Connect with us

ದಿನದ ಸುದ್ದಿ

ಕ್ಯಾರಿಬ್ಯಾಗ್‍ ಗೆ 7 ರೂ ಬಿಲ್ ; ಗ್ರಾಹಕರಿಗೆ 5ಸಾವಿರ ದಂಡ ನೀಡಲು ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರಿಟೇಲ್ ಲಿಮಿಟೆಡ್ ಕಂಪನಿಗೆ ಆದೇಶ

Published

on

ಸುದ್ದಿದಿನ,ದಾವಣಗೆರೆ : ಎರಡು ಜೊತೆ ಶೂ ಹಾಗೂ ಬ್ಯಾಗ್ ಖರೀದಿಸಿದಾಗ ಅನುಮತಿ ಇಲ್ಲದೇ ಕ್ಯಾರಿಬ್ಯಾಗ್‍ನ ಶುಲ್ಕ ರೂ.7 ಅನ್ನು ಬಿಲ್ ಜೊತೆಗೆ ಸೇರಿಸಿ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಗ್ರಾಹಕರಿಗೆ ರೂ.5 ಸಾವಿರ ಪರಿಹಾರ ಹಾಗೂ ರೂ.3 ಸಾವಿರ ದಾವೆಯ ಖರ್ಚನ್ನು ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರಿಟೇಲ್ ಲಿಮಿಟೆಡ್ ಕಂಪನಿ ‘ಪ್ಯಾಂತಲೂನ್ಸ್’ ಮಳಿಗೆಗೆ ನಿರ್ದೇಶನ ನೀಡಿದೆ.

ಹರಿಹರದ ವಕೀಲರಾದ ನೀತು ಎಚ್.ಬಿ. ಅವರು 2020ರ ಫೆಬ್ರುವರಿ 1 ರಂದು ಶಾಮನೂರು ರಸ್ತೆಯಲ್ಲಿರುವ ಆದಿತ್ಯ ಬಿರ್ಲಾ ಫ್ಯಾಷನ್ ಆಂಡ್ ರಿಟೇಲ್ ಲಿಮಿಟೆಡ್ ಕಂಪನಿ ‘ಪ್ಯಾಂತಲೂನ್ಸ್’ ಮಳಿಗೆಯಲ್ಲಿ ಎರಡು ಶೂ ಹಾಗೂ ಬ್ಯಾಗ್ ಖರೀದಿಸಿದ್ದರು. ರೂ.2,004 ಬಿಲ್‍ನಲ್ಲಿ ಕ್ಯಾರಿಬ್ಯಾಗ್‍ಗಾಗಿ ರೂ.7 ಅನ್ನು ಸೇರಿಸಲಾಗಿತ್ತು.

ಕ್ಯಾರಿಬ್ಯಾಗ್ ಮೇಲೆ ಕಂಪನಿಯ ಹೆಸರು ನಮೂದಿಸಿರುವುದರಿಂದ ಬ್ಯಾಗ್‍ನ ಶುಲ್ಕವನ್ನು ಪಡೆಯದಂತೆ ಮಾಡಿದ್ದ ಮನವಿಗೆ ಮಳಿಗೆಯ ಅಧಿಕಾರಿಗಳು ಕಿವಿಗೊಡಲಿಲ್ಲ. ಬದಲಾಗಿ ಉಳಿದ ಗ್ರಾಹಕರ ಎದುರಿನಲ್ಲೇ ಅಪಹಾಸ್ಯ ಮಾಡಿದ್ದರು. ಹೀಗಾಗಿ ನೀತು ಅವರು 2020ರ ಮೇ 20ರಂದು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಚ್.ಎನ್.ಮೀನಾ ಹಾಗೂ ಸದಸ್ಯ ತ್ಯಾಗರಾಜನ್ ಸಿ.ಎಸ್ ಅವರು ಕಂಪನಿಯು ಸೇವಾಲೋಪವೆಸಗಿದೆ ಎಂದು ಅಭಿಪ್ರಾಯಪಟ್ಟಿದೆ. ಪ್ರತಿವಾದಿಗಳಾದ ಮುಂಬೈನ ಅದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರಿಟೇಲ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಂಪನಿಯ ದಾವಣಗೆರೆಯ ಮಳಿಗೆಯ ಪ್ರಧಾನ ವ್ಯವಸ್ಥಾಪಕ ಅವರು ಕ್ಯಾರಿಬ್ಯಾಗ್‍ಗೆ ವಿಧಿಸಿದ್ದ ರೂ.7 ಅನ್ನು ವಾಪಸ್ ನೀಡಬೇಕು. ಜೊತೆಗೆ ದೈಹಿಕ ಹಾಗೂ ಮಾನಸಿಕ ತೊಂದರೆ ನೀಡಿರುವುದಕ್ಕೆ ರೂ.5 ಸಾವಿರ ಪರಿಹಾರ ಮತ್ತು ದಾವೆ ವೆಚ್ಚವಾಗಿ ರೂ.3 ಸಾವಿರವನ್ನು 30 ದಿನಗಳ ಒಳಗೆ ನೀಡಬೇಕು. ಸಕಾಲಕ್ಕೆ ಪಾವತಿಸದಿದ್ದರೆ ಶೇ.6ರಷ್ಟು ಬಡ್ಡಿ ಸಹಿತರ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಮಳಿಗೆಗೆ ಕಾಲ ಕಾಲಕ್ಕೆ ತೆರಳಿ ಕ್ಯಾರಿ ಬ್ಯಾಗ್‍ಗೆ ಶುಲ್ಕ ಪಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕ್ಯಾರಿ ಬ್ಯಾಗ್‍ಗೆ ಶುಲ್ಕ ಪಡೆಯುವುದಿಲ್ಲ ಎಂಬ ಫಲಕ ಹಾಕಬೇಕು ಎಂದು ಅದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಗ್ರಾಹಕರ ಪರವಾಗಿ ವಕೀಲ ವಿಜಯೇಂದ್ರ ಎಂ.ಎನ್.ವಾದ ಮಂಡಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

Published

on

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು ನನಗೆ ಬಹಳ ಹೆಮ್ಮೆ ತಂದಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಜಿ.ಭರತ್ ಮತ್ತು ಪೋಷಕರನ್ನು ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ವಿದ್ಯಾರ್ಥಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸಂತಸದ ವಿಷಯ. ವಿದ್ಯಾ ಲಕ್ಷ್ಮಿ ಶಾಲೆಯವರು ಬಹಳ ಪ್ರಾಮಾಣಿಕವಾಗಿ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿ ಅವರನ್ನು ಉನ್ನತ ಮಟ್ಟಕ್ಕೆ ತರಲು ಶ್ರಮಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ನಮಗೆ ಮೊದಲ ಆದ್ಯತೆ ದೇಗುಲಗಳಿಗಿಂತ ಶಾಲೆಗಳಿಗೆ ಇರಬೇಕು. ಇಂತಹ ಶಾಲೆಯೆಂಬ ದೇಗುಲದಿಂದ ಹೊರ ಬರುವ ಭರತ್‌ನಂತಹ ಮಕ್ಕಳು ಮುಂದಿನ ದಿನಗಳಲ್ಲಿ ಈ ದೇಶದ ಉನ್ನತ ಅಧಿಕಾರಿಗಳಾಗಿ ಅಥವಾ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಏ 25 ರಂದು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಗೆ ಉಚಿತ ತರಬೇತಿ

Published

on

ಸುದ್ದಿದಿನ,ದಾವಣಗೆರೆ : ನಗರದ ಧವನ್ ಕಾಲೇಜಿನಲ್ಲಿ Viksit47 ಅಕಾಡೆಮಿ ವತಿಯಿಂದ ಉಚಿತ ತರಬೇತಿ ಕಾರ್ಯಗಾರವನ್ನು ಇದೇ 25 ರಂದು ಆಯೋಜಿಸಲಾಗಿದೆ ಎಂದು ಮುಖ್ಯಸ್ಥರಾದ ತೇಜಸ್ ಹೆಚ್.ಎನ್ ಅವರು ತಿಳಿಸಿದ್ದಾರೆ.

ವೆಟರ್ನರಿ, ಬಿಎಸ್ಸಿ ಕೃಷಿ, ಬಿಎಸ್ಸಿ ತೋಟಗಾರಿಕೆ ಮುಂತಾದ 12 ಕೋರ್ಸುಗಳ ಪ್ರವೇಶಕ್ಕೆ ಕೃಷಿಕರ ಕೋಟಾದ ಅಡಿಯಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ 50% ಮೀಸಲಾತಿ ಇರುತ್ತದೆ,ಈ ಮೀಸಲಾತಿಯನ್ನು ಪಡೆಯಲು KCET ಪರೀಕ್ಷೆಯ ಜೊತೆಗೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಈ ಉಚಿತ ಕಾರ್ಯಗಾರದಲ್ಲಿ ಅಗ್ರಿ ಪ್ರಾಕ್ಟಿಕಲ್ ಪರೀಕ್ಷೆಯ ಕುರಿತು ಸಂಪೂರ್ಣ ತರಬೇತಿಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದ್ಬಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಈ ಸದುಪಯೋಗ ಪಡಿಸಿಕೊಳ್ಳಬೇಕು. ಅಕ್ಕ ಪಕ್ಕದ ಜಿಲ್ಲೆಯ ವಿದ್ಯಾರ್ಥಿಗಳು ಸಹ ಇದರ ಸದುಪಯೋಗ ಪಡಿಸಿಕೊಳ್ಳಬಹುದು,ಮತ್ತು ಕಾಲೇಜುಗಳ ಆಡಳಿತ ಮಂಡಳಿಯವರು ತಮ್ಮ ವಿದ್ಯಾರ್ಥಿಗಳನ್ನು ಈ ಉಚಿತ ಕಾರ್ಯಗಾರದಲ್ಲಿ ಭಾಗವಹಿಸುವಂತೆ ವಿನಂತಿಸಿದ್ದಾರೆ.

ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಮೊಬೈಲ್ ನಂ: 8217413646 ಗೆ ಕರೆಮಾಡಲು ಸೂಚಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್

Published

on

ಸುದ್ದಿದಿನ,ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವಿದ್ಯಾರ್ಥಿ ಭರತ್ ಜಿ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

625ಕ್ಕೆ 625 ಅಂಕಗಳನ್ನು ಪಡೆದ ಭರತ್ ಅವರು ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ವಿದ್ಯಾರ್ಥಿ. ರಾಜ್ಯದ ಇತರ ಐದು ವಿದ್ಯಾರ್ಥಿಗಳೊಂದಿಗೆ ಅಗ್ರಸ್ಥಾನವನ್ನು ಭರತ್ ಅವರು ಹಂಚಿಕೊಂಡಿದ್ದಾರೆ. ಭರತ್ ಅವರ ತಂದೆ ಗಿರೀಶ್ ಕೃಷಿ ಹಾಗೂ ಗುತ್ತಿಗೆ ದಾರರು, ತಾಯಿ ಶಿಲ್ಪ ಗೃಹಿಣಿ.

ಗ್ರಾಮೀಣ ಭಾಗದಿಂದ ಬಂದ ಭರತ್ ರಾಜ್ಯಕ್ಕೆ ಟಾಪರ್ ಆಗಿ ದೊಡ್ಡ ಸಾಧನೆ ಮಾಡಿದ್ದಾರೆ.ನಮ್ಮ ಶಾಲೆಯು ಎರಡು ಬಾರಿ ಜಿಲ್ಲೆಗೆ ಹಾಗೂ ಎರಡು ಬಾರಿ ತಾಲ್ಲೂಕಿಗೆ ಟಾಪ‌ರ್ ಆಗಿತ್ತು. ಇದೀಗ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ನಿರಂತರವಾಗಿ ಸಾಧನೆ ಮಾಡುತ್ತಿದ್ದು ಈ ಬಾರಿಯೂ ಶೇ 100ರಷ್ಟು ಫಲಿತಾಂಶ ನೀಡಿದೆ ಎಂದು ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ ಎ.ಎನ್ ಹರ್ಷ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending