ಲೈಫ್ ಸ್ಟೈಲ್
‘ಸೀಬೆಹಣ್ಣಿ’ನ ಮಹತ್ವ..!
![](https://suddidina.com/wp-content/uploads/2019/01/Guava-suddidina4.jpg)
ಸೀಬೆಹಣ್ಣು(ಪೇರಳೆ) ಬಾಯಿಗೆ ಮಾತ್ರ ರುಚಿ ಅಲ್ಲ ಅದರಿಂದ ಆರೋಗ್ಯ ಕೂಡ ವೃದ್ಧಿಸಲು ಸಾಧ್ಯ. ಈ ಸೀಬೆಹಣ್ಣು ಎಲ್ಲಾ ಕಾಲದಲ್ಲೂ ದೊರೆಯುತ್ತದೆ. ಸೀಬೆ ಮಾತ್ರವಲ್ಲ ಅದರ ಬೇರೆ ಭಾಗಗಳು ಕೂಡ ತುಂಬಾ ಉಪಯೋಗವಿದೆ. ಈಗ ಅದರ ಭಾಗ ಹಾಗೂ ಹಣ್ಣಿನಿಂದ ಆಗುವ ಉಪಯೋಗವನ್ನು ಮುಂದೆ ತಿಳಿಯೋಣ.
- ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಮುಖಕ್ಕೆ ಲೇಪಿಸಿಕೊಂಡರೆ ಒಂದು ವಾರದೊಳಗೆ ಮೊಡವೆಗಳ ನಿವಾರಣೆಯಾಗುವುದು.
- ಸೀಬೆಯ ಕಾಯಿಗಳನ್ನು ಹಲ್ಲುಗಳಿಂದ ಕಚ್ಚಿ ಚಪ್ಪರಿಸಿ ತಿಂದರೆ ದಂತಕ್ಷಯದ ಭಾದೆ ಇರುವುದಿಲ್ಲ.
- ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಅದರಲ್ಲಿ ಮೈಕೈ ತಿಕ್ಕಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುತ್ತಾ ಬಂದರೆ ಬೆವರಿನ ದುರ್ನಾತ ಮಾಯವಾಗುವುದು.
- ಬೀಜ ತೆಗೆದ ಸೀಬೆಹಣ್ಣಿನ ತಿರುಳಿಗೆ ಜೇನುತುಪ್ಪವನ್ನು ಬೆರೆಸಿ ಗರ್ಭಿಣಿಯರು ಸೇವಿಸಿದರೆ ಹೃದ್ರೋಗ, ಅರಿಶಿನ ಕಾಮಾಲೆ, ಉಬ್ಬಸ ಮತ್ತು ಕ್ಷಯದಂತಹ ಖಾಯಿಲೆಗಳಿಗೆ ನಿರೋಧಕವಾಗಿರುವುದು.
- ಶ್ರೀಗಂಧದೊಂದಗೆ ಸೀಬೆ ಎಲೆಗಳನ್ನು ತೇದು ಹಚ್ಚಿದರೆ ಕಜ್ಜಿ, ತುರಿ, ಹುಳಕಡ್ಡಿಗಳು ಮಾಯವಾಗಿ ಹೋಗುವುದು. ಇದೇ ಲೇಪನವನ್ನು ತಲೆಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ನಂತರ ಸ್ನಾನ ಮಾಡಿದರೆ ಹೇನುಗಳು ಸಾಯುವುವು.
- ಚಿಗುರು ಸೀಬೆ ಎಲೆಗಳ ಕಷಾಯವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ದಿನಕ್ಕೆ ಮೂರು ಬಾರಿ ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಯ ದುರ್ನಾತ ಮಾಯವಾಗುವುದು. ಬಾಯಿಹುಣ್ಣು ನಿವಾರಣೆಯಾಗುವುದು. ಜೊತೆಗೆ ವಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ ಅದು ಸಹ ನಿಂತು ಹೋಗುವುದು.
- ಚಿಗುರು ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಕಷಾಯ ತಯಾರಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದಿನಕ್ಕೆ ಮೂರು ಬಾರಿ ಬಾಯಿ ಮುಕ್ಕುಳಿಸುವುದರಿಂದ ವಸಡಿನ ರಕ್ತಸ್ರಾವ ಸ್ಥಗಿತಗೊಳ್ಳವುದು ಹಾಗೂ ಬಾಯಿ ಹುಣ್ಣು ನಿವಾರಣೆಯಾಗುವುದು.
- ಮೈನವೆ ಮತ್ತು ಪಿತ್ತದ ಗಂಧೆಗಳನ್ನು ಹೋಗಲಾಡಿಸಲು ಸೀಬೆಯ ಮತ್ತು ದೊಡ್ಡ ಪತ್ರೆಯ ಸೊಪ್ಪನ್ನು ಮೊಸರಿನಲ್ಲಿ ನುಣ್ಣಗೆ ಅರೆದು ಮೈಗೆ ಹಚ್ಚಿಕೊಂಡು ಚನ್ನಾಗಿ ತಿಕ್ಕಿದ ನಂತರ ಬಿಸಿ ಬಿಸಿ ನೀರಿನ ಸಾನ್ನ ಮಾಡಿ.
- ಬೀಜ ಬಲಿಯದ ಸೀಬೆಕಾಯಿಗಳ ಕಷಾಯ ಸಿದ್ಧಪಡಿಸಿ ಮಜ್ಜಿಗೆಯೊಂದಿಗೆ ಕುಡಿದರೆ ಆಮಶಂಕೆ ಮತ್ತು ಎದೆನೋವು ನಿವಾರಣೆಯಾಗುವುದು.
- ಅತಿಯಾದ ಹೊಟ್ಟೆ ನೋವು ಉಂಟಾಗಿದ್ದರೆ ಸೀಬೆಯ ಹಣ್ಣನ್ನು ಉಪ್ಪು ಮತ್ತು ಕುಟ್ಟಿದ ಕಾಳು ಮೆಣಸಿನ ಪುಡಿಯೊಂದಿಗೆ ತಿಂದರೆ ನೋವು ಮಾಯವಾಗಿ ಹೊಟ್ಟೆ ಹಗುರವಾಗುತ್ತದೆ.
- ಸೀಬೆಯ ತಿರುಳನ್ನು ಬೀಜ ತೆಗೆದು ಹಾಲು ಮತ್ತು ಜೇನಿನೊಂದಿಗೆ ಬೆರೆಸಿ ಟಾನಿಕ್ ತಯಾರಿಸಿಕೊಂಡು ಸೇವಿಸಿದರೆ ಅಕಾಲ ಮುಪ್ಪು, ಹೊಟ್ಟೆ ಹುಣ್ಣು, ಮುಟ್ಟಿನ ಸಂಬಂಧ ಶೂಲೆ, ಅರಿಶಿನ ಕಾಮಾಲೆಯವರು ವೈದ್ಯಕೀಯ ಚಿಕಿತ್ಸೆ ಪಡೆಯುವಾಗ ಹೆಚ್ಚು ಶಕ್ತಿಯ ಉತ್ಪನ್ನವಾಗುತ್ತದೆ.
- ಸಾಮಾನ್ಯವಾಗಿ ಶೀತ ಉಂಟಾದರೆ ಸೀಬೆಕಾಯಿ ತಿನ್ನಬಾರದು ಅನ್ನುವುದನ್ನು ನೀವು ಕೇಳಿರಬಹುದು. ಆದರೆ ಶೀತ ಉಂಟಾದರೆ ಸೀಬೆಕಾಯಿ ತಿನ್ನುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಹಾಗೂ ಕಬ್ಬಿಣದಂಶವಿದ್ದು ಶೀತವನ್ನು ಕಡಿಮೆ ಮಾಡುತ್ತದೆ.
- ಇದರಲ್ಲಿ ಮ್ಯಾಗ್ನಿಷಿಯಂ ಇರುವುದರಿಂದ ಸ್ನಾಯುಗಳಲ್ಲಿರುವ ಒತ್ತಡವನ್ನು ಕಡಿಮೆ ಮಾಡಿ ಅದಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಇದರಿಂದ ಮೈಕೈ ಸೆಳೆತ ಕಡಿಮೆಯಾಗುವುದು.
- ಬಿ ಗುಂಪಿನ ವಿಟಮಿನ್ಗಳು ಮೆದುಳಿಗೆ ಅವಶ್ಯಕ. ಸೀಬೆಕಾಯಿಯಲ್ಲಿ ಬಿ3 ಹಾಗೂ ಬಿ6 ವಿಟಮಿನ್ ಇದ್ದು ಮೆದುಳಿನ ನರಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
- ಸೀಬೆಕಾಯಿಯಲ್ಲಿ ವಿಟಮಿನ್ ಇ ಇದೆ. ತ್ವಚೆ ರಕ್ಷಣೆಯಲ್ಲಿ ವಿಟಮಿನ್ ಇ ಪ್ರಮುಖ ಪಾತ್ರವನ್ನು ವಹಿಸುತ್ತದೆ.
- ಇದರಲ್ಲಿ ಫಾಲಿಕ್ ಆಸಿಡ್ ಹಾಗೂ ಇತರ ಖನಿಜಾಂಶಗಳು ಇರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರವಾಗಿದೆ.
- ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಾದ ಮರೆವು, ಮಂದ ದೃಷ್ಟಿ ಮತ್ತು ಸಂಧಿವಾತವನ್ನೂ ನಿವಾರಿಸುವಲ್ಲಿ ಸೀಬೆ ಹಣ್ಣು ಸಹಕಾರಿ.
- ತೂಕ ಕಡಿಮೆಮಾಡಿಕೊಳ್ಳಬೇಕೆಂದಿದ್ದರೆ ಸೀಬೆ ಒಳ್ಳೆ ಆಯ್ಕೆ. ಸೀಬೆಯಲ್ಲಿ ಅವಶ್ಯಕ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ.
- ವೀರ್ಯೋತ್ಪತ್ತಿ ಕಡಿಮೆಯಿದ್ದ ಪುರುಷರು ಸೀಬೆಹಣ್ಣನ್ನು ಸೇವಿಸುವುದರಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನಲಾಗಿದೆ.
- ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವವರು ಹಣ್ಣಾದ ಸೀಬೆಕಾಯಿಯನ್ನು ಪ್ರತೀದಿನ ತಿನ್ನಿ, ಉತ್ತಮ ಫಲಿತಾಂಶ ಕಾಣುವಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!
![](https://suddidina.com/wp-content/uploads/2024/07/coconut_oil_benefits_suddidina.jpg)
ಆರೋಗ್ಯಕರ ಆಹಾರ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ತೆಂಗಿನ ಎಣ್ಣೆಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಗಳಲ್ಲಿ ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ ಅತಿ ಉತ್ತಮ. ಇದನ್ನು ಕೊಬ್ಬರಿ (ಒಣಗಿದ ತೆಂಗಿನಕಾಯಿ) ಯಿಂದ ಮಾಡಲಾಗುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ದೈನಂದಿನ ಜೀವನದಲ್ಲಿ ತೆಂಗಿನ ಎಣ್ಣೆ ಉಪಯೋಗಿಸಿ ಅದರ ಪ್ರಯೋಜನಗಳನ್ನು ಪಡೆಯಿರಿ :
ತೆಂಗಿನೆಣ್ಣೆಯಲ್ಲಿ ಲಾರಿಕ್ ಆಮ್ಲದಂಶವನ್ನು ಹೊಂದಿರುತ್ತದೆ. ತೆಂಗಿನೆಣ್ಣೆಯ ಬಳಕೆಯಿಂದ ಶಕ್ತಿ ದೊರಕುತ್ತದೆ ಮತ್ತು ತೂಕ ನಿರ್ವಹಣೆಯಲೂ ಸಹಾಯಮಾಡುತ್ತದೆ.
ಹೃದಯದ ಆರೋಗ್ಯ: ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ HDL (ಉತ್ತಮ) ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಲಿಪಿಡ್ ಆರೋಗ್ಯವನ್ನು ಸುಧಾರಿಸಬಹುದು ಎಂದು ಕೆಲವು ಅಧ್ಯಯನಗಳು ಸಾಬೀತುಪಡಿಸಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀರ್ಣಕಾರಿ ಆರೋಗ್ಯ: ತೆಂಗಿನ ಎಣ್ಣೆಯು ಕೊಬ್ಬು-ಕರಗಬಲ್ಲ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಇರಿಟಬಲ್ ಬೋವೆಲ್ ಸಿಂಡ್ರೋಮ್ (IBS) ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉರಿಯೂತದ ಗುಣಲಕ್ಷಣಗಳು: ತೆಂಗಿನ ಎಣ್ಣೆಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮ ಮತ್ತು ಕೂದಲ ರಕ್ಷಣೆ: ತೆಂಗಿನೆಣ್ಣೆ ತಿನ್ನುವುದರಿಂದ ಆರೋಗ್ಯಕರ ಚರ್ಮ ಮತ್ತು ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಅಗತ್ಯವಾದ ಪೋಷಕಾಂಶಗಳು ಮತ್ತು ತೇವಾಂಶವನ್ನು ಒದಗಿಸುತ್ತದೆ. ತೆಂಗಿನ ಎಣ್ಣೆಯು ನಿಮ್ಮ ಕೂದಲಿಗೆ ಆಳವಾಗಿ ತೂರಿಕೊಂಡು, ಒಳಗಿನಿಂದ ಅವುಗಳನ್ನು ಪೋಷಿಸುತ್ತದೆ ಮತ್ತು ಆರೋಗ್ಯವನ್ನು ಹೊರಸೂಸುವ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆಯ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಅದೇ ಸಮಯದಲ್ಲಿ ಕೂದಲು ಒಡೆಯುವಿಕೆ ಮತ್ತು ವಿಭಜಿತ ತುದಿಗಳನ್ನು ತಡೆಯುತ್ತದೆ.
ರೋಗನಿರೋಧಕ ಬೆಂಬಲ: ತೆಂಗಿನೆಣ್ಣೆಯು ಲಾರಿಕ್ ಆಮ್ಲ ಮತ್ತು ಕ್ಯಾಪ್ರಿಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ದೇಹವು ಸೋಂಕುಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.
ತೂಕ ನಿರ್ವಹಣೆ: ತೆಂಗಿನ ಎಣ್ಣೆಯು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಸಮತೋಲಿತ ಆಹಾರದಲ್ಲಿ ಬಳಸಿದಾಗ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು: ತೆಂಗಿನಕಾಯಿಯಲ್ಲಿ ಲಾರಿಕ್ ಆಮ್ಲವಿದೆ ಆದ್ದರಿಂದ ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಬ್ಯಾಕ್ಟೀರಿಯಾ, ವೈರಸ್ಗಳು ಮತ್ತು ಶಿಲೀಂಧ್ರಗಳಿಂದ ಉಂಟಾಗುವ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ ನಿಮ್ಮ ಅಡಿಗೆ ಮನೆಯ ಸಂಗಾತಿಯಾಗಲಿ.ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
![](https://suddidina.com/wp-content/uploads/2024/05/runadagani_autobiography_rudrappahanagawadi_suddidina.jpg)
- ರುದ್ರಪ್ಪ ಹನಗವಾಡಿ
ಇದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.
ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.
ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.
ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಮಕ್ಕಳಿಗೆ ದೈನಂದಿನ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ .ಪಿ ಗಡಾದ್ ಸಲಹೆ
![](https://suddidina.com/wp-content/uploads/2024/07/Health_Tips_suddidina.jpg)
ಸುದ್ದಿದಿನ,ಕುಂದಾಪುರ: ದೈನಂದಿನ ಆಹಾರ ಪದ್ಧತಿಯಲ್ಲಿ ತರಕಾರಿ ಹಣ್ಣುಗಳನ್ನು ಸೇರಿಸುವುದು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಲಭ್ಯ ಇರುವ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ತಾಯಂದಿರಿಗೆ ಡಾ. ಐ .ಪಿ ಗಡಾದ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಡುಪಿ ಜಿಲ್ಲೆ ಇವರು ತಮ್ಮ ಉದ್ಘಾಟನಾ ನುಡಿಗಳಿಂದ ಮನವಿ ಮಾಡಿದರು.
ನಮ್ಮ ಪಿ.ಜಿ.ಡಿ.ಎಚ್.ಪಿ.ಇ 7ನೇ ತಂಡದ ಪ್ರಶಿಕ್ಷಣಾರ್ಥಿ ಶ್ರೀಮತಿ ವೃಂದಾ.ಬಿ.ತಾಮಸೆ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದಲ್ಲಿ ಅಪೌಷ್ಟಿಕತೆಯ ಕುರಿತು ಸಂಶೋಧನಾತ್ಮಕ ಅಧ್ಯಯನವನ್ನು ಮಾಡಿ ಗ್ರಾಮದ ಎಲ್ಲಾ ಮಕ್ಕಳು ಮತ್ತು ತಾಯಂದಿರನ್ನು ಬೃಹತ್ ಮಹಾ ಮೇಳದ ಮೂಲಕ ಈ ಸಭಾಂಗಣದ ಕಾರ್ಯಕ್ರಮಕ್ಕೆ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆ ರೋಟರಿ ಕ್ಲಬ್ ಸ್ಥಳೀಯ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಕ್ಷಣ ಇಲಾಖೆ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದ್ದಾರೆ ಇವರೆಲ್ಲರಿಗೂ ತಮ್ಮ ಧನ್ಯವಾದಗಳನ್ನು ಡಾ. ಮಂಜುನಾಥ್ ಜೆ .ಎ .ಉಪನ್ಯಾಸಕರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರು ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶುಭ ಹಾರೈಸಿದರು.
ಮಳೆಗಾಲದಲ್ಲಿ ಮನೆಯ ಅಕ್ಕಪಕ್ಕದಲ್ಲಿ ನೀರು ನಿಲ್ಲುವುದು ಸಹಜ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಮತ್ತು ಮಲೇರಿಯದಂತಹ ಕಾಯಿಲೆಗಳು ಬರುತ್ತವೆ ಹಾಗಾಗಿ ಮಳೆಯ ನೀರು ನಿಲ್ಲದಂತೆ ಹರಿದು ಹೋಗುವ ಹಾಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸುತ್ತಾ ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ನ ಉಪಾಧ್ಯಕ್ಷರು ಶುಭ ಕೋರಿದರು.
ಅಂಗನವಾಡಿಗಳ ಮೂಲಕ ಅಪೌಷ್ಟಿಕ ಮಕ್ಕಳ ದತ್ತು ಪಡೆಯುವ ಯೋಜನೆಯನ್ನು ಅಗತ್ಯತೆ ಇರುವ ಕುಟುಂಬಗಳು ಪಡೆದುಕೊಳ್ಳಬೇಕು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ರಾಷ್ಟ್ರಧ್ವಜದ ತ್ರಿವರಣವುಳ್ಳ ಹಣ್ಣು ಹಂಪಲು ತರಕಾರಿ ಸೊಪ್ಪು ಬೇಳೆ ಕಾಳುಗಳು ಹಾಲು ಮೊಟ್ಟೆ ಮೀನು ಮಾಂಸ ಹೀಗೆ ಸಮತೋಲನ ಆಹಾರವನ್ನು ರೂಡಿಸಿಕೊಳ್ಳುವಂತೆ ಕುಂದಾಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಉಮೇಶ್ ಟಿ ಎಂ ಕರೆ ನೀಡಿದರು.
ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ಡ್ರೈಡೇ ಕಾರ್ಯಕ್ರಮ ಪ್ರಾರಂಭವಾಗಿದ್ದು ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ತುಂಬಿಟ್ಟುಕೊಳ್ಳುವ ಪರಿಕರಗಳನ್ನು ಸಂಪೂರ್ಣ ಖಾಲಿ ಮಾಡಿ ಹೊಸದಾಗಿ ನೀರನ್ನು ತುಂಬಿಸಿಕೊಳ್ಳಬೇಕೆಂದು ಉಡುಪಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಶಶಿಧರ್ ಅವರು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸ್ಥಳೀಯ ಸರ್ಕಾರೇತರ ಸಂಸ್ಥೆ ರೋಟರಿ ಕ್ಲಬ್ನ ಅಧ್ಯಕ್ಷ ಶ್ರೀ ಸತೀಶ್ ಎಂ ನಾಯಕ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಆರೋಗ್ಯ ಇಲಾಖೆ ಆಯೋಜಿಸುತ್ತಿರುವ ಹಲವಾರು ಕಾರ್ಯಕ್ರಮಗಳಲ್ಲಿ ರೋಟರಿ ಕ್ಲಬ್ ದೇಶಾದ್ಯಂತ ಸಹಕಾರ ನೀಡುತ್ತಿದೆ ಇದೇ ರೀತಿಯಾಗಿ ನಾವು ಸಹ ಮಕ್ಕಳು ಮತ್ತು ತಾಯಂದಿರಿಗೆ ಲಘುಉಪಹಾರ ವ್ಯವಸ್ಥೆ ಮಾಡಿದ್ದೇವೆ ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಮ್ಮ ಸಹಕಾರ ನೀಡುವುದಾಗಿ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಕ್ಕಳ ದೈಹಿಕ ಬೆಳವಣಿಗೆಗಾಗಿ ಅಪೌಷ್ಟಿಕತೆ ಪ್ರಮಾಣ ತಿಳಿಯಲು ಮೌಲ್ಯಮಾಪನ ಮಾಡಬೇಕಾಗುತ್ತದೆ ತೋಳಿನ ಮಧ್ಯಭಾಗದ ಸುತ್ತಳತೆ 11.5 cm ಗಿಂತ ಕಡಿಮೆ ಇರುವ ಮಕ್ಕಳನ್ನು ಅಪೌಷ್ಟಿಕ ಮಕ್ಕಳೆಂದು ಗುರುತಿಸಿ ಅವರಿಗೆ ಹೆಚ್ಚಿನ ಪೌಷ್ಟಿಕ ಆಹಾರ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನೀಡುವ ಅವಶ್ಯಕತೆ ಇದೆ. ಅಪೌಷ್ಟಿಕತೆಯು ದೇಹದ ಪ್ರಮುಖ ಅಂಗಗಳ ಕಾರ್ಯಕ್ಕೆ ಹಾನಿ ಉಂಟುಮಾಡುತ್ತದೆ ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಪೌಷ್ಟಿಕ ಸಮತೋಲಿತ ಆಹಾರವನ್ನು ಉಪಯೋಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳುತ್ತಾ ನಮ್ಮ ಜಿಲ್ಲೆಯ ತಾಯಂದಿರಿಗೆ ಆರೋಗ್ಯಕ್ಕೆ ಸಂಬAಧಪಟ್ಟ ಹಾಗೆ ಜ್ಞಾನ ಹೆಚ್ಚಿದ್ದು, ಆದರೆ ಕಾರ್ಯರೂಪಕ್ಕೆ ತರುವಲ್ಲಿ ದೊಡ್ಡ ಪ್ರಮಾಣದ ಯಶಸ್ಸು ಇನ್ನೂ ಆಗಿಲ್ಲ ಅದಕ್ಕಾಗಿ ನಾವೆಲ್ಲರೂ ಅಪೌಷ್ಟಿಕತೆ ವಿರುದ್ಧ ಹೋರಾಡಲು ಇಲ್ಲಿ ಪ್ರಾತ್ಯಕ್ಷಿತೆಯ ಮೂಲಕ ತೋರಿಸಲಾಗಿರುವ ಆಹಾರಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ರೂಡಿಸಿಕೊಳ್ಳುವುದರೊಂದಿಗೆ ಕಾರ್ಯರೂಪಕ್ಕೆ ತರೋಣ ಎಂದು ತಮ್ಮ ಅಮೂಲ್ಯವಾದ ಮಾಹಿತಿಯಲ್ಲಿ ತಿಳಿಸುತ್ತಾ 0-19 ವರ್ಷದ ಒಳಗಿನ ಮಕ್ಕಳಿಗಾಗಿ ಸರ್ಕಾರದಿಂದ ಜಾರಿ ಇರುವ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಡಾ. ಪ್ರೇಮಾನಂದ.ಕೆ ತಾಲೂಕು ಆರೋಗ್ಯ ಅಧಿಕಾರಿಗಳು ಕುಂದಾಪುರ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಒಂದು ಅಥವಾ ಎರಡು ಮಕ್ಕಳ ಪಡೆಯುವವರ ಸಂಖ್ಯೆ ಅಧಿಕವಾಗಿದ್ದು ಈ ಮಕ್ಕಳ ಪಾಲನೆ ಪೋಷಣೆಗೆ ಎಲ್ಲಾ ಇಲಾಖೆಯವರು ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದು ಕೇವಲ ಮಕ್ಕಳಿಗೆ ಮಾತ್ರ ಪೌಷ್ಟಿಕ ಆಹಾರವನ್ನು ನೀಡುವುದಲ್ಲದೆ ತಾಯಂದಿರು ಕೂಡ ಸಮತೋಲಿತ ಪೌಷ್ಟಿಕ ಆಹಾರವನ್ನು ಗರ್ಭಿಣಿ ಅವಧಿಯಲ್ಲಿಯೇ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ನಾಗರತ್ನ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಟೇಶ್ವರ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಆರ್ ಶೇಟ್, ಜಿಲ್ಲಾ ಆರ್ ಸಿ.ಎಚ್ ಅಧಿಕಾರಿಗಳು ಡಾ.ಜೋತ್ನಾ ಸ್ಥಳೀಯ ಗ್ರಾಮ ಪಂಚಾಯತ್ನ ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯಕ್, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಶೋಭಾ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ತಾಯಂದಿರು, ಮಕ್ಕಳು ಉಪಸ್ಥಿತರಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಆಭಾಕಾರ್ಡ್ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆಯನ್ನು ಮಾಡಲಾಯಿತು.
ಶ್ರೀಮತಿ ವೃಂದಾ.ಬಿ.ತಾಮಸೆ ಪ್ರಶಿಕ್ಷಣಾರ್ಥಿ ಪಿ.ಪಿ.ಜಿ.ಡಿ.ಎಚ್.ಪಿ.ಇ ವಿಭಾಗ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರು ಸ್ವಾಗತಿಸಿದರು. ಶ್ರೀಮತಿ ಭಾಗ್ಯಲಕ್ಷ್ಮಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕುಂದಾಪುರ ಕಾರ್ಯಕ್ರಮದ ನಿರೂಪಣೆ ಮಾಡಿ ಧನ್ಯವಾದ ಅರ್ಪಿಸಿದರು.ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ7 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!