ನೆಲದನಿ
ಯಕ್ಷಗಾನ ಕಲಾವಿದ ಮಹಾಬಲ ನಾಯ್ಕ ಬೇಳಂಜೆ ಬದುಕಿನ ಸಂಕಥನ
ಭೂಮಿಯ ಮೇಲೆ ಮಾನವನ ಉಗಮದೊಂದಿಗೆ ಕಲೆಗಳು ಕೂಡ ಮಾನವನ ಬದುಕಿನ ಭಾಗವಾಗಿ ಬೆಳೆದುಕೊಂಡು ಬಂದಿವೆ. ಹೀಗಾಗಿ ಮಾನವ ಮತ್ತು ಕಲೆಗೂ ಭಾವನಾತ್ಮಕವಾದ ನಂಟು ಬೆಳೆದುಬಂದಿದೆ. ಮಾನವನ ನಿರಂತರವಾದ ವಿಕಾಸದಲ್ಲಿ ಈ ಜನಪದ ಕಲೆಗಳು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ತಳ ಸಮುದಾಯಗಳಲ್ಲಿ. ಹೀಗಾಗಿ ಭಾರತದ ಬಹುತೇಕ ಜನಪದ ಕಲೆಗಳು ತಳ ಸಮುದಾಯಗಳಿಂದಲೆ ಜೀವಂತಿಕೆಯನ್ನು ಪಡೆದುಕೊಂಡಿವೆ. ಈಗಲೂ ಈ ಕಲೆಗಳು ತನ್ನ ಜೀವಂತಿಕೆಯನ್ನು ಪಡೆದುಕೊಂಡಿರುವುದು ಬಡತನದ ಬದುಕಿನಲ್ಲಿಯೇ. ಹೀಗಾಗಿ ಬಡತನ ಹಾಗೂ ಜನಪದ ಕಲೆಗಳಿಗೆ ನಿಕಟವಾದ ಸಂಬಂಧವೊಂದು ಬಿಡದ ನಂಟಾಗಿ ಬೆಳೆದುಕೊಂಡು ಬಂದಿದೆ. ಇಂತಹ ಜಾನಪದ ಕಲೆಗಳಲ್ಲಿ ಯಕ್ಷಗಾನವು ಒಂದು ಪ್ರಮುಖ ಕಲೆಯಾಗಿ ಬೆಳೆದುಕೊಂಡು ಬಂದಿದೆ. ಯಕ್ಷಗಾನವು ಮೂಲತಃ ಶೂದ್ರಾತಿ ಶೂದ್ರರ ಕಲೆಯಾಗಿ ಬೆಳೆದು ಬಂದಿದೆ. ಇಂತಹ ಸಾಮಾಜಿಕ ಸಮಾನತೆಯಿಂದ ವಂಚಿತವಾದ ಸಮುದಾಯವೊಂದು ಪಾಲಿಸಿ, ಪೋಷಿಸಿಕೊಂಡು ಬಂದ ಜನಪದ ಕಲೆಯೊಂದು ಇಂದು ಜಾಗತಿಕ ಮಟ್ಟದಲ್ಲಿ ತನ್ನ ಅನನ್ಯತೆಯನ್ನು, ಕೀರ್ತಿಯನ್ನು ಗಳಿಸಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ. ಇಂತಹ ಕಲೆಯ ಶ್ರೀಮಂತಿಕೆ ಹಲವಾರು ತಳಸಮುದಾಯದ ಕಲಾವಿದರು ತಮ್ಮ ಶ್ರಮವನ್ನು ಧಾರೆಯೆರೆಯುತ್ತಿದ್ದಾರೆ. ಇಂತಹ ತಳಸಮುದಾಯದ ಬಡಗುತಿಟ್ಟು ಯಕ್ಷಗಾನ ಕಲಾವಿದರಲ್ಲಿ ಬೇಳಂಜೆ ಮಹಾಬಲ ನಾಯ್ಕರು ಒಬ್ಬರಾಗಿದ್ದಾರೆ.
ಶ್ರೀಯುತ ಮಹಾಬಲ ನಾಯ್ಕರು ಹಿರಿಯ ಮದ್ದಳೆ ಕಲಾವಿದರಾದ ಶ್ರೀ ಬೇಳಂಜೆ ತಿಮ್ಮಪ್ಪ ನಾಯ್ಕ ಹಾಗೂ ಶ್ರೀಮತಿ ವೇದಾವತಿ ಅವರ ಸುಪುತ್ರರಾಗಿ 13 ಜುಲೈ 1958 ರಲ್ಲಿ ಕಾರ್ಕಳ ತಾಲ್ಲೂಕಿನ ಬೇಳಂಜೆ ಎಂಬಲ್ಲಿ ಜನಿಸಿದರು. ಶ್ರೀಯುತ ಮಹಾಬಲ ನಾಯ್ಕರು ತಮ್ಮ ವಿದ್ಯಾಭ್ಯಾಸವನ್ನು ಆರನೇ ತರಗತಿಗೆ ಮೊಟಕುಗೊಳಿಸಿ, ತಮ್ಮ ಹನ್ನೆರಡನೇ ವಯಸ್ಸಿಗೆ ಬಣ್ಣದ ಬದುಕಿನೆಡೆಗೆ ಸಾಗದರು. ಮಹಾಬಲ ನಾಯ್ಕರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಂತಹ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಜಾತಿಯಲ್ಲಿ ‘ಮರಾಠಿ’ಗೆ ಸೇರಿದ್ದು, ತಳ ಸಮುದಾಯದಿಂದ ಬಂದವರಾಗಿದ್ದಾರೆ. ತಳ ಸಮುದಾಯಗಳಿಗೂ ಮತ್ತು ಜನಪದ ಕಲೆಗಳಿಗೆ ಒಂದು ಅನ್ಯೋನ್ಯವಾದ ಸಂಬಂಧವು ಚರಿತ್ರೆಯುದ್ಧಕ್ಕೂ ಬೆಳೆದುಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದಿಗೂ ತಳ ಸಮುದಾಯಗಳು ಕಲೆಯ ಉಳಿವಿಗಾಗಿ ಅವಿರತವಾದ ಶ್ರಮವನ್ನು ವ್ಯಕ್ತಪಡಿಸುವ ಮೂಲಕವಾಗಿ ಹಲವಾರು ಕಲೆಗಳ ಶ್ರೀಮಂತಿಕೆ ಕಾರಣೀಭೂತರಾಗಿದ್ದಾರೆ. ಇಲ್ಲಿ ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ಕಲೆಯೊಂದಿಗೆ ಒಡನಾಟವನ್ನು ಬೆಳೆಸಿಕೊಂಡು ಬಂದಿರುವುದು ಕೂಡ ಇದೆ ಹಾದಿಯಲ್ಲಿ. ಶೂದ್ರಾತಿ ಶೂದ್ರರ ಕಲೆಯೆಂದೆ ಗುರುತಿಸಿಕೊಂಡು ಬಂದಿರುವ ಯಕ್ಷಗಾನವು ಇಂದು ತನ್ನ ಅನನ್ಯತೆಯನ್ನು ಕಾಯ್ದುಕೊಂಡಿರುವುದು ತಳ ಸಮುದಾಯಗಳ ಮೂಲಕವಾಗಿಯೇ. ಈ ಕಲೆಯು ಇಂದಿನ ಜಾಗತಿಕ ಕ್ಷೇತ್ರಕ್ಕೆ ತನ್ನನ್ನು ತೆರೆದುಕೊಂಡು ದೇಶ, ವಿದೇಶಗಳಲ್ಲಿ ತನ್ನ ಅಸ್ಮಿತೆಯನ್ನು ಮೆರೆದಿರುವುದಕ್ಕೆ ಹಾಗೂ ರಾರಾಜಿಸುವುದಕ್ಕೆ ಈ ತಳ ಸಮುದಾಯಗಳ ಶ್ರಮವು ಮಹತ್ತರವಾದುದಾಗಿದೆ.
ಶ್ರೀಯುತ ಮಹಾಬಲ ನಾಯ್ಕರು ಈ ಕಲೆಯನ್ನು ಒಂದು ಹವ್ಯಾಸವಾಗಿ ಬಾಲ್ಯದ ದಿನಮಾನಗಳಲ್ಲಿ ಮೈಗೂಡಿಸಿಕೊಂಡರು. ಇದಕ್ಕೆ ಶ್ರೀಯುತ ಮಹಾಬಲ ನಾಯ್ಕ ಅವರ ತಂದೆಯವರಾದ ಬೇಳಂಜೆ ತಿಮ್ಮಪ್ಪ ನಾಯ್ಕರು ಪ್ರಮುಖ ಕಾರಣಕರ್ತರಾಗಿದ್ದಾರೆ. ಬೇಳಂಜೆ ತಿಮ್ಮಪ್ಪ ನಾಯ್ಕರು ಹೆಸರಾಂತ ಮದ್ದಳೆಗಾರರಾಗಿ ಕರಾವಳಿ ಭಾಗದಲ್ಲಿ ಹೆಸರು ಮಾಡಿದವರು. ಇವರು ಯಕ್ಷಗಾನದ ದಿಗ್ಗಜರೆಂದು ಗುರುತಿಸಿಕೊಂಡಿರುವ ‘ಕಾಳಿಂಗ ನಾವಡ’ ಅವರ ಗುರುಗಳಾಗಿಯೂ ತಮ್ಮ ಸೇವೆಯನ್ನು ಮುನ್ನಡೆಸಿಕೊಂಡು ಬಂದವರು. ಶ್ರೀಯುತ ತಿಮ್ಮಪ್ಪ ನಾಯ್ಕರು 1978 ರಲ್ಲಿಯೇ ಕಾಳಿಂಗ ನಾವಡರ ಸಹಭಾಗಿತ್ವದಲ್ಲಿ ‘ಹಂಗರಕಟ್ಟೆ ಕಲಾ ಮೇಳ’ವನ್ನು ಆರಂಭಿಸುವ ಮೂಲಕವಾಗಿ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದವರು. ಆ ಮೂಲಕವಾಗಿ ಯಕ್ಷಗಾನ ರಂಗಕ್ಷೇತ್ರದಲ್ಲಿ ತಿಮ್ಮಪ್ಪ ನಾಯ್ಕ ಅವರ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದ ಕಾರಣ ತಂದೆಯವರ ಹಾದಿಯಲ್ಲಿಯೇ ಮುನ್ನಡೆದ ಇವರಿಗೆ ಈ ಕಲೆಯು ಬಂದು ಹವ್ಯಾಸವಾಗಿ ನಂತರದಲ್ಲಿ ಪ್ರವೃತ್ತಿಯಾಗಿ ಬೆಳೆದು ಬಂದಿದೆ.
ಪ್ರೇರಣೆ ಮತ್ತು ಪ್ರಭಾವ
ಶ್ರೀಯುತ ಮಹಾಬಲ ನಾಯ್ಕ ಅವರ ಯಕ್ಷಗಾನ ರಂಗಕಲೆಗೆ ಪ್ರಮುಖವಾಗಿ ಪ್ರೇರಣೆಯಾದವರು ಇವರ ತಂದೆಯವರಾದ ಬೇಳಂಜೆ ತಿಮ್ಮಪ್ಪ ನಾಯ್ಕರು. ಬೇಳಂಜೆ ತಿಮ್ಮಪ್ಪ ನಾಯ್ಕರು ಹೆಸರಾಂತ ಮದ್ದಳೆಗಾರರಾಗಿ ಕರಾವಳಿ ಭಾಗದಲ್ಲಿ ತನ್ನದೆ ಆದ ಛಾಪು ಮೂಡಿಸಿದವರು. ಇವರು ಯಕ್ಷಗಾನದ ದಿಗ್ಗಜರೆಂದು ಗುರುತಿಸಿಕೊಂಡಿರುವ ‘ಕಾಳಿಂಗ ನಾವಡ’ ಅವರ ಗುರುಗಳಾಗಿಯೂ ತಮ್ಮ ಸೇವೆಯನ್ನು ಮುನ್ನಡೆಸಿಕೊಂಡು ಬಂದವರು. ಶ್ರೀಯುತ ತಿಮ್ಮಪ್ಪ ನಾಯ್ಕರು 1978 ರಲ್ಲಿಯೇ ಕಾಳಿಂಗ ನಾವಡರ ಸಹಭಾಗಿತ್ವದಲ್ಲಿ ‘ಹಂಗರಕಟ್ಟೆ ಕಲಾ ಮೇಳ’ವನ್ನು ಆರಂಭಿಸುವ ಮೂಲಕವಾಗಿ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ತಿಮ್ಮಪ್ಪ ನಾಯ್ಕರು ತಮ್ಮ ಕಡು ಬಡತನದ ನಡುವೆಯೇ ಯಕ್ಷಗಾನ ರಂಗಕಲೆಯ ಮೇಲಿನ ಕಾಳಜಿ ಹಾಗೂ ಶ್ರದ್ಧೆಯಿಂದಾಗಿ ತಮ್ಮದೇ ಆದ ಪ್ರತ್ಯೇಕ ಕಲಾಮೇಳವನ್ನು ತೆರೆಯುವ ಮುಖಾಂತರ ವೃತ್ತಿ ರಂಗಭೂಮಿಯನ್ನು ಆರಂಭಿಸಿದರು. ಆ ಮೂಲಕವಾಗಿ ಯಕ್ಷಗಾನ ರಂಗಕ್ಷೇತ್ರದಲ್ಲಿ ತಿಮ್ಮಪ್ಪ ನಾಯ್ಕ ಅವರ ಹೆಸರು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದ ಕಾರಣ ತಂದೆಯವರ ಹಾದಿಯಲ್ಲಿಯೇ ಮುನ್ನಡೆದ ಇವರಿಗೆ ಈ ಕಲೆಯು ಬಂದು ಹವ್ಯಾಸವಾಗಿ ನಂತರದಲ್ಲಿ ಪ್ರವೃತ್ತಿಯಾಗಿ ಬೆಳೆದು ಬಂದಿದ್ದು ಮಾತ್ರವಲ್ಲದೆ, ಇದೊಂದು ವೃತ್ತಿಯಾಗಿಯೂ ಮುಂದುವರೆಯಿತು.
ಶ್ರೀಯುತ ಮಹಾಬಲ ನಾಯ್ಕರು ಈ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸಿದ್ಧಗೊಳ್ಳಲು ಹಲವಾರು ಗುರು ಮಹಾಶಯರು ಕಾರಣೀಭೂತರಾಗಿದ್ದಾರೆ. ಇವರ ತಂದೆಯವರಾದ ತಿಮ್ಮಪ್ಪ ನಾಯ್ಕರಿಂದ ಯಕ್ಷಗಾನ ಕ್ಷೇತ್ರದ ಬಗೆಗೆ ಆಸಕ್ತಿಯನ್ನು ರೂಡಿಸಿಕೊಂಡರು ಸಹ, ಇವರು ತಂದೆಯಂತೆ ಸಂಗೀತ ಪ್ರಕಾರವಾದ ಮದ್ದಳೆ ಕ್ಷೇತ್ರವನ್ನು ತಮ್ಮ ವೃತ್ತಿಯಾಗಿ ಮತ್ತು ಹವ್ಯಾಸವಾಗಿ ಮುಂದುವರೆಸಲಿಲ್ಲ. ಇವರಿಗೆ ಹೆಚ್ಚು ಆಕರ್ಷಣಿಯವಾದ ಪ್ರಕಾರವೆಂದರೆ ಅದು ವೇಷಗಾರಿಕೆ. ಆದ್ದರಿಂದ ಶ್ರೀಯುತ ಮಹಾಬಲ ನಾಯ್ಕರಿಗೆ ಪೌರಾಣಿಕವಾದ ಹಲವಾರು ಪಾತ್ರಗಳಲ್ಲಿ ವಿಶೇಷವಾದ ಆಸಕ್ತಿಯಿತ್ತು. ಆದ ಕಾರಣ ಇವರು ಸಂಗೀತ ಪ್ರಕಾರದಿಂದ ದೂರ ಸರಿದು ಪಾತ್ರಧಾರಿಯಾಗಿ ತಮ್ಮನ್ನು ಗುರುತಿಸಿಕೊಂಡರು. ಈ ಪಾತ್ರಧಾರಿಕೆಯಲ್ಲಿ ಪರಿಣಿತಿಯನ್ನು ಗಳಿಸಲು ಹಲವಾರು ಗುರುಗಳ ಮಾರ್ಗದರ್ಶನವನ್ನು ಪಡೆದಿದ್ದಾರೆ.
ಶ್ರೀಯುತ ಮಹಾಬಲ ನಾಯ್ಕರು ತಮ್ಮ ಹನ್ನೆರಡನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ತನ್ನನ್ನು ತೆರೆದುಕೊಳ್ಳಲು ಮುಂದಾದಾಗ ಈ ಕಲೆಯನ್ನು ಮೈಗೂಡಿಸಿಕೊಳ್ಳಲು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದ ತರುವಾಯದಲ್ಲಿ ದಶಾವತಾರಿ ಗರು ವೀರಭದ್ರನಾಯಕ್ ಇವರ ಮಾರ್ಗದರ್ಶನದಲ್ಲಿ ಕಲಾ ಬದುಕಿಗೆ ಪಾದಾರ್ಪಣೆ ಮಾಡಿದರು. ಹೀಗೆ ಆರಂಭವಾದ ಇವರ ಕಲಾ ದೀಕ್ಷೇಯು ನಂತರದಲ್ಲಿ ನೀಲಾವರ ರಾಮಕೃಷ್ಣಯ್ಯನವರ ಮಾರ್ಗದರ್ಶನದಲ್ಲಿ ಕಲೆಯ ಬಗೆಗಿನ ಸೂಕ್ಷ್ಮ ಸನ್ನೀವೇಶಗಳ ಕುರಿತು ತರಬೇತಿ ಪಡೆದರು. ನಂತರದಲ್ಲಿ ಹಿರಿಯಡಕ ಗೋಪಾಲರಾಯರ ಶಿಷ್ಯರಾಗಿಯೂ ಸೇವೆಯನ್ನು ಮುಂದುವರೆಸಿದ ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ರಂಗಕಲೆಯಲ್ಲಿ ಅಭೂತಪೂರ್ವವಾದ ಸಿದ್ಧಿಯನ್ನು ಮೈಗೂಡಿಸಿಕೊಂಡರು. ಈ ಎಲ್ಲಾ ಗುರು ಮಹಾಶಯರಿಂದ ಶಿಷ್ಯನಾಗಿ ಸೇವೆ ಸಲ್ಲಿಸಿ, ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ಶ್ರೀಯುತ ಮಹಾಬಲ ನಾಯ್ಕ ಅವರು ತಮ್ಮ ತಂದೆಯವರಾದ ಶ್ರೀಯುತ ತಿಮ್ಮಪ್ಪ ನಾಯ್ಕರಿಂದ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಪೂರ್ಣ ಪ್ರಮಾಣದ ಕಲಾ ಬದುಕಿಗೆ ತಮ್ಮನ್ನು ತೆರೆದುಕೊಂಡು, ಸುಮಾರು ನಲವತ್ತೇಲು ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಅನುಪಮವಾದ ಸಾಧನೆ ಮಾಡುತ್ತ ಬಂದಿದ್ದಾರೆ. ಹೀಗೆ ಹಲವಾರು ಗುರುಗಳ ಶಿಷ್ಯತ್ವದಲ್ಲಿ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ಶ್ರೀಯುತ ಮಹಾಬಲ ನಾಯ್ಕರು ಈ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಾ ಸೇವೆ ಮತ್ತು ವೃತ್ತಿ ಜೀವನ
ಶ್ರೀಯುತ ಮಹಾಬಲ ನಾಯ್ಕರು ತಮ್ಮ ಹನ್ನೆರಡನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ತನ್ನನ್ನು ತೆರೆದುಕೊಳ್ಳಲು ಮುಂದಾದಾಗ ಈ ಕಲೆಯನ್ನು ಮೈಗೂಡಿಸಿಕೊಳ್ಳಲು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದರು. ಇಲ್ಲಿ ದಶಾವತಾರಿ ಗರು ವೀರಭದ್ರನಾಯಕ್ ಇವರ ಮಾರ್ಗದರ್ಶನದಲ್ಲಿ ಕಲಾ ಬದುಕಿಗೆ ಪಾದಾರ್ಪಣೆ ಮಾಡಿ, ನೀಲಾವರ ರಾಮಕೃಷ್ಣಯ್ಯನವರ ಮಾರ್ಗದರ್ಶನದಲ್ಲಿ ಕಲೆಯ ಬಗೆಗಿನ ಸೂಕ್ಷ್ಮ ಸನ್ನೀವೇಶಗಳ ಕುರಿತು ತರಬೇತಿ ಪಡೆದರು. ನಂತರದಲ್ಲಿ ಹಿರಿಯಡಕ ಗೋಪಾಲರಾಯರ ಶಿಷ್ಯರಾಗಿಯೂ ಸೇವೆಯನ್ನು ಮುಂದುವರೆಸಿದ ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ರಂಗಕಲೆಯಲ್ಲಿ ಅಭೂತಪೂರ್ವವಾದ ಸಿದ್ಧಿಯನ್ನು ಮೈಗೂಡಿಸಿಕೊಂಡರು. ಈ ಎಲ್ಲಾ ಗುರು ಮಹಾಶಯರಿಂದ ಶಿಷ್ಯನಾಗಿ ಸೇವೆ ಸಲ್ಲಿಸಿ, ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ಶ್ರೀಯುತ ಮಹಾಬಲ ನಾಯ್ಕ ಅವರು ತಮ್ಮ ತಂದೆಯವರಾದ ಶ್ರೀಯುತ ತಿಮ್ಮಪ್ಪ ನಾಯ್ಕರಿಂದ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಪೂರ್ಣ ಪ್ರಮಾಣದ ಕಲಾ ಬದುಕಿಗೆ ತಮ್ಮನ್ನು ತೆರೆದುಕೊಂಡು, ಸುಮಾರು ನಲವತ್ತೇಲು ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಅನುಪಮವಾದ ಸಾಧನೆ ಮಾಡುತ್ತ ಬಂದಿದ್ದಾರೆ.
ಹೀಗೆ ಆರಂಭವಾದ ಶ್ರೀಯುತ ಮಹಾಬಲ ನಾಯ್ಕರ ನಿರಂತರ ಕಲಾ ಸೇವೆಯು ಹಲವಾರು ಕಲಾ ಮೇಳಗಳಲ್ಲಿ ಮುಂದುವರೆದಿದೆ. ಶ್ರೀಯುತ ಮಹಾಬಲ ನಾಯ್ಕರು ಸೇವೆಗೈದ ಕ್ಷೇತ್ರ ಹಾಗೂ ಮೇಳಗಳು ಈ ಮುಂದಿನಂತಿವೆ; ಆರಂಭದಲ್ಲಿ ಅಮೃತೇಶ್ವರಿ ಕಲಾ ಮೇಳದ ಮೂಲಕವಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಶ್ರೀಯುತ ಮಹಾಬಲ ನಾಯ್ಕರು ಹಿರಿಯಡಕ, ಪೆರ್ಡೂರು ಕಲಾ ಮೇಳದಲ್ಲಿ ಒಂದು ವರ್ಷ ಸೇವೆಯನ್ನು ಸಲ್ಲಿಸಿರುತ್ತಾರೆ. ನಂತರದಲ್ಲಿ ಮಾರಣಕಟ್ಟೆ ಕಲಾ ಮೇಳದಲ್ಲಿ ಸತತವಾಗಿ ಹತ್ತು ವರ್ಷಗಳ ಕಾಲ ಕಲಾವಿದರಾಗಿ ಬಣ್ಣದ ಲೋಕದಲ್ಲಿ ರಂಜಿಸಿರುತ್ತಾರೆ. ಹಾಗೆಯೇ ಆರಂಭಿಕ ಹಂತದಲ್ಲಿ ಬಣ್ಣದ ಲೋಕಕ್ಕೆ ಪ್ರವೇಶಿಸಿದ ಅಮೃತೇಶ್ವರಿ ಕಲಾ ಮೇಳದಲ್ಲಿ ಸುಮಾರು ಐದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುವ ಮೂಲಕವಾಗಿ ಸಾಕಷ್ಟು ವಿದ್ವತ್ತನ್ನು ಗಳಿಸಿರುತ್ತಾರೆ. ನಂತರದಲ್ಲಿ ಸೌಕೂರು ಕಲಾ ಮೇಳದಲ್ಲಿ ಎರಡು ವರ್ಷಗಳ ಕಾಲ ಕಲಾವಿದರಾಗಿ ತನ್ನ ಸೇವೆಯನ್ನು ಸಲ್ಲಿಸಿರುತ್ತಾರೆ. ಹಾಗೆಯೇ ಮಡಾಮಕ್ಕಿ ಕಲಾ ಮೇಳದಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಕಲಾವಿದರಾಗಿ ಬಣ್ಣದ ಲೋಕದಲ್ಲಿ ಮೆರೆದಿರುತ್ತಾರೆ. ಹೀಗೆ ಹಲವಾರು ಕಡೆಗಳಲ್ಲಿ ತಮ್ಮ ಸಾಧನೆಗೈದ ಶ್ರೀಯುತ ಮಹಾಬಲ ನಾಯ್ಕರು ಮಂದಾರ್ತಿ ಕಲಾ ಮೇಳದಲ್ಲಿ ಸುಮಾರು ಇಪ್ಪತೈದು ವರ್ಷಗಳ ಕಲಾ ಸೇವೆಯಲ್ಲಿ ಮುಂದುವರೆದಿದ್ದು, ಇಂದಿಗೂ ಇದೇ ಮಂದಾರ್ತಿ ಕಲಾ ಮೇಳದಲ್ಲಿ ಕಲಾವಿದರಾಗಿ ಪ್ರೇಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಾ ಬಂದಿದ್ದಾರೆ. ಹೀಗೆ ವಿವಿಧ ಕಲಾಮೇಳಗಳಲ್ಲಿ ಶ್ರೀಯುತ ಮಹಾಬಲ ನಾಯ್ಕರು ತಮ್ಮ ನಲವತ್ತೇಳು ವರ್ಷಗಳ ಕಾಲದ ಯಕ್ಷಕೃಷಿಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ಕ್ಷೇತ್ರದಲ್ಲಿನ ತಮ್ಮ ನಿರಂತರ ಹೋರಾಟದಲ್ಲಿ ಹಲವು ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕವಾಗಿ ಜೀವ ತುಂಬಿದ್ದಾರೆ. ಇಂತಹ ಪಾತ್ರಗಳಲ್ಲಿ ಪೌರಾಣಿಕ ಪಾತ್ರಗಳೆ ಹೆಚ್ಚಾಗಿವೆ. ಶ್ರೀಯುತ ಮಹಾಬಲ ನಾಯ್ಕರು ನಿರ್ವಹಿಸಿದ ಪ್ರಮುಖವಾದ ಪಾತ್ರಗಳೆಂದರೆ ಬಬ್ರುವಾಹನ, ಅಭಿಮನ್ಯು, ವೃಷಸೇನ, ಲವ-ಕುಶ, ಶ್ರೀಕೃಷ್ಣ, ವಿದ್ಯುನ್ಮಾಲಿ, ಆಂಜನೇಯ ಹಾಗೂ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀಯುತ ಮಹಾಬಲ ನಾಯ್ಕರು ತಮ್ಮಲ್ಲಿನ ಆಳಂಗ, ತಾರಕಸ್ವರತ್ರಾಣ ಹಾಗೂ ಚುರುಕಿನ ಪದಗತಿಗಳಿಂದ ಕಲಾಭಿಮಾನಿಗಳು, ಕಲಾ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಹೀಗೆ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕವಾಗಿ ಸುಮಾರು ಐದು ದಶಕಗಳ ಕಾಲ ನಿರಂತರವಾದ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುವ ಶ್ರೀಯುತ ಮಹಾಬಲ ನಾಯ್ಕರು ತಮ್ಮ ಅರವತ್ತು ವಯಸ್ಸಿನ ಗಡಿಯಲ್ಲಿಯೂ ತುಂಬು ಹುಮ್ಮಸ್ಸಿನಿಂದ ಕಲಾ ಸೇವೆಯಲ್ಲಿ ಮುನ್ನಡೆಯುತ್ತಿದ್ದಾರೆ.
ಗೌರವ, ಸನ್ಮಾನ ಹಾಗೂ ಪ್ರಶಸ್ತಿ
ಶ್ರೀಯುತ ಮಹಾಬಲ ನಾಯ್ಕರು ತಮ್ಮ ನಿರಂತರವಾದ ನಲವತ್ತೇಳು ವರ್ಷಗಳ ಕಲಾ ಸೇವೆಯಿಂದಾಗಿ ಈ ಕ್ಷೇತ್ರದ ಪ್ರಬುದ್ಧ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರ ಈ ಕಲಾ ಸೇವೆಯನ್ನು ಗಮನಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಹಲವಾರು ಸಂಘ ಸಂಸ್ಥೆಗಳು ಹಲವಾರು ಸನ್ಮಾನ, ಗೌರವ ಹಾಗೂ ಪುರಸ್ಕಾರವನ್ನು ನೀಡಿ ಇವರನ್ನು ಗೌರವಿಸುತ್ತ ಬಂದಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಕಾರ್ಕಳದ ಜೇಸೀ ಸಪ್ತಾಹ ಹಾಗೂ ಹೆಬ್ರಿಯ ಮರಾಠಿ ಸಂಘದ ವತಿಯಿಂದ ಇವರಿಗೆ ಗೌರವ ಹಾಗೂ ಪುರಸ್ಕಾರಗಳು ಲಭಿಸಿವೆ. ಶ್ರೀಯುತ ಮಹಾಬಲ ನಾಯ್ಕರು ಇಂದು ತಮ್ಮ ಧರ್ಮಪತ್ನಿ ಬೇಬಿ, ಮಕ್ಕಳಾದ ದಿವ್ಯಾ, ದೀಪಾ ಹಾಗೂ ದಿವಾಕರ ಇವರ ಜೊತೆಗೆ ಕೌಟುಂಬಿಕ ಜೀವನವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಇವರೊಂದಿಗೆ ಯಕ್ಷಗಾನ ಕೃಷಿಯಲ್ಲಿ ನಿರಂತರವಾದ ಸಾಧನೆಯಲ್ಲಿ ಮುಂದುವರೆಯುತ್ತಿದ್ದಾರೆ.
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ
- ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ
ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.
ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.
ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು
ಬದುಕಿಸುವುದು ಇತ್ಯಾದಿ..
ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.
ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.
ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;
“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”
ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.
ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.
ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;
“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”
ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;
“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”
ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;
“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”
ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;
“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”
ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ
ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.
ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.
ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.
ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.
ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.
ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.
ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.
ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ್ಮಿಕ ಜಗತ್ತಿನಲ್ಲಿ ಸರ್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ