ಸಿನಿ ಸುದ್ದಿ
ಪ್ರೇಮ ಹಳತಾಗಲ್ಲ ; ಪ್ರೇಮಿಸುತ್ತಲೇ ಇರಲಾಗೊಲ್ಲ

ಮನುಷ್ಯನ ಭಾವನಾತ್ಮಕ ವಿಷಯಗಳು ಯಾವಾಗಲೂ ಬದಲಾಗುವುದಿಲ್ಲ. ಹಾಗೆಯೇ ಪ್ರೇಮವೂ ಬದಲಾಗಿಲ್ಲ. ಆ ಎಲ್ಲ ಭಾವನೆಗಳಿಗೂ ಅವಸರ ಸೇರಿಕೊಳ್ಳುತ್ತದಷ್ಟೆ. ಅವಸರದ ಪ್ರೇಮ, ಅವಸರದ ವಿರಹ, ಅವಸರದ ಬ್ರೇಕ್ಅಪ್, ಅವಸರದ ಪ್ಯಾಥೋ ಸಾಂಗ್ ಹೀಗೆ…
ಮುಂಚೆ ಒಂದು ಪ್ರೇಮ, ವಿರಹ, ಮರುಸಂಗಮ ನಡೆಯಬೇಕು ಎಂದರೆ ಆರೆಂಟು ವರ್ಷ ತಗೊಳ್ತಿತ್ತು. ಅದೀಗ ಆರೆಂಟು ತಿಂಗಳಿಗೆ ಬಂದು ನಿಂತಿದೆ. ಮೊದಲು ಪ್ರೇಮ ಒಬ್ಬರ ಜತೆಗೆ ಆಗುವುದೇ ದೊಡ್ಡ ವಿಷಯ ಆಗಿತ್ತು. ಆದರೆ ಈಗ ಮೊಬೈಲಿನಲ್ಲಿ ಭೇಟಿಯೇ ಆಗದೇ ಹಲವರ ಜತೆಯಲ್ಲಿ ಪ್ರೇಮ–ಕಾಮ ನಡೆಯುತ್ತಿರುತ್ತದೆ. ಹೀಗೆ ಪ್ರೇಮಕ್ಕೆ ಅವಸರ ಸೇರಿಕೊಂಡಿರುವುದು ಈ ದಶಕದ ಒಂದು ಕುತೂಹಲಕಾರಿ ಬದಲಾವಣೆ.
ಇವೆಲ್ಲ ಸರಿ ಅಥವಾ ತಪ್ಪು ಎಂದು ಖಡಾಖಂಡಿತವಾಗಿ ಹೇಳುವುದು ಸಾಧ್ಯವಿಲ್ಲ. ಯಾಕೆಂದರೆ ಇವೆಲ್ಲವೂ ನಮಗೆ ಬೇಕಂತ ನಾವೇ ಮಾಡಿಕೊಂಡಿದ್ದಲ್ಲವೇ? ಎಲ್ಲವನ್ನೂ ನಮಗೆ ಬೇಕಂತಲೇ ಮಾಡುವುದು, ಅವುಗಳನ್ನು ಬಳಸಿಕೊಂಡು, ಅನುಸರಿಸಿಕೊಂಡು ಮೇಲಿಂದ ಅವಕ್ಕೇ ಬೈಯುವುದು ಮಾನವನ ಸಹಜಗುಣ. ಮೊಬೈಲ್ ಮತ್ತು ತಂತ್ರಜ್ಞಾನ ಮುಂದುವರಿದಿರುವುದು ತಪ್ಪು, ಅದರಿಂದ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎನ್ನುವುದನ್ನೂ ನಾವು ಮೊಬೈಲ್ನಲ್ಲಿಯೇ ನೋಡಬೇಕಾದ ಕಾಲದಲ್ಲಿದ್ದೇವೆ. ತುಂಬ ಇಂಟರೆಸ್ಟಿಂಗ್ ಅದು. ಮನುಷ್ಯ ಏನೋ ಒಂದು ಕಂಡುಹಿಡ್ಕೋತಾನೆ. ಅದು ಬೇಕಿರಲಿಲ್ಲ ಎನ್ನುವುದು ಕಂಡುಹಿಡಿದ ಮೇಲೆ ಗೊತ್ತಾಗುತ್ತದೆ. ಈ ಎಲ್ಲವೂ ಪ್ರಾಕೃತಿಕ. ಯಾವುದನ್ನೂ ಬೈಯುವುದರಲ್ಲಿ ಅರ್ಥ ಇಲ್ಲ.
ಲವ್ ಅಂದಾಕ್ಷಣ ‘ಪ್ಲಟಾನಿಕ್ ಲವ್’ (ನಿಷ್ಕಾಮ ಪ್ರೇಮ) ಅನ್ನುವ ಪರಿಕಲ್ಪನೆ ಬರುತ್ತದೆ. ಅಂಥ ಪ್ರೇಮ ಯಾವತ್ತೂ ಅಸ್ತಿತ್ವದಲ್ಲಿಯೇ ಇರಲಿಲ್ಲ ಎನ್ನುವವರೂ ಇದ್ದಾರೆ. ಆದರೆ ನನ್ನ ಪ್ರಕಾರ ಪ್ಲಟಾನಿಕ್ ಲವ್ ಎನ್ನುವುದು ಎಲ್ಲ ಕಾಲಕ್ಕೂ ಇತ್ತು; ಈಗಲೂ ಇದೆ. ಪ್ಲಟಾನಿಕ್ ಅಂದಾಕ್ಷಣ ಅದರ ಶಾಬ್ದಿಕ ಅರ್ಥವನ್ನು ಹುಡ್ಕೊಂಡು ಸಾಯೋದು ತುಂಬ ಮೂರ್ಖತನ. ಅದು ಗಂಡುಹೆಣ್ಣಿನ ಮಧ್ಯವೇ ಆಗಬೇಕು ಎಂದಿಲ್ಲ.
‘ನನಗೊಬ್ಬ ಅದ್ಭುತ ಸ್ನೇಹಿತೆ ಇದ್ದಾಳೆ’ ಎಂದು ಯಾರಾದರೂ ಹೇಳಿದರೆ ನಮಗೆ ನಗು ಬರುತ್ತದೆ. ‘ಅವನು ನನಗೆ ಬರೀ ಸ್ನೇಹಿತ’ ಎಂದು ಒಬ್ಬಳು ಹುಡುಗಿ ಹೇಳಿದರೂ ನಮಗೆ ನಗು ಬರುತ್ತದೆ. ಆದರೆ ಆ ನಗು ಬರುವುದು ಮೂರನೆಯವರಿಗೆ. ಅವರಿಬ್ಬರಿಗೆ ಬರಲ್ಲ. ಅವರಿಬ್ಬರಲ್ಲಿ ಇರುವುದು ಅವರಿಬ್ಬರಿಗೇ ಗೊತ್ತು. ಪ್ಲಟಾನಿಕ್ನ ಅರ್ಥ ಅಷ್ಟೆ. ಹಾಗೆ ಎಲ್ಲರಿಗೂ ಏನೋ ಒಂದು ವಿವರಿಸಲಾಗದಂಥ ಸಂಬಂಧಗಳು ಇರುತ್ತವೆ. ಅದನ್ನು ಪರಿಶುದ್ಧ, ಕಲುಷಿತ ಎಂದೆಲ್ಲ ಟ್ಯಾಗ್ಲೈನ್ ಕೊಡಕ್ಕೆ ಆಗಲ್ಲ. ನಿಮಗೆ ಒಂದು ಸಂಸ್ಥೆಯ ಜೊತೆಗೆ, ವಸ್ತುಗಳ ಜೊತೆಗೆ, ಕುರ್ಚಿಯ ಜೊತೆಗೆ ಪ್ಲಟಾನಿಕ್ ಲವ್ ಇರಬಹುದು. ಹಾಗೆಯೇ ಒಂದು ಹೆಣ್ಣಿಗೆ ಗಂಡಿನ ಜೊತೆಗೆ, ಗಂಡಿಗೆ ಹೆಣ್ಣಿನ ಜೊತೆಗೆ ಲವ್ ಇರಬಹುದು. ‘ಅದು’ ಅದೇನಾ ಎಂದರೆ ಹೂ; ‘ಅದಲ್ವಾ’ ಅಂದರೆ ಅಲ್ಲ.
ಪ್ರೇಮ ಅನ್ನುವುದು ಒಂಥರಾ ಅಂತರ್ಗಾಮಿ. ಅದು ಯಾವಾಗಲೂ ಇರುವುದಿಲ್ಲ ನಮಗೆ. ಕಾಮ ದಿನಾ ನಡೆಯಬಹುದು; ಆದರೆ ಪ್ರೇಮ ಪ್ರತಿದಿನ ಪ್ರತಿಕ್ಷಣ ನಡೆಯುತ್ತದೆ ಎನ್ನುವುದು ಸುಳ್ಳು. ಪ್ರೇಮ ಯಾವುದೋ ಘಟನೆಗೆ ಇನ್ಯಾವುದೋ ಭಾವ ತಾಕಿ ಏನೇನೋ ಆಗಿ ಅನಿಸುವುದು. ನಿರ್ದಿಷ್ಟ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ಅದನ್ನು. ಕಾಮ ನೋಡಿ, ಕ್ಲೀನ್ ಆಗಿ ಹೇಳಿಬಿಡಬಹುದು. ಕಾಮದ ಅವಧಿ, ಅದು ಘಟಿಸುವುದು, ಅದಕ್ಕಿರುವ ತೂಕ ಎಲ್ಲವನ್ನೂ ಅನುಭವಿಸಬಹುದು. ಆದರೆ ಪ್ರೇಮವೆಂಬುದು ಭಾವ. ಅದು ಯಾವಾಗ ಜಾಗೃತವಾಗುತ್ತದೆ ಹೇಳಲಿಕ್ಕಾಗದು. ‘ಹೆಂಡತಿಯನ್ನು ವಾರಪೂರ್ತಿ ಪ್ರೀತಿಸುತ್ತೇನೆ’ ಎಂದರೆ ‘ಕೆಲಸ ಯಾವಾಗ ಮಾಡ್ತೀರಿ’ ಎಂದು ಕೇಳಬೇಕಾಗುತ್ತದೆ. ಅದೇ ‘ಪ್ರತಿದಿನ ಕಾಮ ನಡೆಯುತ್ತದೆ’ ಎನ್ನುವುದನ್ನು ವಿವರಿಸಬಹುದು. ದಿನವೂ ಪ್ರೀತ್ಸಕ್ಕಾಗಲ್ಲ.
ಪ್ರೇಮ ಮತ್ತು ಕಾಮದ ನಡುವೆ ಬಹುದೊಡ್ಡ ಅಂತರ ಇದೆ ಎಂತಲೂ ತುಂಬ ಜನ ಹೇಳ್ತಾರೆ. ಆದರೆ ಅಂಥ ಅಂತರ ಯಾವಾಗಲಾದ್ರೂ ಇತ್ತಾ ಎನ್ನುವುದೇ ಅನುಮಾನ. ಜಕಣಾಚಾರಿ ಅವರಂಥ ಶಿಲ್ಪಿಗಳೇ ದೇವಸ್ಥಾನದ ಗೋಡೆಯ ಮೇಲೆ ಮಿಥುನ ಶಿಲ್ಪಗಳನ್ನು ಕೆತ್ತಿಟ್ಟರು. ಒಳಗಡೆ ದೇವರು; ಹೊರಗೆ ಮಿಥುನ ಶಿಲ್ಪ. ಇದನ್ನು ಹೇಗೆ ಅರ್ಥೈಸುತ್ತೀರಿ? ಮೊದಲೊಂದು ಕಾಲದಲ್ಲಿ ಮನುಕುಲದಲ್ಲಿ ‘ಪಾಲಿ ಅಮರಿ’ ಸಂಸ್ಕೃತಿ ಇತ್ತಂತೆ. ಪಾಲಿಮರಿ ಎಂದರೆ ಬಹುಮನುಷ್ಯರ ಸಂಬಂಧಗಳು. ಅಲ್ಲಿಂದ ‘ಇದು ನಮ್ಮ ದೇಶ’, ‘ನನ್ನ ಹುಡುಗಿ’, ‘ನನ್ನ ಮನೆ’ ಎಂದೆಲ್ಲ ಒಂದೊಂದೇ ನಿಯಮ ಮಾಡಿಕೊಂಡು ಬಂದ್ವಿ. ಎಲ್ಲ ಸೇರಿ ಮಾಡಿಕೊಂಡ ವ್ಯವಸ್ಥೆ ಇದು. ಇನ್ನೊಂದು ಐನೂರು ವರ್ಷ ಕಳೆದ ಮೇಲೆ ಯಾರೋ ಒಬ್ಬ ‘ಪಾಲಿ ಅಮರಿ’ ವ್ಯವಸ್ಥೆಯೇ ಕರೆಕ್ಟು ಎಂದು ಹೇಳಬಹುದು. ಆಗ ನಾವು ಇರುವುದೂ ಇಲ್ಲ.
–ಯೋಗರಾಜ್ ಭಟ್
ಸಿನೆಮಾ ನಿರ್ದೇಶಕರು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
777 ಚಾರ್ಲಿ ಚಿತ್ರಕ್ಕೆ ‘ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ’

ಸುದ್ದಿದಿನ ಡೆಸ್ಕ್ : 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2021 ಪ್ರಕಟವಾಗಿದ್ದು, ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಲಭಿಸಿವೆ.
ನಟ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಜೇಕಬ್ ವರ್ಗೀಸ್ ನಿರ್ದೇಶನದ ಸಾಕ್ಷ್ಯಚಿತ್ರ ಆಯುಷ್ಮಾನ್ಗೆ ಅತ್ಯುತ್ತಮ ಅನ್ವೇಷಣಾ ಚಿತ್ರ ಪ್ರಶಸ್ತಿ ಲಭಿಸಿದೆ.
ಅನಿರುಧ್ ಜತ್ಕರ್ ನಿರ್ದೇಶನದ ಬಾಳ ಬಂಗಾರ ಸಾಕ್ಷ್ಯಚಿತ್ರ ತೀರ್ಪುಗಾರರ ವಿಶೇಷ ಉಲ್ಲೇಖ ಪಡೆದಿದೆ. ಸಿನಿಮಾ ವಿಮರ್ಶೆ ವಿಭಾಗದಲ್ಲಿ ಹಿರಿಯ ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ ತೀರ್ಪುಗಾರರ ವಿಶೇಷ ಉಲ್ಲೇಖಕ್ಕೆ ಭಾಜನರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶ್ರೀಲಂಕಾದಲ್ಲಿ ಕನ್ನಡ ಚಲನಚಿತ್ರೋತ್ಸವ

ಸುದ್ದಿದಿನ, ಕೊಲೊಂಬೋ : ಶ್ರೀಲಂಕಾದ ರಾಜಧಾನಿ ಕೊಲೊಂಬೋದಲ್ಲಿನ ತರಂಗಿಣಿ ಸಿನಿಮಾ ಹಾಲ್ನಲ್ಲಿ ಏರ್ಪಡಿಸಿದ್ದ ಕನ್ನಡ ಚಲನಚಿತ್ರೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು.
ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಗೋಪಾಲ್ ಬಾಗ್ಳೆ, ಶ್ರೀಲಂಕಾದ ಬಹು ಮಾಧ್ಯಮ ಖಾತೆ ಸಚಿವ ಡಾ. ಬಂದೂಲ ಗುಣವರ್ಧನೆ ಹಾಗೂ ಸಂಸ್ಕೃತಿ ಖಾತೆ ಸಚೆವ ವಿಧುರವಿಕ್ರಮ ನಾಯಕ್ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ, ಕನ್ನಡ ಚಲನಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರ ಮಾತನಾಡಿದ ಸಚಿವ ಡಾ.ಗುಣವರ್ಧನೆ, ಉಭಯ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ, ಚಲನಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಮನರಂಜನಾ ಮಾಧ್ಯಮವು ಅತ್ಯಂತ ಜನಪ್ರಿಯ ಮಾಧ್ಯಮವಾಗಿದ್ದು, ಪ್ರಾದೇಶಿಕ ಚಲಚಿನಚಿತ್ರಗಳು, ಅದರಲ್ಲಿಯೂ ಭಾರತದ ಚಲನಚಿತ್ರ ಸಂಸ್ಕೃತಿಯ ಜೊತೆಗೆ ದೇಶದ ಪರಂಪರೆ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುತ್ತಿದೆ. ಸಾಮಾಜಿಕ ವಲಯದಲ್ಲಿ ಪ್ರಾದೇಶಿಕ ಬಾಷೆಯಲ್ಲಿ ಬರುವ ಚಿತ್ರಗಳು, ಚಿತ್ರ ಪ್ರೇಮಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿಗಳಿಗೆ, ಪಠ್ಯಕ್ರಮದ ಭಾಗವಾಗಿ ಹಲವು ಪ್ರದೇಶಗಳಲ್ಲಿ ಅಧ್ಯಯನಕ್ಕೂ ಅನುಕೂಲವಾಗಿದೆ. ಇತ್ತೀಚೆಗೆ ಶ್ರಿಲಂಕಾದ ವಿದ್ಯಾರ್ಥಿಗಳು ಇದರ ಅನುಭವವನ್ನು ಪಡೆದುಕೊಳ್ಳಲು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾರ್ಗದರ್ಶನ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಶ್ರೀಲಂಕಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 250 ರಿಂದ 300 ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಕಳೆದ ವರ್ಷ ನಾಲ್ಕನೇ ಬಹುದೊಡ್ಡ ಕಾರ್ಯಗಾರ ಆಯೋಜಿಸಲಾಗಿತ್ತು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶ್ರೀಲಂಕಾ ವಿದ್ಯಾರ್ಥಿಗಳಿಗೆ, ಚಲನಚಿತ್ರರಂಗದ, ತರಬೇತಿ, ವೀಕ್ಷಣೆ ಹಾಗೂ ನಿರ್ಮಾಣದ ಬಗ್ಗೆ ಹಲವು ರೀತಿ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಈ ವರ್ಷ ಅಮೆರಿಕ-ಅಮೆರಿಕ, ಇಷ್ಠಕಾಮ್ಯ, ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಕೊಟ್ರೇಶಿ ಕನಸು ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಏನಿದು ವಿಚಿತ್ರ | ನಟಿಯ ಡೈವೋರ್ಸ್ ಫೋಟೋಶೂಟ್..!

ಸುದ್ದಿದಿನ ಡೆಸ್ಕ್ : ನಟಿ ಶಾಲಿನಿ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಜನಮನಗೆದ್ದಿದ್ದಾರೆ. ಮೊದಲ ಮದುವೆಯ ವಿಚ್ಛೇದನದ ನಂತರ ಆಕೆ ಮೊಹಮ್ಮದ್ ಎಂಬುವವರನ್ನು ಮದುವೆಯಾಗಿದ್ದರು. ಆ ದಾಂಪತ್ಯದಲ್ಲಿ ಹಲವು ಸಮಸ್ಯೆಗಳಿಂದ ವಿಚ್ಛೇದನ ಪಡೆದರು. ಅದನ್ನು ಸಂಭ್ರಮಿಸಲು ಫೋಟೋಶೂಟ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.
ಮದುವೆಗೂ ಮುನ್ನ ತೆಗೆದಿರುವ ಫೋಟೋಶೂಟ್ಗಳು ಬಹಳಷ್ಟು ಬಂದಿವೆ. ಆದರೆ ವಿಚಿತ್ರ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಕ್ಕಾಗಿಯೇ ನಟಿ ಶಾಲಿನಿಫೋಟೋಗಳು ವೈರಲ್ ಆಗಿವೆ. ಡೈವೋರ್ಸ್ ಆಗಿದ್ದನ್ನೂ ಸಂಭ್ರಮಿಸುವ ಕಾರಣಕ್ಕಾಗಿ ಮಾಡಿದ ಈ ಫೋಟೋಶೂಟ್ ಈಗ ಹಲವರ ಗಮನ ಸೆಳೆದಿದೆ.
ಜೀ ತಮಿಳು ಶೋ ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ಮಗಳೊಂದಿಗೆ ಶಾಲಿನಿ ಭಾಗವಹಿಸಿದ್ದರು. ಖುಷ್ಬು ಅಭಿನಯದ ಮೀರಾ ತಮಿಳು ಧಾರಾವಾಹಿಯಲ್ಲಿ ಕೂಡ ಆಕೆ ನಟಿಸಿದ್ದಾರೆ. ಈ ಧಾರಾವಾಹಿಯ ಮೂಲಕ ನಟಿ ಖುಷ್ಪು ಹಲವು ವರ್ಷಗಳ ನಂತರ ಕಿರುತೆರೆಯಲ್ಲಿ ನಟಿಸಿದ್ದಾರೆ.
ಮಹಿಳೆಯೊಬ್ಬರು ‘ಡೈವೋರ್ಸ್ಡ್’ ಎಂಬ ಫಲಕ ಹಿಡಿದ, ಪತಿಯೊಂದಿಗೆ ಇದ್ದ ಫೋಟೋದಲ್ಲಿನ ಪತಿಯ ಮುಖದ ಭಾಗವನ್ನು ಹರಿದು ಪ್ರತ್ಯೇಕಿಸಿದ, ಪತಿ-ಪತ್ನಿ ಇಬ್ಬರೂ ಜೊತೆಗಿದ್ದ ಫೋಟೋವನ್ನು ಚಪ್ಪಲಿ ಕಾಲಿನಲ್ಲಿ ತುಳಿದು ಹೊಸಕಿ ಹಾಕಿದಂಥ ಫೋಟೋಗಳು ಈ ಫೋಟೋಶೂಟ್ನ ಪ್ರಮುಖ ಆಕರ್ಷಣೆ ಎನಿಸಿಕೊಂಡಿವೆ. ಅಲ್ಲದೆ, ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!’ ಎಂಬ ಫಲಕವನ್ನು ಹಿಡಿದು ಸಂತಸದಿಂದ ಬೀಗುವಂಥ ಫೋಟೋ ಮೂಲಕ ‘ಪತಿ ಎಂಬ ಒಂದು ಸಮಸ್ಯೆಯನ್ನು ನಿವಾರಿಸಿಕೊಂಡಿದ್ದೇನೆ’ ಎಂಬ ಸಂದೇಶವನ್ನೂ ಈಕೆ ಸಾರಿದ್ದಾರೆ.
ಶಾಲಿನಿ ಇನ್ಸ್ಟಾ ಅಕೌಂಟ್ ಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://instagram.com/shalu2626?igshid=YmMyMTA2M2Y=
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ2 days ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ2 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ