Connect with us

ದಿನದ ಸುದ್ದಿ

ಹಾಲು, ಮೊಸರಿನ ಮೇಲೆ ಜಿಎಸ್‌ʼಟಿ : ಹೆಚ್.ಡಿ.ಕುಮಾರಸ್ವಾಮಿ ಕಿಡಿ

Published

on

ಸುದ್ದಿದಿನ,ಬೆಂಗಳೂರು: ಜಿಎಸ್ ಟಿ ಮೂಲಕ ಕೇಂದ್ರ ಸರಕಾರವು ಬಡವರನ್ನು ದೋಚುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಎಸ್ ಟಿ ಜನ ವಿರೋಧಿ ತೆರಿಗೆ ನೀತಿ. ಪೆಟ್ರೋಲ್ ಬೆಲೆ, ದಿನ ನಿತ್ಯದ ವಸ್ತು ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈಗ ಆಹಾರ ಪದಾರ್ಥಗಳಿಗೆ ಜಿಎಸ್ ಟಿ ವಿಧಿಸಿ ಬಡವರ ಅನ್ನವನ್ನೂ ಕಸಿದುಕೊಳ್ಳಲಾಗುತ್ತಿದೆ. ಅಚ್ಛೇದಿನ್‌ ಎಂದರೆ ಇದೇನಾ? ಇವು ಜನ ವಿರೋಧಿ ಸರಕಾರಗಳು ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಇಂದು ವಿಧಾನಸೌಧದಲ್ಲಿ ಮತ ಚಲಾಯಿಸುವ ಮುನ್ನ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಹಾಲು, ಮೊಸರು, ಉಪ್ಪಿನಕಾಯಿ ಮೇಲೆ ತೆರಿಗೆ ಹೆಚ್ಚು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ತೆರಿಗೆ ಹೆಸರಿನಲ್ಲಿ ಲೂಟಿ ಮಾಡುವುದಕ್ಕೂ ಒಂದು ಮಿತಿ ಬೇಡವೇ? ಇದು ಜನ ವಿರೋಧಿ ನಿರ್ಧಾರ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ನಿಂದಾಗಿ ಆನೇಕ ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಮೇಲೆ ಜಿಎಸ್ ಟಿ ಹೊರೆ ಹಾಕಲಾಗುತ್ತಿದೆ. ಜಿಎಸ್ ಟಿಯನ್ನು ನಾನು ಮೊದಲೇ ವಿರೋಧ ಮಾಡಿದ್ದೆ. ರಾಜ್ಯಗಳು ಕೇಂದ್ರಕ್ಕೆ ಹಗ್ಗ ಕೊಟ್ಟು ಕುತ್ತಿಗೆ ಕೊಟ್ಟಿವೆ ಅಂತ ಹೇಳಿದ್ದೆ. ಈ ನೀತಿಯನ್ನು ಮರು ಪರಿಶೀಲನೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಜಿಎಸ್ ಟಿ ಹೆಚ್ಚಳ ಬಡವರ ಮೇಲೆ ಮಾರಕ ಪ್ರಭಾವ ಬೀರುತ್ತದೆ. ನೇರವಾಗಿ ಬಡವರ ಮೇಲೆ ಹೊರೆ ಆಗುತ್ತದೆ. ಆದರೆ, ಬಿಜೆಪಿ ಜಿಎಸ್ ಟಿಯನ್ನು ಸಮರ್ಥನೆ ಮಾಡುತ್ತಿದೆ. ನೂರು ಸುಳ್ಳು ಹೇಳಿ ಅದನ್ನೇ ಸತ್ಯ ಮಾಡುವುದು ಅವರ ಹುಟ್ಟುಗುಣ. ಎಂಟು ವರ್ಷದಿಂದ ಎಲ್ಲಿ ಒಳ್ಳೆ ದಿನಗಳು ಬಂದಿವೆ? ಡಾಲರ್ ಎದುರು ರೂಪಾಯಿ ಕಥೆ ಏನಾಗಿದೆ? ವಿದೇಶಿ ವಿನಿಮಯ ಕೂಡ ಖಾಲಿ ಆಗುತ್ತಿದೆ. ಕೇಂದ್ರ ಸರ್ಕಾರದ ನೀತಿಯಿಂದ ವಿದೇಶಿ ಕಂಪನಿಗಳು ಬಂಡವಾಳ ವಾಪಸ್ ಪಡೆಯುತ್ತಿವೆ. ಇದರ ಬಗ್ಗೆ ಚರ್ಚೆ ಮಾಡಬೇಕು ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ಕಾರ್ಯಕ್ರಮ ಬೇಡ ಎನ್ನುತ್ತಿದ್ದಾರೆ. ಈ ದೇಶದಲ್ಲಿ 1.7 ಮಿಲಿಯನ್ ಜನರು ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ. ಶ್ರೀಲಂಕಾಗಿಂತ ನಮ್ಮ ಸ್ಥಿತಿ ಭಿನ್ನವೇನಿಲ್ಲ. ನಮ್ಮ ರಾಷ್ಟ್ರದಲ್ಲಿ ಬಡತನ ಹೆಚ್ಚುತ್ತಿದೆ. ಬಡತನ ರೇಖೆಗಿಂತ ಕೆಳಗೆ ಇರುವ ಜನರನ್ನು ಆರ್ಥಿಕವಾಗಿ ಬಲಗೊಳಿಸಲು ಸರ್ಕಾರ ಕೆಲಸ ಮಾಡಬೇಕು. ಎರಡು ಹೊತ್ತು ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ಇದೆ ಎಂದು ಹೇಳಿದರು.

ಪಕ್ಷಾಧಾರಿತ ಚುನಾವಣೆ ಅಲ್ಲ

ರಾಷ್ಟ್ರಪತಿ ಚುನಾವಣೆ ಪಕ್ಷಾಧಾರಿತ ಚುನಾವಣೆ ಅಲ್ಲ. ರಾಷ್ಟ್ರಪತಿಗಳು ದೇಶದ ಪ್ರಥಮ ಪ್ರಜೆ. ರಾಷ್ಟ್ರಪತಿ ಅಭ್ಯರ್ಥಿ ಬಿಜೆಪಿಯವರೇ ಇರಬಹುದು. ಆದರೆ, ಅವರು ಗೆದ್ದ ಮೇಲೆ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಮೇಲೆ ಪ್ರಹಾರ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಜಾತ್ಯಾತೀತ ಬಗ್ಗೆ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವರು, ಯಡಿಯೂರಪ್ಪ 2008ರಲ್ಲಿ ಆಪರೇಷನ್ ಕಮಲ ನಡೆಸಿದಾಗ ಯಡಿಯೂರಪ್ಪ ಜತೆ ಸೇರಿ ಏನು ಮಾಡಿದರೆಂಬುದು ನನಗೆ ಗೊತ್ತಿದೆ ಎಂದು ಚಾಟಿ ಬೀಸಿದರು ಮಾಜಿ ಮುಖ್ಯಮಂತ್ರಿಗಳು.

ನಾನು ತಾಜ್ ವೆಸ್ಟ್ ಆಂಡ್ ನಲ್ಲಿ ಇಲ್ಲದೆ ಹೋಗಿದ್ದರೆ ಸರ್ಕಾರ ಉಳಿಯುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆಯಿತು, ಹಾಗೇ ಅಂದುಕೊಳ್ಳೋಣ. ಆದರೆ, ಮಹಾರಾಷ್ಟ್ರದಲ್ಲಿ ಇವರ ಸರಕಾರ ಯಾಕೆ ಹೋಯಿತು? ಅಷ್ಟೂ ಪ್ರಮಾಣದ ಶಾಸಕರು ಏಕೆ ಹೋದರು? ಈ ಬಗ್ಗೆ ಅವರು ಜನರಿಗೆ ಹೇಳಲಿ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ವಾಗ್ದಾಳಿ ನಡೆಸಿದರು.

ನಾನು ಏನು ಅಪರಾಧ ಮಾಡಿದ್ದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನಾನು ಸಿಎಂ ಆಗಿದ್ದಾಗ 19 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೆ. ಈಗ ಅದರ ಸ್ಥಿತಿ ಏನಾಗಿದೆ? ಇದು ಕೊನೆ ಚುನಾವಣೆ ಅಂತಾರೆ ಅವರು. ಈ ಭ್ರಷ್ಟ ಸರಕಾರವನ್ನು ತೆಗೆಯಬೇಕು ಅಂತ ಚುನಾವಣೆ ನಿಲ್ಲುತ್ತೇನೆ ಅಂತ ಹೇಳುತ್ತಾರೆ. ಆದರೆ, ಇಂಥ ಸರಕಾರ ಬರಲು ಯಾರಯ್ಯ ಕಾರಣ? ಎಂದು ಅವರು ಟಾಂಗ್ ಕೊಟ್ಟರು.

ಈ ಭ್ರಷ್ಟಾಚಾರ ವ್ಯವಸ್ಥೆಗೆ ಯಾರು ಕಾರಣ. ಪೊಲೀಸ್ ಹಗರಣದ ಬಗ್ಗೆ ಮಾತಾಡ್ತೀರಾ. ಆದರೆ ಸಿದ್ದರಾಮಯ್ಯ ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಮರೆತು ಹೋಗಿದ್ದೀರಾ?. ಬಿಜೆಪಿ ಮತ್ತು ಕಾಂಗ್ರೆಸ್ ನೀನು ಹೊಡೆದ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡ್ತೀನಿ ಅನ್ನೋ ಹಾಗೆ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಲಾಟರಿ ಹಗರಣದಲ್ಲಿ ಏನು ಮಾಡಿದ್ರಿ. ಯಾರ ಮೇಲೆ ಕ್ರಮ ಆಯಿತು.
ಐಎಎಸ್ ಅಧಿಕಾರಿ ಮನೆಯಲ್ಲಿ 5 ಕೋಟಿ ರೂ. ಸಿಕ್ಕಿತು. ಆ ಅಧಿಕಾರಿಯ ಮೇಲೆ ಏನು ಕ್ರಮ ಜರುಗಿಸಿದಿರಿ, ನಿಮ್ಮ ಕಾಲದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಬ್ರಹ್ಮಾಂಡದ ಭ್ರಷ್ಟಾಚಾರ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಡೆದಿದೆ. ಬೇಕಾದರೆ ಅ ಬಗ್ಗೆ ಚರ್ಚೆ ಮಾಡಬಹುದು ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕರಾದ ಬಂಡೆಪ್ಪ ಕಾಶೆಂಪೂರ್‌, ಮುಖ್ಯ ಸಚೇತಕ ವೆಂಕಟರಾವ್‌ ನಾಡಗೌಡ ಸೇರಿದಂತೆ ಪಕ್ಷದ ಎಲ್ಲ ಶಾಸಕರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ ಗುರುಕುಲ ಶಾಲೆ (Gurukul School) ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ವರ್ಚಸ್ಸನ್ನು ಸಾಬೀತುಪಡಿಸಿದೆ. ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ಮದಿಹಾ ಸಾಧನೆಯ ಶಿಖರದಲ್ಲಿ

ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಮದಿಹಾ ಅವರು ಒಟ್ಟು ಶೇ. 98 ಅಂಕಗಳನ್ನು ಗಳಿಸುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಸಾಧನೆಗೈದಿದ್ದಾರೆ. ಈಕೆಯ ಸಾಧನೆಯು ಸಹಪಾಠಿಗಳಿಗೆ ಮತ್ತು ಕಿರಿಯ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅಲ್ಲದೇ ಕುಶಾಲ್‌ ಶೇ. 97 ದ್ವಿತೀಯ ಹಾಗೂ ಸಮರ್ಥ್‌ 95.5 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಗಮನ ಸೆಳೆದ ಫಲಿತಾಂಶ: ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಿದೆ.

ಡಿಸ್ಟಿಂಕ್ಷನ್ ಸಾಧಕರು: 15 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಥಮ ಶ್ರೇಣಿ: ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉತ್ತಮ ಫಲಿತಾಂಶ: ಉಳಿದ ಎಲ್ಲಾ ವಿದ್ಯಾರ್ಥಿಗಳು ಸಹ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶಾಲೆಯು ನೂರಕ್ಕೆ ನೂರರಷ್ಟು ಫಲಿತಾಂಶದತ್ತ ದಾಪುಗಾಲು ಹಾಕಿದೆ.

ಯಶಸ್ಸಿನ ಹಿಂದಿನ ಶಕ್ತಿ:

ವಿದ್ಯಾರ್ಥಿಗಳ ಈ ಭವ್ಯ ಸಾಧನೆಗೆ ಶಾಲೆಯ ವ್ಯವಸ್ಥಿತ ಮಾರ್ಗದರ್ಶನವೇ ಕಾರಣ ಎಂದು ಆಡಳಿತ ಮಂಡಳಿ ತಿಳಿಸಿದೆ. ಶಾಲಾ ಕಾರ್ಯದರ್ಶಿ ಅಬ್ದುಲ್ ಸರ್ ಅವರ ನಿರಂತರ ಮಾರ್ಗದರ್ಶನ, ಆಡಳಿತ ಮಂಡಳಿಯ ಬೆಂಬಲ, ಮುಖ್ಯೋಪಾಧ್ಯಾಯರ ಸಮರ್ಥ ನಾಯಕತ್ವ ಹಾಗೂ ಶಿಕ್ಷಕ ವೃಂದದವರ ಅವಿರತ ಪರಿಶ್ರಮ ಈ ಯಶಸ್ಸಿಗೆ ಬುನಾದಿಯಾಗಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಶಾಲಾ ಕಾರ್ಯದರ್ಶಿ ಅಬ್ದುಲ್‌, “ವಿದ್ಯಾರ್ಥಿಗಳ ಏಕಾಗ್ರತೆ, ಪೋಷಕರ ಸಹಕಾರ ಮತ್ತು ಶಿಕ್ಷಕರ ಬೋಧನಾ ಶೈಲಿಯಿಂದ ಈ ಮೈಲಿಗಲ್ಲು ಸಾಧ್ಯವಾಗಿದೆ. ಈ ಯಶಸ್ಸು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಉನ್ನತ ಗುರಿಗಳನ್ನು ತಲುಪಲು ಪ್ರೇರಣೆಯಾಗಲಿ,” ಎಂದು ಹಾರೈಸಿದ್ದಾರೆ.
ಶಾಲೆಯ ಈ ಸಾಧನೆಗೆ ಪೋಷಕರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭಕೋರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ

Published

on

ಸುದ್ದಿದಿನ,ದಾವಣಗೆರೆ: ಬಿಜೆಪಿಯು ಪಂಚರಾಜ್ಯಗಳ ಚುನಾವಣೆಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆ ಮಾಡಲು ಹೋಗಿ ಮುಖಭಂಗಕ್ಕೀಡಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕವಿತಾ ಚಂದ್ರಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಹುನ್ನಾರ ದೇಶದ ಜನರ ಮುಂದೆ ಬಯಲಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಮಹಿಳೆಯರ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ಹೇಳುತ್ತಿರುವ ಬಿಜೆಪಿಯು ಮಹಿಳೆಯರ ಭಾವನೆ ಜೊತೆ ಚೆಲ್ಲಾಟ ಆಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳು ಡಿಲಿಮಿಟೇಶನ್ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆಯೇ ವಿನಾಃ ಮಹಿಳಾ ಮೀಸಲಾತಿ ಮಸೂದೆಗಲ್ಲ. ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿದ್ದರೆ 2023 ರ ಕಾನೂನನ್ನು ಜಾರಿಗೆ ತರಬೇಕು.

ನಾರಿ ಶಕ್ತಿ ವಂದನ ಚೌಕಟ್ಟು ಎಂದು ವ್ಯಾಪಕವಾಗಿ ಕರೆಯಲ್ಪಡುವ 2023ರ ಕಾನೂನು, ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯ ಅನುಷ್ಠಾನವನ್ನು ಹೊಸ ಜನಗಣತಿಯನ್ನು ಪೂರ್ಣಗೊಳಿಸಿ ನಂತರ ಡಿಲಿಮಿಟೇಶನ್ ಬಗ್ಗೆ ಚರ್ಚಿಸಿ
ಅನುಷ್ಠಾನಗೊಳಿಸಲಿ. ಅದನ್ನು ಬಿಟ್ಟು ವಿನಾಕಾರಣ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಸೋಲಾಗಿರುವುದು “ಪ್ರಜಾಪ್ರಭುತ್ವದ ಗೆಲುವು. ಭಾರತದ ಒಕ್ಕೂಟ ರಚನೆ ಬದಲಾಯಿಸಲು ಮುಂದಾಗಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪಿತೂರಿಗೆ ತಕ್ಕ ಉತ್ತರ ನೀಡಲಾಗಿದೆ. ಇದು ಸಂವಿಧಾನಕ್ಕೆ ಸಿಕ್ಕ ಗೆಲುವು, ದೇಶಕ್ಕೆ, ವಿರೋಧ ಪಕ್ಷದ ಒಗ್ಗಟ್ಟಿಗೆ ಸಿಕ್ಕ ಗೆಲುವು.

ಉತ್ತರ ಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಸೃಷ್ಟಿಸಿ ಹೇಗಾದರೂ ಅಧಿಕಾರದಲ್ಲಿ ಉಳಿಯಬೇಕೆಂಬ ಬಿಜೆಪಿಯ ಪಿತೂರಿ ಜನರಿಗೆ ಅರ್ಥವಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಡಿಮೆ ಸ್ಥಾನ ಆಗುವ ಆತಂಕ ಇದೆ. ಯಾವುದೇ ರೀತಿಯಲ್ಲಿಯೂ ಚರ್ಚಿಸದೇ ಏಕಾಏಕಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಗೆ ಮುಂದಾಗಿದ್ದೇಕೆ ಎಂದು ಕವಿತಾ ಚಂದ್ರಶೇಖರ್
ಪ್ರಶ್ನಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

Published

on

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು ನನಗೆ ಬಹಳ ಹೆಮ್ಮೆ ತಂದಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಜಿ.ಭರತ್ ಮತ್ತು ಪೋಷಕರನ್ನು ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ವಿದ್ಯಾರ್ಥಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸಂತಸದ ವಿಷಯ. ವಿದ್ಯಾ ಲಕ್ಷ್ಮಿ ಶಾಲೆಯವರು ಬಹಳ ಪ್ರಾಮಾಣಿಕವಾಗಿ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿ ಅವರನ್ನು ಉನ್ನತ ಮಟ್ಟಕ್ಕೆ ತರಲು ಶ್ರಮಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ನಮಗೆ ಮೊದಲ ಆದ್ಯತೆ ದೇಗುಲಗಳಿಗಿಂತ ಶಾಲೆಗಳಿಗೆ ಇರಬೇಕು. ಇಂತಹ ಶಾಲೆಯೆಂಬ ದೇಗುಲದಿಂದ ಹೊರ ಬರುವ ಭರತ್‌ನಂತಹ ಮಕ್ಕಳು ಮುಂದಿನ ದಿನಗಳಲ್ಲಿ ಈ ದೇಶದ ಉನ್ನತ ಅಧಿಕಾರಿಗಳಾಗಿ ಅಥವಾ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending