ಭಾಮಿನಿ
some love stories end, before it’s start…!
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2018/05/broken-heart-love-failure-suddidina.jpg&description=some love stories end, before it’s start…!', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2018/05/broken-heart-love-failure-suddidina.jpg&description=some love stories end, before it’s start…!', 'pinterestShare', 'width=750,height=350'); return false;" title="Pin This Post">
ಪ್ರತೀ ಮನಸು ತನ್ನ ಯೌವನದ ಮೊದಮೊದಲ ಕ್ಷಣಗಳ ಗೂಡಿಗೆ ಮರಳಲು ಜೀವನವಿಡೀ ಹಾತೊರೆಯುತ್ತದೆ . ಆ ವಯಸ್ಸಿನಲ್ಲಿ ಕಂಡಷ್ಟು ಕನಸುಗಳು, ಸವೆಸಿದಷ್ಟೂ ಹಾದಿ. ಬಯಸಿದಷ್ಟೂ ಬಯಕೆಗಳು , ಮರೆಯದಷ್ಟು ನೆನಪುಗಳು. ಯಾವುದೋ ಒಂದು ಭಾವ ಎಲ್ಲರನ್ನು ಬಿಡದಂತೆ ಬಂಧಿಸಿ ಬಿಟ್ಟಿರುತ್ತದೆ. ಅದೆಂದರೆ ಹಾಗೇ. ಅದೊಂದು ಸುಂದರ ಅನುಭವ. ಎಲ್ಲರಲ್ಲೂ ಒಂದಲ್ಲಾ ಒಂದು ಹಂತದಲ್ಲಿ , ಒಂದಲ್ಲಾ ಒಂದು ಬಗೆಯಲ್ಲಿ ಆ ಭಾವದ ಸೆಳೆತಕ್ಕೆ ಒಳಗಾದವರೇ. ಯಾಕೆಂದರೆ ಆ ಭಾವ ಅಷ್ಟು ಆಕರ್ಷಣೀಯವಾದುದು. ಎಂಥಹ ಕಲ್ಲು ಹೃದಯವನ್ನು ಒಂದು ಕ್ಷಣ ಕರಗಿಸಿ ಬಿಡುವ ಅಹಿಂಸಾ ಭಾವ.
ಅಂದು ಮಳೆ ಧರೆಗೆ ಮುತ್ತಿಕ್ಕಿ ಸಾಕಾಗಿ ಮರಳಿತ್ತು. ಸೂರ್ಯನ ಕಿರಣಗಳು ಅಲ್ಲೆಲ್ಲೊ ಅವಿತು ಕುಳಿತಿದ್ದವು .ಆಕಾಶದಲ್ಲಿ ಮಳೆಬಿಲ್ಲು ಮೂಡಿ ರಂಗೇರಿಸಿತ್ತು. ಮೆಲ್ಲಗೆ ಆಕೆ ಹೆಜ್ಜೆ ಇಡುತ್ತಾ ಬಸ್ ನಿಲ್ಲುವಲ್ಲಿಗೆ ಬಂದಳು. ಮಳೆ ನೀರ ಅಭಿಷೇಕ ಮಾಡಿಕೊಂಡ , ಗುಂಗುರು ಕೂದಲಿನ , ಗಂಭೀರ ಮೊಗದ ಚೆಲುವನೊಬ್ಬ ಪಕ್ಕದಲ್ಲೇ ನಿಂತಿದ್ದಾನೆ. ಒಂದೇ ಕ್ಷಣ ದಲ್ಲಿ ಒಬ್ಬರನೊಬ್ಬರು ನೋಡಿಕೊಂಡು ದೃಷ್ಟಿ ಬೇರೆ ಕಡೆಗೆ ತಿರುಗಿಸಿದರು. ಅಷ್ಟೆ. ಆಕೆಯ ಮೊಗದಲ್ಲಿ ಅದೇನೋ ಮಂದಹಾಸ. ಮನದೊಳಗೆ ಅದ್ಯಾವುದೋ ಭಾವ ವಿಜೃಂಭಿಸಿದೆ. ಆತನಲ್ಲೂ ಆ ಭಾವ ಮಿಂಚಿ ಮರೆಯಾಗಿರಬಹುದು. ಅವನು ಮನುಷ್ಯನೇ ಅಲ್ಲವೇ ?? ಒಂದು ಕ್ಷಣ ಮೌನದಲ್ಲೇ ನಗುವಿದೆ , ಸುಂದರ ಭಾವವಿದೆ . ಅರ್ಥವಾಗದ ಭಾಷೆ ಇದೆ. ಹೇಳಲಾಗದ ಅನುಭವವಿದೆ. ಆದರೆ ತುಂಬಾ ಸುಂದರವಾಗಿದೆ ಅನಿಸಿದೆ. ಆ ಭಾವ ಅಲ್ಲಿಗೆ ಮುಗಿದಿದೆ ಎಂದುಕೊಳ್ಳುವಷ್ಟರಲ್ಲೇ ಅದು ನೆನಪಾಗಿ ಮತ್ತೆ ಕಾಡಿದೆ. ಮತ್ತೆ ಮತ್ತೆ ಕಾಡಿದೆ. ನೋಡಬೇಕು ಎಂಬ ಹಂಬಲದಿಂದಲ್ಲ. ಎಂಥ ಸುಂದರ ಅನುಭವ ಅದು ಎಂಬ ನಗುವಿನಿಂದ.
ಭಾವನೆಗಳೆ ಹಾಗೆ. ನಮ್ಮವೇ ಆದರೂ ನಮ್ಮ ಪರ್ಮಿಶನ್ ಇಲ್ಲದೇ ಮನದೊಳಗೆ ನುಗ್ಗಿ ಬಿಡುತ್ತವೆ. ಕೆಲವೊಮ್ಮೆ ನರಳಿಸಿಯೂ ಬಿಡುತ್ತವೆ. ಪ್ರತಿಯೊಬ್ಬರು ಅಂತಹ ಒಂದು ಸೆಳೆತಕ್ಕೆ ಒಳಗಾದವರೇ. ಕೆಲವರು ಅದ ನೆನೆದು ನಕ್ಕು ಸುಮ್ಮನಾದರೆ, ಮತ್ತೆ ಕೆಲವರು ಅದನ್ನೇ ಹಿಂಬಾಲಿಸುವರು . ಆ ಭಾವವನ್ನು ಮರಳಿ ಪಡೆಯಬೇಕೆಂಬ ಅತಿಯಾಸೆ ಹುಟ್ಟಿಸಿ ಬಿಡುತ್ತದೆ. ಕೆಲವೊಮ್ಮೆ ಆ ಅತಿಯಾಸೆಯೇ ಬದುಕಲು ಪ್ರೇರಣೆ ಯಾಗಿಬಿಡುತ್ತೆ. ಸೋತ ಮನಕ್ಕೆ ಸಾಂತ್ವನ ಹೇಳುತ್ತೆ. ನಗುವುದ ಮರೆತ ಮೊಗದಲ್ಲಿ ನಗೆಯ ಬುಗ್ಗೆ ಚಿಮ್ಮಿಸಿ ಬಿಡುತ್ತೆ. ಫೀಲಿಂಗ್ಸ್ ಗಳನ್ನೇ ಹೊಂದಿಲ್ಲದ ಭಾವಾಂಗವಿಕಲನನ್ನೂ ಬಾಚಿ ತಬ್ಬಿ ಬಿಡುತ್ತದೆ. ನೀನೀಕೇ ಹೀಗೇ….. ಇದ್ದರೂ ಇಲ್ಲದ ಹಾಗೇ. ಇರದಿದ್ದರೂ ಇದ್ದ ಹಾಗೆ.. ವಾಸ್ತವದಲ್ಲಿ ಜೀವಿಸಲು ಬಿಡದೇ ಅದೇಕೆ ಭ್ರಮಾ ಲೋಕಕ್ಕೆ ಪದೇ ಪದೇ ಎಳೆದೊಯ್ಯುವೇ.. ನಿನಗೆ ಗೊತ್ತ.. ಆ ಲೋಕದಿಂದ ಈ ಲೋಕಕ್ಕೆ ಮರಳಲು ಪಾಪ ನಿನ್ನ ಕೈ ವಶವಾದ ಭಾವ ಜೀವಿಗಳು ಅದೆಷ್ಟು ಪರಿಪಾಟಲು ಪಡಬೇಕು. ನೀನೂ ನಮ್ಮಂಥೆ ಸಾಮಾನ್ಯ ಮನುಷ್ಯ ನಾಗಿರಬೇಕಿತ್ತು..ಆಗ ತಿಳಿಯುತ್ತಿತ್ತು.
ಮೊದಮೊದಲಲ್ಲಿ ಆ ಭಾವವನ್ನು ನೆನೆದಾಗ
ಭಾವನಾ ಲೋಕದಲ್ಲಿ
ಭಾವಭಾವಗಳ ಬೆಸುಗೆಯಲ್ಲಿ
ಭಾವಾನುರಾಗದ ಬಾಂಧವ್ಯದಲ್ಲಿ
ಬೆಳಕಾಗಿ ಬಂದ ನೀನ್ಯಾರು ?
ಎಂಬ ಪ್ರಶ್ನೆ ಕಾಡಿದ್ದು ಅಷ್ಟಿಷ್ಟಲ್ಲ. ಅದು ಪ್ರೀತಿಯೇ ?, ಸೆಳೆತವೇ ಬಹುಶಃ ಮೊದಲ ನೋಟದ ಪ್ರೀತಿ ಅಂತರಲ್ಲಾ ಅದೇ ಇರಬೇಕು. ಆ ಭಾವನೆ ಎಂದಿಗೂ ಅಸ್ಪಷ್ಟ.. ಆದರೆ ಪ್ರೀತಿ ಎಂತಾದರೆ ಪ್ರೀತಿಯಷ್ಟೇ ಖುಷಿ ಕೊಡುತ್ತೆ. ಪ್ರೀತಿಯಲ್ಲ ಎಂತಾದರೆ ಪ್ರೀತಿಗಿಂತಲೂ ಹೆಚ್ಚಿನ ಖುಷಿ ಕೊಡುತ್ತೆ. ಸದ್ಯಕ್ಕಂತು ಪ್ರೀತಿಯ ಒಂದು ಭಾವ..,.ಒಟ್ಟಿನಲ್ಲಿ ಅದೊಂದು ಭಾವದೆದೆಯೊಳಗಿನ ಮಿಂಚಿನ ಸಂಚಲನ. ಅಂದು ಅವಳ ಮುಖದಲ್ಲಿ ಮೂಡಿದ ಮಂದಹಾಸ ವರ್ಣಿಲಸಾಧ್ಯ. ಯಾಕೆಂದರೆ ಆ ಭಾವ ಒಂದು ಬಗೆಯ ಲೋಹಚುಂಬಕ.ಎಲ್ಲರನ್ನೂ ಆಕರ್ಷಿಸಿಬಿಡುತ್ತದೆ. ಅದಕ್ಕಿರುವ ಗುರುತ್ವ ಶಕ್ತಿ ಅಂಥದ್ದು.
ಪ್ರೀತಿಗೂ ವಿವಿಧ ಮಜ್ಜಲುಗಳುಂಟು. ಅದರಲ್ಲಿ ಇದೂ ಒಂದಿರಬಹುದು.ಆಗಾಗ ನೆನಪಾಗಿ ಕಚಗುಳಿ ಇಡುವ ಅದೆಷ್ಟೋ ಭಾವಲಹರಿಗಳ ಪೈಕಿ ಇದೆಂದಿಗೂ ಮೊದಲ ಸ್ಥಾನದಲ್ಲೇ.. ಯಾರೋ ಎಲ್ಲಿಂದ ಬಂದವರೋ , ಅದೇನು ನಂಟೋ … ಬಂದು ಬಿಡುತ್ತಾರೆ. ಭಾವನೆಗಳನ್ನು ಬಂಧಿಸಿ ಬಿಡುತ್ತಾರೆ. ಸಮುದ್ರದ ದಡದಲ್ಲಿ ನಿಂತಾಗ ಅಲೆಗಳು ಬಂದು ಅಪ್ಪಳಿಸುವಂತೆ ಮನದೊಳಗೆ ಆಗಾಗ ಸುಳಿದು ಮರೆಯಾಗಿ ಬಿಡುತ್ತಾರೆ.ಒಂದಷ್ಟು ಕಲ್ಪನೆಗಳು, ಒಂದಷ್ಟು ಕನಸುಗಳನ್ನ ಕೊಟ್ಟು ಮತ್ತೆಂದೂ ಸಿಗುವುದಿಲ್ಲ ಎಂದು ಟಾಟಾ ಮಾಡಿ ಹೊರಟು ಬಿಡುತ್ತಾರೆ , ಮತ್ತೆ ಸಿಗುತ್ತಾರೇನೊ ಎಂಬ ನಿರೀಕ್ಷೆ ಹುಟ್ಟಿಸಿ…..
ಬದುಕೇ ಹಾಗೇ ಇಲ್ಲಿ ಸುಂದರವಾಗಿ ಬದುಕಬೇಕು ಎಂದು ಕೊಂಡರೆ ಜೊತೆ ಯಲ್ಲೇ ಇರಬೇಕು ಎಂದೇನಿಲ್ಲ. ಜೊತೆಗಿದ್ದ ನೆನಪುಗಳೇ ಸಾಕು.ಇಂತಹ ಅದೆಷ್ಟೋ ಸೆಳೆತಗಳೇ ಸಾಕು ಭಾವ ಪ್ರಪಂಚವೆಂಬ ಸುಂದರ ಲೋಕದಲ್ಲಿ ಒಂದು ರೌಂಡ್ ಹಾಕಿ ಬಂದು ಬಿಡಬಹುದು.. ಎಲ್ಲೋ ಯಾರೋ ಒಂದು ಕ್ಷಣ ಬದುಕಿನಲ್ಲಿ ಬಿರುಗಾಳಿಯಂತೆ ಬಂದು ತಂಗಾಳಿಯಂತೆ ಹೋಗಿರಬಹುದು. ಪದೇ ಪದೇ ನೆನಪಾಗಿ ಮನೋಲ್ಲಾಸ ತಂದಿರಬಹುದು. ಮುಳ್ಳಿನ ದಾರಿ ಇದ್ರೂ ಅವರನ್ನು ಕಂಡಾಗ ಹೂವಿನ ಹಾದಿಯಂತೆ ಭಾಸ ವಾಗಬಹುದು. ಅವ್ರೇ ಜೊತೆ ಯಾದ್ರೆ ಎಷ್ಟು ಚೆಂದ ಎಂದೆನಿಸಬಹುದು. ಆ ಮಳೆ ಹುಡುಗಿಗೂ ಆ ಮಳೆಬಿಲ್ಲಿನಂಥ ಹುಡುಗನ ನೋಡಿ ಅದೇ ಅನಿಸಿದೆ. ಆದರೆ ಅದು ಎಂದೂ ಸಾಧ್ಯವಿಲ್ಲ. ಯಾಕಂದ್ರೆ ……. some love stories end, before it’s start..!
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಅಂತರಂಗ
ಕಗ್ಗತ್ತಲ ವ್ಯಾಪಾರದಲ್ಲಿ, ವೇಶ್ಯೆ ಅಳುವ ಮಗು..!
- ಮೈತ್ರಾವತಿ ವಿ. ಐರಣಿ, ಚಿಕ್ಕಬೂದಿಹಾಳು, ದಾವಣಗೆರೆ
ವೇಶ್ಯಾವಾಟಿಕೆ ಎಂಬುದು ಸ್ತ್ರೀ ಕುಲಕ್ಕೆ ಅಂಟಿಕೊಂಡಿರುವ ಅಭಿಶಾಪಗಳಲ್ಲೊಂದು!ಇಂತಹ ಶಾಪದ ಕೂಪವನ್ನು ಸೃಷ್ಟಿಸಿದವರು,ಪೋಷಿಸಿದವರು ,ಪರವಾನಿಗೆ ಕೊಟ್ಟವರು ನಮ್ಮ ಸೋ ಕಾಲ್ಡ್ ಮಾರ್ಯದಸ್ಥ ಸಮಾಜ.
ವೇಶ್ಯಾ ವೃತ್ತಿ ಎಂದರೆ ಹಣದ ಪ್ರತಿಫಲಕ್ಕಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಕ್ರಿಯೆ. ಜಗತ್ತಿನಾದ್ಯಂತ ಅನಾದಿಕಾಲದಿಂದಲೂ ಇದು ರೂಢಿಯಲ್ಲಿದೆ. ವಿಪರ್ಯಾಸ ಏನೆಂದರೆ ಕಾಲಾಂತರದಲ್ಲಿ ಈ ವೃತ್ತಿಗೆ ಆಧುನಿಕತೆಯ ಸ್ಪರ್ಶ ಸಿಕ್ಕು ಹೈಟೆಕ್ ದಂಧೆಯಾಗಿ,ವ್ಯವಹಾರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರಲ್ಲಿ ಪುರುಷರ ಸಹಭಾಗಿತ್ವ ಇದ್ದರೂ ದೂಷಿಸುವುದು ಮಾತ್ರ ಸ್ತ್ರೀಯರನ್ನೇ ಇದು ಯಾವ ಕಾಡಿನ ನ್ಯಾಯ? ನನಗಿವತ್ತಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಅದ್ಯಾರದ್ದೇ ಬದುಕಾಗಿರಬಹುದು ಬದುಕಲಾರದಷ್ಟು ಅಸಹ್ಯವಾಗಿರುವುದಿಲ್ಲ,ಹೇಸಿಗೆ ಪಡುವಷ್ಟು ನಿಷ್ಕೃಷ್ಠವಾಗಿರುವುದಿಲ್ಲ,ಲೋಕನಿಂದನೆಗೊಳಗಾಗಿ ಮುಖ ಮುಚ್ಚಿ ಓಡಾಡುವಂತಹ ಹೀನ ಸ್ಥಿತಿ ಇರುವುದಿಲ್ಲ. ಅಷ್ಟಕ್ಕೂ ಯಾರ ಬದುಕು ದಟ್ಟ ದರಿದ್ರವಲ್ಲ.ಅವರವರ ವೃತ್ತಿಗೆ ಅವರದೇ ನೆಲೆಯಲ್ಲಿ ತಕ್ಕುದಾದ ಗೌರವ ಆದರಗಳಿರುತ್ತವೆ. ಅವನೆಂತಹ ನೀಚನೇ ಆಗಿರಲಿ,ಪರಮಪಾಪಿಯೇ ಆಗಿರಲಿ, ಕೊಲೆಗಡುಕನೇ ಆಗಿರಲಿ ಅವನು ಸಹ ಸಮಾಜದಲ್ಲಿ ಚೂರು ಪಾರು ಮರ್ಯಾದೆ, ಗೌರವ ಸಂಪಾದಿಸಿರುತ್ತಾನೆ.ಅವನ ಬದುಕಿನ ಅಸ್ತಿತ್ವಕ್ಕೊಂದು ಸಾರ್ಥಕ ಕಂಡುಕೊಳ್ಳುತ್ತಾನೆ.
ಬಹುಶಃ ವೃತ್ತಿ ಗೌರವವಿಲ್ಲದ ಏಕಮಾತ್ರ ದಂಧೆ ಎಂದರೆ ಅದು ವೇಶ್ಯೆ ವೃತ್ತಿಯೊಂದೇ.ಆಕೆ ದೇಹವನ್ನು ಮಾರಿ ಅಷ್ಟೈಶರ್ಯವನ್ನು ಸಂಪಾದಿಸಿರಲಿ ಅದನ್ನು ನಾನು ನನ್ನ ದೇಹ ಮಾರಿ ಸಂಪಾದಿಸಿದ್ದೇನೆಂದು ಅಭಿಮಾನದಿಂದ, ಹೆಮ್ಮೆಯಿಂದ ಸಮಾಜದಲ್ಲಿ ನಿಂತು ಹೇಳುವ ಧೈರ್ಯ, ಸ್ಥೈರ್ಯ ಅವರಿಗಿರುವುದಿಲ್ಲ.ಯಾವುದೇ ಮಾನ,ಸಮ್ಮಾನ, ಬಡ್ತಿ, ಗೌರವಗಳಿಲ್ಲದ ಏಕಮಾತ್ರ ವೃತ್ತಿಯಿದು.
ವೇಶ್ಯೆ ಎಂದರೆ ಪರಮ ಪಾಪಿ,ನಿತ್ಯ ಕಳಂಕಿತೆ,ಲೋಕನಿಂದಿತೆ,ಜಾರಿಣಿ ಹೀಗೆ ನಾನಾ ಹೆಸುರುಗಳಿಂದ ಕರೆಸಿಕೊಳ್ಳುವ ಆ ಪಾಪದ ಜೀವಗಳಿಗೆ ಎಷ್ಟು ಜನ್ಮ ಕಳೆದರೂ ಆ ಕಳಂಕ ಅವರಿಂದ ದೂರವಾಗುವುದಿಲ್ಲ.
ಅಷ್ಟಕ್ಕೂ ವೇಶ್ಯೆ ಎಂದರೆ ಮೂಗು ಮುರಿಯುವ ಸಮಾಜದಲ್ಲಿ ನಾವು ಬದುಕಿದ್ದೇವೆ.ಹೌದು ಹಾಗಾದರೆ ಆಕೆ ವೇಶ್ಯೆಯಾಗಲಿಕ್ಕೆ ಭಾರತದಂತಹ ಮಡಿವಂತಿಕೆಯ ರಾಷ್ಟ್ರದಲ್ಲಿ ವೇಶ್ಯಾವಾಟಿಕೆ ಒಂದು ದಂಧೆಯಾಗಿ ,ವೃತ್ತಿಯಾಗಿ ಬೆಳೆಯಲಿಕ್ಕೆ ಕಾರಣ ಯಾರು?, ಅದಕ್ಕೆ ಅಧಿಕೃತವಾಗಿ ಪರವಾನಿಗೆ ಕೊಟ್ಟವರು ಯಾರು?
ವೇಶ್ಯಾವಾಟಿಕೆ ಎಂಬುದು ಸ್ತ್ರೀ ಕುಲಕ್ಕೆ ಅಂಟಿಕೊಂಡಿರುವ ಅಭಿಶಾಪಗಳಲ್ಲೊಂದು!ಇಂತಹ ಶಾಪದ ಕೂಪವನ್ನು ಸೃಷ್ಟಿಸಿದವರು,ಪೋಷಿಸಿದವರು ,ಪರವಾನಿಗೆ ಕೊಟ್ಟವರು ನಮ್ಮ ಸೋ ಕಾಲ್ಡ್ ಮಾರ್ಯದಸ್ಥ ಸಮಾಜ.
ಹೌದು ಬದುಕಿನಲ್ಲಿ ಯಾವುದೋ ಅಸಹಾಯಕತೆಗೋ,ಅನೀರಿಕ್ಷಿತ ಒತ್ತಡಕ್ಕೋ ಸಿಲುಕಿ ವೇಶ್ಯಾವಾಟಿಕೆ ಪ್ರಪಂಚಕ್ಕೆ ಕಾಲಿಡುವ ಸ್ತ್ರೀ ಜಗತ್ತಿಗೆ ವೇಶ್ಯೆ ಎಂದು ಚಿರಪರಿಚಿತಳಾಗುತ್ತಾಳೆ.ಆದರೆ ಆಕೆಯ ಅಸಹಾಯಕತೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಪುರುಷ(ಕೆಲವರು) ಮಾತ್ರ ಜಗತ್ತಿನ ಮುಂದೆ ಸಭ್ಯಸ್ಥನಾಗಿ ಕಾಣಿಸಿಕೊಳ್ಳುತ್ತಾನೆ.ಸಮಾಜದ ಇಂತಹ ಕುರುಡು ಕಾನೂನಿಗೆ ನನ್ನ ಧಿಕ್ಕಾರವಿದೆ.
ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ದಂಧೆ ಕೋಡ್ ವರ್ಡ್ ಗಳ ಮೂಲಕ ನಡೆಯುತ್ತದೆ. ಅದಕ್ಕೆಂದೇ ದುರುಳರ ವರ್ಗ ಹುಟ್ಟಿಕೊಂಡಿದೆ.ಕಿತ್ತು ತಿನ್ನುವ ಬಡತನ, ಬದುಕಿನ ಅಸಹಾಯಕ ಸ್ಥಿತಿ, ಕಾಮುಕ ಕಣ್ಣಿನ ಕೀಚಕರ ದುರಾಸೆಗೆ ಬಲಿಯಾಗುವ ಹೆಣ್ಣು ಮಕ್ಕಳು ಮುಂದೆ ಕಾಮಾಟಿಪುರಂನ ವೇಶ್ಯಾವಾಟಿಕೆ ಅಡ್ಡೆಗಳಲ್ಲಿ ಇನ್ನೊಬ್ಬರ ದೈಹಿಕ ಸುಖದ ಸರಕಾಗುತ್ತಾಳೆ. ಮುಂಬೈ ನ ರೆಡ್ ಲೈಟ್ ಏರಿಯಾ (ಕಾಮಾಟಿಪುರಂ) ಹೆಣ್ಣು ಮಕ್ಕಳ ಪಾಲಿಗದು.
ರೌರವ ನರಕ ಇಡೀ ಜೀವ ಹಿಡಿದುಕೊಂಡು ಪರರ ಸುಖಕ್ಕಾಗಿ ಮನಸ್ಸು ಮತ್ತು ದೇಹಗಳ ನಡುವೆ ನಿತ್ಯವೂ ಹೋರಾಟ ನಡೆಸುತ್ತಿರುತ್ತಾಳೆ.ಏಕೆಂದರೆ ಪ್ರತಿಯೊಂದು ಹೆಣ್ಣಿಗೂ ಅವಳದೇ ಬದುಕಿನ ಕನಸಿರುತ್ತದೆ.ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಾಳೆ.ಆರ್ಥಿಕ ಬಿಕ್ಕಟ್ಟು, ಸಮಾಜದ ದೂಷಣೆ,ಬದುಕಿನ ಅಸಹಾಯಕತೆ ಎದುರಾದಾಗ ಆಕೆ ಯಾರದ್ದೋ ಸಹಾಯದ ಬಾಗಿಲಿಗೆ ಬಂದು ನಿಲ್ಲುತ್ತಾಳೆ.ಹಾಗಂತ ಅವಳಿಗೆ ನಿಸ್ವಾರ್ಥ ಮನಸ್ಸಿನಿಂದ, ಒಳ್ಳೆಯ ದೃಷ್ಟಿಯಿಂದ ಸಹಾಯ ಮಾಡೋ ಸಭ್ಯಸ್ಥ ಮಂದಿ ನಮ್ಮ ನಡುವೆ ಎಷ್ಟಿದ್ದಾರೆ.
ಒಬ್ಬ ಖ್ಯಾತ ಸೀರಿಯಲ್ ನಟಿಯವರು ಕಣ್ಣಾರೆ ಕಂಡ ಘಟನೆಯನ್ನು ಇಲ್ಲಿ ಪ್ರಸ್ತುತ ಪಡಿಸಲಿಚ್ಛಿಸುತ್ತೇನೆ.ಲಾಲ್ ಬಾಗ್ ಹತ್ತಿರ ಒಬ್ಬ ತಾಯಿ ತನ್ನ ಮಗುವಿಗೆ ಹಾಲು ಕುಡಿಸಲು ಹಣ ಅಂತ ಬೀದೀಲಿ ನಿಂತು ಬರುವವರ ಹತ್ತಿರ ಹಣ ಕೇಳ್ತಾಳೆ.ಯಾರು ಬಿಡಿಗಾಸು ಬಿಚ್ಛೋದಿಲ್ಲ.ಒಬ್ಬ ಬಂದು ನಿನಗೆ ಹಣ ಕೊಡ್ತೀನಿ ನನ್ನ ಜೊತೆ ಬಾ ಎಂದು ಕರೆದುಕೊಂಡು ಹೋಗುತ್ತಾನೆ.ತನ್ನಾಸೆಗಳನ್ನು ಪೂರೈಸಿಕೊಂಡು ಹಣ ಬಿಸಾಕಿ ಹೋಗುತ್ತಾನೆ.
ಹಾಗಾದರೆ ಇಲ್ಲಿ ಮಗುವಿನ ಹಸಿವಿನ ತಪ್ಪಾ? ಆ ತಾಯಿ ತೆಗೆದುಕೊಂಡ ನಿರ್ಧಾರದ ತಪ್ಪಾ? ಅಥವಾ ಆಕೆಯ ಅಸಾಹಯಕತೆಯನ್ನು ಬಳಸಿಕೊಂಡ ಆ ಆಗುತಂಕನ ತಪ್ಪಾ? ಎಲ್ಲಕ್ಕೂ ಮೌನವೋಂದೇ ಉತ್ತರ. ಈ ತರಹದ.ಸಣ್ಣ ಸಣ್ಣ ಘಟನೆಗಳಿಂದ ರೋಸಿ ಹೋದ ಹೆಣ್ಣು ಮಕ್ಕಳು ಮುಂದೆ ವೇಶ್ಯಾವಾಟಿಕೆಯನ್ನೇ ವೃತ್ತಿ ಮಾಡಿಕೊಳ್ಳುತ್ತಾರೆ. ಕಾಮಾಟಿಪುರಂನ ಗಲ್ಲಿ ಗಲ್ಲಿಗಳಲ್ಲಿ ಇಂತಹುದೇ ಅನೇಕ ಹೆಣ್ಣು ಮಕ್ಕಳು ಕಾಣ ಸಿಗುತ್ತಾರೆ.
ಇನ್ನೂ ವಿಪರ್ಯಾಸ ಎಂದರೆ ಅಂದರೆ ಎಷ್ಟೋ ದೇಶಗಳಲ್ಲಿ ಇದನ್ನು ಕಾನೂನು ಬದ್ದಗೊಳಿಸಲಾಗಿದೆ. ಇನ್ನು ಹಲವು ದೇಶಗಳಲ್ಲಿ ಅದೇ ಚಿಂತನೆಗಳು ನಡೆಯುತ್ತಿವೆ.ಭಾರತವೂ ಇದರಿಂದ ಹೊರತಾಗಿಲ್ಲ ಬಿಡಿ.ನಮ್ಮ ಸಮಾಜದ ದುರಂತ ನೋಡಿ ಸ್ತ್ರೀ ಕುಲಕ್ಕೆ ಮುಳುವಾಗಿರುವ ಈ ಶಾಪವನ್ನು ಹೊಡೆದೋಡಿಸಿ ಅವಳಿಗೂ ಒಂದು ಬದುಕು ಕಟ್ಟಿ ಕೊಡುವ ಅವಕಾಶವನ್ನು ನಾವ್ಯಾರು ಮಾಡುತ್ತಿಲ್ಲ.
ಬದಲಿಗೆ ಆಕೆಗೆ ಲೈಂಗಿಕ ಕಾರ್ಯಕರ್ತರು, ನಿತ್ಯ ಸುಮಂಗಲಿಯರು ಎಂಬ ಬಿರುದು ನೀಡಿ ಮಹಾ ಉಪಕಾರ ಮಾಡಿದ್ದೇವೆಂದು ಬೀಗುತ್ತಿದ್ದೇವೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು.
ವೇಶ್ಯಾವಾಟಿಕೆ ಭೂಮಿಯ ಮೇಲಿನ ಭೀಭತ್ಸ ನರಕ ಈ “ಕರಿ ಕತ್ತಲೆಯ ವ್ಯಾಪಾರದಲ್ಲಿ ವೇಶ್ಯೆ ಅಕ್ಷರಶಃ ಅಳುವ ಮಗು”
ಆಕೆಯ ನಿತ್ಯ ರೋಧನೆ ಕೇಳೋರು ಯಾರು?ತಾವು ಬಿಸಾಡುವ ಕಾಸಿಗೆ ಸೆರಗು ನೀಡುವ ಸರಕೆಂದೇ ಭಾವಿಸುವ ಆಕೆಯನ್ನು ಅನುಭವಿಸಿ ಹೋಗುವ ಮಂದಿಗೆ ಆಕೆಗೊಂದು ಸಾಂತ್ವನ ಹೇಳುವ ಸಮಯವಾದರೂ ಎಲ್ಲೀದ್ದೀತು!
ತೀಟೆ ತೀರಿದ ಬಳಿಕ..
ನೋಟು ಎಸೆದು
ಹೋಗುವ ಜನ ;
ತಿರುಗಿ ನೋಡಿದರೆ
ಅಸಹ್ಯ ಪಡುವ
ಅವರ ಮನ ;
ಆಮೇಲೆ ನಾನ್ಯಾರೊ,
ಅವರಾರೋ ;
ಅವರಿಗೋ..ತೀಟೆ ತೀರಿದರೆ ಸಾಕು ;
ನನಗೆ ಅದರಿಂದಲೇ ಬದುಕು;
ಕತ್ತಲೆಯಲಿ ಬೆತ್ತಲಾಗಿ
ಕಳೆದು ಹೋಗಿಹೆ ನಾನು ;
ಬೆತ್ತಲೆಯ ಮೈ ಹಿಂಡಿ,
ಸುಖಪಡುವವರಿಗೆ ತಿಳಿಯದು
ನನ್ನೊಳಗಿನ ನೋವು !
ಕಾಮರೂಪದಿ ಬರುವವರಲಿ
ರಾಮರೂಪವ ನೋಡಲಾದೀತೆ ?
ಸುಖ ಬಯಸಿ ಬರುವವರಲಿ
ನನ್ನ ನೋವ ಹೇಳಿಕೊಳ್ಳಲಾದೀತೆ(ರಚನೆ;ಕೃಷ್ಣ ಮೂರ್ತಿ)
ಈ ವೃತ್ತಿಯಲ್ಲಿ ತೊಡಗಿದ ಹೆಣ್ಣು ಮಗಳೊಬ್ಬಳು ಹೇಳಿದ ಒಂದು ಮಾತು ನಿಜಕ್ಕೂ ನನ್ನನ್ನು ತಲ್ಲಣಗೊಳಿಸಿತು.ಅನೀರಿಕ್ಷಿತವಾಗಿ ಈ ಪಾಪ ಕೂಪಕ್ಕೆ ನಾವು ಬಂದ್ವಿ ನಾವು ದೇಹವನ್ನು ಮಾತ್ರ ಕೊಡ್ತೀವಿ ನಮ್ಮ ಮನಸ್ಸನಲ್ಲ ಅದಿನ್ನೂ ಪರಿಶುದ್ಧವಾಗಿದೆ.ದೇಹ ಮಲಿನವಾಗಿದೆಯೇ ಹೊರತು ಮನಸ್ಸಲ್ಲ!
ನಮಗೂ ಮನಸಿದೆ ಅರಿತು ಕೈ ಹಿಡಿಯುವ ಮನುಷ್ಯ ಅದ್ಯಾರೇ ಆಗಿರಲಿ ತುಂಬು ಮನಸ್ಸಿನಿಂದ ಅವರನ್ನು ಸ್ವೀಕರಿಸಿ ಅವರಿಗೆ ಆದರ್ಶ ಸತಿಯಾಗಿ ಬದುಕುತ್ತೇನೆ.ನಮ್ಮನ್ನು ಕೀಳು ಭಾಷೆಯಿಂದ ನಿಂದಿಸುತ್ತಾರಲ್ಲ ನಮ್ಮ ಸೆರಗಿನಲ್ಲಿ ತಮ್ಮ ಕಾಮದ ಸುಖವನ್ನು ಪಡೆದುಕೊಂಡು ಹೋದವರನ್ನೇಕೇ ನೀವು ಕೀಳು ಭಾಷೆಯಿಂದ ನಿಂದಿಸುವುದಿಲ್ಲ ಎಂಬ ಪ್ರಶ್ನೆ ನನ್ನನ್ನು ಗದ್ಗಗದಿತಳನ್ನಾಗಿ ಮಾಡಿದ್ದಲ್ಲದೇ ಈ ಬರಹಕ್ಕೆ ಸ್ಪೂರ್ತಿಯನ್ನು ನೀಡಿತು. ಹಾಗೆ ಅವರ ಮೇಲೆ ಇದ್ದ ಮುಜುಗರದ ಭಾವವೊಂದು ಕರಗಿ ಗೌರವದ ಭಾವವು ಒಡಮೂಡಿತು.
ನಾನು ಈ ವೃತ್ತಿಯಲ್ಲಿ ತೊಡಗಿರುವವರಿಗೆ ಅಥವಾ ಮುಂದೆ ಅಸಹಾಯಕತೆಗೆ ಸಿಲುಕಿ ಈ ಪಾಪ ಕೂಪಕ್ಕೆ ಅನಿವಾರ್ಯವಾಗಿ ಬಿದ್ದರೆ ನೀವು ಚಿಂತಿಸಬೇಡಿ.ಅದೇ ಕಾಮಾಟಿಪುರಂನ ಬೀದಿಗಳಲ್ಲಿ ಬೆಳೆದ ಶ್ವೇತಾ ಕಟ್ಟಿ ಈಗ ನ್ಯೂಯಾರ್ಕ್ ವಿಶ್ವ ವಿದ್ಯಾಲಯದಲ್ಲಿ ಓದುತ್ತಿದ್ದಾಳೆ.ಆಕೆ ಏಕೆ ನಿಮಗೆ ಸ್ಪೂರ್ತಿಯಾಗಬಾರದು? ಅವಳು ನಿಮ್ಮ ಹಾಗೆ ಅನಿವಾರ್ಯ ಎಂದು ಕೂತಿದಿದ್ದರೆ ನ್ಯೂಯಾರ್ಕ್ ಇರಲಿ ಕಾಮಾಟಿಪುರಂ ಸಹ ದಾಟುತ್ತಿರಲಿಲ್ಲ.ಇವತ್ತಿನ ಕಾಲದಲ್ಲಿ ಅವಕಾಶಗಳಿಗೇನು ಕೊರತೆ ಇಲ್ಲ.
ನಿಮ್ಮ ಮನದ ಸಂಕೋಚದ ಸಂಕೋಲೆಗಳಿಂದ ಹೊರ ಬಂದರೆ ಬದುಕಿನ ಸಾವಿರ ಅವಕಾಶಗಳು ನಿಮ್ಮ ಪಾಲಿಗಿವೆ.ಯಾರದ್ದೋ ಕಾಮೋದ್ರೇಗ ತೀರಿಸಲು ನೀವೇಕೆ ಅನುಭೋಗದ ಸರಕಾಗುತ್ತೀರೀ?ನಿಮ್ಮತನವನ್ನೇ ಕಳೆದುಕೊಂಡು ನಿರ್ಭಾರ ಸ್ಥಿತಿಗೆ ತಲುಪಿ ಬದುಕುವುದು ನಿಮಗೆ ನೀವೇ ಮಾಡಿಕೊಳ್ಳುವ ಆತ್ಮವಂಚನೆ.
ಭಾರತದಂತಹ ದೇಶದಲ್ಲಿ ಪುರುಷ ಎಷ್ಟು ಜನರ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬಹುದು,ಮದುವೆ, ಮೋಸ ಎಲ್ಲವನ್ನೂ ಮಾಡಬಹುದು ಏಕೆಂದರೆ ಅವನು ಏನೇ ಮಾಡಿದರೂ ಸಭ್ಯಸ್ಥ ಆದರೆ ಅದನ್ನೇ ಸ್ತ್ರೀ ಮಾಡಿದರೆ ಅವಳಿಗೆ ನೂರೆಂಟು ಕಳಂಕ,ನಿಂದನೆಗಳು ಏಕೆಂದರೆ ನಮ್ಮ ದೇಶದಲ್ಲಿ ಮಡಿವಂತಿಕೆಯ ಗೆರೆ ಇರುವುದು ಕೇವಲ ಸ್ತ್ರೀಯರಿಗಷ್ಟೇ ಪುರುಷರಿಗಲ್ಲ.
ಜೀವನ ಪೂರ್ತಿ ಯಾರಿಗೋ ಸುಖ ಕೊಡಲಿಕ್ಕೆ ಜೈವಿಕ ಗೊಂಬೆಯಾಗಿ ನೀವಿರಬೇಕಾಗಿಲ್ಲ, ಬದುಕಿನಾಚೆಗೂ ಒಂದು ಬದುಕಿದೆ ಅದಕ್ಕಾಗಿ ಹಪಹಪಿಸಿ ಇಂತಹ ಪಾಪಕೂಪದಿಂದ ದಯವಿಟ್ಟು ಹೊರಬನ್ನಿ ಹೊಸದೊಂದು ಬದುಕು ಕಟ್ಟಿಕೊಳ್ಳಿ.ಎದೆಯಲ್ಲಿ ಆತ್ಮವಿಶ್ವಾಸ, ನ್ಯಾಯವಾಗಿ ದುಡಿದು ತಿನ್ನೋ ಹಠ ಇದ್ರೆ ಏನು ಬೇಕಾದರೂ ಸಂಪಾದಿಸಬಹುದು.
“ವೇಶ್ಯಾವಾಟಿಕೆಗೆ ಬೀಳುವುದು ಶಾಪವಲ್ಲ ಅದರಿಂದ
ಹೊರಬರದೇ ಇರುವುದು ನಿಜವಾದ ಶಾಪ.”
(ಮೈತ್ರಾವತಿ ವಿ. ಐರಣಿ,ಲೇಖಕಿ.
ಚಿಕ್ಕಬೂದಿಹಾಳು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾಮಿನಿ
ಲಾಸ್ಟ್ ಸ್ಟಾಪ್ ಬಸ್ನಲ್ಲಿ ಸಿಕ್ಕ AGE@73..!
- ಆಕಾಶಪ್ರಿಯ
ಬಸ್ಸಿನಲ್ಲಿ ಸಿಕ್ಕವರು, ನನ್ನೀ ಬದುಕಿನ ಮಹಾಕಾವ್ಯಕ್ಕೊಂದು ಪುಟವಾದವರು, ಸ್ಮೃತಿಪಟಲಕ್ಕೊಂದು ಅಚ್ಚಳಿಯದ ನೆನಪಾದವರು ನೂರಾರು ಜೀವಗಳು. ನನ್ನದಲ್ಲದ ಊರಿನ, ನನ್ನವರಲ್ಲದ ಜನರ ನಡುವೆಯೂ ನನ್ನವರೆನಿಸಿದವರೂ, ಒಂದೊಮ್ಮೆ ಪಯಣದಲ್ಲಿ ಜೊತೆಯಾದವರು ಮನದೊಳಗೆ ಜೀವಂತವಾಗಿ ಬರಹಕ್ಕೆ ಅಕ್ಷರವಾಗಿದ್ದಾರೆ. ಅನುಭವದ ವಿಸ್ತರಣೆಗೆ ಕಾರಣರಾಗಿದ್ದಾರೆ. ಆಗಾಗ ಕಾಡಿದ್ದಾರೆ, ಅಪರೂಪಕ್ಕೆ ಕೆಲವರು ಸಂತಸದ ಕಣ್ಣಿನ ಹನಿಗಳಾಗಿದ್ದಾರೆ. ಹಲವರು ನಗುವಿನ ರುವಾರಿಗಳಾಗಿದ್ದಾರೆ. ಮತ್ತೆ ಕೆಲವರು ನನ್ನನ್ನೇ ಮೌನಿಯಾಗಿಸಿದ್ದಾರೆ. ಕೆಲವರಂತೂ ಮರೆತಷ್ಟೂ ನೆನಪಾಗಿದ್ದಾರೆ. ಅಂತದೇ ಆತ್ಮೀಯರಲ್ಲದ ಆತ್ಮೀಯರ ಜೊತೆಗಿನ ಒಂದು ಪಯಣದ ಕಥೆ ಈ ” ಲಾಸ್ಟ್ ಸ್ಟಾಪ್ ಬಸ್ನಲ್ಲಿ ಸಿಕ್ಕ AGE@73”
ನಾನು ನನ್ನ ಗೆಳತಿ ಸರ್ಕಾರಿ ಬಸ್ನಲ್ಲಿ ಎಲ್ಲಿಯೋ ಹೊರಟ್ಟಿದ್ದೆವು. ನಾವು ಇಳಿಯಬೇಕಾದ್ದು ಲಾಸ್ಟ್ ಸ್ಟಾಪ್ ಆಗಿದ್ದ ಕಾರಣ, ಬಸ್ನಲ್ಲಿ ಸೀಟ್ ಸಿಕ್ಕ ತಕ್ಷಣ ಖುಷಿಯಿಂದ ಕುತ್ಕೊಂಡೆವು. ನಂತರ ನೆಕ್ಸ್ಟ್ ಸ್ಟಾಪ್ನಲ್ಲಿ ಒಬ್ರು ಅಂಕಲ್ ಹತ್ತಿದ್ರು. ಸೀದಾ ನಮ್ಮ ಸೀಟ್ ಹತ್ರ ಬಂದು ಇದು ಸೀನಿಯರ್ ಸಿಟಿಜನ್ ಸೀಟ್ ಏಳಿ ಮೇಲೆ ಅಂತ ಆರ್ಡರ್ ಮಾಡಿದ್ರು.
ಸರಿ ಅಂತ ಪಕ್ಕದಲ್ಲಿ ಕೂತಿದ್ದ ಫ್ರೆಂಡ್ ಸೀಟ್ ಬಿಟ್ಟು ನಿಂತ್ಕೊಂಡ್ರು. ಆ ಅಂಕಲ್ಗೆ ಮನಸ್ಸಲ್ಲೇ ಇಬ್ರೂ ಬೈಕೊಂಡಿದ್ದೇನು ಸುಳ್ಳಲ್ಲ. ಯಾಕಂದ್ರೆ ಜೊತೆಗೆ ಮಾತಾಡ್ತಾ ಆರಾಮಾಗಿ ಹೋಗ್ತಿದ್ವು, ಇವ್ರು ಬಂದು ಎದ್ದೇಳಿಸಿದ್ರಲ್ಲ ಅಂತ ಸ್ವಲ್ಪ ಕೋಪ ಬೇಜಾರು ಎರಡು ಒಟ್ಟೊಟ್ಟಿಗೆ ಬಂತು. ಸಾಮಾನ್ಯವಾಗಿ ಬಸ್ ಫ್ರೆಂಟ್ ಅಲ್ಲಿ ಮಹಿಳೆಯರಿಗೆ ಹಿಂಬದಿ ಗಂಡಸರಿಗೆ ಸೀಟ್ಸ್ ಇರತ್ತೆ, ಬಟ್ ಇವ್ರು ಯಾಕೆ ಫ್ರೆಂಟ್ ಸೀಟ್ ಗೆ ಬಂದು ಸೀಟ್ ಬಿಡುಸ್ಕೊಂಡ್ರು….. ಘಾಟಿ ಮನುಷ್ಯ ಅನಿಸುತ್ತೆ!, ವಾದ ಬೇಡ ಅಂತ ಸುಮ್ಮನಾದ್ವಿ.
ಬಸ್ ಸ್ವಲ್ಪ ದೂರ ಕ್ರಮಿಸಿತ್ತು. ಒಬ್ಳೆ ಸುಮ್ನೆ ಕೂರೋಕೆ ಬೇಜಾರು, ಸೋ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಹಾಡು ಕೇಳ್ತಿದ್ದೆ. ಬಸ್ ಮುಂದೆ ಸಾಗ್ತಿತ್ತು, ನಿಧಾನವಾಗಿ ಅಂಕಲ್ ಮಾತು ಶುರುಮಾಡಿದ್ರು. ಇದು ಸೀನಿಯರ್ ಸಿಟಿಜನ್ ಸೀಟ್, ಯಾರು ಇಲ್ಲ ಅಂದ್ರೆ ಕುತ್ಕೋಳಿ… ಆದ್ರೆ ಯಾರಾದ್ರೂ ಸೀನಿಯರ್ ಸಿಟಿಜನ್ ಬಂದ್ರೆ ಅವ್ರಿಗೆ ಸೀಟ್ ಬಿಟ್ಕೊಡ್ಬೇಕು. ಬಸ್ನವ್ರು ಕೂಡ ಸರಿಯಾಗಿ ಬೋರ್ಡ್ ಹಾಕಿಲ್ಲ ರೂಲ್ಸ್ ಫಾಲೋ ಮಾಡಲ್ಲ, ರೂಲ್ಸ್ಬ್ರೇಕ್ ಮಾಡಿದ್ರೆ 5 ಸಾವಿರ ದಂಡ ಬೀಳುತ್ತೆ ಗೊತ್ತಾ ಅಂತ ಹೇಳುದ್ರು. ನಾನು ಹೂ ಗುಡುತ್ತಿದ್ದೆ. ಯಾಕೋ ಅವ್ರು ಮಾತಾಡುವಾಗ ನಾನು ಇಯರ್ ಫೋನ್ ಹಾಕೋಳೋದು ಸಭ್ಯತೆ ಅಲ್ಲ ಅಂತ ನನ್ ಮನ್ಸು ನನ್ನೇ ಗುರಾಯುಸ್ತು. ಇಯರ್ ಫೋನ್ ತೆಗ್ದೆ. ನಾನು ಅಂಕಲ್ ಜೊತೆ ಮಾತಿಗಿಳಿದೆ.
ನನ್ ಬಗ್ಗೆ ಕೇಳಿದ್ರು ಹೇಳ್ದೆ. ಆಮೇಲೆ ಅವ್ರು ಮಾತಡಿದ್ರು. ಅದ್ಯಾಕೋ ಹಿರಿಜೀವಗಳು ಮನಸ್ಸಿಗೆ ತುಂಬಾ ಹತ್ರ ಆಗ್ತಾರೆ ನಂಗೆ. ಹಿರಿಯರು ಮಾತಾಡುವಾಗ ಮನಸ್ಸಿಟ್ಟು ಕೇಳ್ಬೇಕು ಅನಿಸುತ್ತೆ. ನಿಮಗೆ ಗೊತ್ತಾ ಅವ್ರು ಅಂಕಲ್ ಅಂತ ಹೇಳ್ದೆ ಅಲ್ವಾ ಆಕ್ಚುಲಿ ಅವರ ವಯಸ್ಸು 73 ! ಹೆಸರು ಸೂರ್ಯನಾರಾಯಣ. ಎಕ್ಸ್ ಗವರ್ನಮೆಂಟ್ ಎಂಪ್ಲೋಯ್ . ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್ ನಲ್ಲಿ ಸೇವೆ ಸಲ್ಲಿಸಿ ಈಗ ರಿಟೇರ್ಡ್ ಆಗಿದ್ದೀನಿ ಬೇಟಾ ಅಂದ್ರು. ನಾನು ಹೋ ಹೌದ ಅಂದೆ.
ನಂತ್ರ ಅವ್ರೇ ಮಾತು ಮುಂದುವರೆಸಿ ನಂಗೆ ಲಾಯರ್ ಆಗ್ಬೇಕು ಅಂತ ತುಂಬಾ ಆಸೆ ಇತ್ತು ಬೇಟಾ ನಾನು ಓದೋ ಟೈಮ್ನಲ್ಲಿ ಎಲ್ಲರ ಹತ್ರ ಹೇಳ್ಕೊಂಡು ಬರ್ತಿದೆ ನಾನ್ ಲಾಯರ್ ಆಗ್ತೀನಿ ಅಂತ …..ಹಾಗ್ ಹೇಳುವಾಗ ಅವ್ರ ಮುಖದಲ್ಲಿ ಆ ಹುಮ್ಮಸ್ಸು ನೋಡ್ಬೇಕಿತ್ತು ಒಂದು ಕ್ಷಣ ಸ್ಕೂಲ್ ಡೇಸ್ ಹಾಗೇ ಅವ್ರ ಕಣ್ಮುಂದೆ ಬಂತು ಅನಿಸುತ್ತೆ..ನಾನು ಕೇಳ್ದೇ ಯಾಕೆ ವಕೀಲರೇ ಆಗ್ಬೇಕು ಅನ್ಕೊಂಡ್ರಿ ಅಂತ.. ಅದುಕ್ಕೆ ಅವ್ರು ನನಗೆ ಅನ್ಯಾಯ ಸಹಿಸೋಕಾಗಲ್ಲ, ನಾನು ಲಾಯರ್ ಆಗಿ ನ್ಯಾಯ ಕೊಡುಸ್ಬೇಕು ಅನ್ನೋದೆ ನನ್ನ ಗುರಿಯಾಗಿತ್ತು ಅದ್ಕೆ ಅಂದ್ರು. ಆಮೇಲೆ ಏನ್ ಮಾಡೋದು ಬೇಟಾ ಅನ್ಕೋಳೋದೆ ಒಂದು ಆಗೋದೆ ಇನ್ನೊಂದು ಅಂದ್ರು. ನಾನು ಹೌದು ಅದಂತೂ ನಿಜ ಬಿಡಿ ಅಂದೆ.
ನಾನು ಈ ಮುತ್ತಿನ ನಗರಿಗೆ ಕಾಲಿಟ್ಟು 50 ವರ್ಷ ಕಳೆದಿದೆ. ನಾನ್ ಇಲ್ಲಿಗೆ ಬಂದಾಗ ಲಕ್ಷದಷ್ಟಿದ್ದ ಜನಸಂಖ್ಯೆ ಈಗ ನೋಡು ಕೋಟಿ ದಾಟಿದೆ ಅಂದ್ರು …. ಎಲ್ಲೇ ಹೋದ್ರು ಟ್ರಾಫಿಕ್ ಕಿರಿಕಿರಿ ಕಷ್ಟ ಬೇಟಾ ಅಂದ್ರು. ಈಗ ಗರ್ವನ್ಮೆಂಟ್ ಜಾಬ್ ತಗೋಳೋದು ನಮ್ಮ ಕಾಲದಷ್ಟು ಸುಲಭವಲ್ಲ ಅಂದ್ರು. ಹೌದು ಅಂಕಲ್ ಜನಸಂಖ್ಯೆ ಜಾಸ್ತಿಯಾಗಿ, ಕಾಂಪಿಟೇಶನ್ ಜಾಸ್ತಿ ಆಗಿದೆ ಏನ್ ಮಾಡೋಕಾಗಲ್ಲ ಅಂದೆ.
ಹೀಗೆ ಮಾತು ಮುಂದುವರಿತಾ ಫ್ಯಾಮಿಲಿ ಬಗ್ಗೆ ಕೇಳಿದ್ರು. ಹೇಳ್ದೆ. ತಕ್ಷಣ ಆ ಅಂಕಲ್ ನಂಗೆ ಅಪ್ಪ ಅಮ್ಮ ಇಬ್ರೂ ಇಲ್ಲ ಬೇಟಾ.. ನಂಗೆ 14 ನೇ ವಯಸ್ಸಿದ್ದಾಗಲೇ ತಂದೆ ತೀರ್ಕೊಂಡ್ರು, ಆಮೇಲೆ 36 ನೇ ವಯಸ್ಸಲ್ಲಿ ತಾಯಿ ತೀರ್ಕೊಂಡ್ರು. ಈಗಲೂ ಅಮ್ಮ ನೆನೆದಾಗೆಲ್ಲಾ ಕಣ್ಣಲ್ಲಿ ನೀರ್ ಬರುತ್ತೆ ಬೇಟಾ ಅಂದಾಗ ಅವ್ರ ಕಣ್ಣಾಲಿ ಒದ್ದೆಯಾಗಿತ್ತು. ಯಾವತ್ತೂ ತಂದೆ-ತಾಯಿನಾ ನೋಯಿಸಬಾರದು ಬೇಟಾ ನಮಗೋಸ್ಕರ ಅವ್ರು ಎಷ್ಟೆಲ್ಲಾ ಕಷ್ಟ ಪಡ್ತಾರೆ ಗೊತ್ತಾ ಅಂದ್ರು. ನಾನು ಹೂ ಅಂಕಲ್ ಅಂದೆ.
ನನ್ ಹೆಂಡ್ತಿ ಕೂಡ 56 ವರ್ಷ ಇರುವಾಗ ನನ್ನ ಒಂಟಿ ಮಾಡಿ ಮಧ್ಯರಾತ್ರಿನೇ ಬಿಟ್ಟು ಹೊರಟೋದ್ಲು. ಅವಳಿರ್ಬೇಕಿತ್ತು ಬೇಟಾ. ಅಪ್ಪ -ಅಮ್ಮ ದೇವ್ರಗಿಂತ ಮಿಗಿಲು. ಅವ್ರನ್ನ ಬಿಟ್ರೆ ಹೆಂಡ್ತಿನೇ ಗ್ರೇಟ್. ಗಂಡ ,ಮನೆ, ಮಕ್ಳು ಸಂಸಾರ ಎಲ್ಲಾ ನೋಡ್ಕೋತಾಳೆ . ಅವಳ ತರ ನಾವ್ ಕೆಲ್ಸ್ ಮಾಡೋಕಾಗಲ್ಲ, ಪ್ರತಿದಿನ ಅವಳ ನೆನಪು ಬರುತ್ತೆ ಬೇಟಾ ಅವ್ಳು ಮಧ್ಯರಾತ್ರಿ 12 : 30 ಗೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಲು ಅಂತ ಅತ್ರು. ಈ ಇಳಿವಯಸ್ಸಲ್ಲೂ ಜೊತೆಗೆ ಬದುಕಿ ಅಗಲಿದ ಜೀವ ನೆನೆದು ಅವ್ರು ಕಣ್ಣೀರಿಟ್ಟಾಗ ಏನ್ ಹೇಳ್ಬೇಕು ಅಂತಾನೇ ಗೊತ್ತಾಗಲಿಲ್ಲ ನಂಗೆ.
ನಾನು ಮಕ್ಳು ಬಗ್ಗೆ ಕೇಳ್ದೆ ಇಬ್ರು ಮಕ್ಳು ಒಬ್ಲು ಮಗಳು , ಒಬ್ಬ ಮಗ. ಮದುವೆ ಆಗಿದೆ ನಾನು ಮಗನ ಮನೇಲಿ ಇದ್ದೀನಿ ಅಂದ್ರು. ಆದ್ರೆ ರೀಸೆಂಟ್ ಆಗಿ ಅಳಿಯ ಕೂಡ ತೀರ್ಕೊಬಿಟ್ಟಾ ಅಂದ್ರು. ಹೌದಾ ಏನಾಗಿತ್ತು ಅಂದೆ ನಿಂಗೆ ಹೇಳ್ಬಾರ್ದು ಆದ್ರೂ ಹೇಳ್ತೀನಿ ಬೇಟಾ… ಅವ್ನು ಐಟಿ ಉದ್ಯೋಗಿ ಆದ್ರೂ ದಿನಾ ಕುಡಿತಾ ಇದ್ದ. ಲಿವರ್ ಡ್ಯಾಮೇಜ್ ಆಗಿತ್ತು. 2 ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ರೀಟ್ಮೆಂಟ್ ಕೊಡುಸ್ತೆ ಡಾಕ್ಟರ್ ಇನ್ನೊಂದು ಆಪರೇಶನ್ ಆಗ್ಬೇಕು ಅಂದ್ರು 40 ಲಕ್ಷ ಖರ್ಚಾಗುತ್ತೆ ಅಂದ್ರು. ನನ್ ಪೆನ್ಷನ್ ದುಡ್ಡು ಅದು ಇದು ಎಲ್ಲಾ ಸೇರಿ ಆಪರೇಶನ್ ಮಾಡಿಸೋಕೆ ರೆಡಿ ಮಾಡ್ಕೋತ್ತಿದ್ದೊ.
ಆದ್ರೆ ಅಷ್ಟರಲ್ಲಿ ಅವನು ಸತ್ತು ಹೋದ ಅಂತ ಬೇಜಾರಲ್ಲಿ ಹೇಳಿದ್ರು.. ನನ್ ಮಗಳು ನೋಡಿದ್ರೆ, ಮೊಮ್ಮಕ್ಕಳನ್ನು ನೋಡಿದ್ರೆ ಪಾಪ ಅನಿಸುತ್ತೆ ಬೇಟಾ, ನಾವೆಷ್ಟೇ ಪ್ರೀತಿ ತೋರಿಸಿದ್ರೂ ಮಗಳಿಗೆ ಗಂಡನ ಪ್ರೀತಿ ಕೊಟ್ಟಂಗೆ ಆಗುತ್ತಾ, ಮಕ್ಕಳಿಗೆ ತಂದೆಯ ಪ್ರೀತಿ ತುಂಬೋಕಾಗಲ್ಲ, ನೆನೆಸ್ಕೊಂಡ್ರೆ ತುಂಬಾ ಬೇಜಾರಾಗುತ್ತೆ ಬೇಟಾ ಅಂದ್ರು. ಯಾರೂ ಇಂಥ ಕೆಲ್ಸ ಮಾಡ್ಬಾರ್ದು, ಕುಡಿಬಾರದು,ಹೆಂಡ್ತಿ ಮಕ್ಕಳ ಬಗ್ಗೆ ಯೋಚ್ನೆ ಮಾಡ್ಬೇಕು ಅಂತ ಅವ್ರು ಹೇಳುವಾಗ ನಿಜ ಅದ್ರಿಂದ ಅವ್ರ ಮಗಳು, ಫ್ಯಾಮಿಲಿ ಅದೆಷ್ಟು ನೋವು ಅನುಭವಿಸ್ತಿದ್ದಾರೆ ಅನ್ನೋದು ಅವ್ರ ಮಾತುಗಳಲ್ಲೇ ಗೊತ್ತಾಗ್ತಿತ್ತು.
ಇನ್ನು ಮಗ ಖಾಸಗಿ ಕಂಪೆನಿ ಉದ್ಯೋಗಿ, ಬ್ಯುಸಿ, ಇನ್ನು ಮೊಮ್ಮಕ್ಕಳು ಸ್ಕೂಲು, ಕಾಲೇಜು… ನಂಗೆ ರಿಟೇರ್ಡ್ ಆಗಿದೆ ನೋಡು ನಾನು ಫ್ರೀ….ನಾನೋ ದಿನಕ್ಕೆ 12 ನ್ಯೂಸ್ ಪೇಪರ್ ಒದ್ತೀನಿ, ಬುಕ್ಸ್ ಒದ್ತೀನಿ, ಅದ್ರಲ್ಲೇ ಇಡೀ ದಿನ ಕಳೀತೀನಿ, ತಿಂಗಳಿಗೆ 2000 ದಷ್ಟು ಬರೀ ಪೇಪರ್,ಬುಕ್ ಬಿಲ್ಲೇ ಆಗುತ್ತೆ, ನ್ಯೂಸ್ ಪೇಪರ್ ಓದದೇ ಹೋದ್ರೆ ನಂಗ್ ಸಮಾಧಾನನೇ ಆಗಲ್ಲ ಬೇಟಾ ಅಂದ್ರು.
ಅದ್ಕೆ ನಾನು ಎಷ್ಟೇ ಆದ್ರೂ ಲಾಯರ್ ಆಗಬೇಕು ಅನ್ಕೋಂಡಿದ್ದೋರಲ್ವೆ ನೀವು ಅಂತ ಛೇಡಿಸಿದೆ, ಅವ್ರೂ ನಕ್ಕು. ಹೌದು ಬೇಟಾ ನಾನ್ ಲಾಯರ್ ಆಗ್ಬೇಕಿತ್ತು. ಆಗಿದ್ದಿದ್ರೆ ಈಗ ಹೈಕೋರ್ಟ್ ಅಲ್ಲಿ ಇರ್ತಾ ಇದ್ದೆ ಅಂತ ಮನಸಾರೆ ನಕ್ರು. ಓದ್ಬೇಕು ಬೇಟಾ , ಪ್ರಪಂಚದ ಆಗು-ಹೋಗುಗಳನ್ನು ತಿಳ್ಕೋಬೇಕು, ಓದಿಲ್ಲಾ ಅಂದ್ರೆ ಪ್ರಾಣಿಗಳ ತರ ಆಗಿಬಿಡ್ತೀವಿ ಅವಕ್ಕೂ ನಮಗೂ ಏನೂ ವ್ಯತ್ಯಾಸ ಇರಲ್ಲ ಅಂದ್ರು ತೆಲುಗು,ಇಂಗ್ಲಿಷ್,ಹಿಂದಿಯನ್ನು ನಿರರ್ಗಳವಾಗಿ ಮಾತಾಡಬಲ್ಲ ಅವ್ರು 73 ರ ಹರೆಯದ ತಾತ ಅಲ್ಲ ಅಂಕಲ್!
ಇನ್ನು ನಿಮ್ಮ ಜೊತೆ ಹುಟ್ಟಿದವ್ರು ಯಾರಿಲ್ವಾ ಅಂತ ಕೇಳ್ದೆ. ಒಮ್ಮೆಲೆ ಅವರ ಮುಖ ಅರಳಿತು . ನಾವ್ 9 ಜನ ಮಕ್ಕಳು, ಎಲ್ರೂ ಇದ್ದೀವಿ. ಆಂಧ್ರ, ವಿಜಯವಾಡ, ಸಿಂಗಾಪುರ್, ಹೀಗೆ ಎಲ್ರೂ ಒಂದೊಂದು ಕಡೆ ಇದ್ದೀವಿ, ವರ್ಷಕ್ಕೆ ಒಂದು ಸಲ ತಂದೆ-ತಾಯಿ ಕಾರ್ಯ ಮಾಡುವಾಗ ಎಲ್ರೂ ಒಂದುಕಡೆ ಸೇರ್ತೀವಿ ಅಂದ್ರು.
ಇಷ್ಟೆಲ್ಲಾ ಮಾತಾಡೋ ಅಷ್ಟರಲ್ಲಿ ಅವ್ರು ಇಳಿಯುವ ಸ್ಟಾಪ್ ಬಂತು. ಹೋಗುವಾಗ ಬೈ ಬೇಟಾ ಖುಷ್ ರಹೋ, ದಿನ ಮಾತಾಡೋಕೆ ಯಾರೂ ಸಿಗಲ್ಲ, ಹೀಗೆ ಯಾರಾದ್ರೂ ಸಿಕ್ಕಿದ್ರೆ ಜರ್ನಿ ಮಾಡಿದ್ದೇ ಗೊತ್ತಾಗಲ್ಲ, ಒಬ್ರೆ ಇದ್ರಂತೂ ಇನ್ನೂ ಸ್ಟಾಪ್ ಬಂದಿಲ್ವಾ ಅನಸುತ್ತೆ. ಈಗ ನೋಡು ನಾವಿಬ್ರೂ ಮಾತಾಡ್ಕೊಂಡು ಬಂದಿದ್ಕೆ ಸ್ಟಾಪ್ ಬಂದಿದ್ದೆ ಗೊತ್ತಾಗಿಲ್ಲ ಅಂತ ನಕ್ರು. ಆಗ ನಾನು, ಬಸ್ ಹತ್ತುವಾಗ ಸಿಟ್ಟು ಮಾಡ್ಕೊಂಡು, ವಾದ ಮಾಡಿ ನಮ್ ಜೊತೆ ಸೀಟ್ ಬಿಡುಸ್ಕೊಂಡು ಕೂತ ಅದೇ ಸೂರ್ಯನಾರಾಯಣ್ ಅಂಕಲ್ ಬಸ್ ಇಳಿವಾಗ ಖುಷಿ-ಖುಷಿಯಾಗಿ ಇಳಿದಿದ್ದು ಕಂಡು ಒಂದು ಕ್ಷಣ ಖುಷಿಯಿಂದ ಮೌನಿಯಾದೆ.
ಆಗ ಅನಿಸಿದ್ದು, ಒಬ್ಬ ವ್ಯಕ್ತಿ ಅವನ ವ್ಯಕ್ತಿತ್ವನಾ ಒಂದೇ ಸಲ ಅಳೆಯೋಕೆ ಆಗಲ್ಲ. ಬರೀ ಯಾವುದೋ ಒಂದು ಘಟನೆಯಿಂದ ಒಂದು ಮಾತಿಂದ ಅವರು ಸರಿ ಇಲ್ಲ, ಹಾಗೇ ಹೀಗೆ ಅಂತ ಯಾವತ್ತೂ ಜಡ್ಜ್ ಮಾಡ್ಬಾರ್ದು, ಪ್ರತಿಯೊಬ್ಬರು ಮನಸ್ಸಲ್ಲೂ ಅವ್ರದೇ ಆದ ನೋವಿರುತ್ತೆ. ಮನದಾಳದ ಮಾತುಗಳನ್ನು ಕೇಳೋ ಯಾವುದೋ ಒಂದು ಜೀವನಾ ಆ ಕಂಗಳು ಹುಡುಕ್ತಿರುತ್ತೆ. ಒಂದು ವೇಳೆ ನಿಮಗೆ ಯಾವುದಾದರೂ ಹಿರಿಜೀವದ ಜೀವನದ ಅನುಭವನಾ, ಅಥವಾ ಅವ್ರ ನೋವನ್ನ ಕೇಳಿಸಿಕೊಳ್ಳೋ ಅವಕಾಶ ಸಿಕ್ರೆ ಅದಕ್ಕೆ ನೀವೂ ಕಿವಿಯಾಗಿ . ಯಾಕಂದ್ರೆ 73 ವರ್ಷಗಳ ತುಂಬು ಜೀವನ ನಡೆಸಿರೋರು ಅವ್ರಷ್ಟು ವಯಸ್ಸಿನವರೆಗೂ ಖಂಡಿತ ನಾವು ಬದ್ಕೋಕ್ಕಾಗಲ್ಲ, ಹಂಗಿದೆ ನಮ್ ಜೀವಿತಾವಧಿ ದರ , ಅಂತದ್ದರಲ್ಲಿ ಇಂತವರ ಅನುಭವಗಳೆ ನಮಗೆ ಮಾರ್ಗದರ್ಶನ ಆಗ್ಬೋದು, ಸ್ಫೂರ್ತಿ ಆಗಬಹುದು.
ಅಂದಹಾಗೇ ಅಂಕಲ್ ಒಟ್ಟಿಗಿನ ಇಷ್ಟೂ ಸಂಭಾಷಣೆ ನಡೆದಿದ್ದು, ಹಿಂದಿಯಲ್ಲಿ. ಆ ಭಾಷೇನೆ ನನಗೆ ಒಂದು ವಿಭಿನ್ನ ವ್ಯಕ್ತಿತ್ವದ ಪರಿಚಯ ಆಗೋಕೆ, ಬದುಕಿನ ಒಂದು ಅವಿಸ್ಮರಣೀಯ ಅನುಭವ ಆಗೋಕೆ ಕಾರಣ ಆಗಿದ್ದು, ನನ್ನ ನೆನಪಿನ ಬುತ್ತಿಗೊಂದು ಹೊಸ ವ್ಯಕ್ತಿಯ ಸೇರ್ಪಡೆಯಾಗುವಂತೆ ಮಾಡಿದ್ದು. ಒಂದು ವೇಳೆ ಯಾವುದೋ ಒಂದೇ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಬೇರೆ ಭಾಷೆಗಳನ್ನ ತಿರಸ್ಕಾರ ಮಾಡಿದ್ರೆ ಬಹುಶಃ ಬದುಕಲ್ಲಿ ಏನನ್ನೋ ಮಿಸ್ ಮಾಡ್ಕೋತ್ತಿವಿ ಅನಿಸುತ್ತೆ. ಹಾಗಾಗಿ ನಂಗೆ ಯಾವುದೇ ಬೇರೆ ಭಾಷೆ ಕಲಿಕೆ ಬಗ್ಗೆ ಎಂದಿಗೂ ತಕರಾರಿಲ್ಲ. ಸೋ ಯಾರ ಮುಲಾಜಿಲ್ಲದೇ ಹೇಳ್ತೀನಿ, ಇಂಗ್ಲಿಷ್, ಹಿಂದಿಯನ್ನೂ ಸಮಾನಾಗಿ ಪ್ರೀತಿಸುವ, ಗೌರವಿಸುವ ನಾನೊಬ್ಬಳು ಅಪ್ಪಟ ಕನ್ನಡತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾಮಿನಿ
ನಾನ್ವೆಜ್ ಹುಡ್ಗಿ, ಪುಲ್ಚರ್ ಹುಡ್ಗ..!
- ಆಕಾಶ ಪ್ರಿಯ
ಎಲ್ಲ ಹುಡುಗ್ರು ತಮ್ ಹುಡ್ಗಿನ ಅಟ್ರಾಕ್ಟ್ ಮಾಡೋಕೆ ತಾಜ್ಮಹಲ್ ಕಟ್ತೀನಿ, ಚಂದ್ರನ ತಂದುಕೊಡ್ತೀನಿ ಅಂತ ಹೇಳಿದ್ರೆ ನೀನು Like poles repels opposite poles attract ಅಂತ sciene law ಹೇಳಿ ನಿನ್ ಜೊತೆ ಲವ್ ಅಲಿ ಬೀಳೋತರ ಮಾಡ್ದೆ. ಹೀಗೂ ಲವ್ ಪ್ರಪೋಸ್ ಮಾಡ್ತಾರೆ ಅಂತ ನಂಗ್ ಗೊತ್ತೇ ಇರ್ಲಿಲ್ಲ. ಹಾಗ್ ನೋಡಿದ್ರೆ ನಮ್ಮಿಬ್ಬರ ಮಧ್ಯೆ ಭೂಮಿ ಆಕಾಶಕ್ಕಿರೊ ಅಷ್ಟು ಅಂತರ.
ಏನೂ ಮ್ಯಾಚ್ ಆಗಲ್ಲ, ‘ಟೀ’ ಇಂದ ದಿನ ಸ್ಟ್ರಾಟ್ ಮಾಡೋ ನಾನು ‘ಕಾಫಿ’ನೇ ಬೇಕು ಅನ್ನೋ ನೀನು, ಪುಳಿಯೋಗರೆ ಪ್ರೇಮಿ ನಾನು, ಪುಳಿಯೋಗರೆ ಹೆಸ್ರು ಕೇಳಿದ್ರೆ ಊಟನೆ ಬಿಡೋ ಆಸಾಮಿ ನೀನು. ನಾನ್ವೆಜ್ ಹುಡ್ಗಿ ನಾನು; ಪುಲ್ಚರ್ ಹುಡ್ಗ ನೀನು. ನಾನ್ ಸ್ಟಾಪ್ ಮಾತಾಡೋ ಹುಡುಗಿ ನಾನು, 10 ಮಾತಾಡಿದ್ರೆ ಒಂದು ಮಾತಾಡೋ silent ಹುಡ್ಗ ನೀನು. ಅಪ್ಪಟ ಕನ್ನಡದ ಹುಡುಗಿ ನಾನು, ಸ್ವಲ್ಪ ಜಾಸ್ತಿ ಕನ್ನಡ ಮಾತಾಡಿದ್ರೆ ನಂಗ್ ಕನ್ನಡ ಅಷ್ಟೊಂದ್ ಬರಲ್ಲ, ಅದೇನು ಅಂತ ಕೇಳೋ ನೀನೂ ಕನ್ನಡದ ಹುಡುಗಾನೆ ಅನ್ನೋ ಖುಷಿ ನಂಗೆ.
ನಮ್ಮಿಬ್ಬರು ಮಧ್ಯೆ ಕಾಫಿ ಟೀನೇ ಮ್ಯಾಚ್ ಆಗಲ್ಲ ಇನ್ನು ಜೀವನ ಮ್ಯಾಚ್ ಆಗುತ್ತಾ ಅಂದಾಗ ಕಾಫಿ ನೀವ್ ಮಾಡ್ಕೊಡಿ ನಿಮ್ಗೆ ಟೀ ನಾನ್ ಮಾಡ್ಕೊಡ್ತೀನಿ ಅಂತ ಸಿಂಪಲ್ ಸಜೇಶನ್ ಕೊಟ್ಟ ಹುಡ್ಗ, ಇವತ್ತು ನಂಜೊತೆ 7 ಹೆಜ್ಜೆ ಇಟ್ಟು ನನ್ ಸಂಗಾತಿ ಆಗಿದಿಯ ಅಂದ್ರೆ ಇದಕ್ಕಿಂತ ಬೇರೆ ಖುಷಿ ಏನಿದೆ ಹೇಳು. ಮನಸ್ಸಿಗೂ ಬದುಕಿಗೂ ನೀನೊಬ್ಬನೇ ಜೊತೆಗಾರ.
ನೀನ್ ಹೇಳಿದ್ ಆ science law ಇಷ್ಟ ಆದಷ್ಟೂ ಬಹುಶಃ ಯಾರ್ ಹೇಳಿದ್ ಯಾವ ಕವನ ಕೂಡ ಇಷ್ಟ ಆಗ್ಲಿಲ್ಲ ನಂಗೆ. ಅದ್ಕೆ ಯಾರಿಗೂ ಸೋಲದೇ ಇರೋ ಜಂಬದ್ ಹುಡ್ಗಿಗೆ ನಿಂಗೆ ಸೋಲದೇ ಇರೋಕೆ ಆಗ್ಲಿಲ್ಲ.
ನಿನ್ ಮೇಲೆ ಎಷ್ಟ್ ಕೋಪ ಬಂದ್ರೂ ಒಂದ್ ಸೆಕೆಂಡ್ ಕೂಡ ಆ ಕೋಪ ಇರೋದೇ ಇಲ್ಲ, ನೀನು ಅಷ್ಟೇ ಏನೇ ಆದ್ರೂ ನನ್ ಬಿಟ್ ಇರಲ್ಲ ಮಗು ತರ ಹುಡ್ಕೊಂಡ್ ಬರ್ತೀಯ ಇನ್ನೇನ್ ಬೇಕು ಹೇಳು ಸುಖ ಸಂಸಾರಕ್ಕೆ.
ನೋಡಿ ಮೈ ಡಿಯರ್ ಗಂಡ ನಿಂಜೊತೆ ಇನ್ನೂ ತುಂಬಾ ವರ್ಷ ಜೊತೇಲಿ ಇರ್ಬೇಕು ನಾನು, ಅಮ್ಮನ ಪೋಸ್ಟ್ ಗೆ ಪ್ರಮೋಷನ್ ತಗೋಬೇಕು, ಆಮೇಲೆ ಅತ್ತೆ ಪೋಸ್ಟ್, ಆಮೇಲೆ ಅಜ್ಜಿ ಪೋಸ್ಟ್ ಗೆ ಪ್ರೊಮೋಷನ್ ತಗೋಬೇಕು. ಸೋ ಇದೆಲ್ಲಾ ಆಗ್ಬೇಕು ಅಂದ್ರೆ ಆಯಸ್ಸು ಜಾಸ್ತಿ ಬೇಕಲ್ವಾ . ಅದ್ಕೆ ಇನ್ ಕೇಸ್ ಆ ಯಮ ಏನಾದ್ರು ಬೇಗ ಬರ್ತೀನಿ ಅಂದ್ರೆ ಯಮಂಗೇ influence ಮಾಡಿ ಡೆತ್ ಡೇಟ್ ನಾ ಪೋಸ್ಟ್ ಪೋನ್ ಮಾಡುಸ್ಕೊತಿನಿ.ಓಕೆ ನಾ! ಆದ್ರೆ ನೀವ್ ಯಾವತ್ತೂ ನನ್ ಬಿಟ್ ಹೊಗ್ಬಾರ್ದು, ನಾನೂ ಹೋಗಲ್ಲ.
ಬಾಳ ಸಂಗಾತಿ ಆದವ್ರು ನೋವು, ಸಮಸ್ಯೆ ಬಂದಾಗ ಫ್ರೆಂಡ್ಸ್ ತರ ಇರ್ಬೇಕಂತೆ. ಪ್ರೀತಿ ಬಂದಾಗ ಲವರ್ಸ್ ತರ ಇರ್ಬೇಕಂತೆ. ಆ ಪ್ರೀತಿ ಜಾಸ್ತಿ ಆದಾಗ ಗಂಡ ಹೆಂಡ್ತಿ ತರ ಇರ್ಬೇಕಂತೆ. ನಮ್ಮದೂ ಇದೇ ಪಾಲಿಸಿ. ಇಬ್ರು ಮಧ್ಯೆ ಎಲ್ಲ ಮ್ಯಾಚ್ ಆದ್ರೆ ಮಾತ್ರ ಚೆನ್ನಾಗಿರಬಹುದು ಅನ್ನೋದನ್ನ ನಾನ್ ಒಪ್ಪಲ್ಲ. ಯಾಕಂದ್ರೆ, ನಾನು ನೀನು ಓದಿರೋದೆ ಬೇರೆ ಒಂದಕ್ಕೊಂದು ಸಂಬಂಧವೇ ಇಲ್ಲ, ತಿನ್ನೋದ್ರಿಂದ ಹಿಡಿದು ಯಾವುದ್ರಲ್ಲೂ ಇಬ್ರುದು ಒಂದೇ ಟೇಸ್ಟ್ ಇಲ್ಲ
ನಿನ್ನ-ನನ್ನ ಆಸೆ ಕನಸು,ವಯಸ್ಸು,ಉದ್ಯೋಗ ಯಾವುದು ಮ್ಯಾಚ್ ಆಗಲ್ಲ, ಆದ್ರೂ ನಾನ್ ನಿಂಜೊತೆ ತುಂಬಾ ಖುಷಿಯಾಗಿದಿನಿ ಮಗು. ಯಾಕ್ ಹೇಳು ಲೈಫ್ ಪಾಟ್ನರ್ಸ್ ಒಬ್ರು ಟೇಸ್ಟ್ ನಾ ಒಬ್ರು ಇಷ್ಟ ಪಡದಿದ್ರು ಪರ್ವಾಗಿಲ್ಲ ಒಬ್ಬರಿಗೊಬ್ಬರು ಗೌರವಿಸ್ ಬೇಕು ಅದ್ಕೆ. ಭಾವನೆಗಳನ್ನ ಹೇಳ್ದನೇ ಅರ್ಥ ಮಾಡ್ಕೋಬೇಕು ಅಂತೇನೂ ಇಲ್ಲ, ಶೇರ್ ಮಾಡ್ಕೊಳೋ ಗುಣ ಇದ್ರೆ ಸಾಕು. ಜೀವನ ಖುಷಿ-ಖುಷಿಯಾಗಿರುತ್ತೆ.
ಅಷ್ಟಕ್ಕೂ ನಾನ್ ಯಾಕ್ ನಿಮ್ನ ಮಗು ಅಂತ ಕರೀತಿನಿ ಅಂದ್ರೆ ಪ್ರತೀ ಗಂಡಿಗೂ ತನ್ನ ಹೆಂಡ್ತಿ ಎರಡನೇ ತಾಯಿ ಆಗಿರ್ತಾಳಂತೆ, ಪ್ರತೀ ಹೆಣ್ಣಿಗೂ ತನ್ ಗಂಡ ಮೊದಲನೇ ಮಗು ಆಗಿರ್ತಾನಂತೆ. ಅದ್ಕೆ ಮಗು ನಿನ್ನ ಯಾವತ್ತೂ ಬಿಟ್ ಹೋಗಲ್ಲ.
ಈ ಪ್ರೇಮಿಗಳ ದಿನಕ್ಕೆ ನಾನ್ ನಿಂಗ್ ಹೇಳೋದ್ ಏನಂದ್ರೆ ಈ ಪ್ರಪಂಚದಲ್ಲಿ ಇದುವರೆಗೂ ನಿನ್ನ ಯಾರೂ ಇಷ್ಟ ಪಡದೆ ಇರೋ ಅಷ್ಟು, ಮುಂದೇನು ಇಷ್ಟ ಪಡೋಕೆ ಆಗದಿರೋ ಅಷ್ಟು ಇಷ್ಟ ಪಡ್ತೀನಿ. ಬರೀ ಗಂಡ ಆಗಿ ಅಲ್ಲ, ಮಗು ತರ ನೋಡ್ಕೋತೀನಿ ನಿನ್ನ ಕೊನೆವರೆಗೂ.
ಇಷ್ಟ, ಪ್ರೀತಿ, ಬದುಕು,ಇದಿಷ್ಟೂ ನೀನೇ.
ತುಂಬಾ ಲವ್ ಯು ಮಗು.
-ಇಂತಿ ನಿನ್ ಹೆಂಡ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
-
ದಿನದ ಸುದ್ದಿ6 days agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
-
ದಿನದ ಸುದ್ದಿ5 days agoಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ
-
ಅಂಕಣ2 days agoಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
-
ದಿನದ ಸುದ್ದಿ3 days agoಚಿಕ್ಕಮಗಳೂರು | ನೂತನ ಭದ್ರಾ ಸೇತುವೆ ಲೋಕಾರ್ಪಣೆಗೊಳಿಸಿ
-
ದಿನದ ಸುದ್ದಿ3 days agoನಾಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ5 hours agoವಯೋವೃದ್ಧರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ
-
ದಿನದ ಸುದ್ದಿ3 days agoಅಂಧ ಮಕ್ಕಳ ವಸತಿ ಶಾಲೆಗೆ ಅರ್ಜಿ ಆಹ್ವಾನ


