Connect with us

ದಿನದ ಸುದ್ದಿ

ಕೋವಿಡ್ 19 : ಕೇರಳಕ್ಕೆ ಮತ್ತು ಕೇರಳದಿಂದ ಪಾಠಗಳು

Published

on

  • ಭಾರತದ ಸಾರ್ವಜನಿಕ ಆರೋಗ್ಯದ ದಾಖಲೆಯ ಹಿನ್ನೆಲೆಯಲ್ಲಿ, ಕೊವಿದ್-19ರ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿಯ ಬಗ್ಗೆ ಕೇರಳವನ್ನು ಶ್ಲಾಘಿಸಲಾಗುತ್ತಿದೆ. ಇದಕ್ಕೆ ಬೇಕಾದ ಪೂರ್ವಭಾವಿ ಮೂಲ ಸೌಕರ್ಯಗಳನ್ನು ಹಿಂದೆಯೇ ಒದಗಿಸಿದ್ದರಿಂದಾಗಿ ಮತ್ತು ನಿಫಾ ವೈರಸ್ನ ಸವಾಲನ್ನು ನಿಭಾಯಿಸಿದ ಅನುಭವದಿಂದಾಗಿ, ಕೇರಳ ಸರ್ಕಾರ ಉಳಿದ ರಾಜ್ಯ ಸರ್ಕಾರಗಳಿಗಿಂತ ಕೊವಿದ್-19ರ ಸವಾಲು ಎದುರಿಸುವ ಪೂರ್ವತಯಾರಿಯಲ್ಲಿ ಸಾಪೇಕ್ಷವಾಗಿ ಮುಂದಿತ್ತು.

ಕೆ.ಕೆ.ಶೈಲಜ (ಕೇರಳ ಆರೋಗ್ಯ ಮಂತ್ರಿ)
ಅನು: ಎಂ.ಜಿ.ವೆಂಕಟೇಶ

ಪ್ರತಿವರ್ಷ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದಾಗ ಪತ್ರಿಕೆಗಳು ಆರೋಗ್ಯ ಕ್ಷೇತ್ರಕ್ಕೆ ಮೀಸಲಾಗಿಡುವ ಅತ್ಯಲ್ಪ ಹಣದ ಕುರಿತು ಟೀಕೆ ಮಾಡುವ ಲೇಖನಗಳನ್ನು ಪ್ರಕಟ್ರಿಸುತ್ತವೆ. ಕೋವಿಡ್ – 19 ರ ಬೆದರಿಕೆ ವ್ಯಾಪಕವಾಗಿ ಆವರಿಸುತ್ತಿರುವಾಗ, ವೈದ್ಯರು, ಆರೋಗ್ಯ ಕ್ಷೇತ್ರದ ಕಾರ್ಯಕರ್ತರು, ರಾಜ್ಯ ಸರ್ಕಾರದ ಸಂಸ್ಥೆಗಳು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ಕೊಡಲಾರಂಭಿಸಿದ್ದರು. ಆದರೆ ನಾವು ಎಲ್ಲ ಕಡೆಗಳಲ್ಲೂ ಈ ಪಿಡುಗನ್ನು ಎದುರಿಸಲಾರಂಭಿಸಿದಾಗ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ನ್ಯೂನತೆಗಳು ಢಾಳಾಗಿ ಗೋಚರಿಸಲಾರಂಭಿಸಿದವು.

ಪಿ.ಸಾಯಿನಾಥ್ ತಮ್ಮ `ಎಲ್ಲರಿಗೂ ಬರ ಅಂದರೆ ಇಷ್ಟ’ ಪುಸ್ತಕದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಂಬಿರುವ ಬಡವರ ಸ್ಥಿತಿಯನ್ನು ಮನಮುಟ್ಟುವ ವಿವರಗಳೊಂದಿಗೆ ಹೇಳುತ್ತಾರೆ. ಅವರು 1994 ರಲ್ಲಿ ಕಾಣಿಸಿಕೊಂಡಿದ್ದ ಪ್ಲೇಗ್ ಪಿಡುಗಿಗೆ ಹಿಂದೆಂದು ಕಾಣದ ರೀತಿಯಲ್ಲಿ ಮಾಧ್ಯಮದ ಗಮನ ಸೆಳೆದಿದ್ದಕ್ಕೆ ಕಾರಣವನ್ನು ವಿವರಿಸುತ್ತಾರೆ. ಏಕೆಂದರೆ ಬೇರೆ ಕೆಲವು ರೋಗಗಳಂತೆ ಅದು ಗ್ರಾಮೀಣ ಪ್ರದೇಶ ಅಥವ ನಗರದ ಕೊಳಚೆ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ಪ್ಲೇಗಿನ ಬ್ಯಾಕ್ಟಿರೀಯಾ ನಗರದ ಪ್ರತಿಷ್ಠಿತರ ಜಾಗಗಳಿಗೂ ನುಗ್ಗುವ ಗಾಂಚಾಲಿತನ ತೋರಿತ್ತು. ಸಾಯಿನಾಥ್ರ ಮಾತುಗಳಲ್ಲಿ ಹೇಳುವುದಾದರೆ “ಅವು (ಬ್ಯಾಕ್ಟೀರಿಯಾ) ಕ್ಲಬ್ ಕ್ಲಾಸ್ನಲ್ಲಿ ಸಂಚರಿಸಿ ನ್ಯೂಯಾರ್ಕ್ ತಲುಪಬಹುದಿತ್ತು. ಆದ್ದರಿಂದ ಬಹಳಷ್ಟು ಸುಂದರ ವ್ಯಕ್ತಿಗಳು ಆತಂಕಕ್ಕೆ ಒಳಗಾಗಿದ್ದರು.” ಕೋವಿಡ್-19 ಪ್ಲೇಗ್ಗಿಂತ ಕಡಿಮೆ ಅಪಾಯಕಾರಿಯಾದರೂ, ಅದು ಭಾರತಕ್ಕೆ ಬಂದಿದ್ದು ಸೋಂಕು ಪೀಡಿತ ದೇಶಗಳಿಂದ ಆಗಮಿಸಿದ ಪ್ರಯಾಣಿಕರಿಂದಾಗಿತ್ತು.

ಈ ವಾದ ಒಡ್ಡುತ್ತಿರುವುದು ಈ ಎರಡೂ ಪಿಡುಗುಗಳನ್ನು ಹಗುರವಾಗಿ ತೆಗೆದುಕೊಳ್ಳುವ ಉದ್ದೇಶದಿಂದಲ್ಲ. ಬದಲಿಗೆ, ಆರೋಗ್ಯದ ವಿಷಯದಲ್ಲಿ ಭಾರತದ ಪ್ರತಿಸ್ಪಂದನೆ, ಅದರಿಂದ ಪೀಡಿತರಾದವರ ಸಾಮಾಜಿಕ ಮತ್ತು ವರ್ಗ ವಾಸಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ ಎಂಬುದರ ಕುರಿತು ಬೆಳಕು ಚೆಲ್ಲುವುದು ಮಾತ್ರ ಇದರ ಉದ್ದೇಶ.

ಕೋವಿಡ್-19ರ ಆಗಮನದಿಂದ ಖಾಸಗಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದ್ದ ವರ್ಗಗಳು ಸರ್ಕಾರಿ ಆರೋಗ್ಯ ವ್ಯವಸ್ಥೆಗಳ ಮೇಲೆ ತಪಾಸಣೆ ಮತ್ತು ಪ್ರತ್ಯೇಕೀಕರಣಕ್ಕಾಗಿ (ಕ್ವಾರಂಟೈನ್ಗಾಗಿ) ಅವಲಂಬಿತರಾಗುತ್ತಿರುವ ವಿಚಿತ್ರ ಪರಿಸ್ಥಿತಿ ಉಂಟಾಗಿದೆ. ದಶಕಗಳಿಂದ ಭಾರತದ ಬಹುಸಂಖ್ಯಾತರು ಇಂತಹ ಸರಕಾರಿ ಆರೋಗ್ಯ ವ್ಯವಸ್ಥೆಯ ಮೇಲೆ ಅವಲಂಬಿಸಿದ್ದರು ಎಂದು ಕೆಲವು ಅನುಕೂಲಸ್ತರಿಗೆ ಗೋಚರವಾಗುವುದಕ್ಕೆ ಕೋವಿಡ್-19 ರಂತಹ ಪಿಡುಗೇ ಬರಬೇಕಾಯಿತು. ಆಗ್ರಾ ಮಹಿಳೆಯೊಬ್ಬರು ಕ್ವಾರಂಟೈನ್ನಿಂದ ತಪ್ಪಿಸಿಕೊಂಡ ವಿಷಯ ತಪ್ಪಾಗಿ ವರದಿಯಾಗಿದೆ.

ವಾಸ್ತವವಾಗಿ “ಅನಾರೋಗ್ಯಕರ ಶೌಚಾಲಯ ವ್ಯವಸ್ಥೆ ಆಕೆಗೆ ವಾಕರಿಕೆ” ತರುವಂತೆ ಇದ್ದಿದ್ದರಿಂದ ಆಕೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಕ್ವಾರಂಟೈನ್ ಗೆ ಪ್ರತಿರೋಧ ತೋರಿದ್ದಳು. ಇದು ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಮತ್ತು ಮೂಲ ಸೌಕರ್ಯಗಳಿಗಾಗಿ ಮೀಸಲಿಡುವ ಅತ್ಯಲ್ಪ ಅನುದಾನದ ಫಲ. ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯಕರ ಶೌಚಾಲಯಗಳನ್ನು ನಿರ್ವಹಿಸಲಾಗದ ಸಾರ್ವಜನಿಕ ಆರೋಗ್ಯ ಆಡಳಿತಕ್ಕೆ, ಕೋವಿಡ್-19 ನಿಜವಾಗಿಯೂ ಎದುರಿಸಲಾಗದ ಸವಾಲಾಗಿದೆ.

ಸಾಂಕ್ರಾಮಿಕ ಎದುರಿಸಲು ತಯಾರಿ

ಭಾರತದ ಸಾರ್ವಜನಿಕ ಆರೋಗ್ಯದ ದಾಖಲೆಯ ಹಿನ್ನೆಲೆಯಲ್ಲಿ, ಕೊವಿದ್-19ರ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿಯ ಬಗ್ಗೆ ಕೇರಳವನ್ನು ಶ್ಲಾಘಿಸಲಾಗುತ್ತಿದೆ. ಇದಕ್ಕೆ ಬೇಕಾದ ಪೂರ್ವಭಾವಿ ಮೂಲಭೂತ ಸೌಕರ್ಯಗಳನ್ನು ಹಿಂದೆಯೇ ಒದಗಿಸಿದ್ದರಿಂದಾಗಿ ಮತ್ತು ನಿಫಾ ವೈರಸ್ನ ಸವಾಲನ್ನು ನಿಭಾಯಿಸಿದ ಅನುಭವದಿಂದಾಗಿ, ಕೇರಳ ಸರ್ಕಾರ ಉಳಿದ ರಾಜ್ಯ ಸರ್ಕಾರಗಳಿಗಿಂತ ಕೊವಿದ್-19ರ ಸವಾಲು ಎದುರಿಸುವ ಪೂರ್ವತಯಾರಿಯಲ್ಲಿ ಸಾಪೇಕ್ಷವಾಗಿ ಮುಂದಿತ್ತು. ಜನವರಿ ಮಧ್ಯ ಭಾಗದಿಂದಲೇ ಇದನ್ನು ಎದುರಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿತ್ತು. ನಮ್ಮ ರಾಜ್ಯ ಕೊವಿದ್-19 ಪಿಡುಗು ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಪಟ್ಟಿ ತಯಾರಿಸಿದ ಮೊದಲ ರಾಜ್ಯವಾಗಿತ್ತು.

ಜನವರಿ 30 ರಂದು ಕೊವಿದ್-19 ಪಾಸಿಟಿವ್ ಆದ ಮೊದಲ ಪ್ರಕರಣ ಗಮನಕ್ಕೆ ಬಂದ ನಂತರ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಿ ಪಾಲಿಸಲಾಯಿತು. ಆ ನಂತರ ಸರಕಾರ ಇನ್ನಷ್ಟು ನಿಗಾ ವಹಿಸಿ ಸೋಂಕು ಖಚಿತವಾದವರ ಜತೆ ಪ್ರಾಥಮಿಕ ಮತ್ತು ಸ್ವಲ್ಪ ದೂರದ ಸಂಪರ್ಕ ಇರುವ ಎಲ್ಲರನ್ನು ಗುರುತಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಇಟಲಿಯಿಂದ ಹಿಂತಿರುಗಿದ ಒಂದು ಕುಟುಂಬ ತಪಾಸಣೆಗೆ ಒಳಗಾದಾಗ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಗಂಭೀರ ಸ್ಥಿತಿ ನಿರ್ಮಾಣವಾಯಿತು. ತೀವ್ರವಾದ ಹುಡುಕುವಿಕೆಯ ನಂತರ ಈ ಕುಟುಂಬದ ಸಂಪರ್ಕಕ್ಕೆ 719 ಜನ ಒಳಗಾಗಿದ್ದರು ಎಂಬುದು ಪತ್ತೆಯಾಯಿತು.

ಆ ನಂತರ ವಿದೇಶಗಳಿಂದ ಹಿಂತಿರುಗುವ ಪ್ರಯಾಣಿಕರ ಬಗ್ಗೆ ಕ್ರಮಗಳನ್ನು ಸರ್ಕಾರ ತೀವ್ರಗೊಳಿಸಿತು. ಈ ಪ್ರಯಾಣಿಕರು ತಮ್ಮ ಪ್ರಯಾಣದ ಪೂರ್ಣ ವಿವರಗಳನ್ನು ನೀಡದಿದ್ದರೆ ತೀವ್ರ ಕ್ರಮಗಳಿಗೆ ಒಳಗಾಗಬೇಕಾಯಿತು. ಅವರ ಪ್ರಾಥಮಿಕ ಮತ್ತು ಸ್ವಲ್ಪ ದೂರದ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಲಾಯಿತು ಅಥವಾ ಗೃಹದಲ್ಲಿ ಒಂಟಿಯಾಗಿ ಇರಿಸಲಾಯಿತು.

ಮುಂದಿನ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಯಿತು. ನಿಗಾ ವಹಿಸಲಾದವರ ಪಟ್ಟಿಯನ್ನು ಸರ್ಕಾರ ನೀಡಿತು. ಇತ್ತೀಚಿಗೆ ರಾಜ್ಯವನ್ನು ವಿವಿಧ ಕಡೆಯಿಂದ ವಿವಿಧ ರೀತಿಯಲ್ಲಿ ಪ್ರವೇಶಿಸುವ ಕಡೆಯಲ್ಲಿ ಜನರನ್ನು ತಪಾಸಣೆಗೆ ಒಳಪಡಿಸಲಾಯಿತು. ಆರೋಗ್ಯ ರಕ್ಷಣಾ ಕಾರ್ಯಕರ್ತರು ನಗರ ಪ್ರವೇಶದ ಚೆಕ್ ಪೋಸ್ಟ್ಗಳಲ್ಲಿ ನಿಂತು ತಪಾಸಣೆ ನಡೆಸಿದರು. ಹಾಗೆ ರೈಲ್ವೆ ನಿಲ್ದಾಣಗಳಲ್ಲಿ ಈ ಕ್ರಮ ಕೈಗೊಳ್ಳಲಾಯಿತು.

ಈ ಪರಿಸ್ಥಿತಿಯನ್ನು ಅತ್ಯಂತ ಸೂಕ್ತವಾಗಿ ನಿಭಾಯಿಸುವುದರ ಕುರಿತು ನಾವು ಚೀನಾ ಮತ್ತು ದಕ್ಷಿಣ ಕೊರಿಯಾದಿಂದ ಕಲಿಯಬೇಕಿರುವುದು ಎಂದರೆ, ವ್ಯಾಪಕವಾಗಿ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದು ಮತ್ತು ತಪಾಸಣೆ ಮಾಡುವುದು. ದ. ಕೋರಿಯಾದಲ್ಲಿ ವ್ಯಾಪಕ ತಪಾಸಣೆಯಿಂದಾಗಿ ಮಾತ್ರ ಲಾಕ್ಡೌನ್ ಮಾಡದೇ ಬಿಕ್ಕಟ್ಟನ್ನು ನಿಭಾಯಿಸುವುದು ಸಾಧ್ಯವಾಯಿತು. ಆದರೆ ಕೇರಳದಲ್ಲಿ ಆರೋಗ್ಯಸೇವೆಯ ಉತ್ತಮ ಸೌಲಭ್ಯಗಳಿದ್ದರೂ ಇಂತಹ ಉತ್ತಮ ಆದರ್ಶ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ ಸೀಮಿತ ಸಂಪನ್ಮೂಲ ಮತ್ತು ತಪಾಸಣಾ ಪ್ರಯೋಗಶಾಲೆಗಳು.

ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ನಾವು ಬಹಳ ಜಾಣತನದಿಂದ ನಮ್ಮ ಸೌಲಭ್ಯವನ್ನು ಉಪಯೋಗಿಸಬೇಕಾಗಿದೆ ಮತ್ತು ಸ್ಥಳೀಯ ಪ್ಯಯತ್ನಗಳನ್ನು ಹೆಚ್ಚಿಸಬೇಕಾಗಿದೆ. ಇದನ್ನು ಸಾಧಿಸಬೇಕಾದರೆ ಬಲವಾದ ರಾಜಕೀಯ ಬದ್ಧತೆ, ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಜನರ ಬದ್ಧತೆ ಬೇಕಾಗಿರುತ್ತದೆ. ಸರ್ಕಾರ ಸೂಚಿಸುವ ಕ್ರಮಗಳನ್ನು ಪ್ರಜೆಗಳು ಅನುಸರಿಸುವುದು ಮುಖ್ಯ. ಇದರಲ್ಲಿ ಮುಖ್ಯವಾದ ವಿಷಯವೆಂದರೆ ಸಾರ್ವಜನಿಕರು ಕಾರಣವಿಲ್ಲದೇ ತಪಾಸಣಾ ಕೇಂದ್ರಗಳಿಗೆ ಹೊಗದಿರುವುದು, ಹೀಗೆ ಹೋಗುವುದರಿಂದ ಪ್ರಯೋಗಾಲಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.

ಸ್ವಯಂ-ಪ್ರತ್ಯೇಕತೆ ಅನುಸರಿಸುವಾಗ ಕೈಗೊಳ್ಳುವ ಕ್ರಮಗಳ ಬಗ್ಗೆ, ರೋಗಲಕ್ಷಣಗಳನ್ನು ಗುರುತಿಸಲು ಮತ್ತು ವರದಿ ಮಾಡುವುದಕ್ಕೆ ಕೇರಳ ಸರ್ಕಾರ ‘ಜಿಓಕೆ ಡೈರೆಕ್ಟ್’ ಎಂಬ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. `ದಿಶಾ’ ಹೆಲ್ಪಲೈನ್ ಜನಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರ ಮುಖಾಂತರ ಕೊವಿದ್ 19 ಪಿಡುಗಿನ ಹರಡುವಿಕೆಯ `ಸರಣಿ ಕತ್ತರಿಸುವ’ (ಬ್ರೇಕ್ ದಿ ಚೈನ್) ಪ್ರಚಾರದಲ್ಲಿ ಶುಚಿ ಮತ್ತು ನೈರ್ಮಲ್ಯದ ಬಗ್ಗೆ ತಿಳಿಸಲಾಗುತ್ತಿದೆ. ಈ ಕ್ರಮಗಳಿಂದ ಸ್ವಭಾವದ ಬದಲಾವಣೆ ತರುತ್ತಿರುವುದು ರಾಜ್ಯದ ಮತ್ತು ರಾಷ್ಟ್ರದ ಮಾಧ್ಯಮದಲ್ಲೂ ಪ್ರಕಟವಾಗುತ್ತಿದೆ.

ಈ ರೀತಿಯ ಮುಂಜಾಗರೂಕತಾ ಕ್ರಮ ಮತ್ತು ಸಾಮಾಜಿಕ ಅಂತರ ಕಾಪಿಟ್ಟುಕೊಂಡರೆ ಸಾರ್ವಜನಿಕ ಮತ್ತು ಸರಕಾರದ ಸಂಪನ್ಮೂಲಗಳ ಮೇಲೆ ಉಂಟಾಗುವ ಒತ್ತಡವನ್ನು ಮುಂದೂಡಬಹುದು. ಹೀಗೆ ಗಳಿಸಿದ ಅವಧಿಯಲ್ಲಿ ಮುಂದೆ ಸೋಂಕು ಹರಡಿ ಅಗತ್ಯ ಬಿದ್ದರೆ ಹೆಚ್ಚು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುವಂತೆ ತಪಾಸಣಾ ಸೌಲಭ್ಯಗಳನ್ನು ನಿರ್ಮಿಸಬಹುದು. ಸರ್ಕಾರದ ವಿನಂತಿಯ ಮೇರೆಗೆ ಐ.ಸಿ.ಎಂ.ಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್) ಕೇರಳಕ್ಕೆ 10 ಪರೀಕ್ಷಾ ಕೇಂದ್ರಗಳನ್ನು ಮಂಜೂರು ಮಾಡಿದೆ. ಸರ್ಕಾರಕ್ಕೆ ಖಾಸಗಿ ಭಾಗಿತ್ವದೊಡನೆ ಇನ್ನು ಹೆಚ್ಚಿನ ಪ್ರಯೋಗಾಲಯಗಳನ್ನು ಸ್ಥಾಪಿಸುವ ಯೋಜನೆಯಿದೆ.

ಕೇರಳಕ್ಕೆ ಮತ್ತು ಕೇರಳದಿಂದ ಪಾಠಗಳು

ಕೇರಳದಲ್ಲಿ ಚಾರಿತ್ರಿಕವಾಗಿ ಸಶಕ್ತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸರ್ಕಾರ ನೀಡಿರುವ ಧೃಡವಾದ ಬೆಂಬಲದಿಂದಾಗಿ, ಕೊವಿಡ್ 19 ಹರಡುವ ಮೊದಲು ಕ್ರಮಗಳ ಬಗ್ಗೆ ನಿರ್ಣಯಿಸುವುದಕ್ಕೆ ಸಾಧ್ಯವಾಯಿತು. ಆಡಳಿತ ಒಳ್ಳೆಯ ಆರೋಗ್ಯ ವ್ಯವಸ್ಥೆ ಕಾಪಾಡಿ ಬೆಳೆಸಲು ವೇಗವರ್ಧಕವಾಗಿ ಕೆಲಸ ಮಾಡಿದೆ. ಇದು ಆರೋಗ್ಯ ಮೂಲ ಸೌಲಭ್ಯದ ವಿಸ್ತರಣೆಯಲ್ಲಿ ಕಂಡು ಬರುತ್ತದೆ. ಉದಾಹರಣೆಗೆ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ವೈರೋಲಜಿ ಘಟಕವನ್ನು ಅಲೆಪ್ಟಿಯಲ್ಲಿ ನಿಫಾ ವೈರಸ್ ಕಂಡು ಬಂದ ನಂತರ ಸ್ಥಾಪಿಸಿರುವುದು.

ಇತ್ತೀಚಿನ ದಿನಗಳಲ್ಲಿ ಉಂಟಾಗಿರುವ ಸಾಂಕ್ರಾಮಿಕ ಮತ್ತು ಅಸಾಂಕ್ರಮಿಕ ರೋಗಗಳಿಂದ ಉಂಟಾದ ಒತ್ತಡವನ್ನು ನಿರ್ವಹಿಸಿರುವ ರೀತಿಯಿಂದ ರಾಜ್ಯದ ಸೋಂಕಿನ ಪರಿಸ್ಥಿತಿಯನ್ನು ಗುರುತಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ನಿಗಾ ಇಡಲು ಸರಕಾರ ಸ್ಥಾಪಿಸಿರುವ ಉಸ್ತುವಾರಿ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದೆ. ಇದರಿಂದ ಆರೋಗ್ಯ ಅಧಿಕಾರಿಗಳು ವೇಗವಾಗಿ ರೋಗ ಗುರುತಿಸುವುದಕ್ಕೂ ತಡೆಯುವುದಕ್ಕೂ ಸಾಧ್ಯವಾಗಿದೆ. ಸೇವೆಯನ್ನು ಕ್ಷಿಪ್ರವಾಗಿ ಮತ್ತು ವ್ಯಾಪಕವಾಗಿ ಹೆಚ್ಚಿನ ಜನರನ್ನು ತಲುಪುವ ಗುರಿ ಸಾಧಿಸಲು ಆರೋಗ್ಯಸೇವಾ ವ್ಯವಸ್ಥೆಯನ್ನು ವಿಕೇಂದ್ರಿಕರಿಸಲಾಗಿದೆ. ಇದರ ಫಲಿತವಾಗಿಯೇ ಕೋವಿಡ್-19 ರ ಸಂದರ್ಭದಲ್ಲಿ ವೈಯುಕ್ತಿಕ ಪ್ರಕರಣಗಳನ್ನು ಪತ್ತೆ ಹಚ್ಚಿ ಅದರ ಜಾಡು ಹಿಡಿಯುವುದರಲ್ಲಿ ಮತ್ತು ‘ಸರಣಿ ತುಂಡರಿಸುವ’ ಪ್ರಚಾರ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿವೆ.

ಆರೋಗ್ಯ ಸೇವೆಯ ಗುಣಮಟ್ಟ ಮತ್ತು ಮೂಲಭೂತ ಸೌಕರ್ಯ ಹೆಚ್ಚಿಸಲು ‘ಆರ್ದ್ರ ಮಿಶನ್’ ಮುಖಾಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವತ್ತ ಹೆಜ್ಜೆ ಹಾಕುತ್ತಿದ್ದೇವೆ. ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತೆ ಇನ್ನಷ್ಟು ಉತ್ತಮ ಹಾದಿಯಲ್ಲಿ ಒಯ್ಯಲು ಯಶಸ್ವಿಯಾಗಿದೆ.

  • ಮೂಲ ಲೇಖನ ಕೃಪೆ : ದಿ ಹಿಂದು ಪತ್ರಿಕೆ, ಮಾ.23, 2020

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್‌ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

Published

on

ಸುದ್ದಿದಿನ,ಬೆಂಗಳೂರು: ವಿಶ್ವ ವೆಂಕಟೇಶ್ವರ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ “ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ” ಎಂಬ ಆಶಯದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಟ್ಟಾ ಬಾಲಾಜಿ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು, ದೇಶಭಕ್ತಿ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಅರಿತು, ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದರಲ್ಲಿ ಅಡಗಿದೆ ಎಂದು ಕರೆ ನೀಡಿದರು. ಪ್ರಾಮಾಣಿಕ ಪರಿಶ್ರಮ ಮತ್ತು ಜವಾಬ್ದಾರಿಯುತ ನಾಗರಿಕತ್ವವೇ ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಡಿಪಾಯ ಎಂದರು.

ವಿದ್ಯಾರ್ಥಿಗಳ ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಪ್ರದರ್ಶನಗಳು ಹಾಗೂ ಶಿಸ್ತುಬದ್ಧ ಮೆರವಣಿಗೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಕೊಡಿಪಾಳ್ಯ ಮತ್ತು ಕೆಂಗೇರಿಯಲ್ಲಿ 445 ಮೀಟರ್ ಇರುವ ವಿಶೇಷ ಧ್ವಜದೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ಶತಪ್ರತಿಶತ ಫಲಿತಾಂಶ ಸಾಧಿಸಿದ ಬೋಧಕ ಸಿಬ್ಬಂದಿಯನ್ನು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನೇರ ಪ್ರಸಾರವೂ ನಡೆಯಿತು. 2,500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಮಧ್ಯಾಹ್ನದ ಊಟ ಮತ್ತು ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಒಗ್ಗಟ್ಟು ಮತ್ತು ದೇಶಪ್ರೇಮದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಈ ಸಂದರ್ಭದಲ್ಲಿ ವಿವಿಐಎಸ್ ನ ಅಕಾಡೆಮಿಕ್ ಅಡ್ವೈಸರ್ ಡಾ. ರಾಜೇಶ್ವರಿ ದತ್ತಾತ್ರಿ, ವಿವಿ ವಿದ್ಯಾಸಂಸ್ಥೆಯ ಡೀನ್ ಶ್ರೀ ಕಿಶೋರ್ ಕಟ್ಟ, ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಟಿ.ಎನ್, ಕೆಪಿಸಿ ಪಿಯು ಕಾಲೇಜು ಪ್ರಾಂಶುಪಾಲರಾದ ಡಾ. ಐ. ಚೆನ್ನಾರೆಡ್ಡಿ, ಸಿಬಿಎಸ್‌ಇ ಪ್ರಾಂಶುಪಾಲರಾದ ಪ್ರೊ. ಪ್ರಹ್ಲಾದ, ಉಪಪ್ರಾಂಶುಪಾಲರಾದ ಶ್ರೀ ಮದನ್ ರಾಜ್, ಪ್ರಾಂಶುಪಾಲರಾದ ಡಾ. ಸುರೇಶ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ

Published

on

ಸುದ್ದಿದಿನ,ಚಿತ್ರದುರ್ಗ : ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಅನುಭವವಲ್ಲ, ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಸಹ ಹೌದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರದ ಭವಿಷ್ಯದ ಉತ್ತಮ ನಾಗರಿಕರಾಗಬೇಕು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ತಿಳಿಸಿದರು.

ನಗರದ ರೋಟರಿ ವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದ ಅವರು ಮಾತನಾಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿರುವುದು ಅನೇಕ ಮಹನೀಯರ ತ್ಯಾಗದ ಫಲ. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರು ಕಂಡ ಕನಸಿನ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸದಾ ಸ್ಮರಿಸಿ, ಏಕತೆ, ಶಿಸ್ತು, ಶಿಕ್ಷಣ ಮತ್ತು ಸೇವೆಯ ಮೂಲಕ ಶ್ರೇಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಅವರು ಕರೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ದೇಶದ ಹೆಮ್ಮೆ ಮತ್ತು ಭವಿಷ್ಯದ ಆಶಾಕಿರಣಗಳಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. PHF. PDG. ಮಧುಪ್ರಸಾದ್ ಕೆ. ಅವರು ವಹಿಸಿದ್ದರು. ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಇಂದಿನ ಯುವಜನತೆಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳನ್ನು ನೀಡಿದಂತೆ ಕರ್ತವ್ಯಗಳನ್ನೂ ನೀಡಿದೆ. ಸಂವಿಧಾನವನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು, ಪರಿಸರವನ್ನು ಸಂರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಟ್ರಸ್ಟ್ ನ ಖಜಾಂಚಿ ರೊ. ಸತ್ಯನಾರಾಯಣಾಚಾರ್,
ರೊ. ಜಿ.ಎ. ವಿಶ್ವನಾಥ್ ಬಾಬು, ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಸದಸ್ಯರು, ಹಾಗೂ ರೊ. ಶಂಕರಪ್ಪ, ಆಡಳಿತಾಧಿಕಾರಿ, ರೋಟರಿ ವಿದ್ಯಾಲಯ, ಉಪಸ್ಥಿತರಿದ್ದು , ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ, ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರದ ಅಭಿವೃದ್ಧಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಭಾಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ವಿದ್ಯಾರ್ಥಿಗಳ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಹೆಚ್.ಎಂ. ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಶಿಕ್ಷಕಿ ಜ್ಯೋತಿ ಆರ್. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಗೌರಮ್ಮ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರೋಟರಿ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವಿಲೇಹಾಳು ಗ್ರಾಮದಲ್ಲಿ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಏಕತೆ, ಸಾಮರಸ್ಯ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕುರಿತು ಸಂದೇಶ ನೀಡಲಾಯಿತು.

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಜಾಫರ್ ಅವರು ಮಾತನಾಡಿ, ಸ್ವಾತಂತ್ರ್ಯವೆಂಬುದು ಕೇವಲ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಅಭಿವೃದ್ಧಿಯ ಅವಕಾಶ ದೊರೆಯುವಂತಾಗಬೇಕು. ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending