ಅಂತರಂಗ
ಭಾವ ಸಂಗಮ ಸಮಾಗಮ : ನೆನಪೇ ಸಂಭ್ರಮ
ಅಬ್ಬಾ ಪ್ರತಿದಿನದ ಜಂಜಾಟ, ಯಾಂತ್ರಿಕ ಜೀವನ, ಎಲ್ಲವನ್ನೂ ಮರೆತು ಕುಟುಂಬದವರೆಲ್ಲರೂ ಒಂದಾಗುವ ಸೇರುವ ಸಮಾಗಮವೆ, ಸಾಹಿತ್ಯ ಸಮಾಗಮ. ಈ ಸಂಗಮಕ್ಕೆ ನನ್ನನ್ನೂ ರಾಜೇಂದ್ರ ಪಾಟೀಲ್ ಭಾವಸಂಗಮದ ಸಂಚಾಲಕರು ಮೂರು ತಿಂಗಳ ಹಿಂದೆ ಸೇರಿಸಿದರು. ಮೊದಮೊದಲು ಸಂಗಮಕ್ಕೆ ಸೇರಿದಾಗ ಕೊಂಚ ಅಳುಕಿತ್ತು.
ಏಕೆಂದರೆ ಈ ಸಂಗಮದಲ್ಲಿ ಎಲ್ಲರೂ ಪದಗಳ ಜೊತೆಗೆ ಆಟವಾಡುವ ಸಾಹಿತಿಗಳು, ಕಲ್ಪನಾ ಲೋಕದಲ್ಲಿ ಮುಳುಗಿರುವ ಕವಿ, ಕವಯಿತ್ರಿಯರು, ತಪ್ಪುಗಳನ್ನು ತಿದ್ದಿ, ಕಲ್ಲನ್ನು ಶಿಲ್ಪಿ ಮಾಡುವ ಶಿಲ್ಪಿಕಾರಂತಿರುವ ಶಿಕ್ಷಕ-ಶಿಕ್ಷಕಿಯರು, ನ್ಯಾಯ ದೇವತೆಯ ಪುತ್ರರು, ಸದಾಕಾಲ ನ್ಯಾಯವನ್ನು ಎತ್ತಿ ಹಿಡಿಯುವಂತಹ ವಕೀಲರು, ಶಿಸ್ತಿನ ಸೀಪಾಯಿಗಳಂತೆ ಸಮವಸ್ತ್ರ ತೊಟ್ಟು ಕೈಯಲ್ಲೊಂದು ಲಾಠಿ ಹಿಡಿಯುವ ಆರಕ್ಷಕರು, ಸಮಾಜವನ್ನು ಒಂದು ನಿರ್ದಿಷ್ಟ ದಾರಿಯತ್ತ ಕೈಹಿಡಿದು ಸದಾಕಾಲ ಸಮಾಜದ ಅಭಿವದ್ಧಿಗಾಗಿ ದುಡಿಯುವ ವಿವಿಧ ರಾಜ್ಯಮಟ್ಟ, ಜೀಲ್ಲಾಮಟ್ಟ, ಪ್ರಾದೇಶಿಕ ಮಟ್ಟದ ಪತ್ರಿಕೆಗಳ ಹಿರಿಯ ಪರ್ತಕರ್ತರು, ಆಕಾಶವಾಣಿ ಹಾಗೂ ದೂರವಾಣಿಯ ವರದಿಗಾರರು, ಸಮಾಜದ ಅಭಿವೃದ್ಧಿಯಲ್ಲಿ ತಮ್ಮದೆ ರಿತಿಯಲ್ಲಿ ವಿಶಾಲವಾದ ಜಗತ್ತಿಗೆ ಕಾಲಿಡುತ್ತಿರುವ ಭಾವಿ ಪತ್ರಕರ್ತರು, ಹೀಗೆ ಅನೇಕ ವಿಭಿನ್ನ ಮನಸ್ಸುಗಳ ಸಮಾಗಮವೆ ಈ ಭಾವ ಸಂಗಮವಾಗಿತ್ತು.
‘ಭಾವ ಸಂಗಮ’ ವಾಟ್ಸ್ ಗ್ರೂಪ್ ಸಂಯೋಜನೆಗೆ ಕಾರಣ ಹಾಗೂ ಮೂಲ
ಕನ್ನಡ ಸಾಹಿತ್ಯ, ಸಂಗೀತ, ನಾಟಕ, ಕಲೆ ಇತ್ಯಾದಿ ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿಯುಳ್ಳವರನ್ನು, ಪ್ರತಿಭಾನ್ವಿತರನ್ನು, ಉದಯೋನ್ಮುಖರನ್ನು, ಹಾಗೂ ಸಹೃದಯದವರನ್ನು ಎಲ್ಲರನ್ನು ಒಂದೇ ಕಡೆಗೆ ಸೇರಿಸುವುದಾಗಿದೆ. ಇವರೆಲ್ಲರ ಸಾಹಿತಿಕ ಬರವಣಿಗೆಗಳನ್ನು ಪ್ರತಿಭೆಗಳನ್ನು ಎಲ್ಲರೂ ನೋಡಿ ಆನಂದಿಸಬೇಕು ಎಂದುಕೊಂಡೆ. ಹಿರಿಯರು ಆಶೀರ್ವಾದಿಸಬೇಕು, ಕಿರಿಯರು ತಮ್ಮ ಪ್ರತಿಭೆಯ ಪ್ರದರ್ಶನ ಮಾಡಬೇಕು. ಈ ಎಲ್ಲಾ ಉದ್ದೇಶದಿಂದ ಭಾವ ಸಂಗಮ ಆರಂಭಿಸಲಾಗಿದೆ ಎಂದು ಭಾವಸಂಗಮದ ವಾಟ್ಸ್ಆ್ಯಪ್ ಗ್ರೂಪ್ನ ಸಂಚಾಲಕರಾದ ರಾಜೇಂದ್ರ ಪಾಟೀಲ ಅವರು ತಿಳಿಸುತ್ತಾರೆ.
ಇದು ಮೂಲತಃ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿಯೇ 2009ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಆಗ ಇದರ ಕ್ರಯಾ ಚಟುವಟಿಕೆಗಳು ಅಷ್ಟೊಂದು ತಿವ್ರವಾಗಿರಲಿಲ್ಲ. ನಂತರ 2015ರ ಜುಲೈ 10ರಂದು ನನ್ನ ಕೈಗೆ ಸ್ಮಾರ್ಟ ಫೋನ್ ಬಂತು. ಆ ದಿನವೆ ನನ್ನ ಜನ್ಮದಿನವಿತ್ತು. ಅಂದೆ ನಾನು ಭಾವ ಸಂಗಮ ಎನ್ನುವ ವಾಟ್ಸಾಪ್ ಗ್ರೂಪ್ ಸೃಷ್ಟಿಸಿದೆ ಎಂದು ರಾಜೇಂದ್ರ ಪಾಟೀಲ( ಉಮಾತನಯರಾಜ) ಅವರು ಹೇಳುತ್ತಾರೆ.
ಭಾವ ಸಂಗಮದ ಸಂಪೂರ್ಣ ಪಕ್ಷಿನೋಟ ಇಲ್ಲಿದೆ
ಆಗಷ್ಟೇ ಅನೇಕರು ವಾಟ್ಸಾಪ್ ನಲ್ಲಿ ಪ್ರವೇಶ ಪಡೆದಿದ್ದರು. ಭಾವ ಸಂಗಮ ತಯಾರಿಕೆಗಾಗಿ ಮೊದಲಿಗೆ 65ಜನರು ಸಿಕ್ಕರು, ಇದೆ ವಿಷಯವಾಗಿ ಬಾದಾಮಿಯ ಗೆಳೆಯ ವೆಂಕಟೇಶ ಇನಾಮದಾರ ಹಾಗೂ ನಾವು ಚರ್ಚೆ ಮಾಡಿದೆವು, ನಾವೆಲ್ಲಾ ಸಹೃಯಗಳು ಒಂದೆಡೆಗೆ ಸೇರೋಣ, ಸಮಾವೇಶ ಮಾಡೋಣ, ನಮ್ಮ ಪ್ರತಿಭೆಗಳನ್ನು ತೋರಿಸೊಣ, ಅದೊಂದು ವಿಭಿನ್ನವಾದ ಕೌಟುಂಬಿಕ ಕಾರ್ಯಕ್ರಮ ಮಾಡೋಣ ಎನ್ನುವ ಚರ್ಚೆ ಮಾಡಲಾಯಿತು. ಈ ಚರ್ಚೆಯ ಹಿನ್ನೆಲೆಯಲ್ಲಿ 2015ರ ನ.8 ರಂದು ಬಾದಾಮಿಯ ಮಹಾಕೂಟದಲ್ಲಿ ನಿಸರ್ಗದತ್ತವಾಗಿ ನಯನ ಮನೋಹರವಾಗಿ ಮೊದಲ ಸಮಾಗಮವನ್ನು ಅನೌಪಚಾರಿಕವಾಗಿ ಅರಳಿಮರದ ಕೆಳಗೆ ಟೇಬಲ್, ಕುರ್ಚಿ, ಮೈಕ್ ಯಾವುದೇ ಸೌಲಬ್ಯಗಳಿಲ್ಲದೆ ಜಮಖಾನಿ ಹಾಸಿ ಕೂತುಕೊಂಡು ಸರಳತೆಯಿಂದ ಕಾರ್ಯಕ್ರಮವನ್ನು ನಡೆಸಿದ್ದೆವು. ಇದರಲ್ಲಿ ಕೆಲವರು, ಸಂಗೀತ ಹಾಡಿದರು, ಕವಿತೆಗಳನ್ನು ಹೇಳಿದರು, ಕವನ ವಾಚನ ಮಾಡಿದರು. ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ರೀತಿಯಲ್ಲಿ ‘ಭಾವ ಸಂಗಮ’ ಮೊದಲ ವರ್ಷದಲ್ಲಿ ಬುನಾದಿ ಹಾಕಿತು ಎಂದು ರಾಜೆಂದ್ರ ಪಾಟೀಲ ಸ್ಮರಿಸಿಕೊಳ್ಳುತ್ತಾರೆ.
ಈ ಕಾರ್ಯಕ್ರಮಕ್ಕೆ ಯಾವುದೇ ರಾಜಕಾರಣಿಗಳಿಗೆ ಹಾಗೂ ಉದ್ಯಮಿಗಳಿಗೆ ಆಹ್ವಾನ ನೀಡಿರಲಿಲ್ಲ. ಇದಕ್ಕೆ ಕೇವಲ ಸಾಹಿತ್ಯ ಆಸಕ್ತರು, ಕವಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಕಾರ್ಯಕ್ರಮದ ನೆನಪಿನ ಸ್ಮರಣಿಕೆಗಳನ್ನು ವಿತರಿಸುವಲ್ಲಿ ವೆಂಕಟೇಶ್ ಇನಾಮದಾರ ಅವರು ಸಹಾಯ ಮಾಡಿದರು. ಅದೇ ರೀತಿ ಊಟ ಜವಬ್ದಾರಿಯನ್ನು ಸಹ ಇನಾಮದಾರ ಹಾಗೂ ಅವರ ಸ್ನೇಹಿತರ ಬಳಗದವರೆ ಜವಾಬ್ದಾರಿ ವಹಿಸಿಕೊಂಡಿದ್ದರು. ಒಟ್ಟಾರೆಯಾಗಿ ಮೊದಲ ವರ್ಷದಲ್ಲಿ ಕಾರ್ಯಕ್ರಮ ಅದ್ಬುತವಾಗಿ ನಡೆಯಿತು ಎಂದು ಸಂಚಾಲಕರು ಹರ್ಷ ವ್ಯಕ್ತ ಪಡಿಸುತ್ತಾರೆ.
ನಂತರದ ವರ್ಷದಲ್ಲಿ ಭಾವ ಸಂಗಮದ ಸದಸ್ಯರ ಸಂಖ್ಯೆ ಹಾಗೂ ಆಸಕ್ತರ ಸಂಖ್ಯೆಯು ಬೆಳೆಯುತ್ತಾ ಹೋಯಿತು. ಇದರಲ್ಲಿ ಸಾಹಿತಿಗಳು, ಯುವ ಕವಿಗಳು, ಬರಹಗಾರರು ಇದ್ದಾರೆ. ಹಿರಿಯರು ಇದ್ದಾರೆ. ಹಿರಿಯರು ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾರೆ. 2017ರ ಆ.13ರಂದು ಧಾರವಾಡದ ಆಲೂರು ವೆಂಕಟರಾಯರ ಸಭಾಂಗಣದಲ್ಲಿ ದ್ವೀತಿಯ ವರ್ಷರದ ಸಮಾಗಮ ನಡೆಯಿತು. ಇದಕ್ಕೆ ಸುನಿಲ್ ಕುಲಕರ್ಣಿ ಮತ್ತು ಅವರ ಸಾಕಾರ ತಂಡದ ಸದಸ್ಯರು ತುಂಬಾ ಸಹಕಾರ ನೀಡಿದರು. ಆಗ ಸದಸ್ಯರ ಸಂಖ್ಯೆ 165. ನನ್ನ ನೀರಿಕ್ಷೆಗೂ ಮೀರಿ ಭಾವ ಸಂಗಮದಲ್ಲಿ ಕಾರ್ಯಕ್ರಮಗಳು ನಡೆದವು ಎಂದು ರಾಜೇಂದ್ರ ಪಾಟೀಲರು ( ರಾಪಾ) ನೆನಪಿಸಿಕೊಂಡರು.
2018 ಆಗಷ್ಟ್.26ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ತೃತೀಯ ವರ್ಷದ ಭಾವ ಸಂಗಮದ ಸಮಾಗಮವನ್ನು ಆಯೋಜನೆಯನ್ನು ಮಾಡಲಾಗಿತ್ತು.ಬೆಂಗಳೂರಿನವರಾದ ಸಾಹಿತಿಗಳು ಹಾಗೂ ಸಂಗಮದ ಸದಸ್ಯರಾದ ವಿಜಯಲಕ್ಷ್ಮೀ ಸತ್ಯಮೂರ್ತಿ, ಶ್ರೀಕಾಂತ ಪತ್ರೆಮರ, ರಾ.ಸು.ವೆಂಕಟೇಶ, ಮಾನಸಾ ಕೆ.ಕೆ, ಜಯಶ್ರೀ ಗುಡಿ, ಹಾಗೂ ಶಂಕರ ಹೂಗಾರ ಹೀಗೆ ಬೆಂಗಳೂರಿನ ಅನೇಕ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಗಾರ ಅವರು ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು, ಜೊತೆಗೆ ಕನ್ನಡ ಹೋರಾಟಗಾರ ಮಾಯಣ್ಣ , ಚಂದ್ರಶೇಖರ ಪಾಟೀಲ, ಎಂ.ತಿಮ್ಮಯ್ಯ, ಕನ್ನಡ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಅವರು ಉಪಸ್ಥಿತರಿದ್ದು ಭಾವ ಸಂಗಮ ಸಮಾಗಮಕ್ಕೆ ವಿಶೇಷ ಮೆರುಗನ್ನು ತಂದರು. ಅನೇಕ ಬರಹಗಾರರು, ಕಲಾವಿದರು, ಸಂಗೀತಗಾರರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ 185ಕ್ಕೂ ಹೆಚ್ಚು ಜನ ಸದಸ್ಯರಿದ್ದರು ಎಂದು ಅವರು ಮಹಿಳಾ ವಿವಿಯ ಮಹಿಳಾ ಧ್ವನಿ ಪ್ರಾಯೋಗಿಕ ಪತ್ರಿಕೆಯ ವರದಿಗಾರರಿಗೆ ರಾಪಾ ಅವರು ತಿಳಿಸಿದರು.
ಭಾವ ಸಂಗಮಕ್ಕಿಗ ನಾಲ್ಕನೇ ವಸಂತ ತುಂಬಿದೆ. ಈ ಸಂಗಮದ ಸಮಾಗಮ ಎಲ್ಲಿ ಎಂಬ ಪ್ರಶ್ನೆ ಮೂಡಿದಾಗ ಶಿವಮೊಗ್ಗದಲ್ಲಿ ಎನ್ನುವ ಉತ್ತರ ದೊರೆಯಿತು. ಸಂಪೂರ್ಣ ಉಸ್ತುವಾರಿಯನ್ನು ವಿಜಯ ಆರ್ ಬಾಯರಿ, ಹರೀಶ ಬೇದ್ರೆ, ಶೀಲಾ ಸುರೇಶ, ವೆಂಕಟೇಶ ಇನಾಮದಾರ ಅವರು ವಹಿಸಿಕೊಂಡಿದ್ದರು. ಡಾ.ಜಿ.ಎಸ್.ಸರೋಜಾ, ಏಕನಾಥ ಬೊಂಗಾಳೆ, ಸರಸ್ವತಿ ಟಿಎನ್, ಸಹನಾಚೇತನ, ರಂಜಿನಿ ದತ್ತಾತ್ರಿ, ಕೈಜೋಡಿಸಿದರು. ವ ಶಿವಮೊಗ್ಗದ ಕನ್ನಡ ಸಭಾಂಗಣದಲ್ಲಿ ಭಾನುವಾರ ಆ.18ರಂದು ನಡೆಯಿತು.
ಈ ನಾಲ್ಕನೇ ವಾರ್ಷಿಕೋತ್ಸವದ ಸಮಾಗಮದ ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಪ್ರಥಮ ಮಹಿಳಾ ಅಧ್ಯಕ್ಷೆ ವಿಜಯಾ. ಶ್ರೀಧರ ಅವರು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಸುಮಾ ಕಳಸಾಪೂರ ಹಾಗೂ ನೂರಸಮದ್ ಅಬ್ಬಲಗೆರೆ ಅವರು ಮಾತನಾಡಿದರು. ಕಾರ್ಯಕ್ರದ ಅತಿಥಿಗಳನ್ನು ಹರೀಶ ಬೇದ್ರೆ ಅವರು ಸ್ವಾಗತಿಸಿದರು. ರಾಜೇಂದ್ರ ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. 50 ಕವಿಗಳು ಪಾಲ್ಗೊಂಡಿದ್ದ ಕವಿಗೋಷ್ಠಿಯನ್ನು ಎ.ಎನ್.ರಮೇಶ್ ನಿರೂಪಿಸಿದರು. ಡಾ.ಪ್ರಕಾಶ ಕಾಡೆಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಗೆ ಎಲ್.ಎಸ್.ಶಾಸ್ತ್ರಿ ಮುಖ್ಯ ಅತಿಥಿಗಳಾಗಿದ್ದರು. ಅನನ್ಯ ಐತಾಳ ಮತ್ತು ಗೆಳತಿಯರ ಪ್ರಾರ್ಥನೆ, ಸಹನಾಚೇತನ ತಂಡದವರ ಸ್ವಾಗತ ನೃತ್ಯ ಕಣ್ಮನ ಸೆಳೆಯಿತು.
ಅಂಕಣದ ಹುಟ್ಟು ಗುಟ್ಟು
ನಾವು ದಿನಪತ್ರಿಕೆಗಳಲ್ಲಿ ಅನೇಕ ಸಾಹಿತಿಗಳ ಅಂಕಣಗಳನ್ನು ಓದುತ್ತೇವೆ. ಅದೇರೀತಿ ನಾವೇಕೆ ಈ ಸಾಮಾಜಿಕ ಜಾಲತಾಣದಲ್ಲಿ ಅಂಕಣ ಬರವಣಿಗೆಯನ್ನು ಜಾರಿ ಮಾಡಬಹುದಲ್ಲಾ ಎಂದು ಯೋಚಿಸಿ ಸದಸ್ಯರ ಜೊತೆಗೆ ಚರ್ಚೆ ಮಾಡಲಾಯಿತು. ಅದೇ ವರ್ಷದಲ್ಲಿ ಅಂದರೆ 2018ರ ಜುಲೈ 10ರಂದು ‘ವಸುಧೈವ ಕುಟುಂಬಕಂ’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ‘ಮಾಲತಿ ಮುದುಕವಿ’ಯವರು ಅಂಕಣ ಬರೆದುವುದರ ಜೊತೆಗೆ ಹೊಸಕಲ್ಪನೆಯೊಂದಿಗೆ ಅಡಿಗಲ್ಲು ಹಾಕಿದರು. ಇವರ ನಂತರ ‘ವಿಜಯಲಕ್ಷ್ಮಿ ಸತ್ಯಮೂರ್ತಿ’ ಅವರು ‘ಸಂಚಯ’ ಎಂಬ ಶೀರ್ಷಿಕೆಯ ಅಂಕಣ ಬರೆದರು. ಇವರಂತು ಸಂಪೂರ್ಣವಾಗಿ ಒಂದು ವರ್ಷಗಳ ಕಾಲ (53ವಾರ) ನಿರಂತರವಾಗಿ ಸಂಚಿಕೆಗಳ ಅಂಕಣ ಬರೆದರು. ಇದುವರೆಗೂ ಸುಮಾರು 25ಜನ ಲೇಖಕ, ಲೇಖಕಿಯರು ಅಂಕಣಗಳನ್ನು ಬರೆಯುತ್ತಿದ್ದಾರೆ.
ಸದ್ಯದ ದಿನಗಳಲ್ಲಿ ಭಾವ ಸಂಗಮದ ಸದಸ್ಯರೆಲ್ಲರಲ್ಲಿಯು ಕಿರಣ ಹಿರಿಸಾವೆ ಅವರು ಬರೆಯುವ ಮಂಗಳವಾರದ ‘ಚಚ್ಚೌಕದ ಬಾವಿ’ ಎನ್ನುವ ಅಂಕಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರೊಂದಿಗೆ ಶನಿವಾರ ಜಯಂತಿ ಚಂದ್ರಶೇಖರ ಅವರ ಮಂಗಳಾಕ್ಷತೆ ಅಂಕಣ ಗಮನ ಸೆಳೆಯುತ್ತಿದೆ. ಸೋಮವಾರದ ಯದ್ಭಾವಂ ತದ್ಭವತಿ, ಬುಧವಾರದ ತುಂಗೆ ತಪ್ಪಲಿನ ತಂಬೆಲರು, ಗುರುವಾರದ ಪರಿಕ್ರಮ, ಶುಕ್ರವಾರದ ನೆಲದ ಸುಗಂಧ ಅಂಕಣಗಳು ಭಾವ ಸಂಗಮದ ಮೆರುಗು ಹೆಚ್ಚಿಸಿವೆ. ಪ್ರತಿದಿನಾಲೂ ಮಧ್ಯಾಹ್ನ ಮೂರರಿಂದ ಸಂಜೆ ಆರರ ವರೆಗೆ ಅಂಕಣದ ಸಮಯ ಈ ಸಮಯದಲ್ಲಿ ಬೇರೆ ವಿಷಯಗಳ ಚರ್ಚೆಗೆ ಅವಕಾಶ ಇಲ್ಲ ಎನ್ನುತ್ತಾರೆ ರಾಪಾ ಸರ್ ಅವರು.
ವಿಭಿನ್ನ ಅನುಭವ
ಅಬ್ಬ ಭಾವ ಸಂಗಮಕ್ಕೆ ಪ್ರತಿದಿನ ಹೊಸ ಸದಸ್ಯರ ಆಗಮನ. ಕೆಲವು ಸದಸ್ಯರು ತಮ್ಮ ಪ್ರತ್ಯೇಕವಾಗಿರುವ ಜೀವನದಲ್ಲಿ ನಡೆಯುವ ವಿಶೇಷ ಘಟನೆಗಳನ್ನು ಹಂಚಿಕೊಳ್ಳುವುದು, ಪೋಟೋಗಳನ್ನು ಹಾಕುವುದು, ಪ್ರತಿದಿನ ಬೆಳಗ್ಗಿನ ಜಾವ ಸುಮಾರು ನಾಲ್ಕು ಗಂಟೆಗೆ ಶುಭನುಡಿಯೊಂದಿಗೆ ಸಂಗಮದ ಭಾಗಿಲು ತೆಗೆಯುವುದು. ಈ ಶುಭನುಡಿಯ ಬೆನ್ನಲ್ಲೆ ಒಂದಾದ ಒಂದರಂತೆ ಉತ್ತರ ಕನ್ನಡ ಜಿಲ್ಲೆಯವರು ಪಕೃತಿಯ ಸುಂದರ ದೃಶ್ಯವನ್ನು ಸೆರೆಹಿಡಿಯುತ್ತಾ ಅದಕ್ಕೆ ತಕ್ಕಂತೆ ಒಂದು ಸಾಲಿನಲ್ಲಿಯೆ ಕವಿತೆ, ಕವನಗಳು, ಗಜಲ್ಗಳನ್ನು ಹಾಕುವುದು. ಓದುಗರು ಎಲ್ಲದಕ್ಕೂ ಪದಗಳ ಗುಂಪಿನ ವಿಮರ್ಶೆ ಮಾಡುವುದೆ ಚೆಂದ. ಇದರ ಜೊತೆಗೆ ವೆಂಕಟೇಶ ಇನಾಮದಾರ ಅವರ ವ್ಯಂಗ್ಯಚಿತ್ರಗಳ ಪ್ರಭಾವ ಅದಕ್ಕೆ ತಕ್ಕಂತೆ ನಗೆ ಚುಟುಕುಗಳನ್ನು ಹಾರಿಸುವುದು. ಮಧ್ಯಾಹ್ನ ಮೂರರಿಂದ ಆರರ ನಡುವೆ ಅಂಕಣ ಅಂಕಣಕಾರು ಓದುಗರ ಅಭಿಪ್ರಾಯಕ್ಕೆ ಕಾಯುವುದು. ಕೆಲವು ಅಂಕಣಕಾರರ ಅಂಕಣಕ್ಕಾಗಿ ಕಾಯುವುದು. ಆ ಅಂಕಣಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸುವುದು ನಿಜಕ್ಕೂ ವಿಶೇಷ.
ಇಂಡಿ ತಾಲ್ಲೂಕಿನ ಅಥರ್ಗಾದಿಂದ ಶಿವಮೊಗ್ಗದತ್ತ ವಿಜಯಪುರ ಸಾಹಿತಿಗಳೊಂದಿಗೆ ಒಂದು ಸುತ್ತು
ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ನಾನು ಕಾಂಚನಾ. ಬಸವರಾಜ. ಪೂಜಾರಿ. ಕರ್ನಾಟಕ ರಾಜ್ಯದ ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವೀತಿಯ ವರ್ಷದಲ್ಲಿ ಓದುತ್ತಿದ್ದೆನೆ. ನನ್ನ ಒಂದು ಲೇಖನಿಯಿಂದ ಸಂಚಾಲಕರು ಈ ಭಾವ ಸಂಗಮಕ್ಕೆ ಸೇರಿಸಿದರು. ಮೊದಲು ಸ್ವಲ್ಪ ದಿನಗಳ ಕಾಲ ನಾನು ಭಾವಸಂಗಮದ ಕಾರ್ಯ ಚಟುವಟಿಕೆಗಳನ್ನು ಗಮನಿಸಿದೆ. ಕೆಲವು ವಿಷಯಗಳ ಕುರಿತು ನೇರವಾಗಿ ಸಂಚಾಲಕರ ಜೊತೆಗೆ ಮಾತನಾಡಿ ನನ್ನ ಅನುಮಾನಗಳನ್ನು ಬಗೆಹರಿಸಿಕೊಂಡೆ. ನಂತರದಲ್ಲಿ ನಾನು ಕ್ರಮೆಣವಾಗಿ ಕವಿತೆ, ಕವನ, ಅಂಕಣಗಳಿಗೆ ನನ್ನ ಅಭಿಪ್ರಾಯಗಳನ್ನು ತಿಳಿಸಲು ಆರಂಭ ಮಾಡಿದೆ. ಇದರ ಜೊತೆಗೆ ನಾನು ಬರೆದ ಲೇಖನಿಗಳು ಈಗಾಗಲೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಮತ್ತೊಮ್ಮೆ ಎಲ್ಲವನ್ನು ಸಂಗಮದಲ್ಲಿ ಹಾಕಿದೆ. ಮೊದಲಿಗೆ ಯಾರು ಪ್ರತಿಕ್ರಿಯೆ ನೀಡಲಿಲ್ಲ. ಆಗ ನನಗೆ ಕೊಂಚ ಅಳುಕು ಉಂಟಾಯಿತು. ಎರಡು ದಿನಗಳ ನಂತರದಲ್ಲಿ ಸದಸ್ಯರೊಬ್ಬರು ನನ್ನ ಲೇಖನ ಚೆನ್ನಾಗಿದೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದರು. ಅದನ್ನು ಓದಿದ ನನಗೆ ಸ್ವಲ್ಪ ಸಮಾಧಾನವಾಯಿತು.
ಅದಾದ ನಂತರದಲ್ಲಿ ನಾನು ಆಗೊಂದು ಈಗೊಂದು ಲೇಖನಗಳನ್ನು ಬರೆದು ಹಾಕಲು ಪ್ರಾರಂಭ ಮಾಡಿದೆ. ಹಾಗೂ ಅಂಕಣಗಳನ್ನು ಗಮನಿಸುತ್ತಾ ಹೋದೆ. ಇದರಲ್ಲಿ ಬರುವ ಅಂಕಣಗಳನ್ನು ಓದಲು ಸಮಯ ಹೊಂದಿಸಿಕೊಳ್ಳುತ್ತಿದ್ದೆ. ಅದಕ್ಕೆ ತಕ್ಕನಾಗಿ ವಿಮರ್ಶೆಯನ್ನು ಸಹ ಮಾಡುವೆ.
ನನಗೆ ತಿಳಿದಿರುವ ಪ್ರಕಾರ ಭಾವ ಸಂಗಮ ನಾಲ್ಕನೇ ಸಮಾಗಮ ಕಾರ್ಯಕ್ರಮದ ಕುರಿತಾಗಿ ಮೂರು ತಿಂಗಳುಗಳಿಂದನೆ ಮುಂಚಿತವಾಗಿ ತಯಾರಿ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಯಾರು ಬರುತ್ತಾರೆ, ಅಥವಾ ಬರುವುದಿಲ್ಲ ಎನ್ನುವುದರ ಕುರಿತು ಸ್ವಲ್ಪ ದೊಡ್ಡ ಮಟ್ಟದಲ್ಲಿಯೆ ಚರ್ಚೆಗಳು ನಡೆದವು. ನನಗಂತು ಅನೇಕರು ಕಾರ್ಯಕ್ರಮಕ್ಕೆ ಬರುವಂತೆ ಒತ್ತಾಯ ಮಾಡಿದರು.ರಾಪಾ ಅವರು ಗುಂಪಿನಲ್ಲಿಯೇ ಪ್ರೀತಿಯಿಂದ ಬೈದರು. ಟಿ. ಎನ್. ಶಿವಕುಮಾರಅವರು ವೈಯಕ್ತಿಕವಾಗಿ ಕರೆ ಮಾಡಿ ಮಾತನಾಡಿದರು. ಆಗ ನಾನು ನೋಡಿದರಾಯಿತು ಎಂದುಕೊಂಡೆ. ಆದರೆ ಸಂಗಮದಲ್ಲಿ ನಡೆಯುವ ಸಂಭಾಷಣೆ ನೋಡಿದಾಗ ನನ್ನಲ್ಲೆ ಗೊಂದಲಗಳು ಶುರುವಾದವು. ಒಂದು ದಿನ ರಾಪಾ ಅವರು ನನ್ನ ಅಪ್ಪನ ಜೊತೆಗೆ ಮತನಾಡಿದರು.
ಅಲ್ಲಿಯವರೆಗೂ ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಿರಲಿಲ್ಲ. ಅದಾದ ಮೇಲೆ ಮನೆಯಲ್ಲಿ ಹೇಳಿದೆ. ಅಪ್ಪನು ಏನು ಹೇಳಲಿಲ್ಲ ಸುಮ್ಮನಿದ್ದರು. ನಾನು ಸುಮ್ಮನಾದೆ. ಕಾರ್ಯಕ್ರಮಕ್ಕೆ ಇನ್ನೇನು ಒಂದು ವಾರ ಉಳಿದಿತ್ತು. ಆಗ ನಾನು ಕೂಡಾ ಶಿವಮೊಗ್ಗಕ್ಕೆ ಬರುತ್ತೇನೆ ಎಂದು ಸಂದೇಶ ಹಾಕಿದಾಗ ಸಂಚಾಲಕರು ಸಂತಸ ಪಟ್ಟರು. ನಂತರ ಮುರುಗೇಶ ಸಂಗಮ ಅವರು ಕರೆ ಮಾಡಿ ಬರುತ್ತಿರಾ ಎಂದು ವಿಚಾರಿಸಿದರು. ಆಗಲೂ ಸಹ ಗೊಂದಲದಲ್ಲಿಯೇ ಒಪ್ಪಿಗೆ ಸೂಚಿಸಿದೆ.
2019 ಆ. 17 ರಂದು ಸಂಜೆ ಸುಮಾರು ಸಂಜೆ 7 ಕ್ಕೆ ಬಸವನಬಾಗೇವಾಡಿಯ ಸಾಹಿತಿ ಡಾ. ಮುರುಗೇಶ ಸಂಗಮ ಅವರ ಬಳಗದೊಂದಿಗೆ ವಿಜಯಪುರದಿಂದ ಪಯಣ ಬೆಳೆಸಿದೆ. ಬಳಗದವರನ್ನು ನೋಡಿದ ನನಗೆ ಮನಸಿನ ಒಂದು ಮುಲೆಯಲ್ಲಿ ಮತ್ತಷ್ಟು ಅಳಕು ಶುರುವಾಯಿತು. ಇದೇನಪ್ಪ ಎಲ್ಲರೂ ಹಿರಿಯರಿದ್ದಾರೆ. ನಾನು ಹೇಗೆ ಇವರ ಜೊತೆಗೆ ಹೊಂದಿಕೊಳ್ಳೊದು? ಏನು ಮಾತಾಡೊದು? ಅಂತ ಯೋಚಿಸುತ್ತದೆ. ಅಷ್ಟರಲ್ಲಿ ಮುರುಗೇಶ ಅವರು ಎಲ್ಲರ ಪರಿಚಯ ಮಾಡಿಸಿದರು. ಸ್ವಲ್ಪ ಮುಜುಗರ ತೋರೆದು ಪರಸ್ಪರ ಮಾತನಾಡಲು ಆರಂಬಿಸಿದೆವು. ನಂತರ ರಸ್ತೆಯ ಮಧ್ಯೆದಲ್ಲಿ ಒಂದು ಕಡೆಗೆ ಎಲ್ಲರೂ ಸೇಲ್ಫಿಗೆ ಫೋಸ್ ಕೊಟ್ಟೆವು. ಅದನ್ನು ಸಂಗಮದಲ್ಲಿಯೂ ಹಾಕಿದೆವು.
ರಾತ್ರಿ ಸುಮಾರು 10 ಗಂಟೆಯಷ್ಟೊತ್ತಿಗೆ ಎಲ್ಲರ ಹೊಟ್ಟೆ ತಾಳ ಹಾಕುತ್ತಿತ್ತು. ರಾತ್ರಿ ವೇಳೆಯಾಗಿದ್ದರಿಂದ ಒಂದು ಪೇಟ್ರೋಲ್ ಬಂಕ್ ಹತ್ತಿರ ಹೋಟೆಲ್ ನಲ್ಲಿ ಊಟಕ್ಕೆ ಗಾಡಿಯನ್ನು ನಿಲ್ಲಿಸಿದೆವು. ನಾನು ಸುಮಾರು 10ಗಂಟೆಗಳ ಕಾಲ ಮಾತಿನ ಮಲುಕು, ಹಳೆ ಹಾಡುಗಳನ್ನು ಗೊನಗುವುದು, ಚಲಿಸುವ ಗಾಡಿಯಲ್ಲಿಯೇ ನನ್ನದೊಂದಿಷ್ಟು ತುಂಟಾಟದ ವಿಡಿಯೋಗಳನ್ನು ಮಾಡುವುದು. ಕಿಡಕಿಯ ಪಕ್ಕದಲ್ಲಿ ಕುಳಿತು ತಣ್ಣನೆಯ ತಂಪಾದ ಗಾಳಿಯಲ್ಲಿ ರಸ್ತೆಯ ಉದ್ದಕ್ಕೂ ಬರೆದಿರುವ ಫಲಕಗಳನ್ನು ಓದುತ್ತಾ ಹೋಗುವುದೆ ಖುಷಿಯ ವಿಚಾರ. ಇದರ ಮಧ್ಯ ನಾನು ಸಂಗಾತಿಯನ್ನು ಸಹ ಕರೆದುಕೊಂಡು ಹೋಗಿದ್ದೆ. ಇದ್ಯಾರಪ್ಪ! ಇವರ ಮತ್ತೊಬ್ಬ ಸಂಗಾತಿ ಅಂತಿರಾ? ಅದು ಮತ್ಯಾರು ಅಲ್ಲಾ, ನನ್ನ ಲ್ಯಾಪ್ಟಾಪ್ ಹಾಗೂ ಪುಸ್ತಕಗಳೆ ನನ್ನ ಸಂಗಾತಿಗಳು. ರಾತ್ರಿಯಿಡಿ ಮಲಗಲಿಲ್ಲ.
ಸುಮಾರು ಬೆಳಗಿನ ಜಾವ ಚುಮುಚುಮು ಚಳಿಗೆ ಟೀ ಕುಡಿವ ಆಸೆ ನನ್ನಲ್ಲಿ ಹೆಚ್ಚಾಗುತ್ತಿತ್ತು. ಇದರ ಜೊತೆಗೆ ಮಲೆನಾಡಿನ ಸೌಂದರ್ಯವನ್ನು ಸವಿಯುತ್ತಿದೆ. ಮೊದಲೆ ನಾವು ಉತ್ತರ ಕರ್ನಾಟಕದವರು ನೋಡಿ ನಮಗೆಲ್ಲ ನಿಸರ್ಗದ ಸೌಂದರ್ಯ ಎಲ್ಲಾವು ಅಪರೂಪಕ್ಕೆ ಸಿಗುತ್ತೆ. ಅಂಥಹುದರಲ್ಲಿ ಸೌಂದರ್ಯದ ಸವಿ ಸವಿಯದೆ ಹೋದರೆ ತಪ್ಪಾಗುತ್ತದೆ. ಇದೆ ರೀತಿಯಲ್ಲಿ ನೈಸರ್ಗದ ಸೌಂದರ್ಯವನ್ನು ಸವಿತ್ತಾ, ಮಾತು, ಹರಟೆ, ಮಾಡುತ್ತಾ ಸುಮಾರು 10ಗಂಟೆಗಳ ಕಾಲ ಪ್ರಯಾಣ ಮಾಡಲಾಯಿತು. ಬೆಳಗಿನ ಜಾವ ಐದುವರೆಗೆ ಶ್ರೀಕಾಂತ .ಪತ್ರೆಮರ ಅವರ ಸೋದರಿಯ ಮನೆ ತಲುಪಿದವು. ಅಲ್ಲಿಯೇ ನಮ್ಮ ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡೆವು, ನಂತರ ಅವರ ತಂಗಿಯವರು ಮಾಡಿದ ಉಪ್ಪಿಟ್ಟು ಚಹಾ ಸೂಪರ್ ಆಗಿತ್ತು. ನಂತರ ಎಲ್ಲರೂ ಸೇರಿ ಸಭಾಂಗಣಕ್ಕೆ ತೆರಳಿದವು. ಅನೇಕರು ಎಲ್ಲಿ ನಮ್ಮನ್ನು ಸ್ವಾಗತಿಕೊಂಡರು. ಕಲವರು ಮಾತನಾಡಿಸಿದರು. ನನ್ನಗೆ ತುಂಬಾ ಸಂತೋಷವಾಯಿತು, ಆದರು ಸಹ ನಾನು ಮೊದಲೆ ಹೇಳಿದ ಹಾಗೆ ಕೊಚ ಅಳುಕು ಮುಂದುವರೆದೆ ಇತ್ತು. ಇದೇ ಕಾರಣದಿಂದಾಗಿ ನಾನು ಸ್ವಲ್ಪ ದೂರದಲ್ಲಿಯೆ ಇದ್ದು ಹಾಡು ಕೇಳುತ್ತಾ ಅಲ್ಲಿರುವ ಹೂಗಳ ಚಿತ್ರಿಕರಣ ಮಾಡುತ್ತಿದ್ದೆ.
ಅಷ್ಟರಲ್ಲಿಯೇ ರಾಜೇಂದ್ರ ಪಾಟೀಲ ಸರ್ ಆಗಮನವಾಯಿತು. ನಂತರದಲ್ಲಿ ವಿಜಯಮ್ಮ, ರಾಸು ವೆಂಕಟೇಶ, ಜಯಂತಿ ಅಮ್ಮ, ತ.ನಾ.ಶಿ ಹೀಗೆ ಅನೇಕರ ದಂಡು ತಂಡೋಪ ತಂಡದಲ್ಲಿ ಬಂದರು. ಇವರಲ್ಲ ನನ್ನನ್ನು ಮಾತನಾಡಿಸಿ ನನ್ನಲ್ಲಿದ ಭಯವನ್ನು ಹೋಗಲಾಡಿಸಿದರು. ಎಲ್ಲರೂ ಸೇರಿ ತಿಂಡಿ ಮಾಡಿದವು. ನಂತರ ವಿಜಯಮ್ಮಾ ನಡಗೆರೆ, ಶ್ರೀವಲ್ಲಭ, ವೆಂಕಟೇಶ ಇನಾಮದಾರ, ತ.ನಾ.ಶಿ ಅನೇಕ ಜೊತೆಗೆ ಸ್ವಲ್ಪ ತರಲೆ, ತುಂಟಾಟ ಮಾಡುತ್ತಾ, ಸ್ವಲ್ಪ ಕಾಲು ಏಳೆದು ಏಳೆಸಿಕೊಂಡೆ. ಇವರೆಲ್ಲರೂ ಸಾಹಿತ್ಯ, ಪತ್ರಿಕೋದ್ಯಮ, ಶಿಕ್ಷಣದ ಹೀಗೆ ಅನೇಕ ವಿಷಯಗಳ ಬಗ್ಗೆ ತಮ್ಮ ಅನುಭಮಗಳನ್ನು ಹಂಚಿಕೊಂಡು ಸಲಹೆಗಳನ್ನು ನೀಡಿದರು. ಈ ಸುಂದರ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಸುಂದರ ಸಮಾಗಮ ಮುಗಿಸಿಕೊಂಡೆ ಮನೆಗೆ ಬಂದಿದ್ದು ಮರುದಿನ
ಬೆಳಗಿನ ಜಾವ ಆರು ಗಂಟೆಗೆ.
ಧನ್ಯವಾದಗಳು.
–ಕಾಂಚನಾ ಪೂಜಾರಿ
86609 89900
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಹೊಸತನದ ಹೊಸ್ತಿಲಲ್ಲಿ..!

- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕಾಮರೂಪದ ಪ್ರಭಾಕರ

- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ7 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ3 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ3 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ
-
ದಿನದ ಸುದ್ದಿ5 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು