ರೀತಿ ಆದ ಬಗ್ಗೆ ಆಕ್ಷೇಪಗಳನ್ನು ಮಾಡಿ ಅರ‍್ಯಾರೂ ಬಾರದೆ 7-8 ಜನ ಸ್ನೇಹಿತರು ಮಾತ್ರ ಊರಿನಿಂದ ಬಂದಿದ್ದರು. ನಂತರ ನಡೆಯಬೇಕಾಗಿದ್ದ ಸಂತೋಷಕೂಟವೂ ಕೂಡ ಶಿವಮೊಗ್ಗದಲ್ಲಿ ನಡೆಸಲು ಗಾಯತ್ರಿಯವರ ಮನೆಕಡೆಯಿಂದ ಶಿವಮೊಗ್ಗದಲ್ಲಿ ಮಾತ್ರ ಈ ಸಮಾರಂಭ ಮಾಡುವುದು ಬೇಡ ಎಂಬ ಅಭಿಪ್ರಾಯಪಟ್ಟಿದ್ದರಿಂದ ಕೊನೆ ಹಂತದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಒಂದು ತಿಳುವಳಿಕೆಯ ಸೂಚನೆಯನ್ನು ಬರೆದು ಹಾಕಿ ಇಲ್ಲಿ ನಡೆಯಬೇಕಾಗಿದ್ದ ಸಂತೋಷ ಕೂಟ ಸಮಾರಂಭವನ್ನು ಬಿಆರ್‌ಪಿಯಲ್ಲಿನ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನನ್ನ ಅನೇಕ ಸ್ನೇಹಿತರು ಸಂಜೆ ಬಂದವರು ನಂತರದ ಸ್ಥಳ ಬದಲಾವಣೆಯನ್ನು ತಿಳಿದು ಕಡೆಗವರು ಬಿಆರ್‌ಪಿಯಲ್ಲಿ ನಡೆದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಮತ್ತೆ ಕೆಲವರು ಅಲ್ಲಿ ಇಲ್ಲಿ ವಿಚಾರಿಸಿ ಬಿಆರ್‌ಪಿಗೆ ಬರುವ ವೇಳೆಗೆ ಸಂತೋಷಕೂಟವೇ ಅವಸರದ ಗಲಾಟೆಯಲ್ಲಿ ಮುಕ್ತಾಯವಾಗಿತ್ತು.

ಮದುವೆಯಾದ ಮಾರನೇ ದಿನ ಭದ್ರಾವತಿಯಲ್ಲಿರುವುದಾಗಲೀ ಹತ್ತಿರದಲ್ಲಿ ಇಲ್ಲೆಲ್ಲಿ ಇರುವುದು ಸೂಕ್ತವಲ್ಲವೆಂದು ಅವಸರದಲ್ಲಿ ಇಂದಿರಾ ಜೋಡಿಸಿಕೊಟ್ಟಿದ್ದ ಅವರದೇ ಸೂಟ್‌ಕೇಸ್‌ನಲ್ಲಿ ಒಂದೆರಡು ಸೀರೆ ಬಟ್ಟೆಗಳನ್ನು ಜೋಡಿಸಿಕೊಂಡು ಭದ್ರಾವತಿಯ ಬಸ್ ಸ್ಟಾö್ಯಂಡ್‌ಗೆ ಬಂದೆವು. ನಾನು ದಾವಣಗೆರೆಗೆ ಹೋಗೋಣವೆಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ನೋಡಿ, ಇವಳು ಅದು ನಮ್ಮ ಊರಿಗೆ ಹೋಗುವ ಬಸ್, ಅದರಲ್ಲಿ ತಮ್ಮ ಊರಿನವರು ಯಾರಾದರು ಇರುತ್ತಾರೆ ಎಂದು ಗಡಿಬಿಡಿ ಮಾಡಿದಾಗ ಅಲ್ಲೇ ಮೈಸೂರು ಕಡೆ ಹೊರಟು ನಿಂತಿದ್ದ ಬಸ್ ಹತ್ತಿ ಅರಸೀಕೆರೆಗೆ ಎರಡು ಟಿಕೆಟ್ ತೆಗೆದುಕೊಂಡು ಬಸ್ ಹತ್ತಿ ಕೂತೆವು. ಸದ್ಯ ಭದ್ರಾವತಿ ಬಿಟ್ಟೆವಲ್ಲ ಎಂಬ ಸಮಾಧಾನದಲ್ಲಿ ಸ್ವಲ್ಪ ಯೋಚಿಸುತ್ತಾ ಮೈಸೂರಿಗೆ ಹೋಗುವುದೋ ಇಲ್ಲ, ಅರಸೀಕೆರೆಯಲ್ಲಿ ಉಳಿಯುವುದೋ ಎಂಬ ಯೋಚನೆಯಲ್ಲಿದ್ದಾಗಲೇ, ಅರಸೀಕೆರೆಯಲ್ಲಿ ನಾನು ಬಿ.ಎ., ಮತ್ತು ಎಂ.ಎ. ನಲ್ಲಿ ನನ್ನ ರೂಂಮೇಟ್ ಮತ್ತು ಬ್ಯಾಚ್‌ಮೇಟ್ ಆಗಿದ್ದ ಎಲ್. ರವೀಂದ್ರ ಆಗ ಅರಸೀಕೆರೆ ತಹಸೀಲ್ದಾರನಾಗಿದ್ದ. ನಾವು ಅರಸೀಕೆರೆಯಲ್ಲಿ ಇಳಿದು ಬಸ್ ಸ್ಟಾö್ಯಂಡ್ ಹತ್ತಿರದಲ್ಲಿದ್ದ ವಸತಿಗೃಹದಲ್ಲಿ ರೂಂ ಮಾಡಿದೆವು. ನಂತರ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಯನ್ನೆಲ್ಲಾ ನೋಡಿ ಅವಳಿಗೊಂದು ಹೊಸ ಸೀರೆ ತೆಗೆದುಕೊಳ್ಳಲು ನಿರ್ಧರಿಸಿ, ವಸತಿಗೃಹದ ಎದುರಲ್ಲಿದ್ದ ಈಗಲೂ ಇರುವ `ಕನ್ನಿಕಾ ಪರಮೇಶ್ವರಿ ಕ್ಲಾತ್ ಸೆಂಟರ್’ನಲ್ಲಿ ಗಾಯತ್ರಿಗೆ `ನಾಳೆಯೊಳಗೆ ಬ್ಲೌಸ್ ಹೊಲೆದುಕೊಡುವ ಒಪ್ಪಿಗೆಯ ಮೇಲೆ ಒಂದು ಸೀರೆ ಮತ್ತಿತರ ಸಣ್ಣಪುಟ್ಟ ಸಾಮಾನುಗಳನ್ನು ಕೊಂಡುಕೊಂಡೆವು. ನಂತರ ತಹಸೀಲ್ದಾರನಾಗಿದ್ದ ರವೀಂದ್ರನಿಗೆ ಪೋನ್ ಮಾಡಿದೆ. ಹೀಗೆ ನಾನು ಮದುವೆಯಾಗಿ ಹೆಂಡತಿಯೊಡನೆ ಅರಸೀಕೆರೆ ಲಾಡ್ಜ್ನಲ್ಲಿ ಉಳಿದಿರುವ ಬಗ್ಗೆ ತಿಳಿಸಿದೆ. ಅವನು ನೇರ ಸಂಜೆ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಆತಂಕದ ಆವೇಗದಲ್ಲಿದ್ದ ನಮಗೆ ಅವನಿದ್ದುದು ಮತ್ತು ಮನೆಗೆ ತಕ್ಷಣ ಆಹ್ವಾನಿಸಿದ್ದುದು ಒಂದು ರೀತಿಯ ಸಮಾಧಾನ ನೀಡಿತ್ತು. ಸಂಜೆ ಅವರ ಮನೆಗೆ ಊಟಕ್ಕೆ ಹೊರಡುವ ಮುನ್ನ ಗಾಯತ್ರಿಯ ಎಲ್ಲಾ ಅಕ್ಕಂದಿರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ತುರ್ತಾಗಿ ಮದುವೆಯಾದ ಬಗ್ಗೆ ವಿವರಿಸಿ ತಾವೆಲ್ಲರೂ ಆಶೀರ್ವದಿಸಬೇಕೆಂದೂ, ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ನಮ್ರವಾಗಿ ವಿನಂತಿಸಿಕೊಂಡಿದ್ದೆವು.
ಸಂಜೆ ರವೀಂದ್ರನ ಮನೆಗೆ ಮದುವೆಯ ಜೋಡಿಯಾಗಿ ಔತಣವೊಂದಕ್ಕೆ ಜೊತೆಯಾಗಿ ಹೋಗುತ್ತಿರುವುದು ಮೊಟ್ಟಮೊದಲನೆಯದಾಗಿತ್ತು.

ನಾನು ಮಾಂಸಾಹಾರಿ ಮತ್ತು ಬೀರ್ ಕುಡಿಯುತ್ತಿದ್ದುದು ಗಾಯತ್ರಿಗೆ ಗೊತ್ತಿದ್ದರೂ ನಾನು ಅವಳಿಗಾಗಿ ಆ ಕ್ಷಣದಲ್ಲಿ ಕುಡಿಯುವುದು ಬೇಡ ಎಂದು ನಿರ್ಧರಿಸಿದ್ದೆ. ರವೀಂದ್ರನ ಮನೆಯಲ್ಲಿ ಅವರ ತಂದೆ ಆರ್.ಎಫ್.ಒ. ಆಗಿ ನಿವೃತ್ತರಾದವರು. ಮನೆಯಲ್ಲಿ ಮೊದಲೇ ಊಟಕ್ಕೆ ಕೂತಿದ್ದರು. ಜೊತೆಗೆ ಮ್ಯಾಕ್‌ಡೆವಲ್ ವಿಸ್ಕಿ ಬಾಟಲ್ ಹಾಗೂ ಮಾಂಸದೂಟದ ಎಲುಬಿನ ತುಣುಕುಗಳೆಲ್ಲ ಸುತ್ತಲೂ ಇದ್ದವು. ಗಾಯತ್ರಿ ನೋಡಿದ ಮೊದಲ ಮಾಂಸಹಾರಿ ಊಟದ ನೋಟದಲ್ಲಿಯೇ ಹೌಹಾರಿ ನಿಂತಿದ್ದಳು. ನಾನು ಮದುವೆ ಮಾಡಿಕೊಂಡು ಬಂದಿರುವ ಕಾರಣ ರವೀಂದ್ರ ನಿಜವಾಗಿಯೂ ಅದ್ದೂರಿ ಊಟ ಮತ್ತು ವಿಸ್ಕಿಗೆ ವ್ಯವಸ್ಥೆ ಮಾಡಿದ್ದ. ನಾನು ನನ್ನ ಮದುವೆಯ ಯಾವ ವಿವಾದಗಳನ್ನೂ ಅವನಿಗೆ ತಿಳಿಸದ ಕಾರಣ ಅವನು ತೋಚಿದಂತೆ ಮಾಡಿದ್ದ. ನಾನು ಅವನಿಗೂ ಮತ್ತು ಅವನ ಶ್ರೀಮತಿಯವರಿಗೆ, ಇವಳು ಮಾಂಸ ತಿನ್ನುವುದಿಲ್ಲ ಬೇರೇನಾದರೂ ಇದ್ದರೆ ಆದೀತೆಂದು ಹೇಳಿದೆ. ಅದಕ್ಕೇನೆಂದು 10 ನಿಮಿಷದಲ್ಲಿ ತಿಳಿಸಾರೊಂದು ತಯಾರಿಸಿದರು. ನಾನು ಗಾಯತ್ರಿ ಮತ್ತು ರವೀಂದ್ರ ಊಟ ಮಾಡಿದೆವು. ಮೊದಲ ಮದುವೆಯ ಔತಣಕೂಟ ತಿಳಿಸಾರು ಉಪ್ಪಿನಕಾಯಿ ಮೊಸರಲ್ಲಿ ಅವಳ ಊಟ ಮುಗಿದಿತ್ತು. ನನಗೆ ಒಳ್ಳೆಯ ಮಾಂಸಾಹಾರದ ಊಟವಾಗಿತ್ತು. ಅಲ್ಲಿಂದ ಮಾರನೇ ದಿನ ಮೈಸೂರಿಗೆ ಬಂದು ಜಗನ್ಮೋಹನ ಪ್ಯಾಲೇಸ್ ಹತ್ತಿರದಲ್ಲಿದ್ದ ಮಹಾರಾಜಾ ಲಾಡ್ಜ್ನಲ್ಲಿ ಉಳಿದುಕೊಂಡೆವು. ಅಲ್ಲಿಂದ ಮೈಸೂರಿನ ಗೆಳೆಯರಿಗೆ ನನ್ನ ಹಿರಿಕಿರಿ ಸ್ನೇಹಿತರಿಗೆ ಫೋನಿನಲ್ಲೆ ನಾವು ಮದುವೆಯಾಗಿ ಬಂದಿರುವ ವಿಷಯ ತಿಳಿಸಿದೆ.

ಹಿರಿಯರಾದ ಪಿ. ಮಲ್ಲೇಶ್ ಅವರು ಮನೆಗೆ ಕರೆದು ಅದ್ದೂರಿಯಾದ ಔತಣ ಮಾಡಿಸಿ ನನಗೆ ಗೊತ್ತಿರುವ ಮತ್ತು ಇನ್ನಿತರ ಸ್ನೇಹಿತರನ್ನು ಕರೆದು ನಾವಿಬ್ಬರೂ ಹೊಸದಾಗಿ ಮದುವೆಯಾಗಿ ಬಂದಿರುವ ಬಗ್ಗೆ ಅಭಿಮಾನದಿಂದ ಪರಿಚಯ ಮಾಡಿಸಿ ಹರಸಿ ಜೊತೆಗೆ ನನ್ನ ಹೆಂಡತಿಗೆ ಒಳ್ಳೆಯ ಸೀರೆಯನ್ನು ತಂದು ಉಡುಗೊರೆ ನೀಡಿದ್ದನ್ನ ಈಗಲೂ ಗಾಯತ್ರಿ ನೆನಪಿಸಿಕೊಳ್ಳುತ್ತಾಳೆ. ಮಲ್ಲೇಶ್ ಮತ್ತು ಅವರ ಶ್ರೀಮತಿ ಅವರು ಗಾಯತ್ರಿಯನ್ನು ಚೆನ್ನಾಗಿ ಮಾತಾಡಿಸಿ, ಒಳ್ಳೆಯ ಹುಡುಗನನ್ನು ಮದುವೆಯಾಗಿದ್ದೀಯ ಏನೂ ಯೋಚನೆ ಮಾಡಬೇಡ ಎಂದೆಲ್ಲ ಅವಳಿಗೆ ಸಮಾಧಾನದ ಮಾತು ಹೇಳಿ ಕಳುಹಿಸಿದ್ದರು.
ಹಾಗೆಯೇ ಮಾದೇವ ಮತ್ತು ಸುಮಿತ್ರಾಬಾಯಿಯವರು ಮನೆಗೆ, ಪಿ.ಕೆ. ಮಿಶ್ರಾಜಿ ಮತ್ತು ಮಹೇಶನ ಮನೆಗೂ ಹೋಗಿದ್ದೆವು. ಸುಮಿತ್ರಾಬಾಯಿ ಅವರು ನನ್ನ ಹೆಂಡತಿಯ ಹಿನ್ನೆಲೆ ಮೊದಲೇ ತಿಳಿದುಕೊಂಡಿದ್ದ ಕಾರಣ ಸೊಗಸಾದ ಸಸ್ಯಾಹಾರಿ ಔತಣ ಮಾಡಿದ್ದರು. ನನಗೆ ಬ್ರಾಹ್ಮಣ ಜಾತಿಯ ಅನೇಕ ಸ್ನೇಹಿತರಿರುವುದಾಗಿಯೂ ಆದುದರಿಂದ ಸಸ್ಯಾಹಾರಿ ಊಟ ಉಪಚಾರಗಳು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿ ಸುಮಿತ್ರಾಬಾಯಿ ಅವರು ಆದರಿಸಿದ್ದರು.

ಎಲ್ಲ ಸ್ನೇಹಿತರನ್ನು ಮಾತಾಡಿಸಿದ ನಂತರ ಸಂಜೆ ಎಂ.ಸಿ. ಸುಂದರೇಶ ನಮ್ಮ ಕಿರಿಯ ಗೆಳೆಯ ಮತ್ತು ತನ್ನ ಎಂಬಿಎ ಶಿಕ್ಷಣದ ನಂತರ ಸ್ವಂತ ಗ್ಯಾಸ್ ಏಜೆನ್ಸಿ ನಡೆಸುತ್ತಾ ಬೆಳೆಯುವ ಉದ್ಯಮಿಯಾಗಿದ್ದ. ಅವನು ದೊಡ್ಡ ಹೋಟೆಲೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದ. ಮಹೇಶ ಮತ್ತಿತರ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದೆವು. ಆಗ ಅಲ್ಲಿಗೆ `ಆಂದೋಲನ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ತನ್ನ ಪ್ರೇಮ ಪ್ರಕರಣದ ವೈಫಲ್ಯ ಕುರಿತು ಹೇಳುತ್ತಾ… ಅಳುತ್ತಾ ಮತ್ತಾರೂ ಮಾತಾಡಲಾಗದಂತೆ ಅವನದೇ ದೊಡ್ಡ ಗೋಳಾಯಿತು. ಮಹೇಶ ಎಲ್ಲರನ್ನು ಸಮಾಧಾನ ಮಾಡುತ್ತಾ ಪಾರ್ಟಿ ಮುಗಿಸಿದ್ದೆವು. ಸುಂದರೇಶ್, ಇವರೆಲ್ಲ ಅದಕ್ಕೆ ನಾನು ಬೇಡ ಅಂದಿದ್ದು, ಎಂದು ಬೇಸರ ಮಾಡಿಕೊಂಡಿದ್ದ. ನಾನೇ ಆತನಿಗೆ ಸಮಾಧಾನದ ಮಾತುಗಳನ್ನು ಹೇಳಿ ಅಲ್ಲಿಂದ ಬೀಳ್ಕೊಂಡಿದ್ದೆವು.

ಮಾರನೇ ದಿನ ಮಹೇಶನ ಊರಿಗೆ ಹೋಗಿ ಎರಡು ದಿನ ಅವನ ಊರಾದ ಕುಪ್ಪೇಗಾಲದಲ್ಲಿ ಇದ್ದೆವು. ಮಹೇಶನ ತಂದೆ ದೊಡ್ಡ ಜಮೀನುದಾರರು. ಮನೆಯಲ್ಲಿ ಹತ್ತಾರು ಆಳು ಕಾಳುಗಳು ಇದ್ದು ರೈತಾಪಿ ಕೆಲಸಗಳು ನಡೆಯುತ್ತಿದ್ದವು. ರೇಷ್ಮೆ, ತೆಂಗು, ಬತ್ತದ ಬೆಳೆಗಳಿದ್ದ ಹೊಲ ಗದ್ದೆಗಳ ಕಡೆ ತಿರುಗಾಡುತ್ತಾ ಅವರೂರಿಗೆ ಹೊಂದಿಕೊಂಡ ನದಿಕಡೆ ತಿರುಗಾಡಿ ಮನೆಗೆ ಬರುತ್ತಿದ್ದೆವು. ಮಹೇಶನ ಮನೆಯವರು ವಿಶೇಷವಾಗಿ ಉಪಚರಿಸಿದರು. ಗಾಯತ್ರಿ, ಅವರ ಅಡುಗೆಯ ಮನೆಯಲ್ಲಿದ್ದ ಒಂದು ಬುಟ್ಟಿ ತುಂಬಾ ಕಟ್ಟಿಟ್ಟಿದ್ದ ರಾಗಿ ಮುದ್ದೆಗಳನ್ನು ನೋಡಿ `ಇಷ್ಟೊಂದಾ’ ಎಂದು ಉದ್ಗಾರ ತೆಗೆದಿದ್ದಳು. ಅದಕ್ಕೆ ಅವರಮ್ಮ ಕೆಲಸಗಾರರಿಗೆ ಊಟ ಕೊಡದಿದ್ದರೆ ಕೆಲಸಕ್ಕೆ ಬರುವುದಿಲ್ಲ ಎಂದೆಲ್ಲ ವಿವರಣೆ ನೀಡುತ್ತಿದ್ದರು. ಎರಡು ದಿನ ಆರಾಮ ಇದ್ದು ಕುಪ್ಪೇಗಾಲದಿಂದ ಮೈಸೂರಿಗೆ ಹೊರಟು ನಿಂತಿದ್ದ ಬಸ್ಸು ಏರಿದ್ದೆವು. ನಮ್ಮನ್ನು ಕಳಿಸಲು ಬಂದಿದ್ದ ಮಹೇಶ ಏನೋ ನೆನಪು ಮಾಡಿಕೊಂಡವನಂತೆ ಬಸ್ಸಿನ ಪಕ್ಕಕ್ಕೆ ಬಂದು 200ರೂಗಳನ್ನು ನನ್ನ ಕೈಗಿಟ್ಟು ನಾನೇ ಮದುವೆ ಕಾಲಕ್ಕೆ ಸ್ವಲ್ಪ ಮುಂಚೆ ಬರಬೇಕಾಗಿತ್ತು, ಆಗಲಿಲ್ಲ ಎಂದು ಹೇಳುತ್ತಿರುವಾಗಲೇ ಬಸ್ ಮುಂದೆ ಮುಂದೆ ಚಲಿಸುತ್ತಿತ್ತು. ಧಾವಂತದಲ್ಲಿ ಮದುವೆ ನೋಂದಾಯಿಸಿಕೊಂಡು ಮೈಸೂರು ಕಡೆಗೆ ಹೋಗಿದ್ದ ನಾನು ಬಿಆರ್‌ಪಿಗೆ ವಾಪಸ್ ಬಂದಿದ್ದೆ. ನಂತರ 10ನೇ ತಾರೀಖಿನಂದು ಆಯೋಜಿಸಿದ್ದ ಔತಣಕೂಟಕ್ಕೆ ರೆಡಿಯಾಗುತ್ತಿದ್ದೆವು. ಯಾರೆಲ್ಲಾ ಬರಬಹುದು, ಏನೇನು ಬೆಳವಣಿಗೆಯಾಗಬಹುದೆಂಬ ದುಗುಡದಲ್ಲಿದ್ದೆವು. ನಮ್ಮ ಮದುವೆಗೆಲ್ಲಾ ಒತ್ತಾಸೆಯಾಗಿದ್ದ ಪ್ರಭುವಿನ ಮೇಲೆ ಎಲ್ಲರ ವಕ್ರದೃಷ್ಟಿ ಬಿದ್ದಿತ್ತು. ಗಾಯತ್ರಿ ಮನೆಯವರು ಮತ್ತು ಅವರಲ್ಲಿನ ಹಿರಿಯರನೇಕರು ಶಿವಮೊಗ್ಗದ ಅವರ ಮನೆಗೆ ಬಂದು ಗಾಯತ್ರಿಯನ್ನು ಅವರುಗಳು ಮಾತಾಡಿಸಬೇಕೆಂದು ಅದಕ್ಕಾಗಿ ನೀವು ಅವರಿಬ್ಬರನ್ನು ಶಿವಮೊಗ್ಗಕ್ಕೆ ಕರೆಸಲು ಪ್ರಭುಗೆ ಒತ್ತಾಯಿಸಿದ್ದರು.

ಅವರ ಇಚ್ಛೆಯಂತೆ ನಾನು ಗಾಯತ್ರಿ ಪ್ರಭು ಮನೆಗೆ ಸುಮಾರು ಮಧ್ಯಾಹ್ನ 11-12ರ ಸಮಯಕ್ಕೆ ಹೋದೆವು. ಗಾಯತ್ರಿಯ ಹಿರಿಯ ಅಣ್ಣ ಹೆಚ್.ಸಿ. ನಂಜುಂಡಭಟ್ಟ ಮತ್ತು ಹೆಚ್.ಸಿ. ಜಗದೀಶ್ ಹಾಗೂ ಬಂಧುವಾಗಿದ್ದ ಶಾರದಮ್ಮ ಅವರುಗಳ ಜೊತೆ ಇನ್ನೂ ಹಲವರು ಗಾಯತ್ರಿಯೊಡನೆ ಮಾತನಾಡಿದರು. ಅವರನ್ನೆಲ್ಲ ನೋಡಿದ ಗಾಯತ್ರಿ ಭಾವುಕಳಾಗಿ ಕೂತಿದ್ದಳು. ಬಂದ ಗಾಯತ್ರಿ ಬಂಧುಗಳು ಯಾರೂ ನನ್ನನ್ನು ಮಾತಾಡಿಸಲಿಲ್ಲ. ಅವರೆಲ್ಲ ಗಾಯತ್ರಿಯೊಡನೆ ಮಾತಾಡಿ ಬೇರೆಲ್ಲ ಮಾತು ಮುಗಿದು ಕೊನೆಯಲ್ಲಿ ಈಗ ಎಂ.ಎ. ಮುಗಿದಿರುವ ಕಾರಣ ಮುಂದಿನ ಓದಿಗಾಗಿ ಹೊರದೇಶಕ್ಕೆ ಹೋಗುವ ವ್ಯವಸ್ಥೆ ಮಾಡುವುದಾಗಿಯೂ, ಜೀವನದಲ್ಲಿ ಭೋಗಕ್ಕಿಂದ ತ್ಯಾಗ ದೊಡ್ಡದು ಎಂಬೆಲ್ಲ ಮಾತಾಡಿ ಈಗ ಆಗಿರುವ ಮದುವೆ ಮದುವೆಯಲ್ಲ, ಬಿಟ್ಟು ಬಿಡು ಎಂದೆಲ್ಲ ಮಾತುಗಳು ಬಂದವು. ಆಗ ಅದುವರೆಗೂ ಸುಮ್ಮನಿದ್ದ ಪ್ರಭು ಮಧ್ಯೆ ಪ್ರವೇಶಿಸಿ, ಈಗ ನನ್ನ ಸ್ನೇಹಿತ ನಿಮ್ಮ ತಂಗಿಯನ್ನು ಮದುವೆಯಾಗಿದ್ದು ಮುಂದಿನ ಜೀವನದ ವಿಷಯ ಮಾತನಾಡುವುದನ್ನು ಬಿಟ್ಟು ನೀವು ಬೇರ್ಪಡಿಸುವ ಮಾತಾಡುತ್ತಿದ್ದೀರಿ ಎಂದು ಆಕ್ಷೇಪಿಸಿ, ಇನ್ನು ಸಾಕು ಹೊರಡಿ ಎಂದು ಏರು ಧ್ವನಿಯಲ್ಲಿ ಹೇಳಿದ. ಗಾಯತ್ರಿ ಚಿಕ್ಕ ಅಣ್ಣ ಜಗದೀಶ, ಇದು ಏನು ಮನೆಯೋ ಜೈಲೋ ಹೀಗೆಲ್ಲಾ ಮಾತಾಡುತ್ತೀರೆಂದು ಹೇಳುವಾಗಲೇ, ಪ್ರಭು ಹೌದು ಇದು ಜೈಲು ನಾನಿಲ್ಲಿನ ಜೈಲ್ ಸೂಪರಿಂಟೆಂಡೆಂಟ್ ಎಂದು ಏರು ಧ್ವನಿಯಲ್ಲಿ ಹೇಳಿದ ಕಾರಣ ಮುಂದಿನ ಮಾತುಗಳು ನಿಂತು ನಮ್ಮೆಲ್ಲರ ಭೇಟಿ ಕೊನೆಗೊಂಡಿತ್ತು.

ದಿನಾಂಕ 10-6-1979ರ ಮಧ್ಯಾಹ್ನ 3-4 ಗಂಟೆಗೆ ನಾವಿಬ್ಬರೂ ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿನ ಒಂದು ಶಾಲಾ ಕೊಠಡಿಯಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಕೃಷ್ಣಪ್ಪನವರ ಸಮಾಜವಾದಿ, ದಲಿತ ಮಿತ್ರರನೇಕರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಕೃಷ್ಣಪ್ಪನವರು ಮಾತಾಡಿ, ಸರಳ, ಜಾತ್ಯತೀತ ಮದುವೆಗಳು ಭಾರತೀಯರಿಗೆ ಇಂದಿನ ಅವಶ್ಯಕವಾದ ಅಂಶಗಳೆಂದು ಮಾತನಾಡಿ ಇಂತಹ ಮದುವೆಯಾಗುತ್ತಿರುವ ನಮ್ಮಿಬ್ಬರಿಗೂ ಶುಭ ಕೋರಿದ್ದರು. ನಂತರದಲ್ಲಿ ಡಾ. ತೀ.ನಂ. ಶಂಕರನಾರಾಯಣ, ಡಾ. ಶ್ರೀಕಂಠ ಕೂಡಿಗೆ, ಡಾ. ಜಿ.ಎನ್ ಕೇಶವಮೂರ್ತಿ ಮತ್ತು ಪ್ರಭು ಕೂಡ ಮಾತಾಡಿದ ನಂತರ ನಾನು ಎಲ್ಲರಿಗೂ ಕೃತಜ್ಞತೆ ಹೇಳಿದ್ದೆ. ಇನ್ನೇನು ಇದೆಲ್ಲ ಆಗುವ ಸಮಯಕ್ಕೆ ಸರಿಯಾಗಿ ಗಾಯತ್ರಿಯ ತಂದೆ, ಅಣ್ಣಂದಿರು ಹಾಗೂ ಇತರ ಕೆಲವರು ಅಲ್ಲಿಗೆ ಬಂದರು. ಕೃಷ್ಣಪ್ಪನವರು ಇದೆಲ್ಲವನ್ನು ಗಮನಿಸುತ್ತಾ ಇದ್ದ ಕಾರಣ ಗಲಾಟೆ ಆಗುವ ಸಂಭವವನ್ನು ನಿರೀಕ್ಷಿಸಿ ನಮ್ಮಿಬ್ಬರನ್ನು ಒಂದು ಅಂಬಾಸಿಡರ್ ಕಾರಿನಲ್ಲಿ ಭದ್ರಾವತಿಗೆ ತರಾತುರಿಯಲ್ಲಿ ಕಳಿಸಿಕೊಟ್ಟರು. (ಸುದ್ದಿದಿನ.ಕಾಂ|ವಾಟ್ಸಾಪ್|9980346243

ಮುಂದುವರಿಯುವುದು

Continue Reading

ದಿನದ ಸುದ್ದಿ

ಮೊಹರಂ : ಜನತೆಯ ಧರ್ಮ

Published

on

ಚರ್ಚೆಯಲ್ಲಿ ರಹಮತ್ ತರೀಕೆರೆ
  • ಡಾ.ರಹಮತ್ ತರೀಕೆರೆ

ಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್‍ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು.

ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತ ಸತ್ತರು. ಮಹಿಳೆಯರು ದುಃಖದಿಂದ ಪರಿತಪಿಸಿದರು. ಇದನ್ನು ಜನಪದರು ‘ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಆರಾಣ್ಯಾದಾಗ ಅವರಾ ಕಾಣದ ಮೂರು ದಿವಸ ನೀರಾ, ಕುಡದಾರೋ ಕಣ್ಣೀರಾ ಮಕ್ಕಳು ಹುಡುಗರು ಹೆಂಗಸರಾ’ ಎಂದು ಹಾಡಿರುವುದುಂಟು. ಇಂತಹ ದುಗುಡದ ನೆನಪಿನಲ್ಲಿ ಹುಟ್ಟಿದ ಧಾರ್ಮಿಕ ಆಚರಣೆಯೊಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರ ಪಡೆಯಿತು. ಉತ್ತರ ಕರ್ನಾಟದಲ್ಲಿ ಎಲ್ಲ ಧರ್ಮದ ಜಾತಿಯ ಜನರು ಒಟ್ಟಾಗಿ ಆಚರಿಸುವ ಊರಹಬ್ಬವಾಯಿತು. ಹೀಗಾಗಿ ಮುಸ್ಲಿಮರೇ ಇಲ್ಲದ ನೂರಾರು ಊರುಗಳಲ್ಲೂ ಮೊಹರಂ ನಡೆಯುತ್ತದೆ.

ಮೊಹರಂನಲ್ಲಿ ಶೋಕಗೀತೆಯ ರಚನೆ, ಹಾಡಿಕೆ, ಕುಣಿತ, ವೇಷಗಾರಿಕೆ,ಮೆರವಣಿಗೆ, ವಿಶೇಷ ಆಹಾರಗಳ ಆಯಾಮಗಳಿವೆ. ಇದರ ಫಲವಾಗಿ ಕರ್ನಾಟಕದಲ್ಲಿ ಹಾಡು ಕಟ್ಟುವ ಸಾವಿರಾರು ಶಾಹಿರರೂ ಗಾಯಕರೂ ಇದ್ದಾರೆ. ಹೆಜ್ಜೆಕುಣಿತ, ಕೋಡಂಗಿ ಕುಣಿತ, ಡಬಗಳ್ಳಿ ಕುಣಿತ ಮಾಡುವ, ಹುಲಿವೇಷ, ಅಚೊಳ್ಳಿಸೋಗು, ಭಡಂಗ್‍ವೇಷ ಹಾಕುವ ಹರಕೆ ಕಲಾವಿದರಿದ್ದಾರೆ. ನಾನು ಕಂಡಂತೆ,
ಬೀಳಗಿ, ಕೆರೂರ ಕುದುರೆಮೋತಿ ಅಗಸನೂರ , ಆಯನೂರು ಯರಗುಪ್ಪಿ ಗೋಕಾಕಫಾಲ್ಸ ಮುದಗಲ್ ಮೊಹರಂ ವಿಶಿಷ್ಟವಾದವು. ಪ್ರತಿಯೊಂದೂ ಊರು ತನ್ನದೇ ಆಚರಣೆಯನ್ನು ರೂಢಿಸಿಕೊಂಡಿದೆ.

ಅಗಸನೂರಿನಲ್ಲಿ ಹತ್ತು ದಿನಗಳ ಕಾಲ ಚಪ್ಪಲಿ ತೊಡುವುದಿಲ್ಲ. ಮಂಚದಲ್ಲಿ ಮಲಗುವುದಿಲ್ಲ. ಬೀಳಗಿಯಲ್ಲಿ ತೇರಿನಂಥ ರಚನೆಗೆ ಹಿಲಾಲುಗಳನ್ನು ಸಿಕ್ಕಿಸಿ ಉರಿವವೃಕ್ಷವನ್ನೇ ಸೃಷ್ಟಿಸುತ್ತಾರೆ. ಆಯನೂರಲ್ಲಿ ಯಜೀದನ ಸಂಕೇತವಾಗಿ ರಾವಣನ ಪ್ರತಿಕೃತಿ ಸುಡುತ್ತಾರೆ; ಅಗಸನೂರಿ ನಲ್ಲಿ ಅಲಾವಿಯ ಸುತ್ತ ಮಾಡುವ ಹೆಜ್ಜೆ ನೃತ್ಯವು ಅಪೂರ್ವವಾಗಿದೆ. ಕುದುರೆಮೋತಿ, ಹೊಸಪೇಟೆ, ಗಜೇಂದ್ರಗಡಗಳು ಹುಲಿವೇಷಕ್ಕೆ ಹೆಸರಾಗಿವೆ; ಮುದಗಲ್ಲಿನಲ್ಲಿ ಅಗಲಿದ ಹಸನ- ಹುಸೇನರ ಮಿಲನವಾ ಗುವ ಆಚರಣೆ ಕಣ್ತುಂಬಿಕೊಳ್ಳಲು ಕೋಟೆಯ ಹೊರಗೆ ಸಾವಿರಾರು ಜನ ಸೇರುತ್ತಾರೆ. ಇಂಡಿ ಕಡೆ ಭಡಂಗ್ ಎನ್ನುವ ಹರಕೆವೇಷ ಹಾಕುತ್ತಾರೆ; ಬಾಗಲಕೋಟೆ-ವಿಜಯಪುರ ಸೀಮೆಯಲ್ಲಿ ಆಫ್ರಿಕನ್ ಸಿದ್ದಿಗಳನ್ನು ನೆನಪಿಸುವ ಅಚೊಳ್ಳಿ- ಬಿಚೊಳ್ಳಿ ಸೋಗುಗಳಿವೆ.

ಈ ಸೋಗಿಗೆ ಮುಖಕ್ಕೆ ಕಪ್ಪುಮಸಿ ಬಳಿದು, ಸೊಂಟಕ್ಕೆ ಗಂಟೆ ಕಟ್ಟಿ, ತಲೆಗೆ ಲಾಲಿಕೆಯಾಕಾರದ ಅಲಂಕೃತ ಟೋಪಿ ಧರಿಸುತ್ತಾರೆ. ಮೊಹರಂ ಆಚರಣೆಯ ದಿನಗಳಲ್ಲಿ ಮುಸ್ಲಿಮೇತರರು ಲಾಡಿ ಧರಿಸಿ ಫಕೀರರಾಗುವ ಪದ್ಧತಿಯೂ ಇದೆ. ಮುಸ್ಲಿಮೇತರ ಕುಟುಂಬಗಳು ಐದು ಜನ ಫಕೀರರಿಗೆ ಕರೆದು ಬಿನ್ನಹ ಮಾಡಿಸಿದಲ್ಲದೆ ತಾವು ಉಣ್ಣುವುದಿಲ್ಲ. ಚೋಂಗೆ, ಮಾಲ್ದಿ ಎಂಬ ಸಿಹಿ ಅಡುಗೆ, ಶರಬತ್ತು ಹಾಗೂ ಮೊಸರನ್ನ ಮೊಹರಂ ಮುಖ್ಯ ಅಡುಗೆಗಳು. ಕರ್ಬಲಾ ವೀರರು ಊಟ ನೀರಿಲ್ಲದೆ ಮಡಿದವರಾದ್ದರಿಂದ, ಹಸಿದವರಿಗೆ ಉಣಿಸುವ ಮತ್ತು ಬಾಯಾರಿದವರಿಗೆ ಶರಬತ್ತು ಕುಡಿಸುವ ಪದ್ಧತಿ ರೂಢಿಯಲ್ಲಿದೆ. ಇಂಡಿ ಮತ್ತು ಸೇಡಂ ಭಾಗದಲ್ಲಿ ಕುರಿಬ್ಯಾಟೆ ಕೊಡುವ ಪದ್ಧತಿಯಿದೆ. ಹೀಗೆ ಉತ್ತರ ಕರ್ನಾಟಕದ ಮೊಹರಂ ಬಹುರೂಪಿಯಾಗಿದೆ.

ದೂರದ ಇರಾಕಿನಲ್ಲಿ ಸಾವಿರಾರು ವರ್ಷದ ಹಿಂದೆ ನಡೆದ ಒಂದು ಮಾನವ ದುರಂತವನ್ನು, ತಮ್ಮ ಬೀದಿಯಲ್ಲಿ ನಿನ್ನೆ ಮೊನ್ನೆ ಸಂಭವಿಸಿದ್ದು ಎಂದು ಇನ್ನೊಂದು ದೇಶಕ್ಕೆ, ಕಾಲಕ್ಕೆ ಸಂಸ್ಕೃತಿ ಮತ್ತು ಧರ್ಮಕ್ಕೆ ಸೇರಿದ ಜನಸಮುದಾಯ ಭಾವಿಸಿ ಮಿಡಿಯುವುದೇ ಸೋಜಿಗ. ಇದು ಜನಪದ ಮನಸ್ಸಿನ ಮಾನವೀಯ ಗುಣ. ಇಲ್ಲಿ ಚರಿತ್ರೆಯನ್ನು ಸಮಕಾಲೀನಗೊಳಿಸುವ ಗುಣವೂ ಇದೆ. ವಿಶೇಷವೆಂದರೆ, ಕರ್ಬಲಾ ಹಾಡುಗಳಿಗೆ ದುರಂತದ ವಸ್ತುವಿಗೆ ಸ್ಥಳೀಯ ದುರಂತ ಘಟನೆಗಳೂ ಸೇರಿಕೊಳ್ಳುವುದು. ಬಸ್ಸು ಕಾಲುವೆಗೆ ಉರುಳಿ ಜನ ಸತ್ತದ್ದು, ಎತ್ತುಗಳನ್ನು ರಕ್ಷಣೆ ಮಾಡುತ್ತ ರೈತ ಕಳ್ಳರ ಕೈಲಿ ಕೊಲೆಯಾಗಿದ್ದು, ದುಷ್ಟನಿಂದ ತನ್ನನ್ನು ಕಾಪಾಡಿಕೊಳ್ಳುವ ಅವಸರದಲ್ಲಿ ತಾಯೊಬ್ಬಳು ಕೂಸನ್ನು ಕಳೆದುಕೊಂಡಿದ್ದು, ಗೆಳೆಯನ ಮಡದಿಯನ್ನು ಪ್ರೇಮಿಸಿ ಸ್ವಹತ್ಯೆ ಮಾಡಿಕೊಂಡಿದ್ದು – ಇವೂ ಮೊಹರಂ ಹಾಡುಗಳ ವಸ್ತುಗಳಾಗಿವೆ. ಬೀಳಗಿ ತಾಲ್ಲೂಕಿನ ರೊಳ್ಳಿಯಲ್ಲಿ ಆಲಮಟ್ಟಿ ಡ್ಯಾಂನ ನೀರಿನಲ್ಲಿ ಊರು ಮನೆ ಜಮೀನು ಮುಳುಗಡೆಯಾದ ದುಃಖವನ್ನು ಕೇಳುವವರ ಎದೆಕಲಕುವಂತೆ ಹಾಡಾಗಿ ಹಾಡಿದ್ದರು.

ಮೊಹರಂ ಹಾಡುಪರಂಪರೆ, ಭಾರತೀಯ ಗುರುಪರಂಪರೆಯ ಭಾಗವಾಗಿದೆ. ಶಾಸ್ತ್ರೀಯ ಸಂಗೀತದಲ್ಲಿ ಇರುವಂತೆ, ಇಲ್ಲೂ ಹಾಡಿಕೆ ಕಲಿಯುವ ಶಿಷ್ಯರು ಗುರುವಿನಿಂದ ದೀಕ್ಷೆ ಪಡೆದು ಜತೆಯಲ್ಲಿ ಹಾಡುತ್ತ, ಒಂದು ದಿನ ಗುರುವಿನ ಅನುಮತಿಯಿಂದ ಸ್ವತಂತ್ರವಾಗಿ ಹಾಡುತ್ತಾರೆ; ಹಾಡಿನಲ್ಲಿ ಗುರುವಿನ ಹೆಸರನ್ನು ಸ್ಮರಿಸುತ್ತಾರೆ; ಬೇರೆ ಬೇರೆ ತಂಡಗಳು ಪರಸ್ಪರ ಎದುರಾಗಿ, ಜಿದ್ದಾಜಿದ್ದಿ ಸವಾಲ್- ಜವಾಬ್ ನಡೆಸುತ್ತಾರೆ.

ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಸವಾಲ್ ಜವಾಬ್ ಹಾಡಿಕೆಯ ಸ್ಪರ್ಧೆ ನಡೆಯುತ್ತದೆ. ಅದೊಂದು ಬೌದ್ಧಿಕ ಕದನ. ಇದರಲ್ಲಿ ಸೋತವರು ಸಾಯುವ ತನಕ ಹಾಡಿಕೆಗೆ ವಿದಾಯ ಹೇಳಿದ್ದುಂಟು; ಗೆದ್ದವರು ಪದಕ ಧರಿಸಿ, ಜನರಿಂದ ಆಹೇರಿ ಪಡೆದು, ಹೊಲವನ್ನು ಭಕ್ಷೀಸಾಗಿ ಪಡೆದದ್ದುಂಟು. ವೆಂಕಟಬೇನೂರಿನ (ಕಲಬುರ್ಗಿ) ಕಾಕಿಪೀರಾ, ಕದರಮಂಡಲಗಿಯ (ಬ್ಯಾಡಗಿ) ಅಲ್ಲಾಭಕ್ಷ್, ಹುಲಕುಂದದ (ರಾಮದುರ್ಗ) ಭೀಮಕವಿ, ನಿಡಗುಂದದ (ಚಿಂಚೋಳಿ) ಕೆರೂರ ನದಾಫಸಾಬ್ (ಬದಾಮಿ)ಬಸವಂತರಾವ್, ಗೋಕಾಕದ ಭರಮಣ್ಣ ಬೂಶಿ, ಸತ್ತೂರಿನ ಇಮಾಂಸಾಬ್ ಪ್ರಸಿದ್ಧ ಶಾಹಿರರು. ಇಂಡಿ, ಸೇಡಂ, ಬೀಳಗಿ ಭಾಗದಲ್ಲಿ ಮಹಿಳೆಯರು ಗುಂಪಾಗಿ ಕುಳಿತು ಶೋಕಗೀತೆಗಳನ್ನು ಹಾಡುತ್ತಾರೆ. ಈ ಗೀತೆಗಳ ವಸ್ತು, ಅಸಘರನೆಂಬ ಕೂಸಿನ ಸಾವು, ಅಭಿಮನ್ಯುವಿನ ಹಾಗೆ ಚಿಕ್ಕ ಹುಡುಗನಾದ ಕಾಸೀಮ್‌ನನ್ನು ರಣರಂಗಕ್ಕೆ ಕಳಿಸಿಕೊಡುವುದು, ಕಾಸೀಮನ ಮರಣ, ಅವನ ಎಳೆಹೆಂಡತಿ ಸಕೀನಾಳನ್ನು ವಿಧವೆಯಾಗಿಸುವುದು, ಅವಳ ಪ್ರಲಾಪ ಇತ್ಯಾದಿ.

ಮೊಹರಂ ಹಾಡುಗಾರರು ಇಸ್ಲಾಮಿನ ಚರಿತ್ರೆ ಪುರಾಣಗಳಂತೆ, ಮಹಾಭಾರತ, ರಾಮಾಯಣ, ಶಿವಪುರಾಣಗಳಲ್ಲಿಯೂ ಪರಿಣತಿ ಪಡೆದಿದ್ದಾರೆ. ಅವರ ಹಾಡುಗಳಲ್ಲಿ ಯಜೀದ್- ಹುಸೇನರ ಕದನದ ಚರಿತ್ರೆಯು ದೇಸಿ ಪುರಾಣಗಳ ಜತೆ ಬೆರೆತುಬಿಡುತ್ತದೆ. ಬಾಗೇವಾಡಿ ತಾಲ್ಲೂಕಿನಲ್ಲಿ ಪೈಗಂಬರನ್ನು ರಾಮನನ್ನಾಗಿ, ಬೀಬೀ ಫಾತಿಮಾರನ್ನು ಸೀತೆಯನ್ನಾಗಿ, ಹಸನ-ಹುಸೇನರನ್ನು ಲವ-ಕುಶರನ್ನಾಗಿ ಸಮೀಕರಿಸಿ ಹಾಡುತ್ತಾರೆ. ಈ ಹಾಡುಗಳಲ್ಲಿ ಪೈಗಂಬರರನ್ನು ಶರಣ ಎಂದೇ ಕರೆಯಲಾಗಿದೆ. ಬಸವಣ್ಣ, ಮಹದೇವ ಹಾಗೂ ಪೈಗಂಬರ್ ಒಟ್ಟಿಗೇ ಇರುವ ಮಂತ್ರವನ್ನು ಅನೇಕ ಮೊಹರಂ ಮಸೀದಿಯ ತಲೆಬಾಗಿಲಲ್ಲಿ ಕೆತ್ತಲಾಗಿದೆ. ಇಲ್ಲಿರುವ ತತ್ವವೆಂದರೆ, ಲೋಕಹಿತ ಬಯಸುವ ಲೋಕದ ಸಮಸ್ತ ದಾರ್ಶನಿಕರೂ ದೈವಗಳೂ ಮೂಲತಃ ಒಂದೇ ಎಂಬುದು.

ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಬಹುತ್ವ ಪ್ರಜ್ಞೆ. ಈ ಪ್ರಜ್ಞೆಯು ಪುರಾಣ ಮತ್ತು ಇತಿಹಾಸವನ್ನು ಬೆರೆಸುತ್ತದೆ; ಬೇರೆ ಬೇರೆ ಮತಧರ್ಮದ ಕಥನಗಳಲ್ಲಿರುವ ಸಮಾನ ಅಂಶಗಳನ್ನು ಒಂದೆಡೆ ಜೋಡಿಸುತ್ತದೆ. ಇದು ಭಾರತದ ನಿಜವಾದ ಸಾಂಸ್ಕೃತಿಕ ಪ್ರತಿಭೆ. ಮಧ್ಯಕಾಲೀನ ದೊರೆಗಳು ರಾಜ್ಯವಿಸ್ತರಣೆಗಾಗಿ ಮಾಡಿದ ರಾಜಕೀಯ ಯುದ್ಧಗಳನ್ನೇ ಇರಿಸಿಕೊಂಡು ಚರಿತ್ರೆ ಮತ್ತು ವರ್ತ ಮಾನವನ್ನು ನೋಡುವವರಿಗೆ, ಜನ ಕಟ್ಟುವ ಈ ಸೃಜನಶೀಲ ಪರಂಪರೆ ತಿಳಿಯುವುದಿಲ್ಲ. ಮೊಹರಂ ತಾಳಿರುವ ಬಹುರೂಪವು ಸಂಪ್ರದಾಯವಾದಿಗಳನ್ನು ಕಂಗೆಡಿಸುತ್ತದೆ. ‘ಇದೆಂತಹ ಧರ್ಮ; ಎಲ್ಲ ಕಲಬೆರಕೆಯಾಗಿದೆ’ ಎಂದವರು ಗೊಣಗುವರು. ಆದರೆ ಸಾಮಾನ್ಯ ಜನ ಧರ್ಮ, ಜಾತಿಗಳನ್ನು ಮೀರಿ ಸೃಷ್ಟಿಸಿಕೊಂಡಿರುವ ಅಸ್ಮಿತೆಯಾಗಿ ಮೊಹರಂ ರೂಪುಗೊಂಡಿದೆ. ‘ಪ್ರಧಾನ’ ಧರ್ಮಗಳು ಸಂಘರ್ಷಕ್ಕೆ ಕಾಲು ಕೆರೆಯುತ್ತಿವೆ; ಪರಸ್ಪರ ಸಂವಾದ ಮಾಡುವ ಬಾಗಿಲು ಕಿಟಕಿಗಳನ್ನು ಮುಚ್ಚಿಕೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ, ಧರ್ಮಗಳ ನಡುವೆ, ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಿದೆ ಎಂದು ಮೊಹರಂ ತೋರಿಸಿಕೊಡುತ್ತದೆ.

ಪಟ: ಕವಿ ಕೆರೂರ ನದಾಫ ಸಾಹೇಬರೊಡನೆ; ಅಚೊಳ್ಳಿ ಬಿಚೊಳ್ಳಿ ಸೋಗುಗಾರ; ಹುಲಿವೇಷದ ಹರಕೆ ಹುಬ್ಬಳ್ಳಿ; ಕರ್ಬಲಾ‌ ಕದನದಲ್ಲಿ ಕಾಸಿಮಲಿ ಸಾವು ಚಿತ್ರ; ಅಬ್ಬಾಸ ಅಲಿ ಸಮಾಧಿಯೆದುರು (ಕರ್ಬಲಾ, ಇರಾಕ್); ಹುಲಿವೇಷಕ್ಕೆ ಬಣ್ಣಗಾರಿಕೆ; ಹೆಜ್ಜಕುಣಿತ ಕುಷ್ಟಗಿ; ಕರ್ಬಲಾ ನಗರದಲ್ಲಿ ಶೋಕಾಚರಣೆ ( ಬರಹಕೃಪೆ:ನಿವೃತ್ತ ಪ್ರೊಫೆಸರ್ ರಹಮತ್ ತರೀಕೆರೆ, ಫೇಸ್ಬುಕ್ ನಿಂದ)ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading
Advertisement

Title

ಕ್ರೀಡೆ16 hours ago

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ...

ದಿನದ ಸುದ್ದಿ16 hours ago

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ...

ದಿನದ ಸುದ್ದಿ17 hours ago

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ17 hours ago

HEAVY RAIN | ಮೂರು ದಿನ ಭಾರೀ ಮಳೆ ; ಆರೆಂಜ್ ಅಲರ್ಟ್ ಘೋಷಣೆ

ಸುದ್ದಿದಿನಡೆಸ್ಕ್:ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಆರೆಂಜ್ ಅಲರ್ಟ್ ಹವಾಮಾನ ಇಲಾಖೆ ಘೋಷಿಸಿದೆ. ಇಂದು ಮತ್ತು ನಾಳೆ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ,...

ದಿನದ ಸುದ್ದಿ17 hours ago

ಇಂದು – ನಾಳೆ ಹಾವೇರಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿದಿನಡೆಸ್ಕ್:ಇಂದು ಮತ್ತು ನಾಳೆ, ಹಾವೇರಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಕಡ ಜಿಲ್ಲೆಯ ಶಾಲೆ ಹಾಗೂ ಪದವಿ ಪೂರ್ವ, ಐಟಿಐ ಮತ್ತು...

ದಿನದ ಸುದ್ದಿ18 hours ago

ಯುವಕರಿಗೆ ಶಿಕ್ಷಣ, ಕೌಶಲ್ಯ ಹೆಚ್ಚಿಸುವ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ

ಸುದ್ದಿದಿನಡೆಸ್ಕ್:ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ನವದೆಹಲಿಯಲ್ಲಿ ನಿನ್ನೆ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ ನೀಡಿದರು. ಸಮಾರಂಭ ಉದ್ದೇಶಿಸಿ ಮಾತನಾಡಿದ...

ದಿನದ ಸುದ್ದಿ19 hours ago

ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ

ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ...

ದಿನದ ಸುದ್ದಿ1 day ago

ದಾವಣಗೆರೆ | ನಾಳೆ ಎಲ್ಲೆಲ್ಲಿ ಕರೆಂಟ್ ಕಟ್..

ಸುದ್ದಿದಿನ,ದಾವಣಗೆರೆ:ಜಲಸಿರಿ ಕಾಮಗಾರಿ ಪ್ರಯುಕ್ತ ಜುಲೈ 26 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಎಫ್.15 ರಂಗನಾಥ ಫೀಡರ್ ವ್ಯಾಪ್ತಿಯ ವಿದ್ಯಾನಗರ ಕೊನೆ ಬಸ್ ನಿಲ್ದಾಣದಿಂದ...

ದಿನದ ಸುದ್ದಿ1 day ago

ದಾವಣಗೆರೆ | ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್

ಸುದ್ದಿದಿನ,ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ್...

ದಿನದ ಸುದ್ದಿ1 day ago

ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿನಲ್ಲಿ ವಾಡಿಕೆಗಿಂತ 41 ಮಿ.ಮೀ ಹೆಚ್ಚು ಮಳೆಯಾಗಿದೆ. 2024 ರ ಜನವರಿಯಿಂದ ಜುಲೈ 23 ರ ವರೆಗಿನ...

Trending