Connect with us

ದಿನದ ಸುದ್ದಿ

ನಿರ್ಭಯಾ ನೆನಪಾಗಿಯೇ ಉಳಿಯುವುದೇಕೆ..?

Published

on

  • ನಾ ದಿವಾಕರ

ತ್ತರ ಪ್ರದೇಶದ ಹಥ್ರಾಸ್ ಎಂಬ ಕುಗ್ರಾಮದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಮತ್ತೊಮ್ಮೆ ಹೆಣ್ತನದ ಘನತೆ, ರಕ್ಷಣೆ ಮತ್ತು ಗೌರವದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಹಥ್ರಾಸ್ ಘಟನೆ ನಡೆದು ಒಂದು ತಿಂಗಳು ಕಳೆದಿದೆ. ದೇಶಾದ್ಯಂತ ಪ್ರತಿರೋಧದ ದನಿಗಳು ಇನ್ನೂ ಕೇಳಿಬರುತ್ತಿವೆ. ಆರೋಪಿಗಳಿಗೆ ಶಿಕ್ಷೆಯಾಗುವುದೋ ಇಲ್ಲವೋ ಎನ್ನುವ ಪ್ರಶ್ನೆಯೂ ಕಾಡತೊಡಗಿದೆ.

ಏಕೆಂದರೆ ಸಿಬಿಐ ಎಂಬ ಸೂತ್ರದ ಗೊಂಬೆ ತನಿಖೆಯನ್ನು ಕೈಗೆತ್ತಿಕೊಂಡಿದೆ. ಭಾರತದ ಸಾರ್ವಭೌಮ ಪ್ರಜೆಗಳು ಸಾಂವಿಧಾನಿಕ ಸಂಸ್ಥೆಗಳಲ್ಲಿ ಮತ್ತು ಪ್ರಭುತ್ವದ ನ್ಯಾಯ ನಿರ್ವಹಣೆಯಲ್ಲಿ ವಿಶ್ವಾಸ ಕಳೆದುಕೊಳ್ಳಲು ಇನ್ನೇನೂ ಉಳಿದಿಲ್ಲ ಎನ್ನುವುದನ್ನು ಬಾಬ್ರಿ ಮಸೀದಿಯ ಧ್ವಂಸವನ್ನು ಕುರಿತ ತೀರ್ಪು ನಿರೂಪಿಸಿದೆ.

70 ವರ್ಷಗಳ ಭಾರತ ಆರು ವರ್ಷಗಳಲ್ಲಿ ಬದಲಾಗಿದೆ ಎಂದು ಹೇಳುವುದೇ ಆದರೆ, ಸಾಂವಿಧಾನಿಕ ಮೌಲ್ಯಗಳ ಮತ್ತು ಸಾಂಸ್ಥಿಕ ಅಧಃಪತನದ ವಿಚಾರದಲ್ಲಿ ನಿರ್ವಿವಾದವಾಗಿ ಒಪ್ಪಿಬಿಡಬಹುದು. ಅತ್ಯಾಚಾರ ನಮ್ಮ ಸಂಸ್ಕೃತಿಯ ಒಂದು ಭಾಗ ಎನ್ನುವ ಸಂಸದರು ನಮ್ಮ ನಡುವೆ ಇದ್ದಾರೆ, ಅತ್ಯಾಚಾರ ನಡೆದರೆ ಸುಖ ಪಡಬೇಕು ಎನ್ನುವ ಪಕ್ಷದ ಮಹಿಳಾ ವಕ್ತಾರರೂ ಇದ್ದಾರೆ.

ಸಾವು ಮತ್ತು ದೌರ್ಜನ್ಯಗಳನ್ನು ರಾಜಕೀಯ ಮೇಲು-ಕೀಳು ಪುಂಡಾಟಕ್ಕೆ ಬಳಸಿಕೊಳ್ಳುವ ರಾಜಕೀಯ ನಾಯಕರೂ ನಮ್ಮ ನಡುವೆ ಇದ್ದಾರೆ. ಸಾವಿಗೆ ಬೆಲೆ ಇಲ್ಲದ, ಜೀವಕ್ಕೆ ಮೌಲ್ಯವಿಲ್ಲದ ಒಂದು ದೇಶದಲ್ಲಿ ನಾವು ಬದುಕುತ್ತಿದ್ದೇವೆ, ನಿಜ, ಆದರೆ ಸಾವು ಎನ್ನುವುದು ಸಹಜೀವಿಗಳನ್ನು ಕಳೆದುಕೊಂಡವರನ್ನು ಜೀವಮಾನವಿಡೀ ಬಾಧಿಸುವ ಒಂದು ವಿದ್ಯಮಾನ ಎನ್ನುವ ಕನಿಷ್ಟ ಮಾನವೀಯ ಪ್ರಜ್ಞೆ ಮತ್ತು ಸಂವೇದನೆ ಆಡಳಿತ ವ್ಯವಸ್ಥೆಗೆ, ನಾಗರಿಕ ಸಮಾಜಕ್ಕೆ ಇರಬೇಕಲ್ಲವೇ ?

ಈ ಸಂವೇದನೆಯನ್ನು ಕಳೆದುಕೊಂಡಿರುವ ಸಮಾಜೋ-ರಾಜಕೀಯ ವ್ಯವಸ್ಥೆಯಲ್ಲಿ ಭಾರತ ಬದುಕುತ್ತಿದೆ. ಹಾಗೆಂದ ಮಾತ್ರಕ್ಕೆ ಈ ಮೊದಲು ಭಾರತದ ಆಳುವ ವರ್ಗಗಳಲ್ಲಿ ಸಂವೇದನೆ ಮತ್ತು ಮಾನವೀಯ ಪ್ರಜ್ಞೆ ಸದಾ ಜಾಗೃತವಾಗಿತ್ತು ಎಂದರ್ಥವಲ್ಲ. ಇದು ಕೇವಲ ಐದಾರು ವರ್ಷಗಳ ಬೆಳವಣಿಗೆಯೂ ಅಲ್ಲ. ಇಂದು ಅಧಿಕಾರಸ್ಥರ ದಿವ್ಯ ಮೌನದ ಹಿಂದೆ ನಮಗೆ ಕಾಣುತ್ತಿರುವ ಕ್ರೌರ್ಯ ಹಿಂದೆಯೂ ಕಂಡಿದೆ. ಇನ್ನು ಮುಂದೆಯೂ ಕಾಣುತ್ತದೆ.

ಏಕೆಂದರೆ ಈ ಮೌನದ ಹಿಂದೆ ಮೇಲರಿಮೆಯ ಅಹಮಿಕೆ ಇರುವಷ್ಟೇ ಪ್ರಮಾಣದಲ್ಲಿ ಕೀಳರಿಮೆಯ ತಾರತಮ್ಯವೂ ಅಡಗಿದೆ. ಸಾವು ಎಲ್ಲರಿಗೂ ಪೂರ್ವನಿರ್ಧರಿತವೇ ಆಗಿದ್ದರೂ ಭಾರತದಲ್ಲಿ ಇದಕ್ಕೆ ಸಾಮುದಾಯಿಕ ಸ್ಪರ್ಶ ಇದೆ. ಅಸಹಜ ಸಾವುಗಳು ಈ ಸಾಮುದಾಯಿಕ ಅಸ್ಮಿತೆಗಳನ್ನಾಧರಿಸಿ ಮಾನ್ಯತೆ, ಸ್ವೀಕೃತಿ, ಸಾಂತ್ವನ ಮತ್ತು ಶ್ರದ್ಧಾಂಜಲಿಗಳಿಗೆ ಅರ್ಹತೆ ಪಡೆಯುತ್ತವೆ. ಈ ಪರಂಪರೆಗೆ ಬಹಿರಂಗ ಮೌಖಿಕ ಅಭಿವ್ಯಕ್ತಿಯನ್ನು ಕಳೆದ ಆರು ವರ್ಷಗಳಿಂದ ಕಾಣುತ್ತಿದ್ದೇವೆ. ಹಾಗಾಗಿಯೇ ಹಥ್ರಾಸ್ ಘಟನೆಗೆ ಪ್ರಧಾನಮಂತ್ರಿ ಏಕೆ ಪ್ರತಿಕ್ರಯಿಸಬೇಕು ಎಂದು ಕೇಳುವ ಸಂವೇದನೆಯಿಲ್ಲದ ಸಂಸದರೂ ನಮ್ಮ ನಡುವೆ ಇದ್ದಾರೆ.

ಶಿಕ್ಷಕರು ಸಾಯ್ತಾರೆ ಅಂತ ಶಾಲೆ ಮುಚ್ಚೋಕಾಗುತ್ಯೇ ಎಂದು ಕೇಳುವ ರಾಜ್ಯ ಸಚಿವರೂ ನಮ್ಮ ನಡುವೆ ಇದ್ದಾರೆ. ಸತ್ರೆ ಸಾಯ್ತಾರೆ ನಾವೇನ್ಮಾಡೋಕಾಗುತ್ತೆ ಎಂದ ಸಂಸದರೊಬ್ಬರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಈ ಅಸೂಕ್ಷ್ಮತೆಗಳ ನಡುವೆಯೇ ಒಂದು ಆಡಳಿತ ವ್ಯವಸ್ಥೆ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುತ್ತಿದೆ. ಹಥ್ರಾಸ್ ಘಟನೆಯನ್ನು ಕುರಿತು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ಈ ಅಸೂಕ್ಷ್ಮತೆ ಎಷ್ಟು ಆಳವಾಗಿ ಬೇರೂರಿದೆ ಎನ್ನುವುದನ್ನು ಗ್ರಹಿಸಬಹುದು.

ಈ ಜನ ನಾಯಕರಿಗೆ ಮನುಜ ಜೀವಗಳು ಲಿಂಗ ಭೇದಗಳ ನೆಲೆಯಲ್ಲಿ, ಜಾತಿ ಭೇದಗಳ ನೆಲೆಯಲ್ಲಿ ಮತ್ತು ಮತ ಭೇದಗಳ ನೆಲೆಯಲ್ಲಿ ಕಾಣುತ್ತವೆ. ರಾಜಧಾನಿ ದೆಹಲಿಯಿಂದ ಕೇವಲ 200 ಕಿಲೋಮೀಟರ್ ದೂರದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಈ ದೇಶದ ಪ್ರಧಾನಮಂತ್ರಿಯ ಹೃದಯವನ್ನು ತಟ್ಟುವುದೇ ಇಲ್ಲ. ಗೃಹ ಸಚಿವರು ಕಾಣೆಯಾಗಿರುವುದರಿಂದ ಏನೂ ಹೇಳಲಾಗುವುದಿಲ್ಲ.

ಇರಲಿ, ಇದು ರಾಜಕೀಯ ವಿಕೃತಿಯ ಪರ್ವಕಾಲ. ಸಾವಿರಾರು ಅಮಾಯಕರ ಮಾರಣ ಹೋಮ ನಡೆದಾಗಲೂ ನಮ್ಮ ದೇಶ ಹೀಗೆಯೇ ಇದ್ದಿತಲ್ಲವೇ ? ವಿಕೃತ ರಾಜಕೀಯ ಪ್ರಜ್ಞೆ ಭಾರತದ ಪ್ರಜ್ಞಾವಂತ ಮನಸುಗಳನ್ನು ಎಷ್ಟು ಕೆಡಿಸಿದೆ ಎನ್ನುವುದು ನಮ್ಮ ಮುಂದಿನ ಗಹನವಾದ ವಿಚಾರ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯಗಳು ನಿತ್ಯ ಬದುಕಿನ ವಿದ್ಯಮಾನಗಳೇನೋ ಎನ್ನುವಂತೆ ವರ್ತಿಸುವ ಒಂದು ಬೃಹತ್ ಸಮುದಾಯದ ನಡುವೆ ನಾವು ಬದುಕುತ್ತಿದ್ದೇವೆ.

ಈ ಸಮುದಾಯ ಸುಶಿಕ್ಷಿತವಾಗಿದೆ, ಹಿತವಲಯದಲ್ಲಿದೆ ಮತ್ತು ಸುರಕ್ಷಿತವಾಗಿದೆ ಎಂದು ಹೇಳಬೇಕಿಲ್ಲ. ಒಂದು ಅತ್ಯಾಚಾರದ ಘಟನೆಗೆ ಇಡೀ ದೇಶವೇ ಭುಗಿಲೇಳುವುದಿಲ್ಲ ಆದರೆ ಸಾಮಾಜಿಕ ವಲಯದಲ್ಲಿ ಇಂತಹ ಘಟನೆಗಳು ಕೊಂಚವಾದರೂ ಪ್ರಕ್ಷುಬ್ಧತೆಯನ್ನು ಉಂಟುಮಾಡಬೇಕಲ್ಲವೇ ?

ಈ ನಿರ್ಲಜ್ಜತೆಯ ನಡುವೆಯೇ ಭಾರತದ ಮಹಿಳೆಯರು ತಮ್ಮ ಹೆಣ್ತನದ ರಕ್ಷಣೆಗಾಗಿ, ಸ್ವಾಭಿಮಾನದ ಸಂರಕ್ಷಣೆಗಾಗಿ, ಸಮಾನತೆ, ಘನತೆ ಮತ್ತು ಗೌರವಕ್ಕಾಗಿ ದಿನನಿತ್ಯ ಹೋರಾಡಬೇಕಿದೆ. ಅತ್ಯಾಚಾರ ನಡೆದ ಕೂಡಲೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎನ್ನುವ ದನಿಗಳು ಮುಗಿಲು ಮುಟ್ಟುತ್ತವೆ. ಆದರೆ ಗಲ್ಲಿಗೇರಿಸಲು ಕಾನೂನು ಪ್ರಕ್ರಿಯೆ ಶೀಘ್ರವಾಗಿ ನಡೆಯಬೇಕು. ನ್ಯಾಯವ್ಯವಸ್ಥೆಯಲ್ಲಿನ ಲೋಪಗಳು ಸರಿಹೋಗಬೇಕು.

ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳು ಜಾರಿಯಾಗಬೇಕು. ಸಿಬಿಐನಂತಹ ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಪಡೆಯಬೇಕು. ಸರ್ಕಾರಗಳೇ ನೇಮಿಸುವ ವಿಶೇಷ ತನಿಖಾ ದಳ (ಎಸ್ ಐ ಟಿ) ನಿಷ್ಪಕ್ಷಪಾತವಾಗಬೇಕು. ರಾಜಕೀಯ ಹಸ್ತಕ್ಷೇಪಕ್ಕೆ ಅಂತ್ಯ ಹಾಡಬೇಕು. ಈ ಎಲ್ಲ ಆಡಳಿತ ಸುಧಾರಣೆಗಳನ್ನು ತರಲು ನಮ್ಮ ಜನಪ್ರತಿನಿಧಿಗಳಿಗೆ ಮೂಲತಃ ಮಾನವೀಯ ಪ್ರಜ್ಞೆ ಮತ್ತು ಸಂವೇದನೆ ಇರಬೇಕು. ಇಲ್ಲವಲ್ಲಾ !

ದುರಂತ ಎಂದರೆ ಜನಪ್ರತಿನಿಧಿಗಳು ಹೊಲಸು ಮಾತುಗಳ ಸರದಾರರಾಗಿದ್ದಾರೆ. ಹಥ್ರಾಸ್ ಘಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ವರ್ತನೆಯನ್ನು ಹೈಕೋರ್ಟ್ ಪ್ರಶ್ನಿಸಿರುವುದೇ ಅಲ್ಲದೆ ಕಟುವಾಗಿ ಟೀಕಿಸಿದೆ. ಆದರೆ ಭಾರತದ ನಾಗರಿಕ ಸಮಾಜದ ಪ್ರಜ್ಞೆ ಇದರಿಂದ ಕೊಂಚವೂ ವಿಚಲಿತವಾಗಿಲ್ಲ. ಪಕ್ಷ ರಾಜಕಾರಣ ಮತ್ತು ಇದರಿಂದ ಪ್ರಭಾವಿತವಾಗುವ ಅಸ್ಮಿತೆಯ ರಾಜಕಾರಣ ಭಾರತದ ಪ್ರಜ್ಞಾವಂತ ಸಮುದಾಯವನ್ನು ನಿಷ್ಕ್ರಿಯಗೊಳಿಸಿರುವುದನ್ನು ಕಳೆದ ಎರಡು ದಶಕಗಳಲ್ಲಿ ಕಂಡಿದ್ದೇವೆ.

1984ರ ಸಿಖ್ ಹತ್ಯಾಕಾಂಡ ಮತ್ತು 1980-90ರ ದಶಕದ ರಥಯಾತ್ರೆ ಮತ್ತು ಕೋಮು ಗಲಭೆಗಳಲ್ಲಿ ಮಡಿದ ಸಾವಿರಾರು ಜೀವಗಳಿಗೆ ನ್ಯಾಯ ಒದಗಿಸಲು ನಮ್ಮ ನ್ಯಾಯ ವ್ಯವಸ್ಥೆಗೆ ಸಾಧ್ಯವಾಗಿಲ್ಲ. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಬಲಿಯಾದ ಜೀವಗಳನ್ನು ನಾವು ಮರೆತೇ ಹೋಗಿದ್ದೇವೆ. ಇದನ್ನು ಪ್ರಸ್ತಾಪಿಸಿದ ಕೂಡಲೇ ಕಾಶ್ಮೀರ ಮತ್ತು ಪಂಡಿತರ ಪ್ರಶ್ನೆ ಧುತ್ತೆಂದು ಎದುರಾಗುತ್ತದೆ. ಪಂಡಿತರಿಗೆ ಮಿಡಿಯುವ ಮನಸುಗಳು, ಕಾಶ್ಮೀರದಲ್ಲಿ ಒಂದೆಡೆ ಉಗ್ರಗಾಮಿಗಳ ಗುಂಡಿಗೆ ಮತ್ತೊಂದೆಡೆ ಸೇನೆಯ ಗುಂಡಿಗೆ ಬಲಿಯಾದ ಲಕ್ಷಾಂತರ ಅಮಾಯಕ ಕಾಶ್ಮೀರಿಗಳಿಗೆ ಮಿಡಿಯುವುದಿಲ್ಲ. ಅಲ್ಲಿ ಮತ್ತೆ ಅಸ್ಮಿತೆ ಮತ್ತು ರಾಜಕಾರಣ ಅಡ್ಡಿಯಾಗುತ್ತದೆ.

ಅಸಹಜ ಸಾವುಗಳಿಂದ ವಿಚಲಿತರಾಗದ ಮನಸ್ಥಿತಿಯನ್ನು ಭಾರತ ರೂಢಿಸಿಕೊಂಡು ವರುಷಗಳೇ ಕಳೆದಿವೆ. ಸತ್ತವರು ನಮ್ಮವರೋ ಅನ್ಯರೋ ಎಂದು ಶವಗಳನ್ನು ವಿಂಗಡಿಸುವ ಪರಂಪರೆಯನ್ನು ಈ ದೇಶದ ಸಾಂಸ್ಕೃತಿಕ ರಾಜಕಾರಣ ವ್ಯವಸ್ಥಿತವಾಗಿ ಬೆಳೆಸಿಕೊಂಡುಬಂದಿದೆ. ರಾಶಿರಾಶಿ ಶವಗಳಲ್ಲೂ ಹೆಕ್ಕಿ ತೆಗೆಯುವ ವಿಕೃತ ಪರಂಪರೆಯೂ ಇಲ್ಲಿ ನೆಲೆಯೂರಿದೆ.

ಈ ಪರಂಪರೆಗೆ ಜನಸಾಮಾನ್ಯರು ಬಲಿಯಾಗಿರುವುದೇ ಅಲ್ಲದೆ ಸಾಂವಿಧಾನಿಕ ಸಂಸ್ಥೆಗಳೂ ಬಲಿಯಾಗಿರುವುದನ್ನು ಇತ್ತೀಚಿನ ಬಾಬ್ರಿ ಮಸೀದಿ ಧ್ವಂಸದ ತೀರ್ಪಿನಲ್ಲಿ ಕಾಣಬಹುದು. ಇಡೀ ದೇಶವೇ ಗಮನಿಸಿದಂತೆ ಲಕ್ಷಾಂತರ ಯುವಕರನ್ನು ಪ್ರಚೋದಿಸಿ ಉರುಳಿಸಲಾದ 400 ವರ್ಷಗಳ ಒಂದು ಸ್ಥಾವರ ತಂತಾನೇ ಕುಸಿದಿದೆ, ಅದೊಂದು ಅಪಘಾತ ಎಂದು ಬಣ್ಣಿಸುವ ನ್ಯಾಯಾಂಗ, ಈ ಕುಸಿದ ಸ್ಥಾವರದ ಅವಶೇಷಗಳಡಿ ಸಿಲುಕಿರುವ ನೂರಾರು ಮೃತ ಜೀವಗಳಿಗೆ ನ್ಯಾಯ ಒದಗಿಸಲು ಸಾಧ್ಯವೇ ?

ಇಂತಹ ಒಂದು ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದ ಹೆಣ್ಣು ಮಗಳಿಗೆ ನ್ಯಾಯ ದೊರೆಯುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ ? ಅಪರಾಧಿಗಳ ರಕ್ಷಣೆಗಾಗಿ ಪ್ರತ್ಯಕ್ಷ ಸಾಕ್ಷಿಗಳನ್ನು ಎನ್ಕೌಂಟರ್ ಮೂಲಕ ಇಲ್ಲವಾಗಿಸುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಒಂದು ಷಡ್ಯಂತ್ರಕ್ಕೆ ಈಗ ವ್ಯವಸ್ಥಿತ ಚೌಕಟ್ಟನ್ನು ನಿರ್ಮಿಸಲಾಗಿರುವುದನ್ನೂ ಕಾಣುತ್ತಿದ್ದೇವೆ.

ಹಥ್ರಾಸ್‍ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ಮೃತ ದೇಹವನ್ನು ಪೊಲೀಸರೇ ಸುಟ್ಟುಹಾಕಿರುವುದು ಈ ವಿದ್ಯಮಾನದ ಒಂದು ಆಯಾಮವಷ್ಟೇ. ಇದೆರ ವಿರಾಟ್ ಸ್ವರೂಪವನ್ನು 2002ರ ಗುಜರಾತ್ ಹತ್ಯಾಕಾಂಡದ ನಂತರ ಕಂಡಿದ್ದೇವೆ. ಬೆಲ್ಚಿಯಿಂದ ಕಂಬಾಲಪಲ್ಲಿ, ಊನ ಘಟನೆಗಳವರೆಗೆ ಕಂಡಿದ್ದೇವೆ. ಸ್ವತಂತ್ರ ಭಾರತದಲ್ಲಿ ಸಂಭವಿಸಿದ ಸಾಮೂಹಿಕ ಹತ್ಯಾಕಾಂಡಗಳಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ ಎನ್ನುವುದನ್ನು ನೆಲ್ಲಿ ಹತ್ಯಾಕಾಂಡದಿಂದ ಗುಜರಾತ್ ಹತ್ಯಾಕಾಂಡದವರೆಗೂ ಕಂಡಿದ್ದೇವೆ. ಇಲ್ಲಿಯೂ ನಮ್ಮ ಪ್ರಜ್ಞೆ ಪಕ್ಷ ರಾಜಕಾರಣ ಮತ್ತು ಅಸ್ಮಿತೆಗಳ ಸರಳುಗಳಲ್ಲಿ ಬಂಧಿತವಾಗಿಬಿಡುತ್ತದೆ.

ಸಂಭವಿಸಿದ ಅಪರಾಧಗಳನ್ನು ಮುಖಾಮುಖಿಯಾಗಿಸುವ ಮೂಲಕ ಅಪರಾಧಿಗಳನ್ನು ಸಮರ್ಥಿಸಿಕೊಳ್ಳುವ ವಿಕೃತ ಪರಂಪರೆಯನ್ನು ಪೋಷಿಸುತ್ತಲೇ ಬಂದಿರುವ ಭಾರತದ ನಾಗರಿಕ ಸಮಾಜ, ಇಂದಿಗೂ ಅಪರಾಧಿಗಳನ್ನು ಶಾಸನ ಸಭೆಗಳಲ್ಲಿ ಸಹಿಸಿಕೊಳ್ಳುತ್ತಲೇ ಬಂದಿದೆ.

ಭ್ರಷ್ಟಾಚಾರ ರಹಿತ ಭಾರತದಲ್ಲಿ ಅನೇಕಾನೇಕ ಭ್ರಷ್ಟರು ಅಧಿಕಾರ ಪೀಠದಲ್ಲಿ ವಿರಾಜಮಾನರಾಗಿದ್ದಾರೆ. ಮತ್ತದೇ ಪಕ್ಷ ರಾಜಕಾರಣ ಮತ್ತು ಅಸ್ಮಿತೆಯ ಗುಂಗು. ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವಾಗ ಬೆರಳ ತುದಿಗೆ ಹಚ್ಚುವ ಶಾಯಿಯ ಗುರುತು ಸ್ವಲ್ಪ ದಿನಗಳ ನಂತರ ಅಳಿಸಿಹೋಗುತ್ತದೆ. ಆದರೆ ಇಂದು ನಮ್ಮ ಪ್ರಜಾತಂತ್ರ ದೇಶದಲ್ಲಿ ಅಧಿಕಾರ ಪೀಠಗಳಲ್ಲಿ ಕುಳಿತು ಆದರ್ಶ, ನೈತಿಕತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಮಾತುಗಳನ್ನಾಡುತ್ತಿರುವವರ ಕೈಗಳಿಗೆ ಮೆತ್ತಿರುವ ಅಮಾಯಕ ಜನರ ನೆತ್ತರ ಕಲೆ ಅಳಿಸಲು ಸಾಧ್ಯವೇ ಇಲ್ಲ.

ಆದರೆ ನಮಗೆ ಅದು ಗೆಲುವಿನ ಸಂಕೇತದಂತೆ ಕಾಣುತ್ತದೆ, ವಿಜಯೋತ್ಸವದ ಚಿಹ್ನೆಯಂತೆ ಕಾಣುತ್ತದೆ. ಇದು ನಮ್ಮ ದೇಶದ ದುರಂತ. ನಾವು ಪ್ರಜಾತಂತ್ರವನ್ನು ಬಯಸುತ್ತೇವೆ ಆದರೆ ಪ್ರಜಾಸತ್ತಾತ್ಮಕ ಮನಸ್ಥಿತಿಯನ್ನು ಅಸ್ಮಿತೆಗಳ ಭ್ರಮೆಗೆ ಸಿಲುಕಿ ಹೊಸಕಿ ಹಾಕುತ್ತಿದ್ದೇವೆ. ಮಾನವ ಹಕ್ಕುಗಳು ನಮಗೆ ಅಪಥ್ಯವಾಗುತ್ತದೆ, ಕೆಲವೊಮ್ಮೆ ಸಹಮಾನವರೇ ಅಪಥ್ಯವಾಗಿಬಿಡುತ್ತಾರೆ.

ಹಥ್ರಾಸ್ ಘಟನೆಯಲ್ಲಿ ಮೃತಪಟ್ಟ ಮನೀಷಾ ಈ ಅಪಥ್ಯರಾದವರ ಗುಂಪಿಗೆ ಸೇರುತ್ತಾಳೆ. ಆಕೆಯ ಮೇಲೆ ಅತ್ಯಾಚಾರ ಎಸಗಿದ ಠಾಕೂರರು ಕೆಲವು ವರ್ಷಗಳ ನಂತರ ಕೇಂದ್ರ ಸಚಿವರಾದರೂ ನಾವು ವಿಚಲಿತರಾಗುವುದಿಲ್ಲ. ಈ ಮನಸ್ಥಿತಿ ನಾಗರಿಕ ಸಮಾಜವನ್ನು ಆವರಿಸಿರುವುದರಿಂದಲೇ ನಿರ್ಭಯ ನಮಗೆ ನೆನಪಾಗಿಯೇ ಉಳಿಯಲಿದ್ದಾಳೆ. ಜಾತಿ, ಮತಧರ್ಮ ಮತ್ತು ಲಿಂಗಭೇದಗಳ ಚೌಕಟ್ಟಿನಲ್ಲಿ ಸಾವು ಸ್ವೀಕೃತವಾಗುತ್ತಿರುವಂತೆಯೇ ಮನುಷ್ಯನ ಪ್ರಜ್ಞೆಯೂ ಸಹ ವಿಕೃತಿಯ ಪರಾಕಾಷ್ಠೆ ತಲುಪುತ್ತಿದೆ. ಇದಕ್ಕೆ ಪರಿಹಾರವೇನು ? ಪ್ರತಿರೋಧಗಳ ನಡುವೆಯೇ ನಾವು ಶೋಧಿಸಬೇಕಿರುವುದು ಇದನ್ನೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸಿಹಿಸುದ್ದಿ: 4,744 ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಸಿದ್ಧತೆ

Published

on

KEA Recruitment 2026: ಪದವಿ, ಪಿಯುಸಿ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ; 4,744 ಹುದ್ದೆಗಳಿಗೆ ಈ ತಿಂಗಳಲ್ಲೇ ಅಧಿಸೂಚನೆ, ನವೆಂಬರ್-ಡಿಸೆಂಬರ್‌ನಲ್ಲಿ ಪರೀಕ್ಷೆ!

ಸುದ್ದಿದಿನ,ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವಿ ಹಾಗೂ ಪಿಯುಸಿ-ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಅವಕಾಶ ಕಲ್ಪಿಸಲು ಸಜ್ಜಾಗಿದೆ. ವಿವಿಧ ಇಲಾಖೆಗಳಲ್ಲಿನ ಒಟ್ಟು 4,744 ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಈ ತಿಂಗಳಲ್ಲೇ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆದಿದೆ. ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸುವ ಸಾಧ್ಯತೆಯೂ ಇದ್ದು, ಅಭ್ಯರ್ಥಿಗಳು ಈಗಿನಿಂದಲೇ ಅಧ್ಯಯನ ಆರಂಭಿಸುವುದು ಸೂಕ್ತವಾಗಿದೆ.

ಹೈಲೈಟ್ಸ್: 4,744 ಹುದ್ದೆಗಳಿಗೆ ನೇಮಕಾತಿ
  • KEAಯಿಂದ ಒಟ್ಟು 4,744 ಹುದ್ದೆಗಳ ನೇಮಕಾತಿಗೆ ಸಿದ್ಧತೆ
  • ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು – 2,421
  • ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು – 2,062
  • ತಾಂತ್ರಿಕ ಹುದ್ದೆಗಳು – 261; ಇನ್ನಷ್ಟು ಹುದ್ದೆಗಳು ಸೇರುವ ಸಾಧ್ಯತೆ
  • ಈ ತಿಂಗಳು ಅಧಿಸೂಚನೆ; ನವೆಂಬರ್-ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆಗೆ ಸಿದ್ಧತೆ

http://Visit : www.suddidina.com

ಪದವಿ ಮಟ್ಟದಲ್ಲಿ 2,421 ಹುದ್ದೆಗಳು

ಈ ಬೃಹತ್ ನೇಮಕಾತಿಯಲ್ಲಿ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,421 ಇದ್ದು, ವಿವಿಧ ಸರಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪದವಿ ಪೂರ್ಣಗೊಳಿಸಿರುವ ಉದ್ಯೋಗಾಕಾಂಕ್ಷಿಗಳು ಯಾವ ಇಲಾಖೆಯಲ್ಲಿ ಯಾವ ಹುದ್ದೆಗಳು ಲಭ್ಯವಿರಲಿವೆ, ಹುದ್ದೆವಾರು ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಸೇರಿದಂತೆ ಅಧಿಸೂಚನೆಯಲ್ಲಿ ಪ್ರಕಟವಾಗುವ ಸಂಪೂರ್ಣ ವಿವರಗಳನ್ನು ಗಮನಿಸಬೇಕು.

ಪಿಯುಸಿ ಅಭ್ಯರ್ಥಿಗಳಿಗೂ ಅವಕಾಶ

ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಗೂ ಈ ನೇಮಕಾತಿಯಲ್ಲಿ ಉತ್ತಮ ಅವಕಾಶವಿದೆ. ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,062 ಇವೆ. ಹೀಗಾಗಿ ಪದವಿ ಮಾತ್ರವಲ್ಲದೆ ಪಿಯುಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಈ ನೇಮಕಾತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಪಿಯುಸಿ ಹಂತದ ಹುದ್ದೆಗಳಿಗೆ ಅರ್ಹರಾಗಿರುವವರು ಅಧಿಸೂಚನೆ ಪ್ರಕಟವಾದ ನಂತರ ತಮ್ಮ ವಿದ್ಯಾರ್ಹತೆಗೆ ಹೊಂದುವ ಹುದ್ದೆಗಳನ್ನು ಗುರುತಿಸಿ ಅರ್ಜಿ ಸಲ್ಲಿಸಬಹುದು.

ತಾಂತ್ರಿಕ ಹುದ್ದೆಗಳಿಗೂ ಅವಕಾಶ

ತಾಂತ್ರಿಕ ವಿಭಾಗದಲ್ಲಿಯೂ 261 ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ನಡೆದಿದೆ. ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಹುದ್ದೆಗಳನ್ನು ಪರಿಶೀಲಿಸಬೇಕಾಗಿದೆ.

ಒಟ್ಟು 4,744 ಹುದ್ದೆಗಳ ಪೈಕಿ 2,421 ಪದವಿ ಮಟ್ಟದ ತಾಂತ್ರಿಕೇತರ, 2,062 ಪಿಯುಸಿ ಮಟ್ಟದ ತಾಂತ್ರಿಕೇತರ ಹಾಗೂ 261 ತಾಂತ್ರಿಕ ಹುದ್ದೆಗಳು ಸೇರಿವೆ. ಈ ಮೂಲಕ ವಿವಿಧ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಸಿಗಲಿದೆ.

ಇನ್ನಷ್ಟು ಹುದ್ದೆಗಳು ಸೇರುವ ಸಾಧ್ಯತೆ

ಪ್ರಸ್ತುತ ಪ್ರಕಟಿಸಿರುವ ಹುದ್ದೆಗಳ ಸಂಖ್ಯೆಯೇ ಅಂತಿಮವಾಗಿಲ್ಲ ಎಂಬುದು ಗಮನಾರ್ಹ. ನಂತರದ ದಿನಗಳಲ್ಲಿ ಇನ್ನಷ್ಟು ಹೊಸ ಇಲಾಖೆಗಳು ಮತ್ತು ಹುದ್ದೆಗಳು ನೇಮಕಾತಿ ಪಟ್ಟಿಗೆ ಸೇರುವ ಸಾಧ್ಯತೆ ಇದೆ. ಹೀಗಾಗಿ ಅಭ್ಯರ್ಥಿಗಳು ಕೇವಲ ಈಗಿರುವ ಹುದ್ದೆಗಳನ್ನಷ್ಟೇ ಗಮನಿಸದೆ, ಅಧಿಕೃತ ಅಧಿಸೂಚನೆ ಹೊರಬರುವವರೆಗೆ KEA ಪ್ರಕಟಣೆಗಳನ್ನು ನಿರಂತರವಾಗಿ ಪರಿಶೀಲಿಸಬೇಕು.

ಪರೀಕ್ಷೆಗೆ ಈಗಿನಿಂದಲೇ ತಯಾರಿ

ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ತಯಾರಿಗೆ ಸಮಯ ಸೀಮಿತವಾಗಿರಲಿದೆ. ನೇಮಕಾತಿಯ ಪಠ್ಯಕ್ರಮದ ವಿವರಗಳನ್ನೂ ಮುಂಚಿತವಾಗಿ ಪರಿಶೀಲಿಸಿ, ವಿಷಯವಾರು ಅಧ್ಯಯನ ಆರಂಭಿಸುವುದು ಉತ್ತಮ.

ಅಂತಿಮವಾಗಿ, ಹುದ್ದೆಗಳ ಸಂಖ್ಯೆ, ಇಲಾಖೆಗಳ ವಿವರ, ವಿದ್ಯಾರ್ಹತೆ, ಪರೀಕ್ಷಾ ವಿಧಾನ, ಪಠ್ಯಕ್ರಮ, ವಯೋಮಿತಿ ಹಾಗೂ ಅರ್ಜಿ ಸಲ್ಲಿಕೆಯ ದಿನಾಂಕ ಸೇರಿದಂತೆ ಪೂರ್ಣ ಹಾಗೂ ಅಧಿಕೃತ ಮಾಹಿತಿಯನ್ನು ಅಧಿಸೂಚನೆ ಪ್ರಕಟವಾದ ಬಳಿಕವೇ ಖಚಿತಪಡಿಸಿಕೊಳ್ಳಬೇಕು. ಅಭ್ಯರ್ಥಿಗಳು ಪ್ರಕಟಣೆಯ ಲಿಂಕ್ ಪರಿಶೀಲಿಸಿ, ತಮ್ಮ ಅರ್ಹತೆಗೆ ಹೊಂದುವ ಹುದ್ದೆಗಳ ವಿವರಗಳನ್ನು ತಿಳಿದುಕೊಂಡು ಸಿದ್ಧತೆ ಆರಂಭಿಸಬಹುದು.

Continue Reading

ದಿನದ ಸುದ್ದಿ

ಬಿಜೆಪಿ ರೈತ ಮೋರ್ಚಾದಿಂದ ಬಂದ್‌ಗೆ ಕರೆ; ಹಲವು ವೃತ್ತಗಳಲ್ಲಿ ಟೈರ್‌ಗೆ ಬೆಂಕಿ, ಬೆಂಕಿ ನಂದಿಸಿದ ಪೊಲೀಸರು

Published

on

ಮೇಲ್ಭದ್ರ ನೀರಿಗಾಗಿ ದಾವಣಗೆರೆ ಬಂದ್‌: ಗುಟ್ಕಾ–ಪಾನ್‌ ಮಸಾಲಾ ನಿಷೇಧಕ್ಕೂ ಆಗ್ರಹ, ನಗರದಲ್ಲಿ ಪ್ರತಿಭಟನೆ ಕಾವು

ಸುದ್ದಿದಿನ,ದಾವಣಗೆರೆ: ಮೇಲ್ಭದ್ರ ಯೋಜನೆಯ ನೀರನ್ನು ಸಮರ್ಪಕವಾಗಿ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ದಾವಣಗೆರೆಯಲ್ಲಿ ಬಿಜೆಪಿ ರೈತ ಮೋರ್ಚಾ ಬಂದ್‌ಗೆ ಕರೆ ನೀಡಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನಗರದ ವಿವಿಧ ವೃತ್ತಗಳಲ್ಲಿ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮೇಲ್ಭದ್ರ ಯೋಜನೆಯ ನೀರು ದಾವಣಗೆರೆ ಭಾಗದ ರೈತರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ನೀರಿನ ಲಭ್ಯತೆ ಕೃಷಿ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ, ನೀರು ಬಿಡುಗಡೆ ವಿಚಾರದಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರೈತರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಬೇಕು ಎಂಬ ಆಗ್ರಹವೂ ಕೇಳಿಬಂತು.

http://Visit : www.suddidina.com

davangere-bandh-upper-bhadra-water-release-gutka-pan-masala-ban-protest-renukacharya

ಗುಟ್ಕಾ, ಪಾನ್‌ ಮಸಾಲಾ ನಿಷೇಧಕ್ಕೂ ಆಗ್ರಹ

ಬಂದ್‌ನ ಮತ್ತೊಂದು ಪ್ರಮುಖ ಬೇಡಿಕೆ ಗುಟ್ಕಾ ಹಾಗೂ ಪಾನ್‌ ಮಸಾಲಾ ನಿಷೇಧಕ್ಕೆ ಸಂಬಂಧಿಸಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇಂತಹ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ಒತ್ತಾಯಿಸಿದೆ.

ಈ ಎರಡು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯ ವಾತಾವರಣ ನಿರ್ಮಾಣವಾಗಿದ್ದು, ಬಂದ್‌ಗೆ ಬೆಂಬಲ ಪಡೆಯಲು ಸಂಘಟಕರು ಕರೆ ನೀಡಿದ್ದಾರೆ.

https://x.com/ians_india/status/2094602342230528256

ಟೈರ್‌ಗೆ ಬೆಂಕಿ; ಪೊಲೀಸರ ಮಧ್ಯಪ್ರವೇಶ

ಪ್ರತಿಭಟನೆಯ ವೇಳೆ ನಗರದ ಹಲವು ವೃತ್ತಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲಾಯಿತು. ಇದರಿಂದ ಕೆಲಕಾಲ ರಸ್ತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು.

ಸಾರ್ವಜನಿಕ ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪರಿಸ್ಥಿತಿಯನ್ನು ಗಮನಿಸಲಾಗಿದ್ದು, ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಪ್ರಯತ್ನ ನಡೆದಿದೆ.

ಬಂದ್‌ಗೆ ವ್ಯಾಪಾರಸ್ಥರ ಬೆಂಬಲ?

ಬಂದ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಹಕರಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಆದರೆ ಬಂದ್‌ಗೆ ವಿವಿಧ ವರ್ಗಗಳಿಂದ ಎಷ್ಟರ ಮಟ್ಟಿಗೆ ಬೆಂಬಲ ದೊರೆಯಲಿದೆ ಎಂಬುದು ದಿನದ ಬೆಳವಣಿಗೆಗಳಿಂದ ಸ್ಪಷ್ಟವಾಗಲಿದೆ.

ಮೇಲ್ಭದ್ರ ನೀರಿನ ವಿಚಾರ ದಾವಣಗೆರೆ ಜಿಲ್ಲೆಯ ರೈತರ ಪಾಲಿಗೆ ದೀರ್ಘಕಾಲದ ಪ್ರಮುಖ ವಿಷಯವಾಗಿದ್ದು, ಇದೀಗ ಈ ಬೇಡಿಕೆ ಮತ್ತೊಮ್ಮೆ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ಬಂದಿದೆ. ಇದರ ಜತೆಗೆ ಗುಟ್ಕಾ ಮತ್ತು ಪಾನ್‌ ಮಸಾಲಾ ನಿಷೇಧದ ಬೇಡಿಕೆಯನ್ನೂ ಮುನ್ನೆಲೆಗೆ ತರುವ ಮೂಲಕ ಬಿಜೆಪಿ ರೈತ ಮೋರ್ಚಾ ಹೋರಾಟಕ್ಕೆ ವ್ಯಾಪಕ ಸ್ವರೂಪ ನೀಡಲು ಮುಂದಾಗಿದೆ.

ಒಟ್ಟಿನಲ್ಲಿ, ಮೇಲ್ಭದ್ರ ನೀರು ಬಿಡುಗಡೆ ಮತ್ತು ಗುಟ್ಕಾ–ಪಾನ್‌ ಮಸಾಲಾ ನಿಷೇಧ ಎಂಬ ಎರಡು ಪ್ರಮುಖ ಬೇಡಿಕೆಗಳೊಂದಿಗೆ ದಾವಣಗೆರೆಯಲ್ಲಿ ಬಂದ್‌ ಹಾಗೂ ಪ್ರತಿಭಟನೆ ಕಾವು ಪಡೆದಿದ್ದು, ಸರಕಾರದ ಮುಂದಿನ ಪ್ರತಿಕ್ರಿಯೆ ಇದೀಗ ಕುತೂಹಲ ಮೂಡಿಸಿದೆ.

Continue Reading

ದಿನದ ಸುದ್ದಿ

ಅಪೌಷ್ಟಿಕತೆ ನಿವಾರಣೆಗೆ ಹೊಸ ಹೆಜ್ಜೆ; ಶಾಲೆ ಮುಗಿಯುವ ಮುನ್ನ ಮಕ್ಕಳಿಗೆ ಪೌಷ್ಟಿಕ ತಿನಿಸು

Published

on

ಗಣಿ ಬಾಧಿತ ಜಿಲ್ಲೆಗಳ ಮಕ್ಕಳಿಗೆ ‘ಸಂಜೆ ಸ್ನ್ಯಾಕ್ಸ್’ ಭಾಗ್ಯ: 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ

ಸುದ್ದಿದಿನ,ಹೂವಿನಹಡಗಲಿ: ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಸುಧಾರಣೆಗೆ ಕರ್ನಾಟಕ ಗಣಿ ಮತ್ತು ಪರಿಸರ ಪುನಸ್ಥಾಪನೆ ನಿಗಮ (ಕೆಎಂಆರ್‌ಸಿಇ) ಹೊಸ ಹೆಜ್ಜೆ ಇಟ್ಟಿದೆ. ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ಸಂಜೆ ಸ್ನ್ಯಾಕ್ಸ್ ವಿತರಿಸುವ ಯೋಜನೆ ರೂಪಿಸಲಾಗಿದೆ.

ಈ ಸಂಬಂಧ ನಾಲ್ಕು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ಮೂಲಕ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ರವಾನೆಯಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ಆರಂಭಿಸಲಾಗಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಈಗಾಗಲೇ ಮುಖ್ಯಗುರುಗಳ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ.

http://Visit : www.suddidina.com

ಅಪೌಷ್ಟಿಕತೆ ತಡೆಗೆ ಪೌಷ್ಟಿಕ ಆಹಾರ

ಗಣಿ ಬಾಧಿತ ಪ್ರದೇಶಗಳಲ್ಲಿ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸಂಜೆ ಸಮಯದಲ್ಲಿ ಮಕ್ಕಳಿಗೆ ನೆನೆಸಿದ ಶೇಂಗಾ, ಮೊಳಕೆಯೊಡೆದ ಹೆಸರುಕಾಳು, ಚಕ್ಕಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ನೀಡಲು ಉದ್ದೇಶಿಸಲಾಗಿದೆ. ಕೆಲವು ದಿನಗಳಲ್ಲಿ ಮೂಸಂಬಿ, ಕಿತ್ತಳೆ, ಸಪೋಟ ಮತ್ತಿತರ ಹಣ್ಣುಗಳನ್ನೂ ವಿತರಿಸುವ ವ್ಯವಸ್ಥೆ ಇರಲಿದೆ.

ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ ಹಾಗೂ ಪೌಷ್ಟಿಕಾಂಶದ ಕೊರತೆ ನಿವಾರಣೆಗೆ ಪೂರಕವಾಗುವಂತೆ ಈ ಯೋಜನೆ ರೂಪಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರಯತ್ನ ಇದಾಗಿದೆ.

24,352 ಮಕ್ಕಳಿಗೆ ಪ್ರಯೋಜನ

ಹೂವಿನಹಡಗಲಿ ತಾಲೂಕಿನಲ್ಲಿ 138 ಸರ್ಕಾರಿ ಪ್ರಾಥಮಿಕ ಹಾಗೂ 27 ಪ್ರೌಢಶಾಲೆಗಳ ಒಟ್ಟು 24,352 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಯೋಜನೆಗಾಗಿ ಕೆಎಂಆರ್‌ಸಿಇ ವತಿಯಿಂದ ₹10.64 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಮೂರು ವರ್ಷಗಳ ಅವಧಿಗೆ ಒಟ್ಟು ಸುಮಾರು ₹33 ಕೋಟಿ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಅಡುಗೆದಾರರು ಮತ್ತು ಸಹಾಯಕಿಯರ ವೆಚ್ಚಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ. ಇದರಿಂದ ಯೋಜನೆ ಕೇವಲ ತಾತ್ಕಾಲಿಕ ಕ್ರಮವಾಗದೆ ನಿರಂತರವಾಗಿ ನಡೆಯುವ ನಿರೀಕ್ಷೆ ಮೂಡಿದೆ.

SATS ಮಾಹಿತಿ ಅಪ್‌ಡೇಟ್‌ ಸವಾಲು

ಆದರೆ ಯೋಜನೆ ಅನುಷ್ಠಾನಕ್ಕೆ ವಿದ್ಯಾರ್ಥಿಗಳ ನಿಖರ ಸಂಖ್ಯೆಯೇ ಪ್ರಮುಖ ಆಧಾರವಾಗಿದ್ದು, SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಪ್‌ಡೇಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಪ್ರವೇಶ, ಶಾಲೆ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿರುವುದರಿಂದ ಅಂತಿಮ ಪಟ್ಟಿ ಸಿದ್ಧಪಡಿಸುವುದು ಸವಾಲಾಗಿದೆ.

ಸೆಪ್ಟೆಂಬರ್ 5ರೊಳಗೆ ಮಾಹಿತಿ ನವೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರ ಸಂಜೆ ಸ್ನ್ಯಾಕ್ಸ್ ವಿತರಣೆಗೆ ವೇಗ ಸಿಗುವ ಸಾಧ್ಯತೆಯಿದೆ.

ಶಿಕ್ಷಕರಿಗೆ ಹೆಚ್ಚುವರಿ ಹೊರೆ?

ಯೋಜನೆಯ ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನದ ಹೊಣೆಗಾರಿಕೆ ಶಿಕ್ಷಕರ ಮೇಲೆಯೇ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಎಐ ಹಾಜರಾತಿ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಹಾಗೂ ವಿವಿಧ ಡಿಜಿಟಲ್ ದಾಖಲೆಗಳ ನಿರ್ವಹಣೆಯಲ್ಲಿ ಶಿಕ್ಷಕರು ನಿರತರಾಗಿದ್ದಾರೆ. ನೆಟ್‌ವರ್ಕ್ ಸಮಸ್ಯೆಯೂ ಕೆಲವೊಮ್ಮೆ ತೊಂದರೆ ನೀಡುತ್ತಿದೆ.

ಶಾಲೆ ಮುಗಿಯುವ ವೇಳೆಯಲ್ಲಿ ಸ್ನ್ಯಾಕ್ಸ್ ವಿತರಣೆ, ದಾಖಲಾತಿ ಮತ್ತು ಮೇಲ್ವಿಚಾರಣೆ ಮತ್ತೊಂದು ಜವಾಬ್ದಾರಿಯಾಗಬಹುದು ಎಂಬುದು ಶಿಕ್ಷಕರ ಅಭಿಪ್ರಾಯ. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪಿಸುವ ಯೋಜನೆಯ ಜತೆಗೆ ಶಿಕ್ಷಕರ ಮೇಲಿನ ಆಡಳಿತಾತ್ಮಕ ಒತ್ತಡ ಕಡಿಮೆ ಮಾಡುವ ವ್ಯವಸ್ಥೆಯೂ ಅಗತ್ಯವಾಗಿದೆ.

ವಾರದ ಆರು ದಿನಗಳಲ್ಲಿ ವಿವಿಧ ಪೌಷ್ಟಿಕ ತಿನಿಸುಗಳು ಹಾಗೂ ಶನಿವಾರ ಹಣ್ಣು ವಿತರಿಸುವ ಉದ್ದೇಶವಿದ್ದು, ಸರಕಾರದ ಅಂತಿಮ ಸೂಚನೆ ಬಂದ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ.

Continue Reading

Trending