Connect with us

ಭಾಮಿನಿ

ಆಂತರ್ಯ..!?

Published

on

ದಿನವೂ ಸಂಜೆ ನಮ್ಮ ಮನೆ ಎದುರಿನ ಮನೆ ಮುಂದೆ ಅಕ್ಕ ಪಕ್ಕದ ಸುಮಾರು ಐದಾರು ಹೆಂಗಸರು ಕೂತು ಹರಟೆ ಹೊಡಿತಿರ್ತಾರೆ. ಅವರು ಸ್ವಲ್ಪ ಜೋರಾಗಿ ಮಾತಾಡಿದ್ರು ನಮಗೆ ನೀಟಾಗಿ ಕೇಳಿಸುತ್ತೆ. ಹೀಗೆ ನಿನ್ನೆ ಸಂಜೆ ಗಿಡಗಳಿಗೆ ನೀರು ಹಾಕೋವಾಗ ಅವರ ಮಾತುಗಳು ನನ್ನ ಕಿವಿಗೂ ಬಿದ್ವು. ಅವರಲ್ಲಿ ಒಬ್ಬರು ತಿಂಗಳ ಹಿಂದೆ ಅಷ್ಟೇ ತಮ್ಮ ಮಗಳ ಮದ್ವೆ ಮಾಡಿ ಗಂಡನ ಮನೆಗೆ ಕಳ್ಸಿದ್ರು.

ಈ ಬಗ್ಗೆ ವಿಚಾರಿಸ್ತಾ ಒಬ್ಬರು “ಏನಮ್ಮ ,ಮಗಳು ಬಂದಿದ್ಲ ಮನೆಗೆ?” ಅಂತ ಕೇಳಿದ್ರು, ಅದಕ್ಕೆ ಆ ತಾಯಿ ಜೋತು ಮುಖ ಹಾಕಿ “ಇಲ್ಲ ಅಕ್ಕ ” ಅಂದ್ಲು. ಅಲ್ವೇ ಒಬ್ಬಳೇ ಮಗಳು, ತಿಂಗಳಾಯಿತು ನೋಡದೆ ಹೋಗಿ ಕರ್ಕೊಂಡು ಬರ್ಬಾರ್ದ, ಅಂದಿದ್ದೆ ತಡ ಆ ತಾಯಿ ಕಣ್ಣೀರು ಹಾಕ್ತಾ ಮುಂದಿನವಾರ ಅವಳ ಹುಟ್ಟಿದಬ್ಬ ಇದೆ,ಕಳಿಸಿಕೊಡಿ ಅಂತ ಒಂದು ವಾರದಿಂದ ಕೇಳ್ತಿದ್ರೆ ಒಪ್ಪಕೊಳ್ತಾನೆ ಇಲ್ಲ ಅಂತ ಮಾತು ಮುಗ್ಸೋವಷ್ಟರಲ್ಲಿ ನನಗರಿವಿಲದೆ ನನ್ನ ಕಣ್ಣಲ್ಲೂ ನೀರು ಜಿನುಗಿತ್ತು ನೋಡಿ!

ಎಷ್ಟು ವಿಪರ್ಯಾಸ ಅಲ್ಲವೇ ? ತಾವು ಹೆತ್ತು ,ಹೊತ್ತು ,ಸಾಕಿ ,ಬೆಳೆಸಿ ,ಓದಿಸಿ ,ಪ್ರೀತಿಸಿ,ಮುದ್ದಿಸಿದ ಮಗಳು, ದಿನವೂ ಮನೆ ತುಂಬಾ ಓಡಾಡ್ತಾ, ತಂದೆ ತಾಯಿಯ ಅಕ್ಕರೆಯಲ್ಲಿ ಬೆಳೆದು,ಅವರ ನೋವು ಮರೆಸಿದ ಮಗಳು, ಮದುವೆ ಆದ ತಕ್ಷಣ ವೇ ಇನ್ನೊಬ್ಬರ ಸ್ವತ್ತಾಗುತ್ತಾಳೆ ಅಲ್ವಾ? ಅದುವರೆಗೂ ತಮ್ಮ ಕಣ್ಣೆದುರೇ ಓಡಾಡಿಕೊಂಡಿದ್ದ ಮಗಳನ್ನ ಈಗ ಒಮ್ಮೆ ನೋಡಬೇಕು ಅಂತ ಅನಿಸಿದರೂ ಅತ್ತೆ ಮನೆಯವರ ಒಪ್ಪಿಗೆ ಪಡೆಯಬೇಕು.

ಅಳಿಯನ ಆಣತಿ ಪಡೆಯಬೇಕು. ಅಕಸ್ಮಾತ್ ಅವರು ಒಪ್ಪಿ ಕಳಿಸಿದರು ಕೂಡ ಇಷ್ಟೇ ದಿನಕ್ಕೆ ವಾಪಾಸ್ ಬರಬೇಕು ಅನ್ನೋ ಕಡಿವಾಣ. ತಂದೆ ತಾಯಿಯ ಮನೆಯಲ್ಲಿ ಕಷ್ಠವೋ,ಸುಖವೊ,ಮಗಳು ನೆಮ್ಮದಿಯ ಬದುಕನ್ನು ಕಂಡಿರುತ್ತಾಳೆ. ಮದುವೆಯ ನಂತರ ಅತ್ತೆಯ ಮನೆಯಲ್ಲೂ ಅದೇ ನೆಮ್ಮದಿಯ ಬದುಕನ್ನು ಬದುಕಲು ಪ್ರಯತ್ನಿಸುತ್ತಾಳೆ, ಪ್ರತಿ ಕ್ಷಣವೂ ತಂದೆ ,ತಾಯಿ,ಒಡ ಹುಟ್ಟಿದವರ ಕಾಣಲು ಹಂಬಲಿಸುತ್ತಾಳೆ..ಗಂಡನ ಮನೆಯ ಎಲ್ಲರ ಜೊತೆ ಹೊಂದಿಕೊಳ್ಳುವ,ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ, ಆಗ ಅವಳಿಗೆ ಹೊಂದೊಕೊಳ್ಳಲು ಸ್ವಲ್ಪ ಸಮಯ ಕೊಡಬೇಕು. ಇಲ್ಲವಾದಲ್ಲಿ ಮಾನಸಿಕವಾಗಿ ಅವಳು ಒತ್ತಡಗಳ ಸುಳಿಯಲ್ಲಿ ಹುದುಗಿಹೋಗುತ್ತಾಳೆ. ಆಗ ಅವಳಿಗೆ ಬೇಕಾಗಿರುವುದು ತಾಯಿಯಂಥ ಪ್ರೀತಿ,ಕಾಳಜಿ .

ಈ ಥರದ ಪರಿಸ್ಥಿತಿಯನ್ನು ಮದುವೆ ಆದ ಪ್ರತಿ ಹೆಣ್ಣು ಅನುಭವಿಸಿಯೇ ಇರುತ್ತಾಳೆ. ಪ್ರತಿ ಅತ್ತೆಯು ಮಗಳಾಗಿದ್ದು,ಮತ್ತೊಂದು ಮನೆಯ ಸೊಸೆಯಾಗಿ,ನಂತರ ಅತ್ತೆಯ ಪದವಿಗೆ ಏರಿರುತ್ತಾಳೆ. ಅವಳು ಕೂಡಾ ಈ ಎಲ್ಲ ನೋವುಗಳನ್ನು ಅನುಭವಿಸಿಯೇ ಇರುತ್ತಾಳೆ. ಆದರೂ ಅದೆಲ್ಲವನ್ನು ಮರೆತು ಸೊಸೆಯಮೇಲೆ ದರ್ಬಾರು ಮಾಡುವುದು ಎಷ್ಟು ಸರಿ ???ಅತ್ತೆ ತನ್ನನ್ನು ಮಗಳ ಹಾಗೆ ಪ್ರೀತಿಸಬೇಕು ಅನ್ನೋದು ಎಲ್ಲ ಸೊಸೆಯಂದಿರಾ ಬಯಕೆಯೇ ಆಗಿರುತ್ತದೆ.
ಇಂದಿನ ಕೂಡು ಕುಟುಂಬಗಳು ಒಡೆದು,ಚಿಕ್ಕ ಕುಟುಂಬಗಳಾಗುವಲ್ಲಿ “ಸಂಪೂರ್ಣ ಪಾತ್ರ ಸೊಸೆಯದೇ” ಅಂತ ವಾದಿಸುವ ಎಷ್ಟೋ ಬರವಣಿಗೆ ಓದಿದ್ದೇನೆ,ಹೇಳಿಕೆಗಳನ್ನು ಕೇಳಿದ್ದೇನೆ…ಒಬ್ಬ ಸೊಸೆಯಾಗಿ ನಾನೂ ಕೆಲ ವಿಚಾರಗಳನ್ನು ಇಲ್ಲಿ ಹೇಳ ಬಯಸುವೆ.

ಹೀಗೆ ಯೋಚಿಸಿ ಒಬ್ಬ ವ್ಯಕ್ತಿಗೆ ಬೇಕಾದ ಎಲ್ಲ ಪ್ರೀತಿಯು ಸಿಕ್ಕಾಗ ಅವನು ಬೇರೆ ಏನನ್ನು ಹಂಬಲಿಸಲಾರ. ಕಾರಣ ಪ್ರೀತಿ ಸಂಬಂಧಗಳನ್ನು ಕೂಡಿಸುತ್ತದೆಯೇ ಹೊರತು ಕಳೆಯುವುದಿಲ್ಲ. ಹಿರಿಯರು ಅಂತ ಇರೋ ಮನೇಲಿ ಮಗಳು, ಸೊಸೆ ಎನ್ನುವ ಭೇದ ವೇ ಈ ಸಮಸ್ಯೆಯ ಮೂಲ ಕಾರಣ. ಮದುವೆ ಆದಮೇಲೆ ಮಗನ ಪ್ರೀತಿ ಇಬ್ಭಾಗವಾಗುವುದು ಸಹಜ,ಎಂದು ತಿಳಿದಿದ್ದರೂ ಸಹ ಮದುವೆ ಮಾಡಿರುತ್ತಾರೆ ಅಂದಮೇಲೆ ಆ ಸತ್ಯವನ್ನು ಅವರೇಕೆ ಒಪ್ಪಿಕೊಳ್ಳುವುದಿಲ್ಲ..? ತಮ್ಮ ನೋವಿಗೆ ಕೇವಲ ಸೊಸೆಯನ್ನೇ ಹೊಣೆ ಮಾಡುವುದು ಎಷ್ಟು ಸರಿ ?ಸಾಮಾನ್ಯವಾಗಿ ಒಂದು ತಪ್ಪು ಮಗಳಿಂದ ಆದರೆ ಅದು ಆಕಸ್ಮಿಕ, ಅದೇ ತಪ್ಪು ಸೊಸೆಯದಾದರೆ? ಅಲ್ಲಿ ನಡೆವ ಸಂಗತಿಯೇ ಬೇರೆ. ಮಗಳಿಗೆ ಸ್ವಲ್ಪ ಜ್ವರ ಬಂದರು ಅಯ್ಯೋ ಪಾಪ ಅಂತ ಅದೆಷ್ಟು ಮರುಗುವಳೋ ಈ ಅತ್ತೆ. ಅದೇ ಸೊಸೆ ಮನೆ,ನೌಕರಿ,ಮಗು ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡು ,ವಿಶ್ರಾಂತಿಯನ್ನು ಅರಿಯದೆ ಅದೆಷ್ಟು ದಣಿದರು ಮೆಚ್ಚುಗೆಯ ಒಂದು ಮಾತೂ ಇಲ್ಲ.

ಆದರೆ ಅವಳ ಎಲ್ಲ ಕೆಲಸಗಳಲ್ಲೂ ತಪ್ಪುಗಳನ್ನು ಹುಡುಕುವ ಕಾಯಕ ಮಾತ್ರ ನಿರಂತರ. ಮಗಳೊಬ್ಬಳೇ ಅಡಿಗೆ ಮನೇಲಿ ಕೆಲಸ ಮಾಡಿದರೆ ಅದೆಷ್ಟು ಬೇಗ ಹೋಗಿ ಸಹಾಯ ಮಾಡುವಾಗ ಇದ್ದ ಕಾಳಜಿ ,ಸೊಸೆಯ ಮೇಲೆ ಯಾಕಿಲ್ಲ?ಅವಳು ಕೆಲಸಕ್ಕೆ ಹೋಗುವುದು ತಿಳಿದಿದ್ದರೂ ಒಂದೇ ಒಂದು ಚಿಕ್ಕ ಸಹಾಯ ಮಾಡಬೇಕು ಅಂತ ಏಕೆ ಅನಿಸುವುದಿಲ್ಲ ? ಇಂತಹ ಪ್ರತಿ ಘಟನೆಯು ಸೊಸೆಗೆ ತನ್ನ ತಾಯಿಯ ನೆನಪಿಸದೆ ಇರವು. ಬೇಕು ಅನಿಸಿದಾಗ ಅವರನ್ನು ನೋಡಲಾಗದ ಅಸಹಾಯಕತೆ. ದಿನವೂ ಮಲಗುವಾಗ ಅವರಿಗಾಗಿ ಒಂದು ಪ್ರಾರ್ಥನೆ ಮಾಡುವಾಗ ಅವರನ್ನು ನೆನೆದು ಕಣ್ಣೀರಿಡುವುದು. ಆಗ ಅವಳ ಕಣ್ಣೊರೆಸುವುದು ಮಾತ್ರ ಅವಳ ಆಪ್ತ ಗೆಳೆಯ ಅವಳ ತಲೆದಿಂಬು. ನಿಜ, ಇಂತಹ ಅದೆಷ್ಟೊ ಕಥೆಗಳು ಈ ತಲೆದಿಂಬಿನ ಅಡಿಯಲ್ಲಿ ಹೂತು ಹೋಗಿವೆಯೋ??ಇಂತಹ ಅದೆಷ್ಟೋ ಒತ್ತಡಗಳ ಅವಳ ತಾಳ್ಮೆ ಅದೆಷ್ಟು ಸಹಿಸೀತು?

ಒಮ್ಮೆ ತಾಳ್ಮೆ ಗೆಟ್ಟು ಮಾತಾಡಿದರೆ ಅಲ್ಲಿಯೂ ತಪ್ಪು ಅವಳದ್ದೇ. ಇರಲಿ, ಹೀಗೆ ಹೇಳ್ತ ಹೋದ್ರೆ ಈ ಲೇಖನಕ್ಕೆ ಕೊನೆಯೇ ಇರಲ್ಲ . ಇದೆಲ್ಲವನ್ನು ಹೇಳುವುದರ ಉದ್ದೇಶ ಇಷ್ಟೇ. ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು..ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಗ ,ಕಷ್ಟಗಳಿಗೊಂದು ‘ಮೆಚ್ಚುಗೆ’ ಇರಲಿ. ಅವಳ ತಪ್ಪುಗಳನ್ನು ತಿದ್ದಿ ಹೇಳುವ ಗುಣ ಇರಲಿ ಹೊರತು ಅವಳ ಹಿಂದೆ ಆಡಿಕೊಳ್ಳುವ ಸಣ್ಣತನ ಇರದಿರಲಿ. ಒಂದು ಹೆಣ್ಣು ಮದುವೆಯಾದಮೇಲೆ ತನ್ನ ಇಷ್ಟದ ನ ತವರನ್ನು ಬಿಟ್ಟು ಬರುತ್ತಾಳೆ. ತನ್ನೆಲ್ಲಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾಳೆ. ಅಷ್ಟೇ ಯಾಕೆ ಅವಳ ಹೆಸರು,ಅಸ್ತಿತ್ವ ಎಲ್ಲವೂ ಬದಲಾಗುತ್ತದೆ. ಇದೆಲ್ಲದರ ಬದಲಾಗಿ ಅವಳು ಬಯಸುವುದು “ಕೊಂಚ ಪ್ರೀತಿ” ಮಾತ್ರ.

ಈ ಪ್ರೀತಿಗೇಕೆ ಮಗಳು, ಸೊಸೆ ಎನ್ನುವ ಭೇದ ಅಲ್ಲವೇ ? ಚಪ್ಪಾಳೆ ಹೇಗೆ ಒಂದೇ ಕೈ ಇಂದ ಆಗಿವುದಿಲ್ಲವೋ ಹಾಗೆ ತಪ್ಪು ಕೂಡ ಒಬ್ಬರದೇ ಆಗಿರಲು ಸಾಧ್ಯವಿಲ್ಲ.ಚಿಕ್ಕವರು ತಪ್ಪು ಮಾಡಲು ಕಾರಣ ದೊಡ್ಡವರ ನಡುವಳಿಕೆಯೇ ಕಾರಣ ಅಲ್ಲ್ವೆ??ಸ್ವಲ್ಪ ಕಾಳಜಿ ,ಕೊಂಚ ಪ್ರೀತಿ ಇದ್ದರೆ ಅದೇ ಸ್ವರ್ಗ .,…ಅಲ್ಲವೇ..?

ಕವಿತ ವಸಂತ್
ಸಂಗೀತ ಶಿಕ್ಷಕಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಗ್ಗತ್ತಲ ವ್ಯಾಪಾರದಲ್ಲಿ, ವೇಶ್ಯೆ ಅಳುವ ಮಗು..!

Published

on

  • ಮೈತ್ರಾವತಿ ವಿ. ಐರಣಿ, ಚಿಕ್ಕಬೂದಿಹಾಳು, ದಾವಣಗೆರೆ

ವೇಶ್ಯಾವಾಟಿಕೆ ಎಂಬುದು ಸ್ತ್ರೀ ಕುಲಕ್ಕೆ ಅಂಟಿಕೊಂಡಿರುವ ಅಭಿಶಾಪಗಳಲ್ಲೊಂದು!ಇಂತಹ ಶಾಪದ ಕೂಪವನ್ನು ಸೃಷ್ಟಿಸಿದವರು,ಪೋಷಿಸಿದವರು ,ಪರವಾನಿಗೆ ಕೊಟ್ಟವರು ನಮ್ಮ ಸೋ ಕಾಲ್ಡ್ ಮಾರ್ಯದಸ್ಥ ಸಮಾಜ.

ವೇಶ್ಯಾ ವೃತ್ತಿ ಎಂದರೆ ಹಣದ ಪ್ರತಿಫಲಕ್ಕಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಕ್ರಿಯೆ. ಜಗತ್ತಿನಾದ್ಯಂತ ಅನಾದಿಕಾಲದಿಂದಲೂ ಇದು ರೂಢಿಯಲ್ಲಿದೆ. ವಿಪರ್ಯಾಸ ಏನೆಂದರೆ ಕಾಲಾಂತರದಲ್ಲಿ ಈ ವೃತ್ತಿಗೆ ಆಧುನಿಕತೆಯ ಸ್ಪರ್ಶ ಸಿಕ್ಕು ಹೈಟೆಕ್ ದಂಧೆಯಾಗಿ,ವ್ಯವಹಾರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರಲ್ಲಿ ಪುರುಷರ ಸಹಭಾಗಿತ್ವ ಇದ್ದರೂ ದೂಷಿಸುವುದು ಮಾತ್ರ ಸ್ತ್ರೀಯರನ್ನೇ ಇದು ಯಾವ ಕಾಡಿನ ನ್ಯಾಯ? ನನಗಿವತ್ತಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಅದ್ಯಾರದ್ದೇ ಬದುಕಾಗಿರಬಹುದು ಬದುಕಲಾರದಷ್ಟು ಅಸಹ್ಯವಾಗಿರುವುದಿಲ್ಲ,ಹೇಸಿಗೆ ಪಡುವಷ್ಟು ನಿಷ್ಕೃಷ್ಠವಾಗಿರುವುದಿಲ್ಲ,ಲೋಕನಿಂದನೆಗೊಳಗಾಗಿ ಮುಖ ಮುಚ್ಚಿ ಓಡಾಡುವಂತಹ ಹೀನ ಸ್ಥಿತಿ ಇರುವುದಿಲ್ಲ. ಅಷ್ಟಕ್ಕೂ ಯಾರ ಬದುಕು ದಟ್ಟ ದರಿದ್ರವಲ್ಲ.ಅವರವರ ವೃತ್ತಿಗೆ ಅವರದೇ ನೆಲೆಯಲ್ಲಿ ತಕ್ಕುದಾದ ಗೌರವ ಆದರಗಳಿರುತ್ತವೆ. ಅವನೆಂತಹ ನೀಚನೇ ಆಗಿರಲಿ,ಪರಮಪಾಪಿಯೇ ಆಗಿರಲಿ, ಕೊಲೆಗಡುಕನೇ ಆಗಿರಲಿ ಅವನು ಸಹ ಸಮಾಜದಲ್ಲಿ ಚೂರು ಪಾರು ಮರ್ಯಾದೆ, ಗೌರವ ಸಂಪಾದಿಸಿರುತ್ತಾನೆ.ಅವನ ಬದುಕಿನ ಅಸ್ತಿತ್ವಕ್ಕೊಂದು ಸಾರ್ಥಕ ಕಂಡುಕೊಳ್ಳುತ್ತಾನೆ.

ಬಹುಶಃ ವೃತ್ತಿ ಗೌರವವಿಲ್ಲದ ಏಕಮಾತ್ರ ದಂಧೆ ಎಂದರೆ ಅದು ವೇಶ್ಯೆ ವೃತ್ತಿಯೊಂದೇ.ಆಕೆ ದೇಹವನ್ನು ಮಾರಿ ಅಷ್ಟೈಶರ್ಯವನ್ನು ಸಂಪಾದಿಸಿರಲಿ ಅದನ್ನು ನಾನು ನನ್ನ ದೇಹ ಮಾರಿ ಸಂಪಾದಿಸಿದ್ದೇನೆಂದು ಅಭಿಮಾನದಿಂದ, ಹೆಮ್ಮೆಯಿಂದ ಸಮಾಜದಲ್ಲಿ ನಿಂತು ಹೇಳುವ ಧೈರ್ಯ, ಸ್ಥೈರ್ಯ ಅವರಿಗಿರುವುದಿಲ್ಲ.ಯಾವುದೇ ಮಾನ,ಸಮ್ಮಾನ, ಬಡ್ತಿ, ಗೌರವಗಳಿಲ್ಲದ ಏಕಮಾತ್ರ ವೃತ್ತಿಯಿದು.

ವೇಶ್ಯೆ ಎಂದರೆ ಪರಮ ಪಾಪಿ,ನಿತ್ಯ ಕಳಂಕಿತೆ,ಲೋಕನಿಂದಿತೆ,ಜಾರಿಣಿ ಹೀಗೆ ನಾನಾ ಹೆಸುರುಗಳಿಂದ ಕರೆಸಿಕೊಳ್ಳುವ ಆ ಪಾಪದ ಜೀವಗಳಿಗೆ ಎಷ್ಟು ಜನ್ಮ ಕಳೆದರೂ ಆ ಕಳಂಕ ಅವರಿಂದ ದೂರವಾಗುವುದಿಲ್ಲ.

ಅಷ್ಟಕ್ಕೂ ವೇಶ್ಯೆ ಎಂದರೆ ಮೂಗು ಮುರಿಯುವ ಸಮಾಜದಲ್ಲಿ ನಾವು ಬದುಕಿದ್ದೇವೆ.ಹೌದು ಹಾಗಾದರೆ ಆಕೆ ವೇಶ್ಯೆಯಾಗಲಿಕ್ಕೆ ಭಾರತದಂತಹ ಮಡಿವಂತಿಕೆಯ ರಾಷ್ಟ್ರದಲ್ಲಿ ವೇಶ್ಯಾವಾಟಿಕೆ ಒಂದು ದಂಧೆಯಾಗಿ ,ವೃತ್ತಿಯಾಗಿ ಬೆಳೆಯಲಿಕ್ಕೆ ಕಾರಣ ಯಾರು?, ಅದಕ್ಕೆ ಅಧಿಕೃತವಾಗಿ ಪರವಾನಿಗೆ ಕೊಟ್ಟವರು ಯಾರು?

ವೇಶ್ಯಾವಾಟಿಕೆ ಎಂಬುದು ಸ್ತ್ರೀ ಕುಲಕ್ಕೆ ಅಂಟಿಕೊಂಡಿರುವ ಅಭಿಶಾಪಗಳಲ್ಲೊಂದು!ಇಂತಹ ಶಾಪದ ಕೂಪವನ್ನು ಸೃಷ್ಟಿಸಿದವರು,ಪೋಷಿಸಿದವರು ,ಪರವಾನಿಗೆ ಕೊಟ್ಟವರು ನಮ್ಮ ಸೋ ಕಾಲ್ಡ್ ಮಾರ್ಯದಸ್ಥ ಸಮಾಜ.

ಹೌದು ಬದುಕಿನಲ್ಲಿ ಯಾವುದೋ ಅಸಹಾಯಕತೆಗೋ,ಅನೀರಿಕ್ಷಿತ ಒತ್ತಡಕ್ಕೋ ಸಿಲುಕಿ ವೇಶ್ಯಾವಾಟಿಕೆ ಪ್ರಪಂಚಕ್ಕೆ ಕಾಲಿಡುವ ಸ್ತ್ರೀ ಜಗತ್ತಿಗೆ ವೇಶ್ಯೆ ಎಂದು ಚಿರಪರಿಚಿತಳಾಗುತ್ತಾಳೆ.ಆದರೆ ಆಕೆಯ ಅಸಹಾಯಕತೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಪುರುಷ(ಕೆಲವರು) ಮಾತ್ರ ಜಗತ್ತಿನ ಮುಂದೆ ಸಭ್ಯಸ್ಥನಾಗಿ ಕಾಣಿಸಿಕೊಳ್ಳುತ್ತಾನೆ.ಸಮಾಜದ ಇಂತಹ ಕುರುಡು ಕಾನೂನಿಗೆ ನನ್ನ ಧಿಕ್ಕಾರವಿದೆ.

ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ದಂಧೆ ಕೋಡ್ ವರ್ಡ್ ಗಳ ಮೂಲಕ ನಡೆಯುತ್ತದೆ. ಅದಕ್ಕೆಂದೇ ದುರುಳರ ವರ್ಗ ಹುಟ್ಟಿಕೊಂಡಿದೆ.ಕಿತ್ತು ತಿನ್ನುವ ಬಡತನ, ಬದುಕಿನ ಅಸಹಾಯಕ ಸ್ಥಿತಿ, ಕಾಮುಕ ಕಣ್ಣಿನ ಕೀಚಕರ ದುರಾಸೆಗೆ ಬಲಿಯಾಗುವ ಹೆಣ್ಣು ಮಕ್ಕಳು ಮುಂದೆ ಕಾಮಾಟಿಪುರಂನ ವೇಶ್ಯಾವಾಟಿಕೆ ಅಡ್ಡೆಗಳಲ್ಲಿ ಇನ್ನೊಬ್ಬರ ದೈಹಿಕ‌ ಸುಖದ ಸರಕಾಗುತ್ತಾಳೆ‌. ಮುಂಬೈ ನ ರೆಡ್ ಲೈಟ್ ಏರಿಯಾ (ಕಾಮಾಟಿಪುರಂ) ಹೆಣ್ಣು ಮಕ್ಕಳ ಪಾಲಿಗದು.

ಲೇಖಕಿ | ಮೈತ್ರಾವತಿ ವಿ. ಐರಣಿ, ಚಿಕ್ಕಬೂದಿಹಾಳು, ದಾವಣಗೆರೆ

ರೌರವ ನರಕ ಇಡೀ ಜೀವ ಹಿಡಿದುಕೊಂಡು ಪರರ ಸುಖಕ್ಕಾಗಿ ಮನಸ್ಸು ಮತ್ತು ದೇಹಗಳ ನಡುವೆ ನಿತ್ಯವೂ ಹೋರಾಟ ನಡೆಸುತ್ತಿರುತ್ತಾಳೆ.ಏಕೆಂದರೆ ಪ್ರತಿಯೊಂದು ಹೆಣ್ಣಿಗೂ ಅವಳದೇ ಬದುಕಿನ ಕನಸಿರುತ್ತದೆ.ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಾಳೆ.ಆರ್ಥಿಕ ಬಿಕ್ಕಟ್ಟು, ಸಮಾಜದ ದೂಷಣೆ,ಬದುಕಿನ ಅಸಹಾಯಕತೆ ಎದುರಾದಾಗ ಆಕೆ ಯಾರದ್ದೋ ಸಹಾಯದ ಬಾಗಿಲಿಗೆ ಬಂದು ನಿಲ್ಲುತ್ತಾಳೆ.ಹಾಗಂತ ಅವಳಿಗೆ ನಿಸ್ವಾರ್ಥ ಮನಸ್ಸಿನಿಂದ, ಒಳ್ಳೆಯ ದೃಷ್ಟಿಯಿಂದ ಸಹಾಯ ಮಾಡೋ ಸಭ್ಯಸ್ಥ ಮಂದಿ ನಮ್ಮ ನಡುವೆ ಎಷ್ಟಿದ್ದಾರೆ.

ಒಬ್ಬ ಖ್ಯಾತ ಸೀರಿಯಲ್ ನಟಿಯವರು ಕಣ್ಣಾರೆ ಕಂಡ ಘಟನೆಯನ್ನು ಇಲ್ಲಿ ಪ್ರಸ್ತುತ ಪಡಿಸಲಿಚ್ಛಿಸುತ್ತೇನೆ.ಲಾಲ್ ಬಾಗ್ ಹತ್ತಿರ ಒಬ್ಬ ತಾಯಿ ತನ್ನ ಮಗುವಿಗೆ ಹಾಲು ಕುಡಿಸಲು ಹಣ ಅಂತ ಬೀದೀಲಿ ನಿಂತು ಬರುವವರ ಹತ್ತಿರ ಹಣ ಕೇಳ್ತಾಳೆ.ಯಾರು ಬಿಡಿಗಾಸು ಬಿಚ್ಛೋದಿಲ್ಲ.ಒಬ್ಬ ಬಂದು ನಿನಗೆ ಹಣ ಕೊಡ್ತೀನಿ ನನ್ನ ಜೊತೆ ಬಾ ಎಂದು ಕರೆದುಕೊಂಡು ಹೋಗುತ್ತಾನೆ.ತನ್ನಾಸೆಗಳನ್ನು ಪೂರೈಸಿಕೊಂಡು ಹಣ ಬಿಸಾಕಿ ಹೋಗುತ್ತಾನೆ.

ಹಾಗಾದರೆ ಇಲ್ಲಿ ಮಗುವಿನ ಹಸಿವಿನ ತಪ್ಪಾ? ಆ ತಾಯಿ ತೆಗೆದುಕೊಂಡ ನಿರ್ಧಾರದ ತಪ್ಪಾ? ಅಥವಾ ಆಕೆಯ ಅಸಾಹಯಕತೆಯನ್ನು ಬಳಸಿಕೊಂಡ ಆ ಆಗುತಂಕನ ತಪ್ಪಾ? ಎಲ್ಲಕ್ಕೂ ಮೌನವೋಂದೇ ಉತ್ತರ. ಈ ತರಹದ.ಸಣ್ಣ ಸಣ್ಣ ಘಟನೆಗಳಿಂದ ರೋಸಿ ಹೋದ ಹೆಣ್ಣು ಮಕ್ಕಳು ಮುಂದೆ ವೇಶ್ಯಾವಾಟಿಕೆಯನ್ನೇ ವೃತ್ತಿ ಮಾಡಿಕೊಳ್ಳುತ್ತಾರೆ. ಕಾಮಾಟಿಪುರಂನ ಗಲ್ಲಿ ಗಲ್ಲಿಗಳಲ್ಲಿ ಇಂತಹುದೇ ಅನೇಕ ಹೆಣ್ಣು ಮಕ್ಕಳು ಕಾಣ ಸಿಗುತ್ತಾರೆ.

ಇನ್ನೂ ವಿಪರ್ಯಾಸ ಎಂದರೆ ಅಂದರೆ ಎಷ್ಟೋ ದೇಶಗಳಲ್ಲಿ ಇದನ್ನು ಕಾನೂನು ಬದ್ದಗೊಳಿಸಲಾಗಿದೆ. ಇನ್ನು ಹಲವು ದೇಶಗಳಲ್ಲಿ ಅದೇ ಚಿಂತನೆಗಳು ನಡೆಯುತ್ತಿವೆ.ಭಾರತವೂ ಇದರಿಂದ ಹೊರತಾಗಿಲ್ಲ ಬಿಡಿ.ನಮ್ಮ ಸಮಾಜದ ದುರಂತ ನೋಡಿ ಸ್ತ್ರೀ ಕುಲಕ್ಕೆ ಮುಳುವಾಗಿರುವ ಈ ಶಾಪವನ್ನು ಹೊಡೆದೋಡಿಸಿ ಅವಳಿಗೂ ಒಂದು ಬದುಕು ಕಟ್ಟಿ ಕೊಡುವ ಅವಕಾಶವನ್ನು ನಾವ್ಯಾರು ಮಾಡುತ್ತಿಲ್ಲ.

ಬದಲಿಗೆ ಆಕೆಗೆ ಲೈಂಗಿಕ ಕಾರ್ಯಕರ್ತರು, ನಿತ್ಯ ಸುಮಂಗಲಿಯರು ಎಂಬ ಬಿರುದು ನೀಡಿ ಮಹಾ ಉಪಕಾರ ಮಾಡಿದ್ದೇವೆಂದು ಬೀಗುತ್ತಿದ್ದೇವೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು.

ವೇಶ್ಯಾವಾಟಿಕೆ ಭೂಮಿಯ ಮೇಲಿನ ಭೀಭತ್ಸ ನರಕ ಈ “ಕರಿ ಕತ್ತಲೆಯ ವ್ಯಾಪಾರದಲ್ಲಿ ವೇಶ್ಯೆ ಅಕ್ಷರಶಃ ಅಳುವ ಮಗು”
ಆಕೆಯ ನಿತ್ಯ ರೋಧನೆ ಕೇಳೋರು ಯಾರು?ತಾವು ಬಿಸಾಡುವ ಕಾಸಿಗೆ ಸೆರಗು ನೀಡುವ ಸರಕೆಂದೇ ಭಾವಿಸುವ ಆಕೆಯನ್ನು ಅನುಭವಿಸಿ ಹೋಗುವ ಮಂದಿಗೆ ಆಕೆಗೊಂದು ಸಾಂತ್ವನ ಹೇಳುವ ಸಮಯವಾದರೂ ಎಲ್ಲೀದ್ದೀತು!

ತೀಟೆ ತೀರಿದ ಬಳಿಕ..
ನೋಟು ಎಸೆದು
ಹೋಗುವ ಜನ ;
ತಿರುಗಿ ನೋಡಿದರೆ
ಅಸಹ್ಯ ಪಡುವ
ಅವರ ಮನ ;
ಆಮೇಲೆ ನಾನ್ಯಾರೊ,
ಅವರಾರೋ ;
ಅವರಿಗೋ..ತೀಟೆ ತೀರಿದರೆ ಸಾಕು ;
ನನಗೆ ಅದರಿಂದಲೇ ಬದುಕು;

ಕತ್ತಲೆಯಲಿ ಬೆತ್ತಲಾಗಿ
ಕಳೆದು ಹೋಗಿಹೆ ನಾನು ;
ಬೆತ್ತಲೆಯ ಮೈ ಹಿಂಡಿ,
ಸುಖಪಡುವವರಿಗೆ ತಿಳಿಯದು
ನನ್ನೊಳಗಿನ ನೋವು !
ಕಾಮರೂಪದಿ ಬರುವವರಲಿ
ರಾಮರೂಪವ ನೋಡಲಾದೀತೆ ?
ಸುಖ ಬಯಸಿ ಬರುವವರಲಿ
ನನ್ನ ನೋವ ಹೇಳಿಕೊಳ್ಳಲಾದೀತೆ(ರಚನೆ;ಕೃಷ್ಣ ಮೂರ್ತಿ)

ಈ ವೃತ್ತಿಯಲ್ಲಿ ತೊಡಗಿದ ಹೆಣ್ಣು ಮಗಳೊಬ್ಬಳು ಹೇಳಿದ ಒಂದು ಮಾತು ನಿಜಕ್ಕೂ ನನ್ನನ್ನು ತಲ್ಲಣಗೊಳಿಸಿತು.ಅನೀರಿಕ್ಷಿತವಾಗಿ ಈ ಪಾಪ ಕೂಪಕ್ಕೆ ನಾವು ಬಂದ್ವಿ ನಾವು ದೇಹವನ್ನು ಮಾತ್ರ ಕೊಡ್ತೀವಿ ನಮ್ಮ ಮನಸ್ಸನಲ್ಲ ಅದಿನ್ನೂ ಪರಿಶುದ್ಧವಾಗಿದೆ.ದೇಹ ಮಲಿನವಾಗಿದೆಯೇ ಹೊರತು ಮನಸ್ಸಲ್ಲ!

ನಮಗೂ ಮನಸಿದೆ ಅರಿತು ಕೈ ಹಿಡಿಯುವ ಮನುಷ್ಯ ಅದ್ಯಾರೇ ಆಗಿರಲಿ ತುಂಬು ಮನಸ್ಸಿನಿಂದ ಅವರನ್ನು ಸ್ವೀಕರಿಸಿ ಅವರಿಗೆ ಆದರ್ಶ ಸತಿಯಾಗಿ ಬದುಕುತ್ತೇನೆ.ನಮ್ಮನ್ನು ಕೀಳು ಭಾಷೆಯಿಂದ ನಿಂದಿಸುತ್ತಾರಲ್ಲ ನಮ್ಮ ಸೆರಗಿನಲ್ಲಿ ತಮ್ಮ ಕಾಮದ ಸುಖವನ್ನು ಪಡೆದುಕೊಂಡು ಹೋದವರನ್ನೇಕೇ ನೀವು ಕೀಳು ಭಾಷೆಯಿಂದ ನಿಂದಿಸುವುದಿಲ್ಲ ಎಂಬ ಪ್ರಶ್ನೆ ನನ್ನನ್ನು ಗದ್ಗಗದಿತಳನ್ನಾಗಿ ಮಾಡಿದ್ದಲ್ಲದೇ ಈ ಬರಹಕ್ಕೆ ಸ್ಪೂರ್ತಿಯನ್ನು ನೀಡಿತು. ಹಾಗೆ ಅವರ ಮೇಲೆ ಇದ್ದ ಮುಜುಗರದ ಭಾವವೊಂದು ಕರಗಿ ಗೌರವದ ಭಾವವು ಒಡಮೂಡಿತು.

ನಾನು ಈ ವೃತ್ತಿಯಲ್ಲಿ ತೊಡಗಿರುವವರಿಗೆ ಅಥವಾ ಮುಂದೆ ಅಸಹಾಯಕತೆಗೆ ಸಿಲುಕಿ ಈ ಪಾಪ ಕೂಪಕ್ಕೆ ಅನಿವಾರ್ಯವಾಗಿ ಬಿದ್ದರೆ ನೀವು ಚಿಂತಿಸಬೇಡಿ.ಅದೇ ಕಾಮಾಟಿಪುರಂನ ಬೀದಿಗಳಲ್ಲಿ ಬೆಳೆದ ಶ್ವೇತಾ ಕಟ್ಟಿ ಈಗ ನ್ಯೂಯಾರ್ಕ್ ವಿಶ್ವ ವಿದ್ಯಾಲಯದಲ್ಲಿ ಓದುತ್ತಿದ್ದಾಳೆ.ಆಕೆ ಏಕೆ ನಿಮಗೆ ಸ್ಪೂರ್ತಿಯಾಗಬಾರದು? ಅವಳು ನಿಮ್ಮ ಹಾಗೆ ಅನಿವಾರ್ಯ ಎಂದು ಕೂತಿದಿದ್ದರೆ ನ್ಯೂಯಾರ್ಕ್ ಇರಲಿ ಕಾಮಾಟಿಪುರಂ ಸಹ ದಾಟುತ್ತಿರಲಿಲ್ಲ‌.ಇವತ್ತಿನ ಕಾಲದಲ್ಲಿ ಅವಕಾಶಗಳಿಗೇನು ಕೊರತೆ ಇಲ್ಲ.

ನಿಮ್ಮ ಮನದ ಸಂಕೋಚದ ಸಂಕೋಲೆಗಳಿಂದ ಹೊರ ಬಂದರೆ ಬದುಕಿನ ಸಾವಿರ ಅವಕಾಶಗಳು ನಿಮ್ಮ ಪಾಲಿಗಿವೆ.ಯಾರದ್ದೋ ಕಾಮೋದ್ರೇಗ ತೀರಿಸಲು ನೀವೇಕೆ ಅನುಭೋಗದ ಸರಕಾಗುತ್ತೀರೀ?ನಿಮ್ಮತನವನ್ನೇ ಕಳೆದುಕೊಂಡು ನಿರ್ಭಾರ ಸ್ಥಿತಿಗೆ ತಲುಪಿ ಬದುಕುವುದು ನಿಮಗೆ ನೀವೇ ಮಾಡಿಕೊಳ್ಳುವ ಆತ್ಮವಂಚನೆ.

ಭಾರತದಂತಹ ದೇಶದಲ್ಲಿ ಪುರುಷ ಎಷ್ಟು ಜನರ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬಹುದು,ಮದುವೆ, ಮೋಸ ಎಲ್ಲವನ್ನೂ ಮಾಡಬಹುದು ಏಕೆಂದರೆ ಅವನು ಏನೇ ಮಾಡಿದರೂ ಸಭ್ಯಸ್ಥ ಆದರೆ ಅದನ್ನೇ ಸ್ತ್ರೀ ಮಾಡಿದರೆ ಅವಳಿಗೆ ನೂರೆಂಟು ಕಳಂಕ,ನಿಂದನೆಗಳು ಏಕೆಂದರೆ ನಮ್ಮ ದೇಶದಲ್ಲಿ ಮಡಿವಂತಿಕೆಯ ಗೆರೆ ಇರುವುದು ಕೇವಲ ಸ್ತ್ರೀಯರಿಗಷ್ಟೇ ಪುರುಷರಿಗಲ್ಲ.

ಜೀವನ ಪೂರ್ತಿ ಯಾರಿಗೋ ಸುಖ ಕೊಡಲಿಕ್ಕೆ ಜೈವಿಕ ಗೊಂಬೆಯಾಗಿ ನೀವಿರಬೇಕಾಗಿಲ್ಲ, ಬದುಕಿನಾಚೆಗೂ ಒಂದು ಬದುಕಿದೆ ಅದಕ್ಕಾಗಿ ಹಪಹಪಿಸಿ ಇಂತಹ ಪಾಪಕೂಪದಿಂದ ದಯವಿಟ್ಟು ಹೊರಬನ್ನಿ ಹೊಸದೊಂದು ಬದುಕು ಕಟ್ಟಿಕೊಳ್ಳಿ.ಎದೆಯಲ್ಲಿ ಆತ್ಮವಿಶ್ವಾಸ, ನ್ಯಾಯವಾಗಿ ದುಡಿದು ತಿನ್ನೋ ಹಠ ಇದ್ರೆ ಏನು ಬೇಕಾದರೂ ಸಂಪಾದಿಸಬಹುದು.
“ವೇಶ್ಯಾವಾಟಿಕೆಗೆ ಬೀಳುವುದು ಶಾಪವಲ್ಲ ಅದರಿಂದ
ಹೊರಬರದೇ ಇರುವುದು ನಿಜವಾದ ಶಾಪ.”

(ಮೈತ್ರಾವತಿ ವಿ. ಐರಣಿ,ಲೇಖಕಿ.
ಚಿಕ್ಕಬೂದಿಹಾಳು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾಮಿನಿ

ಲಾಸ್ಟ್​​ ಸ್ಟಾಪ್​​ ಬಸ್​ನಲ್ಲಿ ಸಿಕ್ಕ AGE@73..!

Published

on

  • ಆಕಾಶಪ್ರಿಯ

ಸ್ಸಿನಲ್ಲಿ ಸಿಕ್ಕವರು, ನನ್ನೀ ಬದುಕಿನ ಮಹಾಕಾವ್ಯಕ್ಕೊಂದು ಪುಟವಾದವರು, ಸ್ಮೃತಿಪಟಲಕ್ಕೊಂದು ಅಚ್ಚಳಿಯದ ನೆನಪಾದವರು ನೂರಾರು ಜೀವಗಳು. ನನ್ನದಲ್ಲದ ಊರಿನ, ನನ್ನವರಲ್ಲದ ಜನರ ನಡುವೆಯೂ ನನ್ನವರೆನಿಸಿದವರೂ, ಒಂದೊಮ್ಮೆ ಪಯಣದಲ್ಲಿ ಜೊತೆಯಾದವರು ಮನದೊಳಗೆ ಜೀವಂತವಾಗಿ ಬರಹಕ್ಕೆ ಅಕ್ಷರವಾಗಿದ್ದಾರೆ. ಅನುಭವದ ವಿಸ್ತರಣೆಗೆ ಕಾರಣರಾಗಿದ್ದಾರೆ. ಆಗಾಗ ಕಾಡಿದ್ದಾರೆ, ಅಪರೂಪಕ್ಕೆ ಕೆಲವರು ಸಂತಸದ ಕಣ್ಣಿನ ಹನಿಗಳಾಗಿದ್ದಾರೆ. ಹಲವರು ನಗುವಿನ ರುವಾರಿಗಳಾಗಿದ್ದಾರೆ. ಮತ್ತೆ ಕೆಲವರು ನನ್ನನ್ನೇ ಮೌನಿಯಾಗಿಸಿದ್ದಾರೆ. ಕೆಲವರಂತೂ ಮರೆತಷ್ಟೂ ನೆನಪಾಗಿದ್ದಾರೆ. ಅಂತದೇ ಆತ್ಮೀಯರಲ್ಲದ ಆತ್ಮೀಯರ ಜೊತೆಗಿನ ಒಂದು ಪಯಣದ ಕಥೆ ಈ ” ಲಾಸ್ಟ್​​ ಸ್ಟಾಪ್​​ ಬಸ್​ನಲ್ಲಿ ಸಿಕ್ಕ AGE@73”

ನಾನು ನನ್ನ ಗೆಳತಿ ಸರ್ಕಾರಿ ಬಸ್​ನಲ್ಲಿ ಎಲ್ಲಿಯೋ ಹೊರಟ್ಟಿದ್ದೆವು. ನಾವು ಇಳಿಯಬೇಕಾದ್ದು ಲಾಸ್ಟ್​​ ಸ್ಟಾಪ್​​ ಆಗಿದ್ದ ಕಾರಣ, ಬಸ್​​ನಲ್ಲಿ ಸೀಟ್​ ಸಿಕ್ಕ ತಕ್ಷಣ ಖುಷಿಯಿಂದ ಕುತ್ಕೊಂಡೆವು. ನಂತರ ನೆಕ್ಸ್ಟ್​​ ಸ್ಟಾಪ್​​ನಲ್ಲಿ ಒಬ್ರು ಅಂಕಲ್​ ಹತ್ತಿದ್ರು. ಸೀದಾ ನಮ್ಮ ಸೀಟ್​​ ಹತ್ರ ಬಂದು ಇದು ಸೀನಿಯರ್​ ಸಿಟಿಜನ್​ ಸೀಟ್​ ಏಳಿ ಮೇಲೆ ಅಂತ ಆರ್ಡರ್​​ ಮಾಡಿದ್ರು.

ಸರಿ ಅಂತ ಪಕ್ಕದಲ್ಲಿ ಕೂತಿದ್ದ ಫ್ರೆಂಡ್​​​​ ಸೀಟ್​​ ಬಿಟ್ಟು ನಿಂತ್ಕೊಂಡ್ರು. ಆ ಅಂಕಲ್​​ಗೆ ಮನಸ್ಸಲ್ಲೇ ಇಬ್ರೂ ಬೈಕೊಂಡಿದ್ದೇನು ಸುಳ್ಳಲ್ಲ. ಯಾಕಂದ್ರೆ ಜೊತೆಗೆ ಮಾತಾಡ್ತಾ ಆರಾಮಾಗಿ ಹೋಗ್ತಿದ್ವು, ಇವ್ರು ಬಂದು ಎದ್ದೇಳಿಸಿದ್ರಲ್ಲ ಅಂತ ಸ್ವಲ್ಪ ಕೋಪ ಬೇಜಾರು ಎರಡು ಒಟ್ಟೊಟ್ಟಿಗೆ ಬಂತು. ಸಾಮಾನ್ಯವಾಗಿ ಬಸ್​​ ಫ್ರೆಂಟ್​​ ಅಲ್ಲಿ ಮಹಿಳೆಯರಿಗೆ ಹಿಂಬದಿ ಗಂಡಸರಿಗೆ ಸೀಟ್ಸ್​​ ಇರತ್ತೆ, ಬಟ್​​ ಇವ್ರು ಯಾಕೆ ಫ್ರೆಂಟ್​ ಸೀಟ್​​ ಗೆ ಬಂದು ಸೀಟ್​ ಬಿಡುಸ್ಕೊಂಡ್ರು….. ಘಾಟಿ ಮನುಷ್ಯ ಅನಿಸುತ್ತೆ!, ವಾದ ಬೇಡ ಅಂತ ಸುಮ್ಮನಾದ್ವಿ.

ಬಸ್​​ ಸ್ವಲ್ಪ ದೂರ ಕ್ರಮಿಸಿತ್ತು. ಒಬ್ಳೆ ಸುಮ್ನೆ ಕೂರೋಕೆ ಬೇಜಾರು, ಸೋ ಕಿವಿಗೆ ಇಯರ್​​ ಫೋನ್​​ ಸಿಕ್ಕಿಸಿ ಹಾಡು ಕೇಳ್ತಿದ್ದೆ. ಬಸ್​​ ಮುಂದೆ ಸಾಗ್ತಿತ್ತು, ನಿಧಾನವಾಗಿ ಅಂಕಲ್​​ ಮಾತು ಶುರುಮಾಡಿದ್ರು. ಇದು ಸೀನಿಯರ್​ ಸಿಟಿಜನ್​ ಸೀಟ್​​, ಯಾರು ಇಲ್ಲ ಅಂದ್ರೆ ಕುತ್ಕೋಳಿ… ಆದ್ರೆ ಯಾರಾದ್ರೂ ಸೀನಿಯರ್​ ಸಿಟಿಜನ್​ ಬಂದ್ರೆ ಅವ್ರಿಗೆ ಸೀಟ್​ ಬಿಟ್​ಕೊಡ್ಬೇಕು. ಬಸ್​​ನವ್ರು ಕೂಡ ಸರಿಯಾಗಿ ಬೋರ್ಡ್​​ ಹಾಕಿಲ್ಲ ರೂಲ್ಸ್​​ ಫಾಲೋ ಮಾಡಲ್ಲ, ರೂಲ್ಸ್​​ಬ್ರೇಕ್​​ ಮಾಡಿದ್ರೆ 5 ಸಾವಿರ ದಂಡ ಬೀಳುತ್ತೆ ಗೊತ್ತಾ ಅಂತ ಹೇಳುದ್ರು. ನಾನು ಹೂ ಗುಡುತ್ತಿದ್ದೆ. ಯಾಕೋ ಅವ್ರು ಮಾತಾಡುವಾಗ ನಾನು ಇಯರ್​​ ಫೋನ್​ ಹಾಕೋಳೋದು ಸಭ್ಯತೆ ಅಲ್ಲ ಅಂತ ನನ್ ಮನ್ಸು ನನ್ನೇ ಗುರಾಯುಸ್ತು. ಇಯರ್​ ಫೋನ್​ ತೆಗ್ದೆ. ನಾನು ಅಂಕಲ್​​ ಜೊತೆ ಮಾತಿಗಿಳಿದೆ.

ನನ್​​ ಬಗ್ಗೆ ಕೇಳಿದ್ರು ಹೇಳ್ದೆ. ಆಮೇಲೆ ಅವ್ರು ಮಾತಡಿದ್ರು. ಅದ್ಯಾಕೋ ಹಿರಿಜೀವಗಳು ಮನಸ್ಸಿಗೆ ತುಂಬಾ ಹತ್ರ ಆಗ್ತಾರೆ ನಂಗೆ. ಹಿರಿಯರು ಮಾತಾಡುವಾಗ ಮನಸ್ಸಿಟ್ಟು ಕೇಳ್ಬೇಕು ಅನಿಸುತ್ತೆ. ನಿಮಗೆ ಗೊತ್ತಾ ಅವ್ರು ಅಂಕಲ್​ ಅಂತ ಹೇಳ್ದೆ ಅಲ್ವಾ ಆಕ್ಚುಲಿ ಅವರ ವಯಸ್ಸು 73 ! ಹೆಸರು ಸೂರ್ಯನಾರಾಯಣ. ಎಕ್ಸ್​​ ಗವರ್ನಮೆಂಟ್​ ಎಂಪ್ಲೋಯ್ ​. ಅಗ್ರಿಕಲ್ಚರ್​​ ಡಿಪಾರ್ಟ್​​ಮೆಂಟ್​​ ನಲ್ಲಿ ಸೇವೆ ಸಲ್ಲಿಸಿ ಈಗ ರಿಟೇರ್ಡ್​ ಆಗಿದ್ದೀನಿ ಬೇಟಾ ಅಂದ್ರು. ನಾನು ಹೋ ಹೌದ ಅಂದೆ.

ನಂತ್ರ ಅವ್ರೇ ಮಾತು ಮುಂದುವರೆಸಿ ನಂಗೆ ಲಾಯರ್​​ ಆಗ್ಬೇಕು ಅಂತ ತುಂಬಾ ಆಸೆ ಇತ್ತು ಬೇಟಾ ನಾನು ಓದೋ ಟೈಮ್​​ನಲ್ಲಿ ಎಲ್ಲರ ಹತ್ರ ಹೇಳ್ಕೊಂಡು ಬರ್ತಿದೆ ನಾನ್​​ ಲಾಯರ್​ ಆಗ್ತೀನಿ ಅಂತ …..ಹಾಗ್​​ ಹೇಳುವಾಗ ಅವ್ರ ಮುಖದಲ್ಲಿ ಆ ಹುಮ್ಮಸ್ಸು ನೋಡ್ಬೇಕಿತ್ತು ಒಂದು ಕ್ಷಣ ಸ್ಕೂಲ್​ ಡೇಸ್​​ ಹಾಗೇ ಅವ್ರ ಕಣ್ಮುಂದೆ ಬಂತು ಅನಿಸುತ್ತೆ..ನಾನು ಕೇಳ್ದೇ ಯಾಕೆ ವಕೀಲರೇ ಆಗ್ಬೇಕು ಅನ್ಕೊಂಡ್ರಿ ಅಂತ.. ಅದುಕ್ಕೆ ಅವ್ರು ನನಗೆ ಅನ್ಯಾಯ ಸಹಿಸೋಕಾಗಲ್ಲ, ನಾನು ಲಾಯರ್​​ ಆಗಿ ನ್ಯಾಯ ಕೊಡುಸ್​ಬೇಕು ಅನ್ನೋದೆ ನನ್ನ ಗುರಿಯಾಗಿತ್ತು ಅದ್ಕೆ ಅಂದ್ರು. ಆಮೇಲೆ ಏನ್​ ಮಾಡೋದು ಬೇಟಾ ಅನ್ಕೋಳೋದೆ ಒಂದು ಆಗೋದೆ ಇನ್ನೊಂದು ಅಂದ್ರು. ನಾನು ಹೌದು ಅದಂತೂ ನಿಜ ಬಿಡಿ ಅಂದೆ.

ನಾನು ಈ ಮುತ್ತಿನ ನಗರಿಗೆ ಕಾಲಿಟ್ಟು 50 ವರ್ಷ ಕಳೆದಿದೆ. ನಾನ್​​ ಇಲ್ಲಿಗೆ ಬಂದಾಗ ಲಕ್ಷದಷ್ಟಿದ್ದ ಜನಸಂಖ್ಯೆ ಈಗ ನೋಡು ಕೋಟಿ ದಾಟಿದೆ ಅಂದ್ರು …. ಎಲ್ಲೇ ಹೋದ್ರು ಟ್ರಾಫಿಕ್​ ಕಿರಿಕಿರಿ ಕಷ್ಟ ಬೇಟಾ ಅಂದ್ರು. ಈಗ ಗರ್ವನ್ಮೆಂಟ್​ ಜಾಬ್​ ತಗೋಳೋದು ನಮ್ಮ ಕಾಲದಷ್ಟು ಸುಲಭವಲ್ಲ ಅಂದ್ರು. ಹೌದು ಅಂಕಲ್​​ ಜನಸಂಖ್ಯೆ ಜಾಸ್ತಿಯಾಗಿ, ಕಾಂಪಿಟೇಶನ್​​ ಜಾಸ್ತಿ ಆಗಿದೆ ಏನ್​​ ಮಾಡೋಕಾಗಲ್ಲ ಅಂದೆ.

ಹೀಗೆ ಮಾತು ಮುಂದುವರಿತಾ ಫ್ಯಾಮಿಲಿ ಬಗ್ಗೆ ಕೇಳಿದ್ರು. ಹೇಳ್ದೆ. ತಕ್ಷಣ ಆ ಅಂಕಲ್​​ ನಂಗೆ ಅಪ್ಪ ಅಮ್ಮ ಇಬ್ರೂ ಇಲ್ಲ ಬೇಟಾ.. ನಂಗೆ 14 ನೇ ವಯಸ್ಸಿದ್ದಾಗಲೇ ತಂದೆ ತೀರ್ಕೊಂಡ್ರು, ಆಮೇಲೆ 36 ನೇ ವಯಸ್ಸಲ್ಲಿ ತಾಯಿ ತೀರ್ಕೊಂಡ್ರು. ಈಗಲೂ ಅಮ್ಮ ನೆನೆದಾಗೆಲ್ಲಾ ಕಣ್ಣಲ್ಲಿ ನೀರ್​​ ಬರುತ್ತೆ ಬೇಟಾ ಅಂದಾಗ ಅವ್ರ ಕಣ್ಣಾಲಿ ಒದ್ದೆಯಾಗಿತ್ತು. ಯಾವತ್ತೂ ತಂದೆ-ತಾಯಿನಾ ನೋಯಿಸಬಾರದು ಬೇಟಾ ನಮಗೋಸ್ಕರ ಅವ್ರು ಎಷ್ಟೆಲ್ಲಾ ಕಷ್ಟ ಪಡ್ತಾರೆ ಗೊತ್ತಾ ಅಂದ್ರು. ನಾನು ಹೂ ಅಂಕಲ್​ ಅಂದೆ.

ನನ್​​ ಹೆಂಡ್ತಿ ಕೂಡ 56 ವರ್ಷ ಇರುವಾಗ ನನ್ನ ಒಂಟಿ ಮಾಡಿ ಮಧ್ಯರಾತ್ರಿನೇ ಬಿಟ್ಟು ಹೊರಟೋದ್ಲು. ಅವಳಿರ್​ಬೇಕಿತ್ತು ಬೇಟಾ. ಅಪ್ಪ -ಅಮ್ಮ ದೇವ್ರಗಿಂತ ಮಿಗಿಲು. ಅವ್ರನ್ನ ಬಿಟ್ರೆ ಹೆಂಡ್ತಿನೇ ಗ್ರೇಟ್​. ಗಂಡ ,ಮನೆ, ಮಕ್ಳು ಸಂಸಾರ ಎಲ್ಲಾ ನೋಡ್ಕೋತಾಳೆ . ಅವಳ ತರ ನಾವ್​​ ಕೆಲ್ಸ್ ಮಾಡೋಕಾಗಲ್ಲ, ಪ್ರತಿದಿನ ಅವಳ ನೆನಪು ಬರುತ್ತೆ ಬೇಟಾ ಅವ್ಳು ಮಧ್ಯರಾತ್ರಿ 12 : 30 ಗೆ ಹಾರ್ಟ್​​ ಅಟ್ಯಾಕ್​ ಆಗಿ ಹೋಗಿಬಿಟ್ಲು ಅಂತ ಅತ್ರು. ಈ ಇಳಿವಯಸ್ಸಲ್ಲೂ ಜೊತೆಗೆ ಬದುಕಿ ಅಗಲಿದ ಜೀವ ನೆನೆದು ಅವ್ರು ಕಣ್ಣೀರಿಟ್ಟಾಗ ಏನ್​​ ಹೇಳ್ಬೇಕು ಅಂತಾನೇ ಗೊತ್ತಾಗಲಿಲ್ಲ ನಂಗೆ.

ನಾನು ಮಕ್ಳು ಬಗ್ಗೆ ಕೇಳ್ದೆ ಇಬ್ರು ಮಕ್ಳು ಒಬ್ಲು ಮಗಳು , ಒಬ್ಬ ಮಗ. ಮದುವೆ ಆಗಿದೆ ನಾನು ಮಗನ ಮನೇಲಿ ಇದ್ದೀನಿ ಅಂದ್ರು. ಆದ್ರೆ ರೀಸೆಂಟ್​ ಆಗಿ ಅಳಿಯ ಕೂಡ ತೀರ್ಕೊಬಿಟ್ಟಾ ಅಂದ್ರು. ಹೌದಾ ಏನಾಗಿತ್ತು ಅಂದೆ ನಿಂಗೆ ಹೇಳ್ಬಾರ್ದು ಆದ್ರೂ ಹೇಳ್ತೀನಿ ಬೇಟಾ… ಅವ್ನು ಐಟಿ ಉದ್ಯೋಗಿ ಆದ್ರೂ ದಿನಾ ಕುಡಿತಾ ಇದ್ದ. ಲಿವರ್ ಡ್ಯಾಮೇಜ್​ ಆಗಿತ್ತು. 2 ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ರೀಟ್​​ಮೆಂಟ್​ ಕೊಡುಸ್ತೆ ಡಾಕ್ಟರ್​ ಇನ್ನೊಂದು ಆಪರೇಶನ್​ ಆಗ್ಬೇಕು ಅಂದ್ರು 40 ಲಕ್ಷ ಖರ್ಚಾಗುತ್ತೆ ಅಂದ್ರು. ನನ್​ ಪೆನ್ಷನ್​ ದುಡ್ಡು ಅದು ಇದು ಎಲ್ಲಾ ಸೇರಿ ಆಪರೇಶನ್​ ಮಾಡಿಸೋಕೆ ರೆಡಿ ಮಾಡ್ಕೋತ್ತಿದ್ದೊ.

ಆದ್ರೆ ಅಷ್ಟರಲ್ಲಿ ಅವನು ಸತ್ತು ಹೋದ ಅಂತ ಬೇಜಾರಲ್ಲಿ ಹೇಳಿದ್ರು.. ನನ್​ ಮಗಳು ನೋಡಿದ್ರೆ, ಮೊಮ್ಮಕ್ಕಳನ್ನು ನೋಡಿದ್ರೆ ಪಾಪ ಅನಿಸುತ್ತೆ ಬೇಟಾ, ನಾವೆಷ್ಟೇ ಪ್ರೀತಿ ತೋರಿಸಿದ್ರೂ ಮಗಳಿಗೆ ಗಂಡನ ಪ್ರೀತಿ ಕೊಟ್ಟಂಗೆ ಆಗುತ್ತಾ, ಮಕ್ಕಳಿಗೆ ತಂದೆಯ ಪ್ರೀತಿ ತುಂಬೋಕಾಗಲ್ಲ, ನೆನೆಸ್ಕೊಂಡ್ರೆ ತುಂಬಾ ಬೇಜಾರಾಗುತ್ತೆ ಬೇಟಾ ಅಂದ್ರು. ಯಾರೂ ಇಂಥ ಕೆಲ್ಸ ಮಾಡ್ಬಾರ್ದು, ಕುಡಿಬಾರದು,ಹೆಂಡ್ತಿ ಮಕ್ಕಳ ಬಗ್ಗೆ ಯೋಚ್ನೆ ಮಾಡ್ಬೇಕು ಅಂತ ಅವ್ರು ಹೇಳುವಾಗ ನಿಜ ಅದ್ರಿಂದ ಅವ್ರ ಮಗಳು, ಫ್ಯಾಮಿಲಿ ಅದೆಷ್ಟು ನೋವು ಅನುಭವಿಸ್ತಿದ್ದಾರೆ ಅನ್ನೋದು ಅವ್ರ ಮಾತುಗಳಲ್ಲೇ ಗೊತ್ತಾಗ್ತಿತ್ತು.

ಇನ್ನು ಮಗ ಖಾಸಗಿ ಕಂಪೆನಿ ಉದ್ಯೋಗಿ, ಬ್ಯುಸಿ, ಇನ್ನು ಮೊಮ್ಮಕ್ಕಳು ಸ್ಕೂಲು, ಕಾಲೇಜು… ನಂಗೆ ರಿಟೇರ್ಡ್​​ ಆಗಿದೆ ನೋಡು ನಾನು ಫ್ರೀ….ನಾನೋ ದಿನಕ್ಕೆ 12 ನ್ಯೂಸ್​ ಪೇಪರ್​ ಒದ್ತೀನಿ, ಬುಕ್ಸ್​ ಒದ್ತೀನಿ, ಅದ್ರಲ್ಲೇ ಇಡೀ ದಿನ ಕಳೀತೀನಿ, ತಿಂಗಳಿಗೆ 2000 ದಷ್ಟು ಬರೀ ಪೇಪರ್​,ಬುಕ್​ ಬಿಲ್ಲೇ ಆಗುತ್ತೆ, ನ್ಯೂಸ್​​ ಪೇಪರ್​​ ಓದದೇ ಹೋದ್ರೆ ನಂಗ್​ ಸಮಾಧಾನನೇ ಆಗಲ್ಲ ಬೇಟಾ ಅಂದ್ರು.

ಅದ್ಕೆ ನಾನು ಎಷ್ಟೇ ಆದ್ರೂ ಲಾಯರ್​​ ಆಗಬೇಕು ಅನ್ಕೋಂಡಿದ್ದೋರಲ್ವೆ ನೀವು ಅಂತ ಛೇಡಿಸಿದೆ, ಅವ್ರೂ ನಕ್ಕು. ಹೌದು ಬೇಟಾ ನಾನ್​​ ಲಾಯರ್​​ ಆಗ್ಬೇಕಿತ್ತು. ಆಗಿದ್ದಿದ್ರೆ ಈಗ ಹೈಕೋರ್ಟ್​​ ಅಲ್ಲಿ ಇರ್ತಾ ಇದ್ದೆ ಅಂತ ಮನಸಾರೆ ನಕ್ರು. ಓದ್​ಬೇಕು ಬೇಟಾ , ಪ್ರಪಂಚದ ಆಗು-ಹೋಗುಗಳನ್ನು ತಿಳ್ಕೋಬೇಕು, ಓದಿಲ್ಲಾ ಅಂದ್ರೆ ಪ್ರಾಣಿಗಳ ತರ ಆಗಿಬಿಡ್ತೀವಿ ಅವಕ್ಕೂ ನಮಗೂ ಏನೂ ವ್ಯತ್ಯಾಸ ಇರಲ್ಲ ಅಂದ್ರು ತೆಲುಗು,ಇಂಗ್ಲಿಷ್​​,ಹಿಂದಿಯನ್ನು ನಿರರ್ಗಳವಾಗಿ ಮಾತಾಡಬಲ್ಲ ಅವ್ರು 73 ರ ಹರೆಯದ ತಾತ ಅಲ್ಲ ಅಂಕಲ್!​

ಇನ್ನು ನಿಮ್ಮ ಜೊತೆ ಹುಟ್ಟಿದವ್ರು ಯಾರಿಲ್ವಾ ಅಂತ ಕೇಳ್ದೆ. ಒಮ್ಮೆಲೆ ಅವರ ಮುಖ ಅರಳಿತು . ನಾವ್​​ 9 ಜನ ಮಕ್ಕಳು, ಎಲ್ರೂ ಇದ್ದೀವಿ. ಆಂಧ್ರ, ವಿಜಯವಾಡ, ಸಿಂಗಾಪುರ್​, ಹೀಗೆ ಎಲ್ರೂ ಒಂದೊಂದು ಕಡೆ ಇದ್ದೀವಿ, ವರ್ಷಕ್ಕೆ ಒಂದು ಸಲ ತಂದೆ-ತಾಯಿ ಕಾರ್ಯ ಮಾಡುವಾಗ ಎಲ್ರೂ ಒಂದುಕಡೆ ಸೇರ್ತೀವಿ ಅಂದ್ರು.

ಇಷ್ಟೆಲ್ಲಾ ಮಾತಾಡೋ ಅಷ್ಟರಲ್ಲಿ ಅವ್ರು ಇಳಿಯುವ ಸ್ಟಾಪ್​ ಬಂತು. ಹೋಗುವಾಗ ಬೈ ಬೇಟಾ ಖುಷ್​ ರಹೋ, ದಿನ ಮಾತಾಡೋಕೆ ಯಾರೂ ಸಿಗಲ್ಲ, ಹೀಗೆ ಯಾರಾದ್ರೂ ಸಿಕ್ಕಿದ್ರೆ ​ಜರ್ನಿ ಮಾಡಿದ್ದೇ ಗೊತ್ತಾಗಲ್ಲ, ಒಬ್ರೆ ಇದ್ರಂತೂ ಇನ್ನೂ ಸ್ಟಾಪ್​ ಬಂದಿಲ್ವಾ ಅನಸುತ್ತೆ. ಈಗ ನೋಡು ನಾವಿಬ್ರೂ ಮಾತಾಡ್ಕೊಂಡು ಬಂದಿದ್ಕೆ ಸ್ಟಾಪ್​ ಬಂದಿದ್ದೆ ಗೊತ್ತಾಗಿಲ್ಲ ಅಂತ ನಕ್ರು. ಆಗ ನಾನು, ಬಸ್​​ ಹತ್ತುವಾಗ ಸಿಟ್ಟು ​​ ಮಾಡ್ಕೊಂಡು, ವಾದ ಮಾಡಿ ನಮ್​​ ಜೊತೆ ಸೀಟ್​​ ಬಿಡುಸ್ಕೊಂಡು ಕೂತ ಅದೇ ಸೂರ್ಯನಾರಾಯಣ್​ ಅಂಕಲ್​ ಬಸ್​​ ಇಳಿವಾಗ ಖುಷಿ-ಖುಷಿಯಾಗಿ ಇಳಿದಿದ್ದು ಕಂಡು ಒಂದು ಕ್ಷಣ ಖುಷಿಯಿಂದ ಮೌನಿಯಾದೆ.

ಆಗ ಅನಿಸಿದ್ದು, ಒಬ್ಬ ವ್ಯಕ್ತಿ ಅವನ ವ್ಯಕ್ತಿತ್ವನಾ ಒಂದೇ ಸಲ ಅಳೆಯೋಕೆ ಆಗಲ್ಲ. ಬರೀ ಯಾವುದೋ ಒಂದು ಘಟನೆಯಿಂದ ಒಂದು ಮಾತಿಂದ ಅವರು ಸರಿ ಇಲ್ಲ, ಹಾಗೇ ಹೀಗೆ ಅಂತ ಯಾವತ್ತೂ ಜಡ್ಜ್​​ ಮಾಡ್​​ಬಾರ್ದು, ಪ್ರತಿಯೊಬ್ಬರು ಮನಸ್ಸಲ್ಲೂ ಅವ್ರದೇ ಆದ ನೋವಿರುತ್ತೆ. ಮನದಾಳದ ಮಾತುಗಳನ್ನು ಕೇಳೋ ಯಾವುದೋ ಒಂದು ಜೀವನಾ ಆ ಕಂಗಳು ಹುಡುಕ್ತಿರುತ್ತೆ. ಒಂದು ವೇಳೆ ನಿಮಗೆ ಯಾವುದಾದರೂ ಹಿರಿಜೀವದ ಜೀವನದ ಅನುಭವನಾ, ಅಥವಾ ಅವ್ರ ನೋವನ್ನ ಕೇಳಿಸಿಕೊಳ್ಳೋ ಅವಕಾಶ ಸಿಕ್ರೆ ಅದಕ್ಕೆ ನೀವೂ ಕಿವಿಯಾಗಿ . ಯಾಕಂದ್ರೆ 73 ವರ್ಷಗಳ ತುಂಬು ಜೀವನ ನಡೆಸಿರೋರು ಅವ್ರಷ್ಟು ವಯಸ್ಸಿನವರೆಗೂ ಖಂಡಿತ ನಾವು ಬದ್ಕೋಕ್ಕಾಗಲ್ಲ, ಹಂಗಿದೆ ನಮ್​​ ಜೀವಿತಾವಧಿ ದರ , ಅಂತದ್ದರಲ್ಲಿ ಇಂತವರ ಅನುಭವಗಳೆ ನಮಗೆ ಮಾರ್ಗದರ್ಶನ ಆಗ್ಬೋದು, ಸ್ಫೂರ್ತಿ ಆಗಬಹುದು.

ಅಂದಹಾಗೇ ಅಂಕಲ್​​ ಒಟ್ಟಿಗಿನ ಇಷ್ಟೂ ಸಂಭಾಷಣೆ ನಡೆದಿದ್ದು, ಹಿಂದಿಯಲ್ಲಿ. ಆ ಭಾಷೇನೆ ನನಗೆ ಒಂದು ವಿಭಿನ್ನ ವ್ಯಕ್ತಿತ್ವದ ಪರಿಚಯ ಆಗೋಕೆ, ಬದುಕಿನ ಒಂದು ಅವಿಸ್ಮರಣೀಯ ಅನುಭವ ಆಗೋಕೆ ಕಾರಣ ಆಗಿದ್ದು, ನನ್ನ ನೆನಪಿನ ಬುತ್ತಿಗೊಂದು ಹೊಸ ವ್ಯಕ್ತಿಯ ಸೇರ್ಪಡೆಯಾಗುವಂತೆ ಮಾಡಿದ್ದು. ಒಂದು ವೇಳೆ ಯಾವುದೋ ಒಂದೇ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಬೇರೆ ಭಾಷೆಗಳನ್ನ ತಿರಸ್ಕಾರ ಮಾಡಿದ್ರೆ ಬಹುಶಃ ಬದುಕಲ್ಲಿ ಏನನ್ನೋ ಮಿಸ್​​ ಮಾಡ್ಕೋತ್ತಿವಿ ಅನಿಸುತ್ತೆ. ಹಾಗಾಗಿ ನಂಗೆ ಯಾವುದೇ ಬೇರೆ ಭಾಷೆ ಕಲಿಕೆ ಬಗ್ಗೆ ಎಂದಿಗೂ ತಕರಾರಿಲ್ಲ. ಸೋ ಯಾರ ಮುಲಾಜಿಲ್ಲದೇ ಹೇಳ್ತೀನಿ, ಇಂಗ್ಲಿಷ್​​, ಹಿಂದಿಯನ್ನೂ ಸಮಾನಾಗಿ ಪ್ರೀತಿಸುವ, ಗೌರವಿಸುವ ನಾನೊಬ್ಬಳು ಅಪ್ಪಟ ಕನ್ನಡತಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಅಂಕಣ16 hours ago

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ...

ದಿನದ ಸುದ್ದಿ2 days ago

ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ...

ದಿನದ ಸುದ್ದಿ4 days ago

ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು

ಮುಖ್ಯಾಂಶಗಳು ​ ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ ​ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್ ಸುದ್ದಿದಿನ,​ದಾವಣಗೆರೆ:...

ದಿನದ ಸುದ್ದಿ5 days ago

ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ 

ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ...

ದಿನದ ಸುದ್ದಿ6 days ago

ಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ

ಸುದ್ದಿದಿನ,ದಾವಣಗೆರೆ: ಪ್ರೀತಿಸಿ ವಿವಾಹವಾಗಿದ್ದ ದಂಪತಿ ಜೀವಭಯದಿಂದ ಪೊಲೀಸ್ ರಕ್ಷಣೆ ಕೋರಿ ಠಾಣೆಗೆ ಬಂದಿದ್ದ ವೇಳೆ, ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ...

ಅಂಕಣ1 week ago

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ....

ದಿನದ ಸುದ್ದಿ1 week ago

ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್‍ಒಗಳ ಭೇಟಿ ಪ್ರಾರಂಭ

ಸುದ್ದಿದಿನ,ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಾದ್ಯಂತ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಸ್.ಐ.ಆರ್. ಪ್ರಕ್ರಿಯೆ ಅತ್ಯಂತ ಚುರುಕಿನಿಂದ ಸಾಗುತ್ತಿದೆ. ಜಿಲ್ಲೆಯ ಒಟ್ಟು 7 ವಿಧಾನಸಭಾ...

ದಿನದ ಸುದ್ದಿ1 week ago

ಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾದಿಂದ ನಿರ್ಮಾಣ ಮಾಡಲು ಹೊರಟಿರುವ ವಸತಿ(ಹೊಸ ಲೇ ಔಟ್) ಯೋಜನೆಯನ್ನ ಈ ಕೂಡಲೇ ಕೈ ಬಿಡಬೇಕು ಎಂದು ರೈತರು ನಗರಾಭಿವೃದ್ದಿ...

ದಿನದ ಸುದ್ದಿ2 weeks ago

ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’

ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ ....

ದಿನದ ಸುದ್ದಿ2 weeks ago

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ...

Trending