Connect with us

ದಿನದ ಸುದ್ದಿ

ಆತ್ಮನಿರ್ಭರ ಭಾರತದ ಆತ್ಮವಂಚಕ ಮುಖಗಳು..!

Published

on

  • ನಾ ದಿವಾಕರ

ಒಂದು ಪ್ರಜಾಸತ್ತಾತ್ಮಕ ಗಣತಂತ್ರದ ಸಂಸದೀಯ ಪ್ರಜಾಸತ್ತೆಯ ಚೌಕಟ್ಟಿನಲ್ಲಿ , ಪ್ರಜೆಗಳಿಂದಲೇ ಚುನಾಯಿತವಾದ ಸರ್ಕಾರ ಆಡಳಿತ ನಡೆಸುತ್ತಿರುವ ದೇಶದಲ್ಲಿ, ಸಾರ್ವಭೌಮ ಪ್ರಜೆಗಳ ಒಂದು ವರ್ಗ ತನ್ನ ನ್ಯಾಯಯುತ ಹಕ್ಕುಗಳಿಗಾಗಿ ನೂರು ದಿನಗಳ ಕಾಲ ಮುಷ್ಕರ ನಡೆಸುವುದು ಪ್ರಜಾಸತ್ತೆಯ ಜೀವಂತಿಕೆಗೆ ಸಾಕ್ಷಿ. ಹಾಗೆಯೇ ಆಳುವ ವರ್ಗಗಳ ನಿಷ್ಕ್ರಿಯತೆಗೂ ಸಾಕ್ಷಿ. ಪ್ರಜಾಸತ್ತೆಯ ಜೀವಂತಿಕೆಯ ಹಿಂದೆ 220 ಜೀವಗಳ ಬಲಿದಾನ, ಲಕ್ಷಾಂತರ ರೈತರ, ಸಾವಿರಾರು ರೈತ ಕುಟುಂಬಗಳ ಬವಣೆ, ಜನಸಾಮಾನ್ಯರ ನೋವು ಅಡಗಿರುವುದನ್ನು ಗಮನಿಸಿದಾಗ ಈ ಜೀವಂತಿಕೆಯ ಔಚಿತ್ಯವೇ ಪ್ರಶ್ನಾರ್ಹವಾಗಿಬಿಡುತ್ತದೆ.

ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನೂರು ದಿನಗಳ ಕಾಲ ಬಿಸಿಲು, ಮಳೆ, ಚಳಿ ಲೆಕ್ಕಿಸದೆ, ಪ್ರಭುತ್ವದ ದಮನಕಾರಿ ನೀತಿಗಳನ್ನು ದಿಟ್ಟತನದಿಂದ ಎದುರಿಸಿ, ದೆಹಲಿಯ ಗಡಿಗಳಲ್ಲಿ ಕುಳಿತಿರುವ ಲಕ್ಷಾಂತರ ರೈತರು ಇಂದಿಗೂ ಬಸವಳಿದಿಲ್ಲ, ಅವರ ಉತ್ಸಾಹ ಕುಂದಿಲ್ಲ ಎನ್ನುವುದನ್ನು ಗಮನಿಸಿದಾಗ ಪ್ರಜಾಸತ್ತೆಯ ಉಳಿವು ಇರುವುದು ಯಾರ ಕೈಯ್ಯಲ್ಲಿ ಎನ್ನುವುದು ಸ್ಪಷ್ಟವಾಗುತ್ತದೆ. ಹೌದು, ಭಾರತದಲ್ಲಿ ಪ್ರಜಾಸತ್ತೆ ಉಳಿದಿದೆ ಎನ್ನುವುದೇ ಆದರೆ ಅದು ಈ ದೇಶದ ಶೋಷಿತ ವರ್ಗಗಳ, ದಮನಿತ ಜನಸಮುದಾಯಗಳ ಮತ್ತು ಅನ್ಯಾಯಕ್ಕೊಳಗಾದ ಶ್ರಮಜೀವಿಗಳ ದೃಢ ನಂಬಿಕೆ ಮತ್ತು ವಿಶ್ವಾಸದಿಂದ ಮಾತ್ರ.

ಪ್ರಜಾತಂತ್ರವನ್ನು ಗ್ರಾಂಥಿಕವಾಗಿ ಉಳಿಸಲು ಆಳುವ ವರ್ಗಗಳು ಪ್ರಯತ್ನಿಸುತ್ತಲೇ ಇವೆ. ಆದರೆ ಸಾಂಸ್ಥಿಕವಾಗಿ ಪ್ರಜಾಸತ್ತೆ ಶಿಥಿಲವಾಗುತ್ತಲೇ ಇದೆ. ಈ ಶಿಥಿಲ ಸಾಂಸ್ಥಿಕ ನೆಲೆಗಳನ್ನು ಬಲಪಡಿಸುವ ಹೊಣೆ ಇದೇ ಹೋರಾಟನಿರತ ಜನತೆಯ ಮೇಲಿದೆ. ಈ ದ್ವಂದ್ವದ ನಡುವೆಯೇ ಆತ್ಮನಿರ್ಭರ ಭಾರತ ಮತ್ತೊಂದು ಹೊಸ ಪರ್ವವನ್ನು ಪ್ರವೇಶಿಸುತ್ತಿದೆ.

“ ರೈತರು ನೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ, ನಮ್ಮ ಸರ್ಕಾರ ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಂಡಿಲ್ಲ ” ಎಂದು ಎದೆತಟ್ಟಿ ಹೇಳಿಕೊಳ್ಳುವ ನೈತಿಕತೆಯನ್ನು ಕೇಂದ್ರ ಸರ್ಕಾರ ಎಂದೋ ಕಳೆದುಕೊಂಡುಬಿಟ್ಟಿದೆ. ಏಕೆಂದರೆ ಈ ಮುಷ್ಕರ ನಿರತ ರೈತರು ಅಶ್ರುವಾಯು, ಜಲಫಿರಂಗಿ, ರಸ್ತೆ ಕಂದಕಗಳು, ಬೃಹತ್ ತಡೆಗೋಡೆಗಳು, ಮುಳ್ಳಿನ ಬೇಲಿಗಳು, ಪೊಲೀಸರ ಲಾಠಿ ಪ್ರಹಾರ ಮತ್ತು ಶರಮಂಚದ ಹಾಸುಗಳನ್ನೂ ದಾಟಿ ಮುನ್ನಡೆದಿದ್ದಾರೆ.

ಇಡೀ ದೇಶದ ಜನತೆ ‘ ಅನ್ನದಾತ ’ ಎಂದು ಗೌರವಿಸುವ ರೈತಾಪಿಯನ್ನು ಖಲಿಸ್ತಾನಿ, ಪಾಕಿಸ್ತಾನಿ, ದೇಶದ್ರೋಹಿ, ನಗರ ನಕ್ಸಲರು ಎಂದು ಹೀಗಳೆಯುವ ಮೂಲಕ ಅಪಮಾನಿಸುತ್ತಲೇ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ ಒಂದು ಸರ್ಕಾರ ತನ್ನ ತಣ್ಣನೆಯ ಕ್ರೌರ್ಯಕ್ಕೆ ತಾನೇ ನಾಚಿ ತಲೆ ತಗ್ಗಿಸುವಂತಾಗಿರುವುದು ಸ್ಪಷ್ಟ.

ಭಾರತದ ರೈತರ ಪಾಲಿಗೆ, ಜನಸಾಮಾನ್ಯರ ಪಾಲಿಗೆ ಮತ್ತು ಸಮಸ್ತ ಕೃಷಿ ಚಟುವಟಿಕೆಗಳ ದೃಷ್ಟಿಯಿಂದ ಮರಣ ಶಾಸನವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ರೈತ ಸಮುದಾಯದ ಆಗ್ರಹಕ್ಕೆ ಮಾನ್ಯತೆಯನ್ನೇ ನೀಡದೆ ಕಾಲಹರಣ ಮಾಡುತ್ತಿರುವ ಕೇಂದ್ರ ಸರ್ಕಾರ ಚಳುವಳಿಯನ್ನು ವಿಫಲಗೊಳಿಸಲು ವಿಭಿನ್ನ ವಾಮ ಮಾರ್ಗಗಳನ್ನು ಅನುಸರಿಸುತ್ತಿರುವುದು ಈ ತಣ್ಣನೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.

ಸರ್ಕಾರ ಯಾರನ್ನು ಉದ್ದೇಶಿಸಿ ಅಥವಾ ಯಾರ ಏಳಿಗೆಗಾಗಿ ಹೊಸ ಕಾಯ್ದೆಗಳನ್ನು ಜಾರಿಗೊಳಿಸಿರುವುದೋ, ಆ ಜನಸಮುದಾಯಗಳೇ ಈ ಕಾಯ್ದೆಯ ಕರಾಳ ಸ್ವರೂಪವನ್ನು ಬಹಿರಂಗಪಡಿಸಿ, ಇದು ಹೇಗೆ ಇತರ ಜನಸಾಮಾನ್ಯರ ಜೀವನೋಪಾಯಕ್ಕೂ ಸಂಚಕಾರ ತರುತ್ತದೆ ಎನ್ನುವುದನ್ನು ನಿರೂಪಿಸಿದ ನಂತರವೂ, ಈ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂಬ ಹಠಮಾರಿ ಧೋರಣೆ ಪ್ರದರ್ಶಿಸುವುದು ಸರ್ವಾಧಿಕಾರದ ಲಕ್ಷಣ.

ಈ ಹಠಮಾರಿ ಧೋರಣೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ, ರೈತರ ಹೋರಾಟ ಮತ್ತು ಬೇಡಿಕೆಗಳನ್ನು ಬೆಂಬಲಿಸಿದವರೆಲ್ಲರೂ ದೇಶದ್ರೋಹಿಗಳು ಎಂದು ಬಿಂಬಿಸುವುದು ತಣ್ಣನೆಯ ಕ್ರೌರ್ಯದ ಅಮಾನುಷ ಸ್ವರೂಪ. ಈ ಎರಡೂ ಧೋರಣೆಗಳು ಪ್ರಜಾಸತ್ತೆಗೆ ಶೋಭಿಸುವುಂತಹುದಲ್ಲ.

ಭಾರತದ ಪ್ರಜಾತಂತ್ರ ವ್ಯವಸ್ಥೆ ಪರ್ವಕಾಲದಲ್ಲಿದೆ ಎನಿಸಲು ರೈತ ಮುಷ್ಕರವೊಂದೇ ಕಾರಣವಲ್ಲ. ಇಂದು ಸಮೂಹ ಸನ್ನಿಗೊಳಗಾದ ಮಧ್ಯಮ ವರ್ಗಗಳ ಹಿತವಲಯಗಳನ್ನು ಹೊರತುಪಡಿಸಿ, ದೇಶದ ಸಮಸ್ತ ಜನತೆ, ಶ್ರಮಜೀವಿ ವರ್ಗಗಳು, ದುಡಿಯುವ ವರ್ಗಗಳು ಮತ್ತು ಶೋಷಿತ ಸಮುದಾಯಗಳು ಅನಿಶ್ಚಿತತೆಯನ್ನು ಎದುರಿಸುತ್ತಿವೆ.

ಸಾಮಾಜಿಕ-ಆರ್ಥಿಕ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸದಿದ್ದರೆ ರಾಜಕೀಯ ಸಮಾನತೆ ಅಥವಾ ರಾಜಕೀಯ ನ್ಯಾಯ ಅರ್ಥಹೀನವಾಗುತ್ತದೆ ಎಂದು ಡಾ ಅಂಬೇಡ್ಕರ್ ಹೇಳಿರುವುದನ್ನು ಇಂದು ಮತ್ತೊಮ್ಮೆ ನೆನೆಯಬೇಕಿದೆ. ಭಾರತ ಇಂದು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಹೊಸಕಿ ಹಾಕುವ ಹೊಸ ಮಾರ್ಗವನ್ನು ಅನುಸರಿಸುತ್ತಿದೆ.

ಅಧಿಕಾರ ರಾಜಕಾರಣದ ನೆಲೆಯಲ್ಲಿ ನಿಂತು ನೋಡಿದರೆ ಇಂದು ಭಾರತ ಸುಸ್ಥಿರ ಸರ್ಕಾರ ಮತ್ತು ಸುಸ್ಥಿರ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಆದರೆ ಈ ಸುಸ್ಥಿರತೆಯ ಮಂಜಿನ ಪರದೆಯನ್ನು ಸರಿಸಿ ನೋಡಿದಾಗ ಅರಾಜಕತೆ ತಾಂಡವಾಡುತ್ತಿರುವುದೂ ಕಾಣುತ್ತದೆ.

ಆಡಳಿತಾರೂಢ ಸರ್ಕಾರವನ್ನು ‘ ಭಾರತ ದೇಶ ’ಕ್ಕೆ ಸಮೀಕರಿಸುವ ಮೂಲಕ ಸರ್ಕಾರವನ್ನು, ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುವುದೇ ದೇಶದ್ರೋಹ ಎನ್ನುವ ಅಭಿಪ್ರಾಯ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಹಾಗಾಗಿಯೇ ಕೃಷಿ ಕಾಯ್ದೆಯನ್ನು ವಿರೋಧಿಸುವ ಪರಿಸರ ಹೋರಾಟಗಾರ್ತಿ ದಿಶಾ ರವಿ ರಾತ್ರೋರಾತ್ರಿ ಬಂಧನಕ್ಕೊಳಗಾಗಿ, ದೇಶದ್ರೋಹದ ಆರೋಪ ಎದುರಿಸಬೇಕಾಗುತ್ತದೆ.

ಆತ್ಮನಿರ್ಭರ ಭಾರತದಲ್ಲಿ ಜನಸಾಮಾನ್ಯರ ಬದುಕು ದುರ್ಭರವಾಗುತ್ತಿರುವುದನ್ನು ಕಂಡೂ ಕಾಣದಂತೆ ವ್ಯಕ್ತಿ ಪೂಜೆಯಲ್ಲಿ ತೊಡಗಿರುವ ಭಾರತದ ಬಹುದೊಡ್ಡ ಮಧ್ಯಮ ವರ್ಗ ಇಂದು ತಲೆತಗ್ಗಿಸಿ ನಿಲ್ಲುವಂತಾಗಿದೆ. ಜನರು ದಿನನಿತ್ಯ ಬಳಸುವ ಅವಶ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರುತ್ತಲೇ ಇವೆ. ಇಂಧನ ಬೆಲೆಗಳು ಕೈಗೆಟುಕದಂತಾಗುತ್ತಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ ಗಡಿ ದಾಟುವುದರಲ್ಲಿದೆ.

ಡೀಸೆಲ್ ಬೆಲೆಗಳು ಇದರೊಂದಿಗೆ ಪೈಪೋಟಿ ನಡೆಸುತ್ತಿವೆ. ಅಡುಗೆ ಅನಿಲ 1000ದ ಗಡಿ ದಾಟುವುದರಲ್ಲಿದೆ. ಬೇಳೆ ಕಾಳುಗಳು, ಅಡುಗೆ ಎಣ್ಣೆ ಬೆಲೆಗಳು ಗಗನಕ್ಕೇರಿವೆ. ಇದು ಮುಕ್ತ ಮಾರುಕಟ್ಟೆ ನೀತಿಯ ಪರಿಣಾಮ ಎನ್ನುವ ಸಾಮಾನ್ಯ ಪರಿಜ್ಞಾನಕ್ಕೆ ಅರ್ಥಶಾಸ್ತ್ರದ ಪರಿಣತಿಯೇನೂ ಬೇಕಿಲ್ಲ. ಭಾರತದಲ್ಲಿ ಈ ರೀತಿಯ ಬೆಲೆ ಏರಿಕೆ ಹೊಸತೂ ಅಲ್ಲ.

ಆದರೆ ಹೊಸತಾಗಿ ಕಾಣುವುದು ಮಧ್ಯಮ ವರ್ಗಗಳ ನಿಷ್ಕ್ರಿಯ ಮೌನ. ತಾವೇ ಕಟ್ಟಿ ಬೆಳೆಸಿದ ಬದುಕು ಕಟ್ಟಿಕೊಡುವ ಸಾಂಸ್ಥಿಕ ನೆಲೆಗಳು ತಮ್ಮ ಕಣ್ಣೆದುರಿನಲ್ಲೇ ಹರಾಜು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವುದನ್ನು ‘ ದೇಶದ ಒಳಿತಿಗಾಗಿ ’ ಸಹಿಸಿಕೊಳ್ಳುವುದು ಬೌದ್ಧಿಕ ದಾರಿದ್ರ್ಯದ ಸಂಕೇತ. ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಗಳು ಹಿಂದೆಂದೂ ಈ ಸಹನೆ (?)ಯನ್ನು ತೋರಿರುವ ಉದಾಹರಣೆಗಳಿಲ್ಲ.

ಈ ಬೆಲೆ ಏರಿಕೆಗೆ ಕೇಂದ್ರ ಸಚಿವರು ನೀಡುವ ಕಾರಣಗಳು ಅಧಿಕಾರಸ್ಥರ ಬೌದ್ಧಿಕ ದಾರಿದ್ರ್ಯವನ್ನೂ ಪ್ರದರ್ಶಿಸುತ್ತಿದೆ. ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಬೆಲೆಗಳನ್ನು ಹತ್ತು ರೂಗಳಿಂದ ಐವತ್ತು ರೂಗಳಿಗೆ ಏರಿಸಿ, ಜನಸಂದಣಿ ಕಡಿಮೆ ಮಾಡಲು ಬೆಲೆ ಏರಿಸಿಲಾಗಿದೆ ಎಂದು ಹೇಳುವ ರೈಲ್ವೆ ಸಚಿವರು ದೆಹಲಿಯಲ್ಲಿ ಕುಳಿತಿದ್ದಾರೆ.

ಅತಿ ಹೆಚ್ಚು ಜನರು ಪ್ರಯಾಣಿಸುವ ಪ್ಯಾಸೆಂಜರ್ ರೈಲುಗಳು ಭಾರತದ ದುಡಿಯುವ ವರ್ಗಗಳ, ಶ್ರಮಜೀವಿಗಳ ಮತ್ತು ವಲಸೆ ಕಾರ್ಮಿಕರ ಜೀವನಾಡಿಯಂತೆ. ನಿಜವಾದ ಭಾರತವನ್ನು ನೋಡಬೇಕೆಂದರೆ ಪ್ಯಾಸೆಂಜರ್ ರೈಲುಗಳಲ್ಲಿ ಓಡಾಡಬೇಕು. ಕೂಲಿನಾಲಿ ಮಾಡಲು ಊರಿಂದ ಊರಿಗೆ ಹೋಗುವ ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಇತರ ದುಡಿಯುವ ಜನರು ಅಲ್ಪ ದರದ ಪ್ಯಾಸೆಂಜರ್ ರೈಲುಗಳನ್ನೇ ಅವಲಂಬಿಸಿ ಬದುಕುತ್ತಾರೆ.

ಈ ರೈಲುಗಳ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದ್ದು, ಅನಗತ್ಯ ಓಡಾಟ ತಪ್ಪಿಸಲು ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳುತ್ತದೆ. ರೈಲು ದರ ಹೆಚ್ಚಳಕ್ಕಿಂತಲೂ ಹೆಚ್ಚು ಕ್ರೂರ ಎನಿಸುವುದು ಸಚಿವರ ಈ ಹೇಳಿಕೆ. ಯಾವುದೇ ವಸ್ತು, ಪದಾರ್ಥ ಅಥವಾ ಸೇವೆಯ ಬೆಲೆ, ಮೌಲ್ಯ ಮಾರುಕಟ್ಟೆಯಲ್ಲಿ ಹೆಚ್ಚಾದರೆ ಅದಕ್ಕೆ ಮಾರುಕಟ್ಟೆಯ ನಿಯಮಗಳು ಮತ್ತು ಆರ್ಥಿಕ ನೀತಿಗಳು ಕಾರಣ ಎನ್ನುವುದು ಸಾಮಾನ್ಯರಿಗೂ ಅರ್ಥವಾಗುವ ಸಂಗತಿ. ಆದರೆ ಈ ಶ್ರೀಸಾಮಾನ್ಯ ಇಂದು ತನ್ನ ಪ್ರಜ್ಞೆ ಮತ್ತು ಸ್ವಂತಿಕೆಯನ್ನು ಒಂದು ನಿರ್ದಿಷ್ಟ ವ್ಯಕ್ತಿ-ಸಿದ್ಧಾಂತ(?)ಕ್ಕೆ ಅಡಮಾನ ಇಟ್ಟಿರುವುದು ದುರಂತ.

ಭಾರತದ ಸುಶಿಕ್ಷಿತ ವರ್ಗದ ಬೃಹತ್ ಸಂಖ್ಯೆಯ ಜನರು ತಮ್ಮ ಹಿತವಲಯದ ಹಿತಾನುಭವದಲ್ಲಿ ಮುಳುಗಿ ಶ್ರೀಸಾಮಾನ್ಯರ ಬವಣೆಯನ್ನು ನಿರ್ಲಕ್ಷಿಸುತ್ತಿರುವುದು ಆತ್ಮನಿರ್ಭರ ಭಾರತದ ದುರಂತಗಳಲ್ಲಿ ಒಂದು. ಕೋವಿದ್ ಲಾಕ್ ಡೌನ್ ಸಂದರ್ಭದಲ್ಲಿ ಜೀವನ ಮತ್ತು ಜೀವನೋಪಾಯದ ಬಗ್ಗೆ ಪುಂಖಾನುಪುಂಖವಾಗಿ ಭಾಷಣಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಇಂದು ಬಹುಸಂಖ್ಯೆಯ ಜನರ ಜೀವನ ಮೂರಾಬಟ್ಟೆಯಾಗಿ, ಜೀವನೋಪಾಯದ ಮಾರ್ಗಗಳು ಮುಚ್ಚಿಹೋಗುತ್ತಿದ್ದರೂ ತಮ್ಮ ಮನದ ಮಾತುಗಳಲ್ಲಿ ಇದನ್ನು ಉಲ್ಲೇಖಿಸಲೂ ಹಿಂಜರಿಯುತ್ತಾರೆ. ಇಂದಿನ ಬೆಲೆ ಏರಿಕೆಗೆ ಏಳು ವರ್ಷದ ಹಿಂದಿನ ಸರ್ಕಾರ ಕಾರಣ ಎಂದು ಹೇಳುವ ಒಂದು ಸರ್ಕಾರ ಪಡೆಯಲು ಭಾರತ 70 ವರ್ಷ ಕಾಯಬೇಕಾಯಿತು !!!!!

ಇಂತಹ ಒಂದು ಅಪ್ರಬುದ್ಧ ಆಡಳಿತ ವ್ಯವಸ್ಥೆಯ ನಡುವೆ ಭಾರತದ ಶ್ರಮಜೀವಿಗಳು ನಿತ್ಯ ಬದುಕಿಗಾಗಿ ಹೆಣಗಾಡಬೇಕಿದೆ. ಈ ಕ್ರಮಗಳೆಲ್ಲವೂ ‘ ದೇಶದ ಹಿತಕ್ಕಾಗಿ ’ ಎನ್ನುವುದಾದರೆ ‘ ದೇಶ ’ ಎಂದರೇನು ಎಂದು ಪ್ರಶ್ನಿಸಬೇಕಾಗುತ್ತದೆ. ದೇಶವನ್ನು ಕಟ್ಟಿದ ಬೃಹತ್ ಸಾರ್ವಜನಿಕ ಉದ್ದಿಮೆಗಳು ಇಂದು ಖಾಸಗಿಯವರ ಪಾಲಾಗುತ್ತಿದೆ.

ನಷ್ಟ ಅನುಭವಿಸುತ್ತಿರುವ ಸಾರ್ವಜನಿಕ ಬ್ಯಾಂಕುಗಳನ್ನು ಲಾಭದಾಯಕ ಬ್ಯಾಂಕುಗಳೊಡನೆ ವಿಲೀನಗೊಳಿಸುವ ಮೂಲಕ ಬಲಿಷ್ಠ ಬ್ಯಾಂಕುಗಳನ್ನೂ ದುರ್ಬಲಗೊಳಿಸಲಾಗುತ್ತಿದೆ. ಮತ್ತೊಂದೆಡೆ ಲಾಭದಾಯಕ ಬ್ಯಾಂಕುಗಳನ್ನು ಖಾಸಗೀಕರಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಪಾರದರ್ಶಕತೆಯೇ ಪ್ರಾಧಾನ್ಯತೆ ಪಡೆಯಬೇಕಾದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತೆರೆಮರೆಯಲ್ಲಿ ಆಡಳಿತ ನೀತಿಗಳನ್ನು ಜಾರಿಗೊಳಿಸುವ ವಿಕೃತಿಯನ್ನು ಕಾಣುತ್ತಿದ್ದೇವೆ. ಇದು ಸಮಸ್ತ ಭಾರತೀಯರನ್ನು ಕತ್ತಲಲ್ಲಿರಿಸುವ ತಂತ್ರ ಎಂದು ಹೇಳಬೇಕಿಲ್ಲ.

“ ವ್ಯಾಪಾರ ವಹಿವಾಟು ಸರ್ಕಾರದ ಕೆಲಸ ಅಲ್ಲ ” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ಹಿಂದೆ ಇಡೀ ಸಾರ್ವಜನಿಕ ಉದ್ದಿಮೆಯನ್ನು ಖಾಸಗೀಕರಿಸುವ ಸೂಚನೆ ಇರುವುದನ್ನು ಗ್ರಹಿಸಬೇಕಿದೆ. ಈಗಾಗಲೇ ಬಿಪಿಸಿಎಲ್ ಹರಾಜು ಮಾರುಕಟ್ಟೆಯಲ್ಲಿದೆ, ಬಿಇಎಂಎಲ್ ಮಾರಾಟಕ್ಕೆ ಸಿದ್ಧವಾಗುತ್ತಿದೆ, ಬಿಎಸ್ಎ್ನ್ಎಸಲ್ಗೆರ ಶವಪೆಟ್ಟಿಗೆಯನ್ನು ಸಿದ್ಧಪಡಿಸಿ ಹಲವು ತಿಂಗಳುಗಳೇ ಕಳೆದಿವೆ.

ಬ್ಯಾಂಕುಗಳು ಸದ್ದಿಲ್ಲದೆ ಒಂದರೊಳಗೊಂದು ವಿಲೀನವಾಗಿ ಕಣ್ಮರೆಯಾಗುತ್ತಿವೆ. ದೇಶದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ ರೈಲ್ವೆ ಇಲಾಖೆ ಹಂತ ಹಂತವಾಗಿ ಅವಸಾನ ಕಾಣುತ್ತಿದೆ. ಉದ್ದಿಮೆ, ವ್ಯಾಪಾರ, ವ್ಯವಹಾರ ಸರ್ಕಾರದ ಹೊಣೆ ಅಲ್ಲ ಎನ್ನುವ ತತ್ವವೇ ಭಾರತದ ಅರ್ಥವ್ಯವಸ್ಥೆಯ ಬುನಾದಿಯಾಗಿದ್ದಲ್ಲಿ ಭಾರತ ಎಂದೋ ಮತ್ತೊಮ್ಮೆ ಸಾಮ್ರಾಜ್ಯಶಾಹಿಗಳ ಗುಲಾಮಗಿರಿಗೆ ಒಳಗಾಗುತ್ತಿತ್ತು. ಇಂದು ಸರ್ಕಾರ ಹೆಮ್ಮೆಯಿಂದ “ ಆತ್ಮನಿರ್ಭರ ” ಭಾರತದ ಬಗ್ಗೆ ಮಾತನಾಡುವಷ್ಟು ಸಾಮರ್ಥ್ಯ ಗಳಿಸಿದ್ದರೆ ಅದಕ್ಕೆ ಆರು ದಶಕಗಳ ಸ್ವಾವಲಂಬಿ ಭಾರತವೇ ಆಧಾರ ಎನ್ನುವುದನ್ನು ಸಮೂಹ ಸನ್ನಿಗೊಳಗಾದ ವಿದ್ಯಾವಂತರು ಅರ್ಥಮಾಡಿಕೊಳ್ಳಬೇಕಿದೆ.

ತಮ್ಮ ಬದುಕಿಗೆ ಅಡಿಪಾಯ ಹಾಕಿದ, ತಾವೇ ಕಟ್ಟಿ ಬೆಳೆಸಿದ, ತಮ್ಮ ಅಪ್ಪ ಅಮ್ಮಂದಿರುವ ಕಟ್ಟಿ ಬೆಳೆಸಿದ ಮತ್ತು ತಮ್ಮ ಇಂದಿನ ಹಿತವಲಯವನ್ನು ರೂಪಿಸಲು ನೆರವಾದ ನೂರಾರು ಸಾರ್ವಜನಿಕ ಉದ್ದಿಮೆಗಳು, ಸಂಸ್ಥೆಗಳು ಇಂದು ಮಾರುಕಟ್ಟೆಯ ಶಕ್ತಿಗಳಿಗೆ ಬಲಿಯಾಗುತ್ತಿರುವುದನ್ನು ಮೌನವಾಗಿ ಸಹಿಸಿಕೊಳ್ಳುತ್ತಿರುವ ಬೃಹತ್ ಜನಸಮುದಾಯಕ್ಕೆ ಆತ್ಮಸಾಕ್ಷಿ ಇದ್ದರೆ ಇಂದಿನ ಆತ್ಮನಿರ್ಭರ ಭಾರತವನ್ನು ಎದುರಿಸಿ, ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಸಜ್ಜಾಗಬೇಕಿದೆ.

ಬಹುಸಂಖ್ಯೆಯ ಜನರ ಬದುಕು ದುರ್ಭರವಾಗಿರುವ ಆತ್ಮನಿರ್ಭರ ಭಾರತ ಮತ್ತೊಮ್ಮೆ ದೇಶವನ್ನು ಬಂಡವಾಳ ಮಾರುಕಟ್ಟೆಯ ದಾಸ್ಯಕ್ಕೆ ದೂಡುತ್ತಿರುವುದನ್ನು “ ದೇಶಭಕ್ತಿ ”ಯ ಹೆಸರಿನಲ್ಲಿ, “ ಭವಿಷ್ಯ ಭಾರತ ” ದ ಹೆಸರಿನಲ್ಲಿ ಸಮರ್ಥಿಸುವುದು ಬೌದ್ಧಿಕ ದಾರಿದ್ರ್ಯದ ಸಂಕೇತ.

ನೂತನ ಕೃಷಿ ಕಾಯ್ದೆಗಳು ಈ ದೇಶದ ರೈತರಿಗೆ ಮಾತ್ರವೇ ಅಲ್ಲ, ಜನಸಾಮಾನ್ಯರ ಬದುಕಿಗೂ ಮರಣ ಶಾಸನವಾಗುತ್ತದೆ ಎನ್ನುವ ವಾಸ್ತವವನ್ನು ಅರ್ಥಮಾಡಿಕೊಳ್ಳಲು, ಈ ಬೌದ್ಧಿಕ ದಾರಿದ್ರ್ಯದಿಂದ ಹೊರಬರಬೇಕಿದೆ. ಸರ್ಕಾರ ಸೃಷ್ಟಿಸಿರುವ ಸಮೂಹ ಸನ್ನಿಯಿಂದ ಹೊರಬರಬೇಕಿದೆ. ವಾಟ್ಸಾಪ್ ವಿಶ್ವವಿದ್ಯಾಲಯದಿಂದ ನಿರ್ಗಮಿಸಬೇಕಿದೆ.

ವಂದಿಮಾಗಧ ಭಟ್ಟಂಗಿ ಮಾಧ್ಯಮಗಳ ಸುಳಿಯಿಂದ ವಿಮೋಚನೆ ಪಡೆಯಬೇಕಿದೆ. ಹಾಗಾದಲ್ಲಿ ಮಾತ್ರ ಭಾರತದ ಭವಿಷ್ಯ ಉಜ್ವಲವಾಗಲು ಸಾಧ್ಯ. ಭಾರತ ಹೀಗಿರಲಿಲ್ಲ. ಈ ದೇಶದ ಸಾರ್ವಭೌಮ ಜನತೆ ಅಪಾಯಕ್ಕೆ ಸಿಲುಕಿದಾಗಲೆಲ್ಲಾ ಇಲ್ಲಿನ ಬೌದ್ಧಿಕ ಶಕ್ತಿಯೇ ಶತ್ರುಗಳನ್ನು ಹಿಮ್ಮೆಟ್ಟಿಸಿದೆ. ಇಂದು ಈ ಬೌದ್ಧಿಕ ಶಕ್ತಿ ತನ್ನ ಸ್ವಂತಿಕೆಯನ್ನು ಕಳೆದುಕೊಂಡಿದೆ.

ಪ್ರತಿರೋಧದ ದನಿಗಳಿಗೆ ದನಿಯಾಗುತ್ತಿರುವ ಒಂದು ಬೌದ್ಧಿಕ ವಲಯವನ್ನು ದೇಶದ್ರೋಹಿಗಳಂತೆ ಕಾಣುವ ಈ ಪ್ರಜ್ಞಾಶೂನ್ಯ ಸಮುದಾಯವೇ ಇಂದು ಭಾರತಕ್ಕೆ ಮಾರಕವಾಗಿ ಪರಿಣಮಿಸಲಿದೆ. 70 ವರ್ಷಗಳ ಸ್ವತಂತ್ರ ಇತಿಹಾಸದಲ್ಲಿ ಭಾರತ ಎಂದೂ ಇಂತಹ ಸಮೂಹ ಸನ್ನಿಯನ್ನು ಕಂಡಿರಲಿಲ್ಲ. ಈ ಮಟ್ಟಿನ ನಿಷ್ಕ್ರಿಯತೆಯನ್ನೂ ಕಂಡಿರಲಿಲ್ಲ. ಈ ನಿಷ್ಕ್ರಿಯತೆಗೆ ತದ್ವಿರುದ್ಧವಾಗಿ ದೆಹಲಿಯ ಗಡಿಯಲ್ಲಿನ ರೈತ ಹೋರಾಟ ಉಜ್ವಲ ಭಾರತದ ಕನಸುಗಳನ್ನು ಚಿಗುರಿಸುತ್ತಿದೆ.

ಆತ್ಮನಿರ್ಭರ ಭಾರತವನ್ನು ಕಾಣುವುದೇ ಆದರೆ ನೂರು ದಿನಗಳನ್ನು ಪೂರೈಸಿರುವ ಈ ರೈತ ಹೋರಾಟದಲ್ಲಿ ಕಾಣಬೇಕಿದೆಯೇ ಹೊರತು, ಆತ್ಮವಂಚಕ ವ್ಯವಸ್ಥೆಯ ಮತ್ತು ಈ ವ್ಯವಸ್ಥೆಯ ಸಮರ್ಥಕರ ರಂಗುರಂಗಿನ ಮಾತುಗಳಲ್ಲಿ ಅಲ್ಲ.

ಪ್ರಭುತ್ವದಿಂದ ಯಾವುದೇ ಪರಿಹಾರ ಮಾರ್ಗಗಳನ್ನು ಕಾಣದೆ ಒಂದು ನ್ಯಾಯಯುತ ಜನಾಂದೋಲನ ನೂರು ದಿನಗಳನ್ನು ಪೂರೈಸುವುದು ಪ್ರಜಾತಂತ್ರ ವ್ಯವಸ್ಥೆಯ ಗೆಲುವು ಎನ್ನಬಹುದಾದರೂ, ಇದು ಆಡಳಿತ ವ್ಯವಸ್ಥೆಗೆ ನಾಚಿಕೆಗೇಡಿನ ವಿಚಾರವಾಗಬೇಕು. ಸಾರ್ವಭೌಮ ಪ್ರಜೆಗಳ ದನಿಗೆ ದನಿಯಾಗದ ಒಂದು ಆಡಳಿತ ವ್ಯವಸ್ಥೆಯ ಆತ್ಮನಿರ್ಭರತೆಯ ಮತ್ತೊಂದು ಮುಖ ಆತ್ಮವಂಚನೆಯಲ್ಲಿ ಕಾಣುವಂತಾಗಿರುವುದು ನವ ಭಾರತದ ಅತಿ ದೊಡ್ಡ ದುರಂತ. ಇದು ಶತಮಾನದ ದುರಂತವೂ ಹೌದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಯೋಜನೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.

ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

Published

on

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.

2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್‌ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.

3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.

5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.

7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.

8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.

9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್‌ಗಳ ಸಮತೋಲನಕ್ಕೆ ಬಹಳ ಮುಖ್ಯ.

10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.

ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ13 hours ago

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ. ಆಸಕ್ತ...

ದಿನದ ಸುದ್ದಿ4 days ago

ವಸತಿ ಯೋಜನೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ. ಈ...

ದಿನದ ಸುದ್ದಿ4 days ago

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ...

ದಿನದ ಸುದ್ದಿ5 days ago

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸಲು ಭಾರತ ಸರ್ಕಾರದ...

ದಿನದ ಸುದ್ದಿ5 days ago

ಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ 12 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ....

ದಿನದ ಸುದ್ದಿ5 days ago

ಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕೃಷಿ ಇಲಾಖೆ ಹಾಗೂ ಆತ್ಮ (ATMA) ಯೋಜನೆಯಡಿ 2026-27ನೇ ಸಾಲಿನ ವಿವಿಧ ಕೃಷಿ ಪ್ರಶಸ್ತಿಗಳಿಗಾಗಿ ದಾವಣಗೆರೆ ಜಿಲ್ಲೆಯ ಅರ್ಹ ಹಾಗೂ ಆಸಕ್ತ ರೈತ ಮತ್ತು ರೈತ...

ಅಂಕಣ6 days ago

ಕವಿತೆ | ದೇವರ ಹೂವು

~ ಡಾ. ಸಿ.ಬಿ.ಐನಳ್ಳಿ ಊಟ ಮಾಟ ವೇಷ ಭಾಷೆ ಪ್ರಾರ್ಥನೆ ಬೇರೆ ಬೇರೆ ಪವಿತ್ರಪಠ್ಯ ಅವನದೊಂದು ನನ್ನದಿನ್ನೊಂದಂತೆ ನದಿ ದಂಡೆಯ ಮೇಲೆ ನೋಟ ಬೆರೆತು ಮಾತು ಮರೆತು...

ದಿನದ ಸುದ್ದಿ6 days ago

ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ

ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ...

ದಿನದ ಸುದ್ದಿ7 days ago

ಆಶ್ರಯ ಯೋಜನೆ – ಆವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್‌ 30...

ದಿನದ ಸುದ್ದಿ1 week ago

ಗರಿಕೆ ಹುಲ್ಲಿನ ಜ್ಯೂಸ್‌ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ

ಗಿರೀಶ್ ಮುತ್ತು ಗರಿಕೆ ಹುಲ್ಲಿನ ರಸದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿನೊಡಾನ್ ಡ್ಯಾಕ್ಟಿಲಾನ್ ಪ್ರೊಟೀನ್ ಎಂಬ ಅಂಶವಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು...

Trending