ದಿನದ ಸುದ್ದಿ
ಸಿಎಂ ಮಗನ ಭ್ರಷ್ಟಾಚಾರದ ವೃತ್ತಾಂತ : ಪವರ್ ಟಿವಿ ಬಂದ್ ಹಿಂದಿನ ಒಳ ರಾಜಕೀಯ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/10/power-tv_kannada_suddidina-77.jpg&description=ಸಿಎಂ ಮಗನ ಭ್ರಷ್ಟಾಚಾರದ ವೃತ್ತಾಂತ : ಪವರ್ ಟಿವಿ ಬಂದ್ ಹಿಂದಿನ ಒಳ ರಾಜಕೀಯ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/10/power-tv_kannada_suddidina-77.jpg&description=ಸಿಎಂ ಮಗನ ಭ್ರಷ್ಟಾಚಾರದ ವೃತ್ತಾಂತ : ಪವರ್ ಟಿವಿ ಬಂದ್ ಹಿಂದಿನ ಒಳ ರಾಜಕೀಯ', 'pinterestShare', 'width=750,height=350'); return false;" title="Pin This Post">
- ದಿನೇಶ್ ಅಮೀನ್ ಮಟ್ಟು
ಪವರ್ ಟಿವಿ ಚಾನೆಲ್ ಗೆ ಸಂಬಂಧಿಸಿದ ಬೆಳವಣಿಗೆಗಳಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಚಾನೆಲ್ ವರದಿ ಮಾಡಿರುವ ಭ್ರಷ್ಟಾಚಾರದ ಹಗರಣ, ಎರಡನೆಯದು ಟಿವಿ ಚಾನೆಲ್ ಪ್ರಸಾರವಾಗದಂತೆ ತಡೆಹಿಡಿದಿರುವ ಕ್ರಮ.
ಮುಖ್ಯಮಂತ್ರಿಯವರ ಕುಟುಂಬದವರು ಗುತ್ತಿಗೆದಾರರಿಂದ ಲಂಚ ವಸೂಲಿ ಮಾಡಿದ್ದಾರೆ ಎನ್ನುವುದು ಆರೋಪ. ಈ ಪ್ರಕರಣದಲ್ಲಿ ಮೂವರು ಪಾತ್ರಧಾರಿಗಳಿದ್ದಾರೆ. ಲಂಚ ಕೊಟ್ಟಿರುವ ಗುತ್ತಿಗೆದಾರ, ಲಂಚ ಪಡೆದಿರುವ ರಾಜಕಾರಣಿ ಮತ್ತು ವರದಿ ಮಾಡಿದ ಪತ್ರಕರ್ತ. ಅಧಿಕಾರಿಯೊಬ್ಬರು ಇದರಲ್ಲಿ ಪೋಷಕ ಪಾತ್ರದಲ್ಲಿದ್ದಾರೆ.
ಚಾನೆಲ್ ಭ್ರಷ್ಟಾಚಾರದ ಆರೋಪ ಮಾಡಿರುವುದು ಮುಖ್ಯಮಂತ್ರಿಯ ಮಗನ ವಿರುದ್ಧ. ಆದ್ದರಿಂದ ಮೇಲ್ನೋಟಕ್ಕೆ ಚಾನೆಲ್ ವರದಿ ಗುತ್ತಿಗೆದಾರನ ಪರ ಮತ್ತು ರಾಜಕಾರಣಿಯ ವಿರುದ್ಧ ಇದ್ದಂತೆ ಕಾಣಿಸುತ್ತಿತ್ತು. ವಿಚಿತ್ರವೆಂದರೆ ಪೊಲೀಸರಿಗೆ ದೂರು ನೀಡಿರುವುದು ರಾಜಕಾರಣಿ ಅಲ್ಲ, ಗುತ್ತಿಗೆದಾರ.
ಪತ್ರಿಕೆಯ ಮಾಲೀಕರು ತಿರುಚಿದ ದಾಖಲೆಗಳನ್ನು ತೋರಿಸಿ ಹಣವಸೂಲಿಗೆ ಪ್ರಯತ್ನಿಸಿದ್ದಾರೆ ಎನ್ನುವುದು ಗುತ್ತಿಗೆದಾರರ ದೂರು. ಆ ದೂರಿನನ್ವಯ ಸಿಸಿಬಿ ಪೊಲೀಸರು ಟಿವಿ ಚಾನೆಲ್ ಮಾಲೀಕರ ಮನೆಗೆ ವಿಚಾರಣೆಗೆ ಹೋಗಿದ್ದಾರೆ, ಚಾನೆಲ್ ನ ಕಚೇರಿಗೆ ಬಂದು ಅಲ್ಲಿನ ಕಂಪ್ಯೂಟರ್ ಗಳನ್ನು ವಶಕ್ಕೆ ತೆಗೆದುಕೊಂಡು ಜಾಲಾಡಿದ್ದಾರೆ.
ಕಾನೂನಿನ ದೃಷ್ಟಿಯಿಂದ ಈ ಹಂತದ ವರೆಗೆ ನಡೆದಿರುವುದು ವಿಚಾರಣೆಯ ಸಹಜ ಪ್ರಕ್ರಿಯೆ. ತಿರುಚಿದ ದಾಖಲೆಗಳ ಮೂಲ ಹುಡುಕಲು ಆರೋಪಿಗಳ ಕಂಪ್ಯೂಟರ್, ಮೊಬೈಲ್ ಗಳನ್ನು ವಶಕ್ಕೆ ಪಡೆಯುವುದು ಪೊಲೀಸ್ ವಿಚಾರಣೆಯ ಭಾಗ.ಪತ್ರಿಕೆ ಮತ್ತು ಚಾನೆಲ್ ಗಳ ಮಾಲೀಕರು ಇಲ್ಲವೇ ವರದಿಗಾರರ ವಿರುದ್ಧ ಆರೋಪ ಎದುರಾದಾಗ ಈ ರೀತಿಯ ವಿಚಾರಣೆ ಕರ್ನಾಟಕದಲ್ಲಿಯೇ ಅನೇಕ ಪ್ರಕರಣಗಳಲ್ಲಿ ನಡೆದಿವೆ.
ಎಡವಟ್ಟಾಗಿರುವುದು ಪ್ರಕರಣದ ಎರಡನೇ ಭಾಗದಲ್ಲಿ. ವಿಚಾರಣೆಗೆಂದು ಕಚೇರಿಗೆ ಹೋಗಿದ್ದ ಪೊಲೀಸರು ಒಂದು ಅತಿರೇಕದ ಹೆಜ್ಜೆ ಮುಂದಿಟ್ಟಿದ್ದಾರೆ. ಕಂಪ್ಯೂಟರ್ ಗಳನ್ನು ವಶಕ್ಕೆ ತೆಗೆದುಕೊಳ್ಳುವ ಜೊತೆಯಲ್ಲಿ ಚಾನೆಲ್ ಪ್ರಸಾರಕ್ಕೆ ಅತ್ಯಗತ್ಯವಾಗಿರುವ ಸರ್ವರ್ ಗಳನ್ನು ವಶಕ್ಕೆ ಪಡೆದಿದ್ದಾರೆ, ಅಷ್ಟು ಮಾತ್ರವಲ್ಲ ಫೇಸ್ ಬುಕ್, ಯುಟ್ಯೂಬ್ ಖಾತೆಗಳ ಪಾಸ್ ವರ್ಡ್ ಗಳನ್ನು ಬದಲಾಯಿಸಿದ್ದಾರೆ. ಚಾನೆಲ್ ಕಾರ್ಯನಿರ್ವಹಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ದುರುದ್ದೇಶದಿಂದಲೇ ಇದನ್ನು ಮಾಡಿದ್ದಾರೆ.
ಇಂತಹ ಕೆಲಸವನ್ನು ಪೊಲೀಸರು ತಾವಾಗಿಯೇ ಮಾಡುವುದಿಲ್ಲ. ಮೇಲಿನಿಂದ ಆದೇಶ ಬಂದರಷ್ಟೇ ಮಾಡುತ್ತಾರೆ. ಈ ಪ್ರಕರಣದಲ್ಲಿ ಆದೇಶ ಯಾರು ಕೊಟ್ಟಿರಬಹುದೆಂಬ ಬಗ್ಗೆ ಯಾರಿಗೂ ಸಂಶಯ ಇಲ್ಲ. ಅಧಿಕಾರ ಮತ್ತು ದುಡ್ಡಿನ ಮದವೇರಿದ ರಾಜಕಾರಣಿಗಳು ಸಾಮಾನ್ಯವಾಗಿ ಈ ರೀತಿ ತಮ್ಮ ಗೋರಿ ತಾವೇ ತೋಡಿಕೊಳ್ಳುತ್ತಾರೆ.
ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ನನಗೆ ನಿಜಕ್ಕೂ ಕನಿಕರ ಇದೆ. ಅವರು ಈ ರೀತಿ ಸೇಡಿಗೆ ಇಳಿಯುವವರಲ್ಲ. ಅದರಲ್ಲೂ ಪತ್ರಕರ್ತರನ್ನು ಎದುರುಹಾಕಿಕೊಳ್ಳಲು ಹೋಗುವವರಲ್ಲ.( ಅವರು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ನಾನು ಹಲವಾರು ಅಂಕಣಗಳನ್ನು ಬರೆದಿದ್ದೆ. ಅವರೆಂದೂ ನೇರವಾಗಿ ಇಲ್ಲವೇ ಸಂಪಾದಕರ ಮೂಲಕ ನನ್ನ ಮೇಲೆ ಒತ್ತಡ ಹಾಕಿಲ್ಲ. ಅಂತಹ ಅಂಕಣಗಳು ಪ್ರಕಟವಾದ ದಿನ ಕೆಲವೊಮ್ಮೆ ಬೆಳಿಗ್ಗೆ ನನ್ನ ಹಿರಿಯ ಸಹದ್ಯೋಗಿಯಾಗಿದ್ದ ಅವರ ಮಾಧ್ಯಮ ಸಲಹೆಗಾರರು ನನಗೆ ಪೋನ್ ಮಾಡಿ ‘ದಿನೇಶ್ ಓದಿದೆ,ಚೆನ್ನಾಗಿದೆ’ ಎಂದಷ್ಟೇ ಹೇಳಿ ಪೋನ್ ಇಟ್ಟುಬಿಡುತ್ತಿದ್ದರು)
ಕಳೆದ ಬಾರಿ ಯಡಿಯೂರಪ್ಪನವರು ಜೈಲಿಗೆ ಹೋಗಿರುವುದು ಕೂಡಾ ಪೂರ್ಣವಾಗಿ ಅವರ ತಪ್ಪಿನಿಂದಲ್ಲ. ಈ ಪ್ರಕರಣದಲ್ಲಿಯೂ ಪವರ್ ಟಿವಿ ಮೇಲೆ ಅವರ ಮಗನ ಒತ್ತಡದಿಂದ ದಾಳಿಯಾಗಿದ್ದರೆ ಆ ಮಗನ ಬಗ್ಗೆ ನನಗೆ ಇನ್ನೂ ಹೆಚ್ಚು ಕನಿಕರ ಇದೆ. ಇದು ರಾಜಕೀಯದಲ್ಲಿ ಬೆಳೆಯಲು ಬಯಸುವ ಮಕ್ಕಳ ಲಕ್ಷಣ ಅಲ್ಲ. ಈ ದಾರಿಯಲ್ಲಿ ಅವರು ಬಹಳ ದೂರ ಖಂಡಿತ ಹೋಗಲಾರರು.
ಇವೆಲ್ಲದರ ನಡುವೆ ಈ ಪ್ರಕರಣದಲ್ಲಿ ನನಗೆ ಸುಲಭದಲ್ಲಿ ಅರ್ಥವಾಗದ ಕೆಲವು ಸಿಕ್ಕುಗಳಿವೆ. ಮೊದಲನೆಯದಾಗಿ, ಮಾಧ್ಯಮ ಸಂಸ್ಥೆಗಳ ಮಾಲೀಕರೇ ಸಂಪಾದಕರಾಗಿರುವ ಅನೇಕ ಉದಾಹರಣೆಗಳು ನಮ್ಮ ನಡುವೆ ಇರುವುದರಿಂದ ತಪ್ಪೆಂದು ಹೇಳಲಾಗುವುದಿಲ್ಲ. ಆದರೆ ಪವರ್ ಟಿವಿ ಚಾನೆಲ್ ನ ಮಾಲೀಕರು ತಮ್ಮನ್ನು ಸಂಪಾದಕರೆಂದು ಕರೆಸಿಕೊಂಡಿಲ್ಲ. ಚಾನೆಲ್ ಗೆ ಬೇರೆ ಸಂಪಾದಕರಿದ್ದಾರೆ.
ಹೀಗಿರುವಾಗ ಇಂತಹದ್ದೊಂದು ಮುಖ್ಯವಾದ ವರದಿಯನ್ನು ಅವರೇ ಪರದೆಯ ಮುಂದೆ ಬಂದು ಹೋರಾಟಗಾರನ ರೀತಿ ಪ್ರಸ್ತುತ ಪಡಿಸಿ ಅಬ್ಬರಿಸುತ್ತಿದ್ದುದು ನನಗೆ ವಿಚಿತ್ರವಾಗಿ ಕಂಡಿತ್ತು. ಯಾಕೆಂದರೆ ಮಾಲೀಕರಿಗೆ ಸಾಮಾನ್ಯವಾಗಿ ಬೇರೆ ವ್ಯವಹಾರಿಕವಾದ ಹಿತಾಸಕ್ತಿಗಳಿರುತ್ತವೆ. ಈ ಕಾರಣದಿಂದಾಗಿ ಚಾನೆಲ್ ಮಾಡಿರುವ ವರದಿ ಸತ್ಯನಿಷ್ಠವಾಗಿದ್ದರೂ ವೀಕ್ಷಕರಿಗೆ ಸಹಜವಾಗಿ ಕೆಲವು ಅನುಮಾನ ಮೂಡುತ್ತದೆ.
ಎರಡನೆಯದಾಗಿ, ತಮ್ಮ ಕಚೇರಿಯಲ್ಲಿ ಗಾಂಧಿ,ಅಂಬೇಡ್ಕರ್ ಜೊತೆ ಹೆಡಗೆವಾರ್ ಅವರ ಪೋಟೊಗಳನ್ನೂ ನೇತುಹಾಕಿರುವ ಪವರ್ ಟಿವಿ ಚಾನೆಲ್, ಸೆಕ್ಯುಲರ್, ಲಿಬರಲ್ ಚಾನೆಲ್ ಆಗಿರಲಿಲ್ಲ. ಕನ್ನಡದ ಉಳಿದ ಚಾನೆಲ್ ಗಿಂತ ಬಹಳ ಭಿನ್ನವಾಗಿ ಏನೂ ಇರಲಿಲ್ಲ. ಇತ್ತೀಚಿನ ಡಿ.ಜೆ.ಹಳ್ಳಿ, ಪಾದರಾಯನಪುರಕ್ಕೆ ಸಂಬಂಧಿಸಿದ ವರದಿಗಳನ್ನೇ ಗಮನಿಸಿರಬಹುದು.
ಇಂತಹ ಟಿವಿ ಚಾನೆಲ್ ಇದ್ದಕ್ಕಿದ್ದ ಹಾಗೆ ಮುಖ್ಯಮಂತ್ರಿ ಕುಟುಂಬದ ವಿರುದ್ಧ ತಿರುಗಿ ಬೀಳಲು ಏನು ಕಾರಣ? ಅದೂ ಯಡಿಯೂರಪ್ಪನವರ ಬದಲಾವಣೆಗಾಗಿ ಪಕ್ಷದೊಳಗಿಂದಲೇ ಪ್ರಯತ್ನಗಳು ನಡೆಯುತ್ತಿರುವ ಮತ್ತು ಈ ಬದಲಾವಣೆಯ ಸೂತ್ರವನ್ನು ದೆಹಲಿಯಲ್ಲಿ ಕೂತಿರುವ ಕರ್ನಾಟಕದ ನಾಯಕರೊಬ್ಬರು ಹಿಡ್ಕೊಂಡಿದ್ದಾರೆ ಎಂಬ ವರದಿಗಳು ಬರುತ್ತಿರುವ ಸಂದರ್ಭದಲ್ಲಿ.
ಮೂರನೆಯದಾಗಿ, ಪತ್ರಕರ್ತ/ರಾಜಕಾರಣಿ/ಶಿಕ್ಷಣ ತಜ್ಞರೆನಿಸಿಕೊಂಡಿರುವ ರವೀಂದ್ರ ರೇಷ್ಮೆಯವರ ಪಾತ್ರ. ಹೆಚ್ಚುಕಡಿಮೆ ಕಳೆದೊಂದು ದಶಕದಿಂದ ಬಿಜೆಪಿಯ ಜೊತೆ ಸೈದ್ಧಾಂತಿಕ ಸಹಮತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಾ ಬಂದಿರುವವರು. ಬಿಎಸ್ ವೈ ಅವರು ಈ ಬಾರಿ ಮುಖ್ಯಮಂತ್ರಿಯಾದಾಗ ಅವರ ಸಂಭವನೀಯ ಮಾಧ್ಯಮ ಸಲಹೆಗಾರರ ಪಟ್ಟಿಯಲ್ಲಿ ಇವರ ಹೆಸರು ಕೂಡಾ ಕೇಳಿಬರುತ್ತಿತ್ತು.
ಹೀಗಿದ್ದವರು ಇದ್ದಕ್ಕಿದ್ದ ಹಾಗೆ ಬಿಎಸ್ ವೈ ಅವರ ವಿರುದ್ದದ ಭ್ರಷ್ಟಾಚಾರದ ಹೋರಾಟದಲ್ಲಿ ಕಣಕ್ಕಿಳಿಯಲು ಏನು ಕಾರಣ? ಬಿ.ಎಸ್.ಯಡಿಯೂರಪ್ಪನವರಾಗಲಿ, ಅವರ ಕುಟುಂಬವಾಗಲಿ ಕಳೆದ ಒಂದು ತಿಂಗಳಿನಿಂದ ಭ್ರಷ್ಟರಾದವರಲ್ಲವಲ್ಲ.
ಶ್ರೀರಾಮುಲು ಅವರ ಭ್ರಷ್ಟತೆಯನ್ನೇ ಸಹಿಸಿಕೊಂಡು ಅವರ ಜೊತೆ ಸೇರಿಕೊಂಡಿದ್ದ ರೇಷ್ಮೆ ಅವರು ದಿಡೀರನೇ ಭ್ರಷ್ಟಾಚಾರದ ವಿರುದ್ದದ ಉಗ್ರಹೋರಾಟಕ್ಕೆ ಇಳಿದಿರುವುದು ನನಗಂತು ಅಚ್ಚರಿ ಮೂಡಿಸಿದೆ. ಪ್ರಾಮಾಣಿಕವಾಗಿ ಇಂತಹದ್ದೊಂದು ಪರಿವರ್ತನೆ ಅವರಲ್ಲಿ ಆಗಿದ್ದರೆ ಅದನ್ನು ಸ್ವಾಗತಿಸುವವರಲ್ಲಿ ನಾನು ಮೊದಲಿಗ. ಅದನ್ನು ಮನವರಿಕೆ ಮಾಡಿಕೊಡುವ ಜವಾಬ್ದಾರಿ ಅವರಲ್ಲಿದೆ.
ಮಾಧ್ಯಮ ಸಂಸ್ಥೆಗಳ ಅದರಲ್ಲೂ ಮುಖ್ಯವಾಗಿ ಕನ್ನಡ ನ್ಯೂಸ್ ಚಾನೆಲ್ ಗಳ ಮಾಲೀಕರ ಬಗ್ಗೆ ನಾನೇನು ಮಾತನಾಡುವುದಿಲ್ಲ. ದುಡ್ಡು ಹಾಕಿದವರು ಯಾರೋ? ಮಾಲೀಕರೆಂದು ಕಾಣಿಸಿಕೊಳ್ಳುವವರು ಯಾರೋ? ಅವರಲ್ಲಿ ನಷ್ಟದ ಉದ್ಯಮವಾದ ಟಿವಿ ಚಾನೆಲ್ ಗಳಲ್ಲಿ ಬಂಡವಾಳ ಹಾಕುವ ಸಾರ್ವಜನಿಕ ಹಿತಾಸಕ್ತಿ ಯಾಕೆ ಉಕ್ಕಿ ಹರಿಯುತ್ತೋ ಒಂದೂ ನನಗೆ ಗೊತ್ತಾಗುವುದಿಲ್ಲ.
ಇವೆಲ್ಲ ಏನೇ ಇದ್ದರೂ ಪತ್ರಕರ್ತನನ್ನು ಸಾಯಿಸುವುದಷ್ಟೇ ಇಲ್ಲವೇ ಅದಕ್ಕಿಂತಲೂ ಹೀನ ಕೆಲಸ ಮಾಧ್ಯಮ ಸಂಸ್ಥೆಯನ್ನು ಸಾಯಿಸುವುದು. ಈ ದೃಷ್ಟಿಯಿಂದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಕೊಲೆಗಡುಕ ಸರ್ಕಾರವೆಂದೇ ಹೇಳಬೇಕಾಗುತ್ತದೆ. ವ್ಯಕ್ತಿಯನ್ನು ಕೊಂದ ಪಾಪಕ್ಕೆ ಪರಿಹಾರ ಇಲ್ಲ, ಆದರೆ ಸಾಯಿಸಲು ಹೊರಟ ಸಂಸ್ಥೆಯನ್ನು ಬದುಕಿಸಲು ಸಾಧ್ಯ ಇದೆ.
ಈಗಲೂ ಕಾಲ ಮಿಂಚಿಲ್ಲ. ಬಿ.ಎಸ್.ಯಡಿಯೂರಪ್ಪನವರು ತಮ್ಮ ತಪ್ಪನ್ನು ಅರಿತುಕೊಂಡು ಚಾನೆಲ್ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕು ಅಳಿದುಳಿದ ಮಾನವನ್ನು ಉಳಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ನೊಂದಿರುವ ,ಕಷ್ಟದಲ್ಲಿರುವ ಪವರ್ ಟಿವಿ ಚಾನೆಲ್ ನ ಪತ್ರಕರ್ತರೆಲ್ಲರ ಜೊತೆ ನಾನಿದ್ದೇನೆ. ಅಂದಹಾಗೆ ಈಗಿನ ಮುಖ್ಯಮಂತ್ರಿಗಳಿಗೊಬ್ಬರು ಮಾಧ್ಯಮ ಸಲಹೆಗಾರರಿದ್ದಾರಲ್ಲಾ, ಅವರೇನು ಮಾಡುತ್ತಿದ್ದಾರೆ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
ಸುದ್ದಿದಿನ,ದಾವಣಗೆರೆ:ತಾಲ್ಲೂಕಿನ ಕಾಡಜ್ಜಿ ಗ್ರಾಮದ ದೇಗುಲಗಳಲ್ಲಿ ನಿಧಿ ಶೋಧಿಸಲು ಯತ್ನಿಸಿದ ಆರು ಜನರ ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾಡಜ್ಜಿ ಗ್ರಾಮದ ಬಸವರಾಜ (42), ಮಲೇಬೆನ್ನೂರಿನ ಪ್ರಕಾಶ ಆಚಾರಿ (48), ಮಂಜುನಾಥ (51), ಪ್ರಕಾಶ (42), ಹೊನ್ನಾವರ ತಾಲ್ಲೂಕಿನ ಇಡಗುಂಜಿ ಗ್ರಾಮದ ರಾಮನಾಥ ಪೈ (52), ಸಾಗರ ತಾಲ್ಲೂಕಿನ ಬ್ಯಾಕೋಡು ಗ್ರಾಮದ ಶ್ರೀಕಾಂತ ಭಟ್ (51) ಬಂಧಿತರು.
ಆರೋಪಿಗಳು ಏ. 22ರಂದು ರಾತ್ರಿ ಕಾಡಜ್ಜಿ ಗ್ರಾಮದ ಚೌಡಮ್ಮ ದೇಗುಲದಲ್ಲಿ ನಿಧಿ ಶೋಧ ಮಾಡಿದ್ದರು. ಏ.29ರಂದು ರಾತ್ರಿ ಪೇಟೆ ದುರುಗಮ್ಮ ದೇಗುಲದ ಬಳಿ ಜೆಸಿಬಿ ಮೂಲಕ ಗುಂಡಿ ತೆಗೆದಿದ್ದರು. ದುಷ್ಟ ಶಕ್ತಿ ಪೂಜೆ, ಹೋಮ– ಹವನ ಮಾಡಿ ಗರ್ಭಗುಡಿಯಲ್ಲಿ ನಿಧಿ ತೆಗೆಯಲು ಮುಂದಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು
ಸುದ್ದಿದಿನ,ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಸುಗಮ, ಪಾರದರ್ಶಕ ಮತ್ತು ಅತ್ಯಂತ ಸುರಕ್ಷಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯದಿಂದ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ನಿರ್ದೇಶನ ನೀಡಿದರು.
ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯವು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯುವ ದೃಷ್ಟಿಯಿಂದ, ಮತ ಎಣಿಕೆ ಕೇಂದ್ರದ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ‘ವಾಹನ ಮುಕ್ತ ವಲಯ’ ಎಂದು ಘೋಷಿಸಲಾಗಿದೆ, ಎಣಿಕೆ ಕೇಂದ್ರದ ಗೇಟ್ನಿಂದ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅಲ್ಲಿ ಸಿಆರ್ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕೇಂದ್ರದ ಸುತ್ತಲೂ ಮೂರು ಹಂತದ ಸಮನ್ವಯ ಭದ್ರತಾ ವ್ಯವಸ್ಥೆಯನ್ನು (Three-tier coordinating security system) ಅಳವಡಿಸಲಾಗುವುದು. ಮತ ಎಣಿಕೆ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ಮತ್ತು ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಅನುಮತಿ ಪಡೆದ ವಾಹನಗಳನ್ನು ಹೊರತುಪಡಿಸಿ ಉಳಿದ ಯಾವುದೇ ಖಾಸಗಿ ವಾಹನಗಳ ಪ್ರವೇಶವನ್ನು ಈ ವಲಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಸೂಚನೆ ನೀಡಿದರು.
ಮತ ಎಣಿಕೆ ಕೇಂದ್ರದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯ ವತಿಯಿಂದ ಪರ್ಯಾಯ ಸಂಚಾರ ಮಾರ್ಗಗಳನ್ನು ಗುರುತಿಸಲಾಗಿದೆ. ವಾಹನ ಸವಾರರು ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ, ನಿಗದಿಪಡಿಸಿದ ಪರ್ಯಾಯ ರಸ್ತೆಗಳನ್ನು ಬಳಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮತ ಎಣಿಕೆ ಸಿಬ್ಬಂದಿ ಮತ್ತು ಅಭ್ಯರ್ಥಿಗಳಿಗೆ ಪ್ರತ್ಯೇಕ ವಾಹನ ಪಾಸ್ಗಳನ್ನು ವಿತರಿಸಲಾಗುವುದು. ಎಪಿಎಂಸಿ ಆವರಣ ಹಾಗೂ ಬಿಆರ್ಸಿ ಕಾಲೇಜು ಮೈದಾನದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಿಬ್ಬಂದಿಗಳ ಮೊಬೈಲ್ಗಳನ್ನು ಸುರಕ್ಷಿತವಾಗಿ ಇರಿಸಲು ಪ್ರತ್ಯೇಕ ಕೌಂಟರ್ ತೆರೆದು, ಟೋಕನ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಮತ ಎಣಿಕೆ ಕಾರ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಣಿಕೆ ಕೇಂದ್ರದ ಮೇಲ್ಛಾವಣಿ ಮತ್ತು ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕೂಡಲೇ ಮರುಪರಿಶೀಲಿಸುವಂತೆ ಲೋಕೋಪಯೋಗಿ ಹಾಗೂ ಬೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.
ಮಳೆಯಿಂದಾಗಿ ಎಣಿಕೆ ಕೇಂದ್ರದ ಒಳಗೆ ನೀರು ಸೋರದಂತೆ ಹಾಗೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಹಾಗೂ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ವ್ಯವಸ್ಥೆ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮತ ಎಣಿಕೆಯು ಪಾರದರ್ಶಕತೆ ಮತ್ತು ಭದ್ರತೆಯ ದೃಷ್ಟಿಯಿಂದ ಕೇಂದ್ರದಾದ್ಯಂತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಕಾರ್ಯಕ್ಷಮತೆ ಹಾಗೂ ದೃಶ್ಯೀಕರಣ ವ್ಯಾಪ್ತಿಯನ್ನು ಅಧಿಕಾರಿಗಳು ಪರಿಶೀಲಿಸಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪ್ರತಿಯೊಂದು ಎಣಿಕೆ ಟೇಬಲ್ ಹಾಗೂ ಮತಯಂತ್ರಗಳನ್ನು ತರುವ ಹಾದಿಯಲ್ಲಿ ಯಾವುದೇ ‘ಬ್ಲೈಂಡ್ ಸ್ಪಾಟ್’ ಇಲ್ಲದಂತೆ ಕ್ಯಾಮೆರಾಗಳ ಕವರೇಜ್ ಇರಬೇಕು. ಸಿಸಿಟಿವಿ ದೃಶ್ಯಾವಳಿಗಳು ಅಡೆತಡೆಯಿಲ್ಲದೆ ಚಿತ್ರೀಕರಣಗೊಳ್ಳುತ್ತಿರುವುದನ್ನು ತಾಂತ್ರಿಕ ತಂಡವು ದೃಢಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜೆಂಟರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯ ವತಿಯಿಂದ ಒಬ್ಬ ನುರಿತ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡವನ್ನು ನಿಯೋಜಿಸಬೇಕು. ತುರ್ತು ಸಂದರ್ಭ ಎದುರಾದಲ್ಲಿ ತಕ್ಷಣದ ಚಿಕಿತ್ಸೆಗಾಗಿ ಅಗತ್ಯ ಔಷಧೋಪಚಾರಗಳೊಂದಿಗೆ ಸುಸಜ್ಜಿತ ಅಂಬುಲೆನ್ಸ್ ಸೇವೆಯನ್ನು ಸ್ಥಳದಲ್ಲಿ ಸದಾ ಸಿದ್ಧವಾಗಿರಿಸಬೇಕು ಎಂದು ತಿಳಿಸಿದರು.
ಅಗ್ನಿಶಾಮಕ ಇಲಾಖೆಯು ಮತ ಎಣಿಕೆ ಕೇಂದ್ರದ ಒಳಾಂಗಣ ಮತ್ತು ಹೊರಾಂಗಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವುದೇ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರದ ಆವರಣದಲ್ಲಿ ಅಗ್ನಿಶಾಮಕ ವಾಹನಗಳನ್ನು (Fire Engines) ನಿಯೋಜಿಸಬೇಕು ಹಾಗೂ ಅಗ್ನಿಶಾಮಕ ಉಪಕರಣಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮತ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಭದ್ರತೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ. ಅವರು ಮಾತನಾಡಿ, ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೇಂದ್ರದ ಸುತ್ತಮುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಅನಧಿಕೃತ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಉಪವಿಭಾಗಾಧಿಕಾರಿ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣಾಧಿಕಾರಿ ಸಂತೋಷ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತ ಗೌಡರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯ್ , ಬೆಸ್ಕಾಂ , ಕೆ.ಎಸ್.ಆರ್.ಟಿ.ಸಿ , ಆಗ್ನಿಶಾಮಕ ದಳ , ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ಎಸ್ಎಲ್ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ
ಸುದ್ದಿದಿನ,ದಾವಣಗೆರೆ: 2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ ಗುರುಕುಲ ಶಾಲೆ (Gurukul School) ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ವರ್ಚಸ್ಸನ್ನು ಸಾಬೀತುಪಡಿಸಿದೆ. ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿ ಮದಿಹಾ ಸಾಧನೆಯ ಶಿಖರದಲ್ಲಿ
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಮದಿಹಾ ಅವರು ಒಟ್ಟು ಶೇ. 98 ಅಂಕಗಳನ್ನು ಗಳಿಸುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಸಾಧನೆಗೈದಿದ್ದಾರೆ. ಈಕೆಯ ಸಾಧನೆಯು ಸಹಪಾಠಿಗಳಿಗೆ ಮತ್ತು ಕಿರಿಯ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅಲ್ಲದೇ ಕುಶಾಲ್ ಶೇ. 97 ದ್ವಿತೀಯ ಹಾಗೂ ಸಮರ್ಥ್ 95.5 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಗಮನ ಸೆಳೆದ ಫಲಿತಾಂಶ: ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಿದೆ.
ಡಿಸ್ಟಿಂಕ್ಷನ್ ಸಾಧಕರು: 15 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಥಮ ಶ್ರೇಣಿ: ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಉತ್ತಮ ಫಲಿತಾಂಶ: ಉಳಿದ ಎಲ್ಲಾ ವಿದ್ಯಾರ್ಥಿಗಳು ಸಹ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶಾಲೆಯು ನೂರಕ್ಕೆ ನೂರರಷ್ಟು ಫಲಿತಾಂಶದತ್ತ ದಾಪುಗಾಲು ಹಾಕಿದೆ.
ಯಶಸ್ಸಿನ ಹಿಂದಿನ ಶಕ್ತಿ:
ವಿದ್ಯಾರ್ಥಿಗಳ ಈ ಭವ್ಯ ಸಾಧನೆಗೆ ಶಾಲೆಯ ವ್ಯವಸ್ಥಿತ ಮಾರ್ಗದರ್ಶನವೇ ಕಾರಣ ಎಂದು ಆಡಳಿತ ಮಂಡಳಿ ತಿಳಿಸಿದೆ. ಶಾಲಾ ಕಾರ್ಯದರ್ಶಿ ಅಬ್ದುಲ್ ಸರ್ ಅವರ ನಿರಂತರ ಮಾರ್ಗದರ್ಶನ, ಆಡಳಿತ ಮಂಡಳಿಯ ಬೆಂಬಲ, ಮುಖ್ಯೋಪಾಧ್ಯಾಯರ ಸಮರ್ಥ ನಾಯಕತ್ವ ಹಾಗೂ ಶಿಕ್ಷಕ ವೃಂದದವರ ಅವಿರತ ಪರಿಶ್ರಮ ಈ ಯಶಸ್ಸಿಗೆ ಬುನಾದಿಯಾಗಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಶಾಲಾ ಕಾರ್ಯದರ್ಶಿ ಅಬ್ದುಲ್, “ವಿದ್ಯಾರ್ಥಿಗಳ ಏಕಾಗ್ರತೆ, ಪೋಷಕರ ಸಹಕಾರ ಮತ್ತು ಶಿಕ್ಷಕರ ಬೋಧನಾ ಶೈಲಿಯಿಂದ ಈ ಮೈಲಿಗಲ್ಲು ಸಾಧ್ಯವಾಗಿದೆ. ಈ ಯಶಸ್ಸು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಉನ್ನತ ಗುರಿಗಳನ್ನು ತಲುಪಲು ಪ್ರೇರಣೆಯಾಗಲಿ,” ಎಂದು ಹಾರೈಸಿದ್ದಾರೆ.
ಶಾಲೆಯ ಈ ಸಾಧನೆಗೆ ಪೋಷಕರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭಕೋರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


