ದಿನದ ಸುದ್ದಿ
ಪ್ರಜಾ ಪರಿವರ್ತನಾ ವೇದಿಕೆಯಿಂದ ಮಾ.14 ರಂದು ‘ಮೀಸಲಾತಿ ವಿವಾದ: ವಾಸ್ತವ ಸ್ಥಿತಿಗತಿಗಳು’ ಕುರಿತು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ
ಸುದ್ದಿದಿನ,ಬೆಂಗಳೂರು : ನಗರದ ವಸಂತ ನಗರದಲ್ಲಿನ ಅಂಬೇಡ್ಕರ್ ಭವನದಲ್ಲಿ ಮಾರ್ಚ್ 14 ರಂದು ಭಾನುವಾರ ‘ಮೀಸಲಾತಿ ವಿವಾದ: ವಾಸ್ತವ ಸ್ಥಿತಿಗತಿಗಳು’ ವಿಷಯಕ್ಕೆ ಕುರಿತಂತೆ ರಾಜ್ಯಮಟ್ಟದ ಸಮಾವೇಶವನ್ನು ಪ್ರಜಾ ಪರಿವರ್ತನಾ ವೇದಿಕೆಯು ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಭಾಗವಹಿಸಬೇಕೆಂದು ವೇದಿಕೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಮಾನ್ಯರೆ,
ಭಾರತ ಸ್ವಾತಂತ್ರ್ಯ ಪಡೆದು ಸಂವಿಧಾನವನ್ನು ಒಪ್ಪಿ ಜಾರಿಗೊಳಿಸಿದ ದಿನದಿಂದಲೂ ಮೀಸಲಾತಿಯ ವಿರುದ್ಧ ಅಪಸ್ವರಗಳನ್ನು ಮುಂದುಮಾಡುವ ಪರಿಪಾಠವನ್ನು ನಿರಂತರವಾಗಿ ಚಾಲ್ತಿಯಲ್ಲಿ ಇಡಲಾಗಿದೆ. ಇತ್ತೀಚೆಗೆ ಭಾರತದಾದ್ಯಂತ ಮೀಸಲಾತಿಯನ್ನು ವಿರೋಧಿಸುತ್ತಿದ್ದವರು ಸಹ ತಮಗೂ ಮೀಸಲಾತಿಯನ್ನು ನೀಡಬೇಕೆಂದು ಉಗ್ರ ಹೋರಾಟಕ್ಕೆ ಮುಂದಾಗುತ್ತಿದ್ದಾರೆ.
ಕರ್ನಾಟಕದಲ್ಲಿ ಬಲಾಢ್ಯ ಸಮುದಾಯಗಳು ಮಾತ್ರವಲ್ಲದೆ, ಮೀಸಲಾತಿಯನ್ನು ಅನುಭವಿಸುತ್ತಿರುವ ಸಮುದಾಯಗಳೂ ಮೀಸಲಾತಿಯಲ್ಲಿ ತಮ್ಮನ್ನು ಒಂದು ಪ್ರವರ್ಗದಿಂದ ಮತ್ತೊಂದು ಪ್ರವರ್ಗಕಗಕೆ ಸ್ಥಳಾಂತರಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿವೆ. ಇದರಲ್ಲಿ ಧಾರ್ಮಿಕ ಮುಖಂಡರು, ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಜಾತೀಯ ಸಮುದಾಯಗಳು ಒಗ್ಗಟ್ಟಾಗಿ ಬಲಪ್ರದರ್ಶನದಲ್ಲಿ ತೊಡಗಿವೆ.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಅವಕಾಶವಿದೆ. ಅದಕ್ಕೆ ಸಂವಿಧಾನವೂ ಸಹ ಬೆಂಬಲವಾಗಿದೆ. ಆದರೆ ಮೀಸಲಾತಿಯ ಮೂಲ ಆಶಯಗಳು ಇದರಲ್ಲಿ ಕಣ್ಮರೆಯಾಗುತ್ತಿರುವುದು ದುರಂತವೇ ಸರಿ. ಇತ್ತೀಚೆಗಷ್ಟೇ ಮೇಲ್ವರ್ಗದಲ್ಲಿನ ಬಡವರಿಗೆ ಶೇ 10. ಮೀಸಲಾತಿಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿಷಯ ಮಂಡಿಸಿ ಯಾವ ವಿರೋಧವೂ ಇಲ್ಲದಂತೆ ಸಂವಿಧಾನಕ್ಕೆ ತಿದ್ದುಪಡಿ ತಂದು ಜಾರಿಗೊಳಿಸಿದೆ. ಇದಕ್ಕೆ ಯಾವುದೇ ರೀತಿಯ ಹೋರಾಟ, ಹಕ್ಕೊತ್ತಾಯ, ಅಧ್ಯಯನ ಸಮಿತಿ ವರದಿ, ವೈಜ್ಞಾನಿಕ ಅಧ್ಯಯನ ಅಥವಾ ಸಾಮಾಜಿಕ ಒತ್ತಡಗಳಾಗಲಿ ಇರಲಿಲ್ಲ. ಆಳುವ ಸರ್ಕಾರದ ಹಿತಾಸಕ್ತಿ ಇದಾಗಿತ್ತು ಎಂಬುದನ್ನು ನೆನಪಿನಲ್ಲಿಡಬೇಕು.
ಮೀಸಲಾತಿಯು ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಸಾಮಾಜಿಕ ಆರ್ಥಿಕ ಅಸಮಾನತೆ ಮತ್ತು ಅವಗಣನೆಗೆ ಒಳಪಟ್ಟಿರುವ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಸುವ ಒಂದು ಉಪಕ್ರಮ. ಜಾತಿಗ್ರಸ್ಥವಾಗಿರುವ ಸಮಾಜವನ್ನು ಜಾತಿರಹಿತವಾಗಿ ರೂಪಿಸುವ ಮಹತ್ವಾಕಾಂಕ್ಷೆಯ ತುಡಿತ ಮೀಸಲಾತಿಯ ಅಂತರಂಗದಲ್ಲಿದೆ.
ಈ ಮೂಲಕ ಪ್ರತಿಯೊಬ್ಬರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವ ಮೂಲಕ ಪ್ರಬುದ್ಧ ಭಾರತವನ್ನು ನಿರ್ಮಿಸುವ ಸಂಕಲ್ಪ ಮೀಸಲಾತಿಯದ್ದಾಗಿದೆ, ಇಂಥ ಆಶಯಗಳನ್ನು ಗೊಂದಲಗೊಳಿಸಿ ಜಾತಿ– ಮತಗಳ ನಡುವೆ ದ್ವೇಷ, ವೈಷಮ್ಯಗಳನ್ನು ಹರಡಿ ಜಾತಿವ್ಯವಸ್ಥೆಯನ್ನು ಮತ್ತಷ್ಟು ಜಟಿಲಗೊಳಿಸುವ ಆಯುಧವನ್ನಾಗಿ ಮೀಸಲಾತಿಯನ್ನು ಬಳಸಲಾಗುತ್ತಿದೆ.
ಪ್ರಸ್ತುತ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಗಳನ್ನು ನ್ಯಾಯಸಮ್ಮತ ಎಂದು ಭಾವಿಸಿದರೂ ಪ್ರಾಯೋಗಿಕವಾಗಿ ಅಸಂಬದ್ಧವಾಗಿದೆ ಎನ್ನುವುದು ವಾಸ್ತವ ಸತ್ಯ. ಇದು ಅನೇಕರಿಗೆ ಮನವರಿಕೆಯಾಗಿರುವ ಸಾಧ್ಯತೆಯಿದೆ. ಏಕೆಂದರೆ ಸರ್ವೋಚ್ಚ ನ್ಯಾಯಾಲಯವು ‘‘ಇಂದಿರಾ ಸಹಾನಿ’’ ಪ್ರಕರಣದಲ್ಲಿ ಮೀಸಲಾತಿಯ ಪ್ರಮಾಣ ಒಟ್ಟು ಶೇ. 50 ಮೀರಬಾರದು ಎಂಬ ನಿರ್ಬಂಧವನ್ನು ಹೇರಿದೆ.
ಅಗತ್ಯವಿದ್ದರೆ ಕೇಂದ್ರ ಸರ್ಕಾರ ಕ್ರಮಬದ್ಧವಾದ ರೀತಿಯಲ್ಲಿ ಶಾಸನಾತ್ಮಕವಾಗಿ ಮಿತಿಯನ್ನು ಮೀರಿ ಪ್ರಮಾಣವನ್ನು ಹೆಚ್ಚಳಗೊಳಿಸುವ ಅವಕಾಶ ಇದ್ದೇ ಇದೆ. ಸಂವಿಧಾನದ 340ನೇ ವಿಧಿಯನ್ವಯ ಸಮುದಾಯಗಳ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕ ವಿಧಿ ವಿಧಾನಗಳಿಂದ ದೃಢೀಕರಿಸಿ ನ್ಯಾಯಸಮ್ಮತವಾಗಿ ಅರ್ಹರಾದವರಿಗೆ ಮೀಸಲಾತಿಯನ್ನು ವಿಸ್ತರಿಸುವುದಕ್ಕೆ ಸಾಧ್ಯವಿದೆ.
ಇದು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರದ ಮಟ್ಟದಲ್ಲಿಯೇ ಇತ್ಯರ್ಥವಾಗಬೇಕಾದ ವಿಷಯ. ಅಂದರೆ ಸಂವಿಧಾನಾತ್ಮಕವಾಗಿ ಮೀಸಲಾತಿ ಪ್ರಮಾಣ ಹೆಚ್ಚಾದಲ್ಲಿ ಮಾತ್ರ ಮೀಸಲಾತಿಗಾಗಿ ನಡೆಸುತ್ತಿರುವ ಹಕ್ಕೊತ್ತಾಯಗಳು ಫಲಪ್ರದವಾಗುತ್ತವೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಆದರೆ ಈ ನಿಟ್ಟಿನಲ್ಲಿ ಯಾವುದೇ ಬಗೆಯ ಹೋರಾಟಗಳೂ ನಡೆಯುತ್ತಿಲ್ಲ.
ಮೀಸಲಾತಿ ವಿವಾದಗಳಿಲ್ಲನ ಮತ್ತೊಂದು ವಿರೋಧಾಭಾಸ ಏನೆಂದರೆ ಬಂಡವಾಳಶಾಹಿ ವ್ಯವಸ್ಥೆಯನ್ನು ಸದೃಢಗೊಳಿಸಿ ತೀವ್ರತರವಾಗಿ ಖಾಸಗೀಕರಣಕ್ಕೆ ಮುಕ್ತಗೊಳಿಸುತ್ತಿರುವುದು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಒಪ್ಪಿಸಿ ಮೀಸಲಾತಿ ವ್ಯವಸ್ಥೆಗೆ ಅಂತ್ಯ ಹಾಡಲಾಗುತ್ತಿದೆ. ಈಗಾಗಲೇ ಶಿಕ್ಷಣ ಕ್ಷೇತ್ರವನ್ನು ಬಹುಪಾಲು ಖಾಸಗೀ ಬಂಡವಾಳಿಗರ ವ್ಯಾಪಾರೀ ಕ್ಷೇತ್ರವನ್ನಾಗಿಸುವುದು ಸೂರ್ಯ ಸ್ಪಷ್ಟವಾಗಿದೆ.
ಅಳಿದುಳಿದ ಸರ್ಕಾರಿ ವಲಯದಲ್ಲಿಯೂ ನೇಮಕಾತಿಗಳನ್ನು ಮಾಡದೆ ಗುತ್ತಿಗೆ ಹೊರಗುತ್ತಿಗೆ ಪದ್ಧತಿಯನ್ನು ಜಾರಿಗೊಳಸಿಲಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ ಶಿಕ್ಷಣ ಮತ್ತು ಉದ್ಯೋಗಗಳಲ್ಲಿನ ಮೀಸಲಾತಿಗಾಗಿ ಹಂಬಲಿಸುವುದೇ ಬಹುದೊಡ್ಡ ವೈರುಧ್ಯವಾಗಿ ಪರಿಣಮಿಸಿದೆ. ಬೃಹದಾಕಾರದಲ್ಲಿ ವಿಸ್ತಾರವಾಗುತ್ತಿರುವ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿಯನ್ನು ಹೊಂದಬೇಕಾದ್ದು ಇಂದಿನ ಅಗತ್ಯ. ಮೀಸಲಾತಿ ಹೋರಾಟಗಳು ಅನಿವಾರ್ಯವಾಗಿ ಖಾಸಗೀ ಕ್ಷೇತ್ರದ ಮೀಸಲಾತಿಗಾಗಿ ಸಂಘಟಿತಗೊಳ್ಳಬೇಕಾದ ತುರ್ತು ಇಂದಿನದಾಗಿದೆ.
ಇದನ್ನೂ ಓದಿ | ಆತ್ಮನಿರ್ಭರ ಭಾರತದ ಆತ್ಮವಂಚಕ ಮುಖಗಳು..!
ಮೀಸಲಾತಿಯ ಹೆಚ್ಚಳ ಮತ್ತು ಖಾಸಗೀ ವಲಯವನ್ನು ಮೀಸಲಾತಿ ತೆಕ್ಕೆಗೆ ಸೇರಿಸಿಕೊಳ್ಳುವುದಕ್ಕಿಂತಲೂ ಬಹುದೊಡ್ಡ ವ್ಯಂಗ್ಯ ಮತ್ತೊಂದಿದೆ. ಅದೇನೆಂದರೆ ಸಂವಿಧಾನದತ್ತವಾಗಿಯೇ ಪರಿಶಿಷ್ಟಜಾತಿ– ಪರಿಶಿಷ್ಟವರ್ಗಗಳು ಹಿಂದುಳಿದ ವರ್ಗಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆಂದು ನಿಗಧಿಯಾಗಿದ್ದ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗಳಿಸದಿರುವುದು. ಈ ವರ್ಗಗಳಿಗೆಂದು ಶೇ. 50 ಮೀರದಂತೆ ಕರ್ನಾಟಕದಲ್ಲಿ ಒಟ್ಟು ಶೇ. 49.5 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ.
ಆದರೆ ಇದರಲ್ಲಿ ಜಾರಿಯಾಗಿರುವ ಪ್ರಮಾಣವೆಂದರೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿ ಶೇ.12 ಜಾರಿಯಾಗಿದೆ ಇನ್ನೂ ಶೇ. 6 ಖಾಲಿಯಿದೆ. ಇತರೆ ಹಿಂದುಳಿದ ವರ್ಗಗಳಿಗೆ ಶೇ 5 ಜಾರಿಗೊಳಸಿದ್ದು ಖಾಲಿಯಿರುವ ಪ್ರಮಾಣ ಶೇ 22 ಇದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಜಾರಿಗೊಳಿಸಿರುವುದು ಶೇ 2.5 ಖಾಲಿಯಿರುವುದು ಶೇ 2 ಅಂದರೆ ಮೀಸಲಾತಿಯಲ್ಲಿ ಜಾರಿಯಾಗಿರುವ ಒಟ್ಟು ಪ್ರಮಾಣ ಕೇವಲ ಶೇ. 19.5 ಮಾತ್ರ. ಇನ್ನೂ ಶೇ 30ರಷ್ಟು ಮೀಸಲಾತಿಯೇ ಭರ್ತಿಯಾಗಿರುವುದಿಲ್ಲ. ಈ ಅಂತರ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ವಿಸ್ತಾರಗೊಳ್ಳುತ್ತದೆ.
ಈ ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಧರ್ಮ, ಜಾತಿ, ಉಪಜಾತಿಗಳ ನಡುವೆ ಮೀಸಲಾತಿ ವಿಷಯವನ್ನು ನೆಪಮಾಡಿ ಅಸಹನೆಯನ್ನು ತುಂಬುತ್ತಿರುವುದು ಯಾವ ನ್ಯಾಯ? ಈ ರೀತಿಯ ಕಟುವಾಸ್ತವಗಳನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕಿದೆ. ನಮ್ಮ ನಡುವಿನ ಸಾಮಾಜಿಕ ಆರ್ಥಿಕ ರಾಜಕೀಯ ವಿದ್ಯಾಮಾನಗಳು ಮಾನವೀಯವಾದ ಮೌಲ್ಯಗಳನ್ನು ಕಳೆದುಕೊಂಡು ಸಮಯಕ್ಕೊಂದು ಸುಳ್ಳನ್ನು ಹೆಣೆದು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿವೆ.
ಆಳುವ ಸರ್ಕಾರಗಳಿಗೆ ಇದೊಂದು ಅಸ್ತ್ರವಾಗಿ ಪರಿಣಮಿಸಿದೆ. ದೇಶದ ಜನತೆಯನ್ನು ಗೊಂದಲದಲ್ಲಿ ದೂಡಿ ಅತಂತ್ರಗೊಳಸಿ ವರ್ಣಾಶ್ರಮ ವ್ಯವಸ್ಥೆಯನ್ನು ಶಾಶ್ವತಗೊಳಿಸುವ ಹುನ್ನಾರದಲ್ಲಿವೆ. ಇನ್ನಾದರೂ ನಾವೆಲ್ಲ ಇದನ್ನು ಅರ್ಥಮಾಡಿಕೊಂಡು ಒಗ್ಗಟ್ಟಾಗಿ ಸಂವಾದ ಸಂಘರ್ಷವನ್ನು ಕಟ್ಟುವ ಮೂಲಕ ಆಳುವ ವ್ಯವಸ್ಥೆಯನ್ನು ಎಚ್ಚರಿಸಬೇಕಾಗಿದೆ.
’ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಿ; ಇಲ್ಲವಾದರೆ ಅಧಿಕಾರವನ್ನು ತ್ಯಜಿಸಿ‘ ಎಂದು ಕೇಳುವ ಸ್ಥಿತಿ ಬಂದಿದೆ. ಜನತಂತ್ರದಲ್ಲಿ ಜನರದ್ದೇ ಪರಮಾಧಿಕಾರ ಎಂಬ ಸತ್ಯವನ್ನು ಸಾಕಾರಗೊಳಿಸೋಣ. ಪ್ರಜಾಪ್ರಭುತ್ವವನ್ನು ಉಳಿಸೋಣ ಎಲ್ಲರೂ ಬನ್ನಿ; ನಿಮ್ಮವರನ್ನೇಲ್ಲ ಕರೆ ತನ್ನಿ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ.
–ಪ್ರಜಾ ಪರಿವರ್ತನಾ ವೇದಿಕೆ, ಕರ್ನಾಟಕ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243