ಭಾವ ಭೈರಾಗಿ
ಯುದ್ಧ ಬೇಕಾ ಯುದ್ದ ?

ಈಗ ಎಲ್ಲೆಲ್ಲೂ ಯುದ್ಧದ ಕುರಿತೇ ಮಾತು. ನಮ್ಮ ಸಾಮಾಜಿಕ ಜಾಲತಾಣಗಳಂತೂ ಈಗ ಶುದ್ಧ ಕಸದ ತೊಟ್ಟಿಗಳಾಗಿವೆ. ಫೇಸ್ಬುಕ್ಕು ವಾಟ್ಸಾಪ್ಗಳು ನಮಗೆ ಬೇಕಿರುವುದು, ಬೇಡದಿರುವುದು, ನಮ್ಮ ಕೋಪ, ಅಸಹನೆ, ತಂತ್ರ, ಕುತಂತ್ರಗಳನ್ನು ಭಿತ್ತುವ ಮಹಾ ವೇಧಿಕೆಗಳಾಗಿವೆ. ಇನ್ನೂ ದುರಂತವೆಂದರೆ ಯುದ್ಧವನ್ನು ಬಯಸುತ್ತೇವೋ ಇಲ್ಲವೊ ಎಂಬುದು ನಮ್ಮ ದೇಶ ಭಕ್ತಿಯನ್ನಳೆಯುವ ಅಳತೆಗೋಲಾಗಿಬಿಟ್ಟಿದೆ. ಯುದ್ಧ ಬೇಕು ಪಾಕಿಸ್ತಾನದ ರಕ್ತ ಕುಡಿಯಬೇಕು ಎನ್ನುವವರನ್ನು ದೇಶಭಕ್ತರೆಂದೂ, ಯುದ್ಧ ಬೇಡ ಎಂದವರನ್ನು ದೇಶ ದ್ರೋಹಿಗಳೆಂದೂ ಪರಿಗಣಿಸುವ ಅಪಾಯಕಾರಿ ಬೆಳವಣಿಗೆಗಳಾಗುತ್ತಿವೆ, ಶಾಂತಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವ ಮಾತನಾಡಿದವರನ್ನು ಪಾಕಿಸ್ತಾನಕ್ಕೆ ಕಳಿಸಬೇಕೆಂದೂ ಕೆಲವರು ಬೊಬ್ಬೆಹೊಡೆಯುತ್ತಿದ್ದಾರೆ.
ಹಿಂದುಸ್ಥಾನ್ ಜಿಂದಾಬಾದ್ ಎನ್ನುವುದಕ್ಕಿಂತಲೂ ಮುರ್ದಾಬಾದ್ ಎನ್ನುವುದೇ ನಮ್ಮ ದೇಶಭಕ್ತಿಯ ಸರ್ಟಿಫಿಕೇಟ್ ಆದಂತಿದೆ. ಖಂಡಿತವಾಗಿಯೂ ಇದೊಂದು ಸಮೂಹ ಸನ್ನಿಯಲ್ಲದೇ ಮತ್ತೇನು? ದೇಶಭಕ್ತಿ, ದೇಶಾಭಿಮಾನ ಎಂಬ ಪ್ಲೇ ಕಾರ್ಡ್ ಹಿಡಿದವರಿಗಂತೂ ತಾವು ಹೇಳಿದ್ದೇ ಸತ್ಯ ಎಂಬ ಅದಾವುದೋ ಭಾವ ನೆತ್ತಿಗೇರಿದೆ. ಅವರಿಗೆ ಸಂಯಮ ತಂದುಕೊಳ್ಳುವಂತೆ ಹೇಳಹೊರಟರೆ ಅಂಥವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ. ಮೊದಲೇಹೇಳಿಬಿಡುತ್ತೇನೆ ನಾನಿದನ್ನು ಬಿಜೆಪಿ, ಕಾಂಗ್ರೆಸ್ ಎಂಬ ಪಕ್ಷಗಳನ್ನಾಗಲೀ ಅಥವಾ ಎಡ,ಬಲ ಪಂಥಗಳನ್ನಾಗಲೀ ಮನಸಿನಲ್ಲಿಟ್ಟುಕೊಂಡು ಬರೆದಿಲ್ಲ. ಕೇವಲ ಯುದ್ಧದ ಕುರಿತು ಮಾತ್ರ ಮಾತನಾಡುತ್ತಿದ್ದೇನೆ.
ಸ್ವಲ್ಪ ಯೋಚಿಸಿ ನೋಡಿ. ಯುದ್ಧ ಯಾರಿಗೆ ಬೇಕು? ಯುದ್ಧದಿಂದ ನಾವು ಪಡೆದುಕೊಳ್ಳುವುದೇನಿದೆ? ಖಂಡಿತ ಏನೂ ಇಲ್ಲ ಆದರೆ ನಾವು ಕಳೆದುಕೊಳ್ಳುತ್ತೇವೆ, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾವಿರಾರು ಸೈನಿಕರನ್ನು ನಾವು ಕಳೆದುಕೊಳ್ಳುತ್ತೇವೆ. ನಮ್ಮ ನಮ್ಮ ಮಾನಸಿಕ ಗೀಳುಗಳಿಗಾಗಿ ನಮ್ಮ ಹೆಮ್ಮೆಯ ಸೈನಿಕರನ್ನು ಬಲಿಕೊಡಲು ಯಾಕೋ ಮನಸ್ಸು ಒಪ್ಪುತ್ತಿಲ್ಲ . ಹಿಂದಿನ ಯುದ್ಧಗಳ ಇತಿಹಾಸವನ್ನೊಮ್ಮೆ ನೆನಪಿಸಿಕೊಳ್ಳಿ ಯಾವ ಯುದ್ಧಗಳೂ ಸೈನಿಕರ ಸಾವಿಲ್ಲದೇ ಮುಕ್ತಾಯವಾಗಿಲ್ಲ. ಯಾವ ಯುದ್ಧದಿಂದಲೂ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಅದು 1962 ಭಾರತ ಆಗತಾನೆ ಗಟ್ಟಿಗೊಳ್ಳುತ್ತಿದ್ದ ಸಮಯ, ನೆರೆಯ ಚೀನಾದಂತ ಚೀನಾ ಮೇಲೆ ಯುದ್ಧ ಮಾಡಬೇಕಾಯ್ತು ಆ ಇಂಡೋ ಚೀನಾ ಯುದ್ಧದಲ್ಲಿ ನಾವು ಹಸಿಹಸಿ ಕನಸೊತ್ತ 1385 ಸೈನಿಕರನ್ನು ಕಳೆದುಕೊಳ್ಳಬೇಕಾಯ್ತು. ಮತ್ತೆ 1965ರಲ್ಲಿ ಪಾಕಿಸ್ತಾನ ನಮ್ಮ ವಿರುದ್ಧ ಕಾಲ್ಕೆರೆಯಿತು, ಆಗ ನಡೆದ ಯುದ್ಧದಲ್ಲಿ 3000 ಕುಟುಂಬಗಳು ತಮ್ಮ ಆಧಾರ ಸ್ಥಂಬಗಳನ್ನು ಕಳೆದುಕೊಂಡು ಕಂಗಾಲಾಗಬೇಕಾಯ್ತು. ಪಾಕಿಸ್ತಾನದ ಸೊಂಟ ಮುರಿದು ಇಬ್ಬಾಗ ಮಾಡಿದ ಸಮಯ 1971.
ಅದು ಸುಲಭಕ್ಕೆ ನಡೆದ ಕೆಲಸವಲ್ಲ, ನಾನು ಮತ್ತೆ ಯುಗಾದಿಗೆ ಬರ್ತೇನೆ, ಮುಂದಿನಬಾರಿ ಅಮ್ಮನಿಗೆ ಸೀರೆ ತರ್ತೇನೆ, ಇನ್ನೇನು ಎರಡೇ ತಿಂಗಳ ಡ್ಯೂಟಿ ಮುಗಿಸಿ ಊರಿಗೆ ಬಂದು ಅಮ್ಮನ ಸೇವೆ ಮಾಡಿಕೊಂಡಿರ್ತೇನೆ, ಹೀಗೆ ಎದೆಷ್ಟೋ ಭರವಸೆಯ ಮಾತುಗಳನ್ನು ಕುಟುಂಭದವರಿಗೆ ನೀಡಿ ಬಂದಿದ್ದ 3843ಜನ ಸೈನಿಕರು ನೋಡನೋಡುತ್ತಿದ್ದಂತೆಯೇ ಶತೃಗಳ ಗುಂಡಿಗೆ ಎದೆಕೊಡಬೇಕಾಯ್ತು. ಇನ್ನು 1999ರ ಕಾರ್ಗಿಲ್ ಕದನ. ಹಿಂದಿನ ದಿನವಷ್ಟೇ ಅಮ್ಮನಿಗೆ ಪತ್ರಬರೆದವರು, ಎರಡು ತಿಂಗಳ ಹಿಂದಷ್ಟೇ ಮದುವೆಯಾದವರ, ಇನ್ನೂ ನೋಡಿರದ ತನ್ನ ಕಂದಮ್ಮನ ಸುತ್ತ ಕನಸು ಹೆಣೆದವರೂ ಸೇರಿ ಸತ್ತ ಸೈನಿಕರ ಸಂಖ್ಯೆ 528. ಇಂದೋ ನಾಳೆಯೋ ಯುದ್ಧವಾದರೆ ಮತ್ತೆ ನಾವು ಕಳೆದುಕೊಳ್ಳುವ ಸಂಖ್ಯೆ ದೊಡ್ಡದಾಗುತ್ತದೆಯೇ ಹೊರತು ಚಿಕ್ಕದಾಗುವುದಿಲ್ಲ.
ನೆನಪಿರಲಿ ಗೆಳೆಯರೇ ಈಗ ಯುದ್ಧವಾದರೆ ಸಾಯುವವರು ದೇಶ ಕಾಯುವ ಸೈನಿಕರೇ ಹೊರತು, ಫೇಸ್ ಬುಕ್ಕಿನಲ್ಲಿ ಪೋಸ್ಟ್ ಹಾಕುವ ನಾವು ನೀವಲ್ಲ, ಒಂದು ಹನಿರಕ್ತಕ್ಕೆ ಹತ್ತು ಹೆಣ ಕೆಡವುತ್ತೇನೆಂದು ಪ್ರತಿಜ್ಞೆ ಮಾಡುವ ರಾಜಕಾರಣಿಗಳೂ ಅಲ್ಲ. ಗೊತ್ತಿರಲಿ ಯುದ್ಧದ ನಂತರ ನಾವು ಮತ್ತೆ ಫೇಸ್ ಬುಕ್ಕಿನಲ್ಲಿ ಸತ್ತವರ ಲೆಕ್ಕ ಹೇಳುತ್ತೇವೆ, ಅವರಿಗೆ ಶ್ರದ್ಧಾಂಜಲಿ ಕೋರಿ ಪೋಸ್ಟ್ ಹಾಕುತ್ತೇವೆ ಮತ್ತು ನಮ್ಮ ಜನನಾಯಕರು ಅವರ ಸಾವಿನ ಸೇಡುತೀರಿಸಿಕೊಳ್ಲಲು ಮತ್ತೊಂದು ಅವಕಾಶ ಕೊಡಿ ಎಂದು ಓಟು ಕೇಳಲು ಬರುತ್ತಾರೆ. ಯುದ್ಧದ ಕುರಿತಂತೆ ರೂಸ್ ವೆಲ್ಟ್ ಹೇಳಿದ ಮಾತೊಂದು ಈಗ ನೆನಪಾಗುತ್ತಿದೆ . “ಯುದ್ದವೆಂದರೆ ಯುವಕರು ಸಾಯುವುದು ಮತ್ತು ಹಿರಿಯರು ಭಾಷಣಮಾಡುವುದೆ ಹೊರತು ಮತ್ತೇನು ಅಲ್ಲ.”
ನಾನೊಬ್ಬ ಪತ್ರಕರ್ತನಾಗಿ ಸಾಕಷ್ಟುಜನ ಸೈನಿಕರನ್ನೂ, ಮತ್ತು ಸೈನಿಕರ ಕುಟುಂಬಗಳನ್ನೂ ಹತ್ತಿರದಿಂದ ಬಲ್ಲೆ, ಅವರಲ್ಲಿ ರಕ್ತದಾಹಿಗಳಿಲ್ಲ, ಸಾವಿಗಾಗಿ ಹಪಹಪಿಸಿದವರಿಲ್ಲ, ಕೊಂದು ಸೇಡುತೀರಿಸಿಕೊಳ್ಳಿ ಎಂದು ಯಾರೂ ಕೇಳಲಿಲ್ಲ. ಹಾಗಾದರೆ ಪಾಕಿಸ್ತಾನವನ್ನು ಸುಮ್ಮನೇ ಬಿಡಬೇಕಾ? ಖಂಡಿತಾ ಇಲ್ಲ. ಪಾಕಿಸ್ತಾನವಷ್ಟೇ ಅಲ್ಲ ಜಗತ್ತಿನ ಯಾವುದೇ ರಾಷ್ಟ್ರವಾಗಿರಲಿ ಭಾರತದ ಆತ್ಮಗೌರವವನ್ನು ಕೆಣಕಿದರೆ ಸುಮ್ಮನೇ ಬಿಡಬೇಕಿಲ್ಲ, ಮತ್ತು ನಾವು ಹಾಗೆ ಕೆಣಕಿದವರನ್ನು ಸುಮ್ಮನೇ ಬಿಟ್ಟ ಉದಾಹರಣೆಗಳೂ ಇಲ್ಲ. ಆದರೆ ನೆನಪಿರಲಿ ಈಗ ನಾವು ಕಾದಾಡಬೇಕಿರುವುದು ಪಾಕಿಸ್ತಾನದ ವಿರುದ್ಧವಲ್ಲ ಬದಲಾಗಿ ಭಯೋತ್ಪಾದನೆಯ ವಿರುದ್ಧ. ಪುಲ್ವಾಮಾದಲ್ಲಿ ಸೈನಿಕರ ರಕ್ತಹರಿಸಿದವರು ಭಯೋತ್ಪಾದಕರೇ ಹೊರತು ಪಾಕಿಸ್ತಾನದ ಸೈನಿಕರಲ್ಲ, ನಿಮಗೆ ಗೊತ್ತಿರಲಿ, ಪುಲ್ವಾಮಾ ಘಟನೆಯನ್ನು ಭಾರತದಂತೆಯೇ ಪಾಕಿಸ್ತಾನವೂ ಕೂಡ ಸಂಸತ್ ನಲ್ಲಿ ಖಂಡಿಸಿದೆ.
ಹಾಗಂತ ನಾವು ಪಾಕಿಸ್ತಾನವನ್ನು ಅಪ್ಪಿ ಮುದ್ದಾಡಬೇಕಿಲ್ಲ. ನಮ್ಮ ತಂಟೆಗೆ ಬಂದಾಗ ಕೈಕಟ್ಟಿ ಕೂರಬೇಕಿಲ್ಲ. ಬದಲಿಗೆಅದರ ರಕ್ತಕುಡಿಯಲು ಹಾತೊರೆಯುವುದರಲ್ಲೂ ಅರ್ಥವಿಲ್ಲ. ಹಾಗಾದರೆ ಮಾಡಬೇಕಿರುವುದೇನು? ದೇಶದ ಮೂಲೆ ಮೂಲೆಯಲ್ಲಡಗಿರುವ ಭಯೋತ್ಪಾದಕರನ್ನು ಮಟ್ಟಹಾಕವುದು ನಮ್ಮ ಗುರಿಯಾಗಬೇಕು. ಆನಿಟ್ಟಿನಲ್ಲಿ ನಾವು ನಮ್ಮ ಸರ್ಕಾರಗಳಿಗೆ ಒತ್ತಡಹೇರಬೇಕೇ ವಿನಃ ಯುದ್ಧ ಮಾಡಲಲ್ಲ. ಭಾರತ ಶಾಂತಿಪ್ರಿಯ ರಾಷ್ಟ್ರ. ಈ ದೇಶಕ್ಕೆ ತನ್ನದೇ ಆದ ಇತಿಹಾಸವಿದೆ, ಭಾರತ ಯಾರ ಮೇಲೂ ಕಾಲ್ಕೆರೆದು ಯುದ್ಧ ಮಾಡಿದ ಉದಾಹರಣೆಗಳಿಲ್ಲ, ಯಾವುದೋ ಉನ್ಮಾದದಲ್ಲಿ ಭಾರತ ಯುದ್ಧ ಘೋಷಣೆ ಮಾಡುವುದಿಲ್ಲ. ನಾವು ಗಾಂಧಿಯನ್ನು ನೆನಪಿಟ್ಟುಕೊಂಡಿದ್ದೇವೋ ಇಲ್ಲವೋ ಗೊತ್ತಿಲ್ಲ ಆದರೆ ಅಂತ ಗಾಂಧಿಯಂತ ಗಾಂಧಿ ಹುಟ್ಟಿದ ನೆಲದವರು ನಾವು. ನಮ್ಮ ರಾಷ್ಟ್ರಧ್ವಜದ ಬಿಳಿಯ ಬಣ್ಣ ಶಾಂತಿ ಸಂಕೇತ ಎಂದು ನಾವು ಹೇಳಿಕೊಳ್ಳುತ್ತೇವೆ ಆದರೆ ಈಗ ನಾವು ನಡೆದುಕೊಳ್ಳುತ್ತಿರುವ ರೀತಿ ಯಾವುದು? ತಾನಾಗೆ ಬಂದ ಯಾರನ್ನೂ ಸುಮ್ಮನೇ ಉಳಿಸಿದ ಉದಾಹರಣೆಗಳೂ ಇತಿಹಾಸದ ಯಾವ ಮೂಲೆಯಲ್ಲೂ ಸಿಗುವುದಿಲ್ಲ. ನಮ್ಮ ಸೈನಿಕರಿರುವುದು ಕಾಯುವುದಕ್ಕೇ ಹೊರತು ಯಾರನ್ನೋ ಕೊಲ್ಲುವುದಕ್ಕಲ್ಲ. ರಕ್ಷಿಸುವ ಕೈಗಳನ್ನು ರಕ್ತ ಕುಡಿಯುವಂತೆ ಒತ್ತಾಯಿಸಬೇಕಿಲ್ಲ. ಕೊನೆಯದಾಗಿ ಯುದ್ಧದ ಕುರಿತು ಧೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಕೆ. ಉನ್ನಿಕೃಷ್ಣನ್ ಹೇಳಿರುವ ಮಾತುಗಳನ್ನು ಯಥಾವತ್ತಾಗಿ ಹೇಳುತ್ತೇನೆ ಕೇಳಿ,
ನಾವೀಗ ಒಂದು ಸುಧೀರ್ಘದಾರಿಯ ದೊಡ್ಡ ತಿರುವಿನಲ್ಲಿದ್ದೇವೆ. ನಾವು ಪಾಕಿಸ್ತಾನದೊಂದಿಗೆ ಗುದ್ದಾಟದಲ್ಲಿಲ್ಲ, ಭಯೋತ್ಪಾದಕರೊಂದಿಗಿನ ಗುದ್ದಾಟದಲ್ಲಿದ್ದೇವೆ ಎಂದು ಹಲವರು ಹೇಳುತ್ತಾರೆ ಅದೇನೇ ಇರಲಿ, ದೇಶದಲ್ಲಿ ಏನಾಗುತ್ತಿದೆ ಎಂದು ನಾನು ಸುಮ್ಮನೇ ಗಮನಿಸುತ್ತಿದ್ದೇನೆ. ಈಗಾಗುತ್ತಿರುವ ಬೆಳವಣಿಗೆಗಳಿಂದ ಪಾಕಿಸ್ತಾನ ಏನನ್ನೂ ಕಳೆದುಕೊಳ್ಲುತ್ತಿಲ್ಲ, ಅವರು ಕಳೆದುಕೊಳ್ಳುತ್ತಿರುವುದು ಸಾಯಲು ಸಿದ್ದವಾಗಿರುವ ಭಯೋತ್ಪಾದಕರನ್ನು ಮಾತ್ರ. ಆದರೆ ನಾವು? ನಾವು ನಮ್ಮ ಭಾರತದ ಹೆಮ್ಮೆಯ ಸೈನಿಕರನ್ನು ಕಳೆದುಕೊಳ್ಲುತ್ತಿದ್ದೇವೆ. ಆ ಭಯೋತ್ಪಾದಕರಿಗೂ ನಮ್ಮ ಸೈನಿಕರಿಗೂ ಎಲ್ಲಿಂದೆಲ್ಲಿಯ ಹೋಲಿಕೆ? ನಾವು ನಮ್ಮ ಶತೃಗಳ ಸಾವನ್ನೂ ಸಂಭ್ರಮಿಸಲಾಗುವುದಿಲ್ಲ, ಅದು ನಮ್ಮ ಭಾರತದ ಸಂಸ್ಕತಿಯೂ ಅಲ್ಲ. ನಾವೀಗ ಬಹಲ ಜಾಗೃತವಾಗಿರಬೇಕು, ನಾವು ಯಾರ ಸಾವನ್ನೂ ಸಂಭ್ರಮಿಸಬಾರದು, ಅದು ನಮ್ಮ ಶತೃವಿನ ಸಾವಾಗಿದ್ದರೂ ಕೂಡ. ಯಾಕೆಂದರೆ ಯಾರ ಮನೆಯಲ್ಲಾದರೂ ಸಾವು ಸಾವೇ.
ಇದು ನನ್ನ ವೈಯಕ್ತಿಕ ಅನಿಸಿಕೆ. ಅನಿವಾರ್ಯತೆ ಬಂದಾಗ ಮಾತ್ರವೇ ನಾವು ಕೊಲ್ಲಬೇಕಾಗುತ್ತದೆ. ನಾವು ತಿಳಿದುಕೊಂಡಿರುವಂತೆ ನಮ್ಮ ಸೈನ್ಯ ಇರುವುದು ಯಾರನ್ನೋ ಕೊಲ್ಲುವುದಕ್ಕಲ್ಲ, ಅವರ ಕರ್ತವ್ಯವೇ ನಮ್ಮನ್ನು ಕಾಯುವುದು. “ನಮ್ಮನ್ನು ಕೊಲ್ಲುವವರಂತೆ ನೋಡಬೇಡಿ, ನಾವು ದೇಶಕ್ಕಾಗಿ ಕೆಲವೊಮ್ಮೆ ಕೊಲ್ಲಬಹುದು ಆದರೆ ನಮ್ಮ ಕೆಲಸ ಕೊಲ್ಲುವುದಲ್ಲ ಬದಲಾಗಿ ದೇಶ ಕಾಯುವುದು, ನಾವು ಅಲ್ಲಿರುವುದು ಯಾರನ್ನಾದರೂ ಕೊಲ್ಲುವುದಕ್ಕಲ್ಲ. ಕೊಲ್ಲುವವರನ್ನು ತಡೆಯುವುದಕ್ಕೆ ಎಂದು ಸಂದೀಪ್ ಉನ್ನಿಕೃಷ್ಣನ್ ಸದಾ ಹೇಳುತ್ತಿದ್ದರು.” ನೆನಪಿರಲಿ ಭಾರತ ತಾನಾಗಿಯೇ ಹೋಗಿ ಯಾರನ್ನೂ ಕೊಂದ ಇತಿಹಾಸವಿಲ್ಲ. ಇದು ಕೆ. ಉನ್ನಿಕೃಷ್ಣನ್ ಅವರ ಮಾತು, ದಯಮಾಡಿ ಸ್ವಲ್ಪ ಯೋಚಿಸಿ.
ಭಾರತ ಬೌದ್ಧಿಕವಾಗಿ ಹಿಂದೆಂದೂ ಕಾಣದಷ್ಟು ಇಬ್ಬಾಗವಾಗುತ್ತಿದೆ. ಅದಕ್ಕೆ ಕಾರಣ ನಮ್ಮ ಸಿದ್ಧಾಂತಗಳು, ಧರ್ಮ, ರಾಜಕೀಯ ಮತ್ತೇನೇನೋ,,, ಈದೇಶದಲ್ಲಿದ್ದುಕೊಂಡು ದೇಶದ್ರೋಹದ ಕೆಲಸ ಮಾಡುವವರಾರನ್ನೂ ಸುಮ್ಮನೆ ಬಿಡಬೇಕಿಲ್ಲ, ಹಾಗೆಂದು ಯಾರದೋ ತಪ್ಪಿಗೆ ಮತ್ತಾರನ್ನೋ ಶಿಕ್ಷಿಸುವುದೂ ತರವಲ್ಲ. ದೇಶದ ಭದ್ರತೆ, ಸೇನೆ, ಸೈನಿಕರ ತ್ಯಾಗ, ದೇಶಭಕ್ತಿಯ ವಿಚಾರಬಂದಾಗ ಎಲ್ಲರೂ ಒಗ್ಗಟ್ಟಾಗಿ ನಿಲ್ಲುತ್ತಾರೆ ಅದು ನಮ್ಮ ದೇಶಧ ಸೌಂದರ್ಯ. ಹಿಂದೆ ಪಾಕಿಸ್ತಾನದ ವಿರುದ್ದ ನಡೆದ ಮೂರೂ ಯುದ್ಧಗಳಲ್ಲೂ ನಾವು ಗೆದ್ದಿದ್ದೇವೆ. ಮತ್ತು ನಾಳೆ ಯುದ್ಧ ನಡೆದರೂ ನಾವು ಗೆಲ್ಲುತ್ತೇವೆ ಅದು ಭಾರತದ ತಾಕತ್ತು. ಮುಂದೆಯು ಅಷ್ಟೆ ಅಧಿಕಾರದಲ್ಲಿ ಕಾಂಗ್ರೆಸ್ ಇರಲಿ ಅಥವಾ ಬಿಜೆಪಿಯಿರಲಿ ನಾವು ದೇಶದ ಪರವಾಗಿರೋಣ. ನೆನಪಿರಲಿ ದೇಶ ಎಂದರೆ ದೇಶದ ಜನರೇ ಹೊರತು ಆಳುವವರು ಮತ್ತು ಪಕ್ಷಗಳಲ್ಲ.
–ದರ್ಶನ್ ಆರಾಧ್ಯ
ಪತ್ರಕರ್ತ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಂತಃಕರಣೆಯ ಹುಡುಕುತ್ತಾ..

- ಬಿ.ಶ್ರೀನಿವಾಸ
ಒಂದು ಊರಿನ ಮೌನ ಅರ್ಥವಾಗಬೇಕಾದರೆ, ದುಃಖ ಅರ್ಥವಾಗಬೇಕಾದರೆ ನಾವು ಏನನ್ನು ಮಾಡಬೇಕು? ನಾವು ಹೇಗೆ ಬದುಕಬೇಕು? ಗಾಯಗೊಂಡ ಬೆಟ್ಟ-ಗುಡ್ಡ ,ನದಿ ತೊರೆಗಳ ಬತ್ತಿಹೋದ ನೆಲದ ಕಣ್ಣಿಂದ ಪ್ರಾಣಿ-ಪಕ್ಷಿಗಳ ಆ ದೈನೇಸಿ ನೋಟಗಳಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಪ್ರೀತಿ ,ಸಹಾನುಭೂತಿ ಗಳನ್ನು ಕಳೆದುಕೊಂಡವರು ಮಾತ್ರ ನಮ್ಮ ಸುತ್ತಮುತ್ತಲ ಬದುಕು ನರಕ ಸದೃಶವಾಗಿದ್ದರೂ ನೆಮ್ಮದಿಯಿಂದ ಉಣ್ಣ ಬಲ್ಲರು. ನಿದ್ರಿಸಬಲ್ಲರು, ಬರೆಯಬಲ್ಲರು.
ಬಳ್ಳಾರಿ ಜಿಲ್ಲೆಯ ಸೊಂಡೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಬಹುತೇಕ ಹಳ್ಳಿಗಳು ರೋಗಗ್ರಸ್ತ ಪೀಡಿತರಂತೆ ಕಾಣುತ್ತಿವೆ .ಕಳೆದ ದಶಕದ ಅವಧಿಯೊಂದರಲ್ಲಿ ನಡೆದ ಗಣಿಗಾರಿಕೆಯಿಂದಾಗಿ ಇಡೀ ಪ್ರದೇಶ ಶಾಶ್ವತ ಬರಪೀಡಿತ ಪ್ರದೇಶವಾಗಿ ಬಿಟ್ಟಿದೆ. ಅದಿರು ಸಾಗಾಣಿಕೆಯ ಹೆಚ್ಚಳದಿಂದಾಗಿ ಕಾರ್ಬನ್ ಡೈಯಾಕ್ಸೈಡ್ ಆಸ್ಫೋಟಿಸಿದೆ. ಅಪರೂಪದ ಗಿಡ-ಮರಗಳು, ಪಕ್ಷಿಗಳು ,ಅಳಿವಿನಂಚಿಗೆ ತಳ್ಳಲ್ಪಟ್ಟಿವೆ.
ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಟ್ಟವು. ಅದಿರು ಹೊತ್ತ ಲಾರಿಗಳಲ್ಲಿ ಮಕ್ಕಳ ಅಕ್ಷರಗಳನ್ನು ತುಂಬಿ ಕಳುಹಿಸಲಾಯಿತು. ಜನರು ಇಂತಹ ಬದುಕಿಗೆ ಹೊಂದಿಕೊಳ್ಳದೆ ಅನ್ಯ ಮಾರ್ಗವೇ ಇರಲಿಲ್ಲ. ಸತತ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ನಡೆದ ಗಣಿಗಾರಿಕೆಯಿಂದಾಗಿ ಜನರ ಸಾಕ್ಷರತೆಯ ಪ್ರಮಾಣ ಮತ್ತು ಜೀವನಾಯುಷ್ಯ ಪ್ರಮಾಣ ಪಾತಾಳಕ್ಕೆ ಕುಸಿದಿದೆ . ರಕ್ತಹೀನತೆಯಿಂದ ಬಳಲುವ ಮಹಿಳೆಯರ ಸಂಖ್ಯೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗಿಂತಲೂ ಜಾಸ್ತಿಯಾಗಿದೆ. 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು ಅಧಿಕವಾಗಿದೆ.
ಇಲ್ಲಿನ ಸಂಪನ್ಮೂಲ ಇರುವುದೇ ತಮ್ಮ ಭೋಗ ವಿಲಾಸಕ್ಕೆ ಎಂದು ರಾಜಕೀಯವರ್ಗ,ಉದ್ಯಮಿಗಳು ಮತ್ತು ಕೆಲ ಆಡಳಿತಶಾಹಿ ಅಧಿಕಾರಿಗಳು ತಿಳಿದುಕೊಂಡಿದ್ದರು ಬಳ್ಳಾರಿ ಜಿಲ್ಲೆ ಇರುವುದೇ ಲೋಲುಪತೆ ಗೋಸ್ಕರ ಇಲ್ಲಿ ಹಣವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಮತಗಳನ್ನು ಮತದಾರರನ್ನು ಕೊಂಡುಕೊಳ್ಳಬಹುದು, ರಾಜಕೀಯ ಚುನಾವಣಾ ಪ್ರಚಾರಕ್ಕೆ ದಿನವೊಂದಕ್ಕೆ ಲಕ್ಷದಂತೆ ತಿಂಗಳುಗಟ್ಟಲೆ ಪ್ರಚಾರ ಮಾಡಿದ ಸಿನಿತಾರೆಯರಿಗೇನೂ ಕಡಿಮೆ ಇಲ್ಲ.ಸಂಪನ್ಮೂಲಗಳ ಹಗಲು ದರೋಡೆ ರಾಜಾರೋಷವಾಗಿ ನಡೆದುಹೋಯಿತು.
ಈ ಊರುಗಳಲ್ಲಿ ಬುಡುಬುಡುಕಿಯವರಿದ್ದರು, ಹಗಲುವೇಷಗಾರರು, ನಕ್ಕುನಗಿಸುವ ಹಾಡುಗಾರರು, ಬಯಲಾಟದವರು,ಕುರ್ರಮಾಮುಡು ವಸ್ತುನ್ನಾಡು…ಟಿಮ್ ಟಿಮ್….ಎನ್ನುತ್ತ ಬರುವವರು,ಗಿಣಿಶಾಸ್ತ್ರ ಹೇಳುವವರು ,ಬಣ್ಣಬಣ್ಣದ ಹರಳು ಮಾರುವ ಮಹಾ ಗಟ್ಟಿಗಿತ್ತಿಯರು, ಕಾಡಿನ ಗರ್ಭ ಹೊಕ್ಕು ಒಣ ಮರದ ಕಟ್ಟಿಗೆ ತಂದು, ಹೊತ್ತು ಮಾರಿ ಜೀವಿಸುವ ಲಂಬಾಣಿ ಯಾಡಿಗಳಿದ್ದರು. ಜೊತೆಗೆ ಅವರ ಉಡಿಗಳಲ್ಲಿ ಕಾರಿ, ಕವಳಿ,ಪುಟ್ಲಾಸು, ಬಿಕ್ಕಿ ಹಣ್ಣಿನಂತಹ ಹಣ್ಣುಗಳು ಇರುತ್ತಿದ್ದವು.
ಆಹಾರ ಸಂಪಾದನೆಯ ಬೇರೆ ಮೂಲಗಳೇ ಗೊತ್ತಿಲ್ಲದ ಇವರಿಗೆ ಭಿಕ್ಷೆಯೊಂದೇ ಉಳಿದಿರುವ ಮಾರ್ಗ. ಇವರುಗಳೆಲ್ಲಾ ಸಮಾಜದ ಕಣ್ಣಿನಲ್ಲಿ ಅಪರಾಧಿಗಳಂತೆ ಕಾಣುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ .ಇವರನ್ನು ಇವರ ಕಲೆಯನ್ನು ಗೌರವಿಸುವ ಒಂದು ಸಮುದಾಯವೇ ನಾಶವಾಗಿಹೋಯಿತು.ರೊಕ್ಕಾ ಕೊಟ್ಟರೆ ಏನು ಬೇಕಾದುದನ್ನು ಪಡೆಯಬಹುದೆಂಬ ಅಹಂ-ಭಾವಹೀನ ಮನುಷ್ಯರನ್ನು ಸೃಷ್ಟಿಸುತ್ತಾ ನಡೆದಿದೆ.
ಸೊಂಡೂರು -ಬಳ್ಳಾರಿ ಜಿಲ್ಲೆಯ ಮಲೆನಾಡು .ಪುಟ್ಟ ಕಾಶ್ಮೀರ. ಬೆಟ್ಟ ಗುಡ್ಡಗಳಿಂದ ಆವೃತವಾದ ಸುಂದರನಾಡು .ಅತಿ ಫಲವತ್ತಾದ ಮಣ್ಣು ತುಂಬಿದ ನೆಲ. ಜಲಮೂಲಗಳುಳ್ಳ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ, ಸೊಂಡೂರಿನ ಸುತ್ತಮುತ್ತ ಸುಮಾರು 40 ಕಿಲೋಮೀಟರ್ ಉದ್ದದ, 15 ಕಿಲೋಮೀಟರುಗಳಷ್ಟು ಅಗಲದ ಬೆಟ್ಟಗಳಲ್ಲಿ ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಳಿವೆ. ಇಲ್ಲಿ ದೊರೆಯುವ ಹೆಮಟೈಟ್ ಉತ್ತಮ ದರ್ಜೆಯ ಕಬ್ಬಿಣದ ಅದಿರು. ಹಾಗೆಯೇ ಮ್ಯಾಂಗನೀಸ್ ಕೂಡ ಡೇರಸ್ ಫಿಲೈಟ್ ಎಂಬ ಕಲ್ಲುಗಳಲ್ಲಿ ಹೇರಳವಾಗಿ ದೊರೆಯುತ್ತದೆ.
ಇದೇ ರೀತಿಯ ಸಂಪತ್ತು ಬೇರೆ ಕಡೆಗಳಲ್ಲಿ ಸಿಗುವುದಿಲ್ಲ ಎಂದಲ್ಲ. ವಿಶ್ವದರ್ಜೆಯ ಶ್ರೇಷ್ಠ ಮಟ್ಟದ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಸುಬ್ರಾಯನಹಳ್ಳಿ ,ರಾಮಘಡಗಳಂತಹ ಹಳ್ಳಿಗಳ ಶಿಖರಗಳಲ್ಲಿ ದೊರೆಯುತ್ತವೆ. ಈ ಅದಿರಿನ ವಿಶೇಷವೆಂದರೆ ಬಹುತೇಕ ಅದಿರುಗಳಲ್ಲಿ ಸೇರಿಹೋಗಿರುವ ಫಾಸ್ಪೇಟ್ ಮತ್ತು ಸಲ್ಫರ ನಿಗದಿತ ಅಂಶಕ್ಕಿಂತ ಕಡಿಮೆ ಇರುವುದರಿಂದ ಇಲ್ಲಿನ ಮ್ಯಾಂಗನೀಸ್ ವಿಶ್ವ ಪ್ರಸಿದ್ಧವಾಗಿದೆ ಹಾಗಾಗಿ ಇಲ್ಲಿನ ಅದಿರಿಗೆ ವಿಶೇಷ ಬೇಡಿಕೆ.
ಬಳ್ಳಾರಿ ಜಿಲ್ಲೆಯ ಸೊಂಡೂರು ಕೇವಲ ಒಂದು ಊರು,ಪ್ರದೇಶ ಆಗಿರಬಹುದು .ಆದರೆ ಆತ ಊರಿನ ದುರಂತ ಇಡೀ ಪ್ರಪಂಚವನ್ನೇ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಊರಿನ ಅವನತಿಯ ಆರಂಭವಾಯಿತು. ಯಥೇಚ್ಛವಾಗಿ ಗಣಿಗಾರಿಕೆಗೆ ಸರ್ಕಾರವೇ ಅನುಮತಿ ನೀಡುವಾಗ ಅದರ ಹೆಸರಿನಲ್ಲಿ ರಾಜಕಾರಣಿಗಳು ಅಕ್ರಮ ಗಣಿಗಾರಿಕೆ ನಡೆಸುವಾಗಲಂತೂ ಊರು ಆಹುತಿಯಾಗಿ ಬಿಟ್ಟಿತ್ತು. ಮನುಷ್ಯರು ಕೂಲಿಯ ಯಂತ್ರಗಳಾಗಿ ಹೋದರು.
ಮನುಷ್ಯನೇ ಸಂಶೋಧಿಸಿದ ಮೂಲ ಕಸುಬುಗಳಾದ ಕೃಷಿ ,ಬಡಗಿತನ, ಕ್ರೀಡೆ ಹಾಗೂ ಮೈಥುನಗಳು ಸಹ ಕೇವಲ ಯಾಂತ್ರಿಕವೆಂಬಂತೆ ಆಗಿಹೋದವು.ಎಷ್ಟೋ ದಿನಗಟ್ಟಲೆ,ತಿಂಗಳುಗಟ್ಟಲೆ, ಗಣಿಗಾರಿಕೆ ಬೆಟ್ಟಗಳ ತುತ್ತತುದಿಯಲ್ಲಿ ನಡೆಯುತ್ತಿತ್ತು.ಕೂಲಿಯವರೂ ಅಷ್ಟೂ ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತಿತ್ತು. ಕೂಲಿಯ ಹೆಣ್ಣು ಗಂಡುಗಳು ಅದಿರಿನ ನಿಕ್ಷೇಪದ ಬಯಲಿನಲ್ಲಿಯೇ ಮೈಥುನಕ್ಕಿಳಿದುಬಿಡುತ್ತಿದ್ದರು.ಮಕ್ಕಳು ಉಣ್ಣುವ ಅನ್ನದಲ್ಲಿ ಕೆಂಪುಧೂಳು ಸೇರಿಸಿಯೇ ಉಣ್ಣಬೇಕಾಗುತ್ತತ್ತು. ಕಂಟೇನರುಗಳಲ್ಲಿಯೇಇವರ ಜೀವನ ಮುಗಿದುಹೋಗಿರುತ್ತಿತ್ತು.ಮನುಷ್ಯ ಹೀಗೂ ಬದುಕಬಲ್ಲ ಎಂಬುದನ್ನು ಯಾರೂ ಕೂಡ ಯೋಚಿಸಲಿಲ್ಲ.
ಗಣಿ ಸಾವ್ಕಾರಗಳು ಸಾಮಾನ್ಯ ಜನರ ಕಣ್ಣಿಗೆ ಇಂದಿಗೂ ವೈಭೋಗದ ತುಣುಕುಗಳ ಹಾಗೆ ಕಾಣಿಸುತ್ತಿದ್ದಾರೆ. ಜನರನ್ನು ,ಅವರ ಗಮನವನ್ನು ಬೇರೆಡೆಗೆ ಸೆಳೆಯದಂತೆ ಎಷ್ಟು ಪ್ರಯತ್ನಗಳು ನಡೆದಿರುತ್ತವೆ ಎಂದರೆ, ಊರಿನಲ್ಲಿ ಎಲೆಕ್ಷನ್ ಇರಲಿ ,ಇಲ್ಲದಿರಲಿ ,ಧಣಿ- ರಾಜಕಾರಣಿಯ ವಿವಿಧ ರೀತಿಯ ಬಣ್ಣಬಣ್ಣದ ಕಟೌಟುಗಳು ದಾರಿಯುದ್ದಕ್ಕೂ ರಾರಾಜಿಸುತ್ತವೆ. ಪ್ರತಿವಾರವೂ ಕಟೌಟ್ಗಳು ಬದಲಾಗುತ್ತಲೇ ಇರುತ್ತದೆ.
ಇನ್ನು ಕೆಲ ಸಾಹುಕಾರ ಗಳಂತೂ ತಾವೇ ಆಧುನಿಕ ಶ್ರೀ ಕೃಷ್ಣದೇವರಾಯ ಎಂದು ಭಾವಿಸಿ ,ಅವನಂತೆಯೇ ವೇಷಧರಿಸಿ ನಿಂತು ಬೃಹತ್ ಕಟೌಟುಗಳನ್ನು ನಗರದ ವಿವಿಧ ಕಡೆಗಳಲ್ಲಿ ನಿಲ್ಲಿಸಲಾಯಿತು.ಬಳ್ಳಾರಿಯ ಗಣಿಧಣಿಗಳದ್ದೂ ಇನ್ನೊಂದು ರೀತಿ.ಮುಂಜಾನೆಯ ಟಿಫನ್ನಿಗೆ ಬೆಂಗಳೂರಿನ ಎಂ.ಟಿ.ಆರ್.ಹೋಟೆಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋದರೆ,ಅದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಹೈದರಾಬಾದ್ ವರೆಗೂ ವಾಕಿಂಗ್ ಹೋಗುವವರಿದ್ದರು.ವಿಮಾನದಲ್ಲಿ ಮಧ್ಯಾನ್ಹದ ಊಟಕ್ಕೆ ಬೊಂಬಾಯಿಗೆ ಹೋಗುತ್ತಿದ್ದರು.ರಾತ್ರಿ ಮತ್ತೆಲ್ಲಿಗೋ…!ಎಷ್ಟೋ ಜನ ಸಿನಿಮಾದವರು ರಾತ್ರೋರಾತ್ರಿ ಬಂದುಹೋಗುವುದನ್ನು ನೋಡಿದವರು ಇದ್ದರು.
ಲೋಲುಪತೆಗೆ ಜನರ ಬದುಕನ್ನೆ ಆಹುತಿ ತೆಗೆದುಕೊಂಡ ಧಣಿಗಳು,ಕೊನೆಗೆ ಜನರು ತಮ್ಮ ಕಡೆಗೆ ದೃಷ್ಟಿ ಹರಿಸಲೆಂದು ಸದಾ ಒಂದಿಲ್ಲೊಂದು ಸುದ್ದಿಯಿಂದ ಜನರನ್ನು ಭ್ರಮಾಲೋಕದಲ್ಲಿ ತಿರುಗುವಂತೆ ನೋಡಿಕೊಂಡರು.”ಸಾಮೂಹಿಕ ಮದುವೆ”ಗಳಂತಹ ಕೃತ್ರಿಮ ಕಾರ್ಯಕ್ರಮಗಳಿಗೆ ಕೈ ಹಾಕಿದರು.ಆ ಮೂಲಕ ಅಲ್ಲಿ ಬಂದ ವಧು-ವರರಿಗೆ ತಾಳಿ- ಬಟ್ಟೆ ಕೊಡುವುದರ ಮೂಲಕ “ದಾನಶೂರ”ರು ಎನಿಸಿಕೊಂಡರು.ಆದರೆ ಇಂತಹ ವಿವಾಹಗಳು ಹೆಸರಿನಲ್ಲಿ ಜನರು ಪ್ರಶ್ನೆ ಕೇಳುವುದನ್ನು,ಆಲೋಚನೆಯನ್ನೆ ಮಾಡದಿರುವ ಹಾಗೆ,ಅರ್ಥಮಾಡಿಕೊಳ್ಳುವ ಅವರು ಗುಣವನ್ನೆ ನಾಶಪಡಿಸಲಾಯಿತು.ಇಂತಹ ಗಣಿಧಣಿಗಳ ಭಿಕ್ಷೆಗೆ ಕೆಲ ಮಠಾಧೀಶರು ಕೈಚಾಚಿದರು.
ಜನರ ಬದುಕು ಕುಸಿಯಲು ಎಷ್ಟೊಂದು ಜನ ಒಂದಾದರು?
ನೆನೆಸಿಕೊಂಡರೆ ರೋಷ ಆವೇಶವೂ ಅಂತಕರುಣೆಯೂ ಒಟ್ಟಿಗೆಉಕ್ಕಿಬರುತ್ತದೆ.
ಜಿಲ್ಲೆಯ ಗಡಿಪ್ರದೇಶದ ಒಂದು ಬಹುಮುಖ್ಯವಾದ ಹಳ್ಳಿ ಕಮ್ಮತ್ತೂರು. ಈ ಊರಿನಲ್ಲಿ ನಡೆದಷ್ಟು ಗಣಿಗಾರಿಕೆ ಮತ್ತು ಡಿಪ್ಪಿಂಗ್ ಬೇರೆಲ್ಲೂ ನಡೆದಿರಲಿಕ್ಕಿಲ್ಲ .ಊರಿನ ಮನೆ ಗಳಿಗಿಂತಲೂ ಅಧಿಕವಾದ ಸ್ಟಾಕ್ ಯಾರ್ಡ್ಗಳು ನಿರ್ಮಾಣವಾದವು. ಧೂಳಿನಿಂದಾಗಿ ಮತ್ತು ವಿಪರೀತ ಶಬ್ದದಿಂದಾಗಿ ಅಸ್ತಮಕ್ಕೆ, ಕಿವುಡುತನಕ್ಕೆ ಬಲಿಯಾದವರಿಗೆ ಲೆಕ್ಕವಿಲ್ಲ. ಅಪರಿಮಿತ ಗಣಿಗಾರಿಕೆಯ ಪ್ರಭಾವದಿಂದಾಗಿ ಆಕ್ಸಿಜನ್ ಪ್ರಮಾಣ ಕುಸಿತ ಕಂಡಿತು. ಇಡೀ ಊರಿಗೆ ಊರೇ ಐಸಿಯುನಲ್ಲಿ ಇರುವಂತೆ ಭಾಸವಾಗುತ್ತಿದೆ.ಇಂತಹ ಎಷ್ಟೋ ಹಳ್ಳಿಗಳು ಉಸಿರಾಡಲು ಕಷ್ಟಪಡುತ್ತಿವೆ.
ಒಂದು ಕಾಲದ ರೈತ ಹೊಲ, ಗದ್ದೆ, ಮಣ್ಣನ್ನು ಪೂಜಿಸುತ್ತಿದ್ದ. ಆರಾಧಿಸುತ್ತಿದ್ದ .ಗುಡ್ಡಬೆಟ್ಟ ಸೂರ್ಯ ಚಂದ್ರ ತಾರೆಯರೇ ಆತನ ದೇವರುಗಳಾಗಿದ್ದವು. ದುಡಿಮೆಯೇ ಆತನ ಸಂಪತ್ತು. ಇಂತಹ ಕುಟುಂಬಗಳು ಇಲ್ಲದ, ಪ್ರಕೃತಿಯೂ ಇಲ್ಲದ ,ಅಭಿಶಾಪದ ಊರುಗಳಲ್ಲಿ ಶಾಪಗ್ರಸ್ತರಂತೆ ಮತ್ತೊಮ್ಮೆ ಯುದ್ಧಕ್ಕೆ ಹೊರಟ ಕೆಂಪು ಸೈನಿಕರಂತೆ ಇಲ್ಲಿನ ಜನ ಕಾಣಿಸುತ್ತಾರೆ.
ಎಲ್ಲಾ ಮುಗಿದ ಮೇಲೆ ಊರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ದಿನಾಂಕ: 6 -10-2016 ರಂದು ಸರ್ಕಾರ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಆದೇಶಿಸಿತು.
ಕಾಲವೀಗ ತಣ್ಣಗೆ ನಿಶ್ಯಬ್ದ..!
ಯಾರದ್ದೋ ಹೆಣವೊಂದು ಸದ್ದಿಲ್ಲದೆ ಬಿದ್ದುಕೊಂಡಿರುವ, ಇನ್ನೂ ಯಾರೋ ಬರುವವರಿದ್ದಾರೆ ಎಂದು ಹೆಣವನ್ನು ಎತ್ತದೆ, ಕಾದು ಕುಳಿತಿರುವಂತೆ ಸೊಂಡೂರಿನ ಬೀದಿಗಳಿವೆ.
ಬಡತನದ ರೇಖೆಗಳನ್ನೆಲ್ಲಾ ಮೈಮೇಲೆ ಹೊದ್ದು ಕುಳಿತವರಂತೆ ಕಾಣುವ ಮುದುಕರು ,ಸಾಯಲಿಕ್ಕೂ ಆಗದೆ ಬದುಕಲೂ ಆಗಿದೆ, ದುಸ್ಥಿತಿಗೆ ಕಾರಣವನ್ನು ಹುಡುಕುತ್ತಿರುವವರ ಹಾಗೆ ಹಣೆಗೆ ಕೈ ಹಚ್ಚಿ ಕುಳಿತ ದೃಶ್ಯಗಳು ಹೃದಯವನ್ನು ಕಲಕುತ್ತದೆ .ಇದು ನಾಗರಿಕ ಸಮಾಜವೊಂದು ತನ್ನದೇ ಊರಿನ ಸಮುದಾಯವನ್ನು ಚಿತ್ರಹಿಂಸೆಗೆ ಒಳಪಡಿಸಿದ ಹಾಗೆ.ನಾನು ಕಂಡು ಮಾತನಾಡಿಸಿದರವಲ್ಲಿ ” ನನ್ನ ಹಣೆಬರಹ…ನೋಡಪಾ, ಅಲಸಂದಿ,ಅವರೆ,ಜ್ವಾಳ,ನವಣಿ,
ಸಜ್ಜಿ ಬೆಳೀತಿದ್ದೆ. ಏಪೆಂಪ್ಸಿಗೆ ಹಾಕಿ ರೊಕ್ಕ ಎಣಿಸ್ಕಂಡು ಬರ್ತಿದ್ದೆ.ಮಕ್ಕಳು ಮೀರಿ ಎಲ್ಲ ಆರಾಮಾಗಿದ್ವಿ…ಮೈನ್ಸು ಮೈನ್ಸೂ ಅಂತಂದು ಮೈಯೆಲ್ಲಾ ತಗಂಬುಡ್ತು ನನ್ನಪ್ಪನೆ” ಎಂದು ವಿಷಾದದಿಂದ ಹೇಳುತ್ತಾರೆ.
ದೂರದ ಊರುಗಳ ಗೆಳೆಯರಿಗೆ ಸೊಂಡೂರು ಎನ್ನುವುದು ಸುಂದರ ಸ್ವಪ್ನದ ಹಾಗೆ, ಕಾಡುತ್ತಲೇ ಇರುತ್ತದೆ. ಗಣಿಗಾರಿಕೆಯಿಂದ ರಾಜ್ಯ,ದೇಶ ವ್ಯಾಪಿ ಸುದ್ದಿಯಾಗಿ, ಅಂತರಾಷ್ಟ್ರೀಯ ಪ್ರಖ್ಯಾತಿಯನ್ನು ಗಳಿಸಿಬಿಟ್ಟಿತು. ಈಗಲೂ ‘ಚುನಾವಣೆ ‘ಎಂಬ ಶಬ್ದ ಕೇಳಿದರೆ ಸಾಕು, ಜನರ ಕಣ್ಣಲ್ಲಿ ಹೊಳಪು ಮೂಡುತ್ತದೆ. ಬಾಯಲ್ಲಿ ನೀರೂರುತ್ತದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎಂದು ನಾವು ಭಾವಿಸಿದ್ದು ,ಇಲ್ಲಿ ಅಣಕದಂತೆ ಭಾಸವಾಗುತ್ತಿದೆ.
*******
ಆದರೆ ,ಅಭಿವೃದ್ಧಿಯ ದೃಷ್ಟಿಯಿಂದ ಹೊರಗಿನ ಪ್ರಪಂಚಕ್ಕೆ ಸಾಕಷ್ಟು ಶ್ರೀಮಂತ, ಎಲ್ಲಾ ಬ್ರಾಂಡೆಡ್ ಕಂಪನಿಗಳ ಅಂಗಡಿಗಳಿರುವ ಹೊಸಪೇಟೆ-ಬಳ್ಳಾರಿಯಂತಹ ಊರುಗಳಲ್ಲಿ ಸ್ಟಾರ್ ಹೋಟೆಲ್ಗಳು ನಡೆಯುತ್ತಿವೆ. ಸೊಂಡೂರಿನ ಗಾಂಧಿ ಕರಕುಶಲ ಕೈಗಾರಿಕಾ ಕೇಂದ್ರಕ್ಕೂ ಬೀಗ ಬಿದ್ದಿದೆ.
ಹೌದು, ಅಭಿವೃದ್ಧಿಯೆಂದರೆ ಈ ಪ್ರದೇಶಗಳ ಜನತೆ ಹಸಿವಿನಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಲಿಂಗ ಅಸಮಾನತೆಯಿಂದ ಸಾಮಾಜಿಕ ಅಸಮಾನತೆಯ,ಅವಮಾನಳಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಎನ್ನುವ ಅಮರ್ತ್ಯಸೇನರು ಕೇಳುವ ಪ್ರಶ್ನೆಗಳನ್ನು ಕೇಳಿಕೊಂಡರೆ…ಎಲ್ಲಾ ಪ್ರಶ್ನೆಗಳಿಗೂ “ಇಲ್ಲ”ಎಂಬ ರೆಡಿ ಉತ್ತರ ದೊರಕುವುದು.
ಈ ಎಲ್ಲಾ ಸ್ವಾತಂತ್ರ್ಯಗಳನ್ನು ಯಾರೋ ಕೊಡಲು ಸಾಧ್ಯವಿಲ್ಲ.ಅವರು ಪಡೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ.
***
ವಯಸ್ಸಾಗಿ ಮುದುಕರಾದಾಗ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಕುಳಿತು ಅಂತರ್ಮುಖಿಗಳಾಗಿಬಿಡುವುದು ವಯೋಸಹಜ ಗುಣ. ಆದರಿಲ್ಲಿ ಮಕ್ಕಳೂ ಅಂತರ್ಮುಖಿಗಳಾದರೆ… ?ಕಥೆಗಳು ಬೆಂಕಿಯ ಕೆನ್ನಾಲಗೆ ಹಾಗೆ ಸುಡುತ್ತಿವೆ. ಈ ಜನಗಳು ಅನುಭವಿಸಿದ, ಅನುಭವಿಸುತ್ತಿರುವ ಕರಾಳ ನೋವುಗಳನ್ನು ಹಿಡಿದಿಡಲು ಒಂದು ಜೀವನ ಸಾಕಾಗುವುದಿಲ್ಲ ಎನಿಸುತ್ತಿದೆ.
ಇಲ್ಲಿನ ಎಲ್ಲಾ ಅಕ್ಷರಗಳು ವರ್ತಮಾನದ ಒತ್ತಡಗಳಿಂದಲೇ ಬಂದಿರುವುವು ಎಂದೇ ಭಾವಿಸಿದ್ದೇನೆ. ಹಿಂದಿನಿಂದಲೂ ನನ್ನನ್ನು ಕಾಡುತ್ತಿದ್ದ ಘಟನೆಗಳು, ನಂತರದಲ್ಲಿ ಗಣಿಗಾರಿಕೆಯೆಂಬ ಪೀಕ್ ಅವಧಿಯಲ್ಲಿನ ಘಟನೆಗಳು ,ಜನರ ಬದುಕು, ನಂತರದ ದಿನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಬೀದಿಪಾಲಾದ ಕುಟುಂಬಗಳ ರೋದನವನ್ನು ಕೆಲಮಟ್ಟಿಗಾದರೂ ತಿಳಿಸಬೇಕಿತ್ತು.
ಬರಹಗಾರನೊಬ್ಬ ಯಾಕೆ ಬರೆಯುತ್ತಾನೆ ಎಂಬುದನ್ನು ಪೂರ್ಣ ಅರ್ಥಮಾಡಿಸಿದ್ದು ಈ ಬರಹಗಳೆ.ಎದೆಯ ಮೂಲೆಯಲ್ಲಿ ಅಡಗಿದ್ದ ಭಾವಗಳು ಕಾಡಿದಾಗಲೆಲ್ಲ ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದು,ಇತ್ತೀಚೆಗೆ ಮೊಬೈಲಿನಲ್ಲಿ ಟೈಪಿಸಿ ಕೊಂಡು ನಿರಾಳವಾಗುತ್ತಿದ್ದೆ.ಬಹಳ ವರ್ಷಗಳ ಹಿಂದಿನಿಂದಲೂ ಹಿಡಿದಿಟ್ಟುಕೊಂಡಿದ್ದ ಕರಾಳ ಸತ್ಯಗಳನ್ನು ಬರೆಯುವಾಗ ಕಣ್ಣು ಮುಂಜಾದದ್ದು,ಎದೆ ಭಾರವಾದದ್ದೂ ಇದೆ.ಸಾಮಾನ್ಯ ಕೃಷಿಕನೋರ್ವ ಕಣ್ಣೆದುರೇ ಹುಚ್ಚನಾಗಿ ತಿರುಗಾಡುವಾಗ ತುಂಬಾ ಡಿಸ್ಟರ್ಬ್ ಆಗಿದ್ದಿದೆ.
ಹೀಗೆ ನನ್ನನ್ನು ,ಡಿಸ್ಟರ್ಬ್ ಮಾಡಿದ ಈ ಭಾವಗಳು ನನ್ನ ಎದೆಯಿಂದ ಹಾರಿ ಹೀಗೆ ಹೊರಬರುವ ತನಕವೂ ಸಮಾಧಾನವಿದ್ದಿಲ್ಲ.ನಾನು ಸಾಮಾಜಿಕ ಜವಾಬ್ದಾರಿಯೊಂದಿಗೆ ನನಗನಿಸಿದ ಭಾವಗಳನ್ನು ಹೊರಹಾಕಿರುವೆ…..ನಿಟ್ಟುಸಿರಿನೊಂದಿಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಪಿಟೀಲು ಬಿಟ್ಟು ಏಳುತ್ತಿಲ್ಲ

- ಸಂತೋಷ್ ಉಂಡಾಡಿ
ರೋಮ್ ಹೊತ್ತಿ ಉರಿಯುತ್ತಿರುವಾಗ
ನೀರೊ ಪಿಟೀಲು ನುಡಿಸುತ್ತಿದ್ದನಂತೆ
ಪ್ರಜೆಗಳು ಸಂಭ್ರಮಿಸುತಿದ್ದರಂತೆ
ಇಲ್ಲಿಯೂ ಹಾಗೆ..!!
ಹೊತ್ತಿ ಉರಿಯುತಿದೆ ರಾಜ್ಯ
ದ್ವೇಷ ಕಾರುತಿವೆ ಮನಸುಗಳು
ಆದರೆ ನಮ್ಮ ನೀರೊ..!!!
ದಾಡಿ ನೀವಿಕೊಳ್ಳುತ್ತಿದ್ದಾನೆ, ವೇಷ ಬದಲಿಸುತ್ತಿದ್ದಾನೆ ನವಿಲಿಗೆ ಅಕ್ಕಿ ತಿನ್ನಿಸುತ್ತಾ ಹಾಯಾಗಿ ಕುಳಿತಿದ್ದಾನೆ..!!
ಮುಂದಿನ ಚುನಾವಣೆಗಾಗಿ ತಯಾರಿ ನಡೆಸಿದ್ದಾನೆ
ಸಮರ ಸೇನಾನಿ, ಹುಡುಕುತ್ತಿದ್ದಾನೆ ಹೊಸ ಕತೆಯ
ಹಾವಭಾವಕ್ಕೆನೂ ಕಮ್ಮಿಯಿಲ್ಲ, ಆವೇಶಕ್ಕೂ ಕೊರತೆ ಇಲ್ಲ..!!!
ಹೊಗಳು ಭಟರು, ವಂದಿಮಾಗಧರು
ಪುಂಖಾನುಪುಂಖವಾಗಿ, ಜಯಕಾರ ಹಾಕುತ್ತಿದ್ದಾರೆ
ಅಗ್ನಿ ಜ್ವಾಲೆಗಳು ಮಾತ್ರ ನಿಲ್ಲುತ್ತಿಲ್ಲ..!!!
ಕರುಣೆ ಒಲವುಗಳ ಮಾತೇ ಇಲ್ಲ.
ಸತ್ಯದ ದಹನ ಮಾತ್ರ ನಿತ್ಯ ನಿರಂತರ
ಆದರೂ ನಮ್ಮ ನೀರೊ ಪಿಟೀಲು ಬಿಟ್ಟು ಏಳುತ್ತಿಲ್ಲ, ನವಿಲು ನರ್ತಿಸುತ್ತಿಲ್ಲ…!!!
ಸುದ್ದಿದಿನ.ಕಾಂ|ವಾಟ್ಸಾಪ್|9980346243
