ದಿನದ ಸುದ್ದಿ
ಮೆಡಿಕಲ್ ಮಾಫಿಯಾ : ರೋಗಿಯ ಜೀವಕ್ಕೆ ಬೆಲೆ ಇದೆಯಾ..?
- ನಾಗೇಶ್ ಹೆಗಡೆ
ಖಾಸಗಿ ಆಸ್ಪತ್ರೆಗಳು ಈಗಿನ ಕೋವಿಡ್ ಸಂಕಟಕಾಲದಲ್ಲಿ ಅದೆಷ್ಟು ರೀತಿ ರೋಗಿಗಳ ಸುಲಿಗೆಯಲ್ಲಿ ತೊಡಗಿವೆ ಎಂಬುದರ ವರದಿ ದಿನದಿನವೂ ಬರುತ್ತಿದೆ. ಸರಕಾರಿ ನಿಗಾ ಇದ್ದರೂ ಕ್ಯಾರೇ ಇಲ್ಲದೆ ಇವು ಲಂಗು ಲಗಾಮಿಲ್ಲದಂತೆ ವಸೂಲಿ ದಂಧೆಗೆ ಇಳಿದಿವೆ. ಈ ಮಾಫಿಯಾಗಳ ಕುರಿತು ವಿವೇಕ್ ಬಿಂದ್ರ ಎರಡು ವರ್ಷಗಳ ಹಿಂದೆ ದನಿ ಎತ್ತಿ, ಹಿಂದಿಯಲ್ಲಿ ಕೂಗಾಡಿದ ವಿಡಿಯೊ ಇಲ್ಲಿದೆ.
ಹಿಂದೀ ಭಾಷೆ ಗೊತ್ತಿಲ್ಲದವರಿಗೆ ನಾಗೇಶ ಹೆಗಡೆ ಮಾಡಿದ ಅದರ ಅಜಮಾಸು ತರ್ಜುಮೆ ಇದು (ಆವರಣದಲ್ಲಿ ಕೊಟ್ಟ ಸಂಖ್ಯೆಗಳು ಈ ವಿಡಿಯೊದ ಕಾಲಕ್ರಮವನ್ನು ತೋರಿಸುತ್ತವೆ). ಕನ್ನಡದಲ್ಲಿ ಇಷ್ಟೇ ಗಟ್ಟಿ ದನಿಯಲ್ಲಿ ಗರ್ಜಿಸಬಲ್ಲ ಯಾರಾದರೂ ಇದ್ದರೆ ಈ ಮಾಹಿತಿಯನ್ನು ಬಳಸಿಕೊಂಡು ವಿಡಿಯೊ ಮಾಡಬಹುದು. ಹಿಂದೀ ಭಾಷೆ ಗೊತ್ತಿದ್ದವರು ಯುಟ್ಯೂಬಿನಲ್ಲಿ ಅಥವಾ ಗೂಗಲ್ನಲ್ಲಿ vivek bindra ಇವರ ಇನ್ನೂ ಅಬ್ಬರದ, ಇನ್ನೂ ರೋಚಕ ಉದ್ದೀಪನ ಉಪನ್ಯಾಸಗಳನ್ನು ನೋಡಬಹುದು. ಖಾಸಗಿ ಆಸ್ಪತ್ರೆಗಳ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಳ್ಳಬಹುದು.
(0.15: ಸೆಕೆಂಡು) ದೇಶದಲ್ಲಿ ಬಿಳಿಕೋಟಿನ ಲೂಟಿಖೋರರ, ಖೂನಿದಾರರ ಹಾವಳಿ ಅತಿಯಾಗಿದೆ. ಈ ಖಾಸಗಿ ಆಸ್ಪತ್ರೆಗಳೆಂಬ ದೋಚುದಾಣಗಳು (ಅವುಗಳ ಹೆಸರನ್ನು ಹೇಳುವುದಿಲ್ಲ ನಾನು) ದುಡ್ಡು ಮಾಡ್ಕೊಳ್ಳಿ, ಬೇಜಾರಿಲ್ಲ ಆದರೆ ಈ ರೀತಿ ಲೂಟಿಗೆ ಇಳಿಯಬೇಡಿ. ನಾನು ಬಿಸಿನೆಸ್ ಕೋಚಿಂಗ್ ಕೊಡ್ತೇನೆ; ಬಿಸಿನೆಸ್ ಹೇಗೆ ಮಾಡಬಾರದು ಅನ್ನೋದನ್ನು ಇಲ್ಲಿ ಹೇಳ್ತೇನೆ. ನಮ್ಮ ದೇಶದ ಡಾಕ್ಟರ್ಗಳಿಗೆ ದುಡ್ಡನ್ನು ಗಳಿಸುವ ಅಧಿಕಾರ ಇದೆ. ಒಪ್ಪೋಣ. ಅದನ್ನು ಖುಷಿಖುಷಿಯಿಂದ, ಜವಾಬ್ದಾರಿಯಿಂದ, ನೈತಿಕವಾಗಿ ಗಳಿಸಲು ಸಾಧ್ಯ ಇದೆ.
(1.00) ಆದರೆ ಇಲ್ಲ, ಇವರಿಗೆ ಅದೇನೂ ಬೇಕಾಗಿಲ್ಲ. ಇವರಿಗೆ ಡಯಗ್ನೋಸ್ಟಿಕ್ ಲ್ಯಾಬ್ನಿಂದಲೂ ಹಣ ಬೇಕು; ಅಂಬುಲೆನ್ಸ್ ಮೂಲಕ ರೆಫರೆನ್ಸ್ ಪೇಶಂಟ್ಗಳನ್ನು ಸೆಳೆದುಕೊಂಡು ಅಲ್ಲಿಂದಲೂ ಹಣ ನುಂಗುತ್ತಾರೆ. ನಿಮಗೆ ಗೊತ್ತಿರಬೇಕು- ಅಂಬುಲೆನ್ಸ್ ಡ್ರೈವರಿಗೆ ಹೇಳುತ್ತಾರೆ “ನೋಡಪ್ಪಾ ಪೇಶಂಟ್ ಗಳನ್ನು ನಮ್ಮಲ್ಲಿಗೇ ಕರ್ಕೊಂಡು ಬಾ, ಕಮೀಶನ್ ಕೊಡ್ತೇನೆ” ಎನ್ನುತ್ತಾರೆ. ಡ್ರೈವರು ಜಾಸ್ತಿ ಹಣ ಸಿಗುವ ರಾಂಗ್ ಡಾಕ್ಟರ್ ಬಳಿ ಒಯ್ಯುವಾಗ ದಾರಿಯಲ್ಲೇ ರೋಗಿ ಸಾಯಬಹುದು.
ಈ ಡಾಕ್ಟರ್ ಗಳಿಗೆ ಔಷಧ ಅಂಗಡಿಗಳಿಂದಲೂ ದುಡ್ಡು ಬೇಕು. ಇವರು ಔಷಧ ತಯಾರಿಸುವ ಕಂಪನಿಗಳನ್ನೂ ಲೂಟಿ ಮಾಡುತ್ತಾರೆ. ಕಂಪನಿಗಳಿಗೆ ಇವರು ಹೇಳುತ್ತಾರೆ: “ನನ್ನ ಮಗಳು ಮತ್ತು ಅವಳ ಗೆಳೆಯನಿಗೆ ನ್ಯೂಯಾರ್ಕಿಗೆ ಹೋಗುವುದಿದೆ. ಅಲ್ಲಿಂದ ನ್ಯೂಜೆರ್ಸಿ, ಅಲ್ಲಿಂದ ನ್ಯೂಝಿಲ್ಯಾಂಡ್ ಹೋಗಿ ವಾಪಸ್ ನ್ಯೂಡಿಲ್ಲಿಗೆ ಬರ್ತಾರೆ; ತುಸು ಅವರ ಖರ್ಚುವೆಚ್ಚ ನೋಡಿಕೊಳ್ಳಿ” ಎನ್ನುತ್ತಾರೆ. “ನನಗೆ ಈವೆಂಟ್ ಮಾಡೋದಿದೆ, ಖರ್ಚು ನೋಡಿಕೊಳ್ಳಿ…” ಈ ಡಾಕ್ಟರ್ ಗಳ ಬೇಡಿಕೆಗಳಿಗೆ ಮಿತಿಯೇ ಇಲ್ಲ. ಫಾರ್ಮಾ ಕಂಪನಿಗಳಿಂದ ಇವರಿಗೆ ಹಣ ಬೇಕು, ರೋಗಿಗಳಿಂದ ಹಣ ಬೇಕು; ಆಸ್ಪತ್ರೆಗಳಿಂದಲೂ ಹಣ ಬೇಕು…
(1.30) ಅಲ್ಲಾರೀ, ಹಣ ಸಂಪಾದನೆ ಮಾಡೀಪ್ಪ; ಆದರೆ ಯಾರದೋ ದೌರ್ಬಲ್ಯದ ಲಾಭ ಪಡೆಯಬೇಡಿ! ಆ ಫಾರ್ಮಾ ಕಂಪನಿ ತನಗೆ ಬಂದ ಎಲ್ಲ ಖರ್ಚನ್ನೂ ಔಷಧಕ್ಕೆ ಸೇರಿಸಿ, ಔಷಧದ ಬೆಲೆಯನ್ನು ಆಕಾಶಕ್ಕೇರಿಸಿ ರೋಗಿಗಳನ್ನು ಲೂಟಿ ಮಾಡುತ್ತಾರೆ. ಭಾರೀ ದೊಡ್ಡ ಸ್ಕ್ಯಾಂಡಲ್ ಇದು.
(1.45) ಇಂಥ ಲೂಟಿ ಮಾಡದೇ ಹಣ ಮಾಡುವ ‘ಸ್ಕೇಲೆಬಲ್ “ ವಿಧಾನವನ್ನು ನಾನು ಅದೆಷ್ಟೋ ಬಿಸಿನೆಸ್ ಕಂಪನಿಗಳಿಗೆ ತಿಳಿಸಿಕೊಟ್ಟಿದ್ದೇನೆ. ಆರೋಗ್ಯರಂಗದಲ್ಲೂ ಅಂತಹ ಮಾದರಿಗಳು ನಮ್ಮ ದೇಶದಲ್ಲಿ ಅದೆಷ್ಟೋ ಇವೆ.
(2.00) ಈಗ ನೋಡಿ: ಪ್ಯಾಥ್ ಲ್ಯಾಬ್ (ಡಯಗ್ನೋಸ್ಟಿಕ್ ಲ್ಯಾಬ್) ಆರಂಭಿಸುವ ವ್ಯಕ್ತಿ ತಾನು ತುಂಬ ಅಚ್ಚುಕಟ್ಟಾದ, ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗಶಾಲೆಯನ್ನು ಸ್ಥಾಪಿಸುವ ಕನಸು ಕಾಣುತ್ತಾನೆ. ಆದರೆ ಪೇಶಂಟ್ಗಳು ತಾವಾಗಿ ಬರುವುದಿಲ್ಲ. ಆತ ಡಾಕ್ಟರ್ ಬಳಿ ಹೋಗಿ, ನಮ್ಮ ಲ್ಯಾಬಿಗೆ ರೋಗಿಗಳನ್ನು ಕಳಿಸಿ ಎನ್ನುತ್ತಾನೆ.
ಡಾಕ್ಟರ್ ಸುಮ್ನೆ ಕಳಿಸ್ತಾನಾ? “ನನಗೆ 50% ಕಮಿಶನ್ ಬೇಕು’’ ಎನ್ನುತ್ತಾನೆ. ಸೂಪರ್ ಸ್ಪೆಶಾಲಿಟಿ ಡಾಕ್ಟರಂತೂ 60% ಕಮಿಶನ್ ಹೊಡಿತಾನೆ. ಅಲ್ಲಿಗೆ ನೀವು ಲ್ಯಾಬಿಗೆ ಕೊಡುವ ಸ್ಯಾಂಪಲ್ಲಿನ ಸರಿಯಾದ ಪರೀಕ್ಷೆ ಕೂಡ ಆಗುವುದಿಲ್ಲ. ಬರೀ “ಬೇಸಿನ್ ಟೆಸ್ಟ್’’ ಮಾಡುತ್ತಾರೆ. ಬೇಸಿನ್ ಟೆಸ್ಟ್ ಎಂದರೆ, ನಿಮ್ಮ ತೋಳಿನಿಂದ ರಕ್ತ ತೆಗಿ ವಾಶ್ ಬೇಸಿನ್ ಗೆ ಸುರಿ…. ಇದು ಭಾರೀ ದೊಡ್ ಸ್ಕ್ಯಾಂಡಲ್.
(2.40) ಬಿಸಿನೆಸ್ ಗೊತ್ತಿಲ್ಲದ ಇಂಥ ದಡ್ಡಪಿಪಾಸುಗಳಿಂದಾಗಿ ನಮ್ಮ ದೇಶ ಎಂಥಾ ದುಃಸ್ಥಿತಿಯಲ್ಲಿದೆ ನೋಡಿ: ಅಂತರರಾಷ್ಟ್ರೀಯ ಆರೋಗ್ಯ ಸೂಚ್ಯಂಕದಲ್ಲಿ ನಮ್ಮ ದೇಶದ ಸ್ಥಾನ 154ರಷ್ಟು ಕೆಳಗಿದೆ. ಮೊದಲ 150 ಸ್ಥಾನಗಳಲ್ಲಿ ನಮಗೆ ಸ್ಥಾನವೇ ಇಲ್ಲ.
ನಾವು ಡಾಕ್ಟರನ್ನು ದೇವರ ಸಮಾನ ಎಂದು ನಂಬುತ್ತೇವೆ. ಡಾಕ್ಟರ್ ತನ್ನನ್ನು ದೇವರ ಸಮಾನ ಅಲ್ಲ; ಸಾಕ್ಷಾತ್ ದೇವನೇ ತಾನು ಎಂದುಕೊಂಡಿದ್ದಾನೆ. ತಾನೇ ಸರ್ವಶಕ್ತನೆಂದು ಲೂಟಿ ಮಾಡುತ್ತಾನೆ, ಪ್ರಾಣ ಹೀರುತ್ತಾನೆ.
(3.30) ಗೊತ್ತಾ ನಿಮಗೆ? ಹೈಟೆಕ್ ಆಸ್ಪತ್ರೆಗಳಲ್ಲಿ ‘ಸೇಲ್ಸ್ ರಿವ್ಯೂ’ ಮಾಡಲಾಗುತ್ತದೆ. ಡಾಕ್ಟರ್ ಗಳನ್ನು ಕೂರಿಸಿಕೊಂಡ ‘ಎಷ್ಟು ಲಾಭ ಬಂತು?’ ಎಂದು ನೋಡಲು ಮೀಟಿಂಗ್’ ನಡೆಸುತ್ತವೆ.
ಯಾವ ಡಾಕ್ಟರು ಎಷ್ಟು ಜಾಸ್ತಿ ರೋಗಿಗಳ ಅಡ್ಮಿಶನ್ ಮಾಡಿಸಿಕೊಳ್ಳುತ್ತಾನೊ ಅವನಿಗೆ ಜಾಸ್ತಿ ಕಮಿಶನ್ ಸಿಗುತ್ತದೆ. ಡಾಕ್ಟರ್ಗೆ ಹಬ್ಬವೋ ಹಬ್ಬ. ‘ಕರಿ, ಕರಿ ಅವನ್ನ, ಸೇರ್ಸು ಅವನ್ನ ವಾರ್ಡಿಗೆ’… ಅವರನ್ನ ಇವರನ್ನ ಎಲ್ಲರನ್ನೂ ಆಸ್ಪತ್ರೆಗೆ ಸೇರ್ಸು..
ಈ ಡಾಕ್ಟರುಗಳಿಗೆ ಆಸ್ಪತ್ರೆಯ ಮಾಲಿಕ ‘ಆಪರೇಶನ್ ಟಾರ್ಗೆಟ್’ ಕೊಡುತ್ತಾನೆ. “ನೀನು ಎಷ್ಟು ಆಪರೇಶನ್ ಮಾಡಿದೆ? ಎಷ್ಟು ಲ್ಯಾಬ್ ಟೆಸ್ಟ್ ಮಾಡಿಸಿದೆ?… ಮತ್ತೆ ಎಷ್ಟು ದಿನ ಏನೂ ಟ್ರೀಟ್ಮೆಂಟ್ ಇಲ್ಲದೆ ಬೆಡ್ ಮೇಲೆ ಖಾಲಿ ಮಲಗಿಸಿದೆ? ಎಷ್ಟು ಗಳಿಕೆ ಬಂತು ಆಸ್ಪತ್ರೆಗೆ? ಪ್ರೈವೇಟ್ ಬೆಡ್ ಎಷ್ಟಿತ್ತು? ಜನರಲ್ ವಾರ್ಡಿಗೆ ಎಷ್ಟು ರೋಗಿಗಳನ್ನು ಹಾಕಿದೆ?”
ಇದು ಪಕ್ಕಾ ಧಂಧೆ ಆಗಿಬಿಟ್ಟಿದೆ. ಇಂತಿಷ್ಟೇ ಪೇಶಂಟುಗಳ ಸುಲಿಗೆ ಮಾಡಬೇಕು ಎಂಬ ಟಾರ್ಗೆಟ್ ಕೊಟ್ಟಿರ್ತಾರೆ ಡಾಕ್ಟರಿಗೆ. ‘ನೀನು ಟಾರ್ಗೆಟ್ ದಾಟಿದರೆ ನಿನ್ನ ಪ್ರೊಮೋಶನ್ ಪಕ್ಕಾ’ ಎನ್ನುತ್ತಾರೆ. “…ನೀನು ಯಾವ ಔಷಧ ಶಿಫಾರಸು ಮಾಡ್ತೀಯ? ಅಲ್ಪವೆಚ್ಚದ್ದಾ? ಬೇಡ ಬೇಡ ಬೇಡ… ಆ ದುಬಾರಿ ಔಷಧವನ್ನೇ ತರಿಸು… ಕಂಪನಿಯಿಂದ ಕಮಿಷನ್ ಬರುವ ಔಷಧವನ್ನೇ ನೀನು ರೋಗಿಗೆ ಕೊಡಬೇಕು…’’
(4.00) ಒಂದು ಮಾತು ಹೇಳ್ತೀನಿ… ನಿಮ್ಮ ಚಿಕಿತ್ಸೆಯ ಅಸಲೀ ವೆಚ್ಚ ಒಟ್ಟೂ ಬಿಲ್ಲಿನ ಕೇವಲ ಹತ್ತೇ ಪರ್ಸೆಂಟ್ ಅಷ್ಟೆ. ಇನ್ನುಳಿದ 90 ಈ ಎಲ್ಲರ ಕಮೀಶನ್ನೇ ಆಗಿದೆ! ನಿಮ್ಮ ಬಿಲ್ ಎರಡು ಲಕ್ಷ ರೂಪಾಯಿ ಆಗಿದೆಯೆಂದರೆ, ಅದು 20 ಸಾವಿರ ಅಷ್ಟೆ ಆಗಬೇಕಿತ್ತು. ಈ ಇವರು ಇನ್ಶೂರನ್ಸ್ ಕಂಪನಿಗಳನ್ನೂ ಬಿಡುವುದಿಲ್ಲ. ಕಮೀಶನ್ ಕೊಡದಿದ್ದರೆ ಅಂಥ ವಿಮಾ ಕಂಪನಿಯ ಹೆಸರನ್ನೇ ಪ್ಯಾನೆಲ್ಲಿನಿಂದ ಕಿತ್ತು ಹಾಕುತ್ತಾರೆ. ಮಾಫಿಯಾ, ದೊಡ್ಡ ಮಾಫಿಯಾ ಇವರೆಲ್ಲ.
(4.30) ಈ ಡಾಕ್ಟರ್ ಗಳಿಗೂ ಟ್ರೇನಿಂಗ್ ಸಿಕ್ಕಿರುತ್ತದೆ. ಟ್ರೇನಿಂಗ್ ಏನೂ ಅಂದ್ರೆ, ಪೇಶಂಟ್ ಮೇಲೆ ಒತ್ತಾಯ ಹೇರಬೇಡಿ. ತುಸು ಹೆದರಿಸಿಬಿಡಿ… ಜಾಸ್ತಿಯಲ್ಲ, ತುಸುವೇ ಹೆದರಿಸಿಬಿಡಿ… ‘ನಾಳೆ ಇದೇ ದೊಡ್ಡದಾಗಿ ತೀರಾ ಕಾಂಪ್ಲಿಕೇಟ್ ಆಗಬಹದು… ಹೃದಯದ ಕಾಯಿಲೆ ಸೀರಿಯಸ್ ಇದೆ… ನಿಮ್ಮ ಬದುಕು, ನಿಮ್ಮ ಅಪ್ಪ ಅಮ್ಮ..’ ಎಲ್ಲವನ್ನೂ ಮೆಲ್ಲಗೆ ಹೇಳಿ, ‘ಇನ್ನುಳಿದಿದ್ದು ನಿಮ್ಮ ಆಯ್ಕೆ’ ಎಂದು ಬಿಡಿ ಸಾಕು. ಆತ ಹೆದರಿ ಕೈಜೋಡಿಸುತ್ತಾನೆ.. ‘ಒಳ್ಳೇದು ಡಾಕ್ಟರೆ ನೀವು ಹೇಳಿದ ಹಾಗೆ ದೊಡ್ಡ ..’ ಎಂದು ಕೈಜೋಡಿಸುತ್ತಾನೆ.
ಒಂದೇ ಏಟಿನಲ್ಲಿ ಇವರು ನಿಮ್ಮ ಇಡೀ ಬದುಕಿನಲ್ಲಿ ಉಳಿಸಿದ ಎಲ್ಲ ಹಣವನ್ನೂ ಸ್ವಾಹಾ ಮಾಡುತ್ತಾರೆ. ಸ್ವಲ್ಪವೂ ನಾಚಿಕೆಯಿಲ್ಲ ಇವರಿಗೆ.
(5.00) ನಿಮಗೆ ಗೊತ್ತೆ, 2010ರ ಮೊದಲು ನಮ್ಮ ದೇಶದಲ್ಲಿ ಸಿಝೇರಿಯನ್ ಹೆರಿಗೆಯ ಪ್ರಮಾಣ ಕೇವಲ ಶೇಕಡಾ ಎಂಟೂವರೆಯಷ್ಟಿತ್ತು. ಆಗೆಲ್ಲ ಗರ್ಭವತಿಗೆ ಅಥವಾ ಅವಳ ಮಗುವಿಗೆ ಅಪಾಯವಿದೆ ಎಂದಿದ್ದಾಗ ಮಾತ್ರ ಸಿಝೇರಿಯನ್ ಹೆರಿಗೆ ಮಾಡಿಸುತ್ತಿದ್ದರು. ಇಂದು ಈಗ ‘ರಿಸ್ಕ್ ಇದೇರೀ, ರಿಸ್ಕಿದೆ’ ಎಂದೆಲ್ಲ ಹೆದರಿಸಿ ಒಂದಲ್ಲ ಒಂದು ಸುಳ್ಳು ನೆಪ ಹೇಳಿ ಗರ್ಭಿಣಿಯ ಹೊಟ್ಟೆ ಕೊಯ್ದು ಶಿಶುವನ್ನು ಹೊರಕ್ಕೆ ತೆಗೆಯುತ್ತಾರೆ.
ನಗರಗಳಲ್ಲಿ ಸಿಝೇರಿಯನ್ ಶೇಕಡಾ 40ಕ್ಕೆ ಏರಿದೆ. ಟಾರ್ಗೆಟ್ ಕೊಟ್ಟಿದ್ದಾರಲ್ಲ! ಆ ಬಡಪಾಯಿ ಗರ್ಭಿಣಿ ಮತ್ತು ಅವಳ ಗಂಡ, “ನಾವು ನಾರ್ಮಲ್ ಡೆಲಿವರಿವರೆಗೆ ಕಾಯುತ್ತೇವೆ ಎಂದು ಹೇಳಿದರೆ ಮುಗೀತು. ಅವರೆದುರು ದೊಡ್ಡ ದೊಡ್ಡ ಮೆಡಿಕಲ್ ಶಬ್ದಗಳನ್ನು ಉದುರಿಸಿ, ಹೆದರಿಸಬೇಕು.
ಅರೇ! ಈ ಖಾಸಗಿಯ ಆಸ್ಪತ್ರೆಯ ಡಾಕ್ಟರುಗಳಿಗೆಲ್ಲ ಟಾರ್ಗೆಟ್ ಕೊಡಲಾಗಿದೆ. ಯಾರು ಜಾಸ್ತಿ ಸಿ-ಸೆಕ್ಷನ್ (ಸಿಝೇರಿಯನ್) ಮಾಡುತ್ತಾರೊ ಅವರಿಗೆ ಮುಂಬಡ್ತಿ ಕೊಡೋದು. ಇಡೀ ವೈದ್ಯಲೋಕವೇ ಧಂಧೆಗೆ ಇಳಿದಿದೆರೀ, ದಂಧೆಗೆ!
(6.00) ನಿಮಗೆ ನೆನಪಿರಬೇಕು, ಆತನಿಗೆ ಸಾಮಾನ್ಯ ವಾಂತಿಯಾಗಿತ್ತು ಅಷ್ಟೆ! ಎಳನೀರು ಅಥವಾ ಸಾಕಷ್ಟು ಬೆಲ್ಲದ ನೀರು (ಓಆರ್ಎಸ್) ಕೊಟ್ಟಿದ್ದರೆ ವಾಸಿ ಆಗುತ್ತಿತ್ತು. ಏನಾಯ್ತು… ಅಂದ್ರೆ ‘ನಿನ್ನ ಅಪೆಂಡಿಕ್ಸ್ ಊದಿದೆ, ಅದು ಬಿರಿದುಕೊಂಡಿದೆ’ ಎಂದು ಹೆದರಿಸಿ ಒಂದೂವರೆ ಲಕ್ಷ ಕಕ್ಕಿಸಿ ಆತನ ಹೊಟ್ಟೆಗೆ ಬ್ಲೇಡ್ ಹಾಕಿದ್ದು, ಹೊಲಿಗೆ ಹಾಕಿದ್ದು ಅಷ್ಟೆ. ಒಂದೂವರೆ ಲಕ್ಷ…
(6.10) ನಾನು ಬರೀ ನೆಗೆಟಿವ್ ಮಾತಾಡುತ್ತಿಲ್ಲ ಇಲ್ಲಿ. ಡಾ. ದೇವಿಶೆಟ್ಟಿ ಅನ್ನೋರು ಇದ್ದಾರೆ. ಅವರ ಬಗ್ಗೆ ಇಡೀ ದೇಶಕ್ಕೇ ಗೊತ್ತಿದೆ. ಪದ್ಮಶ್ರೀ, ಪದ್ಮಭೂಷಣ ಎಂದೆಲ್ಲ ಸಂಮಾನಿತರಾಗಿದ್ದಾರೆ. 23 ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ. ಏಳು ಹಾರ್ಟ್ ಸೆಂಟರ್ ಗಳನ್ನು ಆರಂಭಿಸಿದ್ದಾರೆ. ಇವರು ಕಡಿಮೆ ಖರ್ಚಿನಲ್ಲಿ ಹೆಚ್ಚು ಹೆಚ್ಚು ಜನರಿಗೆ ಹಾರ್ಟ್ ಆಪರೇಶನ್ ಮಾಡುತ್ತಾರೆ.
ಇದಕ್ಕೆ ಇಕಾನಮಿ ಆಫ್ ಸ್ಕೇಲ್ ಎನ್ನುತ್ತಾರೆ. ಹೆನ್ರಿ ಫೋರ್ಡ್ ಮಾದರಿಯಲ್ಲಿ (ಅಂದರೆ, ಮೆಕ್ಯಾನಿಕ್ ನಿಂತಲ್ಲೇ ನಿಂತಿರುತ್ತಾನೆ, ಅರೆ ನಿರ್ಮಿತ ಕಾರುಗಳು ಆತನ ಎದುರು ಸಾಲಾಗಿ ಬರುತ್ತಿರುತ್ತವೆ. ಚಕ್ರ ಜೋಡಿಸುವವನು ಚಕ್ರ ಜೋಡಿಸುತ್ತಿರುತ್ತಾನೆ; ಗಾಜು ಕೂರಿಸುವವನು ಗಾಜು ಕೂರಿಸುತ್ತಾನೆ. ಮುಂದೆ ಮಡ್ಗಾರ್ಡ್… ಕಾರು ಇಡಿಯಾಗುತ್ತ ಹೋಗುತ್ತಿರುತ್ತದೆ).
(6.45) ಡಾಕ್ಟರ್ ದೇವಿಶೆಟ್ಟಿ ಅದೇರೀತಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಅಸೆಂಬ್ಲಿ ಲೈನ್ ಮಾದರಿಯಲ್ಲಿ ಮಾಡುತ್ತಾರೆ. ಬೇರೆ ಬೇರೆ ತಜ್ಞರು ಸಾಲಾಗಿ ನಿಂತಿರುತ್ತಾರೆ. ಪೇಶಂಟ್ ಮಲಗಿದ ಮಂಚವೇ ಸಾಗುತ್ತಿರುತ್ತದೆ.
ಒಬ್ಬ ಎಕ್ಸರೇ ತೆಗೀತಾನೆ, ಇನ್ನೊಬ್ಬ ಅನೆಸ್ತೀಶಿಯಾ ಕೊಡುತ್ತಾನೆ. ಮುಂದಿದ್ದವ ಸರ್ಜರಿ ಮಾಡುತ್ತಾನೆ. ನಂತರದವ ಹೊಲಿಗೆ ಹಾಕುತ್ತಾನೆ….. ಸರಸರ ಎಂದು ಅತ್ಯಂತ ವೇಗದಲ್ಲಿ ಸರ್ಜರಿ ದಾಖಲೆ ವೇಗದಲ್ಲಿ, ದಿನಕ್ಕೆ ಮುನ್ನೂರು ಮುನ್ನೂರು ಆಪರೇಶನ್ ಆಗುತ್ತಿರುತ್ತದೆ.
ಜಾಸ್ತಿ ಪೇಶಂಟ್ ಗಳಿಗೆ ಚಿಕಿತ್ಸೆ ಕೊಡುತ್ತ ಹೋದರೆ ಹಣದ ಸುರಿಮಳೆ ತಂತಾನೇ ಆಗುತ್ತಿರುತ್ತದೆ. ಯಾಕೆ ಪೇಶಂಟ್ ಗಳ ಲೂಟಿ ಮಾಡುತ್ತೀರಿ ? ಜಾಸ್ತಿ ಪೇಶಂಟ್ ಗಳು ಬರುತ್ತಿದ್ದರೆ ಜಾಸ್ತಿ ಆಪರೇಶನ್ ಮಾಡಿದರೆ ಹಣ ಹೇಗೂ ಬರುತ್ತದೆ ನಿಮಗೆ!
ನಿಮಗೆ ಗೊತ್ತೆ ಡಾ. ದೇವೀಶೆಟ್ಟಿ ಕಳೆದ ವರ್ಷ ಒಂದೂಮುಕ್ಕಾಲು ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಐಪಿಓದಲ್ಲಿ ಇವರ ಮೌಲ್ಯ ನೂರು ಕೋಟಿ ಡಾಲರ್ ! ಇವರ ಆಸ್ಪತ್ರೆಗಳಲ್ಲಿ 14 ಸಾವಿರ ಕೆಲಸಗಾರರಿದ್ದಾರೆ. ಅವರಂತೆ ವಾಲ್ಯೂಮ್ ಹೆಚ್ಚಿಸಿಕೊಂಡು ಹಣ ಮಾಡಿ, ಲೂಟಿಯಿಂದಲ್ಲ…
(7.45) ನಿಮಗೆ ಗೊತ್ತೆ? ಭಾರತದಲ್ಲಿ ನೈತಿಕವಾಗಿ ಆಸ್ಪತ್ರೆ ನಡೆಸುತ್ತಲೇ ಹಣ ಗಳಿಸುವುದು ತೀರ ಸುಲಭ. ಇಷ್ಟು ದೊಡ್ಡ ಜನಸಂಖ್ಯೆ, ಇಷ್ಟು ದೊಡ್ಡ ದೇಶ… ಇಷ್ಟು ದೊಡ್ಡ ಸಂಖ್ಯೆ! ಗೋವಿಂದಪ್ಪ ವೆಂಕಟಸ್ವಾಮಿ.. ಅರವಿಂದ್ ಐ ಕೇರ್ ಹಾಸ್ಪಿಟಲ್. ಇವರು ಮೆಕ್ಡೊನಾಲ್ಡ್ ಕಂಪನಿಯಿಂದ ಪಾಠ ಕಲಿತವರು. ಆತ ದಿನಕ್ಕೆ ನೂರು ಕೋಟಿ ಬರ್ಗರ್ ತಯಾರಿಸಿ ಮಾರುತ್ತಾನೆ.
ನಮ್ಮ ದೇಶ ಅಂದರೆ ಜಗತ್ತಿನಲ್ಲೇ ಅತಿ ಜಾಸ್ತಿ ಸಂಖ್ಯೆಯ ಅಂಧರಿದ್ದಾರೆ. ಅಮೆರಿಕದಲ್ಲಿ 2000 ಡಾಲರ್ಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವುದಾದರೆ ನಾನು ಹತ್ತೇ ಡಾಲರ್ ಗಳಲ್ಲಿ ಮಾಡುತ್ತೇನೆ ಎಂದವರು ಇವರು. ಇತರೆಲ್ಲ ಡಾಕ್ಟರ್ಗಳು ರೋಗಿಗಳ ನಗ, ನಾಣ್ಯ, ಆಸ್ತಿಪಾಸ್ತಿಯನ್ನು ಲೂಟಿ ಮಾಡಲು ನಿಂತಿರುವಾಗ ಈ ಗೋವಿಂದಪ್ಪ ವೆಂಕಟಸ್ವಾಮಿ ತಮ್ಮ ನಗ, ನಾಣ್ಯ ಆಸ್ತಿಪಾಸ್ತಿಯನ್ನು ಗಿರವಿ ಇಟ್ಟು ಅರವಿಂದ್ ಐ ಕೇರ್ ಆರಂಭಿಸಿದರು.
(8.30) ಅಥವಾ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಉದಾಹರಣೆ ನೋಡಿ: ಇವರು ಎರಡು ವಿಭಾಗಗಳನ್ನು ಮಾಡಿದ್ದಾರೆ. ಒಂದು ಕಡೆ ಅನುಕೂಲಸ್ಥರಿಗೆ ಜಾಸ್ತಿ ಶುಲ್ಕ ವಿಧಿಸುವುದು, ಇನ್ನೊಂದು ಕಡೆ ಅದೇ ಹಣದಿಂದ ಬಡ-ಮಧ್ಯಮ ವರ್ಗದವರಿಗೆ ಅತಿ ಕಡಿಮೆ ಅಥವಾ ಉಚಿತವಾಗಿ ವೈದ್ಯಸೇವೆ ಒದಗಿಸುವುದು.
ಭಾಳಾ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಯಾವ ಕ್ಯಾನ್ಸರ್ ಔಷಧಿಗೆ ಒಂದು ಲಕ್ಷ ರೂಪಾಯಿ ಬೆಲೆ ಇದೆಯೊ ಅದನ್ನು (ಶುಷ್ರೂಷೆಗೆ ಬರುವವರ ಸಂಖ್ಯೆ ಹೆಚ್ಚಿಸುವ ಮೂಲಕ) ಒಂದು ಸಾವಿರ ರೂಪಾಯಿಗಳಿಗೆ ಒದಗಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.
(9.00) ಇದು ಸಾಧ್ಯವಿದೆ, ಸಾಧ್ಯವಿದೆ. ಅದಕ್ಕೇ ನಾನು ಹೇಳೋದು, ಬಿಸಿನೆಸ್ ಮಾಡಲು ಸುಲಭ ಮಾರ್ಗಗಳಿವೆ. ಈ ಲೂಟಿಖೋರರಿಗೆ ಅದು ಗೊತ್ತಿಲ್ಲ. ಒಂದೇ ಸಾರಿ ಕತ್ತರಿಸು! ಒಂದೇ ಬಾರಿಗೆ ಲೂಟಿ ಮಾಡು…
(9.10) ನನ್ನದು ಒಂದೇ ಒಂದು ಚಿಕ್ಕ ವಿನಂತಿ ಇದೆ. ಈ ವಿಡಿಯೊವನ್ನು ಡೌನ್ಲೋಡ್ ಮಾಡಿ ಹಂಚಿ. ನಮ್ಮ ದೇಶದ ಎಂಟು ಲಕ್ಷ ಡಾಕ್ಟರ್ಗಳಿಗೆ ಸಂದೇಶ ತಲುಪುವಂತೆ ಮಾಡಿ. ದೇಶದ ಆರೋಗ್ಯ ಸಚಿವರಿಗೆ ಇದು ತಲುಪುವಂತೆ ಮಾಡಿ. ದನಿ ಎತ್ತಿ. ಇವೊತ್ತು ನನ್ನೊಂದಿಗೆ ನೀವು ದನಿ ಎತ್ತಿ ಕೂಗದಿದ್ದರೆ ನಾಳೆ ನಿಮ್ಮನ್ನೂ ಇವರು ಲೂಟಿ ಮಾಡುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.




