ದಿನದ ಸುದ್ದಿ
ಕೋವಿಡ್ 19 : ಕೇರಳಕ್ಕೆ ಮತ್ತು ಕೇರಳದಿಂದ ಪಾಠಗಳು
- ಭಾರತದ ಸಾರ್ವಜನಿಕ ಆರೋಗ್ಯದ ದಾಖಲೆಯ ಹಿನ್ನೆಲೆಯಲ್ಲಿ, ಕೊವಿದ್-19ರ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿಯ ಬಗ್ಗೆ ಕೇರಳವನ್ನು ಶ್ಲಾಘಿಸಲಾಗುತ್ತಿದೆ. ಇದಕ್ಕೆ ಬೇಕಾದ ಪೂರ್ವಭಾವಿ ಮೂಲ ಸೌಕರ್ಯಗಳನ್ನು ಹಿಂದೆಯೇ ಒದಗಿಸಿದ್ದರಿಂದಾಗಿ ಮತ್ತು ನಿಫಾ ವೈರಸ್ನ ಸವಾಲನ್ನು ನಿಭಾಯಿಸಿದ ಅನುಭವದಿಂದಾಗಿ, ಕೇರಳ ಸರ್ಕಾರ ಉಳಿದ ರಾಜ್ಯ ಸರ್ಕಾರಗಳಿಗಿಂತ ಕೊವಿದ್-19ರ ಸವಾಲು ಎದುರಿಸುವ ಪೂರ್ವತಯಾರಿಯಲ್ಲಿ ಸಾಪೇಕ್ಷವಾಗಿ ಮುಂದಿತ್ತು.
–ಕೆ.ಕೆ.ಶೈಲಜ (ಕೇರಳ ಆರೋಗ್ಯ ಮಂತ್ರಿ)
ಅನು: ಎಂ.ಜಿ.ವೆಂಕಟೇಶ
ಪ್ರತಿವರ್ಷ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದಾಗ ಪತ್ರಿಕೆಗಳು ಆರೋಗ್ಯ ಕ್ಷೇತ್ರಕ್ಕೆ ಮೀಸಲಾಗಿಡುವ ಅತ್ಯಲ್ಪ ಹಣದ ಕುರಿತು ಟೀಕೆ ಮಾಡುವ ಲೇಖನಗಳನ್ನು ಪ್ರಕಟ್ರಿಸುತ್ತವೆ. ಕೋವಿಡ್ – 19 ರ ಬೆದರಿಕೆ ವ್ಯಾಪಕವಾಗಿ ಆವರಿಸುತ್ತಿರುವಾಗ, ವೈದ್ಯರು, ಆರೋಗ್ಯ ಕ್ಷೇತ್ರದ ಕಾರ್ಯಕರ್ತರು, ರಾಜ್ಯ ಸರ್ಕಾರದ ಸಂಸ್ಥೆಗಳು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ಕೊಡಲಾರಂಭಿಸಿದ್ದರು. ಆದರೆ ನಾವು ಎಲ್ಲ ಕಡೆಗಳಲ್ಲೂ ಈ ಪಿಡುಗನ್ನು ಎದುರಿಸಲಾರಂಭಿಸಿದಾಗ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ನ್ಯೂನತೆಗಳು ಢಾಳಾಗಿ ಗೋಚರಿಸಲಾರಂಭಿಸಿದವು.
ಪಿ.ಸಾಯಿನಾಥ್ ತಮ್ಮ `ಎಲ್ಲರಿಗೂ ಬರ ಅಂದರೆ ಇಷ್ಟ’ ಪುಸ್ತಕದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಂಬಿರುವ ಬಡವರ ಸ್ಥಿತಿಯನ್ನು ಮನಮುಟ್ಟುವ ವಿವರಗಳೊಂದಿಗೆ ಹೇಳುತ್ತಾರೆ. ಅವರು 1994 ರಲ್ಲಿ ಕಾಣಿಸಿಕೊಂಡಿದ್ದ ಪ್ಲೇಗ್ ಪಿಡುಗಿಗೆ ಹಿಂದೆಂದು ಕಾಣದ ರೀತಿಯಲ್ಲಿ ಮಾಧ್ಯಮದ ಗಮನ ಸೆಳೆದಿದ್ದಕ್ಕೆ ಕಾರಣವನ್ನು ವಿವರಿಸುತ್ತಾರೆ. ಏಕೆಂದರೆ ಬೇರೆ ಕೆಲವು ರೋಗಗಳಂತೆ ಅದು ಗ್ರಾಮೀಣ ಪ್ರದೇಶ ಅಥವ ನಗರದ ಕೊಳಚೆ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ಪ್ಲೇಗಿನ ಬ್ಯಾಕ್ಟಿರೀಯಾ ನಗರದ ಪ್ರತಿಷ್ಠಿತರ ಜಾಗಗಳಿಗೂ ನುಗ್ಗುವ ಗಾಂಚಾಲಿತನ ತೋರಿತ್ತು. ಸಾಯಿನಾಥ್ರ ಮಾತುಗಳಲ್ಲಿ ಹೇಳುವುದಾದರೆ “ಅವು (ಬ್ಯಾಕ್ಟೀರಿಯಾ) ಕ್ಲಬ್ ಕ್ಲಾಸ್ನಲ್ಲಿ ಸಂಚರಿಸಿ ನ್ಯೂಯಾರ್ಕ್ ತಲುಪಬಹುದಿತ್ತು. ಆದ್ದರಿಂದ ಬಹಳಷ್ಟು ಸುಂದರ ವ್ಯಕ್ತಿಗಳು ಆತಂಕಕ್ಕೆ ಒಳಗಾಗಿದ್ದರು.” ಕೋವಿಡ್-19 ಪ್ಲೇಗ್ಗಿಂತ ಕಡಿಮೆ ಅಪಾಯಕಾರಿಯಾದರೂ, ಅದು ಭಾರತಕ್ಕೆ ಬಂದಿದ್ದು ಸೋಂಕು ಪೀಡಿತ ದೇಶಗಳಿಂದ ಆಗಮಿಸಿದ ಪ್ರಯಾಣಿಕರಿಂದಾಗಿತ್ತು.
ಈ ವಾದ ಒಡ್ಡುತ್ತಿರುವುದು ಈ ಎರಡೂ ಪಿಡುಗುಗಳನ್ನು ಹಗುರವಾಗಿ ತೆಗೆದುಕೊಳ್ಳುವ ಉದ್ದೇಶದಿಂದಲ್ಲ. ಬದಲಿಗೆ, ಆರೋಗ್ಯದ ವಿಷಯದಲ್ಲಿ ಭಾರತದ ಪ್ರತಿಸ್ಪಂದನೆ, ಅದರಿಂದ ಪೀಡಿತರಾದವರ ಸಾಮಾಜಿಕ ಮತ್ತು ವರ್ಗ ವಾಸಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ ಎಂಬುದರ ಕುರಿತು ಬೆಳಕು ಚೆಲ್ಲುವುದು ಮಾತ್ರ ಇದರ ಉದ್ದೇಶ.
ಕೋವಿಡ್-19ರ ಆಗಮನದಿಂದ ಖಾಸಗಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದ್ದ ವರ್ಗಗಳು ಸರ್ಕಾರಿ ಆರೋಗ್ಯ ವ್ಯವಸ್ಥೆಗಳ ಮೇಲೆ ತಪಾಸಣೆ ಮತ್ತು ಪ್ರತ್ಯೇಕೀಕರಣಕ್ಕಾಗಿ (ಕ್ವಾರಂಟೈನ್ಗಾಗಿ) ಅವಲಂಬಿತರಾಗುತ್ತಿರುವ ವಿಚಿತ್ರ ಪರಿಸ್ಥಿತಿ ಉಂಟಾಗಿದೆ. ದಶಕಗಳಿಂದ ಭಾರತದ ಬಹುಸಂಖ್ಯಾತರು ಇಂತಹ ಸರಕಾರಿ ಆರೋಗ್ಯ ವ್ಯವಸ್ಥೆಯ ಮೇಲೆ ಅವಲಂಬಿಸಿದ್ದರು ಎಂದು ಕೆಲವು ಅನುಕೂಲಸ್ತರಿಗೆ ಗೋಚರವಾಗುವುದಕ್ಕೆ ಕೋವಿಡ್-19 ರಂತಹ ಪಿಡುಗೇ ಬರಬೇಕಾಯಿತು. ಆಗ್ರಾ ಮಹಿಳೆಯೊಬ್ಬರು ಕ್ವಾರಂಟೈನ್ನಿಂದ ತಪ್ಪಿಸಿಕೊಂಡ ವಿಷಯ ತಪ್ಪಾಗಿ ವರದಿಯಾಗಿದೆ.
ವಾಸ್ತವವಾಗಿ “ಅನಾರೋಗ್ಯಕರ ಶೌಚಾಲಯ ವ್ಯವಸ್ಥೆ ಆಕೆಗೆ ವಾಕರಿಕೆ” ತರುವಂತೆ ಇದ್ದಿದ್ದರಿಂದ ಆಕೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಕ್ವಾರಂಟೈನ್ ಗೆ ಪ್ರತಿರೋಧ ತೋರಿದ್ದಳು. ಇದು ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಮತ್ತು ಮೂಲ ಸೌಕರ್ಯಗಳಿಗಾಗಿ ಮೀಸಲಿಡುವ ಅತ್ಯಲ್ಪ ಅನುದಾನದ ಫಲ. ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯಕರ ಶೌಚಾಲಯಗಳನ್ನು ನಿರ್ವಹಿಸಲಾಗದ ಸಾರ್ವಜನಿಕ ಆರೋಗ್ಯ ಆಡಳಿತಕ್ಕೆ, ಕೋವಿಡ್-19 ನಿಜವಾಗಿಯೂ ಎದುರಿಸಲಾಗದ ಸವಾಲಾಗಿದೆ.
ಸಾಂಕ್ರಾಮಿಕ ಎದುರಿಸಲು ತಯಾರಿ
ಭಾರತದ ಸಾರ್ವಜನಿಕ ಆರೋಗ್ಯದ ದಾಖಲೆಯ ಹಿನ್ನೆಲೆಯಲ್ಲಿ, ಕೊವಿದ್-19ರ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿಯ ಬಗ್ಗೆ ಕೇರಳವನ್ನು ಶ್ಲಾಘಿಸಲಾಗುತ್ತಿದೆ. ಇದಕ್ಕೆ ಬೇಕಾದ ಪೂರ್ವಭಾವಿ ಮೂಲಭೂತ ಸೌಕರ್ಯಗಳನ್ನು ಹಿಂದೆಯೇ ಒದಗಿಸಿದ್ದರಿಂದಾಗಿ ಮತ್ತು ನಿಫಾ ವೈರಸ್ನ ಸವಾಲನ್ನು ನಿಭಾಯಿಸಿದ ಅನುಭವದಿಂದಾಗಿ, ಕೇರಳ ಸರ್ಕಾರ ಉಳಿದ ರಾಜ್ಯ ಸರ್ಕಾರಗಳಿಗಿಂತ ಕೊವಿದ್-19ರ ಸವಾಲು ಎದುರಿಸುವ ಪೂರ್ವತಯಾರಿಯಲ್ಲಿ ಸಾಪೇಕ್ಷವಾಗಿ ಮುಂದಿತ್ತು. ಜನವರಿ ಮಧ್ಯ ಭಾಗದಿಂದಲೇ ಇದನ್ನು ಎದುರಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿತ್ತು. ನಮ್ಮ ರಾಜ್ಯ ಕೊವಿದ್-19 ಪಿಡುಗು ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಪಟ್ಟಿ ತಯಾರಿಸಿದ ಮೊದಲ ರಾಜ್ಯವಾಗಿತ್ತು.
ಜನವರಿ 30 ರಂದು ಕೊವಿದ್-19 ಪಾಸಿಟಿವ್ ಆದ ಮೊದಲ ಪ್ರಕರಣ ಗಮನಕ್ಕೆ ಬಂದ ನಂತರ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಿ ಪಾಲಿಸಲಾಯಿತು. ಆ ನಂತರ ಸರಕಾರ ಇನ್ನಷ್ಟು ನಿಗಾ ವಹಿಸಿ ಸೋಂಕು ಖಚಿತವಾದವರ ಜತೆ ಪ್ರಾಥಮಿಕ ಮತ್ತು ಸ್ವಲ್ಪ ದೂರದ ಸಂಪರ್ಕ ಇರುವ ಎಲ್ಲರನ್ನು ಗುರುತಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಇಟಲಿಯಿಂದ ಹಿಂತಿರುಗಿದ ಒಂದು ಕುಟುಂಬ ತಪಾಸಣೆಗೆ ಒಳಗಾದಾಗ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಗಂಭೀರ ಸ್ಥಿತಿ ನಿರ್ಮಾಣವಾಯಿತು. ತೀವ್ರವಾದ ಹುಡುಕುವಿಕೆಯ ನಂತರ ಈ ಕುಟುಂಬದ ಸಂಪರ್ಕಕ್ಕೆ 719 ಜನ ಒಳಗಾಗಿದ್ದರು ಎಂಬುದು ಪತ್ತೆಯಾಯಿತು.
ಆ ನಂತರ ವಿದೇಶಗಳಿಂದ ಹಿಂತಿರುಗುವ ಪ್ರಯಾಣಿಕರ ಬಗ್ಗೆ ಕ್ರಮಗಳನ್ನು ಸರ್ಕಾರ ತೀವ್ರಗೊಳಿಸಿತು. ಈ ಪ್ರಯಾಣಿಕರು ತಮ್ಮ ಪ್ರಯಾಣದ ಪೂರ್ಣ ವಿವರಗಳನ್ನು ನೀಡದಿದ್ದರೆ ತೀವ್ರ ಕ್ರಮಗಳಿಗೆ ಒಳಗಾಗಬೇಕಾಯಿತು. ಅವರ ಪ್ರಾಥಮಿಕ ಮತ್ತು ಸ್ವಲ್ಪ ದೂರದ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಲಾಯಿತು ಅಥವಾ ಗೃಹದಲ್ಲಿ ಒಂಟಿಯಾಗಿ ಇರಿಸಲಾಯಿತು.
ಮುಂದಿನ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಯಿತು. ನಿಗಾ ವಹಿಸಲಾದವರ ಪಟ್ಟಿಯನ್ನು ಸರ್ಕಾರ ನೀಡಿತು. ಇತ್ತೀಚಿಗೆ ರಾಜ್ಯವನ್ನು ವಿವಿಧ ಕಡೆಯಿಂದ ವಿವಿಧ ರೀತಿಯಲ್ಲಿ ಪ್ರವೇಶಿಸುವ ಕಡೆಯಲ್ಲಿ ಜನರನ್ನು ತಪಾಸಣೆಗೆ ಒಳಪಡಿಸಲಾಯಿತು. ಆರೋಗ್ಯ ರಕ್ಷಣಾ ಕಾರ್ಯಕರ್ತರು ನಗರ ಪ್ರವೇಶದ ಚೆಕ್ ಪೋಸ್ಟ್ಗಳಲ್ಲಿ ನಿಂತು ತಪಾಸಣೆ ನಡೆಸಿದರು. ಹಾಗೆ ರೈಲ್ವೆ ನಿಲ್ದಾಣಗಳಲ್ಲಿ ಈ ಕ್ರಮ ಕೈಗೊಳ್ಳಲಾಯಿತು.
ಈ ಪರಿಸ್ಥಿತಿಯನ್ನು ಅತ್ಯಂತ ಸೂಕ್ತವಾಗಿ ನಿಭಾಯಿಸುವುದರ ಕುರಿತು ನಾವು ಚೀನಾ ಮತ್ತು ದಕ್ಷಿಣ ಕೊರಿಯಾದಿಂದ ಕಲಿಯಬೇಕಿರುವುದು ಎಂದರೆ, ವ್ಯಾಪಕವಾಗಿ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದು ಮತ್ತು ತಪಾಸಣೆ ಮಾಡುವುದು. ದ. ಕೋರಿಯಾದಲ್ಲಿ ವ್ಯಾಪಕ ತಪಾಸಣೆಯಿಂದಾಗಿ ಮಾತ್ರ ಲಾಕ್ಡೌನ್ ಮಾಡದೇ ಬಿಕ್ಕಟ್ಟನ್ನು ನಿಭಾಯಿಸುವುದು ಸಾಧ್ಯವಾಯಿತು. ಆದರೆ ಕೇರಳದಲ್ಲಿ ಆರೋಗ್ಯಸೇವೆಯ ಉತ್ತಮ ಸೌಲಭ್ಯಗಳಿದ್ದರೂ ಇಂತಹ ಉತ್ತಮ ಆದರ್ಶ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ ಸೀಮಿತ ಸಂಪನ್ಮೂಲ ಮತ್ತು ತಪಾಸಣಾ ಪ್ರಯೋಗಶಾಲೆಗಳು.
ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ನಾವು ಬಹಳ ಜಾಣತನದಿಂದ ನಮ್ಮ ಸೌಲಭ್ಯವನ್ನು ಉಪಯೋಗಿಸಬೇಕಾಗಿದೆ ಮತ್ತು ಸ್ಥಳೀಯ ಪ್ಯಯತ್ನಗಳನ್ನು ಹೆಚ್ಚಿಸಬೇಕಾಗಿದೆ. ಇದನ್ನು ಸಾಧಿಸಬೇಕಾದರೆ ಬಲವಾದ ರಾಜಕೀಯ ಬದ್ಧತೆ, ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಜನರ ಬದ್ಧತೆ ಬೇಕಾಗಿರುತ್ತದೆ. ಸರ್ಕಾರ ಸೂಚಿಸುವ ಕ್ರಮಗಳನ್ನು ಪ್ರಜೆಗಳು ಅನುಸರಿಸುವುದು ಮುಖ್ಯ. ಇದರಲ್ಲಿ ಮುಖ್ಯವಾದ ವಿಷಯವೆಂದರೆ ಸಾರ್ವಜನಿಕರು ಕಾರಣವಿಲ್ಲದೇ ತಪಾಸಣಾ ಕೇಂದ್ರಗಳಿಗೆ ಹೊಗದಿರುವುದು, ಹೀಗೆ ಹೋಗುವುದರಿಂದ ಪ್ರಯೋಗಾಲಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.
ಸ್ವಯಂ-ಪ್ರತ್ಯೇಕತೆ ಅನುಸರಿಸುವಾಗ ಕೈಗೊಳ್ಳುವ ಕ್ರಮಗಳ ಬಗ್ಗೆ, ರೋಗಲಕ್ಷಣಗಳನ್ನು ಗುರುತಿಸಲು ಮತ್ತು ವರದಿ ಮಾಡುವುದಕ್ಕೆ ಕೇರಳ ಸರ್ಕಾರ ‘ಜಿಓಕೆ ಡೈರೆಕ್ಟ್’ ಎಂಬ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. `ದಿಶಾ’ ಹೆಲ್ಪಲೈನ್ ಜನಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರ ಮುಖಾಂತರ ಕೊವಿದ್ 19 ಪಿಡುಗಿನ ಹರಡುವಿಕೆಯ `ಸರಣಿ ಕತ್ತರಿಸುವ’ (ಬ್ರೇಕ್ ದಿ ಚೈನ್) ಪ್ರಚಾರದಲ್ಲಿ ಶುಚಿ ಮತ್ತು ನೈರ್ಮಲ್ಯದ ಬಗ್ಗೆ ತಿಳಿಸಲಾಗುತ್ತಿದೆ. ಈ ಕ್ರಮಗಳಿಂದ ಸ್ವಭಾವದ ಬದಲಾವಣೆ ತರುತ್ತಿರುವುದು ರಾಜ್ಯದ ಮತ್ತು ರಾಷ್ಟ್ರದ ಮಾಧ್ಯಮದಲ್ಲೂ ಪ್ರಕಟವಾಗುತ್ತಿದೆ.
ಈ ರೀತಿಯ ಮುಂಜಾಗರೂಕತಾ ಕ್ರಮ ಮತ್ತು ಸಾಮಾಜಿಕ ಅಂತರ ಕಾಪಿಟ್ಟುಕೊಂಡರೆ ಸಾರ್ವಜನಿಕ ಮತ್ತು ಸರಕಾರದ ಸಂಪನ್ಮೂಲಗಳ ಮೇಲೆ ಉಂಟಾಗುವ ಒತ್ತಡವನ್ನು ಮುಂದೂಡಬಹುದು. ಹೀಗೆ ಗಳಿಸಿದ ಅವಧಿಯಲ್ಲಿ ಮುಂದೆ ಸೋಂಕು ಹರಡಿ ಅಗತ್ಯ ಬಿದ್ದರೆ ಹೆಚ್ಚು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುವಂತೆ ತಪಾಸಣಾ ಸೌಲಭ್ಯಗಳನ್ನು ನಿರ್ಮಿಸಬಹುದು. ಸರ್ಕಾರದ ವಿನಂತಿಯ ಮೇರೆಗೆ ಐ.ಸಿ.ಎಂ.ಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್) ಕೇರಳಕ್ಕೆ 10 ಪರೀಕ್ಷಾ ಕೇಂದ್ರಗಳನ್ನು ಮಂಜೂರು ಮಾಡಿದೆ. ಸರ್ಕಾರಕ್ಕೆ ಖಾಸಗಿ ಭಾಗಿತ್ವದೊಡನೆ ಇನ್ನು ಹೆಚ್ಚಿನ ಪ್ರಯೋಗಾಲಯಗಳನ್ನು ಸ್ಥಾಪಿಸುವ ಯೋಜನೆಯಿದೆ.
ಕೇರಳಕ್ಕೆ ಮತ್ತು ಕೇರಳದಿಂದ ಪಾಠಗಳು
ಕೇರಳದಲ್ಲಿ ಚಾರಿತ್ರಿಕವಾಗಿ ಸಶಕ್ತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸರ್ಕಾರ ನೀಡಿರುವ ಧೃಡವಾದ ಬೆಂಬಲದಿಂದಾಗಿ, ಕೊವಿಡ್ 19 ಹರಡುವ ಮೊದಲು ಕ್ರಮಗಳ ಬಗ್ಗೆ ನಿರ್ಣಯಿಸುವುದಕ್ಕೆ ಸಾಧ್ಯವಾಯಿತು. ಆಡಳಿತ ಒಳ್ಳೆಯ ಆರೋಗ್ಯ ವ್ಯವಸ್ಥೆ ಕಾಪಾಡಿ ಬೆಳೆಸಲು ವೇಗವರ್ಧಕವಾಗಿ ಕೆಲಸ ಮಾಡಿದೆ. ಇದು ಆರೋಗ್ಯ ಮೂಲ ಸೌಲಭ್ಯದ ವಿಸ್ತರಣೆಯಲ್ಲಿ ಕಂಡು ಬರುತ್ತದೆ. ಉದಾಹರಣೆಗೆ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ವೈರೋಲಜಿ ಘಟಕವನ್ನು ಅಲೆಪ್ಟಿಯಲ್ಲಿ ನಿಫಾ ವೈರಸ್ ಕಂಡು ಬಂದ ನಂತರ ಸ್ಥಾಪಿಸಿರುವುದು.
ಇತ್ತೀಚಿನ ದಿನಗಳಲ್ಲಿ ಉಂಟಾಗಿರುವ ಸಾಂಕ್ರಾಮಿಕ ಮತ್ತು ಅಸಾಂಕ್ರಮಿಕ ರೋಗಗಳಿಂದ ಉಂಟಾದ ಒತ್ತಡವನ್ನು ನಿರ್ವಹಿಸಿರುವ ರೀತಿಯಿಂದ ರಾಜ್ಯದ ಸೋಂಕಿನ ಪರಿಸ್ಥಿತಿಯನ್ನು ಗುರುತಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ನಿಗಾ ಇಡಲು ಸರಕಾರ ಸ್ಥಾಪಿಸಿರುವ ಉಸ್ತುವಾರಿ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದೆ. ಇದರಿಂದ ಆರೋಗ್ಯ ಅಧಿಕಾರಿಗಳು ವೇಗವಾಗಿ ರೋಗ ಗುರುತಿಸುವುದಕ್ಕೂ ತಡೆಯುವುದಕ್ಕೂ ಸಾಧ್ಯವಾಗಿದೆ. ಸೇವೆಯನ್ನು ಕ್ಷಿಪ್ರವಾಗಿ ಮತ್ತು ವ್ಯಾಪಕವಾಗಿ ಹೆಚ್ಚಿನ ಜನರನ್ನು ತಲುಪುವ ಗುರಿ ಸಾಧಿಸಲು ಆರೋಗ್ಯಸೇವಾ ವ್ಯವಸ್ಥೆಯನ್ನು ವಿಕೇಂದ್ರಿಕರಿಸಲಾಗಿದೆ. ಇದರ ಫಲಿತವಾಗಿಯೇ ಕೋವಿಡ್-19 ರ ಸಂದರ್ಭದಲ್ಲಿ ವೈಯುಕ್ತಿಕ ಪ್ರಕರಣಗಳನ್ನು ಪತ್ತೆ ಹಚ್ಚಿ ಅದರ ಜಾಡು ಹಿಡಿಯುವುದರಲ್ಲಿ ಮತ್ತು ‘ಸರಣಿ ತುಂಡರಿಸುವ’ ಪ್ರಚಾರ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿವೆ.
ಆರೋಗ್ಯ ಸೇವೆಯ ಗುಣಮಟ್ಟ ಮತ್ತು ಮೂಲಭೂತ ಸೌಕರ್ಯ ಹೆಚ್ಚಿಸಲು ‘ಆರ್ದ್ರ ಮಿಶನ್’ ಮುಖಾಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವತ್ತ ಹೆಜ್ಜೆ ಹಾಕುತ್ತಿದ್ದೇವೆ. ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತೆ ಇನ್ನಷ್ಟು ಉತ್ತಮ ಹಾದಿಯಲ್ಲಿ ಒಯ್ಯಲು ಯಶಸ್ವಿಯಾಗಿದೆ.
- ಮೂಲ ಲೇಖನ ಕೃಪೆ : ದಿ ಹಿಂದು ಪತ್ರಿಕೆ, ಮಾ.23, 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.
ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
ಜಿಲ್ಲೆಯಲ್ಲಿ 1.37 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಡಿಎಚ್ಒ ಡಾ. ಷಣ್ಮುಖಪ್ಪ
ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ವಿಶೇಷ ಅಭಿಯಾನದಲ್ಲಿ ಯಾವುದೇ ಒಂದು ಮಗುವೂ ಸಹ ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಸೂಚಿಸಿದರು.
ಅವರು ಭಾನುವಾರ ಪಾಷನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಬ್ದುಲ್ ರೆಹಮಾನ್ ಎಂಬ 4 ತಿಂಗಳ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಎಲ್ಲಾ ಭಾಗಗಳ ಅರ್ಹ ಮಕ್ಕಳಿಗೂ ಲಸಿಕೆ ತಲುಪಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಎಸ್. ಅವರು ಮಾತನಾಡಿ, ಜಿಲ್ಲೆಯನ್ನು ಸಂಪೂರ್ಣ ಪೋಲಿಯೋ ಮುಕ್ತವಾಗಿಸಲು ಆರೋಗ್ಯ ಇಲಾಖೆ ಪಣತೊಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 18,28,153 ಜನಸಂಖ್ಯೆಯಿದ್ದು, 3,79,338 ಮನೆಗಳಿವೆ. ಇವುಗಳಲ್ಲಿ ಗುರುತಿಸಲಾಗಿರುವ 5 ವರ್ಷದ ಒಳಗಿನ 1,37,339 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.
ಇದಕ್ಕಾಗಿ ಜಿಲ್ಲಾದ್ಯಂತ 1,090 ಲಸಿಕಾ ಬೂತ್ಗಳನ್ನು ಸ್ಥಾಪಿಸಲಾಗಿದೆ. ಬೂತ್ಗಳಲ್ಲಿ ಲಸಿಕೆ ಹಾಕುವುದರ ಜೊತೆಗೆ, ಜೂನ್ 29 ರಿಂದ ಜುಲೈ 1 ರವರೆಗೆ ಒಟ್ಟು 3 ದಿನಗಳ ಕಾಲ ಜಿಲ್ಲೆಯ ಎಲ್ಲಾ ಮನೆ-ಮನೆಗೆ ತೆರಳಿ 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮವನ್ನು 2 ಹಂತಗಳಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಲಸಿಕಾ ಅಭಿಯಾನದ ಯಶಸ್ಸಿಗಾಗಿ ಮನೆ-ಮನೆ ಭೇಟಿ ತಂಡ, ಟ್ರಾನ್ಸಿಸ್ಟ್ (ಸಾರಿಗೆ ನಿಲ್ದಾಣಗಳ ತಂಡ) ಮತ್ತು ಸಂಚಾರಿ (ಮೊಬೈಲ್) ತಂಡ ಹೀಗೆ ಮೂರು ಪ್ರಮುಖ ವಿಭಾಗಗಳ ತಂಡಗಳನ್ನು ರಚಿಸಲಾಗಿದೆ. ನಿಯೋಜಿತ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ವಲಸೆ ಕಾರ್ಮಿಕರ ಮಕ್ಕಳು, ಹರವಿಗಿ ಹೋಗುವ ಕುಟುಂಬಗಳ ಮಕ್ಕಳು ಸೇರಿದಂತೆ ಒಂದೂ ಮಗುವು ಲಸಿಕೆಯಿಂದ ವಂಚಿತವಾಗದಂತೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ತಿಳಿಸಿದರು.
ಡಾ. ರೇಣುಕಾರಾಧ್ಯ ಆರ್.ಸಿ.ಹೆಚ್.ಒ ಅವರು ಮಾತನಾಡಿ, ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲಾಗಿದೆ ಆದರೆ ಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ 5 ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿನ ನಾಗರಿಕರು ಭಾರತಕ್ಕೆ ಬಂದು ಹೋಗುವ ಸಾಧ್ಯತೆ ಇರುವುದರಿಂದ, ವೈರಸ್ ಮತ್ತೆ ಇಲ್ಲಿ ಹರಡಬಾರದು ಎಂಬ ಮುಂದಾಲೋಚನೆಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಈ ಪಲ್ಸ್ ಪೋಲಿಯೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಲ್ಸ್ ಪೋಲಿಯೋ ನೊಡೆಲ್ ಅಧಿಕಾರಿ ಡಾ.ಚಂದ್ರಶೇಖರ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
ದಿನದ ಸುದ್ದಿ17 hours agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ16 hours agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
-
ದಿನದ ಸುದ್ದಿ2 hours agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ

