Connect with us

ನೆಲದನಿ

ಜೀವಸೆಲೆಯ ಕವಿ ಶರೀಫ್ ಹಸಮಕಲ್ ಅವರ ‘ಚಿಲ್ಲರೆಗೆ ಕದಲದ ಜಾಗ’

Published

on

ಹೊಸ ತಲೆಮಾರಿನ ತರುಣ ಬರಹಗಾರರಲ್ಲಿ ಶರೀಫ್ ಹಸಮಕಲ್ ಅವರು ಒಬ್ಬರಾಗಿದ್ದಾರೆ. ತನ್ನ ಮಣ್ಣಿನ ಸೊಗಡಿನೊಂದಿಗೆ ವರ್ತಮಾನದ ತಲ್ಲಣಗಳನ್ನು ತನ್ನ ಕಾವ್ಯಗಳಲ್ಲಿ ವ್ಯಕ್ತಪಡಿಸುತ್ತ ಬಂದಿರುವ ಗೆಳೆಯ ಶರೀಫ್ ಅವರ ಮೊದಲ ಕವನ ಸಂಕಲನ ‘ಚಿಲ್ಲರೆಗೆ ಕದಲದ ಜಾಗ’ವು ಸಮಕಾಲೀನ ಸಮಾಜಿಕ ಬದುಕನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ನೆಲಮೂಲ ಬದುಕಿನ ಜೀವಪರವಾದ ಕಾಳಜಿ ಸದಾ ಕ್ರಿಯಾಶೀಲವಾಗಿದೆ. ಸದಾ ಜೀವಪರವಾಗಿ ತುಡಿಯುವ ಈ ಕಾವ್ಯಗುಚ್ಚವು ತರುಣ ಬರಹಗಾರರು, ಯುವಕವಿಗಳ ಸಂವೇದನೆಗಳನ್ನು ಅನಾವರಣಗೊಳಿಸುವ ಕೃತಿಯಾಗಿದೆ. ಯಾವುದೇ ಸಾಹಿತ್ಯವಾಗಲಿ, ಸಾಹಿತಿಯಾಗಲಿ ಸಾರ್ವತ್ರಿಕವಾಗಿ ಜನ ಮನ್ನಣೆಯನ್ನು ಗಳಿಸುವುದಕ್ಕಾಗಲಿ ಅಥವಾ ಎಲ್ಲ ವರ್ಗದ ಜನರ ಮನಸ್ಸಿನಲ್ಲಿ ನೆಲೆಯೂರಬೇಕಾದರೆ ಅದು ಭೂತ, ವರ್ತಮಾನ, ಭವಿಷ್ಯತ್ತನ್ನು ಬೆಸೆಯುವ ಗುಣವನ್ನು ಹೊಂದಿರಬೇಕಾಗುತ್ತದೆ.

ಹಾಗೆಯೇ ಸಾಹಿತಿಯು ಜಾತಿ, ಮತವನ್ನು ಮೀರಿ ಮಾನವೀಯ ನೆಲೆಗಳನ್ನು ಬಿತ್ತರಿಸಿದಾಗ ಮಾತ್ರ ಅಂತಹ ಬರಹಗಳು ಹೆಚ್ಚು ಹೆಚ್ಚು ಜೀವಂತಿಕೆಯನ್ನು ಪಡೆದುಕೊಳ್ಳುತ್ತವೆ. ಇಂತಹ ಬರಹಗಳು ಸಹೃದಯನ ಸಂವೇದನೆಗಳನ್ನು ಬಡಿದೆಬ್ಬಿಸುತ್ತವೆ. ಈ ಕಾರಣದಿಂದಾಗಿ ಇಂದಿಗೂ ನಮ್ಮ ಜಾನಪದ ಸಾಹಿತ್ಯ, ಶರಣರ ವಚನ ಹಾಗೂ ತತ್ವಪದಗಳು ಜನಮಾನಸದಲ್ಲಿ ಜೀವಂತವಾಗಿ ನೆಲೆಯೂರಿವೆ. ಈ ಮಾತಿನ ಹಿಂದಿನ ಅರ್ಥವಿಷ್ಟೇ, ಯುವ ಕವಿಯಾಗಿರುವ ಶರೀಫ್ ಅವರ ಕಾವ್ಯಗಳಲ್ಲಿ ಈ ಅಂಶಗಳು ಕೆಲವೊಂದು ಕಡೆ ಸ್ಪಷ್ಟವಾಗಿ ಗೋಚರವಾಗುತ್ತವೆ.

ಅಸಮಾನತೆ, ಅನ್ಯಾಯ, ಶೋಷಣೆ ಹಾಗೂ ಡಂಬಾಚಾರಗಳನ್ನು ಬೆರಳು ಮಾಡಿ ತೋರುವ ಕವಿ, ಜೀವ ಜಗತ್ತಿಗೆ ಕಾರುಣ್ಯದ ಅಗತ್ಯತೆಯನ್ನು ಮಾನವೀಯ ನೆಲೆಯಲ್ಲಿ ಕಟ್ಟಿಕೊಡುತ್ತಾರೆ. ಈ ಕಾರಣದಿಂದಾಗಿ ಬರಡಾಗುತ್ತಿರುವ ಮತ್ತು ಸತ್ವಹೀನವಾಗುತ್ತಿರುವ ಕನ್ನಡ ಸಾಹಿತ್ಯ ವಲಯದಲ್ಲಿ ಇಂತಹ ಮೌಲ್ಯಯುತವಾದ ಸಾಹಿತ್ಯದ ಚಿಗುರು ಕನ್ನಡ ಸಾಹಿತ್ಯವನ್ನು ಆಧುನಿಕ ಯುಗದಲ್ಲಿಯೂ ಸಿಂಗಾರಗೊಳಿಸುವುದೆಂಬ ಆಶಯವು ಒಂದು ಕಡೆಯಲ್ಲಿ ಒಡಮೂಡುತ್ತದೆ.

ಸಾಹಿತ್ಯ ಎಂದರೆ ವರ್ಣಿಸಿಯೇ ಬರೆಯಬೇಕೆಂಬ ಮಾನದಂಡಗಳು ಒಂದು ಕಾಲದಲ್ಲಿ ರೂಪಿಸಿಕೊಂಡ ಚೌಕಟ್ಟಾಗಿತ್ತು. ಆದರೆ ಇಂದು ಅದರ ಸ್ವರೂಪ ಬದಲಾಗಿದೆ. ನಮ್ಮ ಬದುಕಿನ ಜೀವನ ಕ್ರಮವನ್ನು ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಅರಿಯುವ ಮಾನದಂಡವಾಗಿಯೂ ನಮ್ಮ ಸಾಹಿತ್ಯ ಪರಂಪರೆಯು ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಗಮನಿಸುವುದಾದರೆ, ಗೆಳೆಯನ ಕಾವ್ಯಶಕ್ತಿ ವರ್ತಮಾನದ ಬದುಕಿನ ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತಿರುವ ಸ್ವರೂಪವನ್ನು ಅವರ ಕಾವ್ಯಗಳಲ್ಲಿ ಗುರುತಿಸಬಹುದಾಗಿದೆ.

ಸಮಾಜದಲ್ಲಿನ ಅಸಮಾನ ನೆಲೆಗಳನ್ನು ಮೆಟ್ಟಿನಿಂತು, ಸಮಸಮಾಜವನ್ನು ಬಯಸುವ ಮತ್ತು ಕಟ್ಟುವ ಆಶಯವೊಂದು ಇವರ ಕಾವ್ಯಗಳಲ್ಲಿ ಕಂಡುಬರುತ್ತದೆ. ಈ ಸಮಸಮಾಜದ ಆಶಯಗಳನ್ನು ಬಯಸುತ್ತಿರುವ ಕವಿಯು ತನ್ನ ದರ್ಶನದ ಮೂಲಕವಾಗಿ ಮತ್ತೇ ಬುದ್ಧನತ್ತ ಮುಖ ಮಾಡುತ್ತಾರೆ. ‘ಮತ್ತೊಮ್ಮೆ ಬುದ್ಧ ತಪಸ್ಸಿಗೆ’ ಎಂಬ ಕವಿತೆಯಲ್ಲಿ ಮೂಲಭೂತವಾದಿಗಳ ಕುತಂತ್ರಕ್ಕೆ ಬಲಿಯಾದ ಬುದ್ಧನ ಸಂಕಷ್ಟವನ್ನು ಅರಿತು, ಮತ್ತೊಮ್ಮೆ ಬುದ್ಧ ಜನ್ಮವೆತ್ತಿ ಬಂದು ತಾನು ನೀಡಿದ ದರ್ಶನವನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ

ಇಂದಿಗೆ ಇದೆ ಎಂದು ಸಾರುವ ಕವಿ,
ಇಳಿಸಂಜೆಯಲಿ ಬುದ್ಧನ ಬೆಳಕ ಕಂಡು
ದಂಡಿಗೆ ಬಂದು ಬಡಿದು ಕೂಗಿತು
ಬೆಳಕಿಗೆ ಬೀಗ ಬಿದ್ದಿದೆ ಎಂದು…

ಬುದ್ಧ ಈ ಜಗತ್ತಿಗೆ ನೀಡಿದ ಬೆಳಕಿಗೆ ಬೀಗ ಬಿದ್ದಿದೆ ಎಂಬುದನ್ನು ಪ್ರತಿಮಾತ್ಮಕವಾಗಿ ವಿಂಡಂಬನೆಗೆ ಒಳಪಡಿಸುತ್ತಾರೆ. ಇಲ್ಲಿ ಕವಿಯನ್ನು ಕಾಡುವ ಬಹುಮುಖ್ಯವಾದ ಪ್ರಶ್ನೆಯೆಂದರೆ, ಬಾಬಾಸಾಹೇಬರು ಬುದ್ಧನ ಮಾರ್ಗದಲ್ಲಿ ಮುಂದುವರೆದು, ಶತಮಾನಗಳಿಂದ ಶೋಷಣೆಗೆ ಗುರಿಯಾಗಿರುವ ದಮನಿತರ ಬದುಕಿಗಾಗಿ ಬೆಳಕೊಂದನ್ನು ನೀಡಿದರು. ಆ ಮೂಲಕವಾಗಿ ಬುದ್ಧನನ್ನು ಪರಿಚಯಿಸಿದರು. ಆದರೆ ಅದೇ ಬುದ್ಧನನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ಮೂಲಭೂತವಾದಿ ಶಕ್ತಿಗಳು ಸಮಾಜದಲ್ಲಿ ಅಸಮಾನತೆಯ ಬೀಜವನ್ನು ಬಿತ್ತುತ್ತಿರುವ ಕುರಿತು ಇಲ್ಲಿ ಆತಂಕವಿದೆ. ಈ ಆತಂಕದ ಬಿಡುಗಡೆಗೆ ಪರಿಹಾರವಾಗಿ ಮತ್ತೇ ಬುದ್ಧ ಜನ್ಮವೆತ್ತಬೇಕಾದ ಅನಿವಾರ್ಯತೆಯನ್ನು ಕವಿ ತನ್ನ ಕಾವ್ಯದ ಮೂಲಕ ಪ್ರತಿಪಾದಿಸುತ್ತಾರೆ. ಹಾಗೆಯೇ,

ಬುದ್ಧ ಕುಂತ ಜಾಗಕ್ಕೆ ನೀರು ಚಿಮುಕಿಸಿ
ಬೋರ್ಡೊಂದ ನೇತಾಕಿದೆ
ಮಾತು, ಮನಸು ಮಾರಾಟಕ್ಕಿವೆ ಎಂದು

ಇಂದು ಬುದ್ಧ ಹಾಗೂ ಆತನ ವಿಚಾರಧಾರೆಗಳು ಕಾರ್ಪೋರೇಟ್ ಶಕ್ತಿಗಳಿಗೆ ಆದಾಯದ ಮೂಲವಾಗಿದೆ. ಬುದ್ಧನನ್ನೇ ಅಸ್ತ್ರವಾಗಿ ಬಳಸಿಕೊಂಡು ನವ ಪುರೋಹಿತಶಾಹಿ ವರ್ಗವೊಂದು ರೂಪತಳೆಯತ್ತದೆ. ಈ ವರ್ಗಕ್ಕೆ ಜಗತ್ತಿಗೆ ಶಾಂತಿಯನ್ನು ಸಾರಿದ ಬುದ್ಧನ ಆಶಯಗಳಿಗಿಂತ ಮುಖ್ಯವಾಗುವುದು ಬಂಡವಾಳ. ಲೋಕದ ದುಖಃಕ್ಕೆ ಕಾರಣ ಹುಡುಕಲು ಹೊರಟ ಬುದ್ಧ ತನ್ನೇಲ್ಲ ಸಂಪತ್ತು, ಸುಖ, ಸಂತೋಷಗಳನ್ನು ತೊರೆದ. ಆದರೆ ಇಂದು ತಮ್ಮ ಅಸ್ತಿತ್ವದ ತಡಕಾಟಕ್ಕೆ ಮುಂದಾಗಿರುವ ಕಾರ್ಪೋರೇಟ್ ಮನಸುಗಳು ಬುದ್ಧನನ್ನು ಒಂದು ಸರಕಾಗಿ ಬಳಸಿಕೊಳ್ಳುತ್ತಿವೆ. ತನ್ನ ಸಂಸಾರ, ರಾಜ್ಯ, ಆಸ್ತಿ ಪಾಸ್ತಿ ಎಲ್ಲವನ್ನು ತೊರೆದು ಜಗತ್ತಿನ ಕಲ್ಯಾಣವನ್ನು ಅರಸಿ ಹೊರಟಂತಹ ಬುದ್ಧ ಬಂಡವಾಳದ ಸರಕಾಗಿರುವ ಬಗೆಗೆ ತರುಣ ಕವಿಯಾದ ಹಸಮಕಲ್ ಅವರಿಗೆ ಅಸಹನೆ ಇದೆ. ಇಂತಹ ಸೂಕ್ಷ್ಮ ಎಳೆಗಳ ಜಾಡು ಹಿಡಿದು ಹೊರಟ ಕವಿ,

ಗುಂಡಿಗೆಯ ಸದ್ದು ಗುಂಡು ನುಂಗುತ್ತಿವೆ ಎಂದು
ನೆತ್ತರಿನ ಕಲೆ ಹೊರೆಸಲು ಸುರಿದ ಬುದ್ಧಮಳೆ
ಕೆಂಪುಕಲೆ ಕರಗಲೆ ಇಲ್ಲ….
ತೋಡಿದಷ್ಟು ಗಟ್ಟಿಗೊಳ್ಳುವ ಮಣ್ಣು
ಸಸಿ ನೆಡದೆ
ಬಂದ ಬುದ್ಧ
ಅರಳಿಮರದತ್ತ ಮತ್ತೊಂದು ತಪಸ್ಸಿಗೆ…

ಎಂದು ಸಾರುವ ಕವಿಯು ಹಲವು ರೂಪಕಗಳ ಅಡಿಯಲ್ಲಿ ಸಮಕಾಲೀನ ಸಮಾಜದ ತಲ್ಲಣಗಳನ್ನು ಕಟ್ಟಿಕೊಡುತ್ತಲೇ ಶತಮಾನಗಳ ಚರಿತ್ರೆಯ ಕ್ರಿಯೆ ಹಾಗೂ ಪ್ರತಿಕ್ರಿಯೆಗಳನ್ನು ಬೆಸೆಯುವ ಪ್ರಯತ್ನ ಮಾಡುತ್ತಾರೆ. ‘ತೋಡಿದಷ್ಟು ಗಟ್ಟಿಗೊಳ್ಳುವ ಮಣ್ಣು’ ಎಂಬ ರೂಪಕವು ಸಾಮಾಜಿಕ ಸುಧಾರಣೆಗಾಗಿ ಹಲವಾರು ಸಮಾಜ ಸುಧಾರಕರು ನಡೆಸಿದ ಪ್ರಯತ್ನ ಹಾಗೂ ಅದರ ಪ್ರತಿಫಲಗಳನ್ನು ಅನಾವರಣಗೊಳಿಸುತ್ತದೆ. ಯುದ್ಧ, ಆಕ್ರಮಣ, ಭಯೋತ್ಪಾದಕತೆಯಂತಹ ಅಮಾನವೀಯ ಕೃತ್ಯಗಳು ಚರಿತ್ರೆಯುದ್ಧಕ್ಕೂ ನಿರಂತರವಾಗಿ ನಡೆಯುತ್ತಲೆ ಬಂದಿವೆ. ಆದರೆ ಇವುಗಳು ಅತಿಯಾದ ತಾರಕಕ್ಕೆ ಹೋದ ಸಂದರ್ಭದಲ್ಲಿ ಹಲವಾರು ಕ್ರಾಂತಿಪುರುಷರು ಜನ್ಮತಾಳಿದ್ದಾರೆ.

ಇಂತಹ ಸಮಾಜ ಸುಧಾರಕರಲ್ಲಿ ಬುದ್ಧ, ಬಸವ, ಫುಲೆ, ವಿವೇಕಾನಂದ, ಅಂಬೇಡ್ಕರ್ ಅವರಂತಹ ಹಲವಾರು ಯುಗಪುರುಷರು ಜನ್ಮವೆತ್ತು ಅಸಮಾನತೆ, ಅನ್ಯಾಯ ಹಾಗೂ ಅಸಹನೆಯ ವಿರುದ್ಧ ಹೋರಾಟ ನಡೆಸಿದ್ದಾರೆ. ಆದರೆ ಇವರೆಲ್ಲ ಲೋಕ ಕಲ್ಯಾಣಕ್ಕಾಗಿ ಅವಿರತವಾದ ಹೋರಾಟ ನಡೆಸಿ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುಂದಾದರು ಸಹ ಈ ಸಮಾಜದಲ್ಲಿ ಕ್ರೌರ್ಯದ ಸ್ವರೂಪವು ಮಾತ್ರ ಪ್ರಬಲಗೊಳ್ಳುತ್ತಲೆ ಮುನ್ನೆಡೆದು ಬಂದಿದೆ. ತನ್ನ ಸಮಕಾಲೀನ ಸಂದರ್ಭದ ಈ ಒತ್ತಡವನ್ನು ಪ್ರತಿರೋಧಿಸುವ ವಿಭಿನ್ನ ಆಯಾಮಗಳಲ್ಲಿ ಇಲ್ಲಿನ ಕವಿತೆಗಳು ಎದುರಾಗುತ್ತವೆ.

ಸಾಮಾಜಿಕ ಅಸಮಾನತೆಯನ್ನು ಕುರಿತು ಪ್ರತಿಭಟನಾತ್ಮಕ ನೆಲೆಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಕವಿಗಳು, ತಮ್ಮ ‘ಚಿಲ್ಲರೆಗೆ ಕದಲದ ಜಾಗ’ ಎಂಬ ಕವಿತೆಯ ಮೂಲಕ ತಳಸಮುದಾಯದ ಶೋಚನೀಯ ಬದುಕನ್ನು ಅನಾವರಣಗೊಳಿಸುತ್ತಾರೆ. ಉಳ್ಳವರ ಸಿರಿತನದ ದಾಹಕ್ಕೆ ಬಲಿಯಾಗುವ ದಮನಿತರ ಸ್ಥಿತಿಯನ್ನು ಕಂಡು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಬಗೆಯೊಂದು ಹೀಗಿದೆ;

ಬೀದಿ ದೀಪದಲಿ
ದುಂಡುಮಲ್ಲಿಗೆಯ ಅರೆನಗ್ನದಾಕೆ
ಸೆರಗ ಸರಿಸಿ ಎದೆಕಾಣಿಸಿ ಹಸಿದಹೊಟ್ಟೆ ಮುಚ್ಚಿ
ಸುಖಪಟ್ಟ ದೇಹಗಳ ದಾಟಿ
ತಂಗಿ ಗೌರಿಗೇಕೆ ಆ…ಪ್ರಶ್ನೆ

ಎಂಬುದಾಗಿ ತಮ್ಮ ಸಮಾಜದಲ್ಲಿ ಒಂದೊತ್ತಿನ ಊಟಕ್ಕೂ ದೇಹವನ್ನು ಮಾರಿಕೊಂಡು ಜೀವನ ಸಾಗಿಸುವ ಹೆಣ್ಣುಗಳನ್ನು ತನ್ನ ಅಕ್ಕ ತಂಗಿಯರೆಂದು ಮರುಗುವ ಮೂಲಕವಾಗಿ ಸಾಮಾಜಿಕ ವ್ಯವಸ್ಥೆಗೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಇಂದಿನ ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಮೂಲಭೂತವಾದ ಮತ್ತು ಕೋಮುವಾದವು ದಿನದಿಂದ ದಿನಕ್ಕೆ ವಿಕೃತ ಸ್ವರೂಪವನ್ನು ತಾಳುತ್ತಿದೆ. ಆದರೆ ಇಲ್ಲಿ ಮಾನವೀಯ ಅಂತಃಕರಣದ ನೆಲೆಯಲ್ಲಿ ನಿಂತು ಅನ್ಯಧರ್ಮಿಯ ಹೆಣ್ಣೊಬ್ಬಳನ್ನು ತನ್ನ ತಂಗಿ ಎಂದು ಪರಿಭಾವಿಸುವ ಧಾಟಿಯು ವಿಶ್ವಮಾನವತ್ವದ ಪ್ರತಿರೂಪವಾಗಿ ಕಂಡುಬರುತ್ತದೆ. ಈ ಗುಣಗಳು ಸರ್ವಧರ್ಮಿರಲ್ಲಿ ಮೂಡಿದಾಗ ಮಾತ್ರ ಬದಲಾವಣೆಯೆಂಬುದು ಸಾಧ್ಯವಾಗುತ್ತದೆ. ಅನ್ಯಧರ್ಮಿಯರು ಪರಸ್ಪರ ಕಿತ್ತಾಟ ಮಾಡುವಂತಹ ಈ ಚಿಲ್ಲರೆ ಪ್ರವೃತ್ತಿಯಿಂದ ಸಾಮಾಜಿಕ ಬದಲಾವಣೆ ಸಾಧ್ಯವೆ ಇಲ್ಲ ಎಂಬುದನ್ನು ಎತ್ತಿಹಿಡಿಯುವ ಕವಿಗಳು, ಸಾಮಾಜಿಕ ಬದುಕಿನಲ್ಲಿ ಮನುಷ್ಯನ ವರ್ತನಗೆ ಬೇಸತ್ತು;

ಕಛೇರಿ ಗೋಡೆಗೆ ನೀಲಿ ದಪ್ಪಕ್ಷರಕ್ಕೆ
ಕಾಲೆತ್ತಿ ಉಚ್ಚಿ ಹೊಯ್ಯುವ ನಾಯಿಗೆ
ಅಚ್ಚ…
ಎನ್ನದೆ ಮುನ್ನಡೆದೆ

ಎನ್ನುವ ಕವಿಗೆ ಇಲ್ಲಿ ನಾಯಿಯ ವರ್ತನೆಗಿಂತ ಹಣ ಮತ್ತು ಕಾಮದಾಸೆಯ ಮಾನವನ ಪ್ರವೃತ್ತಿಯು ವಿಕೃತವಾಗಿ ಕಂಡುಬರುತ್ತದೆ. ಮಾನವ ಸಮಾಜದಲ್ಲಿ ನಡೆಯುವಂತಹ ಈ ಅಮಾನವೀಯ ಕೃತ್ಯಗಳನ್ನು ಪ್ರತಿಭಟಿಸುವ ಶಕ್ತಿಯನ್ನು ಕಳೆದುಕೊಂಡಿರುವ ನಮಗೆ ಆ ನಾಯಿಯ ಕೃತ್ಯವನ್ನು ತಡೆಯುವ ಯಾವುದೆ ನೈತಿಕ ಶಕ್ತಿ ಇಲ್ಲವೆಂಬುದನ್ನು ಕವಿಗಳು ಇಲ್ಲಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕವಿ ಪ್ರಗತಿಪರ ನೆಲೆಯಲ್ಲಿ ನಿಂತು ಸಮಾಜವನ್ನು ನೋಡುವ ಸಂದರ್ಭದಲಿ, ಮನುಷ್ಯ ಮನುಷ್ಯನ ನಡುವೆ ನಿರ್ಮಾಣಗೊಂಡಿರುವ ಅಸಮಾನತೆಯನ್ನು ಮೆಟ್ಟಿನಿಲ್ಲುವ ನೆಲೆಯಲ್ಲಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸುತ್ತಾರೆ. ಬಡವರು, ದಮನಿತರ ಮೇಲೆ ಹೇರುತ್ತಿರುವ ಕಾಯ್ದೆ, ಕಾನೂನುಗಳ ಕ್ರೂರತ್ವವನ್ನು ಕುರಿತು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಸರ್ಕಾರಿ ಕಾಯ್ದೆಗಳು ಸಾಮಾನ್ಯ ಜನತೆಯ ಮೇಲೆ ನಡೆಸುತ್ತಿರುವ ದಬ್ಬಾಳಿಗೆ ಕವಿಯ ಪ್ರತಿಕ್ರಿಯೆಯು ಪ್ರತಿರೋಧಿ ನೆಲೆಯಲ್ಲಿ ಮೂಡಿಬಂದಿದೆ.

ತುತ್ತಿಗೂ ತಂದಿದ್ದಾರೆ
ಕುತ್ತು
ಅವ್ವನ ತುತ್ತು
ಮಮತೆಯ ಮಡಿಲು
ಕಸಿದುಕೊಳ್ಳುವ ಕರಾರಿಗೆ
ಧಿಕ್ಕಾರ! ಧಿಕ್ಕಾರ!

ಎಂಬ ಕವಿಯ ಅಳಲು ಮಾನವೀಯತೆಯನ್ನು ಮರೆತ ಜಡ ಸಮಾಜವನ್ನು ವಿಡಂಬನೆಗೆ ಗುರಿಪಡಿಸುತ್ತದೆ. ಕವಿಯು ಯಾವಾಗೂ ಭೂತ, ಭವಿಷ್ಯತ್ತು ಮತ್ತು ವರ್ತಮಾನದ ಸರಪಳಿಯಂತೆ ಕಾರ್ಯನಿರ್ವಹಿಸಿದಾಗ, ಆತನ ಕಾವ್ಯ ಕುಲುಮೆಯಿಂದ ಮೂಡುವ ಕವಿತಾಶಕ್ತಿಯು ಜೀವಂತಿಕೆಯಿಂದ ಕೂಡಿರುತ್ತದೆ. ಸಮಕಾಲೀನ ಸಮಾಜದಲ್ಲಿ ನಿಂತು ಭೂತ ಮತ್ತು ಭವಿಷ್ಯತ್ತುಗಳನ್ನು ನೋಡುವ ಶರೀಫ್ ಹಸಮಕಲ್ ಅವರ ‘ಚಿಲ್ಲರೆಗೆ ಕದಲದ ಜಾಗ’ ಕಾವ್ಯಗುಚ್ಚವು ಜೀವಪರವಾದ ಆಶಯಗಳನ್ನು ಹೊಂದಿದೆ.

ತಾನು ಬೆಳೆದುಬಂದ ಪರಿಸರವನ್ನು, ತನ್ನ ಸುತ್ತಮುತ್ತಲಿನ ಜನಸಮುದಾಯವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪದಗಳ ಮೂಲಕ ಸೆರೆಹಿಡಿದು, ಅದಕ್ಕೆ ಜೀವತುಂಬುವ ಕಾಯಕದಲ್ಲಿ ಹೆಚ್ಚು ತೊಡಗಿರುವುದರ ಪ್ರತಿಫಲವೇ ಈ ಕವನ ಸಂಕಲನ. ಇದು ಬರೀ ಮನರಂಜನೆ ನೀಡುವ ಹೊತ್ತಿಗೆಯಲ್ಲ. ಶಾಂತಿಯ ನಾಡಲಿ ಅಶಾಂತಿಯನ್ನು ಸೃಷ್ಟಿಸಿ, ಸಮಾನತೆಯ ಜಾಗದಲ್ಲಿ ಅಸಮಾನತೆಯನ್ನು ಸೃಷ್ಟಿಸಿ, ಮನುಷ್ಯ ಮನುಷ್ಯನನ್ನು ಕೀಳಾಗಿ ನೋಡುವಂತಹ ಅಮಾನವೀಯ ಸಮಾಜದಲ್ಲಿ ಸಮಾನತೆಯ ಕನಸು ಕಾಣುವ ಜೀವಸೆಲೆ ಇದಾಗಿದೆ. ಇವರ ಜೀವಪರ ಕಾಳಜಿ ಹೀಗೆ ಮುಂದುವರೆಯಲಿ. ಕನ್ನಡ ಸಾಹಿತ್ಯಕ್ಕೆ ಮತ್ತಷ್ಟು ಜೀವದನಿ ಇವರ ಮೂಲಕ ಹರಿದು ಬರಲಿ.

(ಲೇಖಕರು: ಡಾ.ಕೆ.ಎ. ಓಬಳೇಶ್, ಸಂಶೋಧಕರು. ಇಮೇಲ್: eakantagiri@gmail.com. ಮೊ:
9538345639/ 9591420216 )

ಅಂಕಣ

ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

Published

on

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.

ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.

ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.

ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.

ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.

ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿ‌ಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.

ವಸ್ತು ಪ್ರದರ್ಶನ

ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.

ದೇಸೀ ಆಟಗಳು

ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.

ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮ‌ಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ‌ಉತ್ಸವ’-2025.
| ಡಾ.ಬಿ‌.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

Continue Reading

ಅಂತರಂಗ

ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

Published

on

  • ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ

ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು

ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.

ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.

ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.

ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ

ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.

ಮಹಿಳಾ ದಿನಾಚರಣೆಯ ಇತಿಹಾಸ

ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:

1. 1908 – ಮಹಿಳಾ ಹಕ್ಕುಗಳ ಹೋರಾಟ:

ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.

2. 1909 – ಮೊದಲ ಮಹಿಳಾ ದಿನಾಚರಣೆ:

ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.

3. 1910 – ಅಂತಾರಾಷ್ಟ್ರೀಯ ಹೋರಾಟ:

ಡೆನ್ಮಾರ್ಕ್‌ನ ಕೊಪನ್‌ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.

4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:

ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.

5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:

1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.

6. 1975 – ವಿಶ್ವ ಮಹಿಳಾ ವರ್ಷ:

UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು

7. 2011 – 100ನೇ ವಾರ್ಷಿಕೋತ್ಸವ:

2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.

ಮಹಿಳಾ ದಿನಾಚರಣೆಯ ಉದ್ದೇಶ

ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.

ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ

ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್‌ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.

ಮಹಿಳೆಯರು ಬದುಕಿನ ಉತ್ಸಾಹ

ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಾಧನೆಗಳ ಬೆಳಕು

1. ಶಿಕ್ಷಣ ಮತ್ತು ಸಶಕ್ತೀಕರಣ:

ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.

2. ಉದ್ಯೋಗ ಹಾಗೂ ಉದ್ಯಮಶೀಲತೆ:

ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.

3. ಕ್ರೀಡೆ ಮತ್ತು ಸಾಹಸ:

ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.

4. ಸಮಾಜಸೇವೆ ಮತ್ತು ಪ್ರಭಾವ:

ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.

ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ

ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.

ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್

ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.

“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಮ್ಮ‌ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

Published

on

  • ಹರ್ಷಕುಮಾರ್ ಕುಗ್ವೆ

ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.

ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ.‌ ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.

ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು..‌. ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.

‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು.‌.. ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತ‌ವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.

ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು.‌ ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು.‌ ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.

ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!

– ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ8 hours ago

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ:ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಏಪ್ರಿಲ್ 24 ಮತ್ತು 25 ರಂದು ಆಯೋಜಿಸಲಾಗಿದೆ. ಆಸಕ್ತ ರೈತರು ಆಧಾರ್...

ದಿನದ ಸುದ್ದಿ19 hours ago

ಆಸ್ತಿ ಕಲಹವೇ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆಗೆ ಕಾರಣವಾಯ್ತಾ..?

ಸುದ್ದಿದಿನಡೆಸ್ಕ್:ಭಾನುವಾರ ಹತ್ಯೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಹಿಂದೆ ಆಸ್ತಿ ಕಲಹವಿರಬಹುದು ಎಂಬ ಆರೋಪಗಳು ಕೇಳಿ ಬರುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಟ್ಯಂತರ ಮೌಲ್ಯದ...

ಅಂಕಣ1 day ago

ಕವಿತೆ | ಅವಳೀಗ ಕಾಯುವುದಿಲ್ಲ

ಶಮೀಮ ಕುತ್ತಾರ್, ಮಂಗಳೂರು ಬೆಳಕು ಬರಲೆಂದು ಕಿಟಕಿಯನ್ನೊಂಚೂರು ಸರಿಸಹೊರಟಿದ್ದಳು… ಒಳಗಿನಿಂದಲೇ ಸರಪಳಿಗಳು ಕೈಗಳ ಬಿಗಿದಾಗ ಬೆಳಕಿಗಿಂತ ಬಿಡುಗಡೆಯೇ ಸಾಕೆನಿಸಿತ್ತು. ಬಯಕೆಗಳು ಶಾಪವಾದಾಗ ಇರವನ್ನೂ ಮರೆಯಬೇಕವಳು ಓದಿ ಮುಗಿಸಲಾಗದ...

ದಿನದ ಸುದ್ದಿ2 days ago

ಬಳ್ಳಾರಿ ಪೊಲೀಸ್ ಅಧಿಕಾರಿಗಳ ಪಡಿತರ ಅಕ್ಕಿ ಕಳ್ಳಾಟ : ಠಾಣೆ ಮುಂದೆ ಇದ್ದ ಲಾರಿ ಮಾಯ ; ಈ ಸ್ಟೋರಿ ಓದಿ..!

ಗಿರೀಶ್ ಕುಮಾರ್ ಗೌಡ,ಬಳ್ಳಾರಿ ಸುದ್ದಿದಿನಡೆಸ್ಕ್:ಗಣಿನಾಡು ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ರಾತ್ರಿ ವೇಳೆ ಜಿಲ್ಲೆಯಿಂದ ಬೇರೆ ಬೇರೆ ರಾಜ್ಯಗಳಿಗೆ ಲಾರಿಗಳಲ್ಲಿ ಕಳ್ಳತನದ ಮೂಲಕ...

ದಿನದ ಸುದ್ದಿ3 days ago

ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯಾಗಿ 50 ವರ್ಷ; ನೆಹರು ತಾರಾಲಯದಲ್ಲಿ ವಿಶೇಷ ಕಾರ್ಯಕ್ರಮ

ಸುದ್ದಿದಿನಡೆಸ್ಕ್:ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ ಮಾಡಿ ಇಂದಿಗೆ 50 ವರ್ಷಗಳು ಸಂದಿವೆ. 1975ರಲ್ಲಿ ಈ ದಿನದಂದು ಉಡಾವಣೆ ಮಾಡಲಾದ ಈ ಉಪಗ್ರಹಕ್ಕೆ ಪ್ರಾಚೀನ ಭಾರತೀಯ ಗಣಿತಜ್ಞ...

ದಿನದ ಸುದ್ದಿ3 days ago

ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ

ಸುದ್ದಿದಿನಡೆಸ್ಕ್:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ ಇಂದು ಪ್ರಸಕ್ತ ವರ್ಷದ ಜಂಟಿ ಪ್ರವೇಶ ಪರೀಕ್ಷೆ – ಜೆಇಇ ಮುಖ್ಯ ಫಲಿತಾಂಶ -2 ಅನ್ನು ಪ್ರಕಟಿಸಿದೆ. ಈ ಭಾರಿ...

ದಿನದ ಸುದ್ದಿ3 days ago

ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ‌‌ ಕಾರ್ಯನಿರ್ವಹಣಾ ಸಮಿತಿ ರಚನೆ

ಸುದ್ದಿದಿನಡೆಸ್ಕ್:ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ, 12 ಜನ ಅಧಿಕಾರಿಗಳನ್ನು ಒಳಗೊಂಡ, ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದು, ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಇದನ್ನೂ...

ದಿನದ ಸುದ್ದಿ3 days ago

‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಬೆಂಗಳೂರಿನ ಕೆಂಗೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಲಿದೇವ ಸಮುದಾಯ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆಗೊಳಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಸಮುದಾಯಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು...

ದಿನದ ಸುದ್ದಿ4 days ago

ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ

ಸುದ್ದಿದಿನ,ಚನ್ನಗಿರಿ:ಇತ್ತೀಚಿಗೆ ತಾವರೆಕೆರೆಯಲ್ಲಿ ನಡೆದ ಘಟನೆ ಕಾನೂನು ಬಾಹಿರವಾಗಿದ್ದು, ಮುಖಂಡರುಗಳು ತಮ್ಮ ಗ್ರಾಮ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಯಾವುದೇ ಘಟನೆ ನಡೆದಿದ್ದರೆ ಕಾನೂನಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕೇ ವಿನಃ...

ದಿನದ ಸುದ್ದಿ4 days ago

ದಾವಣಗೆರೆ | ಮೌಲಾನಾ ಅಜಾದ್ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಶಾಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ...

Trending