Connect with us

ಭಾವ ಭೈರಾಗಿ

ಮೋಡ ಹನಿಗೂಡುವ ಮುನ್ನ..!

Published

on

  • ಡಾ. ಸಿದ್ರಾಮ ಕಾರಣಿಕ,ಬರಹಗಾರರು, ಧಾರವಾಡ

ಸಾಹಿತ್ಯ ಎನ್ನುವುದು ಸಮಾಜದ ಪ್ರತಿಬಿಂಬ ಎನ್ನಲಾಗುತ್ತಿದೆ. ಸಮಾಜದಲ್ಲಿ ಕಂಡುಂಡ ಅನುಭವಗಳನ್ನೇ ಒಬ್ಬ ಬರಹಗಾರ ತನ್ನ ಬರಹದಲ್ಲಿ ಒಡಮೂಡಿಸುತ್ತಾನೆ. ರಮ್ಯ ಸಾಹಿತ್ಯದಲ್ಲಿ ಕಾಲ್ಪನಿಕತೆಗೆ ಹೆಚ್ಚು ಒತ್ತು ನೀಡಲಾಗಿದ್ದರೂ ಅಲ್ಲಿಯೂ ಸಮಾಜವನ್ನು ಬಿಟ್ಟು ಬರಹಗಾರ ಬೇರೆ ಏನನ್ನೂ ಬರೆಯಲಾರ.

ಯುವ ಕವಿಗಳ ಕವಿತೆಗಳಲ್ಲಿ ಕಾಲ್ಪನಿಕತೆಗೆ ಹೆಚ್ಚು ಅವಕಾಶ ಇರುವುದನ್ನು ನೋಡಬಹುದು. ವಾಸ್ತವಕ್ಕಿಂತ ಕಲ್ಪನೆಗೆ ಹೆಚ್ಚು ಮೊರೆ ಹೋಗುತ್ತಾರೆ. ಆ ವಯಸ್ಸೇ ಅಂಥದ್ದು. ಯುವಕವಿಗಳ ಮನಸ್ಸಿನಲ್ಲಿ ವಿಶೇಷವಾಗಿ ಪ್ರೀತಿ-ಪ್ರೇಮದ ಕಲ್ಪನೆಗಳು ಹೆಚ್ಚು. ಸಮಾಜದ ಸಮಸ್ಯೆಗಳ ಬಗ್ಗೆ ಅವರ ಗಮನ ಇದ್ದರೂ ಅದು ಅಷ್ಟೊಂದು ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ. ಒಂದು ಸಂಕಲನದಲ್ಲಿ ಕೇವಲ ಒಂದೆರಡು ಕವಿತೆಗಳನ್ನು ಸಮಾಜದ ಕುರಿತಾಗಿ ಇದ್ದು, ಉಳಿದ ಕವಿತೆಗಳು ಪ್ರೀತಿ-ಪ್ರೇಮದ ಉಯ್ಯಾಲೆಯಲ್ಲಿ ತೇಲಾಡುತ್ತ ಇರುತ್ತವೆ.

ದಾವಣಗೆರೆಯ ಷಕೀಬ್ ಕಣದ್ಮನೆ, ನನಗೆ ಗುರುತು-ಪರಿಚಯವಿಲ್ಲದ ಹುಡುಗ. ತನ್ನ ಕವನ ಸಂಕಲನಕ್ಕೆ ಮುನ್ನುಡಿ ಬೇಕೆಂದು ಗೆಳೆಯನ ಮೂಲಕ ಕೇಳಿಕೊಂಡಾಗ ನನಗೆ ಇಲ್ಲವೆನ್ನಲಾಗಲಿಲ್ಲ. ನಾನು ಮೊದಲಿನಿಂದಲೂ ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತ ಬಂದವನು. ಏನಾದರೂ ಬರೆಯಿರಿ ; ಮೊದಲು ಬರೆಯುವುದನ್ನು ರೂಢಿ ಮಾಡಿಕೊಳ್ಳಿ ಎಂದು ಹೇಳುತ್ತ ಬಂದವನು ನಾನು. ಹೀಗಾಗಿ ಸಹಜವಾಗಿಯೇ ಷಕೀಬ್ ಕಣದ್ಮನೆಯವರ ಕವಿತೆಗಳ ಕಟ್ಟನ್ನು ಕೈಗೆ ತೆಗೆದುಕೊಂಡೆ. ಯುವ ಮನಸ್ಸಿನ ಷಕೀಬ್ ಕಣದ್ಮನೆ ತುಂಬ ಉತ್ಸಾಹಿ ಯುವಕ ಎನ್ನುವುದು ಅವರ ಕವಿತೆಗಳ ಓದಿನಿಂದ ತಿಳಿಯಿತು.

ಸಹಜವಾಗಿಯೇ ಇಲ್ಲಿಯ ಬಹುತೇಕ ಕವಿತೆಗಳು ಪ್ರೀತಿ-ಪ್ರೇಮದ ಸುತ್ತಲೇ ಸುತ್ತಿದರೂ ಸಮಾಜದ ವಾಸ್ತವವನ್ನು ಕಂಡುಂಡ ಅನುಭವಗಳೂ ಆದ್ಯತೆ ಪಡೆದುಕೊಂಡಿವೆ. ರೈತ, ಕನ್ನಡತನ, ನಾಡು-ನುಡಿ, ವೀರ ಯೋಧರು, ಭಾರತೀಯತೆ, ಧರ್ಮ ಮೊದಲಾದ ವಿಷಯಗಳ ಮೇಲೂ ಕವಿತೆಗಳು ಪ್ರಸ್ತುತ ಸಂಕಲನದಲ್ಲಿ ಎಡೆ ಪಡೆದುಕೊಂಡಿವೆ. ಆದರೆ ಯಾವುದರ ಬಗ್ಗೆಯೂ ಹುಚ್ಚು ಆವೇಶವಿಲ್ಲ. ಎಲ್ಲವನ್ನೂ ಸಹಜವಾಗಿ ತೆಗೆದುಕೊಳ್ಳುವ ಮನೋಭಾವ ಎದ್ದು ಕಾಣುತ್ತದೆ.

ಅಂದರೆ ಬಂಡಾಯದ ಆಶಯಗಳು ತುಂಬ ವಿರಳ ಎನ್ನಬಹುದು. ನವೋದಯ ಸಂಪ್ರದಾಯದಲ್ಲಿ ಇಲ್ಲಿಯ ಕವಿತೆಗಳು ಸ್ಥಾನ ಪಡೆದುಕೊಂಡಿವೆ.
ಧರ್ಮ ಧರ್ಮವೆಂದು ಹೊಡೆದಾಡುವರು
ಧರ್ಮದ ತತ್ವ ತಿಳಿಯದವರು
ಧರ್ಮದ ಸಾರವನ್ನು ಸಾರಿದರು
ಧರ್ಮವನ್ನು ಸ್ಥಾಪಿಸಿದವರು” (ಮೋಹ-ದಾಹ)
ಎನ್ನುವ ಮೂಲಕ ಭಾರತ ದೇಶದಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷದ ವಾತಾವರಣ ಕಂಡುಬರುವುದನ್ನು ಗುರುತಿಸಿರುವ ಕವಿ ಧರ್ಮದ ಬಗ್ಗೆ ಹೊಡೆದಾಡುವುದು ವ್ಯರ್ಥ ಎಂಬ ಭಾವವನ್ನು ಹೊರ ಹಾಕುತ್ತಾರೆ.

ಬುದ್ಧ, ಬಸವಣ್ಣನ ನಾಡಿನಲ್ಲಿ ಈ ರೀತಿಯ ಹಿಂಸಾಚಾರ ಸರಿಯಲ್ಲ ಎನ್ನುವುದು ಕವಿಯ ಆಶಯವಾಗಿದೆ. ಯಾಕೆಂದರೆ ಭಾರತವೆಂದರೆ ಸಾಮರಸ್ಯದ ನಾಡೆಂದು ಹೆಸರು ಪಡೆದುಕೊಂಡಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಪುಣ್ಯಸ್ಥಳವಾಗಿದೆ ಎಂದು ಹೇಳಲಾಗುತ್ತದೆ.

ಪ್ರೀತಿ ವಿಶ್ವಾಸಕ್ಕೆ ಪ್ರಾಣ ಕೊಡುವವರಿದ್ದಾರಿಂದು
ತಿಳಿಯಿರೆಲ್ಲರೂ ಭಾರತ ಹೃದಯವಂತರ ನಾಡೆಂದು
ಹೆಮ್ಮೆಯಿಂದ ಹೇಳುವೆ ನಾ
ಹಿಂದೂಸ್ಥಾನಿನ ಕಂದನೆಂದುು” (ಹಿಂದೂಸ್ಥಾನಿನ ಕಂದ)ಎನ್ನುವ ಮೂಲಕ ಭಾರತದ ಪರಂಪರೆ ಎಂಥದ್ದು ಎಂಬ ಪರಿಚಯವನ್ನು ಇಲ್ಲಿ ಕವಿಮನ ನೆನೆದಿದೆ.

ದಯಮಾಡಿ ನೀ ಒಪ್ಪು
ಒಬ್ಬ ದೇಶಪ್ರೇಮಿ ಟಿಪ್ಪು
ಮತಾಂಧನೆದು ಮಾಡಬೇಡಿ ತಪ್ಪು
ಮೈಸೂರಿನ ಸುಲ್ತಾನ
ಬ್ರಿಟಿಷರಿಗೆ ಸೈತಾನ “(ಕರುನಾಡಿನ ವೀರ)
ಎಂದುಕೊಳ್ಳುತ್ತ ಎಲ್ಲವನ್ನು ಸಮರಸದಿಂದ ನೋಡುವ ಕವಿ ಇಲ್ಲಿ ಟಿಪ್ಪು ಸುಲ್ತಾನನನ್ನೂ ನೆನಪಿಸಿಕೊಂಡಿದ್ದಾರೆ. ಟಿಪ್ಪುವನ್ನು ಕೆಲವರು ಮತಾಂಧನೆಂದು ಹೇಳುತ್ತಾರೆ. ಆದರೆ ಟಿಪ್ಪು ನಿಜವಾಗಿಯೂ ದೇಶಪ್ರೇಮಿ ಎನ್ನುವ ಭಾವ ಇಲ್ಲಿ ಕಂಡುಬರುತ್ತದೆ ; ಇದು ನಿಜವೂ ಹೌದು.

“ಬುದ್ಧಿಜೀವಿಗಳೇ ಬುದ್ಧಿಗೇಡಿತನ ತೋರುವಾಗ
ಮೌಢ್ಯ ಮಾರಕ ಅರಿಯದಾಗಿದೆ
ಹುಳುಕು ಕೊಳಕು ಕೊಚ್ಚೆ ಮನಗಳ
ಮನುಜರಾಗಿ ಮನುಷ್ಯತ್ವ ಸಾರಿ
ಜಾತಿಮತದ ಗೀಳು ಮರೆತು
ದಯಮಾಡಿ ಬಾಳಲು ಬಿಡಿ ಎಲ್ಲರೊಳಗೊಂದಾಗಿ” (ಹೀಗೇಕೆ…?) ಅಂದರೆ ಕೆಲವು ಬುದ್ಧಿಜೀವಿಗಳು ಎನಿಸಿಕೊಂಡವರು ಜಾತಿಮತದ ಹೆಸರಿನಲ್ಲಿ ಕೆಸರೆರಚಾಟ ನಡೆಸುತ್ತಿದ್ದು ; ಇದು ಸಲ್ಲದು. ನಾವೆಲ್ಲರೂ ಒಂದು, ಮನುಷ್ಯತ್ವದ ಮನುಜರಾಗೋಣ ಎನ್ನುವ ಮೂಲಕ ಕವಿ ಮನ ಇಲ್ಲಿ ಸಾಮರಸ್ಯದ ಬದುಕಿಗೆ ಹಾರೈಸಿದೆ.

ಪ್ರೀತಿ-ಪ್ರೇಮದ ಬಗ್ಗೆಯೂ ಕವಿ ಹೆಚ್ಚಿನ ಆಸ್ಥೆಯನ್ನು ಹೊಂದಿದ್ದಾರೆ. ತಾನು ಪ್ರೀತಿಸುವ ಹುಡುಗಿ ಎಂಥವಳೆಂದು ಹೇಳುತ್ತ,
“ಮುತ್ತಿನಂಥ ನಮ್ ಕನ್ನಡಾನೇ ಮಾತಾಡ್ತಾಳೆ
ಬಣ್ಣಲಿ ಸ್ವಲ್ಪ ಕಪ್ಪು ಆದ್ರ ಮನ್ಸಲ್ಲಿ ಮಾತಲ್ಲಿ ಗುಣದಲ್ಲಿ ಬೆಳ್ಳಿ
ಇವಳೇ ನನ್ನ ಹೃದಯ ಕದ್ದ ಕಳ್ಳಿ
ಕನಸಲ್ಲಿ ಬಂದೋದಾಗ ನಾಗವಲ್ಲಿ
ಕಣ್ಮುಂದೆ ಕಂಡಾಗ ಮಿಂಚುಳ್ಳಿ “( ಮಿಂಚುಳ್ಳಿ )
ಎನ್ನುವ ಮೂಲಕ ತಮ್ಮ ಕನಸಿನ ರಾಣಿಯನ್ನು ವರ್ಣಿಸುತ್ತಾರೆ. ಇದ್ದುದ್ದನ್ನು ಇದ್ದಂತೆ ಹೇಳುವ ಈ ಪರಿ ನಿಜಕ್ಕೂ ಶ್ಲಾಘನೀಯ. ಅವರು ಪ್ರೀತಿಸಿದ ಹುಡುಗಿ ಅವರಿಗೆ ದೊರೆಯಲಿ ಎಂದು ಹಾರೈಸುವೆ. ಯಾಕೆಂದರೆ ಕವಿ ಆಕೆಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ.

“ಹ್ಯಾಂಗ ಮರೆಯಲಿ ಗೆಳತಿ
ನಿನ್ನ ನಾ ಹ್ಯಾಂಗ ಮರೆಯಲಿ
ಕುಂತರೂ ನಿಂದೆ ನೆನಪು
ನಿಂತರೂ ನಿಂದೆ ನೆನಪು
ನನ್ನ ಮನಸೂರೆ ಮಾಡಿತು
ಆ ನಿನ್ನ ಕಣ್ಣ ಹೊಳಪು
ಹ್ಯಾಂಗ ಮರೆಯಲಿ ಗೆಳತಿ
ನಿನ್ನ ನಾ ಹ್ಯಾಂಗ ಮರೆಯಲಿ”ಎಂದು ಕವಿ ಅಲವತ್ತುಕೊಂಡಿದ್ದಾರೆ.

ಆದರೆ ತನಗೆ ಕವಿತೆ ಬರೆಯಲು ಪ್ರೇರಣೆ ನೀಡಿದ್ದು ಮಾತ್ರ ತನ್ನ ತಂಗಿಯೇ ಎಂಬುದನ್ನು ಕವಿ ಇಲ್ಲಿ ಸ್ಪಷ್ಟಪಡಿಸುತ್ತಾರೆ. ಕಾವ್ಯ ರಚಿಸು ಎಂದು ಹೇಳಿ,

ನಾ ಕವಿಯಾಗಲು ಸ್ಫೂರ್ತಿಯಾದವಳು
ಇಂಪಾದ ಸಂಗೀತಕ್ಕೆ ಶೃತಿಯಾದವಳು
ಚಂದ್ರನ ಬೆಳದಿಂಗಳಂತೆ ಮಿಂಚುವಳಿವಳು
ಅವಳೇ ನನ್ನ ಪ್ರೀತಿಯ ತಂಗಿ ತಂಜುಮ್” (ತಂಜುಮ್) ಎನ್ನುವ ಮೂಲಕ ತನ್ನ ತಂಗಿ ತಂಜುಮ್‌ಳೇ ತನ್ನ ಕಾವ್ಯ ಬರವಣಿಗೆಗೆ ಸ್ಫೂರ್ತಿ ಎಂದು ಕವಿ ಹೇಳಿಕೊಂಡಿದ್ದಾರೆ. ಹೀಗೆ ಕವಿ ತನ್ನ ಮನದಾಳವನ್ನು ಬೇರೆ ಬೇರೆ ಭಾವಗಳಲ್ಲಿ ಕವಿತೆಯಾಗಿಸಿ ಈ ಸಂಕಲನವನ್ನು ಹೊರತರುತ್ತಿದ್ದಾರೆ. ಇಲ್ಲಿರುವ ಹಲವಾರು ಕವಿತೆಗಳು ಭಿನ್ನ ಭಿನ್ನ ನಿಲುವಿನಲ್ಲಿ ಮೂಡಿನಿಂತಿವೆ.

ಜ್ಞಾನಪೀಠಗಳ ಹೃದಯ, ಸೈನಿಕರಿಗೆ ನಮನ, ಭಾರತೀಯ, ಬರ, ಅನ್ನದಾತರಿಗೊಂದು ಸಲಾಂ, ಕಲಿಕೆಗೆ ಕೊನೆ ಇಲ್ಲ, ಕಡಕ್ ನೈನ್ ಟೀ, ಮುಗ್ಧ ಮನಸು, ನನ್ನೂರು ನವಿಲೂರು, ಮಮತೆಯ ಮಡಿಲು, ಬೆತ್ತಲು, ಕೊನೆ ನಿರ್ಣಯ, ಮೌನ ರಾಗ ಮೊದಲಾದ ಕವಿತೆಗಳು ಗಮನ ಸೆಳೆಯುತ್ತವೆ.

ಉದಯೋನ್ಮುಖ ಕವಿಯಾಗಿ ಹೊರಹೊಮ್ಮುತ್ತಿರುವ ಷಕೀಬ್ ಕಣದ್ಮನೆ ಇನ್ನೂ ಹೆಚ್ಚು ಹೆಚ್ಚು ಓದಿನ ಮೂಲಕ ವಾಸ್ತವವನ್ನು ಗ್ರಹಿಸಿ ಇನ್ನೂ ಹೆಚ್ಚೆಚ್ಚು ಕವಿತೆಗಳನ್ನು ರಚಿಸಲಿ, ಪದಗಳ ಲಾಲಿತ್ಯವನ್ನು ಮೈಗೂಡಿಸಿಕೊಂಡು ಒಳ್ಳೆಯ ಕವಿಯಾಗಲಿ, ಕನ್ನಡ ಸಾಹಿತ್ಯ ಲೋಕದಲ್ಲಿ ಅವರ ಹೆಸರು ಮುನ್ನೆಲೆಗೆ ಬರಲಿ ಎಂದು ಹಾರೈಸುತ್ತೇನೆ.

(ಷಕೀಬ್ ಎಸ್.ಕಣದಮನೆ ನವಿಲೇಹಾಳ್ ಅವರ ‘ಮೋಹದ ಮೋಡಗಳು‘ ಕವನಸಂಕಲನದ ಮುನ್ನುಡಿ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮಣ್ಣ ಮಕ್ಕಳು

Published

on

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
  • ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ

ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.

ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.

ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

Published

on


ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.

ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.

  • ಬಸವರಾಜ ಹೂಗಾರ

ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.

ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.

  • ಡಾ.ರಹಮತ್ ತರೀಕೆರೆ

ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.

  • ಬಿ.ಶ್ರೀನಿವಾಸ,ಕೃತಿ ಲೇಖಕ

ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.

ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.

“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.

ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.

ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.

ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ

  • ಡಾ.ರಾಮಚಂದ್ರ ಹಂಸನೂರು, ಬೆಟಗೇರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending