ನೆಲದನಿ
ನೆಲನುಡಿಗೆ ದನಿಯಾದ ಡಾ. ಎಂ.ಜಿ ಈಶ್ವರಪ್ಪ ಅವರ ಸಾಹಿತ್ಯ ಮತ್ತು ಕಲಾ ಬದುಕಿನ ಸುತ್ತ

ಭಾರತೀಯ ಸಂಸ್ಕøತಿಯು ನೆಲಮೂಲ ಬದುಕಿನೊಂದಿಗೆ ಅನುಸಂಧಾನಗೊಂಡು, ನೆಲದ ಸೊಗಡು ಮತ್ತು ಕಸುವನ್ನು ತನ್ನ ಜೀವಾಳವಾಗಿಸಿಕೊಂಡಿದೆ. ಇಂತಹ ನೆಲಮೂಲ ಸಂಸ್ಕøತಿಯ ಜೀವಾಳದಂತಿರುವ ಜನಪದ ಸಾಹಿತ್ಯಕ್ಕೆ ಕಸುವು ನೀಡಿ, ತಮ್ಮ ಬದುಕಿನ ಭಾಗವೆಂಬಂತೆ ಕಾಪಾಡಿಕೊಂಡು ಬಂದವರು ಈ ನಾಡಿನ ಮೂಲನಿವಾಸಿಗಳು. ಜನಪದ ಸಾಹಿತ್ಯವು ಸಾಮಾನ್ಯ ಜನತೆಯ ಬದುಕಿನಲ್ಲಿ ಮಹತ್ತರವಾದ ಸ್ಥಾನಮಾನವನ್ನು ಪಡೆದುಕೊಂಡಿದೆ. ನಮ್ಮ ಜನಪದರು ಅಕ್ಷರವಂಚಿತರಾದರೂ ಶಿಕ್ಷಿತವರ್ಗದ ಕಟ್ಟುಪಾಡುಗಳಿಗೆ ಪ್ರತಿರೋಧ ಒಡ್ಡುವ ಮೂಲಕವಾಗಿ ತಮ್ಮದೆ ಆದ ಪರ್ಯಾಯ ಬದುಕನ್ನು ರೂಪಿಸಿಕೊಂಡು, ತಮ್ಮ ವಿಶ್ವಭ್ರಾತೃತ್ವದ ಮೌಲ್ಯಗಳನ್ನು ಜನ ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕವಾಗಿ ಪಸರಿಸಿಕೊಂಡು ಬಂದಿದ್ದಾರೆ. ಇಂದಿನ ಜಾಗತೀಕರಣ, ಔದ್ಯೋಗಿಕರಣ ಹಾಗೂ ಉದಾರೀಕರಣದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಇಲ್ಲಿನ ಜನ ಸಾಹಿತ್ಯದಲ್ಲಿದೆ. ಇಂತಹ ಜನ ಅಥವಾ ಜನಪದ ಸಾಹಿತ್ಯವನ್ನು ಯಾವುದೇ ಅಕಾಡೆಮಿಕ್ ಶಿಸ್ತಿಗೆ ಒಳಪಡದೆ ನಮ್ಮ ಜನಪದರು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಶಿಷ್ಟ ಸಾಹಿತ್ಯದ ಎದುರು ಸ್ಪರ್ಧೆಗೊಳ್ಳದೆ ಮೂಲೆಗುಂಪಾಗಿದ್ದ ಜನಪದ ಸಾಹಿತ್ಯವನ್ನು ಸಮಾಜದ ಮುನ್ನೆಲೆಗೆ ತಂದು, ಅದರ ಆಳ ಅಗಲ ಹಾಗೂ ಕಸುವನ್ನು ಗುರುತಿಸುವ ನೆಲೆಯಲ್ಲಿ ನಮ್ಮ ನೆಲದ ವಿದ್ವಾಂಸರು ಅವಿರತ ಶ್ರಮಿಸಿದ್ದಾರೆ.
ಇಂತಹ ಅಥವಾ ಜನ ಸಾಹಿತ್ಯಕ್ಕೆ ದನಿಯಾದವರಲ್ಲಿ ಡಾ.ಎಂ.ಜಿ ಈಶ್ವರಪ್ಪನವರು ಒಬ್ಬರಾಗಿದ್ದಾರೆ.
ಶೀಯುತ ಎಂ.ಜಿ ಈಶ್ವರಪ್ಪನವರು ಶಿವಮೊಗ್ಗ ಜಿಲ್ಲೆಯ ಹಾಡೊನಹಳ್ಳಿ ಗ್ರಾಮದಲ್ಲಿ ಶ್ರೀಮತಿ ಗಿರಿಜಮ್ಮ ಶ್ರೀ ರುದ್ರಪ್ಪ ದಂಪತಿಗಳ ಪುತ್ರರಾಗಿ ಜನಿಸಿದರು. ಶ್ರೀಯುತರ ತಂದೆಯವರಾದ ರುದ್ರಪ್ಪನವರು ಕೃಷಿ ಮೂಲ ಕುಟುಂಬದವರಾಗಿದ್ದು, ಇವರ ಪ್ರೇರಣೆಯು ಎಂ.ಜಿ ಈಶ್ವರಪ್ಪನವರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಬಾಲ್ಯದ ದಿನಗಳಿಂದಲೂ ಕೃಷಿ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿದ ಇವರು, ಈ ಕೃಷಿ ಕಾರ್ಯಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಶಾಲಾ ಶಿಕ್ಷಣದಲ್ಲಿನ ಆಸಕ್ತಿಯೊಂದಿಗೆ, ಬಿಡುವಿನ ವೇಳೆಯಲ್ಲಿ ಕೃಷಿಯ ವಿವಿಧ ಕಾರ್ಯಗಳಾದ ಕುಂಟೆ ಹೊಡೆಯುವ, ಜಾನುವಾರುಗಳನ್ನು ಸಾಕುವ ಕಾಯಕದಲ್ಲಿ ತಲ್ಲಿನರಾಗಿರುತ್ತಿದ್ದರು. ಇವರು ಪದವಿ ಶಿಕ್ಷಣವನ್ನು ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿ, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಪೂರೈಸಿದರು. ಈ ಅವಧಿಯಲ್ಲಿ ಇವರಿಗೆ ಕರಗತವಾಗಿದ್ದ ಜಾನಪದ ಹಾಗೂ ಕೃಷಿ ಜ್ಞಾನವನ್ನು ಸೂಕ್ಷ್ಮವಾಗಿ ಗಮನಿಸಿದ ಹೆಸರಾಂತ ಜಾನಪದ ವಿದ್ವಾಂಸರಾದ ಜಿ.ಶಂ.ಪರಮಶಿವಯ್ಯನವರು ‘ವ್ಯವಸಾಯ ಜಾನಪದ’ ಎಂಬ ವಿಷಯದ ಕುರಿತಾಗಿ ಪಿಎಚ್.ಡಿ ಅಧ್ಯಯನ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದರು. ಇವರ ಒತ್ತಾಸೆ ಹಾಗೂ ತನ್ನಲ್ಲಿ ಅಂತರ್ಗತವಾಗಿದ್ದ ಕೃಷಿ ಮತ್ತು ಜಾನಪದ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಅಧ್ಯಯನ ನಡೆಸಿದರು. ಜಾನಪದ ಲೋಕದ ಕೃಷಿಯ ಮಹತ್ತು ಹಾಗೂ ಅದರ ಜೀವಪರ ಧೋರಣೆಗಳನ್ನು ಗುರುತಿಸುವ ಮೂಲಕ ಜಾನಪದ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡುವ ಮುಖಾಂತರ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಶ್ರೀಯುತ ಎಂ.ಜಿ ಈಶ್ವರಪ್ಪನವರಿಗೆ ಬಾಲ್ಯದ ದಿನಗಳಿಂದಲೂ ಕೃಷಿ ಹಾಗೂ ಜಾನಪದ ಕ್ಷೇತ್ರದ ಕುರಿತು ಹೆಚ್ಚು ಪ್ರೇರಣೆಯಾದವರು ಇವರ ದೊಡ್ಡಪ್ಪನವರಾದ ಶ್ರೀ ಮಲ್ಲಪ್ಪನವರು. ಜಾನಪದದ ಗಣಿಯಂತಿದ್ದ ಇವರು ದೇಶಿ ಸೊಗಡನ್ನು ಮೈಗೂಡಿಸಿಕೊಂಡು, ತಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಸನ್ನಿವೇಶಗಳ ಕುರಿತು ಹಲವಾರು ಕಥೆ, ಪುರಾಣ ಹಾಗೂ ಐತಿಹ್ಯಗಳನ್ನು ತಮ್ಮಲ್ಲಿ ಕರಗತ ಮಾಡಿಕೊಂಡಿದ್ದರು. ಇವರಲ್ಲಿ ಕರಗತವಾದ ಈ ಕಲೆಯನ್ನು ಒಂದೊಂದಾಗಿಯೇ ಸಂದರ್ಭಾನುಸಾರವಾಗಿ ಇವರ ಮುಂದೆ ಪ್ರಸ್ತಾಪಿಸುತ್ತಿದ್ದರು. ಬಾಲ್ಯದ ದಿನಗಳಿಂದಲೂ ತಮ್ಮ ದೊಡ್ಡಪ್ಪನವರಿಂದ ಕಲಿತ ಈ ಪಾಠವು ಮುಂದೆ ಇವರ ಜಾನಪದ ಅಧ್ಯಯನದ ಸಂದರ್ಭದಲ್ಲಿ ಹೆಚ್ಚು ಆಪ್ತವಾಗತೊಡಗಿತು. ಈ ಎಲ್ಲಾ ಪಾಠಗಳು ಮುಂದೊಂದು ದಿನ ಜಾನಪದ ಕ್ಷೇತ್ರದ ವಿದ್ವತ್ತಿಗೆ ದಾರಿ ದೀಪವಾದವು. ಹೀಗಾಗಿ ಶ್ರೀಯುತ ಎಂ.ಜಿಯವರ ಜಾನಪದ ವಿದ್ವತ್ತಿಗೆ ಅವರ ದೊಡ್ಡಪ್ಪನವರು ಸಾಕಷ್ಟು ಪ್ರೇರಣೆಯಾಗಿ ನಿಂತಿದ್ದಾರೆ.
ಜಾನಪದ ವಿದ್ವತ್ತ್ ವಲಯದಲ್ಲಿ ಶ್ರೀಯುತ ಎಂ.ಜಿ ಈಶ್ವರಪ್ಪನವರದು ಬಹುದೊಡ್ಡ ಹೆಸರು. ಬಹುಮುಖಿ ಪ್ರತಿಭೆಯುಳ್ಳ ಇವರು ತಮ್ಮ ಅಧ್ಯಯನ ವಿಷಯಕ್ಕೆ ಮಾತ್ರ ಸೀಮಿತಗೊಳ್ಳದೆ, ಸಾಹಿತ್ಯ ವಲಯದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಬ್ಬ ಅಧ್ಯಯನಕಾರ, ವಿದ್ವಾಂಸ, ಒಬ್ಬ ಚಿಂತಕ ಕೇವಲ ಅಧ್ಯಯನದಲ್ಲಿ ಕಾರ್ಯಪ್ರವೃತ್ತವಾದಾಗ ಅಲ್ಲಿನ ಆಳ ಅಗಲ ತಿಳಿಯುವುದಿಲ್ಲ. ಅಧ್ಯಯನದ ಜೊತೆ ಜೊತೆಯಲ್ಲಿ ತಾನು ಅಧ್ಯಯನ ಮಾಡುವ ವಿಷಯದ ಒಂದು ಭಾಗವಾಗಿ ಬೆರೆತಾಗ, ತನ್ನನ್ನು ಆ ಕ್ಷೇತ್ರದ ಪ್ರತಿನಿಧಿಯಾಗಿ ಗುರುತಿಸಿಕೊಂಡಾಗ ಮಾತ್ರವೇ ಒಂದು ಕ್ಷೇತ್ರದ ಸ್ಷಷ್ಟವಾದ ಚಿತ್ರಣವನ್ನು ಅರಿಯುವುದಕ್ಕೆ, ಅರಿತಿರುವುದನ್ನು ಸಂವೇದನಾತ್ಮಕ ನೆಲೆಯಲ್ಲಿ ಕಟ್ಟಿಕೊಡುವುದಕ್ಕೆ ಸಹಕಾರಿಯಾಗುತ್ತದೆ. ಈ ನೆಲೆಯಲ್ಲಿ ತಾನು ಆಯ್ದುಕೊಂಡ ಪ್ರತಿಯೊಂದು ಕ್ಷೇತ್ರದೊಂದಿಗೆ ಬೆರೆತು ದುಡಿಮೆ ಮಾಡಿದ ಕೀರ್ತಿ ಶ್ರೀಯುತ ಎಂ.ಜಿಯವರಿಗೆ ಸಲ್ಲುತ್ತದೆ. ತಾನು ಅಧ್ಯಯನಕ್ಕೆ ಆಯ್ದುಕೊಂಡ ಜಾನಪದ, ಕೃಷಿ, ನಾಟಕ, ರಂಗಭೂಮಿ, ಸಾಹಿತ್ಯ, ಸಂಸ್ಕøತಿ, ಅಧ್ಯಾಪನ, ಶೈಕ್ಷಣಿಕ ಶಿಸ್ತು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿರುವ ಇವರು, ಈ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕವಾಗಿ ವಿಶಿಷ್ಟವಾದ ಅನುಭವವನ್ನು ಪಡೆದುಕೊಂಡಿದ್ದಾರೆ. ಮಣ್ಣಿನೊಂದಿಗೆ ಬೆರೆತಾಗ ಮಾತ್ರ ಮಣ್ಣಿನ ಸೊಗಡು ತಿಳಿಯುವುದು ಎನ್ನುವಂತೆ ಈ ಎಲ್ಲಾ ವಿದ್ವತ್ತ್ ಕ್ಷೇತ್ರಗಳ ಮಣ್ಣಿನ ವಾಸನೆಯನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.
ಶ್ರೀಯುತ ಎಂ.ಜಿ ಈಶ್ವರಪ್ಪನವರು ಜಾನಪದ ವಿದ್ವಾಂಸರಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದವರು. ‘ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದ ಇವರು, ಇಲ್ಲಿ ದೇಶಿ ಕೃಷಿ ಪದ್ಧತಿಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ. ಹಾಗೇಯೆ ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಹಲವಾರು ವಿಷಯಗಳ ಕುರಿತು ಅಧ್ಯಯನ ನಡೆಸಿ, ಸಾಕಷ್ಟು ಲೇಖನ ಹಾಗೂ ಕೃತಿಗಳನ್ನು ಸಾಹಿತ್ಯ ವಲಯಕ್ಕೆ ನೀಡಿದ್ದಾರೆ. ಇವರ ಜಾನಪದ ಕೃತಿಗಳಲ್ಲಿ ‘ಮ್ಯಾಸಬೇಡರು’ ಎಂಬ ಕೃತಿಯು ಇವರ ಮೊದಲ ಅಧ್ಯಯನ ಕೃತಿಯಾಗಿದೆ. ಹಾಗೆಯೇ ಬೇಸಾಯ ಪದ್ಧತಿ, ನಮ್ಮ ಬೇಸಾಯ, ಬಂಗಾರ ಕೂದಲ ಜೈರಾಣಿ, ಜಾನಪದ ಇಬ್ಬನಿಗಳು ಎಂಬ ಕೃತಿಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಜಾನಪದಕ್ಕೆ ಸಂಬಂಧಿಸಿದ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಸುಮಾರು ನಲವತ್ತಕ್ಕೂ ಹೆಚ್ಚು ಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳನ್ನು ಪ್ರಕಟಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಶ್ರೀಯುತರಿಗೆ ಜಾನಪದ ಕ್ಷೇತ್ರದಲ್ಲಿನ ವಿಶೇಷ ಕಾಳಜಿಯಿಂದಾಗಿ ಜಾನಪದ ವಿದ್ವತ್ತ್ ಲೋಕದಲ್ಲಿ ಇವರು ತಮ್ಮದೆ ಆದ ಹೆಸರು ಗಳಿಸಿದ್ದಾರೆ.
ಶ್ರೀಯುತರು ಜಾನಪದ ಕ್ಷೇತ್ರ ಮಾತ್ರವಲ್ಲದೆ, ಸಾಹಿತ್ಯ ಮತ್ತು ನಾಟಕ ವಲಯದಲ್ಲಿಯೂ ಸಾಕಷ್ಟು ಸೇವೆಯನ್ನು ಸಲ್ಲಿಸುವ ಮೂಲಕ ಹೆಸರು ಗಳಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ನಾಟಕ ಕ್ಷೇತ್ರದಲ್ಲಿ ವಿಶೇಷವಾದ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದ ಇವರು, ಕನ್ನಡ ಸಾಹಿತ್ಯದಲ್ಲಿ ಪ್ರಕಟಗೊಂಡ ಸಾಕಷ್ಟು ನಾಟಕಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಹಾಗೆಯೇ ನಾಟಕ ಕಲಾವಿದರಾಗಿಯೂ ಬಣ್ಣದ ಬದುಕಿನೊಳಗೆ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ. 1979 ರಲ್ಲಿ ಕೇರಳದ ತ್ರಿಚೂರಿನಲ್ಲಿ ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ಸ್ಕೂಲ್ ಆಫ್ ಡ್ರಾಮಾದ ವತಿಯಿಂದ ನಡೆಸಿದ ರಾಷ್ಟ್ರಮಟ್ಟದ ರಂಗಭೂಮಿ, ರಂಗನಟನೆ, ರಂಗ ನಿರ್ದೇಶನ ಕುರಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ನಾಟಕದ ಕುರಿತು ಅನುಭವವನ್ನು ಪಡೆದುಕೊಂಡಿರುತ್ತಾರೆ. ಹಾಗೆಯೇ 1983 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ನೀಡಿದ ಧನಸಹಾಯ ಪಡೆದು ರಂಗದಿಗ್ಗಜರಾದ ಶ್ರೀ ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶದ ಭೂಪಾಲ್ ಮತ್ತು ದೇಹಲಿಯಲ್ಲಿ ರಂಗಭೂಮಿ ಕುರಿತು ಅಧ್ಯಯನ ಕೈಗೊಂಡಿರುತ್ತಾರೆ. ಇಷ್ಟೇ ಅಲ್ಲದೆ, 1979 ರಲ್ಲಿ ಹೆಗ್ಗೋಡಿನಲ್ಲಿ ನಡೆದ ‘ಚಲನಚಿತ್ರ ಸಹೃದಯ ಶಿಬಿರ’ ಹಾಗೂ 1983ರಲ್ಲಿ ನಾಟಕ ಅಕಾಡೆಮಿ ಕೊಂಡಾಜಿಯಲ್ಲಿ ನಡೆಸಿದ ನಾಟಕ ರಚನಾ ಶಿಬಿರದಲ್ಲಿ ಪಾಲ್ಗೊಂಡು ನಾಟಕ ಮತ್ತು ರಂಗಭೂಮಿ ಕ್ಷೇತ್ರದ ಬಗೆಗೆ ವಿದ್ವತ್ತನ್ನು ಗಳಿಸಿರುತ್ತಾರೆ. ನಾವು ಈ ಹಿಂದೆ ಗುರುತಿಸಿದಂತೆ ಶ್ರೀಯುತ ಎಂ.ಜಿಯವರು ಕೇವಲ ಅಧ್ಯಯನಕಾರರಾಗಿ ಗುರುತಿಸಿಕೊಂಡವರಲ್ಲ. ತಾವು ಅಧ್ಯಯನ ಮಾಡಿದ ಕ್ಷೇತ್ರದೊಳಗೆ ಬೆರೆತು ಬಂದವರು. ಇದಕ್ಕೆ ನಿದರ್ಶನ ಎನ್ನುವಂತೆ ನಾಟಕ ಹಾಗೂ ರಂಗಭೂಮಿಯ ಅಧ್ಯಯನ ಜೊತೆಯಲ್ಲಿ ರಂಗನಟರಾಗಿಯೂ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.
ದಾವಣಗೆರೆಯ ಪ್ರತಿಷ್ಠಿತ ಸಾಹಿತ್ಯಕ ಮತ್ತು ಸಾಂಸ್ಕøತಿಕ ಸಂಸ್ಥೆಯಾದ ‘ಪ್ರತಿಮಾಸಭಾ’ದ ರಂಗಶಿಬಿರದಲ್ಲಿ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡು, ಮೆರವಣಿಗೆ, ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತ ಕಬೀರ, ಸೆಜುವಾನಿನ ಸಾಧ್ವಿ, ಕೊಡೆಗಳು ಹಾಗೂ ಮುಂತಾದ ನಾಟಕಗಳಲ್ಲಿ ತಮ್ಮ ನಟನೆಯನ್ನು ಪ್ರದರ್ಶಿಸಿರುತ್ತಾರೆ. ಹಾಗೆಯೇ ಜಾತ್ರೆ, ಸಾಯೋ ಆಟ, ಅಪ್ಪ, ಕಡೇಮನೆ ಕಡೇಗಲ್ಲಿ, ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಮಾರೀಚನ ಬಂಧುಗಳು, ಇಲಿಬೋನು, ನಾಗನ ಕತೆ ಮುಂತಾದ ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಶ್ರೀಯುತರು ನಾಟಕ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಮತ್ತು ನಿಸ್ವಾರ್ಥ ಸೇವೆಗೆ ಹಲವಾರು ಪುರಸ್ಕಾರಗಳು ಲಭಿಸಿವೆ. ಇವರ ‘ನಾಗನ ಕತೆ’ ನಾಟಕಕ್ಕೆ ಸಾಹಿತ್ಯ ಪರಿಷತ್ತು ನಡೆಸಿದ ಅಖಿಲ ಕರ್ನಾಟಕ ಮಕ್ಕಳ ಸಮ್ಮೇಳನದಲ್ಲಿ ಪ್ರಥಮ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ನಾಟಕ ಮತ್ತು ರಂಗಭೂಮಿ ಇವರ ಅಧ್ಯಯನ ಕ್ಷೇತ್ರ ಮಾತ್ರವಾಗಿರದೆ, ಹವ್ಯಾಸ ಮತ್ತು ಅಭಿರುಚಿಯ ತಾಣವಾಗಿದೆ. ನಾಟಕ ಮತ್ತು ರಂಗಭೂಮಿಯಲ್ಲಿನ ಇವರ ವಿಶೇಷವಾದ ಕಾಳಜಿ ಹಾಗೂ ಶ್ರದ್ಧೆಯ ಫಲವಾಗಿ ಹಲವಾರು ಜಾನಪದ ವಸ್ತುಗಳನ್ನು ಕೇಂದ್ರವಾಗಿಟ್ಟುಕೊಂಡು ನಾಟಕ ರಚನೆಯಂತಹ ಕಾರ್ಯಕ್ಕೆ ಮುಂದಾಗಿ ಯಶಸ್ವಿಯನ್ನು ಪಡೆದುಕೊಂಡಿದ್ದಾರೆ. ಇದರ ಫಲವಾಗಿ ಹಲವಾರು ಜಾನಪದ ಕಲೆಗಳನ್ನು ರಂಗ ಪ್ರಯೋಗ ನಡೆಸುವ ಮೂಲಕವಾಗಿ ಜಾನಪದವನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ನಾಟಕ ಮತ್ತು ರಂಗಭೂಮಿಯಲ್ಲಿನ ವಿದ್ವತ್ತಿನಿಂದಾಗಿ ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರರಂತಹ ಹಲವಾರು ಪ್ರಸಿದ್ಧ ನಾಟಕಕಾರರೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿರುತ್ತಾರೆ.
ಶ್ರೀಯುತ ಎಂ.ಜಿ ಈಶ್ವರಪ್ಪನವರು ಬಾಲ್ಯದ ದಿನಗಳಿಂದಲೂ ಜಾನಪದ ಪರಿಸರದೊಳಗೆ ಬೆಳೆದುಬಂದವರು. ಹೀಗಾಗಿ ಜಾನಪದ ಅನ್ನೊದು ಇವರಿಗೆ ತನ್ನತನದ ಸೊಗಡು. ಇದು ತನ್ನತನ ಮಾತ್ರವಲ್ಲದೆ, ತಾಯ್ತನದ ಸೊಗಡು ಕೂಡ ಹೌದು. ಇಂತಹ ತಾಯ್ತನದ ಸೊಗಡನ್ನು ಮೈಗೂಡಿಕೊಂಡ ಇವರು, ಈ ಜಾನಪದ ಸೊಗಡಿನ ಮೂಲಕವೇ ಮೌಲ್ಯಯುತವಾದ ಬದುಕಿಗೆ ಅಗತ್ಯವಾದ, ಜೀವಪರವಾದ ಆಶಯಗಳನ್ನು ಎತ್ತಿಹಿಡಿಯುವ ನೆಲೆಯಲ್ಲಿ ನಾಲ್ಕು ಸಿದ್ಧಾಂತಗಳನ್ನು ಕಂಡುಕೊಂಡಿದ್ದಾರೆ. ಅವುಗಳೆಂದರೆ, ಒಂದು, ಕೈ ಕೆಸರಾದರೆ ಬಾಯಿ ಮೊಸರು. ಎರಡು, ತುಂಬಿದಕೊಡ ತುಳುಕುವುದಿಲ್ಲ. ಮೂರು, ಹಾಸಿಗೆ ಇದ್ದಷ್ಟು ಕಾಲುಚಾಚು. ನಾಲ್ಕು, ತಾಳಿದವನು ಬಾಳಿಯಾನು. ಇವು ಶ್ರೀಯುತರು ತಮ್ಮ ಜನಪದ ಬದುಕಿನ ತಾಯ್ತನದ ಸೊಗಡಿನಲ್ಲಿ ಕಂಡುಕೊಂಡ ಪ್ರಮುಖವಾದ ಸಿದ್ಧಾಂತ. ಈ ಸಿದ್ಧಾಂತಗಳು ಅತ್ಯಂತ ಸರಳವಾಗಿದ್ದು, ಸರಳವಾದ ಬದುಕಿಗೆ ದಾರಿದೀಪದಂತಿವೆ. ನಮ್ಮ ನೆಲದಲ್ಲಿ ಜೀವಪರ ಕಾಳಜಿಯನ್ನು ಮೆರೆದ ಬುದ್ಧ, ಬಸವ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರಂತಹ ಮಹಾಶಯರು ವಿವಿಧ ರೂಪದಲ್ಲಿ ಸಾರಿದ್ದು ಇದೇ ಆಶಯಗಳನ್ನು. ಇವರೆಲ್ಲರ ಸಾರವನ್ನು ಶ್ರೀಯುತ ಎಂ.ಜಿಯವರು ತಮ್ಮ ಸುತ್ತಮುತ್ತಲಿನ ಜನಪದ ಬದುಕಿನೊಳಗೆ ಈ ಜೀವಪರವಾದ ಆಶಯಗಳನ್ನು ಕಂಡುಕೊಂಡಿದ್ದಾರೆ. ಇದು ಇವರ ಜನಪದೀಯ ಸಿದ್ಧಾಂತ. ಇದು ಅನ್ಯ ಪರಿಸರ, ಅನ್ಯ ಸಂಸ್ಕøತಿಯಿಂದ ಎರವಲು ಪಡೆದಿರುವುದಲ್ಲ. ತಮ್ಮ ನಿತ್ಯದ ಜನಪದ ಬದುಕಿನೊಳಗೆ ಕಂಡುಕೊಂಡ ನೆಲದನಿಯಾಗಿದೆ. ಈ ನೆಲದನಿಯೇ ನಮ್ಮ ಜನಪದ ಬದುಕಿನ ಸಾರ.
ಶ್ರೀಯುತರು ಜಾನಪದ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸುವ ಮೂಲಕವಾಗಿ ತಮ್ಮ ನೆಲದ ಸೊಗಡನ್ನು ಅರಿತವರು. ಈ ಅಧ್ಯಯನದ ಮೂಲಕವಾಗಿ ತಮ್ಮ ನೆಲದ ದನಿಯನ್ನು, ತಮ್ಮ ನೆಲದ ಸಾರವನ್ನು ಅರಿತವರು. ತಮ್ಮ ಈ ಅಧ್ಯಯನದ ಮೂಲಕ ತಾವು ಕಂಡುಕೊಂಡ ಸತ್ಯಗಳನ್ನು ವೈಜ್ಞಾನಿಕ ನೆಲೆಯಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಿರುತ್ತಾರೆ.
ಜಾನಪದ ಎಂದರೆ ಅವೈಜ್ಞಾನಿಕ, ಮೌಢ್ಯತೆಯಿಂದ ಕೂಡಿದ್ದು ಎಂದು ಬಿಂಬಿಸಲು ಹೊರಟಿರುವ ವೈಜ್ಞಾನಿಕ ಜಗತ್ತಿಗೆ ಜಾನಪದದಲ್ಲಿ ಅಂತರ್ಗತವಾಗಿರುವ ಮೌಲ್ಯಯುತವಾದ ಹಾಗೂ ವೈಚಾರಿಕ ಅಂಶಗಳನ್ನು ಗುರುತಿಸಿದ್ದಾರೆ. ಹಾಗೆಯೇ ಜಾನಪದ ಬದುಕು ಹಾಗೂ ಸಂಸ್ಕøತಿಯಲ್ಲಿ ಅಂತರ್ಗತವಾಗಿರುವ ಅವೈಜ್ಞಾನಿಕವಾದ ಮತ್ತು ಸಮಾಜದ ಪ್ರಗತಿಗೆ ಮಾರಕವಾದ ಅಂಶಗಳನ್ನು ಸಹ ಗುರುತಿಸುವ ಮೂಲಕ ಜಾನಪದವನ್ನು ಪರಿಷ್ಕರಣೆ ಮಾಡುವತ್ತ ತಮ್ಮ ವಿದ್ವತ್ತನ್ನು ಪ್ರದರ್ಶಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ನಮ್ಮ ಜನಪದ ಬದುಕಿನೊಳಗೆ ಅಂತರ್ಗತವಾಗಿರುವ ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಪ್ರಾಣಿ ಬಲಿಯಂತಹ ಮಾರಕ ಅಂಶಗಳನ್ನು ವಿರೋಧಿಸುವ ಮೂಲಕ, ನಮ್ಮ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವಂತಹ ಕಲೆ ಹಾಗೂ ಸಂಸ್ಕøತಿಯನ್ನು ಪೋಷಿಸುವ ಮೂಲಕವಾಗಿ ಜಾನಪದದ ಉಳಿವಿಗಾಗಿ ತಮ್ಮದೆ ಆದ ನಿಲುವುಗಳನ್ನು ಎತ್ತಿಹಿಡಿದಿದ್ದಾರೆ. ಹಾಗೆಯೇ ತಮ್ಮಲ್ಲಿ ಅಂತರ್ಗತವಾದ ವಿದ್ವತ್ತಿನಿಂದಾಗಿ ಹಲವಾರು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿರುತ್ತಾರೆ.
ಶ್ರೀಯುತರು ಜಾನಪದ, ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯದಲ್ಲಿ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುತ್ತಾರೆ. ಇದರ ಫಲವಾಗಿ 2011 ರಲ್ಲಿ ಶಿವಮೊಗ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, 2014 ರಲ್ಲಿ ದಾವಣಗೆರೆ ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಹಾಗೆಯೇ 2017 ರಲ್ಲಿ ದಾವಣಗೆರೆ ತಾಲ್ಲೂಕು ಶ್ಯಾಗಲೆ ಗ್ರಾಮದಲ್ಲಿ ನಡೆದ ‘ಕುವೆಂಪು ನುಡಿಜಾತ್ರೆ’ಯ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಶ್ರೀಯುತರ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ. ಅವುಗಳಲ್ಲಿ ಗುಂಡ್ಮಿ ಜಾನಪದ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟ ಪ್ರಶಸ್ತಿ, ಕರ್ನಾಟಕ ಅಕಾಡೆಮಿ ಗೌರವ ಫೆಲೋಶಿಫ್, ಕರ್ನಾಟಕ ಜಾನಪದ ಅಕಾಡೆಮಿಯ ತಜ್ಞ ಪ್ರಶಸ್ತಿ, ರಂಗಸಂಸ್ಥಾನ ಜಾನಪದ ಪ್ರಶಸ್ತಿ, ಮಹಾಲಿಂಗ ರಂಗ ಪ್ರಶಸ್ತಿಗಳು ಪ್ರಮುಖವಾಗಿವೆ. ಮಹಾತ್ಮ ಗಾಂದೀಜಿಯವರ ತತ್ವಾದರ್ಶಗಳು, ತಮ್ಮ ದೊಡ್ಡಪ್ಪನವರಾದ ಶ್ರೀ ಮಲ್ಲಪ್ಪನವರಿಂದ ಕಲಿತ ಜನಪದೀಯ ಜ್ಞಾನವನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಶ್ರೀಯುತ ಡಾ.ಎಂ.ಜಿ ಈಶ್ವರಪ್ಪನವರು ಸಾಹಿತ್ಯ, ಸಾಂಸ್ಕøತಿಕ, ಬೋಧನೆ ಹಾಗೂ ಆಡಳಿತಾತ್ಮಕ ವಲಯದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಸರಳ ಹಾಗೂ ಸಜ್ಜನಿಕೆಗೆ ಹೆಸರಾದ ಶ್ರೀಯುತರಿಂದ ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯವು ಮತ್ತಷ್ಟು ಶ್ರೀಮಂತಿಕೆಯನ್ನು ಪಡೆಯುಂತಾಗಲಿ ಎಂಬುದು ನಮ್ಮ ಹಾರೈಕೆ.

ದಿನದ ಸುದ್ದಿ
ಲೇಖಕಿ ಬಾನು ಮುಸ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ; ಗಣ್ಯರ ಅಭಿನಂದನೆ

ಸುದ್ದಿದಿನಡೆಸ್ಕ್:ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.
ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ.
ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ.
ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಎದೆಯ ಹಣತೆ’ಯನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ
ಹಾಗೇ ನಾಡಿನ ಸಾಹಿತ್ಯ ಪ್ರೇಮಿಗಳು, ಹೋರಾಟಗಾರರು ಸೇರಿದಂತೆ ಕನ್ನಡಿಗರು ಸಂಭ್ರಮಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.
ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.
ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.
ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.
ವಸ್ತು ಪ್ರದರ್ಶನ
ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.
ದೇಸೀ ಆಟಗಳು
ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.
ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ಉತ್ಸವ’-2025.
| ಡಾ.ಬಿ.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

ಅಂತರಂಗ
ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

- ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ
ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು
ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.
ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.
ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ
ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.
ಮಹಿಳಾ ದಿನಾಚರಣೆಯ ಇತಿಹಾಸ
ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:
1. 1908 – ಮಹಿಳಾ ಹಕ್ಕುಗಳ ಹೋರಾಟ:
ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.
2. 1909 – ಮೊದಲ ಮಹಿಳಾ ದಿನಾಚರಣೆ:
ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.
3. 1910 – ಅಂತಾರಾಷ್ಟ್ರೀಯ ಹೋರಾಟ:
ಡೆನ್ಮಾರ್ಕ್ನ ಕೊಪನ್ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.
4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:
ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.
5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:
1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.
6. 1975 – ವಿಶ್ವ ಮಹಿಳಾ ವರ್ಷ:
UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು
7. 2011 – 100ನೇ ವಾರ್ಷಿಕೋತ್ಸವ:
2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.
ಮಹಿಳಾ ದಿನಾಚರಣೆಯ ಉದ್ದೇಶ
ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.
ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ
ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.
ಮಹಿಳೆಯರು ಬದುಕಿನ ಉತ್ಸಾಹ
ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಾಧನೆಗಳ ಬೆಳಕು
1. ಶಿಕ್ಷಣ ಮತ್ತು ಸಶಕ್ತೀಕರಣ:
ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
2. ಉದ್ಯೋಗ ಹಾಗೂ ಉದ್ಯಮಶೀಲತೆ:
ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
3. ಕ್ರೀಡೆ ಮತ್ತು ಸಾಹಸ:
ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.
4. ಸಮಾಜಸೇವೆ ಮತ್ತು ಪ್ರಭಾವ:
ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.
ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ
ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.
ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್
ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.
“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಗ್ಯಾರಂಟಿಗೆ 90 ಸಾವಿರ ಕೋಟಿ ರೂ ಖರ್ಚು, ಗ್ಯಾರಂಟಿಯಿ0ದ ಸರ್ಕಾರ ದಿವಾಳಿಯಾಗಿಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ದಿನದ ಸುದ್ದಿ6 days ago
ನುಡಿದಂತೆ ನಡೆದ ಸರ್ಕಾರಕ್ಕೆ 2 ವರ್ಷ | ಮೇ 20 ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ; 1.03 ಲಕ್ಷ ಹಕ್ಕುಪತ್ರ ವಿತರಣೆ : ಸಿಎಂ ಸಿದ್ದರಾಮಯ್ಯ
-
ಅಂಕಣ4 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ7 days ago
ಚನ್ನಗಿರಿ | ರೈತರಿಗೆ, ವ್ಯಾಪಾರಿಗಳಿಗೆ ರಿಯಾಯಿತಿ ದರದಲ್ಲಿ ಗೋದಾಮುಗಳ ಬಾಡಿಗೆ
-
ದಿನದ ಸುದ್ದಿ3 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ